ದಿನದ ಸುದ್ದಿ
‘ಕಾಶ್ಮೀರ ಸಮಸ್ಯೆ’ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದವರು ‘ಇಂದಿರಾಗಾಂಧಿ ಮತ್ತು ವಾಜಪೇಯಿ’..!
ನಿರಂತರವಾಗಿ ರಕ್ತ ಹರಿಯಲು ಕಾರಣವಾಗಿರುವ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದವರು ಇಬ್ಬರು ಪ್ರಧಾನಿಗಳು. ಮೊದಲನೆಯವರು ಇಂದಿರಾಗಾಂಧಿ, ಎರಡನೆಯವರು ಅಟಲಬಿಹಾರಿ ವಾಜಪೇಯಿ.
ಇಂದಿರಾಗಾಂಧಿ ಮತ್ತು ಝುಲ್ಪಿಕರ್ ಅಲಿ ಭುಟ್ಟೋ ನಡುವೆ ನಡೆದಿದ್ದ ಶಿಮ್ಲಾ ಮಾತುಕತೆ ಬಹುತೇಕ ಯಶಸ್ವಿಯಾಗಿತ್ತು. ಬಾಂಗ್ಲಾದೇಶಕ್ಕೆ ಮಾನ್ಯತೆ, ಮೂರನೆಯವರ (ಯುಎನ್) ಮಧ್ಯಪ್ರವೇಶಕ್ಕೆ ನಿರಾಕರಣೆ ಮತ್ತು ಯುದ್ಧ ವಿರಾಮದ ಗಡಿರೇಖೆಯನ್ನು ಎಲ್ ಓ ಸಿಯಾಗಿ ಪರಿವರ್ತಿಸಲು ಒಪ್ಪಿಗೆ.. ಹೀಗೆ ಬಹುತೇಕ ವಿಷಯಗಳನ್ನು ಭುಟ್ಟೋ ಒಪ್ಪಿಕೊಂಡಿದ್ದರು. ಆ ಸಂಬಂಧ ಮತ್ತೆ ಹದಗೆಟ್ಟಿದ್ದು ಕಾರ್ಗಿಲ್ ಯುದ್ಧದಿಂದಾಗಿ.
ಅದೇ ರೀತಿ ವಾಜಪೇಯಿ ಮತ್ತು ಪರ್ವೇಜ್ ಮುಷರಪ್ ಅವರ ನಡುವೆ ಆಗ್ರಾ ಶೃಂಗ ಸಭೆಯ ಕೊನೆಯಲ್ಲಿ ಇನ್ನೇನು ಪರಸ್ಪರ ಸಮ್ಮತಿಯ ಒಪ್ಪಂದಕ್ಕೆ ಸಹಿ ಬೀಳುತ್ತದೆ ಎನ್ನುವಾಗ ಮುರಿದು ಬಿತ್ತು. ಅದಕ್ಕೆ ಕಾರಣವಾಗಿದ್ದು ಆಗಿನ ಉಕ್ಕಿನ ಮನುಷ್ಯ ಅಡ್ವಾಣಿ -ಸುಷ್ಮಾ ಜೋಡಿ. ಈ ಎರಡನೇ ಘಟನೆಗೆ ಪತ್ರಕರ್ತನಾಗಿ ನಾನು ಕೂಡಾ ಸಾಕ್ಷಿ. ಆಗ್ರಾ ಶೃಂಗ ಸಭೆಯ ಪ್ರತ್ಯಕ್ಷ ವರದಿ ಮಾಡಲು ಅಲ್ಲಿಗೆ ಹೋಗಿದ್ದೆ.
ಅಟಲಬಿಹಾರಿ ವಾಜಪೇಯಿ ಅವರಿಗೆ ತನ್ನ ಸಂಪುಟದ ಸದಸ್ಯರ ಹೆಸರುಗಳೇ ಒಮ್ಮೊಮ್ಮೆ ನೆನಪಾಗದೆ ಇದ್ದರೂ ವಿದೇಶಾಂಗ ವ್ಯವಹಾರದ ಬಗ್ಗೆ ಅಗಾಧವಾದ ತಿಳುವಳಿಕೆ ಇತ್ತು. ಅವರ ಸಮೀಪವರ್ತಿಗಳ ಪ್ರಕಾರ ಏನಾದರೂ ಮಾಡಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆಯಬೇಕೆಂಬ ಆಸೆ ಇತ್ತಂತೆ ಅವರಿಗೆ. ಅಂತಹ 2001ರ ಜುಲೈ ನಲ್ಲಿ ನಡೆದ ಆಗ್ರಾ ಶೃಂಗ ಸಭೆಯ ಬಗ್ಗೆ ವಾಜಪೇಯಿ ಅವರಲ್ಲಿ ಅಂತಹದ್ದೊಂದು ನಿರೀಕ್ಷೆಯೂ ಇತ್ತು.
ಕಾರ್ಗಿಲ್ ಯುದ್ದದ ವೈರತ್ವವನ್ನು ಮನಸ್ಸಲ್ಲಿಟ್ಟುಕೊಳ್ಳದೆ ಅದೇ ಯುದ್ಧದ ಖಳನಾಯಕ ಪರ್ವೇಜ್ ಮುಷರಫ್ ಕಡೆ ಸ್ನೇಹದ ಹಸ್ತ ಚಾಚಿದ್ದ ವಾಜಪೇಯಿ ಆಗ್ರಾಕ್ಕೆ ಬಂದಿದ್ದರು. ಜುಲೈ 15ರ ಸಂಜೆ ಪತ್ನಿ ಜತೆ ತಾಜಮಹಲ್ ವೀಕ್ಷಿಸಿ ಬಂದಿದ್ದ ಸೈನಿಕ ಮುಷರಫ್ ಹರ್ಷಚಿತ್ತರಾಗಿದ್ದರು.
ಅದೇ ರಾತ್ರಿ ವಾಜಪೇಯಿ ಜತೆ ಮಾತುಕತೆಗೆ ಕೂತಿದ್ದಾಗ ಬಾಗಿಲಿನೆಡೆಯಿಂದ ‘’ಗುಪ್ತ ಹಸ್ತ’’ವೊಂದು ಒಳಚಾಚಿತ್ತು. ಆ ಕೈಯಲ್ಲಿ ಒಂದು ಚೀಟಿ ಇತ್ತು. ಅದನ್ನು ಕಳಿಸಿದವರು ಐಎಸ್ ಐ ಮಾಜಿ ಮುಖ್ಯಸ್ಥ ಹಮೀದ್ ಗುಲ್ ಅನುಯಾಯಿಯಾಗಿದ್ದ ವಿದೇಶಾಂಗ ವ್ಯವಹಾರ ಖಾತೆ ಸಚಿವ ಅಬ್ದುಲ್ ಸತ್ತಾರ್. ಆ ಚೀಟಿ ನೋಡಿದೊಡನೆ ಮುಷರಫ್ ಮುಖಗಂಟಿಕ್ಕಿದ್ದರಂತೆ.
ಆಗ್ರಾ ಶೃಂಗ ಸಭೆಯಲ್ಲಿ ‘’ಕಾಶ್ಮೀರ ವಿಷಯವೇ ಪ್ರಧಾನ’’ ಎಂದು ಪಾಕಿಸ್ತಾನ ಹಠ ಮಾಡಿ ಕೂತಿದ್ದರೆ ‘’ಉಳಿದೆಲ್ಲವುಗಳ ಜತೆ ಕಾಶ್ಮೀರ ವಿಷಯವೂ ಇರಲಿ’’ ಎನ್ನುವುದು ಭಾರತದ ವಾದವಾಗಿತ್ತು. ಮುಷರಫ್ ಇದನ್ನು ಒಪ್ಪಿಕೊಂಡಿದ್ದರಂತೆ. ಆದರೆ ಅಷ್ಟರಲ್ಲಿ ಆಗ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅನಿರೀಕ್ಷಿತವಾಗಿ ಪತ್ರಕರ್ತರ ಕೊಠಡಿಗೆ ಬಂದು ಆಫ್ ದಿ ರೆಕಾರ್ಡ್ ಮಾತನಾಡುತ್ತಾ ‘’ ಭಾರತ ಅಂದುಕೊಂಡಂತೆಯೇ ಎಲ್ಲ ನಡೆಯುತ್ತಿದೆ’’ ಎಂಬ ಸುದ್ದಿಯನ್ನು ತೂರಿಬಿಟ್ಟು ಹೊರಟುಹೋದರು. ಟಿವಿ ಚಾನೆಲ್ ಗಳಲ್ಲಿ ಸುದ್ದಿ ಬ್ರೇಕ್ ಆಯಿತು.
ಇದನ್ನು ನೋಡಿದೊಡನೆಯೆ ಪಾಕಿಸ್ತಾನದ ಐಎಸ್ ಐ ಪಡೆ ಕೆರಳಿ ಹೋಗಿತ್ತು. ಆಗಲೇ ಚೀಟಿ ರವಾನೆಯಾಗಿದ್ದು. ಅದರ ನಂತರ ಮುಷರಫ್ ಇನ್ನಷ್ಟು ಬಿಗಿಯಾಗಿ ಹೋದರು. ಕೊನೆಗೆ ತೇಪೆ ಹಚ್ಚುವ ರೀತಿಯಲ್ಲಿ ಆಗ್ರಾ ಘೋಷಣೆಗೆ ಸಹಿ ಹಾಕಿ ಸಂಪಾದಕರ ಸಭೆಯಲ್ಲಿ ಭಾರತದ ವಿರುದ್ಧ ಗುಡುಗಿ ಪಾಕಿಸ್ತಾನಕ್ಕೆ ಹಾರಿಹೋದರು.
ಸುಷ್ಮಾ ಸ್ವರಾಜ್ ಸ್ವಯಂ ಪ್ರೇರಣೆಯಿಂದ ಪತ್ರಕರ್ತರ ಕೊಠಡಿಗೆ ಖಂಡಿತ ಬಂದಿರಲಿಲ್ಲ, ಅವರಿಗೆ ಕೀ ಕೊಟ್ಟು ಕಲಿಸಿದವರು ಲಾಲ್ ಕೃಷ್ಣ ಅಡ್ವಾಣಿಯವರಂತೆ. ಅವರಿಗೆ ನಾಗಪುರದ ಕಡೆಯಿಂದ ಸಂದೇಶ ಬಂದಿರಬಹುದು. ಪರಿವಾರದಲ್ಲಿರುವ ಯಾರಿಗೂ ಪಾಕಿಸ್ತಾನದ ಜತೆ ಅಟಲಬಿಹಾರಿ ವಾಜಪೇಯಿ ಅವರು ಮಾತುಕತೆ ನಡೆಸುವುದು ಬೇಡವಾಗಿತ್ತು. ನಂತರದ ದಿನಗಳಲ್ಲಿ ವಾಜಪೇಯಿಯವರ ರಾಜಧರ್ಮ ಪಾಲನೆಯ ಆದೇಶ ಕೂಡಾ ಜಾರಿಯಾಗದಂತೆ ನೋಡಿಕೊಂಡವರು ಕೂಡಾ ಈಗಿನ ಮೂಕ ನಾಯಕ ಲಾಲ್ ಕೃಷ್ಣ ಅಡ್ವಾಣಿ.
-ದಿನೇಶ್ ಅಮಿನ್ ಮಟ್ಟು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಸತಿ ಯೋಜನೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.
ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.
2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.
3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.
4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.
5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.
7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.
8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.
9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್ಗಳ ಸಮತೋಲನಕ್ಕೆ ಬಹಳ ಮುಖ್ಯ.
10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.
ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಆಶ್ರಯ ಯೋಜನೆ – ಆವಧಿ ವಿಸ್ತರಣೆ
-
ದಿನದ ಸುದ್ದಿ6 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ6 days agoಕವಿತೆ | ದೇವರ ಹೂವು
-
ದಿನದ ಸುದ್ದಿ4 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ4 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ


