ದಿನದ ಸುದ್ದಿ
ಕೊರೊನಾತಂಕದ ನಡುವೆ ಎಸ್.ಎಸ್.ಎಲ್.ಸಿ ಮಕ್ಕಳಿಗಿರಲಿ ನಿರಾತಂಕ ; ಪಠ್ಯ ಕಡಿತದ ಲಾಭ – ಅಂಕಗಳಿಕೆ ಸರಾಗ
- ವಿ.ಕೆ ಕುಮಾರಸ್ವಾಮಿ
ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ವಿರುಪಾಪುರ, ರಾಮನಗರ ಜಿಲ್ಲೆ
ಜಗತ್ತನ್ನು ಎಡಬಿಡದೆ ಕಾಡುತ್ತಿರುವ ಕೊರೋನಾ ವಿಷ ಪೀಡೆಯ ಬಾಧೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊನ್ನೆ ಮೊನ್ನೆಯಷ್ಟೇ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಉತ್ಸಾಹ ಉಲ್ಲಾಸದಿಂದ ಮುದ್ದು ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೀಗ ಮತ್ತೊಮ್ಮೆ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದೆ. ಹೀಗಾಗಿ ಕೊರೊನಾ ನಡುವಿನ ನಮ್ಮ ಬದುಕು ಇನ್ನೆಷ್ಟು ವರ್ಷಗಳೊ ಎಂಬುದು ಅರಿಯದಾಗಿದೆ.
ಈ ಮಧ್ಯೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆಗೆ ಸಮರ ಸೇನಾನಿಗಳಂತೆ ಎದೆಗುಂದದೆ ಸಜ್ಜಾಗುತ್ತಿದ್ದಾರೆ. ಈಗಾಗಲೆ ಶಿಕ್ಷಣ ಇಲಾಖೆ ಮಕ್ಕಳಿಗೆ ಪಠ್ಯ ಕಡಿತ ಮಾಡಿ ಪ್ರತಿ ವರ್ಷಕ್ಕಿಂತ ಈ ವರ್ಷ ಕಡಿಮೆ ಹೊರೆಯನ್ನು ನೀಡಿದೆ. ಇದರ ಲಾಭ ಪಡೆಯುವುದಾದರೂ ಹೇಗೆ? ಈ ಕುರಿತಾದ ಒಂದಷ್ಟು ಸಾಧಕ-ಬಾಧಕಗಳು ಇಲ್ಲಿವೆ.
ಪಠ್ಯ ಕಡಿತದ ಲಾಭ
ಪ್ರಸ್ತುತ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ 30%ಪಠ್ಯ ಕಡಿತ ಮಾಡಿರುವುದು ಅತ್ಯಂತ ಲಾಭದಾಯಕ ವಿಚಾರವಾಗಿದೆ. ಇದು ಮಕ್ಕಳಲ್ಲಿ ಕೊಂಚ ನೆಮ್ಮದಿ ತಂದಿದ್ದು, ಅವರು ಇನ್ನೂ ಹೆಚ್ಚಿನ ಅಭ್ಯಾಸ ಮಾಡಲು ಸಹಾಯಕವಾಗಿದೆ. ಲಭ್ಯವಿರುವ ಪಠ್ಯಾಂಶಗಳನ್ನು ಸರಳ ಮತ್ತು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳು ಬಳಸಿಕೊಂಡಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವುದು ನಿಶ್ಚಿತ. ಹೀಗಾಗಿ ಮಕ್ಕಳು ಪ್ರತಿನಿತ್ಯ ಏಕಾಗ್ರತೆಯಿಂದ ಅಭ್ಯಾಸ ಮಾಡಬೇಕಿದೆ.
ಪಠ್ಯ ಪುಸ್ತಕವೇ ಪರ್ಯಾಯ ಮಾರ್ಗದರ್ಶಿ
ಶಿಕ್ಷಕರ ನಂತರ ಪಠ್ಯ ಪುಸ್ತಕಗಳೇ ಮಕ್ಕಳ ಪಾಲಿನ ಮಾರ್ಗದರ್ಶಿಯಾಗಿವೆ. ಯಾವ ಮಕ್ಕಳು ಪಠ್ಯ ಪುಸ್ತಕಗಳನ್ನು ಸತತವಾಗಿ ಅಭ್ಯಸಿಸುತ್ತಾರೋ ಅವರಲ್ಲಿ ಆತ್ಮ ವಿಶ್ವಾಸ ವೃದ್ಧಿಸುತ್ತದೆ ಹಾಗೂ ಪರೀಕ್ಷೆಯಲ್ಲಿ ಕೇಳುವ ಎಂತಹುದೇ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಥರಾಗುತ್ತಾರೆ.
ನೂರಾರು ರೂಪಾಯಿಗಳನ್ನು ವ್ಯಯಿಸಿ ಇಲ್ಲಸಲ್ಲದ ಅಧ್ಯಯನ ಸಾಮಗ್ರಿಗಳನ್ನು ಕೊಳ್ಳುವ ಮುನ್ನ ವಿದ್ಯಾರ್ಥಿಗಳು ಪಠ್ಯ ಪುಸ್ತಕವನ್ನು ಓದುವ ಹವ್ಯಾಸವನ್ನು ಹೆಚ್ಚಾಗಿ ಬೆಳೆಸಿಕೊಂಡರೆ ಅದಕ್ಕಿಂತ ದೊಡ್ಡ ಮಾರ್ಗದರ್ಶಿ ಮತ್ತೊಂದಿಲ್ಲ. ಪಠ್ಯ ಪುಸ್ತಕವನ್ನು ಓದಿದ ನಂತರ ಇನ್ನಿತರ ಅಧ್ಯಯನ ಸಾಮಗ್ರಿಗಳನ್ನು ಅಭ್ಯಸಿಸುವುದು ಸೂಕ್ತ.
ಮನೆ ವೇಳಾಪಟ್ಟಿ ಇರಲಿ
ಶಾಲೆಯಲ್ಲಿ ತಿಳಿದ ಪಠ್ಯಾಂಶಗಳನ್ನು ಮನೆಯಲ್ಲೊಮ್ಮೆ ಪುನರ್ಮನನ ಮಾಡುವುದು ಅತ್ಯಂತ ಜವಾಬ್ದಾರಿಯುತ ವಿಚಾರ. ಇದಕ್ಕಾಗಿ ಮನೆಯಲ್ಲಿ ಒಂದು ಪ್ರತ್ಯೇಕ ವೇಳಾಪಟ್ಟಿಯನ್ನು ರಚಿಸಿಕೊಳ್ಳುವುದು ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಎಲ್ಲೆಡೆ ಕೇಳಿ ಬರುತ್ತಿರುವ ದೂರು ಎಂದರೆ ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ತಯಾರಿಸಲು ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ ಎಂಬುದು.
ಹೀಗಾಗಿ ಮಕ್ಕಳು ಪ್ರತಿ ವಿಷಯಗಳನ್ನು ಅಭ್ಯಸಿಸಲು ಪ್ರತ್ಯೇಕ ವೇಳಾಪಟ್ಟಿಯನ್ನು ರಚಿಸಿಕೊಳ್ಳಬೇಕು. ಅದರಂತೆ ಪ್ರತಿನಿತ್ಯ ಅಭ್ಯಸಿಸಬೇಕು. ಓದಿದ್ದನ್ನು ಬರೆದು ಖಾತ್ರಿ ಪಡಿಸಿಕೊಳ್ಳಬೇಕು.
ಪರೀಕ್ಷೆ ಬಗ್ಗೆ ಭಯ ಬೇಡ
ಪರೀಕ್ಷೆಗಳಿರುವುದು ನಮ್ಮ ಭವಿಷ್ಯವನ್ನು ನಿರ್ಧರಿಸುವುದಕ್ಕಾಗಿಯೇ ಹೊರತು ನಮ್ಮ ಧೈರ್ಯವನ್ನು ಪರೀಕ್ಷಿಸಲು ಅಲ್ಲ. ನಿರಂತರ ಅಭ್ಯಾಸ ಮಾಡಿದ ಯಾವ ವಿದ್ಯಾರ್ಥಿಗಳಿಗೂ ಸಾಮಾನ್ಯವಾಗಿ ಪರೀಕ್ಷೆಯ ಬಗ್ಗೆ ಹೆಚ್ಚಿನ ಭಯ ಹಾಗೂ ಒತ್ತಡವಿರುವುದಿಲ್ಲ.
ಹೀಗಾಗಿ ಪರೀಕ್ಷೆಯನ್ನು ಎಲ್ಲರೂ ಒಂದು ಹಬ್ಬದಂತೆ ಭಾವಿಸಿ ಎದುರಿಸಬೇಕಾಗಿದೆ. ನೆನಪಿರಲಿ, ಪರೀಕ್ಷೆಗೆ ಒಂದು ದಿನದ ಮುಂಚೆ ಈ ಹಿಂದೆ ಓದಿದ ಪಠ್ಯಾಂಶಗಳನ್ನು ಪುನರ್ಮನನ ಮಾಡಿಕೊಳ್ಳಬೇಕಷ್ಟೆ. ಅದನ್ನು ಬಿಟ್ಟು ಎಲ್ಲವನ್ನೂ ಓದುವುದು ಆರೋಗ್ಯಕರ ಹವ್ಯಾಸವಲ್ಲ.
ಕೆಲವು ಮಕ್ಕಳಲ್ಲಿ ಕಂಡುಬರುವ ಅನಪೇಕ್ಷಿತ ನಡವಳಿಕೆಗಳು
- ಪ್ರಶ್ನೆಗಳ ಬಗ್ಗೆ ಗಮನ ಹರಿಸದೆ ಕೇವಲ ಉತ್ತರಗಳನ್ನಷ್ಟೇ ಕಲಿಯುವುದು
- ಸರಳ ಪ್ರಶ್ನೋತ್ತರಗಳನ್ನು ನಿರ್ಲಕ್ಷ್ಯ ಮಾಡುವುದು
- ಕೇವಲ ಪರೀಕ್ಷೆಗಳು ಸಮೀಪಿಸಿದಾಗಲಷ್ಟೇ ಓದುವುದು
- ಓದಿದ ವಿಚಾರಗಳನ್ನು ಪುನರ್ಮನನ ಮಾಡದಿರುವುದು
- ಸಣ್ಣಸಣ್ಣ ಕಾರಣಗಳನ್ನು ಮುಂದಿಟ್ಟುಕೊAಡು ಶಾಲೆಗೆ ಗೈರು ಹಾಜರಾಗುವುದು
- ಶಿಕ್ಷಕರ ಒಡನಾಟದಿಂದ ದೂರ ಉಳಿಯುವುದು
- ಸಹಪಾಠಿಗಳಿಂದ ದೂರ ಉಳಿಯುವುದು
- ಸರಿಯಾಗಿ ಆಹಾರ ಸೇವಿಸದಿರುವುದು
- ಅಂದಿನ ಓದನ್ನು ಅಂದೇ ಮುಗಿಸದಿರುವುದು
- ಏಕಾಗ್ರತೆಯಿಲ್ಲದ ಅಧ್ಯಯನ
- ಓದುವುದನ್ನು ಹೊರೆ ಎಂದು ಭಾವಿಸುವುದು ಮತ್ತು ತೀವ್ರ ಆಲಸ್ಯ
- ಟಿವಿ ಅಥವಾ ಮೊಬೈಲ್ ಬಳಸುತ್ತಾ ಓದುವುದು
- ಪುಸ್ತಕಗಳನ್ನು ಎಲ್ಲೆಂದರಲ್ಲಿ ಹರಡುವುದು
ನಿಮ್ಮ ಓದು ಹೀಗಿರಲಿ
- ಕಷ್ಟಪಟ್ಟು ಓದಬೇಡಿ; ಇಷ್ಟದಿಂದ ಓದಿರಿ
- ಮೊದಲು ಸರಳ ಪ್ರಶ್ನೊತ್ತರಗಳನ್ನು ಖಾತ್ರಿಪಡಿಸಿಕೊಳ್ಳಿ
ಮನೆ ವೇಳಾಪಟ್ಟಿಯ ಖಚಿತ ಪಾಲನೆ
- ಓದಿದ ಪಠ್ಯಾಂಶಗಳನ್ನು ಪಟ್ಟಿ ಮಾಡುವುದು ಮತ್ತು ಪುನರ್ಮನನ ಮಾಡುವುದು
ಪದ್ಯಗಳು, ವ್ಯಾಕರಣ, ಪ್ರಬಂಧ, ಪ್ರಮೇಯಗಳು, ಚಿತ್ರಗಳು, ಪತ್ರಲೇಖನಗಳ ನಿರಂತರ ಅಭ್ಯಾಸ
ಕಠಿಣ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಂಡು ಶಿಕ್ಷಕರೊಂದಿಗೆೆ ಚರ್ಚಿಸುವುದು
ನಿಯಮಿತ ಧ್ಯಾನ, ಪ್ರಾರ್ಥನೆ ಹಾಗೂ ನಿದ್ದೆ ಇರಲಿ
ಓದುವ ಕೋಣೆಯಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು
- ಸರಿಯಾದ ಭಂಗಿಯಲ್ಲಿ ಕುಳಿತು ಓದುವುದು
ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು
ಸಡಿಲವಾದ ಉಡುಪುಗಳನ್ನು ಧರಿಸುವುದು
- ಸಹಪಾಠಿಗಳೊಂದಿಗೆ ಆರೋಗ್ಯಕರ ಚರ್ಚೆ
ಸಮಯ ಮತ್ತು ಶಿಸ್ತಿಗೆ ಆದ್ಯತೆ ನೀಡುವುದು
- ಪೋಷಕರೊಂದಿಗೆ ಪ್ರತಿದಿನ ಕನಿಷ್ಠ ಹತ್ತು ನಿಮಿಷಗಳ ಶೈಕ್ಷಣಿಕ ಚರ್ಚೆ
(ವಿ.ಕೆ ಕುಮಾರಸ್ವಾಮಿ
ಪ್ರೌಢಶಾಲಾ ಮುಖ್ಯೋಪಾಧ್ಯಾಯರು, ವಿರುಪಾಪುರ,
ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ,
ಮೊಬೈಲ್ ಸಂಖ್ಯೆ : 9113906120)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243