Connect with us

ಬಹಿರಂಗ

ಅಂಬೇಡ್ಕರ್ ಮತ್ತು ಹಿಂದೂ ಕೋಡ್ ಬಿಲ್..!

Published

on

  • ವಿ.ಎಸ್.ಬಾಬು

ಸ್ವಾತಂತ್ರ್ಯ ನಂತರದ ಸರ್ಕಾರ ಅಂಬೇಡ್ಕರ್ ಅವರನ್ನು ಗಂಭೀರವಾಗಿ ಪಲಗಣಿಸಿತು. ಈ ಮೂಲಕ ಅವರಿಗೆ ನಿರ್ದಿಷ್ಟ ಜವಾಬ್ದಾರಿಯುತವಾದ ಹುದ್ದೆಯನ್ನು ವಹಿಸಿತು. ಆಗ ಅವರು ಜಾತಿಯ ತಾಳಿಕೆ-ಬಾಳಿಕೆ ಅಡಗಿರುವುದೇ ಸ್ವಜಾತಿ ವಿವಾಹ ಪದ್ಧತಿಯಲ್ಲ ಎಂದುಕೊಂಡರು. ಅಂಬೇಡ್ಕರ್ ಅದನ್ನು ವಿರೋಧಿಸುತ್ತಿದ್ದ ತಾತ್ವಿಕ ವಿಷಯಗಳಿಗೆ ಪರ್ಯಾಯವಾದ ಸಂಗತಿಗಳನ್ನು ಹಿಂದೂ ಕೋಡ್‌ಬಿಲ್‌ನ ಮುಖಾಂತರ ಜಾರಿಗೊಳಿಸಲು ಪ್ರಯತ್ನಿಸಿದರು.

ಹಾಗಾಗಿ ಹಿಂದೂ ಕೋಡ್‌ ಬಿಲ್ ರಚಿಸಲು ಅಂಬೇಡ್ಕರ್ ಕಾತುರರಾದರು.ಅಲ್ಲದೆ ಮನು ಮತ್ತು ಅತನ ತರಹದ ಎಲ್ಲರ ವಿವಾಹ ಸಂಬಂಧಿ ಆಲೋಚನೆಗಳನ್ನು ಪರಿಶೀಲಿಸಿದರು.ಆದರೂ ಅದರಲ್ಲಿ ಪುರುಷರಿಗೆ ಸ್ತ್ರೀಯರನ್ನು ಅಧೀನಗೊಳಿಸಲೆಂದೇ ಅಸ್ತಿತ್ವ ಪಡೆದ ಪಿತೃ ಪ್ರಧಾನತೆ ವಿವಾಹ ಸಂಸ್ಥೆಯೊಳಗಿನ ಲಿಂಗಾಧಾರಿತ ತಾರತಮ್ಯವನ್ನು ಇಟ್ಟುಕೊಳ್ಳುವುದರ ಮೂಲಕವೇ ಸ್ವಜಾತಿ ವಿವಾಹ ಪದ್ಧತಿಯನ್ನು ಅಂದರೆ ಬ್ರಾಹ್ಮಣ ಪಿತೃಪ್ರಧಾನತೆ ನಿರ್ಮೂಲನೆಗೊಳಿಸಲು ಅಗತ್ಯವಾದ ತಿದ್ದುಪಡಿಗಳನ್ನು ತರಲು ಪ್ರಯತ್ನಿಸಿದರು.ಈ ಎಲ್ಲ ಅಂಶಗಳನ್ನು ಒಳಗೊಂಡ ‘ಕೂಸೆ’ ಹಿಂದೂ ಕೋಡ್ ಬಿಲ್ ಆಗಿದೆ.

ಆದ್ದರಿಂದ ಹಿಂದೂ ಕೋಡ್ ಬಿಲ್ ನಲ್ಲಿ ಮಹಿಳೆ ಸಂಬಂಧ ಎಲ್ಲ ಅಂಶಗಳು ಜಾತಿ ಪದ್ಧತಿಯನ್ನು ಉಳಿಸಿಕೊಂಡಿರುವ ಮೌಲ್ಯಗಳು ಮತ್ತು ಮಹಿಳಾ ವಿರೋಧಿ ಸಂಗತಿಗಳಾದ ವಿಧವೆ, ಆಸ್ತಿ ನಿರಾಕರಣಿ ಇತ್ಯಾದಿ ಸಂಗತಿಗಳನ್ನು ನಿರ್ವಹಿಸುತ್ತದೆ. ಇದು ಪಿತೃಪ್ರಧಾನತೆಯನ್ನು ಮುಂದುವರೆಸುತ್ತಿರುವ ವಿವಾಹ ಸಂಸ್ಥೆಯ ಲಿಂಗತಾರತಮ್ಯ ಗುಣಲಕ್ಷಣಗಳನ್ನು ನಿರ್ಮೂಲನೆ ಗೊಳಿಸುವುದರಲ್ಲಿ ಸಫಲವಾಗಲು ಸಾಧ್ಯವಿಲ್ಲ. ಈ ವಿವಾಹ ಸಂಬಂಧಿ ಮಸೂದೆ ಜಾತಿ ಒಳಗಿರುವ ಪಿತೃಪ್ರಧಾನತೆಯ ಮೌಲ್ಯಗಳಿಂದ ಗ್ರಹಿತವಾದವು.

ಈ ಹಿನ್ನೆಲೆಯಲ್ಲಿ ಹಿಂದೂ ಕೋಡ್ ಬಿಲ್‌ನ್ನು ಪರಿಶೀಲಿಸುವುದಾದರೆ ಇದು ಹಿಂದೂ ಸ್ತ್ರೀ-ಪುರುಷರ ಅಂತರಜಾತಿಯ ವಿವಾಹಗಳಿಗೆ ಕಾನೂನಾತ್ಮಕ ಅನುಮೋದನೆ ನೀಡಿದ್ದಲ್ಲದೆ, ಮಹಿಳೆಗೆ ವಿಚ್ಛೇದನೆ ಪಡೆಯುವ ಹಕ್ಕನ್ನು ಮನುಸ್ಮೃತಿ ಮಹಿಳೆಯರ ಮೇಲೆ ಹೇರಿದ್ದ ನಿಯಂತ್ರಣಗಳನ್ನು ತರ್ಕಬದ್ಧವಾಗಿ ಮಂಡಿಸುವ ಅಂಬೇಡ್ಕರ್ ಅದರಿಂದ ಹೊರಬರಲು ಬಯಸುವ ಮಹಿಳೆಯರಿಗೆ ವಿಚ್ಛೇದನೆ ಹಕ್ಕು ಅಗತ್ಯ ಎಂದು ತಿಳಿದು ಈ ಸಂಗತಿಯನ್ನು ಸೇರಿಸಿದ್ದಾರೆ.

ಹಾಗೆಯೇ ಜಾತಿಪದ್ಧತಿಯೊಂದಿಗೆ ಮತ್ತು ಪಿತೃಪ್ರಧಾನತೆಯೊಂದಿಗೆ ಮೈಗೂಡಿಸಿಕೊಂಡಿದ್ದ ಭಾರತದ ಜಮೀನ್ದಾರಿ ಪದ್ಧತಿ ಆಸ್ತಿಯ ಹಕ್ಕನ್ನು ಪುರುಷರಿಗೆ ವಹಿಸಿತ್ತು. ಇದು ಭೂಮಿಯ ಒಡೆತನ, ಕುಟುಂಬ ಆದಾಯದಲ್ಲಿ ಪಾಲು, ಕೃಷಿ ಉತ್ಪನ್ನದ ವಿತರಣೆ ಎಲ್ಲದರಿಂದಲೂ ಮಹಿಳೆಯರನ್ನು ಪ್ರತ್ಯೇಕಿಸಲಾಗಿತ್ತು.ಜೊತೆಗೆ ಭೂಮಿಯಲ್ಲಿ ದಿನನಿತ್ಯ ಕೆಲಸ ಮಾಡುವ ಮಹಿಳೆಯರ ದುಡಿಮೆಯನ್ನು ಅದೃಶ್ಯಗೊಳಿಸುವ ಮೂಲಕವೇ ಆಸ್ತಿಹಕ್ಕನ್ನು ನಿರಾಕರಿಸಲಾಗಿತ್ತು. ಈ ಕುರಿತು “ಮನು ಆಸ್ತಿಯ ವಿಚಾರದಲ್ಲಿ ಹೆಂಡತಿಯನ್ನು ಗುಲಾಮಳ ಸ್ಥಾನಕ್ಕೆ ಇಳಿಸಿದ್ದ” (ಬಾ.ಸಾ.ಅಂ.ಬ.ಭಾ, 1999, ಸಂ.4, ಪು.51), ಅಂಬೇಡ್ಕರ್‌ ಈ ಮಸೂದೆ ಮುಖಾಂತರ ಮಹಿಳೆಗೆ ಆಸ್ತಿಹಕ್ಕನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಒದಗಿಸಲು ಮುಂದಾದರು.

ಈ ಕುರಿತು 1956ರಲ್ಲಿ ಅಂಬೇಡ್ಕರ್ ಸಿದ್ದಾರ್ಥ ಕಾಲೇಜಿನಲ್ಲಿ ಮಾತನಾಡುತ್ತಿದ್ದರು. ಅವರ ಪ್ರಕಾರ ಹಿಂದೂ ವಿವಾಹ ಕಾಯಿದೆಯ ಕೊನೆಯ ಬದಲಾವಣೆ ಮಹಿಳೆಯ ಆಸ್ತಿಹಕ್ಕಿಗೆ ಸಂಬಂಧಿಸಿದ್ದು.1937ಕ್ಕೆ ಮುನ್ನ ಆಕೆ ಒಂದು ಕುಟುಂಬದ ಸೊಸೆ ಆಗಲಿ ಅಥವಾ ವಿಧವೆ ಸೊಸೆಯಾಗಲಿ ಆ ಕುಟುಂಬದಲ್ಲಿ ಆಸ್ತಿಯ ಪಾಲನ್ನು ಕೇಳುವಂತಿರಲಿಲ್ಲ. ಆದರೆ 1937ರ ಕಾಯ್ದೆಯಲ್ಲಿ ವಿಧವೆಗೆ ತಮ್ಮ ಮೃತಪತಿಯ ಆಸ್ತಿಯನ್ನು ಪಡೆಯುವ ಹಕ್ಕನ್ನು ನೀಡಿತು. ಆದರೂ ಮಹಿಳೆಯ ಆಸ್ತಿಯ ಹಕ್ಕು ಅಪೂರ್ಣವಾಗಿತ್ತು. ಆದರೆ ಈಗ ಹಿಂದೂ ವಿವಾಹ ಕಾಯ್ದೆ ಮೂಲಕ ಮನೆಯ ಮಗಳಿಗೂ ಸಹ ಮಗನಷ್ಟೇ ಆಸ್ತಿ ಮೇಲೆ ಹಕ್ಕು ಇರುವ ಸಂಗತಿಯನ್ನು ಒಳಗೊಂಡಿದೆ. ಇದು ಸಮಾಜದಲ್ಲಿ ಅಳವಡಿಸಲಾಗಿರುವ ಮೌಲ್ಯಗಳನ್ನು ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜಾತಿ ಪದ್ಧತಿಯಲ್ಲಿನ ಆಮೂಲಾಗ್ರ ಬದಲಾವಣೆಗೆ ಸಾಧ್ಯವಾಗುವುದೆಂದು ಹಿಂದೂ ಕೋಡ್ ಬಿಲ್ಲನ್ನು ರೂಪಿಸಲಾಗಿದೆ” ಎಂದರು. (ಅಂಬೇಡ್ಕರ್‌, ಉದ್ಧತ; ಅಹಲಾರಂಗ್ಲೀಕರ್, 1991, ಪು.241).

ಇಷ್ಟೆಲ್ಲ ಸಂಗತಿಗಳನ್ನು ಒಳಗೊಂಡ ಈ ಕಾಯ್ದೆಯ ಮಂಡನೆಯ ಸಂದರ್ಭದಲ್ಲಿ ಅಂಬೇಡ್ಕರ್‌ ಅಪಾರವಾದ ವಿರೋಧವನ್ನು ಎದುರಿಸಬೇಕಾಯಿತು.ಅದನ್ನು ಸಮರ್ಥಿಸುವಾಗ ಅಂಬೇಡ್ಕರ್ ಪಾರ್ಲಿಮೆಂಟಿನಲ್ಲಿ ಎದ್ದು ನಿಂತು ಹೀಗೆ ನುಡಿದರು. “ಮಹಿಳೆಯ ಆಸ್ತಿಹಕ್ಕನ್ನು ಸಮರ್ಥಿಸುವ ಬೃಹಸ್ಪತಿಯನ್ನು, ವಿಚ್ಛೇದನ ಸಿದ್ಧಾಂತವನ್ನು ಪ್ರತಿಪಾದಿಸುವ ‘ಪರಾಶರ ಸ್ಮೃತಿ’ಯನ್ನು ಹಿಂದೂ ಮೂಲಭೂತವಾದಿ ಮುಖಂಡರ ಮುಂದೆ ಎತ್ತಿಹಿಡಿದರು. ಇದು ಹಿಂದೂಕೋಡ್ ಬಿಲ್‌ನಲ್ಲಿರುವ ತಮ್ಮ ಸಿದ್ಧಾಂತದ ಮೂಲಭೂತ ಸತ್ಯ” ಎಂದರು (ಬಾ.ಸಾ.ಅಂ.ಬ.ಭಾ, 1994, ಪು.622), ಹೀಗೆ ಅಂಬೇಡ್ಕರ್ ಹಿಂದೂಕೋಡ್ ಮಸೂದೆಯನ್ನು ಮಂಡಿಸಿದರು.

ಆದರೆ ಇದು ಪಿತೃಪ್ರಧಾನ, ಧರ್ಮಪ್ರಧಾನ, ಹಾಗೂ ಜಾತಿಪ್ರಧಾನ ಗುಣಗಳನ್ನು ಸಮರ್ಥಿಸುವ ಸದಸ್ಯರ ಪ್ರತಿರೋಧದಿಂದಾಗಿ ಈ ಮಸೂದೆ ಬಹುಮತ ಗಳಿಸುವಲ್ಲಿ ವಿಫಲವಾಯಿತು.ಈ ಘಟನೆಯಿಂದ ತುಂಬಾ ಬೇಸರಗೊಂಡ ಅಂಬೇಡ್ಕರ್ ತಮ್ಮ ಮಂತ್ರಿ ಪದವಿಗೆ ಸೆಪ್ಟೆಂಬರ್ 27, 1951ರಂದು ರಾಜೀನಾಮೆ ಸಲ್ಲಿಸಿದರು.ಇದು ಈ ಮಸೂದೆಯ ಜಾತಿ ಸಂಬಂಧಿ ಪರಿಹಾರದ ಬದ್ಧತೆಯನ್ನು ತೋರಿಸುತ್ತದೆ.ಜೊತೆಗೆ ಮಹಿಳೆಯರ ಬಗೆಗಿನ ಉದಾರ ಮನೋಭಾವನೆಯನ್ನು ಬಿಚ್ಚಿಡುತ್ತದೆ” ಎಂದು ಭಾವಿಸಿದವರು ಸಹ ನಂತರ ಈ ಘಟನೆಗೆ ಪ್ರತಿಕ್ರಿಯಿಸಿದರು.

ಅನೇಕ ಸಮಾಜಶಾಸ್ತ್ರಜ್ಞರು ಇದೊಂದು ದುರದೃಷ್ಟಕರ ಪ್ರಸಂಗ ಎಂದು ವಿಷಾದ ವ್ಯಕ್ತಪಡಿಸಿದರು. ಅದರಲ್ಲೂ ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಪಿ.ಬಿ.ಗಜೇಂದ್ರ ಗಡಕರ್ ಅವರು ಅಂಬೇಡ್ಕರ್‌ ಅವರು ವಹಿಸಿದ ಪಾತ್ರದ ಬಗ್ಗೆ ಹೀಗೆ ಅಭಿಪ್ರಾಯಪಟ್ಟಿದ್ದಾರೆ. “The Honourable Dr. Ambedkar has played an important role in the progress of this bill and in introducing the code before the Parliment. He has shown his determination to persuade the legislature to see it through without delay. It is well known that Dr. Ambedkar can legitimately and justly feel proud for the substantial work done by him in the drafting for our Constitution. It with the active co-operation and support of the Prime Minister who fortunately shares his Law Minister enthusiasm. The code Dr. Ambedkar is able to give it the pride of place in her statue book. I for one would hail it as time sweet revenglon the Hindu society as a whole. If Dr. Ambedkar gave us hindus our code his achievement would go down in history as a very eloquent piece of poetic justice indeed.”

ಇನ್ನು ಕೆಲವರು ಇದನ್ನು “ಚರಿತ್ರೆಯ ಹಿನ್ನಡೆ” ಎಂದರು. ಅಂದರೆ ಆಧುನಿಕ ಭಾರತದಲ್ಲಿಯೂ ಮಹಿಳೆಯ ಪರಿಸ್ಥಿತಿಗಳು ಹಿಂದಿನಂತೆಯೇ ಯಥಾಪ್ರಕಾರ ಮುಂದುವರೆದಿವೆ ಎಂದರು.

ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಬೌದ್ಧಿಕವಾಗಿ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಕಡೆಗಣಿಸಲಾಗಿತ್ತು.ಗಂಡು ಹೆಣ್ಣಿನ ನಡುವೆ ಇರುವ ಈ ಲಿಂಗ ತಾರತಮ್ಯವು ಜಾತಿ ತಾರತಮ್ಯದ ಜೊತೆಗೆ ಸಂಬಂಧ ಪಡೆದಿತ್ತು. ಹಿಂದೂ ಧರ್ಮದಲ್ಲಿ ಶೂದ್ರನು ಕೀಳು ಮಾನವನಾದರೆ ಸ್ತ್ರೀ ನೀಚಳೆಂದು ಪರಿಗಣಿಸಲ್ಪಟ್ಟಿದ್ದಾಳೆ. ಇದರಿಂದಾಗಿ ಸ್ತ್ರೀಯು ವಿವಿಧ ಹಂತದಲ್ಲಿ ಸಾಮಾಜಿಕ ಭಿನ್ನತೆಯಿಂದ ಶೂದ್ರರಿಗಿಂತ ಹೆಚ್ಚಿಗೆ ಗುರಿಯಾಗಿದ್ದಾಳೆ. ಸ್ತ್ರೀ ಕಿರುಬನ ಹೃದಯದ ವಳು (ಋಗ್ವೇದದ) ಅವಳು ಎಲ್ಲ ಕೆಡುಕಿನ ಬೇರು (ಮಹಾಭಾರತ), ಅವಳು ಚಂಚಲೆ ಖಡ್ಗದಂತೆ ಹರಿತವಾದವಳು, ಬಿರುಗಾಳಿಯಂತೆ ಅಸ್ಥಿರಳು(ರಾಮಾಯಣ), ಹೆಂಗಸು ಕಾಮಪಿಪಾಸೆ ಉಳ್ಳವಳು, ಕುಟಿಲೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಎಂದಿಗೂ ಅನರ್ಹಳು (ಮನು) ಸ್ತ್ರೀ ಒಂದು ವಸ್ತು, ಪದಾರ್ಥ, ಶಾಕ್ತ ಮುಂತಾಗಿ ಸ್ತ್ರೀಯನ್ನು ವೇದೋಪನಿಷತ್ತುಗಳ ಕಾಲದಿಂದಲೂ ಕಡೆಗಣಿಸಿಕೊಂಡು ಬರಲಾಗಿತ್ತು.” (ಅದೇ, ಪು.51,53) ಮಹಿಳೆ ಇಂತಹ ದಿಗ್ಟಂಧನಗಳಿಗೆ ಗುರಿಯಾದುದರಿಂದ ಅವಳ ಬಿಡುಗಡೆಗಾಗಿ ಪ್ರಯತ್ನಗಳು ಹೋರಾಟಗಳು ಚರಿತ್ರೆಯ ಉದ್ದಕ್ಕೂ ನಡೆದಿವೆ. ಜ್ಯೋತಿಬಾ ಫುಲೆ, ರಾಜಾರಾಮ ಮೋಹನರಾಯ್‌ರಂತವರು ಇಲ್ಲಿ ಉಲ್ಲೇಖನಾರ್ಹರು. ಇದರಲ್ಲಿ ಅಂಬೇಡ್ಕರ್‌ ಅವರು ಮಹಿಳೆಗೆ ಸಮಾನಹಕ್ಕು ಅಧಿಕಾರಗಳನ್ನು ಕೊಡಿಸಿಕೊಡುವಲ್ಲಿ ಮಾಡಿದ ಪ್ರಯತ್ನಗಳು ಮಹತ್ವದ್ದಾಗಿವೆ.

1955ರ ಜನವರಿಯಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಗಳು ನಡೆದವು.ನಂತರ ಬಹುಮತದ ಸರ್ಕಾರದ ಪಾರ್ಲಿಮೆಂಟ್‌ನ ಎರಡು ಸದನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ನಾಲ್ಕು ಮಸೂದೆಗಳನ್ನು ಒಂದಾದ ಮೇಲೆ ಒಂದರಂತೆ ಮಂಡಿಸಿದರು.ಈ ನಾಲ್ಕು ಮಸೂದೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.ಎರಡು ಸದನಗಳ ಅನುಮೋದನೆ ದೊರೆಯಿತು.ಆದ್ದರಿಂದ 1955-56ರಲ್ಲಿ ಮಂಡಿತವಾದ ಹಿಂದೂ ಕೋಡ್ ಬಿಲ್‌ಗೆ ಮಹಿಳಾ ನೆಲೆಯಿಂದ ಪ್ರಮುಖವಾದ ಸ್ಥಾನ ಹೊಂದಿದೆ. ಇದು ವಿವಾಹ ಸಂಬಂಧಿತವಾದ ಮಹಿಳೆಯರ ಹಲವು ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿತವಾದ ಕಾಯ್ದೆಯಾಗಿದ್ದು, ಅದರ ಪ್ರಮುಖ ಅಂಶಗಳು ಈ ರೀತಿಯಿವೆ:

ಒಂದು : ಬಹುಪತ್ನಿತ್ವವನ್ನು ನಿಷೇಧಿಸಿ, ಏಕಪತಿ-ಪತ್ನಿತ್ವವನ್ನು ಕಾನೂನು ಬದ್ಧಗೊಳಿಸುವುದು (Hindu Marriage Act), ಹಿಂದೂ ವಿವಾಹ ಕಾಯ್ದೆ (1955) ಬಹುಪತ್ನಿತ್ವವನ್ನು ಅಪರಾಧವಾಗಿ ಪರಿಗಣಿಸಿದೆ. ಜೊತೆಗೆ ಏಕಪತ್ನಿತ್ವಕ್ಕೆ ಅನುಮತಿಯಿದೆ. ಅಂದರೆ ಇದರಲ್ಲಿ “ಅಂಬೇಡ್ಕರ್ ಅವರು ಎರಡು ರೀತಿಯ ವಿವಾಹ ಪದ್ಧತಿಗಳನ್ನು ಪ್ರಸ್ತಾಪಿಸಿದ್ದರು.ಮೊದಲನೆಯದು ಪಾರಂಪರಿಕ ವಿವಾಹಪದ್ಧತಿ (Sacramintal Marriage), ಎರಡನೆಯದು ನಾಗರಿಕ ವಿವಾಹಪದ್ಧತಿ (ಅತುಟ ಒಚಿಡಿಡಿಚಿರಜ), ಈ ಎರಡು ಪದ್ಧತಿಗಳು ಸಂಪೂರ್ಣವಾಗಿ ಸಂಪ್ರದಾಯದಿಂದ ಭಿನ್ನವಾಗಿರಲಿಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿಯಲ್ಲಿಯೇ ಈ ಎರಡು ಬಗೆಯ ವಿವಾಹಗಳಿದ್ದವು.ಸಾಂಪ್ರದಾಯಿಕವಾಗಿ ಗುರು ಹಿರಿಯರು ನಿರ್ಧರಿಸಿದ ವಿವಾಹ ಮೊದಲ ಬಗೆಯದಾಗಿದ್ದರೆ, ಪರಸ್ಪರ ಪ್ರೀತಿಸಿ ಮದುವೆಯಾಗುವುದು ಗಾಂಧರ್ವ ವಿವಾಹಪದ್ಧತಿ ಎನಿಸಿತ್ತು.

ಗಾಂಧರ್ವ ವಿವಾಹಪದ್ಧತಿಗೆ ಹೊಸ ಅಂಶಗಳನ್ನು ಸೇರಿಸಿ ಅಂಬೇಡ್ಕರ್ ಅವರು ನಾಗರಿಕ ವಿವಾಹ ಪದ್ಧತಿಯನ್ನು ರೂಪಿಸಿದಂತೆ ಕಾಣುತ್ತದೆ. ಆದರೆ ಅಂಬೇಡ್ಕರ್‌ ನಾಗರಿಕ ವಿವಾಹಪದ್ಧತಿಗೆ ಕಾನೂನಿನ ರಕ್ಷೆಯನ್ನು ಒದಗಿಸಿದರು. ಇದು ಎಲ್ಲ ಮತೀಯ ಸ್ತ್ರೀಯರನ್ನು ಸಮಾನವಾಗಿ ಪರಿಗಣಿಸಿದ ಕಾನೂನಾಗಿತ್ತು.” (ಬಾ.ಸಾ.ಅಂ.ಬ.ಭಾ, 2004,ಪು.600,800) ಈ ಮೂಲಕವೇ ಅಂತರ್‌ಜಾತಿಯ ವಿವಾಹ ಬಹಿಷ್ಕ್ರುತವಲ್ಲ ಎಂದು ಏಕಪತ್ನಿತ್ವ ವ್ಯವಸ್ಥೆಯನ್ನು ಜಾರಿಗೊಳಿಸಿ, ಇದನ್ನು ಕಾನೂನು ಬದ್ಧಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಮೊದಲನೆಯ ಪತ್ನಿ ಜೀವಂತವಿದ್ದು, ಅವಳಿಂದ ವಿಚ್ಛೇದನ ಪಡೆಯದೆ ಮರುವಿವಾಹವಾಗುವಂತಿಲ್ಲ. ಈ ರೀತಿ ವಿವಾಹಕ್ಕೆ ಕಾನೂನು ಮನ್ನಣೆ ಇರುವುದಿಲ್ಲ.

ಬಹುಪತ್ನಿತ್ವ ಪದ್ಧತಿ ಭಾರತ ದಂಡಸಂಹಿತೆ ಪ್ರಕಾರ ಅಪರಾಧ ಎಂದು ಪರಿಗಣಿಸಲಾಗಿದೆ.ಪ್ರಾಚೀನ ಹಿಂದೂ ಸಮಾಜದಲ್ಲಿ ಬಹುಪತ್ನಿತ್ವ ರೂಢಿಯಲ್ಲಿತ್ತು.ಈಗ ಭಾರತೀಯ ದಂಡಸಂಹಿತೆ 494 ಮತ್ತು 495ನೇ ಕಲಂನ ಪ್ರಕಾರ ಶಿಕ್ಷೆಗೆ ಅರ್ಹರಾಗುತ್ತಾರೆ. ಹಾಗೆಯೇ ಯಾವುದೇ ವ್ಯಕ್ತಿಯ ತಂದೆಯ ಸಂಬಂಧ ಮೇಲುಮುಖವಾಗಿ 5ನೇ ತಲೆಮಾರಿನವರೆಗೆ ತಾಯಿಯ ಸಂಬಂಧ ಮೇಲುಮುಖವಾಗಿ 3ನೇ ತಲೆಮಾರಿನವರಿಗೆ ಸಂಬಂಧದಲ್ಲಿ ವಿವಾಹವಾಗುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.

ಒಬ್ಬ ವ್ಯಕ್ತಿ ಭಾರತದಲ್ಲಿ ಮದುವೆಯಾಗಿ ನಂತರ ವಿದೇಶಕ್ಕೆ ತೆರಳಿ ಅಲ್ಲಿ ಮರುವಿವಾಹವಾದರೂ ಕೂಡ ಅಪರಾಧಿ ಎಂದು ಕಾನೂನಿನ ಅನ್ವಯ ಪರಿಗಣಿಸಲ್ಪಡುತ್ತಾನೆ. ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಮರುವಿವಾಹಕ್ಕೆ ಈ ಕಾಯ್ದೆಯಲ್ಲಿ ಅವಕಾಶವಿಲ್ಲ ವಿಚ್ಛೇದನ ಕ್ರಿಯೆ ಪೂರ್ಣಗೊಳ್ಳುವವರೆಗೆ ಆತ ಮತ್ತು ಆಕೆ ಮರುವಿವಾಹ ಮಾಡಿಕೊಳ್ಳುವಂತಿಲ್ಲ. ಈ ಕಾನೂನಿನ ಕಣ್ಣುತಪ್ಪಿಸಿ ಈ ರೀತಿಯ ವಿವಾಹವಾದರು ಕೂಡ ಅದು ಅನೂರ್ಜಿತವೆಂದೇ ಹೇಳುತ್ತದೆ. ಅಷ್ಟೇ ಅಲ್ಲ, ಈ ಕಾಯ್ದೆಯಲ್ಲಿ ಪ್ರತಿಯೊಂದು ಸಮಾಜದ ಜನತೆ ಸ್ತ್ರೀಯನ್ನು ಹೇಗೆ ಕಾಣುತ್ತಾ ಬಂದಿದೆ ಎಂಬುದನ್ನು ಆಧಾರ ಸಹಿತವಾಗಿ ಸಾಬೀತುಪಡಿಸಲು ಪ್ರಯತ್ನಿಸಿದ ಅಂಬೇಡ್ಕರ್‌ ಭಾರತೀಯ ಪ್ರಾಚೀನ ಕಾಲದಿಂದ ನಿರಾಕರಿಸಿದ ವಿವಾಹ ವಿಚ್ಛೇದನ ಹಕ್ಕನ್ನು ಕಲ್ಪಿಸಿದರು. ಅವರ ಪ್ರಕಾರ “ಸಕಾರಣಗಳಿಲ್ಲದೆ ಪುರುಷನಾಗಲೀ, ಸ್ತ್ರೀಯಾಗಲೀ ತಾಳಿಯನ್ನು ಹರಿದುಕೊಳ್ಳುವುದಕ್ಕೆ ಬರುವುದಿಲ್ಲ. ಹಾಗೆಯೇ ಕೆಲವು ಸಕಾರಣಗಳು ಹಾಗೂ ಮೂಲಭೂತ ನ್ಯೂನತೆಗಳು ಪುರುಷನಲ್ಲಿದ್ದರೆ ಅಂತಹ ವ್ಯಕ್ತಿಯಿಂದ ವಿವಾಹ ವಿಚ್ಛೇದನವನ್ನು ಪಡೆಯಬಹುದು.” (ಬಾ.ಸಾ. ಅಂ.ಬ.ಭಾ, ಅದೇ, ಪು.721, 777) ಎಂದು ಹೇಳುತ್ತಾರೆ. ವಿವಾಹ ವಿಚ್ಛೇದನೆಗೆ ಕಾರಣಗಳ ಪಟ್ಟಿ ನೀಡುತ್ತಾರೆ. ಅವುಗಳೆಂದರೆ:

1. ಮದುವೆ ಮಾಡಿಕೊಂಡ ವ್ಯಕ್ತಿ ಇಲ್ಲವೆ ಹೆಣ್ಣು ಸುಮಾರು ಎರಡು ವರ್ಷ ದೂರಾಗಿ ದೇಶ್ಯಾಂತರ ಹೋಗಿದ್ದರೆ,
2. ಇನ್ನೊಬ್ಬಳು ಭಾಗಿದಾರನೊಂದಿಗೆ ಬದುಕು ನಡೆಸಿದ್ದರೆ,
3. ತಾನು ಮಾಡಿಕೊಂಡ ಪುರುಷನಿಗೆ ಯಾವುದಾದರೊಂದು ಭಯಾನಕ ಸೋಂಕು ರೋಗ ತಗುಲಿದ್ದರೆ,
4. ಗುಹ್ಯರೋಗದಿಂದ ಪೀಡಿತನಾಗಿದ್ದರೆ,
5. ಸಾಂಕ್ರಮಿಕ ಕುಷ್ಠರೋಗದಿಂದ ನರಳುತ್ತಿದ್ದರೆ,
6. ಮದುವೆಯಾದಂದಿನಿಂದ ಮನಸ್ವಾಸ್ಥ ಇರದಿದ್ದರೆ,
7. ವ್ಯಭಿಚಾರಿಯಾಗಿದ್ದರೆ,
8. ಗಂಡನು ಷಂಡನಾಗಿದ್ದರೆ,
9, ಉಪಪತ್ನಿಯನ್ನು ಇಟ್ಟುಕೊಂಡರೆ,
10. ಅನ್ಯಮತಕ್ಕೆ ಮತಾಂತರಗೊಂಡಿದ್ದರೆ,
11. ಪುರುಷ ಹುಚ್ಚು ಇಲ್ಲವೆ ಬುದ್ಧಿಭ್ರಮಣೆ ಹೊಂದಿದ್ದರೆ, ವಿಚ್ಛೇದನಕ್ಕೆ ದಾವೆ ಹಾಕಿ ವಿಚ್ಛೇದನೆಯನ್ನು ಪಡೆಯಬಹುದು(ಅದೇ, ಪು.733). ಹಾಗೆಯೇ ವಿಚ್ಚೇದನೆ ಜೊತೆಗೆ ಗಂಡನು ತನ್ನ ಆಸ್ತಿಯಲ್ಲಿ ಜೀವನಾಂಶ ಕೊಡಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ವಿವರಣೆ ಹೀಗಿದೆ;

1. ಗಂಡನ ನಿವ್ವಳ ವರಮಾನದ ಐದನೆಯ ಒಂದು ಭಾಗಕ್ಕೆ ಮೀರದಂತೆ ಹಣವನ್ನು ಪತ್ನಿಗೆ ಕೊಡತಕ್ಕದ್ದು.
2. ಪತಿಯ ಆಸ್ತಿಯಲ್ಲಿ ಒಂದು ಭಾಗವನ್ನು ಕೊಡತಕ್ಕದ್ದು.
3. ಆಸ್ತಿಯಲ್ಲಿ ಒಂದು ಮೊತ್ತವನ್ನು ಕೊಡತಕ್ಕದ್ದು.
4. ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ಕೊಡತಕ್ಕದ್ದು.
5. ಅವಳಿಗೂ ಆಸ್ತಿ ಇದ್ದರೆ ಗಂಡ ಮತ್ತು ಹೆಂಡತಿಯ ಈರ್ವರ ಆಸ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.” (ಉದ್ಧೃತ : ಬಾಬುರಾವ್ ಮುಡಬಿ, 2005, ಪು.146)

ಹೀಗೆ ಈ ವಿವಾಹ ಕಾಯ್ದೆಯಲ್ಲಿ 1956 ವಿಚ್ಛೇದನಕ್ಕೆ ಪರಸ್ಪರ ಇಬ್ಬರಲ್ಲಿ ಒಬ್ಬರು ದೋಷಾರೋಪಣೆಗೆ ಒಳಪಟ್ಟಾಗ (ಶೀಲ, ಆರೋಗ್ಯದ ಬಗ್ಗೆ ಇತ್ಯಾದಿ) ಮಾತ್ರ ವಿಚ್ಛೇದನಕ್ಕೆ ಅವಕಾಶವಿತ್ತು.ಆದರೆ 1976ರಲ್ಲಿ ಜಾರಿಗೆ ಬಂದ ವಿವಾಹ ವಿಶೇಷ ಕಾನೂನು ಭಾಗ 13ರ (ಬಿ) ಪ್ರಕಾರ ಗಂಡ ಹೆಂಡತಿ ಪರಸ್ಪರ ಒಪ್ಪಿಗೆಯಿಂದಲೂ ದಾಂಪತ್ಯದಿಂದ ಬಿಡುಗಡೆ ಹೊಂದಬಹುದು.

“ವಿವಾಹ ವಿಚ್ಛೇದನೆ ಕುರಿತು ಮೊಕದ್ದಮೆಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಪತ್ನಿ ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ.ನ್ಯಾಯಾಲಯವು ಪತಿಯ ಒಟ್ಟು ವರಮಾನದ ಐದನೆಯ ಭಾಗದಷ್ಟು ವರಮಾನವನ್ನು ಜೀವನಾಂಶ ನೀಡುವಂತೆ ಆದೇಶವಿದೆ.ಮೊಕದ್ದಮೆ ಇತ್ಯರ್ಥವಾದಾಗ ಪತಿಯಿಂದ ಪತ್ನಿಗೆ ಒಟ್ಟಾಗಿ ಒಂದೇ ಮೊತ್ತದಲ್ಲಿ ಅಥವಾ ಆಕೆ ಬದುಕಿರುವವರೆಗೆ ಮಾಸಿಕವಾಗಿ ಜೀವನಾಂಶ ನೀಡುವಂತೆ ಕಲ್ಪಿಸಲಾಗಿದೆ.ಆದರೆ ವಿಚ್ಛೇದನೆ ಹೊಂದಿದ ಪತ್ನಿ, ಮರು ವಿವಾಹವಾದ ಸಂದರ್ಭದಲ್ಲಿ ಆಕೆ ಜೀವನಾಂಶಕ್ಕೆ ಅರ್ಹಳಾಗಿರುವುದಿಲ್ಲ” ಎಂದು ಹೇಳುತ್ತದೆ.

ವಿವಾಹ ವಿಚ್ಛೇದನ ಕುರಿತು ಕಾನೂನಿನಲ್ಲಿ ಇಷ್ಟೆಲ್ಲ ಅವಕಾಶಗಳು ಇದ್ದಾಗ್ಯೂ ಸಂಪ್ರದಾಯವಾದಿಗಳು ಇರುವ ಈ ಸಮಾಜದಲ್ಲಿ “ವಿವಾಹ ವಿಚ್ಛೇದನೆ” ಎಂಬುದು ವಾಸ್ತವವಾಗಿ ಹಿಂದೂ ಧರ್ಮದ ವಿರೋಧಿ ಅಂಶವಾಗಿ ನಿರೂಪಿತಗೊಳ್ಳುತ್ತದೆ.ಆದ್ದರಿಂದ ಇಂದಿಗೂ ಕೂಡ ಬಹುತೇಕ ಮಹಿಳೆಯರು ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೊಕ್ಕಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.ದಾಖಲಾದ ಪ್ರಕರಣಗಳನ್ನೇ ವೈಭವೀಕರಿಸಲಾಗುವುದು. ವಿವಾಹ ವಿಚ್ಛೇದನೆ ಎಂಬುದು ಮಹಿಳೆಯರನ್ನು ಹಿಂಸೆಗೆ ಒಳಪಡಿಸುವ ಬಹುಮುಖ್ಯವಾದ ಸಂಪ್ರದಾಯವಾಗಿದೆ.ಅದರ ಜೊತೆಗೆ “ಧರ್ಮಬಾಹಿರ ಮಕ್ಕಳನ್ನು ಧರ್ಮಸಮ್ಮತಿಗೊಳಿಸುವುದು, ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15 ವರ್ಷಕ್ಕೆ (ಈಗ 18 ವರ್ಷ ಆಗಿದೆ) ಏರಿಸುವುದರ ಮೂಲಕ ಅವರಿಗೆ ಸ್ವಾತಂತ್ರ್ಯವನ್ನು ಒದಗಿಸುವುದಾಗಿದೆ.ಆದರೆ ಜಾತಿ, ಮತ್ತು ಪಿತೃಪ್ರಧಾನ ಲೈಂಗಿಕ ಪಾವಿತ್ರ್ಯ ಗುಣಗಳಿಂದಾಗಿ ಇದು ಇಂದಿಗೂ ನಮ್ಮ ಸಮಾಜದ ಬಹು ಮುಖ್ಯ ಸಾಮಾಜಿಕ ಸಮಸ್ಯೆಯಲ್ಲಿ ಚರ್ಚೆಗೊಳ್ಳುತ್ತಿರುವುದು. ಇದು ಬಾಲ್ಯವಿವಾಹ, ವೈಧವ್ಯ, ಪತಿವ್ರತೆ, ಶೀಲ-ಅಶ್ಲೀಲಗಳಲ್ಲಿ ಸುತ್ತುವರೆಯುತ್ತಿದೆ.ಇವು ಶಿಶ್ನಕೇಂದ್ರಿತ ಆಧಿಪತ್ಯವನ್ನು ಅನಾವರಣಗೊಳಿಸುತ್ತವೆ.

ಮಹಿಳೆಗೂ ಆಸ್ತಿ ಹಕ್ಕನ್ನು ಕಾನೂನುಬದ್ಧಗೊಳಿಸಲಾಯಿತು. ಅಂದರೆ ಮಹಿಳೆಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು (Succession Act (1956) ಜಾರಿಗೊಳಿಸಲಾಯಿತು.ಅದರ ಪ್ರಕಾರ “ಗಂಡ ಸತ್ತರೆ ಆತನ ಆಸ್ತಿಯು ಆತನ ಹೆಂಡತಿಗೆ ಸೇರುತ್ತದೆ. ಹೆಣ್ಣು ಮಕ್ಕಳಿಗೆ ತನ್ನ ತಂದೆ ಆಸ್ತಿಯಲ್ಲಿ ಸಮಪಾಲು ಇದ್ದು, ಅವರು ತಮ್ಮ ಆಸಕ್ತಿ ಹಾಗೂ ಇಚ್ಛೆಗೆ ಅನುಸಾರವಾಗಿ ಮಾರಾಟ ಮಾಡಬಹುದು. ಈ ವಿಷಯದಲ್ಲಿ ಅವಳು ಸಂಪೂರ್ಣ ಸ್ವತಂತ್ರಳು.ಹಾಗೆಯೇ ಇದು ಸಂವಿಧಾನದ 15ನೇ ವಿಧಿಗೆ ಸಂಬಂಧಿಸಿದೆ. ಇದರಲ್ಲಿ ಹಿಂದೂ ಮಹಿಳೆಯು ಈ ಕಾನೂನಿನ ಜಾರಿಯ ನಂತರ ಆಸ್ತಿಯ ಕುರಿತು ಅಂತಿಮ ಇಷ್ಟಪತ್ರವನ್ನು ಬರೆಯದೆ ಮರಣ ಹೊಂದಿದ್ದರೆ, ಅವಳ ಆಸ್ತಿಗೆ ಸಮನಾದ ಉತ್ತರಾಧಿಕಾರದ ಕ್ರಮವು ಅನ್ವಯಿಸುತ್ತದೆ” ಇತ್ಯಾದಿ ಅಂಶಗಳನ್ನು ತಿಳಿಸುತ್ತದೆ.(ಉದ್ಧತ: ಅರವಿಂದ ಮಾಲಗತ್ತಿ, 1991, ಪು.143) ಜೊತೆಗೆ ಈ ಕಾಯ್ದೆಯ ಮಹತ್ವದ ಬದಲಾವಣೆಯ ಅಂಶಗಳೆಂದರೆ:

1. ಇದುವರೆಗೆ ಧಾರ್ಮಿಕ ಫಲಾನುಭವಕ್ಕೂ, ಆಸ್ತಿಹಕ್ಕಿಗೂ ಇದ್ದ ಸಂಬಂಧವನ್ನು ತೆಗೆದುಹಾಕಿ ವಾರಸುದಾರಿಕೆ ಹಕ್ಕು ಮತ್ತು ವಾರಸುದಾರಿಕೆ ಕ್ರಮವನ್ನು ವಿಧಿಸಲಾಗಿದೆ.

2. ಇದುವರೆಗೆ ಸ್ತ್ರೀಯರಿಗಿದ್ದ ಪರಿಮಿತ ಹಕ್ಕು (ಜೀವನ ಪದ್ಯಂತ ಅನುಭವಿಸುವ ಹಕ್ಕು) ತೆಗೆದುಹಾಕಿ, ಸ್ತ್ರೀಯರಿಗೆ ಯಾವುದೇ ರೀತಿಯಲ್ಲಿ ಆಸ್ತಿ ಲಭಿಸಿರಲಿ ಅವರು ಪುರುಷರಂತೆ ಸಂಪೂರ್ಣ ಹಕ್ಕುದಾರರಾಗುವರೆಂದು ಘೋಷಿಸಲಾಗಿದೆ.

3. ವಾರಸುದಾರಿಕೆಯ ಅನುಕ್ರಮಣಿಯಲ್ಲಿ ಬಹಳ ಕೆಳಗೆ ಇದ್ದ ಮೃತ ಮಗನ ಹಾಗೂ ಮೃತ ಮಗಳ ಮಗಳನ್ನು ಬಹಳ ಮುಂದೆ ತಂದು ಅವರನ್ನು ಮಗ ಮೃತ ಮಗನ ವಿಧವೆ, ಮೃತ ಮಗನ ಮಗ, ಅವನ ವಿಧವೆ, ಮೃತ ಮಗನ ಮಗ (ಮೊಮ್ಮಗ) ಅವನ ವಿಧವೆ, ಮಗಳು, ಮೃತ ಮಗಳು, ಮಗ ಮುಂತಾದವರನ್ನು ಪ್ರಥಮ ದರ್ಜೆಯ ವಾರಸುದಾರರನ್ನಾಗಿ ಮಾಡಲಾಗಿದೆ. ಧಾರ್ಮಿಕ ಕಾರಣದಿಂದಾಗಿ ದೂರವಿಟ್ಟಿದ್ದ ಈ ಸ್ತ್ರೀ ಸಂಬಂಧಗಳನ್ನು ಮೃತವ್ಯಕ್ತಿಗೆ ಹತ್ತಿರದ ರಕ್ತ ಸಂಬಂಧಿಗಳಾಗುತ್ತಾರೆಂಬ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ.

4. ಮಿತಾಕ್ಷರದ ಛಾಯಾಭಾಗದಲ್ಲಿ ಎರಡು ಶಾಖೆಗಳಿಗೂ ಒಂದೇ ವಾರಸುದಾರಿಕೆ ನಿಯಮಾವಳಿಯನ್ನು ಅನ್ವಯಿಸಲಾಗಿದೆ.

5. ಸ್ತ್ರೀಯರ ಆಸ್ತಿ(ಸ್ತ್ರೀಧನಕ್ಕೆಗೆ ಸಂಬಂಧಿಸಿದಂತೆ ವಾರಸುದಾರಿಕೆ ನಿಯಮಗಳನ್ನು ಏಕರೂಪಗೊಳಿಸಲಾಗಿದೆ. ಸ್ತ್ರೀಧನದ ಲಕ್ಷಣಗಳ ಮೇಲೆ ಈಗ ಅದು ಅವಲಂಬಿಸುವುದಿಲ್ಲ. ಸ್ತ್ರೀಧನದ ಬಗ್ಗೆ ಈವರೆಗೆ ಇದ್ದ ಎಲ್ಲ ಗೊಂದಲಗಳನ್ನು ನಿವಾರಿಸಿ ಸ್ತ್ರೀಗೆ ಯಾವ ಮೂಲದಿಂದ ಯಾವಾಗ ಯಾವ ಆಸ್ತಿಯೇ ಬರಲಿ ಅದು ಅವಳ ಸಂಪೂರ್ಣ ಆಸ್ತಿಯಾಗುತ್ತದೆಂದು ತಿಳಿಸುತ್ತದೆ.

6. ಸ್ತ್ರೀ ಹಾಗೂ ಪುರುಷರ ಆಸ್ತಿ ಸಂಬಂಧವಾಗಿ ಈವರೆಗೆ ಸ್ತ್ರೀಪುರುಷರೆ ವಾರಸುದಾರರಲ್ಲಿ ಇದ್ದ ಭೇದಭಾವನ್ನು ಈ ಕಾನೂನು ತೆಗೆದುಹಾಕುತ್ತದೆ. ಒಂದೇ ಶ್ರೇಣಿಯ ಸಂಬಂಧಿಕರಾದಲ್ಲಿ ಸ್ತ್ರೀಪುರುಷರಿಬ್ಬರೂ ಸಮಾನ ಹಕ್ಕಿನ ವಾರಸುದಾರರಾಗುತ್ತಾರೆ.

7. ಈವರೆಗೆ ವ್ಯಭಿಚಾರದ ಕಾರಣದಿಂದಾಗಿ ಸ್ತ್ರೀ ವಾರಸುದಾರರಿಗೆ ಇದ್ದ ಅನರ್ಹತೆಯನ್ನು ತೆಗೆದುಹಾಕಿ ಅಂತಹ ಸ್ತ್ರೀಯರ ವಾರಸುದಾರಿಕೆ ಹಕ್ಕನ್ನು ಮಾನ್ಯ ಮಾಡಲಾಗಿದೆ.

8. ಮಗನು ತಮ್ಮ ಹುಟ್ಟಿನಿಂದ ಪಡೆಯುವ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಉಳಿಸಿಕೊಂಡಿದ್ದರೂ, ಮಗಳಿಗೆ ಜನ್ಮಸಿದ್ಧ ಹಕ್ಕನ್ನು ಕೊಡದಿದ್ದರೂ, ತಾಯಿ, ಹೆಂಡತಿ, ಮಗಳು, ಮೊಮ್ಮಗಳು ಈಗ ಒಂದನೇ ದರ್ಜೆಯ ವಾರಸುದಾರ ರಾಗುವುದರಿಂದ ಮಗ, ಮೊಮ್ಮಗ, ಮರಿ ಮಗನಿಗೆ ದೊರಕುವ ಆಸ್ತಿಯ ಪಾಲು ಕಡಿಮೆ ಆಗುತ್ತದೆ.

9. ವಾಸದ ಮನೆಯ ಬಗ್ಗೆ ಕುಟುಂಬದ ಕೆಲವು ಸದಸ್ಯರಿಗೆ ಮೊದಲು ಕೊಳ್ಳುವ ಹಕ್ಕನ್ನು ಕೊಡಲಾಗಿದೆ.

10. ಮೊಟ್ಟ ಮೊದಲ ಬಾರಿಗೆ ಅವಿಭಕ್ತ ಕುಟುಂಬದ ಆಸ್ತಿಯಲ್ಲಿರುವ ತನ್ನ ಪಾಲಿನ ಬಗ್ಗೆ ಮೃತಪತ್ರ ಬರೆಯುವ ಅಧಿಕಾರವನ್ನು ಸಹಭಾಗೀದಾರರಿಗೆ ಕೊಡಲಾಗಿದೆ. ಹಾಗೆಯೇ ಪ್ರಥಮ ದರ್ಜೆಯ ಸ್ತ್ರೀ ವಾರಸುದಾರರಿದ್ದಾಗ ಸಹಭಾಗಿದಾರನ ಪಾಲು ಬದುಕಿರುವ ಉಳಿದ ಸಹಭಾಗಿದಾರರಿಗೆ ಹೋಗದೆ, ವಾರಸುದಾರಿಕೆ ಮೂಲಕ ಅವನ ವಾರಸುದಾರರಿಗೆ ಸಮಾನವಾಗಿ ಹೋಗುತ್ತದೆ. ಸ್ವಯಾರ್ಜಿತ ಆಸ್ತಿ ಸ್ತ್ರೀ ಪುರುಷ ಸಂಬಂಧಿಗಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ.

11. ಕಾನೂನುಬಾಹಿರ ಸಂಬಂಧದಲ್ಲಿ ಹುಟ್ಟಿದ ಮಕ್ಕಳಿಗೆ ತಾಯಿಯ ಆಸ್ತಿಯಲ್ಲಿ ಈವರೆಗೆ ಇದ್ದ ವಾರಸುದಾರಿಕೆಯ ಹಕ್ಕನ್ನು ಉಳಿಸಿಕೊಳ್ಳಲಾಗಿದೆ. ಆದರೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಆ ಹಕ್ಕು ಇರುವುದಿಲ್ಲ” (ಬಾಬುರಾವ್ ಮುಡಬಿ: 2005, ಪು-145, 150).

ಇವಿಷ್ಟು ಮಹಿಳೆ ಆಸ್ತಿಯ ಸಂಬಂಧ ಸಂಗತಿಗಳಾಗಿದ್ದು, ಇವನ್ನು ಪ್ರಕರಣಗಳ ಮೂಲಕ ತೋರಿಸಲಾಗಿದೆ. ಆದ್ದರಿಂದ ಈ ಅಧಿನಿಯಮ ಎಂಟನೇ ಪ್ರಕರಣದಲ್ಲಿ ಸ್ತ್ರೀಯರ ಆಸ್ತಿ ಹಕ್ಕಿಗೆ ಹೊಸದಾಗಿ ಸೇರಿದ ನಿಯಮಗಳೆಂದರೆ:

ವಿವಾಹ ಕಾನೂನು ಜಾರಿಗೆ ಬಂದ ಮೇಲೆ ಹಿಂದೂ ಪುರುಷನೊಬ್ಬನು ಮೃತನಾದರೆ ಹಾಗೂ ಅವನಿಗೆ ಮಿತಾಕ್ಷರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದ್ದಲ್ಲಿ ಹಾಗೂ ಅವನಿಗೆ ಒಂದನೇ ದರ್ಜೆಯ ಸ್ತ್ರೀ ಸಂಬಂಧಿಗಳು(ತಾಯಿ, ಹೆಂಡತಿ, ಮಗಳು, ಮೃತ ಮಗನ, ಮಗಳು, ಮೃತ ಮಗಳು, ಮೃತ ಮಗನ ಹೆಂಡತಿ / ಮೃತ ಮೊಮ್ಮಗನ ಹೆಂಡತಿ ಅಥವಾ ಮಗಳು) ಇದ್ದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿನ ಅವನ ಪಾಲು ಒಂದನೇ ದರ್ಜೆಯ ಎಲ್ಲ ಸ್ತ್ರೀ ಪುರುಷ ವಾರಸುದಾರರಿಗೆ ಸಮಾನವಾಗಿ ವಾರಸುದಾರಿಕೆಯ ಮೂಲಕ ಹೋಗುತ್ತದೆ. ಹಿಂದೂ ಪುರುಷನ ಒಂದೇ ದರ್ಜೆಯ ವಾರಸುದಾರರಲ್ಲಿ ಮೇಲ್ಕಂಡ ಸ್ತ್ರೀ ಸಂಬಂಧಿಗಳಲ್ಲದೆ, ಅವನ ಮಗ, ಮೊಮ್ಮಗ… ಹೀಗೆ ಪುರುಷ ಸಂಬಂಧಿಗಳು ಬರುತ್ತಾರೆ. ಮೇಲೆ ತಿಳಿಸಿದ ಸ್ತ್ರೀ ಸಂಬಂಧಿಗಳು ಯಾರೂ ಇಲ್ಲದಿದ್ದಲ್ಲಿ ಅವರ ಪಾಲು ಹಿಂದಿನ ಹಿಂದೂ ಮಿತಾಕ್ಷರ ನಿಯಮದಂತೆ ಅವರ ಪುರುಷ ಸಂಬಂಧಿಗಳಿಗೆ ಉಳಿದವರ ಹಕ್ಕಿನ ಪ್ರಕಾರ ಹೋಗುತ್ತದೆ.

ಅಧಿನಿಯಮದ ಮತ್ತೊಂದು ಮಹತ್ವದ ಬದಲಾವಣೆ 14ನೇ ಪ್ರಕರಣದಲ್ಲಿ ಇದೆ.ಹಿಂದೂ ಸ್ತ್ರೀಯೊಬ್ಬಳು ಈ ಅಧಿನಿಯಮ ಜಾರಿಗೆ ಬರುವ ಮೊದಲಾಗಲಿ ಅನಂತರವಾಗಲಿ ಯಾವುದೇ ಆಸ್ತಿಯನ್ನು ಪಡೆದಿದ್ದಲ್ಲಿ ಅವಳು ಈ ಆಸ್ತಿಯ ಸಂಪೂರ್ಣ ಮಾಲೀಕಳಾಗುತ್ತಾಳೆಂದು ಈ ಪ್ರಕರಣ ತಿಳಿಸುತ್ತದೆ.ಹಿಂದಿನ ಹಿಂದೂ ಕಾನೂನಿನಲ್ಲಿ ಕೆಲವು ಹಿಂದೂ ಸ್ತ್ರೀ ಸಂಬಂಧಿಗಳಿಗೆ ಮಾತ್ರ ಆಸ್ತಿ ಹಕ್ಕು ದೊರಕುತ್ತಿದ್ದು ಅವರ ಸ್ತ್ರೀ ಧನವನ್ನುಳಿದ ಎಲ್ಲ ಆಸ್ತಿಗಳಲ್ಲಿ ಕೇವಲ ಜೀವಿತಾವಧಿಯವರೆಗೆ ಅನುಭವಿಸುವ ಹಕ್ಕನ್ನು ಮಾತ್ರ ಹೊಂದಿರುತ್ತಿದ್ದರು.ಅವರ ಮರಣಾನಂತರ ಆ ಆಸ್ತಿ ಪನಃ ಪುರುಷ ಸಂಬಂಧಿಗಳಿಗೆ ಹಿಂದಿರುಗುತ್ತಿತ್ತು ಎನ್ನುವ ಹಿನ್ನೆಲೆಯಲ್ಲಿ ಈ ತಿದ್ದುಪಡಿಯನ್ನು ಅರ್ಥ ಮಾಡಿಕೊಂಡಾಗ ಅದರ ಮಹತ್ವ ತಿಳಿಯುತ್ತದೆ.ಈ ಪ್ರಕರಣ ಸ್ತ್ರೀಧನ ಹಾಗೂ ಉಳಿದ ಆಸ್ತಿ ಹಕ್ಕಿನ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿ ಎಲ್ಲ ಆಸ್ತಿಯನ್ನು ಸ್ತ್ರೀಯರ ಸಂಪೂರ್ಣ ಒಡೆತನದ ಆಸ್ತಿಯಾಗಿ ಘೋಷಿಸುತ್ತದೆ.ಸ್ತ್ರೀಯರಿಗೂ ತಮ್ಮ ಆಸ್ತಿಯನ್ನು ಮಾರುವ, ದಾನಕೊಡುವ, ಮೃತಪತ್ರ ಬರೆಯುವ ಹಕ್ಕನ್ನು ಒದಗಿಸಿದೆ.

ಸ್ತ್ರೀ ವಾರಸುದಾರರನ್ನು (ತಾಯಿ, ಹೆಂಡತಿ, ಅವಿವಾಹಿತೆ, ವಿಧವೆ, ಗಂಡನಿಂದ ಬೇರೆಯಾದ ಮಗಳು) ಈ ಮನೆಯಲ್ಲಿ ವಾಸಿಸುತ್ತಿದ್ದು, ಗಂಡು ಮಕ್ಕಳು ಬೇರೆ ಮನೆಯಲ್ಲಿ ಬೇರೆ ಊರಿನಲ್ಲಿ ವಾಸಿಸಬಹುದಾದ ಸಂದರ್ಭವನ್ನು ಇದು ಕಲ್ಪಿಸಿಕೊಳ್ಳುವುದೇ ಇಲ್ಲ. ಇಂತಹ ಕುಟುಂಬಗಳು ದಕ್ಷಿಣ ಭಾರತದ ಕೇರಳ ಹಾಗೂ ಮಂಗಳೂರಿನ ಕರಾವಳಿ ಪ್ರದೇಶಗಳಲ್ಲಿ ಇದ್ದವು. ಅವು ಅಳಿಯತನ ಪದ್ಧತಿಯನ್ನು ಹೊಂದಿದ್ದವು.ಅಂದರೆ ಗಂಡಸರು ಸಹ ಮದುವೆಯಾದ ನಂತರ ಹೆಂಡತಿಯ ಮನೆಯಲ್ಲಿ ವಾಸಿಸುತ್ತಿದ್ದರು.ಈ ಮೂಲಕವೇ ಅವರು ಹುಟ್ಟಿದ ಮನೆಯ ವಾರಸುದಾರಿಕೆಯನ್ನು ಕಳೆದುಕೊಳ್ಳುತ್ತಿದ್ದರು. ಹಾಗಾಗಿ ಈ ಕಾನೂನಿನ ಪ್ರಕಾರ ಗಂಡು ಮಕ್ಕಳು ಮನೆಯನ್ನು ವಿಭಾಗ ಮಾಡಿಕೊಂಡು ಮಾರಾಟ ಮಾಡಿ ಸ್ತ್ರೀ ವಾರಸುದಾರರಿಗೆ ವಾಸಿಸುವ ಮನೆ ಇಲ್ಲದಂತೆ ಮಾಡಬಹುದು. ಹೀಗೆ ಪುರುಷ ವಾರಸುದಾರರ ಹಿತವನ್ನು ರಕ್ಷಿಸುವ ಈ ನಿಯಮ ಸೀ ವಾರಸುದಾರರ ಹಿತವನ್ನು ಕಡೆಗಣಿಸಿದೆ.ಆದ್ದರಿಂದ ಇದು ಮಹಿಳೆಗೆ ಆಸ್ತಿ ನೀಡುವ ಮೇಲ್ಪದರ ನೆಲೆಗಳನ್ನು ಮಾತ್ರ ಹೊಂದಿದೆ.ಪರಿಣಾಮ ಈ ಕಾನೂನು ಮಹಿಳೆ ಸ್ವಲ್ಪ ಚಲನಶೀಲಗೊಳ್ಳಲು ಸಾಧ್ಯವಾಗಿದೆ.

ತಾಯಿಯನ್ನು ಮಗುವಿನ ಸಹಜ ಪೋಷಕಳೆಂದು ನಿರ್ಧರಿಸುವುದು Hindu Minorities and Guardianship oಛಿಣ (1956), ಇದು ಒಳಗೊಂಡ ಸಂಗತಿಗಳೆಂದರೆ “ತಾಯಿಯ ತಂದೆಯು ನೇಮಿಸಿದ ರಕ್ಷಕನನ್ನು ಬದಲಾಯಿಸಿ ಹೊಸ ರಕ್ಷಕನನ್ನು ತನ್ನ ಇಚ್ಚೆಗೆ ಅನುಸಾರವಾಗಿ ನೇಮಿಸುವುದು.ಅಪ್ರಾಪ್ತ ವಯಸ್ಕ ಮಗುವಿನ ತಾಯಿಯು ಜೀವಂತವಿದ್ದಾಗ ತಂದೆಯು ಆ ಮಗುವಿಗೆ ರಕ್ಷಕನನ್ನು ನೇಮಿಸುವುದನ್ನು ಈ ಕಾನೂನು ನಿಷೇಧಿಸುತ್ತದೆ.”

ಮಹಿಳೆ ದತ್ತು ಸ್ವೀಕಾರ ಹಕ್ಕು ಹಾಗೂ ವಿಚ್ಛೇದನದ ಸಂದರ್ಭದಲ್ಲಿ ನಿರ್ವಹಣಾ ಹಕ್ಕು Adoption and Maintenance Right (1956).ಈ ಕಾಯ್ದೆಯು ಹಲವು ಸಂಗತಿಗಳನ್ನು ಒಳಗೊಂಡಿದೆ. ಅವುಗಳೆಂದರೆ :

ಅ. ಕಾನೂನಿನ ಪ್ರಕಾರ ಗಂಡು ಮತ್ತು ಹೆಣ್ಣು ಮಗುವನ್ನು ಯಾವುದೇ ವ್ಯತ್ಯಾಸವಿಲ್ಲದೆ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಹಿಂದೂ ಕಾನೂನಿನಲ್ಲಿ ಹೆಣ್ಣುಮಗುವನ್ನು ದತ್ತು ಸ್ವೀಕರಿಸುವ ಅವಕಾಶವಿರಲಿಲ್ಲ.

ಆ. ಈ ಕಾನೂನಿನ ಪ್ರಕಾರ ಪ್ರತಿ ಜೀವಂತವಾಗಿದ್ದಾಗ ಪತ್ನಿ ತನ್ನ ಇಚ್ಛೆಗೆ ಅನುಸಾರವಾಗಿ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಕಾನೂನಿನಲ್ಲಿ ಮಹಿಳೆಗೆ ಈ ಅವಕಾಶವನ್ನು ನಿರಾಕರಿಸಲಾಗಿತ್ತು.

ಇ. ಹಿಂದಿನ ಹಿಂದೂ ಕಾನೂನಿನ ಪ್ರಕಾರ ಕನ್ಯ ಮತ್ತು ವಿಧವೆಗೆ ದತ್ತು ಸ್ವೀಕರಿಸುವ ಹಕ್ಕು ಇರಲಿಲ್ಲ. ಆದರೆ ಹಿಂದೂ ನೀತಿಸಂಹಿತೆ ಈ ಭಾಗದಲ್ಲಿ ಅವರಿಗೆ ದತ್ತು ಸ್ವೀಕರಿಸುವ ಹಕ್ಕನ್ನು ತೋರಿಸಿದೆ.

ಈ. ಹಿಂದೂ ಕಾನೂನಿನ ಪ್ರಕಾರ ಪತಿ ಮಕ್ಕಳನ್ನು ದತ್ತು ಪಡೆಯುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿರಲಿಲ್ಲ. ಆದರೆ ಹಿಂದೂ ನೀತಿಸಂಹಿತೆಯ ಪ್ರಕಾರ ಈ ಎರಡು ಕ್ರಮಗಳನ್ನು ಪತಿ ಕೈಗೊಳ್ಳುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯಬೇಕು.

ಉ. ಸಂವಿಧಾನದ ಹನ್ನೊಂದನೇ ವಿಭಾಗದ ಪ್ರಕಾರ ತಂದೆ ತನಗಿಂತ ಕನಿಷ್ಠ 21 ವರ್ಷ ಸಣ್ಣ ಪ್ರಾಯದ ಮಗಳನ್ನು ಮಾತ್ರ ದತ್ತು ಸ್ವೀಕರಿಸಬಹುದು (ವಿಶೇಷ: ಬಾ.ಸಾ.ಅಂ.ಬ.ಭಾ: ಸಂ-14-1, 2: ಗಮನಿಸಿ).

ಒಟ್ಟಿನಲ್ಲಿ ಬಹುಪತ್ನಿತ್ವ ಬಾಲ್ಯವಿವಾಹ, ವಿಧವೆ ಇತ್ಯಾದಿ ಅಂಶಗಳು ಮಹಿಳಾ ಚಳುವಳಿಗಳು ಸ್ವಾತಂತ್ರ್ಯದಿಂದಲೇ ಕೈಗೆತ್ತಿಕೊಂಡಿದ್ದ ವಿಚಾರಗಳಾಗಿದ್ದರೂ ಅಂಬೇಡ್ಕರ್ ಅವಕ್ಕೊಂದು ಗಟ್ಟಿಯಾದ ನೆಲೆಯನ್ನು ಒದಗಿಸಲು ಪ್ರಯತ್ನಿಸಿದರು.ಮಹಿಳಾ ಚಳುವಳಿಗಳು ಮಹಿಳೆಯರ ಕೊರತೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಒತ್ತಾಯ ತರುತ್ತಿದ್ದಾಗ ಅಂಬೇಡ್ಕರ್ ಮಹಿಳೆಯರಿಗಿಂತ ಹೆಚ್ಚಿನದಾಗಿ ಪುರುಷನು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವಕಾಶದ ಬಗ್ಗೆ ಗಮನ ಹರಿಸಿದರು.ಈ ಪೂರ್ವದ ಕಾನೂನು ಸ್ತ್ರೀಯರ ಪುನರ್‌ವಿವಾಹದ ಸಾಧ್ಯತೆಗಳನ್ನು ಕಾನೂನುಬದ್ಧಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಪುರುಷನ ಒಂದಕ್ಕಿಂತ ಹೆಚ್ಚಿನ ವಿವಾಹ, ಆಸ್ತಿಯ ಮೇಲಿನ ಏಕಸ್ವಾಮ್ಯ, ಸಂತಾನದ ಮೇಲಿನ ಏಕಸ್ವಾಮ್ಯ ಇತ್ಯಾದಿಗಳನ್ನು ನಿಯಂತ್ರಿಸುವುದು ಅಗತ್ಯವೆಂದು ಪ್ರಸ್ತುತಪಡಿಸಿದರು.ಈ ಸಮಾಜ ಲಿಂಗಭೇದವು ಸ್ತ್ರೀಗೆ ಹಾಕಿದ ನಿರ್ಬಂಧಗಳಿಂದಷ್ಟೆ ಅಲ್ಲದೇ ಪುರುಷನಿಗೆ ಒದಗಿಸಿದ ಸ್ಟೇಟ್ಸ್ ಕೂಡ ಉಲ್ಬಣಿಸಿರುವುದನ್ನು ಕಾನೂನಿನ ಮೂಲಕ ಸರಿಪಡಿಸಲು ಪ್ರಯತ್ನಿಸಿದರು.

ಅಂಬೇಡ್ಕರ್ ರೂಪಿಸಿದ ಕೋಡ್ ಬಿಲ್ ಕೇವಲ ಸುಧಾರಣೆ ಗುಣವನ್ನಷ್ಟೇ ಹೊಂದಿದ್ದಲ್ಲದೆ ಈ ಜಾತಿಪ್ರಧಾನ, ಪಿತೃಪ್ರಧಾನ ಸಮಾಜ ರಚನೆಯ ತಳಹದಿಯನ್ನು ಬುಡಮೇಲು ಮಾಡುವ ಅಂಶಗಳನ್ನು ಹೊಂದಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು.ಬೇರೆಲ್ಲ ವಿಚಾರಗಳಲ್ಲಿ ಅತ್ಯಂತ ಪ್ರಗತಿಪರರೆಂದು ಗುರುತಿಸಿಕೊಂಡ ಅನೇಕ ಪುರುಷರು ಕೂಡ ಈ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ನೀಡಿದ ಸಮಾನ ಅವಕಾಶಗಳ ಕುರಿತು ಆಕ್ಷೇಪವೆತ್ತಿದರು ಮತ್ತೆ ಕೆಲವರು ಮೇಲ್ನೋಟಕ್ಕೆ ಸಮಾಧಾನದಿಂದ ಇದ್ದಂತೆ ಕಂಡುಬಂದರೂ ಒಳಗೆ ಅಸಮಾಧಾನದಿಂದ ಕುದಿಯುತ್ತಿದ್ದರು. ಸ್ವತಃ ಅಂದಿನ ರಾಷ್ಟ್ರಪತಿಗಳಾದ ಶ್ರೀ ರಾಜೇಂದ್ರಪ್ರಸಾದ್ ಅವರೇ ಇದಕ್ಕೆ ಅಸಮ್ಮತಿ ಸೂಚಿಸಿದರು ಎಂಬುದೇ ವಿಪರ್ಯಾಸ.

ಉಲ್ಲೇಖಗಳು

1. ಬಾ.ಸಾ.ಅಂ.ಬ.ಭಾ: 1999, ಸಂ.03, ಪು.51.
2. ಸಂ.ಮಾ.ಭರಣಿ, 1991, ಶತಮಾನದ ಅಂಬೇಡ್ಕರ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ತುಮಕೂರು, ಪು.241.
3. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.622.
4. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.51,53.
5. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.1, ಪು.600,800
6. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.2, ಪು.771,800.
7. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಪು. 146.
8. ಅರವಿಂದ ಮಾಲಗತ್ತಿ, 1999, ಡಾ.ಅಂಬೇಡ್ಕರ್ ವಿಚಾರಧಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಪು. 143.
9. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಮ. 145.

(ಡಾ. ಯರ್ರಿಸ್ವಾಮಿಯವರ ಅಧ್ಯಯನದೊಂದಿಗೆ ಬಹು ಮುಖ್ಯವಾದ ಈ ಲೇಖನವನ್ನು ಮತ್ತೊಮ್ಮೆ ಬರೆದಿದ್ದೇನೆ.- ವಿ.ಎಸ್.ಬಾಬು ಅವರ ಫೇಸ್‌ಬುಕ್‌ ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಪೂನಾ ಒಪ್ಪಂದಕ್ಕೆ 92 ವರ್ಷ

Published

on

  • ಮಲ್ಕುಂಡಿ ಮಹದೇವ ಸ್ವಾಮಿ

ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ದೇವದಾಸ್ ಗಾಂಧಿ.

“ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಡಾ. ಅಂಬೇಡ್ಕರ್.

ಅಂದು ಅಕೋಲದಲ್ಲಿ ಗಾಂಧಿಜೀ ತಂಗಿದ್ದರು. ಅಲ್ಲಿಗೆ ಕೆಲವು ಅಂಬೇಡ್ಕರ್ ಅನುಯಾಯಿಗಳು ಬಂದು ಗಾಂಧಿಯವರನ್ನು ಭೇಟಿಯಾಗಿ, ಕೆಲವು ಪ್ರಶ್ನೆಗಳನ್ನು ಕೇಳಿದರು. “ಗಾಂಧೀಜಿಯವರೇ, ಕೆಲವರು ತಿಲಕರನ್ನು ದೇವರೆಂದು ಪೂಜಿಸುವಂತೆ, ಅಂಬೇಡ್ಕರರನ್ನು ದೇವರೆಂದು ಪೂಜಿಸಬಹುದೇ….? ಗಾಂಧೀಜಿಯವರು ಉತ್ತರಿಸುತ್ತಾ, ಪೂಜಿಸಬಹುದು. ಪೂಜಿಸುವವರಿಗೆ ಈ ಹಕ್ಕಿದೆ. ಅಂಬೇಡ್ಕರರನ್ನು ನಾನು ಮೆಚ್ಚುತ್ತೇನೆ. ನಾನು ಅವರ ದೃಷ್ಟಿಕೋನಗಳಿಂದ ಭಿನ್ನವಾಗಿದ್ದೇನೆ ಆದರೆ ಅವರು ಧೈರ್ಯಶಾಲಿ ಎಂದು ಒಪ್ಪಿಕೊಳ್ಳುತ್ತೇನೆ. ಧೈರ್ಯಶಾಲಿ ಪುರುಷ ಕೂಡ ತಪ್ಪು ಮಾಡುತ್ತಾನೆ. ನಾನು ನನ್ನನ್ನು ಧೈರ್ಯಶಾಲಿ ಎಂದು ಸ್ವತಹ ನಿರ್ಧರಿಸಿಕೊಳ್ಳುತ್ತೇನೆ ಮತ್ತು ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ” ಎಂದರು.

ತಿಲಕರನ್ನು ದೇವರೆಂದು ಭಾವಿಸಿದ್ದ ಗಾಂಧೀಜಿಗೆ ಪ್ರಶ್ನಿಸಿದ ಅಂಬೇಡ್ಕರ್ ಅನುಯಾಯಿಗಳು ಪೂನಾ ಒಪಂದದಿಂದಾದ ಅನ್ಯಾಯದ ಸಿಟ್ಟನ್ನು ತೋಡಿಕೊಂಡರು. ಮತ್ತು ಈ ಒಪ್ಪಂದ ಇನ್ನು ಮುಂದಿನ ಪೀಳಿಗೆಯೂ ಪ್ರಶ್ನಿಸುವ ಅಧಿಕಾರವನ್ನು ಶಾಶ್ವತವಾಗಿ ಕಿತ್ತುಕೊಂಡಿತು ಎಂಬ ಮತ್ತೊಂದು ಸಿಟ್ಟುಕೂಡ ಅಲ್ಲಡಗಿತ್ತು. ನೀವು ಪ್ರಶ್ನಿಸುವವರಾಗಿದ್ದರೇ ಈ ಪ್ರಸಂಗದ ವಿಶ್ಲೇಷಣೆಯನ್ನು ನಿಮಗೇ ಬಿಡುತ್ತೇನೆ.

ರಾಮ್ಸೆ ಮೆಕ್ ಡೊನಾಲ್ಡ್ ರವರಿಗೆ ಆಗಸ್ಟ್ 18 ಗಾಂಧಿಜೀ ಪತ್ರ ಬರೆದು ಬ್ರಿಟಿಷ್ ರ ಕೋಮುವಾರು ತೀರ್ಪನ್ನು ಕಟುವಾಗಿ ಟೀಕಿಸಿದ್ದರು. ಮತ್ತು ತಮ್ಮ ಅಸಮ್ಮತಿಯನ್ನು ತೋರಿದರು. ಸೆಪ್ಟೆಂಬರ್ 9 ಬ್ರಿಟಿಷರು ಗಾಂಧೀಜಿ ಯವರ ನಿರ್ಧಾರವನ್ನು ನಿರಾಕರಿಸಿದ ಕಾರಣ. ಆ ಸೋಮವಾರ ಎಲ್ಲಾ ನಾಯಕರು ಜಮಾಯಿಸಿ ಅಂಬೇಡ್ಕರರನ್ನು ಕೇಳಿದಾಗ: ” ಗಾಂಧೀಜಿ ಅವರಿಗಾಗಿ ಇಂತಹ ಮಹಾತ್ಯಾಗ ಮಾಡಲಾರೆ ” ಎಂದರು. ಮರುದಿನ ಮಹಾತ್ಮಗಾಂಧಿಜೀಯವರು ಆ ಮಾವಿನ ತೋಪಿನಲ್ಲಿ ಉಪವಾಸಕ್ಕೆ ಕುಳಿತರು.

ಉಪವಾಸದ 3 ದಿನಗಳ ನಂತರ ಅಂಬೇಡ್ಕರ್ ಅವರಿಗೆ ಎಲ್ಲಾ ಕಡೆಯಿಂದ ಬೆದರಿಕೆ ಕರೆಗಳು ಬರಲು ಆರಂಭಿಸಿದವು. ಕೆಲವು ಗೂಂಡಾಗಳು ನೇರವಾಗಿ ಅಂಬೇಡ್ಕರರನ್ನು ಪ್ರಶ್ನಿಸಿದ್ದರು. ಬಹುತೇಕ ಎಲ್ಲ ಪತ್ರಿಕೆಗಳು ಗಾಂಧಿಯವರನ್ನು ಬೆಂಬಲಿಸುತ್ತಿವೆ ಮತ್ತು ಅಂಬೇಡ್ಕರರನ್ನು ವಿರೋಧಿಸುತ್ತಿವೆ. ಅವರ ರಕ್ತದ ಒತ್ತಡ ಹೆಚ್ಚುತ್ತಿದೆ.

ಉದ್ರಿಕ್ತತೆ ಹೆಚ್ಚಾಯಿತು, ಅಂಬೇಡ್ಕರ್ ಖಳನಾಯಕ, ದೇಶದ್ರೋಹಿ, ಭಾರತವನ್ನು ಛಿದ್ರಗೊಳಿಸಲು ಬಯಸಿದ ವ್ಯಕ್ತಿ, ಗಾಂಧಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದ ವ್ಯಕ್ತಿ. ಟ್ಯಾಗೋರ್, ನೆಹರು ಮತ್ತು ಸಿ. ರಾಜಗೋಪಾಲಾಚಾರಿ ಸೇರಿದಂತೆ ಗರಂ ದಾಲ್ (ಉಗ್ರಗಾಮಿಗಳು) ಹಾಗೂ ನರಮ್ ದಾಲ್ (ಮಿತವಾದಿಗಳು) ರಾಜಕೀಯ ಭಾರೀ ತೂಕ ಗಾಂಧಿಯ ಕಡೆ ತೂಗಿತು. ಆದರೂ ಅಂಬೇಡ್ಕರ್ ರದು ಅದೇಮಾತು.

“ನಾನು ನನ್ನ ಆದ್ಯ ಕರ್ತವ್ಯಕ್ಕೆ ದ್ರೋಹ ಬಗೆಯಲಾರೆ ಮತ್ತು ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ನ್ಯಾಯಯುತ ಮತ್ತು ನ್ಯಾಯ ಸಮ್ಮತವಾದ ವಿಶ್ವಾಸಕ್ಕೆ ದ್ರೋಹ ಮಾಡುವುದಿಲ್ಲ” ಎಂಬದು. ಅಂಬೇಡ್ಕರ್‌ ರವರ ಈ ಕಾಠಿಣ್ಯ, ಗಾಂಧಿಯವರ ಸ್ವಯಂ ಪ್ರೇರಿತ ಹಠ. ಭಾರತವನ್ನು ಅಂದು ನಿತ್ರಾಣಗೊಳಿಸಿತ್ತು.

ಮಹಾದೇವ ದೇಸಾಯಿ ಹೇಳುವಂತೆ ಸೆಪ್ಟಂಬರ್ 22 ಮಧ್ಯಾಹ್ನ ಅಂಬೇಡ್ಕರ್ ಗಾಂಧಿಯಜೀಯವರನ್ನು ಭೇಟಿಯಾಗಿ, “ನಾನು ನನ್ನ ಸಮುದಾಯಕ್ಕೆ ರಾಜಕೀಯ ಅಧಿಕಾರವನ್ನು ಬಯಸುತ್ತೇನೆ ಅದು ನಮ್ಮ ಉಳಿವಿಗೆ ಅನಿವಾರ್ಯವಾಗಿದೆ” ಉಪವಾಸವನ್ನು ಕೈ ಬಿಡಿ” ಎಂದರು. ಚರ್ಚೆ ಕಗ್ಗಂಟಾಗಿ ಸೆಪ್ಟೆಂಬರ್ 23 ಕ್ಕೆ ಮಾತುಕತೆ ಮುಂದುವರಿಯಿತು. ಮತ್ತೇ 24 ಕ್ಕೆ. ಅಂದು ಸಂಜೆ 5 ಗಂಟೆಗೆ 23 ಜನರು ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ವಿಶ್ವಾಸ ಅರ್ಹತೆಗಾಗಿ ರಾಜಾಜಿ ತಮ್ಮ ಒಂದು “ಫೌಂಟೆನ್ ಪೆನ್ನ” ನ್ನು ಅಂಬೇಡ್ಕರ್ ಅವರ ಜತೆ ವಿನಿಮಯ ಮಾಡಿಕೊಂಡಿದ್ದರು. ಇದು ಹೊರಗಿನ ಮರ್ಮಾಘಾತ. ಈ ಒಳಗಿನ ಮರ್ಮಾಘಾತದಬಗ್ಗೆ ಹೇಳಲೇ ಬೇಕು.

ಈ ದಕ್ಷಿಣ ಭಾರತದ ಅಸ್ಪೃಶ್ಯ ರಾಜಕಾರಣಿ
“ಎ ಸಿ ರಾಜನ್” ಅವರು ಅಂಬೇಡ್ಕರ್ ಅವರು ದುಂಡುಮೇಜಿನ ಸಭೆಯಲ್ಲಿ ಚರ್ಚಿಸಲು ಅಸ್ಪೃಶ್ಯರ ಪ್ರತಿನಿಧಿ ಎನ್ನುವುದನ್ನು ನಿರಾಕರಿಸಿದ್ದರು. ಮತ್ತು ಬಾಪೂ ರವರ ಕಡೆ ಕೈ ಎತ್ತಿದ್ದರು. ಪೂನಾ ಒಪ್ಪಂದದ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರವರನ್ನು ಪ್ರತ್ಯೇಕೀಕರಿಸಿ ಚರ್ಚೆಮಾಡಲು ಸಿದ್ಧಗೊಂಡಿದ್ದರು.

“ಪಲ್ ವಂಕರ್ ಬಾಲೂ” ದೇಶದ ಮೊದಲ ದಲಿತ ಕ್ರಿಕೆಟಿಗ ಕೂಡ ಅಂಬೇಡ್ಕರವರಿಗೆ 24ವರ್ಷ ದೊಡ್ಡವರಾಗಿದ್ದು ಅಂಬೇಡ್ಕರರ ಸ್ನೇಹ ಜೀವಿಯಾಗಿದ್ದರು. ಆದರೆ ಈ ಸಂದರ್ಭದಲ್ಲಿ ಗಾಂಧೀಜಿಯವರ ಪಾಳಯದಲ್ಲಿ ಪಳಗಿದರು. ಅವರು ಗಾಂಧಿಜೀಯವರ ಅನುಯಾಯಿಗಳಾಗಿ, ಅಂಬೇಡ್ಕರವರ ನಿಲುವುಗಳನ್ನು ಹೆಜ್ಜೆಹೆಜ್ಜೆಗೂ ನಿರಾಕರಿಸಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ವಾಗುವ ವಿಚಾರದಲ್ಲಿಯೂ ಕಠೋರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮುಂದೆ ಅಂಬೇಡ್ಕರ್ ಅವರ ವಿರುದ್ಧ ಚುನಾವಣೆಗೆ ನಿಂತು ಸೋತದ್ದು ಬೇರೆ ವಿಚಾರ ಆದರೆ ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದದ್ದು ಒಂದು ಐತಿಹಾಸಿಕ ಹೋರಾಟದಲ್ಲಿ ಅಂಬೇಡ್ಕರ್ ಅವರ ನಿಲುವು ಮತ್ತು ಕಾಠಿಣ್ಯಗಳನ್ನು.

ಗಾಂಧೀಜಿಯವರ ಪ್ರಕಾರ ಪ್ರತ್ಯೇಕ ಮತದಾನ ಪದ್ಧತಿ ಸಮಸ್ಯೆಯನ್ನು ಉತ್ತಮಕ್ಕಿಂತ ಕೆಟ್ಟದ್ದಾಗಿಸುತ್ತದೆ. ಇದು ಪ್ರತಿ ಹಳ್ಳಿಯಲ್ಲಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸ್ಥಳಿಯ ಸಂಘರ್ಷಕ್ಕೆ ಕಾರಣವಾಗುತ್ತಿದೆ.ಎಂಬುದು.

1931 ಅ 14 ಅಂಬೇಡ್ಕರವರು ಗಾಂಧಿಯವರನ್ನು ಮೊಟ್ಟ ಮೊದಲನೆ ಬಾರಿಗೆ ಭೇಟಿಯಾಗಿ ಪ್ರತ್ಯೇಕ ಮತದಾನದ ಹಕ್ಕುಗಳ ಬಗ್ಗೆ ಚರ್ಚಿಸಿದ್ದರು. ನಂತರ ಗಾಂಧೀಜಿ ನವೆಂಬರ್ 13 ತಮ್ಮ ಭಾಷಣದಲ್ಲಿ ನಾನು ಪ್ರತ್ತೇಕ ಪ್ರಾತಿನಿಧ್ಯವನ್ನು ವಿರೋಧಿಸುವ ಏಕೈಕ ವ್ಯಕ್ತಿಯಾಗಿದ್ದೇನೆ ಎಂದು ಒಂದು ವರ್ಷದ ಹಿಂದೆಯೇ ಹೇಳಿದ್ದರು. ಈ ಉಪವಾಸ ಒಂದು ವರ್ಷ ಪೂರ್ವ ನಿಯೋಜಿತ ಕಾರ್ಯಕ್ರಮ ದಂತೆ ಕಾಣುತ್ತದೆ ಅಲ್ಲವೆ? ಇದು ಹಠಾತ್ತಾಗಿ ಆಗಿಂದಾಗೆ ಸೃಷ್ಟಿಯಾದ ಯೋಜನೆ ಅಲ್ಲ.

ಇಡೀ ಪೂನಾ ಒಪ್ಪಂದಕ್ಕೆ ಸಾಕ್ಷಿಯಾದ ಘಟನೆಗಳನ್ನಾಧರಿಸಿ ಮಹಾದೇವ ರಾನಡೆ ಹೇಳುವಂತೆ ” ಅವರಿಗೆ ಬೇಕಿರುವುದು ಯಾವುದೋ ಒಂದು ಇತ್ಯಾರ್ಥ; ಅವರು ಆದರ್ಶ ಪರಿಹಾರಕ್ಕಾಗಿ ಕಾಯಲು ಸಿದ್ಧರಿಲ್ಲ. ಗಾಂಧೀಜಿ ಯವರ ಜೀವ ಉಳಿಸುವ ಉತ್ಸಾಹದಲ್ಲಿ ಈ ಸಹಿ ಹಾಕಿದರು.

ಅಂಬೇಡ್ಕರ್ ಜೀ ನಮ್ಮ ತಂದೆ ‘ಮುಳುಗುತ್ತಿದ್ದಾರೆ’ ಅವರ ಪ್ರಾಣ ಉಳಿಸಿ” ಎಂದು ಅಂಬೇಡ್ಕರ್ ರವರ ಮುಂದೆ ಕಣ್ಣೀರುಡುತ್ತದ್ದ ದೇವದಾಸ್ ಗಾಂಧಿ ಅವರ ಮುಖದಲ್ಲಿ ಮಾತ್ರ ಮಂದಹಾಸವಿತ್ತು.

ಹೊ! ಗಾಂಧಿಯವರು ಒಪ್ಪಂದಕ್ಕೆ ಸಹಿ ಹಾಕಿದರಾ?, ಒಂದು ಅಂತಿಮ ಪದ; ಅದು ಗಾಂಧಿಯಲ್ಲ. ಅವರ ಮಗ ದೇವದಾಸ್ ಗಾಂಧಿ.

ಸುಪರ್ಣ ಗುಪ್ತಾ ‘ ಅಂಬೇಡ್ಕರ್ ರವರು ಶೋಷಿತರ ವಿಮೋಚನೆಗಾಗಿ ಹಕ್ಕು ಆಧಾರಿತ ವಿಧಾನಕ್ಕೆ ಆದ್ಯತೆ ನೀಡಿದರು. ಗಾಂಧಿಜೀಯವರು ಅಧ್ಯಾತ್ಮ ಮತ್ತು ನಂಬಿಕೆ ವಿಧಾನಕ್ಕೆ ಮಾನ್ಯತೆ ನೀಡಿದರು. ಅಂಬೇಡ್ಕರರಿಗಿಂತ ಭಿನ್ನವಾಗಿ ಶೋಷಕರ ಮನಸ್ಥಿತಿಯನ್ನು ಬದಲಾಯಿಸಿದಾಗ ಮಾತ್ರ, ಯಾವುದೇ ಶೋಷಣೆಯನ್ನು ಸರಿಪಡಿಸಬಹುದು ಎಂದು ಗಾಂಧಿಜೀ ಭಾವಿಸಿದ್ದರು’. ಎನ್ನುತ್ತಾರೆ. ಇದು ಈ ನೆಲದಲ್ಲಿ ಅಸಂಭವ. ಕಾರಣ ಇಲ್ಲಿನ ಜಾತಿ ವ್ಯವಸ್ಥೆ ಒಂದು ಮಾನಸಿಕ ಸ್ಥಿತಿಯಾಗಿದೆ. ಅದು ಸಾವಿರಾರು ವರ್ಷಗಳು ತನ್ನ ಬೇರನ್ನು ತಾನೇ, ತನ್ನ ಮೆದುಳಿಗೆ ಎಣೆದುಕೊಂಡಿದೆ. ಇದನ್ನು ನಂಬಿಕೆ ಮಾತ್ರದಿಂದಲೇ ಬಿಡಿಸುವುದು ಕಷ್ಟ.

ಈ ಸತ್ಯ ಗಾಂಧೀಜಿಯವರ ಅರಿವಿಗೆ ಬಂದಿದ್ದೆ ಅವರು
ಅಸ್ಪೃಶ್ಯತೆಯ ವಿರುದ್ದ 1933 ನವೆಂಬರ್ ನಿಂದ 1934 ರ ಆಗಸ್ಟ್ ವರೆಗೆ 12500 km ಭಾರತದಾದ್ಯಂತ ಪ್ರವಾಸ ಕೈಗೊಂಡಾಗ. 800000 ಗಳನ್ನು ಹರಿಜನ ನಿಧಿಗೆ ಸಂಗ್ರಹಿಸಲು ಮೇಲ್ವರ್ಗದ ಜನರ ಬಳಿ ತೆರಳಿದಾಗ. ಕೊನೆ ಕೊನೆಗೆ ಶ್ರೀರಂಗಂ ತಂಜಾವೂರಿನ ಇತರ ದೇವಾಲಯಗಳಲ್ಲಿ ಅಸ್ಪೃಶ್ಯತಾಚರಣೆಯನ್ನು ಮನಗಂಡು ತಾವೇ ದೇವಾಲಗಳಿಗೇ ಹೋಗುವುದನ್ನು ನಿಷೇಧಿಸಿಕೊಂಡಾಗ. ಹರಿಜನ ಸೇವಕ ಸಂಘ ಹರಿಜನ ಪತ್ರಿಕೆ ಇಲ್ಲಿ ಹುಟ್ಟಿಕೊಂಡವು. ಪ್ರತಿ ಹಳ್ಳಿಗಳಲ್ಲಿ ರಾಮಮಂದಿರ ಭಜನೆಗಳು ಆರಂಭವಾದವು. ಇದು
ಈಗ ಈ ಜನರ ಬದುಕಿನ ಭಾಗವಾಗಿ ಬಿಟ್ಟಿದೆ.

ಲೂಯಿ ಫಿಷರ್ “ಗಾಂಧೀಜಿಗೆ ದ್ವೇಷ, ಅಸೂಯೆ, ವಿಷ, ಅಸಮಧಾನವಿಲ್ಲ. ಅವರನ್ನು ಜೈಲಿಗೆ ಹಾಕಿದ ವೈಸ್ ರಾಯ್ ಗಳ ಜೊತೆ ಅವರು ಸ್ನೇಹಿತರಾಗಿದ್ದರು. ಅವರು ವ್ಯವಸ್ಥೆಯನ್ನು ವಿರೋಧಿಸಿದರು ಆದರೆ ವ್ಯಕ್ತಿಯನ್ನಲ್ಲಾ.
ಎಂದು ಯಾರು ಏನೇ ಹೇಳಿದರು,
ಅಂಬೇಡ್ಕರ್ ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧೀಜಿಯವರನ್ನು ನಾನು “ಮಹಾತ್ಮ” ಎಂದು ಒಪ್ಪಲಾರೆ ಎಂದರು.

ಅಂಬೇಡ್ಕರ್ ರ ಈ ನೋವಿಗೆ ಪಟೇಲರ ಈ ಮಾತನಲ್ಲಿ ಉತ್ತರ ಸಿಗಬಹುದೇನೊ ಪಟೇಲರು “ಈ ಗಾಂಧಿಜೀ ಏಕೆ ಉಪವಾಸ ಮಾಡುತ್ತಿದ್ದಾರೆ ?” ಎಂದು ಗೊಂದಲಕ್ಕೀಡಾದರು. ಎದುರಿನಲ್ಲಿದ್ದವರು “ಅಸ್ಪೃಶ್ಯರನ್ನು ಎದುರಿಸಲು ಇನ್ಯಾವುದೇ ಮಾರ್ಗಗಳಿಲ್ಲವಲ್ಲಾ ಆ ಕಾರಣಕ್ಕಿರಬಹುದೇನೊ…? ಎಂದರು.

ಕೊನೆಯದಾಗಿ ಈ ಮಾತು

ನನ್ನನ್ನು ಗಲ್ಲಿಗೇರಿಸಿದರೂ ನಂಬಿದ ಜನರ ವಿಶ್ವಾಸ ಕ್ಕೆ ದ್ರೋಹ ಮಾಡುವುದಿಲ್ಲ” ಎಂದರಲ್ಲಾ ಡಾ. ಅಂಬೇಡ್ಕರ್ ಈ ಎಳೆಯನ್ನು ಇಡಿದು ಈ ಪೀಳಿಗೆ ಯಾಕೆ ಬದುಕುವ ಪ್ರಯತ್ನ ಮಾಡುತ್ತಿಲ್ಲಾ….? (ಬರಹ-ಮಲ್ಕುಂಡಿ ಮಹದೇವ ಸ್ವಾಮಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಹಮ್ಮದ್ ಎಂಬ ಮಹೋನ್ನತ ಮಾದರಿ

Published

on

  • ಯೋಗೇಶ್ ಮಾಸ್ಟರ್

ನುಷ್ಯನ ಎಲ್ಲಾ ವ್ಯವಹಾರಗಳೂ ನಡೆಯುವುದು ಅವನ ಮನಸ್ಸಿನ ಮೂಲಕ. ಮಾಡುವಂತಹ ಆಲೋಚನೆಗಳು, ತೆಗೆದುಕೊಳ್ಳುವಂತಹ ನಿರ್ಧಾರಗಳು, ತೋರುವಂತಹ ವರ್ತನೆಗಳು, ವ್ಯಕ್ತಿಯ ಬಲ, ದೌರ್ಬಲ್ಯ, ಸನ್ನಡತೆ, ದುರ್ನಡತೆ; ಮನುಷ್ಯನದ್ದು ಏನೆಂದು ಹೇಳುತ್ತಾ ಬೆರಳು ತೋರಿಸುವಿರೋ ಅವೆಲ್ಲವೂ ಮನಸ್ಸಿನ ವಿಷಯಗಳಷ್ಟೇ ಆಗಿವೆ. ವ್ಯಕ್ತಿ ಎಂಬುವನು ಆ ಮನಸ್ಸಿನ ಕರಣ, ವರ್ತನೆ ಎನ್ನುವುದು ಆ ಮನಸ್ಸಿನ ಗುಣದ ಪ್ರದರ್ಶನ.

ಮನುಷ್ಯ ತನ್ನ ಮನಸ್ಸಿನ ವೈಪರಿತ್ಯದಿಂದಾಗಿ ತನ್ನ ನಡವಳಿಕೆಯಲ್ಲಿ ತೋರುವ ಎಲ್ಲಾ ವ್ಯವಹಾರಗಳನ್ನು ಮನಗಂಡ ಮುಹಮ್ಮದರು ಅದನ್ನು ತಹಬಂದಿಗೆ ತರಲೆಂದೇ ನೈತಿಕ ತರಬೇತಿಗೆ ತೀವ್ರ ಗಮನ ನೀಡಿದರು. ವ್ಯಕ್ತಿಯೊಬ್ಬನು ವ್ಯಕ್ತಿಗತವಾಗಿಯಾಗಲಿ, ಸಮೂಹದೊಡನೆಯಾದರೂ ಆಗಲಿ, ತನ್ನನ್ನು ತಾನು ಘಾಸಿಗೊಳಿಸಿಕೊಳ್ಳಕೂಡದು ಮತ್ತು ಮತ್ತೊಬ್ಬರನ್ನು ಘಾಸಿಗೊಳಿಸಕೂಡದು; ಇದು ನೈತಿಕ ಹೊಣೆಗಾರಿಕೆ.

ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲಾಗಲಿ, ಸಮೂಹವು ಮತ್ತೊಂದು ಸಮೂಹದ ಮೇಲಾಗಲಿ ಆಕ್ರಮಿಸುವುದೆಂದರೆ ನೈತಿಕ ಪರಿಧಿಯೊಳಗೆ ಅತಿಕ್ರಮಿಸುವುದೆಂದೇ ಅರ್ಥ. ಈ ಆಕ್ರಮಣ ಮತ್ತು ಅತಿಕ್ರಮಣಗಳಿಗೆ ಕಾರಣವೇನು?

ಆಸೆಯಿಂದಾಗಿಯೇ ಅಹಂಕಾರ, ಭಯದಿಂದಾಗಿಯೇ ಆಕ್ರಮಣ. ಆಸೆ ಮತ್ತು ಭಯವೆಂಬ ಎರಡು ತೀವ್ರವಾದ ವಿಷಯಗಳು ಮನುಷ್ಯನಲ್ಲಿ ಸೈತಾನರನ್ನು ಆಮಂತ್ರಿಸುತ್ತವೆ. ಸೈತಾನನೆಂದರೆ ದೆವ್ವವೋ, ಭೂತವೋ, ಪ್ರೇತವೋ ಅಲ್ಲ. ನಮ್ಮ ಮನಸ್ಸನ್ನು ಪ್ರಭಾವಿಸಿ ಅಥವಾ ಪುಸಲಾಯಿಸಿ ನಮ್ಮಿಂದ ಕೆಲಸ ಮಾಡಿಸುವ ನಮ್ಮೊಳಗಿನ ಮತ್ತು ಹೊರಗಿನ ಪ್ರಲೋಭನಾ ಪ್ರಭಾವಗಳ ಪ್ರತಿಮಾ ರೂಪಕ.

ಇಂತಹ ಸೈತಾನನ ಪ್ರಭಾವಗಳು ಆಲೋಚಿಸುವ, ಭಾವಿಸುವ ಮನಸ್ಸಿನ ಮೂಲಕವೇ ಕೆಲಸ ಮಾಡುವುದರಿಂದ ಸೈತಾನನ ಚಟುವಟಿಕೆಗಳನ್ನು ನಮ್ಮವೇ ಎಂದು ವ್ಯಕ್ತಿ ಭಾವಿಸುತ್ತಾನೆ. ಹಾಗಾಗಿ ಸೈತಾನನ ಎಲ್ಲಾ ಪ್ರಭಾವ ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಸಲುವಾಗಿ ತನ್ನ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಉಪಯೋಗಿಸಿಕೊಳ್ಳುವನು.

ಸರಿ, ಈ ವ್ಯಕ್ತಿಯ ಚೈತನ್ಯವನ್ನು ಜೀವ ಅಥವಾ ವ್ಯಕ್ತಿಗತವಾದ ಅಸ್ತಿತ್ವ ಎನ್ನುವುದಾದರೆ, ಮಹಾ ಅಸ್ತಿತ್ವವೊಂದಿದೆ. ಇದು ಆತ್ಮವಾದರೆ, ಅದು ಪರಮಾತ್ಮ. ಇಹದಲ್ಲಿ ಇರುವ ಇದರ ಆಲೋಚನೆಗಳು ಮತ್ತು ಕಾರ್ಯ ಸಾಮರ್ಥ್ಯ ಸೀಮಿತ ಮತ್ತು ಪ್ರಭಾವಿತ. ಆದರೆ ಪರವಾಗಿರುವ, ಇಹದ ಅಳತೆಗೆ ಎಟುಕದ ಅದರ ಸಾಮರ್ಥ್ಯ ಅಮಿತ ಮತ್ತು ಅನಂತ.
ಅಂತಹ ಮಹಾ ಅಸ್ತಿತ್ವವನ್ನೇ ಈಶ್ವರ ಎನ್ನುವರೋ, ಅಲ್ಲಾಹ್ ಎನ್ನುವರೋ, ಬ್ರಹ್ಮನ್ ಎನ್ನುವರೋ, ಲಿಂಗ ಎನ್ನುವರೋ, ಪರಮಪಿತ ಎನ್ನುವರೋ, ಪರಮಾತ್ಮ ಎನ್ನುವರೋ; ಒಟ್ಟಿನಲ್ಲಿ ಭಾಷೆ ಯಾವುದಾದರೂ ಸೃಷ್ಟಿಕರ್ತ ಎಂದು ಕರೆಯಲ್ಪಡುವ ಆ ಮಹೋನ್ನತ ಚೈತನ್ಯಕ್ಕೆ ಶರಣಾಗಿ ಆ ಮಹಾಕಾಶದ ಇಚ್ಛೆಯಂತೆ ನಡೆಯುವ, ಆತನ ಇಚ್ಛೆಗಳನ್ನು ತಮ್ಮ ಮೂಲಕ ನೆರವೇರಿಸುವ ಮಾನವನ ಕರ್ತವ್ಯಕ್ಕೆ ಬೇಕಾದ ನೈತಿಕತೆ, ಆಧ್ಯಾತ್ಮಕತೆ ಮತ್ತು ತಾತ್ವಿಕತೆಯ ಸಾಕ್ಷಾತ್ಕಾರಕ್ಕೆ ಪ್ರವಾದಿ ಮುಹಮ್ಮದರು ಮಹೋನ್ನತ ಮಾದರಿಯಾಗಿ ತಮ್ಮ ಜೀವನ ಮತ್ತು ಸಂದೇಶವನ್ನು ಮುಂದಿರಿಸುತ್ತಾರೆ.

ಮಹಾಸ್ತಿತ್ವಕ್ಕೆ ಶರಣಾಗಿ ತನ್ನ ಸೀಮಿತ ಇತಿ ಮಿತಿಯ ಮಾನಸಿಕ ಲೆಕ್ಕಾಚಾರಗಳಿಂದ ಹೊರಗಿನ ನೇಮವನ್ನು ಸ್ವೀಕರಿಸುವುದೇ ಮುಹಮ್ಮದರ ಪಾಲಿನ ಮಹೋನ್ನತ ನೈತಿಕತೆ. ಅದನ್ನು ತಮ್ಮ ಆಲೋಚನೆ, ನಡವಳಿಕೆ ಮತ್ತು ಬದುಕು ಹಾಗೂ ಬೋಧನೆಗಳ ಮೂಲಕ ತೋರುವ ಮುಹಮ್ಮದ್ ನಿಸ್ಸಂಶಯವಾಗಿ ಅಚ್ಚರಿಯ ಒಂದು ಮಹೋನ್ನತ ಮಾದರಿ. ಯಾರೊಬ್ಬರು ಮುಸಲ್ಮಾನರಾಗಿರಲಿ, ಅಲ್ಲದಿರಲಿ; ಯಾರೊಬ್ಬರ ಬದುಕಿನ ನೈತಿಕತೆಯ ಗುಣಮಟ್ಟವನ್ನು ಉತ್ತಮಗೊಳಿಸಿಕೊಳ್ಳಲು ಅವರ ಜೀವನದ ಸಂಗತಿಗಳ ಅಧ್ಯಯನ ಮತ್ತು ಅವರು ಹೇಳುವ ಮಾತುಗಳ ಸಾಂದರ್ಭಿಕ ಸ್ಮರಣೆಗಳು ತಾತ್ವಿಕ ಊರುಗೋಲಾಗುತ್ತವೆ. ಮುಹಮ್ಮದರನ್ನು ಮುಸಲ್ಮಾನರಿಗೆ ಮತ್ತು ಇಸ್ಲಾಮಿಗೆ ಮಾತ್ರ ಸೀಮಿತಗೊಳಿಸಿನೋಡುವುದು ಅವರ ವ್ಯಕ್ತಿತ್ವ ಅಧ್ಯಯನಕ್ಕೆ ಚ್ಯುತಿ.

ಪಾರದರ್ಶಕವಾದ ನಿಷ್ಕಳಂಕ ಮತ್ತು ಪರಿಪೂರ್ಣ ವ್ಯಕ್ತಿತ್ವದ ಮಾದರಿ ಅವರದು. ವಿನಯಶೀಲತೆ, ಸಮಚಿತ್ತತೆ, ಪೂರ್ಣಪ್ರಜ್ಞೆ, ಕ್ಷಮಾಗುಣ, ಸಹನೆ, ಔದಾರ್ಯ, ನ್ಯಾಯಸಮ್ಮತ, ಪ್ರಾಮಾಣಿಕತೆ ಮತ್ತು ಸಂಪೂರ್ಣ ಸ್ವಾರ್ಥರಹಿತ ಜೀವನದ ನಿದರ್ಶನಗಳೇ ಅವರ ಬದುಕು ಮತ್ತು ಬೋಧನೆಗಳಲ್ಲಿ ಅನಾವರಣಗೊಳ್ಳುವುದು.

ಅಧ್ಯಯನದ ಮೂಲಕ ಅವರನ್ನು ಅರಿತಿರುವಾಗ, ನಮ್ಮ ಬದುಕಿನ ಯಾವುದೇ ಹಂತದಲ್ಲಿ, ಹೆಜ್ಜೆಯಲ್ಲಿ, ಪ್ರಸಂಗಗಳಲ್ಲಿ “ಈ ಸಮಯದಲ್ಲಿ, ಈ ಸಂದರ್ಭಕ್ಕೆ ಪ್ರವಾದಿ ಮುಹಮ್ಮದರು ಮಾದರಿ ಅಥವಾ ಬೋಧನೆ ಹೇಗೆ ಅನ್ವಯಿಸಿಕೊಳ್ಳಬಹುದು” ಎಂಬ ಆಲೋಚನೆಯೇ ಸಾಕು, ನಮ್ಮ ಗುಣಮಟ್ಟದ ನಿರ್ವಹಣೆಯನ್ನು ಅಲ್ಲಿ ಎದುರು ನೋಡಲು ಸಾಧ್ಯ. ಅತಿಕ್ರಮಣವಲ್ಲದ ಮೃದು ಸಾಮಿಪ್ಯದ, ನಸುನಗೆಯ ಮುಹಮ್ಮದರು ಎದೆಯಲ್ಲಿ ಸದಾ ಜೀವಂತ.
ಪ್ರವಾದಿ ಮುಹಮ್ಮದ್ ಅವರ ಸಂಗಾತಿಗಳು ದಾಖಲಿಸಿರುವಂತೆ, ಅವರ ಜೊತೆಗಾರರ ಜೊತೆಯಲ್ಲಿರುವಾಗಲೂ ಕೂಡಾ ಕಾಲನ್ನು ಚಾಚಿ ಕುಳಿತುಕೊಳ್ಳುತ್ತಿರಲಿಲ್ಲ. ಯಾರಿಗೇ ಹಸ್ತಲಾಘವಕ್ಕೆ ಕೊಟ್ಟ ಕೈಯನ್ನು ತಾವೇ ಮೊದಲಾಗಿ ಎಳೆದುಕೊಳ್ಳುತ್ತಿರಲಿಲ್ಲ.

ಮಕ್ಕಾದ ಮೇಲಿನ ವಿಜಯದ ತರುವಾಯ ಮುಹಮ್ಮದರು ನಗರವನ್ನು ಪ್ರವೇಶಿಸುವಾಗ ಒಂಟೆಯ ಮೇಲೆ ಕುಳಿತಿದ್ದ ಅವರು ಅಲ್ಲಾಹನಿಗೆ ಕೃತಜ್ಞತಾ ಪೂರ್ವಕವಾಗಿ ತಲೆಯನ್ನು ತಗ್ಗಿಸಿದ್ದ ಅವರು ಅದೆಷ್ಟು ಬಾಗಿದ್ದರೆಂದರೆ, ಒಂಟೆಯ ಕುತ್ತಿಗೆಯ ಹಿಂಬದಿಯನ್ನು ತಗಲುವಷ್ಟು! ವ್ಯಕ್ತಿಗತವಾದ ಅಹಂಕಾರದ ಕಾರಣಕ್ಕಾಗಿ ಎಂದಿಗೂ, ಯಾರ ಮೇಲೂ ಅದೆಷ್ಟೇ ಸಮಸ್ಯೆಗಳನ್ನು ಕೊಟ್ಟಿದ್ದರೂ ಸೇಡು ತೀರಿಸಿಕೊಳ್ಳುವ ಕಿಂಚಿತ್ತೂ ಧೋರಣೆ ಹೊಂದಿರಲಿಲ್ಲ ಮತ್ತು ‘ನಾನು’ ಎಂದ ಅಹಂಭಾವಕ್ಕೆ ಎಲ್ಲಿಯೂ ಆಸ್ಪದವನ್ನೇ ಕೊಡಲಿಲ್ಲ. ತಮ್ಮೆಲ್ಲಾ ಕೆಲಸ, ವರ್ತನೆ ಮತ್ತು ವ್ಯವಹಾರಗಳಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆಯನ್ನು ಕಿಂಚಿತ್ತೂ ಬಿಟ್ಟುಕೊಡಲಿಲ್ಲ.

ಕುಲೀನ ಮನೆತನದ ಹೆಣ್ಣುಮಗಳೊಬ್ಬಳು ಕಳ್ಳತನದ ಅಪರಾಧದಲ್ಲಿ ಶಿಕ್ಷೆಅನುಭವಿಸಬೇಕಾಗಿ ಬಂದಾಗ, “ನಮ್ಮ ಮಗಳು ಫಾತೀಮಾ ಆಗಿದ್ದರೂ ಕೂಡಾ ಇದೇ ಕಾನೂನಿನ ಕ್ರಮವನ್ನು ಎದುರಿಸಬೇಕಿತ್ತು” ಎನ್ನುವರು ಪ್ರವಾದಿ ಮುಹಮ್ಮದರು. ಅದು ಸಮಾಜದ ನೈತಿಕ ವ್ಯವಸ್ಥೆಯ ವಿಷಯದಲ್ಲಿ. ಆದರೆ ಅದೇ ತಮ್ಮ ವಿಷಯಕ್ಕೆ ಬಂದಾಗ ಶತ್ರುಗಳನ್ನು ತಾವು ಕ್ಷಮಿಸಿಬಿಡುತ್ತಿದ್ದರು. ತಮ್ಮನ್ನು ಮತ್ತು ತಮ್ಮ ಅನುಯಾಯಿಗಳನ್ನು ಸತತವಾಗಿ ಕಿರುಕುಳಕೊಡುತ್ತಿದ್ದವರನ್ನೂ ಮೆಕ್ಕಾದ ವಿಜಯದ ನಂತರ ಕ್ಷಮಿಸಿದ್ದರು.

ಅವರ ಅನುಯಾಯಿಗಳು ತಮ್ಮನ್ನು ಆರಾಧಿಸುವಂತಹ ವಿಷಯಕ್ಕೆ ಎಂದಿಗೂ ಆಸ್ಪದವನ್ನು ಕೊಡಲಿಲ್ಲ. ಅಲ್ಲಾಹನಿಗೆ ಮಾತ್ರ ಆರಾಧನೆಯು ಮೀಸಲು ಎಂದ ಅವರು ಹೇಳುತ್ತಿದ್ದದ್ದು, “ನಾನು ಅಲ್ಲಾಹನ ಬರೀ ಸೇವಕನೊಬ್ಬ.” ತಮ್ಮನ್ನು ತಾವು ಗುರುತಿಸಿಕೊಂಡಿದ್ದು ದೇವತಾ ಮನುಷ್ಯನಾಗಿ ಅಲ್ಲ. ಬರಿಯ ಮಾರ್ಗದರ್ಶಕ, ಅಲ್ಲಾಹನ ಸಂದೇಶ ವಾಹಕ.
“ಮಾನವರೇ, ನಾನು ನಿಮ್ಮೆಲ್ಲರ ಪಾಲಿಗೆ ಅಲ್ಲಾಹನ ದೂತನಾಗಿರುವೆನು. ಆಕಾಶಗಳ ಮತ್ತು ಭೂಮಿಯ ಅಧಿಪತ್ಯವು ಅವನಿಗೆ ಸೇರಿದೆ. ಅವನ ಹೊರತು ಬೇರೆ ದೇವರಿಲ್ಲ. ಅವನೇ ಜೀವಂತಗೊಳಿಸುವವನು ಮತ್ತು ಮರಣ ನೀಡುವವನು. ನೀವೀಗ ಅಲ್ಲಾಹನಲ್ಲೂ ಆತನ ದೂತನಲ್ಲೂ ನಂಬಿಕೆ ಇಡಿರಿ. ಅವರು ನಿರಕ್ಷರಿ ಪ್ರವಾದಿಯಾಗಿದ್ದು, ಅಲ್ಲಾಹನಲ್ಲಿ ಹಾಗೂ ಅವನ ವಚನಗಳಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ. ಮಾರ್ಗದರ್ಶನ ಪಡೆಯಲಿಕ್ಕಾಗಿ ನೀವು ಅವರನ್ನು ಅನುಸರಿಸಿ.” (ಕು: 7/158)

ಮನುಷ್ಯನ ಹೊರತು ನೈಸರ್ಗಿಕವಾಗಿರುವ ಉಳಿದೆಲ್ಲಾ ಜೀವಿಗಳು ಸಹಜವಾಗಿಯೇ ಇರುತ್ತವೆ. ಆದರೆ ಮನುಷ್ಯನೊಬ್ಬನಿಗೆ ಮಾತ್ರ ಮನಸ್ಸು ಎಂಬುವುದಿದ್ದು, ಅದು ಆಲೋಚನೆ ಎಂಬುದನ್ನು ಮಾಡಿ, ವಿಷಯಗಳನ್ನು ಮತ್ತು ಪ್ರಸಂಗಗಳನ್ನು ವಿಶ್ಲೇಷಿಸುವ ಮತ್ತು ವಿವೇಚಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಇದರಿಂದಾಗಿಯೇ ತನ್ನ ಇಷ್ಟಕ್ಕೆ ತಕ್ಕಂತೆ, ತನ್ನ ಅನುಕೂಲಕ್ಕೆ ತಕ್ಕಂತೆ, ತನ್ನ ಸ್ವಾರ್ಥ ಮತ್ತು ಅಹಂಕಾರಕ್ಕೆ ತಕ್ಕಂತೆ ವಿವೇಚಿಸುತ್ತಾ ಇಡೀ ವಿಶ್ವದ ವಿದ್ಯಮಾನಗಳನ್ನೇ ವಿವರಿಸುತ್ತಾನೆ. ಹೃದಯ ಮತ್ತು ದೇಹಗಳು ಪ್ರಕೃತಿ ಸಹಜವಾಗಿದ್ದರೆ, ಮನಸ್ಸು ಮಾತ್ರ ಕೃತಕತೆಯನ್ನು ಸೃಷ್ಟಿಸುತ್ತದೆ. ಕೃತಕತೆ ಎಂಬುದು ನೈಸರ್ಗಿಕವಲ್ಲದೇ ಇರುವ ಕಾರಣದಿಂದ ವ್ಯಕ್ತಿಯಿಂದ ವ್ಯಕ್ತಿಗೆ, ಸಮೂಹದಿಂದ ಸಮೂಹಕ್ಕೆ ಬದಲಾಗುತ್ತಾ ಹೋಗಿ ಸಂಘರ್ಷಕ್ಕೆ, ದೌರ್ಜನ್ಯಕ್ಕೆ ಮತ್ತು ಹುಸಿ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಯಾವ ವಿಷಯಗಳು ಮನಸ್ಸಿನ ಸೃಷ್ಟಿಯಾಗಿರುತ್ತವೆಯೋ ಅವುಗಳೆಲ್ಲವೂ ಕೂಡಾ ಕೃತಕತೆಯನ್ನು ಹೊಂದಿರುವ ಸಾಧ್ಯತೆಯೇ ಅತಿ ಹೆಚ್ಚು. ಹಾಗಿರುವಾಗ ಇಡೀ ವಿಶ್ವದ ಪ್ರಕೃತಿಯ ಸೃಷ್ಟಿಯ ಕಾರಣ ಅಂದರೆ ದೇವರು ಈ ವೈಪರಿತ್ಯವನ್ನು ಸಹಿಸಲಾಗದು. ತಾತ್ವಿಕ ಮತ್ತು ಆಧ್ಯಾತ್ಮಿಕ ವಿವರಣೆಯಂತೆ ಪ್ರವಾದಿಗಳ ಬಹು ದೊಡ್ಡ ಹೊಣೆಗಾರಿಕೆಯೆಂದರೇನೇ ದೇವರ ದೃಷ್ಟಿಯಂತೆ, ಅವನ ಇಚ್ಛೆಯಂತೆ ಮನುಷ್ಯನೂ ಕೂಡಾ ಬಾಳುವುದು. ಅದಕ್ಕಾಗಿ ಅವನನ್ನು ಕ್ರಮಕ್ಕೊಳಪಡಿಸಲು ನೈತಿಕ ಮತ್ತು ತಾತ್ವಿಕ ಕರಣಗಳಿವೆ.

ಅದರಂತೆಯೇ ಪ್ರವಾದಿ ಮುಹಮ್ಮದರೂ ಕೂಡಾ ಮನುಷ್ಯನ ನಡವಳಿಕೆ, ಬದುಕುವ ರೀತಿ ಮತ್ತು ತನ್ನನ್ನು ತಾನು ಹಾಗೂ ಇತರ ಜೀವಿಗಳನ್ನು ನೋಡುವ ರೀತಿ; ಎಲ್ಲವೂ ಅಲ್ಲಾಹನು ಬಯಸುವ ರೀತಿಯದ್ದಾಗಿರಲಿ ಎಂದು ತಾವೇ ಒಂದು ಸುಂದರ ಮಾದರಿಯಾಗಿ ತೋರಿದರು.

ಖಂಡಿತವಾಗಿಯೂ ಅಲ್ಲಾಹನ ದೂತರಲ್ಲಿ ನಿಮಗೆ ಅತ್ಯುತ್ತಮ ಆದರ್ಶವಿದೆ. ಅಲ್ಲಾಹನ ಕುರಿತು ಮತ್ತು ಆ ಅಂತಿಮದಿನದ ಕುರಿತು ಶುಭ ನಿರೀಕ್ಷೆ ಉಳ್ಳವರಿಗೆ ಮತ್ತು ಅಲ್ಲಾಹುವನ್ನು ಪದೇ ಪದೇ ಸ್ಮರಿಸುವವರಿಗೆ (ಇದು ಅನ್ವಯಿಸುತ್ತದೆ.) (ಕು: 33.21)

ಹಾಗಾಗಿಯೇ ಇಸ್ಲಾಮ್ ಒಂದು ಮಾರ್ಗ. ಅಲ್ಲಾಹನು ಇಚ್ಛಿಸುವ ಗುರಿಯನ್ನು ಮುಟ್ಟಲು ಒಂದು ಅನುಗ್ರಹಿತ ಮಾರ್ಗ. ಹಾಗಾಗಿಯೇ ಮತ್ತೆ ಮತ್ತೆ ನಾವು ನೆನಪಿಸಿಕೊಳ್ಳಬೇಕಾಗಿರುವುದು ಮುಹಮ್ಮದರು ಬರಿಯ ಮುಸ್ಲೀಮರಿಗಲ್ಲ, ಎಲ್ಲರಿಗೂ.
ಕುರಾನ್ ಒಂದು ಮಾರ್ಗದರ್ಶಿ ಕೈಪಿಡಿ. ಅನುಗ್ರಹಿತ ಮಾರ್ಗದಲ್ಲಿ ನಡೆಯಲು ಮಾಡಬೇಕಾದ ಕೆಲಸಗಳು, ತೆಗೆದುಕೊಳ್ಳಬೇಕಾದ ನಿರ್ಧಾರಗಳು, ರೂಢಿಸಿಕೊಳ್ಳಬೇಕಾದ ಅಭ್ಯಾಸಗಳು, ತಳೆಯ ಬೇಕಾದ ನಿಲುವುಗಳು, ಸತ್ಯ ಮತ್ತು ಮಿಥ್ಯಗಳನ್ನು ಬೇರ್ಪಡಿಸಿ ನೋಡುವ ವಿವೇಕಗಳು, ಹಿಂದೆ ಸಾಧಿಸಿದವರ ಉದಾಹರಣೆಗಳು, ಎಡವಿರುವವರ ವೈಫಲ್ಯಗಳು, ಸಾಧಿಸಿರುವವರ ದೃಷ್ಟಾಂತಗಳು, ಪ್ರಕೃತಿಯಿಂದ, ಕೀಟ ಮತ್ತು ಪ್ರಾಣಿಗಳ ಮಾದರಿಗಳು; ಎಲ್ಲವನ್ನೂ ಪ್ರವಾದಿ ಮುಹಮ್ಮದರು ಕ್ರೋಢೀಕರಿಸಿದ್ದಾರೆ. ಯಾವುದೇ ಒಬ್ಬ ಮನುಷ್ಯ ತನ್ನ ಮನೆಯಲ್ಲಿ, ಸಮಾಜದಲ್ಲಿ, ಆರ್ಥಿಕ ಮತ್ತು ರಾಜಕೀಯ ನಿಲುವುಗಳಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದರ ಸ್ಪಷ್ಟ ನಿರ್ದೇಶನಗಳಿವೆ. ಯಾವವು ನಂಬಲರ್ಹ, ಯಾವುದನ್ನು ನಂಬಕೂಡದು ಇವುಗಳ ಬಗೆಯೂ ಸ್ಪಷ್ಟ ಧೋರಣೆ. ಒಟ್ಟಾರೆ ಮನುಷ್ಯ ಮತ್ತು ದೇವರ ನಡುವಿನ ಒಂದು ದಿವ್ಯವಾದ ಮಾರ್ಗವದಾಯಿತು. ಕುರಾನಿನಲ್ಲಿ ನೀಡಿದ ಬೋಧನೆಗಳನ್ನೆಲ್ಲಾ ತಾವೇ ಬಾಳಿ ಬದುಕಿ ಮಾದರಿಯಾಗಿದ್ದು ಪ್ರವಾದಿ ಮುಹಮ್ಮದರು.

ಪ್ರವಾದಿ ಮುಹಮ್ಮದರ ಜೀವಿತಾವಧಿಯಲ್ಲಿ ಮತ್ತು ಮೊದಲು ಕೂಡಾ ಅರಬ್ಬರಲ್ಲಿ ಪ್ರತಿಕಾರವೆನ್ನುವುದು ಬಹಳ ಸಹಜವಾದ ವಿಷಯ. ಸೇಡು ತೀರಿಸಿಕೊಳ್ಳದವರು ಮನುಷ್ಯರೇ ಅಲ್ಲ ಅಥವಾ ಹಾಗೆ ಸೇಡು ತೀರಿಸಿಕೊಳ್ಳದೇ ಇರುವುದು ಘನತೆಗೆ ತಕ್ಕುದ್ದಲ್ಲ ಎಂಬಂತೆ ಅವರ ಧೋರಣೆ. ಯಾವುದೇ ಎದುರಾಳಿಯ ಪಂಗಡದಿಂದ ಅಥವಾ ಸಮೂಹದಿಂದ ಅಥವಾ ವ್ಯಕ್ತಿಯಿಂದಾದರೂ ತಮ್ಮಲ್ಲಿ ಶತ್ರುತ್ವ ಹುಟ್ಟುವಂತಹ ಸಂಗತಿ ಜರುಗಿತೆಂದರೆ ಅವರು ರಕ್ತಪಾತದ ಮೂಲಕ ಸೇಡು ತೀರಿಸಿಕೊಳ್ಳುವುದು ಏನೇನೂ ವಿಶೇಷವೇ ಅಲ್ಲ. ಆದರೆ ಅವರ ನಡುವೆ ಹುಟ್ಟಿ, ಬೆಳೆದು, ಅವರೆಲ್ಲಾ ಚಟುವಟಿಕೆಗಳನ್ನು ನೇರವಾಗಿ ಸಾಕ್ಷೀಕರಿಸುತ್ತಾ ಇದ್ದ ಮುಹಮ್ಮದರು ಅವರ ಪ್ರಭಾವಕ್ಕೆ ಸಹಜವಾಗಿ ಒಳಗಾಗಬೇಕಾಗಿತ್ತು. ಆದರೆ ಅವರ ಮನಸ್ಸು ವಾಲಿದ್ದು ಸತ್ಯದ ಕಡೆಗೆ, ಪರಮ ಸತ್ಯದ ಕಡೆಗೆ, ಅಲ್ಲಾಹನ ಕಡೆಗೆ. ಅಲ್ಲಾಹನ ಗುಣವೇ ಶಾಂತಿ, ಕರುಣಾಳು. ಹಾಗಾಗಿಯೇ ದೇವರ ಗುಣಗಳನ್ನು ತಮ್ಮ ಚಟುವಟಿಕೆಗಳಲ್ಲಿ ಪ್ರತಿಫಲಿಸುತ್ತಿದ್ದರು.

ಮುಹಮ್ಮದ್ ಅವರು ವ್ಯಾಪಾರಿಯಾಗಿದ್ದು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದ ದಿನಗಳಲ್ಲಿ ಅವರು ಸತ್ಯಸಂಧ ಮತ್ತು ಪ್ರಾಮಾಣಿಕರಾಗಿದ್ದರು ಎಂಬ ಹೆಸರು ಪಡೆದಿದ್ದರೂ ತಮ್ಮ ವ್ಯಾಪಾರ ಮತ್ತು ವ್ಯವಹಾರಗಳಿಂದ ಶ್ರೀಮಂತರಾಗುವ ದೃಷ್ಟಿಯನ್ನು ಹೊಂದಿಲ್ಲದ ಇವರನ್ನು ಅವರ ಸಂಬಂಧಿಗಳು ಮತ್ತು ಇತರ ವ್ಯಾಪಾರಿಗಳು ಆಡಿಕೊಳ್ಳುತ್ತಿದ್ದುದ್ದುಂಟು. ಏಕೆಂದರೆ ಇವರ ವ್ಯಕ್ತಿ ವಿಶೇಷಣಗಳಿಂದಾಗಿ, ವ್ಯಾಪಾರದ ಕೌಶಲ್ಯಗಳಿಂದಾಗಿ ಉತ್ತಮ ವ್ಯಾಪಾರವಾಗುತ್ತಿದ್ದರೂ ಗಳಿಸುತ್ತಿದ್ದ ಲಾಭವು ಇತರರಿಗೆ ಹೋಲಿಸಿದರೆ ಕಡಿಮೆಯೇ. ತಮಗೆ ಕಡಿಮೆ ಆದಾಯವಾಗಿದ್ದರೂ ಫುಜ್ಜಾರ್ ಯುದ್ಧದಲ್ಲಿ ಮಡಿದವರ ಚಿಕ್ಕ ಚಿಕ್ಕ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಕೃತಜ್ಞತೆಯನ್ನೂ ಬಯಸದೇ ಜೀವನೋಪಯೋಗಿ ವಸ್ತುಗಳನ್ನು ಕೊಟ್ಟು ಬಂದುಬಿಡುತ್ತಿದ್ದರು. ಅವರು ಹಾಗೆ ಬಂದು ಕೊಡುವುದು ನಿತ್ಯಕ್ರಮವೇ ಆಗಿತ್ತು. ಇತರರು ಅಂದುಕೊಳ್ಳುತ್ತಿದ್ದದ್ದು ಮಾತ್ರ ಮುಹಮ್ಮದ್ ಸಂಪತ್ತಿನ ಬೆಲೆಯನ್ನು ತಿಳಿಯದವನು. ವ್ಯರ್ಥವಾಗಿ ವಿಧವೆಯರಲ್ಲಿ ಮತ್ತು ಅನಾಥರಲ್ಲಿ ವ್ಯಯ ಮಾಡುತ್ತಿದ್ದಾನೆ. ಒಂದು ವೇಳೆ ಇಂತವನ್ನು ಬಿಟ್ಟಿದ್ದರೆ ಇಡೀ ಮಕ್ಕಾದಲ್ಲಿಯೇ ಅತಿ ದೊಡ್ಡ ಸಾಹುಕಾರನಾಗುತ್ತಿದ್ದ ಎಂಬುದು ಉಳಿದವರ ಲೆಕ್ಕಾಚಾರ.

ಆದರೆ ಗಳಿಸಿದ್ದನ್ನು ಉಳಿಸಿ ಜಿಪುಣತನದಿಂದ ಕಾಪಾಡುವುದು ಮುಹಮ್ಮದರ ಉದ್ದೇಶವಾಗಿರಲಿಲ್ಲ. ಬದಲಿಗೆ, ನಿರ್ಗತಿಕರಲ್ಲಿ, ಅನಾಥರಲ್ಲಿ ಮತ್ತು ಅಸಹಾಯಕ ಸ್ಥಿತಿಗಳಲ್ಲಿ ಇರುವ ವ್ಯಕ್ತಿಗಳಿಗೆ ಹಂಚಿಕೊಳ್ಳುವುದು ಅವರ ಗುಣವಾಗಿತ್ತು. ಇವರು ಬರುವುದನ್ನೇ ಕಾಯುತ್ತಿದ್ದು ಅವರಿಂದ ಜೀವನಾಧಾರ ವಸ್ತುಗಳನ್ನು ಪಡೆಯುವುದು ಅಲ್ಲಿ ಸಂತ್ರಸ್ತರ ವಾಡಿಕೆಯಾಗಿತ್ತು. ಮುಹಮ್ಮದರದ್ದು ಗುಪ್ತದಾನ, ಯಾರ ಮೆಚ್ಚುಗೆಗೂ ಅಲ್ಲ, ಯಾವ ದಾಕ್ಷಿಣ್ಯಕ್ಕೂ ಅಲ್ಲ. ಎರಡೇ ಕಾರಣ ಒಂದು ಹಾಗಿರುವುದೇ ಮುಹಮ್ಮುದರು ತಮ್ಮನ್ನು ರೂಪಿಸಿಕೊಂಡಿರುವ ರೀತಿಯಾಗಿತ್ತು. ಮತ್ತೊಂದು ಇದಾಗುತ್ತಿದ್ದದ್ದು ಪರಮ ದಯಾಳುವೂ ಕರುಣಾನಿಧಿಯೂ ಆದ ಅಲ್ಲಾಹನಿಗೊಸ್ಕರ.

ಮಾಡಿದೆನೆಂಬುದು ಮನದಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲಿಲ್ಲದಿದ್ದೆಡೆ
ಬೇಡಿತ್ತನೀವ ನಮ್ಮ ಕೂಡಲ ಸಂಗಮದೇವ.

ಝಕಾತ್, ಕೊಡುವುದರ ಮೂಲಕ, ನಾನು ಮಾಡುತ್ತಿದ್ದೇನೆ ಎಂಬ ಅಹಂಕಾರ ಇಲ್ಲದೇ, ಅಲ್ಲಾಹನ ಆದೇಶದ ಅನುಸಾರ ಅವನೇ ತಮಗೆ ಕೊಟ್ಟಿರುವ ತಮ್ಮ ದುಡಿಮೆ ಅಥವಾ ಐಶ್ವರ್ಯದಿಂದ ನಿಶ್ಚಿತ ಮೊತ್ತವನ್ನು ಕೊಡುವುದು. ಇದು ಯಾತ್ರಿಕರ, ಬಡವರ, ದುಃಖಿಗಳ ತಾಪತ್ರಯಗಳನ್ನು ಹೋಗಲಾಡಿಸಲು, ಅಥವಾ ಅವರ ಸಮಸ್ಯೆಯನ್ನು ನಿವಾರಿಸಲು, ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವವರ ಸಾಲ ತೀರಿಸುವ ಮೂಲಕ ಆ ಹೊರೆಯನ್ನು ಅವರಿಂದ ಇಳಿಸುವುದು ಸಾಧ್ಯವಾಗುತ್ತದೆ.

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ,
ಮಾಡುವ ನೀಡುವ ನಿಜಗುಣವುಳ್ಳಡೆ
ಕೂಡಿಕೊಂಡಿರ್ಪ ನಮ್ಮ ಕೂಡಲಸಂಗಮದೇವ.

ಕೊಡುವಿಕೆಯಲ್ಲಿಯೂ ಶುದ್ಧವಾದ ಮಾದರಿ ಮುಹಮ್ಮದರದು.
ಒಮ್ಮೆ ಹಜರತ್ ಅಬು ಹುರೈರಾ ಅವರಿಗೆ ವಿಪರೀತ ಹಸಿವಾಗುತ್ತಿತ್ತಂತೆ. ನಬಾವಿ ಮಸೀದಿಯಿಂದ ಹೊರಗೆ ಹೊರಟರು. ಯಾರಾದರೂ ಸಹಾಬಿಗಳು ತಿನ್ನಲೋ ಅಥವಾ ಕುಡಿಯಲೋ ಏನಾದರೂ ಕೊಡಬಹುದೆಂಬ ವಿಶ್ವಾಸ ಅವರಿಗೆ. ಮೊದಲು ಅಬೂಬಕರ್ ಎದುರಾದರು, ಸಲಾಂ ಹೇಳಿದರು, ಮುಂದೆ ನಡೆದರು. ನಂತರ ಉಮರ್ ಎದುರಾದರು. ಅವರೂ ಸಲಾಂ ಹೇಳಿ ಮುಂದೆ ನಡೆದರು. ನಂತರ ಪ್ರವಾದಿ ಮುಹಮ್ಮದರು ಕಂಡರು. ಅವರು ಸಲಾಂ ಹೇಳಿ ಅಬು ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋದರು. ಮನೆಯಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಹಾಲಿತ್ತು. ಮುಹಮ್ಮದರು ಅಬು ಅವರಿಗೆ ಎಪ್ಪತ್ತು ಜನ ವಿದ್ಯಾರ್ಥಿಗಳ ಜೊತೆಗೆ ಹಸಿವನ್ನು ನೀಗಿಸಿದ ಪ್ರತೀತಿ. ಮುಹಮ್ಮದರು ಮೂರನೆಯ ಬಾರಿ ಮತ್ತಷ್ಟು ತೆಗೆದುಕೊಳ್ಳಿರೆಂದಾಗ, “ಆಯಿತು ರಸುಲ್ಲುಲ್ಲಾಹ್, ನನ್ನ ಹೊಟ್ಟೆಯಲ್ಲಿ ಇನ್ನು ಜಾಗವಿಲ್ಲ” ಎಂದರು ಅಬು ಹುರೈರಾ.

ಕೊಡುವಿಕೆ ಎನ್ನುವುದು ಅಲ್ಲಾಹನ ಇಚ್ಛೆಯೇ ಆಗಿದ್ದು ಹೀಗೆ ಝಕಾತ್ ಕೊಡುವುದರಲ್ಲಿ ನಮ್ರತೆ ಇದೆ. ತನ್ನ ಮನಸ್ಸು, ಹೃದಯವನ್ನು ಶುದ್ಧಿಗೊಳಿಸಿಕೊಳ್ಳುವ ಪ್ರಕ್ರಿಯೆ ಭಾಗವಾಗಿದ್ದು, ತನ್ನದು, ತಾನು ಯಾರಿಗೂ ಕೊಡುವುದಿಲ್ಲ, ಅಥವಾ ನಾನು ಗಳಿಸಿದ್ದೆಲ್ಲಾ, ಕೂಡಿಡುವುದೆಲ್ಲಾ ತನ್ನದೇ ಎನ್ನುವುದಿಲ್ಲ. ಇಂತಹ ಅದ್ವಿತೀಯವಾದ ಕೊಡುವಿಕೆಯ ಸಾಧನೆ ಎಂದರೆ ಇಂದು ಇಡೀ ಜಗತ್ತಿನಲ್ಲಿ ದಾರ್ಮಿಕವಾಗಿ ಕೊಡಲ್ಪಡುವ ಅತ್ಯಂತ ದೊಡ್ಡ ಮೊತ್ತದ ದಾನ ಎಂದರೆ ಅದು ಝಕಾತ್.

ಈ ಕೊಡುವಿಕೆ ನಾನಿಷ್ಟುಕೊಟ್ಟೆ, ಅಷ್ಟು ಮಾಡಿದೆ ಎಂದು ಜಂಭಪಡಲು ಅಲ್ಲ ಎನ್ನುವ ಮೇಲ್ಪಂಕ್ತಿ ಮುಹಮ್ಮದರು ಹಾಕಿಕೊಟ್ಟಿದ್ದಾರೆ. ಅಲ್ಲಾಹನಿಂದ ದೊರಕಿರುವ ಐಶ್ವರ್ಯದ ಒಂದು ಭಾಗವನ್ನು ಅಲ್ಲಾಹನ ದಾಸರಿಗೆ ತೆಗೆದಿಡದೇ ಹೋದರೆ ಆ ಸಂಪತ್ತು ಮಲಿನಗೊಳ್ಳುವುದು. ಅಷ್ಟರಮಟ್ಟಿಗೆ ಸಾಮಾಜಿಕ ಮತ್ತು ನೈತಿಕ ಸೂಕ್ಷ್ಮತೆಯನ್ನು ಝಕಾತ್ ಹೊಂದಿರುವುದು.

ಕೊಟ್ಟು ಕುದಿಯಲು ಬೇಡ, ಕೊಟ್ಟಾಡಿಕೊಳಬೇಡ
ಕೊಟ್ಟು ನಾ ಕೆಟ್ಟೆನೆನಬೇಡ, ಶಿವನಲ್ಲಿ
ಕಟ್ಟಿಹುದು ಬುತ್ತಿ ಸರ್ವಜ್ಞ

ಪ್ರವಾದಿ ಮುಹಮ್ಮದರ ಇಸ್ಲಾಂ ಅನುಸರಣೆ ಮತ್ತು ಪ್ರಚಾರಕ್ಕಾಗಿ ತೊಡಗಲು ಹೋದಾಗ ನಾನಾ ರೀತಿಗಳಲ್ಲಿ ಕಿರುಕುಳ, ಅಪಮಾನ, ಹಿಂಸೆ, ಅಪಹಾಸ್ಯಗಳನ್ನೆಲ್ಲಾ ಮಾಡಿದ್ದ ಜನರಿಂದ ತಮ್ಮನ್ನು ಮತ್ತು ಸತ್ಯವನ್ನು ರಕ್ಷಿಸಲು ಯುದ್ಧವನ್ನೇ ಮಾಡಬೇಕಾಗಿ ಬಂದರೂ, ಪ್ರವಾದಿಗಳು ತಮ್ಮ ವೈಯಕ್ತಿಕ ಅಹಮಿನ ಗೆಲುವನ್ನು ಸಂಭ್ರಮಿಸಲು ಯುದ್ಧ ಮಾಡಲೇ ಇಲ್ಲ. ಅದೂ ಕೂಡಾ ಅಲ್ಲಾಹನಿಗೆ ಮತ್ತು ಅವನ ಇಚ್ಛೆಗೆ ಶರಣಾಗಿರುವಂತಹ ಧಾರ್ಮಿಕ ಯುದ್ಧವೇ ಆಗಿತ್ತು. ಅದರಲ್ಲಿ ಮುಖ್ಯವಾದದ್ದು ಬದ್ರ್ ಯುದ್ಧ. ಇಸ್ಲಾಮನ್ನೇ ಇಲ್ಲವಾಗಿಸಲು ಬಂದಂತಹ ಕರಾಳ ಶಕ್ತಿಗಳನ್ನು ತಮ್ಮ ನೈತಿಕ ಮತ್ತು ಆಧ್ಯಾತ್ಮಿಕ ಬಲದಿಂದಲೇ ಸಶಕ್ತವಾಗಿ ಎದುರಿಸಿದ್ದ ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಗೆದ್ದಾಗ ಆ ಗೆಲುವು ತಮ್ಮದೆಂದು ಬೀಗಲಿಲ್ಲ. ಅಲ್ಲಾಹನಲ್ಲಿ ಅದೇ ವಿನಮ್ರತೆ, ಅದೇ ಶರಣಾಗತಿ.

ಯುದ್ಧ ಕೈದಿಗಳಾದವರನ್ನು ಪರಿಹಾರ ಧನವನ್ನು ಸ್ವೀಕರಿಸಿ ಬಿಟ್ಟುಬಿಡುವ ನಿರ್ಧಾರ ತೆಗೆದುಕೊಂಡಮುಹಮ್ಮದರು ತಮ್ಮ ಅನುಯಾಯಿಗಳೊಂದಿಗೆ ಪೂರ್ವಭಾವಿಯಾಗಿ ಚರ್ಚಿಸಿದ್ದರು. ಪರಿಹಾರ ಧನ ಕೊಡಲಾಗದವರು ಓದು ಬರಹ ಬಲ್ಲವರಾಗಿದ್ದರೆ ಮುಸ್ಲಿಮ್ ಮಕ್ಕಳಿಗೆ ಓದು ಬರಹ ಕಲಿಸಿ ಬಂಧಮುಕ್ತರಾಗಿ ಹೋಗಬಹುದಿತ್ತು. ಕೊನೆಗೆ ಹಣವನ್ನೂ ಕೊಡಲಾಗುತ್ತಿಲ್ಲ, ಅಥವಾ ಕಲಿಸುವಂತಹ ಸೇವೆಯನ್ನೂ ನೀಡಲು ಶಕ್ತರಲ್ಲ ಎಂದಾದರೆ ಬರಿಯ ಔದಾರ್ಯದಿಂದಲೇ ಅವರನ್ನು ಮುಕ್ತರನ್ನಾಗಿಸಿ ಮನೆಗೆ ಕಳುಹಿಸಲಾಗಿತ್ತು.
ಇದು ಯುದ್ಧದಲ್ಲಿ ಬಂಧಿತರಾದವರನ್ನು ಔದಾರ್ಯದ ಮುಹಮ್ಮದರು ನಡೆಸಿಕೊಂಡ ರೀತಿ.

ಮುಂದೆ ಉಹುದ್ ಯುದ್ಧದ ವೇಳೆ ಪ್ರವಾದಿ ಮುಹಮ್ಮದರ ಮುಖಕ್ಕೇ ಏಟು ಬಿದ್ದು ರಕ್ತ ಹರಿಯುತ್ತಿದ್ದಾಗಲೂ ಅವರು ವ್ಯಕ್ತಿಗತವಾದಂತಹ ಕೋಪದಲ್ಲಿ ಕೆರಳಲಿಲ್ಲ. ಬದಲಾಗಿ ಪ್ರಾರ್ಥನೆ ಮತ್ತು ಅಲ್ಲಾಹನಿಗೆ ಕಿವಿಗೊಡುವುದೇ ಅವರ ಒಲವು ನಿಲುವಿನ ಪ್ರಕ್ರಿಯೆಯಾಗಿತ್ತು.

“ಓ ಅಲ್ಲಾಹ್, ನನ್ನ ಜನಾಂಗಕ್ಕೆ ಸನ್ಮಾರ್ಗವನ್ನು ತೋರು. ತಾವೇನು ಮಾಡುತ್ತಿದ್ದೇವೆಂದು ಅವರಿಗೆ ತಿಳಿದಿಲ್ಲ ಅಥವಾ ಅವರನ್ನು ಕ್ಷಮಿಸಿಬಿಡು.”
ಪ್ರವಾದಿಯವರ ಅನುಯಾಯಿಗಳಾಗಿದ್ದ ಸಹಾಬಿಗಳು ಆ ಶತ್ರುಗಳಿಗೆ ಶಾಪ ಕೊಡಲು ಹೇಳಿದಾಗ,
“ನಾನು ಯಾರನ್ನೂ ಶಪಿಸಲಿಕ್ಕಾಗಿ ನೇಮಿಸಲ್ಪಟ್ಟವನಲ್ಲ. ನನ್ನನ್ನು ಒಳಿತು ಕರುಣೆಯ ಸಂದೇಶವಾಹಕರಾಗಿ ನಿಯೋಗಿಸಲಾಗಿದೆ” ಎಂದು ತಮ್ಮ ಈ ಜನ ಅರಿವಿಲ್ಲದೇ ಮಾಡುತ್ತಿರುವ ವಿಷಯಗಳನ್ನು ಕ್ಷಮಿಸುವುದಕ್ಕಾಗಿ ಪ್ರಾರ್ಥಿಸುವರೇ ಹೊರತು ಅಲ್ಲಿ ಪ್ರತಿಕಾರವೆಂಬುದೇ ಇಲ್ಲ.
ತಮ್ಮನ್ನು ಜರಿದರೂ ಕೂಡಾ ಅವರನ್ನು ನಕಾರಾತ್ಮಕವಾಗಿ ನೋಡದೇ ಸೌಜನ್ಯ ಮತ್ತು ಕ್ಷಮಾಶೀಲತೆಯಿಂದಲೇ ನೋಡುವ ಮುಹಮ್ಮದರ ಗುಣವನ್ನು ನಿರೂಪಿಸುವ ಒಂದು ಸಂಗತಿ.
ಮುಹಮ್ಮದರಿಗೆ ಸಾಲ ಕೊಟ್ಟಿದ್ದ ಯಹೂದಿಯೊಬ್ಬನು ಅವರ ಬಳಿ ವಸೂಲಿಗೆಂದು ಬಂದಿದ್ದನು. ಐಷಾರಾಮಿ ಜೀವನ ನಡೆಸದ, ಸರಳಾತಿ ಸರಳ ಬದುಕು ನಡೆಸುತ್ತಿದ್ದ ಮುಹಮ್ಮದರು ಸಾಲ ಎಂದು ಮಾಡುತ್ತಿದ್ದದ್ದು ತಮ್ಮ ವೈಭವಕ್ಕಂತೂ ಅಲ್ಲ. ಯಾರೋ ದೀನರ, ನೊಂದರವರ ಕಷ್ಟಗಾಲದಲ್ಲಾಗಲು.
ಈ ಯಹೂದಿಯು ಇನ್ನೂ ಸಾಲ ತೀರಿಸಲು ನೀಡಿದ್ದ ಗಡುವು ಮೂರು ದಿನವಿದ್ದಂತೆಯೇ ಬಂದು ಹಣಕ್ಕಾಗಿ ಒತ್ತಾಯಿಸುವುದಲ್ಲದೇ ಒರಟಾಗಿ ನಡೆದುಕೊಳ್ಳುತ್ತಾ ಜೋರು ಮಾಡುತ್ತಿದ್ದ. ಆದರೆ ಮುಹಮ್ಮದರು ತಮ್ಮ ಗುಣ ಸ್ವಭಾವದ ಸಹಜತೆಯಿಂದಾಗಿ ಸೌಜನ್ಯ ಮತ್ತು ವಿನಯದಿಂದಲೇ ಉತ್ತರಿಸುತ್ತಿದ್ದರು.

ಸಾಲ ಕೊಟ್ಟಿರುವ ಮದದಿಂದ ಉನ್ಮತ್ತನಾಗಿದ್ದ ಆ ಯಹೂದಿಯು ‘ಅಬ್ದುಲ್ ಮುತ್ತಲಿಬ್’ ಅವರ ಸಂತತಿಯನ್ನೇ ಅನುಮಾನಿಸುತ್ತಾ ಅಪಮಾನಿಸುವಂತೆ ಮಾತಾಡಿದ. ಮುಹಮ್ಮದರ ಜೊತೆಯಲ್ಲಿಯೇ ಇದ್ದ ಉಮರ್ ಕೋಪಗೊಂಡು ಆ ಯೆಹೂದಿಯನ್ನು ಗದರಿಸಿದರು. ಇನ್ನೊಮ್ಮೆ ಅಂತಹ ಮಾತುಗಳನ್ನಾಡದಿರುವಂತೆ ಎಚ್ಚರಿಸಿದರು.
ಆಗ ಮುಹಮ್ಮದರು, “ಉಮರ್, ನೀವು ಅವರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು. ಮರು ಪಾವತಿ ಮಾಡಲು ಇನ್ನಷ್ಟು ಸಮಯ ಕೇಳಬಹುದಿತ್ತು. ಈಗ ಮೂರು ದಿನಗಳ ಗಡುವು ಇದ್ದರೂ ಈಗಲೇ ತೀರಿಸಿಬಿಡಿ ಮತ್ತು ಅವರನ್ನು ಜರಿದುದಕ್ಕಾಗಿ ಅವರಿಗೆ ಇನ್ನಷ್ಟು ಹೆಚ್ಚಿನ ಮೊತ್ತವನ್ನು ಪರಿಹಾರವಾಗಿ ನೀಡಿ” ಎಂದರು.

ಮುಹಮ್ಮದರ ಇಂತಹ ಸೌಜನ್ಯ ಮತ್ತು ಕ್ಷಮಾಶೀಲತೆಯೇ ಆ ಯಹೂದಿಯನ್ನೂ ಇಸ್ಲಾಂ ಸ್ವೀಕರಿಸುವಷ್ಟು ಮನಪರಿವರ್ತನೆಯಾಗಿತ್ತು. ಓರ್ವ ಆಡಳಿತಗಾರರಾಗಿ ಕಿರುಕುಳವನ್ನು ತಡೆಯಲು ಯುದ್ಧವನ್ನೇ ಮಾಡಬೇಕಾದ ಅನಿವಾರ್ಯತೆ ಒದಗಿ ಅದಕ್ಕೆಂದು ಸಿದ್ಧವಾದಾಗಲೂ ಮುಹಮ್ಮದರು ಅಲ್ಲಾಹನ ಹೆಸರಿಂದ, ಅಲ್ಲಾಹನ ಮಾರ್ಗದಲ್ಲಿ ಸತ್ಯನಿಷೇಧಿಗಳೊಂದಿಗೆ ಹೋರಾಡುವಂತಹ ಅವರಿಗೆ ಉಪದೇಶಿಸಿದ್ದು ಹೀಗೆ, “ವಚನ ಭಂಗ ಮಾಡಕೂಡದು. ಯಾವುದೇ ರೀತಿಯಲ್ಲಿ ಅತಿಕ್ರಮ ಎಸಬಾರದು, ಯಾವುದೇ ಮಗು, ಮಹಿಳೆ ಮತ್ತು ವಯಸ್ಸಾದವರ ಹಾಗೂ ಪ್ರಾರ್ಥನೆ ಅಥವಾ ಆರಾಧನೆ ಮಾಡುತ್ತಿರುವವರ ಮೇಲೆ ದಾಳಿ ಮಾಡಕೂಡದು, ಅವರನ್ನು ಕೊಲ್ಲಕೂಡದು. ಖರ್ಜೂರದ ತೋಟಗಳ ಕಡೆ ಸುಳಿಯಬಾರದು. ಯಾವುದೇ ಮರವನ್ನೂ ಕಡಿಯಬಾರದು. ಯಾರದೇ ಮನೆಯನ್ನು ಕೆಡವಬಾರದು.”

ತಾವು ಇತರ ವ್ಯಾಪಾರಿಗಳಂತೆ ಮನಸ್ಸು ಮಾಡಿದ್ದರೆ ಸುಖವಾಗಿ ಅತಿ ಶ್ರೀಮಂತರಾಗಿದ್ದಿರಬಹುದಾದ ಯೌವನದ ಕಾಲದಲ್ಲಿಯೇ ಅಂತಹವನ್ನಲ್ಲ ತ್ಯಾಗ ಮಾಡಿದ್ದವರು ಈ ಯುದ್ಧವನ್ನು ಮಾಡಬೇಕಾದ ಕಾರಣವೂ ವ್ಯಕ್ತಿಗತವಾದ ಅಹಂಕಾರದ ಪುಷ್ಟಿ, ಬಯಕೆಯ ತೃಪ್ತಿ ಮತ್ತು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಲಲ್ಲವಲ್ಲ!

ಹಾಗಾಗಿಯೇ ಅಲ್ಲಾಹನ ಆಶಯಕ್ಕೆ ತಕ್ಕುದಾದಂತಹ ವಿನಯ, ಶಿಸ್ತು, ಕ್ರಮ ಮತ್ತು ಸನ್ನಡತೆ ಎಲ್ಲವೂ.
ಇದು ಜನರ ಮಧ್ಯೆ ಮಾಡಿಕೊಂಡಿರುವಂತಹ ರಾಜಿ, ಸಂಧಾನವಲ್ಲ! ಅಲ್ಲಾಹನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ.

ಖಂಡಿತವಾಗಿಯೂ ಅಲ್ಲಾಹನು ನಿಮಗೆ ನ್ಯಾಯ ಪಾಲಿಸಬೇಕೆಂದೂ ಸೌಜನ್ಯ ತೋರಬೇಕೆಂದೂ, ಬಂಧುಗಳಿಗೆ ಅವರ ಹಕ್ಕನ್ನು ನೀಡಬೇಕೆಂದೂ ಆದೇಶಿಸುತ್ತಾನೆ ಮತ್ತು ಅವನು ನಿಮ್ಮನ್ನು ಅಶ್ಲೀಲ ಕೃತ್ಯಗಳಿಂದಲೂ, ಅನ್ಯಾಯದಿಂದಲೂ, ವಿದ್ರೋಹದಿಂದಲೂ ತಡೆಯುತ್ತಾನೆ. ನೀವು ಪಾಠ ಕಲಿಯಬೇಕೆಂದು ಅವನು ನಿಮಗೆ ಉಪದೇಶಿಸುತ್ತಾನೆ.
ನೀವು ಅಲ್ಲಾಹನ ಜೊತೆ ಕರಾರು ಮಾಡಿರುವಾಗ ಆ ಕರಾರನ್ನು ತಪ್ಪದೆ ಪಾಲಿಸಿರಿ. ಮತ್ತು ಪ್ರತಿಜ್ಞೆ ಮಾಡಿ ಅದನ್ನು ದೃಢಪಡಿಸಿದ ಬಳಿಕ ಹಾಗೂ ನೀವು ಖಚಿತವಾಗಿ ಅಲ್ಲಾಹನನ್ನು ನಿಮ್ಮ ಮೇಲೆ ಸಾಕ್ಷಿಯಾಗಿಸಿಕೊಂಡ ಬಳಿಕ ಆ ಪ್ರತಿಜ್ಞೆಯನ್ನು ಮುರಿಯಬೇಡಿ. ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಖಂಡಿತ ಬಲ್ಲನು. (ಕು: 16. 90-91) ವ್ಯಕ್ತಿಗಳು ಸನ್ನಡತೆಗಳಿಂದಲೇ ಅವರ ಆಲೋಚನೆ, ಹೊಂದಿರುವ ಮನೋಭಾವ, ಉದ್ದೇಶ, ಗಮ್ಯ ಮತ್ತು ಗಮನ; ಎಲ್ಲವನ್ನೂ ಪ್ರದರ್ಶಿಸುವುದು.

ಅಲ್ಲಾಹನನ್ನೇ ಪೂಜಿಸಿರಿ ಮತ್ತು ಅವನ ಜೊತೆ ಏನನ್ನೂ ಸೇರಿಸಬೇಡಿ. ಹೆತ್ತವರ ವಿಷಯದಲ್ಲಿ ಹಾಗೂ ಆಪ್ತ ಬಂಧುಗಳು, ನೆರೆಯಲ್ಲಿರುವ ಅಪರಿಚಿತರು, ಜೊತೆಗಾರರು, ಪ್ರಯಾಣಿಕರು ಮತ್ತು ನಿಮ್ಮ ಮಾಲಕತ್ವದಲ್ಲಿ ಇರುವವರ ವಿಷಯದಲ್ಲಿ ಸೌಜನ್ಯ ತೋರಿರಿ. ಖಂಡಿತವಾಗಿಯೂ ಅಲ್ಲಾಹನು ಅಹಂಕಾರಿಗಳನ್ನು ಮತ್ತು ಸ್ವತಃ ತಮ್ಮನ್ನೇ ಹೊಗಳಿಕೊಳ್ಳುವವರನ್ನು ಪ್ರೀತಿಸುವುದಿಲ್ಲ. (4:36)
ಕೊಡುವುದರಲ್ಲಾಗಲಿ, ಸನ್ನಡತೆಯಿಂದ ವರ್ತಿಸುವುದರಲ್ಲಾಗಲಿ, ಮಾಡುವ ಕೆಲಸದಲ್ಲಾಗಲಿ, ನೀಡುವ ಸೇವೆಯಲ್ಲಾಗಲಿ ಜಿಪುಣತನವೆಂಬುದು ಅವರಲ್ಲಿರಲಿಲ್ಲ. ಕರುಣೆ, ಸೌಜನ್ಯವೇ ಮೊದಲಾದ ಸದ್ಗುಣಗಳಲ್ಲಿ ಮಾತ್ರವಲ್ಲ, ವಸ್ತುಗಳನ್ನು ಕೊಡುವುದರಲ್ಲಿಯೂ ಧಾರಾಳ.

ಜಿಪುಣತೆ ತೋರುವವರನ್ನು, ಜನರಿಗೆ ಜಿಪುಣತೆ ಬೋಧಿಸುವವರನ್ನು ಮತ್ತು ಅಲ್ಲಾಹನು ತನ್ನ ಅನುಗ್ರಹದಿಂದ ನೀಡಿರುವುದನ್ನು ಬಚ್ಚಿಡುವವರನ್ನು (ಅಲ್ಲಾಹನು ಪ್ರೀತಿಸುವುದಿಲ್ಲ). ಧಿಕ್ಕಾರಿಗಳಿಗೆ ನಾವು ಅಪಮಾನಕಾರಿ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದೀವೆ. (4: 37)

ತಮಗೆ ಕೆಡುಕ ಮಾಡುವವರಿಗೂ ಸೌಜನ್ಯ ತೋರಿ ಅವರಲ್ಲಿ ಪರಿವರ್ತನೆಗಾಗಿ ಪ್ರಾರ್ಥಿಸುವ ಮುಹಮ್ಮದರ ಜೀವನವೇ ಅನುಕರಣೀಯ ಸನ್ನಡತೆಯ ಮತ್ತು ಸದ್ಗುಣದ ಮಾದರಿ.
ನೀನೀಗ ನನ್ನನ್ನು ಕೊಲ್ಲಲಿಕ್ಕೆಂದು ನನ್ನ ಮೇಲೆ ಕೈ ಎತ್ತಿದರೂ, ನಾನಂತೂ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಕೈ ಎತ್ತುವವನಲ್ಲ. ಖಂಡಿತವಾಗಿಯೂ ನನಗೆ ಸರ್ವಲೋಕಗಳ ಪಾಲಕನಾದ ಅಲ್ಲಾಹನ ಭಯವಿದೆ. (5:28)

ಪ್ರವಾದಿ ಮುಹಮ್ಮದರಿಗೆ ಯಾರದ್ದೂ ಭಯವಿರಲಿಲ್ಲ. ಇದ್ದ ಭಯವೆಂದರೆ ಅದು ಅಲ್ಲಾಹನದು ಮಾತ್ರ. ಅಲ್ಲಾಹನೊಬ್ಬನಲ್ಲಿಯೇ ಇದ್ದಂತಹ ಭಯ ಮತ್ತು ಭಕ್ತಿ ತಮ್ಮ ಸಹ ಜೀವಿಗಳೆಲ್ಲ ಜೊತೆ ವರ್ತಿಸುವ ಬಗೆಗಳಲ್ಲಿ ಪ್ರತಿಫಲಿತವಾಗುತ್ತಿತ್ತು.

ಪಾಶ್ಚಾತ್ಯ ಇತಿಹಾಸ ವಿದ್ವಾಂಸರಾದ ಸರ್ ವಿಲಿಯಮ್ ಮ್ಯೂರ್ ಹೇಳುವಂತೆ, ಮುಹಮ್ಮದರ ಮಾರ್ಗದರ್ಶನದಿಂದಾಗಿ ಮದೀನಾದ ಪ್ರಜೆಗಳು ಕೈದಿಗಳನ್ನೂ ಸನ್ನಡತೆಯಿಂದ ಉಪಚರಿಸುವಷ್ಟು ಪರಿಗಣಿಸಿದರು. ಮುಂದಿನ ದಿನಗಳಲ್ಲಿ ಮದೀನಾದಲ್ಲಿ ಕೈದಿಯಾಗಿದ್ದವನೊಬ್ಬ ಹೇಳುತ್ತಿದ್ದನಂತೆ, ‘ಮದೀನಾದ ಜನರು ಅನುಗ್ರಹಿತರು. ಅವರು ತಾವು ಬರಿಗಾಲಿನಲ್ಲಿ ನಡೆಯುತ್ತಾ ಕೈದಿಗಳನ್ನು ಸವಾರಿಯಲ್ಲಿ ಕೊಂಡೊಯ್ದರು. ತಾವು ತಿನ್ನುವುದು ಅಲ್ಪವೇ ಆಗಿದ್ದರೂ, ಖರ್ಜೂರದಲ್ಲಿಯೇ ಹೊತ್ತಿನ ಆಹಾರ ಮುಗಿಸಿಕೊಳ್ಳುತ್ತಿದ್ದರೂ ನಮಗೆ ಗೋಧಿಯ ರೊಟ್ಟಿ ಕೊಟ್ಟಿದ್ದರು.”

ಇದು ಮುಹಮ್ಮದರ ಗುಣ ನಡವಳಿಕೆಗಳು ಜನರನ್ನೇ ರೂಪಾಂತರಿಸಿದ್ದ ರೀತಿ.
ಮನುಷ್ಯ ನೈಸರ್ಗಿಕವಾಗಿಯೇ ಕೇಡಿಯಾಗಿದ್ದಾನೆ.
ಮನುಷ್ಯ ನಿಜಕ್ಕೂ ಅಕ್ರಮಿ ಮತ್ತು ಅಜ್ಞಾನಿಯಾಗಿದ್ದಾನೆ. (ಕುರಾನ್: 33.72)

ಅವನು ತನಗೆ ಸಹಜವಾಗಿರುವ ಪಶುಪ್ರವೃತ್ತಿಗಳನ್ನು ತೃಪ್ತಿಪಡಿಸಿಕೊಳ್ಳಲು ತನ್ನ ಮನಸ್ಸನ್ನೂ ಉಪಯೋಗಿಸಿಕೊಳ್ಳುತ್ತಾನೆ. ಇದರಿಂದ ಲೋಕದಲ್ಲಿ ಕ್ಷೋಭೆ ಉಂಟಾಗುವುದಲ್ಲದೇ ತನ್ನ ಬದುಕನ್ನೂ ಮತ್ತು ಇತರರ ಬದುಕನ್ನೂ ನಾಶ ಮಾಡುತ್ತಾನೆ.ನಷ್ಟವಾದಾಗ ಕುಗ್ಗುತ್ತಾನೆ, ಲಾಭವಾದಾಗ ಹಿಗ್ಗುತ್ತಾನೆ. ತನಗಿಂತ ಇನ್ನಾರೂ ಇಲ್ಲ ಎಂದು ವರ್ತಿಸುತ್ತಾನೆ.ಹಾಗಾಗಿಯೇ ಅವನಿಗೆ ಅಗತ್ಯವಿರುವಂತ ನೈತಿಕತೆಯನ್ನು ಮತ್ತು ಬದುಕುವ ಮಾರ್ಗವನ್ನು ಇಸ್ಲಾಮಿನಲ್ಲಿ ತೋರುವ ಪ್ರವಾದಿ ಮಾಡುತ್ತಾರೆ.

ಮಾನವನು ಚಂಚಲನಾಗಿಯೇ ಸೃಷ್ಟಿಸಲ್ಪಟ್ಟಿದ್ದಾನೆ. ಅವನಿಗೆ ಸಂಕಷ್ಟ ಬಂದಾಗ ಗಾಬರಿಗೊಳ್ಳುತ್ತಾನೆ ಮತ್ತು ಸೌಭಾಗ್ಯಾ ಪ್ರಾಪ್ತವಾದಾಗ ಲೋಭ ತೋರುತ್ತಾನೆ. ಆದರೆ ನಮಾಝ್ ಮಾಡುವವರು ಈ ದೋಷಗಳಿಂದ ಮುಕ್ತರಾಗಿದ್ದಾರೆ. (70:19-22)

ಸ್ಪರ್ಧೆ, ಅಸೂಯೆ, ದುರಾಸೆ, ಕಪಟತನ, ಸ್ವಾರ್ಥವೇ ಮೊದಲಾದ ಆತ್ಮಘಾತಕ ಗುಣಗಳಿಂದ ಕಳಚಿಕೊಳ್ಳಲು, ಆ ಕಳಂಕಗಳಿಂದ ಮುಕ್ತವಾಗಲು, ನಿಜವಾಗಿಯೂ ಮಾನವನ ಇಹ ಮತ್ತು ಪರದ ಅಗತ್ಯತೆಗಳನ್ನು ಪೂರಿಸಿಕೊಳ್ಳಲು ಮನುಷ್ಯನು ಪರಿಶುದ್ಧನಾಗಬೇಕಿದೆ.

ಮನಸ್ಸು (ಹೃದಯ)ಗಳು ದುರ್ಬಲವೂ ಮತ್ತು ಅನುಮಾನಗಳು ಆಕ್ರಮಣಕಾರಿಯಾಗಿ ಕಿತ್ತುಕೊಳ್ಳುವಂತವೇ ಆಗಿವೆ. (ಸಿಯಾರ್ ಅಲಂ ಅಲ್ ನುಬಾಲ 7/261)

ಮನಸ್ಸನ್ನು, ಹೃದಯವನ್ನು ಪರಿಶುದ್ಧವಾಗಿರಿಸಿಕೊಳ್ಳುವುದರ ಮೂಲಕ ಇಡೀ ಬದುಕನ್ನೇ ಪರಿಶುದ್ಧವಾಗಿಸಿಕೊಳ್ಳುವ ಮಾದರಿ ಅವರದು.

ಸಂದೇಶವಾಹಕರು ಹೇಳುತ್ತಾರೆ: ಓ ಅಬು ಢಾರ್ರ್, ಸಮೃದ್ಧವಾದ ಧನಕನಕಗಳನ್ನು ಶ್ರೀಮಂತಿಕೆ ಎಂದು ಊಹಿಸುತ್ತೀಯಾ? ಹೃದಯ ಶ್ರೀಮಂತಿಕೆಯೇ ಶ್ರೀಮಂತಿಕೆ, ಹೃದಯದ ದಾರಿದ್ರ್ಯವೇ ದಾರಿದ್ರ್ಯ. ಹೃದಯದಲ್ಲಿ ಶ್ರೀಮಂತವಾಗಿರುವವರು ಈ ಪ್ರಪಂಚದಲ್ಲಿ ಏನನ್ನೇ ಎದುರಿಸಿದರೂ ಕುಂದಲಾರರು. ಹೃದಯದಲ್ಲಿ ದಾರಿದ್ರ್ಯವಿರುವವರು ಈ ಲೋಕದಲ್ಲಿ ಎಷ್ಟೇ ಗಳಿಸಿದರೂ ಶ್ರೀಮಂತರಾಗಲಾರರು. ಅವರ ತಮ್ಮತನವನ್ನು ಧಕ್ಕೆ ಗೊಳಿಸುವುದು ಆ ದೌರ್ಬಲ್ಯವೇ. (ಸಹಿಹ್ ಅಲ್ ಜಮಿ / 7816)

ಮನೋದೌರ್ಬಲ್ಯಗಳಿಂದಾಗಿಯೇ ಮನುಷ್ಯನು ತನಗೆ ಲಭ್ಯವಾಗುವ ಅರಿವನ್ನು ಅನುಭವವನ್ನಾಗಿಸಿಕೊಳ್ಳಲು ಎಡವುತ್ತಾನೆ. ಒಮ್ಮೆ ಸನ್ಮಾರ್ಗದಲ್ಲಿ ನಡೆಯುವವನು, ಮತ್ತೊಮ್ಮೆ ದುರ್ಮಾರ್ಗಕ್ಕೆ ಎಳೆಯಲ್ಪಡುತ್ತಾನೆ. ಲೋಕದ ಇತರ ಪ್ರಭಾವಗಳು, ಪ್ರಲೋಭನೆಗಳು ಆತನನ್ನು ಎಳೆಯುತ್ತವೆ. ತನ್ನ ಗಮ್ಯವನ್ನು ಸದಾ ಧ್ಯಾನಿಸುತ್ತಾ ಗಮನವಿಟ್ಟು ತನ್ನ ಕೆಲಸ ಕಾರ್ಯಗಳ ಮೂಲಕ, ವರ್ತನೆಗಳ ಮೂಲಕ ಮಾರ್ಗ ತಪ್ಪದಂತೆ ತನ್ನನ್ನು ತಾನೇ ತರಬೇತುಗೊಳಿಸಿಕೊಳ್ಳಬೇಕು.
ನಿಮ್ಮ ಚಟುವಟಿಕೆಗಳನ್ನು ತ್ವರೆಗೊಳಿಸಿ ಅರಿವು ಕತ್ತಲರಾತ್ರಿಯ ತುಂಡುಗಳಂತೆ ಬರುವಷ್ಟರಲ್ಲಿ. ತನ್ನ ಸತ್ಯವಿಶ್ವಾಸವನ್ನು ಲೌಕಿಕ ಲಾಭಕ್ಕಾಗಿ ಮಾರಾಟ ಮಾಡಿಕೊಳ್ಳುತ್ತಾ ಒಬ್ಬ ಬೆಳಗ್ಗೆ ವಿಶ್ವಾಸಿಯಾಗಿರುವನು, ರಾತ್ರಿ ಅವಿಶ್ವಾಸಿಯಾಗಿರುವನು. ಅಥವಾ ರಾತ್ರಿ ವಿಶ್ವಾಸಿಯಾಗಿರುವನು ಮತ್ತೆ ಬೆಳಗ್ಗೆ ಅವಿಶ್ವಾಸಿಯಾಗಿರುವನು. (ಮುಸ್ಲೀಂ – 118)

ಏನೆಲ್ಲಾ ಮಾಡಿದರೂ ತಪ್ಪಾದರೇನು ಮಾಡುವುದು? ಅಹುದು, ಮರಳಿ ಪ್ರಯತ್ನವ ಮಾಡಲೇ ಬೇಕು.
ಹೇಳಿರಿ, ಸ್ವತಃ ತಮ್ಮ ಮೇಲೆ ಅಕ್ರಮವೆಸಗಿಕೊಂಡಿರುವ ನನ್ನ ಅಲ್ಲಾಹನ ದಾಸರೇ, ಅಲ್ಲಾಹನ ಅನುಗ್ರಹದ ಕುರಿತಂತೆ ನಿರಾಶರಾಗಬೇಡಿ. ಅಲ್ಲಾಹನು ಖಂಡಿತ ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ಅವನು ಖಂಡಿತ ತುಂಬಾ ಕ್ಷಮಿಸುವವನು ಮತ್ತು ಕರುಣೆ ತೋರುವವನೂ ಆಗಿದ್ದಾನೆ. (39: 53)

ವ್ಯಕ್ತಿಯೊಬ್ಬನು ತನ್ನ ಕಪಟತನವನ್ನು ತಾನೇ ಅರಿತುಬಿಟ್ಟರೆ, ತನ್ನ ರೋಗಕ್ಕೆ ತಾನೇ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಾಗುವಂತಾಗುತ್ತದೆ.
ಹೃದಯ (ಮನೋಭಾವ)ಗಳಲ್ಲಿ ನಾಲ್ಕು ವಿಧ: ಎರಡು ಮುಖಗಳುಳ್ಳ ಮನಸ್ಸು. ಇದು ಕಪಟತನದ ವೇಷಧಾರಿ ಮನಸ್ಸು; ಇದು ಅವಿಶ್ವಾಸಿಯ ಮನಸ್ಸು. ಒಂದು ಪರಿಶುದ್ಧ ಮನಸ್ಸು, ಪ್ರಕಾಶಮಾನವಾಗಿರುವ ದೀಪವೊಂದು ಒಳಗಿರುವಂತೆ. ಈ ಹೃದಯ ವಿಶ್ವಾಸದಿಂದ ಕೂಡಿದ್ದು. ಇನ್ನೊಂದು ಮನಸ್ಸು ಕಪಟತನ ಮತ್ತು ವಿಶ್ವಾಸ ಎರಡನ್ನೂ ಹೊಂದಿರುವಂತದ್ದು, ರಕ್ತ ಮತ್ತು ಕೀವುಗಳಿಂದ ಕೂಡಿರುವ ಹುಣ್ಣಿದ್ದಂತೆ, ಕೊಳಕು ಮತ್ತು ಶುದ್ಧ; ಎರಡೂ ಬಗೆಯ ನೀರನ್ನು ಹನಿಸಿಕೊಂಡು ಬೆಳೆದಿರುವ ಮರದಂತೆ. ಆ ಎರಡರಲ್ಲಿ ಯಾವುದೇ ಒಂದು ಹಿರಿದಾದರೂ ಹೃದಯ (ಮನಸ್ಸು) ಗೆಲ್ಲುವುದು. (ಇಬ್ನ್ ಅಬಿ ಶಯ್ಬಾಹ್ ಇನ್ ಕಿತಾಬ್ ಅಲ್ ಇಮಾನ್ – 54)
ನಾನೊಬ್ಬ ಉದ್ದಾರವಾದರೆ ಸಾಕು ಎನ್ನುವ ಮಾತಲ್ಲ ಇದು. ಮನುಷ್ಯ ಸಂಘಜೀವಿ. ನನ್ನ ಒಡಹುಟ್ಟುಗಳೂ, ಸಹಜೀವಿಗಳೂ ಒಟ್ಟಾಗಿಯೇ ಮನುಷ್ಯನ ಲೋಕವನ್ನು ನಿರ್ಮಿಸಿ ನಿರ್ವಹಿಸುತ್ತಿರುವುದು. ನಮ್ಮ ಸಹಜೀವಿಗಳನ್ನೂ ಜೊತೆಗೊಯ್ಯುವ ಬಾಧ್ಯತೆಯೂ ನಮಗಿದೆ. ಆದರೆ ಅವರು ನಮ್ಮ ವಿಷಯವನ್ನು ಅರಿಯಲು ವಿಮುಖರಾದರೆ?

“ಅವರು ನಿಮ್ಮ ಮಾತನ್ನು ಸ್ವೀಕರಿಸದಿದ್ದರೆ, ನಿಮಗೆ ತಿಳಿದಿರಲಿ; ಅವರು ಕೇವಲ ತಮ್ಮ ಸ್ವೇಚ್ಛೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಅಲ್ಲಾಹನ ಕಡೆಯಿಂದ ಯಾವುದೇ ಮಾರ್ಗದರ್ಶನವಿಲ್ಲದೆ, ತನ್ನ ಸ್ವೇಚ್ಛೆಯನ್ನು ಅನುಸರಿಸುವಾತನಿಗಿಂತ ಹೆಚ್ಚು ದಾರಿಗೆಟ್ಟವನು ಯಾರಿರಬಹುದು? ಅಲ್ಲಾಹನು ಅಕ್ರಮಿಗಳಿಗೆ ಖಂಡಿತ ದಾರಿ ತೋರುವುದಿಲ್ಲ.” (ಕು. 28-50)

ನಮ್ಮನ್ನು ನೇರವಾದ ಮಾರ್ಗದಲ್ಲಿ ನಡೆಸು ಎನ್ನುವುದೇ ಪ್ರಾರ್ಥನೆ. ದಾರಿತಪ್ಪಿರುವವರ ದಾರಿಯಲ್ಲ. ಅಲ್ಲಾಹನಿಂದ ಅನುಗ್ರಹಿತವಾಗಿರುವ ದಾರಿಯದು.
ಶ್ರೇಷ್ಟತೆಯು ನೀವು ಮನೆಗಳಿಗೆ ಹಿಂಬಾಗಿಲಿನಿಂದ ಪ್ರವೇಶಿಸುವುದನ್ನು ಅವಲಂಬಿಸಿಲ್ಲ. ನಿಜವಾಗಿ ಭಯ ಭಕ್ತಿ ಉಳ್ಳವನೇ ಶ್ರೇಷ್ಟನು. ನೀವಿನ್ನು ಮನೆಗಳಿಗೆ ಮುಂಬಾಗಿಲಿನಿಂದಲೇ ಪ್ರವೇಶಿಸಿರಿ ಮತ್ತು ಅಲ್ಲಾಹನಿಗೆ ಅಂಜುತ್ತಲಿರಿ – ನೀವು ವಿಜಯಿಗಳಾಗಲಿಕ್ಕಾಗಿ. (ಕು. 2:189)

ಏಕೆಂದರೆ ಹೃದಯದ ಮೇಲೆ ಗಾಯದ ಕಲೆಗಳನ್ನು ಉಳಿಸುವುದೇ ಪಾಪಗಳು.
ತಮ್ಮಿಷ್ಟಕ್ಕೆ ತಾವೇ ತಮ್ಮ ಅಹಂಕಾರದಿಂದ ಪ್ರೇರೇಪಿತರಾಗಿ ನಡೆದುಕೊಳ್ಳುವವರಿಗೆ ಪ್ರವಾದಿ ಮುಹಮ್ಮದರು ಅರ್ಥವಾಗರು.
ಪ್ರವಾದಿ ಮುಹಮ್ಮದರು ಅರಬ್ಬರನ್ನು ಅಹಂಕಾರದಿಂದ ವಿನಯಕ್ಕೆ, ಕ್ರೌರ್ಯದಿಂದ ಕರುಣೆಗೆ, ಒಡಕುತನದಿಂದ ಒಗ್ಗಟ್ಟಿಗೆ, ಚಂಚಲತೆಯಿಂದ ದೃಢವಾದ ಶ್ರದ್ಧೆಗೆ, ಅನೇಕ ದೇವತಾರಾಧನೆಗಳಿಂದ ಏಕ ದೇವನಿಗೆ, ಅನೈತಿಕತೆಯಿಂದ ಪಾವಿತ್ರ್ಯತೆಗೆ, ಸೇಡಿನಿಂದ ಕ್ಷಮೆಗೆ, ಸೋಮಾರಿತನದಿಂದ ಕಾಯಕ ನಿಷ್ಟೆಗೆ, ಸ್ವಾರ್ಥದಿಂದ ನಿಸ್ವಾರ್ಥಕ್ಕೆ, ಒರಟುತನದಿಂದ ನಾಜೂಕುತನಕ್ಕೆ, ಸ್ವಂತದರ ವ್ಯಾಮೋಹದಿಂದ ಸರ್ವೋದಯದ ಧೋರಣೆಗೆ, ಮೂರ್ಖತನದಿಂದ ಜಾಣತನಕ್ಕೆ ತಂದಂತೆ ನನ್ನ ಅರಿವಿನ ಪ್ರವಾದಿಯ ಸಾಕ್ಷಾತ್ಕಾರದಿಂದ ಜೀವಿತದ ಮಹೋನ್ನತ ಮೌಲ್ಯದ ಅರಿವು ಸಾಕ್ಷಾತ್ಕಾರವಾಗುವುದು. ನನ್ನ ಪ್ರೀತಿಯ ಪ್ರವಾದಿಯ ಅರಿವು ನನ್ನ ಹೃದಯದಲ್ಲಿ, ನಡೆಯಲ್ಲಿ, ಆಲೋಚನೆ ಮತ್ತು ವರ್ತನೆಗಳಲ್ಲಿ ಪ್ರತಿಫಲಿಸುತ್ತಲೇ ಇರಲೆಂಬ ಪ್ರಾರ್ಥನೆ ನನ್ನದು.(ಬರಹ-ಯೋಗೇಶ್ ಮಾಸ್ಟರ್)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭ್ರಷ್ಟಾಚಾರದ ವಿರುದ್ಧ ಶಂಕರ್ ಇನ್ನೊಂದು ಹೋರಾಟ!

Published

on

  • ಚೇತನ್ ನಾಡಿಗೇರ್

ಣಿರತ್ನಂ ಏನೇ ಮಾಡಲಿ, ಯಾವುದೇ ಚಿತ್ರ ತೆಗೆಯಲಿ, ಅದರ ಮೂಲ ಸೆಲೆ ಪ್ರೀತಿಯಾಗಿರುತ್ತದೆ. ಪ್ರೀತಿಯ ಬೇರೆಬೇರೆ ವ್ಯಾಖ್ಯಾನಗಳನ್ನು, ಬೇರೆಬೇರೆ ಹಿನ್ನೆಲೆಯಲ್ಲಿ ಮಣಿರತ್ನಂ ಪ್ರತಿಚಿತ್ರದಲ್ಲೂ ಹೇಳುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅದೇ ರೀತಿ, ರಾಮ್‍ಗೋಪಾಲ್‍ ವರ್ಮ ಏನೇ ಚಿತ್ರ ಮಾಡಿದರೂ, ಕ್ರೈಮ್‍ ಹಿನ್ನೆಲೆಯಲ್ಲೇ ಮಾಡುತ್ತಾರೆ. ಹೀಗೆ ಬೇರೆಬೇರೆ ನಿರ್ದೇಶಕರು ಒಂದೇ ವಿಷಯವನ್ನಿಟ್ಟುಕೊಂಡು ಬೇರೆಬೇರೆ ರೀತಿ ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಈಗ್ಯಾಕಪ್ಪಾ ಈ ಮಾತು ಎಂದರೆ, ಶಂಕರ್ ನಿರ್ದೇಶನದ ‘ಇಂಡಿಯನ್‍ 2’ ನಾಳೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮದೇ ಯಶಸ್ವಿ ಚಿತ್ರ ‘ಇಂಡಿಯನ್‍’ನ ಮುಂದುವರೆದ ಭಾಗ ಇದು. ಆ ಚಿತ್ರ ಬಿಡುಗಡೆಯಾಗಿ 26 ವರ್ಷಗಳ ನಂತರ ‘ಇಂಡಿಯನ್‍ 2’ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿಷಯವನ್ನಿಟ್ಟುಕೊಂಡು ಶಂಕರ್‍ ನಿರ್ದೇಶಿಸುತ್ತಿರುವ ಏಳನೇ ಚಿತ್ರ ಇದು.

ಶಂಕರ್‍ ಚಿತ್ರಗಳೆಂದರೆ ಅದ್ಧೂರಿತನ, ಹಿಟ್‍ ಹಾಡುಗಳು, ದೊಡ್ಡ ಕ್ಯಾನ್ವಾಸ್‍, ಮಾಸ್ ಅಂಶಗಳು ಇವೆಲ್ಲವೂ ಕಾಣುತ್ತದೆ. ಅದೇ ರೀತಿ ಗಮನಸೆಳೆಯುವ ಒಂದು ವಿಷಯವೆಂದರೆ, ಅದು ಭ್ರಷ್ಟಾಚಾರದ ವಿರುದ್ಧ ಶಂಕರ್‍ ನಿರಂತರ ಹೋರಾಟ. ತಮ್ಮ ನಿರ್ದೇಶನದ ಮೊದಲ ಚಿತ್ರದಿಂದಲೂ ಶಂಕರ್‍ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ಶಂಕರ್‍ ಈ 31 ವರ್ಷಗಳಲ್ಲಿ ನಿರ್ದೇಶಿಸಿರುವುದು ಕೇವಲ 14 ಚಿತ್ರಗಳನ್ನು. ಆ ಪೈಕಿ ಏಳು ಚಿತ್ರಗಳು ಭ್ರಷ್ಟಾಚಾರ ಎಂಬ ವಿಷಯವನ್ನಿಟ್ಟುಕೊಂಡು ಮೂಲವಾಗಿಟ್ಟುಕೊಂಡು ಮಾಡಲಾಗಿದೆ.

ಈ ಪ್ರಯಾಣ ಶುರುವಾಗಿದ್ದು 1993ರಲ್ಲಿ ಬಿಡುಗಡೆಯಾದ ‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಕಥೆ ಮಾಡಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಲಂಚಾವತಾರದಿಂದ ಹೇಗೆ ಪ್ರತಿಭಾವಂತ ಯುವಕರು ಅವಕಾಶವಂಚಿತರಾಗುತ್ತಿದ್ದಾರೆ ಎಂದು ಹೇಳಿದರು. ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ ಎಂದು ತೋರಿಸಿದ್ದರು. ಆ ನಂತರ ‘ಇಂಡಿಯನ್‍’, ‘ಮುದಲ್ವನ್‍’, ‘ಅನ್ನಿಯನ್‍’, ‘ಶಿವಾಜಿ: ದಿ ಬಾಸ್‍’ ಮತ್ತು ‘ಇಂಡಿಯನ್‍ 2’ ಚಿತ್ರಗಳ ಮೂಲಕ ಅವರು ಇದೇ ವಿಷಯವನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

ವಿಷಯ ಅದೇ ಭ್ರಷ್ಟಾಚಾರ ಅಥವಾ ಲಂಚಾವತಾರವಿರಬಹುದು. ಅದೇ ವಿಷಯವನ್ನಿಟ್ಟುಕೊಂಡು ಶಂಕರ್‍ ಬೇರೆಬೇರೆ ರೀತಿಯಲ್ಲಿ ಕಮರ್ಷಿಯಲ್‍ ಆಗಿ ಚಿತ್ರಗಳನ್ನು ರೂಪಿಸಿರುವುದಿದೆಯಲ್ಲಾ ಅದು ವಿಶೇಷ ಎನಿಸುತ್ತದೆ. ‘ಇಂಡಿಯನ್‍’ನಲ್ಲಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ತನ್ನ ಮಗನೇ ದೊಡ್ಡ ಭ್ರಷ್ಟ ಎಂದು ಗೊತ್ತಾದಾಗ ಅವನನ್ನೇ ಸಾಯಿಸುತ್ತಾನೆ. ‘ಮುದಲ್ವನ್’ ಎಂಬ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಒಂದು ದಿನದ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ತಡೆಯುವ ಪ್ರಯತ್ನವನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಾನೆ. ‘ಅನ್ನಿಯನ್‍’ನಲ್ಲಿ ಭ್ರಷ್ಟಾಚಾರ, Multiple Personality Disorder ಮತ್ತು ಗರುಡ ಪುರಾಣವನ್ನು ಶಂಕರ್‍ ಸೇರಿಸಿ ಕಥೆ ಮಾಡಿರುವ ರೀತಿಯೇ ವಿಶಿಷ್ಟ. ‘ಶಿವಾಜಿ’ಯಲ್ಲಿ ನೂರಾರು ಕೋಟಿ ಆಸ್ತಿ ಇರುವ ಶ್ರೀಮಂತನೊಬ್ಬ ಈ ವ್ಯವಸ್ಥೆಯಿಂದ ಬೇಸತ್ತು ಹೋರಾಟಕ್ಕೆ ಇಳಿಯುತ್ತಾನೆ. ಈಗ ‘ಇಂಡಿಯನ್‍ 2’ ಚಿತ್ರದಲ್ಲಂತೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಎಂದು Second War of Independence ಬಣ್ಣಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ವಿರುದ್ಧ ಶಂಕರ್‍ ಮತ್ತೊಂದು ಹೋರಾಟ ಶುರು ಮಾಡಿದ್ದಾರೆ.

ಇಷ್ಟಕ್ಕೂ ಶಂಕರ್‍ ಯಾಕೆ ಈ ವಿಷಯದ ಮೇಲೆ ಮೇಲಿಂದ ಮೇಲೆ ಸಿನಿಮಾ ಮಾಡುತ್ತಾರೆ? ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಯಾವುದೇ ವಿಷಯ ನನ್ನನ್ನು ಕಾಡಿದರೂ, ಆ ಕುರಿತು ಕಥೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಈ ಭ್ರಷ್ಟಾಚಾರ ನನ್ನನ್ನು ಪದೇಪದೇ ಕಾಡಿದೆ. ಅದನ್ನು ಕಮರ್ಷಿಯಲ್‍ ರೂಪದಲ್ಲಿ, ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಒಂದು ವಿಷಯ ಸ್ಪಷ್ಟವಾದ ಮೇಲೆ, ಅದನ್ನು ಹೇಗೆ ತರಬೇಕು ಎಂದು ಯೋಚಿಸುತ್ತೇನೆ. ಪ್ರೇಕ್ಷಕರ ದೃಷ್ಟಿಕೋನದಿಂದ ಯೋಚಿಸುವುದಕ್ಕೆ ಪ್ರಯತ್ನಿಸುತ್ತೇನೆ. ಅವರಿಗೆ ಬೋರ್‍ ಆಗಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡುತ್ತಾ ಹೋಗುತ್ತೇನೆ’ ಎಂದು ಹೇಳಿಕೊಂಡಿದ್ದಾರೆ ಶಂಕರ್.

ಬಹುಶಃ ಅದೇ ಅವರ ಯಶಸ್ಸು ಎನ್ನಬಹುದೇನೋ? ಶಂಕರ್‍ ಒಂದು ಚಿತ್ರದ ಕಥೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಮನರಂಜನಾತ್ಮಕ ಅಂಶಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಕೆಲವೊಮ್ಮೆ ಶಂಕರ್‍ ಪಾತ್ರಗಳು Larger than life ಎಂದನಿಸಬಹುದು. ಕೆಲವೊಮ್ಮೆ ತುಂಬಾ exaggeration ಅಂತನಿಸಬಹುದು. ಒಂದು ದಿನಕ್ಕೆ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾ? ಪಾರ್ಥಸಾರಥಿ ರಾಮಾನುಜ ಅಯ್ಯಂಗಾರ್‍ಗೆ ಅನ್ನಿಯನ್‍ ಆಗುವುದಕ್ಕೆ ಸಾಧ್ಯವಾ? 78ರ ವೃದ್ಧನೊಬ್ಬ ಸೇನಾಪತಿಯಾಗಿ ಹಾಗೆ ಹೊಡೆದಾಡುವುದಕ್ಕೆ ಸಾಧ್ಯವೇ? ಈ ಪ್ರಶ್ನೆಗಳು ಬರಬಹುದು. ತಾರ್ಕಿಕವಾಗಿ ನೋಡಿದರೆ ಇದು ಕಷ್ಟ. ಆದರೆ, ಶಂಕರ್ ಲಾಜಿಕ್‍ಗಿಂತ ಮ್ಯಾಜಿಕ್‍ನಲ್ಲಿ ನಂಬಿಕೆ ಇಟ್ಟವರು. ಏನೇನೋ ಮ್ಯಾಜಿಕ್‍ ಮಾಡಿ ಪ್ರೇಕ್ಷಕರನ್ನು ನಂಬಿಸುತ್ತಾರೆ. ತಮ್ಮ ಪ್ರಪಂಚದಲ್ಲಿ ಎಳೆದುಕೊಳ್ಳುತ್ತಾರೆ.

ಈಗೆಲ್ಲಾ Cinematic Universeಗಳ ಕಾಲ. ಯಶ್‍ರಾಜ್‍ ಸ್ಪೈ ಯೂನಿವರ್ಸ್‍, ಲೋಕೇಶ್‍ ಕನಕರಾಜ್‍ ಯೂನಿವರ್ಸ್, ರೋಹಿತ್‍ ಶೆಟ್ಟಿ ಪೊಲೀಸ್‍ ಯೂನಿವರ್ಸ್‍ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ, ಕೆಲವು ವರ್ಷಗಳ ಹಿಂದೆಯೇ ‘ಇಂಡಿಯನ್‍’ನ ಸೇತುಪತಿ, ‘ಶಿವಾಜಿ: ದಿ ಬಾಸ್‍’ನ ಶಿವಾಜಿ ಮತ್ತು ‘ಮುದಲ್ವನ್‍’ನ ಪುಗಳೇಂದಿಯನ್ನಿಟ್ಟುಕೊಂಡು ಏಕೆ ಒಂದು ಚಿತ್ರ ಮಾಡಬಾರದು ಎಂದು ಅವರು ಕೆಲವು ವರ್ಷಗಳ ಹಿಂದೆಯೇ ಯೋಚಿಸಿದ್ದರಂತೆ. ಆದರೆ, ಸೂಕ್ತ ಪ್ರೋತ್ಸಾಹ ಸಿಗದ ಕಾರಣ ಸುಮ್ಮನಾದರಂತೆ.

ಈ ಕುರಿತು ಮಾತನಾಡಿರುವ ಅವರು, ‘2008ರಲ್ಲಿ ‘ಎಂದಿರನ್‍’ ಚಿತ್ರ ಮಾಡುವಾಗ, ಯಾಕೆ ನಾನೇ ಸೃಷ್ಟಿಸಿದ ಮೂರು ಪಾತ್ರಗಳನ್ನು ಒಂದೇ ಚಿತ್ರದಲ್ಲಿ ಯಾಕೆ ತರಬಾರದು ಎಂದನಿಸಿತು. ಒಂದು ಕ್ಷಣ ರೋಮಾಂಚನವಾಯ್ತು. ಖುಷಿಯಿಂದ ನನ್ನ ಸಹಾಯಕ ನಿರ್ದೇಕರನ್ನು ಕರೆದು ಐಡಿಯಾ ಹೇಳಿದೆ. ಅವರೆಲ್ಲರೂ ಇದು ಸಾಧ್ಯವಾ? ಎಂದು ಅನುಮಾನದಿಂದ ನೋಡಿದರು. ನಂತರ ಕೆಲವು ಹಿರಿಯ ತಂತ್ರಜ್ಞರಿಗೆ ಮತ್ತು ನನ್ನ ಸ್ನೇಹಿತರಿಗೆ ಹೇಳಿದೆ. ನನ್ನ ಮನಸ್ಸಿಗೆ ನೋವಾಗಬಹುದು ಎಂದು ಚೆನ್ನಾಗಿದೆ ಎಂದಷ್ಟೇ ಹೇಳಿ ಹೊರಟು ಹೋದರು. ಬಹುಶಃ ನನಗೆ ಆಗ ಪ್ರೋತ್ಸಾಹ ಸಿಕ್ಕಿದ್ದರೆ ಚಿತ್ರ ಮಾಡಿಬಿಟ್ಟಿರುತ್ತಿದ್ದೆನೇನೋ? ಕೆಲವು ವರ್ಷಗಳ ನಂತರ ‘ಅವೆಂಜರ್ಸ್’ ಚಿತ್ರ ನೋಡಿದಾಗ, ಅದು ಸಹ Marvel Cinematic Universeನ ಒಂದು ಭಾಗ ಆಗಿತ್ತು. ಒಂದು ಒಳ್ಳೆಯ ಐಡಿಯಾ ಇದ್ದರೆ, ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ಇಳಿಸಬೇಕು ಎಂದು ನನಗೆ ಆಗ ಅರ್ಥವಾಯ್ತು. ಏಕೆಂದರೆ, ನಮ್ಮ ತರಹವೇ ಜಗತ್ತಿನಾದ್ಯಂತ ಹಲವರು ಹೊಸ ವಿಷಯಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಅವರು ಅದನ್ನು ಕಾರ್ಯರೂಪಕ್ಕೆ ತರುವ ಮುನ್ನ, ಮೊದಲು ನಾವು ಆ ಕೆಲಸ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ ಶಂಕರ್‍.

Shankar Cinematic Universe ಯಾವತ್ತು ಕಾರ್ಯರೂಪಕ್ಕೆ ಬರುತ್ತದೋ ಗೊತ್ತಿಲ್ಲ. ಸೇತುಪತಿ, ಶಿವಾಜಿ ಮತ್ತು ಪುಗಳೇಂದಿಯನ್ನು ಒಟ್ಟಿಗೆ ಮುಂದಿಟ್ಟುಕೊಂಡು ಯಾವಾಗ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಭ್ರಷ್ಟಾಚಾರದ ವಿರುದ್ಧ ಶಂಕರ್ ತಮ್ಮ ಹೋರಾಟ ಮುಂದುವರೆಸಿದ್ದಾರೆ. ‘ಇಂಡಿಯನ್‍ 2’ ಬಿಡುಗಡೆಯಾಗಿ ಆರು ತಿಂಗಳಲ್ಲೇ ಅದೇ ಸೇತುಪತಿ, ‘ಇಂಡಿಯನ್‍ 3’ ಆಗಿ ಮತ್ತೆ ಬರಲಿದ್ದಾರೆ. ಅದಾಗಿ ಸ್ವಲ್ಪ ದಿನಗಳಿಗೆ ‘ಗೇಮ್‍ ಚೇಂಜರ್‍’ ಎಂಬ ರಾಮ್‍ಚರಣ್‍ ತೇಜ ಅಭಿನಯದ ಇನ್ನೊಂದು ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸಲಿದ್ದಾರೆ. ಪಾತ್ರಗಳು ಬದಲಾಗಬಹುದು, ಶಂಕರ್‍ ಹೋರಾಟ ಮಾತ್ರ ನಿರಂತರವಾಗಿ ಮುಂದುವರೆಯುತ್ತಿರುವುದು ವಿಶೇಷ. (ಬರಹ : ಚೇತನ್ ನಾಡಿಗೇರ್, ಫೇಸ್‌ಬುಕ್‌ ಬರಹ)ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending