Connect with us

ಬಹಿರಂಗ

ಅಂಬೇಡ್ಕರ್ ಮತ್ತು ಹಿಂದೂ ಕೋಡ್ ಬಿಲ್..!

Published

on

  • ವಿ.ಎಸ್.ಬಾಬು

ಸ್ವಾತಂತ್ರ್ಯ ನಂತರದ ಸರ್ಕಾರ ಅಂಬೇಡ್ಕರ್ ಅವರನ್ನು ಗಂಭೀರವಾಗಿ ಪಲಗಣಿಸಿತು. ಈ ಮೂಲಕ ಅವರಿಗೆ ನಿರ್ದಿಷ್ಟ ಜವಾಬ್ದಾರಿಯುತವಾದ ಹುದ್ದೆಯನ್ನು ವಹಿಸಿತು. ಆಗ ಅವರು ಜಾತಿಯ ತಾಳಿಕೆ-ಬಾಳಿಕೆ ಅಡಗಿರುವುದೇ ಸ್ವಜಾತಿ ವಿವಾಹ ಪದ್ಧತಿಯಲ್ಲ ಎಂದುಕೊಂಡರು. ಅಂಬೇಡ್ಕರ್ ಅದನ್ನು ವಿರೋಧಿಸುತ್ತಿದ್ದ ತಾತ್ವಿಕ ವಿಷಯಗಳಿಗೆ ಪರ್ಯಾಯವಾದ ಸಂಗತಿಗಳನ್ನು ಹಿಂದೂ ಕೋಡ್‌ಬಿಲ್‌ನ ಮುಖಾಂತರ ಜಾರಿಗೊಳಿಸಲು ಪ್ರಯತ್ನಿಸಿದರು.

ಹಾಗಾಗಿ ಹಿಂದೂ ಕೋಡ್‌ ಬಿಲ್ ರಚಿಸಲು ಅಂಬೇಡ್ಕರ್ ಕಾತುರರಾದರು.ಅಲ್ಲದೆ ಮನು ಮತ್ತು ಅತನ ತರಹದ ಎಲ್ಲರ ವಿವಾಹ ಸಂಬಂಧಿ ಆಲೋಚನೆಗಳನ್ನು ಪರಿಶೀಲಿಸಿದರು.ಆದರೂ ಅದರಲ್ಲಿ ಪುರುಷರಿಗೆ ಸ್ತ್ರೀಯರನ್ನು ಅಧೀನಗೊಳಿಸಲೆಂದೇ ಅಸ್ತಿತ್ವ ಪಡೆದ ಪಿತೃ ಪ್ರಧಾನತೆ ವಿವಾಹ ಸಂಸ್ಥೆಯೊಳಗಿನ ಲಿಂಗಾಧಾರಿತ ತಾರತಮ್ಯವನ್ನು ಇಟ್ಟುಕೊಳ್ಳುವುದರ ಮೂಲಕವೇ ಸ್ವಜಾತಿ ವಿವಾಹ ಪದ್ಧತಿಯನ್ನು ಅಂದರೆ ಬ್ರಾಹ್ಮಣ ಪಿತೃಪ್ರಧಾನತೆ ನಿರ್ಮೂಲನೆಗೊಳಿಸಲು ಅಗತ್ಯವಾದ ತಿದ್ದುಪಡಿಗಳನ್ನು ತರಲು ಪ್ರಯತ್ನಿಸಿದರು.ಈ ಎಲ್ಲ ಅಂಶಗಳನ್ನು ಒಳಗೊಂಡ ‘ಕೂಸೆ’ ಹಿಂದೂ ಕೋಡ್ ಬಿಲ್ ಆಗಿದೆ.

ಆದ್ದರಿಂದ ಹಿಂದೂ ಕೋಡ್ ಬಿಲ್ ನಲ್ಲಿ ಮಹಿಳೆ ಸಂಬಂಧ ಎಲ್ಲ ಅಂಶಗಳು ಜಾತಿ ಪದ್ಧತಿಯನ್ನು ಉಳಿಸಿಕೊಂಡಿರುವ ಮೌಲ್ಯಗಳು ಮತ್ತು ಮಹಿಳಾ ವಿರೋಧಿ ಸಂಗತಿಗಳಾದ ವಿಧವೆ, ಆಸ್ತಿ ನಿರಾಕರಣಿ ಇತ್ಯಾದಿ ಸಂಗತಿಗಳನ್ನು ನಿರ್ವಹಿಸುತ್ತದೆ. ಇದು ಪಿತೃಪ್ರಧಾನತೆಯನ್ನು ಮುಂದುವರೆಸುತ್ತಿರುವ ವಿವಾಹ ಸಂಸ್ಥೆಯ ಲಿಂಗತಾರತಮ್ಯ ಗುಣಲಕ್ಷಣಗಳನ್ನು ನಿರ್ಮೂಲನೆ ಗೊಳಿಸುವುದರಲ್ಲಿ ಸಫಲವಾಗಲು ಸಾಧ್ಯವಿಲ್ಲ. ಈ ವಿವಾಹ ಸಂಬಂಧಿ ಮಸೂದೆ ಜಾತಿ ಒಳಗಿರುವ ಪಿತೃಪ್ರಧಾನತೆಯ ಮೌಲ್ಯಗಳಿಂದ ಗ್ರಹಿತವಾದವು.

ಈ ಹಿನ್ನೆಲೆಯಲ್ಲಿ ಹಿಂದೂ ಕೋಡ್ ಬಿಲ್‌ನ್ನು ಪರಿಶೀಲಿಸುವುದಾದರೆ ಇದು ಹಿಂದೂ ಸ್ತ್ರೀ-ಪುರುಷರ ಅಂತರಜಾತಿಯ ವಿವಾಹಗಳಿಗೆ ಕಾನೂನಾತ್ಮಕ ಅನುಮೋದನೆ ನೀಡಿದ್ದಲ್ಲದೆ, ಮಹಿಳೆಗೆ ವಿಚ್ಛೇದನೆ ಪಡೆಯುವ ಹಕ್ಕನ್ನು ಮನುಸ್ಮೃತಿ ಮಹಿಳೆಯರ ಮೇಲೆ ಹೇರಿದ್ದ ನಿಯಂತ್ರಣಗಳನ್ನು ತರ್ಕಬದ್ಧವಾಗಿ ಮಂಡಿಸುವ ಅಂಬೇಡ್ಕರ್ ಅದರಿಂದ ಹೊರಬರಲು ಬಯಸುವ ಮಹಿಳೆಯರಿಗೆ ವಿಚ್ಛೇದನೆ ಹಕ್ಕು ಅಗತ್ಯ ಎಂದು ತಿಳಿದು ಈ ಸಂಗತಿಯನ್ನು ಸೇರಿಸಿದ್ದಾರೆ.

ಹಾಗೆಯೇ ಜಾತಿಪದ್ಧತಿಯೊಂದಿಗೆ ಮತ್ತು ಪಿತೃಪ್ರಧಾನತೆಯೊಂದಿಗೆ ಮೈಗೂಡಿಸಿಕೊಂಡಿದ್ದ ಭಾರತದ ಜಮೀನ್ದಾರಿ ಪದ್ಧತಿ ಆಸ್ತಿಯ ಹಕ್ಕನ್ನು ಪುರುಷರಿಗೆ ವಹಿಸಿತ್ತು. ಇದು ಭೂಮಿಯ ಒಡೆತನ, ಕುಟುಂಬ ಆದಾಯದಲ್ಲಿ ಪಾಲು, ಕೃಷಿ ಉತ್ಪನ್ನದ ವಿತರಣೆ ಎಲ್ಲದರಿಂದಲೂ ಮಹಿಳೆಯರನ್ನು ಪ್ರತ್ಯೇಕಿಸಲಾಗಿತ್ತು.ಜೊತೆಗೆ ಭೂಮಿಯಲ್ಲಿ ದಿನನಿತ್ಯ ಕೆಲಸ ಮಾಡುವ ಮಹಿಳೆಯರ ದುಡಿಮೆಯನ್ನು ಅದೃಶ್ಯಗೊಳಿಸುವ ಮೂಲಕವೇ ಆಸ್ತಿಹಕ್ಕನ್ನು ನಿರಾಕರಿಸಲಾಗಿತ್ತು. ಈ ಕುರಿತು “ಮನು ಆಸ್ತಿಯ ವಿಚಾರದಲ್ಲಿ ಹೆಂಡತಿಯನ್ನು ಗುಲಾಮಳ ಸ್ಥಾನಕ್ಕೆ ಇಳಿಸಿದ್ದ” (ಬಾ.ಸಾ.ಅಂ.ಬ.ಭಾ, 1999, ಸಂ.4, ಪು.51), ಅಂಬೇಡ್ಕರ್‌ ಈ ಮಸೂದೆ ಮುಖಾಂತರ ಮಹಿಳೆಗೆ ಆಸ್ತಿಹಕ್ಕನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಒದಗಿಸಲು ಮುಂದಾದರು.

ಈ ಕುರಿತು 1956ರಲ್ಲಿ ಅಂಬೇಡ್ಕರ್ ಸಿದ್ದಾರ್ಥ ಕಾಲೇಜಿನಲ್ಲಿ ಮಾತನಾಡುತ್ತಿದ್ದರು. ಅವರ ಪ್ರಕಾರ ಹಿಂದೂ ವಿವಾಹ ಕಾಯಿದೆಯ ಕೊನೆಯ ಬದಲಾವಣೆ ಮಹಿಳೆಯ ಆಸ್ತಿಹಕ್ಕಿಗೆ ಸಂಬಂಧಿಸಿದ್ದು.1937ಕ್ಕೆ ಮುನ್ನ ಆಕೆ ಒಂದು ಕುಟುಂಬದ ಸೊಸೆ ಆಗಲಿ ಅಥವಾ ವಿಧವೆ ಸೊಸೆಯಾಗಲಿ ಆ ಕುಟುಂಬದಲ್ಲಿ ಆಸ್ತಿಯ ಪಾಲನ್ನು ಕೇಳುವಂತಿರಲಿಲ್ಲ. ಆದರೆ 1937ರ ಕಾಯ್ದೆಯಲ್ಲಿ ವಿಧವೆಗೆ ತಮ್ಮ ಮೃತಪತಿಯ ಆಸ್ತಿಯನ್ನು ಪಡೆಯುವ ಹಕ್ಕನ್ನು ನೀಡಿತು. ಆದರೂ ಮಹಿಳೆಯ ಆಸ್ತಿಯ ಹಕ್ಕು ಅಪೂರ್ಣವಾಗಿತ್ತು. ಆದರೆ ಈಗ ಹಿಂದೂ ವಿವಾಹ ಕಾಯ್ದೆ ಮೂಲಕ ಮನೆಯ ಮಗಳಿಗೂ ಸಹ ಮಗನಷ್ಟೇ ಆಸ್ತಿ ಮೇಲೆ ಹಕ್ಕು ಇರುವ ಸಂಗತಿಯನ್ನು ಒಳಗೊಂಡಿದೆ. ಇದು ಸಮಾಜದಲ್ಲಿ ಅಳವಡಿಸಲಾಗಿರುವ ಮೌಲ್ಯಗಳನ್ನು ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜಾತಿ ಪದ್ಧತಿಯಲ್ಲಿನ ಆಮೂಲಾಗ್ರ ಬದಲಾವಣೆಗೆ ಸಾಧ್ಯವಾಗುವುದೆಂದು ಹಿಂದೂ ಕೋಡ್ ಬಿಲ್ಲನ್ನು ರೂಪಿಸಲಾಗಿದೆ” ಎಂದರು. (ಅಂಬೇಡ್ಕರ್‌, ಉದ್ಧತ; ಅಹಲಾರಂಗ್ಲೀಕರ್, 1991, ಪು.241).

ಇಷ್ಟೆಲ್ಲ ಸಂಗತಿಗಳನ್ನು ಒಳಗೊಂಡ ಈ ಕಾಯ್ದೆಯ ಮಂಡನೆಯ ಸಂದರ್ಭದಲ್ಲಿ ಅಂಬೇಡ್ಕರ್‌ ಅಪಾರವಾದ ವಿರೋಧವನ್ನು ಎದುರಿಸಬೇಕಾಯಿತು.ಅದನ್ನು ಸಮರ್ಥಿಸುವಾಗ ಅಂಬೇಡ್ಕರ್ ಪಾರ್ಲಿಮೆಂಟಿನಲ್ಲಿ ಎದ್ದು ನಿಂತು ಹೀಗೆ ನುಡಿದರು. “ಮಹಿಳೆಯ ಆಸ್ತಿಹಕ್ಕನ್ನು ಸಮರ್ಥಿಸುವ ಬೃಹಸ್ಪತಿಯನ್ನು, ವಿಚ್ಛೇದನ ಸಿದ್ಧಾಂತವನ್ನು ಪ್ರತಿಪಾದಿಸುವ ‘ಪರಾಶರ ಸ್ಮೃತಿ’ಯನ್ನು ಹಿಂದೂ ಮೂಲಭೂತವಾದಿ ಮುಖಂಡರ ಮುಂದೆ ಎತ್ತಿಹಿಡಿದರು. ಇದು ಹಿಂದೂಕೋಡ್ ಬಿಲ್‌ನಲ್ಲಿರುವ ತಮ್ಮ ಸಿದ್ಧಾಂತದ ಮೂಲಭೂತ ಸತ್ಯ” ಎಂದರು (ಬಾ.ಸಾ.ಅಂ.ಬ.ಭಾ, 1994, ಪು.622), ಹೀಗೆ ಅಂಬೇಡ್ಕರ್ ಹಿಂದೂಕೋಡ್ ಮಸೂದೆಯನ್ನು ಮಂಡಿಸಿದರು.

ಆದರೆ ಇದು ಪಿತೃಪ್ರಧಾನ, ಧರ್ಮಪ್ರಧಾನ, ಹಾಗೂ ಜಾತಿಪ್ರಧಾನ ಗುಣಗಳನ್ನು ಸಮರ್ಥಿಸುವ ಸದಸ್ಯರ ಪ್ರತಿರೋಧದಿಂದಾಗಿ ಈ ಮಸೂದೆ ಬಹುಮತ ಗಳಿಸುವಲ್ಲಿ ವಿಫಲವಾಯಿತು.ಈ ಘಟನೆಯಿಂದ ತುಂಬಾ ಬೇಸರಗೊಂಡ ಅಂಬೇಡ್ಕರ್ ತಮ್ಮ ಮಂತ್ರಿ ಪದವಿಗೆ ಸೆಪ್ಟೆಂಬರ್ 27, 1951ರಂದು ರಾಜೀನಾಮೆ ಸಲ್ಲಿಸಿದರು.ಇದು ಈ ಮಸೂದೆಯ ಜಾತಿ ಸಂಬಂಧಿ ಪರಿಹಾರದ ಬದ್ಧತೆಯನ್ನು ತೋರಿಸುತ್ತದೆ.ಜೊತೆಗೆ ಮಹಿಳೆಯರ ಬಗೆಗಿನ ಉದಾರ ಮನೋಭಾವನೆಯನ್ನು ಬಿಚ್ಚಿಡುತ್ತದೆ” ಎಂದು ಭಾವಿಸಿದವರು ಸಹ ನಂತರ ಈ ಘಟನೆಗೆ ಪ್ರತಿಕ್ರಿಯಿಸಿದರು.

ಅನೇಕ ಸಮಾಜಶಾಸ್ತ್ರಜ್ಞರು ಇದೊಂದು ದುರದೃಷ್ಟಕರ ಪ್ರಸಂಗ ಎಂದು ವಿಷಾದ ವ್ಯಕ್ತಪಡಿಸಿದರು. ಅದರಲ್ಲೂ ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ಪಿ.ಬಿ.ಗಜೇಂದ್ರ ಗಡಕರ್ ಅವರು ಅಂಬೇಡ್ಕರ್‌ ಅವರು ವಹಿಸಿದ ಪಾತ್ರದ ಬಗ್ಗೆ ಹೀಗೆ ಅಭಿಪ್ರಾಯಪಟ್ಟಿದ್ದಾರೆ. “The Honourable Dr. Ambedkar has played an important role in the progress of this bill and in introducing the code before the Parliment. He has shown his determination to persuade the legislature to see it through without delay. It is well known that Dr. Ambedkar can legitimately and justly feel proud for the substantial work done by him in the drafting for our Constitution. It with the active co-operation and support of the Prime Minister who fortunately shares his Law Minister enthusiasm. The code Dr. Ambedkar is able to give it the pride of place in her statue book. I for one would hail it as time sweet revenglon the Hindu society as a whole. If Dr. Ambedkar gave us hindus our code his achievement would go down in history as a very eloquent piece of poetic justice indeed.”

ಇನ್ನು ಕೆಲವರು ಇದನ್ನು “ಚರಿತ್ರೆಯ ಹಿನ್ನಡೆ” ಎಂದರು. ಅಂದರೆ ಆಧುನಿಕ ಭಾರತದಲ್ಲಿಯೂ ಮಹಿಳೆಯ ಪರಿಸ್ಥಿತಿಗಳು ಹಿಂದಿನಂತೆಯೇ ಯಥಾಪ್ರಕಾರ ಮುಂದುವರೆದಿವೆ ಎಂದರು.

ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಬೌದ್ಧಿಕವಾಗಿ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಕಡೆಗಣಿಸಲಾಗಿತ್ತು.ಗಂಡು ಹೆಣ್ಣಿನ ನಡುವೆ ಇರುವ ಈ ಲಿಂಗ ತಾರತಮ್ಯವು ಜಾತಿ ತಾರತಮ್ಯದ ಜೊತೆಗೆ ಸಂಬಂಧ ಪಡೆದಿತ್ತು. ಹಿಂದೂ ಧರ್ಮದಲ್ಲಿ ಶೂದ್ರನು ಕೀಳು ಮಾನವನಾದರೆ ಸ್ತ್ರೀ ನೀಚಳೆಂದು ಪರಿಗಣಿಸಲ್ಪಟ್ಟಿದ್ದಾಳೆ. ಇದರಿಂದಾಗಿ ಸ್ತ್ರೀಯು ವಿವಿಧ ಹಂತದಲ್ಲಿ ಸಾಮಾಜಿಕ ಭಿನ್ನತೆಯಿಂದ ಶೂದ್ರರಿಗಿಂತ ಹೆಚ್ಚಿಗೆ ಗುರಿಯಾಗಿದ್ದಾಳೆ. ಸ್ತ್ರೀ ಕಿರುಬನ ಹೃದಯದ ವಳು (ಋಗ್ವೇದದ) ಅವಳು ಎಲ್ಲ ಕೆಡುಕಿನ ಬೇರು (ಮಹಾಭಾರತ), ಅವಳು ಚಂಚಲೆ ಖಡ್ಗದಂತೆ ಹರಿತವಾದವಳು, ಬಿರುಗಾಳಿಯಂತೆ ಅಸ್ಥಿರಳು(ರಾಮಾಯಣ), ಹೆಂಗಸು ಕಾಮಪಿಪಾಸೆ ಉಳ್ಳವಳು, ಕುಟಿಲೆ, ಸ್ತ್ರೀ ಸ್ವಾತಂತ್ರ್ಯಕ್ಕೆ ಎಂದಿಗೂ ಅನರ್ಹಳು (ಮನು) ಸ್ತ್ರೀ ಒಂದು ವಸ್ತು, ಪದಾರ್ಥ, ಶಾಕ್ತ ಮುಂತಾಗಿ ಸ್ತ್ರೀಯನ್ನು ವೇದೋಪನಿಷತ್ತುಗಳ ಕಾಲದಿಂದಲೂ ಕಡೆಗಣಿಸಿಕೊಂಡು ಬರಲಾಗಿತ್ತು.” (ಅದೇ, ಪು.51,53) ಮಹಿಳೆ ಇಂತಹ ದಿಗ್ಟಂಧನಗಳಿಗೆ ಗುರಿಯಾದುದರಿಂದ ಅವಳ ಬಿಡುಗಡೆಗಾಗಿ ಪ್ರಯತ್ನಗಳು ಹೋರಾಟಗಳು ಚರಿತ್ರೆಯ ಉದ್ದಕ್ಕೂ ನಡೆದಿವೆ. ಜ್ಯೋತಿಬಾ ಫುಲೆ, ರಾಜಾರಾಮ ಮೋಹನರಾಯ್‌ರಂತವರು ಇಲ್ಲಿ ಉಲ್ಲೇಖನಾರ್ಹರು. ಇದರಲ್ಲಿ ಅಂಬೇಡ್ಕರ್‌ ಅವರು ಮಹಿಳೆಗೆ ಸಮಾನಹಕ್ಕು ಅಧಿಕಾರಗಳನ್ನು ಕೊಡಿಸಿಕೊಡುವಲ್ಲಿ ಮಾಡಿದ ಪ್ರಯತ್ನಗಳು ಮಹತ್ವದ್ದಾಗಿವೆ.

1955ರ ಜನವರಿಯಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಗಳು ನಡೆದವು.ನಂತರ ಬಹುಮತದ ಸರ್ಕಾರದ ಪಾರ್ಲಿಮೆಂಟ್‌ನ ಎರಡು ಸದನಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ನಾಲ್ಕು ಮಸೂದೆಗಳನ್ನು ಒಂದಾದ ಮೇಲೆ ಒಂದರಂತೆ ಮಂಡಿಸಿದರು.ಈ ನಾಲ್ಕು ಮಸೂದೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಲಾಗಿದೆ.ಎರಡು ಸದನಗಳ ಅನುಮೋದನೆ ದೊರೆಯಿತು.ಆದ್ದರಿಂದ 1955-56ರಲ್ಲಿ ಮಂಡಿತವಾದ ಹಿಂದೂ ಕೋಡ್ ಬಿಲ್‌ಗೆ ಮಹಿಳಾ ನೆಲೆಯಿಂದ ಪ್ರಮುಖವಾದ ಸ್ಥಾನ ಹೊಂದಿದೆ. ಇದು ವಿವಾಹ ಸಂಬಂಧಿತವಾದ ಮಹಿಳೆಯರ ಹಲವು ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿತವಾದ ಕಾಯ್ದೆಯಾಗಿದ್ದು, ಅದರ ಪ್ರಮುಖ ಅಂಶಗಳು ಈ ರೀತಿಯಿವೆ:

ಒಂದು : ಬಹುಪತ್ನಿತ್ವವನ್ನು ನಿಷೇಧಿಸಿ, ಏಕಪತಿ-ಪತ್ನಿತ್ವವನ್ನು ಕಾನೂನು ಬದ್ಧಗೊಳಿಸುವುದು (Hindu Marriage Act), ಹಿಂದೂ ವಿವಾಹ ಕಾಯ್ದೆ (1955) ಬಹುಪತ್ನಿತ್ವವನ್ನು ಅಪರಾಧವಾಗಿ ಪರಿಗಣಿಸಿದೆ. ಜೊತೆಗೆ ಏಕಪತ್ನಿತ್ವಕ್ಕೆ ಅನುಮತಿಯಿದೆ. ಅಂದರೆ ಇದರಲ್ಲಿ “ಅಂಬೇಡ್ಕರ್ ಅವರು ಎರಡು ರೀತಿಯ ವಿವಾಹ ಪದ್ಧತಿಗಳನ್ನು ಪ್ರಸ್ತಾಪಿಸಿದ್ದರು.ಮೊದಲನೆಯದು ಪಾರಂಪರಿಕ ವಿವಾಹಪದ್ಧತಿ (Sacramintal Marriage), ಎರಡನೆಯದು ನಾಗರಿಕ ವಿವಾಹಪದ್ಧತಿ (ಅತುಟ ಒಚಿಡಿಡಿಚಿರಜ), ಈ ಎರಡು ಪದ್ಧತಿಗಳು ಸಂಪೂರ್ಣವಾಗಿ ಸಂಪ್ರದಾಯದಿಂದ ಭಿನ್ನವಾಗಿರಲಿಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿಯಲ್ಲಿಯೇ ಈ ಎರಡು ಬಗೆಯ ವಿವಾಹಗಳಿದ್ದವು.ಸಾಂಪ್ರದಾಯಿಕವಾಗಿ ಗುರು ಹಿರಿಯರು ನಿರ್ಧರಿಸಿದ ವಿವಾಹ ಮೊದಲ ಬಗೆಯದಾಗಿದ್ದರೆ, ಪರಸ್ಪರ ಪ್ರೀತಿಸಿ ಮದುವೆಯಾಗುವುದು ಗಾಂಧರ್ವ ವಿವಾಹಪದ್ಧತಿ ಎನಿಸಿತ್ತು.

ಗಾಂಧರ್ವ ವಿವಾಹಪದ್ಧತಿಗೆ ಹೊಸ ಅಂಶಗಳನ್ನು ಸೇರಿಸಿ ಅಂಬೇಡ್ಕರ್ ಅವರು ನಾಗರಿಕ ವಿವಾಹ ಪದ್ಧತಿಯನ್ನು ರೂಪಿಸಿದಂತೆ ಕಾಣುತ್ತದೆ. ಆದರೆ ಅಂಬೇಡ್ಕರ್‌ ನಾಗರಿಕ ವಿವಾಹಪದ್ಧತಿಗೆ ಕಾನೂನಿನ ರಕ್ಷೆಯನ್ನು ಒದಗಿಸಿದರು. ಇದು ಎಲ್ಲ ಮತೀಯ ಸ್ತ್ರೀಯರನ್ನು ಸಮಾನವಾಗಿ ಪರಿಗಣಿಸಿದ ಕಾನೂನಾಗಿತ್ತು.” (ಬಾ.ಸಾ.ಅಂ.ಬ.ಭಾ, 2004,ಪು.600,800) ಈ ಮೂಲಕವೇ ಅಂತರ್‌ಜಾತಿಯ ವಿವಾಹ ಬಹಿಷ್ಕ್ರುತವಲ್ಲ ಎಂದು ಏಕಪತ್ನಿತ್ವ ವ್ಯವಸ್ಥೆಯನ್ನು ಜಾರಿಗೊಳಿಸಿ, ಇದನ್ನು ಕಾನೂನು ಬದ್ಧಗೊಳಿಸಲಾಗಿದೆ. ಯಾವುದೇ ವ್ಯಕ್ತಿ ಮೊದಲನೆಯ ಪತ್ನಿ ಜೀವಂತವಿದ್ದು, ಅವಳಿಂದ ವಿಚ್ಛೇದನ ಪಡೆಯದೆ ಮರುವಿವಾಹವಾಗುವಂತಿಲ್ಲ. ಈ ರೀತಿ ವಿವಾಹಕ್ಕೆ ಕಾನೂನು ಮನ್ನಣೆ ಇರುವುದಿಲ್ಲ.

ಬಹುಪತ್ನಿತ್ವ ಪದ್ಧತಿ ಭಾರತ ದಂಡಸಂಹಿತೆ ಪ್ರಕಾರ ಅಪರಾಧ ಎಂದು ಪರಿಗಣಿಸಲಾಗಿದೆ.ಪ್ರಾಚೀನ ಹಿಂದೂ ಸಮಾಜದಲ್ಲಿ ಬಹುಪತ್ನಿತ್ವ ರೂಢಿಯಲ್ಲಿತ್ತು.ಈಗ ಭಾರತೀಯ ದಂಡಸಂಹಿತೆ 494 ಮತ್ತು 495ನೇ ಕಲಂನ ಪ್ರಕಾರ ಶಿಕ್ಷೆಗೆ ಅರ್ಹರಾಗುತ್ತಾರೆ. ಹಾಗೆಯೇ ಯಾವುದೇ ವ್ಯಕ್ತಿಯ ತಂದೆಯ ಸಂಬಂಧ ಮೇಲುಮುಖವಾಗಿ 5ನೇ ತಲೆಮಾರಿನವರೆಗೆ ತಾಯಿಯ ಸಂಬಂಧ ಮೇಲುಮುಖವಾಗಿ 3ನೇ ತಲೆಮಾರಿನವರಿಗೆ ಸಂಬಂಧದಲ್ಲಿ ವಿವಾಹವಾಗುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.

ಒಬ್ಬ ವ್ಯಕ್ತಿ ಭಾರತದಲ್ಲಿ ಮದುವೆಯಾಗಿ ನಂತರ ವಿದೇಶಕ್ಕೆ ತೆರಳಿ ಅಲ್ಲಿ ಮರುವಿವಾಹವಾದರೂ ಕೂಡ ಅಪರಾಧಿ ಎಂದು ಕಾನೂನಿನ ಅನ್ವಯ ಪರಿಗಣಿಸಲ್ಪಡುತ್ತಾನೆ. ವಿಚ್ಛೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಮರುವಿವಾಹಕ್ಕೆ ಈ ಕಾಯ್ದೆಯಲ್ಲಿ ಅವಕಾಶವಿಲ್ಲ ವಿಚ್ಛೇದನ ಕ್ರಿಯೆ ಪೂರ್ಣಗೊಳ್ಳುವವರೆಗೆ ಆತ ಮತ್ತು ಆಕೆ ಮರುವಿವಾಹ ಮಾಡಿಕೊಳ್ಳುವಂತಿಲ್ಲ. ಈ ಕಾನೂನಿನ ಕಣ್ಣುತಪ್ಪಿಸಿ ಈ ರೀತಿಯ ವಿವಾಹವಾದರು ಕೂಡ ಅದು ಅನೂರ್ಜಿತವೆಂದೇ ಹೇಳುತ್ತದೆ. ಅಷ್ಟೇ ಅಲ್ಲ, ಈ ಕಾಯ್ದೆಯಲ್ಲಿ ಪ್ರತಿಯೊಂದು ಸಮಾಜದ ಜನತೆ ಸ್ತ್ರೀಯನ್ನು ಹೇಗೆ ಕಾಣುತ್ತಾ ಬಂದಿದೆ ಎಂಬುದನ್ನು ಆಧಾರ ಸಹಿತವಾಗಿ ಸಾಬೀತುಪಡಿಸಲು ಪ್ರಯತ್ನಿಸಿದ ಅಂಬೇಡ್ಕರ್‌ ಭಾರತೀಯ ಪ್ರಾಚೀನ ಕಾಲದಿಂದ ನಿರಾಕರಿಸಿದ ವಿವಾಹ ವಿಚ್ಛೇದನ ಹಕ್ಕನ್ನು ಕಲ್ಪಿಸಿದರು. ಅವರ ಪ್ರಕಾರ “ಸಕಾರಣಗಳಿಲ್ಲದೆ ಪುರುಷನಾಗಲೀ, ಸ್ತ್ರೀಯಾಗಲೀ ತಾಳಿಯನ್ನು ಹರಿದುಕೊಳ್ಳುವುದಕ್ಕೆ ಬರುವುದಿಲ್ಲ. ಹಾಗೆಯೇ ಕೆಲವು ಸಕಾರಣಗಳು ಹಾಗೂ ಮೂಲಭೂತ ನ್ಯೂನತೆಗಳು ಪುರುಷನಲ್ಲಿದ್ದರೆ ಅಂತಹ ವ್ಯಕ್ತಿಯಿಂದ ವಿವಾಹ ವಿಚ್ಛೇದನವನ್ನು ಪಡೆಯಬಹುದು.” (ಬಾ.ಸಾ. ಅಂ.ಬ.ಭಾ, ಅದೇ, ಪು.721, 777) ಎಂದು ಹೇಳುತ್ತಾರೆ. ವಿವಾಹ ವಿಚ್ಛೇದನೆಗೆ ಕಾರಣಗಳ ಪಟ್ಟಿ ನೀಡುತ್ತಾರೆ. ಅವುಗಳೆಂದರೆ:

1. ಮದುವೆ ಮಾಡಿಕೊಂಡ ವ್ಯಕ್ತಿ ಇಲ್ಲವೆ ಹೆಣ್ಣು ಸುಮಾರು ಎರಡು ವರ್ಷ ದೂರಾಗಿ ದೇಶ್ಯಾಂತರ ಹೋಗಿದ್ದರೆ,
2. ಇನ್ನೊಬ್ಬಳು ಭಾಗಿದಾರನೊಂದಿಗೆ ಬದುಕು ನಡೆಸಿದ್ದರೆ,
3. ತಾನು ಮಾಡಿಕೊಂಡ ಪುರುಷನಿಗೆ ಯಾವುದಾದರೊಂದು ಭಯಾನಕ ಸೋಂಕು ರೋಗ ತಗುಲಿದ್ದರೆ,
4. ಗುಹ್ಯರೋಗದಿಂದ ಪೀಡಿತನಾಗಿದ್ದರೆ,
5. ಸಾಂಕ್ರಮಿಕ ಕುಷ್ಠರೋಗದಿಂದ ನರಳುತ್ತಿದ್ದರೆ,
6. ಮದುವೆಯಾದಂದಿನಿಂದ ಮನಸ್ವಾಸ್ಥ ಇರದಿದ್ದರೆ,
7. ವ್ಯಭಿಚಾರಿಯಾಗಿದ್ದರೆ,
8. ಗಂಡನು ಷಂಡನಾಗಿದ್ದರೆ,
9, ಉಪಪತ್ನಿಯನ್ನು ಇಟ್ಟುಕೊಂಡರೆ,
10. ಅನ್ಯಮತಕ್ಕೆ ಮತಾಂತರಗೊಂಡಿದ್ದರೆ,
11. ಪುರುಷ ಹುಚ್ಚು ಇಲ್ಲವೆ ಬುದ್ಧಿಭ್ರಮಣೆ ಹೊಂದಿದ್ದರೆ, ವಿಚ್ಛೇದನಕ್ಕೆ ದಾವೆ ಹಾಕಿ ವಿಚ್ಛೇದನೆಯನ್ನು ಪಡೆಯಬಹುದು(ಅದೇ, ಪು.733). ಹಾಗೆಯೇ ವಿಚ್ಚೇದನೆ ಜೊತೆಗೆ ಗಂಡನು ತನ್ನ ಆಸ್ತಿಯಲ್ಲಿ ಜೀವನಾಂಶ ಕೊಡಬೇಕಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ವಿವರಣೆ ಹೀಗಿದೆ;

1. ಗಂಡನ ನಿವ್ವಳ ವರಮಾನದ ಐದನೆಯ ಒಂದು ಭಾಗಕ್ಕೆ ಮೀರದಂತೆ ಹಣವನ್ನು ಪತ್ನಿಗೆ ಕೊಡತಕ್ಕದ್ದು.
2. ಪತಿಯ ಆಸ್ತಿಯಲ್ಲಿ ಒಂದು ಭಾಗವನ್ನು ಕೊಡತಕ್ಕದ್ದು.
3. ಆಸ್ತಿಯಲ್ಲಿ ಒಂದು ಮೊತ್ತವನ್ನು ಕೊಡತಕ್ಕದ್ದು.
4. ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ಕೊಡತಕ್ಕದ್ದು.
5. ಅವಳಿಗೂ ಆಸ್ತಿ ಇದ್ದರೆ ಗಂಡ ಮತ್ತು ಹೆಂಡತಿಯ ಈರ್ವರ ಆಸ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.” (ಉದ್ಧೃತ : ಬಾಬುರಾವ್ ಮುಡಬಿ, 2005, ಪು.146)

ಹೀಗೆ ಈ ವಿವಾಹ ಕಾಯ್ದೆಯಲ್ಲಿ 1956 ವಿಚ್ಛೇದನಕ್ಕೆ ಪರಸ್ಪರ ಇಬ್ಬರಲ್ಲಿ ಒಬ್ಬರು ದೋಷಾರೋಪಣೆಗೆ ಒಳಪಟ್ಟಾಗ (ಶೀಲ, ಆರೋಗ್ಯದ ಬಗ್ಗೆ ಇತ್ಯಾದಿ) ಮಾತ್ರ ವಿಚ್ಛೇದನಕ್ಕೆ ಅವಕಾಶವಿತ್ತು.ಆದರೆ 1976ರಲ್ಲಿ ಜಾರಿಗೆ ಬಂದ ವಿವಾಹ ವಿಶೇಷ ಕಾನೂನು ಭಾಗ 13ರ (ಬಿ) ಪ್ರಕಾರ ಗಂಡ ಹೆಂಡತಿ ಪರಸ್ಪರ ಒಪ್ಪಿಗೆಯಿಂದಲೂ ದಾಂಪತ್ಯದಿಂದ ಬಿಡುಗಡೆ ಹೊಂದಬಹುದು.

“ವಿವಾಹ ವಿಚ್ಛೇದನೆ ಕುರಿತು ಮೊಕದ್ದಮೆಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಪತ್ನಿ ಜೀವನಾಂಶಕ್ಕೆ ಅರ್ಹಳಾಗಿರುತ್ತಾಳೆ.ನ್ಯಾಯಾಲಯವು ಪತಿಯ ಒಟ್ಟು ವರಮಾನದ ಐದನೆಯ ಭಾಗದಷ್ಟು ವರಮಾನವನ್ನು ಜೀವನಾಂಶ ನೀಡುವಂತೆ ಆದೇಶವಿದೆ.ಮೊಕದ್ದಮೆ ಇತ್ಯರ್ಥವಾದಾಗ ಪತಿಯಿಂದ ಪತ್ನಿಗೆ ಒಟ್ಟಾಗಿ ಒಂದೇ ಮೊತ್ತದಲ್ಲಿ ಅಥವಾ ಆಕೆ ಬದುಕಿರುವವರೆಗೆ ಮಾಸಿಕವಾಗಿ ಜೀವನಾಂಶ ನೀಡುವಂತೆ ಕಲ್ಪಿಸಲಾಗಿದೆ.ಆದರೆ ವಿಚ್ಛೇದನೆ ಹೊಂದಿದ ಪತ್ನಿ, ಮರು ವಿವಾಹವಾದ ಸಂದರ್ಭದಲ್ಲಿ ಆಕೆ ಜೀವನಾಂಶಕ್ಕೆ ಅರ್ಹಳಾಗಿರುವುದಿಲ್ಲ” ಎಂದು ಹೇಳುತ್ತದೆ.

ವಿವಾಹ ವಿಚ್ಛೇದನ ಕುರಿತು ಕಾನೂನಿನಲ್ಲಿ ಇಷ್ಟೆಲ್ಲ ಅವಕಾಶಗಳು ಇದ್ದಾಗ್ಯೂ ಸಂಪ್ರದಾಯವಾದಿಗಳು ಇರುವ ಈ ಸಮಾಜದಲ್ಲಿ “ವಿವಾಹ ವಿಚ್ಛೇದನೆ” ಎಂಬುದು ವಾಸ್ತವವಾಗಿ ಹಿಂದೂ ಧರ್ಮದ ವಿರೋಧಿ ಅಂಶವಾಗಿ ನಿರೂಪಿತಗೊಳ್ಳುತ್ತದೆ.ಆದ್ದರಿಂದ ಇಂದಿಗೂ ಕೂಡ ಬಹುತೇಕ ಮಹಿಳೆಯರು ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೊಕ್ಕಿರುವ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ.ದಾಖಲಾದ ಪ್ರಕರಣಗಳನ್ನೇ ವೈಭವೀಕರಿಸಲಾಗುವುದು. ವಿವಾಹ ವಿಚ್ಛೇದನೆ ಎಂಬುದು ಮಹಿಳೆಯರನ್ನು ಹಿಂಸೆಗೆ ಒಳಪಡಿಸುವ ಬಹುಮುಖ್ಯವಾದ ಸಂಪ್ರದಾಯವಾಗಿದೆ.ಅದರ ಜೊತೆಗೆ “ಧರ್ಮಬಾಹಿರ ಮಕ್ಕಳನ್ನು ಧರ್ಮಸಮ್ಮತಿಗೊಳಿಸುವುದು, ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 15 ವರ್ಷಕ್ಕೆ (ಈಗ 18 ವರ್ಷ ಆಗಿದೆ) ಏರಿಸುವುದರ ಮೂಲಕ ಅವರಿಗೆ ಸ್ವಾತಂತ್ರ್ಯವನ್ನು ಒದಗಿಸುವುದಾಗಿದೆ.ಆದರೆ ಜಾತಿ, ಮತ್ತು ಪಿತೃಪ್ರಧಾನ ಲೈಂಗಿಕ ಪಾವಿತ್ರ್ಯ ಗುಣಗಳಿಂದಾಗಿ ಇದು ಇಂದಿಗೂ ನಮ್ಮ ಸಮಾಜದ ಬಹು ಮುಖ್ಯ ಸಾಮಾಜಿಕ ಸಮಸ್ಯೆಯಲ್ಲಿ ಚರ್ಚೆಗೊಳ್ಳುತ್ತಿರುವುದು. ಇದು ಬಾಲ್ಯವಿವಾಹ, ವೈಧವ್ಯ, ಪತಿವ್ರತೆ, ಶೀಲ-ಅಶ್ಲೀಲಗಳಲ್ಲಿ ಸುತ್ತುವರೆಯುತ್ತಿದೆ.ಇವು ಶಿಶ್ನಕೇಂದ್ರಿತ ಆಧಿಪತ್ಯವನ್ನು ಅನಾವರಣಗೊಳಿಸುತ್ತವೆ.

ಮಹಿಳೆಗೂ ಆಸ್ತಿ ಹಕ್ಕನ್ನು ಕಾನೂನುಬದ್ಧಗೊಳಿಸಲಾಯಿತು. ಅಂದರೆ ಮಹಿಳೆಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು (Succession Act (1956) ಜಾರಿಗೊಳಿಸಲಾಯಿತು.ಅದರ ಪ್ರಕಾರ “ಗಂಡ ಸತ್ತರೆ ಆತನ ಆಸ್ತಿಯು ಆತನ ಹೆಂಡತಿಗೆ ಸೇರುತ್ತದೆ. ಹೆಣ್ಣು ಮಕ್ಕಳಿಗೆ ತನ್ನ ತಂದೆ ಆಸ್ತಿಯಲ್ಲಿ ಸಮಪಾಲು ಇದ್ದು, ಅವರು ತಮ್ಮ ಆಸಕ್ತಿ ಹಾಗೂ ಇಚ್ಛೆಗೆ ಅನುಸಾರವಾಗಿ ಮಾರಾಟ ಮಾಡಬಹುದು. ಈ ವಿಷಯದಲ್ಲಿ ಅವಳು ಸಂಪೂರ್ಣ ಸ್ವತಂತ್ರಳು.ಹಾಗೆಯೇ ಇದು ಸಂವಿಧಾನದ 15ನೇ ವಿಧಿಗೆ ಸಂಬಂಧಿಸಿದೆ. ಇದರಲ್ಲಿ ಹಿಂದೂ ಮಹಿಳೆಯು ಈ ಕಾನೂನಿನ ಜಾರಿಯ ನಂತರ ಆಸ್ತಿಯ ಕುರಿತು ಅಂತಿಮ ಇಷ್ಟಪತ್ರವನ್ನು ಬರೆಯದೆ ಮರಣ ಹೊಂದಿದ್ದರೆ, ಅವಳ ಆಸ್ತಿಗೆ ಸಮನಾದ ಉತ್ತರಾಧಿಕಾರದ ಕ್ರಮವು ಅನ್ವಯಿಸುತ್ತದೆ” ಇತ್ಯಾದಿ ಅಂಶಗಳನ್ನು ತಿಳಿಸುತ್ತದೆ.(ಉದ್ಧತ: ಅರವಿಂದ ಮಾಲಗತ್ತಿ, 1991, ಪು.143) ಜೊತೆಗೆ ಈ ಕಾಯ್ದೆಯ ಮಹತ್ವದ ಬದಲಾವಣೆಯ ಅಂಶಗಳೆಂದರೆ:

1. ಇದುವರೆಗೆ ಧಾರ್ಮಿಕ ಫಲಾನುಭವಕ್ಕೂ, ಆಸ್ತಿಹಕ್ಕಿಗೂ ಇದ್ದ ಸಂಬಂಧವನ್ನು ತೆಗೆದುಹಾಕಿ ವಾರಸುದಾರಿಕೆ ಹಕ್ಕು ಮತ್ತು ವಾರಸುದಾರಿಕೆ ಕ್ರಮವನ್ನು ವಿಧಿಸಲಾಗಿದೆ.

2. ಇದುವರೆಗೆ ಸ್ತ್ರೀಯರಿಗಿದ್ದ ಪರಿಮಿತ ಹಕ್ಕು (ಜೀವನ ಪದ್ಯಂತ ಅನುಭವಿಸುವ ಹಕ್ಕು) ತೆಗೆದುಹಾಕಿ, ಸ್ತ್ರೀಯರಿಗೆ ಯಾವುದೇ ರೀತಿಯಲ್ಲಿ ಆಸ್ತಿ ಲಭಿಸಿರಲಿ ಅವರು ಪುರುಷರಂತೆ ಸಂಪೂರ್ಣ ಹಕ್ಕುದಾರರಾಗುವರೆಂದು ಘೋಷಿಸಲಾಗಿದೆ.

3. ವಾರಸುದಾರಿಕೆಯ ಅನುಕ್ರಮಣಿಯಲ್ಲಿ ಬಹಳ ಕೆಳಗೆ ಇದ್ದ ಮೃತ ಮಗನ ಹಾಗೂ ಮೃತ ಮಗಳ ಮಗಳನ್ನು ಬಹಳ ಮುಂದೆ ತಂದು ಅವರನ್ನು ಮಗ ಮೃತ ಮಗನ ವಿಧವೆ, ಮೃತ ಮಗನ ಮಗ, ಅವನ ವಿಧವೆ, ಮೃತ ಮಗನ ಮಗ (ಮೊಮ್ಮಗ) ಅವನ ವಿಧವೆ, ಮಗಳು, ಮೃತ ಮಗಳು, ಮಗ ಮುಂತಾದವರನ್ನು ಪ್ರಥಮ ದರ್ಜೆಯ ವಾರಸುದಾರರನ್ನಾಗಿ ಮಾಡಲಾಗಿದೆ. ಧಾರ್ಮಿಕ ಕಾರಣದಿಂದಾಗಿ ದೂರವಿಟ್ಟಿದ್ದ ಈ ಸ್ತ್ರೀ ಸಂಬಂಧಗಳನ್ನು ಮೃತವ್ಯಕ್ತಿಗೆ ಹತ್ತಿರದ ರಕ್ತ ಸಂಬಂಧಿಗಳಾಗುತ್ತಾರೆಂಬ ಕಾರಣದಿಂದ ಈ ಬದಲಾವಣೆ ಮಾಡಲಾಗಿದೆ.

4. ಮಿತಾಕ್ಷರದ ಛಾಯಾಭಾಗದಲ್ಲಿ ಎರಡು ಶಾಖೆಗಳಿಗೂ ಒಂದೇ ವಾರಸುದಾರಿಕೆ ನಿಯಮಾವಳಿಯನ್ನು ಅನ್ವಯಿಸಲಾಗಿದೆ.

5. ಸ್ತ್ರೀಯರ ಆಸ್ತಿ(ಸ್ತ್ರೀಧನಕ್ಕೆಗೆ ಸಂಬಂಧಿಸಿದಂತೆ ವಾರಸುದಾರಿಕೆ ನಿಯಮಗಳನ್ನು ಏಕರೂಪಗೊಳಿಸಲಾಗಿದೆ. ಸ್ತ್ರೀಧನದ ಲಕ್ಷಣಗಳ ಮೇಲೆ ಈಗ ಅದು ಅವಲಂಬಿಸುವುದಿಲ್ಲ. ಸ್ತ್ರೀಧನದ ಬಗ್ಗೆ ಈವರೆಗೆ ಇದ್ದ ಎಲ್ಲ ಗೊಂದಲಗಳನ್ನು ನಿವಾರಿಸಿ ಸ್ತ್ರೀಗೆ ಯಾವ ಮೂಲದಿಂದ ಯಾವಾಗ ಯಾವ ಆಸ್ತಿಯೇ ಬರಲಿ ಅದು ಅವಳ ಸಂಪೂರ್ಣ ಆಸ್ತಿಯಾಗುತ್ತದೆಂದು ತಿಳಿಸುತ್ತದೆ.

6. ಸ್ತ್ರೀ ಹಾಗೂ ಪುರುಷರ ಆಸ್ತಿ ಸಂಬಂಧವಾಗಿ ಈವರೆಗೆ ಸ್ತ್ರೀಪುರುಷರೆ ವಾರಸುದಾರರಲ್ಲಿ ಇದ್ದ ಭೇದಭಾವನ್ನು ಈ ಕಾನೂನು ತೆಗೆದುಹಾಕುತ್ತದೆ. ಒಂದೇ ಶ್ರೇಣಿಯ ಸಂಬಂಧಿಕರಾದಲ್ಲಿ ಸ್ತ್ರೀಪುರುಷರಿಬ್ಬರೂ ಸಮಾನ ಹಕ್ಕಿನ ವಾರಸುದಾರರಾಗುತ್ತಾರೆ.

7. ಈವರೆಗೆ ವ್ಯಭಿಚಾರದ ಕಾರಣದಿಂದಾಗಿ ಸ್ತ್ರೀ ವಾರಸುದಾರರಿಗೆ ಇದ್ದ ಅನರ್ಹತೆಯನ್ನು ತೆಗೆದುಹಾಕಿ ಅಂತಹ ಸ್ತ್ರೀಯರ ವಾರಸುದಾರಿಕೆ ಹಕ್ಕನ್ನು ಮಾನ್ಯ ಮಾಡಲಾಗಿದೆ.

8. ಮಗನು ತಮ್ಮ ಹುಟ್ಟಿನಿಂದ ಪಡೆಯುವ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಉಳಿಸಿಕೊಂಡಿದ್ದರೂ, ಮಗಳಿಗೆ ಜನ್ಮಸಿದ್ಧ ಹಕ್ಕನ್ನು ಕೊಡದಿದ್ದರೂ, ತಾಯಿ, ಹೆಂಡತಿ, ಮಗಳು, ಮೊಮ್ಮಗಳು ಈಗ ಒಂದನೇ ದರ್ಜೆಯ ವಾರಸುದಾರ ರಾಗುವುದರಿಂದ ಮಗ, ಮೊಮ್ಮಗ, ಮರಿ ಮಗನಿಗೆ ದೊರಕುವ ಆಸ್ತಿಯ ಪಾಲು ಕಡಿಮೆ ಆಗುತ್ತದೆ.

9. ವಾಸದ ಮನೆಯ ಬಗ್ಗೆ ಕುಟುಂಬದ ಕೆಲವು ಸದಸ್ಯರಿಗೆ ಮೊದಲು ಕೊಳ್ಳುವ ಹಕ್ಕನ್ನು ಕೊಡಲಾಗಿದೆ.

10. ಮೊಟ್ಟ ಮೊದಲ ಬಾರಿಗೆ ಅವಿಭಕ್ತ ಕುಟುಂಬದ ಆಸ್ತಿಯಲ್ಲಿರುವ ತನ್ನ ಪಾಲಿನ ಬಗ್ಗೆ ಮೃತಪತ್ರ ಬರೆಯುವ ಅಧಿಕಾರವನ್ನು ಸಹಭಾಗೀದಾರರಿಗೆ ಕೊಡಲಾಗಿದೆ. ಹಾಗೆಯೇ ಪ್ರಥಮ ದರ್ಜೆಯ ಸ್ತ್ರೀ ವಾರಸುದಾರರಿದ್ದಾಗ ಸಹಭಾಗಿದಾರನ ಪಾಲು ಬದುಕಿರುವ ಉಳಿದ ಸಹಭಾಗಿದಾರರಿಗೆ ಹೋಗದೆ, ವಾರಸುದಾರಿಕೆ ಮೂಲಕ ಅವನ ವಾರಸುದಾರರಿಗೆ ಸಮಾನವಾಗಿ ಹೋಗುತ್ತದೆ. ಸ್ವಯಾರ್ಜಿತ ಆಸ್ತಿ ಸ್ತ್ರೀ ಪುರುಷ ಸಂಬಂಧಿಗಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ.

11. ಕಾನೂನುಬಾಹಿರ ಸಂಬಂಧದಲ್ಲಿ ಹುಟ್ಟಿದ ಮಕ್ಕಳಿಗೆ ತಾಯಿಯ ಆಸ್ತಿಯಲ್ಲಿ ಈವರೆಗೆ ಇದ್ದ ವಾರಸುದಾರಿಕೆಯ ಹಕ್ಕನ್ನು ಉಳಿಸಿಕೊಳ್ಳಲಾಗಿದೆ. ಆದರೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಆ ಹಕ್ಕು ಇರುವುದಿಲ್ಲ” (ಬಾಬುರಾವ್ ಮುಡಬಿ: 2005, ಪು-145, 150).

ಇವಿಷ್ಟು ಮಹಿಳೆ ಆಸ್ತಿಯ ಸಂಬಂಧ ಸಂಗತಿಗಳಾಗಿದ್ದು, ಇವನ್ನು ಪ್ರಕರಣಗಳ ಮೂಲಕ ತೋರಿಸಲಾಗಿದೆ. ಆದ್ದರಿಂದ ಈ ಅಧಿನಿಯಮ ಎಂಟನೇ ಪ್ರಕರಣದಲ್ಲಿ ಸ್ತ್ರೀಯರ ಆಸ್ತಿ ಹಕ್ಕಿಗೆ ಹೊಸದಾಗಿ ಸೇರಿದ ನಿಯಮಗಳೆಂದರೆ:

ವಿವಾಹ ಕಾನೂನು ಜಾರಿಗೆ ಬಂದ ಮೇಲೆ ಹಿಂದೂ ಪುರುಷನೊಬ್ಬನು ಮೃತನಾದರೆ ಹಾಗೂ ಅವನಿಗೆ ಮಿತಾಕ್ಷರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇದ್ದಲ್ಲಿ ಹಾಗೂ ಅವನಿಗೆ ಒಂದನೇ ದರ್ಜೆಯ ಸ್ತ್ರೀ ಸಂಬಂಧಿಗಳು(ತಾಯಿ, ಹೆಂಡತಿ, ಮಗಳು, ಮೃತ ಮಗನ, ಮಗಳು, ಮೃತ ಮಗಳು, ಮೃತ ಮಗನ ಹೆಂಡತಿ / ಮೃತ ಮೊಮ್ಮಗನ ಹೆಂಡತಿ ಅಥವಾ ಮಗಳು) ಇದ್ದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿನ ಅವನ ಪಾಲು ಒಂದನೇ ದರ್ಜೆಯ ಎಲ್ಲ ಸ್ತ್ರೀ ಪುರುಷ ವಾರಸುದಾರರಿಗೆ ಸಮಾನವಾಗಿ ವಾರಸುದಾರಿಕೆಯ ಮೂಲಕ ಹೋಗುತ್ತದೆ. ಹಿಂದೂ ಪುರುಷನ ಒಂದೇ ದರ್ಜೆಯ ವಾರಸುದಾರರಲ್ಲಿ ಮೇಲ್ಕಂಡ ಸ್ತ್ರೀ ಸಂಬಂಧಿಗಳಲ್ಲದೆ, ಅವನ ಮಗ, ಮೊಮ್ಮಗ… ಹೀಗೆ ಪುರುಷ ಸಂಬಂಧಿಗಳು ಬರುತ್ತಾರೆ. ಮೇಲೆ ತಿಳಿಸಿದ ಸ್ತ್ರೀ ಸಂಬಂಧಿಗಳು ಯಾರೂ ಇಲ್ಲದಿದ್ದಲ್ಲಿ ಅವರ ಪಾಲು ಹಿಂದಿನ ಹಿಂದೂ ಮಿತಾಕ್ಷರ ನಿಯಮದಂತೆ ಅವರ ಪುರುಷ ಸಂಬಂಧಿಗಳಿಗೆ ಉಳಿದವರ ಹಕ್ಕಿನ ಪ್ರಕಾರ ಹೋಗುತ್ತದೆ.

ಅಧಿನಿಯಮದ ಮತ್ತೊಂದು ಮಹತ್ವದ ಬದಲಾವಣೆ 14ನೇ ಪ್ರಕರಣದಲ್ಲಿ ಇದೆ.ಹಿಂದೂ ಸ್ತ್ರೀಯೊಬ್ಬಳು ಈ ಅಧಿನಿಯಮ ಜಾರಿಗೆ ಬರುವ ಮೊದಲಾಗಲಿ ಅನಂತರವಾಗಲಿ ಯಾವುದೇ ಆಸ್ತಿಯನ್ನು ಪಡೆದಿದ್ದಲ್ಲಿ ಅವಳು ಈ ಆಸ್ತಿಯ ಸಂಪೂರ್ಣ ಮಾಲೀಕಳಾಗುತ್ತಾಳೆಂದು ಈ ಪ್ರಕರಣ ತಿಳಿಸುತ್ತದೆ.ಹಿಂದಿನ ಹಿಂದೂ ಕಾನೂನಿನಲ್ಲಿ ಕೆಲವು ಹಿಂದೂ ಸ್ತ್ರೀ ಸಂಬಂಧಿಗಳಿಗೆ ಮಾತ್ರ ಆಸ್ತಿ ಹಕ್ಕು ದೊರಕುತ್ತಿದ್ದು ಅವರ ಸ್ತ್ರೀ ಧನವನ್ನುಳಿದ ಎಲ್ಲ ಆಸ್ತಿಗಳಲ್ಲಿ ಕೇವಲ ಜೀವಿತಾವಧಿಯವರೆಗೆ ಅನುಭವಿಸುವ ಹಕ್ಕನ್ನು ಮಾತ್ರ ಹೊಂದಿರುತ್ತಿದ್ದರು.ಅವರ ಮರಣಾನಂತರ ಆ ಆಸ್ತಿ ಪನಃ ಪುರುಷ ಸಂಬಂಧಿಗಳಿಗೆ ಹಿಂದಿರುಗುತ್ತಿತ್ತು ಎನ್ನುವ ಹಿನ್ನೆಲೆಯಲ್ಲಿ ಈ ತಿದ್ದುಪಡಿಯನ್ನು ಅರ್ಥ ಮಾಡಿಕೊಂಡಾಗ ಅದರ ಮಹತ್ವ ತಿಳಿಯುತ್ತದೆ.ಈ ಪ್ರಕರಣ ಸ್ತ್ರೀಧನ ಹಾಗೂ ಉಳಿದ ಆಸ್ತಿ ಹಕ್ಕಿನ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿ ಎಲ್ಲ ಆಸ್ತಿಯನ್ನು ಸ್ತ್ರೀಯರ ಸಂಪೂರ್ಣ ಒಡೆತನದ ಆಸ್ತಿಯಾಗಿ ಘೋಷಿಸುತ್ತದೆ.ಸ್ತ್ರೀಯರಿಗೂ ತಮ್ಮ ಆಸ್ತಿಯನ್ನು ಮಾರುವ, ದಾನಕೊಡುವ, ಮೃತಪತ್ರ ಬರೆಯುವ ಹಕ್ಕನ್ನು ಒದಗಿಸಿದೆ.

ಸ್ತ್ರೀ ವಾರಸುದಾರರನ್ನು (ತಾಯಿ, ಹೆಂಡತಿ, ಅವಿವಾಹಿತೆ, ವಿಧವೆ, ಗಂಡನಿಂದ ಬೇರೆಯಾದ ಮಗಳು) ಈ ಮನೆಯಲ್ಲಿ ವಾಸಿಸುತ್ತಿದ್ದು, ಗಂಡು ಮಕ್ಕಳು ಬೇರೆ ಮನೆಯಲ್ಲಿ ಬೇರೆ ಊರಿನಲ್ಲಿ ವಾಸಿಸಬಹುದಾದ ಸಂದರ್ಭವನ್ನು ಇದು ಕಲ್ಪಿಸಿಕೊಳ್ಳುವುದೇ ಇಲ್ಲ. ಇಂತಹ ಕುಟುಂಬಗಳು ದಕ್ಷಿಣ ಭಾರತದ ಕೇರಳ ಹಾಗೂ ಮಂಗಳೂರಿನ ಕರಾವಳಿ ಪ್ರದೇಶಗಳಲ್ಲಿ ಇದ್ದವು. ಅವು ಅಳಿಯತನ ಪದ್ಧತಿಯನ್ನು ಹೊಂದಿದ್ದವು.ಅಂದರೆ ಗಂಡಸರು ಸಹ ಮದುವೆಯಾದ ನಂತರ ಹೆಂಡತಿಯ ಮನೆಯಲ್ಲಿ ವಾಸಿಸುತ್ತಿದ್ದರು.ಈ ಮೂಲಕವೇ ಅವರು ಹುಟ್ಟಿದ ಮನೆಯ ವಾರಸುದಾರಿಕೆಯನ್ನು ಕಳೆದುಕೊಳ್ಳುತ್ತಿದ್ದರು. ಹಾಗಾಗಿ ಈ ಕಾನೂನಿನ ಪ್ರಕಾರ ಗಂಡು ಮಕ್ಕಳು ಮನೆಯನ್ನು ವಿಭಾಗ ಮಾಡಿಕೊಂಡು ಮಾರಾಟ ಮಾಡಿ ಸ್ತ್ರೀ ವಾರಸುದಾರರಿಗೆ ವಾಸಿಸುವ ಮನೆ ಇಲ್ಲದಂತೆ ಮಾಡಬಹುದು. ಹೀಗೆ ಪುರುಷ ವಾರಸುದಾರರ ಹಿತವನ್ನು ರಕ್ಷಿಸುವ ಈ ನಿಯಮ ಸೀ ವಾರಸುದಾರರ ಹಿತವನ್ನು ಕಡೆಗಣಿಸಿದೆ.ಆದ್ದರಿಂದ ಇದು ಮಹಿಳೆಗೆ ಆಸ್ತಿ ನೀಡುವ ಮೇಲ್ಪದರ ನೆಲೆಗಳನ್ನು ಮಾತ್ರ ಹೊಂದಿದೆ.ಪರಿಣಾಮ ಈ ಕಾನೂನು ಮಹಿಳೆ ಸ್ವಲ್ಪ ಚಲನಶೀಲಗೊಳ್ಳಲು ಸಾಧ್ಯವಾಗಿದೆ.

ತಾಯಿಯನ್ನು ಮಗುವಿನ ಸಹಜ ಪೋಷಕಳೆಂದು ನಿರ್ಧರಿಸುವುದು Hindu Minorities and Guardianship oಛಿಣ (1956), ಇದು ಒಳಗೊಂಡ ಸಂಗತಿಗಳೆಂದರೆ “ತಾಯಿಯ ತಂದೆಯು ನೇಮಿಸಿದ ರಕ್ಷಕನನ್ನು ಬದಲಾಯಿಸಿ ಹೊಸ ರಕ್ಷಕನನ್ನು ತನ್ನ ಇಚ್ಚೆಗೆ ಅನುಸಾರವಾಗಿ ನೇಮಿಸುವುದು.ಅಪ್ರಾಪ್ತ ವಯಸ್ಕ ಮಗುವಿನ ತಾಯಿಯು ಜೀವಂತವಿದ್ದಾಗ ತಂದೆಯು ಆ ಮಗುವಿಗೆ ರಕ್ಷಕನನ್ನು ನೇಮಿಸುವುದನ್ನು ಈ ಕಾನೂನು ನಿಷೇಧಿಸುತ್ತದೆ.”

ಮಹಿಳೆ ದತ್ತು ಸ್ವೀಕಾರ ಹಕ್ಕು ಹಾಗೂ ವಿಚ್ಛೇದನದ ಸಂದರ್ಭದಲ್ಲಿ ನಿರ್ವಹಣಾ ಹಕ್ಕು Adoption and Maintenance Right (1956).ಈ ಕಾಯ್ದೆಯು ಹಲವು ಸಂಗತಿಗಳನ್ನು ಒಳಗೊಂಡಿದೆ. ಅವುಗಳೆಂದರೆ :

ಅ. ಕಾನೂನಿನ ಪ್ರಕಾರ ಗಂಡು ಮತ್ತು ಹೆಣ್ಣು ಮಗುವನ್ನು ಯಾವುದೇ ವ್ಯತ್ಯಾಸವಿಲ್ಲದೆ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಹಿಂದೂ ಕಾನೂನಿನಲ್ಲಿ ಹೆಣ್ಣುಮಗುವನ್ನು ದತ್ತು ಸ್ವೀಕರಿಸುವ ಅವಕಾಶವಿರಲಿಲ್ಲ.

ಆ. ಈ ಕಾನೂನಿನ ಪ್ರಕಾರ ಪ್ರತಿ ಜೀವಂತವಾಗಿದ್ದಾಗ ಪತ್ನಿ ತನ್ನ ಇಚ್ಛೆಗೆ ಅನುಸಾರವಾಗಿ ದತ್ತು ಸ್ವೀಕರಿಸಬಹುದು. ಆದರೆ ಹಿಂದಿನ ಕಾನೂನಿನಲ್ಲಿ ಮಹಿಳೆಗೆ ಈ ಅವಕಾಶವನ್ನು ನಿರಾಕರಿಸಲಾಗಿತ್ತು.

ಇ. ಹಿಂದಿನ ಹಿಂದೂ ಕಾನೂನಿನ ಪ್ರಕಾರ ಕನ್ಯ ಮತ್ತು ವಿಧವೆಗೆ ದತ್ತು ಸ್ವೀಕರಿಸುವ ಹಕ್ಕು ಇರಲಿಲ್ಲ. ಆದರೆ ಹಿಂದೂ ನೀತಿಸಂಹಿತೆ ಈ ಭಾಗದಲ್ಲಿ ಅವರಿಗೆ ದತ್ತು ಸ್ವೀಕರಿಸುವ ಹಕ್ಕನ್ನು ತೋರಿಸಿದೆ.

ಈ. ಹಿಂದೂ ಕಾನೂನಿನ ಪ್ರಕಾರ ಪತಿ ಮಕ್ಕಳನ್ನು ದತ್ತು ಪಡೆಯುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯುವ ಅಗತ್ಯವಿರಲಿಲ್ಲ. ಆದರೆ ಹಿಂದೂ ನೀತಿಸಂಹಿತೆಯ ಪ್ರಕಾರ ಈ ಎರಡು ಕ್ರಮಗಳನ್ನು ಪತಿ ಕೈಗೊಳ್ಳುವಾಗ ಪತ್ನಿಯ ಒಪ್ಪಿಗೆಯನ್ನು ಪಡೆಯಬೇಕು.

ಉ. ಸಂವಿಧಾನದ ಹನ್ನೊಂದನೇ ವಿಭಾಗದ ಪ್ರಕಾರ ತಂದೆ ತನಗಿಂತ ಕನಿಷ್ಠ 21 ವರ್ಷ ಸಣ್ಣ ಪ್ರಾಯದ ಮಗಳನ್ನು ಮಾತ್ರ ದತ್ತು ಸ್ವೀಕರಿಸಬಹುದು (ವಿಶೇಷ: ಬಾ.ಸಾ.ಅಂ.ಬ.ಭಾ: ಸಂ-14-1, 2: ಗಮನಿಸಿ).

ಒಟ್ಟಿನಲ್ಲಿ ಬಹುಪತ್ನಿತ್ವ ಬಾಲ್ಯವಿವಾಹ, ವಿಧವೆ ಇತ್ಯಾದಿ ಅಂಶಗಳು ಮಹಿಳಾ ಚಳುವಳಿಗಳು ಸ್ವಾತಂತ್ರ್ಯದಿಂದಲೇ ಕೈಗೆತ್ತಿಕೊಂಡಿದ್ದ ವಿಚಾರಗಳಾಗಿದ್ದರೂ ಅಂಬೇಡ್ಕರ್ ಅವಕ್ಕೊಂದು ಗಟ್ಟಿಯಾದ ನೆಲೆಯನ್ನು ಒದಗಿಸಲು ಪ್ರಯತ್ನಿಸಿದರು.ಮಹಿಳಾ ಚಳುವಳಿಗಳು ಮಹಿಳೆಯರ ಕೊರತೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಒತ್ತಾಯ ತರುತ್ತಿದ್ದಾಗ ಅಂಬೇಡ್ಕರ್ ಮಹಿಳೆಯರಿಗಿಂತ ಹೆಚ್ಚಿನದಾಗಿ ಪುರುಷನು ಅನುಭವಿಸುತ್ತಿರುವ ಸ್ವಾತಂತ್ರ್ಯ ಅವಕಾಶದ ಬಗ್ಗೆ ಗಮನ ಹರಿಸಿದರು.ಈ ಪೂರ್ವದ ಕಾನೂನು ಸ್ತ್ರೀಯರ ಪುನರ್‌ವಿವಾಹದ ಸಾಧ್ಯತೆಗಳನ್ನು ಕಾನೂನುಬದ್ಧಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್ ಪುರುಷನ ಒಂದಕ್ಕಿಂತ ಹೆಚ್ಚಿನ ವಿವಾಹ, ಆಸ್ತಿಯ ಮೇಲಿನ ಏಕಸ್ವಾಮ್ಯ, ಸಂತಾನದ ಮೇಲಿನ ಏಕಸ್ವಾಮ್ಯ ಇತ್ಯಾದಿಗಳನ್ನು ನಿಯಂತ್ರಿಸುವುದು ಅಗತ್ಯವೆಂದು ಪ್ರಸ್ತುತಪಡಿಸಿದರು.ಈ ಸಮಾಜ ಲಿಂಗಭೇದವು ಸ್ತ್ರೀಗೆ ಹಾಕಿದ ನಿರ್ಬಂಧಗಳಿಂದಷ್ಟೆ ಅಲ್ಲದೇ ಪುರುಷನಿಗೆ ಒದಗಿಸಿದ ಸ್ಟೇಟ್ಸ್ ಕೂಡ ಉಲ್ಬಣಿಸಿರುವುದನ್ನು ಕಾನೂನಿನ ಮೂಲಕ ಸರಿಪಡಿಸಲು ಪ್ರಯತ್ನಿಸಿದರು.

ಅಂಬೇಡ್ಕರ್ ರೂಪಿಸಿದ ಕೋಡ್ ಬಿಲ್ ಕೇವಲ ಸುಧಾರಣೆ ಗುಣವನ್ನಷ್ಟೇ ಹೊಂದಿದ್ದಲ್ಲದೆ ಈ ಜಾತಿಪ್ರಧಾನ, ಪಿತೃಪ್ರಧಾನ ಸಮಾಜ ರಚನೆಯ ತಳಹದಿಯನ್ನು ಬುಡಮೇಲು ಮಾಡುವ ಅಂಶಗಳನ್ನು ಹೊಂದಿದ್ದರಿಂದ ಸಹಜವಾಗಿಯೇ ಅದರ ಬಗ್ಗೆ ಭಿನ್ನಾಭಿಪ್ರಾಯ ಉಂಟಾಯಿತು.ಬೇರೆಲ್ಲ ವಿಚಾರಗಳಲ್ಲಿ ಅತ್ಯಂತ ಪ್ರಗತಿಪರರೆಂದು ಗುರುತಿಸಿಕೊಂಡ ಅನೇಕ ಪುರುಷರು ಕೂಡ ಈ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ನೀಡಿದ ಸಮಾನ ಅವಕಾಶಗಳ ಕುರಿತು ಆಕ್ಷೇಪವೆತ್ತಿದರು ಮತ್ತೆ ಕೆಲವರು ಮೇಲ್ನೋಟಕ್ಕೆ ಸಮಾಧಾನದಿಂದ ಇದ್ದಂತೆ ಕಂಡುಬಂದರೂ ಒಳಗೆ ಅಸಮಾಧಾನದಿಂದ ಕುದಿಯುತ್ತಿದ್ದರು. ಸ್ವತಃ ಅಂದಿನ ರಾಷ್ಟ್ರಪತಿಗಳಾದ ಶ್ರೀ ರಾಜೇಂದ್ರಪ್ರಸಾದ್ ಅವರೇ ಇದಕ್ಕೆ ಅಸಮ್ಮತಿ ಸೂಚಿಸಿದರು ಎಂಬುದೇ ವಿಪರ್ಯಾಸ.

ಉಲ್ಲೇಖಗಳು

1. ಬಾ.ಸಾ.ಅಂ.ಬ.ಭಾ: 1999, ಸಂ.03, ಪು.51.
2. ಸಂ.ಮಾ.ಭರಣಿ, 1991, ಶತಮಾನದ ಅಂಬೇಡ್ಕರ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ತುಮಕೂರು, ಪು.241.
3. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.622.
4. ಬಾ.ಸಾ.ಅಂ.ಬ.ಭಾ: 1994, ಸಂ.03, ಪು.51,53.
5. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.1, ಪು.600,800
6. ಬಾ.ಸಾ.ಅಂ.ಬ.ಭಾ: 2004, ಸಂ.14: ಭಾಗ.2, ಪು.771,800.
7. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಪು. 146.
8. ಅರವಿಂದ ಮಾಲಗತ್ತಿ, 1999, ಡಾ.ಅಂಬೇಡ್ಕರ್ ವಿಚಾರಧಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು, ಪು. 143.
9. ಬಾಬುರಾವ್ ಮುಡಬಿ, 2005, ಮಹಿಳಾ ಸಬಲೀಕರಣ ಅಂಬೇಡ್ಕರ್ ದೃಷ್ಟಿಕೋನ, ಲಕ್ಷ್ಮಿ ಪ್ರಕಾಶನ, ಬೆಂಗಳೂರು, ಮ. 145.

(ಡಾ. ಯರ್ರಿಸ್ವಾಮಿಯವರ ಅಧ್ಯಯನದೊಂದಿಗೆ ಬಹು ಮುಖ್ಯವಾದ ಈ ಲೇಖನವನ್ನು ಮತ್ತೊಮ್ಮೆ ಬರೆದಿದ್ದೇನೆ.- ವಿ.ಎಸ್.ಬಾಬು ಅವರ ಫೇಸ್‌ಬುಕ್‌ ಬರಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

Published

on

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು  ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending