ನೆಲದನಿ
ಕುವೆಂಪು ಕಂಡರಿಸಿದ ಕನ್ನಡತನದ ದಾರ್ಶನಿಕತೆ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಕುವೆಂಪು ಬರಹಗಳಲ್ಲಿ ‘ಕನ್ನಡತನ’ದ ವಿನ್ಯಾಸಗಳು ಹೇಗೆ ಮೈದಾಳಿವೆ ಎಂಬುದನ್ನು ಅವರ ಸಾಹಿತ್ಯಕ ಹಾಗೂ ವೈಚಾರಿಕ ಬರಹಗಳ ಮೂಲಕ ಕಂಡುಕೊಳ್ಳಬಹುದಾಗಿದೆ. ಕನ್ನಡತನ ಎನ್ನುವುದು ಕೇವಲ ನಾಡು ನುಡಿಗಳ ಗಡಿಗಳಿಗೆ ಸೀಮಿತವಾಗಿರುವ ವಿದ್ಯಮಾನವಾಗಿರದೇ, ಅದೊಂದು ವ್ಯಾಪಕ ಗ್ರಹಿಕೆ ಎನ್ನುವುದು ಇವರ ಇಡೀ ಬರಹಗಳ ಮೂಲಕ ಅನಾವರಣಗೊಂಡಿರುವುದನ್ನು ಕಾಣುತ್ತೇವೆ.
ಹಾಗೆಂದರೆ, ಕನ್ನಡತನ ಎನ್ನುವುದು ಸಂಕುಚಿತ ಗಡಿಗಳನ್ನು ಮೀರುವ ಮತ್ತು ಅಂತಹ ಸೀಮಿತ ಗಡಿಗಳನ್ನು ದಾಟುವ ವಿನ್ಯಾಸವನ್ನಾಗಿ ನೋಡುವ ಹಲವು ಸನ್ನಿವೇಶಗಳು ಕುವೆಂಪು ಅವರ ಅಭಿವ್ಯಕ್ತಿಗಳಲ್ಲಿ ಅತ್ಯಂತ ನಿಚ್ಚಳವಾಗಿವೆ. ಉದಾ.ಗೆ ನೀ ಮೆಟ್ಟುವ ನೆಲ, ಅದೆ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ’ ಎನ್ನುವ ಕವನದ ಸಾಲುಗಳು ಇರಬಹುದು ಇಲ್ಲವೇ ಅನಿಕೇತನ ಕವನ ಇರಬಹುದು ಅಥವಾ ಕನ್ನಡ ನಾಡು ನುಡಿ ಕುರಿತ ಪ್ರತಿಯೊಂದು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕನ್ನಡತನದ ನಿರ್ವಚನೆಯನ್ನು ಕಾಣಬಹುದಾಗಿದೆ.
ಅಂದರೆ ಕುವೆಂಪು ಅವರ ‘ಅಭಿವ್ಯಕ್ತಿ’ ಮತ್ತು ‘ಗ್ರಹಿಕೆ’ಗಳಲ್ಲಿ ಕನ್ನಡತನ ಎಂಬ ಸಮೂಹ ಅಸ್ಮಿತೆ ಹೇಗೆ ಅನಾವರಣಗೊಂಡಿದೆ ಹಾಗೂ ಈ ಅಸ್ಮಿತೆಯನ್ನು ಗ್ರಹಿಸುವ ಸ್ವರೂಪಗಳು ಯಾವ ಬಗೆಯಲ್ಲಿ ಇವರ ಸಾಹಿತ್ಯ ಮತ್ತು ವೈಚಾರಿಕ ನಿರೂಪಣೆಗಳಲ್ಲಿ ನೆಲೆಗೊಂಡಿವೆ ಎನ್ನುವುದನ್ನು ನೋಡುವ ಜರೂರಿದೆ. ಮುಖ್ಯವಾಗಿ ಕಾವ್ಯ, ನಾಟಕ ಮತ್ತು ಕಥನ ಎಂಬೀ ಸೃಜನಶೀಲ ಅಭಿವ್ಯಕ್ತಿಗಳು ರೂಪಕ, ಪ್ರತಿಮೆ, ಸಂಕೇತಗಳ ಮುಖೇನ ಕನ್ನಡತನವನ್ನು ನಿರೂಪಿಸಿರುವ ಬಗೆಯನ್ನು ಇಲ್ಲಿ ಕಾಣುತ್ತೇವೆ. ಹಾಗೂ ವಿಮರ್ಶೆ ಮತ್ತು ವೈಚಾರಿಕ ಬರಹಗಳಲ್ಲಿ ಈ ಕನ್ನಡತನದ ವಿನ್ಯಾಸವು ತಿಳಿವಿನ ಬಗೆಗಳಾಗಿ (ಎಪಿಸ್ಟಮಿಕ್ ಮಾಡಲ್ಸ್) ಮೈದಾಳಿವೆ.
ದಿಟ ಸಾಹಿತ್ಯಕ ಮತ್ತು ವೈಚಾರಿಕ ಅಭಿವ್ಯಕ್ತಿಗಳ ಸ್ವರೂಪ ಬದಲಾಗುವುದರಿಂದ ಅವುಗಳ ಮೂಲಕ ಪ್ರತಿಪಾದಿಸುವ ತಿಳಿವಿನ ಸ್ವರೂಪವೂ ಬದಲಾಗುತ್ತದೆ. ಹಾಗಾಗಿಯೇ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ಮೈದಾಳುವ ಕನ್ನಡತನ ಕುರಿತಾದ ನಿರೂಪಣೆಗಳು ಬಹುತೇಕವಾಗಿ ರೂಪಾತ್ಮಕವಾಗಿವೆ. ಆದರೆ ವೈಚಾರಿಕ ಬರಹಗಳಲ್ಲಿ ಏರ್ಪಡುವ ಈ ಕನ್ನಡತನದ ವಿನ್ಯಾಸ ಜ್ಞಾನ ಮೀಮಾಂಸೆಯ ಆಯಾಮವನ್ನು ಪಡೆದುಕೊಳ್ಳುತ್ತವೆ ಎಂಬುದು ಗಮನಾರ್ಹ.
ಆದರೆ ಈ ಎರಡೂ ಸನ್ನಿವೇಶದಲ್ಲಿಯೂ ಕುವೆಂಪು ಪ್ರತಿಮಾ ವಿಧಾನವನ್ನೇ ಅನುಸರಿಸುತ್ತಾರೆ ಎಂಬುದು ವಿಶೇಷ. ಲೋಕೋಪಯೋಗಿ ಮತ್ತು ಭಾವೋಪಯೋಗಿ ನೆಲೆಗಳನ್ನು ಅತ್ಯಂತ ಖಚಿತವಾಗಿ ನಿರ್ಧರಿಸುವ ಆಯಾಮಗಳು ಇವರ ಸಾಹಿತ್ಯಕ ಮತ್ತು ವೈಚಾರಿಕ ಬರಹಗಳಲ್ಲಿ ಯಥೇಚ್ಛವಾಗಿ ನೆಲೆಗೊಂಡಿವೆ.
ಭಾಷೆ ಮತ್ತು ಭಾಷಿಕ ಪರಿಕರಗಳನ್ನು ಕೇವಲ ಸಾಂಕೇತಿಕ ಪ್ರತಿನಿಧೀಕರಣದ ಮಾದರಿಯನ್ನಾಗಿ ಮಾತ್ರ ಉಪಯೋಗಿಸದೇ, ಅದೊಂದು ಜ್ಞಾನಶಿಸ್ತು, ಸಂವೇದನೆಯ ವಿನ್ಯಾಸ ಹಾಗೂ ಅನುಭವಗಳ ಮಾದರಿಗಳನ್ನು ಗುರುತಿಸುವ ಬಹುಮುಖ್ಯ ನೆಲೆಯೆನ್ನುವುದನ್ನು ಕುವೆಂಪು ಅತ್ಯಂತ ಪರಿಣಾಮಕಾರಿಯಾಗಿ ಗುರುತಿಸಿದ್ದಾರೆ. ಆದ್ದರಿಂದ ಭಾಷೆ ಬಗೆಗಿನ ಗ್ರಹಿಕೆಗಳು ಇವರ ಒಟ್ಟು ಅಭಿವ್ಯಕ್ತಿಯಲ್ಲಿ ಪ್ರಮುಖವಾಗುತ್ತವೆ.
ಇವುಗಳ ಮೂಲಕವೇ ಬದುಕಿನ ವಿವಿಧ ಲಯಗಳನ್ನು ಕಂಡುಕೊಳ್ಳಲೂ ಸಾಧ್ಯ ಅನ್ನುವುದನ್ನು ಕುವೆಂಪು ತೋರಿಸಿಕೊಟ್ಟಿದ್ದಾರೆ. ಕಾಲ-ದೇಶಗಳ ಹಂಗು ಮೀರಿದ ಪ್ರಸ್ತುತತೆ ನೆಲೆಗೊಳ್ಳುವುದು ಇಂತಹ ಭಾಷಿಕ ಕ್ರಾಂತಿಯಿಂದಲೇ ಎಂಬ ವಾಸ್ತವವನ್ನು ನಾವು ಮನಗಾಣುವುದಕ್ಕೆ ಸಾಕ್ಷಿಗಳು ನಮಗೆ ಕುವೆಂಪು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಲಭ್ಯವಾಗುತ್ತವೆ. ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !’ ಎಂಬೀ ಕವನದ ನಿಲುವು ಯಾವ ಕಾಲ ದೇಶಕ್ಕೂ ಸೀಮಿತಗೊಳ್ಳದೇ ಮನುಜಮತ ಮತ್ತು ವಿಶ್ವಪಥದ ಚಹರೆಗಳಾಗಿ ನೆಲೆಗೊಂಡಿವೆ.
ಸಾಮಾಜಿಕ ಭಾಷಾಶಾಸ್ತ್ರೀಯ ವಿವೇಚನೆಗಳ ಮುಖೇನ ಭಾಷೆ ಮತ್ತು ಸಮಾಜಗಳ ಒಟ್ಟು ಸಂಬಂಧವನ್ನು ವಿಶ್ಲೇಷಿಸಿ ನೋಡಿದರೆ ಕುವೆಂಪು ಅವರ ಭಾಷಿಕ ನಿಲುವುಗಳ ಆಳದಲ್ಲಿ ಹುದುಗಿರುವ ವೈಚಾರಿಕ ಸ್ಥೈರ್ಯ ಹಾಗೂ ನೈತಿಕತೆಯ ಹೊಣೆಗಾರಿಕೆ ನಮಗೆ ಮನನವಾಗುತ್ತದೆ. ಮತಧರ್ಮದ ಪರಿಭಾಷೆ ಒದುಗಿಸುವ ಚಿಂತನಾ ಕ್ರಮ ಬೇರೇನೆ ಸಮಾಜಶಾಸ್ತ್ರೀಯ ವ್ಯಾಖ್ಯಾನಗಳಿಗೆ ಅನುವು ಮಾಡಿಕೊಡುವುದನ್ನು ಕುವೆಂಪು ಅವರು ಮನಗಂಡಿದ್ದರು.
ತತ್ವದರ್ಶನ, ಸಾಂಸ್ಕೃತಿಕ ಮುಖಾಮುಖಿಯ ನಿಲುವುಗಳು ನಮಗೆ ಅರ್ಥವಾಗಲು ಹಾಗೂ ಸಾಂಸ್ಕೃತಿಕ ಅನುಸಂಧಾನದ ಸ್ಪಷ್ಟ ಮಾನದಂಡಗಳು ನಮಗೆ ಲಭ್ಯವಾಗುವುದು ಭಾಷಿಕ ಕ್ರಾಂತಿಯಿಂದ ಎನ್ನುವ ವಾಸ್ತವ ಕುವೆಂಪು ಅವರಿಗೆ ಖಚಿತವಾಗಿತ್ತು.
ಹೊಸ ಪರಿಭಾಷೆ ಮತ್ತು ಹೊಸ ವಿಚಾರಗಳನ್ನು ಏಕತ್ರಗೊಳಿಸುವ ಬಹುದೊಡ್ಡ ವೈಚಾರಿಕ ಕ್ರಾಂತಿಗೆ ಕುವೆಂಪು ಅವರು ಕಾರಣವಾದರು. ಈಗಾಗಲೇ ನೆಲೆನಿಂತಿದ್ದ ಸಮಾಜಶಾಸ್ತ್ರದ ಪರಿಭಾಷೆಯ ಒಳಹುನ್ನಾರವನ್ನು ಅರ್ಥೈಸಿಕೊಳ್ಳಲು ಭಾಷಾಶಾಸ್ತ್ರ ಸಹಾಯ ಮಾಡಬಲ್ಲದು ದಿಟ. ಆದರೆ ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನಿರೂಪಣೆಗಳು ಲಭ್ಯವಾಗದೇ ಈ ಒಳಹುನ್ನಾರವನ್ನು ಅರಿಯಲು ಭಾಷಾಶಾಸ್ತ್ರಕ್ಕೆ ಸಾಧ್ಯವೇ ಇಲ್ಲ.
ಆದರೆ ಕುವೆಂಪು ಅವರು ಏಕೆಕಾಲಕ್ಕೆ ಈ ಪರಿಭಾಷೆಗಳ ಚಹರೆಗಳನ್ನು ಬದಲಿಸುವ ಮತ್ತು ಒಳಹುನ್ನಾರಗಳನ್ನು ಖಚಿತವಾಗಿ ತಮ್ಮ ಅಭಿವ್ಯಕ್ತಿಗಳ ಮೂಲಕ ಮಂಡಿಸಿರುವುದನ್ನು ಯಾರಾದರೂ ಗುರುತಿಸಬಹುದು. ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಮೇಲ್ವರ್ಗಗಳು, ಕೆಳವರ್ಗಗಳು ರೂಢಿಗತವಾಗಿ ಬಳಸುತ್ತಿದ್ದ ಪರಿಭಾಷೆಗಳು ಯಾವ ರೀತಿಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಯಜಮಾನಿಕೆಯನ್ನು ನಿಭಾಯಿಸುತ್ತಿದ್ದವು ಎನ್ನುವುದನ್ನು ಸೂಚಿಸುವ ಸೂಚಕಗಳಾಗಿ ಒದಗಿ ಬಂದಿರುವುದನ್ನು ಪತ್ತೆಹಚ್ಚುವ ನಿಶಿತಮತಿ ಕುವೆಂಪು ಅವರಲ್ಲಿ ಎದ್ದು ಕಾಣುತ್ತದೆ.
ಭಾಷೆ ಒಂದು ಸಾಮಾಜಿಕ ವಾಸ್ತವವನ್ನು (ಸೋಶಿಯಲ್ ಫ್ಯಾಕ್ಟ್) ಬಿಂಬಿಸುವುದಷ್ಟೆಯಲ್ಲ, ಸಮೂಹಗಳ ಬದುಕು ಹೇಗೆ ಇಂತಹ ಸ್ಥಿತಿಯೊಂದಕ್ಕೆ ಒಗ್ಗಿಕೊಂಡಿವೆ ಎನ್ನುವ ಕಟುಸತ್ಯವನ್ನೂ ಅನಾವರಣಗೊಳಿಸುತ್ತವೆ. ಆದ್ದರಿಂದ ಹೊಸ ಸಾಮಾಜಿಕತೆಯನ್ನು ನೆಲೆಗೊಳಿಸಲು ಹೊಸ ಪರಿಭಾಷೆಗಳ ಅಗತ್ಯವಿದೆ ಎನ್ನುವುದನ್ನು ಕುವೆಂಪು ಅವರು ಬಲವಾಗಿ ನಂಬಿದ್ದರು.
ವೈಜ್ಞಾನಿಕ ದೃಷ್ಟಿ, ವಿಶ್ವಮಾನವತೆ, ಸಾಂಸ್ಕೃತಿಕ ರಾಜಕಾರಣ, ಕಾವ್ಯ, ಕಥನ ಹಾಗೂ ನಾಟಕಗಳು ಇತ್ಯಾದಿ ಸಂಕಥನಗಳು ಕನ್ನಡತನವನ್ನು ನಿರ್ವಚಿಸಲು ಕುವೆಂಪು ಅವರಿಗೆ ಅತ್ಯಂತ ಮುಖ್ಯ ಅಭಿವ್ಯಕ್ತಿ ಮಾದರಿಗಳಾಗುತ್ತವೆ. ಎಲ್ಲವನ್ನೂ ಕನ್ನಡತನ ಮತ್ತು ಕನ್ನಡತನದ ಅಸ್ಮಿತೆಯ ಸ್ವರೂಪವನ್ನು ನಿರ್ವಚಿಸುವ ಬಗೆಯನ್ನಾಗಿಯೇ ಕುವೆಂಪು ಅವರು ನಿರೂಪಿಸಿದ್ದಾರೆ. ಆದ್ದರಿಂದ ಪ್ರತಿಮಾ ವಿಧಾನವನ್ನು ಪರಿಣಾಮಕಾರಿಯಾಗಿ ತಮ್ಮ ಒಟ್ಟು ಅಭಿವ್ಯಕ್ತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಯಿತು.
ಇಲ್ಲವಾದರೆ ಅವರ ಕಾದಂಬರಿಗಳು ಮತ್ತು ಕಾವ್ಯ ವಿಶೇಷವಾಗಿ ರಾಮಾಯಣ ದರ್ಶನಂ ಮಹಾಕಾವ್ಯವು ಇಷ್ಟೊಂದು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳಲು ಆಗುತ್ತಿರಲಿಲ್ಲ. ತಮ್ಮ ವೈಚಾರಿಕ ಬರಹಗಳು, ವಿಮರ್ಶೆ, ನಾಟಕಗಳು, ಕಥನಗಳು, ಕಾವ್ಯ ಹಾಗೂ ಕವಿತೆಗಳನ್ನು ಅತ್ಯಂತ ವಿಶಿಷ್ಟ ಬಗೆಗಳನ್ನಾಗಿಸುವ ಇರಾದೆಯನ್ನು ಕುವೆಂಪು ಅವರು ಹೊಂದಿರುವುದನ್ನು ಈ ಎಲ್ಲ ವಿನ್ಯಾಸಗಳಲ್ಲಿ ನೋಡುತ್ತೇವೆ.
ಈ ಎಲ್ಲ ಪ್ರಕಾರಗಳ ವೈಶಿಷ್ಟ್ಯತೆಯನ್ನು ಕಂಡರಿಸಲು ಇವರು ಭಾಷೆಯನ್ನೇ ಪ್ರಧಾನ ಮಾನದಂಡವನ್ನಾಗಿ ಬಳಸಿಕೊಂಡಿದ್ದಾರೆ. ಈ ಪ್ರಕ್ರಿಯೆಯ ಮೂಲಕವೇ ಕನ್ನಡತನದ ಚಹರೆಗಳನ್ನೂ ಪತ್ತೆಹಚ್ಚುವುದಕ್ಕೂ ಇವರಿಗೆ ಸಾಧ್ಯವಾಗಿದೆ. ಸಾಮಾಜಿಕತೆ ಮತ್ತು ಕನ್ನಡತನದ ನಡುವಣ ನಂಟಸ್ತಿಕೆಯನ್ನು ರೂಪಿಸುವ ವಿಧಾನವೇ ಅತ್ಯಂತ ಮಾರ್ಮಿಕವಾಗಿದೆ.
ಏಕೆಂದರೆ ಕನ್ನಡದ ಕಾವ್ಯದೊಳಗೆ ಲೋಕದರ್ಶನದ ಮಾದರಿಗಳನ್ನು ಒಡಮೂಡಿಸಲು ಹಾಗೂ ವಿಶ್ವಮಾನವ ಪರಿಕಲ್ಪನೆಯನ್ನು ನೆಲೆಗೊಳಿಸಲು ಹೇಗೆ ಸಾಧ್ಯವಾಯಿತು ಅನ್ನುವುದನ್ನು ಶೋಧಿಸುವುದಕ್ಕೆ ಸಾಕಷ್ಟು ಅವಕಾಶಗಳನ್ನು ಕುವೆಂಪು ಅವರು ಭಾಷಿಕ ಚಲನೆಗಳ ಮೂಲಕವೇ ಅಣಿಗೊಳಿಸಿದ್ದಾರೆ.
ಯಾವುದನ್ನೂ ಇವರು ಕೇವಲ ಒಂದು ನೋಟವನ್ನಾಗಿ ಮಾತ್ರ ಬಿಂಬಿಸದೇ ಅದೊಂದು ಲೋಕಜ್ಞಾನದ ಗ್ರಹಿಕೆಯನ್ನಾಗಿ ಮಂಡಿಸುವ ತವಕವನ್ನು ಹೊಂದಿರುವುದು ನಮಗೆ ಮನವರಿಕೆಯಾಗುತ್ತದೆ. ನೇಗಿಲಯೋಗಿ, ದೇವರು ರುಜು ಮಾಡಿದನು, ಹೀರೆ ಹೂ, ಗೊಬ್ಬರ, ಕಲ್ಕಿ, ಸ್ವರ್ಗ ಬಾಗಿಲು ಯಕ್ಷಪ್ರಶ್ನೆ, ದೇವರು ಮತ್ತು ಪುಜಾರಿ ಇತ್ಯಾದಿ ಕವನಗಳನ್ನು ಪರಿಶೀಲಿಸಿ ನೋಡಬಹುದು.
ಜಲಗಾರ, ಸ್ಮಶಾನ ಕುರುಕ್ಷೇತ್ರಂ, ಶೂದ್ರ ತಪಸ್ವಿ, ರಾಮಾಯಣ ದರ್ಶನಂ ಹಾಗೂ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಗಳು ಪಠ್ಯಗಳನ್ನೂ ಈ ನೆಲೆಯಲ್ಲಿ ನೋಡುವುದು ಸೂಕ್ತ. ಈ ಎಲ್ಲ ಪಠ್ಯಗಳ ಇಡೀ ಗ್ರಹಿಕೆಯಲ್ಲಿ ಎದ್ದು ಕಾಣುವ ಬಗೆಯೇ ಕನ್ನಡತನದ ಚಹರೆಯಾಗಿದೆ.
ಈ ಚಹರೆ ಏಕಶಿಲಾಘನಾಕೃತಿಯಲ್ಲ ಅದು ಬಹುಳತೆಯ ವಿನ್ಯಾಸ ಎಂಬ ಚಿಂತನೆಯನ್ನೂ ಇಲ್ಲಿ ನೆಲೆಗೊಳಿಸಲಾಗಿದೆ. ನುಡಿಯೊಂದನ್ನು ಏಕಕಾಲಕ್ಕೆ ಸ್ಥಳೀಯತೆ ಮತ್ತು ವಿಶ್ವಾತ್ಮಕತೆಯ ಸಮಾನ ವಿದ್ಯಮಾನವನ್ನಾಗಿ ಬಿಂಬಿಸುವಲ್ಲಿ ಕುವೆಂಪು ಮತ್ತು ಬೇಂದ್ರೆಯವರು ಅತ್ಯಂತ ಪ್ರಮುಖ ಕವಿಗಳಾಗಿದ್ದಾರೆ.
ಕನ್ನಡತನ ಎನ್ನುವುದು ಕೇವಲ ಭಾಷಿಕ ಗುರುತಲ್ಲ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಗ್ರಹಿಕೆಗಳ ಮಾದರಿ. ಈ ಗ್ರಹಿಕಾ ಮಾದರಿ ಏಕರೂಪಿಯಾಗಿರದೇ, ಬಹುಳತೆಯಿಂದ ಕೂಡಿರುವ ವಿದ್ಯಮಾನ ಆಗಿರಬೇಕಾಗುತ್ತದೆ. ಈ ಬಹುಳತೆಯ ಚೌಕಟ್ಟಿನೊಳಗೆ ಕನ್ನಡ ನುಡಿಯ ಸಾಮಾಜಿಕ ವಿನ್ಯಾಸವನ್ನು ಅರಿಯುವುದಕ್ಕೆ ಬೇಕಾಗುವ ದಾರಿಗಳನ್ನು ಕುವೆಂಪು ಅವರು ಕಂಡುಕೊಂಡಿರುವುದನ್ನು ಅವರ ಒಟ್ಟು ಬರಹಗಳಲ್ಲಿ ನೋಡುತ್ತೇವೆ.
ನುಡಿ ಬಗೆಗಿನ ಸವಾಲುಗಳನ್ನು ಕುವೆಂಪು ಅವರು ಕೈಗೆತ್ತಿಕೊಂಡಿರುವ ಬಗೆಯೇ ಅತ್ಯಂತ ವಿಶಿಷ್ಟವಾಗಿರುವಂತಹದು. ನುಡಿ ಕುರಿತ ಇವರ ಈ ದಾರ್ಶನಿಕತೆ ಹೊಸ ಸಾಮಾಜಿಕ ವಿನ್ಯಾಸಕ್ಕೆ (ನ್ಯೂ ಸೋಶಿಯಲ್ ಆರ್ಡರ್) ತುಡಿಯುವ ಬಗೆಯಾಗಿದೆ. ಈ ವಿನ್ಯಾಸಗಳು ಸಮಾನತೆ, ಸಹಬಾಳ್ವೆ, ಸಹೋದರತೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ನ್ಯಾಯದ ನಿಲುವುಗಳನ್ನೂ ಒಳಗೊಂಡಿರುತ್ತವೆ. ತಳಸಮುದಾಯ ಮತ್ತು ಹೆಣ್ಣು ಮಕ್ಕಳ ಸಾಮಾಜಿಕ ವಿಮೋಚನೆಯ ಹೊಸ ದಾರಿಗಳನ್ನು ಕನ್ನಡತನದ ಹೊಸ ವ್ಯಾಖ್ಯಾಗಳ ಮೂಲಕ ಅಣಿಗೊಳಿಸುವ ದೊಡ್ಡ ಸಾಹಸವನ್ನು ಕುವೆಂಪು ಅವರು ಮಾಡಿದ್ದಾರೆ.
ಇವರಿಗೆ ಕನ್ನಡತನ ಎನ್ನುವುದು ಸಾಮಾಜಿಕ ಒಳಗೊಳ್ಳುವಿಕೆಯ ವಿನ್ಯಾಸವೂ ಆಗಿರುತ್ತದೆ. ಸಮಾಜವೆಂದರೆ ಅದೊಂದು ಬಹುಳತೆಯ ನೋಟಕ್ರಮ ಮತ್ತು ವಿಭಿನ್ನ ಲೋಕದೃಷ್ಟಿಗಳ ಆಗರ ಎಂಬುದನ್ನು ಕುವೆಂಪು ಮನಗಂಡಿದ್ದರು ಹಾಗೂ ಅದನ್ನು ತಮ್ಮ ಸಾಹಿತ್ಯಕ ನಿರೂಪಣೆಗಳ ಮೂಲಕವೂ ಸಾಧಿಸಿ ತೋರಿಸಿದರು. ಈ ಇಡೀ ಪ್ರಕ್ರಿಯೆಯಲ್ಲಿ ಅನುಭವದ ನೆಲೆ ಮತ್ತು ಭಾಷೆಗಳ ನಡುವಣ ಅನುಸಂಧಾನದ ಮಾದರಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಹಾಗಾಗಿಯೇ ಗುತ್ತಿ, ತಿಮ್ಮಿ, ಪೀಂಚಲು, ಜಲಗಾರ, ಶಂಭೂಕ, ಏಕಲವ್ಯ ಇವರ ವ್ಯಕ್ತಿತ್ವದ ಮಾದರಿಗಳು ಎಲ್ಲ ಕಾಲದ ಕನ್ನಡತನದ ಸೂಚಕಗಳಾಗಿ ರೂಪುಗೊಂಡಿವೆ.
ಕನ್ನಡತನದ ಅಭಿವ್ಯಕ್ತಿಯಾಗಿ ಭಾಷೆಯನ್ನು ರೂಪಿಸುವುದೆಂದರೆ ಅದು ಕೇವಲ ಭಾಷಿಕ ರಾಜಕಾರಣದ ನಿಲುವು ಮಾತ್ರವಾಗದೆ, ಸಮೂಹಗಳ ಇಡೀ ಬದುಕಿನ ಜ್ಞಾನಮೀಮಾಂಸೆಯೂ ಮತ್ತು ಚಹರೆಯೂ ಆಗಿ ನಿರ್ಮಾಣಗೊಂಡಿರುತ್ತದೆ. ಅಂದರೆ ಭಾಷೆಯೊಂದು ಕೇವಲ ರಾಜಕೀಯ-ಸಾಮಾಜಿಕ ಪ್ರಜ್ಞೆ ಮಾತ್ರವಾಗದೇ, ಸಮೂಹಗಳ ಬದುಕಿನ ಪ್ರಜ್ಞೆ ಮತ್ತು ಅಸ್ತಿತ್ವದ ಮೂಲನೆಲೆಯಾಗುವ ಪ್ರಕ್ರಿಯೆಯು ಏರ್ಪಡುತ್ತದೆ. ಪರಿಣಾಮವಾಗಿ ಭಾಷೆ ಎನ್ನುವುದು ವಿಮೋಚನೆಯ ನೆಲೆಯಾಗಿ ರೂಪುಗೊಳ್ಳುತ್ತದೆ.
ಕುವೆಂಪು ಅಂಥವರ ಸಾಹಿತ್ಯ ಅಭಿವ್ಯಕ್ತಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಮೈದಾಳಿದೆ. ಹಾಗಾಗಿ ಬ್ರಾಹ್ಮಣ್ಯ ಮತ್ತು ವೈದಿಕ ಆಲೋಚನಾ ಕ್ರಮವನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಭಾಷಿಕ ವಿನ್ಯಾಸಗಳನ್ನು, ಸಬಾಲ್ಟ್ರನ್ ಸಮೂಹಗಳ ಅಭಿವ್ಯಕ್ತಿಗೆ ಪೂರಕವಾಗಿ ಮರುವಿನ್ಯಾಸಗೊಳಿಸುವ ಒಂದು ದೊಡ್ಡ ಭಾಷಿಕ ತಿರುವು ಕುವೆಂಪು ಅವರ ಸಾಹಿತ್ಯ ಹಾಗೂ ವೈಚಾರಿಕ ಅಭಿವ್ಯಕ್ತಿಯಲ್ಲಿ ಕಾಣುತ್ತೇವೆ.
ಒಂದು ನಿರ್ದಿಷ್ಟ ಸಂಸ್ಕೃತಿ ಇಲ್ಲವೇ ಸಾಮಾಜಿಕ ಅಸ್ಮಿತೆಯ ಸಾಂಕೇತಿಕತೆಯನ್ನು ಪಡೆದುಕೊಂಡಿದ್ದ ಭಾಷೆಯನ್ನು ನಿರಾಕರಿಸುವುದೇ ಒಂದು ಸಾಹಿತ್ಯಕ ಕ್ರಾಂತಿಗೆ ಕಾರಣವಾಗುತ್ತದೆ ಎನ್ನುವುದನ್ನು ಇವರು ನಿರೂಪಿಸಿದ್ದಾರೆ. ಶೂದ್ರ, ದಲಿತ ಇಲ್ಲವೇ ತಳಸಮೂಹಗಳ ಸಾಹಿತ್ಯ ನಿರೂಪಣೆಗಳಿಗೆ ಒಗ್ಗೂವ ಪರಿಭಾಷೆ, ರೂಪಕ, ಪ್ರತಿಮೆಗಳನ್ನು ಹೊಸದಾಗಿ ಸೃಷ್ಟಿಸುವ ಪ್ರತಿಮಾ ವಿಧಾನದ ಸ್ಪಷ್ಟ ಚಹರೆಗಳು ಕುವೆಂಪು ಅವರ ಒಟ್ಟು ಸಾಹಿತ್ಯದಲ್ಲಿ ಮೇಳೈಸಿರುವುದನ್ನು ಯಾರಾದರೂ ಗುರುತಿಸಬಹುದು.
ಅಂದರೆ ಕಾವ್ಯ (ಲಯ), ಕಥೆ-ಕಾದಂಬರಿ (ಕಥನ) ಹಾಗೂ ನಾಟಕ (ಸಂಭಾಷಣೆಗೆ) ಪ್ರಕಾರಗಳಿಗೆ ಹೊಸದಾದ ವೈಚಾರಿಕ ಮೊನಚು ಮತ್ತು ಕಾವ್ಯಮೀಮಾಂಸೆ-ಸೌಂಧರ್ಯ ಮೀಮಾಂಸೆಯನ್ನು ನೆಲೆಗೊಳಿಸುವ ಇರಾದೆಯಿಂದ ಕುವೆಂಪು ಹೊಸ ನುಡಿಗಟ್ಟನ್ನು ಕಟ್ಟಿಕೊಂಡರು. ಇಡೀ ಈ ವಿನ್ಯಾಸಕ್ಕೆ ಒಂದು ತಾತ್ವಿಕ ಪಾತಳಿಯಾಗಿ ಭಾಷೆ ಕುವೆಂಪು ಅವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕೆಲಸ ಮಾಡಿದೆ.
ಕುವೆಂಪು ಅವರಿಗೆ ಅಭಿವ್ಯಕ್ತಿ ಎನ್ನುವುದು ಕೇವಲ ರಸಾನುಭವದ ವಿದ್ಯಮಾನವಾಗದೇ, ಕ್ರಿಯೆ, ತತ್ವ, ಪ್ರತಿಭಟನೆಯ ಕುರುಹುಗಳನ್ನು ಸೂಚಿಸುವುದೇ ಆಗಿರುತ್ತದೆ. ಮುಂದೆ ದಲಿತ ಬಂಡಾಯದ ಸನ್ನಿವೇಶದಲ್ಲಿ ಚರ್ಚಿಸಿದಂತಹ ಲಿಟರೇಚರ್ ಆಫ್ ಆಕ್ಸನ್ ಹಾಗೂ ಲಿಟರೇಚರ್ ಆಫ್ ಪ್ರೊಟೆಸ್ಟ್ ಎಂಬಂತಹ ಅಭಿವ್ಯಕ್ತಿಯ ಮಾದರಿಗಳು ಅದಾಗಲೇ ಕುವೆಂಪು ಅವರಲ್ಲಿ ಅವತರಿಸಿಬಿಟ್ಟಿದ್ದವು.
ಹಾಗಾಗಿಯೇ ಕುವೆಂಪು ಅವರಿಗೆ ಅಭಿವ್ಯಕ್ತಿ ಎಂಬುದು ಮೂಲಭೂತವಾಗಿ ಸಾಮಾಜಿ-ಸಾಂಸ್ಕೃತಿಕ ತಾರತಮ್ಯಗಳನ್ನೂ ಹಾಗೂ ಅಧಿಕಾರ ಸಂಬಂಧದ ವಿನ್ಯಾಸಗಳನ್ನು ಪ್ರಕಟಿಸುವ ಕುರುಹುವಾಗಿ ಪರಿಣಮಿಸಿತ್ತು. ಮಾತೆಂಬುದು ಜೋತೀರ್ಲಿಂಗ ಎನ್ನುವ ಈ ಹೇಳಿಕೆ ಎನ್ಲೈಟನ್ಮೆಂಟಿನ ರೂಪಕವಾಗಿದೆ (ಬೆಳಕು). ಈ ಗ್ರಹಿಕೆ ಕುವೆಂಪು ಅವರಲ್ಲಿ ಅತ್ಯಂತ ನಿಚ್ಚಳವಾಗಿಯೇ ಒಡಮೂಡಿದೆ.
ಮಾತೆಂಬುದೇ ವಿಮೋಚನೆಯ ಹಾದಿ ಎಂಬುದನ್ನು ಬಲವಾಗಿ ನಂಬಿದ್ದ ಕುವೆಂಪು ಅವರು ಭಾಷೆಯ ಗ್ರಹಿಕೆ (ಅಂತಸ್ಥನೆಲೆ) ಮತ್ತು ಅಭಿವ್ಯಕ್ತಿ (ಅಸ್ಮಿತೆಯ ನೆಲೆ) ಎಂಬೀ ಎರಡೂ ಆಯಾಮಗಳನ್ನು ಬಹಳ ಖಚಿತವಾಗಿ ತಮ್ಮ ಸಾಹಿತ್ಯದಲ್ಲಿ ನೆಲೆಗೊಳಿಸಿದ್ದರು. ಇವರ ಅಭಿವ್ಯಕ್ತಿಯ ಮಾದರಿಗಳು ಪ್ರಕಟಗೊಂಡಿರುವುದು ಪ್ರತಿಮೆ, ರೂಪಕ ಹಾಗೂ ಸಾಂಕೇತಿಕವಾದದ್ದು ಎಂದು ಮೇಲ್ನೋಟದಲ್ಲಿ ಗುರುತಿಸಿದರೂ, ಈ ವಿನ್ಯಾಸವು ಈಗಾಗಲೇ ಹೇಳಿದಂತೆ ಪ್ರತಿಮಾ ವಿಧಾನದ ಮಾದರಿಯಾಗಿದೆ.
ಈ ಮಾದರಿಯನ್ನು ಮೆಟಾನಮಿಕ್-ಮೆಟಾಫರಿಕ್ (ರೋಮನ್ ಯಾಕೋಬ್ಸನ್ ಅವರ ಪರಿಕಲ್ಪನೆಗಳು) ಮಾದರಿಗಳ ಸಹಯೋಗದಿಂದ ನೆಲೆಗೊಂಡ ದೃಷ್ಟಿಕೋನವನ್ನಾಗಿ ಇವರ ಅಭಿವ್ಯಕ್ತಿಯಲ್ಲಿ ನೋಡಬಹುದು. ಈ ಬಗೆಯ ಸಂಕಥನವನ್ನು ಕಟ್ಟುವ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾದದ್ದು ಎಂಬುದು ಇಲ್ಲಿ ಗೋಚರಿಸುತ್ತದೆ.
“ಕಥೆ ನಿನ್ನದಾಡೊಡಂ..ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ ಕೃತಿಯೆತ್ತಿ” ಹಾಗೂ “ಇತಿಹಾಸಮಲ್ತು, ಕಥೆಯಲ್ತು ಕಥೆ ತಾಂ ನಿಮಿತ್ತಮಾತ್ರಂ” ಎಂಬೀ ಕುವೆಂಪುವರ ಹೇಳಿಕೆಗಳು ಅವರ ಸಾಹಿತ್ಯದ ದಾರ್ಶನಿಕತೆಯನ್ನು ವಿವರಿಸುತ್ತವೆ. ಈ ದಾರ್ಶನಿಕತೆಯ ಆಕೃತಿಯನ್ನು ನಿರ್ಮಿಸಲು ಹೊಸ ಭಾಷೆ ಮತ್ತು ಪರಿಭಾಷೆಯನ್ನು ಕುವೆಂಪು ಅವರು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿ ಬಳಸಿಕೊಂಡರು.
ಕುವೆಂಪು ಅವರೇ ಹೇಳಿಕೊಂಡಂತೆ, ದರ್ಶನ ಮುಖ್ಯವೇ ಹೊರತು ಕತೆಯಲ್ಲ. ಕಥೆ, ಇತಿಹಾಸ, ಬಹಿರ್ಘಟನೆ ಇವೆಲ್ಲ ಜಡವಾದರೆ ದರ್ಶನವೊಂದೇ ಚೈತನ್ಯ. ಜಡವನ್ನು ಚೈತನ್ಯವನ್ನಾಗಿ ಮಾರ್ಪಡಿಸುವ ಈ ಹಂಬಲದಲ್ಲಿ ಭಾಷೆಯನ್ನು ಒಂದು ಪ್ರಮುಖ ಅಸ್ತ್ರವನ್ನಾಗಿಯೇ ಇವರು ಬಳಸಿಕೊಂಡರು ಎನ್ನುವುದು ನನ್ನ ಅಭಿಮತ.
ಅಂದರೆ ಕುವೆಂಪು ಅವರ ಕ್ರಿಟಿಕಲ್ ಡಿಸ್ಕೋರ್ಸಗಳು ಅಂಚಿನ ವ್ಯಕ್ತಿ/ಸಮೂಹಗಳ ಅಸ್ತಿತ್ವ, ಅಸ್ಮಿತೆ, ಸಬಲೀಕರಣವನ್ನು ಕುರಿತು ನಿಗಾವಹಿಸುತ್ತವೆ. ವಸಾಹತುಶಾಹಿ ಹಾಗೂ ವೈದಿಕಶಾಹಿ ಪ್ರಭಾವಕ್ಕೆ ಒಳಗಾಗಿದ್ದ ಪ್ರತಿಯೊಂದು ಸಮುದಾಯವು ಆಯಾ ಪ್ರಭಾವದಿಂದ ಹೊರಬರದೇ, ಅದು ನೆಲೆಗೊಳಿಸಿರುವ ಅಧಿಕಾರ ಸಂರಚನೆಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ ವಸಾಹತುಶಾಹಿ/ವೈದಿಕಶಾಹಿಗೆ ಒಳಗಾಗಿದ್ದ ಸಮೂಹಗಳು ಕಿಳರಿಮೆ ಹಾಗೂ ಪರಾವಲಂಬನೆಯಿಂದ ಬಳಲುತ್ತಿರುತ್ತವೆ.
ಹಾಗಾಗಿಯೇ ವಸಾಹತುಶಾಹಿ ಸಂದರ್ಭದಲ್ಲಿ ನೆಲೆಗೊಂಡಿದ್ದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ರಚನೆಗಳು ಇವತ್ತು ವಸಾಹತೋತ್ತರ ಸನ್ನಿವೇಶದಲ್ಲಿಯೂ ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕುಗಳನ್ನು ಸೋಂಕಿಸಿರುತ್ತವೆ. ಏಕೆಂದರೆ, ವಸಾಹತುಶಾಹಿ ಅಥವಾ ವೈದಿಕಶಾಹಿ ವಿರೋಧಿ ರಾಷ್ಟ್ರೀಯತೆಯ ಚಹರೆಗಳು ಕೂಡ ಬೂರ್ಜ್ವಾ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವ ಹಾಗೂ ಆ ಮುಖೇನ ವಸಾಹತುಶಾಹಿ ಸನ್ನಿವೇಶದಲ್ಲಿ ಅತ್ಯಂತ ಪ್ರಬಲವಾಗಿದ್ದ ಸಾಮಾಜಿಕ ರಾಜಕೀಯ ಅಸಮಾನತೆಗಳು ಮರುಹುಟ್ಟು ಪಡೆಯುತ್ತವೆ ಎಂಬುದನ್ನೂ ಇಲ್ಲಿ ಕಾಣಬಹುದು.
ಈ ಒಟ್ಟು ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ಒಂದು ತಾತ್ವಿಕ ಚೌಕಟ್ಟನ್ನೊಂದು ಕುವೆಂಪು ಅವರು ಹೇಗೆ ರೂಪಿಸಿದ್ದಾರೆ ಅನ್ನುವುದನ್ನು ಅವರ ಇಡೀ ಅಭಿವ್ಯಕ್ತಿಯ ಮೂಲಕ ನಾವು ಅರಿಯಬಹುದಾಗಿದೆ. ಬದುಕಿನ ಯಾವ ಆಯಾಮವನ್ನು ಸಾಹಿತ್ಯ ಕೃತಿಯ ಮೂಲಕ ಪ್ರಚುರಪಡಿಸಬೇಕು ಎನ್ನುವ ಸಾಂಸ್ಕೃತಿಕ ರಾಜಕಾರಣದ ಸ್ಪಷ್ಟ ಕಲ್ಪನೆ ಕುವೆಂಪು ಅವರಿಗಿತ್ತು. ಸೃಜನಶೀಲ ಅಭಿವ್ಯಕ್ತಿಯ ಮೂಲಕವೇ ಸಮೂಹಗಳ ಎಲ್ಲ ಕಾಲದ ಬದುಕಿಗೂ ಅವಶ್ಯವಾಗುವ ವೈಚಾರಿಕ ಪಾತಳಿಯನ್ನಾಗಿ ಪರಿವರ್ತಿಸಿದ ದಾರ್ಶನಿಕ ಕುವೆಂಪು.
ಈ ಸಾಹಿತ್ಯಕ ಹಾಗೂ ವೈಚಾರಿಕ ನಿರ್ವಹಣೆಯನ್ನು ಭಾಷಿಕ ನಿಲುವುಗಳಿಂದ ಆಗು ಮಾಡಿರುವುದು ಅತ್ಯಂತ ಮಹತ್ವದ ತಿರುವು ಎಂಬುದನ್ನು ನಾವ್ಯಾರೂ ಅಲ್ಲಗಳೆಯುವಂತಿಲ್ಲ. ಅಂದರೆ ಹೊಸ ಜ್ಞಾನ ಸೃಷ್ಟಿಯೆನ್ನುವುದು ಕೇವಲ ಅನುಭವದ ಕ್ರೂಢೀಕರಣವಲ್ಲ ಬದಲಾಗಿ ಅದನ್ನು ಹೊಸ ನುಡಿಗಟ್ಟಿನ ಮೂಲಕ ಕಟ್ಟಿಕೊಡುವ ಬಗೆಯೇ ಮುಖ್ಯ. ಈ ಕೆಲಸವನ್ನು ಕುವೆಂಪು ಅತ್ಯಂತ ಸಮರ್ಥವಾಗಿ ಮಾಡಿರುತ್ತಾರೆ. ಕನ್ನಡ, ಕರ್ನಾಟಕ, ಕನ್ನಡಿಗರು ಎನ್ನುವ ಸಮೀಕರಣದ ಹಿಂದಿನ ಅತೀ ಸರಳೀಕೃತವಾದ ಗ್ರಹಿಕೆಯನ್ನು ಬುಡಮೇಲು ಮಾಡಿದ್ದಾರೆ.
ಈ ದೃಷ್ಟಿಯಿಂದಲೇ ಭಾಷೆ ಎನ್ನುವುದು ವಿಮೋಚನೆಯ ಅಸ್ತ್ರ ಎಂದು ಹೇಳಲಾಗುತ್ತದೆ. ಭಾಷೆ ಮತ್ತು ಭಾಷಿಕರ ಮನಸ್ಥಿತಿಯನ್ನು ಗೋಡೆಗಳ ಸ್ವರೂಪದಲ್ಲಿ ಕಲ್ಪಸಿಕೊಂಡಿರುವ ಸನ್ನಿವೇಶದಲ್ಲಿಯೇ ಅನಿಕೇತನದ ಕಲ್ಪನೆಯನ್ನು ಇವರು ರೂಪಿಸಿದರು. ಅಷ್ಟೆಯಲ್ಲದೇ ಲೌಕಿಕ ಮತ್ತು ಅಲೌಕಿಕ ಪರಿಕಲ್ಪನೆಗಳ ಮೂಲಕ ಬದುಕಿನ ಸಂವೇದನೆಯಲ್ಲಿ ಅಡಗಿಸಿದ್ದ ಡೈಕಾಟಮಿಯನ್ನು ನಿರಾಕರಿಸಿ, ಅವೆರಡನ್ನೂ ಮೇಳೈಸಿಕೊಂಡಿರುವುದೇ ಬದುಕು ಅನ್ನುವ ತಾತ್ವಿಕತೆಯನ್ನು ಇವರ ಸಾಹಿತ್ಯದಲ್ಲಿ ಕಾಣುತ್ತೇವೆ. ಅದಕ್ಕಾಗಿಯೇ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯಲ್ಲಿ ಹೇಳಿದ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ…” ಎಂಬೀ ಮಾತು ಬದುಕಿನ ದೊಡ್ಡ ದರ್ಶನವನ್ನು ಕೊಡುವ ಕೈವಲ್ಯವಾಗಿದೆ. ಆಲೋಚನೆ ಮತ್ತು ಭಾಷೆಗಳ ನಡುವಣ ಸಂಬಂಧದ ವಿಭಿನ್ನ ವಿನ್ಯಾಸಗಳು ಇಲ್ಲಿ ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ.
ಕಾಲದ ಬಿಕ್ಕಟ್ಟಿಗೆ ಕಾರಣವಾಗಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳು ಕುವೆಂಪು ಅವರ ಸಾಹಿತ್ಯದಲ್ಲಿ ಅಂತರ್ಗತವಾಗಿವೆ ಎನ್ನುವುದನ್ನು ಈ ಭಾಷಿಕ ವಿನ್ಯಾಸಗಳು ಪ್ರತಿಪಾದಿಸುತ್ತವೆ.
ಸಂವೇದನೆ ಮತ್ತು ಅಭಿವ್ಯಕ್ತಿಯ ರೂಪ ಇವುಗಳ ನಡುವೆ ಇರುವ ಭಾಷೆಯ ಪಾತ್ರ ಹೇಗೆ ಬದಲಾಗಬೇಕು ಎನ್ನುವುದನ್ನು ಕುವೆಂಪು ಅವರಲ್ಲಿ ನೋಡಬಹುದು. ಅಂದರೆ ಭಾಷೆಯ ಜವಾಬ್ದಾರಿ, ಸೂಕ್ಷ್ಮತೆ ಹಾಗೂ ಬದ್ಧತೆ ಏನು? ಅದನ್ನು ನಾವು ರೂಪಿಸುವ ಬಗೆ ಯಾವುದು? ಸಮೂಹಗಳ ಬದುಕು ನೆಲೆಗೊಳ್ಳಲು ಭಾಷೆಯ ಪಾತ್ರ ಎಂತಹದು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಕುವೆಂಪು ಅವರಲ್ಲಿ ದೊರೆಯುತ್ತವೆ. ಈ ತಾತ್ವಿಕತೆಯನ್ನು ಅರಿಯಲು ಭಾಷೆ ಮತ್ತು ಸಾಹಿತ್ಯಗಳ ನಡುವಣ ಸಂಬಂಧವನ್ನು ಅರಿಯುವುದು ಅವಶ್ಯ. ಸಾಹಿತ್ಯ ಪಠ್ಯ ಸ್ವಭಾವತ ವಿಶಿಷ್ಟವಾಗಿರುವಂತಹದು.
ಇಲ್ಲಿ ಸಾಹಿತ್ಯ ಮತ್ತು ಭಾಷೆಗಳ ನಡುವಣ ವಿಶಿಷ್ಟ ಸಂಬಂಧ ಎಂತಹದು ಎನ್ನುವುದನ್ನು ಅರಿಯುವುದಕ್ಕೆ ಬೇಕಾದ ಇಲ್ಲವೇ ಪರಿಭಾವಿಸುವುದಕ್ಕೆ ಬೇಕಾದ ಅವಕಾಶವೂ ವ್ಯಕ್ತವಾಗುತ್ತದೆ. ಅಂದರೆ ಸಾಹಿತ್ಯದ ಮೂಲಕ ಏರ್ಪಡುವ ಯಾವುದೇ ಬಗೆಯ ಅನುಭವ ಹಾಗೂ ಅರಿವು ಇಲ್ಲವೇ ತಿಳಿವು ನಮಗೆ ಒಂದು ತಾತ್ವಿಕ ವಿನ್ಯಾಸವಾಗಿ ಭಾಷೆಯ ಮೂಲಕವೇ ಲಭ್ಯವಾಗುತ್ತವೆ. ಇಲ್ಲಿ ಭಾಷೆ ಅತ್ಯಂತ ಪ್ರಾಥಮಿಕ ವಿದ್ಯಮಾನವಾಗಿದೆ. ತಿಳಿವೊಂದು ಮೈದಾಳುವ ಸನ್ನಿವೇಶ ಹಾಗೂ ಸಂಬಂಧಗಳು ವಿಭಿನ್ನ ನೆಲೆಯಲ್ಲಿ ಅಸ್ತಿತ್ವದಲ್ಲಿರುತ್ತವೆ.
ಅಂದರೆ ಭಾಷಾಶಾಸ್ತ್ರ ಮತ್ತು ಇತರ ಜ್ಞಾನಶಿಸ್ತುಗಳ ನಡುವಣ ಸಂಬಂಧದಲ್ಲಿ ಈ ವಿನ್ಯಾಸವನ್ನು ಮನಗಾಣಬಹುದು. ಚರಿತ್ರೆ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮೊದಲಾದ ಈ ಎಲ್ಲ ವಲಯಗಳಲ್ಲಿ ಮೈದಾಳುವ ತಿಳಿವು ಭಾಷೆಯನ್ನೇ ನೆಲೆಯಾಗಿಸಿಕೊಂಡಿರುತ್ತದೆ. ಏಕೆಂದರೆ, ಭಾಷಾಕೇಂದ್ರಿತ ವಾಸ್ತವಗಳು, ಸನ್ನಿವೇಶಗಳು, ನಿರೂಪಣೆ ಮುಂತಾದವುಗಳನ್ನು ಪರಿಶೀಲಿಸುವ ಇಲ್ಲವೇ ವಿಶ್ಲೇಷಿಸುವ ಮೂಲಕವೇ ತಿಳಿವಿನ ಸಾಧ್ಯತೆಯನ್ನು ನಿಚ್ಚಳವಾಗಿ ಅರಿಯಬಹುದು.
ಆದರೆ ದಿನನಿತ್ಯದ ಮಾತುಕತೆ, ಬದುಕಿನ ವ್ಯವಹಾರಗಳು, ಸಾಹಿತ್ಯ ಇಲ್ಲವೇ ಇನ್ನ್ಯಾವುದೇ ಜ್ಞಾನಶಿಸ್ತಿನಷ್ಟು ಸಂಕೀರ್ಣವಾಗಿರುವುದಿಲ್ಲ. ಅಂದರೆ ಯಾವುದೇ ಸಂಕಥನ ಓದು ಮತ್ತು ಭಾಷಾಶಾಸ್ತ್ರಗಳ ನಡುವೆ ಏರ್ಪಡುವಷ್ಟು ಸಂಕೀರ್ಣತೆ, ನಮ್ಮ ದಿನದ ಮಾತುಕತೆಗಳು ಗಹನತೆಯನ್ನು ಪಡೆದುಕೊಳ್ಳದೇ, ಸಹಜಸ್ಥಿತಿಯಲ್ಲಿಯೇ ತಮ್ಮ ಗುರಿ ಉದ್ದೇಶಗಳನ್ನು ಪೊರೈಸುತ್ತವೆ.
ಬದುಕಿನ ಇಂತಹ ಸಹಜ ಮಾತುಕತೆ, ಅನುಭವ ಅಥವಾ ನಿರೂಪಣೆಗಳನ್ನು ಲಿಂಗ್ವಿಸ್ಟಿಕ್ ಪ್ರ್ಯಾಗ್ಮಾಟಿಸಂ ಮತ್ತು ಸಂಕಥನ ವಿಶ್ಲೇಷಣೆಯ ಚೌಕಟ್ಟಿನಲ್ಲಿಟ್ಟು ನೋಡಿದರೆ, ಸಾಹಿತ್ಯ ಪಠ್ಯಗಳಲ್ಲಿರುವ ನಿರೂಪಣೆಗಳಷ್ಟೇ, ಇವು ಕೂಡ ಗಹನವಾಗಿ/ಗಂಭೀರವಾಗಿ ಇರುತ್ತವೆ ಎನ್ನುವ ವಾಸ್ತವವನ್ನು ಮನಗಾಣುತ್ತೇವೆ. ಬದುಕಿನ ದೈನಂದಿನ ದಂದುಗವೇ ಒಂದು ತಾತ್ವಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪರಿಪ್ರೇಕ್ಷ್ಯದಲ್ಲಿ ನೆಲೆಗೊಂಡು ಪ್ರಕಟಗೊಳ್ಳುತ್ತದೆ. ಆದ್ದರಿಂದ ಸಾಹಿತ್ಯ ಪಠ್ಯಗಳಲ್ಲಿ ಅಡಕವಾಗಿರುವ ಅನುಭವ ವಿಶೇಷವಾಗಿ ನಮ್ಮ ಬದುಕಿನ ದಾರ್ಶನಿಕತೆಯಾಗಿ ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ನೆನಪು
- ರುದ್ರಪ್ಪ ಹನಗವಾಡಿ
ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ
ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು
ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು
ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?
( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ
- ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ
ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.
ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.
ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು
ಬದುಕಿಸುವುದು ಇತ್ಯಾದಿ..
ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.
ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.
ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;
“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”
ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.
ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.
ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;
“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”
ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;
“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”
ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;
“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”
ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;
“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”
ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ
ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.
ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.
ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.
ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.
ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.
ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.
ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.
ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.
ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.
ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.
ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.
ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.
ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ್ಮಿಕ ಜಗತ್ತಿನಲ್ಲಿ ಸರ್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ