ರಾಜಕೀಯ
ಯುದ್ಧೋನ್ಮಾದ ಹೆಮ್ಮೆಯ ಅಮಲಿನ ವಿಲಕ್ಷಣ ಅಲೆ
![](https://suddidina.com/wp-content/uploads/2018/08/IMG-20180829-WA0059.jpg)
ಸುದ್ದಿದಿನ ವಿಶೇಷ : ಇಬ್ಬರ ನಡುವೆ ಜಗಳವಾಗುತ್ತದೆ. ಕೈ ಕೈ ಮಿಲಾಯಿಸಿ ಒಬ್ಬರನ್ನೊಬ್ಬರು ಹೊಡೆದುಕೊಂಡು ರಕ್ತಸಿಕ್ತಗೊಂಡು ಘಾಸಿಗೊಳ್ಳುವ ಸಂದರ್ಭವದು.
ದೈಹಿಕ ಶಕ್ತಿಯ ಬಲದಲ್ಲಿ ಒಬ್ಬರು ಮತ್ತೊಬ್ಬರನ್ನು ಮಣಿಸಿಬಿಡುತ್ತಾರೆ. ಗೆದ್ದು ಬೀಗುತ್ತಾರೆ. ಆ ಗೆಲುವು ಗೆದ್ದವನೊಳಗೆ ಅಹಂಕಾರವನ್ನು ಶಾಶ್ವತವಾಗಿ ಬೇರೂರಿಸಿಬಿಡುತ್ತದೆ. ಅದರ ಜೊತೆಗೆ ಪ್ರತಿಯೊಂದು ಸಲವೂ ಆ ಗೆಲುವನ್ನು ನೆನಪಿಸುವಂಥ ರೀತಿಯ ನಡವಳಿಕೆಗಳೊಂದಿಗೆ ಉಳಿದವರೊಳಗೆ ಭಯಭೀತಿ ಉಂಟುಮಾಡುತ್ತಲೇ ತನ್ನ ಪ್ರಾಬಲ್ಯದ ಪ್ರದರ್ಶನದೊಂದಿಗೆ ವಿಜೃಂಭಿಸುತ್ತಾನೆ. ಅಂಥ ಕ್ಷಣಗಳನ್ನೇ ಸಂಭ್ರಮಿಸುತ್ತಾ ದೈಹಿಕವಾಗಿ ಪ್ರಬಲವಾಗಿರುವುದೇ ಎಲ್ಲರನ್ನು ಹದ್ದುಬಸ್ತಿನಲ್ಲಿಡುವ ಬಹುಮುಖ್ಯ ತಂತ್ರ ಎಂಬುದನ್ನು ಸಾರುತ್ತಲೇ ಇರುತ್ತಾನೆ. ತನ್ನನ್ನು ತೊಡವಿಕೊಂಡರೆ ಪರಿಣಾಮ ನೆಟ್ಟಗಿರದು ಎಂಬ ಭಯಾನಕ ಸಂದೇಶ ರವಾನಿಸುತ್ತಾನೆ.
ಅವನ ಬೆಂಬಲಿಗರ ಭಾವುಕ ಅಜ್ಞಾನವು ಅವರಲ್ಲಿ ಒಂದು ಬಗೆಯ ಹುಸಿ ಹೆಮ್ಮೆಯನ್ನು ಮೂಡಿಸಿಬಿಡುತ್ತದೆ. ಅದರ ಕತ್ತಲ ಬಂಧದೊಳಗೆ ಬೆಂಬಲಿಗ ಅಭಿಮಾನಿಗಳ ವಿವೇಕ ಉಸಿರುಗಟ್ಟುತ್ತಿರುತ್ತದೆ. ಅಂಥವರ ಸಂಖ್ಯೆಯೇ ಹೆಚ್ಚಾಗುತ್ತಾ ಒಂದು ಬಗೆಯ ಸ್ಥಗಿತತೆಯ ವಾತಾವರಣ ನೆಲೆಸಿಬಿಡುತ್ತದೆ.
ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುವ ಯುದ್ಧ
ಕಾರ್ಗಿಲ್ ವಿಜಯೋತ್ಸವವು ದೇಶದಾದ್ಯಂತ ಇಂಥದ್ದೊಂದು ನಕಾರಾತ್ಮಕತೆಗೆ ಸಾಕ್ಷ್ಯ ಒದಗಿಸುತ್ತಿದೆ. ಯುದ್ಧ ಗೆದ್ದ ಸಂಭ್ರಮದಲ್ಲಿ ದೇಶದ ಕುರಿತಾದ ಹೆಮ್ಮೆ ಅಪವ್ಯಾಖ್ಯಾನಕ್ಕೀಡಾಗುತ್ತಿದೆ. ನಿಜದ ಹೆಮ್ಮೆಯ ಬದಲು ವಿಲಕ್ಷಣ ಅಭಿಮಾನದ ವಿಕೃತಿ ವ್ಯಾಪಕವಾಗುತ್ತಲೇ ಇದೆ.
ಒಂದು ದೇಶ ಮತ್ತೊಂದು ದೇಶದ ವಿರುದ್ಧ ಜಯ ಸಾಧಿಸಿದ ಘಳಿಗೆಯನ್ನು ನೆನಪಿಸಿಕೊಂಡು ಜಗತ್ತಿಗೆ ನಮ್ಮ ಶಕ್ತಿಯನ್ನು ತೋರ್ಪಡಿಸುವ ವಿಜಯೋತ್ಸವವು ಪ್ರಜೆಗಳ ಪ್ರಜ್ಞೆಯನ್ನು ಶತಮಾನಗಳಷ್ಟು ಹಿಂದಕ್ಕೆ ತಳ್ಳುವ ಹುನ್ನಾರದ ಭಾಗವಾಗಿಯೇ ಕಾಣಿಸುತ್ತಿದೆ. ನಮ್ಮವರೇ ಆಗಿದ್ದವರು ಹಿಂದೊಮ್ಮೆ ವಿಭಜನೆಯ ಸಾಂದರ್ಭಿಕ ಅನಿವಾರ್ಯತೆಯಲ್ಲಿ ಅಧಾರ್ಮಿಕ ತಿಳಿಗೇಡಿತನದ ಪರಮಾವಧಿಯ ಅತಿರೇಕದ ಕಾರಣಕ್ಕಾಗಿ ಬೇರೊಂದು ದೇಶದವರಾದರು. ನಂತರ ಒಬ್ಬರಿಗೊಬ್ಬರು ಜಗಳವಾಡಿಕೊಳ್ಳುವ ಧಾವಂತ ಒಬ್ಬರನ್ನೊಬ್ಬರು ಜಯಿಸುವ ಹಠವನ್ನು ಪ್ರತಿಷ್ಠಾಪಿಸಿಬಿಟ್ಟಿತು. ಈ ಹಠದೊಂದಿಗಿನ ದ್ವೇಷದ ಭಾವಗಳನ್ನು ರಾಜಕೀಯ ಸಂಕುಚಿತತೆ ಮತ್ತು ಅಧಿಕಾರ ದಾಹದ ಮನುಷ್ಯ ಸಹಜ ದೌರ್ಬಲ್ಯಗಳು ಮತ್ತಷ್ಟು ಪ್ರಬಲಗೊಳಿಸಿದವು.
ಅವು ಎಷ್ಟು ಪ್ರಖರವಾಗಿ ಮುಂದುವರೆದವು ಎಂದರೆ ಬಗೆಹರಿಸಿಕೊಳ್ಳಬಹುದಾಗಿದ್ದ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯದ ಮೂಲಸರಕುಗಳನ್ನಾಗಿಸಿದವು. ಇಷ್ಟಿಷ್ಟಕ್ಕೆ ಗೆರೆಗೀಚಿ ಜಗಳಕ್ಕೆ ನಿಲ್ಲುವುದನ್ನೇ ಸ್ಥಾಯಿಯಾಗಿಸಿದವು. ಒಡೆದು ಆಳುವ ನೀತಿಯನ್ನೇ ಬಂಡವಾಳವಾಗಿಸಿಕೊಂಡವರನ್ನು ಮುಂಚೂಣಿಗೆ ತಂದುನಿಲ್ಲಿಸಿದವು. ಅವರ ಮೂಗಿನ ನೇರಕ್ಕೆ ರಾಷ್ಟ್ರವಾದವನ್ನು ಮುನ್ನೆಲೆಗೆ ತಂದವು. ಅಷ್ಟೇ ಅಲ್ಲದೇ ದೇಶವನ್ನು ಪ್ರೇಮಿಸುವ ಭ್ರಮಾತ್ಮಕ ಭಾವನೆ ಕೆರಳಿಸುವಂಥ ವಿಕೃತಿಗಳನ್ನು ಸೃಷ್ಟಿಸಿದವು. ಯುದ್ಧ, ಸಂಘರ್ಷಗಳ ಜೊತೆಗೆ ನಿಲ್ಲುವ ವಿಲಕ್ಷಣ ವಿತಂಡವಾದವನ್ನು ದಾಟಿಸಿದವು.
ಉದಾತ್ತ ಪದಗಳ ವರ್ತುಲದೊಳಗೆ ಬಂಧಿ
ದೇಶಾಭಿಮಾನವು ಅಧಿಕಾರವನ್ನು ದಕ್ಕಿಸಿಕೊಳ್ಳುವ ಹುನ್ನಾರಗಳೊಂದಿಗೆ ಗುರುತಿಸಿಕೊಂಡವರ ರಾಕ್ಷಸ ಹಸಿವನ್ನು ನೀಗಿಸುವ ಪಾತ್ರವನ್ನು ನಿಭಾಯಿಸಲಾರಂಭಿಸಿತು. ಸಾವು-ನೋವುಗಳು ತ್ಯಾಗ-ಬಲಿದಾನಗಳ ಉದಾತ್ತ ಪದಗಳ ವರ್ತುಲದೊಳಗೆ ಬಂಧಿಯಾಗಿ ತಮ್ಮ ನಿಜ ಅರ್ಥವನ್ನು ಕಳೆದುಕೊಂಡವು. ಈ ಹಂತದಲ್ಲಿಯೇ ಇತಿಹಾಸದಲ್ಲಿ ಆಗಿಹೋದ ಗಾಯಗಳನ್ನು ಜನಪ್ರಿಯ ಶೈಲಿಯಲ್ಲಿ ನೆನಪಿಸಿಕೊಂಡು ಅತ್ಯದ್ಭುತ ಎನ್ನಿಸುವ ಹಾಗೆ ಭಾಷಾಪಾಂಡಿತ್ಯ ಪ್ರದರ್ಶಿಸಿ ಇನ್ನೊಂದು ದೇಶದ ವಿರುದ್ಧ ಮಾತನಾಡುತ್ತಾ ಬೆಂಬಲ ಗಳಿಸಿಕೊಳ್ಳುವ ರಹಸ್ಯ ಕಾರ್ಯಸೂಚಿ ಪ್ರಯತ್ನಗಳು ಯಶಸ್ಸು ಕಂಡವು. ಆ ಯಶಸ್ಸೇ ಇಂದು ಹಿಂಸೆಯ ಪರವಾದ ಸೋಂಕಿನೊಂದಿಗಿನ ವರ್ತನೆಗಳನ್ನೇ ವ್ಯಾಪಕವಾಗಿಸಿಬಿಟ್ಟಿದೆ.
ಇಂಥವುಗಳನ್ನು ಪ್ರಶ್ನಿಸಿ ಚಿಗುರಿಕೊಳ್ಳಬೇಕಾಗಿದ್ದ ಪರ್ಯಾಯ ಪ್ರತಿರೋಧದ ರಾಜಕಾರಣ ಪಕ್ಷಗಳ ಸಂಕುಚಿತ ಸಾರ್ವಭೌಮತ್ವದ ಅಲೆಯ ಹೊಡೆತಕ್ಕೆ ಸಿಲುಕಿಬಿಟ್ಟಿದೆ. ಆ ಅಲೆಯು ನಟನೆಯನ್ನೇ ನಿಜವಾದ ನಾಯಕತ್ವ ಎಂದು ಬಿಂಬಿಸುತ್ತಿದೆ. ಹಿಂದಿನವರಿಗಿಂತ ಈಗಿನ ಭಾವುಕ ಕೃತಕತೆಯೇ ಯೋಗ್ಯ ಎನ್ನುವಂಥ ನಂಬಿಕೆಯನ್ನು ಬಿತ್ತುತ್ತಿದೆ. ಚಿಂತನೆಯ ಸಾರ್ವಜನಿಕ ಸಾಮಥ್ರ್ಯವನ್ನೇ ಮುಳುಗಿಸಿ ಅದರ ಜಾಗದಲ್ಲಿ ಆರಾಧನೆಯ ಮನೋಭಾವವನ್ನು ನೆಲೆಗೊಳಿಸಿಬಿಟ್ಟಿದೆ.
ಮಾತಿನ ಮೋಡಿಯೊಳಗೆ ಸಿಲುಕಿದ ಯುವಜನ
ಯಾರನ್ನು ನೆಚ್ಚಿಕೊಂಡಿದ್ದೇವೆ, ಯಾರನ್ನು ನೆಚ್ಚಿಕೊಳ್ಳಬೇಕಿತ್ತು ಎಂಬ ವಿವೇಚನೆಯನ್ನೇ ಮರೆಸಿ ಒಂದು ಬಗೆಯ ಅಸಹಾಯಕತೆಯನ್ನು ಸೃಷ್ಟಿಸಿಬಿಟ್ಟಿದೆ.
ಕಾರ್ಗಿಲ್ ಯುದ್ಧದ ವೇಳೆ ಭಾರತದ ಆಗಿನ ಪ್ರಧಾನಿ ಕಾವ್ಯಾತ್ಮಕ ಧಾಟಿಯ ಯುದ್ಧಪ್ರಚೋದಕ ಭಾವುಕ ಪರಿಭಾಷೆಯನ್ನು ನೆಚ್ಚಿಕೊಂಡಿದ್ದರು. ಈಗಿನ ಪ್ರಧಾನಿ ಭಾಷೆಗೆ ಇರುವ ಉದಾತ್ತ ದೃಷ್ಟಿಕೋನಗಳ ಬಹುಮುಖೀ ಪ್ರಭಾವೀ ಶಕ್ತಿಯನ್ನೇ ಆಧರಿಸಿಕೊಂಡ ಮಾತಿನ ಮೋಡಿಯೊಳಗೆ ಜನರನ್ನು ಸಿಲುಕಿಸುತ್ತಿದ್ದಾರೆ. ಮಾತನಾಡಲೇಬೇಕಾದ ಸಂಗತಿಗಳ ಬಗ್ಗೆ ಮೌನವಹಿಸುತ್ತಿದ್ದಾರೆ.
ಇದೇನು ಇಂದು ನಿನ್ನೆಯ ರಾಜಕೀಯ ಪ್ರವೃತ್ತಿಯಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಈಗ ಮಾತಿನ ಆಕರ್ಷಕ ಆಯಾಮ ಪಡೆದಿದೆ ಅಷ್ಟೇ. ಅವರ ಮೌನದ ಸ್ಪೇಸ್ನ್ನು ಅವರನ್ನು ಆರಾಧಿಸುವ ಬೆಂಬಲಿಗ ಪಡೆಯು ಸಂಘರ್ಷವನ್ನು, ಯದ್ಧೋನ್ಮಾದದ ಗುಂಗುಗಳನ್ನು ಶಾಶ್ವತವಾಗಿ ಬೇರೂರಿಬಿಡಿಸುವ ಪ್ರಯತ್ನಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಜನರೂ ರಾಜಕೀಯ ಮನರಂಜನೆಯ ಗ್ರಾಹಕರಾಗಿ ಮೂಕಪ್ರೇಕ್ಷಕರಾಗಿದ್ದಾರೆ. ಅವರ ಅಸಹಾಯಕತೆಯು ಯುದ್ಧೋನ್ಮಾದದ ಅಮಲನ್ನು ಹೆಮ್ಮೆ ಮತ್ತು ಅಭಿಮಾನ ಎಂಬ ಪದಗಳೊಂದಿಗೆ ಜೋಡಿಸಿ ಹಿಂಸೆಯ ಪರವಾದ ಅಲೆಯನ್ನು ಸೃಷ್ಟಿಸಲಾಗುತ್ತಿದೆ. ರಂಜನೆಯ ರೂಪದ ನುಡಿಗಳು ಮತ್ತು ಮಾತನಾಡಲೇಬೇಕಾದ ಸಂದರ್ಭದಲ್ಲಿ ಮೌನಕ್ಕೆ ಶರಣುಹೋಗುವ ತಂತ್ರಗಳ ಮೂಲಕ ಹಿಂಸೆಯೇ ಎಲ್ಲದಕ್ಕೂ ಪರಿಹಾರ ಎಂಬ ತಪ್ಪುಕಲ್ಪನೆಯನ್ನು ಬಿತ್ತಲಾಗುತ್ತಿದೆ. ತಪ್ಪು ತಿಳುವಳಿಕೆಗಳನ್ನು ನೆಲೆಗೊಳಿಸಿ ಅದರ ಆಧಾರದ ಮೇಲೆ ಅಧಿಕಾರದ ಮೇಲಿನ ಹಿಡಿತವನ್ನು ಪ್ರಬಲಗೊಳಿಸಿಕೊಳ್ಳುವ ಹೆಜ್ಜೆಗಳು ಹಿಂದೆಂದಿಗಿಂತಲೂ ದಟ್ಟವಾಗುತ್ತಿವೆ.
ಮನಮೋಹನ ಮೌನಕ್ಕಿಂತಲೂ ಈಗಿಮ ಮಾತಿನ ಅಬ್ಬರವೇ ಮೇಲು
ಹಿಂದಿನ ಮನಮೋಹನ ಮೌನಕ್ಕಿಂತಲೂ ಈಗಿನ ಮಾತಿನ ಅಬ್ಬರವೇ ಮೇಲು ಎಂದು ನಂಬಿಸಲಾಗುತ್ತಿದೆ. ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವು ಪ್ರಬಲ ಪ್ರತಿರೋಧವನ್ನೊಡ್ಡುವ ಬದಲು ತನ್ನ ಮುಂಚೂಣಿ ಯುವ ನೇತಾರನ ತೊಳಲಾಟದ ಚಡಪಡಿಕೆಗೆ ಸಾಕ್ಷಿಯಾಗುತ್ತಿದೆ. ಇದೆಲ್ಲದರ ನಡುವೆ ಹಿಂಸೆಯು ಅಧಿಕಾರದ ಅಧಿಪತ್ಯದ ಇಂಧನವಾಗಿ ರಾಜಕೀಯ ಬೃಹದಾಕೃತಿಯನ್ನು ತಳೆದುಬಿಟ್ಟಿದೆ. ಅದೇ ಕಾರ್ಗಿಲ್ ಜಯಭೇರಿಯ ಕ್ಷಣಗಳಿಗೆ ಉತ್ಸವದ ಬಣ್ಣವನ್ನು ಲೇಪಿಸಿ ಜನರ ಮನೋಧರ್ಮವನ್ನು ಯುದ್ಧದ ಪರವಾಗಿ ತಿರುಗಿಸಿಬಿಟ್ಟಿದೆ.
ಯುದ್ಧವೆಂದರೆ ಎರಡು ದೇಶಗಳ ಸಂಘರ್ಷದ ಹಿಂಸಾತ್ಮಕ ಕ್ರಿಯೆ. ಕಳೆದುಕೊಳ್ಳುವ ನೋವುಗಳನ್ನು ಮನುಷ್ಯ ವಲಯದೊಳಗೆ ಸೇರ್ಪಡೆಗೊಳಿಸುವ ರಾಕ್ಷಸದಾಹದ ಅಖಾಡ. ಸೈನಿಕರ ಜೀವಗಳನ್ನು ಬಲಿ ಪಡೆದು ತಂದೆ, ತಾಯಿ, ಅಜ್ಜ, ಅಜ್ಜಿ, ಪತ್ನಿ, ಅಕ್ಕ, ತಂಗಿ ಸೇರಿದಂತೆ ಸಂಬಂಧಿಗಳೊಳಗೆ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಭಯಾನಕ ಸ್ವರೂಪಿ. ಜೀವ ಕಳೆದುಕೊಂಡ ಸೈನಿಕರ ತ್ಯಾಗ ನೆನಪಿಸಿಕೊಂಡು ದೇಶದ ಆಡಳಿತಾತ್ಮಕ ಪ್ರತಿನಿಧಿಗಳು ಅಧಿಕಾರಕ್ಕೆ ಮತ್ತಷ್ಟು ಹತ್ತಿರಾಗುವ ಪ್ರಯತ್ನಗಳಿಗೆ ಕುಮ್ಮಕ್ಕು ನೀಡುವ ಸಂದರ್ಭ. ಜೊತೆಗೆ ಯುದ್ಧ ನಡೆಯಲೇಬೇಕು, ಎದುರಾಳಿಗಳ ಸೊಕ್ಕು ಮುರಿಯಲೇಬೇಕು ಎಂಬ ಆವೇಶಭರಿತ ವಿಕೃತಿಗಳನ್ನು ವಿಜೃಂಭಿಸಿಕೊಳ್ಳಲು ಬೇಕಾಗುವ ಮಾಹಿತಿಯ ನಮೂನೆಗಳನ್ನು ನೆನಪಿಸಿಕೊಳ್ಳಲು ಪೂರಕವಾಗುವ ಬೀತಿಯ ಮೂಲ.
ಸದ್ಯದ ಕಾರ್ಗಿಲ್ ವಿಜಯೋತ್ಸವದೊಂದಿಗಿನ ರಹಸ್ಯ ಕಾರ್ಯಸೂಚಿ ಮತ್ತು ಅದನ್ನು ದೃಷ್ಟಿಯಲ್ಲಿರಿಸಿಕೊಂಡ ಸಂಕುಚಿತ ರಾಜಕಾರಣ ಯುದ್ಧವನ್ನು ಹೀಗೆ ಮರುವ್ಯಾಖ್ಯಾನಿಸಿಕೊಳ್ಳುವ ಒತ್ತಡವನ್ನು ಸೃಷ್ಟಿಸಿದೆ.
ಆದರೆ, ನಮ್ಮ ಯುವಶಕ್ತಿ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಭಾವುಕತೆಯ ಲೇಪನೆಯೊಂದಿಗಿನ ವಿಕೃತ ಬಿಂಬಗಳನ್ನೇ ಆರಾಧಿಸುತ್ತಾ ಸೈನಿಕರನ್ನು ನೆನಪಿಸಿಕೊಳ್ಳುವುದಷ್ಟನ್ನೇ ದೇಶಪ್ರೇಮ ಎಂದುಕೊಂಡಿವೆ. ಯುದ್ಧ ಆಗಲೇಬೇಕು, ಯುದ್ಧದಿಂದಲೇ ಪರಿಹಾರ ಎಂಬ ಅಧಿಕಾರಕೇಂದ್ರದ ಮೂಲಭೂತವಾದಿ ದೃಷ್ಟಿಕೋನವನ್ನೇ ಆರಾಧಿಸುತ್ತಾ, ಆ ಆರಾಧನೆಯ ಭಾವಗಳನ್ನೇ ವಿಸ್ತರಿಸುವ ಪ್ರಚೋದಕ ಮಾಹಿತಿ, ಮಾತುಗಳನ್ನು ಶೇರ್ ಮಾಡುತ್ತಾ ತಮ್ಮೊಳಗಿನ ಯೋಚನೆಯ ಶಕ್ತಿಯನ್ನೇ ಕ್ರಮೇಣ ಕಳಚಿಕೊಳ್ಳುತ್ತಾ ಸಾಗಿದೆ.
ಗೇಲಿ ಮಾಡುವ ಪ್ರವೃತ್ತಿ
ಯೋಚಿಸುವವರನ್ನು ‘ಬುದ್ಧಿಜೀವಿಗಳು’ ಎಂಬ ಪಟ್ಟ ಕಟ್ಟಿ ಅದೊಂದು ಅಸ್ಪೃಶ್ಯ ವರ್ಗ ಎನ್ನುವಂತೆ ಗೇಲಿಮಾಡುತ್ತಿದೆ. ಬುದ್ಧಿ ಮತ್ತು ಜೀವ ಎರಡೂ ಮನುಷ್ಯ ಬದುಕನ್ನು ಚಲನಶೀಲಗೊಳಿಸುವಂಥವು. ಬುದ್ಧಿಯು ವಿವೇಕ ತಂದುಕೊಳ್ಳುವ ಮೂಲವಾದರೆ ಜೀವ ಅಂಥ ವಿವೇಕವನ್ನು ದಾಟಿಸುವ ಚಲನೆಯನ್ನೇ ಸಂಕೇತಿಸುತ್ತದೆ. ಆ ಮೂಲಕ ಸಾಮಾಜಿಕ ಚಲನಶೀಲತೆಯ ಜೀವಂತಿಕೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ. ಅದಕ್ಕೆ ಮೌಲಿಕ ಚಿಂತನೆಗಳನ್ನು ಕೊಡುಗೆಗಳನ್ನಾಗಿ ನೀಡುವವರು ಬುದ್ಧಿಜೀವಿಗಳೆನ್ನಿಸಿಕೊಳ್ಳುತ್ತಾರೆ. ತಾವು ಬುದ್ಧಿಜೀವಿಗಳೆಂದುಕೊಂಡು ಬೀಗುವವರು, ತಮ್ಮ ಬುದ್ಧಿಯನ್ನು ಅಧಿಕಾರದಲ್ಲಿರುವವರ ಕೈಗೊಪ್ಪಿಸುವವರು, ಸಮಾಜದ ಜೀವಂತಿಕೆಗೆ ತದ್ವಿರುದ್ಧದ ನಡವಳಿಕೆಯವರು ಬುದ್ಧಿ ಅಥವಾ ವಿವೇಕದೊಂದಿಗಿನ ಜೀವಗಳಲ್ಲ. ಆದರೆ, ಸಮಾಜಕ್ಕೆ ಈ ಕ್ಷಣಕ್ಕೆ ಬೇಕಾದದ್ದನ್ನು ಪ್ರಸ್ತಾಪಿಸಿ ಅಧಿಕಾರದಲ್ಲಿರುವವರನ್ನು ಎಚ್ಚರಿಸುವ ಮಾತುಗಳನ್ನಾಡಿ ಬೆಳವಣಿಗೆಗೆ ಅರ್ಥಪೂರ್ಣ ತೀವ್ರತೆ ತಂದುಕೊಡುವ ಚಿಂತನಶೀಲರು ಬುದ್ಧಿಜೀವಿಗಳು.
ನಮ್ಮ ರಾಜಕಾರಣ ಮತ್ತು ಮಾಧ್ಯಮದ ಆಕ್ರಾಮಕ ಭಾಷಿಕ ವಿಕೃತಿಗಳು ಬುದ್ಧಿಜೀವಿಗಳ ವೈವಿಧ್ಯಮಯ ಶಕ್ತಿಯನ್ನು ಹಿನ್ನೆಲೆಗೆ ಸರಿಸಿ ಅವರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದರ ಕಡೆಗೆ ಹೆಚ್ಚು ವಾಲಿಕೊಂಡಿವೆ. ನಾಯಕರೆನ್ನಿಸಿಕೊಂಡ ಅಪ್ರಬುದ್ಧರು ‘ನಾನು ಗೃಹಸಚಿವನಾಗಿದ್ದರೆ ಇಂಥವರನ್ನು ಒಟ್ಟಿಗೆ ನಿಲ್ಲಿಸಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ’ ಎಂಬ ಯುದ್ಧದ ಪರಿಭಾಷೆಯಲ್ಲಿಯೇ ಮಾತನಾಡಿಬಿಡುತ್ತಾರೆ. ಆ ಮಾತನ್ನು ಸುದ್ದಿಮಾಧ್ಯಮಗಳು ಬಹುದೊಡ್ಡ ದಾರ್ಶನಿಕ ನುಡಿ ಎಂಬಂತೆ ಚಿತ್ರಿಸಿಬಿಡುತ್ತವೆ. ಮತ್ತೊಂದು ರಾಷ್ಟ್ರದ ವಿರುದ್ಧದ ಯುದ್ಧಸನ್ನದ್ಧತೆಯ ವಿಕೃತಿಗಳು ಮತ್ತು ದೇಶದ ಒಳಗೇ ಇರುವ ಯೋಚಿಸುವ ಶಕ್ತಿಯುಳ್ಳವರ ವಿರುದ್ಧದ ಹಿಂಸಾತ್ಮಕ ದಾಳಿಗಳು ಸಂಕುಚಿತತೆಯನ್ನು ವಿಸ್ತಾರಗೊಳಿಸಲು ಬೇಕಾದ ಜನಸಮ್ಮತಿಯನ್ನು ಉತ್ಪಾದಿಸಿಕೊಳ್ಳುತ್ತಿವೆ. ಹಾಗಾಗುವಂತೆ ಮೂಲಭೂತವಾದಿ ಚಾಣಾಕ್ಷ ನಡೆಗಳು ಸಂವಹನ ತಂತ್ರಗಳನ್ನು ಹೆಣೆದು ಯಶಸ್ಸು ಕಾಣುತ್ತಿವೆ.
ಮೂಲಭೂತವಾದಿ ಕಾರ್ಯತಂತ್ರಗಳು ಗಾಂಧಿ ಚಿಂತನೆಯನ್ನು ಪರೋಕ್ಷವಾಗಿ ಮತ್ತು ನೇರವಾಗಿ ಅಪ್ರಸ್ತುತ ಎಂದು ನಂಬಿಸುತ್ತಿವೆ. ಉಪವಾಸದ ನಡೆಗಿಂತ ಹಿಂಸೆಯೊಂದಿಗಿನ ನಡೆಗಳಿಗೆ ಬ್ರಿಟಿಷರು ಹೆದರಿದರು ಎಂದು ಈಗಾಗಲೇ ಆಗಿಹೋದ ಇತಿಹಾಸವನ್ನು ಸಂಕುಚಿತ ದೃಷ್ಟಿಕೋನಗಳ ಮಟ್ಟಕ್ಕಿಳಿಸಿ ವಿವರಿಸುತ್ತಿವೆ. ಇಂಥವುಗಳನ್ನು ಅಲ್ಲಗಳೆಯಬೇಕಿದ್ದ ಸುದ್ದಿಮಾಧ್ಯಮಗಳು ವೈಭವೀಕರಣದ ತಂತ್ರಗಾರಿಕೆಯೊಂದಿಗೆ ಪ್ರಜೆಗಳನ್ನು ವೀಕ್ಷಕ ಗ್ರಾಹಕರನ್ನಾಗಿಸಿಕೊಂಡು ಹಣಗಳಿಕೆಯ ಲೆಕ್ಕಾಚಾರದ ಗುಂಗಿನೊಂದಿಗೇ ಸಂಭ್ರಮಿಸುತ್ತಿವೆ. ಈ ನಕಾರಾತ್ಮಕತೆಗೆ ಕಡಿವಾಣ ಹೇಗೆ? ಸಾಧ್ಯವೇ ಇಲ್ಲ ಎನ್ನುವಂತಿಲ್ಲ.
ಮತ್ತೆ ಬುದ್ಧಿ ಮತ್ತು ಜೀವಗಳೆರಡೂ ಸಂಯೋಜಿತಗೊಂಡು ಚಲನಶೀಲತೆಯೆಡಗಿನ ಪಯಣ ಹಿಂದೆಂದಿಗಿಂತಲೂ ತೀವ್ರಗೊಳ್ಳಬೇಕು. ಪ್ರಶ್ನೆಗಳು ಹುಟ್ಟಿಕೊಳ್ಳಬೇಕು. ಪ್ರಶ್ನಿಸುವವರ ಸ್ಥೈರ್ಯ ಹೆಚ್ಚಿಸುವ ಪ್ರಜಾಸತ್ತಾತ್ಮಕ ವಾತಾವರಣ ರೂಪುಗೊಳ್ಳಬೇಕು. ಬುದ್ಧಿ ಜೀವಗಳನ್ನು ಕೊಲ್ಲುವ ಪರಿಭಾಷೆಯನ್ನು ಎದುರುಗೊಳ್ಳುವ ಸೌಹಾರ್ದಯುತ ಸಂವಾದದ ಆರೋಗ್ಯಕರ ಆಂದೋಲನ ದೇಶವ್ಯಾಪಿಯಾಗಬೇಕು. ಯುದ್ಧೋನ್ಮೋದ ಮತ್ತು ಸಂಘರ್ಷದ ಭಾಷಿಕ ವಿಕೃತಿಗಳಿಗಿಂತ ಮಾನವೀಯತೆಯೇ ದೇಶದ ಶ್ರೇಷ್ಠ ಗುಣಲಕ್ಷಣವಾಗಬೇಕು ಎಂಬ ಕಾಳಜಿಗಳು ಮುನ್ನೆಲೆಗೆ ಬರಬೇಕು. ದೇಶದ ಕುರಿತಾದ ಹೆಮ್ಮೆಯ ಭಾವಗಳು ಮನುಷ್ಯತ್ವದ ಮೌಲಿಕತೆಯೊಂದಿಗೇ ಸಂಯೋಜಿತಗೊಳ್ಳಬೇಕು. ದೇಶದ ಬಗೆಗಿನ ಪ್ರೇಮವು ಅಂಧಾಭಿಮಾನದ ಮಿತಿಗಳನ್ನು ದಾಟಿಕೊಂಡು ಗಂಭೀರ ಚಿಂತನೆಗಳ ಬಲದಲ್ಲಿ ಗಟ್ಟಿಗೊಳ್ಳಬೇಕು.
(ಲೇಖಕರು: ಡಾ.ಎನ್.ಕೆ.ಪದ್ಮನಾಭ,
ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ)
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ
![](https://suddidina.com/wp-content/uploads/2024/07/kargil_vijay_divas_suddidina.jpg)
ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ಗೌರವ ಸಮರ್ಪಣೆ ಮಾಡಲಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕುನ್ ಲಾ ಸುರಂಗ ಮಾರ್ಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಯೋಜನೆಯಡಿ ನಿಮು-ಪದುಮ್-ಡಾರ್ಚಾ ರಸ್ತೆಯಿಂದ ಲೇಹ್ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಸುಮಾರು 15 ಸಾವಿರದ 800 ಅಡಿ ಎತ್ತರದಲ್ಲಿ 4.1 ಕಿಲೋಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ವಿಶ್ವದಲ್ಲೇ ಇದು ಅತಿ ಎತ್ತರದ ಸುರಂಗ ಮಾರ್ಗವಾಗಲಿದೆ. ಸಶಸ್ತ್ರ ಪಡೆಗಳ ಸುಗಮ ಪ್ರಯಾಣಕ್ಕಷ್ಟೇ ಅಲ್ಲದೇ ಲಡಾಕ್ನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಈ ಸುರಂಗ ಮಾರ್ಗವು ಸಹಕಾರಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ
![](https://suddidina.com/wp-content/uploads/2024/07/union_budget_2024_suddidina.jpg)
ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.
ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.
ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!