ನೆಲದನಿ
ಕುವೆಂಪು ಕಂಡರಿಸಿದ ಕನ್ನಡತನದ ದಾರ್ಶನಿಕತೆ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಕುವೆಂಪು ಬರಹಗಳಲ್ಲಿ ‘ಕನ್ನಡತನ’ದ ವಿನ್ಯಾಸಗಳು ಹೇಗೆ ಮೈದಾಳಿವೆ ಎಂಬುದನ್ನು ಅವರ ಸಾಹಿತ್ಯಕ ಹಾಗೂ ವೈಚಾರಿಕ ಬರಹಗಳ ಮೂಲಕ ಕಂಡುಕೊಳ್ಳಬಹುದಾಗಿದೆ. ಕನ್ನಡತನ ಎನ್ನುವುದು ಕೇವಲ ನಾಡು ನುಡಿಗಳ ಗಡಿಗಳಿಗೆ ಸೀಮಿತವಾಗಿರುವ ವಿದ್ಯಮಾನವಾಗಿರದೇ, ಅದೊಂದು ವ್ಯಾಪಕ ಗ್ರಹಿಕೆ ಎನ್ನುವುದು ಇವರ ಇಡೀ ಬರಹಗಳ ಮೂಲಕ ಅನಾವರಣಗೊಂಡಿರುವುದನ್ನು ಕಾಣುತ್ತೇವೆ.
ಹಾಗೆಂದರೆ, ಕನ್ನಡತನ ಎನ್ನುವುದು ಸಂಕುಚಿತ ಗಡಿಗಳನ್ನು ಮೀರುವ ಮತ್ತು ಅಂತಹ ಸೀಮಿತ ಗಡಿಗಳನ್ನು ದಾಟುವ ವಿನ್ಯಾಸವನ್ನಾಗಿ ನೋಡುವ ಹಲವು ಸನ್ನಿವೇಶಗಳು ಕುವೆಂಪು ಅವರ ಅಭಿವ್ಯಕ್ತಿಗಳಲ್ಲಿ ಅತ್ಯಂತ ನಿಚ್ಚಳವಾಗಿವೆ. ಉದಾ.ಗೆ ನೀ ಮೆಟ್ಟುವ ನೆಲ, ಅದೆ ಕರ್ನಾಟಕ ನೀನೇರುವ ಮಲೆ ಸಹ್ಯಾದ್ರಿ’ ಎನ್ನುವ ಕವನದ ಸಾಲುಗಳು ಇರಬಹುದು ಇಲ್ಲವೇ ಅನಿಕೇತನ ಕವನ ಇರಬಹುದು ಅಥವಾ ಕನ್ನಡ ನಾಡು ನುಡಿ ಕುರಿತ ಪ್ರತಿಯೊಂದು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕನ್ನಡತನದ ನಿರ್ವಚನೆಯನ್ನು ಕಾಣಬಹುದಾಗಿದೆ.
ಅಂದರೆ ಕುವೆಂಪು ಅವರ ‘ಅಭಿವ್ಯಕ್ತಿ’ ಮತ್ತು ‘ಗ್ರಹಿಕೆ’ಗಳಲ್ಲಿ ಕನ್ನಡತನ ಎಂಬ ಸಮೂಹ ಅಸ್ಮಿತೆ ಹೇಗೆ ಅನಾವರಣಗೊಂಡಿದೆ ಹಾಗೂ ಈ ಅಸ್ಮಿತೆಯನ್ನು ಗ್ರಹಿಸುವ ಸ್ವರೂಪಗಳು ಯಾವ ಬಗೆಯಲ್ಲಿ ಇವರ ಸಾಹಿತ್ಯ ಮತ್ತು ವೈಚಾರಿಕ ನಿರೂಪಣೆಗಳಲ್ಲಿ ನೆಲೆಗೊಂಡಿವೆ ಎನ್ನುವುದನ್ನು ನೋಡುವ ಜರೂರಿದೆ. ಮುಖ್ಯವಾಗಿ ಕಾವ್ಯ, ನಾಟಕ ಮತ್ತು ಕಥನ ಎಂಬೀ ಸೃಜನಶೀಲ ಅಭಿವ್ಯಕ್ತಿಗಳು ರೂಪಕ, ಪ್ರತಿಮೆ, ಸಂಕೇತಗಳ ಮುಖೇನ ಕನ್ನಡತನವನ್ನು ನಿರೂಪಿಸಿರುವ ಬಗೆಯನ್ನು ಇಲ್ಲಿ ಕಾಣುತ್ತೇವೆ. ಹಾಗೂ ವಿಮರ್ಶೆ ಮತ್ತು ವೈಚಾರಿಕ ಬರಹಗಳಲ್ಲಿ ಈ ಕನ್ನಡತನದ ವಿನ್ಯಾಸವು ತಿಳಿವಿನ ಬಗೆಗಳಾಗಿ (ಎಪಿಸ್ಟಮಿಕ್ ಮಾಡಲ್ಸ್) ಮೈದಾಳಿವೆ.
ದಿಟ ಸಾಹಿತ್ಯಕ ಮತ್ತು ವೈಚಾರಿಕ ಅಭಿವ್ಯಕ್ತಿಗಳ ಸ್ವರೂಪ ಬದಲಾಗುವುದರಿಂದ ಅವುಗಳ ಮೂಲಕ ಪ್ರತಿಪಾದಿಸುವ ತಿಳಿವಿನ ಸ್ವರೂಪವೂ ಬದಲಾಗುತ್ತದೆ. ಹಾಗಾಗಿಯೇ ಸೃಜನಶೀಲ ಅಭಿವ್ಯಕ್ತಿಗಳಲ್ಲಿ ಮೈದಾಳುವ ಕನ್ನಡತನ ಕುರಿತಾದ ನಿರೂಪಣೆಗಳು ಬಹುತೇಕವಾಗಿ ರೂಪಾತ್ಮಕವಾಗಿವೆ. ಆದರೆ ವೈಚಾರಿಕ ಬರಹಗಳಲ್ಲಿ ಏರ್ಪಡುವ ಈ ಕನ್ನಡತನದ ವಿನ್ಯಾಸ ಜ್ಞಾನ ಮೀಮಾಂಸೆಯ ಆಯಾಮವನ್ನು ಪಡೆದುಕೊಳ್ಳುತ್ತವೆ ಎಂಬುದು ಗಮನಾರ್ಹ.
ಆದರೆ ಈ ಎರಡೂ ಸನ್ನಿವೇಶದಲ್ಲಿಯೂ ಕುವೆಂಪು ಪ್ರತಿಮಾ ವಿಧಾನವನ್ನೇ ಅನುಸರಿಸುತ್ತಾರೆ ಎಂಬುದು ವಿಶೇಷ. ಲೋಕೋಪಯೋಗಿ ಮತ್ತು ಭಾವೋಪಯೋಗಿ ನೆಲೆಗಳನ್ನು ಅತ್ಯಂತ ಖಚಿತವಾಗಿ ನಿರ್ಧರಿಸುವ ಆಯಾಮಗಳು ಇವರ ಸಾಹಿತ್ಯಕ ಮತ್ತು ವೈಚಾರಿಕ ಬರಹಗಳಲ್ಲಿ ಯಥೇಚ್ಛವಾಗಿ ನೆಲೆಗೊಂಡಿವೆ.
ಭಾಷೆ ಮತ್ತು ಭಾಷಿಕ ಪರಿಕರಗಳನ್ನು ಕೇವಲ ಸಾಂಕೇತಿಕ ಪ್ರತಿನಿಧೀಕರಣದ ಮಾದರಿಯನ್ನಾಗಿ ಮಾತ್ರ ಉಪಯೋಗಿಸದೇ, ಅದೊಂದು ಜ್ಞಾನಶಿಸ್ತು, ಸಂವೇದನೆಯ ವಿನ್ಯಾಸ ಹಾಗೂ ಅನುಭವಗಳ ಮಾದರಿಗಳನ್ನು ಗುರುತಿಸುವ ಬಹುಮುಖ್ಯ ನೆಲೆಯೆನ್ನುವುದನ್ನು ಕುವೆಂಪು ಅತ್ಯಂತ ಪರಿಣಾಮಕಾರಿಯಾಗಿ ಗುರುತಿಸಿದ್ದಾರೆ. ಆದ್ದರಿಂದ ಭಾಷೆ ಬಗೆಗಿನ ಗ್ರಹಿಕೆಗಳು ಇವರ ಒಟ್ಟು ಅಭಿವ್ಯಕ್ತಿಯಲ್ಲಿ ಪ್ರಮುಖವಾಗುತ್ತವೆ.
ಇವುಗಳ ಮೂಲಕವೇ ಬದುಕಿನ ವಿವಿಧ ಲಯಗಳನ್ನು ಕಂಡುಕೊಳ್ಳಲೂ ಸಾಧ್ಯ ಅನ್ನುವುದನ್ನು ಕುವೆಂಪು ತೋರಿಸಿಕೊಟ್ಟಿದ್ದಾರೆ. ಕಾಲ-ದೇಶಗಳ ಹಂಗು ಮೀರಿದ ಪ್ರಸ್ತುತತೆ ನೆಲೆಗೊಳ್ಳುವುದು ಇಂತಹ ಭಾಷಿಕ ಕ್ರಾಂತಿಯಿಂದಲೇ ಎಂಬ ವಾಸ್ತವವನ್ನು ನಾವು ಮನಗಾಣುವುದಕ್ಕೆ ಸಾಕ್ಷಿಗಳು ನಮಗೆ ಕುವೆಂಪು ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಲಭ್ಯವಾಗುತ್ತವೆ. ‘ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ? ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ? ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !’ ಎಂಬೀ ಕವನದ ನಿಲುವು ಯಾವ ಕಾಲ ದೇಶಕ್ಕೂ ಸೀಮಿತಗೊಳ್ಳದೇ ಮನುಜಮತ ಮತ್ತು ವಿಶ್ವಪಥದ ಚಹರೆಗಳಾಗಿ ನೆಲೆಗೊಂಡಿವೆ.
ಸಾಮಾಜಿಕ ಭಾಷಾಶಾಸ್ತ್ರೀಯ ವಿವೇಚನೆಗಳ ಮುಖೇನ ಭಾಷೆ ಮತ್ತು ಸಮಾಜಗಳ ಒಟ್ಟು ಸಂಬಂಧವನ್ನು ವಿಶ್ಲೇಷಿಸಿ ನೋಡಿದರೆ ಕುವೆಂಪು ಅವರ ಭಾಷಿಕ ನಿಲುವುಗಳ ಆಳದಲ್ಲಿ ಹುದುಗಿರುವ ವೈಚಾರಿಕ ಸ್ಥೈರ್ಯ ಹಾಗೂ ನೈತಿಕತೆಯ ಹೊಣೆಗಾರಿಕೆ ನಮಗೆ ಮನನವಾಗುತ್ತದೆ. ಮತಧರ್ಮದ ಪರಿಭಾಷೆ ಒದುಗಿಸುವ ಚಿಂತನಾ ಕ್ರಮ ಬೇರೇನೆ ಸಮಾಜಶಾಸ್ತ್ರೀಯ ವ್ಯಾಖ್ಯಾನಗಳಿಗೆ ಅನುವು ಮಾಡಿಕೊಡುವುದನ್ನು ಕುವೆಂಪು ಅವರು ಮನಗಂಡಿದ್ದರು.
ತತ್ವದರ್ಶನ, ಸಾಂಸ್ಕೃತಿಕ ಮುಖಾಮುಖಿಯ ನಿಲುವುಗಳು ನಮಗೆ ಅರ್ಥವಾಗಲು ಹಾಗೂ ಸಾಂಸ್ಕೃತಿಕ ಅನುಸಂಧಾನದ ಸ್ಪಷ್ಟ ಮಾನದಂಡಗಳು ನಮಗೆ ಲಭ್ಯವಾಗುವುದು ಭಾಷಿಕ ಕ್ರಾಂತಿಯಿಂದ ಎನ್ನುವ ವಾಸ್ತವ ಕುವೆಂಪು ಅವರಿಗೆ ಖಚಿತವಾಗಿತ್ತು.
ಹೊಸ ಪರಿಭಾಷೆ ಮತ್ತು ಹೊಸ ವಿಚಾರಗಳನ್ನು ಏಕತ್ರಗೊಳಿಸುವ ಬಹುದೊಡ್ಡ ವೈಚಾರಿಕ ಕ್ರಾಂತಿಗೆ ಕುವೆಂಪು ಅವರು ಕಾರಣವಾದರು. ಈಗಾಗಲೇ ನೆಲೆನಿಂತಿದ್ದ ಸಮಾಜಶಾಸ್ತ್ರದ ಪರಿಭಾಷೆಯ ಒಳಹುನ್ನಾರವನ್ನು ಅರ್ಥೈಸಿಕೊಳ್ಳಲು ಭಾಷಾಶಾಸ್ತ್ರ ಸಹಾಯ ಮಾಡಬಲ್ಲದು ದಿಟ. ಆದರೆ ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನಿರೂಪಣೆಗಳು ಲಭ್ಯವಾಗದೇ ಈ ಒಳಹುನ್ನಾರವನ್ನು ಅರಿಯಲು ಭಾಷಾಶಾಸ್ತ್ರಕ್ಕೆ ಸಾಧ್ಯವೇ ಇಲ್ಲ.
ಆದರೆ ಕುವೆಂಪು ಅವರು ಏಕೆಕಾಲಕ್ಕೆ ಈ ಪರಿಭಾಷೆಗಳ ಚಹರೆಗಳನ್ನು ಬದಲಿಸುವ ಮತ್ತು ಒಳಹುನ್ನಾರಗಳನ್ನು ಖಚಿತವಾಗಿ ತಮ್ಮ ಅಭಿವ್ಯಕ್ತಿಗಳ ಮೂಲಕ ಮಂಡಿಸಿರುವುದನ್ನು ಯಾರಾದರೂ ಗುರುತಿಸಬಹುದು. ಅಲ್ಪಸಂಖ್ಯಾತರು, ಬಹುಸಂಖ್ಯಾತರು, ಮೇಲ್ವರ್ಗಗಳು, ಕೆಳವರ್ಗಗಳು ರೂಢಿಗತವಾಗಿ ಬಳಸುತ್ತಿದ್ದ ಪರಿಭಾಷೆಗಳು ಯಾವ ರೀತಿಯಲ್ಲಿ ಸಾಂಸ್ಕೃತಿಕ ಮತ್ತು ರಾಜಕೀಯ ಯಜಮಾನಿಕೆಯನ್ನು ನಿಭಾಯಿಸುತ್ತಿದ್ದವು ಎನ್ನುವುದನ್ನು ಸೂಚಿಸುವ ಸೂಚಕಗಳಾಗಿ ಒದಗಿ ಬಂದಿರುವುದನ್ನು ಪತ್ತೆಹಚ್ಚುವ ನಿಶಿತಮತಿ ಕುವೆಂಪು ಅವರಲ್ಲಿ ಎದ್ದು ಕಾಣುತ್ತದೆ.
ಭಾಷೆ ಒಂದು ಸಾಮಾಜಿಕ ವಾಸ್ತವವನ್ನು (ಸೋಶಿಯಲ್ ಫ್ಯಾಕ್ಟ್) ಬಿಂಬಿಸುವುದಷ್ಟೆಯಲ್ಲ, ಸಮೂಹಗಳ ಬದುಕು ಹೇಗೆ ಇಂತಹ ಸ್ಥಿತಿಯೊಂದಕ್ಕೆ ಒಗ್ಗಿಕೊಂಡಿವೆ ಎನ್ನುವ ಕಟುಸತ್ಯವನ್ನೂ ಅನಾವರಣಗೊಳಿಸುತ್ತವೆ. ಆದ್ದರಿಂದ ಹೊಸ ಸಾಮಾಜಿಕತೆಯನ್ನು ನೆಲೆಗೊಳಿಸಲು ಹೊಸ ಪರಿಭಾಷೆಗಳ ಅಗತ್ಯವಿದೆ ಎನ್ನುವುದನ್ನು ಕುವೆಂಪು ಅವರು ಬಲವಾಗಿ ನಂಬಿದ್ದರು.
ವೈಜ್ಞಾನಿಕ ದೃಷ್ಟಿ, ವಿಶ್ವಮಾನವತೆ, ಸಾಂಸ್ಕೃತಿಕ ರಾಜಕಾರಣ, ಕಾವ್ಯ, ಕಥನ ಹಾಗೂ ನಾಟಕಗಳು ಇತ್ಯಾದಿ ಸಂಕಥನಗಳು ಕನ್ನಡತನವನ್ನು ನಿರ್ವಚಿಸಲು ಕುವೆಂಪು ಅವರಿಗೆ ಅತ್ಯಂತ ಮುಖ್ಯ ಅಭಿವ್ಯಕ್ತಿ ಮಾದರಿಗಳಾಗುತ್ತವೆ. ಎಲ್ಲವನ್ನೂ ಕನ್ನಡತನ ಮತ್ತು ಕನ್ನಡತನದ ಅಸ್ಮಿತೆಯ ಸ್ವರೂಪವನ್ನು ನಿರ್ವಚಿಸುವ ಬಗೆಯನ್ನಾಗಿಯೇ ಕುವೆಂಪು ಅವರು ನಿರೂಪಿಸಿದ್ದಾರೆ. ಆದ್ದರಿಂದ ಪ್ರತಿಮಾ ವಿಧಾನವನ್ನು ಪರಿಣಾಮಕಾರಿಯಾಗಿ ತಮ್ಮ ಒಟ್ಟು ಅಭಿವ್ಯಕ್ತಿಯಲ್ಲಿ ಬಳಸಿಕೊಳ್ಳಲು ಸಾಧ್ಯವಾಯಿತು.
ಇಲ್ಲವಾದರೆ ಅವರ ಕಾದಂಬರಿಗಳು ಮತ್ತು ಕಾವ್ಯ ವಿಶೇಷವಾಗಿ ರಾಮಾಯಣ ದರ್ಶನಂ ಮಹಾಕಾವ್ಯವು ಇಷ್ಟೊಂದು ವೈಶಿಷ್ಟ್ಯತೆಯನ್ನು ಪಡೆದುಕೊಳ್ಳಲು ಆಗುತ್ತಿರಲಿಲ್ಲ. ತಮ್ಮ ವೈಚಾರಿಕ ಬರಹಗಳು, ವಿಮರ್ಶೆ, ನಾಟಕಗಳು, ಕಥನಗಳು, ಕಾವ್ಯ ಹಾಗೂ ಕವಿತೆಗಳನ್ನು ಅತ್ಯಂತ ವಿಶಿಷ್ಟ ಬಗೆಗಳನ್ನಾಗಿಸುವ ಇರಾದೆಯನ್ನು ಕುವೆಂಪು ಅವರು ಹೊಂದಿರುವುದನ್ನು ಈ ಎಲ್ಲ ವಿನ್ಯಾಸಗಳಲ್ಲಿ ನೋಡುತ್ತೇವೆ.
ಈ ಎಲ್ಲ ಪ್ರಕಾರಗಳ ವೈಶಿಷ್ಟ್ಯತೆಯನ್ನು ಕಂಡರಿಸಲು ಇವರು ಭಾಷೆಯನ್ನೇ ಪ್ರಧಾನ ಮಾನದಂಡವನ್ನಾಗಿ ಬಳಸಿಕೊಂಡಿದ್ದಾರೆ. ಈ ಪ್ರಕ್ರಿಯೆಯ ಮೂಲಕವೇ ಕನ್ನಡತನದ ಚಹರೆಗಳನ್ನೂ ಪತ್ತೆಹಚ್ಚುವುದಕ್ಕೂ ಇವರಿಗೆ ಸಾಧ್ಯವಾಗಿದೆ. ಸಾಮಾಜಿಕತೆ ಮತ್ತು ಕನ್ನಡತನದ ನಡುವಣ ನಂಟಸ್ತಿಕೆಯನ್ನು ರೂಪಿಸುವ ವಿಧಾನವೇ ಅತ್ಯಂತ ಮಾರ್ಮಿಕವಾಗಿದೆ.
ಏಕೆಂದರೆ ಕನ್ನಡದ ಕಾವ್ಯದೊಳಗೆ ಲೋಕದರ್ಶನದ ಮಾದರಿಗಳನ್ನು ಒಡಮೂಡಿಸಲು ಹಾಗೂ ವಿಶ್ವಮಾನವ ಪರಿಕಲ್ಪನೆಯನ್ನು ನೆಲೆಗೊಳಿಸಲು ಹೇಗೆ ಸಾಧ್ಯವಾಯಿತು ಅನ್ನುವುದನ್ನು ಶೋಧಿಸುವುದಕ್ಕೆ ಸಾಕಷ್ಟು ಅವಕಾಶಗಳನ್ನು ಕುವೆಂಪು ಅವರು ಭಾಷಿಕ ಚಲನೆಗಳ ಮೂಲಕವೇ ಅಣಿಗೊಳಿಸಿದ್ದಾರೆ.
ಯಾವುದನ್ನೂ ಇವರು ಕೇವಲ ಒಂದು ನೋಟವನ್ನಾಗಿ ಮಾತ್ರ ಬಿಂಬಿಸದೇ ಅದೊಂದು ಲೋಕಜ್ಞಾನದ ಗ್ರಹಿಕೆಯನ್ನಾಗಿ ಮಂಡಿಸುವ ತವಕವನ್ನು ಹೊಂದಿರುವುದು ನಮಗೆ ಮನವರಿಕೆಯಾಗುತ್ತದೆ. ನೇಗಿಲಯೋಗಿ, ದೇವರು ರುಜು ಮಾಡಿದನು, ಹೀರೆ ಹೂ, ಗೊಬ್ಬರ, ಕಲ್ಕಿ, ಸ್ವರ್ಗ ಬಾಗಿಲು ಯಕ್ಷಪ್ರಶ್ನೆ, ದೇವರು ಮತ್ತು ಪುಜಾರಿ ಇತ್ಯಾದಿ ಕವನಗಳನ್ನು ಪರಿಶೀಲಿಸಿ ನೋಡಬಹುದು.
ಜಲಗಾರ, ಸ್ಮಶಾನ ಕುರುಕ್ಷೇತ್ರಂ, ಶೂದ್ರ ತಪಸ್ವಿ, ರಾಮಾಯಣ ದರ್ಶನಂ ಹಾಗೂ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಗಳು ಪಠ್ಯಗಳನ್ನೂ ಈ ನೆಲೆಯಲ್ಲಿ ನೋಡುವುದು ಸೂಕ್ತ. ಈ ಎಲ್ಲ ಪಠ್ಯಗಳ ಇಡೀ ಗ್ರಹಿಕೆಯಲ್ಲಿ ಎದ್ದು ಕಾಣುವ ಬಗೆಯೇ ಕನ್ನಡತನದ ಚಹರೆಯಾಗಿದೆ.
ಈ ಚಹರೆ ಏಕಶಿಲಾಘನಾಕೃತಿಯಲ್ಲ ಅದು ಬಹುಳತೆಯ ವಿನ್ಯಾಸ ಎಂಬ ಚಿಂತನೆಯನ್ನೂ ಇಲ್ಲಿ ನೆಲೆಗೊಳಿಸಲಾಗಿದೆ. ನುಡಿಯೊಂದನ್ನು ಏಕಕಾಲಕ್ಕೆ ಸ್ಥಳೀಯತೆ ಮತ್ತು ವಿಶ್ವಾತ್ಮಕತೆಯ ಸಮಾನ ವಿದ್ಯಮಾನವನ್ನಾಗಿ ಬಿಂಬಿಸುವಲ್ಲಿ ಕುವೆಂಪು ಮತ್ತು ಬೇಂದ್ರೆಯವರು ಅತ್ಯಂತ ಪ್ರಮುಖ ಕವಿಗಳಾಗಿದ್ದಾರೆ.
ಕನ್ನಡತನ ಎನ್ನುವುದು ಕೇವಲ ಭಾಷಿಕ ಗುರುತಲ್ಲ ಅದೊಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಗ್ರಹಿಕೆಗಳ ಮಾದರಿ. ಈ ಗ್ರಹಿಕಾ ಮಾದರಿ ಏಕರೂಪಿಯಾಗಿರದೇ, ಬಹುಳತೆಯಿಂದ ಕೂಡಿರುವ ವಿದ್ಯಮಾನ ಆಗಿರಬೇಕಾಗುತ್ತದೆ. ಈ ಬಹುಳತೆಯ ಚೌಕಟ್ಟಿನೊಳಗೆ ಕನ್ನಡ ನುಡಿಯ ಸಾಮಾಜಿಕ ವಿನ್ಯಾಸವನ್ನು ಅರಿಯುವುದಕ್ಕೆ ಬೇಕಾಗುವ ದಾರಿಗಳನ್ನು ಕುವೆಂಪು ಅವರು ಕಂಡುಕೊಂಡಿರುವುದನ್ನು ಅವರ ಒಟ್ಟು ಬರಹಗಳಲ್ಲಿ ನೋಡುತ್ತೇವೆ.
ನುಡಿ ಬಗೆಗಿನ ಸವಾಲುಗಳನ್ನು ಕುವೆಂಪು ಅವರು ಕೈಗೆತ್ತಿಕೊಂಡಿರುವ ಬಗೆಯೇ ಅತ್ಯಂತ ವಿಶಿಷ್ಟವಾಗಿರುವಂತಹದು. ನುಡಿ ಕುರಿತ ಇವರ ಈ ದಾರ್ಶನಿಕತೆ ಹೊಸ ಸಾಮಾಜಿಕ ವಿನ್ಯಾಸಕ್ಕೆ (ನ್ಯೂ ಸೋಶಿಯಲ್ ಆರ್ಡರ್) ತುಡಿಯುವ ಬಗೆಯಾಗಿದೆ. ಈ ವಿನ್ಯಾಸಗಳು ಸಮಾನತೆ, ಸಹಬಾಳ್ವೆ, ಸಹೋದರತೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ನ್ಯಾಯದ ನಿಲುವುಗಳನ್ನೂ ಒಳಗೊಂಡಿರುತ್ತವೆ. ತಳಸಮುದಾಯ ಮತ್ತು ಹೆಣ್ಣು ಮಕ್ಕಳ ಸಾಮಾಜಿಕ ವಿಮೋಚನೆಯ ಹೊಸ ದಾರಿಗಳನ್ನು ಕನ್ನಡತನದ ಹೊಸ ವ್ಯಾಖ್ಯಾಗಳ ಮೂಲಕ ಅಣಿಗೊಳಿಸುವ ದೊಡ್ಡ ಸಾಹಸವನ್ನು ಕುವೆಂಪು ಅವರು ಮಾಡಿದ್ದಾರೆ.
ಇವರಿಗೆ ಕನ್ನಡತನ ಎನ್ನುವುದು ಸಾಮಾಜಿಕ ಒಳಗೊಳ್ಳುವಿಕೆಯ ವಿನ್ಯಾಸವೂ ಆಗಿರುತ್ತದೆ. ಸಮಾಜವೆಂದರೆ ಅದೊಂದು ಬಹುಳತೆಯ ನೋಟಕ್ರಮ ಮತ್ತು ವಿಭಿನ್ನ ಲೋಕದೃಷ್ಟಿಗಳ ಆಗರ ಎಂಬುದನ್ನು ಕುವೆಂಪು ಮನಗಂಡಿದ್ದರು ಹಾಗೂ ಅದನ್ನು ತಮ್ಮ ಸಾಹಿತ್ಯಕ ನಿರೂಪಣೆಗಳ ಮೂಲಕವೂ ಸಾಧಿಸಿ ತೋರಿಸಿದರು. ಈ ಇಡೀ ಪ್ರಕ್ರಿಯೆಯಲ್ಲಿ ಅನುಭವದ ನೆಲೆ ಮತ್ತು ಭಾಷೆಗಳ ನಡುವಣ ಅನುಸಂಧಾನದ ಮಾದರಿಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ. ಹಾಗಾಗಿಯೇ ಗುತ್ತಿ, ತಿಮ್ಮಿ, ಪೀಂಚಲು, ಜಲಗಾರ, ಶಂಭೂಕ, ಏಕಲವ್ಯ ಇವರ ವ್ಯಕ್ತಿತ್ವದ ಮಾದರಿಗಳು ಎಲ್ಲ ಕಾಲದ ಕನ್ನಡತನದ ಸೂಚಕಗಳಾಗಿ ರೂಪುಗೊಂಡಿವೆ.
ಕನ್ನಡತನದ ಅಭಿವ್ಯಕ್ತಿಯಾಗಿ ಭಾಷೆಯನ್ನು ರೂಪಿಸುವುದೆಂದರೆ ಅದು ಕೇವಲ ಭಾಷಿಕ ರಾಜಕಾರಣದ ನಿಲುವು ಮಾತ್ರವಾಗದೆ, ಸಮೂಹಗಳ ಇಡೀ ಬದುಕಿನ ಜ್ಞಾನಮೀಮಾಂಸೆಯೂ ಮತ್ತು ಚಹರೆಯೂ ಆಗಿ ನಿರ್ಮಾಣಗೊಂಡಿರುತ್ತದೆ. ಅಂದರೆ ಭಾಷೆಯೊಂದು ಕೇವಲ ರಾಜಕೀಯ-ಸಾಮಾಜಿಕ ಪ್ರಜ್ಞೆ ಮಾತ್ರವಾಗದೇ, ಸಮೂಹಗಳ ಬದುಕಿನ ಪ್ರಜ್ಞೆ ಮತ್ತು ಅಸ್ತಿತ್ವದ ಮೂಲನೆಲೆಯಾಗುವ ಪ್ರಕ್ರಿಯೆಯು ಏರ್ಪಡುತ್ತದೆ. ಪರಿಣಾಮವಾಗಿ ಭಾಷೆ ಎನ್ನುವುದು ವಿಮೋಚನೆಯ ನೆಲೆಯಾಗಿ ರೂಪುಗೊಳ್ಳುತ್ತದೆ.
ಕುವೆಂಪು ಅಂಥವರ ಸಾಹಿತ್ಯ ಅಭಿವ್ಯಕ್ತಿಯು ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಮೈದಾಳಿದೆ. ಹಾಗಾಗಿ ಬ್ರಾಹ್ಮಣ್ಯ ಮತ್ತು ವೈದಿಕ ಆಲೋಚನಾ ಕ್ರಮವನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿದ್ದ ಭಾಷಿಕ ವಿನ್ಯಾಸಗಳನ್ನು, ಸಬಾಲ್ಟ್ರನ್ ಸಮೂಹಗಳ ಅಭಿವ್ಯಕ್ತಿಗೆ ಪೂರಕವಾಗಿ ಮರುವಿನ್ಯಾಸಗೊಳಿಸುವ ಒಂದು ದೊಡ್ಡ ಭಾಷಿಕ ತಿರುವು ಕುವೆಂಪು ಅವರ ಸಾಹಿತ್ಯ ಹಾಗೂ ವೈಚಾರಿಕ ಅಭಿವ್ಯಕ್ತಿಯಲ್ಲಿ ಕಾಣುತ್ತೇವೆ.
ಒಂದು ನಿರ್ದಿಷ್ಟ ಸಂಸ್ಕೃತಿ ಇಲ್ಲವೇ ಸಾಮಾಜಿಕ ಅಸ್ಮಿತೆಯ ಸಾಂಕೇತಿಕತೆಯನ್ನು ಪಡೆದುಕೊಂಡಿದ್ದ ಭಾಷೆಯನ್ನು ನಿರಾಕರಿಸುವುದೇ ಒಂದು ಸಾಹಿತ್ಯಕ ಕ್ರಾಂತಿಗೆ ಕಾರಣವಾಗುತ್ತದೆ ಎನ್ನುವುದನ್ನು ಇವರು ನಿರೂಪಿಸಿದ್ದಾರೆ. ಶೂದ್ರ, ದಲಿತ ಇಲ್ಲವೇ ತಳಸಮೂಹಗಳ ಸಾಹಿತ್ಯ ನಿರೂಪಣೆಗಳಿಗೆ ಒಗ್ಗೂವ ಪರಿಭಾಷೆ, ರೂಪಕ, ಪ್ರತಿಮೆಗಳನ್ನು ಹೊಸದಾಗಿ ಸೃಷ್ಟಿಸುವ ಪ್ರತಿಮಾ ವಿಧಾನದ ಸ್ಪಷ್ಟ ಚಹರೆಗಳು ಕುವೆಂಪು ಅವರ ಒಟ್ಟು ಸಾಹಿತ್ಯದಲ್ಲಿ ಮೇಳೈಸಿರುವುದನ್ನು ಯಾರಾದರೂ ಗುರುತಿಸಬಹುದು.
ಅಂದರೆ ಕಾವ್ಯ (ಲಯ), ಕಥೆ-ಕಾದಂಬರಿ (ಕಥನ) ಹಾಗೂ ನಾಟಕ (ಸಂಭಾಷಣೆಗೆ) ಪ್ರಕಾರಗಳಿಗೆ ಹೊಸದಾದ ವೈಚಾರಿಕ ಮೊನಚು ಮತ್ತು ಕಾವ್ಯಮೀಮಾಂಸೆ-ಸೌಂಧರ್ಯ ಮೀಮಾಂಸೆಯನ್ನು ನೆಲೆಗೊಳಿಸುವ ಇರಾದೆಯಿಂದ ಕುವೆಂಪು ಹೊಸ ನುಡಿಗಟ್ಟನ್ನು ಕಟ್ಟಿಕೊಂಡರು. ಇಡೀ ಈ ವಿನ್ಯಾಸಕ್ಕೆ ಒಂದು ತಾತ್ವಿಕ ಪಾತಳಿಯಾಗಿ ಭಾಷೆ ಕುವೆಂಪು ಅವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ಕೆಲಸ ಮಾಡಿದೆ.
ಕುವೆಂಪು ಅವರಿಗೆ ಅಭಿವ್ಯಕ್ತಿ ಎನ್ನುವುದು ಕೇವಲ ರಸಾನುಭವದ ವಿದ್ಯಮಾನವಾಗದೇ, ಕ್ರಿಯೆ, ತತ್ವ, ಪ್ರತಿಭಟನೆಯ ಕುರುಹುಗಳನ್ನು ಸೂಚಿಸುವುದೇ ಆಗಿರುತ್ತದೆ. ಮುಂದೆ ದಲಿತ ಬಂಡಾಯದ ಸನ್ನಿವೇಶದಲ್ಲಿ ಚರ್ಚಿಸಿದಂತಹ ಲಿಟರೇಚರ್ ಆಫ್ ಆಕ್ಸನ್ ಹಾಗೂ ಲಿಟರೇಚರ್ ಆಫ್ ಪ್ರೊಟೆಸ್ಟ್ ಎಂಬಂತಹ ಅಭಿವ್ಯಕ್ತಿಯ ಮಾದರಿಗಳು ಅದಾಗಲೇ ಕುವೆಂಪು ಅವರಲ್ಲಿ ಅವತರಿಸಿಬಿಟ್ಟಿದ್ದವು.
ಹಾಗಾಗಿಯೇ ಕುವೆಂಪು ಅವರಿಗೆ ಅಭಿವ್ಯಕ್ತಿ ಎಂಬುದು ಮೂಲಭೂತವಾಗಿ ಸಾಮಾಜಿ-ಸಾಂಸ್ಕೃತಿಕ ತಾರತಮ್ಯಗಳನ್ನೂ ಹಾಗೂ ಅಧಿಕಾರ ಸಂಬಂಧದ ವಿನ್ಯಾಸಗಳನ್ನು ಪ್ರಕಟಿಸುವ ಕುರುಹುವಾಗಿ ಪರಿಣಮಿಸಿತ್ತು. ಮಾತೆಂಬುದು ಜೋತೀರ್ಲಿಂಗ ಎನ್ನುವ ಈ ಹೇಳಿಕೆ ಎನ್ಲೈಟನ್ಮೆಂಟಿನ ರೂಪಕವಾಗಿದೆ (ಬೆಳಕು). ಈ ಗ್ರಹಿಕೆ ಕುವೆಂಪು ಅವರಲ್ಲಿ ಅತ್ಯಂತ ನಿಚ್ಚಳವಾಗಿಯೇ ಒಡಮೂಡಿದೆ.
ಮಾತೆಂಬುದೇ ವಿಮೋಚನೆಯ ಹಾದಿ ಎಂಬುದನ್ನು ಬಲವಾಗಿ ನಂಬಿದ್ದ ಕುವೆಂಪು ಅವರು ಭಾಷೆಯ ಗ್ರಹಿಕೆ (ಅಂತಸ್ಥನೆಲೆ) ಮತ್ತು ಅಭಿವ್ಯಕ್ತಿ (ಅಸ್ಮಿತೆಯ ನೆಲೆ) ಎಂಬೀ ಎರಡೂ ಆಯಾಮಗಳನ್ನು ಬಹಳ ಖಚಿತವಾಗಿ ತಮ್ಮ ಸಾಹಿತ್ಯದಲ್ಲಿ ನೆಲೆಗೊಳಿಸಿದ್ದರು. ಇವರ ಅಭಿವ್ಯಕ್ತಿಯ ಮಾದರಿಗಳು ಪ್ರಕಟಗೊಂಡಿರುವುದು ಪ್ರತಿಮೆ, ರೂಪಕ ಹಾಗೂ ಸಾಂಕೇತಿಕವಾದದ್ದು ಎಂದು ಮೇಲ್ನೋಟದಲ್ಲಿ ಗುರುತಿಸಿದರೂ, ಈ ವಿನ್ಯಾಸವು ಈಗಾಗಲೇ ಹೇಳಿದಂತೆ ಪ್ರತಿಮಾ ವಿಧಾನದ ಮಾದರಿಯಾಗಿದೆ.
ಈ ಮಾದರಿಯನ್ನು ಮೆಟಾನಮಿಕ್-ಮೆಟಾಫರಿಕ್ (ರೋಮನ್ ಯಾಕೋಬ್ಸನ್ ಅವರ ಪರಿಕಲ್ಪನೆಗಳು) ಮಾದರಿಗಳ ಸಹಯೋಗದಿಂದ ನೆಲೆಗೊಂಡ ದೃಷ್ಟಿಕೋನವನ್ನಾಗಿ ಇವರ ಅಭಿವ್ಯಕ್ತಿಯಲ್ಲಿ ನೋಡಬಹುದು. ಈ ಬಗೆಯ ಸಂಕಥನವನ್ನು ಕಟ್ಟುವ ಪ್ರಕ್ರಿಯೆಯು ಅತ್ಯಂತ ಸಂಕೀರ್ಣವಾದದ್ದು ಎಂಬುದು ಇಲ್ಲಿ ಗೋಚರಿಸುತ್ತದೆ.
“ಕಥೆ ನಿನ್ನದಾಡೊಡಂ..ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ ಕೃತಿಯೆತ್ತಿ” ಹಾಗೂ “ಇತಿಹಾಸಮಲ್ತು, ಕಥೆಯಲ್ತು ಕಥೆ ತಾಂ ನಿಮಿತ್ತಮಾತ್ರಂ” ಎಂಬೀ ಕುವೆಂಪುವರ ಹೇಳಿಕೆಗಳು ಅವರ ಸಾಹಿತ್ಯದ ದಾರ್ಶನಿಕತೆಯನ್ನು ವಿವರಿಸುತ್ತವೆ. ಈ ದಾರ್ಶನಿಕತೆಯ ಆಕೃತಿಯನ್ನು ನಿರ್ಮಿಸಲು ಹೊಸ ಭಾಷೆ ಮತ್ತು ಪರಿಭಾಷೆಯನ್ನು ಕುವೆಂಪು ಅವರು ಅತ್ಯಂತ ಪರಿಣಾಮಕಾರಿಯಾಗಿ ರೂಪಿಸಿ ಬಳಸಿಕೊಂಡರು.
ಕುವೆಂಪು ಅವರೇ ಹೇಳಿಕೊಂಡಂತೆ, ದರ್ಶನ ಮುಖ್ಯವೇ ಹೊರತು ಕತೆಯಲ್ಲ. ಕಥೆ, ಇತಿಹಾಸ, ಬಹಿರ್ಘಟನೆ ಇವೆಲ್ಲ ಜಡವಾದರೆ ದರ್ಶನವೊಂದೇ ಚೈತನ್ಯ. ಜಡವನ್ನು ಚೈತನ್ಯವನ್ನಾಗಿ ಮಾರ್ಪಡಿಸುವ ಈ ಹಂಬಲದಲ್ಲಿ ಭಾಷೆಯನ್ನು ಒಂದು ಪ್ರಮುಖ ಅಸ್ತ್ರವನ್ನಾಗಿಯೇ ಇವರು ಬಳಸಿಕೊಂಡರು ಎನ್ನುವುದು ನನ್ನ ಅಭಿಮತ.
ಅಂದರೆ ಕುವೆಂಪು ಅವರ ಕ್ರಿಟಿಕಲ್ ಡಿಸ್ಕೋರ್ಸಗಳು ಅಂಚಿನ ವ್ಯಕ್ತಿ/ಸಮೂಹಗಳ ಅಸ್ತಿತ್ವ, ಅಸ್ಮಿತೆ, ಸಬಲೀಕರಣವನ್ನು ಕುರಿತು ನಿಗಾವಹಿಸುತ್ತವೆ. ವಸಾಹತುಶಾಹಿ ಹಾಗೂ ವೈದಿಕಶಾಹಿ ಪ್ರಭಾವಕ್ಕೆ ಒಳಗಾಗಿದ್ದ ಪ್ರತಿಯೊಂದು ಸಮುದಾಯವು ಆಯಾ ಪ್ರಭಾವದಿಂದ ಹೊರಬರದೇ, ಅದು ನೆಲೆಗೊಳಿಸಿರುವ ಅಧಿಕಾರ ಸಂರಚನೆಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ ವಸಾಹತುಶಾಹಿ/ವೈದಿಕಶಾಹಿಗೆ ಒಳಗಾಗಿದ್ದ ಸಮೂಹಗಳು ಕಿಳರಿಮೆ ಹಾಗೂ ಪರಾವಲಂಬನೆಯಿಂದ ಬಳಲುತ್ತಿರುತ್ತವೆ.
ಹಾಗಾಗಿಯೇ ವಸಾಹತುಶಾಹಿ ಸಂದರ್ಭದಲ್ಲಿ ನೆಲೆಗೊಂಡಿದ್ದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ರಚನೆಗಳು ಇವತ್ತು ವಸಾಹತೋತ್ತರ ಸನ್ನಿವೇಶದಲ್ಲಿಯೂ ನಮ್ಮ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಬದುಕುಗಳನ್ನು ಸೋಂಕಿಸಿರುತ್ತವೆ. ಏಕೆಂದರೆ, ವಸಾಹತುಶಾಹಿ ಅಥವಾ ವೈದಿಕಶಾಹಿ ವಿರೋಧಿ ರಾಷ್ಟ್ರೀಯತೆಯ ಚಹರೆಗಳು ಕೂಡ ಬೂರ್ಜ್ವಾ ಲಕ್ಷಣಗಳನ್ನು ಮೈಗೂಡಿಸಿಕೊಳ್ಳುವ ಹಾಗೂ ಆ ಮುಖೇನ ವಸಾಹತುಶಾಹಿ ಸನ್ನಿವೇಶದಲ್ಲಿ ಅತ್ಯಂತ ಪ್ರಬಲವಾಗಿದ್ದ ಸಾಮಾಜಿಕ ರಾಜಕೀಯ ಅಸಮಾನತೆಗಳು ಮರುಹುಟ್ಟು ಪಡೆಯುತ್ತವೆ ಎಂಬುದನ್ನೂ ಇಲ್ಲಿ ಕಾಣಬಹುದು.
ಈ ಒಟ್ಟು ಬದುಕಿನ ಸಂಕೀರ್ಣತೆಯನ್ನು ಬಿಡಿಸಿ ನೋಡುವ ಒಂದು ತಾತ್ವಿಕ ಚೌಕಟ್ಟನ್ನೊಂದು ಕುವೆಂಪು ಅವರು ಹೇಗೆ ರೂಪಿಸಿದ್ದಾರೆ ಅನ್ನುವುದನ್ನು ಅವರ ಇಡೀ ಅಭಿವ್ಯಕ್ತಿಯ ಮೂಲಕ ನಾವು ಅರಿಯಬಹುದಾಗಿದೆ. ಬದುಕಿನ ಯಾವ ಆಯಾಮವನ್ನು ಸಾಹಿತ್ಯ ಕೃತಿಯ ಮೂಲಕ ಪ್ರಚುರಪಡಿಸಬೇಕು ಎನ್ನುವ ಸಾಂಸ್ಕೃತಿಕ ರಾಜಕಾರಣದ ಸ್ಪಷ್ಟ ಕಲ್ಪನೆ ಕುವೆಂಪು ಅವರಿಗಿತ್ತು. ಸೃಜನಶೀಲ ಅಭಿವ್ಯಕ್ತಿಯ ಮೂಲಕವೇ ಸಮೂಹಗಳ ಎಲ್ಲ ಕಾಲದ ಬದುಕಿಗೂ ಅವಶ್ಯವಾಗುವ ವೈಚಾರಿಕ ಪಾತಳಿಯನ್ನಾಗಿ ಪರಿವರ್ತಿಸಿದ ದಾರ್ಶನಿಕ ಕುವೆಂಪು.
ಈ ಸಾಹಿತ್ಯಕ ಹಾಗೂ ವೈಚಾರಿಕ ನಿರ್ವಹಣೆಯನ್ನು ಭಾಷಿಕ ನಿಲುವುಗಳಿಂದ ಆಗು ಮಾಡಿರುವುದು ಅತ್ಯಂತ ಮಹತ್ವದ ತಿರುವು ಎಂಬುದನ್ನು ನಾವ್ಯಾರೂ ಅಲ್ಲಗಳೆಯುವಂತಿಲ್ಲ. ಅಂದರೆ ಹೊಸ ಜ್ಞಾನ ಸೃಷ್ಟಿಯೆನ್ನುವುದು ಕೇವಲ ಅನುಭವದ ಕ್ರೂಢೀಕರಣವಲ್ಲ ಬದಲಾಗಿ ಅದನ್ನು ಹೊಸ ನುಡಿಗಟ್ಟಿನ ಮೂಲಕ ಕಟ್ಟಿಕೊಡುವ ಬಗೆಯೇ ಮುಖ್ಯ. ಈ ಕೆಲಸವನ್ನು ಕುವೆಂಪು ಅತ್ಯಂತ ಸಮರ್ಥವಾಗಿ ಮಾಡಿರುತ್ತಾರೆ. ಕನ್ನಡ, ಕರ್ನಾಟಕ, ಕನ್ನಡಿಗರು ಎನ್ನುವ ಸಮೀಕರಣದ ಹಿಂದಿನ ಅತೀ ಸರಳೀಕೃತವಾದ ಗ್ರಹಿಕೆಯನ್ನು ಬುಡಮೇಲು ಮಾಡಿದ್ದಾರೆ.
ಈ ದೃಷ್ಟಿಯಿಂದಲೇ ಭಾಷೆ ಎನ್ನುವುದು ವಿಮೋಚನೆಯ ಅಸ್ತ್ರ ಎಂದು ಹೇಳಲಾಗುತ್ತದೆ. ಭಾಷೆ ಮತ್ತು ಭಾಷಿಕರ ಮನಸ್ಥಿತಿಯನ್ನು ಗೋಡೆಗಳ ಸ್ವರೂಪದಲ್ಲಿ ಕಲ್ಪಸಿಕೊಂಡಿರುವ ಸನ್ನಿವೇಶದಲ್ಲಿಯೇ ಅನಿಕೇತನದ ಕಲ್ಪನೆಯನ್ನು ಇವರು ರೂಪಿಸಿದರು. ಅಷ್ಟೆಯಲ್ಲದೇ ಲೌಕಿಕ ಮತ್ತು ಅಲೌಕಿಕ ಪರಿಕಲ್ಪನೆಗಳ ಮೂಲಕ ಬದುಕಿನ ಸಂವೇದನೆಯಲ್ಲಿ ಅಡಗಿಸಿದ್ದ ಡೈಕಾಟಮಿಯನ್ನು ನಿರಾಕರಿಸಿ, ಅವೆರಡನ್ನೂ ಮೇಳೈಸಿಕೊಂಡಿರುವುದೇ ಬದುಕು ಅನ್ನುವ ತಾತ್ವಿಕತೆಯನ್ನು ಇವರ ಸಾಹಿತ್ಯದಲ್ಲಿ ಕಾಣುತ್ತೇವೆ. ಅದಕ್ಕಾಗಿಯೇ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯಲ್ಲಿ ಹೇಳಿದ “ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ…” ಎಂಬೀ ಮಾತು ಬದುಕಿನ ದೊಡ್ಡ ದರ್ಶನವನ್ನು ಕೊಡುವ ಕೈವಲ್ಯವಾಗಿದೆ. ಆಲೋಚನೆ ಮತ್ತು ಭಾಷೆಗಳ ನಡುವಣ ಸಂಬಂಧದ ವಿಭಿನ್ನ ವಿನ್ಯಾಸಗಳು ಇಲ್ಲಿ ಅತ್ಯಂತ ನಿಚ್ಚಳವಾಗಿಯೇ ಕಾಣುತ್ತವೆ.
ಕಾಲದ ಬಿಕ್ಕಟ್ಟಿಗೆ ಕಾರಣವಾಗಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ವಿದ್ಯಮಾನಗಳು ಕುವೆಂಪು ಅವರ ಸಾಹಿತ್ಯದಲ್ಲಿ ಅಂತರ್ಗತವಾಗಿವೆ ಎನ್ನುವುದನ್ನು ಈ ಭಾಷಿಕ ವಿನ್ಯಾಸಗಳು ಪ್ರತಿಪಾದಿಸುತ್ತವೆ.
ಸಂವೇದನೆ ಮತ್ತು ಅಭಿವ್ಯಕ್ತಿಯ ರೂಪ ಇವುಗಳ ನಡುವೆ ಇರುವ ಭಾಷೆಯ ಪಾತ್ರ ಹೇಗೆ ಬದಲಾಗಬೇಕು ಎನ್ನುವುದನ್ನು ಕುವೆಂಪು ಅವರಲ್ಲಿ ನೋಡಬಹುದು. ಅಂದರೆ ಭಾಷೆಯ ಜವಾಬ್ದಾರಿ, ಸೂಕ್ಷ್ಮತೆ ಹಾಗೂ ಬದ್ಧತೆ ಏನು? ಅದನ್ನು ನಾವು ರೂಪಿಸುವ ಬಗೆ ಯಾವುದು? ಸಮೂಹಗಳ ಬದುಕು ನೆಲೆಗೊಳ್ಳಲು ಭಾಷೆಯ ಪಾತ್ರ ಎಂತಹದು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರಗಳು ಕುವೆಂಪು ಅವರಲ್ಲಿ ದೊರೆಯುತ್ತವೆ. ಈ ತಾತ್ವಿಕತೆಯನ್ನು ಅರಿಯಲು ಭಾಷೆ ಮತ್ತು ಸಾಹಿತ್ಯಗಳ ನಡುವಣ ಸಂಬಂಧವನ್ನು ಅರಿಯುವುದು ಅವಶ್ಯ. ಸಾಹಿತ್ಯ ಪಠ್ಯ ಸ್ವಭಾವತ ವಿಶಿಷ್ಟವಾಗಿರುವಂತಹದು.
ಇಲ್ಲಿ ಸಾಹಿತ್ಯ ಮತ್ತು ಭಾಷೆಗಳ ನಡುವಣ ವಿಶಿಷ್ಟ ಸಂಬಂಧ ಎಂತಹದು ಎನ್ನುವುದನ್ನು ಅರಿಯುವುದಕ್ಕೆ ಬೇಕಾದ ಇಲ್ಲವೇ ಪರಿಭಾವಿಸುವುದಕ್ಕೆ ಬೇಕಾದ ಅವಕಾಶವೂ ವ್ಯಕ್ತವಾಗುತ್ತದೆ. ಅಂದರೆ ಸಾಹಿತ್ಯದ ಮೂಲಕ ಏರ್ಪಡುವ ಯಾವುದೇ ಬಗೆಯ ಅನುಭವ ಹಾಗೂ ಅರಿವು ಇಲ್ಲವೇ ತಿಳಿವು ನಮಗೆ ಒಂದು ತಾತ್ವಿಕ ವಿನ್ಯಾಸವಾಗಿ ಭಾಷೆಯ ಮೂಲಕವೇ ಲಭ್ಯವಾಗುತ್ತವೆ. ಇಲ್ಲಿ ಭಾಷೆ ಅತ್ಯಂತ ಪ್ರಾಥಮಿಕ ವಿದ್ಯಮಾನವಾಗಿದೆ. ತಿಳಿವೊಂದು ಮೈದಾಳುವ ಸನ್ನಿವೇಶ ಹಾಗೂ ಸಂಬಂಧಗಳು ವಿಭಿನ್ನ ನೆಲೆಯಲ್ಲಿ ಅಸ್ತಿತ್ವದಲ್ಲಿರುತ್ತವೆ.
ಅಂದರೆ ಭಾಷಾಶಾಸ್ತ್ರ ಮತ್ತು ಇತರ ಜ್ಞಾನಶಿಸ್ತುಗಳ ನಡುವಣ ಸಂಬಂಧದಲ್ಲಿ ಈ ವಿನ್ಯಾಸವನ್ನು ಮನಗಾಣಬಹುದು. ಚರಿತ್ರೆ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮೊದಲಾದ ಈ ಎಲ್ಲ ವಲಯಗಳಲ್ಲಿ ಮೈದಾಳುವ ತಿಳಿವು ಭಾಷೆಯನ್ನೇ ನೆಲೆಯಾಗಿಸಿಕೊಂಡಿರುತ್ತದೆ. ಏಕೆಂದರೆ, ಭಾಷಾಕೇಂದ್ರಿತ ವಾಸ್ತವಗಳು, ಸನ್ನಿವೇಶಗಳು, ನಿರೂಪಣೆ ಮುಂತಾದವುಗಳನ್ನು ಪರಿಶೀಲಿಸುವ ಇಲ್ಲವೇ ವಿಶ್ಲೇಷಿಸುವ ಮೂಲಕವೇ ತಿಳಿವಿನ ಸಾಧ್ಯತೆಯನ್ನು ನಿಚ್ಚಳವಾಗಿ ಅರಿಯಬಹುದು.
ಆದರೆ ದಿನನಿತ್ಯದ ಮಾತುಕತೆ, ಬದುಕಿನ ವ್ಯವಹಾರಗಳು, ಸಾಹಿತ್ಯ ಇಲ್ಲವೇ ಇನ್ನ್ಯಾವುದೇ ಜ್ಞಾನಶಿಸ್ತಿನಷ್ಟು ಸಂಕೀರ್ಣವಾಗಿರುವುದಿಲ್ಲ. ಅಂದರೆ ಯಾವುದೇ ಸಂಕಥನ ಓದು ಮತ್ತು ಭಾಷಾಶಾಸ್ತ್ರಗಳ ನಡುವೆ ಏರ್ಪಡುವಷ್ಟು ಸಂಕೀರ್ಣತೆ, ನಮ್ಮ ದಿನದ ಮಾತುಕತೆಗಳು ಗಹನತೆಯನ್ನು ಪಡೆದುಕೊಳ್ಳದೇ, ಸಹಜಸ್ಥಿತಿಯಲ್ಲಿಯೇ ತಮ್ಮ ಗುರಿ ಉದ್ದೇಶಗಳನ್ನು ಪೊರೈಸುತ್ತವೆ.
ಬದುಕಿನ ಇಂತಹ ಸಹಜ ಮಾತುಕತೆ, ಅನುಭವ ಅಥವಾ ನಿರೂಪಣೆಗಳನ್ನು ಲಿಂಗ್ವಿಸ್ಟಿಕ್ ಪ್ರ್ಯಾಗ್ಮಾಟಿಸಂ ಮತ್ತು ಸಂಕಥನ ವಿಶ್ಲೇಷಣೆಯ ಚೌಕಟ್ಟಿನಲ್ಲಿಟ್ಟು ನೋಡಿದರೆ, ಸಾಹಿತ್ಯ ಪಠ್ಯಗಳಲ್ಲಿರುವ ನಿರೂಪಣೆಗಳಷ್ಟೇ, ಇವು ಕೂಡ ಗಹನವಾಗಿ/ಗಂಭೀರವಾಗಿ ಇರುತ್ತವೆ ಎನ್ನುವ ವಾಸ್ತವವನ್ನು ಮನಗಾಣುತ್ತೇವೆ. ಬದುಕಿನ ದೈನಂದಿನ ದಂದುಗವೇ ಒಂದು ತಾತ್ವಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪರಿಪ್ರೇಕ್ಷ್ಯದಲ್ಲಿ ನೆಲೆಗೊಂಡು ಪ್ರಕಟಗೊಳ್ಳುತ್ತದೆ. ಆದ್ದರಿಂದ ಸಾಹಿತ್ಯ ಪಠ್ಯಗಳಲ್ಲಿ ಅಡಕವಾಗಿರುವ ಅನುಭವ ವಿಶೇಷವಾಗಿ ನಮ್ಮ ಬದುಕಿನ ದಾರ್ಶನಿಕತೆಯಾಗಿ ಕಾಣುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲ ಎಲ್.ಎಚ್.ಅರುಣಕುಮಾರ್ ಮನವಿ
-
ದಿನದ ಸುದ್ದಿ2 days agoಮೊದಲ ಸಂಪುಟ ಸಭೆಯಲ್ಲೇ ಮಹತ್ವದ 5 ಘೋಷಣೆ ಮಾಡಿದ ಸಿಎಂ ಡಿಕೆಶಿ
-
ದಿನದ ಸುದ್ದಿ4 days agoದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’
-
ಅಂಕಣ2 days agoಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
-
ದಿನದ ಸುದ್ದಿ4 days agoಕುಂಬಳಕಾಯಿ ಬೀಜದಲ್ಲಿ ‘ ಜೀವ ಸಂಜೀವಿನಿ’ : ಮಿಸ್ ಮಾಡ್ದೆ ಓದಿ ; ಆರೋಗ್ಯದ ಗುಟ್ಟು ತಿಳಿಯಿರಿ
-
ದಿನದ ಸುದ್ದಿ2 days agoಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ
-
ದಿನದ ಸುದ್ದಿ2 days agoಧನ್ಯವಾದಗಳು ಕರ್ನಾಟಕ : ಸಿಎಂ ಡಿಕೆ ಶಿವಕುಮಾರ್
-
ದಿನದ ಸುದ್ದಿ2 days agoಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ

