Connect with us

ರಾಜಕೀಯ

ಸಂವಿಧಾನ ಮತ್ತು ಧರ್ಮ : ಸದ್ಯದ ಅಪವ್ಯಾಖ್ಯಾನ

Published

on

ಮಸ್ಯೆಯೊಂದನ್ನು ನಿರ್ಲಕ್ಷಿಸಿದಾಗ ಅದು ತನ್ನ ಪ್ರಾಬಲ್ಯ ಹಿಗ್ಗಿಸಿಕೊಳ್ಳಲಾರಂಭಿಸುತ್ತದೆ. ಸಕಾಲಿಕ ಪರಿಹಾರೋಪಾಯ ಶೋಧಿಸಿಕೊಂಡು ಎದುರುಗೊಳ್ಳದಿದ್ದರೆ ಅದು ಬೃಹದಾಕಾರ ಪಡೆದುಕೊಳ್ಳುತ್ತದೆ. ಬಿಡಿಸಲಾಗದ ಬಿಕ್ಕಟ್ಟಾಗಿ ಮಾರ್ಪಾಡಾಗಿ ನಾನಾ ಸಂಕಟಗಳನ್ನು ನೆಲೆಗೊಳಿಸಿಬಿಡುತ್ತದೆ. ಪರಿಹಾರದ ಮಾರ್ಗ ಯಾವುದು ಎಂಬುದು ಗೊತ್ತಿದ್ದರೂ ಅದನ್ನು ಅನುಸರಿಸುವುದಕ್ಕೆ ಕಷ್ಟಸಾಧ್ಯ ಎಂಬ ಭಾವವನ್ನು ಸಾರ್ವತ್ರಿಕಗೊಳಿಸುವಷ್ಟರ ಮಟ್ಟಿಗೆ ಆ ಸಂಕಟಗಳು ತೀವ್ರವಾಗಿ ಬಾಧಿಸುತ್ತವೆ. ಹೀಗೆ ಸಂಕಟಗೊಳಪಟ್ಟ ವ್ಯಕ್ತಿಗತ ಸಂಕೀರ್ಣತೆ ಸಾಮೂಹಿಕ ಸ್ವರೂಪ ಆವಾಹಿಸಿಕೊಂಡು ಜನಸಮುದಾಯಗಳನ್ನು ದಿಗ್ಮೂಢರನ್ನಾಗಿಸುತ್ತದೆ. ಆಂತರ್ಯದೊಳಗೆ ಮೂಡುವ ಅಸಮಾಧಾನ ಸಹನೆಯನ್ನು ಕಳೆದಿಡುತ್ತದೆ. ಆ ಸಂದರ್ಭದ ಅಸಹನೆಯು ಹಿಂಸೆಯೊಂದಿಗಿನ ದೃಷ್ಟಿಕೋನಗಳನ್ನು ಚಿಗುರಿಸಿಕೊಳ್ಳಲು ನೆರವಾಗುತ್ತದೆ. ಈ ಹಂತದಲ್ಲಿಯೇ ದ್ವಂದ್ವ, ಅಸ್ಪಷ್ಟತೆ, ಅವಿವೇಕತನ, ಅಸಂಬದ್ಧತೆ ಮತ್ತು ಕ್ರೌರ್ಯದ ನಡವಳಿಕೆಗಳು ದೇಶದ ಸಾಮಾಜಿಕ ಅಸ್ಮಿತೆಯನ್ನೇ ಧ್ವಂಸಗೊಳಿಸುತ್ತವೆ. ಭಾರತ ಅಂಥದ್ದೊಂದು ಅಪಾಯಕಾರಿ ಪ್ರವೃತ್ತಿಯ ಮಿತಿಯೊಂದಿಗೆ ಹೆಜ್ಜೆಯಿರಿಸುತ್ತಿದೆ. ಇದನ್ನು ತಿಳಿದುಕೊಂಡು ಸರಿಹಾದಿ ತೋರುವ ದಾರ್ಶನಿಕತೆಯನ್ನು ನಿರೂಪಿಸಬೇಕಾದ ನಾಯಕರಲ್ಲದ ನಾಯಕರೆನ್ನಿಸಿಕೊಂಡವರು ಸಮಸ್ಯಾತ್ಮಕತೆಯನ್ನು ಸ್ಥಾಯಿಯಾಗಿಸಿ ತಮ್ಮ ಅಸ್ತಿತ್ವವನ್ನು ಶಾಶ್ವತಗೊಳಿಸಿಕೊಳ್ಳುವ ಹಂಬಲಗೊಳೊಂದಿಗೇ ಗುರುತಿಸಿಕೊಂಡಿದ್ದಾರೆ.

ಈ ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ಯಾವುವು ಎಂಬುದು ಅವುಗಳ ವ್ಯತಿರಿಕ್ತ ಪರಿಣಾಮಗಳಿಗೆ ಈಡಾದವರೂ ಸೇರಿದಂತೆ ಹಲವರಿಗೆ ಗೊತ್ತಿದೆ. ಈ ಸಮಸ್ಯೆಗಳ ಮೂಲ ಎಲ್ಲಿಯದು ಎಂಬುದರ ಅರಿವೂ ಇದೆ. ಇಡೀ ದೇಶದಲ್ಲಿ ಸಮಸ್ಯೆಗಳೇ ಇಲ್ಲ ಎಂಬಂಥ ಪರಮೋಚ್ಛ ಭ್ರಮೆಯ ವರ್ತುಲಕ್ಕೆ ಸಿಲುಕೊಳ್ಳಬಾರದು ಎಂಬ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದಕ್ಕೆ ಅನುಕೂಲ ಒದಗಿಸಿಕೊಡುವ ನಕಾರಾತ್ಮಕತೆಯ ಅನುಭವವು ಪ್ರತಿಯೊಬ್ಬರಿಗೂ ಆಗುತ್ತಲೇ ಇರುತ್ತದೆ. ಆದರೆ, ಅದನ್ನು ಹಲವರು ಅಭಿವ್ಯಕ್ತಿಸುವುದಿಲ್ಲ. ಬದಲಾವಣೆ ಬಯಸುವ ಚಿಂತಕರು ಮತ್ತು ಜನಸಾಮಾನ್ಯ ವಲಯ ಆ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ. ಹಾಗೆ ಅವರು ಮುಕ್ತ ಆಲೋಚನೆಯನ್ನು ಹರಿಬಿಟ್ಟಾಗ ಅದು ಅಪಾಯಕಾರಿ ಎಂದು ತಪ್ಪಾಗಿ ಅರ್ಥೈಸುವ ಜಾಯಮಾನದ ನಡೆಯನ್ನು ರಾಜಕೀಯ ವಲಯ ಈಗೀಗ ನೆಚ್ಚಿಕೊಳ್ಳುತ್ತಿದೆ. ಇಂಥ ನಡೆಯ ಕಾರಣಕ್ಕಾಗಿಯೇ ಸಂವಿಧಾನ ಮತ್ತು ಧರ್ಮ ಪರಸ್ಪರ ಸಂಘರ್ಷಿಸುವ ನೆಲೆಗಳಾಗಿ ಚರ್ಚಿಸಲ್ಪಡುತ್ತಿವೆ. ಇವೆರಡರ ಉದಾತ್ತ ಅರ್ಥವನ್ನು ಒಡೆದು ಸಂಕುಚಿತಗೊಳಿಸಿದ ಅಪವ್ಯಾಖ್ಯಾನವನ್ನೇ ಜನಸಮುದಾಯ ನೆಚ್ಚಿಕೊಳ್ಳುವಂತೆ ಒತ್ತಡ ಹಾಕುತ್ತಿವೆ. ಇದೇ ಬಗೆಯ ಅನುಕೂಲಕರ ಸಮಯಾವಕಾಶವನ್ನು ಕಾಯ್ದುಕುಳಿತಂತೆ ರಾಜಕೀಯ ವಲಯ ತನ್ನ ದಾಳಗಳನ್ನು ಪ್ರಯೋಗಿಸುತ್ತಿದೆ.

ಸದ್ಯದ ವ್ಯತಿರಿಕ್ತ ಸ್ಥಿತಿಗತಿಗಳು ಅತ್ಯಂತ ನಿಖರವಾಗಿ ಬಿಟ್ಟುಕೊಡುತ್ತಿರುವ ಸುಳಿವುಗಳು ಹಲವಿವೆ. ಅವುಗಳಲ್ಲಿ ಧರ್ಮ ಮತ್ತು ದೇವರಿಗೆ ಸಂಬಂಧಿಸಿದಂತೆ ಇರುವ ವ್ಯಕ್ತಿಗತ ಸಂಕುಚಿತತೆಯನ್ನು ಸಾಂಸ್ಥಿಕಗೊಳಿಸಿ ಪ್ರಭಾವವನ್ನು ವ್ಯಾಪಕಗೊಳಿಸುವ ಪ್ರಯತ್ನವೂ ಒಂದು. ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದು, ಆಯಾ ಧರ್ಮಗಳವರ ನಂಬಿಕೆಯ ಆವರಣದಲ್ಲಿ ಆದ್ಯತೆ ಪಡೆದಿರುವ ದೇವರುಗಳ ಆರಾಧನೆಯ ಅವಕಾಶಗಳನ್ನು ಸ್ವಾರ್ಥಕ್ಕೆ ತಿರುಗಿಸಿಕೊಳ್ಳುವುದು ಈಗೀಗ ಸಾರ್ವತ್ರಿಕವಾಗಿದೆ. ಸಮಸ್ಯೆಯೊಂದು ವ್ಯಕ್ತಿಯನ್ನು ಭಾಧಿಸುತ್ತಿರುತ್ತದೆ. ವ್ಯಕ್ತಿಗತ, ಕೌಟುಂಬಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಸಮಸ್ಯಾತ್ಮಕ ಸಂಕೀರ್ಣತೆಗಳೊಂದಿಗಿನ ವಾಸ್ತವಿಕತೆಯೇ ಆ ಸಮಸ್ಯೆಗೆ ಕಾರಣವಾಗಿರುತ್ತದೆ. ಆದರೆ, ಧರ್ಮ ಮತ್ತು ದೇವರನ್ನು ಅಪವ್ಯಾಖ್ಯಾನಕ್ಕೊಳಪಡಿಸಿ ಆ ಬಗ್ಗೆ ಸಂಕುಚಿತವಾಗಿ ಅರ್ಥೈಸಿ ಭಯಹುಟ್ಟಿಸಲಾಗುತ್ತದೆ. ಹೀಗೆ ಭಯವನ್ನು ಹುಟ್ಟಿಸಿ ಸ್ವಾರ್ಥ ಸಾಧಿಸಿಕೊಳ್ಳುವ ಹಿತಾಸಕ್ತಿಗಳ ಅಸ್ತಿತ್ವದಲ್ಲಿಯೇ ಮಹತ್ವದ ಸುಳಿವನ್ನು ಗೊತ್ತುಮಾಡಿಕೊಳ್ಳಬಹುದು. ಈ ಹಿತಾಸಕ್ತಿಗಳು ಸಮಸ್ಯೆಗಳನ್ನು ಉದ್ದೇಶಪೂರ್ವಕವಾಗಿ ಸ್ಥಾಯಿಯಾಗಿಸಿ ಜನರೊಳಗಿನ ಆಲೋಚಿಸುವ ಶಕ್ತಿಯನ್ನೇ ತಡೆದು ನಿಲ್ಲಿಸುತ್ತವೆ. ಆವರ ಆಲೋಚನೆಯ ಸಾಧ್ಯತೆಗಳನ್ನು ಮೊಟಕುಗೊಳಿಸಿ ಧರ್ಮವಲ್ಲದ ಸಂಗತಿಗಳ ಕಡೆಗೆ ತಿರುಗಿಸುತ್ತವೆ. ಅವರ ಮನಸ್ಸಿನಲ್ಲಿ ದೇವರುಗಳ ಬಗ್ಗೆ ಭಯದ ಭಾವ ಮೂಡಿಸುತ್ತವೆ. ಆರಾಧಿಸದಿದ್ದರೆ ಶಿಕ್ಷೆ ಗ್ಯಾರಂಟಿ, ದೇವರೇ ಮುನಿಸಿಕೊಂಡರೆ ಮುಂದಿದೆ ವ್ಯತಿರಿಕ್ತ ಪರಿಣಾಮ ಎಂಬ ಅತಾರ್ಕಿಕತೆಯನ್ನೇ ಮಂಡಿಸಿ ದಾರಿ ತಪ್ಪಿಸುತ್ತವೆ.

ಮೊದಲೇ ಸಮಸ್ಯೆಗಳ ಮಧ್ಯೆ ನರಳುತ್ತಿರುವವರ ಮುಂದೆ ಧರ್ಮದಲ್ಲಿಲ್ಲದ ಸಂಗತಿಗಳನ್ನು ವೈಭವೀಕರಿಸಿ ಹೇಳಿದರೆ ಸ್ವಾರ್ಥದ ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕಾರ್ಯಸೂಚಿ ಅತ್ಯಂತ ಎಚ್ಚರದಲ್ಲಿ ಯಶಸ್ವಿಯಾಗಿ ನಿರ್ವಹಿಸಲ್ಪಡುತ್ತದೆ. ಹೀಗಾದರೆ ಹೀಗಾಗುತ್ತದೆ ಎಂದು ತಾರ್ಕಿಕವಾಗಿ ಮಾತನಾಡುವವರಂತೆ ನಟಿಸುವವರೇ ರಂಜನಾಮಾಧ್ಯಮೋದ್ಯಮದ ಮೂಲಗಳಾಗುತ್ತಾರೆ. ಸಮಾಜದ ವಿವಿಧ ಜನವರ್ಗಗಳು ಇಂಥವರನ್ನು ಆರಾಧಿಸಿಕೊಂಡೇ ಇದ್ದರೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದು ಎಂಬ ರಾಜಕೀಯ ವಲಯದ ನಿರೀಕ್ಷೆಗಳು ಈ ಹಂತದಲ್ಲಿಯೇ ಈಡೇರಿಬಿಡುತ್ತವೆ. ಸಮಸ್ಯೆಯನ್ನು ಶಾಶ್ವತವಾಗಿ ಉಳಿಯುವಂತೆ ನೋಡಿಕೊಂಡು ಅದು ಬಿಕಟ್ಟಿನ ಸ್ವರೂಪ ಪಡೆದುಕೊಂಡಾಗಲೂ ಪರಿಹಾರದ ನಾಟಕವಾಡಿ ಧರ್ಮ, ದೇವರ ಕುರಿತಾಗಿ ಭಯಭೀತಿ ಸೃಷ್ಟಿಸಿ ಸಾಮಾಜಿಕ ಚಲನೆಯನ್ನು ನಿಲ್ಲಿಸಿಬಿಡುವ ರಾಜಕೀಯ ಉದ್ದೇಶಗಳು ಯಶಸ್ಸು ಪಡೆದುಬಿಡುತ್ತವೆ. ಇದೇ ರಾಜಕೀಯ ಪ್ರವೃತ್ತಿ ಇಂದು ಸಂವಿಧಾನಕ್ಕೆ ಸವಾಲೆಸೆಯುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ.
ಇದು ಎಲ್ಲ ಕಾಲದ ಸಮಸ್ಯೆಯೂ ಹೌದು. ಬಹುಷಃ ಈ ಕಾರಣಕ್ಕಾಗಿಯೇ ಇರಬಹುದು; ಈಗಾಗಲೇ ಆಗಿಹೋದ ದಾರ್ಶನಿಕರು ದೇವರು ಮತ್ತು ಧರ್ಮದ ಕುರಿತ ನಂಬಿಕೆಯ ಜಗತ್ತನ್ನು ಆಧರಿಸಿಯೇ ತಾತ್ವಿಕತೆಯನ್ನು ಪ್ರತಿಪಾದಿಸಿದರು. ಭೌತಿಕ ಜಗತ್ತಿನ ಒಳಗೇ ಮನುಷ್ಯಸಹಜ ದೌರ್ಬಲ್ಯಗಳೊಂದಿಗಿನ ಊನಗಳನ್ನು ತಮ್ಮೊಳಗಿನ ದಾರ್ಶನಿಕತೆಯೊಂದಿಗೆ ಎದುರುಗೊಂಡರು. ನಿಜವಾದ ಧರ್ಮ ಏನು ಎಂಬುದನ್ನು ಅರ್ಥೈಸಿದರು. ದೇವರ ಅಸ್ತಿತ್ವವು ಒಳಿತಿನೊಂದಿಗೇ ಇದೆ ಎಂಬ ವಿವೇಕವನ್ನು ಕಟ್ಟಿಕೊಡಲು ಪ್ರಯತ್ನಿಸಿದರು. ನಿಸರ್ಗದ ಅನೇಕ ಕೌತುಕಮಯ ಸಂಗತಿಗಳನ್ನು ಕಾಡಿಸಿಕೊಂಡು ಅವುಗಳನ್ನು ಜೀವಪರ ಅಂತಃಕರಣದೊಂದಿಗೆ ಮನುಷ್ಯ ಬದುಕಿನ ಉದ್ಧಾರಕ್ಕೆ ಬಳಸಿಕೊಳ್ಳಬಹುದಾದ ಒಳನೋಟಗಳ ಮೇಲೆ ಬೆಳಕು ಚೆಲ್ಲಿದರು. ಧರ್ಮ-ದೇವರ ಬಗೆಗಿನ ನಂಬಿಕೆಯ ಜಗತ್ತನ್ನು ಅಲುಗಾಡಿಸದೇ ಅಂತಸ್ಥಗೊಂಡಿರುವ ಮೂಢನಂಬಿಕೆಯ ಬೇರುಗಳನ್ನು ಕಿತ್ತೆಸೆಯಲು ತಾತ್ವಿಕ ಮಾರ್ಗವನ್ನು ಕಂಡುಕೊಂಡರು. ಆ ಮೂಲಕ ಧರ್ಮ ಮತ್ತು ದೇವರನ್ನು ಉದಾತ್ತತೆಯೊಂದಿಗೆ ತಾದಾತ್ಮ್ಯಗೊಳಿಸುವ ಚಲನಾತ್ಮಕ ಆಕೃತಿಗಳನ್ನು ಕೊಡುಗೆಗಳನ್ನಾಗಿ ನೀಡಿದರು. ಈಗ ಈ ಸಾಧ್ಯತೆಯ ತದ್ವಿರುದ್ಧದ ದಿಕ್ಕುಗಳೇ ಪರಮಮಾರ್ಗಗಳಾಗಿ ಪರಿಗಣಿತವಾಗುತ್ತಿವೆ. ಅವೇ ಪರಮೋಚ್ಛ ಎಂಬ ಬಿಂಬಗಳನ್ನು ಅತ್ಯಂತ ಚಾಣಾಕ್ಷಯುತವಾಗಿ ಕಟ್ಟಿಕೊಡಲಾಗುತ್ತಿದೆ. ಅಂಥ ಎಲ್ಲ ಸಂಕುಚಿತತೆಯನ್ನು ರಾಜಕೀಯ ಪೋಷಿಸುತ್ತಿದೆ. ಧರ್ಮ-ದೇವರನ್ನು ನೆಚ್ಚಿಕೊಂಡ ಜನರ ನಂಬಿಕೆಯ ಜಗತ್ತನ್ನು ಮೌಢ್ಯಕ್ಕೆ ತಿರುಗಿಸಿ ಅಪನಂಬಿಕೆಗಳನ್ನು ಮುನ್ನೆಲೆಗೆ ತಂದು ತನ್ನನ್ನು ವಿಜೃಂಭಿಸಿಕೊಳ್ಳುತ್ತಿದೆ.

ಧರ್ಮ ಮತ್ತು ದೇವರು – ಇವೆರಡೂ ಭಾವನಾತ್ಮಕ ಸಾಂಸ್ಥಿಕತೆಯನ್ನು ಅಳವಡಿಸಿಕೊಂಡು ನಿರಂತರವಾಗಿ ಜನರನ್ನು ಶೋಷಿಸಲು ಬಳಕೆಯಾದ ಇತಿಹಾಸವಿದೆ. ಅದನ್ನು ಮರೆಗೆ ಸರಿಸಿ ಅಧಿಕಾರ, ಹಣ ಮತ್ತು ಪ್ರತಿಷ್ಠೆಗಳನ್ನು ಸ್ಥಾಯಿಯಾಗಿಸಿಕೊಳ್ಳಲು ರಾಜಕೀಯ ಕೇಂದ್ರಗಳು ಪ್ರಯತ್ನಿಸಿ ಯಶಸ್ವಿಯಾಗುತ್ತಲೇ ಇವೆ. ಅವುಗಳಿಗೆ ಅನುಗುಣವಾಗಿಯೇ ತಮ್ಮನ್ನು ಪ್ರತಿಷ್ಠಾಪಿಸಿಕೊಂಡ ವಿವಿಧ ಜಾತಿಗಳ ಜನಸಮೂಹ ಅವು ನಿರೀಕ್ಷಿಸುವ ಸಂಕುಚಿತತೆಯ ಮನೋಧರ್ಮಕ್ಕೆ ಪಕ್ಕಾಗುತ್ತಲೇ ಇದೆ. ಬದಲಾವಣೆಯ ಪ್ರಬಲ ಅಸ್ತ್ರ ಎಂದು ಪರಿಗಣಿಸಲ್ಪಟ್ಟ ಶಿಕ್ಷಣ ಮತ್ತು ಅದರ ಮೂಲಕ ವ್ಯಾಪಕಗೊಳ್ಳುತ್ತದೆ ಎಂದುಕೊಂಡಿದ್ದ ಮೌಲ್ಯಾತ್ಮಕ ಪ್ರಭೆಯನ್ನು ಮತ್ತೆ ಮತ್ತೆ ಸೋಲಿಸುತ್ತಿರುವುದು ಇದೇ ಸಂಕುಚಿತತೆಯೇ. ಇದನ್ನೇ ಅಧಿಕಾರ ಕೇಂದ್ರಗಳ ಕಡೆಗೆ ನೋಟ ನೆಟ್ಟ ರಾಜಕೀಯ ವಲಯದ ಪ್ರತಿನಿಧಿಗಳು ತಮ್ಮ ಬಂಡವಾಳವಾಗಿಸಿಕೊಳ್ಳುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಧರ್ಮದಲ್ಲಿ ಇಲ್ಲದೇ ಇರುವ ಜೀವವಿರೋಧಿ ಅಮಾನವೀಯ ಸಾಂಪ್ರದಾಯಿಕತೆಯನ್ನು ಸಂವಿಧಾನಕ್ಕಿಂತಲೂ ಮಿಗಿಲು ಎಂದು ಪ್ರತಿಪಾದಿಸುತ್ತಿದ್ದಾರೆ. ಆ ಪ್ರತಿಪಾದನೆಯನ್ನು ಸಮಾಜದ ವಿವಿಧ ಜನವರ್ಗಗಳು ಒಪ್ಪಿಕೊಳ್ಳಲೇಬೇಕು ಎಂಬ ವಿತಂಡವಾದವನ್ನು ಮುಂದಿಡುತ್ತಿದ್ದಾರೆ.
ಈ ನಕಾರಾತ್ಮಕ ಹೆಜ್ಜೆಗಳಿಗೆ ಪರ್ಯಾಯವಾಗಿ ವಿಶ್ವಾಸಾರ್ಹವಾದ ಸಂವಿಧಾನಬದ್ಧ ರಾಜಕೀಯ ಸಂಸ್ಕøತಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಧರ್ಮವಲ್ಲದ ಸಂಗತಿಗಳನ್ನು ವೈಭವೀಕರಿಸಿ ಮುನ್ನೆಲೆಗೆ ತಂದ ವಲಯದವರೂ ತಾವು ಬದಲಾಗಬೇಕಾದ ಆಲೋಚನೆಗಳನ್ನು ಹರಿಬಿಡುತ್ತಿದ್ದಾರೆ ಎಂಬುದೇನೋ ಸಮಾಧಾನ ತರುವ ಸಂಗತಿ. ಈ ದೇಶದ ಸಾಂಸ್ಕøತಿಕ ವೈವಿಧ್ಯತೆಯ ಮಹತ್ವವನ್ನು ತಡವಾಗಿಯಾದರೂ ಹೇಳುತ್ತಿದ್ದಾರೆ ಎಂದುಕೊಳ್ಳಬಹುದು. ಎಲ್ಲ ಧರ್ಮಗಳವರನ್ನು ಗೌರವಿಸಬೇಕು ಎನ್ನುವ ಭಾವವನ್ನು ಸಂವಹಿಸುತ್ತಿದ್ದಾರೆ ಎಂದು ಖುಷಿಪಡಬಹುದು. ಅಂಥ ಆಶಾದಾಯಕ ನುಡಿಗಳು ನಡೆಯಲ್ಲೂ ಮೇಳೈಸಿಕೊಳ್ಳಬೇಕು.
ಹಾಗಾಗುವುದಕ್ಕೆ ಭಾರತದ ರಾಜಕಾರಣ ಅಷ್ಟು ಸುಲಭವಾಗಿ ಬಿಡುವುದಿಲ್ಲ. ಇಲ್ಲಿಯ ರಾಜಕಾರಣಕ್ಕೆ ಬದಲಾವಣೆಗಿಂತ ಸ್ಥಗಿತತೆಯೇ ಹೆಚ್ಚು ಅಚ್ಚುಮೆಚ್ಚು. ಧರ್ಮ-ದೇವರು ಕೇಂದ್ರಿತ ಸಾಂಪ್ರದಾಯಿಕತೆಯೊಂದಿಗೆ ತಳುಕು ಹಾಕಿಕೊಂಡಿರುವ ಸಮಸ್ಯೆಗಳು ಜಟಿಲವಾದಷ್ಟೂ ಅದಕ್ಕೆ ಎಲ್ಲಿಲ್ಲದ ಖುಷಿ. ಜನರು ಈ ಸಾಂಪ್ರದಾಯಿಕತೆಯ ತೊಳಲಾಟಗಳಲ್ಲೇ ಕಾಲ ಕಳೆದರೆ ನಿಜವಾದ ಬೆಳವಣಿಗೆಗೆ ಸಂಬಂಧಿಸಿದ ಚಿಂತನೆಯೇ ಹುಟ್ಟುವುದಿಲ್ಲ. ಆಗ ಜನರು ಎಚ್ಚೆತ್ತುಕೊಳ್ಳುವ ಪ್ರಮೇಯವೇ ಎದುರಾಗುವುದಿಲ್ಲ. ಇದು ದೇವರು-ಧರ್ಮಗಳ ರಕ್ಷಾಕವಚಗಳನ್ನು ಹಾಕಿಕೊಂಡು ಜನರ ಭಯವಿಹ್ವಲತೆಯನ್ನು ಬೇರೂರಿಸಿ ಮತ್ತಷ್ಟು ಗಟ್ಟಿಯಾಗಿಸಿ ಉಸಿರುಗಟ್ಟಿಸುವ ಆಟ. ತಮ್ಮನ್ನು ಸೋಲಿಸುವ ವೈಚಾರಿಕತೆ ಸನಿಹದಲ್ಲಿಯೇ ಇದೆ ಎನ್ನುವ ಸುಳಿವು ಸಿಕ್ಕ ತಕ್ಷಣವೇ ಧರ್ಮರಕ್ಷಣೆ ಮತ್ತು ದೇವರನ್ನು ಕೃತಾರ್ಥರನ್ನಾಗಿಸುವ ಕೈಂಕರ್ಯಗಳ ನೆಪದಲ್ಲಿ ಭಯವನ್ನು ಸೃಷ್ಟಿಸಿ ವಂಚಿಸುವ ಆಟ. ಇಂಥ ಆಟವನ್ನು ನಿಲ್ಲಿಸಬೇಕಾದರೆ ಪ್ರತಿಕಾಲಘಟ್ಟದಲ್ಲೂ ಸೋಲುತ್ತಲೇ ಇರುವ ಬಹುಸಂಖ್ಯಾತ ಶೋಷಿತ ಸಮುದಾಯದ ಜನರು ಸಂವಿಧಾನದ ಆವರಣಕ್ಕೆ ಮರಳಬೇಕು. ತಮ್ಮ ಸಮಸ್ಯೆಗಳಿಗೆ ಪರಿಹಾರ ತೋರುವ ಪರಿವರ್ತನಾಶೀಲ ಚಿಂತನಶೀಲ ಸದಾಶಯಗಳೊಂದಿಗೆ ಮುಖಾಮುಖಿಯಾಗಬೇಕು. ಧ್ಯಾನಸ್ಥ ಸ್ಥಿತಿಯಲ್ಲಿ ಸಂವಿಧಾನವನ್ನು ಅಂತರ್ಗತಗೊಳಿಸಿಕೊಳ್ಳಬೇಕು.
ಪರ್ಯಾಯ ರಾಜಕಾರಣದ ಸಾಧ್ಯತೆಗಳನ್ನು ಇಷ್ಟೊತ್ತಿಗಾಗಲೇ ಅತ್ಯಂತ ಚಾಣಾಕ್ಷಯುತವಾಗಿ ಪರೀಕ್ಷೆಗೊಡ್ಡಿ ತನ್ನ ಸಂವಿಧಾನಬದ್ಧ ಶಕ್ತಿಯನ್ನು ವಿಸ್ತರಿಸಿಕೊಳ್ಳಬಹುದಾಗಿದ್ದ ರಾಜಕೀಯ ಪಕ್ಷಗಳು ಮತ್ತೆ ಅಧಾರ್ಮಿಕ ಸಂಕುಚಿತತೆಯೊಂದಿಗಿನ ಶ್ರೇಷ್ಠತೆಯ ವ್ಯಸನದಿಂದ ಬಳಲುತ್ತಿರುವ ಸಾಂಪ್ರದಾಯಿಕ ಶಕ್ತಿಗಳ ಜೊತೆಗೇ ಕೈಜೋಡಿಸಿ ತಮ್ಮ ಅಧಿಕಾರ ಪಡೆಯುವ ಹಂಬಲಗಳನ್ನು ಜೀವಂತಗೊಳಿಸಿಕೊಳ್ಳುತ್ತಿವೆ. ಮತ್ತವೇ ಜಾತಿ ವೈರುಧ್ಯಗಳು. ಮತ್ತದೇ ಅಧಾರ್ಮಿಕ ಸಂಘರ್ಷ. ಮೇಲು-ಕೀಳುಗಳ ಅಂತರ್ಯುದ್ಧದ ಕಪಟಕಿರುಕುಳ ಯಾನ. ಸಂವಿಧಾನವನ್ನು ಗೆಲ್ಲಿಸುವ ಇಚ್ಛಾಶಕ್ತಿಯ ಕೊರತೆ. ಅಲ್ಲಲ್ಲಿ ಕಂಡುಬರುವ ಮಾನವೀಯತೆಯ ಒರತೆಗಳನ್ನು ಉದ್ದೇಶಪೂರ್ವಕವಾಗಿ ಇಲ್ಲವಾಗಿಸಿಬಿಡುವ ಹುನ್ನಾರಗಳ ತಕಧಿಮಿಗುಟ್ಟುವ ಕ್ರೂರನರ್ತನ. ಉದಾತ್ತ ತಾತ್ವಿಕತೆಯ ಪರಿಭಾಷೆಗಳನ್ನು ಅಪವ್ಯಾಖ್ಯಾನಗೊಳಿಸುವ ಸಾಂಪ್ರದಾಯಿಕತೆ ಅಸ್ತಿತ್ವ ಇನ್ನೆಷ್ಟು ದಿನ? ಕಾಲವೇ ಉತ್ತರಿಸಬೇಕು ಎಂದು ಸುಮ್ಮನೆ ಕುಳಿತುಕೊಳ್ಳಬೇಕೇ? ಯೋಚಿಸಲಾರಂಭಿಸಬೇಕೇ……?

(-ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ
ಉಜಿರೆ,ಇ-ಮೇಲ್ ವಿಳಾಸ: nkpadmanabh@gmail.com
ಮೊಬೈಲ್: 9972998300)

ದಿನದ ಸುದ್ದಿ

ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ

Published

on

ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ ಸಂಪ್ರದಾಯದಂತೆ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಅಪಾರ ಜನಸ್ತೋಮದೊಂದಿಗೆ ಸೋಮವಾರ ಸಂಜೆ ಜರುಗಿತು.

ಡಾ; ಶಾಮನೂರು ಶಿವಶಂಕರಪ್ಪನವರಿಗೆ 95 ವರ್ಷವಾಗಿದ್ದು ವಯೋಸಹಜ ಅನಾರೋಗ್ಯದಿಂದ ಡಿಸೆಂಬರ್ 14 ರಂದು ನಿಧನ ಹೊಂದಿದ್ದರು. 6 ಭಾರಿ ಶಾಸಕರಾಗಿ, ಒಮ್ಮೆ ಸಂಸದರಾಗಿ ಸುಧೀರ್ಘ ರಾಜಕೀಯ ಸೇವೆಯಲ್ಲಿದ್ದ ಇವರು ರಾಜ್ಯ ಸೇರಿದಂತೆ ದಾವಣಗೆರೆಗೆ ಹೊಸ ರೂಪಕೊಟ್ಟಿದ್ದರು.
ಸೋಮವಾರ ಬೆಳಗ್ಗೆ 7.30 ಗಂಟೆಯಿಂದ ಪಾರ್ಥಿವ ಶರೀರಕ್ಕೆ ಸ್ವಗೃಹದಲ್ಲಿ ಕುಟುಂಬಸ್ಥರ ವಿವಿಧ ಪೂಜೆ ಪುನಸ್ಕಾರಗಳೊಂದಿಗೆ ವಿಧಿ ವಿಧಾನಗಳು ನಡೆದು, ಮಧ್ಯಾಹ್ನದಿಂದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಸಾವಿರಾರು ಜನರು ಆಗಮಿಸಿ ಸರತಿ ಸಾಲಿನಲ್ಲಿ ಅಂತಿಮ ದರ್ಶನ ಪಡೆದರು.

ಮಧ್ಯಾಹ್ನ 3.30 ರಿಂದ ಹೈಸ್ಕೂಲ್ ಮೈದಾನದಿಂದ ಹೊರಟು ಹಳೇ ದಾವಣಗೆರೆ ಮಂಡಿಪೇಟೆ, ಕಾಯಿಪೇಟೆ, ಅರಳಿವೃತ್ತದ ಮೂಲಕ ಕಲ್ಲೇಶ್ವರ ಮಿಲ್‍ಗೆ ಪಾರ್ಥಿವ ಶರೀರ ತಲುಪಿತು. ಸಂಜೆ 4.30 ರಿಂದ ಅಂತಿಮ ವಿಧಿ ವಿಧಾನಗಳು ನಡೆದವು.

ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು, ಇಂಧನ ಸಚಿವರಾದ ಕೆ.ಜೆ.ಜಾರ್ಜ್‍ರವರು, ಸಮಾಜ ಕಲ್ಯಾಣ ಸಚಿವರಾದ ಡಾ; ಹೆಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ಆಹಾರ ಸಚಿವರಾದ ಕೆ.ಎಚ್.ಮುನಿಯಪ್ಪ, ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಸಚಿವರಾದ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ.ಎಸ್.ಪಾಟೀಲ, ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ್ ಸೇರಿದಂತೆ ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು.

ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ರಾಷ್ಟ್ರಧ್ವಜವನ್ನು ಪಾರ್ಥಿವ ಶರೀರಕ್ಕೆ ಹೊದಿಸಿ ಪೊಲೀಸ್ ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ಗೌರವ ಸಲ್ಲಿಸಲಾಯಿತು. ನಂತರ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿ ಅಂತಿಮವಾಗಿ ಶೋಕ ವ್ಯಕ್ತಪಡಿಸಲಾಯಿತು. ರಾಷ್ಟ್ರಧ್ವಜವನ್ನು ಅವರ ಪುತ್ರರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಸ್ತಾಂತರಿಸಿದರು. ನಂತರ ಸಾಂಪ್ರದಾಯಿಕ ಪೂಜೆ, ವಿಧಿ, ವಿಧಾನಗಳೊಂದಿಗೆ ಪಾರ್ಥಿವ ಶರೀರವನ್ನು ಐಕ್ಯ ಮಂಟಪದಲ್ಲಿ ಇಡಲಾಯಿತು.

ಡಾ; ಶಾಮನೂರು ಶಿವಶಂಕರಪ್ಪನವರ ಪುತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಸೊಸೆ ಹಾಗೂ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್, ಇನ್ನಿಬ್ಬರು ಪುತ್ರರಾದ ಎಸ್.ಎಸ್.ಬಕ್ಕೇಶ್, ಎಸ್.ಎಸ್.ಗಣೇಶ್ ಸೇರಿದಂತೆ ಶಾಮನೂರು ಶಿವಶಂಕರಪ್ಪನವರ ಕುಟುಂಬಸ್ಥರು ಅಂತಿಮ ವಿಧಿ ವಿಧಾನದಲ್ಲಿ ಭಾಗವಹಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಎಸ್.ಆರ್.ಬೊಮ್ಮಾಯಿ, ಗೃಹ ಸಚಿವರಾದ ಜಿ.ಪರಮೇಶ್ವರ್, ಕಂದಾಯ ಸಚಿವರಾದ ಕೃಷ್ಣಬೈರೇಗೌಡ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಬಿ.ಜೆ.ಪಿ.ಪಕ್ಷದ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಅಂತಿಮ ದರ್ಶನ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

Published

on

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದು ಮೊದಲ ಡಿಜಿಟಲ್ ಜನಗಣತಿಯಾಗಲಿದೆ. 2027 ರ ಜನಗಣತಿಯು ಒಟ್ಟಾರೆ 16ನೇ ಮತ್ತು ಸ್ವಾತಂತ್ರ‍್ಯದ ನಂತರದ 8 ನೇ ಜನಗಣತಿಯಾಗಲಿದೆ. ಭಾರತದ ಜನಗಣತಿಯನ್ನು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕ್ರಮವೆಂದು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2026ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಗೆ ಅನುಮೋದನೆ ನೀಡಿದೆ. ಬೆಳೆಗಾರರಿಗೆ ಲಾಭದಾಯಕ ಬೆಲೆಗಳನ್ನು ಒದಗಿಸುವ ಸಲುವಾಗಿ, ಸರ್ಕಾರವು 2018-19 ರ ಕೇಂದ್ರ ಬಜೆಟ್‌ನಲ್ಲಿ ಎಲ್ಲಾ ಕಡ್ಡಾಯ ಬೆಳೆಗಳ ಎಂಎಸ್‌ಪಿ ಅನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು. ಮಿಲ್ಲಿಂಗ್ ಕೊಬ್ಬರಿಗೆ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 445 ರೂಪಾಯಿಗಳಿಂದ 12 ಸಾವಿರದ 27 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಮತ್ತು ಅದೇ ಅವಧಿಗೆ ಉಂಡೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 2026ರ ಹಂಗಾಮಿಗೆ ಕ್ವಿಂಟಲ್‌ಗೆ 400 ರೂಪಾಯಿಗಳಿಂದ 12 ಸಾವಿರದ 500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಯು ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭದಾಯಕ ಆದಾಯವನ್ನು ಖಚಿತಪಡಿಸುವುದಲ್ಲದೆ, ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕೊಬ್ಬರಿ ಉತ್ಪಾದನೆಯನ್ನು ವಿಸ್ತರಿಸಲು ರೈತರನ್ನು ಪ್ರೋತ್ಸಾಹಿಸುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

Published

on

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ ಪ್ರವೇಶ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ನಿನ್ನೆ ತಡೆರಹಿತ, ದಕ್ಷ ಮತ್ತು ಪಾರದರ್ಶಕ ಬಳಕೆಗಾಗಿ ಕಲ್ಲಿದ್ದಲು ಸಂಪರ್ಕದ ಹರಾಜು ನೀತಿಗೆ ಅನುಮೋದನೆ ನೀಡಿತು.

ನವದೆಹಲಿಯಲ್ಲಿ ನಿನ್ನೆ ಸಂಜೆ ಸಂಪುಟದ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, 2016ರ ಎನ್‌ಆರ್‌ಎಸ್ ನಿಯಂತ್ರಿತವಲ್ಲದ ವಲಯದ ಸಂಪರ್ಕ ಹರಾಜು ನೀತಿಯಲ್ಲಿ ’ಕೋಲ್‌ಸೇತು’ ಎಂಬ ಪ್ರತ್ಯೇಕ ವ್ಯವಸ್ಥೆಯನ್ನು ಸೇರಿಸುವ ಮೂಲಕ ಯಾವುದೇ ಕೈಗಾರಿಕಾ ಬಳಕೆ ಮತ್ತು ರಫ್ತಿಗೆ ದೀರ್ಘಾವಧಿಯವರೆಗೆ ಹರಾಜು ಆಧಾರದ ಮೇಲೆ ಕಲ್ಲಿದ್ದಲು ಸಂಪರ್ಕಗಳ ಹಂಚಿಕೆಗೆ ಈ ನೀತಿಯು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಲ್ಲಿದ್ದಲು ಅಗತ್ಯವಿರುವ ಯಾವುದೇ ದೇಶೀಯ ಖರೀದಿದಾರರು ಅಂತಿಮ ಬಳಕೆಯನ್ನು ಲೆಕ್ಕಿಸದೆ ಸಂಪರ್ಕ ಹರಾಜಿನಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ3 hours ago

ಡಾ. ಶಾಮನೂರು ಶಿವಶಂಕರಪ್ಪ ನಿಧನ ; ವೀರಶೈವ ವಿಧಿವಿಧಾನದಂತೆ ಕಲ್ಲೇಶ್ವರ ಮಿಲ್‍ನಲ್ಲಿ ಅಂತ್ಯ ಸಂಸ್ಕಾರ

ಸುದ್ದಿದಿನ,ದಾವಣಗೆರೆ:ಮಾಜಿ ಸಚಿವರು ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ; ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಅಂತ್ಯ ಸಂಸ್ಕಾರವು ಸರ್ಕಾರಿ ಸಕಲ ಗೌರವಗಳೊಂದಿಗೆ ಹಾಗೂ ವೀರಶೈವ...

ದಿನದ ಸುದ್ದಿ3 days ago

2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

ಸುದ್ದಿದಿನ,ದೆಹಲಿ:2027ರ ಜನಗಣತಿಯನ್ನು ನಡೆಸಲು ಸಂಪುಟವು 11 ಸಾವಿರದ 718 ಕೋಟಿ ರೂಪಾಯಿಗಳ ಬಜೆಟ್‌ಅನ್ನು ಅಂಗೀಕರಿಸಿದೆ. ಈ ಕುರಿತು ಮಾಹಿತಿ ನೀಡಿದ ಸಚಿವರು, 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ...

ದಿನದ ಸುದ್ದಿ3 days ago

ಕೋಲ್‌ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು

ಸುದ್ದಿದಿನ,ದೆಹಲಿ:ಕೇಂದ್ರ ಸರ್ಕಾರವು ’ಕೋಲ್‌ಸೇತು’ ನೀತಿಯನ್ನು ಅನುಮೋದಿಸಿದೆ. ಇದು ವಿವಿಧ ಕೈಗಾರಿಕಾ ಬಳಕೆಗಳು ಮತ್ತು ರಫ್ತಿಗೆ ಕಲ್ಲಿದ್ದಲು ಸಂಪರ್ಕಗಳ ಹರಾಜಿಗೆ ಹೊಸ ವ್ಯವಸ್ಥೆ ಸೃಷ್ಟಿಸುತ್ತದೆ, ಹಾಗೂ ಸಂಪನ್ಮೂಲಗಳ ನ್ಯಾಯಯುತ...

ದಿನದ ಸುದ್ದಿ3 days ago

ಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ...

ದಿನದ ಸುದ್ದಿ4 days ago

ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್...

ದಿನದ ಸುದ್ದಿ5 days ago

ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ...

ದಿನದ ಸುದ್ದಿ6 days ago

ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ...

ದಿನದ ಸುದ್ದಿ6 days ago

ಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ

~ಅನಿರೀಕ್ಷಿತ್ ನಾರಾಯಣ ಕೆಲ ಮುನ್ನೆಚ್ಚರಿಕೆಯ ಅಂಶಗಳನ್ನು ಪಾಲಿಸುವುದರಿಂದ ಗ್ಯಾಸ್ ಗೀಸರ್ ನಿಂದ ಆಗುವ ಅಪಾಯವನ್ನು ತಡೆಗಟ್ಟಬಹುದು. 1. ಮೊದಲಿಗೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಗ್ಯಾಸ್ ಗೀಸರ್...

ದಿನದ ಸುದ್ದಿ1 week ago

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು....

ದಿನದ ಸುದ್ದಿ1 week ago

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ...

Trending