ನೆಲದನಿ
ಗುಂಡು ಚೌಡಿಕೆ ಕಲಾವಿದೆ ರಾಮವ್ವ ಜೋಗತಿ ಬದುಕಿನ ಸುತ್ತ

ಭಾರತವು ವಿವಿಧ ಸಾಂಸ್ಕøತಿಕ ನೆಲೆಗಳ ಆಗರ. ಇಲ್ಲಿ ಏಕ ಪ್ರಕಾರವಾದ ಯಾವೊಂದು ಸಾಂಸ್ಕøತಿಕ ಅಂಶಗಳು ಕಂಡುಬರುವುದಿಲ್ಲ. ಪ್ರತಿಯೊಂದು ಸಂಸ್ಕøತಿ, ಆಚಾರ, ವಿಚಾರ, ನಂಬಿಕೆ, ಆಚರಣೆಗಳು ತಮ್ಮದೆ ಆದ ವಿಶಿಷ್ಟತೆಯೊಳಗೆ ಬೆಳೆದು ಬಂದಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತ ಬಂದ ಭಾರತದ ಮಣ್ಣಿನೊಳಗೆ ವೈದಿಕ ಸಂಸ್ಕøತಿಯೊಂದು ಈ ನಾಡಿನ ನೆಲೆಮೂಲದ ಸಾಂಸ್ಕøತಿಕ ವೈಶಿಷ್ಟ್ಯತೆಯನ್ನು ನಗಣ್ಯವೆಂದು ಪರಿಭಾವಿಸಿ, ಇವುಗಳ ಸಮಾಜದ ಮುಂಚೂಣಿಗೆ ಬಾರದಂತೆ ನೊಡಿಕೊಂಡ ಕಾಲಘಟ್ಟದುದ್ದಕ್ಕೂ ಜನಸಾಮಾನ್ಯರ ಮನೆ ಮತ್ತು ಮನದಂಗಳದಲ್ಲಿ ಅಚ್ಚಳಿಯದೆ ತನ್ನ ಅನನ್ಯತೆಯನ್ನು ಕಾಯ್ದುಕೊಂಡಿದೆ. ವೈದಿಕ ನೆಲೆಯ ಶಿಷ್ಟ ಸಾಹಿತ್ಯದೆದುರು ನೆಲೆಮೂಲ ಬದುಕಿನ ಜನಪದ ಸಾಹಿತ್ಯವು ಜೀವಪರವಾದ ಆಶಯಗಳನ್ನು ಮೈಗೂಡಿಸಿಕೊಂಡು ಆಯಾ ಕಾಲದ ಚಾರಿತ್ರಿಕ ಬಿಕ್ಕಟ್ಟುಗಳನ್ನು ಮೀರುವ ಮತ್ತು ಒಳಗೊಳ್ಳುವ ಮೂಲಕ ತನ್ನದೆ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಇಂತಹ ಜನಪದ ಸಾಹಿತ್ಯ ಹಾಗೂ ವಿವಿಧ ಪ್ರಕಾರಗಳನ್ನು ವಿವಿಧ ಪ್ರಕಾರದ ಕಲಾವಿದರು ತಮ್ಮ ಬದುಕಿನ ಭಾಗವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಇಂತಹ ವಿಶಿಷ್ಟ ಜನಪದ ಕಲೆಗಳಲ್ಲಿ ಚೌಡಿಕೆ (ಗುಂಡು ಚೌಡಿಕೆ) ಕಲೆಯೂ ಒಂದಾಗಿದೆ. ಜನಪದ ಕಲಾ ಪ್ರಕಾರಗಳಲ್ಲಿ ವಿಶೇಷವಾಗಿ ಕಂಡುಬರುವ ಚೌಡಿಕೆಯ ಮೂಲಕವೆ ಗುರುತಿಸಿಕೊಂಡಿರುವ ಜನಪದ ಕಲಾವಿದೆ ರಾಮವ್ವ ಜೋಗುತಿಯ ಬದುಕಿನ ಒಂದಿಷ್ಟು ಅನುಭವಗಳನ್ನು ಕಟ್ಟಿಕೊಡುವ ಆಶಯವನ್ನು ಪ್ರಸ್ತುತ ಲೇಖನವು ಒಳಗೊಂಡಿದೆ.
ಭಾರತೀಯ ಸಾಂಸ್ಕøತಿಕ ಲೋಕದೊಳಗಿನ ಬಹುತ್ವದೊಳಗೆ ‘ಜೋಗತಿ’ ಪರಂಪರೆಯು ಒಂದಾಗಿದೆ. ಈ ಜೋಗತಿ ಪರಂಪರೆಯೊಳಗೆ ‘ಗಂಡು ಜೋಗತಿ’ ಪರಂಪರೆಯ ವಿಶಿಷ್ಟ ಲೋಕವೊಂದು ನಮ್ಮೊಳಗಿದೆ. ಈ ಗಂಡು ಜೋಗತಿ ಪರಂಪರೆಯು ಧಾರ್ಮಿಕ ನಂಬಿಕೆ ಹಾಗೂ ದೀಕ್ಷೆಯೊಂದಿಗೆ ತನ್ನ ಜೀವನವನ್ನು ಸಾಗಿಸಿಕೊಂಡು ಬಂದಿರುವ ಬಗೆಗೆ ಹಲವಾರು ನಿದರ್ಶನಗಳು ನಮಗೆ ಕಂಡುಬರುತ್ತವೆ. ಈ ಗಂಡು ಜೋಗತಿ ಪರಂಪರೆಗೆ ಸೇರಿದ ರಾಮವ್ವ ಜೋಗತಿಯು ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲ್ಲೂಕಿನ ಗೊಲ್ಲರಹಳ್ಳಿ ಎಂಬ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಶ್ರೀ ಮರಿಸೋಮಪ್ಪ ಹಾಗೂ ಶ್ರೀಮತಿ ಹನುಮವ್ವ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು. ರಮೇಶ ಎಂಬ ಹೆಸರಿನಿಂದ ಗುರುತಿಸಿಕೊಂಡ ಇವರು ಬಾಲ್ಯದ ಶಿಕ್ಷಣವನ್ನು ಸ್ವಗ್ರಾಮದಲ್ಲೂ, ಪ್ರೌಢ ಶಿಕ್ಷಣವನ್ನು ಹೊಸಪೇಟೆಯಲ್ಲಿ ಪಡೆದರು. ಬಾಲ್ಯದ ದಿನಗಳಿಂದಲೂ ಹೆಚ್ಚಾಗಿ ಹೆಣ್ಣು ಮಕ್ಕಳೊಂದಿಗೆ ಬೆರೆಯುವ ಹವ್ಯಾಸವನ್ನು ಹೊಂದಿದ್ದ. ಹೀಗೆ ಬೆಳೆಯುವ ಮೂಲಕವಾಗಿ ಕೆಲವೊಂದು ಹೆಣ್ಣಿನ ಗುಣ ಸ್ವಭಾವಗಳನ್ನು ತನ್ನಲ್ಲಿ ಗರ್ಭೀಕರಿಸಿಕೊಂಡ ರಮೇಶನಿಗೆ ತನ್ನೊಳಗೆ ಪುರುಷತ್ವ ಮರೆಯಾಗಿ, ಹೆಣ್ತವು ಮನೆ ಮಾಡಿಕೊಂಡಿತು. ಪ್ರೌಢ ಶಿಕ್ಷಣ ಅಂತ್ಯಗೊಂಡ ತರುವಾಯದಲ್ಲಿ ವ್ಯಾಪಾರ ಮಾಡಬೇಕೆಂದು ಹಲವಾರು ಕೆಲಸ ಕಾರ್ಯಗಳಲ್ಲಿ ಮಗ್ನನಾದ ರಮೇಶನಿಗೆ ಯಾವುದೇ ಕೆಲಸ ಮಾಡಿದರು ಕೂಡ ಅದರಿಂದ ಸೂಕ್ತವಾದ ಲಾಭ ಸಿಗದೆ ನಷ್ಟವನ್ನು ಅನುಭವಿಸುವಂತಾಯಿತು. ಈ ವೇಳೆಗಾಗಲೆ ಹೆಣ್ತನವೊಂದು ರಮೇಶನೊಳಗೆ ಪ್ರಬಲವಾಗತೊಡಗಿತು. ತನ್ನೆಲ್ಲ ವ್ಯಾಪಾರದ ನಷ್ಟಕ್ಕೆ ದೇವರ ಶಾಪವೆಂಬುದು ಕೆಲವರ ನಂಬಿಕೆಯಾಗಿತ್ತು. ಆದರೆ ಇದೇ ವೇಳೆಗೆ ರಮೇಶನಿಗೆ ಮದುವೆ ಮಾಡಬೇಕೆಂದು ಮನೆಯವರೆಲ್ಲ ನಿರ್ಧರಿಸಿದಾಗ ತನ್ನೊಳಗೆ ಮರೆಯಾಗಿದ್ದ ಪುರುಷತ್ವದ ಬಗೆಗೆ ಹೇಳಿಕೊಳ್ಳಲಾಗದೆ ನಯವಾಗಿಯೇ ಈ ಮದುವೆಯನ್ನು ನಿರಾಕರಿಸುತ್ತಾನೆ. ಆದರೆ ಮನೆಯವರ ಒತ್ತಡಕ್ಕೆ ಒಳಗಾಗಿ ಮದುವೆಯನ್ನು ಮಾಡಿಕೊಂಡ ರಮೇಶ ಆ ಹೆಣ್ಣಿನೊಂದಿಗೆ ಸಾಂಸಾರಿಕ ಜೀವನ ನಡೆಸಲು ಸಾಧ್ಯವಾಗದೆ ಮನೆಯಿಂದ ಹೊರನಡೆದು 1996ರಲ್ಲಿ ‘ಕಾಳವ್ವ ಜೋಗತಿ’ಯ ಬಳಿ ಜೋಗತಿ ದೀಕ್ಷೆಯನ್ನು ಪಡೆದು ಸೀರೆಯುಟ್ಟು ರಮೇಶ ಎಂಬುವವನು ಸಂಪೂರ್ಣವಾಗಿ ರಾಮವ್ವನಾಗಿ ಗುರುತಿಸಿಕೊಳ್ಳುತ್ತಾ ಹೋದರು.
ಸಾಂಸಾರಿಕ ಬದುಕಿನಿಂದ ದೂರ ಸರಿದು ಜೋಗತಿ ದೀಕ್ಷೆ ಪಡೆದ ತರುವಾಯದಲ್ಲಿ ಕುಟುಂಬದ ಸದಸ್ಯರ ವಿರೋಧಕ್ಕೆ ಗುರಿಯಾಗುತ್ತಾರೆ. ಈ ಸಂದರ್ಭದಲ್ಲಿ ಇವರನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ. ಆಗ ಕೊಪ್ಪಳದ ಸಮೀಪದಲ್ಲಿರುವ ಕಿನ್ನಾಳದಲ್ಲಿ ಸ್ವಲ್ಪದಿನ ಕಾಲಕಳೆದ ತರುವಾಯದಲ್ಲಿ ಹಗರಿಬೊಮ್ಮನಹಳ್ಳಿ ಸಮೀಪದ ಹಂಸಾಗರದಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಕಾಳಮ್ಮ ಜೋಗತಿಯ ಆಸರೆಯಲ್ಲಿ ಜೀವನ ಸಾಗಿಸುತ್ತಾರೆ. ಹೀಗೆ ಹೆಣ್ತನ ಪಡೆದು ದೀಕ್ಷೆ ತೆಗೆದುಕೊಂಡ ರಾಮವ್ವ ಜೋಗತಿಗೆ ಕಾಳವ್ವ ಜೋಗತಿಯೇ ಗುರುವಾಗಿ, ತಾಯಿ ತಂದೆಯರಾಗಿ ಅಭಯ ನೀಡುತ್ತಾರೆ. ರಾಮವ್ವನಿಗೆ ತನ್ನಲ್ಲಿ ಅಂತರ್ಗತವಾಗಿ ನೆಲೆಯೂರಿದ್ದ ಜನಪದ ಕಲೆಯನ್ನು ಧಾರೆಯೆರೆಯುವ ಮೂಲಕವಾಗಿ ಕಾಳವ್ವ ಜೋಗತಿಯು ದೇವಿ ಹಾಡುಗಳನ್ನು ಹಾಡಲು ಶೃತಿ ನುಡಿಸುವಂತೆ ತರಬೇತಿ ನೀಡುತ್ತಾಳೆ. ತನ್ನ ಗುರುವಾದ ಕಾಳವ್ವ ಜೋಗತಿಯು ದೇವಿಯ ಪದಗಳನ್ನು ಹಾಡುತಿದ್ದರೆ, ರಾಮವ್ವ ಶೃತಿ ಬಾರಿಸುತಿದ್ದಳು. ಈ ಸಂದರ್ಭದಲ್ಲಿ ಕಾಳವ್ವನ ಮತ್ತೊಬ್ಬ ಶಿಷ್ಯೆಯಾದ ಹೊನ್ನೂರಮ್ಮ ಆಗ ಗುಂಡು ಚೌಡಿಕೆಯನ್ನು ನುಡಿಸುತ್ತಿದ್ದರು. ಆದರೆ ಹೊನ್ನೂರಮ್ಮ ಈ ತಂಡದಿಂದ ಮರಳಿದ ತರುವಾಯದಲ್ಲಿ ಚೌಡಿಕೆ ನುಡಿಸುವ ಕಲೆಯನ್ನು ರಾಮವ್ವ ಜೋಗತಿ ಕರಗತ ಮಾಡಿಕೊಂಡು, ನಂತರದಲ್ಲಿ ನಾಟಕ ಪ್ರದರ್ಶನದಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ತನ್ನ ಕೌಟುಂಬಿಕ ಪರಿಸರದಿಂದ ದೂರ ಸರಿದ ತರುವಾಯದಲ್ಲಿ ಕಾಳವ್ವ ಜೋಗುತಿಯೇ ಆಸರೆಯಾಗಿ ನಿಂತರು. ಈ ಸಂದರ್ಭದಲ್ಲಿ ಕಾಳವ್ವ ಜೋಗತಿಯ ಮತ್ತೊಬ್ಬ ಹೆಸರಾಂತ ಶಿಷ್ಯೆಯಾದ ಕಲಾವಿದೆ ಮಂಜಮ್ಮ ಜೋಗತಿಯ ಆಪ್ತತೆಯು ಇಲ್ಲಿ ಲಭಿಸಿತು. ಹೀಗೆ ಸಮಾನ ಮನಸ್ಥಿತಿಯ ಒಂದೆಡೆ ಸೇರಿ 1997 ರಿಂದ ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುವತ್ತ ತಮ್ಮ ಗಮನವನ್ನು ಹರಿಸಿದರು. ಆರಂಭಿಕ ಹಂತದಲ್ಲಿ ಕಾಳವ್ವ ಜೋಗತಿಯ ಮಾರ್ಗದರ್ಶನದಂತೆ ಶೃತಿ ಮತ್ತು ಗುಂಡು ಚೌಡಿಕೆಯನ್ನು ಹಿಡಿದು ಇಬ್ಬರೆ ಹಾಡುವ ಮೂಲಕವಾಗಿ ಪುರಾಣದ ಎಲ್ಲಾ ಪಾತ್ರಗಳನ್ನು ತೋರ್ಪಡಿಸುತ್ತಿದ್ದರು. ಆದರೆ ಬದಲಾದ ಕಲಾಕ್ಕೆ ತಕ್ಕಂತೆ ಕೆಲವು ಬದಲಾವಣೆಗಳೊಂದಿಗೆ ಹೊಸ ಮಾರ್ಪಾಡುಗಳನ್ನು ಮಾಡಿಕೊಂಡು ಪ್ರತ್ಯೇಕವಾಗಿ ಬಣ್ಣ ಹಾಕುವ ಮೂಲಕವಾಗಿ ಪೌರಾಣಿಕ ಪಾತ್ರಗಳನ್ನು ಪ್ರದರ್ಶನ ಮಾಡುವಂತಹ ವಿಶಿಷ್ಟ ಮತ್ತು ಜನಪ್ರಿಯ ಪ್ರಕಾರದತ್ತ ತಮ್ಮ ಚಿತ್ತವನ್ನು ಕೇಂದ್ರಿಕರಿಸಿದರು. ಆಗ ರಾಮವ್ವ ಜೋಗುತಿಯು ಸಹ ಪುರಾಣ ಪಾತ್ರಗಳಾದ ಶಿವ, ಕಾರ್ತಿವಿರ್ಯಾರ್ಜುನ, ಕುರುಬರ ಬೀರಣ್ಣ, ಮಡಿವಾಳ ಮಾಚಯ್ಯ, ಬ್ರಹ್ಮ, ದೇವೇಂದ್ರ ಮುಂತಾದ ಪಾತ್ರಗಳಿಗೆ ಬಣ್ಣ ಹಾಕುವ ಮೂಲಕವಾಗಿ ಕಲಾ ಲೋಕಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ. ಕಾಳವ್ವ ಜೋಗತಿ ಹಾಗೂ ಮಂಜಮ್ಮ ಜೋಗತಿಯ ತಂಡದ ಸದಸ್ಯಳಾಗಿ ಮುನ್ನಡೆದ ರಾಮವ್ವ ಜೋಗತಿಯು ಹಲವಾರು ಪುರಾಣ ಪಾತ್ರಗಳ ಮೂಲಕವಾಗಿ ಜನಮಾನಸದಲ್ಲಿ ತನ್ನ ಕಲಾಭಿನಯವನ್ನು ನೆಲೆಯೂರುವಂತೆ ಮಾಡಿರುತ್ತಾರೆ.
ರಾಮವ್ವ ಜೋಗತಿಯು ತನ್ನಲ್ಲಿ ಸ್ವಾಭಾವಿಕವಾಗಿ ಮನೆ ಮಾಡಿಕೊಂಡ ಹೆಣ್ತನದಿಂದಾಗಿ ಕುಟುಂಬದಿಂದ ಹೊರದೂಡಲ್ಪಟ್ಟರು. ಆದರೆ ಕಾಳವ್ವ ಜೋಗತಿ ಮತ್ತೇ ಈ ತಾಯಿಯನ್ನು ಕುಟುಂಬದೊಂದಿ ಬೆರೆಯುವಂತೆ ಅವರ ಮನೆಯವರಿಗೆ ತಿಳಿ ಹೇಳಿ ಕುಟುಂಬದೊಂದಿಗೆ ಇವರ ಬಾಂದವ್ಯವು ಮತ್ತೇ ಚಿಗುರುವಂತೆ ಮುಂದಾಳತ್ವವಹಿಸಿಕೊಂಡು ಯಶಸ್ವಿಯಾದರು. ಆ ನಂತರದಲ್ಲಿ ರಾಮವ್ವನನ್ನು ಅತಿಯಾಗಿ ದ್ವೇಷಿಸುತಿದ್ದ ತಂದೆ ತಮ್ಮ ಮಗನನ್ನು ಅಮ್ಮನೆಂದು ಸ್ವೀಕರಿಸಿದರು. ಕೊನೆಗಾಲದಲ್ಲಿ ತಂದೆಯ ಹಾರೈಕೆಯ ಮಹತ್ತರ ಜವಬ್ದಾರಿಯನ್ನು ರಾಮವ್ವ ನಿರ್ವಹಿಸಿದರು. ಇಂದು ತಮ್ಮ ಅಣ್ಣ ಅತ್ತಿಗೆಯು ಬಿಟ್ಟು ಇಹಲೋಕ ತ್ಯಜಿಸಿದ ಮಕ್ಕಳಿಗೆ ಪ್ರೀತಿಯ ಅಮ್ಮನಾಗಿ ಅವರ ಪಾಲನೆ ಮತ್ತು ಪೋಷಣೆಯ ಜವಬ್ದಾರಿಯನ್ನು ರಾಮವ್ವ ಜೋಗತಿಯು ನಿರ್ವಹಿಸುತ್ತಿದ್ದಾರೆ. ಕುಟುಂಬದೊಂದಿಗೆ ಅತಿಯಾದ ಜವಬ್ದಾರಿ ಹಾಗೂ ಬಾಂದವ್ಯವನ್ನು ಹೊಂದಿದ್ದರು ಸಹ ಇವರು ಕಾಳವ್ವ ಜೋಗತಿಯು ಹುಟ್ಟುಹಾಕಿದ ಈ ಕೂಡು ಕುಟುಂಬದಿಂದ ದೂರ ಸರಿದಿಲ್ಲ. ಕಾಳವ್ವನ ನಂತರ ಮಂಜವ್ವ ಜೋಗತಿಯನ್ನೆ ತನ್ನ ಗುರುವಾಗಿ, ತಂದೆ ತಾಯಿಯಾಗಿ ನಂಬಿಕೊಂಡು ತಮ್ಮ ಕಲಾ ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ.
ರಾಮವ್ವ ಜೋಗತಿಯು ಈ ಜೋಗತಿ ತಂಡದೊಂದಿಗೆ ತನ್ನನ್ನು ಗುರುತಿಸಿಕೊಂಡು ಹಲವಾರು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕವಾಗಿ ತಮ್ಮ ಕಲಾ ಪ್ರತಿಭೆಯನ್ನು ಮುಂದುವರೆಸಿಕೊಂಡು ಬಂದಿದ್ದು, ಗುಂಡು ಚೌಡಿಕೆಯ ಪರಿಣಿತ ಕಲಾವಿದರಾಗಿ ನಮ್ಮ ಮುಂದೆ ನಿಂತಿದ್ದಾರೆ. ಜಾನಪದ ಸರಿಯಂತಿರುವ ಈ ತಾಯಿಯು ತನ್ನಲ್ಲಿರುವ ಈ ಕಲೆಯ ಜೊತೆಗೆ ಹಲವಾರು ಚೌಡಿಕೆ ಪದ ಮತ್ತು ಸೋಬಾನೆ ಪದಗಳನ್ನು ತನ್ನಲ್ಲಿ ಗರ್ಭೀಕರಿಸಿಕೊಂಡಿದ್ದಾರೆ. ಇವರ ಈ ಸಾಧನೆಗೆ 2016 ರಲ್ಲಿ ‘ಜಾನಪದ ಅಕಾಡೆಮಿ’ ಪ್ರಶಸ್ತಿ, 2017 ರಲ್ಲಿ ‘ಜಾನಪದ ಲೋಕ’ ಪ್ರಶಸ್ತಿ ಪ್ರಶಸ್ತಿಯು ಮಾತ್ರವಲ್ಲದೆ ನಾಡಿನ ವಿವಿಧ ಭಾಗದ ಸಂಘ ಸಂಸ್ಥೆಗಳಿಂದ ಹಲವಾರು ಸನ್ಮಾನಗಳನ್ನು ನೀಡಿ ಗೌರವಿಸಲಾಗಿದೆ.
ನೆಲದನಿ
ನುಡಿಯ ಒಡಲು – 26 | ನುಡಿ ಒಲವು ಮತ್ತು ಧೋರಣೆ

- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಭಾಷಿಕ ಒಲವು ಮತ್ತು ಧೋರಣೆ ಅನ್ನುವುದು ಮಾನಸಿಕ, ಸಾಮಾಜಿಕ ಮತ್ತು ರಾಜಕೀಯ ಪ್ರೇರಣೆಯ ಪರಿಣಾಮದಿಂದ ಉಂಟಾಗಬಹುದಾದ ಒಂದು ‘ಭಾಷಿಕ ಮನಸ್ಥಿತಿ’ ಅಥವಾ ‘ಭಾಷಿಕ ಪರಿಭಾವನೆಗಳು’ ಎನ್ನಲಿಕ್ಕೆ ಅಡ್ಡಿಯಿಲ್ಲ. ಭಾರತದಂತಹ ಬಹುಭಾಷಾ ಸಂದರ್ಭದಲ್ಲಿ ಯಾವುದೇ ನುಡಿಯ ಇತಿಹಾಸ ಅಥವಾ ಪರಂಪರೆಯ ನೆಲೆಗಳನ್ನು ಗುರುತಿಸುವ ಬಗೆಗಳು ಒಂದು ಸ್ಪಷ್ಟವಾದ ವಿಭಾಜೀಕರಣದಿಂದ (ಡೈಕಾಟಾಮೈಜೇಶನ್) ರೂಪಗೊಳ್ಳುತ್ತವೆ. ಅವುಗಳೆಂದರೆ, ‘ಯಜಮಾನ್ಯ ನುಡಿಗಳು’ ಮತ್ತು ‘ಅಧೀನ ನುಡಿಗಳು’ ಎಂದು ಗುರುತಿಸಲಾಗಿದೆ.
ಹಾಗೂ ಈ ವಿಂಗಡನೆಯೇ ಮಾರ್ಗ ಹಾಗೂ ದೇಸಿ ಪರಂಪರೆಗೆ ಕಾರಣವಾಗಿವೆ ಎಂಬುದು ಗಮನಾರ್ಹ. ಇಂತಹ ಉದ್ದೇಶಗಳೇ ಯಾವುದೆ ಒಂದು ಭಾಷೆಗೆ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವ ಕಲ್ಪಿಸುತ್ತವೆ ಎಂಬ ಅಸಡ್ಡೆಯ ವಾದಗಳಿಗೇನು ಕಮ್ಮಿಯಿಲ್ಲ. ನುಡಿಯ ಇಂತಹ ಒಲವು ಮತ್ತು ಧೋರಣೆಯಿಂದ ಕನ್ನಡ ಸೊಲ್ಲರಿಮೆ, ಛಂದಸ್ಸು, ಶಬ್ದಕೋಶ, ಕಾವ್ಯಮೀಮಾಂಸೆ, ಸಾಮಾಜಿಕ ಶಾಸ್ತ್ರಗಳು ಮುಂತಾದವುಗಳನ್ನು ರೂಪಿಸಿದ ಪಂಡಿತರ ಒಲವು ಮತ್ತು ಧೋರಣೆ ಸಂಸ್ಕೃತದ ಮೇಲಿನ ಮೋಹದಿಂದಲೇ ಉಂಟಾಗಿದ್ದರಿಂದ ಅವರು ಸಂಸ್ಕೃತಕ್ಕೆ ಮಾತ್ರ ಸೀಮಿತವಾಗಿದ್ದರು.
ಎತ್ತುಗೆಗಾಗಿ “ಬ್ರಾಹ್ಮೀ ಲಿಪಿಯನ್ನು ಕನ್ನಡಕ್ಕೆ ಅಳವಡಿಸಿದ ಪಂಡಿತರು ಸಂಸ್ಕೃತದಿಂದ ಎರವಲಾಗಿ ಪಡೆದ ಪದಗಳನ್ನು ಹೆಚ್ಚುಕಡಿಮೆ ಸಂಸ್ಕೃತದಲ್ಲಿರುವ ಹಾಗೆಯೇ ಬರೆಯಬೇಕೆಂಬ ನಿಯಮವನ್ನು ಮಾಡಿಕೊಂಡಿದ್ದರು. ಹೀಗೆ ಮಾಡಲು ಅವರಿಗೆ ಸಂಸ್ಕೃತದ ಮೇಲಿದ್ದ ಕುರುಡು ಅಭಿಮಾನವೇ ಕಾರಣ. ಆ ನಿಯಮದಿಂದ ಕನ್ನಡಕ್ಕೆ ಯಾವ ಪ್ರಯೋಜನವೂ ಇಲ್ಲ” (ಡಿ.ಎನ್.ಎಸ್. ಭಟ್: ದೇಶಕಾಲ: ಸಂ: 15:2008). ಇಂತಹ ಕುರುಡು ಅಭಿಮಾನವು ಪ್ರತಿಯೊಂದು ನುಡಿಗೂ ಅದರದೇ ಆದ ಭಾಷಿಕ ರಚನಾ ನಿಯಮ ಮತ್ತು ಮೂಲತತ್ವಗಳು ಇರುತ್ತವೆ ಅನ್ನುವ ದಿಟವನ್ನೇ ಮರೆಮಾಚುತ್ತವೆ.
ಈ ಭಾಷಿಕ ಅಪಾಯಗಳೇ ಇವತ್ತಿನ ಕನ್ನಡದ ಬರಹ ಮತ್ತು ನುಡಿಯ ನಡುವೆ ಕಂದರವನ್ನು ಹುಟ್ಟಸಿವೆ. ಈ ಧೋರಣೆಗಳನ್ನು ಸರಿಪಡಿಸುವ ಅಥವಾ ಕನ್ನಡದ ಮೂಲತತ್ವ ಮತ್ತು ವಿಕಲ್ಪಗಳನ್ನು ಗುರುತಿಸುವ ಇರಾದೆಯೂ ಇಲ್ಲದೆ ಹೋದದ್ದು ಕನ್ನಡದಂತ ದೇಸಿ ಭಾಷೆಗಳಿಗೂ ಒಂದು ವ್ಯಾಕರಣವಿದಿಯೇ! ಎನ್ನುವ ಲೇವಡಿ ಹೇಳಿಕೆಯನ್ನು ಬಹಳ ತಾತ್ವಿಕ ಪೋಷಾಕಿನಲ್ಲಿ ಹೇಳುವ ಸಂಸ್ಕೃತ ವಿದ್ವಾಂಸರಿಗೇನು ಕಮ್ಮಿಯಿಲ್ಲ. ಈ ಮಾತನ್ನು ಡಿವಿಜಿಯವರು ಹೇಳಿದರೆಂದು ತಮ್ಮ ಹೊತ್ತಿಗೆಯಲ್ಲಿ ಶ್ರೀ ವಿದ್ವಾನ್ ರಂಗನಾಥ ಶರ್ಮಾ (2000:ವ್ಯಾಕರಣಶಾಸ್ತ್ರ) ನಮೂದಿಸಿದ್ದಾರೆ.
ಶರ್ಮಾ ಅವರೂ ಕೂಡ ಇದೇ ಚಿಂತನಾ ವಲಯಕ್ಕೆ ಸೇರಿದವರು ಎಂಬುದು ಗಮನಾರ್ಹ. ಒಂದು ಭಾಷೆಯ ಅಸ್ತಿತ್ವವನ್ನು ಇಂತಹ ಉಡಾಫೆಯ ಗ್ರಹಿಕೆಗಳ ಮೂಲಕ ನಿರ್ನಾಮಗೊಳಿಸುವ ಕ್ರಮ ದಿಟವಾಗಿಯೂ ಶೋಚನಿಯ ಸ್ಥಿತಿ ಎಂದೇ ಹೇಳಬೇಕು. ಈ ನಿಲವು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ನಿಮಗೂ ಶಾರೀರಿಕ ಆಕೃತಿ ಮತ್ತು ಸಂರಚನೆ ಇದಿಯೇ ಎಂದು ಬಾಲಿಶವಾಗಿ ಕೇಳಿದಂತಿದೆ. ಈ ಧೋರಣೆಗಳೇ ಭಾಷಾನೀತಿ ಹಾಗೂ ಯೋಜನೆಯನ್ನು ರೂಪಿಸುವ ಪ್ರಭುತ್ವ ಮತ್ತು ವಿದ್ವಾಂಸರ ಮಾನದಂಡಗಳಾಗಿ ರೂಪಗೊಂಡಾಗ, ಆ ಭಾಷಾನೀತಿ ಮತ್ತು ಯೋಜನೆಗಳು ಸಹಜವಾಗಿಯೇ ತಾರತಮ್ಯದ ನೆಲೆಯಿಂದ ಕೂಡಿರುತ್ತವೆ.
ಈ ಕಾರಣಗಳಿಂದಲೇ ಸಾಮಾನ್ಯವಾಗಿ ನಮ್ಮ ಶಾಲೆಗಳಲ್ಲಿ ಕಲಿಸುವ ‘ಸೊಲ್ಲರಿಮೆ/ವ್ಯಾಕರಣ’ ಎಂತಹದು? ಎನ್ನುವುದನ್ನು ಪತ್ತೆಹಚ್ಚಿ ನೋಡಿದಾಗ, ಅದರ ಒಳ ಉದ್ದೇಶಗಳು ಇಲ್ಲವೇ ಹುನ್ನಾರಗಳು ನಿಚ್ಚಳವಾಗುತ್ತವೆ. ಇದು ಸಂಸ್ಕೃತ ವ್ಯಾಕರಣ ನಿಯಮಗಳನ್ನು ಕನ್ನಡಕ್ಕೆ ಒಗ್ಗಿಸಿ ಕನ್ನಡ ರಚನೆಯ ನೆಲೆಗಳನ್ನು ಅರ್ಥೈಸುವ ಮಾದರಿಯ ಹಿಂದಿನ ಉದ್ದೇಶ ಸಂಸ್ಕೃತವನ್ನು ಸಂಗೋಪಿಸುವುದಾಗಿದೆ ಹಾಗೂ ಆ ಮೂಲಕ ಅಧಿಕಾರ ನಂಟಸ್ತಿಕೆಯ ವಲಯಗಳನ್ನು ಹಾಗೇ ಉಳಿಸಿಕೊಳ್ಳುವ ಬಗೆಯೂ ಆಗಿದೆ.
ಇದನ್ನೆ ಡಿ.ಎನ್.ಎಸ್. ಭಟ್ ಅವರು, “ಕನ್ನಡಿಗರ ಮಾತಿನಲ್ಲಿ ಸಂಸ್ಕೃತಕ್ಕಿಂತ ತೀರ ಬೇರೆಯಾಗಿರುವ ಸೋಲ್ಲರಿಮೆಯ (ವ್ಯಾಕರಣ) ನಿಯಮಗಳು ಬಳಕೆಯಾಗುತ್ತವೆ. ಇವನ್ನೇ ನೇರವಾಗಿ ಕನ್ನಡದ ಉದಾಹರಣೆಗಳನ್ನು ಕೊಟ್ಟು ವಿವರಿಸಿದಲ್ಲಿ ಅವು ಕನ್ನಡಿಗರಿಗೆ ಅರ್ಥವಾಗದ ಕಗ್ಗಂಟೆAದು ಅನಿಸಲಾರದು. ಅಂತಹ ವಿವರಣೆ ಕುತೂಹಲಕಾರಿಯೂ ಆಗಬಲ್ಲದು” (ಮಾತಿನ ಒಳಗುಟ್ಟು:ಪು: 2008) ಈ ಮಾತುಗಳು ಕನ್ನಡಿಗರ ಭಾಷಿಕ ಪ್ರಜ್ಞೆಯ ಪ್ರತಿಪಾದನೆಯಾಗಿವೆ.
ಕನ್ನಡದ ಸಾಂಪ್ರದಾಯಿಕ ವ್ಯಾಕರಣ ರೂಪಗೊಂಡ ಬಗೆಗೂ ಆಧುನಿಕ ವ್ಯಾಕರಣ ರಚನೆಯ ನಡುವೆ ದೊಡ್ಡ ಕಂದರವೊAದು ನರ್ಮಾಣವಾಗಿಬಿಟ್ಟಿದೆ. ಸಂಸ್ಕೃತ ಮತ್ತು ಕನ್ನಡದ ನಡುವಿನ ಭಾಷಿಕ ನಂಟಸ್ತಿಕೆ ನಮಗೆ ಇಂದು ಪ್ರಸ್ತುತವಲ್ಲ. ಇಂತಹ ಭಾಷಿಕ ನೆಲೆಯೂ “ಸಂಸ್ಕೃತದ ಆರಾಧನ ನೆಲೆ”ಯಿಂದಲೇ ರೂಪಗೊಂಡಿದ್ದರಿಂದ, ಕನ್ನಡ ಭಾಷಿಕ ನೆಲೆಗಳ ಮಂಡನೆಯ ಕ್ರಮ ಕನ್ನಡ ಪರಂಪರೆಯಲ್ಲಿ ಕಾಣಿಸುತ್ತದೆ.
ಸಂಸ್ಕೃತ ವ್ಯಾಕರಣಕ್ಕೂ ಮತ್ತು ಕನ್ನಡ ವ್ಯಾಕರಣ ಪರಂಪರೆ ರೂಪಗೊಂಡ ಬಗೆಗೂ ಯಾವುದೆ ಸೈದ್ಧಾಂತಿಕ ಉದ್ದೇಶ ಇಲ್ಲದೆ ಹೋಗಿದ್ದರೆ, ಕನ್ನಡ ವ್ಯಾಕರಣವನ್ನು ಸಂಸ್ಕೃತದ ಚೌಕಟ್ಟಿನಲ್ಲಿ ರೂಪಿಸಬೇಕೆಂಬ ಮನಸ್ಥಿತಿಗೆ ಏನು ಕಾರಣ? ಎನ್ನುವ ಪ್ರಶ್ನೆಗೆ ಮಹತ್ವ ಬರುತ್ತದೆ. ಆಧುನಿಕ ಭಾಷಾತತ್ವಶಾಸ್ತ್ರೀಯ ನೆಲೆ ಮತ್ತು ಪರಿಕಲ್ಪನೆಗಳಿಗೆ ಅನುಗುಣವಾಗಿ ಕನ್ನಡ ವ್ಯಾಕರಣವನ್ನು ರೂಪಿಸುವ ಹೊಂದಾಣಿಕೆಯ ಕ್ರಮ ಯಾಕೆ ಸಾಧ್ಯವಾಗಿಲ್ಲ ಅನ್ನುವುದು ಕೂಡ ಮಹತ್ವದ ಪ್ರಶ್ನೆಯೇ ಆಗಿದೆ.
ಈಗ ಕನ್ನಡದ ವ್ಯಾಕರಣವನ್ನು ಪುರ್ರಚಿಸಬಹುದಾದ ಸಾಧ್ಯತೆಯ ಆಲೋಚನೆಯ ಕ್ರಮವನ್ನು (ಎತ್ತುಗೆಗಾಗಿ ಕೆ. ವಿ. ನಾರಾಯಣ ಹಾಗೂ ಡಿ.ಎನ್.ಎಸ್. ಭಟ್ ಅವರನ್ನು ಹೆಸರಿಸಬಹುದು) ಸಂಸ್ಕೃತದ ಮೇಲಿನ ದ್ವೇಷ ಹಾಗೂ ಕನ್ನಡದ ಏಳ್ಗೆಯನ್ನು ವಿರೋಧಿಸುವ ಬಗೆಯೆಂದು ಬಿಂಬಿಸಲಾಗಿದೆ. ಕೆವಿಎನ್ ಹಾಗೂ ಡಿಎನ್ಎಸ್ ಭಟ್ ಅವರುಗಳ ಆಲೋಚನಾ ಕ್ರಮವೂ ಕನ್ನಡ ನುಡಿಯ ಕಸುವಿನ ಮೇಲಿರುವ ನಂಬಿಕೆಯನ್ನುವುದು ಸಂಸ್ಕೃತಪರ ವಕಾಲತ್ತುವಹಿಸಿ ಮಾತ್ನಾಡುವವರಿಗೆ ಯಾಕೆ ಅರ್ಥವಾಗುತ್ತಿಲ್ಲ.
ನುಡಿಯ ಸ್ವಾಯತ್ತತೆಯನ್ನು ಮರುಪ್ರತಿಪಾದಿಸುವ ಬೇಡಿಕೆಗಳು ಆಯಾ ಸಮುದಾಯದ ಸಾಮಾಜಿಕ, ರಾಜಕೀಯ ನೆಲೆಗಳಿಂದ ರೂಪಗೊಳ್ಳಬೇಕಾದ ಅಗತ್ಯವಿದೆ ಎನ್ನುವುದು ಸ್ಪಷ್ಟ. ಇದಕ್ಕಿಂತ ಹೆಚ್ಚಾಗಿ, ಭಾಷಾ ಯೋಜನಕಾರರು ಒಂದು ನುಡಿ ಸಮುದಾಯಕ್ಕೆ ತನ್ನ ಅಂತರ್ಗತ ಭಾಷಿಕ ಪ್ರಜ್ಞೆಯನ್ನು ತನ್ನ ಸೊಲ್ಲರಿಮೆ/ವ್ಯಾಕರಣ ಮತ್ತು ಸಾಹಿತ್ಯದಲ್ಲಿ ಕ್ರೂಢೀಕರಿಸಿಕೊಳ್ಳುವ ಸ್ವಾತಂತ್ರ್ಯವನ್ನು ದಕ್ಕಿಸಿ ಕೊಡಬೇಕು.
ಭಾಷೆಯ ಸಾಮಾಜಿಕ–ರಾಜಕೀಯ ಅಂತಸ್ತು ಸ್ಥಾವರವಲ್ಲ. ಅದು ಬದಲಾವಣೆಯ ಹೊಣೆಯಾಗಿರುತ್ತೆ. ಏಂಕೆಂದರೆ, ಸಮಾಜ ಮತ್ತು ಸಾಮಾಜಿಕ ವ್ಯವಸ್ಥೆ ಚಲನಶೀಲವಾದದ್ದು. ಪ್ರಾಚೀನ ಕಾಲದಿಂದಲೂ ಭಾರತ ಬಹುಭಾಷಿಕ ಸನ್ನಿವೇಶ ಆದರೆ ಈ ಭಾಷೆಗಳ ನಡುವಿನ ಭಾಷಿಕ ಅಂತಸ್ತು ಕಾಲದೇಶಕ್ಕೆ ಅನುಗುಣವಾಗಿ ಬದಲಾಗುತ್ತಿವೆ. ಈ ಚಲನಶೀಲತೆಯು ಭಾರತದಲ್ಲಿಯ ಭಾಷಿಕ ಬಹುಳತೆಯ ಪ್ರಾಮುಖ್ಯತೆಯ ಲಕ್ಷಣವಾಗಿದೆ. ಭಾಷೆಯ ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಯ ನಡುವಣ ನಂಟಸ್ತಿಕೆಗಳು ನುಡಿಯ ಬಹುಳತೆಯನ್ನು ನೆಲೆಗೊಳಿಸುವ ಸಾಧ್ಯತೆಗಳಲ್ಲಿ ಹಲವು ಆಯಾಮಗಳು ಸೇರಿಕೊಂಡಿವೆ.
ಮುಖ್ಯವಾಗಿ, ಭಾರತೀಯತೆ ಎನ್ನುವ ತಿಳುವಳಿಕೆ ಕೇವಲ ಯಾವುದೇ ನುಡಿಯ ಮೂಲಕ ಗುರುತಿಸಿಕೊಂಡ ಜನಸಮುದಾಯಗಳ ಒಂದು ರಾಷ್ಟçವಲ್ಲ. ಆದ್ದರಿಂದ ಇವತ್ತೀನ ಆಧುನಿಕ ಸಂವಿಧಾನ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಈ ವೈವಿಧ್ಯತೆಯ ಗುರುತುಗಳನ್ನು ಹೇಗೆ ಕಾಣಬಹುದು ಎಂಬ ಪ್ರಶ್ನೆಯೊಂದು ಎದುರಾಗುತ್ತದೆ. ಬಹುಸಾಂಸ್ಕೃತಿಕ ಸಮೂಹಗಳ ನಂಬಿಕೆ, ಮೌಲ್ಯ, ರೂಢಿ, ಸಂವೇದನೆಗಳು ಈ ಭಾರತೀಯತೆಯ ದಿಟವಾದ ನೆಲೆಗಳಾಗಿರುವವೋ ಎನ್ನುವ ಸಂದೇಹ ಹುಸಿಯಾಗಿಲಾರದು.
ಆದರೆ ಪುರಾಣ ಮತ್ತು ಮಹಾಕಾವ್ಯಗಳು ರೂಪಿಸಿದ ಸಾಂಸ್ಕೃತಿಕ ವಿವೇಕ, ಮೌಲ್ಯ ಮತ್ತು ಸಂವೇದನೆಗೆ ಮೂಲ ಸಂಸ್ಕೃತ ಭಾಷೆ ಎಂಬ ಹುಸಿ ನಂಬಿಕಯೂ ಕನ್ನಡದಂತಹ ಇತರೆ ನುಡಿಗಳ ಅಸ್ತಿತ್ವವನ್ನು ಶೂನ್ಯವಾಗಿಸಿದೆ. ಇದನ್ನು ಹೊರತುಪಡಿಸಿಯೂ, ಯೋಚಿಸಿ ನೋಡಿದರೆ ಬಹುಮಂದಿಯರನ್ನು ಹಾಗೂ ಎಲ್ಲ ವರ್ಗದ ಮಹಿಳೆಯರನ್ನು ಒಳಗೊಂಡ ಸಂಸ್ಕೃತದ ಯಾವ ಪುರಾಣ ಇಲ್ಲವೇ ಕಾವ್ಯಗಳು ಇರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ.
ನಿರಂತರವಾಗಿ ಜನಸಾಮನ್ಯರನ್ನು ಸಾಮಾಜಿಕವಾಗಿ ನಿಶಿದ್ಧಿಸುತ್ತ ಹಾಗೂ ಶ್ರೇಣೀಕರಿಸುತ್ತು ಬಂದಿರುವ ಕ್ರಮಗಳೇ ಸಂಸ್ಕೃತ ಗುರಿಗಳು ಆಗಿರುತ್ತವೆ. ಈ ಪುರಾಣ ಮತ್ತು ಮಹಾಕಾವ್ಯಗಳು ಸಾಕ್ಷರತೆಯ ಹದ್ದುಮೀರಿ ಜನಸಾಮನ್ಯರ ಬದುಕಿನಲ್ಲಿ ಇಂದಿಗೂ ಹಾಸುಹೊಕ್ಕಾಗಿವೆ. ದಿಟ ಸಾಹಿತ್ಯಕ್ಕೂ ಸಾಕ್ಷರತೆಗೂ ಯಾವುದೇ ಬಗೆಯ ನೇರವಾದ ನಂಟಸ್ತಿಕೆಯಿಲ್ಲ. ಆದರೆ ಸಂಸ್ಕೃತ ನುಡಿಯ ಪರವಾಗಿ ವಕಾಲತ್ತು ವಹಿಸುವ ವರ್ಗಗಳೇ ಸಾಹಿತ್ಯ ಹಾಗೂ ಸಾಕ್ಷರತೆಗೆ ನೇರೆವಾದ ನಂಟನ್ನು ಆರೋಪಿಸಿವೆ.
ಇದಕ್ಕೆ ಕಾರಣ ಜನಸಾಮನ್ಯರ ನುಡಿಯಲ್ಲಿ ಮೌಖಿಕ ಪರಂಪರೆಯಾಗಿ ರೂಪುಗೊಂಡ ಕಾವ್ಯಗಳಿಗೂ ಬರಹದ ಕಾವುಗಳಿಗೂ ಅಂತರಗಳನ್ನು ಹುಟ್ಟುಹಾಕುವ ಹುನ್ನಾರದಿಂದ ಇಂತಹ ಬೆಳವಣಿಗೆಗಳು ಮುಂಚೂಣೆಗೆ ಬಂದಿವೆ. ಇಂತಹ ಬಿಕ್ಕಟ್ಟುಗಳಲ್ಲಿಯೂ ಮೌಖಿಕ ಪರಂಪರೆಯ ನಂಬಿಕೆಯನ್ನು ಶತಮಾನದುದ್ದಕ್ಕೂ ರವಾನಿಸುತ್ತ ಬಂದಿರುವುದೇ ದೇಶಿ ನುಡಿಗಳ ಚಲನಶೀಲತೆಯನ್ನು ತೋರಿಸುತ್ತದೆ. ಇಂತಹ ಮೌಖಿಕ ಪರಂಪರೆಗಳು ಬೇರೆ ಬೇರೆ ನುಡಿಗಳಲ್ಲಿ ಬರಹ ರೂಪಗಳಲ್ಲಿ ಹೊರಬಂದು, ವ್ಯಾಖ್ಯಾನಗಳು ಮಹಾಕಾವ್ಯಗಳ ಸಂವೇದನೆಗಳಾಗಿ ಸಾಮಾಜಿಕ ಭಿನ್ನತೆಗೆ ಕಾರಣವಾಗಿವೆ. ಮಾರ್ಗದ ಆವರಣದಲ್ಲಿ ಸಂಚರಿಸಿ ಬರಹ ನುಡಿಯ ಚಹರೆಗಳಾಗಿ ಮಾರ್ಪಟ್ಟಿರುತ್ತವೆ.
ಇಂತಹ ಐತಿಹಾಸಿಕ ಆಗು ಹೋಗುಗಳ ಸಂಚಾರವು ಸಂಸ್ಕೃತದಿಂದ ಇತರೆ ನುಡಿಗಳಿಗೆ ಹಾಗೂ ಮೌಖಿಕದಿಂದ ಬರಹಕ್ಕೆ ರೂಪಾಂತರಗೊಂಡಿದ್ದರಿಂದ, ಅಡುನುಡಿಯ ರೂಪ ಹಾಗೂ ಅದರ ವಸ್ತವಿಷಯಗಳು ಹೇಗೆ ಆಯಾ ನುಡಿಯಿಗರಿಗೇ ಹೊರತಾದ ನೆಲೆಗಳನ್ನು ಪಡೆದುಕೊಂಡವು ಎಂಬುದನ್ನು ಇಲ್ಲಿ ಕಾಣಬಹುದು. ದಿಟವಾಗಿಯೂ ಈ ನಿಲುವುಗಳನ್ನು ಸಾಂಸ್ಕೃತಿಕ ಅಪಾಯಗಳನ್ನು ಹುಟ್ಟುಹಾಕಿದ ನಿಲುವುಗಳಂದೇ ಹೇಳಬೇಕು.
ಯಾರಾದರೂ ಈ ಪುರಾಣ ಇಲ್ಲವೇ ಕಾವ್ಯಗಳ ವಸ್ತವಿಷಯವನ್ನು ಅರ್ಥೈಸಿಕೊಳ್ಳಬೇಕೆಂದರೆ ಸಂಸ್ಕೃತವನ್ನೇ ಕಲಿಯಬೇಕಾದ ಅಗತ್ಯವಿಲ್ಲ. ಹಾಗಾಗಿ ಪದಕೋಶದ ಮೂಲಕವೇ ಲೋಕಗ್ರಹಿಕೆಗಳನ್ನು ಪಲ್ಲಟಗೊಳಿಸುವ ಹುನ್ನಾರಗಳು ನಡೆಯುತ್ತಲೇ ಬಂದಿವೆ. ಹಾಗಾಗಿ ಕೇವಲ ಪದಕೋಶವನ್ನು ಪಡೆದುಕೊಳ್ಳುವ ಭಾಷೆಯಾಗದೇ ಆಯಾ ಭಾಷೆಯ ಮೂಲಕ ದಕ್ಕುವ ಅನುಭವವನ್ನೂ ಪಲ್ಲಟಗೊಳಿಸುವ ವಿದ್ಯಮಾನವಾಗಿದೆ. ಅದಕ್ಕಾಗಿ ಈ ಪ್ರಕ್ರಿಯೆಯಲ್ಲಿ ಬೇರೆ ಭಾಷಾರೂಪ/ಪದಗಳನ್ನು ಪಡೆದುಕೊಳ್ಳುವ ಬಗೆಯನ್ನು ಪ್ರತಿರೋಧಿಸುವ ನಿಲುವುಗಳು ಎಚ್ಚರಗೊಳ್ಳುವ ಅಗತ್ಯವಿದೆ.
ಆದರೆ ವಸ್ತುವಿಷಯವನ್ನು ಪಡೆಯುವ ಬಗೆಯಲ್ಲಿ ನುಡಿ ಕೇವಲ ಮಧ್ಯವರ್ತಿ ಮಾತ್ರವಾಗದೇ, ಅನುಭವವನ್ನು ಕಸಿ ಮಾಡುವ ನೆಲೆಯೂ ಆಗಿರುತ್ತದೆ. ಹಾಗಾಗಿ ನುಡಿ ಎನ್ನುವುದು ಒಂದ ತಟಸ್ಥವಾದ ವಿದ್ಯಮಾನವಲ್ಲ.
ಸಣ್ಣ-ಪುಟ್ಟ ನುಡಿಗÀಳಿಗೆ ಸಂಸ್ಕೃತದೊಂದಿಗೆ ನೇರ ಸಂಪರ್ಕ ಸಾಧ್ಯವಾಗದೆ ಇದ್ದಾಗ ಮತ್ಯಾವುದೆ ನುಡಿಯಿಂದ ಪಡೆದುಕೊಳ್ಳುವ ಸಾಧ್ಯತೆ ಇದೆ.
ಇಂತಹ ನೆಲೆಗಳು ಮೊದಲಾಗುವುದು ಕನ್ನಡದಂತಹ ನುಡಿಗಳಿಂದ, ಸಂಸ್ಕೃತ ಇಲ್ಲವೇ ಇಂಗ್ಲಿಶಿನಂತಹ ನುಡಿಗಳು ಹುಟ್ಟುಹಾಕುವ ಮತ್ತೊಂದು ಬಗೆಯ ಅಪಾಯಗಳು ಇವಾಗಿವೆ. ಈ ಪ್ರಕ್ರಿಯೆಯು ಅಧಿಕಾರದ ನಂಟಸ್ತಿಕೆಯ ಬಗೆಗಳ ಸ್ವರೂಪವನ್ನು ಅರಿಯುವ ಬೇರೆ ಬೇರೆ ಮಾದರಿಗಳು ಎಂದು ಹೇಳಬಹುದು. ಹೌದು ಇಂತಹ ಸಾಂಸ್ಕೃತಿಕ ತಿಳವಳಿಕೆಗಳು ಹಾಗೂ ಸಂವೇದನೆಗಳನ್ನು ಯಾವುದೇ ಒಂದು ನುಡಿಯಿಂದ ಪಡೆಯುವುದಕ್ಕೆ ಸಾಧ್ಯವಿಲ್ಲ ಎನ್ನುವ ವಾದಕ್ಕೆ ಅವಕಾಶವೇ ಇಲ್ಲ.
ಏಕೆಂದರೆ ಚರಿತ್ರೆಯುದ್ದಕ್ಕೂ ಇಂತಹ ಬೆಳವಣಿಗೆಗಳು ನಡೆದಿರುವುದಕ್ಕೆ ಪುರಾವೆಗಳಿವೆ. ಅಧಿಕಾರದ ಶ್ರೇಣಿಕರಣದಲ್ಲಿ ಸಂಸ್ಕೃತ ಕನ್ನಡದ ಮೇಲಿದ್ದರೇ, ಕನ್ನಡವು ತುಳು, ಕೊಡವ, ಲಂಬಾಣಿ ನುಡಿಗಳ ಮೇಲಿದೆ. ಇವೆರಡೂ ನುಡಿಗಳು ಯಜಮಾನ್ಯ ನುಡಿಗಳೇ ಆದರೆ ಸಂಸ್ಕೃತ ಮತ್ತು ಕನ್ನಡ ನುಡಿಗಳನ್ನು ಹೋಲಿಸಿದರೆ ಸಂಸ್ಕೃತವು ಯಜಮಾನ್ಯ ನುಡಿಯಾದರೆ ಕನ್ನಡವು ಅಧೀನ ನುಡಿಯಾಗಿರುತ್ತದೆ.
ಇದಕ್ಕೆ ಸಾಕ್ಷಿಯಾಗಿ ಶಲ್ಡನ್ ಪೊಲಾಕ್ ಅವರ ಮಾತುಗಳನ್ನು ಗಮನಿಸಬಹುದು, “ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತ್ರೀಯ ಮನ್ನಣೆ ದೊರಕದೇ ಹೋಗಿದ್ದರೆ ಮತ್ತು ಭಾಷಾಪರಿಶೀಲನೆಯ ಉಪಕರಣಗಳು (ಅಂದರೆ, ಲಕ್ಷಣ ಗ್ರಂಥಗಳು) ಲಭ್ಯವಾಗದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲ್ಲಿ” (ಶೆಲ್ಡನ್ ಪೊಲಾಕ್: 200: ಪುಟ:11). ಎನ್ನುವ ಈ ವಾದಕ್ಕೆ ಯಾವ ಪ್ರಾಮುಖ್ಯತೆ ಇಲ್ಲ ಎನ್ನುವುದು ನಿಚ್ಚಳವಾಗಿದ್ದರೂ, ಈ ವಾದವನ್ನು ನಂಬುವ ಹಾಗೂ ನಂಬಿಸುವ ಬಗೆಗಳು ಅಸ್ತಿತ್ವದಲ್ಲಿವೆ.
ದಿಟ ಇವು ಎಲ್ಲವೂ ಸಾಂಸ್ಕೃತಿಕ ರಾಜಕಾರಣದ ಪರಿಣಾಮಗಳೇ ಎನ್ನುವುದರಲ್ಲಿ ಯಾವ ಅನುಮಾನವಿಲ್ಲ. ಇತಿಹಾಸವನ್ನು ಮತ್ತೆ ಮತ್ತೆ ಮರುಪ್ರಶ್ನಿಸುವ ತಾತ್ವಿಕತೆ ನಿರಂತರ ಮುಂಚೂಣಿಗೆ ಬರುತ್ತಲೇ ಇದೆ. ಕಾರಣ ಇತಿಹಾಸದ ಹೆಚ್ಚಿನ ನಿರೂಪಣೆಗಳು ಏಕಪಕ್ಷೀಯ ತೀರ್ಮಾನದಿಂದ ರೂಪುಗೊಂಡಿರುತ್ತವೆ. ಇಂತಹ ನಿರ್ಧಾರಕ್ಕೆ ಸಾಕಷ್ಟು ಕಾರಣಗಳನ್ನು ಪಟ್ಟಿ ಮಾಡುವ ಪರಿಪಾಟವು ಜೊತೆ ಜೊತೆಗೇನೆ ಬೆಳೆದುಬಂದಿವೆ. ಯಾವುದೆ ಸಮುದಾಯ ಇಲ್ಲವೇ ವರ್ಗದ ಶಿಕ್ಷಣ, ನುಡಿ ಹಾಗೂ ಧರ್ಮದ ಮೇಲೆ ತನ್ನ ಪ್ರಾಬಲ್ಯ ಮತ್ತು ಯಜಮಾನಿಕೆಯನ್ನು ಸಾಧಿಸಿರುವುದೇ ಇದಕ್ಕೆ ಕಾರಣ.
ಪ್ರಭುತ್ವಶಕ್ತಿ ಅಥವಾ ಅಧಿಕಾರ ಕೇಂದ್ರಗಳು ರೂಪಿಸುವ ಸಮಾಜ ವ್ಯವಸ್ಥೆಗೆ ಪ್ರತಿರಚನೆಯಾಗಿ ಮನುಷ್ಯಸಮಾಜದಲ್ಲಿ ಸಾಹಿತ್ಯ ಇಲ್ಲವೇ ಸೃಜನಶೀಲ ಪ್ರಕ್ರಿಯೆಗಳು ಕಾಣಿಸಿಕೊಂಡಿವೆ. ಆದರೆ ಎಲ್ಲ ಪ್ರತಿರಚನೆಗಳೂ ವ್ಯವಸ್ಥೆಯ ಅಂಗವಾಗಿ ರೂಪಗೊಂಡಿದ್ದನ್ನು ನಾವು ಚರಿತ್ರೆಯಲ್ಲಿ ಕಾಣುತ್ತೇವೆ ಎಂಬ ವಾದವು ಮುಂಚೂಣೆಯಲ್ಲಿದೆ. ಈ ವಾದಕ್ಕೆ ಪಂಪ, ರನ್ನ, ಬಸವಣ್ಣ, ಕುಮಾರವ್ಯಾಸ ಮುಂತಾದವರನ್ನು ಸಾಕ್ಷಿಯಾಗಿ ಬಳಸಿಕೊಳ್ಳುತ್ತಾರೆ.
ಕನ್ನಡ ಸೃಜನಶೀಲ ಕ್ರಿಯೆಯಲ್ಲಿ ಅಪನಂಬಿಕೆಯನ್ನು ಹೊಂದಿದವರು ಹೀಗೆ ಮಾತಾಡುತ್ತಾರೆ ಎಂಬ ಮತ್ತೊಂದು ತುದಿಯ ವಾದವು ಚಾಲ್ತಿಯಲ್ಲಿದೆ. ಆದರೆ ಈ ಎಲ್ಲ ಸೃಜನಶೀಲ ಸ್ಪೋಟಗಳು ವ್ಯವಸ್ಥೆಯ ಭಾಗವಾಗಿಯೇ ವ್ಯವಸ್ಥೆ ಮತ್ತು ಅಧಿಕಾರಗಳಿಗೆ ಬಹಳ ಸೃಜನಾತ್ಮಕವಾಗಿ ಪ್ರತಿರೋಧವನ್ನು ಒಡ್ಡಿರುವುದನ್ನು ಅಲ್ಲಗಳಿಯುವಂತಿಲ್ಲ. ಈ ಸೃಜನಾತ್ಮಕ ಪ್ರತಿಕ್ರಿಯೆಗಳು ಕನ್ನಡದ ದೇಸಿ ಪ್ರಜ್ಞೆಯನ್ನು ರೂಪಿಸುವಲ್ಲಿ ಮತ್ತು ಅದನ್ನು ನಿರಂತರವಾಗಿ ಕಾಪಾಡುವಲ್ಲಿ ಎಂತಹ ಮಹತ್ವದ ಪಾತ್ರವನ್ನು ವಹಿಸಿರುತ್ತವೆ ಎಂಬುದು ಗಮನಾರ್ಹ.
“ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೊಳೆ ತಳ್ವದು” ಇಂತಹ ಅನೇಕ ನಿಲುವುಗಳನ್ನು ಪರಸ್ಪರ ವೀರೋಧಾತ್ಮಕ ನಂಟಿನ ಬಗೆಗಳನ್ನಾಗಿ ನಮ್ಮ ಪ್ರಾಚೀನ ಕಾವ್ಯಗಳ ಓದಿನ ಸನ್ನಿವೇಶದಲ್ಲಿ ಚರ್ಚಿಸಲಾಗಿದೆ. ಇಲ್ಲವಾದರೆ ಸಂಸ್ಕೃತ ಮಹಾಕಾವ್ಯಗಳ ಅನುವಾದವೇ ಈ ಕನ್ನಡ ಕಾವ್ಯವೆನ್ನುವ ಉಡಾಫೆಯ ನಿಲುವುಗಳು ಮುಂಚೂಣೆಗೆ ಬಂದಿವೆ. ಕನ್ನಡತನ ಅನ್ನುವುದು ಅದೊಂದು ವಸ್ತುವಿನ ಚಹರೆಯಲ್ಲಿರುವಂತಹ ಸಂಗತಿಯಲ್ಲ. ಬದಲಾಗಿ ಅನುಭವಗಳ ಮೊತ್ತವನ್ನು ಇಡಿಯಾಗಿ ನಿರೂಪಿಸುವ ಇಲ್ಲವೇ ದೇಶಿಯ ಚಹರೆಗಳ ಸ್ವರೂಪದಲ್ಲಿ ಪ್ರಕಟಗೊಳ್ಳಿಸುವ ಬಗೆಗಳೂ ಆಗಿರುತ್ತವೆ.
ಹಾಗಾಗಿ ಸಾಂಸ್ಕೃತಿಕ ಬೆಳವಣಿಗೆಗಳನ್ನು ಕೇವಲ ಅಂತರ್-ವಿರೋಧ ನೆಲೆಗಳಲ್ಲಿ ಗ್ರಹಿಸದೇ, ಅವುಗಳನ್ನು ಸಾಂಸ್ಕೃತಿಕ ರಾಜಕಾರಣದ ಪ್ರತಿರಚನೆಗಳಾಗಿ ಅಭಿವ್ಯಕ್ತಗೊಂಡ ಕನ್ನಡದ ಅಸ್ಮಿತೆಯ ರೂಪಗಳು ಎಂದು ಅರಿಯಬೇಕಾದ ಜರೂರಿದೆ. ಇಂತಹ ಸಾಂಸ್ಕೃತಿಕ ಅರಿವನ್ನು ಹಾಗೂ ಸಾಂಸ್ಕೃತಿಕ-ಭಾಷಿಕ ಪ್ರತಿರಚನೆಗಳನ್ನಾಗಿ ಗುರುತಿಸದ ಕುರುಡುತನ ನಮಗೆ ಕವಿದುಕೊಂಡಿರುವುದೇ ಸಂಸ್ಕೃತ ನುಡಿಯ ರಾಜಕಾರಣದಿಂದಲೇ ಎಂದು ಹೇಳಬಹುದು.
ಕನ್ನಡದ ಅಸ್ಮಿತೆಯ ರೂಪಕವನ್ನಾಗಿಯೇ
ಗುರುತಿಸುವ ಕವಿರಾಜಮಾರ್ಗದ ಬಗೆಗಿನ ಊಹಾಪೋಹಗಳನ್ನು ಗಮನಿಸಿದರೆ ಸಂಸ್ಕೃತ ನುಡಿಯು ನೆಲೆಗೊಳಸಿದ ಸಾಂಸ್ಕೃತಿಕ ರಾಜಕಾರಣದ ಪ್ರಭಾವ ಎಷ್ಟೊಂದು ದಟ್ಟವಾಗಿತ್ತೆಂಬುದು ತಿಳಿಯುತ್ತದೆ. ಹಾಗಾಗಿ “ಕವಿರಾಜಮಾರ್ಗವೆಂಬ ಲಕ್ಷಣಗ್ರಂಥವು ಸಂಸ್ಕೃತ ಸಾಹಿತ್ಯ ಹಾಗೂ ಕಾವ್ಯಮೀಮಾಂಸೆಯ ತಿಳುವಳಿಕೆಯಿಂದ ರಚಿತವಾದ ಕೃತಿ ಎಂಬುದನ್ನು ನೆನಪಿಸಿದರೆ, ಕನ್ನಡ ಸಾಹಿತ್ಯದ ಮೊದಲ ಕಾಲ, ದಟ್ಟವಾದ ಸಂಸ್ಕೃತದ ಪ್ರಭಾವಕ್ಕೆ ಒಳಗಾದ ಕಾಲವಾಗಿತ್ತೆಂದು ಸ್ಪಷ್ಟವಾಗುತ್ತದೆ” (ಎಸ್.ಶೆಟ್ಟರ್: ಶಂತಕನಾನು: 2007:ಪು:3).
ಇಂತಹ ಪ್ರಭಾವಗಳಿಂದ ಬಿಡುಗಡೆ ಪಡೆಯಲು ಕನ್ನಡ ನಡೆಸಿದ ಹೋರಾಟಗಳು ಕನ್ನಡ ಬೆಳೆದುಬಂದ ಬಗೆಯಯನ್ನು ಬಿಡಿಸಿನೋಡಿದರೆ, ಕನ್ನಡದ ಕಸುವು ಹಾಗೂ ಸೃಜನಶೀಲತೆಯ ಆಯಾಮಗಳು ಯಾವೆಲ್ಲ ಬಿಕ್ಕಟ್ಟುಗಳನ್ನು ಮೀರಿ ನೆಲೆಗೊಳ್ಳುತ್ತ ಬಂದಿದೆ ಎಂಬ ದಿಟ ನಮ್ಮರಿವಿಗೆ ಬರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ನೆಲದನಿ
ನುಡಿ ನಿಲುವುಗಳನ್ನು ತಾತ್ವಿಕಗೊಳಿಸಿದ ಬಗೆಗಳು

- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಕೇಶರಾಜನು ಸಂಸ್ಕೃತ ವರ್ಣಮಾಲೆಯ ಆಕಾರಾದಿಯನ್ನೇ ಮೊದಲು ಹೇಳಿ, ನಂತರ “ನಾಲ್ವತ್ತೇಲಾಯ್ತಳೆ ಅಚ್ಚಗನ್ನಡದ ಶುದ್ಧಗೆ” ಎಂದು ನಿರ್ಣಯಿಸುತ್ತಾನೆ. ಇದು ಕೂಡ ಕನ್ನಡ ನುಡಿಯ ತಾತ್ವಿಕತೆಯನ್ನು ನಿರ್ಣಯಿಸಲಾರದೆಂಬುದು ಗಮನಾರ್ಹ. ಕೇಶಿರಾಜನ ಈ ನಿರ್ಧಾರವನ್ನೇ ಕನ್ನಡದ ಮೌಲ್ಯ ನಿರ್ಧಾರವೆಂದು ತಪ್ಪಾಗಿ ಭಾವಿಸಿದುಂಟು.
ಯಾಕೆಂದರೆ, ಇಲ್ಲಿ ಕೇಶಿರಾಜ ಕೇವಲ ಸಂಸ್ಕೃತ ಕನ್ನಡ ವರ್ಣಮಾಲೆಯನ್ನು ವರ್ಗೀಕರಿಸುತ್ತಾನೆ ಹೊರತು ಅವುಗಳ ನಡುವಿನ ವ್ಯಾಕರಣದ ಮೂಲತತ್ವಗಳನ್ನು ವಿವರಿಸುವುದಿಲ್ಲ. “ಒಳವು ಮಹಪ್ರಾಣಂಗಳ್ ವಿಳಸತ್ಕರ್ಣಾಟ ಭಾಷೆಯೋಳ ಕೆಲವು ನಿಜೊಜ್ಜಳಮಾಗಿ” ಎನ್ನುವ ಮಾತುಗಳು, ಮಾಹಾಪ್ರಾಂಗಳು ಕನ್ನಡದಲ್ಲವೊಂದೂ ಪ್ರಾಕೃತ, ಸಂಸ್ಕೃತ ಮೂಲದಿಂದ ಬಂದವುವೆಂದು ವಿವರಿಸುತ್ತ, ಕನ್ನಡ ಭಾಷೆಯು “ಬೇಳ್ಪದ ಕೈವೊಕ್ಕ ನಿಧಿ” ಎಂದು ಶ್ಲಾಘಿಸುತ್ತಾನೆ.
ಕಾರಣ ಕನ್ನಡ ನುಡಿಯು ಯಾವುದೆ ಮಡಿ ಮೈಲಿಗೆಯ ಕಟ್ಟು ಪಾಡುಗಳನ್ನು ಆಚರಿಸುವ ಜಾಯಮಾನದಲ್ಲವೆಂಬ ಕೇಶಿರಾಜನ ಅಭಿಪ್ರಾಯ ನಿಜವಾದರೂ, ಕನ್ನಡ ವ್ಯಾಕರಣಕ್ಕೆ ಸಂಸ್ಕೃತ ಮಾದರಿ ಅಗತ್ಯವಲ್ಲವೆಂಬುದು ವೇಧ್ಯವಾಗದೇ ಹೋಗಿದೆ. ಈ ಧೋರಣೆಯೇ ಕೇಶಿರಾಜನಿಗೆ ಕ್ರಿಯಾಸಮಾಸ, ಸಮಸಂಸ್ಕೃತ, ಅರಿಸಮಾಸ, ಮಹಾಪ್ರಾಣ, ಸಂಸ್ಕೃತ ಸಂಧಿಗಳನ್ನು ಯತೇಚ್ಛವಾಗಿ ಕನ್ನಡಕ್ಕೆ ಒಗ್ಗಿಸಿಕೊಂಡು ಇದು ಕನ್ನಡದ ವಿವರಣಾತ್ಮಕ ವ್ಯಾಕರಣವೆಂಬ ಹೆಗ್ಗಳಿಕೆಯನ್ನು ಮೂಡಿಸಿದ್ದಾನೆ.
“ವ್ಯವಹರಿಪುವೆರಡು ರೂಪಿಂದವಕ್ಕರಂ” ಬರಹ ಮತ್ತು ಉಚ್ಚಾರಣೆಯ ನಡುವಿನ ನಂಟಸ್ತಿಕೆಯನ್ನು ಕುರಿತ ಈ ಉಲ್ಲೇಖ ಅಂತರ್-ವಿರೋಧದಿಂದ ಕೂಡಿದೆ ಎನ್ನುವುದು ದಿಟ. ಕನ್ನಡನುಡಿ ಬದಲಾವಣೆ ಕುರಿತ ವಿವರಗಳನ್ನು ನಿಗಾಯಿಟ್ಟು ಪತ್ತೆಹಚ್ಚಿ ನೋಡಿದರೆ, ನುಡಿ ಬದಲಾವಣೆಯ ಹಿಂದಿನ ಪ್ರಭಾವ ಹಾಗೂ ಪ್ರೇರಣೆ ಅರ್ಥವಾಗದೇ ಇರಲಾರದು. ಸಂಸ್ಕೃತವನ್ನು ಸಮಸಂಸ್ಕೃತ ಮತ್ತು ತದ್ಬವ ರೂಪಗಳಲ್ಲಿ ಕನ್ನಡಕ್ಕೆ ಒಗ್ಗಿಸಿಕೊಳ್ಳುವ ಒಪ್ಪಂದದ ಧೋರಣೆ, ಸಂಸ್ಕೃತ ಮತ್ತು ಸಮಸಂಸ್ಕೃತಗಳನ್ನು ಕನ್ನಡದಲ್ಲಿ ಸಮಾಸವಾಗಿಸದೇ ವಿರೋಧಿಸುವ ಜೈನರು, ತಮ್ಮ ಧೋರಣೆಗಳಲ್ಲಿ ಜೈನರ ವೇದನೆ ಹಾಗೂ ಸಂವೇದನೆ ಎದ್ದು ಕೇಳಿಸುತ್ತವೆ.
ಒಟ್ಟಿನಲ್ಲಿ ತಮ್ಮ ರಕ್ತವೆಂದು ಭಾವಿಸಿದ್ಧ ಕನ್ನಡದ “ರಕ್ತಶುದ್ಧಿ” ಸಂಸ್ಕೃತದ ಬಳಕೆಯಿಂದ ಹಾಳಾಗುವುದೆಂಬ ಭೀತಿ ಇವರಿಗೆ ಮಾತ್ರವಲ್ಲ, ಇಂತಹ ಸಂವೇದನೆಯನ್ನು ರೂಪಿಸಿಕೊಂಡ ಪ್ರತೀ ಕನ್ನಡ ನುಡಿಯಿಗರಿಗೂ ಅನ್ನಿಸುತ್ತದೆ.
ಉದಾ;
“ಪಗನ್ನಡಂ ಪುದುಂಗೊಳೆ
ಕೊಂಸಕ್ಕದಮಂ ತಗುೞ್ಜಿ ಜಾಣ್ಕಿಡೆ ಮುತ್ತುಂ
ಮೆಸುಂ ಕೋದಂತಿರೆ ಪೇಳ್ವಂಗವಿಗಳ ಬುದನರನೆರ್ದೆಗೊಳಿಸುಗುಮೇ ||”-[ನಾಗರ್ಮನ ಕಾವ್ಯಾವಲೋಕನ]
“ಸಕ್ಕದಮಂ ಪೇಂಳ್ವಡೆ ನೆರೆ
ಸಕ್ಕದಮಂ ಪೇೞ್ಗಿ ಸುದ್ಧಗನ್ನಡದೊಳ್ ತಂ
ದಿಕ್ಕುವುದೆ ಸಕ್ಕದಮಂ
ತಕ್ಕುವುದೆ ಬೆರಸಲ್ಕೆ ಘೃತಮುಮಂ ತೈಲಮುಮಂ ||”- [ನಯಸೇನನ ರ್ಮಮ್ರುತ]
ದಿಟ ಜೈನ ಕವಿಗಳು ಕನ್ನಡದ ಅರಿವಿನ ಲೋಕವನ್ನು ಹಿಗ್ಗಿಸಿ ಅದಕ್ಕೊಂದು ಸಾಮುದಾಯಿಕ ಗುರುತನ್ನು ಒದಗಿಸಿಕೊಟ್ಟರು. ಈ ಗುರುತುಗಳಲ್ಲಿಯೇ ಸಂಸ್ಕೃತದ ಹೆಜ್ಜೆಗುರುತುಗಳನ್ನು ಹುಡುಕುವ ಧೋರಣೆಯು ನೆಲೆಗೊಂಡಿದೆ. ಹೀಗೆ ನೋಡುವ ಪರಿಪಾಟದಿಂದ ಕನ್ನಡದ ಗುರುತುಗಳ ಬಗೆಗೆ ಗೊಂದಲವನ್ನು ಉಂಟುಮಾಡುವ ಕ್ರಮಗಳೂ ಮುಂಚೂಣೆಗೆ ಬಂದವು. ಇಂತಹದೇ ಇನ್ನೊಂದು ಬಗೆಯ ಜಿಗಿತವನ್ನು ವಚನಕಾರರಲ್ಲಿಯೂ ನೋಡಬಹುದು.
ವಚನ ಸಾಹಿತ್ಯದಲ್ಲಿರುವ ಸಾಂಸ್ಕೃತಿಕ ಹಾಗೂ ರಾಜಕೀಯ ಬಿಕ್ಕಟ್ಟುಗಳೊಂದಿಗೆ ಆ ಕಾಲಘಟ್ಟ ರೂಪಿಸಿಕೊಂಡ ಕನ್ನಡದ ಸವಾಲುಗಳನ್ನು ಎದುರಿಟ್ಟುಕೊಂಡು ನೋಡಿದರೂ ಕನ್ನಡದ್ದೇ ಗುರುತುಗಳಿವು ಎಂದು ಗುರುತಿಸಬಹುದು. ವಚನಕಾರರು ಮಡಿವಂತಿಕೆಯ ಬೇಲಿಯನ್ನು ದಾಟಿ ಜನಸಾಮಾನ್ಯರ ಅರುವಿಗೆಟಕುವ ಪರಿಭಾಷೆಯನ್ನು ಆಡುನುಡಿ ಕನ್ನಡದಲ್ಲಿ ಕಸಿ ಮಾಡಿದ ಬಗೆ ಬಹಳ ಮಹತ್ವದ್ದು ಎಂದೇ ಹೇಳಬೇಕು.
ಭಾಷಾ ಶುದ್ಧತೆ ಎನ್ನುವುದು ಇವರಿಗೆ ಯಾವತ್ತು ಸಮಸ್ಯೆ ಅನ್ನಿಸಲಿಲ್ಲ. ಹಾಗಾಗಿ ವಚನ ಸಾಹಿತ್ಯದಲ್ಲಿ ನುಡಿ ಬೆರಕೆ, ನುಡಿ ಜಿಗಿತ ಮತ್ತು ಹೈಬ್ರಿಡೈಜೇ಼ಶನ್ನ ಪ್ರಕ್ರಿಯೆಯು ಧಾರಾಳವಾಗಿ ನಡೆದಿದೆ. ಎತ್ತುಗೆಗಾಗಿ “ಬತ್ತೀಸರಾಗವ ಹಾಡಯ್ಯ”, “ಇದಕಾರಂಜುವರು ಇದಕಾರಳಕುವರು ಜಾತಸ್ಯಂ ಮರಣಂ ಧ್ರವಂ ಎಂಬುದಾಗಿ” ಮುಂತಾದವುಗಳನ್ನು ಕಾಣಬಹುದು. ಈ ಭಾಷಿಕ ಧೋರಣೆ ಕನ್ನಡದ ಅಸ್ಮಿತೆ ಹಾಗೂ ನಿರ್ದಿಷ್ಟತೆಯನ್ನು ಕಾಯ್ದುಕೊಂಡಿದ್ದಕ್ಕೆ ಇವೇ ಸಾಕ್ಷಿಗಳು.
ಕನ್ನಡದ ರಾಚನಿಕ ಮತ್ತು ಸಾಂಸ್ಕೃತಿಕ ಸಾಧ್ಯತೆಯನ್ನು ವಿಸ್ತರಿಸಿರುವ ಮಾದರಿಗಳು ಅನನ್ಯ ಇವುಗಳು ನುಡಿ ಉಚ್ಚಾರಣೆಯ ನಡುವಿನ ಕಂದರವನ್ನು ಮೀರುವ ಹಾಗೂ ಮೀರಿದ ಸಾಧ್ಯತೆಗಳನ್ನಾಗಿ ಕಾಣಬಹುದು. ಅದೇ ಸಮಯಕ್ಕೆ ಇವರು ಸಾಮಾಜಿಕತೆ ಮತ್ತು ಭಾಷಿಕ ಅಸ್ಪೃಶ್ಯತೆ ಪ್ರಶ್ನೆ ಎದುರಾದಾಗ, ಮತ್ತು ಸಂಸ್ಕೃತವು ಶೋಷಣೆಯ ಮಾಧ್ಯಮವಾದಾಗ ಸಂಸ್ಕೃತವನ್ನು ನಿರ್ಧಾಕ್ಷಣ್ಯವಾಗಿ ತಿರಸ್ಕರಿಸಿದ ನಿದರ್ಶನಗಳೂ ಇಲ್ಲಿ ಎದ್ದು ಕಾಣುತ್ತವೆ.
ಉದಾ:
“ಕಲ್ಲಿಯ ಹಾಕಿ, ನೆಲ್ಲವ ತಳೆದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ
ವಾಗದ್ವೆöತವ ಕಲಿತು
ಸಂಸ್ಕೃತದ ಮಾತಿನ ಪಸರವ
ಮುಂದಿಟ್ಟುಕೊಂಡು
ಮತ್ಸöನ ವಕ್ತೃದಲ್ಲಿ ಗ್ರಾಸ ಹಾಕುವನಂತೆ
ಅದೇತರ ನುಡಿ? ಮಾತಿನ ಮರೆ, ಆತುರವೈರಿ ಮಾರೇಶ್ವರಾ” [ನಗೆಯ ಮಾರಿತಂದೆ]
ಈ ವಚನದ ‘ಆದೇತರ ನುಡಿ’ಯು ಸಂಸ್ಕೃತ ನುಡಿಯ ಪ್ರಾಬಲ್ಯ ಮತ್ತು ಶೋಷಣೆಯ ಧೋರಣೆಯನ್ನು ಉಪೇಕ್ಷಿಸುವ ಸೂಚಕವಾಗಿದೆ. ನುಡಿಗಳನ್ನು ಆಡುವ ಸಮುದಾಯಗಳು ಚರಿತ್ರೆಯಲ್ಲಿ ಅನುಭವಿಸಿದ ಏರು ಪೇರುಗಳು ಆಯಾ ಭಾಷೆಗಳ ಮೇಲೆ ಹೇಗೆಲ್ಲ ಪರಿಣಾಮ ಬೀರಿರುತ್ತವೆ ಅನ್ನುವುದನ್ನೂ ಇಲ್ಲಿ ಕಾಣಬಹುದು “ಪ್ರಬಲ ಅಧಿಕಾರವುಳ್ಳ ಸಮುದಾಯದ ಭಾಷೆಗೆ ಮೊದಲು ಮಣೆ ದೊರಕುತ್ತದೆ.
ಹತ್ತು ಹಲವು ಬಗೆಗಳಲ್ಲಿ ಆ ಭಾಷೆ ಬಳಕೆಯಾಗುತ್ತದೆ, ಬೆಳೆಯುತ್ತದೆ. ಬದಲಾದ ಸನ್ನಿವೇಶದಲ್ಲಿ ಅಧಿಕಾರದ ಹಸ್ತಾಂತರವಾದಾಗ ಬೇರೊಂದು ಭಾಷೆಗೆ ಆ ಮನ್ನಣೆ ಒದಗುವುದು. ಸಂಸ್ಕೃತ, ಪರ್ಶಿಯನ್, ಅರಾಬಿಕ್ ಮತ್ತು ಇಂಗ್ಲಿಷ್ ಭಾಷೆಗಳು ಭಾರತದ ಚರಿತ್ರೆಯಲ್ಲಿ ಪಡೆದ ಮನ್ನಣೆಗಳನ್ನು ಗಮನಿಸಿದರೆ ಭಾಷೆಯ ಶ್ರೇಷ್ಠತೆಗೂ ಅದರಿಂದ ಅದಕ್ಕೆ ಒದಗುವ ಮನ್ನಣೆಗೂ ಸಾಮಾಜಿಕ-ರಾಜಕೀಯ ಸಂದರ್ಭಗಳಿಗೂ ಸಂಬಂಧ ಗೋಚರವಾಗುತ್ತದೆ.
ಅಲ್ಲದೆ ಆಯಾ ಭಾಷೆಯು ಪಡೆದ ಮನ್ನಣೆಗೆ ಅದರ ಅಂತರ್ಗತ ಲಕ್ಷಣಗಳಷ್ಟೇ ಕಾರಣವಲ್ಲವೆಂಬುದೂ ತಿಳಿಯುತ್ತದೆ. (ಕೆವಿಎನ್: ವಿಕೋ: 2000:ಪು-8)”. ಚಾರಿತ್ರಿಕ ಕಾರಣಗಳಿಂದ ಕೆಲವು ಭಾಷೆಗಳು ವಿಶೇಷ ಅವಕಾಶ, ಸೌಲಭ್ಯಗಳನ್ನು ಪಡೆದು ಉಳಿದ ಭಾಷೆಗಳಿಗಿಂತ ಶ್ರೇಷ್ಠವೆಂಬ ಜನನಂಬಿಕೆಯ ಮನ್ನಣೆಯನ್ನು ಪಡೆದಿವೆ. ಅಂದರೆ, ಈ ಶ್ರೇಷ್ಠತೆಯನ್ನು ನಿರ್ಧರಿಸಲು, ಗ್ರಹಿಸಲು ಭಾಷಾಶಾಸ್ತ್ರೀಯವಾದ ಯಾವ ಮಾನದಂಡವೂ ಈಗ ಲಭ್ಯವಿಲ್ಲ (ಅದೇ) ಭಾಷೆಯು ಸಾಂಸ್ಕೃತಿಕ ಸನ್ನಿವೇಶದ ಅಂಗವೇ ಆಗಿರುವುದರಿಂದ ಸಾಮಾಜಿಕ ಭಾಷಾಶಾಸ್ತ್ರೀಯ ಒಳನೋಟಗಳನ್ನು ಈ ಚರ್ಚೆಗಳ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ.
ಚರಿತ್ರೆಯ ಪ್ರತಿಯೊಂದು ಘಟ್ಟದಲ್ಲಿಯೂ ಪ್ರಭಾವಶಾಲಿಯಾದ ಒಂದು ಭಾಷೆಯ ಮುಂದಾಳುತನ/ಪ್ರಾಬಲ್ಯವನ್ನು (ಹೆಜಿಮೊನಿ) ಮರುಪರಿಶೀಲಸಬೇಕಿದೆ. ಕನ್ನಡವು ತನ್ನ ಭಾಷಿಕ ‘ರೂಪ’ ಮತ್ತು ‘ನಿರ್ದಿಷ್ಟತೆಯನ್ನು’ ರೂಪಿಸಿಕೊಳ್ಳುವಾಗ ಸಂಸ್ಕೃತ ಭಾಷೆಯ ಮುಂದಾಳುತನದ ಕಾರಣದಿಂದಲೇ ಕನ್ನಡವು ಸಂಸ್ಕೃತ ನುಡಿಯ ನಿರ್ದಿಷ್ಟತೆ ಮತ್ತು ರೂಪನಿಷ್ಠ ಆಕೃತಿಯನ್ನು ಅನುಸರಿಸಬೇಕಾಯ್ತು ಎಂಬ ಸಮಜಾಯಿಸಿ ಕೊಡುವ ರೂಢಿಗಳು ಬೆಳೆದು ಬಂದಿವೆ.
ಒಂದು ಪ್ರಾದೇಶಿಕ ನುಡಿಯ ಅಸ್ಮಿತೆಯ ನಿರ್ಮಾಣದ ಹಂತದಲ್ಲಿ ತನ್ನ ‘ರೂಪ’ ಮತ್ತು ‘ನಿರ್ದಿಷ್ಟತೆ’ಯನ್ನು ಕಂಡುಕೊಳ್ಳುವ ಮಾದರಿ ದಿಕ್ಕುತಪ್ಪಿ ಸಂಸ್ಕೃತದ ಆವರಣದಲ್ಲಿ ಸಿಕ್ಕಿಕೊಂಡಿದೆ ಎಂಬ ದಿಟವನ್ನೂ ಇಲ್ಲಿ ಕಾಣಬಹುದು. ಇದರ ಫಲಿತಗಳು ಕನ್ನಡದ ಬರಹ, ಸಂಪ್ರದಾಯ, ನಂಬಿಕೆ, ಆಚರಣೆ, ಪುರಾಣ, ಪುರಾಣಿಮೆ, ಐತಿಹ್ಯಗಳು ಸಂಸ್ಕೃತೀಕರಣಗೊಂಡಿವೆ.
ಇವತ್ತಿಗೂ ಸಂಸ್ಕೃತದ ಕಪಿಮುಷ್ಠಿಯಿಂದ ಕನ್ನಡ ಹೊರಬರಲಿಕ್ಕೆ ಆಗಿಲ್ಲ. ಇಂತಹ ಮಾದರಿಗಳಿಗೆ ಪರ್ಯಾಯ ಮಾದರಿಗಳನ್ನು ಅಂದರೆ, ಕನ್ನಡದ್ದೇ ಮಾದರಿಗಳನ್ನು ರೂಪಿಸುವ ಡಿ.ಎನ್.ಎಸ್.ಭಟ್ ಹಾಗೂ ಕೆವಿಎನ್ ಅವರ ಆಲೋಚನಾ ಮಾದರಿಗಳನ್ನು ಈಗಾಗಲೇ ಚರ್ಚಿಸಿದಂತೆ ಕನ್ನಡದ ವಿರೋಧಿ ನೆಲೆಗಳಾಗಿ ರೂಪಿಸುವ ಹುನ್ನಾರವೂ ಇವತ್ತು ನಡೆದಿದೆ.
ಕನ್ನಡಕ್ಕೆ ಸಂಸ್ಕೃತ ಎಷ್ಟರಮಟ್ಟಿಗೆ ಅನಿವಾರ್ಯ ಎನ್ನುವುದನ್ನು ಕುರಿತು ಆಲೋಚಿಸಲಿಕ್ಕೆ ಅವಕಾಶವನ್ನೇ ಕೊಡದ ‘ಸಂಸ್ಕೃತ ಪರ ವಿದ್ವಾಂಸರ’ ಪಡೆ ನಿರಂತರ ಕ್ನನಡದ ‘ಪರನೋ-ವಿರೋಧನೋ’ ಎನ್ನುವ ಭಾಷಿಕ ಸಾಂಸ್ಕೃತಿಕ ವೈರುಧ್ಯ ಮತ್ತು ಅಪಾಯವನ್ನು ಹುಟ್ಟಿಸಿದ್ದಾರೆ. ರಾಷ್ಟçಪ್ರಭುತ್ವವು ಕನ್ನಡವನ್ನು, ನೇರವಾಗಿ ಸಂಸ್ಕೃತದ ಅಂಕೆಗೆ ತಂದುಕೊಂಡು, ತಮ್ಮ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಅವಿರತ ಪ್ರಯತ್ನ ಮಾಡುತ್ತವೆ ಎನ್ನುವ ‘ಸಾಮಾಜಿಕ ಸಮ್ಮತಿ’ಯು ಕನ್ನಡದ ಸ್ವಂತಿಕೆ ಮತ್ತು ಅನನ್ಯತೆಯ ನಿರ್ಮಾಣದ ಕುಗ್ಗುವಿಕೆಗೆ ಕಾರಣವಾಗಿವೆ.
ಭಾಷಾನೀತಿ ಎನ್ನುವುದು ಯಾವಾಗಲೂ ತಾರತಮ್ಯದ ನೆಲೆಯಿಂದಲೇ ಕೂಡಿದೆ. ಪ್ರಭುತ್ವದ ಭಾಷಾ ನೀತಿ ಮತ್ತು ಸಾಮಾನ್ಯ ಜನರ ಭಾಷಾ ಬಳಕೆಯ ನಡುವೆ ಒಂದು ಸಂಘರ್ಷದ ನೆಲೆ ಇದ್ದೆ ಇರುತ್ತೆ. ಈ ಸಂಘರ್ಷವು ಪ್ರಭುತ್ವ ಮತ್ತು ಸಾಮಾನ್ಯರ ನಡುವಿನ ಅಂತರವನ್ನು ನಿರಂತರವಾಗಿ ಗೋಚರಿಸುತ್ತಲೇ ಬಂದಿರುವುದನ್ನು ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನೋಡುತ್ತೇವೆ. ಇಂತಹ ಸಾಂಸ್ಕೃತಿಕ ವ್ಯಂಗ್ಯಕ್ಕೆ ಏನೆಂದು ಹೇಳಬೇಕು? ಭಾಷಿಕ ನಿಲುವುಗಳು ಈ ಬಗೆಯ ಸಾಂಸ್ಕೃತಿಕ ಹುನ್ನಾರಕ್ಕೆ ಬಲಿಪಶುವಾಗುವುದನ್ನು ಹೇಗೆ ತಪ್ಪಿಸಬೇಕು ಎನ್ನುವುದನ್ನು ನಾವೆಲ್ಲ ಯೋಚಿಸುವ ಅಗತ್ಯವಿದೆ ಎಂದು ಮಾತ್ರ ಹೇಳಿದರೆ ಸಾಲದು!
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ ಸಾವಿತ್ರಿಬಾಯಿ ಫುಲೆ..!

ಎಲ್ಲರಿಗೂ ಅಕ್ಷರದವ್ವನ ಜನುಮ ದಿನಾಚರಣೆಯ ಶುಭಾಶಯಗಳು
- ಸುರೇಶ ಎನ್ ಶಿಕಾರಿಪುರ
ಭಾರತದ ಇತಿಹಾಸದಲ್ಲಿ ಜ್ಯೋತಿಬಾ ಸಾವಿತ್ರಿಬಾಯಿ ಫುಲೆ ದಂಪತಿಗಳದ್ದು ಒಂದು ಅನನ್ಯ ದಾಂಪತ್ಯ. ಅತ್ಯಂತ ಚಿಕ್ಕವಯಸ್ಸಿನ ಹುಡುಗಿ ಸಾವಿತ್ರಿ ಬಾಲ್ಯವಿವಾಹದ ಬಲೆಗೆ ಬಲಿಯಾಗಿ ತನ್ನ ಎಂಟನೇ ವಯಸ್ಸಿನಲ್ಲಿ ಜ್ಯೋತಿಬಾ ಫುಲೆಯವರನ್ನು ಕೈ ಹಿಡಿಯಬೇಕಾಗಿ ಬಂತು. ಬಹುಷಃ ಆಕೆ ಜ್ಯೋತಿಬಾ ಅವರನ್ನಲ್ಲದೇ ಬೇರಾವುದೋ ಪುರುಷನನ್ನು ಮದುವೆಯಾಗಿದ್ದರೆ ಈ ದೇಶದ ಸಂಪ್ರದಾಯವಾದಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಆಕೆ ಹೇಳಹೆಸರಿಲ್ಲದಂತೆ ಕಣ್ಮರೆಯಾಗಿಹೋಗುತ್ತಿದ್ದಳು.
ಆಕೆ ಖಂಡಿತವಾಗಿಯೂ ಕೈ ಹಿಡಿದದ್ದು ತನ್ನನ್ನು ಬೆಳಕಿನೆಡೆಗೆ ಕರೆದೊಯ್ಯುವ ತೇಜಸ್ವೀ ಪುರಷನನ್ನು. ಆರ್ಧ್ರ ಹೃದಯಿಯೂ ಮಾನವೀಯನೂ ವಿವೇಕಿಯೂ ಆಗಿದ್ಧ ಜ್ಯೋತಿಬಾ ಫುಲೆ ಎಂಬ ಪ್ರಬುದ್ಧ ಯುವಕ ತಾನು ಸಂಸಾರವೆಂದರೇನು ದಾಂಪತ್ಯವೆಂದರೇನು ಎಂಬ ಬಗ್ಗೆ ಕಲ್ಪನೆಗಳೇ ಇಲ್ಲದ ಆಡಿ ಕುಣಿದು ಬಾಲ್ಯದ ಸುಖಗಳನ್ನು ಅನುಭವಿಸಬೇಕಾಗಿದ್ದ ಎಳೆಯ ಬಾಲೆಯನ್ನು ತಾನು ಮದುವೆಯಾಗಬೇಕಾಗಿ ಬಂದುದಕ್ಕಾಗಿ ಮಮ್ಮಲ ಮರುಗಿದ್ದ ಚಿಂತೆಗೆ ಬಿದ್ದಿದ್ದ ತಾನು ತಪ್ಪಿತಸ್ಥನಲ್ಲದಿದ್ದರೂ ಈ ಪುರುಷಾಧಿಕ್ಯದ ಪಾಪದ ಕೃತ್ಯಕ್ಕೆ ತಾನೂ ಬಲಿಯಾದವನೆಂಬ ಅರಿವು ಆತನಿಗಿದ್ದೇ ಇತ್ತು.
ತನ್ನ ಮಡದಿಯನ್ನು ಆತ ಸಂಸಾರದ ಕೋಟಲೆಗಳಿಗೆ ದಾಂಪತ್ಯದ ಆಕರ್ಷಣೆಗಳಿ ಬಲಿಹಾಕದೇ ಅವಳ ಉದ್ಧಾರಕ್ಕಾಗಿ ಫಣತೊಟ್ಟ. ತನ್ನ ಮುದ್ದು ಹೆಂಡತಿಗೆ ಸ್ವತಃ ಶಿಕ್ಷಣವನ್ನು ನೀಡತೊಡಗಿದೆ. ಕಲಿಕೆಯಲ್ಲಿ ಗಾಂಭೀರ್ಯ ಕಾರುಣ್ಯ ಪ್ರೇಮ ದೂರದೃಷ್ಟಿ ದಿಟ್ಟ ನಿಲುವು ಎಲ್ಲವೂ ಇದ್ದವು. ಹೆಣ್ಣು ಕಲಿತೇ ಕಲಿತಳು ಕಲಿತು ಕಲಿಸುವವಳಾಗಿ ರೂಪುತಳೆದಳು. ಜ್ಯೋತಿಬಾ ಆಕೆಯನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೇರೇಪಿಸಿದರು. ಸಾವಿತ್ರಿಬಾಯಿ ಮಿಚೆಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕ ತರಭೇತಿ ಶಿಕ್ಷಣವನ್ನೂ ಪಡೆದಳು.
ಭಿಡೆ ಎಂಬುವವರ ಮನೆಯಲ್ಲಿ ಆರಂಭವಾದ ಹೆಣ್ಣುಮಕ್ಕಳ ಶಾಲೆಯಲ್ಲಿ ಆಕೆ ಮುಖ್ಯೋಪಾಧ್ಯಾಯಿನಿ ಆದಳು. ಹೆಣ್ಣೊಬ್ಬಳು ಶಿಕ್ಷಕಿಯಾಗುವುದು ಶಿಕ್ಷಣ ನೀಡುವುದು ಹಾಗೂ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಅಂದಿನ ಪುರುಷ ಪ್ರಧಾನ ಜಾತಿ ವ್ಯವಸ್ಥೆಯಲ್ಲಿ ನಿಷಿದ್ಧ ಮತ್ತು ಮಹಾ ಅಪರಾಧ. ಸಂಪ್ರದಾಯವಾದಿಗಳಿಗೆ ಇದು ಆಗಿಬರಲಿಲ್ಲ. ಜ್ಯೋತಿಬಾಳ ನೆಡೆ ಅವರಿಗೆ ತಮ್ಮ ಸನಾತನ ಧರ್ಮಕ್ಕೇ ಇಟ್ಟ ಕೊಡಲಿಯೇಟಿನಂತೆ ಭಾಸವಾಯಿತು.
ಕಲಿಸಲು ಶಾಲೆಗೆ ಹೋಗುವವಳ ಮೇಲೆ ನಿತ್ಯವೂ ಅಡ್ಡಗಟ್ಟಿ ಕೇರಿಗಳ ಇಕ್ಕೆಲದಲ್ಲಿ ನಿತ್ತು ಅವಾಚ್ಯ ಶಬ್ಧಗಳಿಂದ ಬಯ್ಯುವುದು ಕೆಸರು ರಾಡಿ ಸಗಣಿಗಳು ಎರಚುವುದು ಮಣ್ಣು ತೂರುವುದು ಮೊದಲಾದ ವಿಕೃತ ಮಾರ್ಗಗಳ ಮೂಲಕ ಆಕೆಯನ್ನು ಅತೀವವಾಗಿ ಕಾಡುವುದು ಅವಮಾನಿಸುವುದು ಹಲ್ಲೆಗೆ ನೆಡೆಸುವುದು ಇವೆಲ್ಲವನ್ನೂ ಮಾಡಿದರು. ಆಕೆ ಒಮ್ಮೆ ಧೃತಿಗೆಟ್ಟು ತನ್ನಿಂದ ಇದು ಸಾಧ್ಯವಿಲ್ಲವೆಂದು ಪತಿಯ ಬಳಿ ದುಃಖಿಸುತ್ತಾ ಕುಗ್ಗಿ ಕುಸಿದಾಗ ಆತ ಅವಳಲ್ಲಿ ಭರವಸೆ ತುಂಬಿದ ಪ್ರೇರೇಪಿಸಿದ ಹೆಗಲೆಣೆಯಾಗಿ ಅವಳೊಡನೆ ನಿತ್ತ.
ಅದು ಹೂವಿನ ಹಾದಿಯಾಗಿರಲಿಲ್ಲ ಪ್ರತಿ ಹೆಜ್ಜೆಗೆ ವಿಷಜಂತುಗಳು ಎದುರು ನಿಲ್ಲುವ ಕಲ್ಲುಮುಳ್ಳಿನ ಕಠಿಣ ಮಾರ್ಗವಾಗಿತ್ತು. ಹೆಣ್ಣಿಗೆ ಕಾನೂನಿನ ರಕ್ಷಣೆಗಳೇ ಇಲ್ಲದ ಕಾಲದಲ್ಲಿ ಜೀವವನ್ನು ಬೀದಿಯ ದೂರ್ತರ ಎದುರು ನಿತ್ಯವೂ ಸವಾಲಿಗೊಡ್ಡುತ್ತಲೇ ಮತ್ತೆ ಮುನ್ನುಗ್ಗಿದಳು. ದಾರಿಯಲ್ಲಿ ನಿತ್ಯವೂ ಕೆಸರು ಸಗಣಿ ಮಣ್ಣು ಮೆತ್ತಿರುತ್ತಿದ್ದ ಸೀರೆಯನ್ನು ಶಾಲೆಗೆ ಬಂದು ಬಲಾಯಿಸುತ್ತಿದ್ದರು.
ಅದಕ್ಕಾಗೇ ಆಕೆ ಮೊದಲೇ ಮತ್ತೊಂದು ಸೀರೆಯನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಬಂದಿರುತ್ತಿದ್ದಳು. ಸಾವಿತ್ರಿಬಾಯಿ ಫುಲೆಯವರ ಬೆನ್ನಿಗಿದ್ದು ಕಾದವ ಗಂಡ ಜ್ಯೋತಿ ರಾವ್. ಆತನ ನೈತಿಕ ಬಲ ತನ್ನೊಳಗಿನ ದಿವ್ಯತೆ ಎರಡರ ಅಮೃತವಾಹಿನಿಯೇ ಆಕೆಯನ್ನು ಉದ್ಧರಿಸಿತು ಆಕೆಯಿಂದ ಸ್ತ್ರೀಕುಲವೇ ಬಿಡುಗಡೆಯ ಮಾರ್ಗದಲ್ಲಿ ಕ್ರಮಿಸತೊಡಗಿತು. ಆಕೆ ಸ್ತ್ರೀಕುಲದ ಆಕಾಶದಲ್ಲಿ ಸದಾ ಬೆಳಗುವ ಸೂರ್ಯತೇಜೆ.
ಸಂಪ್ರದಾಯವಾದಿಗಳು ದಂಪತಿಗಳನ್ನು ಕೊಂದು ಬರಲು ಕಳುಹಿದ್ದ ಕೊಲೆಗಾರರನ್ನೇ ಮಕ್ಕಳಂತೆ ಕಂಡು ಮನಪರಿವರ್ತಿಸಿ ಕೊಲೆಯ ಮಾರ್ಗದಿಂದ ಮನುಷ್ಯ ಮಾರ್ಗದಲ್ಲಿ ಮುನ್ನೆಡೆಸಿದ ದಾರ್ಶನಿಕ ಜೋಡಿ ಇದು. ಸ್ತ್ರೀ ಮತ್ತು ಪುರುಷರನ್ನು ಪ್ರಕೃತಿ ಜೋಡಿಯಾಗಿಸುವುದು ಯಾತಕ್ಕಾಗಿ ಎಂಬ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಲೇ ಬೇಕು. ದಂಪತಿಗಳ ಇಲ್ಲಿಗೆ ನಿಲ್ಲುವುದಿಲ್ಲ ಯುವ ಸಮುದಾಯ ಅವರ ಕಥನವನ್ನು ಓದಿ ತಿಳಿಯಬೇಕು. ತಿಳಿದು ಬದುಕನ್ನು ಬದುಕುವ ರೀತಿಯನ್ನು ಕಂಡುಕೊಳ್ಳಬೇಕು. ಜಢ ಸಂಪ್ರದಾಯಗಳ ಸಂಕೋಲೆಯನ್ನು ಕಿತ್ತೆಸೆದು ಪ್ರಗತಿಗಾಮಿ ಜೀವನ ಮಾರ್ಗದಲ್ಲಿ ಮುನ್ನೆಡೆಯಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ಲೈಫ್ ಸ್ಟೈಲ್7 days ago
ಪಕ್ಷಿ ಪರಿಚಯ | ಬೆಳ್ಗಣ್ಣ
-
ದಿನದ ಸುದ್ದಿ7 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್6 days ago
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!
-
ದಿನದ ಸುದ್ದಿ6 days ago
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?
-
ದಿನದ ಸುದ್ದಿ3 days ago
ಕಿಸಾನ್ ಸಮ್ಮಾನ್ನಡಿ 9 ಕೋಟಿ ರೈತರಿಗೆ 1.34 ಲಕ್ಷ ಕೋಟಿ ರೂ. ಸಹಾಯಧನ : ಅಮಿತ್ ಶಾ
-
ದಿನದ ಸುದ್ದಿ4 days ago
ದಾವಣಗೆರೆ | ಜ.18 ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ ಬಸ್ ನಿಲ್ದಾಣದ ಉದ್ಘಾಟನೆ
-
ದಿನದ ಸುದ್ದಿ5 days ago
ಅಪಘಾತ | ಗೋವಾಕ್ಕೆ ಹೊರಟಿದ್ದ ದಾವಣಗೆರೆ ಲೇಡಿಸ್ ಕ್ಲಬ್ ನ 13 ಮಂದಿ ದುರ್ಮರಣ