Connect with us

ನೆಲದನಿ

ಕುವೆಂಪು ಕಂಡರಿಸಿದ ಕನ್ನಡತನದ ದಾರ್ಶನಿಕತೆ

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಕುವೆಂಪು ಬರಹಗಳಲ್ಲಿ ‘ಕನ್ನಡತನ’ದ ವಿನ್ಯಾಸಗಳು ಹೇಗೆ ಮೈದಾಳಿವೆ ಎಂಬುದನ್ನು ಅವರ ಸಾಹಿತ್ಯಕ ಹಾಗೂ ವೈಚಾರಿಕ ಬರಹಗಳ ಮೂಲಕ ಕಂಡುಕೊಳ್ಳಬಹುದಾಗಿದೆ. ಕನ್ನಡತನ ಎನ್ನುವುದು ಕೇವಲ ನಾಡು ನುಡಿಗಳ ಗಡಿಗಳಿಗೆ ಸೀಮಿತವಾಗಿರುವ ವಿದ್ಯಮಾನವಾಗಿರದೇ, ಅದೊಂದು ವ್ಯಾಪಕ ಗ್ರಹಿಕೆ ಎನ್ನುವುದು ಇವರ ಇಡೀ ಬರಹಗಳ ಮೂಲಕ ಅನಾವರಣಗೊಂಡಿರುವುದನ್ನು ಕಾಣುತ್ತೇವೆ.

ಹಾಗೆಂದರೆ, ಕನ್ನಡತನ ಎನ್ನುವುದು ಸಂಕುಚಿತ ಗಡಿಗಳನ್ನು ಮೀರುವ ಮತ್ತು ಅಂತಹ ಸೀಮಿತ ಗಡಿಗಳನ್ನು ದಾಟುವ ವಿನ್ಯಾಸವನ್ನಾಗಿ ನೋಡುವ ಹಲವು ಸನ್ನಿವೇಶಗಳು ಕುವೆಂಪು ಅವರ ಅಭಿವ್ಯಕ್ತಿಗಳಲ್ಲಿ ಅತ್ಯಂತ ನಿಚ್ಚಳವಾಗಿವೆ. ಉದಾ.ಗೆ ನೀ ಮೆಟ್ಟುವ ನೆಲ, ಅದೆ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ’ ಎನ್ನುವ ಕವನದ ಸಾಲುಗಳು ಇರಬಹುದು ಇಲ್ಲವೇ ಅನಿಕೇತನ ಕವನ ಇರಬಹುದು ಅಥವಾ ಕನ್ನಡ ನಾಡು ನುಡಿ ಕುರಿತ ಪ್ರತಿಯೊಂದು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕನ್ನಡತನದ ನಿರ್ವಚನೆಯನ್ನು ಕಾಣಬಹುದಾಗಿದೆ.

ಅಂದರೆ ಕುವೆಂಪು ಅವರ ‘ಅಭಿವ್ಯಕ್ತಿ’ ಮತ್ತು ‘ಗ್ರಹಿಕೆ’ಗಳಲ್ಲಿ ಕನ್ನಡತನ ಎಂಬ ಸಮೂಹ ಅಸ್ಮಿತೆ ಹೇಗೆ ಅನಾವರಣಗೊಂಡಿದೆ ಹಾಗೂ ಈ ಅಸ್ಮಿತೆಯನ್ನು ಗ್ರಹಿಸುವ ಸ್ವರೂಪಗಳು ಯಾವ ಬಗೆಯಲ್ಲಿ ಇವರ ಸಾಹಿತ್ಯ ಮತ್ತು ವೈಚಾರಿಕ ನಿರೂಪಣೆಗಳಲ್ಲಿ ನೆಲೆಗೊಂಡಿವೆ ಎನ್ನುವುದನ್ನು ನೋಡುವ ಜರೂರಿದೆ. ಮುಖ್ಯವಾಗಿ ಕಾವ್ಯ, ನಾಟಕ ಮತ್ತು ಕಥನ ಎಂಬೀ ಸೃಜನಶೀಲ ಅಭಿವ್ಯಕ್ತಿಗಳು ರೂಪಕ, ಪ್ರತಿಮೆ, ಸಂಕೇತಗಳ ಮುಖೇನ ಕನ್ನಡತನವನ್ನು ನಿರೂಪಿಸಿರುವ ಬಗೆಯನ್ನು ಇಲ್ಲಿ ಕಾಣುತ್ತೇವೆ. ಹಾಗೂ ವಿಮರ್ಶೆ ಮತ್ತು ವೈಚಾರಿಕ ಬರಹಗಳಲ್ಲಿ ಈ ಕನ್ನಡತನದ ವಿನ್ಯಾಸವು ತಿಳಿವಿನ ಬಗೆಗಳಾಗಿ (ಎಪಿಸ್ಟಮಿಕ್ ಮಾಡಲ್ಸ್) ಮೈದಾಳಿವೆ.

ದಿಟ ಸಾಹಿತ್ಯಕ ಮತ್ತು ವೈಚಾರಿಕ ಅಭಿವ್ಯಕ್ತಿಗಳ ಸ್ವರೂಪ ಬದಲಾಗುವುದರಿಂದ ಅವುಗಳ ಮೂಲಕ ಪ್ರತಿಪಾದಿಸುವ ತಿಳಿವಿನ ಸ್ವರೂಪವೂ ಬದಲಾಗುತ್ತದೆ. ಹಾಗಾಗಿಯೇ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ಮೈದಾಳುವ ಕನ್ನಡತನ ಕುರಿತಾದ ನಿರೂಪಣೆಗಳು ಬಹುತೇಕವಾಗಿ ರೂಪಾತ್ಮಕವಾಗಿವೆ. ಆದರೆ ವೈಚಾರಿಕ ಬರಹಗಳಲ್ಲಿ ಏರ್ಪಡುವ ಈ ಕನ್ನಡತನದ ವಿನ್ಯಾಸ ಜ್ಞಾನ ಮೀಮಾಂಸೆಯ ಆಯಾಮವನ್ನು ಪಡೆದುಕೊಳ್ಳುತ್ತವೆ ಎಂಬುದು ಗಮನಾರ್ಹ.

ಆದರೆ ಈ ಎರಡೂ ಸನ್ನಿವೇಶದಲ್ಲಿಯೂ ಕುವೆಂಪು ಪ್ರತಿಮಾ ವಿಧಾನವನ್ನೇ ಅನುಸರಿಸುತ್ತಾರೆ ಎಂಬುದು ವಿಶೇಷ. ಲೋಕೋಪಯೋಗಿ ಮತ್ತು ಭಾವೋಪಯೋಗಿ ನೆಲೆಗಳನ್ನು ಅತ್ಯಂತ ಖಚಿತವಾಗಿ ನಿರ್ಧರಿಸುವ ಆಯಾಮಗಳು ಇವರ ಸಾಹಿತ್ಯಕ ಮತ್ತು ವೈಚಾರಿಕ ಬರಹಗಳಲ್ಲಿ ಯಥೇಚ್ಛವಾಗಿ ನೆಲೆಗೊಂಡಿವೆ.

ಭಾಷೆ ಮತ್ತು ಭಾಷಿಕ ಪರಿಕರಗಳನ್ನು ಕೇವಲ ಸಾಂಕೇತಿಕ ಪ್ರತಿನಿಧೀಕರಣದ ಮಾದರಿಯನ್ನಾಗಿ ಮಾತ್ರ ಉಪಯೋಗಿಸದೇ, ಅದೊಂದು ಜ್ಞಾನಶಿಸ್ತು, ಸಂವೇದನೆಯ ವಿನ್ಯಾಸ ಹಾಗೂ ಅನುಭವಗಳ ಮಾದರಿಗಳನ್ನು ಗುರುತಿಸುವ ಬಹುಮುಖ್ಯ ನೆಲೆಯೆನ್ನುವುದನ್ನು ಕುವೆಂಪು ಅತ್ಯಂತ ಪರಿಣಾಮಕಾರಿಯಾಗಿ ಗುರುತಿಸಿದ್ದಾರೆ. ಆದ್ದರಿಂದ ಭಾಷೆ ಬಗೆಗಿನ ಗ್ರಹಿಕೆಗಳು ಇವರ ಒಟ್ಟು ಅಭಿವ್ಯಕ್ತಿಯಲ್ಲಿ ಪ್ರಮುಖವಾಗುತ್ತವೆ.

ಇವುಗಳ ಮೂಲಕವೇ ಬದುಕಿನ ವಿವಿಧ ಲಯಗಳನ್ನು ಕಂಡುಕೊಳ್ಳಲೂ ಸಾಧ್ಯ ಅನ್ನುವುದನ್ನು ಕುವೆಂಪು ತೋರಿಸಿಕೊಟ್ಟಿದ್ದಾರೆ. ಕಾಲ-ದೇಶಗಳ ಹಂಗು ಮೀರಿದ ಪ್ರಸ್ತುತತೆ ನೆಲೆಗೊಳ್ಳುವುದು ಇಂತಹ ಭಾಷಿಕ ಕ್ರಾಂತಿಯಿಂದಲೇ ಎಂಬ ವಾಸ್ತವವನ್ನು ನಾವು ಮನಗಾಣುವುದಕ್ಕೆ ಸಾಕ್ಷಿಗಳು ನಮಗೆ ಕುವೆಂಪು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಲಭ್ಯವಾಗುತ್ತವೆ. ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !’ ಎಂಬೀ ಕವನದ ನಿಲುವು ಯಾವ ಕಾಲ ದೇಶಕ್ಕೂ ಸೀಮಿತಗೊಳ್ಳದೇ ಮನುಜಮತ ಮತ್ತು ವಿಶ್ವಪಥದ ಚಹರೆಗಳಾಗಿ ನೆಲೆಗೊಂಡಿವೆ.

ಸಾಮಾಜಿಕ ಭಾಷಾಶಾಸ್ತ್ರೀಯ ವಿವೇಚನೆಗಳ ಮುಖೇನ ಭಾಷೆ ಮತ್ತು ಸಮಾಜಗಳ ಒಟ್ಟು ಸಂಬಂಧವನ್ನು ವಿಶ್ಲೇಷಿಸಿ ನೋಡಿದರೆ ಕುವೆಂಪು ಅವರ ಭಾಷಿಕ ನಿಲುವುಗಳ ಆಳದಲ್ಲಿ ಹುದುಗಿರುವ ವೈಚಾರಿಕ ಸ್ಥೈರ್ಯ ಹಾಗೂ ನೈತಿಕತೆಯ ಹೊಣೆಗಾರಿಕೆ ನಮಗೆ ಮನನವಾಗುತ್ತದೆ. ಮತಧರ್ಮದ ಪರಿಭಾಷೆ ಒದುಗಿಸುವ ಚಿಂತನಾ ಕ್ರಮ ಬೇರೇನೆ ಸಮಾಜಶಾಸ್ತ್ರೀಯ ವ್ಯಾಖ್ಯಾನಗಳಿಗೆ ಅನುವು ಮಾಡಿಕೊಡುವುದನ್ನು ಕುವೆಂಪು ಅವರು ಮನಗಂಡಿದ್ದರು.

ತತ್ವದರ್ಶನ, ಸಾಂಸ್ಕೃತಿಕ ಮುಖಾಮುಖಿಯ ನಿಲುವುಗಳು ನಮಗೆ ಅರ್ಥವಾಗಲು ಹಾಗೂ ಸಾಂಸ್ಕೃತಿಕ ಅನುಸಂಧಾನದ ಸ್ಪಷ್ಟ ಮಾನದಂಡಗಳು ನಮಗೆ ಲಭ್ಯವಾಗುವುದು ಭಾಷಿಕ ಕ್ರಾಂತಿಯಿಂದ ಎನ್ನುವ ವಾಸ್ತವ ಕುವೆಂಪು ಅವರಿಗೆ ಖಚಿತವಾಗಿತ್ತು.

ಹೊಸ ಪರಿಭಾಷೆ ಮತ್ತು ಹೊಸ ವಿಚಾರಗಳನ್ನು ಏಕತ್ರಗೊಳಿಸುವ ಬಹುದೊಡ್ಡ ವೈಚಾರಿಕ ಕ್ರಾಂತಿಗೆ ಕುವೆಂಪು ಅವರು ಕಾರಣವಾದರು. ಈಗಾಗಲೇ ನೆಲೆನಿಂತಿದ್ದ ಸಮಾಜಶಾಸ್ತ್ರದ ಪರಿಭಾಷೆಯ ಒಳಹುನ್ನಾರವನ್ನು ಅರ್ಥೈಸಿಕೊಳ್ಳಲು ಭಾಷಾಶಾಸ್ತ್ರ ಸಹಾಯ ಮಾಡಬಲ್ಲದು ದಿಟ. ಆದರೆ ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನಿರೂಪಣೆಗಳು ಲಭ್ಯವಾಗದೇ ಈ ಒಳಹುನ್ನಾರವನ್ನು ಅರಿಯಲು ಭಾಷಾಶಾಸ್ತ್ರಕ್ಕೆ ಸಾಧ್ಯವೇ ಇಲ್ಲ.

ಆದರೆ ಕುವೆಂಪು ಅವರು ಏಕೆಕಾಲಕ್ಕೆ ಈ ಪರಿಭಾಷೆಗಳ ಚಹರೆಗಳನ್ನು ಬದಲಿಸುವ ಮತ್ತು ಒಳಹುನ್ನಾರಗಳನ್ನು ಖಚಿತವಾಗಿ ತಮ್ಮ ಅಭಿವ್ಯಕ್ತಿಗಳ ಮೂಲಕ ಮಂಡಿಸಿರುವುದನ್ನು ಯಾರಾದರೂ ಗುರುತಿಸಬಹುದು. ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಮೇಲ್ವರ್ಗಗಳು, ಕೆಳವರ್ಗಗಳು ರೂಢಿಗತವಾಗಿ ಬಳಸುತ್ತಿದ್ದ ಪರಿಭಾಷೆಗಳು ಯಾವ ರೀತಿಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಯಜಮಾನಿಕೆಯನ್ನು ನಿಭಾಯಿಸುತ್ತಿದ್ದವು ಎನ್ನುವುದನ್ನು ಸೂಚಿಸುವ ಸೂಚಕಗಳಾಗಿ ಒದಗಿ ಬಂದಿರುವುದನ್ನು ಪತ್ತೆಹಚ್ಚುವ ನಿಶಿತಮತಿ ಕುವೆಂಪು ಅವರಲ್ಲಿ ಎದ್ದು ಕಾಣುತ್ತದೆ.

ಭಾಷೆ ಒಂದು ಸಾಮಾಜಿಕ ವಾಸ್ತವವನ್ನು (ಸೋಶಿಯಲ್ ಫ್ಯಾಕ್ಟ್) ಬಿಂಬಿಸುವುದಷ್ಟೆಯಲ್ಲ, ಸಮೂಹಗಳ ಬದುಕು ಹೇಗೆ ಇಂತಹ ಸ್ಥಿತಿಯೊಂದಕ್ಕೆ ಒಗ್ಗಿಕೊಂಡಿವೆ ಎನ್ನುವ ಕಟುಸತ್ಯವನ್ನೂ ಅನಾವರಣಗೊಳಿಸುತ್ತವೆ. ಆದ್ದರಿಂದ ಹೊಸ ಸಾಮಾಜಿಕತೆಯನ್ನು ನೆಲೆಗೊಳಿಸಲು ಹೊಸ ಪರಿಭಾಷೆಗಳ ಅಗತ್ಯವಿದೆ ಎನ್ನುವುದನ್ನು ಕುವೆಂಪು ಅವರು ಬಲವಾಗಿ ನಂಬಿದ್ದರು.

ವೈಜ್ಞಾನಿಕ ದೃಷ್ಟಿ, ವಿಶ್ವಮಾನವತೆ, ಸಾಂಸ್ಕೃತಿಕ ರಾಜಕಾರಣ, ಕಾವ್ಯ, ಕಥನ ಹಾಗೂ ನಾಟಕಗಳು ಇತ್ಯಾದಿ ಸಂಕಥನಗಳು ಕನ್ನಡತನವನ್ನು ನಿರ್ವಚಿಸಲು ಕುವೆಂಪು ಅವರಿಗೆ ಅತ್ಯಂತ ಮುಖ್ಯ ಅಭಿವ್ಯಕ್ತಿ ಮಾದರಿಗಳಾಗುತ್ತವೆ. ಎಲ್ಲವನ್ನೂ ಕನ್ನಡತನ ಮತ್ತು ಕನ್ನಡತನದ ಅಸ್ಮಿತೆಯ ಸ್ವರೂಪವನ್ನು ನಿರ್ವಚಿಸುವ ಬಗೆಯನ್ನಾಗಿಯೇ ಕುವೆಂಪು ಅವರು ನಿರೂಪಿಸಿದ್ದಾರೆ. ಆದ್ದರಿಂದ ಪ್ರತಿಮಾ ವಿಧಾನವನ್ನು ಪರಿಣಾಮಕಾರಿಯಾಗಿ ತಮ್ಮ ಒಟ್ಟು ಅಭಿವ್ಯಕ್ತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಯಿತು.

ಇಲ್ಲವಾದರೆ ಅವರ ಕಾದಂಬರಿಗಳು ಮತ್ತು ಕಾವ್ಯ ವಿಶೇಷವಾಗಿ ರಾಮಾಯಣ ದರ್ಶನಂ ಮಹಾಕಾವ್ಯವು ಇಷ್ಟೊಂದು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳಲು ಆಗುತ್ತಿರಲಿಲ್ಲ. ತಮ್ಮ ವೈಚಾರಿಕ ಬರಹಗಳು, ವಿಮರ್ಶೆ, ನಾಟಕಗಳು, ಕಥನಗಳು, ಕಾವ್ಯ ಹಾಗೂ ಕವಿತೆಗಳನ್ನು ಅತ್ಯಂತ ವಿಶಿಷ್ಟ ಬಗೆಗಳನ್ನಾಗಿಸುವ ಇರಾದೆಯನ್ನು ಕುವೆಂಪು ಅವರು ಹೊಂದಿರುವುದನ್ನು ಈ ಎಲ್ಲ ವಿನ್ಯಾಸಗಳಲ್ಲಿ ನೋಡುತ್ತೇವೆ.

ಈ ಎಲ್ಲ ಪ್ರಕಾರಗಳ ವೈಶಿಷ್ಟ್ಯತೆಯನ್ನು ಕಂಡರಿಸಲು ಇವರು ಭಾಷೆಯನ್ನೇ ಪ್ರಧಾನ ಮಾನದಂಡವನ್ನಾಗಿ ಬಳಸಿಕೊಂಡಿದ್ದಾರೆ. ಈ ಪ್ರಕ್ರಿಯೆಯ ಮೂಲಕವೇ ಕನ್ನಡತನದ ಚಹರೆಗಳನ್ನೂ ಪತ್ತೆಹಚ್ಚುವುದಕ್ಕೂ ಇವರಿಗೆ ಸಾಧ್ಯವಾಗಿದೆ. ಸಾಮಾಜಿಕತೆ ಮತ್ತು ಕನ್ನಡತನದ ನಡುವಣ ನಂಟಸ್ತಿಕೆಯನ್ನು ರೂಪಿಸುವ ವಿಧಾನವೇ ಅತ್ಯಂತ ಮಾರ್ಮಿಕವಾಗಿದೆ.

ಏಕೆಂದರೆ ಕನ್ನಡದ ಕಾವ್ಯದೊಳಗೆ ಲೋಕದರ್ಶನದ ಮಾದರಿಗಳನ್ನು ಒಡಮೂಡಿಸಲು ಹಾಗೂ ವಿಶ್ವಮಾನವ ಪರಿಕಲ್ಪನೆಯನ್ನು ನೆಲೆಗೊಳಿಸಲು ಹೇಗೆ ಸಾಧ್ಯವಾಯಿತು ಅನ್ನುವುದನ್ನು ಶೋಧಿಸುವುದಕ್ಕೆ ಸಾಕಷ್ಟು ಅವಕಾಶಗಳನ್ನು ಕುವೆಂಪು ಅವರು ಭಾಷಿಕ ಚಲನೆಗಳ ಮೂಲಕವೇ ಅಣಿಗೊಳಿಸಿದ್ದಾರೆ.

ಯಾವುದನ್ನೂ ಇವರು ಕೇವಲ ಒಂದು ನೋಟವನ್ನಾಗಿ ಮಾತ್ರ ಬಿಂಬಿಸದೇ ಅದೊಂದು ಲೋಕಜ್ಞಾನದ ಗ್ರಹಿಕೆಯನ್ನಾಗಿ ಮಂಡಿಸುವ ತವಕವನ್ನು ಹೊಂದಿರುವುದು ನಮಗೆ ಮನವರಿಕೆಯಾಗುತ್ತದೆ. ನೇಗಿಲಯೋಗಿ, ದೇವರು ರುಜು ಮಾಡಿದನು, ಹೀರೆ ಹೂ, ಗೊಬ್ಬರ, ಕಲ್ಕಿ, ಸ್ವರ್ಗ ಬಾಗಿಲು ಯಕ್ಷಪ್ರಶ್ನೆ, ದೇವರು ಮತ್ತು ಪುಜಾರಿ ಇತ್ಯಾದಿ ಕವನಗಳನ್ನು ಪರಿಶೀಲಿಸಿ ನೋಡಬಹುದು.

ಜಲಗಾರ, ಸ್ಮಶಾನ ಕುರುಕ್ಷೇತ್ರಂ, ಶೂದ್ರ ತಪಸ್ವಿ, ರಾಮಾಯಣ ದರ್ಶನಂ ಹಾಗೂ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಗಳು ಪಠ್ಯಗಳನ್ನೂ ಈ ನೆಲೆಯಲ್ಲಿ ನೋಡುವುದು ಸೂಕ್ತ. ಈ ಎಲ್ಲ ಪಠ್ಯಗಳ ಇಡೀ ಗ್ರಹಿಕೆಯಲ್ಲಿ ಎದ್ದು ಕಾಣುವ ಬಗೆಯೇ ಕನ್ನಡತನದ ಚಹರೆಯಾಗಿದೆ.

ಈ ಚಹರೆ ಏಕಶಿಲಾಘನಾಕೃತಿಯಲ್ಲ ಅದು ಬಹುಳತೆಯ ವಿನ್ಯಾಸ ಎಂಬ ಚಿಂತನೆಯನ್ನೂ ಇಲ್ಲಿ ನೆಲೆಗೊಳಿಸಲಾಗಿದೆ. ನುಡಿಯೊಂದನ್ನು ಏಕಕಾಲಕ್ಕೆ ಸ್ಥಳೀಯತೆ ಮತ್ತು ವಿಶ್ವಾತ್ಮಕತೆಯ ಸಮಾನ ವಿದ್ಯಮಾನವನ್ನಾಗಿ ಬಿಂಬಿಸುವಲ್ಲಿ ಕುವೆಂಪು ಮತ್ತು ಬೇಂದ್ರೆಯವರು ಅತ್ಯಂತ ಪ್ರಮುಖ ಕವಿಗಳಾಗಿದ್ದಾರೆ.

ಕನ್ನಡತನ ಎನ್ನುವುದು ಕೇವಲ ಭಾಷಿಕ ಗುರುತಲ್ಲ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಗ್ರಹಿಕೆಗಳ ಮಾದರಿ. ಈ ಗ್ರಹಿಕಾ ಮಾದರಿ ಏಕರೂಪಿಯಾಗಿರದೇ, ಬಹುಳತೆಯಿಂದ ಕೂಡಿರುವ ವಿದ್ಯಮಾನ ಆಗಿರಬೇಕಾಗುತ್ತದೆ. ಈ ಬಹುಳತೆಯ ಚೌಕಟ್ಟಿನೊಳಗೆ ಕನ್ನಡ ನುಡಿಯ ಸಾಮಾಜಿಕ ವಿನ್ಯಾಸವನ್ನು ಅರಿಯುವುದಕ್ಕೆ ಬೇಕಾಗುವ ದಾರಿಗಳನ್ನು ಕುವೆಂಪು ಅವರು ಕಂಡುಕೊಂಡಿರುವುದನ್ನು ಅವರ ಒಟ್ಟು ಬರಹಗಳಲ್ಲಿ ನೋಡುತ್ತೇವೆ.

ನುಡಿ ಬಗೆಗಿನ ಸವಾಲುಗಳನ್ನು ಕುವೆಂಪು ಅವರು ಕೈಗೆತ್ತಿಕೊಂಡಿರುವ ಬಗೆಯೇ ಅತ್ಯಂತ ವಿಶಿಷ್ಟವಾಗಿರುವಂತಹದು. ನುಡಿ ಕುರಿತ ಇವರ ಈ ದಾರ್ಶನಿಕತೆ ಹೊಸ ಸಾಮಾಜಿಕ ವಿನ್ಯಾಸಕ್ಕೆ (ನ್ಯೂ ಸೋಶಿಯಲ್ ಆರ್ಡರ್) ತುಡಿಯುವ ಬಗೆಯಾಗಿದೆ. ಈ ವಿನ್ಯಾಸಗಳು ಸಮಾನತೆ, ಸಹಬಾಳ್ವೆ, ಸಹೋದರತೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ನ್ಯಾಯದ ನಿಲುವುಗಳನ್ನೂ ಒಳಗೊಂಡಿರುತ್ತವೆ. ತಳಸಮುದಾಯ ಮತ್ತು ಹೆಣ್ಣು ಮಕ್ಕಳ ಸಾಮಾಜಿಕ ವಿಮೋಚನೆಯ ಹೊಸ ದಾರಿಗಳನ್ನು ಕನ್ನಡತನದ ಹೊಸ ವ್ಯಾಖ್ಯಾಗಳ ಮೂಲಕ ಅಣಿಗೊಳಿಸುವ ದೊಡ್ಡ ಸಾಹಸವನ್ನು ಕುವೆಂಪು ಅವರು ಮಾಡಿದ್ದಾರೆ.

ಇವರಿಗೆ ಕನ್ನಡತನ ಎನ್ನುವುದು ಸಾಮಾಜಿಕ ಒಳಗೊಳ್ಳುವಿಕೆಯ ವಿನ್ಯಾಸವೂ ಆಗಿರುತ್ತದೆ. ಸಮಾಜವೆಂದರೆ ಅದೊಂದು ಬಹುಳತೆಯ ನೋಟಕ್ರಮ ಮತ್ತು ವಿಭಿನ್ನ ಲೋಕದೃಷ್ಟಿಗಳ ಆಗರ ಎಂಬುದನ್ನು ಕುವೆಂಪು ಮನಗಂಡಿದ್ದರು ಹಾಗೂ ಅದನ್ನು ತಮ್ಮ ಸಾಹಿತ್ಯಕ ನಿರೂಪಣೆಗಳ ಮೂಲಕವೂ ಸಾಧಿಸಿ ತೋರಿಸಿದರು. ಈ ಇಡೀ ಪ್ರಕ್ರಿಯೆಯಲ್ಲಿ ಅನುಭವದ ನೆಲೆ ಮತ್ತು ಭಾಷೆಗಳ ನಡುವಣ ಅನುಸಂಧಾನದ ಮಾದರಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಹಾಗಾಗಿಯೇ ಗುತ್ತಿ, ತಿಮ್ಮಿ, ಪೀಂಚಲು, ಜಲಗಾರ, ಶಂಭೂಕ, ಏಕಲವ್ಯ ಇವರ ವ್ಯಕ್ತಿತ್ವದ ಮಾದರಿಗಳು ಎಲ್ಲ ಕಾಲದ ಕನ್ನಡತನದ ಸೂಚಕಗಳಾಗಿ ರೂಪುಗೊಂಡಿವೆ.

ಕನ್ನಡತನದ ಅಭಿವ್ಯಕ್ತಿಯಾಗಿ ಭಾಷೆಯನ್ನು ರೂಪಿಸುವುದೆಂದರೆ ಅದು ಕೇವಲ ಭಾಷಿಕ ರಾಜಕಾರಣದ ನಿಲುವು ಮಾತ್ರವಾಗದೆ, ಸಮೂಹಗಳ ಇಡೀ ಬದುಕಿನ ಜ್ಞಾನಮೀಮಾಂಸೆಯೂ ಮತ್ತು ಚಹರೆಯೂ ಆಗಿ ನಿರ್ಮಾಣಗೊಂಡಿರುತ್ತದೆ. ಅಂದರೆ ಭಾಷೆಯೊಂದು ಕೇವಲ ರಾಜಕೀಯ-ಸಾಮಾಜಿಕ ಪ್ರಜ್ಞೆ ಮಾತ್ರವಾಗದೇ, ಸಮೂಹಗಳ ಬದುಕಿನ ಪ್ರಜ್ಞೆ ಮತ್ತು ಅಸ್ತಿತ್ವದ ಮೂಲನೆಲೆಯಾಗುವ ಪ್ರಕ್ರಿಯೆಯು ಏರ್ಪಡುತ್ತದೆ. ಪರಿಣಾಮವಾಗಿ ಭಾಷೆ ಎನ್ನುವುದು ವಿಮೋಚನೆಯ ನೆಲೆಯಾಗಿ ರೂಪುಗೊಳ್ಳುತ್ತದೆ.

ಕುವೆಂಪು ಅಂಥವರ ಸಾಹಿತ್ಯ ಅಭಿವ್ಯಕ್ತಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಮೈದಾಳಿದೆ. ಹಾಗಾಗಿ ಬ್ರಾಹ್ಮಣ್ಯ ಮತ್ತು ವೈದಿಕ ಆಲೋಚನಾ ಕ್ರಮವನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಭಾಷಿಕ ವಿನ್ಯಾಸಗಳನ್ನು, ಸಬಾಲ್ಟ್ರನ್ ಸಮೂಹಗಳ ಅಭಿವ್ಯಕ್ತಿಗೆ ಪೂರಕವಾಗಿ ಮರುವಿನ್ಯಾಸಗೊಳಿಸುವ ಒಂದು ದೊಡ್ಡ ಭಾಷಿಕ ತಿರುವು ಕುವೆಂಪು ಅವರ ಸಾಹಿತ್ಯ ಹಾಗೂ ವೈಚಾರಿಕ ಅಭಿವ್ಯಕ್ತಿಯಲ್ಲಿ ಕಾಣುತ್ತೇವೆ.

ಒಂದು ನಿರ್ದಿಷ್ಟ ಸಂಸ್ಕೃತಿ ಇಲ್ಲವೇ ಸಾಮಾಜಿಕ ಅಸ್ಮಿತೆಯ ಸಾಂಕೇತಿಕತೆಯನ್ನು ಪಡೆದುಕೊಂಡಿದ್ದ ಭಾಷೆಯನ್ನು ನಿರಾಕರಿಸುವುದೇ ಒಂದು ಸಾಹಿತ್ಯಕ ಕ್ರಾಂತಿಗೆ ಕಾರಣವಾಗುತ್ತದೆ ಎನ್ನುವುದನ್ನು ಇವರು ನಿರೂಪಿಸಿದ್ದಾರೆ. ಶೂದ್ರ, ದಲಿತ ಇಲ್ಲವೇ ತಳಸಮೂಹಗಳ ಸಾಹಿತ್ಯ ನಿರೂಪಣೆಗಳಿಗೆ ಒಗ್ಗೂವ ಪರಿಭಾಷೆ, ರೂಪಕ, ಪ್ರತಿಮೆಗಳನ್ನು ಹೊಸದಾಗಿ ಸೃಷ್ಟಿಸುವ ಪ್ರತಿಮಾ ವಿಧಾನದ ಸ್ಪಷ್ಟ ಚಹರೆಗಳು ಕುವೆಂಪು ಅವರ ಒಟ್ಟು ಸಾಹಿತ್ಯದಲ್ಲಿ ಮೇಳೈಸಿರುವುದನ್ನು ಯಾರಾದರೂ ಗುರುತಿಸಬಹುದು.

ಅಂದರೆ ಕಾವ್ಯ (ಲಯ), ಕಥೆ-ಕಾದಂಬರಿ (ಕಥನ) ಹಾಗೂ ನಾಟಕ (ಸಂಭಾಷಣೆಗೆ) ಪ್ರಕಾರಗಳಿಗೆ ಹೊಸದಾದ ವೈಚಾರಿಕ ಮೊನಚು ಮತ್ತು ಕಾವ್ಯಮೀಮಾಂಸೆ-ಸೌಂಧರ್ಯ ಮೀಮಾಂಸೆಯನ್ನು ನೆಲೆಗೊಳಿಸುವ ಇರಾದೆಯಿಂದ ಕುವೆಂಪು ಹೊಸ ನುಡಿಗಟ್ಟನ್ನು ಕಟ್ಟಿಕೊಂಡರು. ಇಡೀ ಈ ವಿನ್ಯಾಸಕ್ಕೆ ಒಂದು ತಾತ್ವಿಕ ಪಾತಳಿಯಾಗಿ ಭಾಷೆ ಕುವೆಂಪು ಅವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕೆಲಸ ಮಾಡಿದೆ.

ಕುವೆಂಪು ಅವರಿಗೆ ಅಭಿವ್ಯಕ್ತಿ ಎನ್ನುವುದು ಕೇವಲ ರಸಾನುಭವದ ವಿದ್ಯಮಾನವಾಗದೇ, ಕ್ರಿಯೆ, ತತ್ವ, ಪ್ರತಿಭಟನೆಯ ಕುರುಹುಗಳನ್ನು ಸೂಚಿಸುವುದೇ ಆಗಿರುತ್ತದೆ. ಮುಂದೆ ದಲಿತ ಬಂಡಾಯದ ಸನ್ನಿವೇಶದಲ್ಲಿ ಚರ್ಚಿಸಿದಂತಹ ಲಿಟರೇಚರ್ ಆಫ್ ಆಕ್ಸನ್ ಹಾಗೂ ಲಿಟರೇಚರ್ ಆಫ್ ಪ್ರೊಟೆಸ್ಟ್ ಎಂಬಂತಹ ಅಭಿವ್ಯಕ್ತಿಯ ಮಾದರಿಗಳು ಅದಾಗಲೇ ಕುವೆಂಪು ಅವರಲ್ಲಿ ಅವತರಿಸಿಬಿಟ್ಟಿದ್ದವು.

ಹಾಗಾಗಿಯೇ ಕುವೆಂಪು ಅವರಿಗೆ ಅಭಿವ್ಯಕ್ತಿ ಎಂಬುದು ಮೂಲಭೂತವಾಗಿ ಸಾಮಾಜಿ-ಸಾಂಸ್ಕೃತಿಕ ತಾರತಮ್ಯಗಳನ್ನೂ ಹಾಗೂ ಅಧಿಕಾರ ಸಂಬಂಧದ ವಿನ್ಯಾಸಗಳನ್ನು ಪ್ರಕಟಿಸುವ ಕುರುಹುವಾಗಿ ಪರಿಣಮಿಸಿತ್ತು. ಮಾತೆಂಬುದು ಜೋತೀರ್ಲಿಂಗ ಎನ್ನುವ ಈ ಹೇಳಿಕೆ ಎನ್ಲೈಟನ್ಮೆಂಟಿನ ರೂಪಕವಾಗಿದೆ (ಬೆಳಕು). ಈ ಗ್ರಹಿಕೆ ಕುವೆಂಪು ಅವರಲ್ಲಿ ಅತ್ಯಂತ ನಿಚ್ಚಳವಾಗಿಯೇ ಒಡಮೂಡಿದೆ.

ಮಾತೆಂಬುದೇ ವಿಮೋಚನೆಯ ಹಾದಿ ಎಂಬುದನ್ನು ಬಲವಾಗಿ ನಂಬಿದ್ದ ಕುವೆಂಪು ಅವರು ಭಾಷೆಯ ಗ್ರಹಿಕೆ (ಅಂತಸ್ಥನೆಲೆ) ಮತ್ತು ಅಭಿವ್ಯಕ್ತಿ (ಅಸ್ಮಿತೆಯ ನೆಲೆ) ಎಂಬೀ ಎರಡೂ ಆಯಾಮಗಳನ್ನು ಬಹಳ ಖಚಿತವಾಗಿ ತಮ್ಮ ಸಾಹಿತ್ಯದಲ್ಲಿ ನೆಲೆಗೊಳಿಸಿದ್ದರು. ಇವರ ಅಭಿವ್ಯಕ್ತಿಯ ಮಾದರಿಗಳು ಪ್ರಕಟಗೊಂಡಿರುವುದು ಪ್ರತಿಮೆ, ರೂಪಕ ಹಾಗೂ ಸಾಂಕೇತಿಕವಾದದ್ದು ಎಂದು ಮೇಲ್ನೋಟದಲ್ಲಿ ಗುರುತಿಸಿದರೂ, ಈ ವಿನ್ಯಾಸವು ಈಗಾಗಲೇ ಹೇಳಿದಂತೆ ಪ್ರತಿಮಾ ವಿಧಾನದ ಮಾದರಿಯಾಗಿದೆ.

ಈ ಮಾದರಿಯನ್ನು ಮೆಟಾನಮಿಕ್-ಮೆಟಾಫರಿಕ್ (ರೋಮನ್ ಯಾಕೋಬ್ಸನ್ ಅವರ ಪರಿಕಲ್ಪನೆಗಳು) ಮಾದರಿಗಳ ಸಹಯೋಗದಿಂದ ನೆಲೆಗೊಂಡ ದೃಷ್ಟಿಕೋನವನ್ನಾಗಿ ಇವರ ಅಭಿವ್ಯಕ್ತಿಯಲ್ಲಿ ನೋಡಬಹುದು. ಈ ಬಗೆಯ ಸಂಕಥನವನ್ನು ಕಟ್ಟುವ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾದದ್ದು ಎಂಬುದು ಇಲ್ಲಿ ಗೋಚರಿಸುತ್ತದೆ.

ಕಥೆ ನಿನ್ನದಾಡೊಡಂ..ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ ಕೃತಿಯೆತ್ತಿ” ಹಾಗೂ “ಇತಿಹಾಸಮಲ್ತು, ಕಥೆಯಲ್ತು ಕಥೆ ತಾಂ ನಿಮಿತ್ತಮಾತ್ರಂ” ಎಂಬೀ ಕುವೆಂಪುವರ ಹೇಳಿಕೆಗಳು ಅವರ ಸಾಹಿತ್ಯದ ದಾರ್ಶನಿಕತೆಯನ್ನು ವಿವರಿಸುತ್ತವೆ. ಈ ದಾರ್ಶನಿಕತೆಯ ಆಕೃತಿಯನ್ನು ನಿರ್ಮಿಸಲು ಹೊಸ ಭಾಷೆ ಮತ್ತು ಪರಿಭಾಷೆಯನ್ನು ಕುವೆಂಪು ಅವರು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿ ಬಳಸಿಕೊಂಡರು.

ಕುವೆಂಪು ಅವರೇ ಹೇಳಿಕೊಂಡಂತೆ, ದರ್ಶನ ಮುಖ್ಯವೇ ಹೊರತು ಕತೆಯಲ್ಲ. ಕಥೆ, ಇತಿಹಾಸ, ಬಹಿರ್ಘಟನೆ ಇವೆಲ್ಲ ಜಡವಾದರೆ ದರ್ಶನವೊಂದೇ ಚೈತನ್ಯ. ಜಡವನ್ನು ಚೈತನ್ಯವನ್ನಾಗಿ ಮಾರ್ಪಡಿಸುವ ಈ ಹಂಬಲದಲ್ಲಿ ಭಾಷೆಯನ್ನು ಒಂದು ಪ್ರಮುಖ ಅಸ್ತ್ರವನ್ನಾಗಿಯೇ ಇವರು ಬಳಸಿಕೊಂಡರು ಎನ್ನುವುದು ನನ್ನ ಅಭಿಮತ.

ಅಂದರೆ ಕುವೆಂಪು ಅವರ ಕ್ರಿಟಿಕಲ್ ಡಿಸ್ಕೋರ್ಸಗಳು ಅಂಚಿನ ವ್ಯಕ್ತಿ/ಸಮೂಹಗಳ ಅಸ್ತಿತ್ವ, ಅಸ್ಮಿತೆ, ಸಬಲೀಕರಣವನ್ನು ಕುರಿತು ನಿಗಾವಹಿಸುತ್ತವೆ. ವಸಾಹತುಶಾಹಿ ಹಾಗೂ ವೈದಿಕಶಾಹಿ ಪ್ರಭಾವಕ್ಕೆ ಒಳಗಾಗಿದ್ದ ಪ್ರತಿಯೊಂದು ಸಮುದಾಯವು ಆಯಾ ಪ್ರಭಾವದಿಂದ ಹೊರಬರದೇ, ಅದು ನೆಲೆಗೊಳಿಸಿರುವ ಅಧಿಕಾರ ಸಂರಚನೆಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ ವಸಾಹತುಶಾಹಿ/ವೈದಿಕಶಾಹಿಗೆ ಒಳಗಾಗಿದ್ದ ಸಮೂಹಗಳು ಕಿಳರಿಮೆ ಹಾಗೂ ಪರಾವಲಂಬನೆಯಿಂದ ಬಳಲುತ್ತಿರುತ್ತವೆ.

ಹಾಗಾಗಿಯೇ ವಸಾಹತುಶಾಹಿ ಸಂದರ್ಭದಲ್ಲಿ ನೆಲೆಗೊಂಡಿದ್ದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ರಚನೆಗಳು ಇವತ್ತು ವಸಾಹತೋತ್ತರ ಸನ್ನಿವೇಶದಲ್ಲಿಯೂ ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕುಗಳನ್ನು ಸೋಂಕಿಸಿರುತ್ತವೆ. ಏಕೆಂದರೆ, ವಸಾಹತುಶಾಹಿ ಅಥವಾ ವೈದಿಕಶಾಹಿ ವಿರೋಧಿ ರಾಷ್ಟ್ರೀಯತೆಯ ಚಹರೆಗಳು ಕೂಡ ಬೂರ್ಜ್ವಾ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವ ಹಾಗೂ ಆ ಮುಖೇನ ವಸಾಹತುಶಾಹಿ ಸನ್ನಿವೇಶದಲ್ಲಿ ಅತ್ಯಂತ ಪ್ರಬಲವಾಗಿದ್ದ ಸಾಮಾಜಿಕ ರಾಜಕೀಯ ಅಸಮಾನತೆಗಳು ಮರುಹುಟ್ಟು ಪಡೆಯುತ್ತವೆ ಎಂಬುದನ್ನೂ ಇಲ್ಲಿ ಕಾಣಬಹುದು.

ಈ ಒಟ್ಟು ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ಒಂದು ತಾತ್ವಿಕ ಚೌಕಟ್ಟನ್ನೊಂದು ಕುವೆಂಪು ಅವರು ಹೇಗೆ ರೂಪಿಸಿದ್ದಾರೆ ಅನ್ನುವುದನ್ನು ಅವರ ಇಡೀ ಅಭಿವ್ಯಕ್ತಿಯ ಮೂಲಕ ನಾವು ಅರಿಯಬಹುದಾಗಿದೆ. ಬದುಕಿನ ಯಾವ ಆಯಾಮವನ್ನು ಸಾಹಿತ್ಯ ಕೃತಿಯ ಮೂಲಕ ಪ್ರಚುರಪಡಿಸಬೇಕು ಎನ್ನುವ ಸಾಂಸ್ಕೃತಿಕ ರಾಜಕಾರಣದ ಸ್ಪಷ್ಟ ಕಲ್ಪನೆ ಕುವೆಂಪು ಅವರಿಗಿತ್ತು. ಸೃಜನಶೀಲ ಅಭಿವ್ಯಕ್ತಿಯ ಮೂಲಕವೇ ಸಮೂಹಗಳ ಎಲ್ಲ ಕಾಲದ ಬದುಕಿಗೂ ಅವಶ್ಯವಾಗುವ ವೈಚಾರಿಕ ಪಾತಳಿಯನ್ನಾಗಿ ಪರಿವರ್ತಿಸಿದ ದಾರ್ಶನಿಕ ಕುವೆಂಪು.

ಈ ಸಾಹಿತ್ಯಕ ಹಾಗೂ ವೈಚಾರಿಕ ನಿರ್ವಹಣೆಯನ್ನು ಭಾಷಿಕ ನಿಲುವುಗಳಿಂದ ಆಗು ಮಾಡಿರುವುದು ಅತ್ಯಂತ ಮಹತ್ವದ ತಿರುವು ಎಂಬುದನ್ನು ನಾವ್ಯಾರೂ ಅಲ್ಲಗಳೆಯುವಂತಿಲ್ಲ. ಅಂದರೆ ಹೊಸ ಜ್ಞಾನ ಸೃಷ್ಟಿಯೆನ್ನುವುದು ಕೇವಲ ಅನುಭವದ ಕ್ರೂಢೀಕರಣವಲ್ಲ ಬದಲಾಗಿ ಅದನ್ನು ಹೊಸ ನುಡಿಗಟ್ಟಿನ ಮೂಲಕ ಕಟ್ಟಿಕೊಡುವ ಬಗೆಯೇ ಮುಖ್ಯ. ಈ ಕೆಲಸವನ್ನು ಕುವೆಂಪು ಅತ್ಯಂತ ಸಮರ್ಥವಾಗಿ ಮಾಡಿರುತ್ತಾರೆ. ಕನ್ನಡ, ಕರ್ನಾಟಕ, ಕನ್ನಡಿಗರು ಎನ್ನುವ ಸಮೀಕರಣದ ಹಿಂದಿನ ಅತೀ ಸರಳೀಕೃತವಾದ ಗ್ರಹಿಕೆಯನ್ನು ಬುಡಮೇಲು ಮಾಡಿದ್ದಾರೆ.

ಈ ದೃಷ್ಟಿಯಿಂದಲೇ ಭಾಷೆ ಎನ್ನುವುದು ವಿಮೋಚನೆಯ ಅಸ್ತ್ರ ಎಂದು ಹೇಳಲಾಗುತ್ತದೆ. ಭಾಷೆ ಮತ್ತು ಭಾಷಿಕರ ಮನಸ್ಥಿತಿಯನ್ನು ಗೋಡೆಗಳ ಸ್ವರೂಪದಲ್ಲಿ ಕಲ್ಪಸಿಕೊಂಡಿರುವ ಸನ್ನಿವೇಶದಲ್ಲಿಯೇ ಅನಿಕೇತನದ ಕಲ್ಪನೆಯನ್ನು ಇವರು ರೂಪಿಸಿದರು. ಅಷ್ಟೆಯಲ್ಲದೇ ಲೌಕಿಕ ಮತ್ತು ಅಲೌಕಿಕ ಪರಿಕಲ್ಪನೆಗಳ ಮೂಲಕ ಬದುಕಿನ ಸಂವೇದನೆಯಲ್ಲಿ ಅಡಗಿಸಿದ್ದ ಡೈಕಾಟಮಿಯನ್ನು ನಿರಾಕರಿಸಿ, ಅವೆರಡನ್ನೂ ಮೇಳೈಸಿಕೊಂಡಿರುವುದೇ ಬದುಕು ಅನ್ನುವ ತಾತ್ವಿಕತೆಯನ್ನು ಇವರ ಸಾಹಿತ್ಯದಲ್ಲಿ ಕಾಣುತ್ತೇವೆ. ಅದಕ್ಕಾಗಿಯೇ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯಲ್ಲಿ ಹೇಳಿದ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ…” ಎಂಬೀ ಮಾತು ಬದುಕಿನ ದೊಡ್ಡ ದರ್ಶನವನ್ನು ಕೊಡುವ ಕೈವಲ್ಯವಾಗಿದೆ. ಆಲೋಚನೆ ಮತ್ತು ಭಾಷೆಗಳ ನಡುವಣ ಸಂಬಂಧದ ವಿಭಿನ್ನ ವಿನ್ಯಾಸಗಳು ಇಲ್ಲಿ ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ.

ಕಾಲದ ಬಿಕ್ಕಟ್ಟಿಗೆ ಕಾರಣವಾಗಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳು ಕುವೆಂಪು ಅವರ ಸಾಹಿತ್ಯದಲ್ಲಿ ಅಂತರ್ಗತವಾಗಿವೆ ಎನ್ನುವುದನ್ನು ಈ ಭಾಷಿಕ ವಿನ್ಯಾಸಗಳು ಪ್ರತಿಪಾದಿಸುತ್ತವೆ.

ಸಂವೇದನೆ ಮತ್ತು ಅಭಿವ್ಯಕ್ತಿಯ ರೂಪ ಇವುಗಳ ನಡುವೆ ಇರುವ ಭಾಷೆಯ ಪಾತ್ರ ಹೇಗೆ ಬದಲಾಗಬೇಕು ಎನ್ನುವುದನ್ನು ಕುವೆಂಪು ಅವರಲ್ಲಿ ನೋಡಬಹುದು. ಅಂದರೆ ಭಾಷೆಯ ಜವಾಬ್ದಾರಿ, ಸೂಕ್ಷ್ಮತೆ ಹಾಗೂ ಬದ್ಧತೆ ಏನು? ಅದನ್ನು ನಾವು ರೂಪಿಸುವ ಬಗೆ ಯಾವುದು? ಸಮೂಹಗಳ ಬದುಕು ನೆಲೆಗೊಳ್ಳಲು ಭಾಷೆಯ ಪಾತ್ರ ಎಂತಹದು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಕುವೆಂಪು ಅವರಲ್ಲಿ ದೊರೆಯುತ್ತವೆ. ಈ ತಾತ್ವಿಕತೆಯನ್ನು ಅರಿಯಲು ಭಾಷೆ ಮತ್ತು ಸಾಹಿತ್ಯಗಳ ನಡುವಣ ಸಂಬಂಧವನ್ನು ಅರಿಯುವುದು ಅವಶ್ಯ. ಸಾಹಿತ್ಯ ಪಠ್ಯ ಸ್ವಭಾವತ ವಿಶಿಷ್ಟವಾಗಿರುವಂತಹದು.

ಇಲ್ಲಿ ಸಾಹಿತ್ಯ ಮತ್ತು ಭಾಷೆಗಳ ನಡುವಣ ವಿಶಿಷ್ಟ ಸಂಬಂಧ ಎಂತಹದು ಎನ್ನುವುದನ್ನು ಅರಿಯುವುದಕ್ಕೆ ಬೇಕಾದ ಇಲ್ಲವೇ ಪರಿಭಾವಿಸುವುದಕ್ಕೆ ಬೇಕಾದ ಅವಕಾಶವೂ ವ್ಯಕ್ತವಾಗುತ್ತದೆ. ಅಂದರೆ ಸಾಹಿತ್ಯದ ಮೂಲಕ ಏರ್ಪಡುವ ಯಾವುದೇ ಬಗೆಯ ಅನುಭವ ಹಾಗೂ ಅರಿವು ಇಲ್ಲವೇ ತಿಳಿವು ನಮಗೆ ಒಂದು ತಾತ್ವಿಕ ವಿನ್ಯಾಸವಾಗಿ ಭಾಷೆಯ ಮೂಲಕವೇ ಲಭ್ಯವಾಗುತ್ತವೆ. ಇಲ್ಲಿ ಭಾಷೆ ಅತ್ಯಂತ ಪ್ರಾಥಮಿಕ ವಿದ್ಯಮಾನವಾಗಿದೆ. ತಿಳಿವೊಂದು ಮೈದಾಳುವ ಸನ್ನಿವೇಶ ಹಾಗೂ ಸಂಬಂಧಗಳು ವಿಭಿನ್ನ ನೆಲೆಯಲ್ಲಿ ಅಸ್ತಿತ್ವದಲ್ಲಿರುತ್ತವೆ.

ಅಂದರೆ ಭಾಷಾಶಾಸ್ತ್ರ ಮತ್ತು ಇತರ ಜ್ಞಾನಶಿಸ್ತುಗಳ ನಡುವಣ ಸಂಬಂಧದಲ್ಲಿ ಈ ವಿನ್ಯಾಸವನ್ನು ಮನಗಾಣಬಹುದು. ಚರಿತ್ರೆ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮೊದಲಾದ ಈ ಎಲ್ಲ ವಲಯಗಳಲ್ಲಿ ಮೈದಾಳುವ ತಿಳಿವು ಭಾಷೆಯನ್ನೇ ನೆಲೆಯಾಗಿಸಿಕೊಂಡಿರುತ್ತದೆ. ಏಕೆಂದರೆ, ಭಾಷಾಕೇಂದ್ರಿತ ವಾಸ್ತವಗಳು, ಸನ್ನಿವೇಶಗಳು, ನಿರೂಪಣೆ ಮುಂತಾದವುಗಳನ್ನು ಪರಿಶೀಲಿಸುವ ಇಲ್ಲವೇ ವಿಶ್ಲೇಷಿಸುವ ಮೂಲಕವೇ ತಿಳಿವಿನ ಸಾಧ್ಯತೆಯನ್ನು ನಿಚ್ಚಳವಾಗಿ ಅರಿಯಬಹುದು.

ಆದರೆ ದಿನನಿತ್ಯದ ಮಾತುಕತೆ, ಬದುಕಿನ ವ್ಯವಹಾರಗಳು, ಸಾಹಿತ್ಯ ಇಲ್ಲವೇ ಇನ್ನ್ಯಾವುದೇ ಜ್ಞಾನಶಿಸ್ತಿನಷ್ಟು ಸಂಕೀರ್ಣವಾಗಿರುವುದಿಲ್ಲ. ಅಂದರೆ ಯಾವುದೇ ಸಂಕಥನ ಓದು ಮತ್ತು ಭಾಷಾಶಾಸ್ತ್ರಗಳ ನಡುವೆ ಏರ್ಪಡುವಷ್ಟು ಸಂಕೀರ್ಣತೆ, ನಮ್ಮ ದಿನದ ಮಾತುಕತೆಗಳು ಗಹನತೆಯನ್ನು ಪಡೆದುಕೊಳ್ಳದೇ, ಸಹಜಸ್ಥಿತಿಯಲ್ಲಿಯೇ ತಮ್ಮ ಗುರಿ ಉದ್ದೇಶಗಳನ್ನು ಪೊರೈಸುತ್ತವೆ.

ಬದುಕಿನ ಇಂತಹ ಸಹಜ ಮಾತುಕತೆ, ಅನುಭವ ಅಥವಾ ನಿರೂಪಣೆಗಳನ್ನು ಲಿಂಗ್ವಿಸ್ಟಿಕ್ ಪ್ರ‍್ಯಾಗ್ಮಾಟಿಸಂ ಮತ್ತು ಸಂಕಥನ ವಿಶ್ಲೇಷಣೆಯ ಚೌಕಟ್ಟಿನಲ್ಲಿಟ್ಟು ನೋಡಿದರೆ, ಸಾಹಿತ್ಯ ಪಠ್ಯಗಳಲ್ಲಿರುವ ನಿರೂಪಣೆಗಳಷ್ಟೇ, ಇವು ಕೂಡ ಗಹನವಾಗಿ/ಗಂಭೀರವಾಗಿ ಇರುತ್ತವೆ ಎನ್ನುವ ವಾಸ್ತವವನ್ನು ಮನಗಾಣುತ್ತೇವೆ. ಬದುಕಿನ ದೈನಂದಿನ ದಂದುಗವೇ ಒಂದು ತಾತ್ವಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪರಿಪ್ರೇಕ್ಷ್ಯದಲ್ಲಿ ನೆಲೆಗೊಂಡು ಪ್ರಕಟಗೊಳ್ಳುತ್ತದೆ. ಆದ್ದರಿಂದ ಸಾಹಿತ್ಯ ಪಠ್ಯಗಳಲ್ಲಿ ಅಡಕವಾಗಿರುವ ಅನುಭವ ವಿಶೇಷವಾಗಿ ನಮ್ಮ ಬದುಕಿನ ದಾರ್ಶನಿಕತೆಯಾಗಿ ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..

Published

on

  • ರುದ್ರಪ್ಪ ಹನಗವಾಡಿ

ಮಧ್ಯೆ ನಂಜನಗೂಡು ಪಕ್ಕದ ತಾಲ್ಲೂಕಾದ ಗುಂಡ್ಲುಪೇಟೆಯಿಂದ ರಾಜಕಾರಣಿಯಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ತೆಗೆಸಿ ಗ್ರಾಮೀಣ ಜನರಿಗೆ ಸ್ವಚ್ಛ ಕುಡಿಯುವ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರು. ಜನಪರ ಮಂತ್ರಿಗಳೂ ಆಗಿದ್ದರು.

ಗುಂಡ್ಲುಪೇಟೆಯಲ್ಲಿ ಭೂಸ್ವಾಧೀನ ಪ್ರಕರಣದಲ್ಲಿ ತಮ್ಮ ಸಂಬಂಧಿಕರೊಬ್ಬರ ಜಮೀನಿಗೆ ತಿರುಗಾಡಲು ದಾರಿಗಾಗಿ ಭೂಸ್ವಾಧೀನಪಡಿಸಲು ಹಿಂದಿನ ಎಸಿ ಅವರ ಅಳಿಯಂದಿರೇ ಆಗಿದ್ದ ಎಸ್.ಎ. ಸಾದಿಕ್ ಅವರು ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ರ‍್ಕಾರಕ್ಕೆ ಸಲ್ಲಿಸಿದ್ದರು. ಆದರೆ ಪುನಃ ಅದು ವಿಚಾರಣೆಗೆ ಬಂದಾಗ ಈ ಭೂಸ್ವಾಧೀನವು ಸಾರ‍್ವಜನಿಕರ ಹಿತ ಕಾಯುತ್ತಿಲ್ಲವೆಂದು ಮದನ್ ಗೋಪಾಲ್ ಅವರು ಆ ಪ್ರಸ್ತಾವನೆಯನ್ನು ರದ್ದುಗೊಳಿಸಲು ಸರ‍್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಭೂಸ್ವಾಧೀನ ಪ್ರಕರಣವನ್ನು ಮಂತ್ರಿಗಳ ಸಲಹೆ ಮೇರೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ನಂತರ ಅದನ್ನು ಕೈಬಿಟ್ಟ ಬಗ್ಗೆ ನಜೀರ್ ಸಾಬ್ ಅವರು ಎಸಿ ಮದನ್ ಗೋಪಾಲ್ ಮೇಲೆ ಕೆಂಡಾಮಂಡಲವಾಗಿದ್ದರು. ಎಷ್ಟೇ ಅನುಭವೀ, ನಿಸ್ಪೃಹ ರಾಜಕಾರಣಿಯಾಗಿದ್ದರೂ ನಜೀರ್ ಸಾಬ್ ಅವರು ತಾವು ಹೇಳಿದ ಕೆಲಸ ಮಾಡದ ನೌಕರ ಎಸಿ ಮದನ್ ಗೋಪಾಲ್ ಮೇಲೆ ಕಂದಾಯ ಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿ ಕೂಗಾಡಿದ್ದರು.

ಇದೇ ಕಾರಣಕ್ಕಾಗಿ ಮದನ್ ಗೋಪಾಲ್ ಅವರನ್ನು ಕೆಲವೇ ದಿನಗಳಲ್ಲಿ ನಂಜನಗೂಡು ಉಪ ವಿಭಾಗದಿಂದ ಬೇರೆಡೆಗೆ ರ‍್ಗಾವಣೆ ಕೂಡ ಮಾಡಲಾಗಿತ್ತು. ಅವರ ವರ್ಗಾವಣೆಯನ್ನು ವಿರೋಧಿಸಿ ಸರ‍್ವಜನಿಕರು, ನಂಜಗೂಡು, ಗುಂಡ್ಲುಪೇಟೆಗಳಲ್ಲಿ ಯಶಸ್ವಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಅವರ ವರ‍್ಗಾವಣೆ ಆಗಿ ನಂತರ ಮೂರು ತಿಂಗಳಲ್ಲಿ ಯೋಗೇಂದ್ರ ತ್ರಿಪಾಠಿ ಬಂದರು. ಈ ನಡುವೆ ನಾನು, ನಂತರ ಮಂಜುನಾಥ್ ನಾಯಕ್ ಹಾಗೂ ಶಿಕ್ಷಣರ‍್ಥಿ ಎಸಿಯಾಗಿದ್ದ ಕೆ. ಶಿವರಾಂ ಅವರು ಸುಮಾರು ಮೂರು ತಿಂಗಳ ಕಾಲ ಚಾರ್ಜ್ನಲ್ಲಿದ್ದೆವು. ಮದನ್ ಗೋಪಾಲ್ ಅವರು ವೈಯಕ್ತಿಕವಾಗಿ ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದರು. ಆದರೆ ಚುನಾಯಿತ ಪ್ರತಿನಿಧಿಗಳ ಜೊತೆ ಅತಿರೇಕದ ನೇರ ನೇರ ಹಣಾಹಣಿ ಮಾಡಿಕೊಂಡು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳು ಹಿನ್ನೆಲೆಗೆ ಸರಿಯುತ್ತಿದ್ದವು.

ಯೋಗೇಂದ್ರ ತ್ರಿಪಾಠಿಯವರು ಬರುವ ವೇಳೆಗಾಗಲೇ ನನ್ನ ನಂಜನಗೂಡು ತಾಲ್ಲೂಕ್ ಆಡಳಿತದಲ್ಲಿ ಒಂದು ವರ‍್ಷಕ್ಕೂ ಹೆಚ್ಚು ಸಮಯ ಕಳೆದಿದ್ದೆ. ಹಾಗಾಗಿ ತ್ರಿಪಾಠಿಯವರ ಜೊತೆ ಕೆಲಸ ಕಾರ‍್ಯಗಳು ಸಲೀಸಾಗಿ ಸಾಗುತ್ತಿದ್ದವು. ಈ ಮೊದಲು ಎಸಿ ಶಿಕ್ಷಣರ‍್ಥಿಯಾಗಿದ್ದ ಕೆ. ಶಿವರಾಂ ಅವರು ಅನೇಕ ಮೌಖಿಕ ಆದೇಶಗಳನ್ನು ಹೇಳಿ ಮಾಡುವಂತೆ ನನಗೆ ನಿರ‍್ದೇಶನ ನೀಡುತ್ತಿದ್ದರು. ನಾನು ಖುದ್ದು ಭೇಟಿ ಮಾಡಿ ಅವರು ಹೇಳಿದ ಕೆಲಸಗಳನ್ನು ಮಾಡಲಿಕ್ಕಾಗದ ಕಾರಣದ ವಿವರ ನೀಡಿದರೂ ಸಮಾಧಾನಗೊಳ್ಳದೆ, ಜನರೆದುರಿಗೆ ಎಸಿ ಮಾಡಲು ಹೇಳಿದರೂ ತಹಸೀಲ್ದಾರ್ ಮಾಡದೆ ತಮ್ಮ ವಿರುದ್ಧವಿದ್ದಾರೆಂಬ ಆಭಾವನೆ ಬರುವಂತೆ ನಡೆದುಕೊಳ್ಳುತಿದ್ದರು. ಅವರಿನ್ನೂ ಶಿಕ್ಷಣರ‍್ಥಿಗಳಾಗಿದ್ದರೂ ಆಗಲೇ ತನಗೆಲ್ಲ ಗೊತ್ತು ಎಂಬ ಅಹಂನಿಂದ ವರ‍್ತಿಸುತ್ತಿದ್ದ ಕಾರಣ ಬಹುಬೇಗ ನನ್ನ ಅವರ ನಡುವೆ ವಿಶ್ವಾಸದ ಕೊರತೆಯಾಗಿ, ಏನಾದರೂ ಮಾಡಬೇಕೆಂದರೆ ಲಿಖಿತ ಆದೇಶ ಕಳಿಸಲು ಅವರ ಮ್ಯಾನೇಜರ್ ಅವರಿಗೆ ನಾನು ದೂರವಾಣಿ ಮುಖಾಂತರ ಹೇಳುತ್ತಿದ್ದೆ. ಆ ನಂತರ ಮತ್ತೆ ಕೆಲವು ದಿನಗಳಲ್ಲಿ ಅವರನ್ನು ಬೇರೆ ತಾಲ್ಲೂಕಿಗೆ ತರಬೇತಿಗಾಗಿ ಕಳಿಸಿದ ಕಾರಣ ನನ್ನ ಮನಸ್ತಾಪ ಅಲ್ಲಿಗೆ ಮುಗಿದಿತ್ತು. ಆದರೆ ಮುಂದೆ ಅನೇಕ ಬಾರಿ ಅವರೊಡನೆ ಒಡನಾಡುವ ಸಂರ‍್ಭದಲ್ಲಿ ಇದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸರಳವಾಗಿ ನಡೆಸಿಕೊಂಡ ಕಾರಣದಿಂದಾಗಿ ಅವರ ಬಗ್ಗೆ ನನ್ನಲ್ಲಿದ್ದ ಕಹಿ ಕರಗಿ ಸಹಜತೆ ಮೂಡಿದೆ.

ನನ್ನ ಕಛೇರಿ ಕೆಲಸಗಳ ಜೊತೆ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ಮೈಸೂರಿನ ಸಮಾಜವಾದಿ ಗೆಳೆಯರ ಜೊತೆ ಚರ್ಚಿಸಿ ಡಾ. ಎಲ್. ಬಸವರಾಜ್, ಸುಜನಾ, ಕೆ.ಎಸ್. ಭಗವಾನ್, ಕೆ. ರಾಮದಾಸ್ ಅವರನ್ನು ಕರೆಸಿ ನಮ್ಮ ತಾಲ್ಲೂಕಿನಲ್ಲಿ ಭಾಷಣ ಮಾಡಿಸುತ್ತಿದ್ದೆ. ಡಿಎಸ್‌ಎಸ್, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಅನೇಕ ಮಿತ್ರರು ನನ್ನ ಒಡನಾಟದಲ್ಲಿದ್ದರು.

ಈಗ ಹೆಸರಾಂತ ಸಾಹಿತಿ ಮತ್ತು ನನ್ನ ಮಿತ್ರನಾಗಿದ್ದ ಮಾದೇವನ ಊರಾದ ದೇವನೂರಿಗೂ ಹೋದಾಗ ಅವರ ಮನೆಗೂ ಹೋಗಿ ಬಂದಿದ್ದೆ. ಕೃಷ್ಣಪ್ಪ – ಇಂದಿರಾ ಅವರು ಮಕ್ಕಳಾದ ಶಾಲಿನಿ, ಸೀಮಾ ಅವರುಗಳ ಜೊತೆ ನಂಜನಗೂಡಿಗೆ ಬಂದು ಉಳಿದು ನಂಜುಂಡೇಶ್ವರ ದೇವಸ್ಥಾನದ ಹಬ್ಬದಲ್ಲಿ ಭಾಗವಹಿಸಿದ ನೆನಪು ಈಗಲೂ ಹಸಿರಾಗಿದೆ.

ಡಿಎಸ್‌ಎಸ್‌ನ ರಾಜ್ಯ ಮಟ್ಟದ ಕಲಿಕಾ ಸಮಾವೇಶವನ್ನು (study camp ) ನಂಜನಗೂಡು ತಾಲ್ಲೂಕಿನಲ್ಲಿನ ವಿದ್ಯಾಪೀಠದಲ್ಲಿ ಕೃಷ್ಣಪ್ಪನವರು ಸುಮಾರು ಒಂದು ವಾರದ ಕಾಲ ನಡೆಸಿದ್ದರು. ಆಗ ರಾಜ್ಯದ ಮೂಲೆಮೂಲೆಗಳಿಂದ ಬಂದು ಡಿಎಸ್‌ಎಸ್‌ನ ಹೋರಾಟದ ರೂಪುರೇಷೆಗಳನ್ನು ಚರ್ಚಿಸುತ್ತಿದ್ದುದನ್ನು ನಾನು ಭಾಗವಹಿಸದಿದ್ದರೂ ತಿಳಿದುಕೊಳ್ಳುತ್ತಿದ್ದೆ.

ಡಿಎಸ್‌ಎಸ್‌ನ ಅಂದಿನ ಬಹುತೇಕ ರ‍್ಚೆಗಳು ರ‍್ಕಾರದ ನಿಷ್ಕಿçಯತೆ, ದಲಿತ ಶಾಸಕರುಗಳ ಗುಲಾಮಿತನ, ದಲಿತರ ಮೇಲಿನ ದರ‍್ಜನ್ಯ, ದಲಿತರ ಕರ‍್ಯಕ್ರಮಗಳಲ್ಲಿನ ನಿಧಾನಗತಿ ಅನುಷ್ಠಾನ, ಇಂತಹವೇ ರ‍್ಚೆಯಾಗುತ್ತಿದ್ದವು. ಅಂತಹ ಸಂಘಟನೆಗೆ ತಹಸೀಲ್ದಾರನಾಗಿ ಭಾಗಿಯಾಗುವುದು, ಸಹಕಾರ ನೀಡುವುದು ಸರಿಯಲ್ಲವೆಂದು ನನಗೆ ನಮ್ಮ ಹಿರಿಯ ಸಿಬ್ಬಂದಿ ಹೇಳುತ್ತಿದ್ದರೂ ನಾನು ನನ್ನ ಇತರೆ ಸಾಮಾನ್ಯ ಕೆಲಸಗಳಲ್ಲಿ ಹಿಂದೆ ಬೀಳದೆ ಮತ್ತು ಇತರೆ ಸಾರ‍್ವಜನಿಕರಲ್ಲೂ ಯಾವುದೇ ತಗಾದೆ ಬಾರದಂತೆ ಕೆಲಸ ನಿರ‍್ವಹಿಸಿದ್ದರಿಂದ ಬೇರಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಆಗ ನಂಜನಗೂಡಿನವರೇ ಆಗಿದ್ದ ಡಿಎಸ್‌ಎಸ್‌ನಲ್ಲಿ ಇದ್ದವನೊಬ್ಬ ಮಾದೇವ, ಕೃಷ್ಣಪ್ಪನವರನ್ನು ವೈಯಕ್ತಿಕವಾಗಿ ದ್ವೇಷಿಸುವ ಮನಸ್ಸಿನ ವ್ಯಕ್ತಿ. ನಮ್ಮ ಕಛೇರಿಯ ಸರ‍್ವೆಯರ್ ನೌಕರನನ್ನು ಸಹಾಯ ಪಡೆದು, ನಮ್ಮ ಕಛೇರಿಯ ಬಗ್ಗೆ ಕರಪತ್ರ ಹಾಕಿ `ಭ್ರಷ್ಟಾಚಾರದ ಕೂಪ ತಾಲ್ಲೂಕು ಕಛೇರಿ’ ಎಂದೆಲ್ಲ ದೂರಿದ್ದರು. ಆದರೆ ಅದಕ್ಕೆಲ್ಲ ಕುಮ್ಮಕ್ಕು ಕೊಟ್ಟವನು ನನ್ನ ಕಛೇರಿಯ ಸರ‍್ವೆಯರ್ ಸಂಬಂಧಿ ಡಿ.ಎಸ್.ಎಸ್.ನಲ್ಲಿಯೇ ಇದ್ದವನೊಬ್ಬ ಎಂದು ನನಗೆ ತಿಳಿದು ಬಂತು.

ಜೊತೆಗೆ ನಮ್ಮ ಕಚೇರಿಯ ರ‍್ವೇಯರ್ ದೈನಂದಿನ ಕೆಲಸದಲ್ಲಿ ನಿರ‍್ಲಕ್ಷ್ಯ ತೋರುತ್ತಿದ್ದ ಕಾರಣದಿಂದ ನಾನು ಮೊದಲೇ ಅವನನ್ನು ಅಮಾನತ್ತುಗೊಳಿಸಿದ್ದೆ. ಆ ಕಾರಣ ಅವನು ನನ್ನ ಬಗ್ಗೆ ಮೊದಲೇ ಅಸಮಾಧಾನಗೊಂಡಿದ್ದ. ನಂತರದ ದಿನಗಳಲ್ಲಿ ನಾನೇನೂ ಹೇಳದಿದ್ದರೂ ಕರಪತ್ರ ಹಾಕಿದ ಬಗ್ಗೆ ಬಂದು ತನ್ನ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ. ಇದಕ್ಕೆಲ್ಲ ತನ್ನ ಭಾವ ಡಿಎಸ್‌ಎಸ್‌ನಲ್ಲಿರುವವನು ಕಾರಣ ಎಂದು ಹೇಳಿ ನನಗೆ ದಂಗುಬಡಿಸಿದ್ದ. ಇಂತಹ ವಿಷಯಗಳನ್ನೆಲ್ಲ ನಿಭಾಯಿಸುವ ಅನುಭವ ನನಗೆ ಇದ್ದುದರಿಂದ ಮತ್ತೇನು ಅದು ಬೆಳೆಯಲಿಲ್ಲ.

ನಂಜನಗೂಡಿನಲ್ಲಿ ನಾನಿರುವಾಗ ಪೋಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಪಿ.ಹೆಚ್. ರಾಣೆ, ಇಬ್ಬರು ಇನ್ಸ್ಪೆಕ್ಟರ್ ಮತ್ತು ನಾಲ್ಕು-ಐದು ಜನ ಸಬ್ ಇನ್ಸ್ಪೆಕ್ಟರ್‌ಗಳು ಇದ್ದರು. ನಾವೆಲ್ಲ ಊರಿನಲ್ಲಿರುವ ಯಾವುದೇ ಪ್ರತಿಷ್ಠಿತ ಮನರಂಜನೆಯ ಕ್ಲಬ್‌ಗಳಿಗೆ ಹೋಗುತ್ತಿರಲಿಲ್ಲ. ಅದರ ಬದಲು, ಪೋಲೀಸ್ ಸ್ಟೇಷನ್ ಬಳಿ ಇದ್ದ ವಿಶಾಲವಾದ ಮೈದಾನದಲ್ಲಿ ಬೆಳಗಿನ ಜಾವದಲ್ಲಿ ಬ್ಯಾಟ್‌ಮಿಂಟನ್, ಷಟಲ್ ಕಾಕ್ ಆಟ ಪ್ರಾರಂಭಿಸಿದ್ದೆವು. ಅಲ್ಲಿಗೆ ಕಂದಾಯ ಇಲಾಖೆಯಲ್ಲಿನ ವಿಎ, RI & ಸಬ್ ಇನ್ಸ್ಸ್ಪೆಕ್ರ‍್ಸ್ ಮತ್ತು ನನ್ನ ಬಿ.ಎ. ತರಗತಿಯ ಕ್ಲಾಸ್ ಮೇಟ್ ಆಗಿದ್ದ ನರಸಿಂಹಸ್ವಾಮಿ ಸೇರಿ ಒಂದೆರಡು ಘಂಟೆಗಳ ಕಾಲ ಆಟದಲ್ಲಿ ಕಳೆಯುತ್ತಿದ್ದೆವು. ಆಗಲೇ ತಾಲ್ಲೂಕಿನಲ್ಲಿನ ಸಮಸ್ಯೆಗಳನ್ನು ಸಾಂಧರ‍್ಭಿಕವಾಗಿ ಚರ‍್ಚಿಸಿ, ಶಾಂತಿ ಕಾಪಾಡಲು ಬೇಕಾದ ಕ್ರಮವಾಗಿ ಕೆಲವರನ್ನು ಒಂದೆರಡು ವಾರಗಳ ಕಾಲ ಸಬ್ ಜೈಲಿಗೆ ಕಳಿಸಲು ಕೋರುತ್ತಿದ್ದರು. ಇಲ್ಲವೇ ಪ್ರತಿ ವಾರವೂ ಹಾಜರಿರಲು ನೋಟಿಸ್ ನೀಡಿ ಬಾರದಿದ್ದಾಗ ದಸ್ತಗಿರಿ ಮಾಡಿ ತರಲು ನನ್ನಿಂದ ಅದೇಶ ಪಡೆದು ಕರೆತರುತ್ತಿದ್ದರು. ನಂತರ ವಿಚಾರಣೆ ಮಾಡಿ, ಒಳ್ಳೆಯ ನಡೆವಳಿಕೆಯ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದೆವು. ಇನ್ನು ಕೆಲವು ಭಾರಿ ಈ ಎಲ್ಲ ಅಖPಅ 107 ಪ್ರಕರಣದಲ್ಲಿದ್ದ ಆಪಾದಿತರನ್ನು, ಗ್ರಾಮ ಸಹಾಯಕರನ್ನು ಒಟ್ಟುಗೂಡಿಸಿ ನಮ್ಮ ಕಛೇರಿಯ ಆವರಣದಲ್ಲಿದ್ದ ಜಾಗದಲ್ಲಿ ಗಿಡ ನೆಡಲು ಬೇಕಾದ ಗುಂಡಿ ತೆಗೆಯಲು ತೊಡಗಿಸಿ ದಿನದ ಕೊನೆಯಲ್ಲಿ ಕೇಸು ಕರೆದು ಕೇಸನ್ನು ಮುಂದೂಡುತ್ತಿದ್ದೆನು. ಹೀಗಾಗಿ ತಾಲ್ಲೂಕಿನಲ್ಲಿ, ಜಾತಿ ಜಗಳಗಳಾಗಲೀ, ದೊಂಬಿಗಳಾಗಲೀ ಮಾಡಲು ಪುಂಡ ಪೋಕರಿಗಳಿಗೆ ಅವಕಾಶವಿರುತ್ತಿರಲಿಲ್ಲ.

ತಾಲ್ಲೂಕು ಮಟ್ಟದ ನಾಯಕರು

1986ರ ನಂತರ ಶಾಸಕರುಗಳ ಜೊತೆ ಜಿಲ್ಲಾ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ತಾಲ್ಲೂಕುಮಟ್ಟದಲ್ಲಿ ಹೆಜ್ಜಿಗೆ ರಾಮಯ್ಯ, ದೇವನೂರ ಸಿದ್ದಪ್ಪ, ಬಸವರಾಜ್, ಕಳಲೆ ಸಿದ್ದ ನಾಯಕ್, ಶಶಿಕಲಾ ನಾಗರಾಜ್ ಮತ್ತು ಶಶಿಕಲಾ ಬಾಲರಾಜ್ ಜೊತೆಗೆ ನಂಜನಗೂಡು ಟೌನ್‌ನಲ್ಲಿ ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರೂ ಇರುತ್ತಿದ್ದರು. ಇವರೆಲ್ಲ ಸಣ್ಣಪುಟ್ಟ ಕೆಲಸಗಳಿಗೆ ಶಿಫಾರಸ್ಸು ಮಾಡಲು ತಾಲ್ಲೂಕು ಕಛೇರಿಗೆ ಬರುತ್ತಿದ್ದರು. ಆಗುವ ಕೆಲಸ ಮಾಡುವುದರಲ್ಲಿ ವಿಳಂಬವಾಗದಂತೆ, ಆಗದಿರುವ ಕೆಲಸಗಳಿಗೂ ನನ್ನ ಮಟ್ಟದಲ್ಲೇ ಅವರಿಗೆ ವಿವರಿಸಿ ಹೇಳುತ್ತಿದ್ದೆ. ಅವರುಗಳು ಒಮ್ಮೊಮ್ಮೆ ಅದೇ ವಿಷಯಗಳನ್ನು ಶಾಸಕರುಗಳ ಹತ್ತಿರವೂ ಪ್ರಸ್ತಾಪಿಸಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ನನ್ನ ವಿವರಣೆ ಶಾಸಕರುಗಳಿಗೂ ಅದೇ ಆಗಿರುತ್ತಿತ್ತು. ಹಾಗಾಗಿ ಆಗುವ ಕೆಲಸಗಳಿಗೆ ಯಾವ ಶಿಫಾರಸ್ಸು ತಂದರೂ ಆಗುವುದಿಲ್ಲ ಎಂಬ ನಂಬಿಕೆ ಅವರಿಗೆಲ್ಲ ತಿಳಿದು ಬಂದಿತ್ತು.

ಗೃಹಮಂತ್ರಿಯಾಗಿದ್ದ ರಾಚಯ್ಯನವರು ಕರ‍್ನಾಟಕ ಕಂಡ ಹಿರಿಯ ಸಜ್ಜನ ರಾಜಕಾರಣಿ. ಅವರು ತಾಲ್ಲೂಕಿನಲ್ಲಿ ಪ್ರವಾಸ ಇರುವಾಗ, `ಇತರೆ ಇಬ್ಬರು ಶಾಸಕರುಗಳು ಯುವಕರಾಗಿದ್ದ ಕಾರಣ ಏನಾದರೂ ನಿನ್ನಿಂದ ತಪ್ಪು ಮಾಡಿಸಿ, ಮುಂದೆ ನೀನಿನ್ನು ಎಸಿ, ಡಿಸಿ ಆಗಬೇಕಾದವನು, ಎಚ್ಚರದಿಂದ ಕೆಲಸ ನರ‍್ವಹಿಸಬೇಕೆಂದು’ ಸಲಹೆ ನೀಡುತ್ತಿದ್ದರು. ನನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಸುಮಾರು 20 ವರ‍್ಷಗಳ ಅಂತರವಿದ್ದ ಅವರ ಮಾತು ನನಗೆ ನಿಜವಾದ ಕಳಕಳಿಯಿಂದ ಕೂಡಿದ ಮಾತಾಗಿತ್ತು. ಅವರಿಗೆ ಜನರಿಗೆ ಒಳ್ಳೆಯ ಆಡಳಿತ ನೀಡಿದರೆ ಸಾಕಾಗಿತ್ತು. ಮತ್ತಾವ ಒಳ ಒಪ್ಪಂದಗಳ ಮಾತು ಅವರ ಆಡಳಿತದಲ್ಲಿ ಸುಳಿಯುತ್ತಿರಲಿಲ್ಲ.

ಕಂದಾಯ ನೌಕರರ ದಿನಾಚರಣೆ

ವಿಧಾನಸಭೆ ಚುನಾವಣೆ ಆಗಿ ಮೂರು ರ‍್ಷವಾಗಿತ್ತು. ಜಿಲ್ಲಾ ಪರಿಷತ್ ಆಗತಾನೆ ಚುನಾವಣೆಗಳಾಗಿ ಹೊಸ ಸದಸ್ಯರುಗಳು ಆಯ್ಕೆಯಾಗಿದ್ದರು. ಮಾಮೂಲಿ ಕಂದಾಯ ಮತ್ತು ತಾಲ್ಲೂಕು ದಂಡಾಧಿಕಾರಿಯ ಕೆಲಸಗಳನ್ನು ಬಿಟ್ಟರೆ ಮತ್ತಾವ ಒತ್ತಡದ ಕೆಲಸಗಳು ಇರಲಿಲ್ಲ. ಹೀಗಿರುವಾಗ ಕಂದಾಯ ಅಧಿಕಾರಿಗಳು ರ‍್ಷಪರ‍್ತಿ ದುಡಿತದಲ್ಲೇ ಇದ್ದು, ಕಲೆ ಸಂಸ್ಕೃತಿ, ಸಂಗೀತದ ಬಗ್ಗೆ ಮುಖ ಮಾಡುವುದೇ ಇಲ್ಲ. ಈ ಬಗ್ಗೆ ನಾವ್ಯಾಕೆ ಇಡೀ ಜಿಲ್ಲೆಯ ನೌಕರರನ್ನು ಒಳಗೊಂಡಂತೆ 1-2ದಿನ ನಮ್ಮ ಕಂದಾಯ ನೌಕರರ ದಿನಾಚರಣೆ ಆಚರಿಸಬಾರದು ಎಂದು ನಮ್ಮ ಎಸಿ ತ್ರಿಪಾಠಿಯವರ ಜೊತೆ ಚರ‍್ಚಿಸಿ, ನಂತರ ಡಿಸಿಗೂ ಹೇಳಿದೆ.

ಎಲ್ಲ ತಹಸೀಲ್ದಾರ್ ಮಿತ್ರರೊಡನೆ ಕೂಡ ಮೌಖಿಕವಾಗಿ ಚರ‍್ಚಿಸಿ ಅವರ ಸಹಕಾರವನ್ನು ಕೋರಿದೆ. ಅದರಂತೆ, ವಿವಿಧ ಆಟಗಳ ಸ್ಪರ್ಧೆ, ಹಾಡುಗಾರಿಕೆ, ಕೊನೆಯ ದಿನದಲ್ಲಿ ಮಹಾಭಾರತದ ಕುರುಕ್ಷೇತ್ರದ ನಾಟಕ ಎಂದೆಲ್ಲ ತಯಾರಿಗಳು ನಡೆದವು. ಹುಣಸೂರು, ಮೈಸೂರು ಮತ್ತು ನಂಜನಗೂಡು ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕು ತಹಸೀಲ್ದಾರರು, ವಿಎ, ಆರ್‌ಐ ಹಾಗೂ ಕಛೇರಿ ಸಿಬ್ಬಂದಿ ಎಲ್ಲರೂ ಎಲ್ಲ ಆಟ ಪಾಠಗಳಲ್ಲಿ ಭಾಗವಹಿಸಿದ್ದರು. ಆಟಗಳಲ್ಲಿ ಕಬಡ್ಡಿ, ಬ್ಯಾಟ್ ಮಿಂಟನ್, ಷಟಲ್ ಕಾಕ್, ವಾಲಿಬಾಲ್, ಚೆಸ್ ಹೀಗೆಲ್ಲ ಸ್ರ‍್ಧೆಗಳನ್ನು ನರ‍್ವಹಿಸಲು ಎಇಓ ಅವರನ್ನು ಸಂರ‍್ಕಿಸಿ ಒಬ್ಬ ಕ್ರೀಡಾ ಅಧಿಕಾರಿಯನ್ನು ಕೋರಿದ್ದೆ. ಅವರು ಎಲ್ಲಾ ಕ್ರೀಡೆಗಳನ್ನು ವ್ಯವಸ್ಥೆಗೊಳಿಸಿ, ಆಡಿಸಿ ಬಹುಮಾನಿತರ ಪಟ್ಟಿ ನೀಡಿದ್ದರು. ನಿಯಮಿತ ಅಭ್ಯಾಸಗಳು ಇಲ್ಲದ ಆಟಗಾರರೊಬ್ಬರು ಕಬ್ಬಡಿ ಆಟದಲ್ಲಿ ಬಿದ್ದು ಅವರ ಕೈ ಮುರಿದಿತ್ತು. ಸದ್ಯ ಅವರನ್ನು ನಂಜನಗೂಡಿನಲ್ಲಿಯೇ ಉಪಚರಿಸಿ ಸುಧಾರಿಸುವಂತಾಯಿತು.

ಈ ಸಮಾರಂಭಕ್ಕೆ ಮೊದಲ ದಿನ ಎಲ್ಲಾ ಸ್ಪರ್ಧೆಗಳನ್ನು ನಡೆಸಿ ಎರಡನೇ ದಿನ ಸಮಾರೋಪ ಸಮಾರಂಭ ಮತ್ತು ನಾಟಕವಿತ್ತು. ಆಗ ಮೈಸೂರು ವಿಭಾಗಕ್ಕೆ ವಿಭಾಗಾಧಿಕಾರಿಗಳಾಗಿದ್ದ ನೀಲಕಂಠರಾಜು, ಡಿಸಿ ವಿ.ಪಿ. ಬಳಿಗಾರ್, ಹುಣಸೂರು ಎಸಿಯಾಗಿದ್ದ ಶಿವಲಿಂಗಮರ‍್ತಿ, ಮೈಸೂರು ಎಸಿ ಈಶ್ವರ್ ನಮ್ಮ ಎಸಿ ಯೋಗೇಂದ್ರ ತ್ರಿಪಾಠಿ ಎಲ್ಲ ಸಂತೋಷದಿಂದ ಭಾಗವಹಿಸಿದ್ದರು. ನಮ್ಮಲ್ಲಿದ್ದ 80 ಜನ ಗ್ರಾಮ ಸಹಾಯಕರಿಗೆ ವಿಶೇಷವಾದ ಸಮವಸ್ತ್ರ ಹೊಲಿಸಿ ಹೊಸ ಬೂಟುಗಳನ್ನು ಕೊಡಿಸಿ, ಅವರಿಗೆ ಪೋಲೀಸ್ ಪೇದೆಗಳಂತೆ ತರಬೇತಿಯನ್ನು ನೀಡಲು ನಮಲ್ಲಿಯೇ ಇದ್ದ ಕಸಬಾ ವಿಎ – ರಾಧಾಕೃಷ್ಣನಿಗೆ ಜವಾಬ್ದಾರಿ ನೀಡಿದ್ದೆ. ರಾಧಾಕೃಷ್ಣ VA ಆಗಿದ್ದರೂ ಒಬ್ಬ DSPಯಂತೆ ಪೊಲೀಸ್ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ. ಅವನ ಕೆಳಗೆ ತರಬೇತಿಗೊಂಡ ನಮ್ಮ ಗ್ರಾಮ ಸಹಾಯಕರು ಶಿಸ್ತಿನ ಪೊಲೀಸ್ ಪೇದೆಗಳಂತೆ ನಡೆದುಕೊಳ್ಳುತ್ತಿದ್ದರು.

ಸಮಾರಂಭ ಪ್ರಾರಂಭವಾಗುವ ಮುನ್ನ ನಮ್ಮ ಗ್ರಾಮ ಸಹಾಯಕರೆಲ್ಲ ಒಟ್ಟಿಗೆ ಸಮವಸ್ತ್ರದಲ್ಲಿದ್ದು, ಪೋಲೀಸ್ ಇಲಾಖೆ ನೀಡುವ ‘ಗಾರ್ಡ್ ಆಫ್ ಆನರ್’ನಂತೆ ಎಲ್ಲ ಅತಿಥಿಗಳಿಗೂ ಗೌರವ ವಂದನೆ ನೀಡಿದಾಗ ‘you have summoned police personnel also here’ ಎಂದು ಡಿವಿಸಿ ಉದ್ಘಾರ ತೆಗೆದರು. ‘ನೋ ಸರ್, ಇವರೆಲ್ಲ ನಮ್ಮ ತಾಲ್ಲೂಕಿನ ಗ್ರಾಮ ಸಹಾಯಕರು’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿ, ಪ್ರಶಂಸೆ ಕೂಡ ಮಾಡಿದ್ದರು. ಇಂತಹ ಕಂದಾಯ ದಿನಾಚರಣೆಯನ್ನು ನಾನು ಆಯೋಜಿಸಲು ಮುಂದಾಗಿದ್ದಕ್ಕೆ, ನರ‍್ವಹಿಸಿದ್ದಕ್ಕೆ ಡಿವಿಸಿ ಮೊದಲ್ಗೊಂಡು ಎಲ್ಲರೂ ಆಗ ನನ್ನನ್ನು ಪ್ರಶಂಸಿದರು.

ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮ ಎಸಿ ಯಾಗಿದ್ದ ತ್ರಿಪಾಠಿ ಅವರು ತುಂಬಾ ಖುಷಿಯಲ್ಲಿದ್ದರು. ಜೊತೆಗೆ ನಮ್ಮ ತಾಲ್ಲೂಕಿನ ಎಲ್ಲಾ ಸಿಬ್ಬಂದಿ ನಾವೆಲ್ಲ ಒಂದು ಕುಟುಂಬ ಎಂಬ ಭಾವನೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬ ಸದ್ಭಾವನೆ ಮೂಡುವಂತಾಗಿತ್ತು. ಕೊನೆಯಲ್ಲಿ ಕಲಿತು ಪ್ರರ‍್ಶಿಸಿದ ನಾಟಕದ ಪ್ರಥಮ ದೃಶ್ಯದಲ್ಲಿ ನಾನು ಕೃಷ್ಣನ ಪಾತ್ರಧಾರಿಯಾಗಿ ಹಾಡೊಂದನ್ನು ಹಾಡಿ ಪ್ರಾರಂಭವಾಗುವಂತೆ ನಾಟಕದ ನರ‍್ದೇಶನ ಮಾಡಿದ್ದ ಮೇಷ್ಟರು ವ್ಯವಸ್ಥೆ ಮಾಡಿದ್ದರು. ನಾನು ಕೃಷ್ಣನ ಪಾತ್ರದ ಪೋಷಾಕಿನಲ್ಲಿ ಹಾಡಿ ಸಂತೋಷಪಟ್ಟಿದ್ದು ಈಗ 35 ವರ‍್ಷಗಳ ನಂತರವೂ ಹಸಿರಾಗಿದೆ.(ಬರಹ:ರುದ್ರಪ್ಪ ಹನಗವಾಡಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಜಗಳೂರು ಕಾಟಮ್ಮ ; ಸಾಧನೆಯ ಹೆಗ್ಗುರುತುಗಳು

Published

on

ಶ್ರೀಮತಿ ಕಾಟಮ್ಮ
  • ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ದಾವಣಗೆರೆ ಜಿಲ್ಲೆಯ ಜಗಳೂರು ಸೀಮೆ ಬುಡಕಟ್ಟು ಸಮುದಾಯಗಳ ನೆಲೆವೀಡು, ತಾಜಾ ಜಾನಪದ ಸಂಸ್ಕೃತಿಯು ಹಾಸು ಹೊಕ್ಕಾದ ಸಮೃದ್ಧ ಹೊನ್ನ ಕಣಜ.

ಜಗಳೂರು ತಾಲೂಕಿನ ಹೆಗ್ಗುರುತಿನ ಊರಾದ ತೋರಣಗಟ್ಟೆಯ ಗೌಡ್ರ ಚಿಕ್ಕಪ್ಪ ಮತ್ತು ಗೌರಮ್ಮ ಇವರ ಪುತ್ರಿಯಾದ ಕಾಟಮ್ಮ ತನ್ನ ಬಾಲ್ಯದಲ್ಲೇ ಊರಿನ ಪರಿಸರಕ್ಕನುಗುಣವಾಗಿ ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ಊರ ದೇವರುಗಳ ಪರುವು ಉತ್ಸವಗಳನ್ನು ಕಣ್ಣುತುಂಬಿಸಿಕೊಳ್ಳುವಾಗ ವಾರಗಟ್ಟಲೆ ಜರುಗುತಿದ್ದ ಮದುವೆ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವಾಗ ಊರಿನ ಹಿರಿಯರು ಹಾಡುತಿದ್ದ ಸೋಬಾನೆ ಪದಗಳು ದೇವರ ಪದಗಳು ಕುಣಿತ ಮಣಿತಗಳ ಪದಗಳನ್ನು ಚಿತ್ತವಿಟ್ಟು ಆಲಿಸುತ್ತಲೇ ತಾನೂ ಅವುಗಳನ್ನು ಅಸ್ವಾದಿಸಿಕೊಂಡು ಸಹವರ್ತಿಯಾಗಿ ದನಿ ಸೇರಿಸಲು ಆರಂಭಿಸಿದರು.

ಹುಟ್ಟಿದ ಊರಿನಲ್ಲಿಯೇ ಬಾಲಪ್ಪನವರನ್ನು ವಿವಾಹವಾದ ಕಾಟಮ್ಮ ನಾಲ್ಕು ಮಕ್ಕಳ ತಾಯಿಯಾಗಿ ತುಂಬು ಸಂಸಾರವನ್ನು ನಿರ್ವಹಿಸುತ್ತಲೇ ತನ್ನ ಎದೆಯೊಳಗಿನ ಪದಗಳಿಗೆ ದನಿಯಾಗುತ್ತಾ ಬಂದರು. ತನ್ನ ಸೋದರಿ ಶಾಂತ ವೀರಮ್ಮ ಹಾಗೂ ಸಮೀಪದ ಬಂದುಗಳಾದ ಬಾಲಮ್ಮ, ಬಡಮ್ಮ ಮುಂತಾದವರ ತಂಡ ಕಟ್ಟಿಕೊಂಡು ಮದ್ಯ ಕರ್ನಾಟಕದ ಪ್ರಸಿದ್ಧ ಜಾನಪದ ಸಾಂಸ್ಕೃತಿಕ ವೀರರಾದ ಕಾಟಣ್ಣ, ದೊಡ್ಡಣ್ಣ, ಬಡಣ್ಣ, ಚಿಕ್ಕಣ್ಣ ಇವರ ಬಗ್ಗೆ ಸುದೀರ್ಘ ಕಥನ ಕಾವ್ಯಗಳನ್ನು ಕಟ್ಟಿ ನಿರರ್ಗಳವಾಗಿ ಹಾಡಬಲ್ಲವರಾಗಿದ್ದಾರೆ. ವಿಶೇಷವಾಗಿ ದಾವಣಗೆರೆ ಸೀಮೆಯಲ್ಲಿ ‘ಮಳೆ ಮಲ್ಲಪ್ಪ’ ನೆಂದೇ ಖ್ಯಾತನಾಮರಾಗಿ ಆರಾಧನೆಗೆ ಒಳಗಾಗಿರುವ ಅವಧೂತ ಪರಂಪರೆಯ ‘ಮೆಲ್ಲಜ್ಜಿ’ ನ ಬಗ್ಗೆ ಈ ತಾಯಿ ಕಟ್ಟಿಕೊಡುವ ಪದಗಳು ಬಹು ಪ್ರಸಿದ್ದಿ ಪಡೆದಿವೆ.

ಮೆಲ್ಲಜ್ಜ ಸುಮಾರು ನೂರಾ ಐವತ್ತು ವರ್ಷಗಳ ಹಿಂದೆ ತೋರಣಗಟ್ಟೆಯಲ್ಲಿ ಎಲ್ಲರಂತೆ ಬದುಕಿ ಬಾಳಿದ ವ್ಯಕ್ತಿ. ಆದರೆ ತನ್ನ ವಿಶಿಷ್ಟ ಆಧ್ಯಾತ್ಮಿಕ ಮನೋಪ್ರವೃತ್ತಿಯ ಅವಧೂತನಾಗಿ, ಹವಮಾನ ತಜ್ಞನಾಗಿ ‘ ಮಳೆ ಮೆಲ್ಲಜ್ಜ ‘ ಎಂದು ಪ್ರಸಿದ್ದಿ ಪಡೆದು ಮರಣೋತ್ತರದಲ್ಲಿ ಜನ ಸಮುದಾಯದಿಂದ ಸಂಗತಿಯಾಗಿದೆ.ಗಾಗುತ್ತಾನೆ. ಇಂತಹ ಅಸಾಮಾನ್ಯ ವ್ಯಕ್ತಿತ್ವದ ಮೆಲ್ಲಜ್ಜನ ಕುರಿತಂತೆ ಪದಗಾತಿ ಕಾಟಮ್ಮ ಸುಧೀರ್ಘವಾಗಿ ಕಥನ ಕಟ್ಟಿ ಹಾಡುವ ಸೋಪಜ್ಞ ಕಲೆಗಾರಿಕೆಯನ್ನು ಹೊಂದಿದವರಾಗಿದ್ದಾರೆ. ಜಗಳೂರು ಸೀಮೆಯಲ್ಲಿ ಈ ಕಥನ ಮನೆಮಾತಾಗಿದೆ.

ಜಗಳೂರು ಸೀಮೆಯಲ್ಲಿ ಯಾರದೇ ಮದುವೆ ಸಂಬಂದಿತ ಕಾರ್ಯಗಳಲ್ಲಿ ಶ್ರೀಮತಿ ಕಾಟಮ್ಮ ನವರ ಉಪಸ್ಥಿತಿ, ಸೋಬಾನೆ ಪದಗಾರಿಕೆ ಇರಲೇಬೇಕು. ಅಷ್ಟರಮಟ್ಟಿಗೆ ಇವರು ಸುಪ್ರಸಿದ್ಧರಾಗಿದ್ದಾರೆ.

ಮದುವೆಯ ಹಸೆ ಚಿತ್ತಾರ ಬಿಡಿಸುವಲ್ಲಿ ಸಿದ್ಧ ಹಸ್ತರು. ಬುಡಕಟ್ಟು ಸಮುದಾಯಗಳ ಮದುವೆಗಳಲ್ಲಿ ಹಾಕಲಾಗುವ ಹಾಲಸ್ತ್ರ ಹಸೆ, ಒಳ್ಳಕ್ಕಿ ಹಸೆ, ದೇವರ ಹಸೆ, ಬೂವದ ಹಸೆ . ಅರಿಣಿ ಹಸೆ . ಅಂದ್ರದ ಹಸೆ ಮುಂತಾದ ಹಸೆಗಳನ್ನು ಕರಿಕಂಬಳಿಹಾಸು ಮೇಲೆ ತಾನೇ ಬಿಡಿಸಿ ಆಯಾ ಸಂದರ್ಭಗಳನ್ನು ಮಧುರವಾಗಿ ಹಾಡುವ ನಿಪುಣೆಯಾಗಿದ್ದಾರೆ.

ಸಾಮಾನ್ಯವಾಗಿ ಹಸೆ ಬಿಡಿಸುವವರಿಗೆ ಹಾಡಲು ಬರುವುದಿಲ್ಲ. ಹಾಡುವವರು ಹಸೆ ಬಿಡಿಸುವುದಿಲ್ಲ. ಆದರೆ ಕಾಟಮ್ಮ ಇದಕ್ಕೆ ಭಿನ್ನ. ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸುವ ಕಲಾಚತುರೆ. ಸುದೀರ್ಘ ನಲವತ್ತು ವರ್ಷಗಳಿಂದ ನಿರಂತರವಾಗಿ ಪದಗಂಗೆಯನ್ನು ಹರಿಸುತ್ತಿರುವ ಎಲೆಮರೆಯ ಪ್ರತಿಭೆ ಕಾಟಮ್ಮನವರನ್ನು ಯಾವ ಸಂಘ ಸಂಸ್ಥೆಗಳು ಗುರುತಿಸದೆಹೋದ ಈ ಹೊತ್ತಿನಲ್ಲಿ ಮೊದಲ ಬಾರಿಗೆ ಕರ್ನಾಟಕ ಜಾನಪದ ಅಕಾಡೆಮಿ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ(ಬರಹ: ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆತ್ಮಕತೆ | ಅನಾಗರಿಕ ಆಚರಣೆಯ ವಿರುದ್ಧ

Published

on

  • ರುದ್ರಪ್ಪ ಹನಗವಾಡಿ

ಸೊರಬ ತಾಲ್ಲೂಕಿನಲ್ಲಿ ಇನ್ನೊಂದು ಮುಖ್ಯ ಘಟನೆಯನ್ನು ಹೇಳಿ ಮುಂದೆ ಹೋಗುತ್ತೇನೆ. ಸೊರಬ ತಾಲ್ಲೂಕಿನಲ್ಲಿ ತಹಸೀಲ್ದಾರರಾಗಿ ರಾಮನಾಥ್ ಎಂಬ ಹಿರಿಯರಿದ್ದರು. ಅವರು ತಾಲ್ಲೂಕಿನಲ್ಲಿ ಎಲ್ಲಾ ಆಡಳಿತ ನೋಡಿಕೊಳ್ಳುತ್ತಿದ್ದರು.

ವಿಶೇಷ ತಹಸೀಲ್ದಾರರು ಸಾಮಾನ್ಯವಾಗಿ ಯಾವ ಉದ್ದೇಶಕ್ಕೆ ನಿಯೋಜಿಸಿದ್ದರೋ ಅದನ್ನು ಬಿಟ್ಟು ಇತರೆ ಸಾಮಾನ್ಯ ವಿಷಯಗಳಲ್ಲಿ ಅವರಿಗೆ ಸಂಬಂಧಿಸಿರುವುದಿಲ್ಲ. ಹಾಗಾಗಿ ನಾನು ನನ್ನ ಕೆಲಸಗಳನ್ನು ಬಿಟ್ಟು ತಾಲ್ಲೂಕು ಕಛೇರಿ ಕೆಲಸಗಳಲ್ಲಿ ತೊಡಗಿಕೊಂಡಿರಲಿಲ್ಲ. ಆದರೆ ಇದೇ ಸಮಯದಲ್ಲಿ ಸೊರಬ ತಾಲ್ಲೂಕಿನ ಚಂದ್ರಗುತ್ತಿ ಜಾತ್ರೆಯ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ವಿಶೇಷ ಸಭೆ ನಡೆಸಿ ಅಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ಆಚರಣೆಯನ್ನು ತಡೆಯಲು ಸೂಚನೆ ನೀಡಿತ್ತು.

ಬೆತ್ತಲೆಸೇವೆಯ ಈ ಅನಾಗರಿಕ ಆಚರಣೆಯ ಬಗ್ಗೆ ಪ್ರೊ. ಬಿ. ಕೃಷ್ಣಪ್ಪನವರು, ನಾನು ಸೊರಬಕ್ಕೆ ಬರುವ ಒಂದು ವರ್ಷ ಮುಂಚಿನಿAದ ಬೆತ್ತಲೆ ಸೇವೆಯ ಆಚರಣೆ ಒಂದು ಅನಾಗರಿಕ ಆಚರಣೆ ಎನ್ನುವ ಬಗ್ಗೆ ಅನೇಕ ಲೇಖನಗಳನ್ನು ಬರೆದು ಇದನ್ನು ತಡೆಗಟ್ಟಬೇಕೆಂದು ಅಂದಿನ ರಾಜ್ಯ ಸರ್ಕಾರಕ್ಕೆ ಆಗ್ರಹಿಸುವ ಪತ್ರ ಬರೆದು ಈ ವಿಷಯಗಳೆಲ್ಲಾ ದಿನಪತ್ರಿಕೆ ಮತ್ತು ಆಗ ಜಾಣಜಾಣೆಯರ ಪತ್ರಿಕೆ ಎಂದು ಹೇಳಿ ತರುತ್ತಿದ್ದ ಲಂಕೇಶ್ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು.

1986ರ ಜಾತ್ರೆ ಸಮಯದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ತಂಗರಾಜ್ ಅವರು ಕಂದಾಯ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಭೆ ನಡೆಸಿ ಬೆತ್ತಲೆ ಹೋಗುವ ಜನರನ್ನು ಜಾಗೃತಗೊಳಿಸಿ ತಡೆಯಬೇಕೆಂದು ಜಿಲ್ಲಾಡಳಿತ ತೀರ್ಮಾನಿಸಿತ್ತು. ಕೃಷ್ಣಪ್ಪನವರ ಡಿಎಸ್‌ಎಸ್ ಸಂಘಟನೆಯ ಹೋರಾಟದ ಜೊತೆಗೆ ಶಿವಮೊಗ್ಗ-ಸಾಗರ-ಸೊರಬದಲ್ಲಿನ ಎಲ್ಲ ಪ್ರಗತಿಪರ ಸಂಘಟನೆಗಳು, ಕನ್ನಡ ಸಂಘ, ಪ್ರಗತಿಪರ ಮಹಿಳಾ ಲೇಖಕಿಯರ ಸಂಘಟನೆಗಳು ಕೈಜೋಡಿಸಿದ್ದವು. ಭದ್ರಾವತಿಯಿಂದ ಪ್ರೊ. ಚಂದ್ರಶೇಖರಯ್ಯ, ಡಿಎಸ್‌ಎಸ್ ಚಂದ್ರು, ತೋರಣಗಟ್ಟಿ ಚಂದ್ರಶೇಖರ್, ಬಿದರಳ್ಳಿ ನರಸಿಂಹಮೂರ್ತಿ, ಇನ್ನೂ ಅನೇಕ ಪ್ರಗತಿಪರ ಹೋರಾಟಗಾರರು ಭಾಗವಹಿಸಿದ್ದರು.

ನಾನು ಸರ್ಕಾರದ ಭಾಗವಾಗಿ ಸಂಜೆ ಹಳ್ಳಿಗಳಿಗೆ ಕರಪತ್ರಗಳನ್ನು ಹಂಚಿ, ‘ಯಾವ ದೇವರಿಗೂ ಬೆತ್ತಲೆ ಪೂಜೆ ಸಲ್ಲಿಸುವುದು ಇಷ್ಟವಾಗದು. ಇದೆಲ್ಲ ಹಿಂದುಳಿದವರನ್ನೂ, ದಲಿತರನ್ನೂ ಶೋಷಣೆ ಮಾಡುವ ಕ್ರೂರ ಪದ್ಧತಿ, ಇವನ್ನು ನಿವಾರಣೆಮಾಡಬೇಕೆಂದು ಭಾಷಣ ಮಾಡುತ್ತಾ ತಾಲ್ಲೂಕು ಕಛೇರಿಯ ಸಿಬ್ಬಂದಿಯನ್ನು ಹಲವು ತಂಡಗಳಾಗಿ ಮಾಡಿಕೊಂಡು ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದೆವು. ಸರ್ಕಾರದ ನಿರ್ದೇಶನವಿದ್ದುದರ ಜೊತೆಗೆ ಈ ವಿಷಯಗಳು ನನಗೆ ಇಷ್ಟವಾದ ಕೆಲಸವಾಗಿದ್ದರಿಂದ ಹೆಚ್ಚಿನ ಆಸಕ್ತಿಯಿಂದ ಬೆತ್ತಲೆ ಸೇವೆ ವಿರುದ್ಧ ಪ್ರಚಾರ ಮಾಡುತ್ತಿದ್ದೆವು. ಹೀಗೆ ಎಲ್ಲಾ ಕಡೆ ಪ್ರಚಾರ ಮಾಡಿದ ಮೇಲೆ ಪ್ರೊ.ಬಿ.ಕೆ ಮತ್ತು ಶಿವಪ್ಪ ಮಾಸ್ತರು ಇನ್ನು ಕೆಲವು ಗೆಳೆಯರು ನಮ್ಮಲ್ಲಿ ಊಟ ಉಪಚಾರ ಮಾಡಿ ಹೋಗುತ್ತಿದ್ದರು. ಇದರ ಸಂಪೂರ್ಣ ಘಟನೆಯ ವಿವರವನ್ನು ಈಗಾಗಲೇ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ 2010ರಲ್ಲಿ ಪ್ರಕಟಿಸಿರುವ ‘ಬಯಲು.. ಬೆತ್ತಲೆ..ಚಂದ್ರಗುತ್ತಿ’ ಎಂಬ ಪುಸ್ತಕದಲ್ಲಿನ ಮಾಹಿತಿಯನ್ನು ಇಲ್ಲಿ ಮುಂದುವರೆಸಲಾಗಿದೆ.

ಬೆತ್ತಲೆ ಸೇವೆ ನಡೆಯುವ ಒಂದು ವಾರ ಮುಂಚಿತವಾಗಿಯೇ ಕೃಷ್ಣಪ್ಪನವರ ನೇತೃತ್ವದಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರು ಮತ್ತು ಪ್ರಗತಿಪರ ಸಂಘಟನೆಗಳೊಡನೆ ಸಂಜೆ ಹಳ್ಳಿಗಳಿಗೆ ಹೋಗಿ ಭಾಷಣಗಳ ಮುಖಾಂತರ ಬೆತ್ತಲೆ ಸೇವೆಯನ್ನು ವಿರೋಧಿಸುವ ಪ್ರಚಾರದಲ್ಲಿ ನಾನೂ ತೊಡಗಿಸಿಕೊಂಡಿದ್ದೆ. ಚಂದ್ರಗುತ್ತಿ ದೇವಸ್ಥಾನ ಸಮಿತಿಯ ಸಂಚಾಲಕರಾಗಿದ್ದ ಈಡೂರು ಪರಶುರಾಮಪ್ಪ ಮತ್ತು ಅವರ ಸ್ನೇಹಿತರು ವೈಯಕ್ತಿಕವಾಗಿ ಬೆತ್ತಲೆ ಸೇವೆಯನ್ನು ವಿರೋಧಿಸುವ ಹೋರಾಟಕ್ಕೆ ನಮ್ಮ ಬಳಿ ಸಮ್ಮತಿಸಿದ್ದರೂ ಇದನ್ನು ವಿರೋಧಿಸುವುದು ಹೇಗೆ ಎಂಬುದರ ಬಗ್ಗೆ ಅವರಲ್ಲಿ ದುಗುಡ ತುಂಬಿತ್ತು. ಆಗಿನ ಜನಪ್ರತಿನಿಧಿಗಳು ಯಾರೂ ಈ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಇದೊಂದು ಅತಿ ಸೂಕ್ಷ್ಮ ವಿಚಾರವೆಂದೂ- ಏನಾದರೂ ಮಾತನಾಡಿದರೆ ಜನರಿಂದ ದೂರ ಆಗುವ ಆತಂಕ ರಾಜಕಾರಣಿಗಳ ಒಳ ಇಂಗಿತವಾಗಿತ್ತು. ಚುನಾವಣಾ ರಾಜಕೀಯದ ದೃಷ್ಟಿಯಿಂದ ಅವರಿಗೆ ಇದೆಲ್ಲ ಬೇಡದ ವಿಚಾರವಾಗಿತ್ತು.

ಈ ಹಿನ್ನೆಲೆಯಲ್ಲಿ ಬೆತ್ತಲೆಸೇವೆ ನಡೆಸುವ ಮೊದಲ ದಿನ ಸರ್ಕಾರವು ಸೂಚಿಸಿದಂತೆ ಡಿ.ಎಸ್.ಎಸ್. ಮತ್ತು ಇತರೆ ಸಂಘಟನೆಯ ಕಾರ್ಯಕರ್ತರು- ಬೆತ್ತಲೆ ಹೋಗುತ್ತಿದ್ದವರನ್ನು ತಡೆದು ಅವರಿಗಾಗಿ ಹೊಸ ಬಟ್ಟೆ ತಂದಿದ್ದ ಮಹಿಳಾ ಕಾರ್ಯಕರ್ತರು ಅವರಿಗೆ ಸುತ್ತಿ- ಕಳುಹಿಸುತ್ತಿದ್ದರು. ಅವರು ಸುತ್ತಿಕೊಂಡು ಮುಂದೆ ಹೋಗುತ್ತಿದ್ದಾಗ ಮತ್ತೆ ಬಿಚ್ಚಿಕೊಂಡು ಓಡುತ್ತಿದ್ದುದು ನಡೆಯುತ್ತಲೂ ಇತ್ತು. ಮೊದಲ ದಿನದ ಈ ಕರ‍್ಯ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯಿತು. ಸರ್ಕಾರ ಮತ್ತು ಡಿಎಸ್‌ಎಸ್ ಕರ‍್ಯಕರ್ತರು ಕೂಡ ಇದು ಸಂಪೂರ್ಣ ಯಶಸ್ವಿಯಾಯಿತೆಂದೇ ಭಾವಿಸಿದೆವು.

ಆದರೆ ಎರಡನೇ ದಿನ ಅಂದರೆ, 20-3-1986ರಂದು ಬೆಳಿಗ್ಗೆಯಿಂದಲೇ ಜನಸಾಗರ ವಿವಿಧ ಕಡೆಗಳಿಂದ ಹರಿದು ಬರುತ್ತಿತ್ತು. ನಾನು ನನ್ನ ಸಿಬ್ಬಂದಿಯೊಡನೆ ಮಾಮೂಲಿನಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಹೋಗುತ್ತಿದ್ದಾಗ ಬೆತ್ತಲೆ ಸೇವೆ ಮಾಡೋ ಹೆಂಗಸಿನ ಫೋಟೋ ತೆಗೆಯುತ್ತಿದ್ದ ಇನ್ನೊಬ್ಬ ಮಹಿಳಾ ಫೋಟೋಗ್ರಾಫರ್‌ನನ್ನು ನಮ್ಮ ಎದುರಿಗೆ ಅಡ್ಡಹಾಕಿ ಅವಳು ತೆಗೆದಿದ್ದ ಫೋಟೋ ರೀಲುಗಳನ್ನು ಹೊರತೆಗೆದು ಅವಳನ್ನು ನಮ್ಮ ಎದುರಿಗೆ ಥಳಿಸಲು ಮುಂದಾಗಿ, ಅವಳನ್ನು ನಗ್ನಗೊಳಿಸಿದರು. ಆಗ ಜೋಗಿತಿಯರನ್ನು ನಾನು ತಡೆಯಲು ಹೋದಾಗ ವಾಗ್ವಾದ-ತಳ್ಳಾಟ ಪ್ರಾರಂಭವಾಯಿತು.

ಸರ್ಕಾರ ಮತ್ತು ವಿವಿಧ ಸಂಘಟನೆಗಳನ್ನು ಜೋಗತಿಯರು ಎದುರು ಹಾಕಿಕೊಳ್ಳುವುದನ್ನು ಊಹಿಸದಿದ್ದ ನಮಗೆ ಇದೆಲ್ಲ ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಜನರು ಅಲ್ಲಿ ಡಿ.ಎಸ್.ಎಸ್. ಕಾರ್ಯಕರ್ತರನ್ನ ಹೊಡೆದರಂತೆ. ಇಲ್ಲಿ ಬಟ್ಟೆ ಬಿಚ್ಚಿದರಂತೆ, ಎಂಬ ವದಂತಿಗಳನ್ನ ಹಬ್ಬಿಸಿ ಸರ್ಕಾರದ ವ್ಯವಸ್ಥೆಯಲ್ಲಾಗಲೀ, ಡಿಎಸ್ ಎಸ್ ಮತ್ತಿತರ ಹೋರಾಟಗಾರರಾಗಲೀ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಏನೂ ತಿಳಿಯದಂತಾಗಿದ್ದರು. ನನ್ನೊಡನೆ ಇದ್ದ ಸಿಬ್ಬಂದಿ ಚದುರಿ ಹೋಗಿ ನಾನು ರಕ್ಷಣೆಗಾಗಿ ಪೋಲೀಸ್ ವ್ಯಾನಿಗೆ ಹತ್ತಿಕೊಂಡಿದ್ದೆ. ನಾವು ತಂದಿದ್ದ ಜೀಪಿಗೆ ಬೆಂಕಿ ಹಚ್ಚಿಟ್ಟು ಜೋಗತಿಯರು ಅಟ್ಟಹಾಸ ಮೆರೆದಿದ್ದರು. ನಾವು ವ್ಯಾನಿನ ಒಳಗೆ ಇದ್ದು, ಇನ್ನು ಮುಂದೆ ಏನಾಗುವುದೋ ಅನ್ನೋ ಆತಂಕದಲ್ಲಿದ್ದಾಗ ನನಗೆ ಪರಿಚಿತ ವ್ಯಕ್ತಿಯೊಬ್ಬ ಓಡಿಬಂದು ನನ್ನ ಪರಿಚಯ ಗುರುತು ಸಿಗದಂತೆ ಭಂಡಾರ ಹಾಕಿ ಅಲ್ಲಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ಪಂಚೆ ನೀಡಿ ಪ್ಯಾಂಟ್ ಷರಟು ತೆಗೆಸಿ ನಾನು ಯಾರೋ ಅನ್ನೋ ರೀತಿ ಮಾಡಿಕೊಂಡು ತನ್ನ ರಾಜದೂತ್ ಮೋಟಾರ್‌ಬೈಕ್‌ನಲ್ಲಿ ಸೊರಬಕ್ಕೆ ತಂದುಬಿಟ್ಟರು.

ಅಲ್ಲಿಂದ ಎಲ್ಲರಿಗೂ ಫೋನ್ ಮಾಡಿ ಆಗಿದ್ದ ಅನಾಹುತವನ್ನು ತಿಳಿಸಿದೆ. ಇದು ಸುಮಾರು ಮಧ್ಯಾಹ್ನ 3.00 ಘಂಟೆಯ ತನಕ ಜೋಗತಿಯರ ಅಟ್ಟಹಾಸಕ್ಕೆ ಗುರಿಯಾದ ಡಿ.ಎಸ್.ಎಸ್. ಮತ್ತು ಇತರೆ ಕರ‍್ಯಕರ್ತರು ತಮಗೆ ಸಿಕ್ಕ ಸಿಕ್ಕ ಕಡೆ ಚದುರಿ ಪ್ರಾಣ ಉಳಿಸಿಕೊಳ್ಳಲು ತಪ್ಪಿಸಿಕೊಂಡು ಪರಾರಿಯಾದರು. ಈ ಸಂದರ್ಭದಲ್ಲಿ ಕೃಷ್ಣಪ್ಪನವರೇನಾದರೂ ಈ ಜೋಗತಿಯರ ಕೈಗೆ ಸಿಕ್ಕಿದ್ದರೆ ಬಹುಶಃ ಅಂದೇ ಅವರ ಕೊಲೆ ಮಾಡಲು ಹೇಸುತ್ತಿರಲಿಲ್ಲ.

ಸುಮಾರು 4.00 ಘಂಟೆಯ ಸುಮಾರಿಗೆ ಹೆಚ್ಚಿನ ಪೋಲೀಸ್ ಬಂದು ಇಡೀ ಜೋಗತಿಯರ ಸಮೂಹವನ್ನು ಬೆತ್ತಲೆಯಾಗಿಯೇ ಅರೆಸ್ಟ್ ಮಾಡಿ ಸೊರಬ ಪೋಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದರು. ಸುಮಾರು 5-6 ಘಂಟೆಯ ಸುಮಾರಿಗೆ ಪೋಲೀಸ್ ಬಂದು ಇವರಲ್ಲಿ ಯಾರು ನಿಮ್ಮ ಮೇಲೆ ಹಲ್ಲೆ ಮಾಡಿದರು ಗುರ್ತಿಸಿ ಎಂದು ಹೇಳಿದರು.

ಪೊಲೀಸರೊಡನೆ ಹೋಗಿ ನೋಡುತ್ತೇನೆ, ಅದೊಂದು ಭಯಂಕರ ದೃಶ್ಯ. ಪೀಚಲು ದೇಹಗಳ ಅನಾರೋಗ್ಯವೇ ಮೂರ್ತಿವೆತ್ತ- ಕುಡಿತದ ಅಮಲಿನಲ್ಲಿದ್ದ ಅವರಿಗೆ ತಾವೇನು ಮಾಡಿದ್ದೆವು ಅನ್ನುವುದೇ ಅವರಿಗೆ ಗೊತ್ತಿರಲಿಲ್ಲ. ಯಾವುದೋ ಕಾಡಿನ ಪ್ರಾಣಿಗಳಂತೆ ಪಿಳಿಪಿಳಿ ಕಣ್ಣು ಬಿಡುತ್ತಾ ಆ ರೂಮಿಗೆ ಬಂದವರನ್ನು ನೋಡುತ್ತಿದ್ದರು. ನನಗೆ `ಯಾರು ಏನು ಮಾಡಿದರು ಎನ್ನುವುದನ್ನ ಯಾರ ಮೇಲೆ ಹೇಳಲಿ’ ಎನ್ನುತ್ತಾ ಈಚೆಗೆ ಬಂದೆ. ಆದರೆ ಈ ಜೋಗತಿಯರು ಅಂತಹ ಸ್ಥಿತಿಯಲ್ಲೂ ತಮ್ಮ ಬಳಿ ಬೆಳಗಿನಿಂದ ದೋಚಿದ ಒಡವೆಗಳು ಮತ್ತು ಹಣ ಇರುವುದು ಸಣ್ಣ ಸಣ್ಣ ಚೀಲಗಳಲ್ಲಿರುವುದು ಪರಿಶೀಲಿಸಿದಾಗ ಕಂಡು ಬಂತು.

ಈ ಘಟನೆಯ ನಂತರ ಆದ ಮಾರನೇ ದಿನ ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಗಿ ವರದಿಗಳು ಪ್ರಕಟಗೊಂಡವು. ನಾನು ಆತಂಕದಿAದ ನನ್ನ ಹೆಂಡತಿಗೆ ‘I ಚಿm Sಚಿಜಿe’ ಎಂದು ತಂತಿ ನೀಡಿದಾಗ ಅವಳು ಗಲಿಬಿಲಿಗೊಂಡು ಫೋನ್ ಮಾಡಿದಳು. ಇತ್ತ ನನ್ನ ಹಳ್ಳಿ ಹನಗವಾಡಿಯಿಂದ ಬಂದಿದ್ದ ಜೋಗತಿಯರಿಂದಲೇ ರೋಚಕವಾಗಿ ತಲುಪಿದ್ದ ಸುದ್ದಿಯಿಂದ, ವರದಿಗಳನ್ನು ಕೇಳಿಕೊಂಡ ನಮ್ಮ ಊರಿನ ಜನರು ಮತ್ತು ನಮ್ಮ ಅವ್ವ, ಅಣ್ಣ-ತಮ್ಮಂದಿರು ಮತ್ತು ಮಿತ್ರರ ದಂಡು ಸೊರಬಕ್ಕೆ ನನ್ನನ್ನು ನೋಡಲು ಬಂದಿದ್ದರು. ಅವರು ನಾನು ಮಾಮೂಲಿನಂತೆ ಇದ್ದುದನ್ನು ನೋಡಿ ನೆಮ್ಮದಿಗೊಂಡರು. ನನ್ನ ತಮ್ಮನೊಬ್ಬ ನಿನ್ನನ್ನು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಸಮೇತ ನೋಡುವ ಕಲ್ಪನೆಯಲ್ಲಿಯೆ ಓಡಿ ಬಂದೆವು ಎಂದಾಗ ನಾನು ಕೂದಲೆಳೆಯಲ್ಲಿ ಸಾವು ತಪ್ಪಿದ್ದನ್ನು ವಿವರಿಸಲಿಲ್ಲ.

ನಾನು ತಹಶೀಲ್ದಾರನಾಗಿ ಹೊಸದರಲ್ಲಿ ಆಗಿದ್ದ ಈ ಘಟನೆ ಇಂದಿಗೂ ನನಗೆ ಎಚ್ಚರಿಕೆಯ ಮಾರ್ಗ ಸೂಚಿಯಾಗಿದೆ. ಒಂದು ವಿಷಾದದ ಸಂಗತಿಯೆAದರೆ ನಮ್ಮ ಪೋಲೀಸರು ಇಂದಿಗೂ ಯಥಾಸ್ಥಿತಿಯ ರಕ್ಷಕರಾಗಿಯೇ ಉಳಿದಿದ್ದಾರೆ. ಅವರನ್ನು ಬದಲಾಗುತ್ತಿರುವ ಕಾಲಮಾನದ ಜೊತೆಗೆ ಬದಲಾವಣೆಯ ರೂವಾರಿಗಳಾಗುವಂತೆ ತರಬೇತಿ ನೀಡುವಲ್ಲಿ ಸರ್ಕಾರವು ಒತ್ತು ನೀಡುವುದು ಇಂದಿನ ಅಗತ್ಯವಾಗಿದೆ.

ಈ ಘಟನೆಯ ನಂತರದ ಆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಒಂದು ಮಹತ್ತರ ಬದಲಾವಣೆ ಆ ಪ್ರದೇಶದಲ್ಲಿ ಆಗಿದೆ. ಬೆತ್ತಲೆ ಸೇವೆಯನ್ನು ಸರ್ಕಾರ ನಿಷೇಧಿಸಿದೆ. ಅದರೊಟ್ಟಿಗೆ ಅನೇಕ ಸಾಮಾಜಿಕ ಅನಿಷ್ಟಗಳ ಬಗ್ಗೆ ಸಾಮಾನ್ಯ ಜನರ ಮಧ್ಯದಲ್ಲಿ ಚರ್ಚೆಗಳಾಗಿವೆ. ಕೃಷ್ಣಪ್ಪನವರ ಹೋರಾಟ ಹೊಸ ದಿಕ್ಕಿನೆಡೆಗೆ ಸಮಾಜವನ್ನು ಮುಖ ಮಾಡಿಸಿದೆ. ಇದು ಅವರ ಆತ್ಮಕ್ಕೆ ನೆಮ್ಮದಿಯನ್ನು ನೀಡಿದೆ ಎಂದರೆ ತಪ್ಪಾಗಲಾರದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending