ಸಿನಿ ಸುದ್ದಿ
ಈ ಶತಮಾನದ ಮಾದರಿ ಹೆಣ್ಣು..!
ಟಿವಿ9 ನ ‘ಮಾರುವೇಷ’ ಸರಣಿಯಲ್ಲಿ ಈಗಷ್ಟೇ ಒಂದು ಒಳ್ಳೆಯ ಕಾರ್ಯ ಕ್ರಮ ನೋಡಿದೆ…
ಅದು ,ಒಂದು ಕಾಲದಲ್ಲಿ ಅತ್ಯುತ್ತಮ ನಟಿಯಾಗಿ 125ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ,ಇದ್ದಕ್ಕಿದ್ದಂತೇ 1986ರಲ್ಲೇ ಬಣ್ಣದ ಬದುಕಿಗೆ ವಿದಾಯ ಹೇಳಿ,ನಿಜ ಬದುಕಿನಲ್ಲಿ ಸಾಮಾಜಿಕ ಕಳಕಳಿಯಿಂದ ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಸಂಪಾದಿಸಿದ್ದೆಲ್ಲವನ್ನೂ ಬಡವರ ಕಣ್ಣೀರೊರೆಸಲು ವಿನಿಯೋಗಿಸುತ್ತಿರುವ ಶ್ರೇಷ್ಠ ನಟಿ,ಅಭಿನೇತ್ರಿ ಆರತಿಯವರ ಸಾರ್ಥಕ ಬದುಕಿನ ಕತೆ..!!
ನಾಯಕಿ ನಟಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ, ಸಿನಿಮಾದ ಆಕರ್ಷಕ ಬಣ್ಣದ ಲೋಕಕ್ಕೆ ವಿದಾಯ ಹೇಳುವುದು ಸುಲಭದ ಮಾತಲ್ಲ.ಪ್ರೀತಿಸಿ ಕೈ ಹಿಡಿದ ಪುಟ್ಟಣ್ಣ ಕಣಗಾಲರೂ ದೂರವಾಗಿದ್ದರು.ಮಗಳು ಯಶಸ್ವಿನಿಯನ್ನು ಆಯಾಳ ಕೈಗೊಪ್ಪಿಸಿ ದಿನಗಟ್ಟಲೆ ಶೂಟಿಂಗಿಗೆ ತೆರಳಬೇಕಾದ ಅನಿವಾರ್ಯತೆ. ಆದರೆ ಅದೊಂದು ದಿನ ತಡ ರಾತ್ರಿ ಶೂಟಿಂಗ್ ಮುಗಿಸಿ ಬಂದಾಗ, ಮಗಳ ಒಂಟಿತನದ ಆಕ್ರಂದನ ಅದೆಷ್ಟು ತೀವ್ರವಾಗಿ ಆ ತಾಯಿಯ ಕರುಳನ್ನು ಇರಿಯಿತೆಂದರೆ,ಆ ಕ್ಷಣದಲ್ಲಿ ಮಗಳ ತಲೆ ಮೇಲೆ ಕೈಯಿಟ್ಟು ಇನ್ನೆಂದೂ ಬಣ್ಣ ಹಚ್ಚುವುದಿಲ್ಲವೆಂದು ಪ್ರಮಾಣ ಮಾಡಿದರು..!!
ಪಡೆದಿದ್ದ ಎಲ್ಲ ಅಡ್ವಾನ್ಸ್ ಹಣವನ್ನೂ ನಿರ್ಮಾಪಕರಿಗೆ ಹಿಂತಿರುಗಿಸಿದರು..!!
ಬಣ್ಣದ ಬದುಕಿಂದ ದೂರವಾಗಿ ಸರಳ ಬದುಕನ್ನಪ್ಪಿಕೊಂಡು ಅಜ್ಞಾತವಾಗಿರಬಯಸಿದ ಆರತಿ ಸುಮ್ಮನೇ ಕೂರಲಿಲ್ಲ..ತಾನು ದುಡಿದ ಅಷ್ಟೂ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸಿದರು.
ಅದೇ ಸಮಯದಲ್ಲಿ ಪರಿಚಯವಾದ ಸೇವಾ ಮನೋಭಾವದ ಹಾರ್ಡ್ ವೇರ್ ಇಂಜಿನಿಯರ್ ಚಂದ್ರಶೇಖರ ದೇಸಾಯಿ ಗೌಡರ ರನ್ನು ಮದುವೆಯಾಗಿ ಅಮೇರಿಕಾದಲ್ಲಿದ್ದುಕೊಂಡೇ ತನ್ನ ಸಾಮಾಜಿಕ ಸೇವಾ ಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡರು..!!
ಬೆಂಗಳೂರಿನಲ್ಲಿದ್ದ ತನ್ನ ಪ್ರೀತಿಯ ಬಂಗಲೆ “ಬೆಳ್ಳಿತೆರೆ”ಯನ್ನೂ ಮಾರಿ ಬಂದ 15 ಕೋಟಿ ರೂಪಾಯಿ ಅಷ್ಟನ್ನೂ ಸಮಾಜ ಸೇವೆಗೆ ವಿನಿಯೋಗಿಸಿದರು. ಆರತಿಯವರಿಗೆ ಸಮಾಜಸೇವೆಗೆ ಪ್ರೇರಣೆ ನೀಡಿದ್ದು ಚಾಮರಾಜನಗರದಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪನವರ ಮಗ ಜಿ.ಎಸ್.ಜಯದೇವ ನಡೆಸುತ್ತಿರುವ ‘ದೀನಬಂಧು’ ಮಕ್ಕಳ ಮನೆ. ಆ ಅನಾಥಾಶ್ರಮಕ್ಕೆ ವಿಶಾಲ ಹಾಸ್ಟೆಲ್ ಕಟ್ಟಡ ಕಟ್ಟಿಸಿ ಕೊಟ್ಟಿದ್ದಲ್ಲದೆ, ಎರಡು ಕೋಟಿ ರೂ.ಠೇವಣಿಯಿರಿಸಿ ಅದರ ಬಡ್ಡಿಯನ್ನು ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ವಿನಿಯೋಗಿಸುತ್ತಿದ್ದಾರೆ. ನಲುವತ್ತು ಶಾಲೆಗಳನ್ನು ದತ್ತು ಪಡೆದು ಅಷ್ಟೂ ಶಾಲೆಗಳ ಬಡ ಮಕ್ಕಳ ಖರ್ಚುವೆಚ್ಚ ಭರಿಸುತ್ತಿದ್ದಾರೆ..!!
ಆರತಿ-ಚಂದ್ರಶೇಖರ ದಂಪತಿಗಳ ಸೇವಾ ಕಾರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ.ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಆ ಹಳ್ಳಿಗೆ ಶೌಚಾಲಯ,ಆಸ್ಪತ್ರೆ,ಶಾಲೆ ಹೆಣ್ಣು ಮಕ್ಕಳಿಗೆ ಸ್ವಉದ್ಯೋಗ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ..!!
ಚಿತ್ರರಂಗದಲ್ಲಿದ್ದಾಗಿನ ಅವರ ಸಹಜ ವೈವಾಹಿಕ, ಪ್ರೇಮ ಕತೆಗಳು ಏನಾದರೂ ಇರಲಿ.ನನಗೆ ಅಚ್ಚರಿಯೆನಿಸುವುದು ಅದಲ್ಲ..
ಇಷ್ಟೆಲ್ಲ ಕೋಟಿಗಟ್ಟಲೆ ಮೊತ್ತವನ್ನು ನಿಸ್ವಾರ್ಥ ಭಾವದಿಂದ ಸಾಮಾಜಿಕ ಸೇವೆಗಾಗಿ ವಿನಿಯೋಗಿಸುತ್ತಿದ್ದರೂ, ಯಾರ ಕಣ್ಣಿಗೂ ಬೀಳದೇ,ಸಾರ್ವಜನಿಕರು,ಪತ್ರಿಕೆಯವರು,ಕೊನೆಗೆ ತನ್ನನ್ನು ಬೆಳೆಸಿದ ಚಿತ್ರಂಗದವರಿಂದಲೂ ದೂರವಾಗಿ ಅಜ್ಞಾತರಾಗಿಯೇ ಉಳಿಯಬೇಕೆನ್ನುವ ಅವರ ದಿವ್ಯ ನಿರ್ಲಿಪ್ತ ಮನೋಭಾವ..!!
ಬಹುಶಃ ‘ದೀನಬಂಧು’ಮನೆಯ ಜಯದೇವರಲ್ಲದಿದ್ದರೆ ಆರತಿಯವರು ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲವೇನೋ.ಹತ್ತು ವರ್ಷಗಳ ಹಿಂದೆ ನಾನು ಚಾಮರಾಜನಗರದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕನಾಗಿದ್ದಾಗ ಜಯದೇವ್ ಅವರ ದೀನಬಂಧು ಮಕ್ಕಳ ಮನೆಯ ಜೊತೆ ನಿಕಟವಾಗಿದ್ದೆ. ಆಗ ಒಮ್ಮೆ ಜಯದೇವ್ ಅವರು ಆರತಿಯವರ ಸೇವಾ ಕಾರ್ಯದ ಬಗ್ಗೆ ಹೇಳಿದ್ದರು. ಮುಂದಿನ ಸಲ ಆರತಿಯವರು ಬಂದಾಗ ನಾನು ಭೇಟಿ ಮಾಡಬಹುದಾ ಅಂತ ಕೇಳಿದಾಗ ಆರತಿಯವರು ಯಾರನ್ನೂ ಭೇಟಿಯಾಗಲು ಇಷ್ಟ ಪಡುವುದಿಲ್ಲ ಎಂದರು..!! ಆದರೆ ಆಗಲೂ ನನಗೆ ಆರತಿಯವರ ವೈಯಕ್ತಿಕ ಬದುಕಿನ ಬಗೆಗಾಗಲಿ, ಸೇವಾಗಾತ್ರ ಇಷ್ಟೊಂದು ದೊಡ್ಡದಿದೆಯೆಂದಾಗಲಿ ಗೊತ್ತಿರಲಿಲ್ಲ..
ಟಿವಿ9 ಹೇಳಿದಂತೆ, ಕೆಲವು ವರ್ಷಗಳ ಹಿಂದೆ ಎಸ್.ಜಿ.ತುಂಗರೇಣುಕ ಅನ್ನುವ ಹಿರಿಯ ಪತ್ರಕರ್ತೆಯಿಂದಾಗಿ ಆರತಿಯವರ ಕುರಿತು ಮಾಹಿತಿ ದೊರೆಯುವಂತಾಯಿತು. ರೇಣುಕ ಅವರಿಗೂ ಆರತಿಯವರ ಭೇಟಿ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಜಯದೇವರ ಮೂಲಕ ಭೇಟಿಗೆ ಪ್ರಯತ್ನಿಸಿದರೂ ಆರತಿಯವರು ಭೇಟಿ ನಿರಾಕರಿಸಿದರು.ಕೊನೆಗೂ ಜಯದೇವರ ಒತ್ತಾಯಕ್ಕೆ ಮಣಿದು ಭೇಟಿಗೆ ಅವಕಾಶ ದೊರೆಯಿತು..!! ಬಹುಶಃ ಆ ಭೇಟಿಯಿಂದಾಗಿ ಆರತಿಯವರ ಅತ್ಯಂತ ಸರಳಬದುಕಿನ, ಆದರೆ ಸಮಾಜ ಸೇವೆಯ ಶ್ರೀಮಂತಿಕೆಯ ವಿವರಗಳು ಲಭ್ಯವಾದವು..!! ಆ ನಂತರವೂ ಅವರು ಯಾರಿಗೂ ಸಂದರ್ಶನ ಭೇಟಿಗೆ ಅವಕಾಶ ನೀಡಲಿಲ್ಲ..
ಇವತ್ತು ಕೋಟಿಗಟ್ಟಲೆ ದಾನ ಮಾಡುವ ಅನೇಕ ಸಂಸ್ಥೆಗಳು,ಶ್ರೀಮಂತ ವ್ಯಕ್ತಿಗಳು ಚಿತ್ರರಂಗದ ವರು ನೂರಾರು ಮಂದಿ ಇರಬಹುದು.ಆದರೆ ಎಲ್ಲ ಬಗೆಯ ಪ್ರಚಾರದಿಂದಲೂ ದೂರವಿದ್ದು, ತಾನು ಸಮಾಜದಿಂದ ಪಡೆದದ್ದೆಲ್ಲವನ್ನೂ ಮತ್ತೆ ಸಮಾಜಕ್ಕೆ ಮರಳಿಸುವ ಸರಳ,ನಿಸ್ರೃಹ ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡಿಪಾಗಿಸಿಕೊಂಡ ಆರತಿಯವರಂತಹ ವ್ಯಕ್ತಿಗಳು ಹೆಚ್ಚು ಮಂದಿ ಸಿಗುವುದಿಲ್ಲ..!! ಚಂದ್ರಶೇಖರರ ಹೆಸರಾದರೂ ಅವರ ಟ್ರಸ್ಟಿನಲ್ಲಿದೆ. ಆರತಿಯವರ ಹೆಸರು ಎಲ್ಲೂ ಕಾಣಿಸುವುದಿಲ್ಲ..!!
ನಿಜಕ್ಕೂ ಆರತಿಯವರು- ” ಈ ಶತಮಾನದ ಮಾದರಿ ಹೆಣ್ಣು..!!”
ಹ್ಯಾಟ್ಸಾಫ್ ಆರತಿಯವರೇ..
(ಲೇಖನ ಕೃಪೆ : ವಾಟ್ಸಾಪ್)
ಸುದ್ದಿದಿನ.ಕಾಂ|ವಾಟ್ಸಾಪ್|9986715401
ಕ್ರೀಡೆ
ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು
ಮದ್ಯಾಹ್ನದ ಸುದ್ದಿಮುಖ್ಯಾಂಶಗಳು
- ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
- ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಹಾಲಿವುಡ್ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
- ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
- ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ
ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್
ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243