Connect with us

ಬಹಿರಂಗ

ಮತಾಂತರ ನಿಷೇಧ ಕಾಯ್ದೆ : ಅಸಾಂವಿಧಾನಿಕ ಶಾಸನ ಮಾನವೀಯ ಜಗತ್ತಿಗೆ ಮಾನವ ಸೌಹಾರ್ದತೆಗೆ ಮತ ಅನಿವಾರ್ಯವಲ್ಲ ನಿಮಿತ್ತ ಮಾತ್ರ

Published

on

ಸಾಂದರ್ಭಿಕ ಚಿತ್ರ
  • ನಾ ದಿವಾಕರ

ಒಂದು ಸ್ವಸ್ಥ ಸಮಾಜಕ್ಕೆ ಬೇಕಾಗಿರುವುದು ಪರಸ್ಪರ ಸೌಹಾರ್ದಯುತವಾಗಿ ಬಾಳಲು ಅನುಕೂಲವಾದಂತಹ ಮನುಜ ಸಂಬಂಧಗಳು. ಮನುಜ ಸಂಬಂಧಗಳನ್ನು ನಿರ್ಮಿಸಲು ಬೇಕಿರುವುದು ಪರಸ್ಪರ ವಿಶ್ವಾಸ ಮತ್ತು ನಂಬಿಕೆ. ಈ ನಂಬಿಕೆಗಳನ್ನು ರೂಢಿಸಿಕೊಳ್ಳಲು ಬೇಕಿರುವುದು ಮಾನವ ಪ್ರಜ್ಞೆ. ಇದನ್ನು ಹೊರತಾದ ಯಾವುದೇ ಅಸ್ಮಿತೆಗಳು ಮಾನವ ಜಗತ್ತಿಗೆ ಅನಗತ್ಯವಾದುದು. ಹಾಗೆಯೇ ಒಂದು ಮತ ಅಥವಾ ಧರ್ಮ ಅಥವಾ ಜಾತಿ, ಪಂಥ, ಪಂಗಡ ಇತ್ಯಾದಿ.

ಆದರೂ ಮಾನವ ಸಮಾಜ ತನ್ನ ಸಾಂಸ್ಥಿಕ, ಸಾಮುದಾಯಿಕ, ಜನಾಂಗೀಯ ಅಸ್ಮಿತೆಗಳಿಂದಾಚೆಗೆ ಬದುಕುವುದನ್ನೇ ಕಲಿತಿಲ್ಲ ಎನ್ನುವುದು ನಮ್ಮ ಕಣ್ಣೆದುರಿನ ವಾಸ್ತವ. ಮಾನವ ಸಮಾಜವೇ ರೂಪಿಸಿಕೊಂಡ ಒಂದು ನಿರ್ದಿಷ್ಟ ಮತ, ಹಿಂದೂ-ಇಸ್ಲಾಂ-ಕ್ರೈಸ್ತ ಇತ್ಯಾದಿ, ತನ್ನ ಸಾಂಸ್ಥಿಕ ಸ್ವರೂಪವನ್ನು ಗಟ್ಟಿಗೊಳಿಸುವ ಹಾದಿಯಲ್ಲಿ ಮಾನವೀಯ ಸ್ಪರ್ಶವನ್ನೇ ಕಳೆದುಕೊಂಡು ಅಸ್ಮಿತೆಗಳ ಶರಮಂಚದ ಮೇಲೆ ಆಸೀನರಾಗಿಬಿಡುತ್ತವೆ.

ಈ ಅಸ್ಮಿತೆಗಳ ಚೌಕಟ್ಟಿನಲ್ಲೇ ಹುಟ್ಟಿ ಬೆಳೆದು ತಮ್ಮ ವ್ಯಕ್ತಿಗತ ನಂಬಿಕೆಗಳನ್ನು ರೂಢಿಸಿಕೊಳ್ಳುವ ಮನುಷ್ಯನಿಗೆ ಮತ ಅಥವಾ ಧರ್ಮ ಎನ್ನುವುದು ಒಂದು ಸಾಂತ್ವನದ ನೆಲೆಯಾಗಿ ಮಾತ್ರವೇ ನೆರವಾಗುತ್ತದೆ. ನಿತ್ಯ ಜೀವನದ ಸಂಕಷ್ಟಗಳನ್ನು ಮರೆಯಲು, ತನ್ನ ಬದುಕಿನ ಹತಾಶೆ ಮತ್ತು ಆತಂಕಗಳನ್ನು ಹೋಗಲಾಡಿಸಿಕೊಳ್ಳಲು ಮನುಷ್ಯ ಜೀವಿಗೆ ತನ್ನ ವ್ಯಾಪ್ತಿಗೆ ನಿಲುಕದ ಅತೀತ ಶಕ್ತಿಯ ಮೊರೆ ಹೋಗುವುದು ಅನಿವಾರ್ಯವಲ್ಲವಾದರೂ, ಹಲವಾರು ಸಂದರ್ಭಗಳಲ್ಲಿ ಅವಶ್ಯಕವಾಗಿಬಿಡುತ್ತದೆ.

ಬಡತನದ ಬೇಗುದಿ, ಹಸಿವು, ಸಾಮಾಜಿಕ ತಾರತಮ್ಯ , ದೌರ್ಜನ್ಯ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಜಾತಿ ಶ್ರೇಷ್ಠತೆಯಿಂದ ಪೋಷಿಸಲ್ಪಡುವ ಅಸ್ಪೃಶ್ಯತೆ ತಳಸಮುದಾಯಗಳ ಬದುಕಿನ ಹಾದಿಗೆ ಮುಳ್ಳುಗಳಾಗಿಯೇ ಕಾಣುತ್ತದೆ. ಈ ಸಾಮಾಜಿಕ ಅನ್ಯಾಯಗಳ ಚೌಕಟ್ಟಿನಲ್ಲೇ ತನ್ನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಮತ್ತು ಘನತೆಯ ಬದುಕಿನ ಹಕ್ಕಿನಿಂದ ವಂಚಿತನಾಗುವ ವ್ಯಕ್ತಿ ಅಥವಾ ಸಮುದಾಯ, ಜನ್ಮದಾರಭ್ಯ ಒದಗಿಬಂದ ಮತ ಅಥವಾ ಧರ್ಮದ ನೆಲೆಗಳನ್ನು ತೊರೆದು ಮತ್ತೊಂದು ನೆಮ್ಮದಿಯ ತಾಣವನ್ನು ಅರಸುವುದು ಒಂದು ಸಹಜ ಸ್ವಾಭಾವಿಕ ಪ್ರಕ್ರಿಯೆ.

ಇಂದು ವ್ಯಾಪಕ ಚರ್ಚೆ ಮತ್ತು ವಿವಾದಕ್ಕೊಳಗಾಗಿರುವ ಮತಾಂತರದ ಪ್ರಶ್ನೆಯನ್ನೂ ಹೀಗೆಯೇ ನೋಡಬೇಕಿದೆ. ಸಾಂವಿಧಾನಿಕವಾಗಿ ಒದಗಿಸಲಾಗಿರುವ ವ್ಯಕ್ತಿಸ್ವಾತಂತ್ರ್ಯದೊಂದಿಗೇ ಭಾರತದ ಪ್ರಜೆಗಳಿಗೆ ತಮ್ಮ ಆಯ್ಕೆಯನುಸಾರ ಯಾವುದೇ ಮತವನ್ನು ಅನುಸರಿಸುವ ಸ್ವಾತಂತ್ರ್ಯವನ್ನೂ ನೀಡಲಾಗಿದೆ. ಸಂವಿಧಾನದ ಮೂರನೆಯ ಪರಿಚ್ಚೇದದಲ್ಲಿ ಮೂಲಭೂತ ಹಕ್ಕುಗಳನ್ನು ಪ್ರಸ್ತಾಪಿಸಲಾಗಿದೆ.

ಸಂವಿಧಾನ ವಿಧಿ 25 ರಿಂದ 28ರವರೆಗಿನ ನಿಯಮಗಳು ಭಾರತದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮವನ್ನು ಪಾಲಿಸುವ, ಅನುಸರಿಸುವ, ಪ್ರಚಾರ ಮಾಡುವ ಮತ್ತು ಆಚರಿಸುವ ಹಕ್ಕನ್ನು ನೀಡುತ್ತದೆ. ಸಾರ್ವಜನಿಕ ಸುವ್ಯವಸ್ಥೆಯನ್ನು, ನೈತಿಕತೆಯನ್ನು ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಅವಶ್ಯವಾಗಿರುತ್ತದೆ. ಅಂದರೆ ಯಾವುದೇ ವ್ಯಕ್ತಿಗೆ ತನ್ನ ವ್ಯಕ್ತಿಗತ ಬದುಕಿನಲ್ಲಿ ತನ್ನ ಮತವನ್ನು ತೊರೆದು ಮತ್ತೊಂದು ಮತವನ್ನು ಆಚರಿಸುವ ಹಕ್ಕು ಇರುತ್ತದೆ. ಈ ಸಾಂವಿಧಾನಿಕ ಹಕ್ಕು ಇಂದು ಮತಾಂತರದ ಪ್ರಶ್ನೆಯಾಗಿ ಪರಿಣಮಿಸಿದೆ.

ಮತಾಂತರ ಮತ್ತು ರಾಜಕಾರಣ

1960ರ ದಶಕದಿಂದಲೂ ಭಾರತದಲ್ಲಿ ಮತಾಂತರ ಒಂದು ರಾಜಕೀಯ ಚೌಕಟ್ಟಿನಲ್ಲೇ ಚರ್ಚೆಗೊಳಗಾಗುತ್ತಿದೆ. ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಪ್ರಕ್ಷುಬ್ಧತೆ ಉಂಟುಮಾಡದ ಈ ವಿದ್ಯಮಾನ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡುತ್ತದೆ. ಬಿಜೆಪಿ ಸರ್ಕಾರಗಳಿಗೆ ಮತ್ತು ಸಂಘಪರಿವಾರಕ್ಕೆ ತಮ್ಮ ಹಿಂದುತ್ವ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಮತಾಂತರದ ಪ್ರಶ್ನೆ ಒಂದು ಪ್ರಬಲ ಅಸ್ತ್ರವಾಗಿದೆ. “ ಅವಿದ್ಯಾವಂತ, ಬಡ ಹಿಂದೂಗಳು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಅಪಪ್ರಚಾರಕ್ಕೆ ಬಲಿಯಾಗಿ ಅನ್ಯಧರ್ಮಗಳನ್ನು ಸ್ವೀಕರಿಸುತ್ತಿದ್ದಾರೆ.

ಹಾಗಾಗಿ ಇತರ ರಾಜ್ಯಗಳಲ್ಲಿನ ಮತಾಂತರ ನಿಷೇಧ ಕಾಯ್ದೆಗಳನ್ನು ಪರಾಮರ್ಶಿಸಿ ರಾಜ್ಯದಲ್ಲೂ ಅಂತಹುದೇ ಕಾಯ್ದೆಯನ್ನು ಜಾರಿಗೊಳಿಸಬೇಕು ” ಎಂದು ಭಾಜಪದ ಮಂತ್ರಿಗಳೊಬ್ಬರು 2009ರಲ್ಲೇ ಹೇಳಿದ್ದುಂಟು. ಈಗ ಬೊಮ್ಮಾಯಿ ಸರ್ಕಾರ ಇಂತಹ ಕಾಯ್ದೆಯೊಂದನ್ನು ಜಾರಿಗೊಳಿಸಲು ಮುಂದಾಗಿದೆ.

ಕ್ರೈಸ್ತ ಮಿಷನರಿಗಳು ಬಲವಂತವಾಗಿ, ಪ್ರಲೋಭನೆಗಳನ್ನೊಡ್ಡಿ, ಆಸೆ ಆಮಿಷಗಳನ್ನು ತೋರಿಸಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂಬ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕೆಲವು ಮತೀಯ ಕಾವಲುಪಡೆಗಳ ಉನ್ಮತ್ತ ಭಾವನೆ ಮತ್ತು ಅಭಿಪ್ರಾಯಗಳನ್ನೇ ಅಂತಿಮ ಸತ್ಯ ಎಂದೆಣಿಸುವುದು ಪ್ರಸ್ತುತ ಸನ್ನಿವೇಶಕ್ಕೆ ಕಾರಣವಾಗಿದೆ. “ಮತಾಂತರವನ್ನು ಒಪ್ಪಬಹುದು ಆದರೆ ಬಲವಂತದ ಮತಾಂತರ ಒಪ್ಪಲಾಗುವುದಿಲ್ಲ” ಎಂಬ ಉದಾರವಾದಿ ಚಿಂತನೆಗೂ ಸಾಕಷ್ಟು ಮೆರುಗು ನೀಡುವಲ್ಲಿ ಪ್ರಸ್ತುತ ಬೆಳವಣಿಗೆಗಳು ಸಹಕಾರಿಯಾಗಿವೆ.

ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಮತ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಪಾಲಿಸುವ ಸಂವಿಧಾನಾತ್ಮಕ ಹಕ್ಕು ಇರುವುದಾದರೂ, ಸಂವಿಧಾನವನ್ನು ಒಪ್ಪಿರುವ ರಾಜಕೀಯ ಪಕ್ಷಗಳೇ ಮತಾಂತರದ ವಿರುದ್ಧ ಸಮರ ಸಾರುತ್ತಿರುವುದು ಮತನಿರಪೇಕ್ಷ ಸಂವಿಧಾನಕ್ಕೆ ದ್ರೋಹ ಬಗೆದಂತಾಗಿದೆ.

ಸ್ವಾತಂತ್ರ್ಯಪೂರ್ವದಲ್ಲೂ ಸಹ, 1936ರಲ್ಲಿ ರಾಯ್‍ಘರ್, 1942ರಲ್ಲಿ ಸರಗುಜಾ, 1946ರಲ್ಲಿ ಉದಯ್‍ಪುರ ಸಂಸ್ಥಾನಗಳು ಮತಾಂತರ ನಿಷೇದ ಕಾಯ್ದೆಯನ್ನು ಜಾರಿಗೊಳಿಸಿದ್ದನ್ನು ದಾಖಲಿಸಲಾಗಿದೆ. ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲನೆಯದಾಗಿ ಧರ್ಮ ಪರಿವರ್ತನೆಯ ವಿರುದ್ಧ ಶಾಸನ ಜಾರಿಗೊಳಿಸಿದ್ದು ಒರಿಸ್ಸಾದಲ್ಲಿ, 1967ರ ಒರಿಸ್ಸಾ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಮೂಲಕ.

ಈ ಕಾಯ್ದೆಯಲ್ಲಿ “ ಯಾವುದೇ ವ್ಯಕ್ತಿಯು ನೇರವಾಗಿ ಅಥವಾ ಪರೋಕ್ಷವಾಗಿ ಮತ್ತೊಬ್ಬ ವ್ಯಕ್ತಿಯನ್ನು, ಪ್ರಲೋಭನೆಯನ್ನು ಒಡ್ಡಿ, ಬಲಾತ್ಕಾರ ಮಾಡಿ ಅಥವಾ ಮೋಸ ಮಾಡಿ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಪರಿವರ್ತಿಸುವಂತಿಲ್ಲ ” ಎಂದು ಹೇಳಲಾಗಿದೆ. ತದನಂತರ ಇದೇ ಹಾದಿಯನ್ನು ಅನುಸರಿಸಿ ಮಧ್ಯಪ್ರದೇಶ-1968, ಅರುಣಾಚಲಪ್ರದೇಶ-1978, ಗುಜರಾತ್-2003, ಛತ್ತಿಸ್‍ಗಢ್-2003, ರಾಜಸ್ತಾನ-2005, ಹಿಮಾಚಲ ಪ್ರದೇಶ-2006 ಮತ್ತು ತಮಿಳುನಾಡು-2002 ರಲ್ಲಿ ಇದೇ ರೀತಿಯ ಶಾಸನವನ್ನು ಜಾರಿಗೊಳಿಸಿದ್ದವು. ಈಗ ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು ಇದು ಮೂಲತಃ ಮುಸ್ಲಿಂ ಯುವಕರ ಮೇಲೆ ಗುಂಪು ಹಲ್ಲೆ ನಡೆಸಲು ಮತೀಯ ಕಾವಲುಪಡೆಗಳಿಗೆ ಮುಕ್ತ ಅವಕಾಶ ನೀಡಿದಂತಾಗಿದೆ. ತಮಿಳುನಾಡಿನಲ್ಲಿ 2004ರಲ್ಲಿ ಈ ಕಾಯ್ದೆಯನ್ನು ಹಿಂಪಡೆಯಲಾಯಿತು.

1950ರಲ್ಲಿ ಸಂವಿಧಾನವನ್ನು ಅನುಷ್ಟಾನಗೊಳಿಸಿದ ಸಂದರ್ಭದಲ್ಲಿ ಸಂವಿಧಾನದ ವಿಧಿ 25ರ ಅಡಿ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನದೇ ಆದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ, ಪಾಲಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಮಾನ್ಯ ಮಾಡಲಾಯಿತು. ಹಾಗಾಗಿ ಈ ರಾಜ ಸಂಸ್ಥಾನಗಳ ಶಾಸನಗಳು ಅನೂರ್ಜಿತವಾದವು. ಆದಾಗ್ಯೂ ಹೆಚ್ಚು ಸಂಖ್ಯೆಯ ಆದಿವಾಸಿಗಳನ್ನೊಳಗೊಂಡಿದ್ದ ಮಧ್ಯ ಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ವ್ಯಾಪಕವಾಗಿ ಕಾರ್ಯನಿರತವಾಗಿದ್ದ ಕ್ರೈಸ್ತ ಮಿಷನರಿಗಳ ಚಟುವಟಿಕೆಗಳ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರವು ಮಿಷನರಿಗಳ ಕಾರ್ಯವೈಖರಿಯ ಮೇಲೆ ನಿಗಾವಹಿಸಲು ಸಮಿತಿಯೊಂದನ್ನು ನೇಮಿಸಿತ್ತು.

ಸಮಿತಿಯು ತನ್ನ ವರದಿಯಲ್ಲಿ ವಿದೇಶದಿಂದ ಹರಿದುಬರುವ ಹಣದ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ್ದು, ಸಮಾಜ ಸೇವೆ ಮತ್ತು ದಾನಶೀಲತೆಯ ಹೆಸರಿನಲ್ಲಿ ದುರುಪಯೋಗ ನಡೆಯಬಹುದೆಂದು ಶಂಕೆ ವ್ಯಕ್ತಪಡಿಸಿತ್ತು. ಈ ಸಮಿತಿಯ ವರದಿಯೇ ಒರಿಸ್ಸಾದ ಕಾಯ್ದೆಗೆ ತಳಹದಿಯಾಗಿ ಪರಿಣಮಿಸಿತ್ತು. ಕರ್ನಾಟಕದ ಕಾಯ್ದೆಗೂ ಇದೇ ತಳಹದಿಯಾಗಿದೆ.

ಮತಾಂಧ ಪಡೆಗಳು ಮತ್ತು ಮತಾಂತರ

ಪ್ರಸ್ತುತ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಥವಾ ಸಂಘಪರಿವಾರ ಹೇಳುವ ಮಟ್ಟಿಗೆ ಮತಾಂತರ ನಡೆಯುತ್ತಿಲ್ಲ. ಆದರೆ ಕೈಯ್ಯಲ್ಲಿ ಬೈಬಲ್ ಹಿಡಿದು ಓಡಾಡುವುದೇ ಮಹಾಪರಾಧವಾಗಿರುವುದಂತೂ ಸತ್ಯ. ಕೋಲಾರದ ಶ್ರೀನಿವಾಸಪುರದಲ್ಲಿ ಕರಪತ್ರ ಹಂಚುತ್ತಿದ್ದ ಕ್ರೈಸ್ತರ ಮೇಲೆ ಮತೀಯ ಕಾವಲುಪಡೆಗಳು ದಾಳಿ ನಡೆಸಿವೆ. ಇತ್ತೀಚೆಗೆ ಬೇಲೂರಿನಲ್ಲೂ ಪ್ರಾರ್ಥನಾ ಸಭೆಯೊಂದರ ಮೇಲೆ ದಾಳಿ ನಡೆಸಲಾಗಿತ್ತು. ಧರ್ಮ ಬೋಧನೆಗೆ ಮತ್ತು ಪ್ರಚಾರಕ್ಕೆ ಸಂವಿಧಾನದಲ್ಲಿ ಅವಕಾಶವಿದೆ.

ಈ ಬೋಧನೆಯ ಮೂಲಕ ಮತಾಂತರಕ್ಕೆ ಬಲವಂತ ಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೆ ಈ ಬಲವಂತದ ಮತಾಂತರದ ಅರ್ಥ ಏನೆಂದು ತಿಳಿಯಬೇಕಲ್ಲವೇ ? ಕ್ರೈಸ್ತ ಮತ ಪ್ರಚಾರಕರ ಬೋಧನೆಗೆ ಶರಣಾಗಿ ತಮ್ಮ ಮೂಲ ಮತವನ್ನು ತ್ಯಜಿಸುವವರಿಗೆ ಸಂವಿಧಾನ ಆ ಹಕ್ಕನ್ನು ನೀಡಿದೆಯಲ್ಲವೇ ? ಇದನ್ನು ನಿರ್ಬಂಧಿಸುವುದೆಂದರೆ ಅದು ಸಾಂವಿಧಾನಿಕ ವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ.

ಆದರೆ ಕರ್ನಾಟಕದಲ್ಲಿ ಮತಾಂತರ ಪ್ರಕ್ರಿಯೆ ವ್ಯಾಪಕವಾಗಿ ನಡೆಯುತ್ತಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಕ್ರೈಸ್ತ ಧರ್ಮ ಪ್ರಚಾರಕರು ಗ್ರಾಮಗಳಲ್ಲಿ, ಆದಿವಾಸಿ ಹಾಡಿಗಳಲ್ಲಿ ತಮ್ಮ ಧರ್ಮ ಪ್ರಚಾರ ಮಾಡಿದ ಮಾತ್ರಕ್ಕೆ ಮತಾಂತರಕ್ಕೆ ಯತ್ನಿಸುತ್ತಿದ್ದಾರೆಂದು ಭಾವಿಸುವುದೂ ತರವಲ್ಲ. ಹಾಗೆ ನೋಡಿದರೆ ಧರ್ಮ ಪ್ರಚಾರ ಕಾರ್ಯವನ್ನು ಎಲ್ಲ ಧರ್ಮಗಳೂ ಕೈಗೊಳ್ಳುತ್ತವೆ. ಹಿಂದೂ ಧರ್ಮದ ಪ್ರಚಾರಕರೂ ಪ್ರವಚನಗಳನ್ನು ನೀಡುತ್ತಲೇ ಇರುತ್ತಾರೆ.

ದಿನಬೆಳಗಾದರೆ ಟಿವಿ ವಾಹಿನಿಗಳಲ್ಲಿ ಪ್ರವಚನಗಳ ಹೊಳೆಯೇ ಹರಿಯುತ್ತದೆ. ಇವೆಲ್ಲವನ್ನೂ ಮತಾಂತರದ ಪ್ರಯತ್ನಗಳೆಂದು ಭಾವಿಸಲು ಸಾಧ್ಯವೇ ? ಅಥವಾ ಕ್ರೈಸ್ತರು ಕೈಗೊಳ್ಳುವ ಪ್ರಚಾರ ಮಾತ್ರ ಮತಾಂತರ ಪ್ರೇರಿತ ಎಂದು ಭಾವಿಸಲು ಸಾಧ್ಯವೇ ? ಇನ್ನು ಮೂವತ್ತು ವರ್ಷಗಳಲ್ಲಿ ಭಾರತ ಕ್ರೈಸ್ತ ಅಥವಾ ಮುಸಲ್ಮಾನ ರಾಷ್ಟ್ರವಾಗುತ್ತದೆ, ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಸಂಘಪರಿವಾರ ಮೂವತ್ತು ವರ್ಷಗಳಿಂದ ಹೇಳುತ್ತಲೇ ಬರುತ್ತಿದೆ. ಹುಯಿಲೆಬ್ಬಿಸುತ್ತಿದೆ. ಪರಿವಾರದ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿಯ ಪ್ರಚಾರವೂ ಒಂದು ಅಸ್ತ್ರವಷ್ಟೆ.

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕ್ರೈಸ್ತರ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2001ರಲ್ಲಿ ಶೇ 1.91 (11.42 ಲಕ್ಷ) ಇದ್ದುದು 2011ರಲ್ಲಿ ಶೇ 1.87 (10.09 ಲಕ್ಷ)ಕ್ಕೆ ಇಳಿದಿದೆ. ಜನಸಂಖ್ಯಾ ಪ್ರಮಾಣದ ಹೆಚ್ಚಳದ ಪ್ರಮಾಣ ಕ್ರೈಸ್ತರಲ್ಲಿ ಶೇ 15.54ರಷ್ಟಿದೆ. ಮುಸಲ್ಮಾನರ ಜನಸಂಖ್ಯೆ 2001ರಲ್ಲಿ ಶೇ 12.12ರಷ್ಟಿದ್ದುದು (64.63 ಲಕ್ಷ) 2011ರಲ್ಲಿ ಶೇ 12.91ಕ್ಕೆ (78.93 ಲಕ್ಷ) ಏರಿದೆ. ಮುಸ್ಲಿಮರ ಜನಸಂಖ್ಯಾ ಹೆಚ್ಚಳದ ಪ್ರಮಾಣ ಇದೇ ಅವಧಿಯಲ್ಲಿ ಶೇ 29.52ರಿಂದ ಶೇ 24.60ಕ್ಕೆ ಇಳಿದಿದೆ. ಅಂದರೆ ಭಾರತ ಪಾಕಿಸ್ತಾನವಾಗುತ್ತದೆ, ಮುಸ್ಲಿಮರು, ಕ್ರೈಸ್ತರು ಬಹುಸಂಖ್ಯಾತರಾಗುತ್ತಾರೆ ಎಂಬ ಹುರುಳಿಲ್ಲದ ಪ್ರಚಾರಗಳನ್ನು ಈ ಅಧಿಕೃತ ಅಂಕಿಅಂಶಗಳೇ ಅಲ್ಲಗಳೆಯುತ್ತವೆ ಅಲ್ಲವೇ ?

ಭಾರತದ ಸಂದರ್ಭದಲ್ಲಿ ಮತಾಂತರ ಎಂಬ ಪದ ಬಳಕೆಯಲ್ಲೇ ಸಮಸ್ಯೆ ಕಾಣುತ್ತದೆ. ಹಿಂದೂ ಎಂದು ಹೇಳಲಾಗುವ ಮತ ಮೂಲತಃ ಹಲವು ಜಾತಿಗಳ ಒಕ್ಕೂಟವೇ ಹೊರತು ಒಂದು ನಿರ್ದಿಷ್ಟ ಸಾಂಸ್ಥಿಕ ಸ್ವರೂಪವನ್ನು ಹೊಂದಿಲ್ಲ. ಈ ಸಾಂಸ್ಥಿಕತೆಯನ್ನು ರೂಪಿಸಲು ಸಂಘಪರಿವಾರ ಪ್ರಯತ್ನಿಸುತ್ತಿದೆ. ಅಂಬೇಡ್ಕರ್ ಮತಾಂತರಕ್ಕೆ ಎರಡು ಕಾರಣಗಳನ್ನು ನೀಡುತ್ತಾರೆ. ಮೊದಲನೆಯದು ಅಸ್ತಿತ್ವಕ್ಕೆ ಸಂಬಂಧಿಸಿದ್ದು, ಎರಡನೆಯದು ಆಧ್ಯಾತ್ಮಿಕವಾದದ್ದು. ಅಸ್ತಿತ್ವಕ್ಕೆ ಸಂಬಂಧಿಸಿದಂತೆ ದಲಿತರು ನಿತ್ಯ ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ, ಅಸ್ಪೃಶ್ಯತೆಯ ಅಪಮಾನ ಮುಂತಾದುವನ್ನು ಅಂಬೇಡ್ಕರ್ ಉದಾಹರಣೆಯಾಗಿ ನೀಡುತ್ತಾರೆ. ಇದನ್ನು ಅವರು ವರ್ಗ ಸಂಘರ್ಷ ಎಂದೇ ಭಾವಿಸುತ್ತಾರೆ.

“ ಅದು ಎರಡು ವ್ಯಕ್ತಿಗಳು ಅಥವಾ ಗುಂಪುಗಳ ನಡುವಿನ ಸಂಘರ್ಷವಲ್ಲ. ಅದು ಎರಡು ವರ್ಗಗಳ ನಡುವಿನ ಸಂಘರ್ಷ. ಒಬ್ಬ ವ್ಯಕ್ತಿ ಮತ್ತೊಬ್ಬನ ಮೇಲೆ ದಬ್ಬಾಳಿಕೆ ಅಥವಾ ಅನ್ಯಾಯ ಮಾಡುವುದಲ್ಲ. ಒಂದು ವರ್ಗ ಮತ್ತೊಂದರ ಮೇಲೆ ಮಾಡುವ ಅನ್ಯಾಯ. ಈ ಸಂಘರ್ಷಗಳನ್ನು ಗಮನಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ನೀವು ಮೇಲ್ವರ್ಗದವರೊಡನೆ ಸಮಾನತೆಯನ್ನು ಅಪೇಕ್ಷಿಸಿದಾಗ ಸಂಘರ್ಷ ಉಂಟಾಗುತ್ತದೆ. ನೀವು ನ್ಯಾಯಕ್ಕಾಗಿ ಆಗ್ರಹಿಸುವ ನಿಮ್ಮ ವರ್ತನೆಯೇ ಅವರ ಆಕ್ರೋಶಕ್ಕೆ ಕಾರಣವಾಗುತ್ತದೆ.ಇದು ಅವರ ಅಹಂಗೆ ಚ್ಯುತಿ ಉಂಟುಮಾಡುತ್ತದೆ.” “ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ಸಂಘರ್ಷ ನಿರಂತರವಾದುದು, ಶಾಶ್ವತವಾದುದು, ಏಕೆಂದರೆ ಅವರ ಪ್ರಕಾರ ನಿಮಗೆ ಕೆಳಸ್ತರದ ಸ್ಥಾನ ಕಲ್ಪಿಸಿರುವ ಧರ್ಮ ಸನಾತನವಾದುದು ಅದನ್ನು ಬದಲಾಯಿಸಲಾಗುವುದಿಲ್ಲ ” ಎಂದು ಅಂಬೇಡ್ಕರ್ ಹೇಳುತ್ತಾರೆ. ಈ ಹಿನ್ನೆಲೆಯಲ್ಲೇ ಅಂಬೇಡ್ಕರ್ ದಲಿತರ ಮತಾಂತರದ ಅಪೇಕ್ಷೆಯನ್ನು ಅಸ್ತಿತ್ವದ ಸಮಸ್ಯೆ ಎಂದೇ ಗುರುತಿಸುತ್ತಾರೆ.

ಹಿಂದೂ ವ್ಯಕ್ತಿ ಮತಾಂತರ ಹೊಂದಿದರೆ ಅವರು ಜಿಗಿಯುವುದು ಮತದಿಂದದ ಮತಕ್ಕೆ ಅಲ್ಲ, ಒಂದು ಜಾತಿಯಿಂದ ಜಾತಿಯ ಸೋಂಕಿಲ್ಲದ ಮತಕ್ಕೆ. ಮರುಮತಾಂತರವಾದರೆ ಅವರು ತಮ್ಮ ಮೊದಲ ಗೂಡಿಗೇ ಮರಳಬೇಕಲ್ಲವೇ ? ಹಿಂದೂ ಮತಕ್ಕೆ ಮರಳುವವರನ್ನು ಎಲ್ಲಿ ಕೂರಿಸುತ್ತಾರೆ ? ಮತ್ತದೇ ಮೂಲ ಜಾತಿಯ ವೃಕ್ಷಗಳಡಿ ಅಲ್ಲವೇ ? ಇಲ್ಲಿ ವ್ಯಕ್ತಿಗತವಾಗಿ ತನ್ನ ಆರ್ಥಿಕ ಸ್ಥಾನಮಾನಗಳಿಗನುಗುಣವಾಗಿ ಅಸ್ಪೃಶ್ಯತೆ, ತಾರತಮ್ಯ ಎದುರಿಸದಿದ್ದರೂ ಸಾಮುದಾಯಿಕವಾಗಿ ಇದು ಇದ್ದೇ ಇರುತ್ತದೆ. ಇದನ್ನು ಹೇಗೆ ಅರ್ಥೈಸುವುದು ? ಇಂದಿಗೂ ನಮ್ಮ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆಯ ಹಿನ್ನೆಲೆಯಲ್ಲಿ ಇದನ್ನು ನೋಡಿದಾಗ, ಅಸ್ಪೃಶ್ಯ ಸಮುದಾಯಗಳು ತಮ್ಮ ನೆಲೆಯನ್ನು “ ಹಿಂದೂ ” ಎಂದು ಪರಿಭಾವಿಸಲಾಗುವ ಮತದ ಚೌಕಟ್ಟಿನಲ್ಲಿ ಏಕೆ ಕಂಡುಕೊಳ್ಳಬೇಕು. ಕೊಪ್ಪಳದ ದೇವಾಲಯಕ್ಕೆ ಎಂಟು ವರ್ಷದ ಹಸುಳೆ ಪ್ರವೇಶಿಸಿದ್ದಕ್ಕೆ ಬಹಿಷ್ಕಾರ ಹಾಕಿ ದಂಡ ವಿಧಿಸಿದ ಒಂದು ಸಮಾಜಕ್ಕೆ, ಅದೇ ಅಸ್ಪೃಶ್ಯರನ್ನು ನಮ್ಮೊಡನೆ ಇರಿ ಎಂದು ಹೇಳುವ ನೈತಿಕತೆ ಹೇಗಿರಲು ಸಾಧ್ಯ ?

ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ತಾರತಮ್ಯ ಮತ್ತು ಅಪಮಾನಗಳಿಂದ ವಿಮುಕ್ತಿ ಪಡೆಯುವ ಒಂದು ಸಾರ್ವತ್ರಿಕ ಪ್ರಕ್ರಿಯೆಯಾಗಿ ಮತಾಂತರವೂ ನಡೆಯುತ್ತದೆ. ಹಾಗಾಗಿಯೇ ನಮ್ಮ ಸಂವಿಧಾನದಲ್ಲೂ ಇದಕ್ಕೆ ನಿರ್ಬಂಧಿತ ಅವಕಾಶವನ್ನು ಕಲ್ಪಿಸಲಾಗಿದೆ. ಬಲವಂತದ ಮತಾಂತರ, ಆಮಿಷ ಪ್ರಲೋಭನೆಗಳ ಮೂಲಕ ಮಾಡುವ ಮತಾಂತರವನ್ನು ನಿಷೇಧಿಸುವ ಮುನ್ನ ಸರ್ಕಾರ ಈ ಪದಗಳ ವ್ಯಾಪ್ತಿ ಮತ್ತು ಸ್ಪಷ್ಟವಾದ ಅರ್ಥವನ್ನು ಜನತೆಗೆ ತಿಳಿಸಬೇಕಿದೆ.

ಅವಕಾಶವಂಚಿತರಿಗೆ ಶಿಕ್ಷಣ ನೀಡುವುದು, ಹಸಿದವರಿಗೆ ಅನ್ನ ನೀಡುವುದು, ನೆಲೆಯಿಲ್ಲದವರಿಗೆ ಸೂರು ಒದಗಿಸುವುದು ಆಮಿಷ ಎನಿಸಿಕೊಳ್ಳುವುದಿಲ್ಲ. ಮತ ಮತ್ತು ಧರ್ಮಗಳ ಪರಿಧಿಯಿಂದಾಚೆಗೆ ಇವು ಮಾನವೀಯ ಸಂವೇದನೆಯ ಮಾರ್ಗಗಳಾಗುತ್ತವೆ. ಬಿಜೆಪಿ ಸರ್ಕಾರ ಈ ಪದಗಳ ನಿಷ್ಕರ್ಷೆಯ ಅಧಿಕಾರವನ್ನು ಭಜರಂಗದಳ, ಹಿಂದೂ ಸೇನೆಯಂತ ಮತೀಯ ಕಾವಲುಪಡೆಗಳಿಗೆ ನೀಡುವ ಮೂಲಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಮುಕ್ತ ಅವಕಾಶವನ್ನು ಕಲ್ಪಿಸಿದೆ.

ಈಗ ರಾಜ್ಯ ಸಂಸ್ಕೃತಿ ಇಲಾಖೆಯ ಸಚಿವರು ಲವ್ ಜಿಹಾದ್ ನಿಷೇಧ ಮಸೂದೆಯನ್ನೂ ಮಂಡಿಸುವುದಾಗಿ ಹೇಳಿದ್ದಾರೆ. ಲವ್ ಜಿಹಾದ್ ಒಂದು ಕಪೋಲ ಕಲ್ಪಿತ ಪರಿಕಲ್ಪನೆ ಎಂದು ನ್ಯಾಯಾಲಯಗಳೇ ಹೇಳಿವೆ. ಎರಡು ವಿಭಿನ್ನ ಮತಗಳ ಯುವಕ-ಯುವತಿ ಒಟ್ಟೊಟ್ಟಿಗೆ ಓಡಾಡುವುದೂ ಕಷ್ಟವಾಗುವಂತಹ ಪರಿಸ್ಥಿತಿ ಕರಾವಳಿಯಲ್ಲಿ ಉದ್ಭವಿಸಿದೆ. ಮುಸ್ಲಿಂ ಮತಾಂಧರೂ ಸಹ ಇಂತಹ ದಾಳಿಗಳನ್ನು ನಡೆಸುತ್ತಿದ್ದಾರೆ. ಜಾತಿ, ಮತ, ಧರ್ಮ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ದಾಟಿದ ಮನುಜ ಸಂಬಂಧವೂ ಒಂದಿದೆ ಎಂಬ ಸಾಮಾನ್ಯ ಪರಿಜ್ಞಾನವನ್ನೂ ಕಳೆದುಕೊಂಡಿರುವ ಒಂದು ಸಮಾಜದಲ್ಲಿ ಮಾತ್ರ ಈ ರೀತಿಯ ಘಟನೆಗಳು ಸಂಭವಿಸಲು ಸಾಧ್ಯ. 12ನೆಯ ಶತಮಾನದ ಬಸವಣ್ಣನ ಕಾಲದಲ್ಲಿದ್ದ ಅಸ್ಪೃಶ್ಯತೆ ಮತ್ತು ಜಾತಿ ದೌರ್ಜನ್ಯ ಅಪಮಾನಗಳು ಇಂದಿಗೂ ಪ್ರಚಲಿತವಾಗಿವೆ ಎಂದರೆ ನಾವು ನಾಚಿಕೆಯಿಂದ ತಲೆತಗ್ಗಿಸಬೇಕಲ್ಲವೇ ? ಅಂದು ನಡೆದ ಮತಾಂತರದ ಪ್ರಕ್ರಿಯೆಯೇ ಇಂದೂ ನಡೆಯುತ್ತಿದೆ ಎಂದರೆ ಅದನ್ನು ಒಪ್ಪಿಕೊಳ್ಳಬೇಕಲ್ಲವೇ ?

ವಿಶ್ವದ ಶ್ರೇಷ್ಠ ಸಂವಿಧಾನವನ್ನು ಹೊಂದಿರುವ ಭಾರತದಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆಯನ್ನು ಇನ್ನೂ ಜೀವಂತವಾಗಿರಿಸಿರುವ ಭಾರತೀಯ ಸಮಾಜ ಮನುಜ ಸಂಬಂಧಗಳನ್ನು ಜಾತಿ-ಮತ-ಧರ್ಮದ ಹಂಗಿಲ್ಲದೆ ಬೆಸೆಯುವ ನಿಟ್ಟಿನಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಿದೆ. ಆದರೆ ಮತಾಂತರ ನಿಷೇಧದಂತಹ ಅಸಾಂವಿಧಾನಿಕ ಶಾಸನಗಳನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಸರ್ಕಾರಗಳು ಈ ಮುನ್ನಡೆಯ ಹಾದಿಗಳಿಗೆ ಮುಳ್ಳು ಬೇಲಿಗಳನ್ನು ನಿರ್ಮಿಸುತ್ತಿದೆ. ನಮ್ಮ ಸಂವಿಧಾನದ ಶ್ರೇಷ್ಠತೆ ಇರುವುದು ಈ ಸಮನ್ವಯ ಮತ್ತು ಸೌಹಾರ್ದತೆಯಲ್ಲಿ, ಇದನ್ನು ಕಾಪಾಡಲು ಮತ ಮತ್ತು ಧರ್ಮ ನಿಮಿತ್ತ ಮಾತ್ರ, ಮಾನವೀಯ ಸ್ಪಂದನೆ ಮತ್ತು ನೈತಿಕ ಮೌಲ್ಯಗಳು ಮುಖ್ಯವಾಗುತ್ತವೆ. ಹಿಂದೂ ಎನ್ನಲಾಗುವ ಮತಾಚರಣೆಯಲ್ಲಿ ಮತ್ತು ವೈದಿಕಶಾಹಿಯ ಧಾರ್ಮಿಕ ಚಿಂತನೆಗಳಲ್ಲಿ ಈ ಮನುಜ ಕೇಂದ್ರಿತ ನೈತಿಕತೆ ಇಲ್ಲದ ಹೊರತು ಮತಾಂತರವನ್ನು ನಿರ್ಬಂಧಿಸುವ ನೈತಿಕ ಹಕ್ಕೂ ಇರುವುದಿಲ್ಲ.

ಮತೀಯ ಸೌಹಾರ್ದತೆಯ ಸಹಬಾಳ್ವೆಯ ಹಾದಿಗಳನ್ನು ಹಾಳುಗೆಡಹುವ ಮತಾಂಧ ಶಕ್ತಿಗಳಿಗೆ ಮತ್ತಷ್ಟು ಪ್ರಚೋದನ ನೀಡುವ ಮತಾಂತರ ನಿಷೇಧ ಕಾಯ್ದೆ ಅಸಾಂವಿಧಾನಿಕವಷ್ಟೇ ಅಲ್ಲ, ಅನೈತಿಕವೂ ಹೌದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭ್ರಷ್ಟಾಚಾರದ ವಿರುದ್ಧ ಶಂಕರ್ ಇನ್ನೊಂದು ಹೋರಾಟ!

Published

on

  • ಚೇತನ್ ನಾಡಿಗೇರ್

ಣಿರತ್ನಂ ಏನೇ ಮಾಡಲಿ, ಯಾವುದೇ ಚಿತ್ರ ತೆಗೆಯಲಿ, ಅದರ ಮೂಲ ಸೆಲೆ ಪ್ರೀತಿಯಾಗಿರುತ್ತದೆ. ಪ್ರೀತಿಯ ಬೇರೆಬೇರೆ ವ್ಯಾಖ್ಯಾನಗಳನ್ನು, ಬೇರೆಬೇರೆ ಹಿನ್ನೆಲೆಯಲ್ಲಿ ಮಣಿರತ್ನಂ ಪ್ರತಿಚಿತ್ರದಲ್ಲೂ ಹೇಳುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅದೇ ರೀತಿ, ರಾಮ್‍ಗೋಪಾಲ್‍ ವರ್ಮ ಏನೇ ಚಿತ್ರ ಮಾಡಿದರೂ, ಕ್ರೈಮ್‍ ಹಿನ್ನೆಲೆಯಲ್ಲೇ ಮಾಡುತ್ತಾರೆ. ಹೀಗೆ ಬೇರೆಬೇರೆ ನಿರ್ದೇಶಕರು ಒಂದೇ ವಿಷಯವನ್ನಿಟ್ಟುಕೊಂಡು ಬೇರೆಬೇರೆ ರೀತಿ ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಈಗ್ಯಾಕಪ್ಪಾ ಈ ಮಾತು ಎಂದರೆ, ಶಂಕರ್ ನಿರ್ದೇಶನದ ‘ಇಂಡಿಯನ್‍ 2’ ನಾಳೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮದೇ ಯಶಸ್ವಿ ಚಿತ್ರ ‘ಇಂಡಿಯನ್‍’ನ ಮುಂದುವರೆದ ಭಾಗ ಇದು. ಆ ಚಿತ್ರ ಬಿಡುಗಡೆಯಾಗಿ 26 ವರ್ಷಗಳ ನಂತರ ‘ಇಂಡಿಯನ್‍ 2’ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ಭ್ರಷ್ಟಾಚಾರದ ವಿಷಯವನ್ನಿಟ್ಟುಕೊಂಡು ಶಂಕರ್‍ ನಿರ್ದೇಶಿಸುತ್ತಿರುವ ಏಳನೇ ಚಿತ್ರ ಇದು.

ಶಂಕರ್‍ ಚಿತ್ರಗಳೆಂದರೆ ಅದ್ಧೂರಿತನ, ಹಿಟ್‍ ಹಾಡುಗಳು, ದೊಡ್ಡ ಕ್ಯಾನ್ವಾಸ್‍, ಮಾಸ್ ಅಂಶಗಳು ಇವೆಲ್ಲವೂ ಕಾಣುತ್ತದೆ. ಅದೇ ರೀತಿ ಗಮನಸೆಳೆಯುವ ಒಂದು ವಿಷಯವೆಂದರೆ, ಅದು ಭ್ರಷ್ಟಾಚಾರದ ವಿರುದ್ಧ ಶಂಕರ್‍ ನಿರಂತರ ಹೋರಾಟ. ತಮ್ಮ ನಿರ್ದೇಶನದ ಮೊದಲ ಚಿತ್ರದಿಂದಲೂ ಶಂಕರ್‍ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ಇದ್ದಾರೆ. ಶಂಕರ್‍ ಈ 31 ವರ್ಷಗಳಲ್ಲಿ ನಿರ್ದೇಶಿಸಿರುವುದು ಕೇವಲ 14 ಚಿತ್ರಗಳನ್ನು. ಆ ಪೈಕಿ ಏಳು ಚಿತ್ರಗಳು ಭ್ರಷ್ಟಾಚಾರ ಎಂಬ ವಿಷಯವನ್ನಿಟ್ಟುಕೊಂಡು ಮೂಲವಾಗಿಟ್ಟುಕೊಂಡು ಮಾಡಲಾಗಿದೆ.

ಈ ಪ್ರಯಾಣ ಶುರುವಾಗಿದ್ದು 1993ರಲ್ಲಿ ಬಿಡುಗಡೆಯಾದ ‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಕುರಿತು ಕಥೆ ಮಾಡಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ಲಂಚಾವತಾರದಿಂದ ಹೇಗೆ ಪ್ರತಿಭಾವಂತ ಯುವಕರು ಅವಕಾಶವಂಚಿತರಾಗುತ್ತಿದ್ದಾರೆ ಎಂದು ಹೇಳಿದರು. ಒಬ್ಬ ಸಾಮಾನ್ಯ ಮನುಷ್ಯ ಹೇಗೆ ಈ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾನೆ ಎಂದು ತೋರಿಸಿದ್ದರು. ಆ ನಂತರ ‘ಇಂಡಿಯನ್‍’, ‘ಮುದಲ್ವನ್‍’, ‘ಅನ್ನಿಯನ್‍’, ‘ಶಿವಾಜಿ: ದಿ ಬಾಸ್‍’ ಮತ್ತು ‘ಇಂಡಿಯನ್‍ 2’ ಚಿತ್ರಗಳ ಮೂಲಕ ಅವರು ಇದೇ ವಿಷಯವನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.

ವಿಷಯ ಅದೇ ಭ್ರಷ್ಟಾಚಾರ ಅಥವಾ ಲಂಚಾವತಾರವಿರಬಹುದು. ಅದೇ ವಿಷಯವನ್ನಿಟ್ಟುಕೊಂಡು ಶಂಕರ್‍ ಬೇರೆಬೇರೆ ರೀತಿಯಲ್ಲಿ ಕಮರ್ಷಿಯಲ್‍ ಆಗಿ ಚಿತ್ರಗಳನ್ನು ರೂಪಿಸಿರುವುದಿದೆಯಲ್ಲಾ ಅದು ವಿಶೇಷ ಎನಿಸುತ್ತದೆ. ‘ಇಂಡಿಯನ್‍’ನಲ್ಲಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ತನ್ನ ಮಗನೇ ದೊಡ್ಡ ಭ್ರಷ್ಟ ಎಂದು ಗೊತ್ತಾದಾಗ ಅವನನ್ನೇ ಸಾಯಿಸುತ್ತಾನೆ. ‘ಮುದಲ್ವನ್’ ಎಂಬ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಒಂದು ದಿನದ ಮುಖ್ಯಮಂತ್ರಿಯಾಗಿ ಭ್ರಷ್ಟಾಚಾರ ತಡೆಯುವ ಪ್ರಯತ್ನವನ್ನು ತನ್ನದೇ ಶೈಲಿಯಲ್ಲಿ ಮಾಡುತ್ತಾನೆ. ‘ಅನ್ನಿಯನ್‍’ನಲ್ಲಿ ಭ್ರಷ್ಟಾಚಾರ, Multiple Personality Disorder ಮತ್ತು ಗರುಡ ಪುರಾಣವನ್ನು ಶಂಕರ್‍ ಸೇರಿಸಿ ಕಥೆ ಮಾಡಿರುವ ರೀತಿಯೇ ವಿಶಿಷ್ಟ. ‘ಶಿವಾಜಿ’ಯಲ್ಲಿ ನೂರಾರು ಕೋಟಿ ಆಸ್ತಿ ಇರುವ ಶ್ರೀಮಂತನೊಬ್ಬ ಈ ವ್ಯವಸ್ಥೆಯಿಂದ ಬೇಸತ್ತು ಹೋರಾಟಕ್ಕೆ ಇಳಿಯುತ್ತಾನೆ. ಈಗ ‘ಇಂಡಿಯನ್‍ 2’ ಚಿತ್ರದಲ್ಲಂತೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಎಂದು Second War of Independence ಬಣ್ಣಿಸಿದ್ದಾರೆ. ಅಲ್ಲಿಗೆ ಭ್ರಷ್ಟಾಚಾರದ ವಿರುದ್ಧ ಶಂಕರ್‍ ಮತ್ತೊಂದು ಹೋರಾಟ ಶುರು ಮಾಡಿದ್ದಾರೆ.

ಇಷ್ಟಕ್ಕೂ ಶಂಕರ್‍ ಯಾಕೆ ಈ ವಿಷಯದ ಮೇಲೆ ಮೇಲಿಂದ ಮೇಲೆ ಸಿನಿಮಾ ಮಾಡುತ್ತಾರೆ? ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಯಾವುದೇ ವಿಷಯ ನನ್ನನ್ನು ಕಾಡಿದರೂ, ಆ ಕುರಿತು ಕಥೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಈ ಭ್ರಷ್ಟಾಚಾರ ನನ್ನನ್ನು ಪದೇಪದೇ ಕಾಡಿದೆ. ಅದನ್ನು ಕಮರ್ಷಿಯಲ್‍ ರೂಪದಲ್ಲಿ, ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಒಂದು ವಿಷಯ ಸ್ಪಷ್ಟವಾದ ಮೇಲೆ, ಅದನ್ನು ಹೇಗೆ ತರಬೇಕು ಎಂದು ಯೋಚಿಸುತ್ತೇನೆ. ಪ್ರೇಕ್ಷಕರ ದೃಷ್ಟಿಕೋನದಿಂದ ಯೋಚಿಸುವುದಕ್ಕೆ ಪ್ರಯತ್ನಿಸುತ್ತೇನೆ. ಅವರಿಗೆ ಬೋರ್‍ ಆಗಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮಾಡುತ್ತಾ ಹೋಗುತ್ತೇನೆ’ ಎಂದು ಹೇಳಿಕೊಂಡಿದ್ದಾರೆ ಶಂಕರ್.

ಬಹುಶಃ ಅದೇ ಅವರ ಯಶಸ್ಸು ಎನ್ನಬಹುದೇನೋ? ಶಂಕರ್‍ ಒಂದು ಚಿತ್ರದ ಕಥೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ, ಮನರಂಜನಾತ್ಮಕ ಅಂಶಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಕೆಲವೊಮ್ಮೆ ಶಂಕರ್‍ ಪಾತ್ರಗಳು Larger than life ಎಂದನಿಸಬಹುದು. ಕೆಲವೊಮ್ಮೆ ತುಂಬಾ exaggeration ಅಂತನಿಸಬಹುದು. ಒಂದು ದಿನಕ್ಕೆ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾ? ಪಾರ್ಥಸಾರಥಿ ರಾಮಾನುಜ ಅಯ್ಯಂಗಾರ್‍ಗೆ ಅನ್ನಿಯನ್‍ ಆಗುವುದಕ್ಕೆ ಸಾಧ್ಯವಾ? 78ರ ವೃದ್ಧನೊಬ್ಬ ಸೇನಾಪತಿಯಾಗಿ ಹಾಗೆ ಹೊಡೆದಾಡುವುದಕ್ಕೆ ಸಾಧ್ಯವೇ? ಈ ಪ್ರಶ್ನೆಗಳು ಬರಬಹುದು. ತಾರ್ಕಿಕವಾಗಿ ನೋಡಿದರೆ ಇದು ಕಷ್ಟ. ಆದರೆ, ಶಂಕರ್ ಲಾಜಿಕ್‍ಗಿಂತ ಮ್ಯಾಜಿಕ್‍ನಲ್ಲಿ ನಂಬಿಕೆ ಇಟ್ಟವರು. ಏನೇನೋ ಮ್ಯಾಜಿಕ್‍ ಮಾಡಿ ಪ್ರೇಕ್ಷಕರನ್ನು ನಂಬಿಸುತ್ತಾರೆ. ತಮ್ಮ ಪ್ರಪಂಚದಲ್ಲಿ ಎಳೆದುಕೊಳ್ಳುತ್ತಾರೆ.

ಈಗೆಲ್ಲಾ Cinematic Universeಗಳ ಕಾಲ. ಯಶ್‍ರಾಜ್‍ ಸ್ಪೈ ಯೂನಿವರ್ಸ್‍, ಲೋಕೇಶ್‍ ಕನಕರಾಜ್‍ ಯೂನಿವರ್ಸ್, ರೋಹಿತ್‍ ಶೆಟ್ಟಿ ಪೊಲೀಸ್‍ ಯೂನಿವರ್ಸ್‍ಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ, ಕೆಲವು ವರ್ಷಗಳ ಹಿಂದೆಯೇ ‘ಇಂಡಿಯನ್‍’ನ ಸೇತುಪತಿ, ‘ಶಿವಾಜಿ: ದಿ ಬಾಸ್‍’ನ ಶಿವಾಜಿ ಮತ್ತು ‘ಮುದಲ್ವನ್‍’ನ ಪುಗಳೇಂದಿಯನ್ನಿಟ್ಟುಕೊಂಡು ಏಕೆ ಒಂದು ಚಿತ್ರ ಮಾಡಬಾರದು ಎಂದು ಅವರು ಕೆಲವು ವರ್ಷಗಳ ಹಿಂದೆಯೇ ಯೋಚಿಸಿದ್ದರಂತೆ. ಆದರೆ, ಸೂಕ್ತ ಪ್ರೋತ್ಸಾಹ ಸಿಗದ ಕಾರಣ ಸುಮ್ಮನಾದರಂತೆ.

ಈ ಕುರಿತು ಮಾತನಾಡಿರುವ ಅವರು, ‘2008ರಲ್ಲಿ ‘ಎಂದಿರನ್‍’ ಚಿತ್ರ ಮಾಡುವಾಗ, ಯಾಕೆ ನಾನೇ ಸೃಷ್ಟಿಸಿದ ಮೂರು ಪಾತ್ರಗಳನ್ನು ಒಂದೇ ಚಿತ್ರದಲ್ಲಿ ಯಾಕೆ ತರಬಾರದು ಎಂದನಿಸಿತು. ಒಂದು ಕ್ಷಣ ರೋಮಾಂಚನವಾಯ್ತು. ಖುಷಿಯಿಂದ ನನ್ನ ಸಹಾಯಕ ನಿರ್ದೇಕರನ್ನು ಕರೆದು ಐಡಿಯಾ ಹೇಳಿದೆ. ಅವರೆಲ್ಲರೂ ಇದು ಸಾಧ್ಯವಾ? ಎಂದು ಅನುಮಾನದಿಂದ ನೋಡಿದರು. ನಂತರ ಕೆಲವು ಹಿರಿಯ ತಂತ್ರಜ್ಞರಿಗೆ ಮತ್ತು ನನ್ನ ಸ್ನೇಹಿತರಿಗೆ ಹೇಳಿದೆ. ನನ್ನ ಮನಸ್ಸಿಗೆ ನೋವಾಗಬಹುದು ಎಂದು ಚೆನ್ನಾಗಿದೆ ಎಂದಷ್ಟೇ ಹೇಳಿ ಹೊರಟು ಹೋದರು. ಬಹುಶಃ ನನಗೆ ಆಗ ಪ್ರೋತ್ಸಾಹ ಸಿಕ್ಕಿದ್ದರೆ ಚಿತ್ರ ಮಾಡಿಬಿಟ್ಟಿರುತ್ತಿದ್ದೆನೇನೋ? ಕೆಲವು ವರ್ಷಗಳ ನಂತರ ‘ಅವೆಂಜರ್ಸ್’ ಚಿತ್ರ ನೋಡಿದಾಗ, ಅದು ಸಹ Marvel Cinematic Universeನ ಒಂದು ಭಾಗ ಆಗಿತ್ತು. ಒಂದು ಒಳ್ಳೆಯ ಐಡಿಯಾ ಇದ್ದರೆ, ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ಇಳಿಸಬೇಕು ಎಂದು ನನಗೆ ಆಗ ಅರ್ಥವಾಯ್ತು. ಏಕೆಂದರೆ, ನಮ್ಮ ತರಹವೇ ಜಗತ್ತಿನಾದ್ಯಂತ ಹಲವರು ಹೊಸ ವಿಷಯಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಅವರು ಅದನ್ನು ಕಾರ್ಯರೂಪಕ್ಕೆ ತರುವ ಮುನ್ನ, ಮೊದಲು ನಾವು ಆ ಕೆಲಸ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ ಶಂಕರ್‍.

Shankar Cinematic Universe ಯಾವತ್ತು ಕಾರ್ಯರೂಪಕ್ಕೆ ಬರುತ್ತದೋ ಗೊತ್ತಿಲ್ಲ. ಸೇತುಪತಿ, ಶಿವಾಜಿ ಮತ್ತು ಪುಗಳೇಂದಿಯನ್ನು ಒಟ್ಟಿಗೆ ಮುಂದಿಟ್ಟುಕೊಂಡು ಯಾವಾಗ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾರೋ ಗೊತ್ತಿಲ್ಲ. ಆದರೆ, ಸದ್ಯಕ್ಕಂತೂ ಭ್ರಷ್ಟಾಚಾರದ ವಿರುದ್ಧ ಶಂಕರ್ ತಮ್ಮ ಹೋರಾಟ ಮುಂದುವರೆಸಿದ್ದಾರೆ. ‘ಇಂಡಿಯನ್‍ 2’ ಬಿಡುಗಡೆಯಾಗಿ ಆರು ತಿಂಗಳಲ್ಲೇ ಅದೇ ಸೇತುಪತಿ, ‘ಇಂಡಿಯನ್‍ 3’ ಆಗಿ ಮತ್ತೆ ಬರಲಿದ್ದಾರೆ. ಅದಾಗಿ ಸ್ವಲ್ಪ ದಿನಗಳಿಗೆ ‘ಗೇಮ್‍ ಚೇಂಜರ್‍’ ಎಂಬ ರಾಮ್‍ಚರಣ್‍ ತೇಜ ಅಭಿನಯದ ಇನ್ನೊಂದು ಚಿತ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಸಲಿದ್ದಾರೆ. ಪಾತ್ರಗಳು ಬದಲಾಗಬಹುದು, ಶಂಕರ್‍ ಹೋರಾಟ ಮಾತ್ರ ನಿರಂತರವಾಗಿ ಮುಂದುವರೆಯುತ್ತಿರುವುದು ವಿಶೇಷ. (ಬರಹ : ಚೇತನ್ ನಾಡಿಗೇರ್, ಫೇಸ್‌ಬುಕ್‌ ಬರಹ)ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ..!

Published

on

  • ಚೇತನ್ ನಾಡಿಗೇರ್

‘ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿ ಆಗ್ತಿಲ್ಲ, ಆ ಬಗ್ಗೆ ಮಾತಾಡೋಣ. ಆಟೋ ಚಾಲಕರಿಗೆ ಬೈಕ್‍ ಸವಾರರಿಂದ ತೊಂದರೆ ಆಗುತ್ತಿದೆ ಆ ಬಗ್ಗೆ ಮಾತಾಡೋಣ. ಸರ್ಕಾರಿ ಶಾಲೆಗಳಲ್ಲಿ ಬಿಸಿಊಟ ಅಡುಗೆ ಮಾಡುವವರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಸಂಬಳ. ಅದರ ಬಗ್ಗೆ ಮಾತಾಡೋಣ. ಮಿಕ್ಕವರೆಲ್ಲಾ ಬಹಳ ಬ್ಯುಸಿಯಾಗಿರುವುದರಿಂದ ನಾವು ಇದರ ಬಗ್ಗೆ ಮಾತಾಡೋಣ್ವಾ?’

ಮಾರ್ಮಿಕವಾಗಿ ಕೇಳಿದರು ಪ್ರಕಾಶ್‍ ರೈ. ಅವರಿಗೆ ಆ ವಿಷಯದ ಬಗ್ಗೆ ಮಾತಾಡುವುದಕ್ಕೆ ಇಷ್ಟವಿರಲಿಲ್ಲ. ಆದರೂ ಕನ್ನಡ ಚಿತ್ರರಂಗದಲ್ಲಿ ಕಳೆದ ಒಂದು ತಿಂಗಳಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂಬ ಪ್ರಶ್ನೆ ಬಂತು. ಅದನ್ನು ಬಹಳ ಜಾಣ್ಮೆಯಿಂದ ತಳ್ಳಿಹಾಕಿದರು ರೈ. ಅದೊಂದು ಬಿಟ್ಟು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ತಮ್ಮ ಇಷ್ಟದ ಚಿತ್ರದ ಬಗ್ಗೆ, ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ, ಸೋಷಿಯಲ್ ಮೀಡಿಯಾವನ್ನು ಕೆಲವರು ಕೆಟ್ಟದಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ, ತಂದೆ-ಮಗನ ಸಂಬಂಧದ ಬಗ್ಗೆ, STARDOM ಸಂಭಾಳಿಸುವ ಬಗ್ಗೆ, ಕಲಿಕೆಯ ಬಗ್ಗೆ … ಹೀಗೆ ಹಲವು ವಿಷಯಗಳನ್ನು ಅವರು ಮಾತನಾಡಿದರು. ಅದಕ್ಕೆ ವೇದಿಕೆಯಾಗಿದ್ದು, ಆರ್. ಚಂದ್ರು ನಿರ್ಮಾಣದ, ‘ಡಾರ್ಲಿಂಗ್‍’ ಕೃಷ್ಣ ಅಭಿನಯದ ‘ಫಾದರ್‍’ ಚಿತ್ರದ ಪತ್ರಿಕಾಗೋಷ್ಠಿ. ಈ ಚಿತ್ರದಲ್ಲಿನ ತಮ್ಮ ಪಾತ್ರ ಮತ್ತ ತಂದೆಯ ವ್ಯಾಖ್ಯಾನವನ್ನು ರೈ ಎಷ್ಟು ಚೆನ್ನಾಗಿ ಮಾಡಿದರು ಗೊತ್ತಾ? ನೀವೇ ಓದಿ …

ನಾನು ನನ್ನ ಮೂರು ದಶಕಗಳ ವೃತ್ತಿಜೀವನದಲ್ಲಿ ಯಶಸ್ಸಿನಿಂದ ಹಾಳಾದ ಬಹಳಷ್ಟು ಜನರನ್ನು ನೋಡಿದ್ದೇನೆ. ಸೋಲಿನಿಂದ ಹಾಳಾದವರನ್ನು ನೋಡಿದ್ದು ಕಡಿಮೆ. ಯಶಸ್ಸು ಎನ್ನುವುದು ಒಂದು ನಶೆ. ಯಶಸ್ವಿಯಾಗುವುದು ದೊಡ್ಡ ವಿಷಯವಲ್ಲ. ಅದನ್ನು ದಕ್ಕಿಸಿಕೊಳ್ಳೋದು, ಉಳಿಸಿಕೊಳ್ಳೋದು ಬಹಳ ಮುಖ್ಯ. ಹಾಗಾಗಿ, ಡಾ. ರಾಜಕುಮಾರ್, ರಜನಿಕಾಂತ್‍, ಕಮಲ್ ಹಾಸನ್‍ ಮುಂತಾದವರು ಆರು ದಶಕ, ಐದು ದಶಕಗಳ ಕಾಲ ಕೆಲಸ ಮಾಡಿದವರನ್ನು ನಾವು ನೋಡಬಹುದು. ಈಗ ಅಂಥವರು ಸಿಗುವುದೇ ಇಲ್ಲ ನಮಗೆ. ಬಹಳಷ್ಟು ಯುವಕರು stardomಗೆ ತಯಾರಾಗಿರುವುದಿಲ್ಲ. ಎಷ್ಟು ನಾವು ಅದನ್ನು ಇಳಿಸಿಕೊಂಡು ಹೊರಗೆ ಬರುತ್ತೀವೋ, ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಅದು ನಮ್ಮನ್ನು ಸುಟ್ಟುಹಾಕುತ್ತದೆ. ಕೆಲವರು ಕಲಿಯುತ್ತಿದ್ದಾರೆ, ಕೆಲವರು ಕಲಿಯುವುದಿಲ್ಲ.

ಪ್ರತಿಯೊಬ್ಬರಿಗೂ ಇಗೋ ಇರಬೇಕು. ಅದು ಸ್ವಾಭಿಮಾನವಾಗಿರುವವರೆಗೂ ಇರಬೇಕು. ಅದು ಅಹಂಕಾರವಾದರೆ ಇಬ್ಬರಿಗೂ ಒಳ್ಳೆಯದಲ್ಲ. ಒಂದು ಇಗೋ ನನ್ನನ್ನು ಬೆಳೆಸುವುದಕ್ಕೆ ಸಾಧ್ಯವಾದರೆ, ಇನ್ನೊಂದನ್ನು ರೂಪಿಸುವುದಕ್ಕೆ ಸಾಧ್ಯವಾದರೆ, ಒಂದು ಧಾರ್ಮಿಕ ಕೋಪವಾದರೆ ಒಳ್ಳೆಯದಲ್ವಾ? ಅದು ಆಯಾ ಪರಿಸ್ಥಿತಿಗೆ ಬದಲಾಗುತ್ತಿರುತ್ತದೆ. ಒಂದು ಪದದ ಅರ್ಥ ಪದಕೋಶದಲ್ಲಿ ಸಿಗುವುದಿಲ್ಲ, ಆ ಸಂದರ್ಭದಲ್ಲಿ ಸಿಗುತ್ತದೆ. ಯಾವ ಸಂದರ್ಭದಲ್ಲಿ ಆ ಪದವನ್ನು ಉಪಯೋಗಿಸುತ್ತೀವೋ, ಆ ಪದಕ್ಕೆ ಅರ್ಥ ಇರುತ್ತದೆಯೇ ಹೊರತು, ಇಗೋ ಎಂದರೆ ಒಂದು definite ಅರ್ಥವಿರುವುದಿಲ್ಲ.

ಕೆಲವು ನಟರು ಸಹ ತಾವು ಜಿಮ್‍ಗೆ ಹೋಗಿಯೇ ನಟ ಆಗುತ್ತೀನಿ ಎಂದರೆ ಆಗುವುದಿಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ತಿಳಿದುಕೊಳ್ಳೋದು, ಕಲೆಯ ಪ್ರಕಾರಗಳನ್ನು ಅರಿತುಕೊಳ್ಳೋದು, ಅದರಿಂದ ನನಗೆ ಹೆಸರಾಗಬೇಕೆಂದು ಬಯಸೋದು ಸಹ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ, ಪ್ರತಿಯೊಬ್ಬರು ಗೆಲ್ಲಬೇಕೆಂಬ ಒತ್ತಡ ಯಾಕೆ? ಸೋಲು ಸಂತೋಷ ಯಾಕೆ ನಾವು ಕೊಟ್ಟಿಲ್ಲ? ಕ್ಷಮಿಸುವ ಸಂತೋಷವನ್ನು ನಾವು ಯಾಕೆ ಕೊಟ್ಟಿಲ್ಲ? ನಮಗೂ ಅವನೇನು ಹೇಳುತ್ತೇನೆ ಎನ್ನುವ ತಾಳ್ಮೆಯೇ ಇಲ್ಲ. ನಾನು ಅಂದುಕೊಂಡಿರುವ ಸಿನಿಮಾ ತೆಗೆದಿದ್ದೀಯಾ? ಅಂತಲೇ ಎಲ್ಲರೂ ಕೇಳೋದು. ಏನು ಹೇಳುತ್ತಾನೆ ಎನ್ನುವ ತಾಳ್ಮೆಯೇ ಯಾರಿಗೂ ಇಲ್ಲ.

ನಾನೇ ಈಗ ಮತ್ತೆ ಕಲಿಯಬೇಕಾದ ಪರಿಸ್ಥಿತಿಯಲ್ಲಿದ್ದೀನಿ. ಇಷ್ಟು ಸಿನಿಮಾಗಳನ್ನು ಮಾಡಿದ್ದೇನೆ, ಹೊಸಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಇವತ್ತು ಹೊಸಬರ ಜೊತೆಗೆ ಮಾಡುವಾಗ, ಅವರು ಬೇರೇನೋ ಕೇಳುತ್ತಿದ್ದಾರೆ ಅಂತನಿಸುತ್ತಿದೆ. ಹಾಗಾಗಿ, ಇದುವರೆಗೂ ಕಲಿತಿದ್ದನ್ನು ಮರೆತು, ಹೊಸದಾಗಿ ಕಲಿಯಬೇಕು. ಇದೊಂದು ಸವಾಲು. ಖುಷಿಯಾಗುತ್ತಿದೆ. ಇತ್ತೀಚೆಗೆ ‘ರಾಯನ್‍’ ಸಿನಿಮಾದ ಸಮಾರಂಭದಲ್ಲಿದ್ದೆ. ಆ ಚಿತ್ರಕ್ಕೆ ರೆಹಮಾನ್‍ ಸಂಗೀತ ಸಂಯೋಜಿಸುತ್ತಿದ್ದು, ರೆಹಮಾನ್‍ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಮೊದಲ ತಮಿಳು ಚಿತ್ರಕ್ಕೆ ಅವರೇ ಸಂಗೀತ ನಿರ್ದೇಶಕರು.

30 ವರ್ಷಗಳ ನಂತರವೂ ನಾವಿನ್ನೂ ಇದ್ದೀವಲ್ಲ ಎನ್ನುವುದೇ ಬಹಳ ಸಂತೋಷದ ವಿಷಯ. ಒಬ್ಬ ಕಲಾವಿದ ಬೆಳೆಯೋದು ಬರೀ ಅವನ ಪ್ರತಿಭೆಯಿಂದ ಮಾತ್ರವಲ್ಲ. ಜನರ ಪ್ರೀತಿಯಿಂದ ಮತ್ತು ಅದಕ್ಕಿಂತ ಜನರು ಅವನ ಮೇಲಿಟ್ಟಿರುವ ನಂಬಿಕೆಯಿಂದ. ಆ ನಂಬಿಕೆಯನ್ನು 30 ವರ್ಷಗಳ ಕಾಲ ಉಳಿಸಿಕೊಂಡಿದ್ದೇವೆ ಎನ್ನುವುದೇ ನಮ್ಮ ಹೆಮ್ಮೆ ಆಗುತ್ತದೆ. ಏಕೆಂದರೆ, ಅವರು ನಮ್ಮನ್ನು ನಂಬಿ ಒಂದು ವೇದಿಕೆ ಕೊಟ್ಟಿದ್ದಾರೆ. ಅವರಿಗೆ ಇಷ್ಟ ಆದರಂತೂ, ನಿಮ್ಮನ್ನು ಪ್ರೀತಿಸೋಕೆ ಕಾರಣಗಳನ್ನು ಹುಡುಕುತ್ತಾನೆ. ಒಬ್ಬ ವ್ಯಕ್ತಿಯ ಬೆಳವಣಿಗೆ ಬರೀ ಅವನು ಬೆಳೆದ ಎತ್ತರ ನೋಡಿ ಲೆಕ್ಕ ಹಾಕುವುದಲ್ಲ, ಅವನು ಎತ್ತರವಾಗಿ ಬೆಳೆದ ಮೇಲೆ ಎಷ್ಟು ಜನರನ್ನ ಬೆಳೆಸಿದ ಎನ್ನುವುದು ಬಹಳ ಮುಖ್ಯ.

‘ನಾನು ನನ್ನ ಕನಸು’ ಇರಬಹುದು, ‘ಒಗ್ಗರಣೆ’ ಅಥವಾ ‘ಇದೆಂಥಾ ರಾಮಾಯಣ’ ಚಿತ್ರಗಳು ನನ್ನ ಅಭಿರುಚಿ. ತಂದೆ-ಮಗನ ಸಂಬಂಧದ ಕುರಿತು ಸಾಕಷ್ಟು ಚಿತ್ರೆಗಳು ಬಂದಿವೆ. ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್‍ ಆಫ್‍ ದಿ ನೇಷನ್‍ ಅಂತಾರೆ. ಏಕೆಂದರೆ, ಅಷ್ಟೊಂದು ತಂದೆಯ ಪಾತ್ರಗಳನ್ನು ನಾನು ಇದುವರೆಗೂ ಮಾಡಿಬಿಟ್ಟಿದ್ದೀನಿ. ಇದು ತೀವ್ರವಾಗಿ ಕಾಡುವ ಸಿನಿಮಾ. ತಂದೆ-ಮಗನ ಬಾಂಧವ್ಯಕ್ಕಿಂತ, ಇಲ್ಲಿ ಮಗನನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಹಿರಿಯರನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ಹೇಳಲಾಗಿದೆ. ಪರಿಸ್ಥಿತಿಯ ವಿಕೋಪಗಳಿಗೆ ಅಥವಾ ಕೆಲವು ಒತ್ತಡಗಳಿಗೆ ಆ ಸಂಬಂಧ ಪ್ರಶ್ನಿಸಲ್ಪಡುತ್ತದೆ. ಜೀವನದಲ್ಲಿ ಕೆಲವು ಸಂಘರ್ಷಗಳು ಬಂದಾಗ ನಮಗೊಂದು ಲಿಬರೇಶನ್ ‍ಸಿಗುತ್ತದೆ. ಒಂದು ಪರಿಸ್ಥಿತಿ ಎದುರಾದಾಗ ನಮ್ಮಳೊಗಿರುವ ಇನ್ನೊಂದು ಶಕ್ತಿ ನಮಗೆ ಅರ್ಥವಾಗೋದು ಅಥವಾ ನಾವು ಇನ್ನಷ್ಟು ಬೆಳೆಯೋದಕ್ಕೆ ಸಾಧ್ಯ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಇದೊಂದು ಜನ ಸಾಮಾನ್ಯರ ಸಿನಿಮಾ. ನಿಜವಾಗಲೂ ಕಾಡುವ ಸಿನಿಮಾ.

ಒಬ್ಬ ಗಂಡಸು ಮಕ್ಕಳು ಹುಟ್ಟುವ ತನಕ ಬರೀ ಒಬ್ಬ ಗಂಡ ಆಗಿರುತ್ತಾನೆ. ಮಕ್ಕಳು ಹುಟ್ಟಿದ ನಂತರ ಅಪ್ಪ ಎನ್ನುವ ಸ್ಥಿತಿ. ಅಪ್ಪನಿಗೂ, ಮಕ್ಕಳಿಗೂ ಒಂದೇ ವಯಸ್ಸು. ಅದರಲ್ಲೂ ಒಂದು ಹೆಣ್ಣು ಮಗಳ ಜೊತೆಗಿನ ಸಂಬಂಧ ಎಂದರೆ, ಅವನ ಜೀವನದಲ್ಲಿ ಬರುವ ಎಲ್ಲಾ ಸಂಬಂಧಗಳು, ಅಂದರೆ ತಾಯಿ ಇರಬಹುದು, ಹೆಂಡತಿ ಇರಬಹುದು, ತಂಗಿ ಇರಬಹುದು, ಸ್ನೇಹಿತೆ ಇರಬಹುದು. ಆದರೆ, ಮಗಳ ಜೊತೆಗೆ ಬೇರೆ ಸಂಬಂಧ ಇರುತ್ತದೆ. ಚೆನ್ನಾಗಿ ಬೆಳಸಿ ಯಾವುದನ್ನೂ ಎದುರು ನೋಡದೆ ಬಿಟ್ಟು ಕೊಡುವುದು. ತಂದೆ-ಮಗನ ಸಂಬಂಧ ಹಾಗಿರುವುದಿಲ್ಲ. ನನ್ನ ನಂತರ ನೀನು, ನನ್ನ ಇನ್ನೊಂದು ಛಾಯೆ ನೀನು ಎನ್ನುವ ಸಂಬಂಧ ಅದು. ಅದೊಂಥರಾ Love-Hate relationship. ತಂದೆ ತನ್ನ ಮಗನಿಗೆ ಕಲಿಸೋದಕ್ಕಿಂತ, ಅವನ behaviourನಿಂದ ಮಕ್ಕಳು ಕಲಿಯೋದು ತುಂಬಾ ಇರುತ್ತದೆ.

ನನಗೆ ನನ್ನ ಮಗಳ ಜೊತೆಗೆ ಇರುವ relationship ಬೇರೆ, ಮಗನ ಜೊತೆಗೆ ಇರುವ ಸಂಬಂಧ ಬೇರೆ. ಇವತ್ತಿನ ಪ್ರಪಂಚದಲ್ಲಿ ಹೊರಗೆ ಹೋಗಬೇಕು. ಸಾಕಷ್ಟು ಸಮಸ್ಯೆಗಳು ಇರುತ್ತವೆ. ಅದನ್ನು ಹೇಳಿಕೊಳ್ಳುವುದಕ್ಕೆ ಆಗಲ್ಲ. ಅದನ್ನು ಅವರೇ ನಿಭಾಯಿಸಬೇಕು. ಮಗ ಎಷ್ಟೇ ದೊಡ್ಡವನಾದರೂ, ತಂದೆಗೆ ಇನ್ನೂ ಚಿಕ್ಕವನು ಎಂದನಿಸುತ್ತದೆ. ಅದರ ಜೊತೆಗ ಮಗನಿಗೆ ತನ್ನದೇ ಆದ ನಿರ್ಧಾರಗಳೂ ಇರುತ್ತವೆ. ಅದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ನಾನು ನಿನಗೆ ಇಷ್ಟು ಮಾಡಿದೆ, ನೀನೇನು ವಾಪಸ್ಸು ಕೊಡುತ್ತೀಯ ಎನ್ನುವುದಕ್ಕಿಂತ ಅವನನ್ನೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಒಬ್ಬ ನಟನಾಗಿ ನನಗೆ ‘ನಾನು ನನ್ನ ಕನಸು’ ಬಹಳ ಇಷ್ಟವಾದ ಮತ್ತು ಕಾಡುವ ಸಿನಿಮಾ. ಏಕೆಂದರೆ, ನನ್ನ ಹೆಂಡತಿ ನನ್ನ ಹೆಂಡತಿಯಾಗಿಯೇ ಇರುತ್ತಾಳೆ. ಮಗಳು ಮದುವೆಯಾದಾಗ, ಮಾವ ಆಗ ನನಗೆ ಅರ್ಥಾವಾಗುತ್ತಾನೆ. ಅಲ್ಲಿಯವರೆಗೂ ಹೆಂಡತಿ ಅಪ್ಪ ಅಂತ ಜಗಳ ಆಡುತ್ತಿರುತ್ತೀವಿ. ನನ್ನ ಮಗಳಿಗೆ ಮಾವ ಸಿಗುತ್ತಾನೆ ಎಂದಾಗ, ನನಗೆ ಹೆಂಡತಿ ಅರ್ಥವಾಗುತ್ತಾ ಹೋಗುತ್ತಾಳೆ. ಅವಳು ಇನ್ನೊಬ್ಬಳ ಮಗಳಾಗಿದ್ದಳು, ನಾನು ಅವಳನ್ನು ಇನ್ನೊಬ್ಬರ ಮಗಳು ಅಂತ ನೋಡಿರಲೇ ಇಲ್ಲ. ನನ್ನ ಮಗಳನ್ನು ನಾನು ನೋಡುತ್ತಿದ್ದ ಹಾಗೆ, ಅವಳ ಅಪ್ಪ ಸಹ ಅವಳನ್ನು ಹಾಗೆಯೇ ನೋಡುತ್ತಿದ್ದ. ಮಗಳು ಮತ್ತು ತಂದೆಯ ಸಂಬಂಧದಲ್ಲಿ ಆ ಚಿತ್ರ ನನಗೆ ಬಹಳಷ್ಟು ವಿಷಯಗಳನ್ನು ಕಲಿಸಿತು. ಆ ಚಿತ್ರವನ್ನು ಬರೆಯುತ್ತಾ, ನಿರ್ದೇಶನ ಮಾಡುತ್ತಾ ತುಂಬಾ ಕಲಿತೆ. ಹಾಗಾಗಿ, ನನಗೆ ಅದು ಬಹಳ ಇಷ್ಟವಾದ ಚಿತ್ರ.

ಮಾಣಿಕ್ಯ ಒಳ್ಳೆಯದೇ? ಅದು ಕೋತಿ ಕೈಗೆ ಸಿಕ್ಕಿದರೆ? ಅದರ ಬಗ್ಗೆ ನಾವು ಯೋಚಿಸಬೇಕು. ಪ್ಲಸ್‍, ಮೈನಸ್‍ ಇದ್ದೇ ಇರುತ್ತದೆ. ಒಳಗಿನ ಅಸಹ್ಯವೂ ಹೊರಗೆ ಬರುತ್ತದೆ, ವಿಕಾರಗಳೂ ಹೊರಗ ಬರುತ್ತಿವೆ. ಅವೆರಡೂ ಬರಬೇಕು. ಸೋಷಿಯಲ್‍ ಮೀಡಿಯಾಗಳು ಬಹಳ ಮುಖ್ಯವಾದ ವಿಷಯಗಳನ್ನು ತಲುಪಿಸೋಕೆ ಮಹತ್ವದ ಪಾತ್ರ ವಹಿಸುತ್ತಿದೆ. ಇದರಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದೂ ಇದೆ. ಅವೆರಡರಲ್ಲಿ ನಾವು ಯಾವುದನ್ನು ತೆಗೆದುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಅನಂತ್‍ ನಾಗ್‍ ಒಂದು ಸಂಭಾಷಣೆ ಹೇಳ್ತಾರೆ. ‘ನಮ್ಮೆಲ್ಲರಲ್ಲೂ ಕಪ್ಪು ನಾಯಿ, ಬಿಳಿ ನಾಯಿ ಇರತ್ತೆ. ಕಪ್ಪು ನಾಯಿ ಕೆಟ್ಟದ್ದು, ಬಿಳಿ ನಾಯಿ ಒಳ್ಳೇದು.

ಅವೆರಡರಲ್ಲಿ ನಾವು ಯಾವುದಕ್ಕೆ ಊಟ ಜಾಸ್ತಿ ಹಾಕುತ್ತೇವೆ ಅನ್ನೋದು ಮುಖ್ಯ’ ಅಂತಾರೆ. ನಾವು ಎರಡನ್ನೂ ನೋಡಬೇಕು. ಅಣು ಬಾಂಬ್‍ ಕಂಡುಹಿಡಿದಿದ್ದು ಎನರ್ಜಿಗೆ, ಇನ್ನೊಬ್ಬರನ್ನು ಕೊಲ್ಲುವುದಕ್ಕೆ ಅಲ್ಲ. ಇಲ್ಲಿ ನಮ್ಮ ಮನಸ್ಸಾಕ್ಷಿ, ಆತ್ಮಾವಲೋಕನ ಬಹಳ ಮುಖ್ಯ. ಇದನ್ನು ಯಾರೋ ಒಬ್ಬರು ನೋಡುವುದಿಲ್ಲ. ಹೆಣ್ಮಕ್ಕಳು ನೋಡುತ್ತಿರುತ್ತಾರೆ. ಸಮಾಜದ ಒಂದು ಸ್ವಾಸ್ತ್ಯ ನೋಡುತ್ತಿರುತ್ತದೆ. ಅವರಿಗೆ ನಾವೇನು ತಲುಪಿಸಬೇಕು, ಯಾವುದು ಮುಖ್ಯ ಆಗಬೇಕು ಎಂಬುದು ನಮ್ಮ ಕೈಯಲ್ಲಿರೋದು. ಇವತ್ತಿನ ಯುವ ಜನಾಂಗದ ತಪ್ಪೇನು ಇಲ್ಲ. ಒಬ್ಬಿಬ್ಬರು ತಪ್ಪು ಮಾಡಿದರೆ, ಎಲ್ಲರೂ ತಪ್ಪು ಮಾಡುತ್ತಾರೆ ಎನ್ನುವುದು ತಪ್ಪು. Let’s be responsible ಅಷ್ಟೇ. (ಬರಹ : ಚೇತನ್ ನಾಡಿಗೇರ್, ಫೇಸ್ ಬುಕ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ

Published

on

  • ಶಂಕರ ದೇವರು ಹಿರೇಮಠ, ಸಾಹಿತಿಗಳು

ಮಸ್ಕಿ ಭಾರತ ದೇಶ ಕೃಷಿ ಪ್ರಧಾನವಾದ ದೇಶ.ಇಲ್ಲಿ ಹಲವಾರು ಭಾಷೆ, ಹಲವಾರು ಸಂಸ್ಕೃತಿ ಹಾಗೂ ಹಲವಾರು ರಾಜ್ಯಗಳನ್ನು ಒಳಗೊಂಡ ಭಾರತ. ತನ್ನೊಳಗೆ ವಿಭಿನ್ನ ಸಂಸ್ಕೃತಿಯನ್ನು ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಇಲ್ಲಿ ಆಚರಿಸುವ ಬಹುತೇಕ ಹಬ್ಬಗಳು ಹಳ್ಳಿಯ ಸೊಗಡಿನೊಂದಿಗೆ ಸಮ್ಮಿಲಿತಗೊಂಡಿವೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಹುತೇಕ ಹಬ್ಬಗಳ ಹಿನ್ನೆಲೆಯನ್ನು ಒಳಗೊಂಡಿವೆ .

ಮಳೆಗಾಲದಲ್ಲಿ ಬರುವ ವಿಶೇಷ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಮಳೆಗಾಲದ ಪ್ರಾರಂಭದ ದಿನಗಳಲ್ಲಿ ಬರುವ ಈ ಹಬ್ಬ ಉತ್ತರ ಕರ್ನಾಟಕದಲ್ಲಿ ಸಂಭ್ರಮ ಮನೆ ಮಾಡುತ್ತದೆ .ಮುಂಗಾರು ಪ್ರಾರಂಭವಾಗಿ ರೈತರು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಿ ಹೊಲಗಳನ್ನು ಹಸನು ಮಾಡಿ ಬಿತ್ತನೆ ಹಾಗೂ ನಾಟಿಯನ್ನು ಮಾಡಿರುತ್ತಾರೆ. ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿರುತ್ತವೆ ಇಂತಹ ದಿನಗಳಲ್ಲಿ ರೈತರು ವಿಶ್ರಾಂತಿಯನ್ನು ಪಡೆಯುವ ಜೊತೆಗೆ ತಮ್ಮ ಒಡನಾಡಿಯಾದ ಜಾನುವಾರುಗಳನ್ನು, ಎತ್ತುಗಳನ್ನು ಪ್ರೀತಿಯಿಂದ ಪೋಷಿಸುತ್ತಾರೆ .ಕಾರ ಹುಣ್ಣಿಮೆಯ ನಂತರ ಬರುವ ಮಣ್ಣೆತ್ತಿನ ಅಮವಾಸೆ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಬಹು ಸಂಭ್ರಮದ ಹಬ್ಬ .

ರೈತರ ಒಡನಾಡಿ ಹಾಗೂ ರೈತರ ಉಸಿರೆಂದರೆ ಎತ್ತುಗಳು ಎತ್ತುಗಳೊಂದಿಗೆ ರೈತರು ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ .ಎತ್ತುಗಳನ್ನು ಕೇವಲ ಪ್ರಾಣಿಗಳೆಂದು ಪರಿಗಣಿಸದೆ ತಮ್ಮ ಮನೆಯ ಸದಸ್ಯರಂದೇ ಪರಿಗಣಿಸಿ ಅವುಗಳನ್ನು ಪ್ರೀತಿಯಿಂದ ಅಕ್ಕರೆಯಿಂದ ಸಾಕುತ್ತಿರುತ್ತಾರೆ. ರಾಮ, ಲಕ್ಷ್ಮಣ ಭೀಮ, ಕರಿಯ, ಚೆನ್ನ,ಬಸವ, ಕೆಂಪ ಹಾಗೂ ತಮ್ಮ ನೆಚ್ಚಿನ ನಾಯಕ ನಟರ ಹೆಸರನ್ನು ತಮ್ಮ ಪ್ರೀತಿಯ ಎತ್ತುಗಳಿಗೆ ಇಟ್ಟು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ರೈತರ ಕಷ್ಟ ,ಸುಖಗಳಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಎತ್ತುಗಳಿಗೆ ರೈತರು ಅಪಾರ ಗೌರವವನ್ನು ನೀಡುತ್ತಾರೆ.

ಶಂಕರ ದೇವರು ಹಿರೇಮಠ, ಸಾಹಿತಿಗಳು

ಮಣ್ಣೆತ್ತಿನ ಅಮಾವಾಸ್ಯೆ ದಿನದ ಮೊದಲೇ ಹಳ್ಳ, ಹೊಳೆ, ಗದ್ದೆಗಳಿಂದ ಮಣ್ಣನ್ನು ತಂದು ಜೋಡಿ ಎತ್ತುಗಳನ್ನು ಮಾಡಿ ಎತ್ತುಗಳಿಗೆ ಮೇವು ಹಾಕುವ ಒಂದು ಗೋದಲಿಯನ್ನು ಮಾಡುತ್ತಾರೆ. ಎತ್ತುಗಳನ್ನು ಮಣ್ಣಿನಿಂದಲೇ ಮಾಡಿ ಅವುಗಳನ್ನು ದೇವರ ಮನೆಯ ಜಗಲಿ ಮೇಲಿಟ್ಟು ಪೂಜೆ ಮಾಡುತ್ತಾರೆ. ಇನ್ನೂ ಕೆಲವರು ಹೊಲಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ಮಾಡುತ್ತಾರೆ .

ರೈತ ಹಾಗೂ ಎತ್ತುಗಳಿಗೆ ಅವಿನಾಭಾವ ಸಂಬಂಧ ಶತಶತಮಾನಗಳಿಂದ ಇದೆ. ಭಾರತದ ಪ್ರತಿಯೊಂದು ಕೃಷಿ ಕುಟುಂಬವು ಕೃಷಿಯೊಂದಿಗೆ ಹಾಗೂ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧದ ನಂಟಿದೆ .ಮಳೆಗಾಲದಲ್ಲಿ ಬಿತ್ತನೆಯಾಗಿ ಬೆಳೆ ಬೆಳೆದು ಹಸಿರಿನಿಂದ ಭೂಮಿ ಕಂಗೊಳಿಸುತ್ತಿರುವ ಈ ದಿನಗಳಲ್ಲಿ ಕೃಷಿಯಲ್ಲಿ ಭಾಗಿಯಾಗುವ ಎತ್ತುಗಳಿಗೆ ಗೌರವಿಸುವ ಮೂಲಕ ಈ ದಿನಗಳಲ್ಲಿ ಶ್ರಮ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕಾರ್ಯ ಶತಮಾನಗಳಿಂದ ನಡೆದುಕೊಂಡು ಬಂದಿದೆ .

ಹಳ್ಳಿಗಳಲ್ಲಿ ಕುಂಬಾರರು ತಯಾರಿಸಿದ ಸುಂದರವಾದ ಎತ್ತುಗಳನ್ನು ಕೊಂಡು ತಂದು ಅವುಗಳಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿ ಸಂತೋಷಪಡುವರು. ರೈತರು ಹಿಂದೆ ಎತ್ತುಗಳನ್ನು ಕೊಟ್ಟು ಅದರ ಬದಲಾಗಿ ದವಸ ಧಾನ್ಯಗಳನ್ನು ಪಡೆಯುತ್ತಿದ್ದರು. ಇಂದು ನಗರೀಕರಣದ ಪರಿಣಾಮ ಎತ್ತುಗಳು ಮಾರಾಟದ ಸರಕಾಗಿ ಪರಿಣಮಿಸಿವೆ. ಆದರೂ ಇನ್ನೂ ಹಳ್ಳಿಗಳಲ್ಲಿ ಎತ್ತುಗಳನ್ನು ಪೂಜ್ಯನೀಯ ಸ್ಥಾನದಲ್ಲಿ ಇಟ್ಟು ಗೌರವಿಸುತ್ತಾರೆ. ಮಣ್ಣೆತ್ತಿನ ಅಮಾವಾಸ್ಯೆ ವಿಶೇಷವಾಗಿ ಮಕ್ಕಳಿಗೆ ಸಂಭ್ರಮದ ಹಬ್ಬ. ಹಬ್ಬದ ಮರುದಿನ ಮಕ್ಕಳು ಮನೆ ಮನೆಗೆ ತೆರಳಿ ಕುಂಟೆತ್ತು ಬಂದಿದೆ ಅಂತ ಹೇಳಿ ಅಕ್ಕಿ, ಜೋಳ, ಕಾಳು, ಬೆಲ್ಲ ತಂದು ಅವುಗಳಿಂದ ಸಿಹಿ ಅಡಿಗೆ ಮಾಡಿಕೊಂಡು ಎಲ್ಲ ಮಕ್ಕಳು ಊಟ ಮಾಡಿ ಎತ್ತುಗಳಿಗೆ ಮತ್ತೊಮ್ಮೆ ಪೂಜೆ ಸಲ್ಲಿಸಿ ಅವುಗಳನ್ನು ವಿಸರ್ಜಿಸುವ ಪದ್ಧತಿ ರೂಢಿ ಇದೆ. ಮಕ್ಕಳೆಲ್ಲ ಸಂಭ್ರಮದಿಂದ ಈ ಕಾರ್ಯದಲ್ಲಿ ಭಾಗವಹಿಸಿ ಮಣ್ಣೆತ್ತಿನ ಅಮಾವಾಸ್ಯೆ ಯನ್ನು ಜೀವಂತವಾಗಿಸುವ ಕಾರ್ಯವನ್ನು ಈಗಲೂ ಮಾಡುತ್ತಿದ್ದಾರೆ .

ಈಗೀಗ ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಯಂತ್ರಗಳನ್ನು ಹಾಗೂ ಟ್ರ್ಯಾಕ್ಟರ್ ಗಳನ್ನು ಬಳಸುತ್ತಿರುವ ಕಾರಣದಿಂದ ಎತ್ತುಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ರೈತರ ಒಡನಾಡಿಯಾದ ಎತ್ತುಗಳು ಇಂದು ಪ್ರತಿಷ್ಠೆಯ ಪ್ರತೀಕವಾಗಿ ಇನ್ನೂ ಕುಟುಂಬದ ಕೆಲವರು ಲಕ್ಷ ಲಕ್ಷ ಹಣ ಕೊಟ್ಟು ಖರೀದಿಸಿ ಮನೆಗೆ ತಂದು ಎತ್ತುಗಳನ್ನು ಸಾಕುತ್ತಿದ್ದಾರೆ. ಎತ್ತುಗಳು ನಮ್ಮ ಅನ್ನದಾತರ ಗೌರವ ಪ್ರತೀಕ .ನಾವೆಲ್ಲರೂ ಕುಳಿತು ಊಟ ಮಾಡುವ ಪ್ರತಿಯೊಂದು ಅನ್ನದ ಅಗಳಿನ ಹಿಂದೆ ಕೋಟಿಗಟ್ಟಲೆ ರೈತರ ಶ್ರಮ ಇದೆ .ಆ ಶ್ರಮದ ಹಿಂದೆ ಎತ್ತುಗಳ ಒಡೆಯನಾದ ರೈತನ ಮೇಲಿನ ಪ್ರೀತಿ ಇದೆ .(ಬರಹ-ಶಂಕರ ದೇವರು ಹಿರೇಮಠ, ಸಾಹಿತಿಗಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending