ರಾಜಕೀಯ
ನೆಹರೂ ಕುರಿತು ಅಟಲ ಬಿಹಾರಿ ವಾಜಪೇಯಿ ಅವರು ಏನು ಹೇಳಿದ್ದರು ಗೊತ್ತಾ..?
![](https://suddidina.com/wp-content/uploads/2022/08/Atal_Bihari_Vajpayee_nehru_suddidina.jpg)
- ಮೂಲ : ಅಟಲ್ ಬಿಹಾರಿ ವಾಜಪೇಯಿ, ಕನ್ನಡಕ್ಕೆ: ಗಿರೀಶ್ ತಾಳಿಕಟ್ಟೆ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಆಧುನಿಕ ಭಾರತದ ನಿರ್ಮಾತೃ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಶ್ರೀ ಪಂಡಿತ್ ಜವಾಹರಲಾಲ್ ನೆಹರೂ ಅವರು 27 ಮೇ 1964ರಲ್ಲಿ ನಮ್ಮನ್ನು ಅಗಲಿದಾಗ, ಅಂದಿನ ರಾಜ್ಯಸಭಾ ಸದಸ್ಯರಾಗಿದ್ದ ಭಾರತೀಯ ಜನಸಂಘದ (ಇಂದಿನ ಬಿಜೆಪಿಯ ಪೂರ್ವರೂಪ) ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ರಾಜ್ಯಸಭೆಯಲ್ಲಿ ಮಾಡಿದ್ದ ಭಾಷಣ ಹೀಗಿದೆ.
ಶ್ರೀಯುತರೇ, ಇವತ್ತು ಕನಸೊಂದು ಛಿದ್ರವಾಗಿದೆ; ಗಾನವೊಂದು ಮೌನವಾಗಿದೆ; ಜ್ಯೋತಿಯೊಂದು ಅನಂತದೊಳಗೆ ಲೀನವಾಗಿದೆ. ಹಸಿವುಮುಕ್ತ ಮತ್ತು ಭಯರಹಿತ ಜಗತ್ತನ್ನು ಸೃಷ್ಟಿಸಬೇಕೆಂಬ ಕನಸಾಗಿತ್ತು ಅದು. ಗೀತೆಯ ಸಾರವನ್ನು ಧ್ವನಿಸುತ್ತಿದ್ದ, ಗುಲಾಬಿಯ ಸುಗಂಧವನ್ನು ಪಸರಿಸುತ್ತಿದ್ದ ಗಾನವಾಗಿತ್ತು ಅದು. ರಾತ್ರಿಯಿಡೀ ನಿರಂತರವಾಗಿ ಜ್ವಲಿಸುತ್ತಾ, ಪ್ರತಿ ಅಂಧಕಾರದೊಂದಿಗೆ ಹೋರಾಡಿ ನಮಗೆ ದಾರಿತೋರಿ, ಇವತ್ತು ಬೆಳಗಿನ ಜಾವ ನಿರ್ವಾಣಹೊಂದಿದ ಜ್ಯೋತಿ ಅದು.
ಹೌದು, ಸಾವು ನಿಶ್ಚಿತ; ದೇಹ ನಶ್ವರ. ಶ್ರೀಗಂಧದ ಚಿತೆಯ ಜ್ವಾಲೆಗೆ ನಿನ್ನೆ ನಾವು ಅರ್ಪಿಸಿದ ಆ ಸ್ವರ್ಣ ದೇಹ ಕೂಡಾ ಕೊನೆ ಉಳ್ಳಂತದ್ದೆ. ಆದರೆ ಸಾವು ಇಷ್ಟೊಂದು ಕದೀಮನಾಗಬಹುದೇ? ನಾವು ಸ್ನೇಹಿತರೆಲ್ಲ ನಿದ್ರಿಸುತ್ತಿದ್ದಾಗ, ಅಂಗರಕ್ಷಕರೆಲ್ಲ ಮೈಮರೆತಿದ್ದಾಗ, ಸಟ್ಟನೆ ದಾಳಿ ಮಾಡಿ ನಮ್ಮ ಜೀವನದಲ್ಲಿ ನಮಗೆ ಸಿಕ್ಕಿದ್ದ ಒಂದು ಬೆಲೆಕಟ್ಟಲಾಗದ ಉಡುಗೊರೆಯನ್ನು ಕದ್ದೊಯ್ದಿದೆಯಲ್ಲ.
ಇವತ್ತು ಭಾರತಮಾತೆ ಅತೀವ ದುಃಖಿತಳಾಗಿದ್ದಾಳೆ – ಆಕೆ ತನ್ನ ಮುದ್ದಿನ ಕುವರನನ್ನು ಕಳೆದುಕೊಂಡಿದ್ದಾಳೆ. ಇವತ್ತು ಮಾನವೀಯತೆ ಸಂಕಟದಲಿ ಮಿಂದಿದೆ – ಅದು ತನ್ನ ಆರಾಧಕನನ್ನು ಕಳೆದುಕೊಂಡಿದೆ. ಇವತ್ತು ಶಾಂತಿ ನಿತ್ರಾಣಗೊಂಡಿದೆ – ಅದರ ರಕ್ಷಕ ಇನ್ನಿಲ್ಲ. ದಮನಿತರು ತಮ್ಮ ಆಸರೆಯನ್ನು ಕಳೆದುಕೊಂಡಿದ್ದಾರೆ. ಸಾಮಾನ್ಯ ಭಾರತೀಯ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಎಲ್ಲದಕ್ಕೂ ತೆರೆ ಬಿದ್ದಿದೆ. ನಾಟಕದ ಕಥಾನಾಯಕ ತನ್ನ ಪಾಲಿನ ಕೊನೇ ಅಂಕವನ್ನು ಮುಗಿಸಿ, ಜಗತ್ತಿನ ಮುಂದೆ ಶಿರಬಾಗಿ ನಿರ್ಗಮಿಸಿದ್ದಾನೆ.
ಶ್ರೀರಾಮನ ಬದುಕಿನ ಕುರಿತ ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಯು ತಾನು ಅಸಾಧ್ಯವಾದದ್ದನ್ನೆಲ್ಲ ಒಂದುಗೂಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಪಂಡಿತ್ಜಿ (ನೆಹರೂ) ಅವರ ಬದುಕಿನಲ್ಲೂ ನಾವು ಆ ಮಹಾಕವಿಯ ಉಲ್ಲೇಖದ ಮಿನುಗುಗಳನ್ನು ಕಾಣಬಹುದು. ಅವರು ಶಾಂತಿಯ ಆರಾಧಕರಾಗಿದ್ದರು; ಆದಾಗ್ಯೂ ಕ್ರಾಂತಿಯ ಮುಂಗಾಮಿಯಾಗಿದ್ದರು. ಅವರು ಅಹಿಂಸೆಯ ರೂವಾರಿಯಾಗಿದ್ದರು; ಆದಾಗ್ಯೂ, ಸ್ವಾತಂತ್ರ್ಯ ಮತ್ತು ದೇಶದ ಆತ್ಮಗೌರವದ ರಕ್ಷಣೆಗಾಗಿ ಯಾವುದೇ ಅಸ್ತ್ರವನ್ನು ಬಳಸುವುದಕ್ಕು ಸಿದ್ದವಿದ್ದರು.
ಅವರು ಪ್ರತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು; ಆದಾಗ್ಯೂ, ಆರ್ಥಿಕ ಸಮಾನತೆಯ ಕನಸಿಗೆ ಬದ್ಧರಾಗಿದ್ದರು. ಪ್ರಗತಿಗಾಗಿ ಅವರು ಯಾರ ಜೊತೆ ಬೇಕಾದರೂ ರಾಜಿಗೆ ಸಿದ್ದವಿದ್ದರು, ಆದರೆ ಯಾರಿಗೋ ಅಂಜಿ ಅವರು ರಾಜಿಗೆ ಮುಂದಾದವರಲ್ಲ. ಪಾಕಿಸ್ತಾನ ಮತ್ತು ಚೀನಾ ದೇಶಗಳ ಕುರಿತಂತೆ ಅವರ ನೀತಿಗಳು ಈ ಗುಣಮಿಶ್ರಣದ ಪ್ರತೀಕವಾಗಿದ್ದವು. ಅದು ಅವರ ಉದಾರತೆಯೂ ಹೌದು, ಬದ್ಧತೆಯೂ ಹೌದು. ಆದರೆ ಕೆಲವರು ಅವರ ಉದಾರತೆಯನ್ನು ಬಲಹೀನತೆಯೆಂತಲೂ, ಅದರ ಬದ್ಧತೆಯನ್ನು ಹಠಮಾರಿತನವೆಂತಲೂ ತಪ್ಪಾಗಿ ಅರ್ಥೈಸಿಕೊಂಡಿದ್ದು ವಿಪರ್ಯಾಸವೇ ಸರಿ.
ಅವರು ಕೋಪಿಷ್ಟರಾಗಿದ್ದನ್ನು ನಾನೊಮ್ಮೆ ಕಂಡಿದ್ದು, ಇನ್ನೂ ಚೆನ್ನಾಗಿ ನೆನಪಿದೆ. ಚೀನಾದೊಟ್ಟಿಗೆ ನಮ್ಮ ಸಂಘರ್ಷ ಉತ್ತುಂಗಕ್ಕೇರಿದ್ದ ದಿನಗಳು ಅವು. ಸಂದರ್ಭದ ಲಾಭ ಪಡೆದ ನಮ್ಮ ಪಾಶ್ಚಾತ್ಯ ಮಿತ್ರರಾಷ್ಟ್ರಗಳು ಕಾಶ್ಮೀರ ವಿಚಾರದಲ್ಲಿ ಒಂದಷ್ಟು ರಾಜಿ ಮಾಡಿಕೊಳ್ಳುವಂತೆ ನಮ್ಮ ಮೇಲೆ ಒತ್ತಡ ತರುತ್ತಿದ್ದರು. ನಾವೀಗ ಒಂದಷ್ಟು ರಾಜಿಗೆ ಸಿದ್ದವಾಗದಿದ್ದರೆ ಏಕಕಾಲಕ್ಕೆ ಎರಡು ಶತ್ರುರಾಷ್ಟ್ರಗಳೊಂದಿಗೆ ಯುದ್ಧ ಮಾಡಬೇಕಾಗಿ ಬಂದೀತು ಎಂಬ ಸಲಹೆ ಬಂದಾಗ, ಅವರು ಕೆಂಡಾಮಂಡಲವಾಗಿ “ಅಗತ್ಯಬಿದ್ದರೆ ನಾವು ಏಕಕಾಲಕ್ಕೆ ಎರಡೂ ಕಡೆ ಯುದ್ಧಕ್ಕೆ ಸಿದ್ಧ” ಎಂದು ಪ್ರತಿಕ್ರಿಯಿಸಿದ್ದರು. ಒತ್ತಡ ತಂದು ಅವರನ್ನು ಮಣಿಸಲು ಸಾಧ್ಯವಿರಲಿಲ್ಲ.
ಶ್ರೀಯುತರೇ, ಅವರ ನೇತೃತ್ವ ಮತ್ತು ಸಂರಕ್ಷಣೆಯಲ್ಲಿ ಪ್ರತಿಷ್ಟಾಪನೆಯಾಗಿದ್ದ ಸ್ವಾತಂತ್ರ್ಯ ಇವತ್ತು ಅಪಾಯಕ್ಕೆ ತುತ್ತಾಗಿದೆ. ನಮ್ಮೆಲ್ಲ ಬಲವನ್ನು ಒಗ್ಗೂಡಿಸಿ ಅದನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಅವರು ಆಳವಾಗಿ ಪ್ರತಿಪಾದಿಸಿದ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಗಳು ಸಹಾ ಅಪಾಯಕ್ಕೆ ಸಿಲುಕಿವೆ. ಯಾವುದೇ ಬೆಲೆ ತೆತ್ತಾದರೂ ಸರಿ, ಅವುಗಳನ್ನು ನಾವು ಸಂರಕ್ಷಿಸಬೇಕಿದೆ. ಅವರು ಅನುಷ್ಠಾನಗೊಳಿಸಿದ ಭಾರತೀಯ ಪ್ರಜಾಪ್ರಭುತ್ವ, ಮತ್ತು ಅದರ ಮೂಲಕ ಅವರು ಸಾಧಿಸಿದ ಯಶಸ್ಸುಗಳು ಸಹಾ ಮಂಕಾದ ಭವಿಷ್ಯವನ್ನು ಎದುರಿಸುತ್ತಿವೆ. ಒಗ್ಗಟ್ಟು, ಶಿಸ್ತು ಮತ್ತು ಆತ್ಮವಿಶ್ವಾದಿಂದ ನಾವು ಈ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಬೇಕಿದೆ.
ನಾಯಕ ನಿರ್ಗಮಿಸಿರಬಹುದು, ಅನುಯಾಯಿಗಳು ಇನ್ನೂ ಇದ್ದಾರೆ. ಸೂರ್ಯ ಅಸ್ತಮಿಸಿರಬಹುದು, ಆಗಸದಲ್ಲಿ ಮೂಡುವ ತಾರೆಗಳ ಬೆಳಕಿನಲ್ಲೇ ನಾವೀಗ ಮುಂದಿನ ದಾರಿ ಹುಡುಕಿಕೊಳ್ಳಬೇಕಿದೆ. ಇದು ನಮ್ಮ ಪರೀಕ್ಷೆಯ ಉತ್ತುಂಗದ ಕಾಲ. ಜಗತ್ತಿನ ಶಾಂತಿಗಾಗಿ ಗೌರವಯುತವಾದ ಕಾಣಿಕೆ ನೀಡಬಹುದಾದ ಮಾದರಿಯುತ ಸದೃಢ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನಾವು ಪರಸ್ಪರ ಒಗ್ಗೂಡಿ ದುಡಿಯುವುದು ಮಾತ್ರವೇ ಆ ನಾಯಕನಿಗೆ ಸಲ್ಲಿಸುವ ನಿಜವಾದ ಗೌರವ.
ಅವರ ಅಗಲಿಕೆ ಸಂಸತ್ತಿಗೆ ತುಂಬಲಾರದ ನಷ್ಟ. ಆ ಸ್ಪಂದನಶೀಲ ವ್ಯಕ್ತಿತ್ವ, ವಿರೋಧಪಕ್ಷಗಳನ್ನೂ ಜೊತೆಗೆ ಕೊಂಡೊಯ್ಯುವ ಆ ಧೋರಣೆ, ಆ ಸೂಕ್ಷ್ಮ ಸಜ್ಜನಿಕೆ, ಆ ಉದಾತ್ತತೆಗಳನ್ನು ಸದ್ಯೋಭವಿಷ್ಯದಲ್ಲಿ ಮತ್ತೆ ನಾವು ಕಾಣಲು ಸಾಧ್ಯವಿಲ್ಲ. ನಮ್ಮ ನಡುವೆ ವಿಚಾರ ಭೇದಗಳು ಇದ್ದಾಗ್ಯೂ ಕೂಡಾ, ಅವರ ಮಹಾನ್ ಚಿಂತನೆಗಳು, ಅವರ ಸಮಗ್ರತೆ, ಈ ದೇಶದೆಡೆಗೆ ಅವರಿಗಿದ್ದ ಅದ್ವಿತೀಯ ಪ್ರೀತಿ ಮತ್ತು ಅವರ ಆ ಅದಮ್ಯ ಧೈರ್ಯದ ಪ್ರತಿಯಾಗಿ ಅವರ ಬಗ್ಗೆ ನಮ್ಮಲ್ಲಿ ಗೌರವವಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ.
ಈ ನನ್ನ ನುಡಿಗಳ ಮೂಲಕ, ಆ ಮಹಾನ್ ಚೇತನಕ್ಕೆ ನನ್ನ ನಮ್ರ ಗೌರವವನ್ನು ಅರ್ಪಿಸುತ್ತೇನೆ.
– ಅಟಲ್ ಬಿಹಾರಿ ವಾಜಪೇಯಿ
ರಾಜ್ಯಸಭಾ ಸದಸ್ಯರು
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ
![](https://suddidina.com/wp-content/uploads/2024/07/kargil_vijay_divas_suddidina.jpg)
ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ಗೌರವ ಸಮರ್ಪಣೆ ಮಾಡಲಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕುನ್ ಲಾ ಸುರಂಗ ಮಾರ್ಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಯೋಜನೆಯಡಿ ನಿಮು-ಪದುಮ್-ಡಾರ್ಚಾ ರಸ್ತೆಯಿಂದ ಲೇಹ್ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಸುಮಾರು 15 ಸಾವಿರದ 800 ಅಡಿ ಎತ್ತರದಲ್ಲಿ 4.1 ಕಿಲೋಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ವಿಶ್ವದಲ್ಲೇ ಇದು ಅತಿ ಎತ್ತರದ ಸುರಂಗ ಮಾರ್ಗವಾಗಲಿದೆ. ಸಶಸ್ತ್ರ ಪಡೆಗಳ ಸುಗಮ ಪ್ರಯಾಣಕ್ಕಷ್ಟೇ ಅಲ್ಲದೇ ಲಡಾಕ್ನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಈ ಸುರಂಗ ಮಾರ್ಗವು ಸಹಕಾರಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ
![](https://suddidina.com/wp-content/uploads/2024/07/union_budget_2024_suddidina.jpg)
ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.
ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!