ಸಿನಿ ಸುದ್ದಿ
ಕೆಜಿಎಫ್ ಒಂದು ಅನನ್ಯ ಅನುಭವ..!
ಕೆಜಿಎಫ್ ಬರಿಗಣ್ಣಿಗೆ ಮಾತ್ರ ಕಾಣುವ, ಕಿವಿಗಳಿಗೆ ಮಾತ್ರ ಕೇಳಿಸುವ ಸಿನಿಮಾ ಅಲ್ಲ. ಕೆಜಿಎಫ್ ಒಂದು ಅನನ್ಯ ಅನುಭವ. ಅದು ಬೇರೆ ಬೇರೆ ರೂಪಗಳಲ್ಲಿ ನಿಮ್ಮನ್ನು ಮುಟ್ಟುತ್ತಿರುತ್ತದೆ, ಒಳಗೊಳಗೆ ಪ್ರವಹಿಸುತ್ತಿರುತ್ತದೆ. ನಿಸ್ಸಂಶಯವಾಗಿ ಕೆಜಿಎಫ್ ಒಂದು ಮಹಾಕಾವ್ಯ. ಪ್ರಶಾಂತ್ ನೀಲ್ ಹೊಸದೇನನ್ನೋ ಮಾಡಿದ್ದಾರೆ, ಅದನ್ನು ನೀವು ನಿಮಗೆ ಸಮಾಧಾನವಾಗುವಂತೆ ವಿವರಿಸಲಾರಿರಿ. ಮೊದಲೇ ಹೇಳಿದಂತೆ ಇದೊಂದು ಅನುಭವ, ಅನುಭವಿಸಿಯೇ ತೀರಬೇಕು.
ಯಶ್ ಈ ಇಡಿ ಸಿನಿಮಾವನ್ನು ತಮ್ಮ ಭುಜದ ಮೇಲೆ ಹೊತ್ತು ಸಾಗಿದ್ದಾರೆ. ಅವರು ಪ್ರತಿಫ್ರೇಮ್ ನಲ್ಲೂ ಕಣ್ಣಿಗೆ ಹಬ್ಬ. ಆಗಾಗ ನಿಮ್ಮ ಕೈಗಳ ಮೇಲಿನ ರೋಮಗಳು ಎದ್ದುನಿಂತರೆ ಅದಕ್ಕೆ ಯಶ್ ಕಾರಣ. ಈ ಸಿನಿಮಾದಲ್ಲಿ ಯಶ್ ಹೊರತಾಗಿ ಇನ್ನೊಬ್ಬರನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳಲಾಗದು. ಯಶ್ ಈ ಸಿನಿಮಾಗಾಗಿಯೇ ಕಡೆದಿಟ್ಟ ವಿಗ್ರಹ. ಅವರು ಇಲ್ಲಿ ಬರಿಯ ಹೀರೋ ಮಾತ್ರವಲ್ಲ ಸೂಪರ್ ಹೀರೋ, ಥೇಟ್ ನಮ್ಮ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಗಳ ಹಾಗೆ. ಸೂಪರ್ ಹೀರೋಗಳಿಗಾದರೂ ನಾಲ್ಕು ಏಟು ಬೀಳಬಹುದು, ಕೆಳಗೆ ಬೀಳಬಹುದು. ರಾಕಿ ಭಾಯ್ ನಮ್ಮ ಫ್ಯಾಂಟಸಿ ಜಗತ್ತಿನ ದೊರೆ, ಅವನಿಂದ ಅಸಾಧ್ಯವಾದದ್ದು ಏನೂ ಇಲ್ಲ, ಅವನನ್ನು ಯಾರಿಂದಲೂ ಮಣಿಸಲಾಗದು.
ಪ್ರಶಾಂತ್ ನೀಲ್ ಗೆ ಆಕ್ಷನ್ ಇಷ್ಟವಿರಬಹುದು. ಆದರೆ ತೆಲುಗು ಸಿನಿಮಾಗಳ ಹಾಗೆ ಭೀಬತ್ಸ ದೃಶ್ಯಗಳು ಇಲ್ಲಿಲ್ಲ. ಕ್ರೌರ್ಯ ಕಣ್ಣಿಗೆ ರಾಚಿಸಿದರೂ ಅದು ನಮ್ಮ ಎದೆಗೆ ಇಳಿಯುವುದನ್ನು ತಡೆದುಬಿಡುತ್ತಾರೆ ಪ್ರಶಾಂತ್. ಒಬ್ಬ ಸಣ್ಣ ಹುಡುಗನ ದಾರುಣ ಕೊಲೆಯೊಂದನ್ನು ಯಶ್ ಅವರ ಅದ್ಭುತ ರಿಯಾಕ್ಷನ್ ಮತ್ತು ಒಂದಿಡೀ ಸಮೂಹದ ದೊಡ್ಡ ನಿಟ್ಟುಸಿರಿನೊಂದಿಗೆಯೇ ತೋರಿಸಿಬಿಡುತ್ತಾರೆ ಅವರು. ನೋಡಿ ನಿಟ್ಟುಸಿರಾಗೋ ಸರದಿ ನಮ್ಮದಷ್ಟೆ. ನಿರ್ದೇಶಕರ ತಂಡ ಅಸಾಧ್ಯ ಕೆಲಸಗಳನ್ನು ಮಾಡಿದೆ. ಕಥೆಗೆ ಸಂಬಂಧಿಸಿದ ರಿಸರ್ಚ್ ಗಳಿಂದ ಹಿಡಿದು ಒಂದೇ ಒಂದು ದೃಶ್ಯವೂ ತರ್ಕಹೀನವಾಗದಂತೆ, ಬಾಲಿಷ ಎನಿಸದಂತೆ, ಕ್ಲೀಷೆಯಾಗದಂತೆ ಈ ತಂಡ ಪರಿಶ್ರಮ ವಹಿಸಿದೆ.
ಸಿನಿಮಾದ ಸ್ಕ್ರೀನ್ ಪ್ಲೇ ಈ ಹೊತ್ತಿನವರೆಗಿನ ಅದ್ಭುತ ಪ್ರಯೋಗಗಳಲ್ಲಿ ಒಂದು. ಪ್ರಶಾಂತ್ ನೀಲ್ ಕಸುಬುದಾರಿಕೆಗೆ ಜವಾಬೇ ಇಲ್ಲ. ಈ ಸ್ಕ್ರೀನ್ ಪ್ಲೇಗೆ ನಿಜವಾದ ಆತ್ಮವನ್ನು ತುಂಬಿರುವ ಸಂಕಲನಕಾರ ಶ್ರೀಕಾಂತ್ ತನ್ನ ಕತ್ತರಿಯನ್ನೂ ಒಂದು ಪಾತ್ರವಾಗಿಸಿದ್ದಾನೆ. ಎರಡನೇ ಚಾಪ್ಟರಿನ ಒಂದೆರಡು ಸೀನ್ ಗಳನ್ನು ಕ್ಲೈಮಾಕ್ಸ್ ಗೂ ಮುನ್ನ ಕಾಣಿಸುವ ಎದೆಗಾರಿಕೆ ಇಲ್ಲಿ ಪ್ರದರ್ಶನಗೊಂಡಿದೆ. ಒಂದೇ ಒಂದು ಕ್ಷಣ ನೀವು ಅತ್ತಿತ್ತ ತಿರುಗದಂತೆ ಮಾಡುವ ಕಲೆಗಾರಿಕೆ ಇಲ್ಲಿ ಸಿದ್ಧಿಸಿದೆ.
ಸಿನಿಮಾದ ಛಾಯಾಗ್ರಹಣ ಈ ದೇಶಕ್ಕೇ ಅಪರೂಪದ್ದು. ದೃಶ್ಯಗಳನ್ನು ನ ಭೂತೋ ಎನ್ನುವಂತೆ ಕಟ್ಟಿಕೊಡುವಲ್ಲಿ ಭುವನ್ ಗೌಡ ಅವರಿಗಿರುವ ರಾಕ್ಷಸ ಹಸಿವು ಎದ್ದುಕಾಣುತ್ತದೆ. ಪ್ರತಿಯೊಂದು ಫ್ರೇಮನ್ನೂ ಅವರು ತಾವೇ ಬರೆದ ಚಿತ್ರದಂತೆ ಸೆರೆಹಿಡಿದಿದ್ದಾರೆ. ಸೆಕೆಂಡ್ ಹಾಫ್ ನ ಪ್ರತಿಯೊಂದು ದೃಶ್ಯವೂ ದೃಶ್ಯಕಾವ್ಯಗಳೇ. ಪ್ರತಿ ಫ್ರೇಮ್ ನಿಮ್ಮ ಜತೆ ಮಾತಿಗೆ ಇಳಿಯುತ್ತದೆ.
ರವಿ ಬಸ್ರೂರು ಕೆಜಿಎಫ್ ನ ಮತ್ತೊಬ್ಬ ಹೀರೋ. ಅವರ ಹಿನ್ನೆಲೆ ಸಂಗೀತ ಸಿನಿಮಾದಿಂದ ಒಂದು ಮಿಲಿಮೀಟರ್ ಕೂಡ ಆಚೆ ಹೋಗಿ ನಿಲ್ಲುವುದಿಲ್ಲ. ಪ್ರತಿ ದೃಶ್ಯಗಳ ಜತೆ ಬ್ಲೆಂಡ್ ಆಗಿ ವಿಶೇಷ ಅನುಭೂತಿ ಉಕ್ಕಿಸುತ್ತದೆ. ಹಾಡುಗಳಿಗೂ ಇದೇ ಮಾತು ಹೇಳಬೇಕು.
ಶಿವು ಕುಮಾರ್ ಎಂಬ ಆರ್ಟ್ ಡೈರೆಕ್ಟರ್ ಬಗ್ಗೆ ಏನು ಹೇಳಿದರೂ ಕಡಿಮೆಯೇ. ಸೆಕೆಂಡ್ ಹಾಫ್ ನಲ್ಲಿ ಅವರು ಹಾಕಿರುವ ಸೆಟ್ ಗಳನ್ನು ನೋಡಿ ಬೇರೆ ಸಿನಿಮಾ ನಿರ್ಮಾಪಕದ ಎದೆ ನಡುಗಿ ಹೋಗಿರಬಹುದು. ಮಾರಿ ಪೂಜೆಯ ಸೆಟ್ ಅಂತೂ ಅಸಾಧಾರಣ. ಒಮ್ಮೆ ಎದ್ದು ನಿಂತು ಕ್ಲಾಪ್ ಮಾಡಬೇಕೆನಿಸುತ್ತದೆ. ಶಿವು ಮತ್ತು ಅವರ ಹುಡುಗರ ತಂಡ ಕೆಜಿಎಫ್ ಕನಸಿನ ಬಹುಮಖ್ಯ ಪಾತ್ರಧಾರಿಗಳು.
ಯಶ್ ಹೊರತಾಗಿ ಈ ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳು ತೆರೆಯ ಮೇಲೆ ಅಪ್ಪಳಿಸುತ್ತವೆ. ಅವುಗಳಲ್ಲಿ ಕೆಲವು ಮುಂದಿನ ಚಾಪ್ಟರ್ ಗೆಂದೇ ಮೀಸಲಾಗಿಟ್ಟ ಟ್ರೇಲರ್ ಗಳು! ಎಲ್ಲರೂ ನಿರ್ದೇಶಕರ ನಟರುಗಳೇ! ನಿಮ್ಮ ಕಣ್ಣುಗಳಿಂದಲೇ ಹೆಚ್ಚು ಮಾತಾಡಿ ಎಂದು ಪ್ರಶಾಂತ್ ನೀಲ್ ಈ ಪಾತ್ರಗಳಿಗೆ ಹೇಳಿದಂತಿದೆ. ಆ ಪಾತ್ರಗಳು ಚಾಚೂ ತಪ್ಪದೆ ಹಾಗೇ ಮಾಡಿವೆ. ಹಿರಿಯ ನಟ ಅನಂತ್ ನಾಗ್ ಸಿನಿಮಾದ ಘನತೆಯನ್ನು ಹೆಚ್ಚಿಸಿದ್ದಾರೆ. ಪ್ರಶಾಂತ್ ಹೆಚ್ಚುಗಾರಿಕೆ ಏನೆಂದರೆ ಸಾವಿರಾರು ಜೂನಿಯರ್ ಆಕ್ಟರ್ ಗಳಿಂದಲೂ ಅವರು ಆಕ್ಟಿಂಗ್ ಮಾಡಿಸಿದ್ದಾರೆ. ಜೂನಿಯರ್ ಗಳೂ ಪಳಗಿದ ನಟರಂತೆಯೇ ನಟಿಸಿದ್ದಾರೆ.
ಅತ್ಯುತ್ತಮ ಸಿನಿಮಾ, ನಿರ್ದೇಶನ, ಹೀರೋ, ಸಂಗೀತ, ಕಲಾ ನಿರ್ದೇಶನ, ಸಂಕಲನ ಹೀಗೆ ಕನಿಷ್ಠ 6 ವಿಭಾಗಗಳಲ್ಲಾದರೂ ಕೆಜಿಎಫ್ ಗೆ ಆಸ್ಕರ್ ಪ್ರಶಸ್ತಿ ಬರಲೇಬೇಕು. ಯಾಕೆಂದರೆ ಈ ಸಿನಿಮಾ ಸ್ಪರ್ಧೆ ನೀಡುತ್ತಿರುವುದು ಭಾರತೀಯ ಸಿನಿಮಾಗಳ ಜತೆಯಲ್ಲ, ಹಾಲಿವುಡ್ ಸಿನಿಮಾಗಳ ಜತೆ. ಸಿನಿಮಾದ ಕ್ರಾಫ್ಟ್ ಹಾಗಿದೆ. ಇದು ಬಾಹುಬಲಿಯನ್ನು ಮೀರಿಸುವ ಸಿನಿಮಾವೇ ಎಂದು ಯಾರಾದರೂ ಕೇಳಿದರೆ ನನ್ನ ಉತ್ತರ ಹೌದು ಎಂಬುದೇ ಆಗಿರುತ್ತದೆ.
ಕೆಜಿಎಫ್ ಗಿಂತ ಅದ್ಭುತವಾದ ಕನ್ನಡ ಅಥವಾ ಭಾರತೀಯ ಸಿನಿಮಾ ಬಂದಿಲ್ಲವೆಂದಲ್ಲ, ಬಂದಿವೆ. ಆದರೆ ಕೆಜಿಎಫ್ ಸಿನಿಮಾದ ಕ್ರಾಫ್ಟ್ ಹಿಂದೆಂದೂ ಬಂದಿರಲು ಸಾಧ್ಯವಿಲ್ಲ. ಇಷ್ಟೊಂದು ಪರಿಶ್ರಮ ಮತ್ತು ಕನಸುಗಳನ್ನು ತೊಡಗಿಸಿ ಮಾಡಿದ ಸಿನಿಮಾ ಇನ್ನೊಂದಿರಲು ಸಾಧ್ಯವಿಲ್ಲ. ಇಡೀ ತಂಡ ಸಿನಿಮಾವನ್ನು ಜೀವಿಸಿಬಿಟ್ಟಿದೆ ಎಂದರೆ ಅದು ಅತಿಶಯೋಕ್ತಿ ಅಲ್ಲ. ಕನ್ನಡ ಚಿತ್ರರಂಗವನ್ನು ಹೊಸ ದಾರಿಗೆ ಎಳೆದೊಯ್ದಿದ್ದಾರೆ ಪ್ರಶಾಂತ್ ಮತ್ತು ಯಶ್ ಜೋಡಿ. ಅವರೇ ಹೇಳಿದಂತೆ ಇದು ಅವರ ಕನಸು ಮಾತ್ರವಲ್ಲ, ನಮ್ಮೆಲ್ಲರ ಕನಸು. ನಮ್ಮ ಕನಸನ್ನು ಅವರು ನಿಜವಾಗಿಸಿದ್ದಾರೆ.
ಚಿತ್ರನಿರ್ಮಾಪಕ ವಿಜಯ್ ಕಿರಗಂದೂರು ಎಂಬ ಮಹಾಸಾಹಸಿಗೆ ಕೋಟಿಗಳಂತೂ ಹರಿದುಬರಲಿವೆ. ಆದರೆ ನಮ್ಮ ಕೋಟಿ ಕೋಟಿ ಚಪ್ಪಾಳೆಗಳು ಸಲ್ಲಲೇಬೇಕು.
ಸಿನಿಮಾ ಕಥೆ, ಸಂಭಾಷಣೆ, ಹೂರಣದ ಬಗ್ಗೆ ಏನನ್ನೂ ಹೇಳಿಲ್ಲ. ಹೇಳಬಾರದು ಕೂಡ. ಯಾಕೆಂದರೆ ಇಂಥ ಸಿನಿಮಾಗಳನ್ನು ಯಾವ ರಿವ್ಯೂ ಕೂಡ ಕೇಳದೇ ಹೋಗಿನೋಡಬೇಕು.
– ದಿನೇಶ್ ಕುಮಾರ್ ಎಸ್.ಸಿ. (ದಿನೂ)

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.
ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.
ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.
ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

ದಿನದ ಸುದ್ದಿ
ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!
ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;
ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.
ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.
ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



