ಸಿನಿ ಸುದ್ದಿ
ಮೀಡಿಯಾ ಸತ್ಯವನ್ನ ನಿರ್ಧಾರ ಮಾಡುತ್ತಾ..? ಇದು ಹೇಳಿದ್ದೆಲ್ಲಾ ಸತ್ಯವಾ..? : ‘ಜನಗಣಮನ’ ಸಿನೆಮಾಂತರಂಗ..!
- ಜಿ.ಟಿ.ತುಮರಿ
ಈ ಪ್ರಶ್ನೆ ಕೇಳುತ್ತಾ ಹೋದಂತೆ ಒಬ್ಬ ಪತ್ರಕರ್ತನಾಗಿ ತಣ್ಣಗೆ ಬೆವರಿಬಿಟ್ಟೆ. ನನ್ನ ಕಣ್ಣಮುಂದೆ ಹಲವು ಸುದ್ದಿ ಚಾನೆಲ್ ಮತ್ತು ವಿಷ ಕಾರುವ ಅದರ ನಿರೂಪಕರು, ಅವರ ನಿಲುವುಗಳ ಹಿಂದಿರುವ ಅಪವಿತ್ರ ಮೈತ್ರಿಗಳು, ಅದರಲ್ಲೂ ಈಚೆಯ ವರ್ಷದಲ್ಲಿ ಪೇಸ್ಭುಕ್, ಟ್ವಿಟರ್, ವ್ಯಾಟ್ಸಪ್ , ಇನ್ಸ್ಟಾಗ್ರಾಮ್ ಇತ್ಯಾದಿ ಮೂಲಕ ಸುಳ್ಳು ಸುರಿಯುವ ರಾಜಕೀಯ ಸಾಮಾಜಿಕ ಹುನ್ನಾರಗಳು ಥಟ್ಟನೆ ಮನಸಿಗೆ ಬಂದವು.
ಮಲಯಾಳಂ ನಟ ಪೃಥ್ವಿರಾಜ್ ಈಚೆಗೆ ಬಿಡುಗಡೆಯಾದ ಜನಗಣಮನ ಸಿನಿಮಾದಲ್ಲಿ ಡೈಲಾಗ್ ಮಾತ್ರ ಹೇಳುತ್ತಾ ಇರಲಿಲ್ಲ ಆ ಕಂಚಿನ ಕಂಠದಲ್ಲಿ ಸಿನಿಮಾ ನೋಡುತ್ತಾ ಇರುವ ಪ್ರತಿ ಭಾರತೀಯನ ಆತ್ಮಸಾಕ್ಷಿ ತಿವಿಯುತ್ತಾ ಹೋಗುತ್ತಾನೆ. ಆ ಮೂಲಕ ನಮ್ಮ ಸುತ್ತಲ ವರ್ತಮಾನದ ಸತ್ಯಗಳಿಗೆ ಕುರುಡಾದ ಕೆಪ್ಪಾದ ಕಣ್ಣು ಕಿವಿಯ ಜತೆ ಸತ್ತ ಹಾಗೆ ಇರುವ ನಮ್ಮೊಳಗಿನ ನಮ್ಮನ್ನು ಬಡಿದೆಬ್ಬಿಸುತ್ತಾ ಹೋಗುತ್ತದೆ ಜನಗಣಮನ ಸಿನಿಮಾ.
” ಒಂದು ನಾಯಿ ಸತ್ತರೂ ಕೇಳೋ ಈ ದೇಶದಲ್ಲಿ ಆ ನಾಲ್ಕು ಜನ ಬೀದಿನಾಯಿಗಳ ಹಾಗೆ ಸತ್ತರು. ಯಾವ ಆಧಾರನೂ ಬೇಡ, ಯಾವ ನ್ಯಾಯ ಕೋರ್ಟ್ ಬೇಡ ಅವರನ್ನ ಕೊಲ್ಲಬೇಕು. ಇದಕ್ಕೆ ಕಾರಣ ಅವರ ಗುರುತು, 2 ನೇ ಕ್ಲಾಸ್ ಮಗುವಿಗೆ ಬಣ್ಣದ ಮೇಲೆ ಚಂದ ಕುರೂಪ ಅಂತ ಚಿತ್ರ ಬರೆದು ತಾರತಮ್ಯವನ್ನ ತುಂಬುವ ಮತದ ರಾಜಕೀಯ, ಅವರನ್ನು ನೋಡಿದ್ರೆ ಗೊತ್ತಾಗಲ್ಲವಾ ಅನ್ನೋ ಜಾತಿ ರಾಜಕೀಯ ಇಲ್ಲಿ ನಡೀತಾ ಇದೆ”
ಯೂನಿವರ್ಸಿಟಿಯೊಂದರಲ್ಲಿ ಜಾತಿಯ ಕಾರಣದಿಂದ ಹತ್ಯೆಗೆ ಒಳಗಾಗುವ ವಿದ್ಯಾರ್ಥಿನಿಗೆ ನ್ಯಾಯ ನೀಡಲು ಮುಂದಾಗುವ ಮಹಿಳಾ ಪ್ರೊಫೆಸರ್ ಒಬ್ಬರನ್ನು ಅಲ್ಲಿನ ವ್ಯವಸ್ಥೆ ಕೊಂದುಹಾಕಿದ ಪ್ರಕರಣವೊಂದನ್ನು ಸತ್ಯದ ಮರೆಮಾಚಿ ನಕಲಿ ಎನ್ ಕೌಂಟರ್ ಹೇಗೆ ಸೃಷ್ಟಿಯಾಗಲು ಇರುವ ಸಾಮಾಜಿಕ ರಾಜಕೀಯ ಕಾರಣಗಳನ್ನ ಜನಗಣಮನ ಸಿನಿಮಾ ಬಿಚ್ಚಿಡುತ್ತಾ ಹೋಗುತ್ತದೆ. ಘಟನೆಯೊಂದರ ರಾಜಕೀಯ ಲಾಭವನ್ನ ಹೇಗೆ ಮಾಧ್ಯಮಗಳು, ಸಮೂಹ ಮಾಧ್ಯಮಗಳ ಮೂಲಕ ಜನರಲ್ಲಿ ಸುಳ್ಳು ಬಿತ್ತಿ ಪರಿಸ್ಥಿತಿ ಲಾಭ ಪಡೆಯಬಹುದು ಎನ್ನುವುದನ್ನು ಇಡೀ ಸಿನಿಮಾ ಎಳೆ ಎಳೆಯಾಗಿ ವಿವರಿಸುತ್ತದೆ.
ಈ ನಿರ್ದೇಶಕರಿಗೆ ಸೆಲ್ಯೂಟ್.. ಒಂದು ಸಿನಿಮಾ ಕೇವಲ ರಂಜನೆ ನೀಡಿದರೆ ಸಾಕು ಎನ್ನುವ ಸೀಮಿತ ಲೆಕ್ಕಾಚಾರದ ನಡುವೆ ಸಿನಿಮಾವೊಂದು ನಮ್ಮ ಸುತ್ತಲಿನ ಸುಡು ವರ್ತಮಾನಕ್ಕೆ ವಿಮರ್ಶೆ ಬರೆದಿದೆ. ಹೇಗೆ ದೇಶದ ಜನರು ವಿಸ್ಮೃತಿಗೆ ಒಳಗಾಗಿ ಹೌದಪ್ಪ ಆಗಿದ್ದೇವೆ ಎನ್ನುವುದನ್ನ ಪ್ರತಿ ದ್ರಶ್ಯ ಕಟ್ಟಿ ಕೊಡುತ್ತದೆ. ಸಿನಿಮಾದ ಮೊದಲು ಅರ್ಧ ಭಾವನಾತ್ಮಕ ಕಥಾಹಂದರ ಕಟ್ಟಿ ಕೊಟ್ಟರೆ. ದ್ವಿತೀಯಾರ್ಧದಲ್ಲಿ ನಾವು ಈ ಮೊದಲು ಸಿನಿಮಾ ಆರಂಭದಲ್ಲಿ ಕಟ್ಟಿಕೊಂಡ ಭಾವುಕತೆ ಎಷ್ಟು ಕೃತಕ ಮತ್ತು ಸುಳ್ಳು ಎನ್ನುವುದನ್ನ ವಕೀಲನಾದ ಸಿನಿಮಾ ನಾಯಕ ಮೂಲಕ ಪ್ರಖರವಾಗಿ ಹೇಳಿಸುವ ಮೂಲಕ ಮಿಥ್ ಗಳನ್ನು ಸೃಷ್ಟಿ ಮಾಡುವ ಹುನ್ನಾರಗಳನ್ನ ಸಿನಿಮಾ ಏಕ ಕಾಲದಲ್ಲಿ ತೆರೆಯಮೇಲೆ ಮತ್ತು ನಮ್ಮೊಳಗೆ ಅನುಭವಕ್ಕೆ ತರಿಸುತ್ತದೆ.
ಇಂತ ಸಿನಿಮಾ ಮಾಡಲು ಪ್ರತಿಭೆ ಮಾತ್ರ ಇದ್ದರೆ ಸಾಕಾಗದು ಅದಕ್ಕೆ ಒಂದು ಬದ್ಧತೆ ಮತ್ತು ದೈರ್ಯ ಬೇಕು. ಸಾಮಾಜಿಕ ಮತ್ತು ರಾಜಕೀಯ ಸತ್ಯವನ್ನ ಹೇಳುವ ಸಮಾಜಮುಖಿ ಸಿನಿಮಾಗಳು ಹಾಗೆ ನೋಡಿದರೆ ಕನ್ನಡ ಚಿತ್ರರಂಗದಲ್ಲಿ 2000 ಕ್ಕಿಂತ ಮೊದಲು ಸಿನಿಮಾಗಳ ಸರಣಿಗಳೇ ಇವೆ. ಬಹಳ ಮುಖ್ಯವಾಗಿ ರಾಜ್ ಕುಮಾರ್ ಸಿನಿಮಾಗಳನ್ನ ಉಲ್ಲೇಖ ಮಾಡಬಹುದು. ಆದರೆ ಕಳೆದ ಒಂದು ದಶಕವನ್ನ ಗಮನಿಸಿದರೆ ಮಲಯಾಳಂ ಮತ್ತು ತಮಿಳು ಚಿತ್ರರಂಗ ಈ ನಡೆಯಲ್ಲಿ ಮುಂದೆ ಇವೆ. ಹುಡುಗ ಹುಡುಗಿ ಮರ ಸುತ್ತಿಸಿ ಮಚ್ಚು ಲಾಂಗು ಹಿಡಿಸಿ ಎರಡು ಮಾಸ್ ಸಾಂಗ್ ಹಾಕಿ ನಾಯಕನನ್ನು ಮೆರೆಸಲು ಮತ್ತೆರೆಡು ಹಾಡು ಬರೆಸುವುದರಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗ ಪೈಪೋಟಿ ಇದ್ದಂತೆ ಇವೆ. ಆದರೆ ಮಲಯಾಳಿ ಮತ್ತು ತಮಿಳು ಚಿತ್ರರಂಗ ಇದಕ್ಕೆ ಭಿನ್ನ ಇವೆ. ಅಲ್ಲಿನ ಸಿನಿಮಾದಲ್ಲಿ ಭಿನ್ನ ನೆಲೆಯ ನಿರೂಪಣೆಯ ಕಥೆ, ಕಡಿಮೆ ವೈಭವೀಕರಣ, ಕೌಶಲ್ಯದ ನಟನೆಯಂತ ಹಲವು ಕಾರಣ ಇವೆ. ಕರ್ಣನ್, ಅಸುರ, ಜೈ ಭೀಮ್, ಗ್ರೇಟ್ ಇಂಡಿಯನ್ ಕಿಚನ್ ರೂಮ್, ಕೋಲ್ಡ್ ಕೇಸ್, ಬೀಸ್ಟ್, ಬಿಗಿಲ್, ಇಂದ್ರನ್ ನಟನೆ ಸಿನಿಮಾಗಳು, ಡ್ರೈವಿಂಗ್ ಲೈಸೆನ್ಸ್, ಅಯ್ಯಪ್ಪನ್, ಫಾಸಿಲ್ ಸರಣಿ ಸಿನಿಮಾಗಳು ಹೀಗೆ.
ಜನಗಣಮನ….ಈಚೆಯ ವರ್ಷಗಳಲ್ಲಿ ನಾನು ಕಂಡ ಸಿನಿಮಾಗಳಲ್ಲೇ ಶ್ರೇಷ್ಠ ಸಿನಿಮಾ. ರಾಜಕೀಯ ಪೊಲೀಸ್ ವ್ಯವಸ್ಥೆಯನ್ನ ಹೇಗೆ ದುರ್ಬಳಕೆ ಮಾಡಿಕೊಂಡು ತನ್ನ ಬೇಳೆ ಕಾಳು ಬೇಯಿಸಿ ಬಳಸಿ ಬಿಸಾಡುತ್ತದೆ ಎನ್ನುವುದನ್ನು ಕಥಾವಸ್ತು ಒಳಗೊಳ್ಳುವ ಜತೆ ರಾಜಕೀಯ ಪೊಲೀಸ್ ಮತ್ತು ಮಾಧ್ಯಮ ಮೂರು ಭ್ರಷ್ಟ ಮೈತ್ರಿಯಾದರೆ ಸತ್ಯ ಹೇಗೆ ಸುಳ್ಳಾಗಿ ಸಂವಿಧಾನದ ಆಶಯ ವಿರುದ್ಧ ಅಪವಿತ್ರ ಮೈತ್ರಿಯಾಗಿ ಜನಗಣಮನಕ್ಕೆ ವಿಷ ಉಣಿಸಿ ಸ್ವಾರ್ಥ ಸಾಧಿಸುತ್ತದೆ ಎನ್ನುವುದು ಅತ್ಯುತ್ತಮವಾಗಿ ನಿರೂಪಿಸಿ ದೃಶ್ಯವಾಗಿಸಿದೆ ಸಿನಿಮಾ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ಲೋಕಸಭಾ ಚುನಾವಣೆ ; ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆ : ಇತರೆ ಪ್ರಮುಖ ಸುದ್ದಿಗಳು
ಮದ್ಯಾಹ್ನದ ಸುದ್ದಿಮುಖ್ಯಾಂಶಗಳು
- ಮಹಿಳೆಯರ ಅಭ್ಯುದಯಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ನಾರಿಶಕ್ತಿಯ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
- ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ನವದೆಹಲಿಯಲ್ಲಿ ’ಸಶಕ್ತ ನಾರಿ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಅವರು ’ನಮೋ ಡ್ರೋನ್ ದೀದಿ’ ಯೋಜನೆಯಲ್ಲಿ ಏರ್ಪಡಿಸಿರುವ ಕೃಷಿಗೆ ಸಂಬಂಧಿಸಿದ ಡ್ರೋನ್ ಪ್ರದರ್ಶನ ವೀಕ್ಷಿಸಿದರು.
- ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹರಿಯಾಣದ ಗುರುಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ರಾಜ್ಯಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೌಲ್ಯದ 112 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
- ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿಂದು ಸಂಜೆ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ 18 ರಿಂದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ.
- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕರು, ಕಾರ್ಮಿಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಅನ್ನು ಇಂದಿನಿಂದ ಆರಂಭಿಸಲಾಗಿದೆ.
- ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ ಹಾಲಿವುಡ್ನ ಪ್ರಮುಖ ತಾರೆಯರು 96 ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ’ಯೊರ್ಗೊಸ್ ಲ್ಯಾಂಥಿಮೋಸ್ ಪೂರ್ ಥಿಂಗ್ಸ್’ ಚಿತ್ರದ ’ಬೆಲ್ಲಾ ಬ್ಯಾಕ್ಸ್ಟರ್’ ಪಾತ್ರದ ಅಭಿನಯಕ್ಕಾಗಿ ’ಎಮ್ಮಾ ಸ್ಟೋನ್’ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
- ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಭಾರತ ಅಗ್ರಸ್ಥಾನಕ್ಕೆ ಮರಳಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 3ನೇ ಸ್ಥಾನದಲ್ಲಿದೆ. ಇದರೊಂದಿಗೆ ಕ್ರಿಕೆಟ್ನ ಎಲ್ಲಾ ಮೂರೂ ಮಾದರಿಯಲ್ಲೂ ಭಾರತ ತಂಡ ನಂ. 1ಸ್ಥಾನ ಪಡೆದಿದೆ.
- ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಹಿಳೆಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿಂದು ಗುಜರಾತ್ ಜಯಂಟ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ
ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್
ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243