ರಾಜಕೀಯ
ರಾಜಕೀಯ ಪ್ರಜ್ಞೆ : ಭಾರತೀಯ ವಾಸ್ತವಿಕತೆ
![](https://suddidina.com/wp-content/uploads/2018/09/Politics-suddidina.jpg)
ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳನ್ನು ಆಕರ್ಷಿಸುವವರು ಸಿನಿಮಾ ನಟ-ನಟಿಯರು. ಸ್ಟಾರ್ ನಟರುಗಳ ಫೈಟ್ಗಳನ್ನೇ ನೋಡಿ ಬಣಗಳನ್ನು ಕಟ್ಟಿಕೊಂಡು ‘ನಮ್ಮ ಹೀರೋ ಹೀಗೆ, ಹಾಗೆ’ ಅಂತೆಲ್ಲಾ ಅವರು ಮಾತನಾಡಿಕೊಳ್ಳುತ್ತಾರೆ. ಹಿಂದಿನ ದಿನ ಸಿನಿಮಾ ನೋಡಿದ ನಂತರ ಮರುದಿನ ಆ ಬಗ್ಗೆ ಹೇಳಿಕೊಳ್ಳುವುದೆಂದರೆ ಅವರಿಗೆ ಪ್ರತಿಷ್ಠೆ. ಕಥೆಗಿಂತ ಫೈಟ್ಗಳ ವರ್ಣನೆಗೇ ಉತ್ಸಾಹ ಮೀಸಲು. ಒಬ್ಬ ಹೀರೋ ಫೈಟ್ ಬಗ್ಗೆ ಹೇಳಿಕೊಳ್ಳುವಾಗಲೇ ಇನ್ನೊಬ್ಬ ಹೀರೋನ ಅಭಿಮಾನಿ ಸ್ನೇಹಿತ ತಕರಾರು ಎತ್ತಿ ‘ನಮ್ಮ ಹೀರೋ ಮುಂದೆ ನಿಮ್ಮ ಹೀರೋ ಜೀರೋ’ ಎಂದ ಕೂಡಲೇ ಜಗಳ ತಾರಕಕ್ಕೇರುತ್ತದೆ. ಮಾತು ಬಿಡುವುದು, ಎಷ್ಟೋ ದಿವಸಗಳ ನಂತರ ಮತ್ತೆ ಮಾತನಾಡುವುದು, ಒಂದಷ್ಟು ಮುನಿಸು, ದ್ವೇಷ, ಸ್ನೇಹಗಳ ಮೂಲಗಳಾಗಿ ಆ ದಿನಗಳು ಕಳೆದುಹೋಗುತ್ತವೆ. ಅವರೊಳಗಿನ ಮುಗ್ಧತೆಯ ಕಾರಣಕ್ಕಾಗಿಯೇ ಅವರು ಮತ್ತೆ ಮಾತನಾಡಿಕೊಳ್ಳುತ್ತಾರೆ. ಸ್ನೇಹವನ್ನು ಉಳಿಸಿಕೊಳ್ಳುತ್ತಾರೆ. ಆ ಮುಗ್ಧತೆಯೊಂದಿಗೇ ಬೆಳವಣಿಗೆಯ ವಿವಿಧ ಹಂತಗಳು ದಾಟಿಕೊಂಡರೆ ಅವರು ಸರಿಯಾಗಿ ಆಲೋಚಿಸುವುದರ ಕಡೆಗೆ ವಾಲಿಕೊಳ್ಳುತ್ತಾರೆ. ಹಾಗಿದ್ದಾಗಲೇ ಪ್ರಶ್ನಿಸುವ ಸಹಜ ಪ್ರವೃತ್ತಿ ಜೀವಂತವಾಗಿರುತ್ತದೆ. ಮುಕ್ತಚಿಂತನೆಯ ಕಡೆಗಿನ ಹಾದಿ ತೆರೆದುಕೊಳ್ಳುತ್ತದೆ. ಆದರೆ, ಸಿನಿಮಾದೊಂದಿಗಿನ ಭಾವುಕ ನಂಟು ಕ್ರಮೇಣ ಅವರೊಳಗೆ ಅಂಧಾಭಿಮಾನ ಸೃಷ್ಟಿಸಿಬಿಡುತ್ತದೆ.
ಕಟೌಟ್, ಅದರ ಮೇಲೆ ಕ್ಷೀರಧಾರೆ ಎರೆಯುವ ಆರಾಧನಾ ಮನಸ್ಥಿತಿಯೂ ಹೀಗೆಯೇ ರೂಪುಗೊಳ್ಳುತ್ತದೆ. ಸಿನಿಮಾಭಿಮಾನ ಮತ್ತು ಸ್ಟಾರ್ ನಟರುಗಳನ್ನು ಆರಾಧಿಸುವ ಅಂಧಾಭಿಮಾನದ ಈ ಬಗೆಯ ಅತಿರೇಕದ ಮನೋಭಾವವನ್ನೇ ಜನಸಮೂಹದ ಆದ್ಯಗುಣಲಕ್ಷಣವಾಗಿಸಿಬಿಡುವ ಚಾಣಾಕ್ಷ ತಂತ್ರಗಾರಿಕೆಯನ್ನು ಭಾರತದ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ಪ್ರಯೋಗಿಸುತ್ತಿದೆ. ಮುಗ್ಧತೆ ಮತ್ತು ಸ್ನೇಹದ ವೈಶಾಲ್ಯತೆಯನ್ನು ಮೊಟಕುಗೊಳಿಸಿ ದೊಡ್ಡವರನ್ನು ಸಂಕುಚಿತರನ್ನಾಗಿಸುವ ರಾಜಕೀಯ ಸನ್ನಿವೇಶವನ್ನು ಅದು ಉದ್ದೇಶಪೂರ್ವಕವಾಗಿ ಸೃಷ್ಟಿಸುತ್ತಿದೆ. ಸರಿಯಾದ ರಾಜಕೀಯ ಪ್ರಜ್ಞೆಯನ್ನು ಆವಾಹಿಸಿಕೊಳ್ಳುವ ತುಡಿತವನ್ನೇ ಇಲ್ಲವಾಗಿಸಿಬಿಡುತ್ತಿದೆ. ತಮ್ಮ ಪ್ರಭಾವದ ಭರಾಟೆಯ ಅಲೆಯೊಂದಿಗೆ ಇಡೀ ಸಮಾಜದೊಳಗಿನ ಜನರ ಮನೋಶಿಲ್ಪವನ್ನು ಸಡಿಲಗೊಳಿಸಿ ದುರ್ಬಲಗೊಳಿಸುತ್ತಿರುವ ಮೂರು ಜನಪ್ರಿಯ ಕ್ಷೇತ್ರಗಳೆಂದರೆ ಸಿನಿಮಾ, ರಾಜಕಾರಣ ಮತ್ತು ಕ್ರಿಕೆಟ್. ಜನಪ್ರಿಯ ಸಿನಿಮಾಗಳು ಮತ್ತು ಕ್ರಿಕೆಟ್ ಉದ್ಯಮ ಇವೆರಡೂ ಉಂಟುಮಾಡುವ ಪ್ರಭಾವದ ಆವರಣದ ನಡುವೆಯೇ ರಾಜಕಾರಣ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳುವ ತಂತ್ರಗಳನ್ನು ಹೆಣೆದುಕೊಳ್ಳುತ್ತದೆ. ಆ ತಂತ್ರಗಳು ಯಶಸ್ವಿಯಾಗಲೇಬೇಕು ಎಂಬ ಹಠದೊಂದಿಗೇ ಹೆಜ್ಜೆಯಿರಿಸುತ್ತದೆ. ಎದುರುಗೊಳ್ಳುವವರನ್ನು ಹಣಿಯುವ ನಿಗೂಢ ಕಾರ್ಯಸೂಚಿಗಳನ್ನು ಸಂದರ್ಭಕ್ಕೆ ಅನುಗುಣವಾಗಿ ರೂಪಿಸಿಕೊಂಡುಬಿಡುತ್ತದೆ. ಪರ್ಯಾಯ ನಾಯಕತ್ವದ ಉದಾತ್ತ ಅವಕಾಶಗಳನ್ನು ಹೊಸಕಿಹಾಕಿ ಜನರಿಂದ ಆಯ್ಕೆಯ ಐಚ್ಛಿಕತೆಯನ್ನೇ ಕಿತ್ತುಕೊಂಡುಬಿಡುತ್ತದೆ. ‘ಇವರಿಲ್ಲದಿದ್ದರೆ ಮತ್ತಿನ್ಯಾರು ಆಳುವವರು’ ಎಂಬ ಅವಲಂಬನಾ ದೃಷ್ಟಿಕೋನವನ್ನು ಅದೇ ಜನವಲಯದಲ್ಲಿಯೇ ನೆಲೆಗೊಳಿಸಿಬಿಡುತ್ತದೆ. ನಾಯಕರಲ್ಲದ ನಾಯಕರೆನ್ನಿಸಿಕೊಂಡವರನ್ನು ಆರಾಧಿಸುವವರ ಸಂಖ್ಯಾಬಾಹುಳ್ಯ ಹೆಚ್ಚಿಸಿಕೊಳ್ಳುತ್ತಲೇ ತನ್ನ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿರುತ್ತದೆ. ಆಗಲೇ ಜನರು ಮುಗ್ಧವಾಗಿ ನಂಬುತ್ತಲೇ ತಮ್ಮ ಯೋಚನೆಯ ಶಕ್ತಿಯನ್ನೇ ತ್ಯಜಿಸಿಬಿಡುತ್ತಾರೆ.
ತಾರ್ಕಿಕವೆನ್ನಿಸುವ ಪ್ರಜಾಸತ್ತಾತ್ಮಕ ವೈಚಾರಿಕ ಎಚ್ಚರದಲ್ಲಿ ರಾಜಕಾರಣವನ್ನು ಗ್ರಹಿಸುವ ಬದಲು ಹೊಗಳಿಕೆಗಳ ಅಭಿಪ್ರಾಯಗಳನ್ನು ಹೇಳಿಕೊಳ್ಳುವುದಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.
ಉನ್ನತ ಹುದ್ದೆಯಲ್ಲಿರುವ ಇಬ್ಬರು ಸ್ನೇಹಿತರ ನಡುವೆ ರಾಜಕಾರಣದ ಬಗ್ಗೆ ಚರ್ಚೆ ಶುರುವಾಗುತ್ತದೆ. ಒಬ್ಬರು ಸರ್ಕಾರವನ್ನು ಆರಾಧಿಸಿ ಮಾತನಾಡಿದರೆ ಮತ್ತೊಬ್ಬರು ಪ್ರಶ್ನೆಗಳನ್ನೆತ್ತಿ ಪ್ರತಿರೋಧದ ಮಾತುಗಳನ್ನಾಡುತ್ತಾರೆ.ಪ್ರತಿರೋಧವನ್ನೊಡ್ಡಿದವರು ಯಾರೇ ಅಧಿಕಾರಕ್ಕೆ ಬರಲಿ, ಅವರನ್ನು ಪ್ರಶ್ನಿಸುವ ಹಕ್ಕನ್ನು ನಾವೆಲ್ಲರೂ ಉಳಿಸಿಕೊಳ್ಳಲೇಬೇಕು ಎಂಬ ಅನಿವಾರ್ಯತೆಯನ್ನು ಮನಗಾಣಿಸಲು ಪ್ರಯತ್ನಿಸುತ್ತಾರೆ. ಆದರೆ, ಸರ್ಕಾರದ ಬಗ್ಗೆ ಆರಾಧನಾ ಮನೋಭಾವವಿರುವ ಸ್ನೇಹಿತ ಮಾತನಾಡುತ್ತಾ ಆಡುತ್ತಾ ಭಾವುಕ ವ್ಯಗ್ರತೆಯನ್ನು ಪ್ರದರ್ಶಿಸಲಾರಂಭಿಸುತ್ತಾನೆ. ಪ್ರತಿರೋಧಧ ವಿಚಾರಗಳನ್ನು ಪ್ರಸ್ತಾಪಿಸಿದ ಮಿತ್ರನ ಸಂಯಮದ ಸಂವಾದಕ್ಕೆ ಪ್ರತಿಯಾಗಿ ವಿತಂಡವಾದ ಮುಂದಿಡಲಾರಂಭಿಸುತ್ತಾನೆ. ತಾರ್ಕಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೇ ವ್ಯಕ್ತಿಗತ ಆರೋಪಗಳನ್ನು ಹೊರಿಸುವ ತಂತ್ರ ಅನುಸರಿಸುತ್ತಾನೆ. ಆ ಮೂಲಕ ತಾರ್ಕಿಕ ವೈಚಾರಿಕತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾನೆ. ಆ ಹೊತ್ತಿಗೆ ಇಬ್ಬರ ನಡುವೆ ಸೃಷ್ಟಿಯಾದ ಭಿನ್ನಾಭಿಪ್ರಾಯ ದ್ವೇಷಕ್ಕೆ ತಿರುಗುತ್ತದೆ. ಆ ದ್ವೇಷವು ಮುಂದುವರೆದು ಸ್ನೇಹ ಕೊನೆಗೊಳ್ಳುತ್ತದೆ. ರಾಜಕೀಯ ಪಕ್ಷಗಳು ತಮ್ಮೊಳಗಿನ ಅಧಿಕಾರದ ಹಸಿವನ್ನು ನೀಗಿಸಿಕೊಳ್ಳಲು ಇಂಥದ್ದೇ ಆದ ಮನೋವೈಕಲ್ಯವನ್ನು ನಿರೀಕ್ಷಿಸುತ್ತವೆ. ಇದನ್ನು ಸಾಮೂಹಿಕ ಗುಣಲಕ್ಷಣವಾಗಿಸಿ ತಮ್ಮ ಅಧಿಕಾರದ ಫಸಲು ತೆಗೆಯುವ ಉದ್ದೇಶ ಈಡೇರಿಸಿಕೊಳ್ಳುತ್ತವೆ. ನಿಜವಾದ ರಾಜಕೀಯ ಪ್ರಜ್ಞೆಯನ್ನು ಕೊಲೆಗೈದು ತಮ್ಮನ್ನು ವಿಜೃಂಭಿಸಿಕೊಳ್ಳುತ್ತವೆ.
ಪ್ರಸಕ್ತ ರಾಜಕೀಯ ವ್ಯವಸ್ಥೆಯ ಎಲ್ಲ ಮಿತಿಗಳನ್ನು ರಂಜನೀಯ ನೆಲೆಯಲ್ಲಿ ಸ್ವೀಕರಿಸುವ ವಿಚಿತ್ರವಾದ ಸಮೂಹಕೇಂದ್ರಿತ ಊನ ( Mass Syndrome)ಈಗಾಗಲೇ ವ್ಯಾಪಕವಾಗಿಬಿಟ್ಟಿದೆ. ನಮ್ಮಲ್ಲಿ ಅಧಿಕಾರ ರಾಜಕಾರಣದ ಕುರಿತಾದ ಚರ್ಚೆಗಳು ಇದರ ಸಂಕುಚಿತ ಜಾಲದ ಪರಿಧಿಯನ್ನು ದಾಟಿಕೊಳ್ಳುವುದೇ ಇಲ್ಲ. ಹಾಗೆ ದಾಟಿಕೊಳ್ಳದ ಹಾಗೆ ವಿತಂಡವಾದಿ ದೃಷ್ಟಿಕೋನಗಳು ಕಡಿವಾಣ ಬಿಗಿದುಬಿಡುತ್ತವೆ. ರಾಜಕಾರಣದೊಳಗಿನ ಊನಗಳೊಂದಿಗಿನ ಸಾಂಪ್ರದಾಯಿಕತೆಯನ್ನೇ ಮೌಲ್ಯವಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಬೇರೂರಿಸಿಬಿಡುತ್ತವೆ. ದೇಶವೊಂದರೊಳಗೆ ಸಾಮಾಜಿಕ ವ್ಯವಸ್ಥೆಯೊಂದಿರುತ್ತದೆ. ಆಡಳಿತಾರೂಢ ಸರ್ಕಾರವು ಜಪಿಸುವ ಅಭಿವೃದ್ಧಿಯ ಮಂತ್ರದೊಂದಿಗೆ ತಳುಕು ಹಾಕಿಕೊಂಡ ಆರ್ಥಿಕತೆಯು ಈ ಸಾಮಾಜಿಕ ವ್ಯವಸ್ಥೆಯ ರೂಪು-ರೇಷೆಗಳಿಗೆ ಅನುಗುಣವಾಗಿರಬೇಕು ಎಂಬ ಕನಿಷ್ಠ ಪ್ರಜ್ಞೆಯನ್ನು ಆಧರಿಸಿಯೇ ಇರುವುದಿಲ್ಲ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಹೆಚ್ಚಿಸುವಂತೆಯೇ ಆ ಆರ್ಥಿಕ ವ್ಯವಸ್ಥೆ ಬಲಿಷ್ಠವಾಗುತ್ತ ಸಾಗುತ್ತದೆ.
ಉಳ್ಳವರ ಪರವಾದ ಅರ್ಥವ್ಯವಸ್ಥೆಯ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸುವುದರ ಕಡೆಗೆ ರಾಜಕಾರಣ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಇಲ್ಲಿ ವ್ಯಕ್ತಿಗತ ಮಾನವ ಸಂಪನ್ಮೂಲದ ಸಮಗ್ರ ಅನ್ವಯಿಸುವಿಕೆಯ ಪರಿಕಲ್ಪನೆಗಳಿಗೆ ಆದ್ಯತೆ ಇರುವುದೇ ಇಲ್ಲ. ಸಾಮಾಜಿಕ ವ್ಯವಸ್ಥೆಯೊಳಗಿನ ಧಾರ್ಮಿಕತೆ ಮತ್ತು ಅದಕ್ಕನುಗುಣವಾಗಿಯೇ ಬೇರೂರಿಬಿಟ್ಟಿರುವ ಜಾತಿ-ಪಂಗಡಗಳ ಸಂಕೀರ್ಣ ಆವೃತ್ತಿಗಳು ಸಾಮಾಜಿಕ ಉದ್ಯಮಗಳಾಗಿಯೇ ಬೆಳೆಯುತ್ತಿರುತ್ತವೆ. ಅವುಗಳ ಸಮಾಜೋ-ಧಾರ್ಮಿಕ ಔದ್ಯಮಿಕತೆಯು ಮಠೀಯತೆ, ಮಠಾಧೀಶ ಮುಂದಾಳತ್ವ, ನಮ್ಮ ಜಾತಿಯವರಿಷ್ಟಿದ್ದೇವೆ ಎಂದು ತೋರಿಸಿಕೊಳ್ಳುವ ಬೃಹತ್ ಸಮಾವೇಶಗಳು, ಅವುಗಳಲ್ಲಿ ಭಾಗವಹಿಸಿ ತಮ್ಮ ಟೊಳ್ಳು ಮುಖಂಡತ್ವವನ್ನು ಮತ್ತೊಮ್ಮೆ ನವೀಕರಿಸಿಕೊಳ್ಳುವವರ ಉತ್ಸಾಹ ಮತ್ತು ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ಸದಾ ನಿಮ್ಮ ಬೆಂಬಲಕ್ಕಿದ್ದೇವೆ ಎಂದು ಘೋಷಿಸುವ ಜನಪ್ರಿಯ ವಾಂಛೆಗಳ ಮೂಲಕ ದೃಢಪಡುತ್ತದೆ. ಆ ಮೂಲಕ ಧಾರ್ಮಿಕ ಜಡತ್ವ ಮತ್ತು ಜಾತಿ ವ್ಯವಸ್ಥೆ ಮತ್ತಷ್ಟು ನಿಚ್ಛಳವಾಗುತ್ತದೆ. ದಾರ್ಶನಿಕರ ವೈಚಾರಿಕ ಆಂದೋಲನಗಳು ಹರಡಿದ ಮನುಷ್ಯತ್ವದ ಪ್ರಭೆಯನ್ನು ತಡೆದು ವಿಚಿತ್ರ ಹಠದೊಂದಿಗೆ ರಾಜಕಾರಣವು ಕತ್ತಲನ್ನೇ ಶಾಶ್ವತವಾಗಿ ಪಸರಿಸಿಬಿಡುತ್ತದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗಿಬಿಡುತ್ತದೆ. ಆದರೆ ಹೀಗೆ ಸ್ಪಷ್ಟಪಡಿಸಿಕೊಳ್ಳುವ ಸಾಮೂಹಿಕ ಸಂಯಮ ಈಗ ಕಾಣೆಯಾಗಿದೆ.
ಆ ಸಾಮೂಹಿಕ ಸಂಯಮವಿಲ್ಲದಿದ್ದರೆ ಪ್ರಜೆಗಳೆನ್ನಿಸಿಕೊಂಡವರು ಬೆಲೆ ತೆರಲೇಬೇಕಾಗುತ್ತದೆ. ಸಮಸ್ಯೆಗಳನ್ನು ಸಹಿಸಿಕೊಳ್ಳುವುದಷ್ಟೇ ಅಲ್ಲದೇ ಅವುಗಳ ವರ್ತುಲದೊಳಗೆ ಸಿಲುಕಿಕೊಳ್ಳುವ ಅನಿವಾರ್ಯತೆಯ ಅಸಹಾಯಕತೆಯನ್ನೇ ಸಹಜಗುಣವಾಗಿಸಿಕೊಳ್ಳುವ ಉಮೇದಿನೊಂದಿಗೆ ಗುರುತಿಸಿಕೊಳ್ಳುವ ಒತ್ತಡವೂ ಸೃಷ್ಟಿಯಾಗುತ್ತದೆ. ಈ ಅಸಹಾಯಕತೆ ಎಷ್ಟು ಅಂತಸ್ಥವಾಗುತ್ತದೆ ಎಂದರೆ ಹೊಸದಾದ ಯಾವ ಚಿಂತನೆಯೂ ಒಪ್ಪಿತವೆನ್ನಿಸುವುದಿಲ್ಲ. ದೇಶೋದ್ಧಾರದ ಸಮಗ್ರ ಹೊಣೆಗಾರಿಕೆ ನಿಭಾಯಿಸಬೇಕಾದ ರಾಜಕೀಯ ಪಕ್ಷಗಳು ಜನರನ್ನು ಮತ್ತೆ ಅಸಹಾಯಕತೆಯ ಸಂಕುಚಿತ ಬಾವಿಯೊಳಗೆ ಬಂಧಿಸಿಡುವ ನಡೆಗಳೊಂದಿಗೆ ಇದ್ದುಬಿಡುವುದರ ಕಡೆಗೇ ಒಲವು ತೋರುತ್ತವೆ. ಈ ಕುರಿತ ಸುಳಿವುಗಳನ್ನು ಪಕ್ಷಗಳ ಮುಖಂಡರ ಹೇಳಿಕೆಗಳು, ಪ್ರತಿಹೇಳಿಕೆಗಳು, ಚುನಾವಣಾ ರಣತಂತ್ರಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಗೊತ್ತುಮಾಡಿಕೊಳ್ಳಬಹುದು.
ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಡಳಿತಾರೂಢ ಪಕ್ಷ ತಂತ್ರ ಹೆಣೆಯುವುದರ ಕಡೆಗೆ ಆದ್ಯತೆ ನೀಡುತ್ತಿರುವ ವಿವರಗಳು ಗಮನಕ್ಕೆ ಬರುತ್ತಲೇ ಇವೆ. ರಾಷ್ಟ್ರಾದ್ಯಂತ ಪ್ರತಿರೋಧದ ಅಲೆಯನ್ನು ಎಬ್ಬಿಸಬೇಕು ಎಂಬ ಉದ್ದೇಶದೊಂದಿಗೆ ಅಖಾಡಕ್ಕಿಳಿದಿರುವ ವಿರೋಧ ಪಕ್ಷ ಅಸ್ಪಷ್ಟ, ದ್ವಂದ್ವ ನಿಲುವುಗಳೊಂದಿಗೇ ಹೆಜ್ಜೆಯಿರಿಸುತ್ತಿರುವ ಸಂಗತಿಯೂ ಗೊತ್ತಾಗುತ್ತಿದೆ. ವಿರೋಧ ಪಕ್ಷದ ಯುವನೇತಾರನಿಗೆ ಸಂಬಂಧಿಸಿದಂತಹ ವಾಟ್ಸ್ಯಾಪ್ ವೀಡಿಯೋವೊಂದು ಹಲವರಿಗೆ ರಂಜನೆ ನೀಡುತ್ತಿದೆ. ಆ ನೇತಾರನ ಬಿಂಬವು ರೈತನೊಬ್ಬನೊಂದಿಗೆ ಸಂಭಾಷಿಸುತ್ತದೆ. ಗದ್ದೆಯಲ್ಲೆಲ್ಲ ಕೆಸರು ಎಂಬ ರೈತನುಡಿಗೆ ಪ್ರತಿಯಾಗಿ ಆ ನೇತಾರಬಿಂಬವು ‘ನಾವು ಅಧಿಕಾರಕ್ಕೆ ಬಂದರೆ ಗದ್ದೆಯಲ್ಲಿ ಟೈಲ್ಸ್ ಹಾಕಿಸುತ್ತೇವೆ’ ಎನ್ನುತ್ತದೆ. ತಮಾಷೆಯೆನ್ನಿಸಿ ಆ ಕ್ಷಣಕ್ಕೆ ಖುಷಿ ಪಡಬಹುದಾದ ಈ ತರಹದ ವಿಡಿಯೋಗಳ ವೀಕ್ಷಿಸುವಿಕೆ ಮತ್ತು ಇನ್ನೊಬ್ಬರಿಗೆ ರವಾನಿಸುವಿಕೆಯ ಕಾರ್ಯಗಳಲ್ಲಿಯೇ ಜನರು ನಿರತರಾಗಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದರೆ ಅಧಿಕಾರದಲ್ಲಿರುವವರು ಮತ್ತು ಅಧಿಕಾರದಲ್ಲಿರದೇ ಇರುವವರು ಪರಸ್ಪರರನ್ನು ಹೀಗೆ ರಂಜನೀಯವಾಗಿ ಕಾಲೆಳೆಯುತ್ತಾ ಜನರಿಗೆ ಖುಷಿ ನೀಡುತ್ತಾ ಈ ದೇಶದ ಬೆಳವಣಿಗೆಗೆ ಅಗತ್ಯವಾಗಿ ಆಗಬೇಕಾಗಿರುವುದು ಏನು ಎಂಬುದರ ಕುರಿತಾದ ತಾತ್ವಿಕ ಚರ್ಚೆಗಳ ಸಾಧ್ಯತೆಯನ್ನು ಉದ್ದೇಶಪೂರ್ವಕವಾಗಿ ತಡೆದುಬಿಡುತ್ತಿದ್ದಾರೆ. ಹೊಸ ಮಾಧ್ಯಮಗಳ ಪ್ರಭಾವ ಅವರ ಈ ಉದ್ದೇಶವನ್ನು ಈಡೇರಿಸಿಬಿಡುತ್ತಿದೆ. ಈ ಹಂತದಲ್ಲಿಯೇ ‘ನೀವ್ಯಾರ ಪರ’ ಎಂಬ ಪ್ರಶ್ನೆ ತಾರ್ಕಿಕತೆಯನ್ನು ಮುನ್ನೆಲೆಗೆ ತರುವ ಬದಲು ಆರಾಧನಾರೂಪದ ನಿಷ್ಠೆಯನ್ನು ನಿರೀಕ್ಷಿಸುತ್ತಿದೆ. ಆಡಳಿತಾರೂಢರ ಪರ ಎಂದರೆ ಸೇಫ್. ಇಲ್ಲದಿದ್ದರೆ ಗುಮಾನಿಗಳೇಳುತ್ತವೆ. ಮುಕ್ತವಾಗಿ ಸಮಸ್ಯೆ ಹೇಳಿಕೊಂಡಾಗಲೂ ಇಂಥವೇ ಗುಮಾನಿಗಳ ದಾಳಿಗೊಳಗಾಗುವ ಅಸಹಾಯಕತೆಗೆ ಪಕ್ಕಾಗಬೇಕಾಗುತ್ತದೆ. ಸಂವಿಧಾನದೊಳಗಿನ ಅಕ್ಷರಗಳು ಮತ್ತು ಅವುಗಳು ದಾಟಿಸುವ ಉದಾತ್ತ ಆಶಯಗಳು ಉಸಿರುಗಟ್ಟಿಸಿಕೊಳ್ಳುತ್ತವೆ. ಶಾಲಾ-ಕಾಲೇಜು ಹಂತಗಳಲ್ಲಿನ ಅಭಿಮಾನಿ ಮನೋಧರ್ಮ ದೊಡ್ಡವರಾದಾಗಲೂ ಉಳಿದುಕೊಂಡು ದೇಶವನ್ನೂ ಮತ್ತೆ ಮತ್ತೆ ಉಸಿರುಗಟ್ಟಿಸುತ್ತಿರುತ್ತದೆ.
(ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ
ಇ-ಮೇಲ್ ವಿಳಾಸ:
nkpadmanabh@gmail.com)
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ
![](https://suddidina.com/wp-content/uploads/2024/07/kargil_vijay_divas_suddidina.jpg)
ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ಗೌರವ ಸಮರ್ಪಣೆ ಮಾಡಲಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕುನ್ ಲಾ ಸುರಂಗ ಮಾರ್ಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಯೋಜನೆಯಡಿ ನಿಮು-ಪದುಮ್-ಡಾರ್ಚಾ ರಸ್ತೆಯಿಂದ ಲೇಹ್ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಸುಮಾರು 15 ಸಾವಿರದ 800 ಅಡಿ ಎತ್ತರದಲ್ಲಿ 4.1 ಕಿಲೋಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ವಿಶ್ವದಲ್ಲೇ ಇದು ಅತಿ ಎತ್ತರದ ಸುರಂಗ ಮಾರ್ಗವಾಗಲಿದೆ. ಸಶಸ್ತ್ರ ಪಡೆಗಳ ಸುಗಮ ಪ್ರಯಾಣಕ್ಕಷ್ಟೇ ಅಲ್ಲದೇ ಲಡಾಕ್ನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಈ ಸುರಂಗ ಮಾರ್ಗವು ಸಹಕಾರಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ
![](https://suddidina.com/wp-content/uploads/2024/07/union_budget_2024_suddidina.jpg)
ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.
ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ5 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!