Connect with us

ದಿನದ ಸುದ್ದಿ

ಭಿಕ್ಷೆಯಲ್ಲ.,ನಮ್ಮ ಶಾಸನ ಬದ್ದ ಹಕ್ಕು..!

Published

on

  • ಹಿರಿಯೂರು ಪ್ರಕಾಶ್

ಕರುನಾಡಿನ ಕಣ್ಮಣಿಗಳೇ..
ನಿಮ್ಮ ಮೂರು ನಿಮಿಷ ಪ್ಲೀಸ್..!

ರ್ನಾಟಕವೆಂದರೆ ದೆಹಲಿ ಸುಲ್ತಾನರಿಗೆ ಅದೇಕೋ ಮೊದಲಿನಿಂದಲೂ ಒಂಥರಾ ಅಪಥ್ಯವೋ, ಮಲತಾಯಿ ಧೋರಣೆಯೋ, ರಾಜಕೀಯ ದ್ವೇಷವೋ, ಹೊಟ್ಟೆ ಉರಿಯೋ, ಅಸೂಯೆಯೋ, ಅಥವಾ ಇಲ್ಲಿಂದ ಆರಿಸಿ ಹೋದ ಸಂಸದರ ಅಸೀಮ ಅಸಮರ್ಥತೆಯ ಪ್ರಭಾವವೋ ಒಟ್ಟಿನಲ್ಲಿ ಕನ್ನಡ ನಾಡೆಂದರೆ ದೆಹಲಿಯ ಆಡಳಿತಗಾರರಿಗೆ ಒಂದು ರೀತಿಯಲ್ಲಿ Taken for granted ಎನ್ನುವಂತಾಗಿದೆ.

ಒಂದೇ ಸಾಲಿನಲ್ಲಿ ಹೇಳುವುದಾದರೆ ದೇಶದ ಒಟ್ಟಾರೆ ಪ್ರಗತಿಗೆ, ಆರ್ಥಿಕ ಅಭಿವೃದ್ಧಿಗೆ ರಾಜ್ಯದ ಕೊಡುಗೆ ಬೆಟ್ಟದಷ್ಟಿದ್ದರೂ ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ದೊರೆಯುವ ಸಹಕಾರ, ಸಹಾಯ ಮೊದಲಿನಿಂದಲೂ ಅಷ್ಟಕ್ಕಷ್ಟೇ ! ಅದು ರಾಜ್ಯಗಳಿಗೆ ಶಾಸನಬದ್ದವಾಗಿ ದೊರೆಯುವ ಹಣಕಾಸಿನ ನೆರವಿನ ಪಾಲು ಇರಬಹುದು, ಪ್ರವಾಹ, ನೆರೆ ಹಾವಳಿ, ಬರ ಮುಂತಾದ ಪ್ರಾಕೃತಿಕ ವಿಕೋಪಗಳಿಂದಾದ ಅಪಾರ ಹಾನಿಗೆ‌ ಬರಬೇಕಾದ ನೆರವು ಇರಬಹುದು, ಇಲ್ಲವೇ ಯಾವುದೇ ಜಲ ವಿವಾದ, ಗಡಿ ವಿವಾದ ಅಥವಾ ಇನ್ನಾವುದೇ ಅಂತರರಾಜ್ಯ ವಿವಾದಕ್ಕೆ ಸಂಬಂಧಿಸಿದ ವ್ಯಾಜ್ಯಗಳೇ ಇರಬಹುದು. ಕೇಂದ್ರದಲ್ಲಿ ಅಧಿಕಾರ ನೆಡೆಸುವ ಪಕ್ಷ ಯಾವುದೇ ಇರಬಹುದು, ಲಾಗಾಯ್ತಿನಿಂದಲೂ ನಮ್ಮ ರಾಜ್ಯಕ್ಕೆ ಹೆಚ್ಚುವರಿಯಾಗಿ ಹೇಳಿಕೊಳ್ಳುವಂತಹಾ ಅನುಕೂಲ ಯಾವ ಕೇಂದ್ರ ಸರ್ಕಾರದಿಂದಲೂ ಖಂಡಿತಾ ಆಗಿಲ್ಲ.

ಪ್ರಜಾಸತ್ತಾತ್ಮಕ ಗಣತಂತ್ರ ವ್ಯವಸ್ಥೆಯಲ್ಲಿ, ಸಂಯುಕ್ತ ಸರ್ಕಾರಗಳ ಪದ್ದತಿಯಲ್ಲಿ ದೇಶದ ಹಿತದೃಷ್ಟಿಯಿಂದ ‌ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ತಾಯಿಯಂತೆ ಹಾಗೂ ರಾಜ್ಯ ಸರ್ಕಾರ ಮಕ್ಕಳಂತೆ .

ಒಬ್ಬ ತಾಯಿ ತನ್ನ ಎಲ್ಲಾ ಮಕ್ಕಳನ್ನು ಭೇಧವೆಣಿಸದೇ ನೋಡುವಳೋ ಅದೇ ರೀತಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಿದೆ. ಇದರಲ್ಲಿ ಯಾವುದೇ ರಾಜಕೀಯವೆಸಗಿದಲ್ಲಿ ಅದು ಇಡೀ ಫ಼ೆಡರಲ್ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಿ ದೇಶದ ಹಿನ್ನಡೆಗೆ ಕಾರಣವಾಗುತ್ತದೆ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಇದು ಕೇವಲ ಪುಸ್ತಕದಲ್ಲಷ್ಟೇ ಇದೆಯೇನೋ ಎಂಬ ಭಾವನೆ ಮೂಡುತ್ತಲಿದೆ.

ರಾಜ್ಯದ ಯಾವುದೇ ಆರ್ಥಿಕ ಅನುಮೋದನೆಗೆ ಕೇಂದ್ರದ ನೆರವು ಅಗತ್ಯ. ಏಕೆಂದರೆ ಒಂದು ರಾಜ್ಯಕ್ಕೆ ಆದಾಯಕ್ಕಿಂತ ಜಾಸ್ತಿ ಖರ್ಚು ಇರುವುದರಿಂದ ಅದು ತನ್ನ ಎಲ್ಲಾ ಯೋಜನೆಗಳನ್ನು ಕೇಂದ್ರದ ನೆರವಿಲ್ಲದೇ ಪೂರೈಸಲು ಸಾಧ್ಯವಾಗದು. ಈ ಹಿನ್ನಲೆಯಲ್ಲಿಯೇ ಕೇಂದ್ರ ಹಣಕಾಸು ಆಯೋಗದ ರಚನೆಯಾಗಿದ್ದು. ರಾಜ್ಯಗಳ ಆರ್ಥಿಕ ಸ್ಥಿತಿ ಗತಿಯನ್ನು ಅಧ್ಯಯನ‌ ಮಾಡಿ ಅನುದಾನವನ್ನು ನಿಷ್ಪಕ್ಷಪಾತವಾಗಿ ರಾಜ್ಯಗಳಿಗೆ ಹಂಚಿಕೆ ಮಾಡುವುದು ಅದರ ಗುರಿ.

ಇದರ ಜೊತೆಗೆ ಸ್ವಾತಂತ್ರ್ಯೋತ್ತರ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗವನ್ನು ರದ್ದು ಗೊಳಿಸಿ 2015 ರ ಜನವರಿಯಲ್ಲಿ NITI ( National Institution for Transforming India ) ಆಯೋಗವನ್ನು ರಚಿಸಲಾಯಿತು. ಇವೆಲ್ಲದರ ಮೂಲೋದ್ದೇಶ ರಾಜ್ಯಗಳ ಒಟ್ಟಾರೆ ಅಭಿವೃದ್ಧಿ ಯೇ ಆಗಿದೆ. ಒಟ್ಟಿನಲ್ಲಿ ರಾಜ್ಯದ ಆರ್ಥಿಕ ಯೋಜನೆಗಳಿಗೆ, ಮಹತ್ತರ ಹಣಕಾಸಿನ ಯೋಜನೆಗಳ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ನಿರ್ಧಾರವೇ ಅಂತಿಮ‌.

ಹಾಗಂತ ಕೇಂದ್ರ ಸರ್ಕಾರವೇನೂ ರಾಜ್ಯಗಳಿಗೆ ಪುಕ್ಕಟ್ಟೆಯಾಗಿ ಅನುದಾನ‌ ನೀಡುವುದಿಲ್ಲ. ಅದು ನೀಡುವ ಹಣದಲ್ಲಿ ರಾಜ್ಯದಿಂದ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣದ ಪಾಲು, ಕೇಂದ್ರದ ಮಹತ್ತರ ಯೋಜನೆಗಳನ್ನು ಜಾರಿಗೆ ತರಲು ಬೇಕಾಗುವ ವೆಚ್ಚ ಇತ್ಯಾದಿಗಳ ರೂಪದಲ್ಲಿ ನೀಡುತ್ತದೆ. ಎಲ್ಲರಿಗೂ ತಿಳಿದಿರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೆರಿಗೆಯ ರೂಪದಲ್ಲಿ ಹಣ ಸಂಗ್ರಹಿಸುತ್ತವೆ. ಅವು…

  • ರಾಜ್ಯ ತೆರಿಗೆ ಸಂಗ್ರಹಿಸಿ ರಾಜ್ಯದ ಉಪಯೋಗಕ್ಕೆ.
  • ರಾಜ್ಯ ತೆರಿಗೆ ಸಂಗ್ರಹಿಸಿ ಕೇಂದ್ರದ ‌ಉಪಯೋಗಕ್ಕೆ.
  • ಕೇಂದ್ರ ಸಂಗ್ರಹಿಸಿ ರಾಜ್ಯದ ಉಪಯೋಗಕ್ಕೆ.
  • ಕೇಂದ್ರ ಸಂಗ್ರಹಿಸಿ ಕೇಂದ್ರಕ್ಕೆ ಬಳಸಿಕೊಳ್ಳುವುದು.

ಹೀಗಾಗಿ ರಾಜ್ಯ ಸರ್ಕಾರ ತಾನು ಸಂಗ್ರಹಿಸಿ ಕೇಂದ್ರಕ್ಕೆ ಸಲ್ಲಿಸಿದ ತೆರಿಗೆ ಹಣದಲ್ಲಿ ರಾಜ್ಯದ ಪಾಲನ್ನು ಪಡೆಯುವ ಎಲ್ಲಾ ಅಧಿಕಾರ ಇದೆ. ಇದು ರಾಜ್ಯಗಳ ಹಕ್ಕು ಕೂಡಾ. ಈ ನಿಟ್ಟಿನಲ್ಲಿ ಆಯಾ ರಾಜ್ಯದ ಅಭಿವೃದ್ಧಿ, ಯೋಜನೆ, ಹಿಂದುಳಿದಿರುವಿಕೆ, ಜನಸಂಖ್ಯೆ, ಭೌಗೋಳಿಕ ಕಾರಣಗಳ ಆಧಾರದ ಮೇಲೆ ರಾಜ್ಯದ ಪಾಲಿನ ಹಣವನ್ನು ಹಣಕಾಸು ಆಯೋಗದ ಅಥವಾ ನೀತಿ ಆಯೋಗದ ಮುಖೇನ ಕೇಂದ್ರ ಸರ್ಕಾರ‌ ನಿರ್ಧರಿಸುತ್ತದೆ. ಈ ಹಿನ್ನಲೆಯಲ್ಲಿ ನಮ್ಮ ರಾಜ್ಯದ ಸ್ಥಾನದ ಬಗ್ಗೆ ಒಂದೆರಡು ಮಾತುಗಳು.

ಕರ್ನಾಟಕ ಇಡೀ ದೇಶದಲ್ಲೇ ಪ್ರಗತಿಯತ್ತ ನಾಗಾಲೋಟದಿಂದ‌ ಮುನ್ನುಗ್ಗುತ್ತಿರುವ ರಾಜ್ಯಗಳಲ್ಲೊಂದು. ಐಟಿ.ಬಿಟಿ. ಸಂಪರ್ಕ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿ ತಂತ್ರಜ್ಞಾನವನ್ನು‌ ಹೊರ ದೇಶಗಳಿಗೆ ರಫ಼್ತು ಮಾಡುವಂತಹ ಬೌದ್ಧಿಕ ಸಂಪತ್ತನ್ನು‌ ಹೊಂದಿರುವ ರಾಜ್ಯ. ದೇಶದ ಒಟ್ಟು ಆಂತರಿಕ ಉತ್ಪನ್ನ ದಲ್ಲಿ (GDP) ಶೇ ಹತ್ತರಷ್ಟು ಕೊಡುಗೆ (ಸುಮಾರು ಹದಿನಾರು ಲಕ್ಷ‌ಕೋಟಿ ) ನಮ್ಮ ರಾಜ್ಯದ್ದು. ಕೇಂದ್ರಕ್ಕೆ ಅತಿ ಹೆಚ್ಚು ಆದಾಯ ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯ ಕರ್ನಾಟಕ.

ಅತಿ ಹೆಚ್ಚು GST ಸಂಗ್ರಹಣೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನ. ( ಸುಮಾರು ಎಂಟು ಸಾವಿರ ಕೋಟಿ GST ಮತ್ತು ಮೂರುವರೆ ಸಾವಿರ‌ ಕೋಟಿ ಸೆಸ್ ರೂಪದಲ್ಲಿ ). ಎಲ್ಲಾ ಆರ್ಥಿಕ ರಂಗದಲ್ಲೂ ಉತ್ತಮ ಪ್ರಗತಿ ಸಾಧಿಸಿರುವ ರಾಜ್ಯ ಜನಸಂಖ್ಯಾ ನಿಯಂತ್ರಣದಲ್ಲೂ ಔನ್ನತ್ಯ ಸಾಧಿಸಿದೆ. ಆದರೆ ಈ ಎಲ್ಲಾ ಪ್ರಗತಿಯ ಬೆಳವಣಿಗೆಯೇ ಈಗ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಅಡ್ಡಬರುತ್ತಿವೆ‌ ಎಂದರೆ ಅಚ್ಚರಿಯಾಗಬಹುದಲ್ಲವೇ ? ಹಾಗೇ ಸ್ವಲ್ಪ ಗಮನಿಸಿ !

ಉದಾಹರಣೆಗೆ ದೇಶದ GDP ಕೊಡುಗೆಯಲ್ಲಿ ಮೂರನೇ ಸ್ಥಾನದಲ್ಲಿರುವ ಕರ್ನಾಟಕ ತಾನು ಸಂಗ್ರಹಿಸಿದ ಪ್ರತಿ‌ ನೂರು ರೂಪಾಯಿ ತೆರಿಗೆಯಲ್ಲಿ ಕೇವಲ 42 ರೂ ಗಳನ್ನು ಕೇಂದ್ರದಿಂದ ಪಡೆದರೆ, ಜಿಡಿಪಿ ಕೊಡುಗೆಯಲ್ಲಿ ದೇಶದಲ್ಲಿ ಹದಿನೈದನೇ ಸ್ಥಾನದಲ್ಲಿರುವ ಬಿಹಾರ ತನ್ನ‌ ಪ್ರತಿ ನೂರು ರೂಪಾಯಿ ತೆರಿಗೆಗೆ ಕೇಂದ್ರದಿಂದ 200 ರೂಗಳನ್ನು ಪಡೆಯುತ್ತೆ. ಇನ್ನು ಉತ್ತರ ಪ್ರದೇಶ ಸಹಾ ತನ್ನ ಪ್ರತೀ‌ ನೂರು ರೂ ತೆರಿಗೆಗೆ ಕೇಂದ್ರದ ಪಾಲು ಎಂದು 150 ರೂಗಳನ್ನು ಪಡೆಯುತ್ತದೆ. ಇದು ಸಹಜವಾದ ಆರ್ಥಿಕ ವ್ಯವಸ್ಥೆಯಲ್ಲಿ ಆಗುವ ಪ್ರಕ್ರಿಯೆಯಾದರೂ ಈ ಮಟ್ಟಿನ ತಾರತಮ್ಯ ಏಕೆಂದು ಹೇಳೋದು ಕಷ್ಟ !

ಅಂದರೆ ಕೇಂದ್ರಕ್ಕೆ ಕರ್ನಾಟಕದ ಆರ್ಥಿಕ ಸಂಪತ್ತನ್ನು ಹೆಚ್ಚಿಗೆ ಕೊಟ್ಟು ಅಲ್ಲಿಂದ ಅದರ ಅರ್ಧದಷ್ಟನ್ನಾದರೂ ಕಾನೂನಾತ್ಮಕವಾಗಿ ಪಡೆಯಲು ಅವರ ಮುಂದೆ ಮಂಡಿಯೂರಿ ಕೂರಬೇಕಾದ ಕರ್ನಾಟಕದ ದುರಂತ ಇತಿಹಾಸ ನಿನ್ನೆ‌ ಮೊನ್ನೆಯದಲ್ಲ. ಉತ್ತರದವರ ಈ ಅಘೋಷಿತ ದಬ್ಬಾಳಿಕೆಯ ಧೋರಣೆ ಆನೂಚಾನವಾಗಿ ಮುಂದುವರೆಯುತ್ತಲೇ ಬಂದಿದೆ. ಇದಕ್ಕೆ ಹಣಕಾಸು ಆಯೋಗ ನೀಡುವ ಕಾರಣಗಳು ಕ್ಷುಲ್ಲಕ ಮಾತ್ರವಲ್ಲ‌ ಬದಲಿಗೆ‌ ಹಾಸ್ಯಾಸ್ಪದವೂ ಹೌದು.

ಕರ್ನಾಟಕ ಎಲ್ಲಾ ರಂಗಗಳಲ್ಲೂ ಅಭಿವೃದ್ಧಿ ಸಾಧಿಸುತ್ತಲಿದೆ. ಜನಸಂಖ್ಯೆ ನಿಯಂತ್ರಣದಲ್ಲಿದೆ ಹಾಗಾಗಿ ಅನುದಾನ ಕಡಿಮೆಯಂತೆ ! ವಿಪರ್ಯಾಸವೆಂದರೆ ಇದುವರೆಗೂ ಜನಸಂಖ್ಯೆಯ ಪ್ರಮಾಣವನ್ನು 1971 ರ ಜನಗಣತಿಯ ಆಧಾರದ ಮೇಲೆ ಲೆಕ್ಕಾಚಾರ ಹಾಕಿ ರಾಜ್ಯದ ಪಾಲನ್ನು ನಿರ್ಧರಿಸಲಾಗುತ್ತಿತ್ತು.

ಆದರೆ ಈಗ ಅದರ ಲೆಕ್ಕಾಚಾರವನ್ನು 2001ರ ಜನಗಣತಿ ಯ ಆಧಾರದ ಮೇಲೆ ಮಾಡುವುದರಿಂದ ಸಹಜವಾಗಿ ಈ ವಿಷಯದಲ್ಲಿ ನಿಯಂತ್ರಣದಲ್ಲಿ ಸಾಕಷ್ಟು ಪ್ರಬುದ್ಧತೆಯನ್ನು ರಾಜ್ಯ ಸಾಧಿಸಿರುವುದರಿಂದ ಹಾಗೂ ಇದೇ ಸಮಯದಲ್ಲಿ ಉತ್ತರದ ಇತರೆ ರಾಜ್ಯಗಳು ಇನ್ನೂ ಅದೇ ಕಳಪೆ ಸಾಧನೆಯಲ್ಲಿರುವುದರಿಂದ ನಮ್ಮ ಅನುದಾನಕ್ಕೆ ಕತ್ತರಿ ಬೀಳುತ್ತಿದೆ ! ಹೆಚ್ಚಿನ ಸಾಕ್ಷರತೆ ಪ್ರಮಾಣ ಕೂಡಾ ನಮಗೇ ಈ ವಿಚಾರದಲ್ಲಿ ಮುಳುವಾಗಿರುವುದಕ್ಕೆ ಏನೆಂದು ಪ್ರತಿಕ್ರಿಯಿಸಬೇಕೋ ಗೊತ್ತಾಗುತ್ತಿಲ್ಲ. ಅಂದರೆ
” ಅಭಿವೃದ್ಧಿ ಸಾಧಿಸಿದಲ್ಲಿ ಅನುದಾನವಿಲ್ಲ” ಎನ್ನುವುದೇ ಕೇಂದ್ರದ ಪಾಲಿಸಿಯೇ ????

ಕೇವಲ‌ ಬಿಹಾರ ಉತ್ತರ ಪ್ರದೇಶ ಮಾತ್ರವಲ್ಲ. ಇನ್ನು ವಿಶೇಷ ಪ್ಯಾಕೇಜ್ ಅಂತೆಲ್ಲಾ ಹೇಳಿ ಅಸ್ಸಾಂ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್ ಮುಂತಾದ ಹತ್ತು ಹದಿನೈದು ರಾಜ್ಯಗಳಿಗೆ ಹೆಚ್ಚುವರಿಯಾಗಿ ಅಂದರೆ ಅವರ ಆದಾಯಕ್ಕಿಂತಲೂ ಹೆಚ್ಚಿನ ಅನುದಾನವನ್ನು ಕೊಡುಗೆಯಾಗಿ ನೀಡುವ ಕೇಂದ್ರದ ಹಣದಲ್ಲಿ ನಮ್ಮ ಪಾಲು ಬಳಕೆಯಾಗುತ್ತಲಿದೆ. ಈ ಬಗ್ಗೆ ಅಂಕಿ ಅಂಶಗಳನ್ನು ನೋಡಿದರೆ‌ ನಮ್ಮ ತೆರಿಗೆ ಹಣ ಹೇಗೆಲ್ಲಾ ವ್ಯಯವಾಗುತ್ತಿದೆಯೆಂದು ನೋವಾಗಬಹುದು. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸಹಜ.

ಇದ್ದವರಿಂದ ಪಡೆದು ಇಲ್ಲದವರಿಗೆ ನೀಡುವ ಪ್ರಗತಿಪರ ತೆರಿಗೆ ಪದ್ದತಿ ನಮ್ಮದು. ಹೀಗಾಗಿ ಖಂಡಿತಾ ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಕಾರಣ ಭಾರತಾಂಬೆಯ ಎಲ್ಲಾ ಮಕ್ಕಳೂ ಅನುಕೂಲವಾಗಿಲ್ಲ. ಹಾಗಾಗಿ ಆರ್ಥಿಕವಾಗಿ ಅಭದ್ರತೆಯಲ್ಲಿರುವ‌ ಸೋದರರಿಗೆ ಸಹಾಯ ಹಸ್ತ ಚಾಚೋಣ. ಆದರೆ ನಮ್ಮ ಬುಡಕ್ಕೇ ಪೆಟ್ಟು ಬಂದಾಗಲಾದರೂ ನಮ್ಮೆಡೆಗೆ ಗಮನ‌ಹರಿಸದಿರುವ ವರ್ತನೆಗೆ ರಾಜಕೀಯ ಹೊರತಾದ ಅನ್ಯ ಸಕಾರಣಗಳುಂಟೇ ?

ಇದು ಹೋಗಲಿ ‌ಬಿಡಿ. ರಾಜ್ಯಗಳು ‌ನೆರೆ ಹಾವಳಿ, ಬರ, ಪ್ರವಾಹ ಅಂತೆಲ್ಲಾ ಪ್ರಕೃತಿ ವಿಕೋಪಕ್ಕೆ ಸಿಕ್ಕು ಸುಣ್ಣವಾದಾಗ ತಕ್ಷಣವೇ ನೆರವಿಗೆ ಧಾವಿಸುವುದು ಕೇಂದ್ರದ ಕರ್ತವ್ಯ. ಅದಕ್ಕಾಗಿಯೇ ರಾಷ್ಟ್ರೀಯ ವಿಪತ್ತು ಪರಿಹಾರ‌ ನಿಧಿಯಿದ್ದು ( NDRF National disaster response fund ) ಇದು ಸಂಪೂರ್ಣವಾಗಿ ಕೇಂದ್ರದ‌ ನಿಧಿಯಾಗಿರುತ್ತದೆ. ಅಲ್ಲದೇ ಈ ಪರಿಹಾರಗಳಿಗಾಗಿಯೇ ರಾಜ್ಯದ ವಿಪತ್ತು ಪರಿಹಾರ‌ನಿಧಿ ( SDRF:- State disaster response fund ) ಸಹಾ ಇದ್ದು ಇದರಲ್ಲಿ ರಾಜ್ಯದ ಕೊಡುಗೆಯೂ ಇರುತ್ತೆ.

ಕಳೆದ ಎರಡು‌ ಮೂರು ವರ್ಷಗಳಿಂದ ಸತತ ಪ್ರಕೃತಿ ವಿಕೋಪಕ್ಕೆ ಸಿಕ್ಕು ನರಳುತ್ತಿರುವ ನಮ್ಮ ರಾಜ್ಯಕ್ಕೆ ಈ‌ ಭಾಗದಿಂದಲೂ ಸಿಗಬೇಕಾದ ನೆರವು ಸಿಕ್ಕಿಲ್ಲ . ಅನೇಕ‌ ನಿಯೋಗಗಳು, ಮನವಿಗಳು, ಸಮೀಕ್ಷೆಗಳು ಎಲ್ಲವೂ‌ ಮುಗಿದಿದ್ದರೂ ಸಮಯಕ್ಕೆ ಸಿಗಬೇಕಾದ ನ್ಯಾಯೋಚಿತವಾದ ‌ಪರಿಹಾರ ಸಿಗದೇ ಸಂತ್ರಸ್ತರನ್ನು ಸಂಕಷ್ಟದಲ್ಲಿ ದೂಡುವಂತಾಗಿದೆ.

ಉದಾಹರಣೆಗೆ ಕಳೆದ ತಿಂಗಳು ಸಂಭವಿಸಿದ ನೆರೆ ಹಾವಳಿಯಿಂದಾಗಿ ರಾಜ್ಯದ ಸುಮಾರು ಹದಿನೆಂಟು ಜಿಲ್ಲೆಗಳ ಎರಡು ಸಾವಿರಕ್ಕೂ‌ ಹೆಚ್ಚಿನ ಹಳ್ಳಿಗಳಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದು ಲಕ್ಷಾಂತರ ಮಂದಿ ಮನೆ ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಕೇಂದ್ರದಿಂದ ಹಣಕಾಸು ಮತ್ತು ಗೃಹ ಮಂತ್ರಿಗಳು ಬಂದು ಸಮೀಕ್ಷೆ ಮಾಡಿ ತಿಂಗಳುಗಳೇ ಉರುಳಿವೆಯಾದರೂ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

ಮಿಕ್ಕೆಲ್ಲಾ ವಿಚಾರಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ಮಾನ್ಯ ಪ್ರಧಾನಿಗಳೂ ಸಹಾ ಪರಿಹಾರದ ಬಗ್ಗೆ ಮೌನ ಮುರಿದಿಲ್ಲ. ಹೀಗಾದರೆ ನೊಂದ ಜನರ ಗೋಳನ್ನು ಕೇಳುವವರು ಯಾರು ?? ಈ‌ ಬಗ್ಗೆ ಗಟ್ಟಿದನಿಯಲ್ಲಿ ಅಧಿಕಾರಯುತವಾಗಿ ಕೇಳುವ ಧೈರ್ಯವಿರುವ ಜನಪ್ರತಿನಿಧಿಗಳಿಲ್ಲದಿರುವುದು ಕನ್ನಡಿಗರ ದೌರ್ಭಾಗ್ಯ !

ಕೇವಲ ಇದಿಷ್ಟೇ ಅಲ್ಲ. ರಾಜ್ಯದ ಗ್ರಾಮೀಣ ಭಾಗಗಳ ಅಭಿವೃದ್ಧಿ ಹಾಗೂ ಕುಡಿಯುವ ನೀರಿನ ಯೋಜನೆಗಳಿಗಾಗಿ ( NRDWP ) ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ( MGNREGS ) ಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನೂ ತೀವ್ರವಾಗಿ ಕಡಿತಗೊಳಿಸಲಾಗಿದ್ದು ಅಪೂರ್ಣ ಯೋಜನೆಗಳನ್ನು ಮುಗಿಸಲು ರಾಜ್ಯ ಸರ್ಕಾರ ತನ್ನ‌ ಮೀಸಲಿನಿಂದ ಹಣವನ್ನು ಒದಗಿಸಬೇಕಾಗಿದ ಸ್ಥಿತಿ ಬಂದಿದೆ. ಯಾಕೆ ಹೀಗೆಂದು ಹೇಳುವವರೂ ಇಲ್ಲ ಮತ್ತು ಕೇಳುವವರು ಮೊದಲೇ ಇಲ್ಲ !

ಇನ್ನು ಅಂತರರಾಜ್ಯ ನದಿ ನೀರು, ಗಡಿ ಅಥವಾ ವಾಣಿಜ್ಯಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ನ್ಯಾಯವೆನ್ನುವುದು ದೂರವೇ ಆಗಿದೆ. ಕರ್ನಾಟಕಕ್ಕೆ ಸತತವಾಗಿ ಅನ್ಯಾಯವಾಗುತ್ತಿದ್ದರೂ ಈ ಬಗ್ಗೆ ಸಮರ್ಥವಾಗಿ ರಾಜ್ಯದ ಪರ ದನಿ ಎತ್ತುವವವರೇ ಇಲ್ಲದಂತಾಗಿದ್ದು ಒಂದೆಡೆಯಾದರೆ,ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದ ಸಂಸದರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸದೆ ಪಕ್ಷಾತೀತವಾಗಿ ಹೋರಾಟ ಮಾಡುತ್ತಾ ಬಂದಿರುವುದರ ಫಲವಾಗಿ ಸಂಸತ್ತನ್ನು ಹೇಳಿದಂತೆ ಕೇಳುವ ಹಾಗೆ ಮಾಡುವ ತಾಕತ್ತು ತೋರಿದ್ದಾರೆ. ಹೀಗಾಗಿ ಕಾವೇರಿ, ಕೃಷ್ಣ, ಮಹದಾಯಿ ಮುಂತಾದ ನದಿ ವಿವಾದಗಳಲ್ಲಿ ರಾಜ್ಯಕ್ಕೆ ಸತತ ಹಿನ್ನಡೆಯಾಗುತ್ತಲೇ ಇದೆ.

ಕೇಂದ್ರ ಸರ್ಕಾರಗಳು ಮೊದಲಿನಿಂದಲೂ ನಮ್ಮ ರಾಜ್ಯದ ಮೇಲೆ ಸವಾರಿ ಮಾಡಿದ್ದರ ಫಲವನ್ನು ಈಗ ಅನುಭವಿಸುತ್ತಿದ್ದೇವೆ. ದೇಶದ ಪ್ರಗತಿಗೆ ರಾಜ್ಯದ ಸಹಕಾರ ಸಂಪತ್ತು‌ ಬೇಕು. ಆದರೆ ನಮ್ಮ‌ ಕಷ್ಟ ಕಾಲದಲ್ಲಿ ನ್ಯಾಯೋಚಿತವಾಗಿ ಬರಬೇಕಾದ ಪರಿಹಾರ ಮಾತ್ರ ಕೊಡದೇ ಇರುವುದು ಯಾವ ಕಾರಣಕ್ಕಾಗಿ ?? ಇದು ಒಕ್ಕೂಟ ವ್ಯವಸ್ಥೆಯಲ್ಲಿ ತೋರುವ ಪಕ್ಷಪಾತ ಧೋರಣೆಯಲ್ಲವೇ ?

ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷವಿದ್ದಲ್ಲಿ ರಾಜ್ಯಕ್ಕೆ ಅನುಕೂಲವಾಗುತ್ತದೆ ಎಂಬುದು ಕೇವಲ ಭ್ರಮೆಯೇ ? ನ್ಯಾಯವಾಗಿ ಬರಬೇಕಾದ ರಾಜ್ಯದ ಪಾಲನ್ನು ಕೇಳುವುದು ನಮ್ಮ‌ ಹಕ್ಕು ಮತ್ತು ಕೊಡಬೇಕಾದದ್ದು ಕೇಂದ್ರದ ಕರ್ತವ್ಯವೇ ಹೊರತು ‌ರಾಜ್ಯವನ್ನು‌ ಭಿಕ್ಷುಕರ ಸ್ಥಾನದಲ್ಲಿ‌ ನಿಲ್ಲಿಸುವುದು ಕೇಂದ್ರಕ್ಕೆ ತರವಲ್ಲ. ಅನುದಾನದಲ್ಲಿ ತಾರತಮ್ಯವೆಸಗದೇ ಅವಶ್ಯಕತೆಗೆ ತಕ್ಕಂತೆ ತಕ್ಷಣ ನೀಡಬೇಕಾದದ್ದು ಕೇಂದ್ರದ ಕರ್ತವ್ಯ. ಅದು ಆಡಳಿತ ನೆಡೆಸುವವರ ಮೂಗಿನ ನೇರಕ್ಕೆ ಇರಲೇ ಬಾರದು.

ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಹಾಗೂ ಸಂಸದರು ಪಕ್ಷಭೇಧ ಮರೆತು ರಾಜ್ಯದ ಜನರ ಅದರಲ್ಲೂ ವಿಶೇಷವಾಗಿ ಸಂತ್ರಸ್ತರ ಪರವಾಗಿ ಗಟ್ಟಿ ದನಿಯಲ್ಲಿ ಹಕ್ಕೊತ್ತಾಯ ಮಂಡಿಸದಿದ್ದರೆ ಕರುನಾಡಿನ ಸ್ಥಿತಿ ಹೀಗೆ ದೈನೇಶಿಯಾಗಿಯೇ ಮುಂದುವರೆಯುವುದರಲ್ಲಿ ಅನುಮಾನವಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿ, ಅನುದಾನದ ವಿಷಯದಲ್ಲಿ ಕೊಳಕು ರಾಜಕೀಯವನ್ನು ಬದಿಗಿಟ್ಟು ರಾಜ್ಯದ ಹಿತಚಿಂತನೆಯಲ್ಲಿ ನಮ್ಮ ಪ್ರಜಾಪ್ರತಿನಿಧಿಗಳು ತೊಡಗಲಿ.

ಕೊನೇಪಕ್ಷ ಕನ್ನಡಿಗರಾದರೂ ರಾಜಕೀಯ ಭೇಧ ಭಾವ ಮರೆತು, ಕರುನಾಡಿಗಾಗುತ್ತಿರುವ ಅನ್ಯಾಯದ ವಿರುದ್ಧ ಒಕ್ಕೊರಲಿನಿಂದ ದನಿಯೆತ್ತುವ ಕೆಲಸ ಮಾಡಿ ರಾಜ್ಯದ ಬಗೆಗಿನ ಬದ್ಧತೆ ತೋರಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

Published

on

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ ತಾಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ಆಶ್ರಯ, ತಾಲೂಕು ವಿಶ್ವಕರ್ಮ ಸೇವಾ ಸಮಾಜ ಹಾಗೂ ತಾಲೂಕು ವಿಶ್ವಕರ್ಮ ಸಂಘದ ಜಂಟಿ ವತಿಯಿಂದ ಆಯೋಜಿಸಿರುವ ‘ವಿಶ್ವಕರ್ಮ ಜಯಂತಿ’ ಕಾರ್ಯಕ್ರಮದಲ್ಲಿ ಶಾಸಕರಾದ ಡಿ. ರವಿಶಂಕರ್‌ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲ್ದಾರ್‌ ಜಿ. ಸುರೇಂದ್ರ ಮೂರ್ತಿ ಅವರು ವಹಿಸಲಿದ್ದಾರೆ. ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರೇವಣ್ಣ, ತಾಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ವೇಣುಗೋಪಾಲ್‌ ಎನ್., ಪದಾಧಿಕಾರಿಗಳಾದ ಈಶ್ವರಾಚಾರ್‌, ಚೇತನ್‌ ಮೂರ್ತಿ ಸೇರಿದಂತೆ ವಿಶ್ವಕರ್ಮ ಸಮುದಾಯದ ಮುಖಂಡರು ಹಾಗೂ ತಾಲೂಕು ಆಡಳಿತದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಕಾಳಿಕಾಂಬಾ ದೇವಾಲಯದಲ್ಲಿ ವಿಶ್ವಕರ್ಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ ನೆರವೇರಲಿದ್ದು, ಬಳಿಕ ಅಲ್ಲಿಂದ ತಾಲೂಕು ಆಡಳಿತ ಕಚೇರಿಯವರೆಗೆ ಮೆರವಣಿಗೆ ನಡೆಯಲಿದೆ.

ವಿಶೇಷವೆಂದರೆ, ಪ್ರಕಾಶಕರು ಹಾಗೂ ಆಯೋಜಕರ ಆಸಕ್ತಿಯ ಮೇರೆಗೆ ‘ನಿರಾಕಾರ ವಿಶ್ವಕರ್ಮ’ ಕೃತಿಯನ್ನು ತಿಂಗಳ ಅಂತರದಲ್ಲಿ ಮೂರು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 17ರಂದು ಕೆ.ಆರ್.ನಗರದಲ್ಲಿ ಕೃತಿ ಬಿಡುಗಡೆಯಾದರೆ, ಸೆಪ್ಟೆಂಬರ್‌ 20ರಂದು ಬೆಂಗಳೂರಿನ ತಾತಗುಣಿಯ ವಿಶ್ವಕರ್ಮ ನಗರದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಳಿಯ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹಾಗೆಯೇ, ನವೆಂಬರ್‌ 22ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಾವ್ಯಸ್ಪಂದನ ಪ್ರಕಾಶನ ಏರ್ಪಡಿಸಿರುವ ಕಾರ್ಯಕ್ರಮದಲ್ಲಿಯೂ ಈ ಕೃತಿ ಬಿಡುಗಡೆಯಾಗಲಿದೆ.

ಮಾನವ ನಾಗರಿಕತೆಯ ಇತಿಹಾಸವನ್ನು ತೆರೆದರೆ, ಅದರ ಪ್ರತಿಯೊಂದು ಪುಟದ ಹಿಂದೆಯೂ ಶ್ರಮಿಸಿದ ಅನಾಮಿಕ ಕೈಗಳು ಕಾಣಿಸುತ್ತವೆ. ಆ ಕೈಗಳು ಕಲ್ಲನ್ನು ಕೆತ್ತಿ ದೇವಸ್ಥಾನವಾಗಿಸಿವೆ, ಕಬ್ಬಿಣವನ್ನು ಬಡಿದು ಆಯುಧವಾಗಿಸಿವೆ, ಮರಕ್ಕೆ ರೂಪ ಕೊಟ್ಟು ಬಾಗಿಲಾಗಿಸಿವೆ, ಮಣ್ಣಿಗೆ ಜೀವ ತುಂಬಿ ಮಡಕೆಯಾಗಿಸಿವೆ; ಹಾಗೆಯೇ ಬಣ್ಣಗಳ ಮೂಲಕ ಅಚ್ಚಳಿಯದ ಭಾವನೆಗಳನ್ನು ಮೂಡಿಸಿವೆ. ಆ ಸೃಷ್ಟಿಶೀಲ ಕೈಗಳಿಗೆ ಬಹುಶಃ ಇತಿಹಾಸದ ಅಧಿಕೃತ ಪುಟಗಳಲ್ಲಿ, ರಾಜ-ಮಹಾರಾಜರ ಕಥೆಗಳ ನಡುವೆ ದೊಡ್ಡ ಅಕ್ಷರಗಳಲ್ಲಿ ಹೆಸರು ಸಿಕ್ಕಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ಕಲೆ, ಶಿಲ್ಪ, ವಾಸ್ತು, ಉಪಕರಣ ಮತ್ತು ಸೌಂದರ್ಯವೇ ನಮ್ಮ ನಾಗರಿಕತೆಯ ಉಸಿರಾಗಿ, ಜೀವಂತ ಸಾಕ್ಷಿಗಳಾಗಿ ಇಂದಿಗೂ ಉಳಿದಿವೆ. ಅಂತಹ ಸೃಜನಶೀಲ ಕೈಗಳ ಸಮೂಹ ಸ್ಮೃತಿಯನ್ನು, ಪರಂಪರೆಯನ್ನು ಮತ್ತು ಇತಿಹಾಸವನ್ನು ಅರಿಯುವ ಅರ್ಥಪೂರ್ಣ ಪ್ರಯತ್ನವನ್ನು ನಿರಾಕಾರ ವಿಶ್ವಕರ್ಮ ಕೃತಿಯಲ್ಲಿ ಲೇಖಕರಾದ ಚಂದ್ರಶೇಖರ ಗಂಧನಹಳ್ಳಿ ಅವರು ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

Published

on

ಆಗಸ್ಟ್ 2023 ರಿಂದ ಜುಲೈ 2026 ರವರೆಗೆ ₹28,759 ಕೋಟಿ ಸಬ್ಸಿಡಿ ಬಿಡುಗಡೆ; ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್‌ನಿಂದ ಕೋಟ್ಯಂತರ ಕುಟುಂಬಗಳ ಆರ್ಥಿಕ ಸಬಲೀಕರಣ

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಸಹಕಾರ’ ಎಂಬ ಧ್ಯೇಯದೊಂದಿಗೆ ಆರಂಭವಾದ ಈ ಯೋಜನೆ ಇಂದು ಕೋಟ್ಯಂತರ ಕುಟುಂಬಗಳ ಬದುಕಿಗೆ ಬೆಳಕಾಗಿದೆ.

ಹೌದು! 2023ರ ಆಗಸ್ಟ್‌ನಲ್ಲಿ ಜಾರಿಗೆ ಬಂದ ಈ ಯೋಜನೆಯಡಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ಪ್ರತಿ ತಿಂಗಳು 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ಗೆ ದೊಡ್ಡ ಆಸರೆಯಾಗಿದೆ ಎಂದೇ ಹೇಳಬಹುದು.

http://Visit : www.suddidina.com

ಗೃಹಜ್ಯೋತಿ ಯೋಜನೆಯ ಸಾಧನೆಯ ಗಿರಿ: 

ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ರಾಜ್ಯದ್ಯಂತ ಬರೋಬ್ಬರಿ 1.65 ಕೋಟಿ. ಫಲಾನುಭವಿಗಳು ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರೆ, ಸೇವಾಸಿಂಧು ಪೋರ್ಟಲ್‌ನಲ್ಲಿ ಒಟ್ಟು 1,76,69,368 ಜನರು ನೋಂದಾಯಿಸಿಕೊಂಡಿದ್ದರೆ. ಒಟ್ಟು 2,06,65,451 ಗೃಹಬಳಕೆ ವಿದ್ಯುತ್ ಗ್ರಾಹಕರಿದ್ದಾರೆ. ಅಂದರೆ ಶೇ.85ಕ್ಕಿಂತ ಹೆಚ್ಚು ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಂಡು ಲಾಭ ಪಡೆಯುತ್ತಿದ್ದಾರೆ.

ಆರ್ಥಿಕವಾಗಿ ನೋಡುವುದಾದರೆ, 2023ರ ಆಗಸ್ಟ್‌ನಿಂದ 2026ರ ಜುಲೈ ವರೆಗೆ, ಕಳೆದ ಮೂರು ವರ್ಷಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒಟ್ಟು ₹28,759.54 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಿದೆ. ಇದು ಸರ್ಕಾರದ ಬದ್ಧತೆ ಮತ್ತು ಜನಪರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ.

ಕುಟುಂಬದ ಬಜೆಟ್‌ಗೆ ಆಸರೆ, ಉಜ್ವಲ ಭವಿಷ್ಯಕ್ಕೆ ಬುನಾದಿ:

ಪ್ರತಿ ತಿಂಗಳು 1000 ದಿಂದ 1500 ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಕಟ್ಟುತ್ತಿದ್ದ ಸಾಮಾನ್ಯ ಕುಟುಂಬಗಳಿಗೆ ಈಗ ಆ ಹಣ ಸಂಪೂರ್ಣವಾಗಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಹಣವನ್ನು ಅವರು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಗೃಹಿಣಿಯರಿಗೆ ಇದು ಆರ್ಥಿಕವಾಗಿ ದೊಡ್ಡ ನೆರವಾಗಿದೆ.

ಕೇವಲ ಉಚಿತ ವಿದ್ಯುತ್ ನೀಡುವುದಷ್ಟೇ ಅಲ್ಲ, ಜನರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ರಾಜ್ಯದ ಜನರ ಜೀವನಮಟ್ಟ ಸುಧಾರಿಸಿದೆ. ಗೃಹ ಜ್ಯೋತಿ ಯೋಜನೆಯು ಕೇವಲ ಒಂದು ಯೋಜನೆಯಾಗಿ ಉಳಿಯದೆ, ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕುಟುಂಬಗಳನ್ನು ಈ ಯೋಜನೆಯಡಿ ತರಲು ಇಂಧನ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

Continue Reading

ದಿನದ ಸುದ್ದಿ

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

Published

on

ಕರ್ನಾಟಕದ ವೈಟ್‌ಫೀಲ್ಡ್-ಬಂಗಾರಪೇಟೆ, ಹೊಸೂರು-ಓಮಲೂರು ಮಾರ್ಗ ಸೇರಿ 9 ರಾಜ್ಯಗಳ 1200 ಕಿ.ಮೀ ರೈಲು ಜಾಲ ವಿಸ್ತರಣೆಗೆ ಪ್ರಧಾನಿ ಮೋದಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಅನುಮೋದನೆ

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಸಂಪರ್ಕಿಸುವ 20,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ 8 ಬಹು ಟ್ರ್ಯಾಕಿಂಗ್ (Multi-Tracking) ರೈಲು ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ (ಸೆ.09) ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅನುಷ್ಠಾನಗೊಳ್ಳಲಿವೆ.

http://Visit : www.suddidina.com

ಈ ಯೋಜನೆಗಳಿಂದ ಭಾರತೀಯ ರೈಲ್ವೆಯ ಅಸ್ತಿತ್ವದಲ್ಲಿರುವ ಜಾಲವು ಬರೋಬ್ಬರಿ 1,200 ಕಿಲೋಮೀಟರ್‌ಗಳಷ್ಟು ವಿಸ್ತರಣೆಯಾಗಲಿದೆ. ಇದರಿಂದ 6,900ಕ್ಕೂ ಹೆಚ್ಚು ಗ್ರಾಮಗಳಿಗೆ ಸುಧಾರಿತ ಸಂಪರ್ಕ ಸಿಗಲಿದ್ದು, ರೈಲುಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಗಣನೀಯವಾಗಿ ಹೆಚ್ಚಾಗಲಿದೆ.

ಯಾವೆಲ್ಲ ಯೋಜನೆಗಳಿಗೆ ಅನುಮೋದನೆ?
ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಪ್ರಮುಖ ಯೋಜನೆಗಳು ಹೀಗಿವೆ:

1. ಅರಾಕೋಣಂ-ರೇಣಿಗುಂಟಾ ಮತ್ತು ವೈಟ್‌ಫೀಲ್ಡ್-ಬಂಗಾರಪೇಟೆ ನಡುವೆ 3 ಮತ್ತು 4ನೇ ಮಾರ್ಗ: ಇದು ಕರ್ನಾಟಕ ಮತ್ತು ತಮಿಳುನಾಡು, ಆಂಧ್ರಪ್ರದೇಶಕ್ಕೆ ಅತ್ಯಂತ ಮಹತ್ವದ ಯೋಜನೆಯಾಗಿದೆ.

2. ಸಿಕಂದರಾಬಾದ್-ಕಾಜಿಪೇಟೆ ನಡುವೆ ಮಲ್ಟಿ ಟ್ರ್ಯಾಕಿಂಗ್: ತೆಲಂಗಾಣದ ಪ್ರಮುಖ ಮಾರ್ಗದ ದಟ್ಟಣೆ ಕಡಿಮೆ ಮಾಡಲಿದೆ.

3. ಹೊಸೂರು-ಓಮಲೂರು, ಸೇಲಂ-ಕರೂರ್-ದಿಂಡಿಗಲ್ ಜೋಡಿ ಹಳಿ ಯೋಜನೆ: ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ಸಂಪರ್ಕವನ್ನು ಬಲಪಡಿಸಲಿದೆ.

4. ಖರಗ್‌ಪುರ-ಝಾರ್ಸುಗುಡ ಮತ್ತು ಕತ್ನಿ-ಪೆಂದ್ರ ರಸ್ತೆ ನಡುವೆ 4ನೇ ಮಾರ್ಗ ಮತ್ತು ಬಿಲಾಸ್‌ಪುರ್-ಪೆಂದ್ರ ರಸ್ತೆ ನಡುವೆ 3ನೇ ಮಾರ್ಗ: ಛತ್ತೀಸ್‌ಗಢ, ಒಡಿಶಾ, ಮಧ್ಯಪ್ರದೇಶದ ಕಲ್ಲಿದ್ದಲು ಮತ್ತು ಖನಿಜ ಸಾಗಣೆಗೆ ಸಹಕಾರಿಯಾಗಲಿದೆ.

ಈ ಎಲ್ಲಾ ಯೋಜನೆಗಳು ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಢ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಒಳಗೊಳ್ಳಲಿವೆ.

ಕರ್ನಾಟಕಕ್ಕೆ ಏನು ಲಾಭ?

ಈ ಬಹು ಟ್ರ್ಯಾಕಿಂಗ್ ಯೋಜನೆಗಳಿಂದ ಕರ್ನಾಟಕಕ್ಕೆ ಹಲವು ರೀತಿಯಲ್ಲಿ ಅನುಕೂಲವಾಗಲಿದೆ.ಕೈಗಾರಿಕೆಗಳಿಗೆ ಅನುಕೂಲ: ರಾಜ್ಯದ ಉಕ್ಕು ಕಾರ್ಖಾನೆಗಳಿಗೆ ಕಚ್ಚಾ ವಸ್ತುಗಳಾದ ಖನಿಜ ಸಾಗಿಸಲು ವಾಡಿ-ತಂದೂರು, ಮೋಟುಮಾರಿ-ವಿಷ್ಣುಪುರಂ ಮಾರ್ಗದಲ್ಲಿನ ಅಭಿವೃದ್ಧಿಯಿಂದ ಹೆಚ್ಚಿನ ಅನುಕೂಲವಾಗಲಿದೆ. ಹೂಟಗಿ, ಕೂಡಗಿ, ಯಾದ್ಲಾಪುರ, ಬಳ್ಳಾರಿ ಮತ್ತು ಯರಮರಸ್‌ನಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆ ಇನ್ನಷ್ಟು ವೇಗ ಮತ್ತು ಸುಲಭವಾಗಲಿದೆ.

ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ದಟ್ಟಣೆ ಕಡಿಮೆ: ವೈಟ್‌ಫೀಲ್ಡ್-ಬಂಗಾರಪೇಟೆ ನಡುವಿನ 47 ಕಿ.ಮೀ ಉದ್ದದ 3 ಮತ್ತು 4ನೇ ಮಾರ್ಗವು ಅತ್ಯಂತ ದಟ್ಟಣೆಯ ಮನ್ಮಾಡ-ಹುಬ್ಬಳ್ಳಿ-ಬೆಂಗಳೂರು-ಜೋಳರಪೇಟೆ ವಿಭಾಗದಡಿ ಬರುತ್ತದೆ. ಇದು ಬೆಂಗಳೂರು-ಚೆನ್ನೈ ನಡುವಿನ ರೈಲು ಸಂಚಾರ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಿ, ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದೆ.

ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಉತ್ತೇಜನ: ಹೊಸೂರು-ಓಮಲೂರು ಜೋಡಿ ಹಳಿ ಮಾರ್ಗದಿಂದ ಕನ್ಯಾಕುಮಾರಿ, ರಾಮೇಶ್ವರಂನಂತಹ ಪುಣ್ಯಕ್ಷೇತ್ರಗಳಿಗೆ ತೆರಳುವ ಲಕ್ಷಾಂತರ ಯಾತ್ರಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸರಕು ಸಾಗಣೆಯೂ ವೇಗವಾಗಲಿದೆ.ಒಟ್ಟಾರೆಯಾಗಿ, ಈ ಯೋಜನೆಗಳು ಕೇವಲ ರೈಲು ಮಾರ್ಗಗಳ ವಿಸ್ತರಣೆಯಷ್ಟೇ ಅಲ್ಲ, ದೇಶದ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ಪ್ರಾದೇಶಿಕ ಸಂಪರ್ಕಕ್ಕೆ ಹೊಸ ಶಕ್ತಿ ತುಂಬಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Continue Reading

Trending