ರಾಜಕೀಯ
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳ ಅಬ್ಬರ..!

ಒಬ್ಬ ಸಣ್ಣ ಹುಡುಗ. ಅವನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ಕು ಕಲ್ಲುಗಳು. ಆ ಫೋಟೋದೊಂದಿಗೆ ರಾರಾಜಿಸುತ್ತಿರುವ ಸಾಲುಗಳು – ‘ನಾನು ರಾಹುಲ್ ಗಾಂಧಿಯನ್ನು ಭೇಟಿ ಮಾಡಬೇಕಿದೆ’. ಫೇಸ್ಬುಕ್ನಲ್ಲಿ ಈಚೆಗೆ ಕಾಣಿಸಿಕೊಂಡ ಈ ಚಿತ್ರದೊಂದಿಗಿನ ಸಾಲುಗಳು ಭವಿಷ್ಯದ ಪೀಳಿಗೆಯ ಹೆಜ್ಜೆಗಳು ಏನಾಗಬಹುದು ಎಂಬುದರ ಸ್ಪಷ್ಟ ಸುಳಿವನ್ನು ನೀಡುವಂತೆಯೇ ಇವೆ. ಅವುಗಳು ಹಿಂಸೆಯೊಂದಿಗೇ ಗುರುತಿಸಿಕೊಳ್ಳಬೇಕು ಎಂಬ ಕಾರ್ಯಸೂಚಿಯ ಯಶಸ್ಸಿನ ದ್ಯೋತಕವಾಗಿಯೇ ಕಾಣಿಸುತ್ತಿವೆ. ಅಂಬೆಗಾಲಿಟ್ಟು, ಆ ಹಂತವನ್ನು ದಾಟಿಕೊಂಡು ಇದೀಗ ತಾನೆ ನಡೆಯುವುದನ್ನು ಕಲಿತಿರುವ ಅತ್ಯಂತ ಕಿರಿಯ ವಯಸ್ಸಿನ ಸಣ್ಣ ಹುಡುಗನಿಗೆ ಹಿಂಸೆಯ ಭಾಷೆ, ಪರಿಭಾಷೆ ಮತ್ತು ಸ್ವರೂಪವನ್ನು ಪರಿಚಯಿಸುವ ವಿಚಿತ್ರವಾದ ನಡೆಯೊಂದನ್ನು ಸಂಕೇತಿಸುತ್ತಿವೆ.
ಭ್ರಮಾತ್ಮಕ ಚೌಕಟ್ಟುಗಳು
ನಮ್ಮ ದೃಷ್ಟಿಕೋನಗಳು ಈ ಪರಿ ದುರವಸ್ಥೆ ತಲುಪಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾದದ್ದಾದರೂ ಏಕೆ? ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಯಿತೇ? ಆ ಉದ್ದೇಶದ ಹಿಂದೆ ಕಾರ್ಯೋನ್ಮುಖವಾಗಿರುವ ಶಕ್ತಿಗಳು ಯಾವುವು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು ಈ ದೇಶದ ರಾಜಕಾರಣ ಮತ್ತು ಆಡಳಿತ ನೆಚ್ಚಿಕೊಂಡ ಹೊಸದನ್ನು ಬಹುಬೇಗ ಸ್ವೀಕರಿಸದ, ಸ್ವೀಕರಿಸಿದರೂ ನಿರಾಕರಣೆಯ ಭಾವವ ಸಾಂಪ್ರದಾಯಿಕತೆಯ ಚೌಕಟ್ಟುಗಳನ್ನು ಗೊತ್ತುಮಾಡಿಕೊಳ್ಳಬೇಕಾಗುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಭಾರತೀಯ ರಾಜಕಾರಣದ ವಿವಿಧ ಮಗ್ಗಲುಗಳು ಪರಿಚಯವಾಗುವುದರೊಂದಿಗೇ ಅಹಿಂಸೆಯ ಆಲೋಚನಾ ಕ್ರಮಗಳು ಹಿಂಸೆಯ ಸಂಕುಚಿತತೆಯೊಂದಿಗೆ ಮುಖಾಮುಖಿಯಾದ ವಿವಿಧ ಸಂದರ್ಭಗಳ ಚಾರಿತ್ರಿಕ ಹಿನ್ನೆಲೆ ಗಮನಕ್ಕೆ ಬರುತ್ತದೆ. ಅಹಿಂಸೆಯ ಮಾರ್ಗವು ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಸಹಾಯಕವಾದ ನಂತರ ಭಾರತೀಯ ಆಡಳಿತ ಅಳವಡಿಸಿಕೊಂಡ ನಿರ್ವಹಣೆಯ ಮಾದರಿಗೆ ಸಂಬಂಧಿಸಿದ ಸಂಗತಿಗಳು ತಿಳಿಯುತ್ತವೆ.
ಸಾರ್ಥಕತೆಯ ಹಾದಿಯ ನೆನಪು
ಬಾಲ್ಯದಲ್ಲಿ ನಮಗೆ ಹಲವು ಮಹನೀಯರ ತ್ಯಾಗದ ಕಾರಣಕ್ಕಾಗಿಯೇ ಸ್ವಾತಂತ್ರ್ಯ ಲಭಿಸಿರುವುದನ್ನು ಹಿರಿಯರ ಭಾಷಣಗಳು ಮನವರಿಕೆ ಮಾಡಿಕೊಡುತ್ತಿದ್ದವು. ಗಾಂಧಿ ಸೇರಿದಂತೆ ಹಲವರ ಹೋರಾಟದ ಪ್ರತಿಫಲವಾಗಿ ಸ್ವಾತಂತ್ರ್ಯ ನಮ್ಮೊಂದಿಗಿರುವುದನ್ನು ದೃಢೀಕರಿಸುತ್ತಿದ್ದವು. ಆಗ ನಮಗೆ ಹಿಂಸೆಯೇ ಶ್ರೇಷ್ಠ ಎಂಬಂಥ ದಾರಿತಪ್ಪಿಸುವ ದುರ್ಮಾರ್ಗದ ವೈಭವೀಕರಣ ಕಣ್ಣಮುಂದೆ ಬರುತ್ತಲೇ ಇರಲಿಲ್ಲ. ಬದಲಾಗಿ ಎಲ್ಲ ಭಾಷಣಗಳ ಚಿಂತನೆಗಳು ಪಡೆದುಕೊಂಡ ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಿಕೊಳ್ಳುವ ಹಾದಿ ಯಾವುದಾಗಿರಬೇಕು ಎಂಬುದನ್ನು ಹೊಳೆಸುವುದರ ಕಡೆಗೇ ಕೇಂದ್ರೀಕೃತವಾಗಿರುತ್ತಿದ್ದವು.ಬಾಲ್ಯದ ಅನುಭವವು ಹಲವು ಪಾಠಗಳನ್ನು ಕಲಿಸುತ್ತಿತ್ತು. ಮಕ್ಕಳು ಹೊಡೆದಾಡಿಕೊಂಡು ಬಂದರೆ ದೊಡ್ಡವರು ಬುದ್ಧಿವಾದ ಹೇಳುತ್ತಿದ್ದರು. ಹೊಡೆದಾಟ ಯಾಕೆ ಸರಿಯಲ್ಲ ಸ್ಪಷ್ಟಪಡಿಸುತ್ತಿದ್ದರು. ಹೊಡೆದವನು ಹೊಡೆತ ತಿಂದವನ ಮುಂದೆ ನಿಂತು ಕ್ಷಮೆ ಕೇಳಬೇಕಾಗುತ್ತಿತ್ತು. ಆ ಕ್ಷಮೆಯ ಪ್ರಸ್ತಾಪದೊಂದಿಗೇ ಇಬ್ಬರ ನಡುವೆ ಸ್ನೇಹ ಮತ್ತೆ ಚಿಗುರೊಡೆಯುತ್ತಿತ್ತು. ಸಣ್ಣ ಭಿನ್ನಾಭಿಪ್ರಾಯದ ಜಾಗವನ್ನು ಆಕ್ರಮಿಸಿಕೊಂಡು ಹೊಡೆದಾಡುವಷ್ಟರ ಮಟ್ಟಿಗೆ ಪ್ರಚೋದಿಸಿದ ದ್ವೇಷದ ದಟ್ಟ ಭಾವನೆಯನ್ನು ಆ ಕ್ಷಣವೇ ಅಳಿಸಿಹಾಕಿಬಿಡುತ್ತಿತ್ತು. ಆಮೇಲಾಮೇಲೆ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳು, ಸಣ್ಣ ಸಣ್ಣ ಜಗಳಗಳು, ಮತ್ತೆ ಒಂದಾಗಿ ಮಾತನಾಡಿಕೊಳ್ಳುವ ಸೊಗಡಿನೊಂದಿಗೇ ಬಾಲ್ಯ ಕಳೆದುಬಿಡುತ್ತಿತ್ತು. ದೊಡ್ಡವರಾಗುತ್ತಿದ್ದಂತೆಯೇ ಸಣ್ಣವರಾಗಿದ್ದಾಗಿನ ಕೆಲವು ಸಣ್ಣತನಗಳ ಪೊರೆಗಳನ್ನು ಕಳಚಿಕೊಳ್ಳುತ್ತಾ ಸಾಗಬೇಕಾಗಿತ್ತು. ಮಕ್ಕಳಾಗಿದ್ದಾಗ ಸಾಧ್ಯವಾಗಿದ್ದ ಈ ವಿವೇಕ ದೊಡ್ಡವರ ಬದುಕಿನೊಳಗೆ ಇಲ್ಲವಾಗುತ್ತದೆ. ಅವಿವೇಕತನದ ಪರಮಾವಧಿಯನ್ನು ಮತ್ತೆ ಮತ್ತೆ ಸಾಬೀತುಪಡಿಸುವ ಹಾಗೆಯೇ ಅವರು ವಿಕೃತಿಗಳೊಂದಿಗೇ ಗುರುತಿಸಿಕೊಳ್ಳುತ್ತಾರೆ. ಈಗಿನ ರಾಜಕಾರಣ ಮತ್ತು ಅದು ಪೋಷಿಸುವ ಆಡಳಿತ ವ್ಯವಸ್ಥೆಯು ಆ ವಿಕೃತಿಗಳನ್ನು ದಟ್ಟವಾಗಿಸುವ ನಕಾರಾತ್ಮಕ ಪಾತ್ರವನ್ನು ಅತ್ಯಂತ ಚಾಣಾಕ್ಷಯುತವಾಗಿ ನಿಭಾಯಿಸುತ್ತಿದೆ.
ಧೀಮಂತಿಕೆಯ ಗೈರುಹಾಜರಿ
ರಾಜಕಾರಣ ಮತ್ತು ಆಡಳಿತ ಒಂದನ್ನೊಂದು ನೆಚ್ಚಿಕೊಂಡಿರುವ ಪರಸ್ಪರ ಪೂರಕವಾದ ಕ್ಷೇತ್ರಗಳು. ಒಂದು ಶಾಸಕಾಂಗಕ್ಕೆ ಬೇಕಾದ ನಾಯಕತ್ವದ ಸಂಪನ್ಮೂಲವನ್ನು ಒದಗಿಸಿಕೊಡುವ ವಲಯವಾದರೆ, ಮತ್ತೊಂದು ಆ ಸಂಪನ್ಮೂಲದ ಆಧಾರದಲ್ಲಿ ಬಹುಮುಖೀ ಪಾತ್ರವನ್ನು ನಿರ್ವಹಿಸುವ ಕ್ರಿಯಾತ್ಮಕ ವ್ಯವಸ್ಥೆ. ಇವೆರಡನ್ನೂ ಪ್ರತಿನಿಧಿಸುವವರು ದೊಡ್ಡವರಾಗಿರಬೇಕು. ಅವರ ದೊಡ್ಡತನವು ಕೇವಲ ವಯಸ್ಸಲ್ಲಷ್ಟೇ ಅಲ್ಲ, ಅವರ ಧೀಮಂತಿಕೆಯ ಮೂಲಕ ಸಾಬೀತಾಗುತ್ತಿರಬೇಕು.ರಾಜಕಾರಣದಲ್ಲಿ ಹಿರಿವಯಸ್ಕ ರಾಜಕಾರಣಿಗಳಿದ್ದಾರೆ. ಆಡಳಿತ ವಲಯದಲ್ಲಿ ಅನುಭವಿ ಅಧಿಕಾರಿಗಳಿದ್ದಾರೆ. ಆದರೆ ಈ ಹಿರಿತನ ಮತ್ತು ಅನುಭವ ಇಡೀ ಸಮಾಜವನ್ನು ಹೊಸ ಹಾದಿಯ ಕಡೆಗೆ ಕೊಂಡೊಯ್ಯುವ ಬದಲು ಹಿಂದಿನ ಅನಾಗರಿಕ ಜಗತ್ತಿನ ಕ್ರೌರ್ಯದ ಕಡೆಗೇ ಹಿಂತಿರುಗಿಸುತ್ತಿದೆಯೇನೋ ಎಂಬ ಆತಂಕ ಆವರಿಸಿಕೊಳ್ಳುತ್ತಿದೆ. ಒಬ್ಬ ರಾಜಕಾರಣಿ ಮತ್ತೊಬ್ಬ ರಾಜಕಾರಣಿಯ ಬಗ್ಗೆ ಕೆಟ್ಟದಾಗಿ ಮಾತನಾಡುವಿಕೆ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವ ಭರದಲ್ಲಿ ಹಿಂಸೆಯ ಮನಸ್ಥಿತಿಯನ್ನೇ ಕಾಡಿಸಿಕೊಂಡು ಪ್ರಚೋದಿಸುವ ಬಗೆ – ಇವೆಲ್ಲವೂ ಹಿರಿತನದ ಸಂಕೇತಗಳಾಗುವುದೂ ಇಲ್ಲ. ಅನುಭವ ಶ್ರೇಷ್ಠತೆಯನ್ನೂ ನಿರೂಪಿಸುವುದಿಲ್ಲ.
ನಂಬಿಕೆಯ ನಡಿಗೆ ಮತ್ತು ನಿಜದ ಅರಿವು
ನಂಬಿಕೆಯ ತಂತಿ ಮೇಲಿನ ನಡಿಗೆಯ ಹಾಗೆಯೇ ಸೂಕ್ಷ್ಮಾತಿಸೂಕ್ಷ್ಮ ಸ್ವರೂಪದೊಂದಿಗೆ ಈ ದೇಶದ ಜನರ ತಿಳುವಳಿಕೆಯು ನಿಕಟನಂಟು ಹೊಂದಿದೆ. ಇದು ಅರಿವಿನ ಎತ್ತರ ತಲುಪಿಕೊಳ್ಳುವ ಮುನ್ನವೇ ಇಲ್ಲಿಯ ರಾಜಕಾರಣ ಅವರ ಮನೋಲೋಕವನ್ನುಆವರಿಸಿಕೊಂಡುಬಿಡುತ್ತದೆ. ನಂಬಿಸಿ ಆ ಮೂಲಕ ಸೃಷ್ಟಿಯಾಗುವ ಪರವಾದ ಅಲೆಯ ಮೇಲೆ ಅದು ಯಾವತ್ತೂ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುತ್ತದೆ. ಇಲ್ಲಿಯ ವೈಚಾರಿಕತೆಯು ನಂಬಿಕೆಯೊಂದಿಗೆ ಆರೋಗ್ಯಕರ ಸಂವಾದವನ್ನು ಏರ್ಪಡಿಸಿಕೊಂಡು ಜನಸಮುದಾಯವನ್ನು ಒಂದು ಹೆಜ್ಜೆ ಮುಂದಕ್ಕೆ ಕರೆದೊಯ್ದರೆ, ಅದೇ ನಂಬಿಕೆಯ ಜಗತ್ತನ್ನು ಪ್ರತಿನಿಧಿಸುವ ಧಾರ್ಮಿಕ ಯಜಮಾನಿಕೆಯ ಪ್ರತಿನಿಧಿಗಳು ಮತ್ತು ಅವರೊಂದಿಗೆ ಗುರುತಿಸಿಕೊಂಡ ರಾಜಕೀಯ ಶಕ್ತಿಗಳು ಒಂದು ಹೆಜ್ಜೆ ಹಿಂದಕ್ಕೆ ಕರೆದೊಯ್ಯುತ್ತವೆ.
ಹಿಂದಕ್ಕೆಳೆಸುವ ಸ್ಥಾವರ ಧ್ವನಿಗಳು
ಈಗ ಏನಾಗಿದೆ ಎಂದರೆ ನಮ್ಮನ್ನು ಮುನ್ನಡೆಸುವ ಬೌದ್ಧಿಕ ಚಲನೆಯ ಜಂಗಮ ಶಕ್ತಿಗಳಿಗಿಂತ ನಮ್ಮನ್ನು ಹಿಂದೆಯೇ ಉಳಿಸಿ ತಟಸ್ಥವಾಗಿ ಉಳಿಸಿ ಸ್ಥಾವರಗೊಳಿಸುವ ಧ್ವನಿಗಳ ಅಬ್ಬರದ ಕಡೆಗಿನ ವ್ಯಾಮೋಹವೇ ಸಾಮೂಹಿಕ ಕಾಯಿಲೆಯಾಗಿ ಸಾರ್ವಜನಿಕ ವಲಯದಲ್ಲಿ ಬೇರೂರಿಬಿಟ್ಟಿದೆ. ಈ ಊನದ ಕಾರಣಕ್ಕಾಗಿಯೇ ಅರಿವಿನ ಆಂದೋಲನದ ಬದಲು ಇಲ್ಲೀಗ ಹಿಂಸೆಯ ದೃಷ್ಟಿಕೋನಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಪ್ರಾಮುಖ್ಯತೆ ಪಡೆಯುತ್ತಿವೆ. ಯಾರೊಳಗೂ ತಿಳಿದುಕೊಳ್ಳುವ ಸಂಯಮವಿಲ್ಲ. ಸಹನೆಯಿಂದ ಯೋಚಿಸುವ ತಾಳ್ಮೆಯಿಲ್ಲ. ತಕ್ಷಣವೇ ಪ್ರತಿಕ್ರಿಯಿಸುವ, ಹಾಗೆ ಪ್ರತಿಕ್ರಿಯಿಸುತ್ತಲೇ ಕ್ರೌರ್ಯ ಮೆರೆಯುವ ಪ್ರಚೋದಕ ಉತ್ಸಾಹ ಎಲ್ಲೆಲ್ಲೂ ಕಂಡುಬರುತ್ತಿದೆ. ಇದರ ಭಾಗವಾಗಿಯೇ ಸಣ್ಣ ಮಗುವಿನ ಕೈಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನಿಟ್ಟು ‘ನಾನು ರಾಹುಲ್ ಗಾಂಧಿಯನ್ನು ಭೇಟಿಯಾಗಲು ಇಚ್ಛಿಸುತ್ತಿದ್ದೇನೆ’ ಎಂಬ ಒಕ್ಕಣೆಯ ಫೋಟೋ ಫೇಸ್ಬುಕ್ನ ಆವರಣದಲ್ಲಿ ಕಾಣಿಸಿಕೊಳ್ಳುತ್ತದೆ. ದಿಢೀರನೆ ಅದು ಹಂಚಲ್ಪಡುತ್ತದೆ. ನಾಳಿನ ಪೀಳಿಗೆಯನ್ನು ಪ್ರತಿನಿಧಿಸುವ ಪೋರನ ಹಿಂಸಾಪರ ಫೋಟೋಕ್ಕೆ ಅಸಂಖ್ಯಾತ ಲೈಕ್ಗಳು ಹರಿದುಬರುತ್ತವೆ. ಇದು ಅರಿವನ್ನು ಎತ್ತರಿಸಿಕೊಳ್ಳುವ ಲಕ್ಷಣವಲ್ಲ. ಬದಲಾಗಿ ಜನರ ಸ್ವಯಂತಿಳುವಳಿಕೆಯ ಶಕ್ತಿಯ ಮೇಲೆ ತಣ್ಣಗೆ ಆಗುವ ಗದಾಪ್ರಹಾರ.
ರೂಢಿಗತ ಸಂಕುಚಿತ ವಿಧಾನ
ನಂಬಿಕೆಯ ಜಗತ್ತು ಆಧ್ಯಾತ್ಮಿಕ ತಾತ್ವಿಕತೆಯ ಪ್ರಖರತೆಯನ್ನು ತೀವ್ರಗೊಳಿಸುವುದು ಒಂದು ಸಾಧ್ಯತೆ. ಆದರೆ, ಇದೇ ಜಗತ್ತು ದೈವಿಕ ಮತ್ತು ಧಾರ್ಮಿಕ ಮೌಢ್ಯವನ್ನು ಪ್ರತಿಷ್ಠಾಪಿಸುವುದಕ್ಕೆ ಸಹಾಯಕವಾಗುತ್ತದೆ. ಅಷ್ಟೇ ಅಲ್ಲ, ರಾಜಕೀಯದ ಸ್ವರೂಪವನ್ನು ನಿರ್ಧರಿಸುವಷ್ಟರ ಮಟ್ಟಿಗೆ ತನ್ನ ಪ್ರಭಾವವನ್ನು ಪ್ರಬಲವಾಗಿ ಬೇರೂರಿಸಿಬಿಡುತ್ತದೆ. ಇದರ ಪರಿಣಾಮವು ಜನರ ಮನೋಧರ್ಮದ ಮೇಲಾಗುತ್ತದೆ. ಅಧಿಕಾರದಲ್ಲಿರುವ ಮತ್ತು ಅಧಿಕಾರದಲ್ಲಿ ಇಲ್ಲದೇ ಇರುವ ನಾಯಕರೆನ್ನಿಸಿಕೊಂಡವರನ್ನು ಗ್ರಹಿಸುವ ಸಂಕುಚಿತ ವಿಧಾನವನ್ನೂ ರೂಢಿಸಿಬಿಡುತ್ತದೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕಿದೆ ಎನ್ನುವ ಪುಟ್ಟ ಪೋರನ ಕೈಯಲ್ಲಿನ ದೊಡ್ಡ ದೊಡ್ಡ ಕಲ್ಲುಗಳ ಫೋಟೋ ಈ ವಿಧಾನ ಎಂಥದ್ದು ಎಂಬುದನ್ನು ನಿರೂಪಿಸಿದೆ. ಲೋಕಸಭೆಯಲ್ಲಿ ನಿರರ್ಗಳವಾಗಿ ಮಾತನಾಡಿ ಭಾಷಿಕ ಪ್ರೌಢಿಮೆ ಮೆರೆದು ಅಧಿಕಾರದಲ್ಲಿರುವವರ ಊನಗಳ ಮೇಲೆ ಬೆಳಕು ಚೆಲ್ಲುವ ಪ್ರಬುದ್ಧ ನಡೆಯನ್ನು ಪ್ರದರ್ಶಿಸುವವರು ಉತ್ತಮ ಸಂಸದೀಯ ಪಟು ಎಂಬ ಹಿರಿಮೆ ಪಾತ್ರರಾಗುವ ಪರಂಪರೆ ಇದೆ. ಆದರೆ, ಇದಕ್ಕೆ ತದ್ವಿರುದ್ಧವಾದ ನಡೆಗಳೊಂದಿಗಿನ ಹೀನ ಸಂಪ್ರದಾಯವನ್ನು ರಾಜಕಾರಣಿಗಳು ಈಗಾಗಲೇ ಆರಂಭಿಸಿಬಿಟ್ಟಿದ್ದಾರೆ. ಅಷ್ಟಕ್ಕೇ ಅವರು ಸಮಾಧಾನಗೊಳ್ಳದೇ, ಸಾಮಾಜಿಕ ಜಾಲತಾಣಗಳ ವೇದಿಕೆಯ ತಾರ್ಕಿಕ ಸಾಧ್ಯತೆಗಳ ಆಯಾಮಕ್ಕೇ ಧಕ್ಕೆಯೊದಗಿಸುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸದ್ಯದ ಮತ್ತು ಭವಿಷ್ಯದ ಹಿಂಸಾಪ್ರವೃತ್ತಿಗಳ ವಾತಾವರಣ ಸೃಷ್ಟಿಗೆ ಹೊಸ ಪೀಳಿಗೆಯ ಎಳೆ ಜೀವಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಬಿಂಬಗಳು ನಕಾರಾತ್ಮಕ ಸಂದೇಶವನ್ನು ಸಾರುತ್ತಿವೆ.
ದ್ವೇಷದ ವಿಷ
ಒಬ್ಬರನ್ನೊಬ್ಬರು ಹಿಂಸಿಸಿಕೊಳ್ಳುವ, ದ್ವೇಷ ಸಾಧಿಸುವ, ಆ ಮೂಲಕ ನೆಮ್ಮದಿಯನ್ನು ತಂದುಕೊಳ್ಳುವ ಭ್ರಮಾತ್ಮಕತೆಯೇ ಶ್ರೇಷ್ಠ ಎಂದು ನಂಬಿಸುವ ಆಟ ಈಗೀಗ ಅಧಿಕೃತತೆಯನ್ನು ಪಡೆದುಕೊಂಡಿದೆ. ಈ ಆಟದ ಓಟವು ಹಲವು ಜೀವಗಳ ಬಲಿಬೇಡುತ್ತದೆ ಎಂಬ ಸತ್ಯದ ಕಡೆಗೆ ಯಾರ ಗಮನವೂ ಇಲ್ಲ. ಅದು ನಮ್ಮನ್ನು ಯಾವ ಕೂಪಕ್ಕೆ ತಳ್ಳುತ್ತದೆ ಎಂಬ ಪರಿಜ್ಞಾನವಿಲ್ಲದೇ ದ್ವೇಷಕ್ಕೆ ಮನಸ್ಸನ್ನು ತಿರುಗಿಸಿಕೊಳ್ಳುವ ರಣೋತ್ಸಾಹವು ಪೀಳಿಗೆಯನ್ನು ಸರ್ವನಾಶದ ಕಡೆಗೆ ಕೊಂಡೊಯ್ಯುತ್ತಿದೆ. ನಮ್ಮ ನಾಯಕರ ಕುರಿತು ಅಸಮಾಧಾನಗೊಳ್ಳುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ, ಆ ಮೂಲಕ ಅವರು ನಮ್ಮ ಅಗತ್ಯಗಳೇನೇನು ಎಂಬುದರ ಬಗ್ಗೆ ಆಲೋಚಿಸುವಂತೆ ಒತ್ತಡ ಹಾಕುವುದರ ಬದಲು ವಿರೋಧ ಪಕ್ಷಗಳವರ ಬಗ್ಗೆ ದ್ವೇಷ ಹುಟ್ಟುಹಾಕುವಂಥ ವಿಷದ ಬೀಜಗಳನ್ನು ಬಿತ್ತುವ ಪ್ರಯತ್ನಗಳು ಸಾಮಾಜಿಕ ಜಾಲತಾಣಗಳ ಮೂಲಕ ಮುನ್ನೆಲೆಗೆ ಬರುತ್ತಿರುವುದು ಭವಿಷ್ಯದ ಕರಾಳತೆಯ ಬಗ್ಗೆ ಮುನ್ಸೂಚನೆ ನೀಡುತ್ತಿವೆ.
ನಮಗೆ ಅಧಿಕಾರದಲ್ಲಿರುವವರೂ ಮುಖ್ಯ. ಅವರನ್ನು ಪ್ರಶ್ನಿಸುವ ವಿರೋಧ ಪಕ್ಷಗಳವರೂ ಮುಖ್ಯ. ಜೊತೆಗೆ ತಾರ್ಕಿಕವಾಗಿ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ವೈಚಾರಿಕ ಚಿಂತಕರೂ ಪ್ರಧಾನ ಪಾತ್ರ ನಿರ್ವಹಿಸುತ್ತಾರೆ. ಈ ಮೂರೂ ವಲಯಗಳವರನ್ನೂ ಪರಸ್ಪರ ದ್ವೇಷದ ನೆಲೆಗಳಲ್ಲಿ ನೋಡುವಂತೆ ಪ್ರಚೋದಿಸುವ ಸಣ್ಣತನದ ರಾಜಕಾರಣ ತನ್ನ ವ್ಯತಿರಿಕ್ತತೆಯನ್ನು ಈಗಾಗಲೇ ಪ್ರದರ್ಶಿಸುತ್ತಿದೆ. ಅಧಿಕಾರ, ಹಣ ಮತ್ತು ಅದಕ್ಕನುಗುಣವಾದ ಎಲ್ಲ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವುದರಲ್ಲಿ ಒಂದಾಗುವ ಅಧಿಕಾರರೂಢರು ಮತ್ತು ವಿರೋಧ ಪಕ್ಷಗಳವರಿಗೆ ನಾವು ಸ್ಪಷ್ಟ ಸಂದೇಶ ರವಾನಿಸಬೇಕಿದೆ. ನೀವಿಬ್ಬರೂ ಈ ದೇಶದ ನಿಜವಾದ ಬೆಳವಣಿಗೆಯ ಬಗ್ಗೆ ಆಲೋಚಿಸಿ ಎಂದು ದಿಟ್ಟವಾಗಿ ಕಿವಿಮಾತು ಹೇಳಬೇಕಿದೆ. ಒಬ್ಬರಿಗೊಬ್ಬರು ಹೇಳಿಕೆಗಳ ಮೂಲಕ ಕಚ್ಚಾಡುತ್ತಾ, ಆ ಮೂಲಕವೇ ಹಿಂಸೆಗೆ ಪ್ರಚೋದನೆ ನೀಡುತ್ತಾ, ಬೀದಿಬದಿಯಲ್ಲಿ ಅಮಾಯಕ ಜೀವಗಳ ಮಾರಣಹೋಮಕ್ಕೆ ಕಾರಣವಾಗುವ ರಾಜಕೀಯ ಪ್ರವೃತ್ತಿಗಳನ್ನು ಗಟ್ಟಿದನಿಯಲ್ಲಿ ಖಂಡಿಸಬೇಕಿದೆ. ಹಾಗಾಗದಿದ್ದರೆ ನಮ್ಮ ದೇಶ ಮಹಾನ್ ಆಗುವುದಿಲ್ಲ. ಸಮೃದ್ಧ ಭಾರತದ ಕನಸುಗಳೂ ಸಾಕಾರಗೊಳ್ಳುವುದಿಲ್ಲ.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನೆರವು ಬರಬೇಕಿದೆ ಎಂದು ಹೇಳಿದರು. ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿದ್ದು, ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ 34 ಸಾವಿರ ಕೋಟಿ ರೂಪಾಯಿ ಮೀಸಲು : ಸಚಿವ ಡಾ.ಎಚ್.ಸಿ.ಮಹದೇವಪ್ಪ

ಸುದ್ದಿದಿನ, ಹುಬ್ಬಳ್ಳಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ ಒಟ್ಟು 34ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಪರಿಶಿಷ್ಟ ಜಾತಿಗೆ 24 ಸಾವಿರ ಕೋಟಿ ರೂಪಾಯಿ, ಪಂಗಡಕ್ಕೆ 8ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. 40 ಇಲಾಖೆಗಳಿಗೆ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ವಿಶೇಷ ಘಟಕ ಯೋಜನೆಯ ಹಣವನ್ನು ಇತರೆ ಯಾವುದೇ ವಿಭಾಗಕ್ಕೂ ಬಳಕೆ ಮಾಡುವುದಿಲ್ಲ. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣವನ್ನು ವಿನಿಯೋಗಿಸಲಾಗುವುದು ಎಂದು ಡಾ.ಮಹದೇವಪ್ಪ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ ಮೊತ್ತ ಎಷ್ಟು ಗೊತ್ತಾ?!

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಒಟ್ಟು 1 ಲಕ್ಷ 59 ಸಾವಿರದ 69 ಕೋಟಿ ರೂಪಾಯಿ ಜಿಎಸ್ಟಿ ಆದಾಯ ಸಂಗ್ರಹವಾಗಿದೆ.
35 ಸಾವಿರದ 794ಕೋಟಿ ರೂಪಾಯಿ ಕೇಂದ್ರೀಯ ಜಿಎಸ್ಟಿ, 83ಸಾವಿರದ 251 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಇದು ಒಳಗೊಂಡಿದೆ. 37 ಸಾವಿರದ 581 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆಗೆ ಹಾಗೂ 31 ಸಾವಿರದ 408ಕೋಟಿ ರೂಪಾಯಿಗಳನ್ನು ಸಮಗ್ರ ಸರಕು ಮತ್ತು ಸೇವಾ ತೆರಿಗೆ ಯಿಂದ ರಾಜ್ಯ ಸರಕು ಮತ್ತು ಸೇವಾ ತೆರಿಗೆಗೆ ಸರ್ಕಾರ ಇತ್ಯರ್ಥ ಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ