ದಿನದ ಸುದ್ದಿ
ಮೈಸೂರು ದಸರಾ ಗಜಪಯಣ ಹಿನ್ನೆಲೆ; ಆನೆಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾ..?
ಸುದ್ದಿದಿನ,ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಗಜಪಯಣ ವಿಶಿಷ್ಟ ಕಾರ್ಯಕ್ರಮವಾಗಿದ್ದು, ಇದು ಮಹಾರಾಜರ ಕಾಲದಿಂದಲೂ ಸಹ ಗಜಪಯಣ ಕಾರ್ಯಕ್ರಮವು ಜರುಗುತ್ತಿದ್ದು, ಇಂದಿನ ಕಾರ್ಯಕ್ರಮಗಳಿಗಿಂತ ವಿಭನ್ನವಾಗಿತ್ತು. ಮೈಸೂರು ಮಹಾರಾಜರು ದಸರಾ ಮಹೋತ್ಸವದ ಸಂದರ್ಭದಲ್ಲಿ ಅಂಬಾರಿಯನ್ನು ಹೊರುವುದಕ್ಕಾಗಿ ಹಾಗೂ ವಿವಿಧ ಕಾರ್ಯಕ್ರಮಗಳಿಗಾಗಿ ಕಾಡಿನಲ್ಲಿ ಪಳಗಿಸಿರುವ ಆನೆಗಳನ್ನು ಆಯ್ಕೆ ಮಾಡಿ ನಿಗದಿತ ಶುಭದಿನದಂದು ಶ್ಲೋಕಗಳನ್ನು ಪಠಿಸುವ ಮೂಲಕ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತವನ್ನು ಮಾಡಿ ನಂತರ ಸದರಿ ಸ್ಥಳದಿಂದ ಕಾಲ್ನಡಿಗೆ ಮೂಲಕ ಮೈಸೂರು ಅರಮನೆ ಆವರಣಕ್ಕೆ ಕರೆತರುತ್ತಿದ್ದರು. ಆನೆಗಳಿಗೆ ಭಕ್ತಿ ಮತ್ತು ಶ್ರದ್ದೆಯಿಂದ ವಿಶೇಷ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ದಿನಗಳನ್ನು ಆಚರಣೆ ಮಾಡಲಾಗುತ್ತಿತ್ತು.
ಇಂದು ಮಾನವ ಜಗತ್ತನ್ನು ಆಧುನೀಕರಣಗೊಳಿಸುವ ತವಕದಲ್ಲಿ ಕಾಡುಗಳನ್ನು ನಾಶಮಾಡಿ ಕಾಂಕ್ರೀಟಿಕರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇದರಿಂದ ಜಾಗತಿಕ ವಲಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ರೀತಿ ವಾತವರಣ ಬದಲಾವಣೆ, ರಸ್ತೆಯ ಮೇಲೆ ವಾಹನಗಳ ದಟ್ಟಣೆ, ಶಬ್ದ ಮಾಲಿನ್ಯದಿಂದ ಆನೆಗಳನ್ನು ಕಾಡಿನಿಂದ ಮೈಸೂರಿಗೆ ಕಾಲ್ನಡಿಗೆ ಮೂಲಕ ಕರೆತರಲು ಕಷ್ಟವಾಗಿರುವುದನ್ನು ಅರಿತ ಅರಣ್ಯ ಇಲಾಖೆ, ಆನೆಗಳ ಸುರಕ್ಷತೆಗಾಗಿ ಲಾರಿಗಳ ಮೂಲಕ ಸಾಗಾಣಿಕೆ ಮಾಡಲು 2004ರಲ್ಲಿ ತೀರ್ಮಾನಿಸಲಾಯಿತು. 2004ನೇ ಸಾಲಿನಿಂದ ಗಜಪಯಣ ಕಾರ್ಯಕ್ರಮದಲ್ಲಿ ಮೊದಲನೇ ತಂಡದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಬಳಿ ಸಾಂಪ್ರದಾಯಿಕ ಪೂಜೆಗಳೊಂದಿಗೆ ಚಾಲನೆ ನೀಡಲಾಗುತ್ತಿರುತ್ತದೆ.
ಸಾಂಪ್ರದಾಯಿಕ ಪೂಜೆಗಳು ನೆರವೇರಿದ ನಂತರ ಆನೆಗಳನ್ನು ಲಾರಿಯ ಮೂಲಕ ಸುರಕ್ಷಿತವಾಗಿ ಮೈಸೂರಿಗೆ ಸಾಗಾಣಿಕೆ ಮಾಡಲಾಗುವುದು.
ನಂತರದ ದಿನಗಳಲ್ಲಿ ಗಜಪಯಣ ಕಾರ್ಯಕ್ರಮದಲ್ಲಿ ಮೊದಲನೇ ತಂಡದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನದ ವೀರನಹೊಸಳ್ಳಿ ಬಳಿ ನಡೆಯುತ್ತಿದ್ದ ಸಾಂಪ್ರದಾಯಿಕ ಪೂಜೆ ಕಾರ್ಯಕ್ರಮವನ್ನು ಹುಣಸೂರು ತಾಲ್ಲೂಕು, ನಾಗಪುರ ಗಿರಿಜನ ಹಾಡಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಜನಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ಅಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸಮ್ಮುಖದಲ್ಲಿ ಸಾಂಪ್ರದಾಯಿಕ ಪೂಜೆಯನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರಲ್ಲಿ ಅರಣ್ಯ ಮತ್ತು ವನ್ಯಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ವತಿಯಿಂದ ನೆರವೇರಿಸಿಕೊಂಡು ಬರಲಾಗುತ್ತಿರುತ್ತದೆ.
ಸದರಿ ಸಂದರ್ಭದಲ್ಲಿ ಸಾಂಪ್ರದಾಯಿಕ ರಾಗಗಳನ್ನು ನುಡಿಸುವ ಸಂಗೀತಗಾರರು ಹಾಗೂ ಪೂರ್ಣಕುಂಬದೊಂದಿಗೆ ಶ್ಲೋಕಗಳನ್ನು ಪಠಿಸುವುದು ಹಾಗೂ ಆನೆಗಳ ಸುರಕ್ಷತೆ ಮತ್ತು ಸಮಾಜ ಸಾಮೂಹಿಕ ಕಲ್ಯಾಣಕ್ಕಾಗಿ ಗಣೇಶ ಅಷ್ಟೋತ್ತರ ಸೇರಿದಂತೆ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುತ್ತದೆ. ಅಲ್ಲದೆ ಆನೆಗಳಿಗೆ ತೆಂಗಿನಕಾಯಿ, ಬೆಲ್ಲ ಮತ್ತು ಕಬ್ಬನ್ನು ನೀಡಿ ಸ್ವಾಗತವನ್ನು ಕೋರಲಾಗುತ್ತದೆ. ಗಜಪಯಣ ಕಾರ್ಯಕ್ರಮದ ದಿನ ಆನೆಗಳನ್ನು ವಿವಿಧ ಬಣ್ಣಗಳಿಂದ ಅಲಂಕಾರ ಗೊಳಿಸಿ, ವಿಶೇಷ ವಿನ್ಯಾಸವುಳ್ಳ ಹಣೆಪಟ್ಟಿಯನ್ನು ಹಾಕಲಾಗುವುದು. ಅಲ್ಲದೆ ಆನೆಗಳ ಮಾವುತರು ಮತ್ತು ಕವಾಡಿಗಳು ಸಹಾ ಸಮವಸ್ತ್ರಗಳನ್ನು ಧರಿಸುತ್ತಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳು ಹಾಗೂ ಗಣ್ಯವ್ಯಕ್ತಿಗಳು ಅಲಂಕೃತ ಆನೆಗಳಿಗೆ ಪೂಜೆ ಸಲ್ಲಿಸಿ ಬೆಲ್ಲ ಮತ್ತು ಕಬ್ಬನ್ನು ನೀಡುತ್ತಾರೆ. ಮಾವುತರು ಮತ್ತು ಕವಾಡಿಗಳವರಿಗೆ ತಾಂಬೂಲಗಳನ್ನು ನೀಡಿ ಸ್ವಾಗತವನ್ನು ಕೋರಲಾಗುವುದು. ನಂತರ ಅವರಿಗೆ ವಿಶೇಷ ಭೋಜನವನ್ನು ಏರ್ಪಡಿಸಲಾಗುತ್ತದೆ. ಆನೆಗಳನ್ನು ರ್ಯಾಂಪ್ಸ್ಗಳ ಮೂಲಕ ಲಾರಿಗಳಿಗೆ ಹತ್ತಿಸಿ, ಅರಣ್ಯ ಇಲಾಖೆಯ ಮತ್ತು ಪೋಲೀಸ್ ಸಿಬ್ಬಂದಿ ಬಂದೂಬಸ್ತಿನೊಂದಿಗೆ ಮೈಸೂರಿಗೆ ಸಾಗಾಣಿಕೆ ಮಾಡಲಾಗುತ್ತದೆ.
ಆನೆಗಳ ಆಯ್ಕೆಯ ಪ್ರಕ್ರಿಯೆ, ಆರೋಗ್ಯ ತಪಾಸಣೆ
ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಆನೆಗಳನ್ನು ಈ ಎಲ್ಲಾ ಕಾರ್ಯಕ್ರಮಗಳಿಗಿಂತ ಮುಂಚೆ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪಶುವೈದ್ಯಾಧಿಕಾರಿಗಳೊಂದಿಗೆ ವಿವಿಧ ಆನೆ ಶಿಬಿರಗಳಿಗೆ ತೆರಳಿ ಆನೆಗಳ ಆರೋಗ್ಯವನ್ನು ಪರಿಶೀಲಿಸುತ್ತಾರೆ. ಈ ಬಾರಿ ದಸರಾ ಮಹೋತ್ಸವಕ್ಕಾಗಿ ಆನೆಗಳನ್ನು ಆಯ್ಕೆ ಮಾಡಲು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಎಂ ಚಳಕಾಪುರೆ ಮತ್ತು ಪಶುವೈದ್ಯಾಧಿಕಾರಿ ಡಾ. ಡಿ.ಎನ್. ನಾಗರಾಜು ಅವರು ನಾಗರಹೊಳೆ, ಬಂಡೀಪುರ ಮತ್ತು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ ಬರುವ ವಿವಿಧ ಆನೆಗಳ ಶಿಬಿರಗಳಲ್ಲಿ ಇರುವ ಸಾಕಾನೆಗಳ ಆರೋಗ್ಯ ತಪಾಸಣೆ ಮಾಡಿ ಒಟ್ಟು 16 ಆನೆಗಳನ್ನು ಆಯ್ಕೆ ಮಾಡಿರುತ್ತಾರೆ. ನಂತರ ದಿನಾಂಕ:19-7-2018 ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ಜರುಗಿಸಿ,
16 ಆನೆಗಳ ವಿವರಗಳನ್ನು ಪಡೆದು ಅದರಲ್ಲಿ 12 ಆನೆಗಳನ್ನು ಆಯ್ಕೆ ಮಾಡಿ ದಸರಾ ಮಹೋತ್ಸವಕ್ಕೆ ಕರೆತರಲು ತೀರ್ಮಾನಿಸಲಾಯಿತು.
ಗಜಪಯಣ-2018 (ವೀರನಹೊಸಹಳ್ಳಿ ಬಳಿ)
ಪ್ರತಿ ವರ್ಷದಂತೆ ಪ್ರಸಕ್ತ ವರ್ಷದಲ್ಲಿಯೂ 2018ರ ಮೈಸೂರು ದಸರಾ ಮಹೋತ್ಸವದ
ಅಂಗವಾಗಿ ಗಜಪಯಣ ಕಾರ್ಯಕ್ರಮವನ್ನು ಸೆಪ್ಟಂಬರ್ ಮಾಹೆಯ 2ನೇ ತಾರೀಖಿನಂದು
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದ ಹೆಬ್ಬಾಗಲಿನಲ್ಲಿ ಪೂಜಾ ಕಾರ್ಯಕ್ರಮವನ್ನು ಹಾಗೂ ಗ್ರಾಮದ ಬಳಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮವನ್ನು ಹುಣಸೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಅಡಗೂರು ಹೆಚ್ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಿ.ಟಿ.ದೇವೇಗೌಡ ರವರು ವಿದ್ಯುಕ್ತ ಚಾಲನೆಯನ್ನು ನೀಡಿರುತ್ತಾರೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾನ್ಯ ಪ್ರವಾಸೋದ್ಯಮ, ರೇಷ್ಮೆ ಖಾತೆ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಾ.ರಾ.ಮಹೇಶ್ ಮತ್ತು ಮಾನ್ಯ ಕನ್ನಡ ಮತ್ತು ಸಂಸ್ಕøತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ
ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶ್ರೀಮತಿ ಜಯಮಾಲ
ರವರು ಭಾಗವಹಿಸಿರುತ್ತಾರೆ. ಅಲ್ಲದೇ ಮೈಸೂರು ಪ್ರಾಂತ್ಯದ ಮಾನ್ಯ ಲೋಕಸಭಾ ಸದಸ್ಯರು, ಮಾನ್ಯ ಶಾಸಕರು, ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ
ಉಪಾಧ್ಯಕ್ಷರುಗಳು ಭಾಗವಹಿಸಿರುತ್ತಾರೆ.
ಗಜಪಯಣದ ಕಾರ್ಯಕ್ರಮದ ನಂತರ ಮೊದಲನೆ ತಂಡದಲ್ಲಿ ಅರ್ಜುನ, ವರಲಕ್ಷ್ಮಿ,
ಚೈತ್ರ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳನ್ನು ಮೈಸೂರಿನ ಅರಣ್ಯ ಭವನಕ್ಕೆ
ಕರೆತರಲಾಯಿತು. ಸದರಿ ಆನೆಗಳನ್ನು ದಿನಾಂಕ:5-9-2018 ರಂದು ಮೈಸೂರು ಅರಮನೆ
ಆವರಣಕ್ಕೆ ಬರಮಾಡಿಕೊಳ್ಳಲು ಶುಭ ದಿನ ನಿಗಧಿಯಾದ್ದರಿಂದ, ಮೂರು ದಿನಗಳವರೆಗೆ
ಮೈಸೂರು ಅರಣ್ಯ ಭವನದಲ್ಲಿ ವಾಸ್ತವ್ಯ ಮಾಡಿದ್ದವು. ದಿನಾಂಕ: 5-9-2018 ರಂದು ಅರಣ್ಯ ಭವನದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿಗಳು (ಹುಲಿ ಮತ್ತು ಆನೆ ಯೋಜನೆ) ಮೈಸೂರು ರವರಾದ ಶ್ರೀ ಜಗತ್ ರಾಮ್ ಭಾ.ಅ.ಸೇ. ಮುಖ್ಯ ಅರಣ್ಯ
ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ, ಮೈಸೂರು ರವರಾದ ಶ್ರೀ ವೆಂಕಟೇಸನ್ ಎಸ್
ಬಾs .ಅ.ಸೇ. ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾಂಪ್ರಾದಾಯಿಕ ಪೂಜೆಯನ್ನು ಸಲ್ಲಿಸಿದ ನಂತರ ಬಲ್ಲಾಳ್ ವೃತ್ತ–ರಾಮಸ್ವಾಮಿ ವೃತ್ತ ಮತ್ತು 100 ಅಡಿ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಅರಮನೆಯ ಜಯಮಾರ್ತಾಂಡ ಗೇಟ್ನ ಬಳಿ ಕರೆತರಲಾಗುತ್ತದೆ. ಅಲ್ಲಿ
ಗಣ್ಯರು ಹಾಗೂ ಅಧಿಕಾರಿಗಳು ಪೂಜೆಯನ್ನು ನೆರವೇರಿಸುವ ಮೂಲಕ ಅರಮನೆಯ ಆವರಣಕ್ಕೆ ಬರಮಾಡಿಕೊಳ್ಳಲಾಯಿತು.
ಸೌಲಭ್ಯಗಳು : ಮಾವುತರು ಹಾಗೂ ಅವರ ಕುಟುಂಬ ವರ್ಗದವರಿಗೆ
ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಆನೆಗಳ ಮಾವುತರು ಮತ್ತು
ಕವಾಡಿಗಳವರೊಂದಿಗೆ ಅವುರುಗಳ ಕುಟುಂಬ ವರ್ಗದವರು ಸಹಾ ಜೊತೆಯಲ್ಲಿ ಬರುವುದರಿಂದ ಅವರ ವಾಸ್ತವ್ಯಕ್ಕಾಗಿ ಮೈಸೂರು ಅರಮನೆ ಆವರಣದಲ್ಲಿ ಅರಣ್ಯ ಇಲಾಖೆಯ ವತಿಯಿಂದ
ನೀರು ನಿರೋಧಕ ಶೆಡ್ಡಗಳನ್ನು ನಿರ್ಮಾಣ ಮಾಡಿಕೊಡಲಾಗುತ್ತದೆ. ಅಲ್ಲದೇ ಅವರ ದಿನನಿತ್ಯದ ನಿರ್ವಹಣೆಗೆ ಅಗತ್ಯವಾದ ವಸ್ತುಗಳನ್ನು ಸಹಾ ಪೂರೈಸಲಾಗುತ್ತದೆ. ಇವರೊಂದಿಗೆ ಆನೆಗಳಿಗೂ
ಸಹಾ ಶೆಡ್ಡುಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅಲ್ಲದೆ ಮಾವುತ ಮತ್ತು ಕವಾಡಿಗಳ ಮಕ್ಕಳ ವಿದ್ಯಾಬ್ಯಾಸಕ್ಕೆ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ತಾತ್ಕಾಲಿಕವಾಗಿ ಗ್ರಂಥಾಲಯನ್ನು ಹಾಗೂ ಪಾಠಶಾಲೆಯನ್ನು ಮತ್ತು ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಸದರಿ ಸ್ಥಳದಲ್ಲಿ ಒಂದು ಆರ್ಯವೇದದ ಆಸ್ಪತ್ರೆಯನ್ನು ಸಹಾ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತೆರೆಯಲಾಗಿರುತ್ತದೆ. ಇವುಗಳಲ್ಲದೆ ರಕ್ಷಣೆಯ ದೃಷ್ಟಿಯಿಂದ ಆನೆಗಳ ಶಿಬಿರ
ಹಾಗೂ ಶೆಡ್ಡ ಆವರಣಗಳಲ್ಲಿ ಸಿಸಿಟಿವಿಯನ್ನು ಸಹಾ ಅಳವಡಿಸಲಾಗಿರುತ್ತದೆ.
ಎರಡನೇ ತಂಡದ ಆನೆಗಳ ಆಗಮನ
ದಿನಾಂಕ:14-9-2018 ರಂದು ಎರಡನೇ ತಂಡದಲ್ಲಿ ಅಭಿಮನ್ಯು, ಬಲರಾಮ, ಕಾವೇರಿ,
ವಿಜಯ, ಪ್ರಶಾಂತ ಮತ್ತು ದ್ರೋಣ ಆನೆಗಳನ್ನು ಮೈಸೂರು ಅರಮನೆಯ ಜಯಮಾರ್ತಾಂಡ
ಗೇಟ್ನ ಬಳಿ ಗಣ್ಯರು ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೂಜಾ
ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಬರಮಾಡಿಕೊಳ್ಳಲಾಯಿತು.
ವಿಶೇಷ ತರಬೇತಿ ಮತ್ತು ತಾಲೀಮು
ದಿನಾಂಕ: 6-9-2018 ರಿಂದ ಮೊದಲನೆ ತಂಡದ ಆನೆಗಳಿಗೆ ಯಾವುದೇ ಭಾರವಿಲ್ಲದೆ
ವಾಹನಗಳ ಶಬ್ದಕ್ಕೆ ಹಾಗೂ ಜನಸಂದಣಿಗೆ ಮತ್ತು ರಾತ್ರಿ ದೀಪದ ಬೆಳೆಕಿಗೆ ಹೊಂದಿಕೊಳ್ಳುವ
ಸಲುವಾಗಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಮೈಸೂರು ಅರಮನೆಯಿಂದ
ಬನ್ನಿಮಂಟಪದವರೆಗೆ ತಾಲೀಮು ನೀಡಲಾಗುತ್ತಿದ್ದು, ನಂತರ ದಿನಾಂಕ 14-9-2018 ರಿಂದ
ಹಂತಹಂತವಾಗಿ 350 ಕೆ.ಜಿ ಯಿಂದ 750 ಕೆಜಿಯರವರೆಗೆ ಭಾರವನ್ನು ಗಂಡು ಆನೆಗಳ ಬೆನ್ನಿಗೆ ಕಟ್ಟುವ ತೊಟ್ಟಿಲಿಗೆ ಮರಳು ಮೂಟೆಗಳನ್ನು ತುಂಬಿ ಪ್ರತಿ ದಿನ ತಾಲೀಮು ನೀಡಲಾಗುತ್ತಿದೆ. ಅಲ್ಲದೇ ವಿಜಯದಶಮಿಯಂದು ಹಾರಿಸುವ ಕುಶಲತೋಪುಗಳ ಶಬ್ದಕ್ಕೆ ಅಂಜದೆ ಇರುವುದಕ್ಕಾಗಿ ದಿನಾಂಕ: 27-9-2018 ರಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಪೋಲಿಸ್ ಹಿರಿಯ ಅಧಿಕಾರಿಗಳು ಉಪಸ್ಥಿತಿಯಲ್ಲಿ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮುಂದೆ ಅಂದರೆ ಸ್ವಲ್ಪ ದೂರದಲ್ಲಿ ಕುಶಲ ತೋಪುಗಳನ್ನು ಇಟ್ಟು ಸಿಡಿಮದ್ದನ್ನು ಸಿಡಿಸುತ್ತಾರೆ. ಈ ರೀತಿ 3-4 ಬಾರಿ ಆನೆಗಳಿಗೆ ಸಿಡಿಮದ್ದಿನ ತಾಲೀಮನ್ನು ಮಾಡಿಸಲಾಗುವುದು.
ವಿಶೇಷ ಆಹಾರಪದಾರ್ಥಗಳು ಮತ್ತುಮೇವು ಪೂರೈಕೆ
ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಇಲಾಖಾ ಆನೆಗಳು ಸುಮಾರು 50
ರಿಂದ 55 ದಿನಗಳವರಿಗೆ ಮೈಸೂರಿನಲ್ಲಿ ವಾಸ್ತವ್ಯ ಮಾಡಲಾಗುತ್ತದೆ. ಈ ಅವಧಿಯಲ್ಲಿ ಆನೆಗಳ ಬಗ್ಗೆ ವಹಿಸುವ ಎಚ್ಚರ ತುಂಬ ನಾಜೂಕಿನ ಹಾಗೂ ಜವಾಬ್ದಾರಿಯುತ ಕೆಲಸವಾಗಿದ್ದು, ಆನೆಗಳಿಗೆ ಪೌಷ್ಟಿಕ ಆಹಾರಗಳನ್ನು ನೀಡಿ ಹೆಚ್ಚಿನ ಮುತುವರ್ಜಿಯಿಂದ ನೋಡಿಕೊಳ್ಳಲಾಗುತ್ತಿದೆ.ಆನೆಗಳಿಗೆ ಪ್ರತಿ ದಿನ ಮರದ ಸೊಪ್ಪು, ಹಸಿಹುಲ್ಲು, ಕಬ್ಬುಗಳನ್ನು ನೀಡಲಾಗುತ್ತಿದ್ದು ಅದರ ಜೊತೆಗೆ ಪ್ರತಿ ದಿನ ಎರಡು ಬಾರಿ ಭತ್ತ, ಹಿಂಡಿ, ಕಾಯಿ, ಬೆಲ್ಲ ಯುಕ್ತ ಪ್ರಮಾಣದಲ್ಲಿ ಉಪ್ಪನ್ನು ಸೇರಿಸಿ ಭತ್ತದ ಹುಲ್ಲಿನಲ್ಲಿ ಕುಸುರೆ ಕಟ್ಟಿ ತಿನ್ನಿಸಲಾಗುತ್ತದೆ. ಅಲ್ಲದೆ ದಿನಕ್ಕೆರಡು ಬಾರಿ ಬೆಳಗ್ಗೆ 6.30 ಗಂಟೆಗೆ ಮತ್ತು ಸಂಜೆ 7.30 ಗಂಟೆಗೆ ಬೇಯಿಸಿದ ಹೆಸರುಕಾಳು, ಉದ್ದಿನಕಾಳು, ಕುಸುಬಲಕ್ಕಿ, ಗೋದಿ, ಈರುಳ್ಳಿ ಜೊತೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬೇಯಿಸಿ ಆದು ತಣ್ಣಗಾದ ಮೇಲೆ ಹಸಿ ತರಕಾರಿಗಳನ್ನು ಮತ್ತು ಬೆಣ್ಣೆಯನ್ನು ಸೇರಿಸಿ ಪ್ರತಿಯೊಂದು ಆನೆಗೂ ಯುಕ್ತ ಪ್ರಮಾಣದಲ್ಲಿ ತಿನ್ನಿಸಲಾಗುತ್ತದೆ.
ಅಲ್ಲದೇ ಪಶುವೈದ್ಯಾಧಿಕಾರಿಗಳು ಪ್ರತಿ ದಿನ ಆನೆ ಶಿಬಿರಗಳಿಗೆ ಬೇಟಿ ಅವುಗಳ ಆರೋಗ್ಯ ತಪಾಸಣೆ, ಆಹಾರ ಪರಿಶೀಲನೆ, ಆನೆಗಳಿಗೆ ತರಬೇತಿ ಮತ್ತು ಅವಶ್ಯವಿದ್ದಲ್ಲಿ ಚಿಕಿತ್ಸೆಯನ್ನು ನೀಡಿ ಔಷಧಿಗಳನ್ನು ನೀಡುತ್ತಾರೆ.
ಪೂಜಾ ಕಾರ್ಯಕ್ರಮಗಳು
ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಇಲಾಖಾ ಆನೆಗಳಿಗೆ ವಿಶೇಷ ದಿನಗಳಂದು
ಅಂದರೆ ಗಣೇಶ ಚತುರ್ಥಿ ಮತ್ತು ಇತರೆ ಹಬ್ಬದ ದಿನಗಳಂದು ಅರಣ್ಯ ಇಲಾಖೆಯ ಹಿರಿಯ
ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಉಪಸ್ಥಿತಿಯಲ್ಲಿ ಪೂಜಾ ಕಾರ್ಯಕ್ರಮಗಳನ್ನು
ನೆರವೇರಿಸಲಾಗುತ್ತದೆ.
ವನ್ಯಜೀವಿ ಸಪ್ತಾಹ-2018
ವನ್ಯಜೀವಿ ಸಪ್ತಾಹವನ್ನು ಪ್ರತಿ ವರ್ಷವು ಅಕ್ಟೋಬರ್ ಮಾಹೆಯ 2ನೇ ತಾರೀಖಿನಿಂದ
8ನೇ ತಾರೀಖಿನವರಗೆ ಆಚರಣೆ ಮಾಡಲಾಗುತ್ತದೆ. ವನ್ಯಜೀವಿ ಸಪ್ತಾಹವು ಸಾರ್ವಜನಿಕರಲ್ಲಿ ವನ್ಯಜೀವಿ ಸಂಪತನ್ನು ಉಳಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿರುತ್ತದೆ. 2018ನೇ ಸಾಲಿನಲ್ಲಿ ಅಕ್ಟೋಬರ್ 2 ರಿಂದ 8ನೇ ತಾರೀಖಿನವರಗೆ ವನ್ಯಜೀವಿ ಸಪ್ತಾಹವನ್ನು ಆಚರಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ದಸರಾ ಮಹೋತ್ಸವದಲ್ಲಿ
ಭಾಗವಹಿಸಲಿರುವ ಇಲಾಖಾ ಆನೆಗಳಿಗೆ ಬಟ್ಟೆಯಿಂದ ತಯಾರಿಸಿದ ಗೌನಗಳ ಮೇಲೆ ವನ್ಯಜೀವಿಗಳ ವಿವಿಧ ಸ್ಲೋಗನ್ಗಳನ್ನು ಬರೆದು ಅವುಗಳನ್ನು ಆನೆಗಳು ಬೆಳಗ್ಗೆ ಮತ್ತು ಸಂಜೆ ತಾಲೀಮು ಮಾಡುವ ವೇಳೆ ಅಂದರೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಡೆಯುವ ತಾಲೀಮಿನ ವೇಳೆ ಆನೆಗಳ ಮೇಲೆ ಅವುಗಳನ್ನು ಹೊದಿಸಿ ತಾಲೀಮು ನಡೆಸಲಾಯಿತು. ಈ
ರೀತಿಯಾಗಿ ಸಾರ್ವಜನಿಕರಿಗೆ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಲಾಯಿತು.
ಕಿಟ್ ವಿತರಣೆ ಹಾಗೂ ಇತರೆ ಕಾರ್ಯಕ್ರಮಗಳು
ದಿನಾಂಕ: 5-10-2018 ರಂದು ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಅರಣ್ಯ ಸಚಿವರಾದ
ಶ್ರೀ ಶಂಕರ್ ಆರ್ ರವರ ಅಧ್ಯಕ್ಷತೆಯಲ್ಲಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ
ಉಪಸ್ಥಿತಿಯಲ್ಲಿ ಕಿಟ್ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸದರಿ ದಿನದಂದು ಮಾನ್ಯ ಅರಣ್ಯ ಸಚಿವರು ಆನೆಗಳಿಗೆ ಪೂಜೆಯನ್ನು ನೆರವೇರಿಸಿ, ಮಾವುತರು ಮತ್ತು ಕವಾಡಿಗಳಿಗೆ ದಿನನಿತ್ಯದ ನಿರ್ವಹಣೆಗೆ ಅವಶ್ಯವಿದ್ದ ಕೊಡೆ, ವಾಟರ್ ಬಾಟಲ್, ಜಿರ್ಕಿನ್, ಟೋಪಿ, ಟಿ-ಶರ್ಟ, ಶೂ ಮತ್ತು ಬ್ಯಾಗುಗಳನ್ನೊಳಗೊಂಡ ಕಿಟ್ನ್ನು ವಿತರಣೆ ಮಾಡಿದರು. ಗಣ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳು ಆನೆಗಳ ಮಾವುತರು ಮತ್ತು ಕವಾಡಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ವಿವಿಧ ದಿನಗಳಂದು ಉಚಿತವಾಗಿ ಆರೋಗ್ಯ ತಪಾಸಣೆ, ವಸ್ತ್ರಗಳನ್ನು ನೀಡುವುದು ಮತ್ತು ಭೋಜನಕೂಟವನ್ನು ಏರ್ಪಡಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
ಸುದ್ದಿದಿನ,ದಾವಣಗೆರೆ:ಭಾರತೀಯ ಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಹೊಸ ಸೌಲಭ್ಯವನ್ನು ಆಯೋಜಿಸಲಾಗಿದೆ. ಈ ಸೌಲಭ್ಯದಿಂದ ನಾಗರಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ಸ್ಪೀಡ್ ಪೊಸ್ಟ್ , ಪಾರ್ಸಲ್ ಸೇರಿದಂತೆ ವಿವಿಧ ಅಂಚೆ ಸೇವೆಗಳನ್ನು ಮನೆಯಿಂದಲೇ ಬುಕ್ ಮಾಡುವ ಅವಕಾಶವನ್ನು ಪಡೆಯಬಹುದು. ಇದರ ಮೂಲಕ ಅಂಚೆ ಕಚೇರಿಯಲ್ಲಿ ಸಾಲಿನಲ್ಲಿ ನಿಲುವ ಅನಿವಾರ್ಯತೆ ಕಡಿಮೆಯಾಗುತ್ತದೆ ಹಾಗೂ ಸಮಯದ ಉಳಿತಾಯವಾಗುತ್ತದೆ.
ಸೇವೆಯನ್ನು ಈ ಮೂಲಕ https://app.indiapost.gov.in/customer.selfservice/home ಪೂರ್ಣಗೊಳಿಸಿದ ನಂತರ ಸೃಷ್ಟಿಯಾಗುವ ಲೇಬಲ್, ಕ್ಯೂಆರ್ ಅನ್ನು ಮುದ್ರಿಸಿ ಹತ್ತಿರದ ಯಾವುದೇ ಅಂಚೆ ಕಚೇರಿಯಲ್ಲಿ ಸ್ಪೀಡ್ ಫೆÇೀಸ್ಟ್, ಪಾರ್ಸೆಲ್ ಅನ್ನು ಬುಕ್ಕಿಂಗ್ ಸಂಖ್ಯೆಯ ಮೂಲಕ ಹಸ್ತಾಂತರಿಸಬಹುದು. ಸಾರ್ವಜನಿಕರು ಈ ನವೀನ ಡಿಜಿಟಲ್ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಚಂದ್ರಶೇಖರ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ದಾವಣಗೆರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ಮಾಧ್ಯಮ ಕ್ಷೇತ್ರದಲ್ಲಿ ಮತ್ತು ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅವಧಿಯ ಅಪ್ರೆಂಟಿಸ್ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಡಿಸೆಂಬರ್ 26 ಕೊನೆಯ ದಿನವಾಗಿದೆ.
ವಿಶೇಷ ಘಟಕ ಯೋಜನೆಯಡಿ 12 ತಿಂಗಳ ಅಪ್ರೆಂಟಿಸ್ ತರಬೇತಿಗಾಗಿ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತ್ತಕೋತ್ತರ ಪದವಿ ಪೂರ್ಣಗೊಳಿಸಿರುವ ಹಾಗೂ ಕಂಪ್ಯೂಟರ್ ಜ್ಞಾನವಿರುವ, ಕನ್ನಡ ಭಾಷೆ ಬಳಸಲು ಪ್ರಬುದ್ಧತೆ ಇರುವ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು. ಅರ್ಜಿ ಲಕೋಟೆಯ ಮೇಲೆ ಕಡ್ಡಾಯವಾಗಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ನೀಡುವ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಎಂದು ನಮೂದಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳು ಸಂದರ್ಶನದ ವೇಳೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು. ಆಯ್ಕೆಯಾಗಿ ತರಬೇತಿಗೆ ಹಾಜರಾಗುವ ಸಂದರ್ಭದಲ್ಲಿ ಮೂಲ ದಾಖಲಾತಿಗಳನ್ನು ಕಚೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅಭ್ಯರ್ಥಿಗಳು ಪದವಿಯ ಎಲ್ಲ ವರ್ಷಗಳ ಅಂಕಪಟ್ಟಿಗಳು, ಸ್ನಾತ್ತಕೋತ್ತರ ಪದವಿಯ ಎಲ್ಲ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅಂಕಪಟ್ಟಿಯನ್ನು ನಿರೀಕ್ಷಿಸಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ತರಬೇತಿಯ ಅವಧಿ ವೇಳೆ ಮಾಹೆಯಾನ 15,000 ರೂಗಳ ಶಿಷ್ಯ ವೇತನ ನೀಡಲಾಗುವುದು. ತರಬೇತಿಯು 2026 ರ ಜನವರಿಯಿಂದ ಡಿಸೆಂಬರ್ವರೆಗೆ 12 ತಿಂಗಳ ಅವಧಿಯದಾಗಿದ್ದು, ತಾತ್ಕಾಲಿಕವಾಗಿರುತ್ತದೆ. ತರಬೇತಿ ಮುಗಿದ ನಂತರ ಮುಂದುವರೆಸಲು ಅಥವಾ ಖಾಯಂಗೊಳಿಸಲು ಯಾವುದೇ ಅವಕಾಶ ಇರುವುದಿಲ್ಲ.
ತರಬೇತಿಯ ಅವಧಿಯಲ್ಲಿ ತರಬೇತಾರ್ಥಿಗಳು ಬೇರೆ ಉದ್ಯೋಗ ಮಾಡುವಂತಿಲ್ಲ. ತರಬೇತಿಯ ಅವಧಿಯ ಮಧ್ಯದಲ್ಲಿ ಬಿಟ್ಟು ಹೋದರೆ, ಮೂಲ ದಾಖಲಾತಿಗಳನ್ನು ಅವಧಿಗೆ ಮುನ್ನ ಹಿಂದಿರುಗಿಸುವುದಿಲ್ಲ. ಒಮ್ಮೆ ಫಲಾನುಭವಿಯಾದವರನ್ನು ಈ ಯೋಜನೆಯಡಿ ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಅವಕಾಶವಿರುವುದಿಲ್ಲ ಹಾಗೂ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ ಇಲ್ಲಿ, ಮೊ.9480841218 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ನಿರ್ದೇಶಕರಾದ ಧನಂಜಯ ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ6 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
-
ದಿನದ ಸುದ್ದಿ3 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ2 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ2 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ4 hours agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ

