ಸಿನಿ ಸುದ್ದಿ
ಈ ಶತಮಾನದ ಮಾದರಿ ಹೆಣ್ಣು..!
ಟಿವಿ9 ನ ‘ಮಾರುವೇಷ’ ಸರಣಿಯಲ್ಲಿ ಈಗಷ್ಟೇ ಒಂದು ಒಳ್ಳೆಯ ಕಾರ್ಯ ಕ್ರಮ ನೋಡಿದೆ…
ಅದು ,ಒಂದು ಕಾಲದಲ್ಲಿ ಅತ್ಯುತ್ತಮ ನಟಿಯಾಗಿ 125ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ,ಇದ್ದಕ್ಕಿದ್ದಂತೇ 1986ರಲ್ಲೇ ಬಣ್ಣದ ಬದುಕಿಗೆ ವಿದಾಯ ಹೇಳಿ,ನಿಜ ಬದುಕಿನಲ್ಲಿ ಸಾಮಾಜಿಕ ಕಳಕಳಿಯಿಂದ ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಸಂಪಾದಿಸಿದ್ದೆಲ್ಲವನ್ನೂ ಬಡವರ ಕಣ್ಣೀರೊರೆಸಲು ವಿನಿಯೋಗಿಸುತ್ತಿರುವ ಶ್ರೇಷ್ಠ ನಟಿ,ಅಭಿನೇತ್ರಿ ಆರತಿಯವರ ಸಾರ್ಥಕ ಬದುಕಿನ ಕತೆ..!!
ನಾಯಕಿ ನಟಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ, ಸಿನಿಮಾದ ಆಕರ್ಷಕ ಬಣ್ಣದ ಲೋಕಕ್ಕೆ ವಿದಾಯ ಹೇಳುವುದು ಸುಲಭದ ಮಾತಲ್ಲ.ಪ್ರೀತಿಸಿ ಕೈ ಹಿಡಿದ ಪುಟ್ಟಣ್ಣ ಕಣಗಾಲರೂ ದೂರವಾಗಿದ್ದರು.ಮಗಳು ಯಶಸ್ವಿನಿಯನ್ನು ಆಯಾಳ ಕೈಗೊಪ್ಪಿಸಿ ದಿನಗಟ್ಟಲೆ ಶೂಟಿಂಗಿಗೆ ತೆರಳಬೇಕಾದ ಅನಿವಾರ್ಯತೆ. ಆದರೆ ಅದೊಂದು ದಿನ ತಡ ರಾತ್ರಿ ಶೂಟಿಂಗ್ ಮುಗಿಸಿ ಬಂದಾಗ, ಮಗಳ ಒಂಟಿತನದ ಆಕ್ರಂದನ ಅದೆಷ್ಟು ತೀವ್ರವಾಗಿ ಆ ತಾಯಿಯ ಕರುಳನ್ನು ಇರಿಯಿತೆಂದರೆ,ಆ ಕ್ಷಣದಲ್ಲಿ ಮಗಳ ತಲೆ ಮೇಲೆ ಕೈಯಿಟ್ಟು ಇನ್ನೆಂದೂ ಬಣ್ಣ ಹಚ್ಚುವುದಿಲ್ಲವೆಂದು ಪ್ರಮಾಣ ಮಾಡಿದರು..!!
ಪಡೆದಿದ್ದ ಎಲ್ಲ ಅಡ್ವಾನ್ಸ್ ಹಣವನ್ನೂ ನಿರ್ಮಾಪಕರಿಗೆ ಹಿಂತಿರುಗಿಸಿದರು..!!
ಬಣ್ಣದ ಬದುಕಿಂದ ದೂರವಾಗಿ ಸರಳ ಬದುಕನ್ನಪ್ಪಿಕೊಂಡು ಅಜ್ಞಾತವಾಗಿರಬಯಸಿದ ಆರತಿ ಸುಮ್ಮನೇ ಕೂರಲಿಲ್ಲ..ತಾನು ದುಡಿದ ಅಷ್ಟೂ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸಿದರು.
ಅದೇ ಸಮಯದಲ್ಲಿ ಪರಿಚಯವಾದ ಸೇವಾ ಮನೋಭಾವದ ಹಾರ್ಡ್ ವೇರ್ ಇಂಜಿನಿಯರ್ ಚಂದ್ರಶೇಖರ ದೇಸಾಯಿ ಗೌಡರ ರನ್ನು ಮದುವೆಯಾಗಿ ಅಮೇರಿಕಾದಲ್ಲಿದ್ದುಕೊಂಡೇ ತನ್ನ ಸಾಮಾಜಿಕ ಸೇವಾ ಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡರು..!!
ಬೆಂಗಳೂರಿನಲ್ಲಿದ್ದ ತನ್ನ ಪ್ರೀತಿಯ ಬಂಗಲೆ “ಬೆಳ್ಳಿತೆರೆ”ಯನ್ನೂ ಮಾರಿ ಬಂದ 15 ಕೋಟಿ ರೂಪಾಯಿ ಅಷ್ಟನ್ನೂ ಸಮಾಜ ಸೇವೆಗೆ ವಿನಿಯೋಗಿಸಿದರು. ಆರತಿಯವರಿಗೆ ಸಮಾಜಸೇವೆಗೆ ಪ್ರೇರಣೆ ನೀಡಿದ್ದು ಚಾಮರಾಜನಗರದಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪನವರ ಮಗ ಜಿ.ಎಸ್.ಜಯದೇವ ನಡೆಸುತ್ತಿರುವ ‘ದೀನಬಂಧು’ ಮಕ್ಕಳ ಮನೆ. ಆ ಅನಾಥಾಶ್ರಮಕ್ಕೆ ವಿಶಾಲ ಹಾಸ್ಟೆಲ್ ಕಟ್ಟಡ ಕಟ್ಟಿಸಿ ಕೊಟ್ಟಿದ್ದಲ್ಲದೆ, ಎರಡು ಕೋಟಿ ರೂ.ಠೇವಣಿಯಿರಿಸಿ ಅದರ ಬಡ್ಡಿಯನ್ನು ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ವಿನಿಯೋಗಿಸುತ್ತಿದ್ದಾರೆ. ನಲುವತ್ತು ಶಾಲೆಗಳನ್ನು ದತ್ತು ಪಡೆದು ಅಷ್ಟೂ ಶಾಲೆಗಳ ಬಡ ಮಕ್ಕಳ ಖರ್ಚುವೆಚ್ಚ ಭರಿಸುತ್ತಿದ್ದಾರೆ..!!
ಆರತಿ-ಚಂದ್ರಶೇಖರ ದಂಪತಿಗಳ ಸೇವಾ ಕಾರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ.ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಆ ಹಳ್ಳಿಗೆ ಶೌಚಾಲಯ,ಆಸ್ಪತ್ರೆ,ಶಾಲೆ ಹೆಣ್ಣು ಮಕ್ಕಳಿಗೆ ಸ್ವಉದ್ಯೋಗ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ..!!
ಚಿತ್ರರಂಗದಲ್ಲಿದ್ದಾಗಿನ ಅವರ ಸಹಜ ವೈವಾಹಿಕ, ಪ್ರೇಮ ಕತೆಗಳು ಏನಾದರೂ ಇರಲಿ.ನನಗೆ ಅಚ್ಚರಿಯೆನಿಸುವುದು ಅದಲ್ಲ..
ಇಷ್ಟೆಲ್ಲ ಕೋಟಿಗಟ್ಟಲೆ ಮೊತ್ತವನ್ನು ನಿಸ್ವಾರ್ಥ ಭಾವದಿಂದ ಸಾಮಾಜಿಕ ಸೇವೆಗಾಗಿ ವಿನಿಯೋಗಿಸುತ್ತಿದ್ದರೂ, ಯಾರ ಕಣ್ಣಿಗೂ ಬೀಳದೇ,ಸಾರ್ವಜನಿಕರು,ಪತ್ರಿಕೆಯವರು,ಕೊನೆಗೆ ತನ್ನನ್ನು ಬೆಳೆಸಿದ ಚಿತ್ರಂಗದವರಿಂದಲೂ ದೂರವಾಗಿ ಅಜ್ಞಾತರಾಗಿಯೇ ಉಳಿಯಬೇಕೆನ್ನುವ ಅವರ ದಿವ್ಯ ನಿರ್ಲಿಪ್ತ ಮನೋಭಾವ..!!
ಬಹುಶಃ ‘ದೀನಬಂಧು’ಮನೆಯ ಜಯದೇವರಲ್ಲದಿದ್ದರೆ ಆರತಿಯವರು ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲವೇನೋ.ಹತ್ತು ವರ್ಷಗಳ ಹಿಂದೆ ನಾನು ಚಾಮರಾಜನಗರದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕನಾಗಿದ್ದಾಗ ಜಯದೇವ್ ಅವರ ದೀನಬಂಧು ಮಕ್ಕಳ ಮನೆಯ ಜೊತೆ ನಿಕಟವಾಗಿದ್ದೆ. ಆಗ ಒಮ್ಮೆ ಜಯದೇವ್ ಅವರು ಆರತಿಯವರ ಸೇವಾ ಕಾರ್ಯದ ಬಗ್ಗೆ ಹೇಳಿದ್ದರು. ಮುಂದಿನ ಸಲ ಆರತಿಯವರು ಬಂದಾಗ ನಾನು ಭೇಟಿ ಮಾಡಬಹುದಾ ಅಂತ ಕೇಳಿದಾಗ ಆರತಿಯವರು ಯಾರನ್ನೂ ಭೇಟಿಯಾಗಲು ಇಷ್ಟ ಪಡುವುದಿಲ್ಲ ಎಂದರು..!! ಆದರೆ ಆಗಲೂ ನನಗೆ ಆರತಿಯವರ ವೈಯಕ್ತಿಕ ಬದುಕಿನ ಬಗೆಗಾಗಲಿ, ಸೇವಾಗಾತ್ರ ಇಷ್ಟೊಂದು ದೊಡ್ಡದಿದೆಯೆಂದಾಗಲಿ ಗೊತ್ತಿರಲಿಲ್ಲ..
ಟಿವಿ9 ಹೇಳಿದಂತೆ, ಕೆಲವು ವರ್ಷಗಳ ಹಿಂದೆ ಎಸ್.ಜಿ.ತುಂಗರೇಣುಕ ಅನ್ನುವ ಹಿರಿಯ ಪತ್ರಕರ್ತೆಯಿಂದಾಗಿ ಆರತಿಯವರ ಕುರಿತು ಮಾಹಿತಿ ದೊರೆಯುವಂತಾಯಿತು. ರೇಣುಕ ಅವರಿಗೂ ಆರತಿಯವರ ಭೇಟಿ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಜಯದೇವರ ಮೂಲಕ ಭೇಟಿಗೆ ಪ್ರಯತ್ನಿಸಿದರೂ ಆರತಿಯವರು ಭೇಟಿ ನಿರಾಕರಿಸಿದರು.ಕೊನೆಗೂ ಜಯದೇವರ ಒತ್ತಾಯಕ್ಕೆ ಮಣಿದು ಭೇಟಿಗೆ ಅವಕಾಶ ದೊರೆಯಿತು..!! ಬಹುಶಃ ಆ ಭೇಟಿಯಿಂದಾಗಿ ಆರತಿಯವರ ಅತ್ಯಂತ ಸರಳಬದುಕಿನ, ಆದರೆ ಸಮಾಜ ಸೇವೆಯ ಶ್ರೀಮಂತಿಕೆಯ ವಿವರಗಳು ಲಭ್ಯವಾದವು..!! ಆ ನಂತರವೂ ಅವರು ಯಾರಿಗೂ ಸಂದರ್ಶನ ಭೇಟಿಗೆ ಅವಕಾಶ ನೀಡಲಿಲ್ಲ..
ಇವತ್ತು ಕೋಟಿಗಟ್ಟಲೆ ದಾನ ಮಾಡುವ ಅನೇಕ ಸಂಸ್ಥೆಗಳು,ಶ್ರೀಮಂತ ವ್ಯಕ್ತಿಗಳು ಚಿತ್ರರಂಗದ ವರು ನೂರಾರು ಮಂದಿ ಇರಬಹುದು.ಆದರೆ ಎಲ್ಲ ಬಗೆಯ ಪ್ರಚಾರದಿಂದಲೂ ದೂರವಿದ್ದು, ತಾನು ಸಮಾಜದಿಂದ ಪಡೆದದ್ದೆಲ್ಲವನ್ನೂ ಮತ್ತೆ ಸಮಾಜಕ್ಕೆ ಮರಳಿಸುವ ಸರಳ,ನಿಸ್ರೃಹ ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡಿಪಾಗಿಸಿಕೊಂಡ ಆರತಿಯವರಂತಹ ವ್ಯಕ್ತಿಗಳು ಹೆಚ್ಚು ಮಂದಿ ಸಿಗುವುದಿಲ್ಲ..!! ಚಂದ್ರಶೇಖರರ ಹೆಸರಾದರೂ ಅವರ ಟ್ರಸ್ಟಿನಲ್ಲಿದೆ. ಆರತಿಯವರ ಹೆಸರು ಎಲ್ಲೂ ಕಾಣಿಸುವುದಿಲ್ಲ..!!
ನಿಜಕ್ಕೂ ಆರತಿಯವರು- ” ಈ ಶತಮಾನದ ಮಾದರಿ ಹೆಣ್ಣು..!!”
ಹ್ಯಾಟ್ಸಾಫ್ ಆರತಿಯವರೇ..
(ಲೇಖನ ಕೃಪೆ : ವಾಟ್ಸಾಪ್)
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ
ವಿದ್ಯಾನಾಯ್ಕ್ ಅರೇಹಳ್ಳಿ
ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.
ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.
ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.
ನಾಯಕ ನಟನಾಗಿ ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.
ಇನ್ನು 2022ರಲ್ಲಿ ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪರಿಶ್ರಮ ಮತ್ತು ಫಿಟ್ನೆಸ್
ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.
ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್
ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ
ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.
ಬಂಜಾರ ಹವೇಲಿಯ ಹರಿಕಾರ
ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.
ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.
ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
-
ದಿನದ ಸುದ್ದಿ4 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ2 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ5 hours agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ



