ರಾಜಕೀಯ
ಸಂವಿಧಾನ ಮತ್ತು ಧರ್ಮ : ಸದ್ಯದ ಅಪವ್ಯಾಖ್ಯಾನ

ಸಮಸ್ಯೆಯೊಂದನ್ನು ನಿರ್ಲಕ್ಷಿಸಿದಾಗ ಅದು ತನ್ನ ಪ್ರಾಬಲ್ಯ ಹಿಗ್ಗಿಸಿಕೊಳ್ಳಲಾರಂಭಿಸುತ್ತದೆ. ಸಕಾಲಿಕ ಪರಿಹಾರೋಪಾಯ ಶೋಧಿಸಿಕೊಂಡು ಎದುರುಗೊಳ್ಳದಿದ್ದರೆ ಅದು ಬೃಹದಾಕಾರ ಪಡೆದುಕೊಳ್ಳುತ್ತದೆ. ಬಿಡಿಸಲಾಗದ ಬಿಕ್ಕಟ್ಟಾಗಿ ಮಾರ್ಪಾಡಾಗಿ ನಾನಾ ಸಂಕಟಗಳನ್ನು ನೆಲೆಗೊಳಿಸಿಬಿಡುತ್ತದೆ. ಪರಿಹಾರದ ಮಾರ್ಗ ಯಾವುದು ಎಂಬುದು ಗೊತ್ತಿದ್ದರೂ ಅದನ್ನು ಅನುಸರಿಸುವುದಕ್ಕೆ ಕಷ್ಟಸಾಧ್ಯ ಎಂಬ ಭಾವವನ್ನು ಸಾರ್ವತ್ರಿಕಗೊಳಿಸುವಷ್ಟರ ಮಟ್ಟಿಗೆ ಆ ಸಂಕಟಗಳು ತೀವ್ರವಾಗಿ ಬಾಧಿಸುತ್ತವೆ. ಹೀಗೆ ಸಂಕಟಗೊಳಪಟ್ಟ ವ್ಯಕ್ತಿಗತ ಸಂಕೀರ್ಣತೆ ಸಾಮೂಹಿಕ ಸ್ವರೂಪ ಆವಾಹಿಸಿಕೊಂಡು ಜನಸಮುದಾಯಗಳನ್ನು ದಿಗ್ಮೂಢರನ್ನಾಗಿಸುತ್ತದೆ. ಆಂತರ್ಯದೊಳಗೆ ಮೂಡುವ ಅಸಮಾಧಾನ ಸಹನೆಯನ್ನು ಕಳೆದಿಡುತ್ತದೆ. ಆ ಸಂದರ್ಭದ ಅಸಹನೆಯು ಹಿಂಸೆಯೊಂದಿಗಿನ ದೃಷ್ಟಿಕೋನಗಳನ್ನು ಚಿಗುರಿಸಿಕೊಳ್ಳಲು ನೆರವಾಗುತ್ತದೆ. ಈ ಹಂತದಲ್ಲಿಯೇ ದ್ವಂದ್ವ, ಅಸ್ಪಷ್ಟತೆ, ಅವಿವೇಕತನ, ಅಸಂಬದ್ಧತೆ ಮತ್ತು ಕ್ರೌರ್ಯದ ನಡವಳಿಕೆಗಳು ದೇಶದ ಸಾಮಾಜಿಕ ಅಸ್ಮಿತೆಯನ್ನೇ ಧ್ವಂಸಗೊಳಿಸುತ್ತವೆ. ಭಾರತ ಅಂಥದ್ದೊಂದು ಅಪಾಯಕಾರಿ ಪ್ರವೃತ್ತಿಯ ಮಿತಿಯೊಂದಿಗೆ ಹೆಜ್ಜೆಯಿರಿಸುತ್ತಿದೆ. ಇದನ್ನು ತಿಳಿದುಕೊಂಡು ಸರಿಹಾದಿ ತೋರುವ ದಾರ್ಶನಿಕತೆಯನ್ನು ನಿರೂಪಿಸಬೇಕಾದ ನಾಯಕರಲ್ಲದ ನಾಯಕರೆನ್ನಿಸಿಕೊಂಡವರು ಸಮಸ್ಯಾತ್ಮಕತೆಯನ್ನು ಸ್ಥಾಯಿಯಾಗಿಸಿ ತಮ್ಮ ಅಸ್ತಿತ್ವವನ್ನು ಶಾಶ್ವತಗೊಳಿಸಿಕೊಳ್ಳುವ ಹಂಬಲಗೊಳೊಂದಿಗೇ ಗುರುತಿಸಿಕೊಂಡಿದ್ದಾರೆ.
ಈ ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ಯಾವುವು ಎಂಬುದು ಅವುಗಳ ವ್ಯತಿರಿಕ್ತ ಪರಿಣಾಮಗಳಿಗೆ ಈಡಾದವರೂ ಸೇರಿದಂತೆ ಹಲವರಿಗೆ ಗೊತ್ತಿದೆ. ಈ ಸಮಸ್ಯೆಗಳ ಮೂಲ ಎಲ್ಲಿಯದು ಎಂಬುದರ ಅರಿವೂ ಇದೆ. ಇಡೀ ದೇಶದಲ್ಲಿ ಸಮಸ್ಯೆಗಳೇ ಇಲ್ಲ ಎಂಬಂಥ ಪರಮೋಚ್ಛ ಭ್ರಮೆಯ ವರ್ತುಲಕ್ಕೆ ಸಿಲುಕೊಳ್ಳಬಾರದು ಎಂಬ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದಕ್ಕೆ ಅನುಕೂಲ ಒದಗಿಸಿಕೊಡುವ ನಕಾರಾತ್ಮಕತೆಯ ಅನುಭವವು ಪ್ರತಿಯೊಬ್ಬರಿಗೂ ಆಗುತ್ತಲೇ ಇರುತ್ತದೆ. ಆದರೆ, ಅದನ್ನು ಹಲವರು ಅಭಿವ್ಯಕ್ತಿಸುವುದಿಲ್ಲ. ಬದಲಾವಣೆ ಬಯಸುವ ಚಿಂತಕರು ಮತ್ತು ಜನಸಾಮಾನ್ಯ ವಲಯ ಆ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆ ಅವರು ಮುಕ್ತ ಆಲೋಚನೆಯನ್ನು ಹರಿಬಿಟ್ಟಾಗ ಅದು ಅಪಾಯಕಾರಿ ಎಂದು ತಪ್ಪಾಗಿ ಅರ್ಥೈಸುವ ಜಾಯಮಾನದ ನಡೆಯನ್ನು ರಾಜಕೀಯ ವಲಯ ಈಗೀಗ ನೆಚ್ಚಿಕೊಳ್ಳುತ್ತಿದೆ. ಇಂಥ ನಡೆಯ ಕಾರಣಕ್ಕಾಗಿಯೇ ಸಂವಿಧಾನ ಮತ್ತು ಧರ್ಮ ಪರಸ್ಪರ ಸಂಘರ್ಷಿಸುವ ನೆಲೆಗಳಾಗಿ ಚರ್ಚಿಸಲ್ಪಡುತ್ತಿವೆ. ಇವೆರಡರ ಉದಾತ್ತ ಅರ್ಥವನ್ನು ಒಡೆದು ಸಂಕುಚಿತಗೊಳಿಸಿದ ಅಪವ್ಯಾಖ್ಯಾನವನ್ನೇ ಜನಸಮುದಾಯ ನೆಚ್ಚಿಕೊಳ್ಳುವಂತೆ ಒತ್ತಡ ಹಾಕುತ್ತಿವೆ. ಇದೇ ಬಗೆಯ ಅನುಕೂಲಕರ ಸಮಯಾವಕಾಶವನ್ನು ಕಾಯ್ದುಕುಳಿತಂತೆ ರಾಜಕೀಯ ವಲಯ ತನ್ನ ದಾಳಗಳನ್ನು ಪ್ರಯೋಗಿಸುತ್ತಿದೆ.
ಸದ್ಯದ ವ್ಯತಿರಿಕ್ತ ಸ್ಥಿತಿಗತಿಗಳು ಅತ್ಯಂತ ನಿಖರವಾಗಿ ಬಿಟ್ಟುಕೊಡುತ್ತಿರುವ ಸುಳಿವುಗಳು ಹಲವಿವೆ. ಅವುಗಳಲ್ಲಿ ಧರ್ಮ ಮತ್ತು ದೇವರಿಗೆ ಸಂಬಂಧಿಸಿದಂತೆ ಇರುವ ವ್ಯಕ್ತಿಗತ ಸಂಕುಚಿತತೆಯನ್ನು ಸಾಂಸ್ಥಿಕಗೊಳಿಸಿ ಪ್ರಭಾವವನ್ನು ವ್ಯಾಪಕಗೊಳಿಸುವ ಪ್ರಯತ್ನವೂ ಒಂದು. ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದು, ಆಯಾ ಧರ್ಮಗಳವರ ನಂಬಿಕೆಯ ಆವರಣದಲ್ಲಿ ಆದ್ಯತೆ ಪಡೆದಿರುವ ದೇವರುಗಳ ಆರಾಧನೆಯ ಅವಕಾಶಗಳನ್ನು ಸ್ವಾರ್ಥಕ್ಕೆ ತಿರುಗಿಸಿಕೊಳ್ಳುವುದು ಈಗೀಗ ಸಾರ್ವತ್ರಿಕವಾಗಿದೆ. ಸಮಸ್ಯೆಯೊಂದು ವ್ಯಕ್ತಿಯನ್ನು ಭಾಧಿಸುತ್ತಿರುತ್ತದೆ. ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯಾತ್ಮಕ ಸಂಕೀರ್ಣತೆಗಳೊಂದಿಗಿನ ವಾಸ್ತವಿಕತೆಯೇ ಆ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ, ಧರ್ಮ ಮತ್ತು ದೇವರನ್ನು ಅಪವ್ಯಾಖ್ಯಾನಕ್ಕೊಳಪಡಿಸಿ ಆ ಬಗ್ಗೆ ಸಂಕುಚಿತವಾಗಿ ಅರ್ಥೈಸಿ ಭಯಹುಟ್ಟಿಸಲಾಗುತ್ತದೆ. ಹೀಗೆ ಭಯವನ್ನು ಹುಟ್ಟಿಸಿ ಸ್ವಾರ್ಥ ಸಾಧಿಸಿಕೊಳ್ಳುವ ಹಿತಾಸಕ್ತಿಗಳ ಅಸ್ತಿತ್ವದಲ್ಲಿಯೇ ಮಹತ್ವದ ಸುಳಿವನ್ನು ಗೊತ್ತುಮಾಡಿಕೊಳ್ಳಬಹುದು. ಈ ಹಿತಾಸಕ್ತಿಗಳು ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಸ್ಥಾಯಿಯಾಗಿಸಿ ಜನರೊಳಗಿನ ಆಲೋಚಿಸುವ ಶಕ್ತಿಯನ್ನೇ ತಡೆದು ನಿಲ್ಲಿಸುತ್ತವೆ. ಆವರ ಆಲೋಚನೆಯ ಸಾಧ್ಯತೆಗಳನ್ನು ಮೊಟಕುಗೊಳಿಸಿ ಧರ್ಮವಲ್ಲದ ಸಂಗತಿಗಳ ಕಡೆಗೆ ತಿರುಗಿಸುತ್ತವೆ. ಅವರ ಮನಸ್ಸಿನಲ್ಲಿ ದೇವರುಗಳ ಬಗ್ಗೆ ಭಯದ ಭಾವ ಮೂಡಿಸುತ್ತವೆ. ಆರಾಧಿಸದಿದ್ದರೆ ಶಿಕ್ಷೆ ಗ್ಯಾರಂಟಿ, ದೇವರೇ ಮುನಿಸಿಕೊಂಡರೆ ಮುಂದಿದೆ ವ್ಯತಿರಿಕ್ತ ಪರಿಣಾಮ ಎಂಬ ಅತಾರ್ಕಿಕತೆಯನ್ನೇ ಮಂಡಿಸಿ ದಾರಿ ತಪ್ಪಿಸುತ್ತವೆ.
ಮೊದಲೇ ಸಮಸ್ಯೆಗಳ ಮಧ್ಯೆ ನರಳುತ್ತಿರುವವರ ಮುಂದೆ ಧರ್ಮದಲ್ಲಿಲ್ಲದ ಸಂಗತಿಗಳನ್ನು ವೈಭವೀಕರಿಸಿ ಹೇಳಿದರೆ ಸ್ವಾರ್ಥದ ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕಾರ್ಯಸೂಚಿ ಅತ್ಯಂತ ಎಚ್ಚರದಲ್ಲಿ ಯಶಸ್ವಿಯಾಗಿ ನಿರ್ವಹಿಸಲ್ಪಡುತ್ತದೆ. ಹೀಗಾದರೆ ಹೀಗಾಗುತ್ತದೆ ಎಂದು ತಾರ್ಕಿಕವಾಗಿ ಮಾತನಾಡುವವರಂತೆ ನಟಿಸುವವರೇ ರಂಜನಾಮಾಧ್ಯಮೋದ್ಯಮದ ಮೂಲಗಳಾಗುತ್ತಾರೆ. ಸಮಾಜದ ವಿವಿಧ ಜನವರ್ಗಗಳು ಇಂಥವರನ್ನು ಆರಾಧಿಸಿಕೊಂಡೇ ಇದ್ದರೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ರಾಜಕೀಯ ವಲಯದ ನಿರೀಕ್ಷೆಗಳು ಈ ಹಂತದಲ್ಲಿಯೇ ಈಡೇರಿಬಿಡುತ್ತವೆ. ಸಮಸ್ಯೆಯನ್ನು ಶಾಶ್ವತವಾಗಿ ಉಳಿಯುವಂತೆ ನೋಡಿಕೊಂಡು ಅದು ಬಿಕಟ್ಟಿನ ಸ್ವರೂಪ ಪಡೆದುಕೊಂಡಾಗಲೂ ಪರಿಹಾರದ ನಾಟಕವಾಡಿ ಧರ್ಮ, ದೇವರ ಕುರಿತಾಗಿ ಭಯಭೀತಿ ಸೃಷ್ಟಿಸಿ ಸಾಮಾಜಿಕ ಚಲನೆಯನ್ನು ನಿಲ್ಲಿಸಿಬಿಡುವ ರಾಜಕೀಯ ಉದ್ದೇಶಗಳು ಯಶಸ್ಸು ಪಡೆದುಬಿಡುತ್ತವೆ. ಇದೇ ರಾಜಕೀಯ ಪ್ರವೃತ್ತಿ ಇಂದು ಸಂವಿಧಾನಕ್ಕೆ ಸವಾಲೆಸೆಯುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.
ಇದು ಎಲ್ಲ ಕಾಲದ ಸಮಸ್ಯೆಯೂ ಹೌದು. ಬಹುಷಃ ಈ ಕಾರಣಕ್ಕಾಗಿಯೇ ಇರಬಹುದು; ಈಗಾಗಲೇ ಆಗಿಹೋದ ದಾರ್ಶನಿಕರು ದೇವರು ಮತ್ತು ಧರ್ಮದ ಕುರಿತ ನಂಬಿಕೆಯ ಜಗತ್ತನ್ನು ಆಧರಿಸಿಯೇ ತಾತ್ವಿಕತೆಯನ್ನು ಪ್ರತಿಪಾದಿಸಿದರು. ಭೌತಿಕ ಜಗತ್ತಿನ ಒಳಗೇ ಮನುಷ್ಯಸಹಜ ದೌರ್ಬಲ್ಯಗಳೊಂದಿಗಿನ ಊನಗಳನ್ನು ತಮ್ಮೊಳಗಿನ ದಾರ್ಶನಿಕತೆಯೊಂದಿಗೆ ಎದುರುಗೊಂಡರು. ನಿಜವಾದ ಧರ್ಮ ಏನು ಎಂಬುದನ್ನು ಅರ್ಥೈಸಿದರು. ದೇವರ ಅಸ್ತಿತ್ವವು ಒಳಿತಿನೊಂದಿಗೇ ಇದೆ ಎಂಬ ವಿವೇಕವನ್ನು ಕಟ್ಟಿಕೊಡಲು ಪ್ರಯತ್ನಿಸಿದರು. ನಿಸರ್ಗದ ಅನೇಕ ಕೌತುಕಮಯ ಸಂಗತಿಗಳನ್ನು ಕಾಡಿಸಿಕೊಂಡು ಅವುಗಳನ್ನು ಜೀವಪರ ಅಂತಃಕರಣದೊಂದಿಗೆ ಮನುಷ್ಯ ಬದುಕಿನ ಉದ್ಧಾರಕ್ಕೆ ಬಳಸಿಕೊಳ್ಳಬಹುದಾದ ಒಳನೋಟಗಳ ಮೇಲೆ ಬೆಳಕು ಚೆಲ್ಲಿದರು. ಧರ್ಮ-ದೇವರ ಬಗೆಗಿನ ನಂಬಿಕೆಯ ಜಗತ್ತನ್ನು ಅಲುಗಾಡಿಸದೇ ಅಂತಸ್ಥಗೊಂಡಿರುವ ಮೂಢನಂಬಿಕೆಯ ಬೇರುಗಳನ್ನು ಕಿತ್ತೆಸೆಯಲು ತಾತ್ವಿಕ ಮಾರ್ಗವನ್ನು ಕಂಡುಕೊಂಡರು. ಆ ಮೂಲಕ ಧರ್ಮ ಮತ್ತು ದೇವರನ್ನು ಉದಾತ್ತತೆಯೊಂದಿಗೆ ತಾದಾತ್ಮ್ಯಗೊಳಿಸುವ ಚಲನಾತ್ಮಕ ಆಕೃತಿಗಳನ್ನು ಕೊಡುಗೆಗಳನ್ನಾಗಿ ನೀಡಿದರು. ಈಗ ಈ ಸಾಧ್ಯತೆಯ ತದ್ವಿರುದ್ಧದ ದಿಕ್ಕುಗಳೇ ಪರಮಮಾರ್ಗಗಳಾಗಿ ಪರಿಗಣಿತವಾಗುತ್ತಿವೆ. ಅವೇ ಪರಮೋಚ್ಛ ಎಂಬ ಬಿಂಬಗಳನ್ನು ಅತ್ಯಂತ ಚಾಣಾಕ್ಷಯುತವಾಗಿ ಕಟ್ಟಿಕೊಡಲಾಗುತ್ತಿದೆ. ಅಂಥ ಎಲ್ಲ ಸಂಕುಚಿತತೆಯನ್ನು ರಾಜಕೀಯ ಪೋಷಿಸುತ್ತಿದೆ. ಧರ್ಮ-ದೇವರನ್ನು ನೆಚ್ಚಿಕೊಂಡ ಜನರ ನಂಬಿಕೆಯ ಜಗತ್ತನ್ನು ಮೌಢ್ಯಕ್ಕೆ ತಿರುಗಿಸಿ ಅಪನಂಬಿಕೆಗಳನ್ನು ಮುನ್ನೆಲೆಗೆ ತಂದು ತನ್ನನ್ನು ವಿಜೃಂಭಿಸಿಕೊಳ್ಳುತ್ತಿದೆ.
ಧರ್ಮ ಮತ್ತು ದೇವರು – ಇವೆರಡೂ ಭಾವನಾತ್ಮಕ ಸಾಂಸ್ಥಿಕತೆಯನ್ನು ಅಳವಡಿಸಿಕೊಂಡು ನಿರಂತರವಾಗಿ ಜನರನ್ನು ಶೋಷಿಸಲು ಬಳಕೆಯಾದ ಇತಿಹಾಸವಿದೆ. ಅದನ್ನು ಮರೆಗೆ ಸರಿಸಿ ಅಧಿಕಾರ, ಹಣ ಮತ್ತು ಪ್ರತಿಷ್ಠೆಗಳನ್ನು ಸ್ಥಾಯಿಯಾಗಿಸಿಕೊಳ್ಳಲು ರಾಜಕೀಯ ಕೇಂದ್ರಗಳು ಪ್ರಯತ್ನಿಸಿ ಯಶಸ್ವಿಯಾಗುತ್ತಲೇ ಇವೆ. ಅವುಗಳಿಗೆ ಅನುಗುಣವಾಗಿಯೇ ತಮ್ಮನ್ನು ಪ್ರತಿಷ್ಠಾಪಿಸಿಕೊಂಡ ವಿವಿಧ ಜಾತಿಗಳ ಜನಸಮೂಹ ಅವು ನಿರೀಕ್ಷಿಸುವ ಸಂಕುಚಿತತೆಯ ಮನೋಧರ್ಮಕ್ಕೆ ಪಕ್ಕಾಗುತ್ತಲೇ ಇದೆ. ಬದಲಾವಣೆಯ ಪ್ರಬಲ ಅಸ್ತ್ರ ಎಂದು ಪರಿಗಣಿಸಲ್ಪಟ್ಟ ಶಿಕ್ಷಣ ಮತ್ತು ಅದರ ಮೂಲಕ ವ್ಯಾಪಕಗೊಳ್ಳುತ್ತದೆ ಎಂದುಕೊಂಡಿದ್ದ ಮೌಲ್ಯಾತ್ಮಕ ಪ್ರಭೆಯನ್ನು ಮತ್ತೆ ಮತ್ತೆ ಸೋಲಿಸುತ್ತಿರುವುದು ಇದೇ ಸಂಕುಚಿತತೆಯೇ. ಇದನ್ನೇ ಅಧಿಕಾರ ಕೇಂದ್ರಗಳ ಕಡೆಗೆ ನೋಟ ನೆಟ್ಟ ರಾಜಕೀಯ ವಲಯದ ಪ್ರತಿನಿಧಿಗಳು ತಮ್ಮ ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಧರ್ಮದಲ್ಲಿ ಇಲ್ಲದೇ ಇರುವ ಜೀವವಿರೋಧಿ ಅಮಾನವೀಯ ಸಾಂಪ್ರದಾಯಿಕತೆಯನ್ನು ಸಂವಿಧಾನಕ್ಕಿಂತಲೂ ಮಿಗಿಲು ಎಂದು ಪ್ರತಿಪಾದಿಸುತ್ತಿದ್ದಾರೆ. ಆ ಪ್ರತಿಪಾದನೆಯನ್ನು ಸಮಾಜದ ವಿವಿಧ ಜನವರ್ಗಗಳು ಒಪ್ಪಿಕೊಳ್ಳಲೇಬೇಕು ಎಂಬ ವಿತಂಡವಾದವನ್ನು ಮುಂದಿಡುತ್ತಿದ್ದಾರೆ.
ಈ ನಕಾರಾತ್ಮಕ ಹೆಜ್ಜೆಗಳಿಗೆ ಪರ್ಯಾಯವಾಗಿ ವಿಶ್ವಾಸಾರ್ಹವಾದ ಸಂವಿಧಾನಬದ್ಧ ರಾಜಕೀಯ ಸಂಸ್ಕøತಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಧರ್ಮವಲ್ಲದ ಸಂಗತಿಗಳನ್ನು ವೈಭವೀಕರಿಸಿ ಮುನ್ನೆಲೆಗೆ ತಂದ ವಲಯದವರೂ ತಾವು ಬದಲಾಗಬೇಕಾದ ಆಲೋಚನೆಗಳನ್ನು ಹರಿಬಿಡುತ್ತಿದ್ದಾರೆ ಎಂಬುದೇನೋ ಸಮಾಧಾನ ತರುವ ಸಂಗತಿ. ಈ ದೇಶದ ಸಾಂಸ್ಕøತಿಕ ವೈವಿಧ್ಯತೆಯ ಮಹತ್ವವನ್ನು ತಡವಾಗಿಯಾದರೂ ಹೇಳುತ್ತಿದ್ದಾರೆ ಎಂದುಕೊಳ್ಳಬಹುದು. ಎಲ್ಲ ಧರ್ಮಗಳವರನ್ನು ಗೌರವಿಸಬೇಕು ಎನ್ನುವ ಭಾವವನ್ನು ಸಂವಹಿಸುತ್ತಿದ್ದಾರೆ ಎಂದು ಖುಷಿಪಡಬಹುದು. ಅಂಥ ಆಶಾದಾಯಕ ನುಡಿಗಳು ನಡೆಯಲ್ಲೂ ಮೇಳೈಸಿಕೊಳ್ಳಬೇಕು.
ಹಾಗಾಗುವುದಕ್ಕೆ ಭಾರತದ ರಾಜಕಾರಣ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಇಲ್ಲಿಯ ರಾಜಕಾರಣಕ್ಕೆ ಬದಲಾವಣೆಗಿಂತ ಸ್ಥಗಿತತೆಯೇ ಹೆಚ್ಚು ಅಚ್ಚುಮೆಚ್ಚು. ಧರ್ಮ-ದೇವರು ಕೇಂದ್ರಿತ ಸಾಂಪ್ರದಾಯಿಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಗಳು ಜಟಿಲವಾದಷ್ಟೂ ಅದಕ್ಕೆ ಎಲ್ಲಿಲ್ಲದ ಖುಷಿ. ಜನರು ಈ ಸಾಂಪ್ರದಾಯಿಕತೆಯ ತೊಳಲಾಟಗಳಲ್ಲೇ ಕಾಲ ಕಳೆದರೆ ನಿಜವಾದ ಬೆಳವಣಿಗೆಗೆ ಸಂಬಂಧಿಸಿದ ಚಿಂತನೆಯೇ ಹುಟ್ಟುವುದಿಲ್ಲ. ಆಗ ಜನರು ಎಚ್ಚೆತ್ತುಕೊಳ್ಳುವ ಪ್ರಮೇಯವೇ ಎದುರಾಗುವುದಿಲ್ಲ. ಇದು ದೇವರು-ಧರ್ಮಗಳ ರಕ್ಷಾಕವಚಗಳನ್ನು ಹಾಕಿಕೊಂಡು ಜನರ ಭಯವಿಹ್ವಲತೆಯನ್ನು ಬೇರೂರಿಸಿ ಮತ್ತಷ್ಟು ಗಟ್ಟಿಯಾಗಿಸಿ ಉಸಿರುಗಟ್ಟಿಸುವ ಆಟ. ತಮ್ಮನ್ನು ಸೋಲಿಸುವ ವೈಚಾರಿಕತೆ ಸನಿಹದಲ್ಲಿಯೇ ಇದೆ ಎನ್ನುವ ಸುಳಿವು ಸಿಕ್ಕ ತಕ್ಷಣವೇ ಧರ್ಮರಕ್ಷಣೆ ಮತ್ತು ದೇವರನ್ನು ಕೃತಾರ್ಥರನ್ನಾಗಿಸುವ ಕೈಂಕರ್ಯಗಳ ನೆಪದಲ್ಲಿ ಭಯವನ್ನು ಸೃಷ್ಟಿಸಿ ವಂಚಿಸುವ ಆಟ. ಇಂಥ ಆಟವನ್ನು ನಿಲ್ಲಿಸಬೇಕಾದರೆ ಪ್ರತಿಕಾಲಘಟ್ಟದಲ್ಲೂ ಸೋಲುತ್ತಲೇ ಇರುವ ಬಹುಸಂಖ್ಯಾತ ಶೋಷಿತ ಸಮುದಾಯದ ಜನರು ಸಂವಿಧಾನದ ಆವರಣಕ್ಕೆ ಮರಳಬೇಕು. ತಮ್ಮ ಸಮಸ್ಯೆಗಳಿಗೆ ಪರಿಹಾರ ತೋರುವ ಪರಿವರ್ತನಾಶೀಲ ಚಿಂತನಶೀಲ ಸದಾಶಯಗಳೊಂದಿಗೆ ಮುಖಾಮುಖಿಯಾಗಬೇಕು. ಧ್ಯಾನಸ್ಥ ಸ್ಥಿತಿಯಲ್ಲಿ ಸಂವಿಧಾನವನ್ನು ಅಂತರ್ಗತಗೊಳಿಸಿಕೊಳ್ಳಬೇಕು.
ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಇಷ್ಟೊತ್ತಿಗಾಗಲೇ ಅತ್ಯಂತ ಚಾಣಾಕ್ಷಯುತವಾಗಿ ಪರೀಕ್ಷೆಗೊಡ್ಡಿ ತನ್ನ ಸಂವಿಧಾನಬದ್ಧ ಶಕ್ತಿಯನ್ನು ವಿಸ್ತರಿಸಿಕೊಳ್ಳಬಹುದಾಗಿದ್ದ ರಾಜಕೀಯ ಪಕ್ಷಗಳು ಮತ್ತೆ ಅಧಾರ್ಮಿಕ ಸಂಕುಚಿತತೆಯೊಂದಿಗಿನ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಸಾಂಪ್ರದಾಯಿಕ ಶಕ್ತಿಗಳ ಜೊತೆಗೇ ಕೈಜೋಡಿಸಿ ತಮ್ಮ ಅಧಿಕಾರ ಪಡೆಯುವ ಹಂಬಲಗಳನ್ನು ಜೀವಂತಗೊಳಿಸಿಕೊಳ್ಳುತ್ತಿವೆ. ಮತ್ತವೇ ಜಾತಿ ವೈರುಧ್ಯಗಳು. ಮತ್ತದೇ ಅಧಾರ್ಮಿಕ ಸಂಘರ್ಷ. ಮೇಲು-ಕೀಳುಗಳ ಅಂತರ್ಯುದ್ಧದ ಕಪಟಕಿರುಕುಳ ಯಾನ. ಸಂವಿಧಾನವನ್ನು ಗೆಲ್ಲಿಸುವ ಇಚ್ಛಾಶಕ್ತಿಯ ಕೊರತೆ. ಅಲ್ಲಲ್ಲಿ ಕಂಡುಬರುವ ಮಾನವೀಯತೆಯ ಒರತೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲವಾಗಿಸಿಬಿಡುವ ಹುನ್ನಾರಗಳ ತಕಧಿಮಿಗುಟ್ಟುವ ಕ್ರೂರನರ್ತನ. ಉದಾತ್ತ ತಾತ್ವಿಕತೆಯ ಪರಿಭಾಷೆಗಳನ್ನು ಅಪವ್ಯಾಖ್ಯಾನಗೊಳಿಸುವ ಸಾಂಪ್ರದಾಯಿಕತೆ ಅಸ್ತಿತ್ವ ಇನ್ನೆಷ್ಟು ದಿನ? ಕಾಲವೇ ಉತ್ತರಿಸಬೇಕು ಎಂದು ಸುಮ್ಮನೆ ಕುಳಿತುಕೊಳ್ಳಬೇಕೇ? ಯೋಚಿಸಲಾರಂಭಿಸಬೇಕೇ……?
(-ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ,ಇ-ಮೇಲ್ ವಿಳಾಸ: nkpadmanabh@gmail.com
ಮೊಬೈಲ್: 9972998300)

ದಿನದ ಸುದ್ದಿ
ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನೆರವು ಬರಬೇಕಿದೆ ಎಂದು ಹೇಳಿದರು. ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿದ್ದು, ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ 34 ಸಾವಿರ ಕೋಟಿ ರೂಪಾಯಿ ಮೀಸಲು : ಸಚಿವ ಡಾ.ಎಚ್.ಸಿ.ಮಹದೇವಪ್ಪ

ಸುದ್ದಿದಿನ, ಹುಬ್ಬಳ್ಳಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ ಒಟ್ಟು 34ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಪರಿಶಿಷ್ಟ ಜಾತಿಗೆ 24 ಸಾವಿರ ಕೋಟಿ ರೂಪಾಯಿ, ಪಂಗಡಕ್ಕೆ 8ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. 40 ಇಲಾಖೆಗಳಿಗೆ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ವಿಶೇಷ ಘಟಕ ಯೋಜನೆಯ ಹಣವನ್ನು ಇತರೆ ಯಾವುದೇ ವಿಭಾಗಕ್ಕೂ ಬಳಕೆ ಮಾಡುವುದಿಲ್ಲ. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣವನ್ನು ವಿನಿಯೋಗಿಸಲಾಗುವುದು ಎಂದು ಡಾ.ಮಹದೇವಪ್ಪ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ ಮೊತ್ತ ಎಷ್ಟು ಗೊತ್ತಾ?!

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಒಟ್ಟು 1 ಲಕ್ಷ 59 ಸಾವಿರದ 69 ಕೋಟಿ ರೂಪಾಯಿ ಜಿಎಸ್ಟಿ ಆದಾಯ ಸಂಗ್ರಹವಾಗಿದೆ.
35 ಸಾವಿರದ 794ಕೋಟಿ ರೂಪಾಯಿ ಕೇಂದ್ರೀಯ ಜಿಎಸ್ಟಿ, 83ಸಾವಿರದ 251 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಇದು ಒಳಗೊಂಡಿದೆ. 37 ಸಾವಿರದ 581 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆಗೆ ಹಾಗೂ 31 ಸಾವಿರದ 408ಕೋಟಿ ರೂಪಾಯಿಗಳನ್ನು ಸಮಗ್ರ ಸರಕು ಮತ್ತು ಸೇವಾ ತೆರಿಗೆ ಯಿಂದ ರಾಜ್ಯ ಸರಕು ಮತ್ತು ಸೇವಾ ತೆರಿಗೆಗೆ ಸರ್ಕಾರ ಇತ್ಯರ್ಥ ಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ1 day ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ