ನೆಲದನಿ
ಕಲೆಯ ಅನ್ನದಾತ : ಸಿದ್ಧಪ್ಪ ರೊಟ್ಟಿ ಎಂಬ ಕಲಾವಿದನ ಒಡಲದನಿ

ಕಲೆ ಮತ್ತು ಕಲಾವಿದನ ನಡುವೆ ಬಹು ಅನ್ಯೋನ್ಯವಾದ ಬಂಧವೊಂದು ಸದಾ ಜಾಗೃತವಾಗಿರುತ್ತದೆ. ಈ ಬಂಧ ನಿಸ್ವಾರ್ಥ ಮತ್ತು ಪ್ರಾಮಾಣಿಕ ನೆಲೆಯಲ್ಲಿದ್ದಾಗ, ಈ ಬಂಧ ಗಟ್ಟಿಗೊಂಡು ಸಮಾಜಮುಖಿಯಾದ ಸಂಬಂಧಗಳನ್ನು ಎಣೆಯುವುದಕ್ಕೆ ಅನುವಾಗುತ್ತದೆ. ಕಲೆ, ಕಲಾವಿದ ಮತ್ತು ಸಮಾಜವೆಂಬ ಈ ತ್ರಿಕೋನ ಸರಣಿಯು ಭಾವನಾತ್ಮಕ ನೆಲೆಯಲ್ಲಿ ಗಟ್ಟಿಗೊಂಡಾಗ ಜೀವಪರವಾದ ಕಾಳಜಿಯನ್ನು ಜಗತ್ತಿಗೆ ನೀಡುವ ಮೂಲಕ, ಮಾನವ ಸಂಬಂಧಗಳನ್ನು ಮಾತ್ರವಲ್ಲದೆ ಜೀವಜಗತ್ತಿಗೆ ಮಿಡಿಯುವುದಕ್ಕೆ ಸಿದ್ಧಗೊಳ್ಳುತ್ತವೆ. ಹೀಗೆ ಕಲೆ, ಕಲಾವಿದ ಮತ್ತು ಸಮಾಜವನ್ನು ತನ್ನೊಳಗೆ ಬೆಸೆದುಕೊಂಡು, ತನ್ನ ಸೇವೆಯನ್ನು ಕಲೆ ಮತ್ತು ಅನ್ನದ ಮೂಲಕ ರಂಗಭೂಮಿ ಕ್ಷೇತ್ರಕ್ಕೆ ಧಾರೆಯೆರೆದವರಲ್ಲಿ ಸಿದ್ಧಪ್ಪ ರೊಟ್ಟಿಯವರು ಪ್ರಮುಖರಾಗಿದ್ದಾರೆ.
ಶ್ರೀಯುತ ಸಿದ್ಧಪ್ಪ ರೊಟ್ಟಿಯವರು ಹಾವೇರಿ ಜಿಲ್ಲಾ ಹಾನಗಲ್ ತಾಲ್ಲೂಕಿನ ಶೇಷಗಿರಿ ಎಂಬ ಗ್ರಾಮದಲ್ಲಿ ಶ್ರೀ ಪುಟ್ಟಪ್ಪ ನಾಗಪ್ಪ ರೊಟ್ಟಿ, ಶ್ರೀಮತಿ ಈರಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಶ್ರೀಯುತ ಸಿದ್ಧಪ್ಪ ರೊಟ್ಟಿವರು ಬಾಲ್ಯದ ದಿನಗಳಿಂದಲೂ ಕಾಡುವ ಬಡತನದ ನಡುವೆ ಬೆಳೆದರೂ ತನ್ನೊಳಗೆ ಕಲಾ ಶ್ರೀಮಂತಿಕೆಯನ್ನು ಪೋಷಿಸಿಕೊಂಡು ಬಂದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಸದರಿ ಗ್ರಾಮದಲ್ಲಿ ಸಮಾಜಿಕ ಕಳಕಳಿಯ ಜವಬ್ದಾರಿ ವಹಿಸಿಕೊಂಡು ಗಜಾನನ ಯುವಕ ಮಂಡಳಿ ಸ್ಥಾಪಿಸಿದ ಶ್ರೀಯುತ ಪ್ರಭು ಗುರಪ್ಪ ಮತ್ತವರ ಸಹಚರರ ಸಾರಥ್ಯದಲ್ಲಿ ನಡೆಯುತ್ತಿದ್ದ ಶಾಲಾ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸಿದ್ಧಪ್ಪನವರು ಸಕ್ರಿಯವಾಗಿ ಭಾಗವಹಿಸಿ ಕಲಾಭಿರುಚಿಯನ್ನು ಮೈಗೂಡಿಸಿಕೊಂಡರು. ಶ್ರೀಯುತ ಪ್ರಭು ಗುರಪ್ಪನವರ ಸಾಂಸ್ಕøತಿಕ ಗರಡಿಯಲ್ಲಿ ಬೆಳೆದ ಎರಡನೆ ತಲೆಮಾರಿನ ಕಲಾ ಪ್ರತಿಭೆ ಸಿದ್ಧಪ್ಪ ರೊಟ್ಟಿಯವರು. ಹೀಗಾಗಿ ಸಿದ್ಧಪ್ಪ ರೊಟ್ಟಿಯವರಿಗೆ ಕಲಾ ಬುನಾದಿಯ ನಿರ್ಮಾಣ ಪ್ರಭು ಗುರಪ್ಪನವರ ಸಾರಥ್ಯದಿಂದಲೆ ನಿರ್ಮಾಣಗೊಂಡಿದ್ದು ಎಂದರೆ ತಪ್ಪಾಗಲಾರದು.
ಶ್ರೀಯುತ ಸಿದ್ಧಪ್ಪ ರೊಟ್ಟಿಯವರು ಬಾಲ್ಯದ ದಿನಗಳಿಂದಲೂ ಬಡತನ ಮತ್ತು ಹಸಿವಿನ ಸೆಣಸಾದ ನಡುವೆ ತಮ್ಮ ಜೀವನವನ್ನು ನಿರ್ವಹಿಸಿಕೊಂಡು ಬಂದವರು. ತನ್ನ ಕೌಟುಂಬಿಕ ಬಡತನವನ್ನು ಕಲಾ ಶ್ರೀಮಂತಿಕೆಯ ಮೂಲಕ ಮೆಟ್ಟಿನಿಂತು, ತಾನು ಅನುಭವಿಸಿದ ಹಸಿವನ್ನು ನೀಗಿಸುವ ನೆಲೆಯಲ್ಲಿ ಕಲಾಸಕ್ತರಿಗೆ ಅನ್ನದಾತರಂತೆ ನಮ್ಮ ಮುಂದೆ ನಿಂತಿದ್ದಾರೆ. ಒಬ್ಬ ಕಲಾವಿದ ವ್ಯವಹಾರಿಕ ನೆಲೆಯಲ್ಲಿ ಮಾತ್ರ ತನ್ನ ಕಲೆಯನ್ನು ಸೀಮಿತಗೊಳಿಸಿಕೊಂಡಾಗ ಅವನೆಲ್ಲ ಕ್ರಿಯೆಗಳು ಆರ್ಥಿಕತೆಯ ಲೆಕ್ಕಾಚಾರದಿಂದ ಕೂಡಿರುತ್ತವೆ. ಆದರೆ ಸಿದ್ಧಪ್ಪನವರ ತಾತ್ವಿಕ ನಿಲುವುಗಳು ವ್ಯವಹಾರಿಕ ಜಗತ್ತಿನಿಂದ ಬಹುದೂರ ಉಳಿದಿವೆ. ಹೀಗಾಗಿಯೇ ಇಲ್ಲಿ ಸಿದ್ಧಪ್ಪನವರು ನಮ್ಮನ್ನೆಲ್ಲ ಆತ್ಮೀಯವಾಗಿ ಕಾಡುವ ವಿಶಿಷ್ಟವಾದ ಪ್ರತಿಭೆಯಾಗಿ ಕಂಡುಬರುತ್ತಾರೆ. ಶ್ರೀಯುತ ಸಿದ್ಧಪ್ಪ ರೊಟ್ಟಿ ಎಂಬ ಈ ಬಹುಮುಖಿ ವ್ಯಕ್ತಿತ್ವದ ಪ್ರತಿಭೆಯು ಬಹುಮುಖ್ಯವಾಗಿ ನಮಗೆ ಎರಡು ನೆಲೆಯಲ್ಲಿ ಎದುರಾಗುತ್ತಾರೆ. ಒಂದು, ತನ್ನಲ್ಲಿ ಅಂರ್ಗತವಾದ ಕಲೆಯ ಮೂಲಕ ಸಮಾಜವನ್ನು ತಿದ್ದುವ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಕಲಾವಿದನಾಗಿ ಮಾತ್ರವಲ್ಲದೆ ಒಬ್ಬ ಗುರುವಾಗಿ ನಮಗೆ ದರ್ಶನವಾಗುತ್ತಾರೆ. ಎರಡು, ಒಬ್ಬ ಕಲಾವಿದನಾಚೆ ಕಲಾಸಕ್ತರ ಹಸಿವ ನೀಗಿಸುವ ಅನ್ನದಾತರಾಗಿ ನಿಲ್ಲುತ್ತಾರೆ. ಇವೆರಡು ಮಾದರಿಗಳ ಸಂಗಮವೆ ‘ಸಿದ್ಧಪ್ಪ ರೊಟ್ಟಿ’ ಎಂದರೆ ಅತಿಶಯೋಕ್ತಿಯಾಗಲಾರದು.
ಶ್ರೀಯುತ ಸಿದ್ಧಪ್ಪನವರು ಒಬ್ಬ ಕಲಾವಿದನಾಗಿ ಬಾಲ್ಯದ ದಿನಗಳಲ್ಲಿಯೇ ಮೈದಳೆದವರು. ನಾಲ್ಕನೆ ತರಗತಿ ಓದುವ ಸಂದರ್ಭದಲ್ಲಿಯೇ ಒಂದು ನಾಟಕದಲ್ಲಿ ಮಾಸ್ತರನ ಪಾತ್ರ ಮಾಡಿ, ಆ ಪಾತ್ರಕ್ಕೆ ಜೀವ ತುಂಬಿದ ಕಾರಣ ಇವರನ್ನು ಊರಿನ ಜನತೆ ಇಂದಿಗೂ ಮಾಸ್ತರ ಎಂಬುದಾಗಿಯೇ ಸಂಬೋಧಿಸುತ್ತಾರೆ. ಹೀಗೆ ಆರಂಭವಾದ ಇವರ ನಾಟಕದ ಯಾತ್ರೆಯು ಹಲವಾರು ಸಾಮಾಜಿಕ, ಪೌರಾಣಿ ನಾಟಕಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಿದೆ. ಇವುಗಳ ಜೊತೆ ಜೊತೆಯಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಹಲವಾರು ಬೀದಿ ನಾಟಕಗಳನ್ನು ಪ್ರದರ್ಶಿಸುವ ಮೂಲಕವಾಗಿ ತಮ್ಮ ಕಲಾ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಕೇವಲ ಕಲೆಯಿಂದ ಜೀವನ ಸಾಗಿಸುವುದು ಕಷ್ಟಕರವಾದಾಗ ಬದುಕಿನ ಒಂದು ವೃತ್ತಿಯಾಗಿ ಹೋಟೆಲ್ ತೆರೆದುಕೊಂಡರು. ಈ ವೃತ್ತಿಯ ಜೊತೆಗೆ ಕಲೆಯ ನಂಟನ್ನು ಯಥಾವತ್ತಾಗಿ ಕಾಪಾಡಿಕೊಂಡು ಬಂದಿದ್ದಾರೆ. ಶೇಷಗಿರಿ ಒಂದು ಕುಗ್ರಾಮವಾದರು ಒಂದು ಸಂಘಟನಾತ್ಮಕವಾದ ಹೋರಾಟದಿಂದ ಜಾಗೃತ ಗ್ರಾಮವಾಗಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಪ್ರಭು ಗುರಪ್ಪನವರ ಕನಸಿನ ಕೂಸಾಗಿ ರೂಪತಳೆದ ರಂಗಭೂಮಿಯು ಇಂದು ಪ್ರಪಂಚದ ಗಮನವನ್ನು ಶೇಷಗಿರಿಯತ್ತ ಸೆಳೆಯುವಂತೆ ಮಾಡಿದೆ. ಈ ರಂಗಭೂಮಿಯ ಹಾದಿಯಲ್ಲಿ ಪ್ರಭು ಗುರಪ್ಪನವರೊಂದಿಗೆ ಕೈ ಜೋಡಿಸಿದ ಸಿದ್ಧಪ್ಪನವರು ಇಲ್ಲಿಗೆ ಬರುವ ಕಲಾಸಕ್ತರೂ ಹಾಗೂ ರಂಗಾಸಕ್ತರನ್ನು ತಮ್ಮ ಮನೆಯ ಅತಿಥಿಗಳೆಂದು ಭಾವಿಸಿ, ಆದರ ಆತಿಥ್ಯವನ್ನು ನೀಡುವ ಮೂಲಕ ಅವರ ಹಸಿವನ್ನು ನೀಗಿಸುವ ಅನ್ನದಾತರಾಗಿ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಸೇವೆಯಲ್ಲಿ ವ್ಯವಹಾರಿಕತೆ ಗೌಣವಾಗಿ, ಅವರ ಹೃದಯ ವೈಶಾಲ್ಯತೆ, ಕಲೆಯೊಂದಿಗಿನ ಭಾವನಾತ್ಮಕವಾದ ಸಂಬಂಧ ಎದ್ದು ಕಾಣುತ್ತದೆ.
ಶ್ರೀಯುತ ಸಿದ್ಧಪ್ಪ ರೊಟ್ಟಿಯವರ ಈ ಮಹತ್ತರವಾದ ಸೇವೆಗೆ ಅವರ ಶ್ರೀಮತಿ ಗೌರಮ್ಮನವರ ಸಹಕಾರವು ಪ್ರಚೋದಕ ಶಕ್ತಿಯಾಗಿ ಕಾರ್ಯನಿರ್ವಹಿಸಿದೆ. ಸಿದ್ಧಪ್ಪನವರ ಎಲ್ಲಾ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಮೂಲಕವಾಗಿ ಬದುಕಿನ ಬಂಡಿಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ತಮ್ಮ ಸಂಬಂಧಿಗಳು ಸಿದ್ಧಪ್ಪ ನಾಟಕ ಮಾಡುತ್ತಾನೆಂದು ಮೂದಲಿಸಿದಾಗಲೂ ತನ್ನ ಗಂಡನ ನಡೆಯನ್ನು ಸಮರ್ಥಿಸಿಕೊಂಡು, ಸಿದ್ಧಪನವರ ಕಲಾ ಶ್ರೀಮಂತಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಮ್ಮ ಶ್ರೀಮತಿಯವರ ಈ ತಾಳ್ಮೆ ಮತ್ತು ಅವರ ಪ್ರೋತ್ಸಾಹವನ್ನು ವ್ಯಕ್ತಪಡಿಸುವ ಸಂದರ್ಭದಲ್ಲಿ ಸಿದ್ಧಪನವರು ಗದ್ಗದಿತರಾಗಿ, ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದರು. ಈ ಸಂದರ್ಭದಲ್ಲಿ ಹೊರಬಂದ ಒಂದನಿ ಕಣ್ಣಿರು ಅವರ ಶ್ರೀಮತಿಯ ಪ್ರೋತ್ಸಾಹದ ಪ್ರತೀಕವಾಗಿತ್ತು. ಇಷ್ಟೇ ಸಾಕು ಅವರಿಬ್ಬರ ನಡುವಿನ ಭಾಂದವ್ಯದ ಸೆಲೆಯನ್ನು ಅರಿಯುವುದಕ್ಕೆ. ಶ್ರೀಯುತ ಸಿದ್ಧಪ್ಪನವರ ಕಲಾ ಸೇವೆಗೆ 2017 ರಲ್ಲಿ ‘ಸಿ.ಜಿ.ಕೆ’ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದಾಗ ಇದು ಸಿದ್ಧಪ್ಪನವರಿಗೆ ಮಾತ್ರ ಸೇರಿದ ಫಲವಾಗಿರಲಿಲ್ಲ. ದಂಪತಿಗಳಿಬ್ಬರ ಸೇವೆಗೆ ಲಭಿಸಿದ ಫಲವಾಗಿತ್ತು. ಈ ದಂಪತಿಗಳಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದು, ಮಗನು ಕೂಡ ತಂದೆಯ ಗುಣವನ್ನು ತನ್ನ ರಕ್ತದಲ್ಲಿ ಕರಗತ ಮಾಡಿಕೊಂಡು, ತನ್ನ ವಿದ್ಯಾರ್ಥಿ ಮಿತ್ರರಿಗೆ ನಾಟಕ ಕರಗತ ಮಾಡಿಸುವ ಜವಬ್ದಾರಿ ಹೊತ್ತು ತಂದೆ ಕೀರ್ತಿಯನ್ನು ಬೆಳಗುವತ್ತ ಮುನ್ನಡೆಯುತ್ತಿದ್ದಾರೆ.
ಶ್ರೀಯುತ ಸಿದ್ಧಪ್ಪ ರೊಟ್ಟಿಯವರದು ಮಣ್ಣ ಸೊಗಡಿನ ದೇಸಿ ಗುಣ. ನೆಲದ ಜೀವಪರವಾದ ಕಾಳಜಿ ಅವರಲ್ಲಿ ಸದಾ ಕ್ರಿಯಾಶೀಲವಾಗಿದೆ. ಈ ಮಣ್ಣದನಿ ಅವರಲ್ಲಿ ಮತ್ತಷ್ಟು ಹೊಸ ಕನಸುಗಳನ್ನು ಬಿತ್ತಿ ಬೆಳೆಯಲಿ. ಅವರು ಈ ಸಮಾಜಕ್ಕೆ ಮಾದರಿಯಾಗಿ ನಿಲ್ಲಲಿ. ಆ ಮೂಲಕ ರಂಗಭೂಮಿಗೆ ಆಶ್ರಯದಾತರಾಗಿ ನಿಲ್ಲಲಿ ಎಂಬುದು ನಮ್ಮ ಹಾರೈಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ನೆಲದನಿ
ರೈತ ಹೋರಾಟಗಾರ `ಸಹಜಾನಂದ ಸರಸ್ವತಿ’

ಉತ್ತರಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ 22 ಫೆಬ್ರವರಿ 1889 ರಂದು ಜನಿಸಿ, ಜೂನ್ 26,1950 ರಂದು ನಿಧನರಾದ ಸಹಜಾನಂದ್ ಸರಸ್ವತಿ ಅವರ ನಿಜವಾದ ಹೆಸರು ನವರಂಗ್ ರೈ. ಹೋರಾಟ ಮನೋಭಾವದ ಸಹಜಾನಂದರು ಬಹುಮುಖ ಪ್ರತಿಭೆ. ಕ್ರಾಂತಿಕಾರಿ ರೈತ ನಾಯಕ, ಇತಿಹಾಸಕಾರ, ದಾರ್ಶನಿಕ, ಬರಹಗಾರ. ಅವರ ಮುಖ್ಯ ಬರಹ-ಕೃತಿ ಬಿಹಾರವನ್ನು ಕೇಂದ್ರೀಕರಿಸಿದೆ. ಅವರು ಬಿಹ್ತಾದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು ಮತ್ತು ಅಲ್ಲಿಂದ ತಮ್ಮ ವೃದ್ದಾಪ್ಯದ ದಿನಗಳಲ್ಲಿ ತಮ್ಮ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಿದರು.
ಸಹಜಾನಂದರು 1929ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭೆಯನ್ನು (ಬಿಪಿಕೆಎಸ್) ರಚಿಸಿದರು. ಜಮೀನ್ದಾರರಿಂದ ಭೂ ಹಿಡುವಳಿ ಕುರಿತಾಗಿ ರೈತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ರೈತರ ಕುಂದುಕೊರತೆಗಳನ್ನು ಒಟ್ಟುಗೂಡಿಸುವ ಸಲುವಾಗಿ ಈ ಸಂಘಟನೆ-ಹೋರಾಟವನ್ನು ಅವರು ಆರಂಭಿಸಿದರು. ಆ ಮೂಲಕ ಭಾರತದಲ್ಲಿ ರೈತರ ಚಳುವಳಿಗಳಿಗೆ ನಾಂದಿ ಹಾಡಿದರು.
ಕ್ರಮೇಣ ರೈತ ಚಳುವಳಿ ತೀವ್ರಗೊಂಡಿತು ಮತ್ತು ಭಾರತದ ಉಳಿದ ಭಾಗಗಳಿಗೆ ಹರಡಿತು. ಇದು 1936 ರಲ್ಲಿ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ರಚನೆಗೆ ಕಾರಣವಾಯಿತು, ಅವರು ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು. ಕಿಸಾನ್ ಪ್ರಣಾಳಿಕೆ ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿತು. ಆ ಜಮೀನ್ದಾರರನ್ನು ಬ್ರಿಟಿಷ್ ಸರ್ಕಾರ ಆದಾಯ ಸಂಗ್ರಹಕ್ಕಾಗಿ ನೇಮಕ ಮಾಡಿಕೊಂಡಿತ್ತು.
ಇದನ್ನೂ ಓದಿ | ಕ್ರಾಂತಿಕಾರಿ ರೈತ ಹೋರಾಟದ ಸ್ಫೂರ್ತಿಯ ಚಿಲುಮೆ `ಅಜಿತ್ ಸಿಂಗ್‘
ಭೂ ಮಾಲೀಕತ್ವವನ್ನು ಉಳಿಸಲು ಮತ್ತು ರೈತರ ಉಳುಮೆಯ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆದ ಈ ಚಳುವಳಿ, ಬಿಹಾರ ಮತ್ತು ಯುನೈಟೆಡ್ ಪ್ರಾಂತ್ಯದ ಕಾಂಗ್ರೆಸ್ ಸರ್ಕಾರಗಳೊಂದಿಗೆ ಸಂಘರ್ಷ ಎದುರಿಸಬೇಕಾಗಿತು.
ಸಹಜಾನಂದ ಸರಸ್ವತಿ 1937-1938ರಲ್ಲಿ ಬಿಹಾರದಲ್ಲಿ ಬಕಾಶ್ತ್ ಚಳವಳಿಯನ್ನು ಸಂಘಟಿಸಿ ಮುನ್ನಡೆಸಿದರು. ಬಕಾಶ್ತ್ ಎಂದರೆ ಸ್ವಯಂ-ಕೃಷಿ, ಸ್ವಯಂ ಉಳುಮೆ. ಈ ಆಂದೋಲನವು ಜಮೀನ್ದಾರರ ಬಕಾಶ್ತ್ ಜಮೀನುಗಳಿಂದ ಟೆನೆಂಟ್ಗಳನ್ನು ಹೊರಹಾಕುವುದರ ವಿರುದ್ಧವಾಗಿತ್ತು. ಇದು ಬಿಹಾರ ಹಿಡುವಳಿ ಕಾಯ್ದೆ ಮತ್ತು ಬಕಾಶ್ತ್ ಭೂ ತೆರಿಗೆಯನ್ನು ಅಂಗೀಕರಿಸಲು ಕಾರಣವಾಯಿತು. ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸಹಜಾನಂದರನ್ನು ಬಂಧಿಸಲಾಗಿತ್ತು.
(ಕೃಪೆ : Mass Media Foundation)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ಸಾರೇಕೊಪ್ಪದ ಬಂಗಾರ ; ಅಕ್ಷರತುಂಗಾವನ್ನು ನೆನೆದು

- ಸುರೇಶ ಎನ್ ಶಿಕಾರಿಪುರ
ನನ್ನಮ್ಮ ಅನಕ್ಷರಸ್ತೆ ಆಕೆ ಅಕ್ಷರ ಬರೆಯುವುದು ಕಲಿತದ್ದು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ಜಾರಿಗೆ ತಂದಿದ್ದ ‘ಅಕ್ಷರ ತುಂಗಾ’ ಎಂಬ ಯೋಜನೆಯಿಂದ. ಅನಕ್ಷರಸ್ಥ ಹಿಂದುಳಿದ ವರ್ಗಗಳ ಜನ ಸಣ್ಣದಾಗಿ ದಿನಪತ್ರಿಕೆ ಓದಲು ರಾಜಕೀಯ ಸಾಮಾಜಿಕ ವೈಚಾರಿಕ ವಿಚಾರಗಳನ್ನು ಸರ್ಕಾರಗಳ ಯೋಜನೆಗಳು ವಿದ್ಯಾಮಾನಗಳನ್ನು ಅರ್ಥಮಾಡಿಕೊಳ್ಳಲು ಕಲಿತದ್ದು ಬಂಗಾರಪ್ಪನೆಂಬ ಹಿಂದುಳಿದ ವರ್ಗದ ನಾಯಕ ಜಾರಿಗೊಳಿದ್ದ ಆ ಯೋಜನೆಯಿಂದ.
ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ದಲಿತರು ಹಿಂದುಳಿದವರು ಅಕ್ಷರ ಕಲಿಯಬಾರದೆಂಬ ಪಾರಂಪರಿಕ ದ್ವೇಷ ಮತ್ತು ಹೊಟ್ಟೆಕಿಚ್ಚಿನ ಕಾರಣಕ್ಕೆ ಮೇಲ್ಜಾತಿಗಳು ಇದರ ಮೇಲೆ ಅಪಪ್ರಚಾರ ಶುರುವಿಟ್ಟರು. ಅಕ್ಷರ ತುಂಗಾ ಯೋಜನೆಯ ಕುರಿತ ಅಸಮಧಾನ ಅಪಪ್ರಚಾರದ ಒಂದು ಘೋಷಣೆ ಹೇಗಿತ್ತೆಂದರೆ,
“ಅಕ್ಷರತುಂಗಾ ಮೂರ್ಕೋಟಿ ನುಂಗ” ಇದನ್ನು ಅಂದಿನ ದಲಿತವಿರೋಧೀ ಹಿಂದುಳಿದವರ ವಿರೋಧಿಗಳು ಯಶಸ್ವಿಯಾಗಿ ಪ್ರಚಾರ ಮಾಡಿದರು. ಅಕ್ಷರ ಕಲಿಯುತ್ತಿದ್ದ ಜನ ಕೆಲವರು ಅದನ್ನು ಹೌದೆಂದೇ ನಂಬಿದ್ದರು. ಬಂಗಾರಪ್ಪ ಅಪ್ಪಟ ಜಾನಪದ ನಾಯಕ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಹಳ್ಳಿ ಸೊಗಡು ಸಂಪರ್ಕ ಬಿಟ್ಟುಕೊಡದ ಅಪ್ಪಣ ಹಳ್ಳೀಯ.
ಅವರಿಗೆ ಅಕ್ಷರ ಜ್ಞಾನವಿಲ್ಲದ ಕಾರಣಕ್ಕೇ ದಲಿತರು ಹಿಂದುಳಿದವರು ಹಿಂದೇಯೇ ಉಳಿದಿರುವುದು ಎಂಬ ಸ್ಪಷ್ಟ ತಿಳುವಳಿಕೆಯಿತ್ತು. ಅದಕ್ಕಾಗೇ ಅಂಬೇಡ್ಕರ್ ಗಾಂಧೀಜಿ ನೆಹರು ದೇವರಾಜ ಅರಸು ಹೋರಾಡಿದ್ದರೆಂಬ ಅರಿವಿತ್ತು ಹಾಗಾಗಿಯೇ ಶಾಲೆ ಕಲಿಯದ ಹಿರಿಯರು ಯುವಕರು ಆ ಯೋಜನೆಯ ಮೂಲಕ ನಾಲಕ್ಕಕ್ಷರ ಕಲಿತು ತಮ್ಮ ಮೇಲಾಗುವ ಅನ್ಯಾಯ ಅಕ್ರಮ ದಬ್ಬಾಳಿಕೆಗಳನ್ನು ಅರ್ಥ ಮಾಡಿಕೊಳ್ಳುವಂತಾಗಲಿ ಎಂಬುದೇ ಅವರ ಉದ್ಧೇಶವಾಗಿತ್ತು.
ಏಕೆಂದರೆ ಅನಕ್ಷರಸ್ತ ಬಡ ರೈತನಿಂದ ನಕಲಿ ಸಹಿ ಮಾಡಿಸಿಕೊಂಡು ಅವನ ಹೊಲ ಮನೆ ನುಂಗಿ ನೀರುಕುಡಿದ ಮೇಲ್ಜಾತಿ ಹಣವಂತರ ದೌರ್ಜನ್ಯಗಳ ಬರ್ಬರತೆ ಹೇಗಿರುತ್ತಿತ್ತು ಎಂಬುದನ್ನು ಆ ಕಾಲದ ಹಿರಿಯ ತಲೆಮಾರಿನವರಿಗೆ ಕೇಳಿದರೆ ಗೊತ್ತಾಗುತ್ತದೆ. ಕರಣಿಕ ಗೌಡ ಪಟೇಲ ಎಂಬುವವರೆಲ್ಲಾ ಅಕ್ಷರ ಬಲ ದೊಣ್ಣೆಯ ಬಲ ಖಡ್ಗದ ರಾಜಕೀಯ ಬಲದಿಂದಲೇ ದಮನಿತ ವರ್ಗಗಳನ್ನು ಹತ್ತಿಕ್ಕಿದ ಚರಿತ್ರೆಯೇ ನಮ್ಮ ಬೆನ್ನಿಗಿದೆ.
ಇಂತಹಾ ದುರುಳರಿಂದ ದುಡಿಯುವ ಶ್ರಮಜೀವಿ ಜನರನ್ನು ಪಾರು ಮಾಡಲು ಕೊನೆಯಪಕ್ಷ ಒಂದು ಅಗ್ರಿಮೆಂಟ್ ಕಾಪಿಯನ್ನೋ ನೋಂದಣಿ ವ್ಯವಹಾರವನ್ನೋ ಓದಿ ತಿಳಿದುಕೊಳ್ಳುವಂತಾಗಲಿ ಇದರಿಂದ ಸಾಕಷ್ಟು ಶೋಷಣೆಯನ್ನು ತಪ್ಪಿಸಬಹುದೆಂಬುದು ಅವರ ದೂರದೃಷ್ಟಿಯಾಗಿತ್ತು. ಇದು ಮೇಲ್ಜಾತಿ ಮನಸುಗಳಿಗೆ ಆಗಿಬರಲಿಲ್ಲ ಅವರು ಹುನ್ನಾರದ ಬೀಜ ಬಿತ್ತಿದರು “ಅಕ್ಷರತುಂಗಾ ಮೂರ್ಕೋಟಿ ನುಂಗಾ” ಎಂದೇ ಕೂಗಿದರು.
ನನ್ನೂರಿನ ಬಿಜೆಪಿಯ ಈರಾದಿಈರರೆಲ್ಲ ಇದನ್ನು ದನಿ ಎತ್ತರಿಸಿ ಕೂಗಿದ್ದೇ ಕೂಗಿದ್ದು ಹಾಗೆ ಕೂಗುವವರಲ್ಲಿ ಮುಗ್ಧ ಅನಕ್ಷರಸ್ಥ ಜನತೆಯೂ ಇರುತ್ತಿತ್ತು. ಆದರೆ ‘ಅಕ್ಷರತುಂಗಾ’ ಯೋಜನೆಯಲ್ಲಿ ಬಂಗಾರಪ್ಪ ಗಂಟು ಹೊಡೆದರು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಸಾಬೀತಾಗಲೂ ಇಲ್ಲ.
ಹಿಂದುಳಿದವರ್ಗದವನೊಬ್ಬ ಅಧಿಕಾರ ಉನ್ನತಸ್ಥಾನದಲ್ಲಿ ಕೂರುವುದು ಶೋಷಿತ ಸಮುದಾಯಗಳು ಅಕ್ಷರ ಕಲಿಯುವುದು ಈ ದೇಶದ ಮೇಲ್ಜಾತಿಗಳಿಗೆ ಯಾವತ್ತೂ ಆಗದ ವಿಚಾರ.
ದೇವರಾಜ ಅರಸರಿಗೂ ಬಂಗಾರಪ್ಪನವರಿಗೂ ಕಾಡಿದರು ಸಿದ್ದರಾಮಯ್ಯನವರಿಗೂ ಕಾಡಿದರು ಮುಂದೆ ಯಾರೇ ದಲಿತ ಹಿಂದುಳಿದವ ಅಧಿಕಾರಕ್ಕೆ ಬಂದರೂ ಕಾಡುತ್ತಾರೆ ಸಾಧ್ಯವಾದಷ್ಟು ಆ ಸಮುದಾಯಗಳವರು ಅಧಿಕಾರದ ಹಂತಕ್ಕೆ ಬರುವುದನ್ನು ತಡೆಯಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ನೆಲದನಿ
ನುಡಿಯ ಒಡಲು -27 | ನುಡಿಯೆಂಬ ಅಪ್ರಮಾಣದ ಪ್ರಮಾಣೀಕರಣ

- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿ, ಪ್ರಾದೇಶಿಕ ನುಡಿ ಇಲ್ಲವೇ ರಾಷ್ಟ್ರೀಯ ನುಡಿ ಯಾವುದಾದರೂ ಇರಬಹುದು ಅಂತಹ ನುಡಿಯ ಚಹರೆಗಳು ಎರಡು ಪ್ರಮುಖ ಆಯಾಮಗಳನ್ನು ಒಳಗೊಂಡಿರುತ್ತವೆ. ಒಂದು ರಚನೆ ಮತ್ತೊಂದು ಕ್ರಿಯೆ. ನಿರಂತರ ಬದಲಾವಣೆಯ ಪ್ರಕ್ರಿಯೆಯಲ್ಲಿ ರೂಪಿಸಿಕೊಂಡ ನುಡಿಯ ರಚನೆ ಮತ್ತು ಕ್ರಿಯೆಯ ವಿಭಿನ್ನ ನೆಲೆಗಳನ್ನು ಸಮಾಜಭಾಷಾಶಾಸ್ತ್ರೀಯ ಮಾದರಿಯಲ್ಲಿ ಬಿಡಿಸಿ ನೋಡಬೇಕಿದೆ.
ಹೀಗೆ ಯಾವುದೇ ನುಡಿಯ ಯಾಜಮಾನಿಕೆ ನೆಲೆಗೊಳ್ಳಲು ಆ ನಾಡಿನ ರಾಜ ಇಲ್ಲವೇ ಅರಸು ಮನೆತನಗಳ ಕೊಡುಗೆಯೂ ಕಾರಣವಾಗಿರದೆ ಇರಲಾರದು. ನುಡಿ ಬಗೆಗಿನ ಇಂತಹ ಬೆಳವಣಿಗೆಗಳನ್ನು ವಿಶ್ಲೇಷಿಸುವ ಅಗತ್ಯವಿದೆ. ಈ ವಿದ್ಯಮಾನಗಳು ಹಾಗೂ ಬೆಳವಣಿಗೆಯನ್ನು ಅರಿತುಕೊಳ್ಳುವ ಮೂಲಕ ನುಡಿಯ ಒಡಲಲ್ಲೇ ಹುದುಗಿರುವ ಅಸಮಾನತೆಗಳನ್ನು ಗುರುತಿಸಬಹುದು.
ಡೈಗ್ಲಾಸಿಂ ಎಂಬ ಅರಿಮೆಪದದ ಮೂಲಕ ನುಡಿಯ ಇಂತಹ ಅಸಮಾನ ನೆಲೆಗಳನ್ನು ಬಿಡಿಸಿ ನೋಡಬಹುದು. ಆದರೆ ಡೈಗ್ಲಾಸಿಯ ಕುರಿತ ಫರ್ಗ್ಯೂಸನ್ (1986:219) ಅವರ ವಿಶ್ಲೇಷಣಾ ಮಾದರಿಗೆ ಸಾಕಷ್ಟು ಮಿತಿಗಳಿರುವುದರಿಂದ ಡೈಗ್ಲಾಸಿಯದ ಪೂರ್ಣ ಚಿತ್ರಣ ಸಿಗುವುದಿಲ್ಲ. ಹಾಗಾಗಿ ಇವರ ತಾತ್ವಿಕ ಚೌಕಟ್ಟಿಗೆ ಪರ್ಯಾಯವಾಗಿ ಇನ್ನೊಂದು ಚೌಕಟ್ಟನ್ನು ರೂಪಿಸಿಕೊಂಡು ವಿವರಿಸಬಹುದು.
ಅಂದರೆ ಡೈಗ್ಲಾಸಿಯೆಂಬುದು ಕೇವಲ ಒಂದೇ ನುಡಿಯೊಳಗಣ ಏರುಪೇರುಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಬದಲಾಗಿ ನುಡಿಯೊಳಗಿನ ಅಸಮಾನತೆಗೆ ಬೇರೊಂದು ನುಡಿಯೂ ಕಾರಣವಾಗಿರಲೂ ಸಾಧ್ಯವಿದೆ (ಎತ್ತುಗೆಗಾಗಿ ಸಂಸ್ಕೃತ ಕನ್ನಡ ಹಾಗೂ ಸಂಸ್ಕೃತಕ್ಕೆ ಹೊರತಾದ ಕನ್ನಡ ಅಂದರೆ ದೇಶಿ ಕನ್ನಡ). ಆದ್ದರಿಂದ ಯಾವುದೇ ಒಂದು ನುಡಿ ಇಲ್ಲವೇ ಒಳನುಡಿಯು ಬೇರೊಂದು ನುಡಿ ಇಲ್ಲವೇ ಒಳನುಡಿಯ ಪ್ರಾಬಲ್ಯಕ್ಕೆ ಒಳಪಟ್ಟಾಗ ಅಂತಹ ನುಡಿ ರೂಪಾಂತರಗೊಳ್ಳುವ ಬಗೆಗಳು ಯಾವ ಯಾವ ಸ್ವರೂಪದಲ್ಲಿ ರೂಪುಗೊಳ್ಳುತ್ತವೆ ಅನ್ನುವ ಪ್ರಕ್ರಿಯೆಯನ್ನೂ ಕೂಡ ಡೈಗ್ಲಾಸಿಯ ಎಂದು ಗುರುತಿಸಿಬಹುದು.
ಈ ಡೈಗ್ಲಾಸಿಯ ಹುಟ್ಟಿಸುವ ಡೈಕಾಟಮಿಯೂ ಕೂಡ ಒಂದು ನುಡಿ ಹಾಗೂ ಒಳನುಡಿಗಳ ನಡುವೆ ಇರುವ ಅಧಿಕಾರ ಮತ್ತು ಸಾಮಾಜಿಕ ಅಂತಸ್ತನ್ನು ಪ್ರತಿನಿಧಿಸುವ ಬಗೆಯೇ ಹೊರತು ಬೇರೇನು ಇರಲಾರದು. ಕನ್ನಡದ ಪ್ರಮಾಣಭಾಷೆ ಎನ್ನುವುದು ಸಂಸ್ಕೃತ ಭೂಯಿಷ್ಠ ಭಾಷಿಕ ಸ್ವರೂಪ. ಇದನ್ನೇ ಕನ್ನಡದ ಉನ್ನತ (ದಿ ಹೈ ವೆರೈಟಿ) ನುಡಿ ಪ್ರಭೇದವೆಂದು ಪರಿಗಣಿಸಿರುವುದು. ಇಂತಹ ನುಡಿ ಸನ್ನಿವೇಶವು ಕನ್ನಡದ ಇತರೆ ಒಳನುಡಿಗಳನ್ನು ನಿಮ್ನ (ದಿ ಲೋ ವೆರೈಟಿ) ಪ್ರಭೇದಗಳನ್ನಾಗಿ ರೂಪಿಸಿರಲಕ್ಕೂ ಸಾಧ್ಯ.
ಈ ಎರಡೂ ಬಗೆಯ ಪ್ರಭೇಧಗಳ ನಡುವಿನ ವ್ಯತ್ಯಾಸಗಳನ್ನು ಫರ್ಗ್ಯೂಸನ್ನು ವಿವರಿಸುವ ಮಾದರಿಯಲ್ಲಿ ನೋಡಲು ಸಾಧ್ಯವಿಲ್ಲ. ಏಕೆಂದರೆ ಫರ್ಗ್ಯೂಸನ್ನ ಪ್ರಕಾರ ಡೈಗ್ಲಾಸಿಯ ಎಂಬುದು ಒಂದೇ ನುಡಿಯ ಬೇರೆ ಬೇರೆ ಪ್ರಭೇದಗಳ ನಡುವಣ ಅಂತರಗಳು. ಈ ಅಂತರಗಳನ್ನೇ ಇವನು ಹೈ ಮತ್ತು ಲೋ ಪ್ರಭೇದಗಳೆಂದು ಗುರುತಿಸಿದ್ದಾನೆ. ಇವುಗಳಲ್ಲಿ ಹೈ ವೆರೈಟಿಯೇ ಈ ಮುಂದಿನ ಎಲ್ಲ ವಲಯಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಈ ವಲಯಗಳನ್ನು ನಿಯೋಗ.
ಪ್ರತಿಷ್ಠೆ, ಸಾಹಿತ್ಯ ಪರಂಪರೆ, ಗ್ರಹಿಕೆ, ಪ್ರಮಾಣೀಕರಣ, ನೆಲೆಗೊಳಿಸುವಿಕೆ, ವ್ಯಾಕರಣ, ಶಬ್ದಕೋಶ ಎಂದು ವರ್ಗೀಕರಿಸಿದ್ದಾನೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಚರಿತ್ರೆಯನ್ನು ಪರಿಶೀಲಿಸಿದಾಗ ಈ ಎರಡೂ ಪ್ರಭೇದಗಳ ನಡುವಿನ ಕಂದರ ಮೇಲೆ ಪಟ್ಟಿ ಮಾಡಿದ ಎಲ್ಲ ನಿಯೋಗಗಳಲ್ಲಿಯೂ ನಿಚ್ಚಳವಾಗಿ ಕಣ್ಣಿಗೆ ರಾಚುತ್ತದೆ ದಿಟ. ಆದರೆ ಫರ್ಗ್ಯೂಸನ್ನ ಮಾದರಿಗೆ ಹೊರತಾದ ಕನ್ನಡದ ಡೈಗ್ಲಾಸಿಯ ಮಾದರಿಯನ್ನು ಇಲ್ಲಿ ಕಾಣಬಹುದು.
ಈಗಾಗಲೇ ಚರ್ಚಿಸಿದಂತೆ ಕನ್ನಡ ಸನ್ನಿವೇಶದಲ್ಲಿ ಹೈ ವೆರೈಟಿ ಅಂದರೆ ಅದು ಸಂಸ್ಕೃತ ಕನ್ನಡವೇ ಆಗಿರುತ್ತದೆ ಹಾಗೂ ಲೋ ವೆರೈಟಿ ಎಂಬುದು ಅದು ದೇಶಿ ಕನ್ನಡವೇ ಆಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಇಂತಹ ಕನ್ನಡವನ್ನೇ ಮಾರ್ಗ ಹಾಗೂ ದೇಶಿ ಎಂದೂ ವಿಂಗಡಿಸಿರಬಹುದು. ಹೀಗೆ ರೂಪುಗೊಂಡ ಈ ಆಯಾಮಗಳು ಸಾಂಸ್ಕೃತಿಕ, ರಾಜಕೀಯ ಪಲ್ಲಟಕ್ಕೂ ಕಾರಣವಾಗಿವೆ ಎಂಬುದು ಗಮನಾರ್ಹ. ಫರ್ಗ್ಯೂಸನ್ನ ಪ್ರಕಾರ ಹೈ ಹಾಗೂ ಲೋ ವೆರೈಟಿಗಳ ನಡುವಣ ಅಂತರ ಯಾವಾಗಲೂ ಅದು ಸ್ಥಿರವಾಗಿರುತ್ತದೆ.
ಅಂದರೆ ಇವನ ಪ್ರಕಾರ ಡೈಗ್ಲಾಸಿಯವನ್ನು ಕುರಿತು ಚರ್ಚಿಸುವುದೆಂದರೆ ಪ್ರಮಾಣ ನುಡಿಯೊಂದರ ಬೆಳವಣಿಗೆ ಹಾಗೂ ಲಕ್ಷಣಗಳನ್ನು ಕುರಿತು ಚರ್ಚಿಸುವುದೇ ಆಗಿದೆ. ಆದರೆ ಬಕ್ತಿನ್ನ ಹೆಟ್ರೋಗ್ಲಾಸಿಯ ಪರಿಕಲ್ಪನೆಯೊಟ್ಟಿಗೆ ಡೈಗ್ಲಾಸಿಯವನ್ನು ಹೋಲಿಸಿ ನೋಡಿದರೆ ದಿಟವಾಗಿಯೂ ನುಡಿಯ ಒಡಲ ಉರಿ ಎಂತಹದು ಎಂಬುದು ನಿಚ್ಚಳವಾಗುತ್ತದೆ.
ಬಕ್ತಿನ್ನ ಪ್ರಕಾರ ಹೆಟ್ರೋಗ್ಲಾಸಿಯ ಎನ್ನುವುದು ಲೋ ವೆರೈಟಿಯ ಬಹುಳತೆಯನ್ನು ಕುರಿತಾಗಿದೆ ಅಂದರೆ ಹೆಟ್ರೋಗ್ಲಾಸಿಯ ಎಂಬುದು ಅಂಕೆಯಲ್ಲಿಟ್ಟ ನುಡಿ (ಒವರ್ರ್ಚಿಂಗ್) ಹಾಗೂ ಸಾಹಿತ್ಯಕ ಇಲ್ಲವೇ ಮೇಲ್ಮಟ್ಟದ ನುಡಿ (ಲಿಟರರಿ ಆರ್ಎನ್ನೋಬೆಲ್ಡ್)ಗಳ ನಡುವಣ ತಿಕ್ಕಾಟವೇ ಆಗಿರುತ್ತದೆ. ಇದನ್ನು ಹೀಗೂ ಹೇಳಬಹುದು, ನುಡಿಯ ಏಕೀಕರಣ ಹಾಗೂ ವಿಕೇಂದ್ರಿಕರಣದ ನಡುವಿನ ತಿಕ್ಕಾಟವೂ ಆಗಿರುತ್ತದೆ. ಸಂವಿಧಾನಬದ್ಧ ಮಾನ್ಯತೆಯನ್ನು ಪಡೆದಿರುವ ಈ ಕೆಳಗಿನ ವಿಂಗಡನೆಯನ್ನು ಗಮನಿಸಿದರೆ ಬಕ್ತಿನ್ನ ಈ ಪರಿಕಲ್ಪನೆಯ ಮಹತ್ವದ ಆಯಾಮಗಳು ಯಾವವು ಎಂಬುದು ಎದ್ದುಕಾಣುತ್ತವೆ.
1. ಪ್ರಮುಖ ನುಡಿಗಳು / ರಾಷ್ಟ್ರೀಯ ನುಡಿಗಳು
2. ಪ್ರಾದೇಶಿಕ ನುಡಿಗಳು / ಮೈನಾರಿಟಿ ನುಡಿಗಳು
3. ಶಾಸ್ತ್ರೀಯ / ವಿಶೇಷ ಮಾನ್ಯತೆ ಪಡೆದ ನುಡಿಗಳು
ಸ್ಟೀವರ್ಟ್ (ಲ್ಯಾಂಗ್ವೇಜ್ ಆಪ್ ಟೈಪಾಲಜಿ:1962: ಇಂಟರ್ನೆಟ್)ನ ಮಾದರಿಯೂ ಫರ್ಗ್ಯೂಸನ್ ನ ಮಾದರಿಯನ್ನು ಮತ್ತಷ್ಟೂ ಸುಧಾಹರಿಸಿ ನುಡಿ ಸನ್ನಿವೇಶದ ಮತ್ತೊಂದು ಬಗೆಯ ನುಡಿಯ ಅಸಮಾನತೆಯನ್ನು ತೋರಿಸುತ್ತದೆ.
ನುಡಿ ಪ್ರಕಾರಗಳು,ಟೈಪ್ಸ್
ವಿಶೇಷತೆಗಳು, ಆ್ಯಟ್ರಿಬ್ಯೂಟ್ಸ್
1. ಪ್ರಮಾಣ ನುಡಿ
2. ದೇಶಿ ನುಡಿ
3. ಒಳನುಡಿ
ವಿಶೇಷತೆಯ ವಿವರಗಳು
1. ಪ್ರಮಾಣ, 2. ಸ್ವಾಯತ್ತತೆ, 3. ಚಾರಿತ್ರಿಕತೆ, 4. ಚೈತನ್ಯಶೀಲತೆ
ಈ ಮಾದರಿಯು ನುಡಿ ಹಾಗೂ ಒಳನುಡಿಗಳ ನಡುವಣ ಅಸಮಾನ ನೆಲೆಗಳನ್ನು ಸೂಚಿಸುತ್ತದೆ. ಕನ್ನಡ ಇಲ್ಲವೇ ಭಾರತದ ಯಾವುದೇ ಒಂದು ನುಡಿಯ ಒಳನುಡಿಗಳಲ್ಲಿಯೇ ತಾರತಮ್ಯದ ನೆಲೆಗಳನ್ನು ಕಾಣಬಹುದು. ಆದ್ದರಿಂದ ಕ್ಲಾಸಿಕಲ್ ನುಡಿಗೆ ಇನ್ನೂ ಹೆಚ್ಚಿನ ಪಾವಿತ್ರö್ಯತೆಯನ್ನು ಆರೋಪಿಸುವ ಹುನ್ನಾರಗಳು ನಡೆಯುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜೋಶ್ವಾ ಫಿಶ್ಮನ್ (1980: ಇಂಟರ್ನೆಟ್) ಡೈಗ್ಲಾಸಿಯವನ್ನು ಇನ್ನೊಂದು ಬಗೆಯಲ್ಲಿ ವಿಸ್ತರಿಸುತ್ತಾನೆ. ಇವನ ಪ್ರಕಾರ ಡೈಗ್ಲಾಸಿಯ ಎಂಬುದು ಕೇವಲ ಒಂದೇ ನುಡಿಯ ಪ್ರಭೇದಗಳ ನಡುವಿನ ಸನ್ನಿವೇಶ ಮಾತ್ರವಾಗದೇ ಅದು ಬೇರೆ ಬೇರೆ ನುಡಿಗಳ ನಡುವಣ ನುಡಿ ಸನ್ನಿವೇಶವೂ ಆಗಿರುತ್ತದೆ.
ಬಹುಭಾಷಿಕ ಸನ್ನಿವೇಶದಲ್ಲಂತೂ ಹೈ ಹಾಗೂ ಲೋ ವೆರೈಟಿಗಳು ಯಾವುದೇ ಜೈವಿಕ ನಂಟಸ್ತಿಕೆಯನ್ನು ಹೊಂದದ ನುಡಿ ಪ್ರಭೇದಗಳೂ ಆಗಿರುತ್ತವೆ, ಎತ್ತುಗೆಗಾಗಿ ಸಂಸ್ಕೃತ ಇಲ್ಲವೇ ಸಂಸ್ಕೃತ ಕನ್ನಡ (ಹೈ ವೆರೈಟಿ) ಹಾಗೂ ಕನ್ನಡ (ಲೋ ವೆರೈಟಿ) ಆಗಿರುತ್ತವೆ. ಫಿಶ್ಮನ್ನ ಈ ವಿಶ್ಲೇಷಣೆಯನ್ನು ವಿಸ್ತೃತ ಡೈಗ್ಲಾಸಿಯ ಓದು ಎಂದು ಗುರುತಿಸಲಾಗಿದೆ. ದ್ವಿಭಾಷಿಕ, ಬಹುಭಾಷಿಕ ಸನ್ನಿವೇಶದಲ್ಲಿಯ ಡೈಗ್ಲಾಸಿಯ ಕುರಿತು ಇವನ ಓದುಗಳು ಹೊಸ ಬಗೆಯ ದಾರಿಗಳನ್ನು ತೋರಿಸಿವೆ ಎಂದೇ ಹೇಳಬೇಕಾಗುತ್ತದೆ.
ಒಂದು ಕಡೆಗೆ, ಸಾರ್ವತ್ರಿಕ ನುಡಿಗಟ್ಟೊಂದನ್ನು ರೂಪಿಸುವ ಮತ್ತು ಇನ್ನೊಂದು ಕಡೆಗೆ ಕನ್ನಡದ ಗುರುತನ್ನು ನೆಲೆಗೊಳಿಸುವ ಹಂಬಲದಲ್ಲಿ ಹೊರಟ ಕವಿರಾಜಮಾರ್ಗಕಾರನಿಗೆ ಬೇಕಾದಷ್ಟು ಸಾಂಸ್ಕೃತಿಕ ರಾಜಕೀಯ ಗುರಿಗಳೂ ಇದ್ದಿರಬಹುದು. ಈ ಗುಂಗಿನಿಂದ ಮಾರ್ಗಕಾರನು ಕನ್ನಡದ ರಾಚನಿಕ ಸ್ವರೂಪವನ್ನು ಪುರ್ರಚಿಸುವ ಮಹತ್ತರ ಉದ್ದೇಶವನ್ನು ಇಟ್ಟಿಕೊಂಡಿದ್ದರಬಹುದು. ಆದರೆ ಈ ಬಗೆಯ ನುಡಿಯ ಧೋರಣೆಯನ್ನು ಕೂಡ ಸಂಸ್ಕೃತ ವಿದ್ವಾಂಸರು ಲೆಕ್ಕಿಸದೆ ಮಾರ್ಗಕಾರನನ್ನು ಕೇವಲ ಅನ್ಯಭಾಷೆಗಳಿಂದ ಪಡೆಯುವ ಜಾಗದಲ್ಲಿ ನಿಲ್ಲಿಸಿದ್ದಾದರೆ.
ಈ ಮಾತುಗಳನ್ನು ಗಮನಿಸಿದರೇ ಇದು ಇನ್ನೂ ನಿಚ್ಚಳಗೊಳ್ಳುತ್ತದೆ. “ಕನ್ನಡಕ್ಕೆ ಸಂಸ್ಕೃತದ ಜ್ಞಾನಶಾಸ್ತಿçಯ ಮನ್ನಣೆ ದೊರಕದೇ ಹೋಗಿದ್ದರೆ ಅದಕ್ಕೆ ಈಗ ದೊರಕಿದ ಪ್ರತಿಷ್ಠೆಯನ್ನು ಸಾಧಿಸಲಾಗುತ್ತಿರಲಿಲ್ಲ” (ಶೆಲ್ಡನ್ ಪೊಲಾಕ್: 2000: ಪುಟ:11). ಎಂದೂ ವಿಶ್ಲೇಷಿಸಿದ ಬಗೆ ಸಂಸ್ಕೃತ ತನ್ನೆಲ್ಲ ನುಡಿಯ ಕಸುವನ್ನು ಕನ್ನಡಕ್ಕೆ ದತ್ತಿಯಾಗಿ ಕೊಟ್ಟಿದೆ ಎನ್ನುವಂತಿದೆ. ಇಂತಹ ಭಾಷಿಕ ಅಧಿಕಾರ ಮತ್ತು ಯಜಮಾನಿಕೆಯನ್ನು ಸಂಸ್ಕೃತವು ಚರಿತ್ರೆ ಉದ್ದಕ್ಕೂ ಕನ್ನಡದಂತಹ ನುಡಿಗಳ ಮೇಲೆ ಸವಾರಿಯನ್ನು ಮಾಡಿಕೊಂಡು ಬಂದಿದೆ.
ತನ್ನ ಅಧಿಕಾರ ಹಾಗೂ ಯಜಮಾನಿಕೆಯನ್ನು ಸಾಧಿಸಿರುವ ರೀತಿಯನ್ನು ಈ ಮೇಲಿನ ಪೊಲಾಕ್ ಅವರ ಮಾತುಗಳಿಂದ ತಿಳಿದುಕೊಳ್ಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಈ ಧೋರಣೆ ಕನ್ನಡದ ಅನನ್ಯತೆ ಕಟ್ಟುವ ಮಾರ್ಗಕಾರನ ತಾತ್ವಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವವನ್ನು ಹುಸಿಗೊಳಿಸುವ ಸೂಚನೆಯನ್ನೂ ನೀಡುತ್ತದೆ. ಇದು ಕನ್ನಡದಂತಹ ನುಡಿಯ ಜೀವಂತಿಕೆ ಮತ್ತು ಸ್ವಂತಿಕೆಯನ್ನು ನಾಶಮಾಡಿ ತನ್ನ ಭಾಷಿಕ ಅಧಿಕಾರವನ್ನು ಮುಂದುವರಿಸುವ ಅಪಾಯದ ಸೂಚನೆಯೂ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಕನ್ನಡದ ಅರಸು ಮನೆತನಗಳಾದ ರಾಷ್ಟçಕೂಟ, ಚಾಲುಕ್ಯ, ಹೊಯ್ಸಳ ಇವರು ತಮ್ಮ ರಾಜಕೀಯ-ಸಾಂಸ್ಕೃತಿಕ ಸಂವಹನೆಗಾಗಿ ಕನ್ನಡ ನುಡಿಗೆ ಮನ್ನಣೆ ನೀಡಿದ ಕಾರಣ ಈ ನುಡಿಯು ತನ್ನೆಲ್ಲ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಬಿಕ್ಕಟ್ಟುಗಳ ನಡುವೆಯೂ ತನ್ನದೇ ಆದ ಸಾಹಿತ್ಯಿಕ-ರಾಜಕೀಯ ಅನನ್ಯತೆಯನ್ನು ಕಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು ಎಂಬ ನಂಬಿಕೆಗಳೂ ನೆಲೆನಿಂತಿವೆ. ಇರಲಿ ಹೀಗೆ ಸಾಂಸ್ಕೃತಿಕವಾಗಿ ಪ್ರಾಬಲ್ಯ ಹೊಂದಿರುವ ಸಂಸ್ಕೃತ ನುಡಿಯ ಗಮನವು ಹೇಗೆ ಒಂದು ನುಡಿಯ ಒಟ್ಟು ಸಾಮಾಜಿಕ ಸಂದರ್ಭದಲ್ಲಿ ತನ್ನ ಗುರುತುಗಳನ್ನು ನೆಲೆಗೊಳಿಸುವ ಹುನ್ನಾರವನ್ನು ಮಾಡಿದೆ ಅನ್ನುವುದನ್ನು ಇಲ್ಲಿ ಕಾಣಬಹುದು. ಅಂದರೆ ಆಯಾ ಭಾಷಿಕ ಸನ್ನಿವೇಶ ಮತ್ತು ಬಳಕೆಯ ನಿಲುವುಗಳನ್ನು ನಿಯಂತ್ರಿಸಿದ ಮಾದರಿಗಳು ನಮ್ಮ ಕನ್ನಡ ವ್ಯಾಕರಣ, ಮೀಮಾಂಸೆ, ಸಂಸ್ಕೃತಿ ಚಿಂತನೆ, ಶೈಕ್ಷಣಿಕ ಪರಂಪರೆಗಳು ರೂಪಗೊಂಡ ಬಗೆಗಳನ್ನು ಸಾಮಾಜಿಕ ನುಡಿಯರಿಮೆಯ ನೆಲೆಗಳಿಂದ ಇನ್ನೂ ನಿಚ್ಚಳವಾಗಿ ಕಾಣಲು ಸಾಧ್ಯವಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಸಿನಿ ಸುದ್ದಿ7 days ago
ಇಂದು ಕನ್ನಡ ಬಿಗ್ ಬಾಸ್ ಸೀಸನ್ 8 ಗ್ರ್ಯಾಂಡ್ ಓಪನಿಂಗ್ | ಒಂಟಿ ಮನೆಯಲ್ಲಿ ಯಾರೆಲ್ಲಾ ಇರಲಿದ್ದಾರೆ ಗೊತ್ತಾ..?
-
ಸಿನಿ ಸುದ್ದಿ6 days ago
ರಾಬರ್ಟ್ ನ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ : ಬೇಬಿ ಡಾನ್ಸ್ ವಿಡಿಯೋ ನೀವೂ ನೋಡಿ..!
-
ಭಾವ ಭೈರಾಗಿ6 days ago
ಕವಿತೆ | ಕಾಮಧೇನು
-
ನಿತ್ಯ ಭವಿಷ್ಯ7 days ago
ಜ್ಯೋತಿಷ್ಯಶಾಸ್ತ್ರ | ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು..? ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?
-
ನಿತ್ಯ ಭವಿಷ್ಯ7 days ago
ಭಾನುವಾರ ರಾಶಿ ಭವಿಷ್ಯ : ಈ ರಾಶಿಯವರಿಗೆ ಈ ವಾರದ ಒಳಗಡೆ ಹಣಕಾಸಿನ ಸುರಿಮಳೆ ಆಗಲಿದೆ..!
-
ನಿತ್ಯ ಭವಿಷ್ಯ6 days ago
ಸೋಮವಾರ ರಾಶಿ ಭವಿಷ್ಯ : ಕರೆ ಮಾಡಿ ಕಷ್ಟಗಳನ್ನು ಪರಿಹರಿಸಿಕೊಳ್ಳಿ
-
ನಿತ್ಯ ಭವಿಷ್ಯ6 days ago
ಮೂಲಾ ನಕ್ಷತ್ರದಲ್ಲಿ ಜನಿಸಿದರೆ ಅದರ ಮಹತ್ವ ಹಾಗೂ ಅದರ ಮಾಹಿತಿ..!
-
ದಿನದ ಸುದ್ದಿ5 days ago
‘ಅನುಗ್ರಹ’ ಯೋಜನೆ ರಾಜ್ಯದಲ್ಲಿ ಮರುಜಾರಿಗೊಳಿಸದಿದ್ದರೆ ವಿಧಾನಸಭೆಯಲ್ಲಿ ಹೋರಾಟ : ಸಿದ್ದರಾಮಯ್ಯ ಎಚ್ಚರಿಕೆ