ಅಸಾಮಾನ್ಯಳು
ಸೇವೆಯಲ್ಲೇ ಸಂತೃಪ್ತಿ ಕಾಣುತ್ತಿರುವ ಮಹಾತಾಯಿ ಮಹಾದೇವಮ್ಮ
ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ದೇಶದ ಅಭ್ಯುದಯದ ಮೊಳಕೆ ಅವರಲ್ಲಿದೆ. ದೇಶದ ಪ್ರಗತಿಯ ಪ್ರತೀಕವಾಗಿರುವ ಇಂತಹ ಮಕ್ಕಳಿಗೆ ಅವಶ್ಯವಾಗಿ ಬೇಕಿರುವುದು ಪ್ರೀತಿ, ವಾತ್ಸಲ್ಯ ಮತ್ತು ಉತ್ತಮ ಪೋಷಣೆ. ಅಂತೆಯೇ ಅವರಿಗೆ ವಿದ್ಯಾಭ್ಯಾಸ ಕೊಟ್ಟು ಅವರನ್ನು ಸುಸಂಸ್ಕøತರನ್ನಾಗಿ ಮತ್ತು ಸತ್ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬ ತಂದೆ – ತಾಯಿಯರ ಕರ್ತವ್ಯ. ಆದರೆ, ಎಲ್ಲಾ ಮಕ್ಕಳಿಗೂ ಹೆತ್ತವರ ಪೋಷಣೆಯ ಭಾಗ್ಯ ಇರುವುದಿಲ್ಲ. ಸಮಾಜದಲ್ಲಿ ಅನೇಕ ಮಕ್ಕಳು ನಾನಾ ಕಾರಣದಿಂದ ಹೆತ್ತವರ ಪಾಲನೆ – ಪೋಷಣೆಯಿಂದ ವಂಚಿತರಾಗಿ ಬೀದಿಪಾಲಾಗುತ್ತಿರುವ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇಂತಹ ಮಕ್ಕಳನ್ನು ಕಂಡು ಅಯ್ಯೋ ಪಾಪ ಎಂದು ಸಹನುಭೂತಿ ತೋರಿ ಸುಮ್ಮನಾಗುವವರ ಸಂಖ್ಯೆಯೇ ಹೆಚ್ಚು. ಅಂಥದ್ರಲ್ಲಿ ಇಂತಹ ಮಕ್ಕಳ ಬಗ್ಗೆಯೂ ಕಳಕಳಿ ತೋರಿ, ನಿಸ್ವಾರ್ಥ ಭಾವದಿಂದ ಅವರ ಪಾಲನೆ – ಪೋಷಣೆ ಮಾಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವವರು ಅಪರೂಪದಲ್ಲಿ ಅಪರೂಪವೇ ಸರಿ. ಈ ಅಪರೂಪದ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ ನಮ್ಮ ದಾವಣಗೆರೆಯ ಪುಟ್ಟಮ್ಮ ಅನಾಥಾಶ್ರಮದ ಸಂಸ್ಥಾಪಕಿ ಶ್ರೀಮತಿ ಮಹಾದೇವಮ್ಮ.
ಸೇವಾ ಸಾಂಗತ್ಯ
ಹಾವೇರಿ ಜಿಲ್ಲೆಯ ದೇವಿಗೆರೆ ಗ್ರಾಮದ ದಂಪತಿಗಳಾದ ಶ್ರೀ ನಿಂಗಪ್ಪ ಹಾಗೂ ಶ್ರೀಮತಿ ಪುಟ್ಟಮ್ಮ ಅವರದು ಸಾರ್ವಜನಿಕ ಸೇವಾ ಮನೋಭಾವನೆಯ ಕುಟುಂಬ. ಈ ದಂಪತಿಗಳ ಪುತ್ರಿಯಾಗಿ 07/03/1969ರಲ್ಲಿ ಜನಿಸಿದ ಮಹಾದೇವಮ್ಮನವರಲ್ಲೂ ಸಹ ಸಾಮಾಜಿಕ ಸೇವೆಯ ತುಡಿತ ಬಾಲ್ಯದಿಂದಲೂ ಸದಾ ಕಾಡುತ್ತಲೇ ಇತ್ತು. ಅದರ ಪರಿಣಾಮವಾಗಿಯೇ, “ ಅನಾಥ ಮಕ್ಕಳ ಸೇವೆಯೇ ಭಗವಂತನ ಸೇವೆ ” ಎಂಬ ಚಿಂತನೆಯೊಂದಿಗೆ ತಮ್ಮ ತಾಯಿಯ ಹೆಸರಲ್ಲಿ 1997ರಲ್ಲಿ “ದಾವಣಗೆರೆ ಮಹಾನಗರದಲ್ಲಿ ಶ್ರೀಮತಿ ಪುಟ್ಟಮ್ಮ ಅನಾಥಾಶ್ರಮ” ವನ್ನು ಸ್ಥಾಪಿಸಿದರು.
ಆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಅಲ್ಲಿಂದ ಈವರೆಗೂ ಪ್ರತಿವರ್ಷ 25ಕ್ಕೂ ಅಧಿಕ ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟು ತಾಯ್ಮಮತೆಯೊಂದಿಗೆ ಲಾಲನೆ – ಪಾಲನೆ ಮಾಡುತ್ತಾ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
1997 ರಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂದವಾಡ ರಸ್ತೆಯಲ್ಲಿದ್ದ ಒಂದು ಕಟ್ಟಡದಲ್ಲಿ 12 ಮಕ್ಕಳಿಗೆ ಆಶ್ರಯ ನೀಡುವುದರೊಂದಿಗೆ ಆರಂಭವಾದ ಈ ಆಶ್ರಮ ಸನ್ 2014ರಲ್ಲಿ ದಾವಣಗೆರೆ ಅಂಬೇಡ್ಕರ್ ವೃತ್ತದ ಸಮೀಪವಿರುವ ವಿಶಾಲವಾದ ಸುಸಜ್ಜಿತ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಯಿತು. ಪ್ರಸ್ತುತ ಚೇತನ ಹೊಟೇಲ್ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡ ಒಂದರಲ್ಲಿ ಆಶ್ರಮದ ಸೇವಾ ಕಾರ್ಯ ಮುಂದುವರೆದಿದೆ.ಪ್ರಾರಂಭಿಕ ದಿನಗಳಲ್ಲಿ ಸರ್ಕಾರದ ಯಾವ ನೆರವು ಕೂಡ ಇಲ್ಲದೆ ಈ ಆಶ್ರಮವನ್ನು ಕಟ್ಟಿ ಬೆಳೆಸಿದ ರೀತಿ ಅಚ್ಚರಿಯೇ ಸರಿ. ಜನ ಸಾಮಾನ್ಯರು ತಮ್ಮ ಕುಟುಂಬದ ನಾಲ್ಕಾರು ಮಂದಿಗೆ ಊಟ – ವಸತಿ ಜೋಡಿಸುವುದೇ ಕಷ್ಟ. ಆದರೆ ತಮ್ಮ ಕುಟುಂಬಕ್ಕೆ ಒಂದಿನಿತು ಕೂಡ ಸಂಬಂಧವೇ ಇಲ್ಲದ ಹತ್ತಾರು ಮಕ್ಕಳ ಸಂಪೂರ್ಣ ಜೀವನ ನಿರ್ವಹಣೆಯ ಭಾರವನ್ನು ಹೊತ್ತು ಮುನ್ನಡೆಸುವುದೆಂದರೆ ಅದು ಅಂತಃಕರಣದ ಔನ್ನತ್ಯಕ್ಕೆ ಸಾಕ್ಷಿ ಮತ್ತು ಅದೊಂದು ಸಾಹಸದ ಕಾರ್ಯವೇ ಸರಿ. ಏನೆಲ್ಲಾ ಏಳು ಬೀಳು, ಬವಣೆಗಳ ನಡುವೆಯೂ ಸುದೀರ್ಘ ಕಾಲ ಈ ಆಶ್ರಮವು ತನ್ನ ಅಸ್ತಿತ್ವ ಉಳಿಸಿಕೊಂಡು ಧೀನರನ್ನು ಸಲಹಿದೆ ಎಂದರೆ ಅದಕ್ಕೆ ಮಹಾದೇವಮ್ಮನವರ ಅಂತರಂಗದ “ಧೀ” ಶಕ್ತಿಯೇ ಕಾರಣ. ಆರಂಭದಿಂದ ಈವರೆಗೂ ಶಿಸ್ತು, ಕ್ರಮಬದ್ಧತೆ, ಉತ್ತಮ ಸಂಸ್ಕಾರ, ಸದ್ಗುಣ, ಸಜ್ಜನಿಕೆ, ಜಾತ್ಯಾತೀತತೆ ಮತ್ತು ಸಹಬಾಳ್ವೆಯಂತಹ ಮೌಲ್ಯಗಳು ಹಾಗೂ ಸರಳ ಜೀವನ – ಉದಾತ್ತ ಚಿಂತನೆಗೆ ಆದ್ಯತೆ ಕೊಟ್ಟು ಮಕ್ಕಳನ್ನು ಪೊರೆಯುತ್ತಿರುವ ಈ ಆಶ್ರಮಕ್ಕೆ ಭೇಟಿಕೊಟ್ಟು ಕಣ್ಣಾರೆ ಕಂಡಿರುವ ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಸರ್ವರು ಕೂಡ ಈ ಆಶ್ರಮದ ಬಗ್ಗೆ ಗೌರವ ಮತ್ತು ಅಭಿಮಾನದ ಭಾವ ವ್ಯಕ್ತಪಡಿಸುತ್ತಿದ್ದಾರೆ.
ಆಶ್ರಮದ ಸೇವಾ ಕಾರ್ಯಗಳು
ಪುಟ್ಟಮ್ಮ ಆಶ್ರಮವು ತನ್ನನ್ನು ತಾನು ನಿತ್ಯ ನಿರಂತರ ನೂರಾರು ಜನಪರ – ಪ್ರಗತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅನಾಥ ಹಾಗೂ ನಿರ್ಗತಿಕ ಮಕ್ಕಳ ರಕ್ಷಣೆ, ಪೋಷಣೆ ಮತ್ತು ಪುನರ್ವಸತಿ, ಶಿಶು ಪಾಲನೆ, ಆರೋಗ್ಯ ಸೇವೆ, ಶಿಕ್ಷಣ ಸೇವೆ, ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ, ಮಹಿಳಾ ಸಬಲೀಕರಣ, ವೃತ್ತಿಪರ ಶಿಕ್ಷಣ ಕೇಂದ್ರಗಳ ನಿರ್ವಹಣೆ, ವಯೋವೃದ್ಧರ ರಕ್ಷಣೆ ಮತ್ತು ಪೋಷಣೆ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರೆ ಸೇವಾ ಕಾರ್ಯಗಳು ಅವಿರತ ಸಾಗುತ್ತಿವೆ. ಜಾಗೃತಿ ಶಿಬಿರ ಮತ್ತುಕಾರ್ಯಾಗಾರಗಳು ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿ ನೆರವಿನೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಕಾನೂನು ಅರಿವು, ಸಂಘಟನಾ ಶಕ್ತಿ, ಸ್ವಾವಲಂಬನೆ, ಮಕ್ಕಳ ಲಾಲನೆ – ಪಾಲನೆ, ಪೌಷ್ಠಿಕ ಆಹಾರ ಲಿಂಗಭೇದತ್ವ ಸೇರಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದ ವಿವಿಧ ಶಿಬಿರಗಳ ಮತ್ತು ಕಾರ್ಯಾಗಾರಗಳ ಆಯೋಜನೆ ಮೂಲಕ ಮಹಿಳಾ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.
ಸ್ವಸಹಾಯ ಗುಂಪುಗಳು
ಸಮಾಜದಲ್ಲಿರುವ ನಿರ್ಗತಿಕ ಮಹಿಳೆಯರು ಮತ್ತು ಪುರುಷರನ್ನು ಸ್ವ – ಸಹಾಯ ಗುಂಪುಗಳಡಿಯಲ್ಲಿ ಉಳಿತಾಯ ಗುಂಪುಗಳನ್ನಾಗಿ ರಚಿಸಿ ವಿವಿಧ ತರಬೇತಿಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲಾಗುತ್ತಿದೆ.
ಕಸೂತಿ ಮತ್ತು ಹೊಲಿಗೆ ತರಬೇತಿ
ಆಧುನಿಕ ಆಡಂಬರದ ವೇಷ – ಭೂಷಣ, ಉಡುಗೆ – ತೊಡುಗೆಗಳಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಗೆ ನಮ್ಮ ಮೂಲ ದೇಸಿ ಸಂಸ್ಕøತಿಯ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ದೇಸಿ ಸಂಸ್ಕøತಿ ಬಿಂಬಿಸುವ ಕಸೂತಿ ಮತ್ತು ಹೊಲಿಗೆಗೆ ಆದ್ಯತೆ ನೀಡಿ ತರಬೇತಿ ನೀಡಲಾಗುತ್ತಿದೆ.
ಪುನರ್ವಸತಿ ಮತ್ತು ಶಿಕ್ಷಣ
14 ವರ್ಷದೊಳಗಿನ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನ ತಡೆಗಟ್ಟಲು ಹಾಗೂ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಹಿನ್ನಲೆಯಲ್ಲಿ ಅಂತಹ ಮಕ್ಕಳ ಪೋಷಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅವರನ್ನು ಶಿಕ್ಷಣ ವಾಹಿನಿಗೆ ತರುವ ಪ್ರಯತ್ನ ಆಶ್ರಮದಿಂದ ನಡೆಯುತ್ತಿದೆ.
ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಭಾಗಿ
ಅನೇಕ ಮಕ್ಕಳು ಏಡ್ಸ್, ಪೋಲಿಯೋ, ಅಂಗವೈಕಲ್ಯ, ಅಂಧತ್ವ ಮುಂತಾದ ಮಾರಕ ಖಾಯಿಲೆಗೆ ತುತ್ತಾಗಿ ಬದುಕು ಕಳೆದುಕೊಳ್ಳುವುದನ್ನು ಕಂಡು ಮಮ್ಮಲ ಮರುಗಿರುವ ಈ ಆಶ್ರಮವು, ಖಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರ ಪ್ರತಿವರ್ಷವೂ ಹಮ್ಮಿಕೊಳ್ಳುತ್ತಿರುವ ಜಾಗೃತಿ – ಜಾಥಾಗಳಲ್ಲಿ ಭಾಗಿಯಾಗಿ ಮತ್ತು ವೈಯುಕ್ತಿಕವಾಗಿಯೂ ಜನ ಜಾಗೃತಿ ಮೂಡಿಸುತ್ತಿದೆ.
ಹೆಚ್ಐವಿ ಸೋಂಕಿತ ಮಕ್ಕಳ ಆರೈಕೆ ಮತ್ತು ಬೆಂಬಲ :
ತಮ್ಮದಲ್ಲದ ತಪ್ಪಿಗೆ ಹೆಚ್ಐವಿ ಸೋಂಕಿನೊಂದಿಗೆ ಜೀವಿಸುತ್ತಿರುವ ಅನೇಕ ಮಕ್ಕಳಿಗೆ ಸಾಂತ್ವನ ನೀಡುತ್ತಿರುವ ಈ ಆಶ್ರಮವು ಅಂತಹ ಮಕ್ಕಳಿಗೆ ಧೈರ್ಯ ತುಂಬಿ ಆರೈಕೆ ಮಾಡುತ್ತಿದೆ. ಅವರಿಗೆ ಸಾಮಾಜಿಕ – ಮಾನಸಿಕ ಹಾಗೂ ನೈತಿಕ ಜೀವನದ ಬೆಂಬಲದ ಜೊತೆ ಸಂಪೂರ್ಣ ಉಚಿತ ಪೌಷ್ಠಿಕ ಆಹಾರದ ಬೆಂಬಲವನ್ನೂ ಕೂಡ ನೀಡುತ್ತಿದೆ. ಅಲ್ಲದೆ ಹತ್ತಿರದ ಎ.ಆರ್.ಟಿ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆಯನ್ನು ಸಹ ನೀಡಿಸಲಾಗುತ್ತಿದೆ.
ಸ್ವಂತ ಕಟ್ಟಡದಲ್ಲಿ ಆಶ್ರಮ ನಡೆಸುವ ಕನಸು
ವೈಯಕ್ತಿಕ ಸುಖ – ಸಂತೋಷಕ್ಕಿಂತಲೂ ಪರ ಹಿತಕ್ಕಾಗಿಯೇ ತಮ್ಮ ಜೀವನ ಮುಡುಪಾಗಿಟ್ಟಿರುವ ಮಹಾದೇವಮ್ಮನವರು ಸದಾ ಆಶ್ರಮದ ಮತ್ತು ಮಕ್ಕಳ ಏಳ್ಗೆಯ ಬಗ್ಗೆಯೇ ಚಿಂತಿಸುತ್ತಾರೆ. ಸ್ವಂತ ಕಟ್ಟಡದಲ್ಲಿ ಸುಸಜ್ಜಿತವಾಗಿ ತಮ್ಮ ಆಶ್ರಮವನ್ನು ನಡೆಸುವ ಕನಸು ಕಟ್ಟಿದ್ದಾರೆ.ಪ್ರಸ್ತುತ ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಶಿಬಾರದ ಬಳಿ 2015 ರಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಅನಾಥ ಮಕ್ಕಳ ವಸತಿಗೆ ಜಾಗದ ಕೊರತೆ ಇರುವ ಕಾರಣ ಅಲ್ಲಿ ಬಡ ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರವನ್ನು ತೆರೆದಿದ್ದಾರೆ.
ಸುಮಾರು 20ಕ್ಕೂ ಅಧಿಕ ವರ್ಷಗಳಿಂದಲೂ ಅನಾಥ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಪ್ರೀತಿ, ವಾತ್ಸಲ್ಯ ನೀಡಿ ಹೆತ್ತವರಿಗಿಂತಲೂ ಮಿಗಿಲಾದ ಮಮತೆಯೊಂದಿಗೆ ಸಾಕುವ ಜೊತೆ ಸಮಾಜದ ಏಳ್ಗೆಗೂ ಅನೇಕ ಚಟುವಟಿಕೆ,ಕಾರ್ಯಕ್ರಮಗಳ ಆಯೋಜನೆ ಮೂಲಕ ಅವಿರತ ಸಾಮಾಜಿಕ ಕೊಡುಗೆ ನೀಡುತ್ತಿರುವ ಮಹಾದೇವಮ್ಮನವರನ್ನು ಸರ್ಕಾರ ಮತ್ತು ಸಂಘ – ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸಬೇಕಿದೆ. ಅವರ ಅವಿರತ ಒಂಟಿ ಹೋರಾಟದ ಪರಿಶ್ರಮದ ಬದುಕಿಗೆ ಮತ್ತಷ್ಟು ಚೈತನ್ಯ ತುಂಬಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್| 9986715401

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಸಾಮಾನ್ಯಳು
ಭಾರತದ ಕಿರಿಯ ಲೇಖಕಿ ‘ಮಾನ್ಯ ಹರ್ಷ’..!
ಹತ್ತು ವರ್ಷದ ಈ ಪುಟ್ಟ ಲೇಖಕಿ ಮಾನ್ಯ ಹರ್ಷ ಗೆ ಓದುವುದು ಬರೆಯುವುದು ಎಂದರೆ ತುಂಬಾ ಇಷ್ಟವಂತೆ. ಬೆಂಗಳೂರಿನ ಚಿತ್ರ ಮತ್ತು ಹರ್ಷ ದಂಪತಿಗಳ ಮಗಳಾದ ಮಾನ್ಯ ಹತ್ತು ವರ್ಷಕ್ಕೆ ಕನ್ನಡದಲ್ಲಿ ಪುಸ್ತಕ ಬರೆದು ಕನ್ನಡದ ಕಿರಿಯ ಲೇಖಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಈಕೆ ಬರೆದಿರುವ “ ನೀರಿನ ಪುಟಾಣಿ ಸಂರಕ್ಷಕರು ” ಮಕ್ಕಳ ಕಾದಂಬರಿಗೆ , ಇಂಡಿಯಾ ಬುಕ್ ಆಫ್ ರೆಕಾರ್ಡ್ ವತಿಯಿಂದ ” ಕನ್ನಡದಲ್ಲಿ ಪುಸ್ತಕ ಬರೆದಿರುವ ಕಿರಿಯ ಲೇಖಕಿ “ ಎಂಬ ಬಿರುದಿಗೆ ಪಾತ್ರಳಾಗಿದ್ದಾಳೆ ಮಾನ್ಯ.
ಬೆಂಗಳೂರಿನ ಬಿ.ಟಿ.ಎಮ್ ಬಡಾವಣೆ ಯ ವಿಬ್ಗಯಾರ್ ಶಾಲೆಯ ಐದನೇ ತರಗತಿಯಲ್ಲಿ ಓದುತ್ತಿರುವುದು ಮಾನ್ಯ ತಾನು ಅಪ್ಪಟ ಕನ್ನಡತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ಆಸಕ್ತಿ ಯನ್ನು ಬೆಳಸಿಕೊಂಡಿರುವ ಮಾನ್ಯ, ತನ್ನ ಅಜ್ಜಿಯ ಬಾಯಿಂದ ಕನ್ನಡ ಕಥೆ-ಕವನಗಳನ್ನು ಕೇಳಿ ಬೆಳೆದ ಹುಡುಗಿ. ಕನ್ನಡದಲ್ಲಿ ಪುಸ್ತಕ ಬರೆಯಲು ನನ್ನ ಅಜ್ಜಿಯೇ ನನಗೆ ಸ್ಫೂರ್ತಿ ಎನ್ನುತ್ತಾಳೆ ಮಾನ್ಯ.
ಈಗಾಗಲೇ ” ನೇಚರ್ ಅವರ್ ಫ್ಯೂಚರ್” ಪುಸ್ತಕ ಬರೆದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಐದು ರೆಕಾರ್ಡ್ ಬುಕ್ಗಳಲ್ಲಿ ಹೆಸರು ಮಾಡಿರುವ ಈ ಪುಟ್ಟ ಲೇಖಕಿ, ವಜ್ರ ಬುಕ್ ಆಫ್ ರೆಕಾರ್ಡ್ ವತಿಯಿಂದ ” ಭಾರತದ ಕಿರಿಯ ಕವಿಯಿತ್ರಿ” ಎಂಬ ಬಿರುದನ್ನೂ ಮುಡಿಗೇರಿಸಿಕೊಂಡಿದ್ದಾಳೆ.
” ನೀರಿನ ಪುಟಾಣಿ ಸಂರಕ್ಷಕರು” ಈಕೆಯ ಎರಡನೆಯ ಪುಸ್ತಕವಾಗಿದ್ದು , ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಬರೆದಿದ್ದಾಳೆ.
ಆಂಗ್ಲ ಅವತರಣಿಕೆ ” ದಿ ವಾಟರ್ ಹೀರೋಸ್” ಮತ್ತು ಕನ್ನಡದಲ್ಲಿ ” ನೀರಿನ ಪುಟಾಣಿ ಸಂರಕ್ಷಕರು ” ಹೆಸರಲ್ಲಿ ರಚಿತವಾಗಿರುವ ಈ ಪುಸ್ತಕ ಸದ್ಯ ಕಾಡುತ್ತಿರುವ ನೀರಿನ ಕೊರತೆ ಮತ್ತು ಇದರ ಸಂರಕ್ಷಣೆಯ ತೀವ್ರತೆಯ ಮೇಲೆ ಬೆಳಕು ಚೆಲ್ಲುತ್ತದೆ.
ಈ ಪುಸ್ತಕ ಮಾರ್ಚ್ 22 ಕ್ಕೆ , ವಿಶ್ವ ಜಲ ದಿನದಂದು ಬಿಡುಗಡೆ ಆಗಬೇಕಿತ್ತು. ಆದ್ರೆ ವಿಶ್ವವನ್ನು ಕಾಡುತ್ತಿರುವ ಕರೋನ ಕಾಟದಿಂದಾಗಿ ಪುಸ್ತಕ ಬಿಡುಗಡೆ ತುಂಬಾ ಕಷ್ಟ ಆಯ್ತು. ಲಾಕ್ಡೌನ್ ನಡುವೆಯೂ ಪುಸ್ತಕವನ್ನು ಆನ್ಲೈನ್ ನಲ್ಲೇ ಬಿಡುಗಡೆ ಮಾಡಿದೆವು ಎಂದು ತಮ್ಮ ಅಳಲು ವ್ಯಕ್ತ ಪಡಿಸಿದರು.
ಪುಟ್ಟ ಲೇಖಕಿಯು, ದೈನಂದಿನ ಜೀವನದ ಸರಳ ನಿದರ್ಶನಗಳ ಮೂಲಕ ನೀರಿನ ಸಮಸ್ಯೆ ಯನ್ನು ಸ್ವಾರಸ್ಯಕರವಾಗಿ ನಿರೂಪಿಸಲು ಪ್ರಯತ್ನಿಸಿದ್ದಾರೆ.
ನೀರನ್ನು ಉಳಿಸಲು ಪ್ರತಿಯೊಬ್ಬರೂ ಅನುಸರಿಸಬೇಕಾದ ಅತ್ಯಂತ ಸರಳ ಮತ್ತು ಸುಲಭ ನಿಯಮಗಳನ್ನು ಈ ಪುಸ್ತಕ ಒಳಗೊಂಡಿದೆ.
ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು. ಚಿಕ್ಕ ವಯಸ್ಸಿನಲ್ಲೇ ಪ್ರಕೃತಿಯ ಬಗೆಗಿನ ಜವಾಬ್ದಾರಿ ಅರಿತ ಮಕ್ಕಳು ಹೇಗೆ ತಮ್ಮ ಪುಟ್ಟ ಕೈಗಳಿಂದ ದೊಡ್ಡ ಕೆಲಸ ಮಾಡಿ ತೋರಿಸುತ್ತಾರೆ ಎಂಬುದರ ಕಥಾಸಂಗಮವೇ ” ” ಪುಟಾಣಿ ಸಂರಕ್ಷಕರು ” .
ನೀರು ಪ್ರಕೃತಿಯ ಅಮೂಲ್ಯ ದ್ರವವಾಗಿದೆ. ನೀರು ಇಲ್ಲದೆ ಜೀವನವು ಅಸ್ತಿತ್ವದಲ್ಲಿಲ್ಲ. 3/4 ನೇ ಭಾಗದಷ್ಟು ಭೂಮಿಯ ಮೇಲ್ಮೈ ಜಲಮೂಲಗಳಿಂದ ಆವರಿಸಿದ್ದರೂ, ಈ ನೀರಿನ 97 ಪ್ರತಿಶತ ಉಪ್ಪು ನೀರಿನ ರೂಪದಲ್ಲಿ ಸಾಗರಗಳಲ್ಲಿದೆ, ಮತ್ತು ಮಾನವ ಬಳಕೆಗೆ ಅನರ್ಹವಾಗಿದೆ.
ಕೇವಲ 2.7% ಮಾತ್ರ ಶುದ್ದ ನೀರು ಇದ್ದು ಭ ಇದರಲ್ಲಿ ಸುಮಾರು 70% ರಷ್ಟು ನೀರು
ಹಿಮನದಿಗಳಾಗಿವೆ. ಅದರಲ್ಲಿ ಕೇವಲ 1% ಶುದ್ಧ ನೀರು ಲಭ್ಯವಿದ್ದು ಮಾನವ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದ ಈ ಅಮೂಲ್ಯವಾದ ಸಂಪನ್ಮೂಲವನ್ನು ಸಂರಕ್ಷಿಸುವುದು ಬಹಳ ಮುಖ್ಯ ಎಂದು ಸಾರಿ ಹೇಳುತ್ತಿದ್ದಾರೆ ಈ ಪುಟ್ಟ ಲೇಖಕಿ. ಈ ಪುಸ್ತಕವು ಪ್ರಕೃತಿ ತಾಯಿಗೆ ಅರ್ಪಿತವಾಗಿವೆ.
ವಿಶ್ವ ಜಲ ದಿನಾಚರಣೆ, ಮಾರ್ಚ್ 22, 2018 ರಂದು, ಮಾನ್ಯ , 38 ಮಕ್ಕಳು ಮತ್ತು 36 ಪೋಷಕರೊಂದಿಗೆ ನೀರು ಉಳಿಸಿ ಮೆರವಣಿಗೆ ಜಾತಾ ಹಮ್ಮಿಕೊಂಡಿದ್ದಳು. ದೊರೆಸಾನಿ ಅರಣ್ಯ ಪ್ರದೇಶ ದಿಂದ ಪ್ರಾರಂಭವಾದ ಜಾತಾ ಪುಟ್ಟನ್ಹಳ್ಳಿ ಕೆರೆ ಯಲ್ಲಿ ಸಸಿಗಳನ್ನು ನೆಡುವ ಮೂಲಕ ಕೊನೆಗೊಂಡಿತು. ಮಕ್ಕಳು ನೀರನ್ನು ಉಳಿಸುವ ವಾಗ್ದಾನ ಮಾಡಿದರು ಮತ್ತು ನೀರು ಸಂರಕ್ಷಣೆ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು.
ಮನ್ಯಾ ಕನ್ನಡದಲ್ಲಿ ರಾಪ್ ಹಾಡನ್ನು ಬರೆದು ಹಾಡಿದ್ದಾರೆ. ಪ್ರಕೃತಿಯ ಸಂರಕ್ಷಣೆ ಬಗೆಗಿನ ಈ ರಾಪ್ ಸಂಗ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಬ್ಗಿಯರ್ ಬಿಟಿಎಂ ಶಾಲೆಯ ವಿದ್ಯಾರ್ಥಿಗಳು ಹಾಡಿದ ಸ್ಟ್ರೈಕ್ ಆಫ್ ಪ್ಲಾಸ್ಟಿಕ್ ಗೀತೆಯ ಸಾಹಿತ್ಯವನ್ನೂ ಮಾನ್ಯಾ ಬರೆದಿದ್ದಾರೆ. ಇದೇ ಶಾಲೆಯ ಮ್ಯೂಸಿಕ್ ಸರ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು , ದೊಡ್ಡ ಹಿಟ್ ಆಗಿದೆ.
ಭಾರತ ಕೇಂದ್ರ ಸರಕಾರ ಹಮ್ಮಿಕೊಂಡಿದ್ದ #WaterHeroes ಸ್ಪರ್ಧೆ ಯಲ್ಲಿ ಕೂಡ ಮಾನ್ಯಳ ನೀರಿನ ಹೋರಾಟ ಮತ್ತು ಕಳಕಳಿ ಗೆ ಪ್ರಶಸ್ತಿ ಬಂದಿದೆ.
UN -Water ನ ಫೇಸ್ ಬುಕ್ ಖಾತೆಯಲ್ಲಿ ಈ ಪುಟ್ಟ ಬಾಲೆಯ ನೀರಿನ ಹೋರಾಟ ಹಾಗೂ ನೀರಿನ ಸಂರಕ್ಷಣೆ ಕಳಕಳಿ ಬಗ್ಗೆ ಹಂಚಿಕೊಳ್ಳಲಾಗಿದೆ.
ಈ ಕಿರಿಯ ಕವಿಯಿತ್ರಿಯ ಕಿವಿಮಾತು
“ನೀವು ಉಪದೇಶ ಮಾಡುವ ಮೊದಲು ಸ್ವಯಂ
ಅಭ್ಯಾಸ ಮಾಡಿ”.
ಅಪ್ರತಿಮ ಪ್ರತಿಭೆಯ ಈ ಪುಟ್ಟ ಬಾಲೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಲಿ. ಮತ್ತಷ್ಟು
ಯಶಸ್ಸ ಈಕೆಯದಾಗಲಿ ಎಂದು ಹಾರೈಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಸಾಮಾನ್ಯಳು
ಗ್ರಾಂಡ್ ಮಾಸ್ಟರ್ ಮಾನ್ಯ ಹರ್ಷ ; ಈಕೆ ಭಾರತದ ಅತ್ಯಂತ ಕಿರಿಯ ಕವನಗಾರ್ತಿ..!
- ಸುದ್ದಿದಿನ ಡೆಸ್ಕ್
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾನ್ನುಡಿಯಂತೆ, ಒಂಭತ್ತನೇ ವಯಸ್ಸಿಗೇ ಪುಸ್ತಕ ಬರೆದು, ಭಾರತದ ಅತ್ಯಂತ ಕಿರಿಯ ಕವನಗಾರ್ತಿ ಎಂಬ ಬಿರುದಿಗೆ ಪಾತ್ರರಾಗಿದ್ದಾಳೆ ಬೆಂಗಳೂರಿನ ಚಿತ್ರ ಹಾಗೂ ಹರ್ಷ ದಂಪತಿಗಳ ಮುದ್ದಿನ ಮಗಳು ಮಾನ್ಯ ಹರ್ಷ. ಬೆಂಗಳೂರಿನ ವಿಬ್ಗಯಾರ್ ಹೈ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಈಕೆ , ಮೂರು ದಾಖಲೆಗಳ ಒಡತಿ. ಏಷಿಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವಜ್ರ ವರ್ಲ್ಡ್ ರೆಕಾರ್ಡ್, ವತಿಯಿಂದ ಮೂರು ಬಿರುದುಗಳು ಈ ಪುಟ್ಟ ಪೋರಿಗೆ ಪ್ರಾಪ್ತ ವಾಗಿದೆ.
ಚಿಕ್ಕ ವಯಸ್ಸಿನಲ್ಲೇ, ಪರಿಸರ ಪ್ರಜ್ಞೆ ಹಾಗೂ ಕಾಳಜಿ ಬೆಳೆಸಿಕೊಂಡಿರುವ ಒಂಬತ್ತರ ಹರೆಯದ ಮಾನ್ಯ ಹರ್ಷ,ಈ ಸಣ್ಣ ವಯಸ್ಸಿನಲ್ಲೇ “ ನೇಚರ್ ಅವರ್ ಫ್ಯೂಚರ್” ಪುಸ್ತಕ ಬರೆದು “ಭಾರತದ ಕಿರಿಯ ಕವನಗಾರ್ತಿ ” ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ.
ಜುಲೈ 5, 2019ರಂದು ಮುದ್ರಣಗೊಂಡ “ನೇಚರ್ ಅವರ್ ಫ್ಯೂಚರ್” ಪುಸ್ತಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿದೆ. 55 ಕವನಗಳನ್ನು ಒಳಗೊಂಡಿರುವ ಈ ಪುಸ್ತಕ, ಚಿನ್ನರಲ್ಲಿ ಪರಿಸರ ಪ್ರಜ್ಞೆ ಮೂಡಿಸಿದೆ. ದೇಶ, ದೇಶ ಪ್ರೇಮ,ಸೈನಿಕರ ತ್ಯಾಗ-ಬಲಿದಾನ, ಪ್ರಕೃತಿ, ಪರಿಸರ, ಹೆಣ್ಣಿನ ಮಹತ್ವದ ಬಗ್ಗೆ ಕವನಗಳನ್ನು ಒಳಗೊಂಡಿರುವ ಈ ಪುಸ್ತಕ ದಾಖಲೆ ಸೃಷ್ಟಿಸಿದೆ.
- ವಜ್ರ ವರ್ಲ್ಡ್ ರೆಕಾರ್ಡ್ ವತಿಯಿಂದ ಈ ಪುಸ್ತಕ ಬರೆದ ಮಾನ್ಯ ಹರ್ಷ “ಭಾರತದ ಅತ್ಯಂತ ಕಿರಿಯ ಕವನಗಾರ್ತಿ” ಎಂಬ ಬಿರುದು ನೀಡಿ ಸನ್ಮಾನಿಸಲಾಗಿದೆ.
- ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ, “ಗ್ರಾಂಡ್ ಮಾಸ್ಟರ್” ಬಿರುದು , ಪಾರಿತೋಷಕ ನೀಡಿ ಗೌರವಿಸಲಾಗಿದೆ.
- ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ” ಪರಿಸರ ಕುರಿತ ಕವನಗಳು ರಚಿಸಿದ ಅತ್ಯಂತ ಕಿರಿಯ ಕವನಗಾರ್ತಿ ಎಂಬ ಬಿರುದು, ಪಾರಿತೋಷಕ, ಮೆಡಲ್ ನೀಡಿ ಗೌರವಿಸಲಾಗಿದೆ.
ಸಣ್ಣ ವಯಸ್ಸಿನಲ್ಲೇ ಬರೆಯುವ ಗೀಳು ಅಂಟಿಸಿಕೊಂಡ ಮಾನ್ಯ, ಆರನೇ ವಯಸ್ಸಿಗೇ ಹಲವಾರು ಕವನಗಳನ್ನು ರಚಿಸತೊಡಗಿದಳು. ಇದನ್ನು ಕಂಡ ಆಕೆಯ ಶಾಲಾ ಶಿಕ್ಷಕರು, ಈ ಪುಟ್ಟ ಕವನಗಾರ್ತೀಯ ಬರೆಯುವ ಹವ್ಯಾಸವನ್ನು ಮತ್ತಷ್ಟು ಪ್ರೋತ್ಸಾಹಿಸಿದರು.
2018ರ ಕಿಡ್ಸ್ ವರ್ಲ್ಡ್ ಅಂತಾರಾಷ್ಟ್ರೀಯ ಸಣ್ಣ ಕಥೆಗಳ ಪ್ರಶಸ್ತಿಗೂ ಮಾನ್ಯ ಪಾತ್ರರಾಗಿದ್ದಾಳೆ. ಈಕೆ ರಚಿಸಿದ,” ಥಾಂಕ್ಸ್ ಗಿವಿಂಗ್” ಸಣ್ಣ ಕಥೆಯು ಭಾರೀ ಪ್ರಶಂಸೆಗೆ ಒಳಪಟ್ಟಿದೆ.
ಮೂರು ವರ್ಷಗಳ, ಪುಸ್ತಕ ಮುದ್ರಿಸುವ, ಈಕೆಯ ಕನಸು ಈಗ ನನಸಾಗಿದೆ. “ನೇಚರ್ ಅವರ್ ಫ್ಯೂಚರ್” ಪುಸ್ತಕ ಮಾನ್ಯಾಳ ಪರಿಸರ ಪ್ರಜ್ಞೆ ಹಾಗೂ ಕಾಳಜಿ ಗೆ ಕನ್ನಡಿ ಹಿಡಿದಂತಿದೆ.ಮಾರ್ಚ್ 22,2018 ರೈ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಅಂಗವಾಗಿ , ಚಿನ್ನದ ವಾಕಥಾನ್ ಆಯೋಜಿಸಿದ್ದ ಈ ಪೋರಿ, ಸ್ನೇಹಿತರೊಂದಿಗೆ”ನೀರು ಉಳಿಸಿ” ಆಂದೋಲನ ನಡೆಸಿದ್ದಳು.
ಅಂತೆಯೇ,ಜೆ.ಪಿ.ನಗರದ ಪುಟ್ಟೇನಹಳ್ಳಿ ಕೆರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಗಿಡಗಳನ್ನು ನೆಟ್ಟು ಪರಿಸರ ಪ್ರಜ್ಞೆ ಮೂಡಿಸದಳು ಮಾನ್ಯ ಹರ್ಷ. ಕಲೆ, ಕ್ರೀಡೆ ಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಮಾನ್ಯ,ಹಾಡು, ಕುಣಿತ,ಈಜುಗಾರಿಕೆಯಲ್ಲಿ ಹಲವಾರು ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾಳೆ. ಕರಾಟೆ ಹಾಗೂ ಟೆಕ್ವಾಂಡೋ ವಿದ್ಯೆ ರೂಢಿಸಿಕೊಂಡಿರುವ ಮಾನ್ಯ ಕಲೆ-ಸಾಹಿತ್ಯ-ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದಾಳೆ.
ಇಷ್ಪಕ್ಕೇ ನಿಲ್ಲದೆ ಮಾನ್ಯಾಳ ಪುಸ್ತಕ ಪ್ರೀತಿ, ಈಗ ಈಕೆ ಕನ್ನಡದಲ್ಲಿ ರಚಿಸಿರುವ ಕವನ ಹಾಗೂ ಕಥೆಗಳ ಗುಚ್ಛವನ್ನು ಮುದ್ರಿಸುವ ತವಕದಲ್ಲಿದ್ದಾಳೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243




