Connect with us

ಬಹಿರಂಗ

ವಸ್ತ್ರ ಸಂಹಿತೆಯ ಇತಿಹಾಸ ಇಂದಿಗೂ ಏಕೆ ಪ್ರಸ್ತುತವಾಗುತ್ತದೆ..?

Published

on

  • ಮೂಲ : ಜಾನಕಿ ನಾಯರ್,ಅನುವಾದ : ನಾ ದಿವಾಕರ

ತ್ತೀಚಿನ ದಿನಗಳಲ್ಲಿ ಚರಿತ್ರೆಯನ್ನು ನೈತಿಕ ವಿಜ್ಞಾನದ ಮಾದರಿಯಲ್ಲಿ ಪುನರ್ ವ್ಯಾಖ್ಯಾನಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಈ ಪ್ರವೃತ್ತಿಯ ಹಿಂದೆ ಕಾಣಬಹುದಾದ ಮೂಲ ಉದ್ದೇಶ ಎಂದರೆ, ಇತಿಹಾಸ ಕಾಲಘಟ್ಟದ ನಾಯಕರನ್ನು ಮತ್ತು ಖಳನಾಯಕರನ್ನು ಗುರುತಿಸುವುದು, ತನ್ಮೂಲಕ ಇಂದಿನ ಸಮಾಜದ ಬಹುಸಂಖ್ಯೆಯ ಜನಸಮೂಹವನ್ನು ಗುರುತಿಸಿ ಅವರನ್ನು ಅಪಮಾನಿಸುವುದು.

ಇಂತಹ ವಿಷಮ ಕಾಲಘಟ್ಟದಲ್ಲಿ ಸೂಕ್ಷ್ಮ ಅಭಿಪ್ರಾಯ ಬೇಧಗಳನ್ನೊಳಗೊಂಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಪುಟಗಳನ್ನು ಶೋಧಿಸಿ ಬೌದ್ಧಿಕ ಚಿಂತನೆಯ ಕೇಂದ್ರ ಬಿಂದುವನ್ನಾಗಿ ಮಾಡುವ ಅವಶ್ಯಕತೆ ಇದೆ. ಹಿಂದೆಂದಿಗಿಂತಲೂ ಇಂದು ಮಕ್ಕಳ ಚಿಂತನಾ ಕ್ರಮದಲ್ಲಿ ಚಾರಿತ್ರಿಕ ದೃಷ್ಟಿಕೋನವನ್ನು ಬೆಳೆಸಬೇಕಿದೆ. ಹೀಗೆ ಯೋಚಿಸುವ ಮೂಲಕವೇ ಮಕ್ಕಳು ಚರಿತ್ರೆಯನ್ನು ಸಮರ್ಪಕವಾಗಿ ಗ್ರಹಿಸಿ, ಸಹಿಷ್ಣುತೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಹೊಸ ಮಾದರಿಯ ನಾಗರಿಕತೆಯನ್ನು ರೂಢಿಸಿಕೊಳ್ಳಲು ಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಇದರ ತುರ್ತು ಅವಶ್ಯಕತೆಯೂ ಇರುವುದನ್ನು ನಾವು ಮನಗಾಣಬೇಕಿದೆ.

ಶಾಲಾ ಕೊಠಡಿಯಲ್ಲಿ, ವಿದ್ಯಾರ್ಜನೆಯ ವೇಳೆಯಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಒಂದು ತುಂಡು ವಸ್ತ್ರ ಹಿಜಾಬ್ ನಿರ್ಣಾಯಕವಾಗಿ ಪರಿಣಮಿಸುವುದೇ ಎಂಬ ಪ್ರಶ್ನೆಯೊಂದಿಗೇ ಈ ವಿವಾದದ ಸುತ್ತ ಗಂಭೀರ ಸಾರ್ವಜನಿಕ ಚರ್ಚೆಗಳು ನಡೆಯುತ್ತಿದ್ದು, ಹರೆಯದ ಹೆಣ್ಣುಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿರುವ ಸಂದರ್ಭದಲ್ಲಿ ವಸ್ತ್ರಧಾರಣೆಯ ಇತಿಹಾಸವನ್ನು ಶೋಧಿಸುವುದು ಉಪಯುಕ್ತವಾದೀತೇ ? ಯಾವುದೇ ಶೈಕ್ಷಣಿಕ ಪ್ರಯತ್ನಗಳು ಫಲದಾಯಕವಾಗಲು ದೀರ್ಘಕಾಲವೇ ಬೇಕಾಗುವುದರಿಂದ ಈ ಪ್ರಯತ್ನವೇ ಕ್ಷುಲ್ಲಕ ಎನಿಸಬಹುದು. ಆದರೂ 2005-06ರಲ್ಲಿ ಎನ್ಸಿಇಆರ್ಟಿ ಸಿದ್ಧಪಡಿಸಿದ ಒಂಬತ್ತನೆ ತರಗತಿಯ ಪಠ್ಯಗಳಲ್ಲಿ ಕಳೆದ ಎರಡು ಶತಮಾನಗಳ ವಸ್ತ್ರಧಾರಣೆಯ ಇತಿಹಾಸವನ್ನು ಸೇರ್ಪಡಿಸಲಾಗಿತ್ತು. ಆದರೆ 2019ರಲ್ಲಿ ಈ ಪಠ್ಯವನ್ನು ಹಿಂಪಡೆಯಲಾಯಿತು.

ಅಧಿಕಾರ ವ್ಯವಸ್ಥೆಯ ಮಹತ್ವ

ವಸ್ತ್ರಧಾರಣೆಯ ಇತಿಹಾಸವನ್ನು ಬೋಧಿಸುವುದರಿಂದ ಹಲವು ಪರಿಣಾಮಗಳಾಗಬಹುದು. ಇತಿಹಾಸದಲ್ಲಿ ವಸ್ತ್ರ ಸಂಹಿತೆಗಳು ಹೇಗಿದ್ದವು, ಯಾವ ರೀತಿಯ ಪ್ರತಿರೋಧ ವ್ಯಕ್ತವಾಗಿದ್ದವು, ಇದರಿಂದ ಉಂಟಾದ ಪರಿಣಾಮಗಳೇನು ಈ ವಿದ್ಯಮಾನಗಳ ಮಹತ್ವವೇನು ಇವೇ ಮುಂತಾದ ಆಲೋಚನೆಗಳು ವಿದ್ಯಾರ್ಥಿಗಳಲ್ಲಿ ಮೂಡಬಹುದು. ಇಲ್ಲಿ ಮುಖ್ಯವಾದ ಅಂಶವೆಂದರೆ, ವಸ್ತ್ರ ಸಂಹಿತೆ ಎನ್ನುವುದೇ ಅಧಿಕಾರ ವ್ಯವಸ್ಥೆಯನ್ನು ಪ್ರತಿನಿಧಿಸುವ ಮತ್ತು ಸಮರ್ಥಿಸುವ ಒಂದು ಪ್ರಕ್ರಿಯೆಯಾಗಿರುತ್ತದೆ.

ಈ ಅಧಿಕಾರ ವ್ಯವಸ್ಥೆ ವಸಾಹತುಶಾಹಿಯೋ, ಮೇಲ್ಜಾತಿಗಳದೋ, ಧಾರ್ಮಿಕವೋ ಅಥವಾ ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರತಿನಿಧಿಸುವುದೋ ಎನ್ನುವುದನ್ನು ವಸ್ತ್ರ ಸಂಹಿತೆಗಳು ಬಿಂಬಿಸುತ್ತವೆ. ತಮ್ಮ ಅಧಿಕಾರ ಕೇಂದ್ರಗಳನ್ನು ಬಳಸುವ ಮೂಲಕ ಈ ವ್ಯವಸ್ಥೆಯ ಪ್ರತಿಪಾದಕರು ಪ್ರಭುತ್ವ, ಧಾರ್ಮಿಕ ಸಂಸ್ಥೆಗಳು, ಮೇಲ್ಜಾತಿಯ ಪಾರಮ್ಯ, ಹಿಂಸಾತ್ಮಕ ಮಾರ್ಗಗಳ ಮೂಲಕ ಈ ವ್ಯವಸ್ಥೆಯನ್ನು ಕಾಪಾಡುತ್ತಾರೆ. ಹಲವಾರು ಸಂದರ್ಭಗಳಲ್ಲಿ ಕುಟುಂಬಗಳಲ್ಲಿ ಮುಖ್ಯಸ್ಥರಾಗಿ ಪುರುಷರೇ ನಿರ್ದಿಷ್ಟ್ರ ವಸ್ತ್ರಧಾರಣೆಯನ್ನು ಹೇರುತ್ತಾರೆ. ಈ ಮಾರ್ಗಗಳ ಮುಖಾಂತರವೇ ಸಾಮಾಜಿಕ ಶ್ರೇಣಿಗಳನ್ನು ಕಾಪಿಟ್ಟುಕೊಂಡು, ಶಾಶ್ವತಗೊಳಿಸಲಾಗುತ್ತದೆ.

ಆದರೆ ಈ ವಿಚಾರದಲ್ಲೇ ಕಳೆದ 200 ವರ್ಷಗಳ ಚರಿತ್ರೆ ನಿರ್ಣಾಯಕವಾಗಿ ಕಾಣುತ್ತದೆ. ಚರಿತ್ರೆಯ ಈ ಅವಧಿಯಲ್ಲೇ ಇಂತಹ ಶ್ರೇಣೀಕರಣವನ್ನು ವಿರೋಧಿಸಿ, ಸವಾಲೆಸೆದು ಹೊಸ ವಸ್ತ್ರಧಾರಣೆಯ ಮಾದರಿಗಳನ್ನು ಅನುಸರಿಸುವಲ್ಲಿ ಯಶಸ್ವಿಯಾದ ಹಲವು ಪ್ರಯತ್ನಗಳನ್ನು ಗುರುತಿಸಬಹುದು. ಒಂದು ನಿರ್ದಿಷ್ಟ ಸಮುದಾಯವನ್ನು ದಿಗ್ಬಂಧನಕ್ಕೊಳಪಡಿಸಿ, ಬಹುಸಂಖ್ಯಾತರ ಆಯ್ಕೆಗಳನ್ನೇ ಸ್ವಾಭಾವಿಕೀಕರಣಗೊಳಿಸಿ, ಸಾರ್ವತ್ರೀಕರಿಸಲು ಏಕರೂಪತೆಯ ಪರಿಭಾಷೆಯನ್ನು ಬಳಸಿ ಬಹುಸಂಖ್ಯಾತರ ಆಯ್ಕೆಗಳನ್ನು ಅಲ್ಪಸಂಖ್ಯಾತರ ಮೇಲೆ ಹೇರುವ ಪ್ರಯತ್ನಗಳ ನಡುವೆಯೇ ಈ ಪರಿಹರಿಸಲಾಗದ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ಈ ಚರಿತ್ರೆಯ ಅವಲೋಕನ ಅವಶ್ಯವಾಗುತ್ತದೆ.

ಹಿಜಾಬ್ ನಿಷೇಧಿಸುವುದೆಂದರೆ ಅದು ಅಲ್ಪಸಂಖ್ಯಾತ ಸಮುದಾಯದ ಮೇಲೆ ಬಹುಸಂಖ್ಯಾತರು ಹೇರುವ ವಸ್ತ್ರ ಸಂಹಿತೆಯೇ ಆಗಿರುತ್ತದೆ. 20ನೆಯ ಶತಮಾನದ ಇತಿಹಾಸವನ್ನೇ ಗಮನಿಸಿದಾಗ, ಬಹುಸಂಖ್ಯೆಯ ಮುಸ್ಲಿಂ ಮಹಿಳೆಯರು ಪಿತೃಪ್ರಧಾನ ವ್ಯವಸ್ಥೆಯ ಪಾರಮ್ಯವನ್ನು ಧಿಕ್ಕರಿಸಿ, ಹಿಜಾಬ್ ತೊಡುವುದನ್ನು ತಿರಸ್ಕರಿಸುವುದನ್ನು ಕಾಣಬಹುದು. ಮಹಿಳಾ ಸಮೂಹ ಹಿಜಾಬ್ ಧರಿಸುವ ಅಥವಾ ಧಿಕ್ಕರಿಸುವ ತಮ್ಮ ನಿರ್ಧಾರವನ್ನು ಚರಿತ್ರೆಯ ಯಾವ ಸಂದರ್ಭದಲ್ಲಿ ಕೈಗೊಂಡಿರುತ್ತಾರೆ ಮತ್ತು ತಮ್ಮ ಆಯ್ಕೆಯನ್ನು ಯಾವ ಸಂದರ್ಭದಲ್ಲಿ ಬಳಸಿರುತ್ತಾರೆ ಮತ್ತು ಅದು ಹೇಗೆ ವ್ಯವಸ್ಥೆಯ ಪಲ್ಲಟಗಳಿಗೆ ಕಾರಣವಾಗಿರುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಚಾರಿತ್ರಿಕ ಆಲೋಚನೆ ಮುಖ್ಯವಾಗುತ್ತದೆ.

ಸಂಸ್ಕೃತಿ, ಪರಂಪರೆ ಮತ್ತು ಘನತೆಯನ್ನು ಸಂರಕ್ಷಿಸುವ ಹೊಣೆ ಸದಾ ಮಹಿಳೆಯರದ್ದೇ ಆಗಿರುತ್ತದೆ ಎಂದು ಭಾವಿಸಲಾಗುವ ಸಮಾಜದಲ್ಲಿ, ಘನತೆ ಎನ್ನುವುದು ಪುರುಷ ಸಮಾಜದ ಸ್ವತ್ತು ಎಂದು ಪರಿಭಾವಿಸಲಾಗುವ ಸಮಾಜದಲ್ಲಿ, ಈ ಸಂಸ್ಕೃತಿ, ಪರಂಪರೆ ಮತ್ತು ಘನತೆಯನ್ನು ರಕ್ಷಿಸಲು ಅಥವಾ ಕಾಪಾಡಲು ಅಪೇಕ್ಷಿಸುವ ಪುರುಷ ಸಮಾಜವನ್ನು ಧಿಕ್ಕರಿಸಿ ಮಹಿಳೆಯರು ವಸ್ತ್ರಧಾರಣೆಯನ್ನು ಧರಿಸಲು ಅಥವಾ ತಿರಸ್ಕರಿಸಲು ಮುಂದಾದಾಗ ಯಾವ ರೀತಿಯ ಪ್ರಕ್ಷುಬ್ಧತೆ ಉಂಟಾಗುತ್ತದೆ ? ಇದನ್ನು ಅರ್ಥಮಾಡಿಕೊಳ್ಳಲು ಚಾರಿತ್ರಿಕ ಆಲೋಚನೆ ಬೇಕಾಗುತ್ತದೆ.

ವಸ್ತ್ರಧಾರಣೆಯ ಇತಿಹಾಸವನ್ನು ತಿಳಿದುಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಚರಿತ್ರೆಯಲ್ಲಿ ಇಂತಹ ಚರ್ಚೆಗಳು ಹೇಗೆ ಉದ್ಭವಿಸಿದವು, ಹೇಗೆ ನಿವಾರಿಸಲ್ಪಟ್ಟವು ಎಂದು ಗ್ರಹಿಸುವುದು ಸಾಧ್ಯವಾಗುತ್ತದೆ. ಉದಾಹರಣೆಗೆ 19ನೆಯ ಶತಮಾನದಲ್ಲಿ ಉದ್ಭವಿಸಿದ ರುಮಾಲು ಮತ್ತು ಪಾದರಕ್ಷೆಯ ವಿವಾದವನ್ನೇ ಪರಿಗಣಿಸಬಹುದು. 19ನೆಯ ಶತಮಾನದ ಆರಂಭದಲ್ಲಿ ಆಳುವ ದೊರೆ ಅಥವಾ ಸಂಸ್ಥಾನದ ಒಡೆಯರ ಆಸ್ಥಾನವನ್ನು ಪ್ರವೇಶಿಸುವ ಮುನ್ನ ಬ್ರಿಟೀಷ್ ಅಧಿಕಾರಿಗಳಿಗೆ ಭಾರತೀಯ ಶಿಷ್ಟಾಚಾರದಂತೆ ಪಾದರಕ್ಷೆಗಳನ್ನು ಕಳಚಿ ಪ್ರವೇಶಿಸುವುದು ಕಡ್ಡಾಯವಾಗಿತ್ತು.

ಕೆಲವು ಬ್ರಿಟೀಷ್ ಅಧಿಕಾರಿಗಳು ಈ ಭಾರತೀಯ ಸಂಪ್ರದಾಯಕ್ಕೆ ಹೊಂದಿಕೊಂಡಿದ್ದರು. ಆದರೆ 1830ರಲ್ಲಿ ಅಧಿಕೃತ ಸಮಾರಂಭಗಳಲ್ಲಿ ಭಾರತೀಯ ವಸ್ತ್ರಗಳನ್ನು ಧರಿಸುವುದನ್ನು ಯೂರೋಪಿನವರಿಗೆ ನಿಷಿದ್ಧಗೊಳಿಸಲಾಯಿತು. ಇದೇ ವೇಳೆ ಭಾರತೀಯರು ತಮ್ಮ ಸಂಪ್ರದಾಯಗಳಿಗೆ ಮನ್ನಣೆ ನೀಡಿ ಸರ್ಕಾರಿ ಕಚೇರಿಗಳನ್ನು ಪ್ರವೇಶಿಸುವ ಮುನ್ನ ತಮ್ಮ ಪಾದರಕ್ಷೆಗಳನ್ನು ಕಳಚಿಯೇ ಹೋಗಬೇಕಿತ್ತು. ವಸಾಹತೀಕರಣಕ್ಕೊಳಗಾದ ಮೇಲ್ಪದರದ ಗಣ್ಯರಿಗೆ ಇದು ಅಪಮಾನಕರ ಎನಿಸತೊಡಗಿತ್ತು.

ಇದರ ವಿರುದ್ಧ ಧ್ವನಿ ಎತ್ತಿದ ಮನೋಕ್ಜೀ, ಕೋವಾಸ್ಜೀ ಎಂಟೀ ಎಂಬ ಪಾರ್ಸಿ ಸಮುದಾಯದ ವ್ಯಕ್ತಿ ನ್ಯಾಯಾಲಯದಲ್ಲಿ ತಮ್ಮ ಪಾದರಕ್ಷೆಯನ್ನು ಕಳಚಿಡಲು ನಿರಾಕರಿಸಿದರು. “ ಯಾವುದೇ ಪಾರ್ಸಿ ಸಮುದಾಯದ ವ್ಯಕ್ತಿ ಇದ್ದರೂ, ಎಷ್ಟೇ ಉನ್ನತ ವ್ಯಕ್ತಿಯಾಗಿದ್ದರೂ, ಅವರನ್ನು ಭೇಟಿಯಾಗುವಾಗ ನಮ್ಮ ಪಾದರಕ್ಷೆಗಳನ್ನು ಕಳಚಿಡುವ ಪದ್ಧತಿ ನಮ್ಮ ಸಾಮಾಜಿಕ ಒಡನಾಟದಲ್ಲಿ ಇಲ್ಲ ,,,” ಎಂದು ದಾವೆ ಹೂಡಿದ್ದರು. ಪಾದರಕ್ಷೆ ಕೇಂದ್ರಿತ ಗೌರವ ಸಲ್ಲಿಕೆಯ ಈ ನಿಯಮ ಬದಲಾಗಲು 20 ವರ್ಷಗಳೇ ಬೇಕಾದವು.

ಭಾರತದಲ್ಲಿ ಚರ್ಚೆಗಳು

ಬ್ರಿಟೀಷರ ಆಳ್ವಿಕೆಯಲ್ಲಿ ಅನೇಕ ಸಂದರ್ಭಗಳಲ್ಲಿ ಭಾರತದ ಗಣ್ಯವರ್ಗಗಳು ವಸಾಹತುಶಾಹಿಯ ಆದೇಶಗಳನ್ನು ಅಪಮಾನಕರ ಎಂದು ಭಾವಿಸಿ ಧಿಕ್ಕರಿಸಿದ್ದವು. ಏತನ್ಮಧ್ಯೆ ಕೇರಳದ ತಿರುವಂಕೂರು ದೇವಾಲಯದಲ್ಲಿ ಭಾರತೀಯರ ನಡುವೆಯೇ ವಸ್ತ್ರಧಾರಣೆಯ ಸುಧಾರಣೆಗಳ ಬಗ್ಗೆ ಕೂಗು ಎದ್ದಿತ್ತು. ಈ ಸಂಸ್ಥಾನದಲ್ಲಿ ಮಹಿಳೆಯರು ಮತ್ತು ಪುರುಷರೂ ಸಹ ದೇವರ ಸನ್ನಿಧಿಯಲ್ಲಿ ಅಥವಾ ಮೇಲ್ಜಾತಿಯವರ ಎದುರಿನಲ್ಲಿ ತಮ್ಮ ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳುವಂತಿರಲಿಲ್ಲ. ಇದು ಒಂದು ಸಂಪ್ರದಾಯವಾಗಿ ಬೆಳೆದುಬಂದಿತ್ತು. ಕ್ರೈಸ್ತ ಮಿಷನರಿಗಳ ಕಾರ್ಯಾಚರಣೆಯ ಪರಿಣಾಮವಾಗಿ 1822ರಲ್ಲಿ ವಸ್ತ್ರಧಾರಣೆಯ ಸುಧಾರಣೆಗಳಿಗಾಗಿ ಆಗ್ರಹ ಕೇಳಿಬರತೊಡಗಿತ್ತು.

ಶಾನರ್ (ನಂತರ ನಾಡರ್ ಎಂದು ಕರೆಯಲಾಯಿತು) ಸಮುದಾಯದ ಮಹಿಳೆಯರು ತಮ್ಮ ಎದೆ ಮುಚ್ಚಿಕೊಳ್ಳುವಂತೆ ಉಡುಪು ಧರಿಸಿದ್ದಕ್ಕಾಗಿ ಮೇಲ್ಜಾತಿಯ ನಾಯರ್ ಸಮುದಾಯದ ಪುರುಷರಿಂದ ಸಾರ್ವಜನಿಕ ಸ್ಥಳಗಳಲ್ಲೇ ಆಕ್ರಮಣಕ್ಕೊಳಗಾಗಬೇಕಾಯಿತು. ಈ ಘಟನೆಗಳನ್ನು ಇತಿಹಾಸಕಾರರು ಸ್ತನ ವಸ್ತ್ರ ಗಲಭೆಗಳು ಎಂದೇ ವ್ಯಾಖ್ಯಾನಿಸುತ್ತಾರೆ. 1859ರಲ್ಲಿ ತಿರುವಂಕೂರು ಸರ್ಕಾರವು, ನಾಡರ್ ಸಮುದಾಯದ ಮಹಿಳೆಯರು ತಮ್ಮ ಎದೆ ಮುಚ್ಚಿಕೊಳ್ಳುವಂತೆ ಉಡುಪು ಧರಿಸಬಹುದು ಎಂಬ ಆದೇಶವನ್ನು ಹೊರಡಿಸುವುದರೊಂದಿಗೆ ಈ ವಿವಾದವೂ ಅಂತ್ಯವಾಗಿತ್ತು.

ಶತಮಾನಗಳ ಕಾಲ ತಮ್ಮ ಘನತೆಯಿಂದ ವಂಚಿತರಾಗಿದ್ದ ಮಹಿಳೆಯರು ತಮ್ಮ ಘನತೆಯನ್ನು ಮರಳಿ ಪಡೆಯುವಂತಾಗಿತ್ತು. ಆದರೆ 19ನೆಯ ಶತಮಾನದ ಅಂತ್ಯದವರೆಗೂ ಈ ವಸ್ತ್ರಧಾರಣೆಯ ಸುಧಾರಣಾ ಕ್ರಮಗಳು ಏಕರೂಪವಾಗಿರಲಿಲ್ಲ. ಈ ಸಂದರ್ಭದಲ್ಲೂ ಸಹ ಮಹಿಳೆಯರು, ಮೇಲ್ಜಾತಿಯವರನ್ನೂ ಒಳಗೊಂಡಂತೆ, ತಮ್ಮ ಎದೆ ಭಾಗವನ್ನು ತೆರೆದಿಟ್ಟಟುಕೊಳ್ಳುವುದೇ ಸಂಪ್ರದಾಯವಾಗಿತ್ತು.

ವಿವಾಹಿತ ಮಹಿಳೆಯೊಬ್ಬಳು ಕುಪ್ಪಸವನ್ನು ಧರಿಸಲು ಮುಂದಾದಾಗ, ಆಕೆಯ ಪತಿ ಆಕೆಯನ್ನು ನಿಂದಿಸಿದ್ದೇ ಅಲ್ಲದೆ, ಆಕೆಯ ತಾಯಿಯೂ ಸಹ ಮುಸ್ಲಿಂ ಮಹಿಳೆಯಂತೆ ಕಾಣ ಬಯಸುವ ಮಗಳ ಮೇಲೆ ದೈಹಿಕ ಹಲ್ಲೆ ನಡೆಸಿದ ಒಂದು ಪ್ರಸಂಗವೂ ದಾಖಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಬಂಗಾಲದಲ್ಲಿ 1872ರಿಂದಲೇ ವಸ್ತ್ರಧಾರಣೆಯ ಸುಧಾರಣೆಗಾಗಿ ಕೂಗು ಕೇಳಿಬರುತ್ತದೆ. ಈ ಪ್ರದೇಶದ ಮಹಿಳೆಯರು ಒಳ ಉಡುಪುಗಳನ್ನೂ ಧರಿಸದೆ, ಪಾರದರ್ಶಕವಾದ ತೆಳು ಸೀರೆಯನ್ನೇ ಧರಿಸಬೇಕಾದ ಒಂದು ಸಂಪ್ರದಾಯವನ್ನು ಅನುಸರಿಸಬೇಕಾಗಿದ್ದು, ಈ ಪದ್ಧತಿಯ ವಿರುದ್ಧ ಬಂಗಾಲದಲ್ಲಿ ತೀವ್ರವಾದ ಪ್ರತಿರೋಧ ವ್ಯಕ್ತವಾಗಿತ್ತು.

ಮಹಿಳೆಯರು ಘನತೆಯನ್ನು ಉಳಿಸಿಕೊಳ್ಳುವಂತಹ ಉಡುಪು ಧರಿಸಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಜ್ಞಾನದಾನಂದಿನಿ ದೇವಿ ಟಾಗೂರ್ ಎಂಬ ಮಹಿಳೆ ಪ್ರಪ್ರಥಮ ಬಾರಿಗೆ ಪಾರ್ಸಿಗಳ ಶೈಲಿಯಲ್ಲಿ ಸೀರೆ ಉಡುವ ಪದ್ಧತಿಯನ್ನು ಜಾರಿಗೊಳಿಸಿ , ಸೆರಗು ಹೊದ್ದುಕೊಳ್ಳುವ, ಕುಪ್ಪಸ ಧರಿಸುವ, ಸ್ಕರ್ಟ್ ಧರಿಸುವ ಮತ್ತು ಮಹಿಳೆಯರು ಕಾಲುಚೀಲ ಹಾಗೂ ಬೂಟು ಧರಿಸುವ ಒಂದು ಪದ್ಧತಿಗೆ ಚಾಲ್ತಿಇ ನೀಡಿದ್ದರು.

ಹಾಗಾಗಿ ಕಳೆದ ಎರಡು ಶತಮಾನಗಳ ಇತಿಹಾಸವನ್ನೇ ಇಣುಕಿ ನೋಡಿದರೆ, ವಸ್ತ್ರಧಾರಣೆಯ ಶೈಲಿ, ವಿನ್ಯಾಸ ಮತ್ತು ಇದರ ವಿರುದ್ಧ ವ್ಯಕ್ತವಾದ ಪ್ರತಿರೋಧಗಳನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಮಹಾತ್ಮ ಗಾಂಧಿ ವಿಧಿಸಿದ ಮತ್ತು ಅನುಸರಿಸಿದ ವಸ್ತ್ರಧಾರಣೆಯ ಪ್ರಯೋಗಗಳನ್ನು ನಮ್ಮ ವಿದ್ಯಾರ್ಥಿ ಸಮುದಾಯ ಅರಿತು ಅರ್ಥಮಾಡಿಕೊಳ್ಳಬೇಡವೇ ? 20 ವರ್ಷಗಳ ಕಾಲ ವಸಾಹತುಶಾಹಿ ಶೈಲಿಯ ಉಡುಪು ಧರಿಸಿ ನಂತರ ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಲಾರಂಭಿಸಿದ ಗಾಂಧಿಯ ವಸ್ತ್ರಸಂಹಿತೆಯ ಸಾಂಕೇತಿಕ ಮಹತ್ವವನ್ನು ಅರ್ಥಮಾಡಿಕೊಳ್ಳಬೇಡವೇ ?

ತಮ್ಮ ವ್ಯಕ್ತಿತ್ವವನ್ನು ಬಿಂಬಿಸಿಕೊಳ್ಳಲು ಹಾಗು ಭಾರತದ ಅಧ್ಯಾತ್ಮಿಕತೆ, ಭಾರತೀಯತೆಯನ್ನು ಬಿಂಬಿಸಲು ತಮ್ಮದೇ ಆದ ವಿಶಿಷ್ಟ ವಸ್ತ್ರಧಾರಣೆಯ ಶೈಲಿಗಳನ್ನು ಅನುಸರಿಸಿದ ರಾಮಕೃಷ್ಣ ಪರಮಹಂಸ (ಇವರು ಇಸ್ಲಾಂ ಧರ್ಮವನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಇಸ್ಲಾಮಿಕ್ ಉಡುಪು ಧರಿಸಿದ್ದರು), ವಿವೇಕಾನಂದ, ಅರಬಿಂದೋಘೋಷ್, ರವೀಂದ್ರನಾಥ ಟಾಗೂರ್ ಈ ಮಹನೀಯರು ಕ್ರಮಿಸಿದ ಹಾದಿಯನ್ನೇ ಮಹಾತ್ಮ ಗಾಂಧಿ ಸಹ ಅನುಸರಿಸಿದ್ದರು.

ಡಾ ಬಿ ಆರ್ ಅಂಬೇಡ್ಕರ್ ಅವರೂ ಸಹ ಸಾಮಾಜಿಕ ಮುಂಚಲನೆ, ಆಧುನಿಕತೆಯನ್ನು ಬಿಂಬಿಸುವ ರೀತಿಯಲ್ಲಿ ಪಾಶ್ಚಿಮಾತ್ಯ ಬ್ರಿಟೀಷ್ ಮಾದರಿಯ ವಸ್ತ್ರಧಾರಣೆಯನ್ನು ಅನುಸರಿಸುವ ಮೂಲಕ, ಕೆಳಜಾತಿಯವರಿಗೆ ಮೇಲ್ಜಾತಿಯವರು ವಿಧಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ್ದರು. 1920ರ ಆರಂಭದ ದಿನಗಳಲ್ಲಿ ಕೋಲಾರ ಚಿನ್ನದ ಗಣಿಯ ಹಲವು ಗಣಿ ಕಾರ್ಮಿಕರೂ ಇದೇ ರೀತಿಯ ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ಇತಿಹಾಸವನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳುವುದು ಬೇಡವೇ ?

ಈ ವೈವಿಧ್ಯಮಯ ಪರಸ್ಪರವಿರೋಧಾಭಾಸಗಳನ್ನೊಳಗೊಂಡ ಹಿನ್ನೆಲೆಯೇ ನಮ್ಮ ಪರಂಪರೆಯೂ ಆಗಿದೆ. ಈ ಪರಂಪರೆಯನ್ನು ಇಂದು ಶಾಲಾ ಕೊಠಡಿಗಳೊಳಗೆ, ಚರ್ಚೆಗೊಳಪಡಿಸಬೇಕಿದೆ. ವಾದ ಪ್ರತಿವಾದಗಳನ್ನು ಮಂಡಿಸಬೇಕಿದೆ. ಇನ್ನೂ ಹೆಚ್ಚಿನ ನಾಗರಿಕತೆ ಮತ್ತು ಘನತೆಯನ್ನು ಸಾಧಿಸಲು ಈ ಹೆಜ್ಜೆ ಅನಿವಾರ್ಯವೂ ಆಗಿದೆ.

( ದ ಹಿಂದೂ ಪತ್ರಿಕೆ ,ಮಾರ್ಚ್ 2 2022)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending