ರಾಜಕೀಯ
ಸಂವಿಧಾನ ಸಂಭಾಷಣೆ ಮತ್ತು ದಲಿತ ಸಂವೇದನೆ
ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಸಂವಿದಾನ ಸಂಭಾಷಣೆ ಕಾರ್ಯಕ್ರಮಕ್ಕೆ ರಣಧೀರ ಪಡೆ ಪ್ರತಿಭಟನೆಯ ಮೂಲಕ ತಡೆಯೊಡ್ಡಿತು. ಇದು ನಮ್ಮ ಸಮಾನ ಮನಸ್ಕ ಗೆಳೆಯರ ಮಧ್ಯೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷನಾಗಿ, ದಲಿತ ಚಳುವಳಿ, ಸಂವಿದಾನ ಉಳಿಸಿ ಚಳುವಳಿ, ಮಾನವ ಹಕ್ಕು ಚಳುವಳಿಯ ಸಾಮಾನ್ಯ ಕಾರ್ಯಕರ್ತನಾಗಿ ಈ ಹೋರಾಟವನ್ನು ಯಾಕೆ ಮಾಡಿದೆವು ಎಂದು ಹೇಳಬೇಕಿದೆ. ಅದಕ್ಕಾಗಿ ಈ ಲೇಖನ….
ಸಂವಿಧಾನ ಸಂಭಾಷಣೆ ಎಂಬ ಕಾರ್ಯಕ್ರಮ ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮ ಎಂದು ಹೊರಗಿನ ಪ್ರಪಂಚ ಭಾವಿಸಿದೆ. ಆದರೆ ಅದು ಪೂರ್ಣ ಸತ್ಯವಲ್ಲ. ನಾಲ್ಕು ಕೋಟಿ ವೆಚ್ಚದ ಇಲಾಖೆಯ ಅನುದಾನದ ಎನ್ ಡಿಟಿವಿ ಮತ್ತು ಸಮೃದ್ದ ಭಾರತ ಟಿವಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮವದು. ಖಾಸಗಿ ಟಿವಿ ವಾಹಿನಿಯ ಚರ್ಚಾ ಕಾರ್ಯಕ್ರಮಕ್ಕೆ ಕನ್ನಡ ಜನಗಳ ತೆರಿಗೆ ಹಣ ಬಳಸಲಾಗಿತ್ತು.
ನಿಮಗೆ ನೆನಪಿರಬಹುದು. ಕೆಲವೇ ಕೆಲವು ತಿಂಗಳ ಹಿಂದೆ ಲಕ್ಷಾಂತರ ಜನರನ್ನು ಸೇರಿಸಿ ಐಶಾರಾಮಿಯಾಗಿ ಅಂಬೇಡ್ಕರ್ 150 ಕಾರ್ಯಕ್ರಮ ವನ್ನು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿತ್ತು. ಅದರ ಫಲಿತಾಂಶ ಏನು ಎಂಬುದನ್ನು ಈಗ ಪ್ರಶ್ನಿಸೋದು ಬೇಡ. ಅದಕ್ಕಾಗಿ ಖರ್ಚಾದ ನೂರಾರು ಕೋಟಿಯ ಲೆಕ್ಕ ಕೇಳೋದೂ ಬೇಡ. ಅಂದು ಅತಿಥಿಗಳ ಆಯ್ಕೆಯಲ್ಲಿ ಕನಿಷ್ಠ ನ್ಯಾಯ ಪಾಲಿಸಲಾಗಿತ್ತು. ದೇಶ ವಿದೇಶದ ಉಪನ್ಯಾಸಕರ ಜೊತೆಗೆ ಕನ್ನಡ ಸಾಹಿತಿ, ಚಿಂತಕರು, ಹೋರಾಟಗಾರರಿಗೆ ವೇದಿಕೆಯಲ್ಲಿ ಸಮಾನಾವಕಾಶ ಒದಗಿಸಲಾಗಿತ್ತು. ಸಾವಿರಾರು ದಲಿತರು, ಯುವಕರು, ಮಹಿಳೆಯರು ಅವರ ಉಪನ್ಯಾಸದಿಂದ ಜ್ಞಾನ ಪಡೆದುಕೊಂಡಿದ್ದರು.
ಅದರ ದುಂದುವೆಚ್ಚವನ್ನು ನಾವು ವಿರೋಧಿಸಿದ್ದರೂ ಎಲ್ಲರ ಒಳಗೊಳ್ಳುವಿಕೆಯ ಕಾರಣಕ್ಕೆ ಸ್ವಾಗತಿಸಿದ್ದೆವು. ಕೆಲ ತಿಂಗಳ ಹಿಂದೆ ನಡೆದಿದ್ದ ಈ ಕಾರ್ಯಕ್ರಮವನ್ನು ಯೂನಿವರ್ಸಿಟಿ ಸಹಯೋಗದಲ್ಲಿ ಮಾಡಲಾಗಿತ್ತು. ಅತಿಥಿಗಳ ಆಯ್ಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿಗೆ ಸಮಿತಿ ರಚಿಸಿ ನಡೆಸಲಾಗಿತ್ತು. ಇವತ್ತು ನಡೆಯುತ್ತಿದ್ದ ಸಂವಿಧಾನ ಸಂಭಾಷಣೆಗೆ ಅತಿಥಿಗಳನ್ನು ಯಾವ ಮಾನದಂಡದಲ್ಲಿ ಅಂತಿಮಗೊಳಿಸಲಾಯಿತು ? ಟಿವಿ ಕಾರ್ಯಕ್ರಮಕ್ಕೆ ಬೇಕಾದ ರೀತಿಯ ಟಿಆರ್ ಪಿ ವ್ಯಕ್ತಿಗಳನ್ನು ಮಾತ್ರ ಕರೆಯಲಾಗಿತ್ತು. ಕನ್ನಡ ನೆಲದ ಸಾಹಿತಿಗಳು, ಹೋರಾಟಗಾರರು, ದಲಿತ ಚಿಂತಕರಿಗೆ ವೇದಿಕೆಯಿರಲಿಲ್ಲ.
ಕನ್ನಡದ ದಲಿತ ಹೋರಾಟ, ಸಂವಿದಾನ ಉಳಿಸಿ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ದೇವನೂರು ಮಹಾದೇವ, ಮಾವಳ್ಳಿ ಶಂಕರ್, ಡಾ ಸಿ ದ್ವಾರಕನಾಥ್, ದಿನೇಶ್ ಅಮಿನ್ ಮಟ್ಟು, ಕೆ ಎಲ್ ಅಶೋಕ್, ಡಾ ವಾಸು, ದು ಸರಸ್ವತಿ, ಎನ್ ಮಹೇಶ್, ಮಾರಸಂದ್ರ ಮುನಿಯಪ್ಪ, ಹರಿರಾಮ್, ಮಾರುತಿ ಮಾನ್ಪಡೆ, ಬರಗೂರು ರಾಮಚಂದ್ರ ಸೇರಿದಂತೆ ಯಾರೂ ಸಮಾಜ ಕಲ್ಯಾಣ ಇಲಾಖೆಗೆ ಗೊತ್ತೇ ಇಲ್ಲವೇ ? ಉತ್ತರ ಭಾರತದ ಸೊಫೆಸ್ಟಿಕೇಟೆಡ್ ಭಾಷಣಕಾರರು ಮತ್ತು ಬಿಜೆಪಿಗರನ್ನು ಕರೆಸಿ ಪ್ಯಾನಲ್ ಡಿಸ್ಕಷನ್ ಮಾಡಿ ಅರಚಾಟ ಮಾಡಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆಯ ಕೋಟಿ ಕೋಟಿ ಹಣವನ್ನು ನೀಡಬೇಕೇ ?
ಇವತ್ತು ನಮ್ಮ ಹೋರಾಟವನ್ನು ವಿರೋಧಿಸುವವರಿಗೆ ಇಂತಹ ಒಂದು ಕಾರ್ಯಕ್ರಮ ನಡೆಯುವುದಿತ್ತು ಎಂದು ಗೊತ್ತಾಗಿದ್ದು ಕಾರ್ಯಕ್ರಮ ರದ್ದಾದಾಗಲೇ ! ಹೊಟೇಲ್ ಅಶೋಕಾ ಎಂಬ ಸೆವೆನ್ ಸ್ಟಾರ್ ಹೊಟೆಲ್ ನಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ “ನನ್ನ ಜನಕ್ಕೆ” ಪ್ರವೇಶವಿರಲಿಲ್ಲ. ಸೂಟು ಬೂಟಿನ ಮಂದಿಗೆ ಮಾತ್ರ ಪ್ರವೇಶವಿತ್ತು. ಅದೂ 600 ಜನರಿಗೆ ಮಾತ್ರ. ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಂಡು ಪ್ರವೇಶ ಪತ್ರವನ್ನು ಪಡೆಯಬೇಕಿತ್ತು. ನನ್ನ ಜನಗಳು ಆನ್ ಲೈನ್ ಪರಿಣತರಲ್ಲ. ನನ್ನ ಜನಗಳ ವೇಷಭೂಷನ ನೋಡಿದರೆ ಹೊಟೇಲ್ ಅಶೋಕದ ಸೂಟುದಾರಿ ವಾಚ್ ಮೆನ್ ಗೇಟು ತೆರೆಯಲ್ಲ. ಇದನ್ನೇ ಆಧುನಿಕ ಭಾರತದ ಬ್ರಾಹ್ಮಣ್ಯ ಎನ್ನುತ್ತಾರೆ.
ಸಮಾಜ ಕಲ್ಯಾಣ ಇಲಾಖೆಗೆ ಭ್ರಷ್ಟಾಚಾರದ ಹೊರತಾದ ಕಾರಣವಿದ್ದರೆ ಈ ಕಾರ್ಯಕ್ರಮವನ್ನು ವಸಂತನಗರದ ಅಂಬೇಡ್ಕರ್ ಭವನದಲ್ಲೋ, ಟೌನ್ ಹಾಲ್ ನಲ್ಲೋ, ಅರಮನೆ ಮೈದಾನದಲ್ಲೋ ನಡೆಸಬಹುದಿತ್ತು. ಅಥವಾ ಯಾವುದಾದರೂ ಯೂನಿವರ್ಸಿಸಿ ಮೂಲಕವಾದರೂ ಮಾಡಬಹುದು. ಒಂದಷ್ಟು ವಿದ್ಯಾರ್ಥಿಗಳು, ಯುವಕರು ಈ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ತೊಡಗಿಕೊಂಡು ಸಂವಿದಾನ ಉಳಿಸುವ ಹೋರಾಟಗಾರರಾಗುತ್ತಿದ್ದರು. ಆದರೆ ಈ ಕಾರ್ಯಕ್ರಮದ ಪ್ರತಿಯೊಂದು ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ರಿಜಿಸ್ಟ್ರೇಷನ್, ಊಟ, ಅತಿಥಿ ಸತ್ಕಾರ ಎಲ್ಲವೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಗುತ್ತಿಗೆ. ಅವರಿಗೆ ದಲಿತ ಸಾಹಿತಿಯೂ ಗೊತ್ತಿಲ್ಲ, ಹೋರಾಟ ಅಂದರೇನು ಎಂದೇ ತಿಳಿದಿಲ್ಲ.
ಪ್ರತಿಯೊಬ್ಬರಿಗೂ 2500 ಬೆಲೆಯ ಊಟ, 350 ಬೆಲೆಯ ಟೀ ಕಾಫಿ, 700 ರೂಪಾಯಿ ಸಂಜೆಯ ಕಾಫಿ ಮತ್ತು ಲಘುಉಪಹಾರ, 1500 ರೂಪಾಯಿ ಬೆಲೆಯ ಬೆಳಗಿನ ಉಪಹಾರದ ವ್ಯವಸ್ಥೆಯನ್ನು 600 ಜನರಿಗೆ ಮಾಡಲಾಗಿತ್ತು. 35 ಸಾವಿರ ರೂಪಾಯಿ ಬೆಲೆಯ ಸೂಟ್ ರೂಂ, ಪ್ರತೀ ಗೆಸ್ಟ್ ಗೆ ಅತಿಥಿ ಸತ್ಕಾರಕ್ಕೆ ಕೆಎಎಸ್ ಅಧಿಕಾರಿ… ಈ ರೀತಿ ಒಟ್ಟು ನಾಲ್ಕು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತೆ. ಅಲ್ಲೆಲ್ಲೂ ಕನ್ನಡ ದಲಿತರಿಗೆ ಬಿಡಿ, ಕನ್ನಡದ ಸಾಹಿತಿ ಚಿಂತಕ, ದಲಿತ ಹೋರಾಟಗಾರರಿಗೂ ಪ್ರವೇಶವಿಲ್ಲ. ಟಿವಿ ಟಿಆರ್ ಪಿ ಹೊಂದಿರುವ ಪ್ಯಾನಲ್ ಡಿಸ್ಕಷನ್ ನಲ್ಲಿ ಅರಚಾಡುವ ಭಾಷಣಕಾರರಿಗೆ ಮಾತ್ರ ಪ್ರವೇಶ ! ಈ ಕಾರ್ಯಕ್ರಮಕ್ಕೆ ನಮ್ಮ ಸರಕಾರದ ತೆರಿಗೆ ಹಣ ಬಳಸಬೇಕೇ ? ಈ ಆಧುನಿಕ ಬ್ರಾಹ್ಮಣ್ಯದ ಭ್ರಷ್ಟಾಚಾರದ ಕಾರ್ಯಕ್ರಮವನ್ನು ನೋಡಿಯೂ ಸುಮ್ಮನಿರಬೇಕೇ ?
ಬಸವಣ್ಣನ ಅನುಯಾಯಿ, ಲಕ್ಷಾಂತರ ಬಡವರ ಬದುಕು ಬೆಳಗಿಸಿದ ಸಂತ ಶಿವಕುಮಾರ ಸ್ವಾಮಿಗಳ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಶೋಕಾಚರಣೆಯ ಆದೇಶವನ್ನು ಉಲ್ಲಂಘಿಸಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಕನ್ನಡದ ಜನಗಳಿಗೆ ಉಪಯೋಗವಿಲ್ಲದ, ಕನ್ನಡದ ದಲಿತರಿಗೆ ಪ್ರವೇಶವಿಲ್ಲದ, ದಲಿತ ಸಂವೇದನೆಯಿಲ್ಲದ, ಚಳುವಳಿ ಸಂವೇದನೆ ಇಲ್ಲದ ಈ ಕಾರ್ಯಕ್ರಮಕ್ಕೆ ಕನ್ನಡದ ಸಂವೇದನೆಯೂ ಇರಲಿಲ್ಲ. ಆದ್ದರಿಂದ ಪ್ರತಿಭಟಿಸಿ ಕಾರ್ಯಕ್ರಮ ನಿಲ್ಲಿಸಿದೆವು. ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ನಮ್ಮ ಜನಗಳ ಕಾರ್ಯಕ್ರಮವಲ್ಲದ ಈ ಕಾರ್ಯಕ್ರಮಕ್ಕೆ ಬಿಡುಗಡೆಯಾದ ನಮ್ಮ ಜನಗಳ ತೆರಿಗೆ ಹಣವಾದ ಇಲಾಖಾ ಅನುದಾನವನ್ನು ತಡೆ ಹಿಡಿಯಬೇಕು. ಅದು ಕನ್ನಡದ ದಲಿತೋದ್ದಾರಕ್ಕೆ ಮೀಸಲಾದ ಹಣ. ಅದು ನಮಗೇ ಸೇರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತದೆ.
-ಬಿ.ಹರೀಶ್ ಕುಮಾರ್
ರಾಜ್ಯಾಧ್ಯಕ್ಷ
ಕರ್ನಾಟಕ ರಣಧೀರ ಪಡೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿವಿಧ ಜಿಲ್ಲೆಗಳಲ್ಲಿ ಡಾ. ಬಾಬು ಜಗಜೀವನ್ ರಾಮ್ 117ನೇ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಾಬು ಜಗಜೀವನ್ ರಾಮ್ ಅವರ 117ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನ ಸೌದದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ್ಪ, ಹಿರಿಯ ಶಾಸಕ ಈ. ತುಕಾರಾಮ್, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸುದಾಮ ದಾಸ್, ಮಹಿಳಾ ಆಯೋಗದ ಅದ್ಯಕ್ಷೆ ಡಾ. ನಾಗಲಕ್ಷ್ಮಿ ಸೇರಿ ಹಲವರು ಉಪಸ್ಥಿತರಿದ್ದರು. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಮಂಡ್ಯದ ಡಿಸಿ ಪಾರ್ಕ್ ಎದುರು ಇರುವ ಜಗಜೀವನ್ರಾಮ್ ಪ್ರತಿಮೆಗೆ ಜಿಲ್ಲಾಡಳಿತದ ವತಿಯಿಂದ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸೇರಿದಂತೆ ಅಧಿಕಾರಿಗಳ ವರ್ಗ ಹಾಗೂ ಜಗಜೀವನ್ರಾಮ್ ಅನುಯಾಯಿಗಳು ಭಾಗವಹಿಸಿದ್ದರು.
ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ ಅವರ 117ನೇ ಜಯಂತಿಯನ್ನು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು ಚುನಾವಣಾ ಆಯೋಗ ಸಮಾವೇಶ
ಸುದ್ದಿದಿನ ಡೆಸ್ಕ್ : ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ 11 ರಾಜ್ಯಗಳ ನಗರ ಪಾಲಿಕೆ ಆಯುಕ್ತರು ಮತ್ತು ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ಇಂದು ದೆಹಲಿಯಲ್ಲಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಮತದಾನದ ಸಮಸ್ಯೆಯನ್ನು ಪರಿಹರಿಸಲು ಉದ್ದೇಶಿತ ಮತ್ತು ನಿರ್ದಿಷ್ಟ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲಾಗುವುದು.
ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಪುಣೆ, ಥಾಣೆ, ನಾಗ್ಪುರ, ಪಾಟ್ನಾ ಸಾಹಿಬ್, ಲಖನೌ ಮತ್ತು ಕಾನ್ಪುರ ನಗರ ಪಾಲಿಕೆಯ ಆಯುಕ್ತರು ಮತ್ತು ಬಿಹಾರ ಮತ್ತು ಉತ್ತರದ ಆಯ್ದ ಜಿಲ್ಲಾ ಚುನಾವಣಾ ಅಧಿಕಾರಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರುಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243