ದಿನದ ಸುದ್ದಿ
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಎತ್ತ ಸಾಗಿದೆ..? ಪೌರತ್ವ ನಿರ್ಧಾರದಲ್ಲಿ ಕೋಮುವಾದಿ ಹುನ್ನಾರ..!

- ಸವಿದೇಶಿಯರನ್ನು ಹೊರತುಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಅಸ್ಸಾಮ್ನ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿಯಾದುದು. ಅಲ್ಲದೆ ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಸ್ಸಾಮ್ನಲ್ಲಿ ನಾಗರಿಕ ಗಣತಿ ನಡೆಸುವ ರಾಷ್ಟ್ರೀಯ ಪೌರತ್ವ ದಾಖಲೆ (ಎನ್ಆರ್ಸಿ)ಯ ಪ್ರಕ್ರಿಯೆ ಸುಪ್ರೀಂ ಕೋರ್ಟ್ನ ಆದೇಶದ ಅನ್ವಯ ಜುಲೈ 31ರಂದು ಅಂತಿಮ ಪಟ್ಟಿಯ ಪ್ರಕಟಣೆಯೊಂದಿಗೆ ಪೂರ್ಣಗೊಳ್ಳುವ ಹಂತ ತಲುಪಬೇಕಾಗಿದೆ. ಈ ಪ್ರಕ್ರಿಯೆಯನ್ನು ನಡೆಸಿದ ರೀತಿ ಅನೇಕ ಅನುಮಾನಗಳಿಗೆ ಎಡೆಮಾಡಿದೆ; ದಾಖಲೆಯಲ್ಲಿ ನೈಜ ಭಾರತೀಯ ನಾಗರಿಕರನ್ನು ಸೇರಿಸುವ ವಿಚಾರದಲ್ಲಿ ಭಾರೀ ಪ್ರಮಾಣದ ಲೋಪದೊಷಗಳು ಕಂಡುಬಂದಿವೆ.
2018ರ ಜುಲೈ 30ರಂದು ಪ್ರಕಟವಾದ ಎನ್ಆರ್ಸಿ ಕರಡು ಪಟ್ಟಿಯಲ್ಲಿ 3.29 ಕೋಟಿ ಅರ್ಜಿದಾರರ ಪೈಕಿ 40.7 ಲಕ್ಷ ಜನರನ್ನು ಕೈಬಿಡಲಾಗಿತ್ತು. ನಿಯಮದ ಪ್ರಕಾರ, ಪಟ್ಟಿಯಿಂದ ಬಿಡಲಾದವರು ತಮ್ಮ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ ಸೇರ್ಪಡೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲೂ ಅವಕಾಶವಿದೆ.
ಈ ಪ್ರಕ್ರಿಯೆಯ ನಂತರ, ಪಟ್ಟಿಯನ್ನು ಅಂತಿಮಗೊಳಿಸಿ 2019ರ ಜುಲೈ 31ರಂದು ಪ್ರಕಟಿಸಲು ಕ್ರಮಕೈಗೊಳ್ಳಲಾಗಿತ್ತು. ಆದರೆ, ಈ ವರ್ಷ ಜೂನ್ ೨೬ರಂದು ಅನರ್ಹರು ಎಂದು ಹೇಳಿ ಅಧಿಕಾರಿಗಳು ಮತ್ತೆ 1,02,462 ಹೆಸರುಗಳನ್ನು ಕರಡು ಎನ್ಆರ್ಸಿ ಪಟ್ಟಿಯಿಂದ ಕೈಬಿಟ್ಟಿದ್ದರು. ಪ್ರಸ್ತುತ ಹೊರತುಪಡಿಸುವಿಕೆಯು ಡಿ, ಅಂದರೆ ಮತದಾರರ ಪಟ್ಟಿಯ ಅನುಮಾನಾಸ್ಪದ (ಡೌಟ್ಫುಲ್) ವಿಭಾಗದಲ್ಲಿ ಸೇರಿದವರನ್ನೂ ಒಳಗೊಂಡಿದೆ ಅಥವಾ ವಿದೇಶಿಯರೆಂದು ಅನುಮಾನಕ್ಕೊಳಗಾಗಿದ್ದು ವಿದೇಶಿಯರ ನ್ಯಾಯಮಂಡಳಿಯ ಮುಂದೆ ವಿಚಾರಣೆ ಎದುರಿಸುತ್ತಿರುವವರನ್ನೂ ಒಳಗೊಂಡಿದೆ ಎಂದು ತಿಳಿಸಲಾಗಿದೆ. ಈ ಹೆಚ್ಚುವರಿ ಹೊರತುಪಡಿಸುವಿಕೆಯೇ ಇನ್ನಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಯಾಕೆಂದರೆ ಡಿ ವಿಭಾಗದಲ್ಲಿರುವ ಎಲ್ಲ ವ್ಯಕ್ತಿಗಳನ್ನು ಹೊರತು ಪಡಿಸಲಾಗಿದೆ ಎಂದು ಕರಡು ಎನ್ಆರ್ಸಿ ವೇಳೆಯೇ ಘೋಷಿಸಲಾಗಿತ್ತು.
ಪ್ರಕ್ರಿಯೆಯು ದೋಷಪೂರಿತವಾಗಿದೆ ಹಾಗೂ ಅನೇಕ ತಪ್ಪುಗಳೂ ನಡೆದಿವೆ ಎಂಬುದನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಅನೇಕ ವರದಿಗಳು ಎತ್ತಿತೋರಿಸಿವೆ. ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಆನಂತರ ಗಡಿ ಪೊಲೀಸ್ ಪಡೆಯನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿದ ನಾನ್-ಕಮಿಷನ್ಡ್ ಆಫೀಸರ್ ಮಹಮದ್ ಸನಾವುಲ್ಲಾ ಪ್ರಕರಣ ಒಂದು ಉದಾಹರಣೆಯಾಗಿದೆ. ಅವರ ಹೆಸರು ಡಿ ಪಟ್ಟಿಯಲ್ಲಿತ್ತು ಹಾಗೂ ಅವರನ್ನು ವಿದೇಶೀಯ ಎಂದು ವಿದೇಶಿಗರ ನ್ಯಾಯಮಂಡಳಿ (ಫಾರಿನರ್ಸ್ ಟ್ರಿಬ್ಯುನಲ್) ಘೋಷಿಸಿತು. ಸನಾವುಲ್ಲಾ ಅಸ್ಸಾಮ್ನಲ್ಲಿ ಹುಟ್ಟಿದವರಾದರೂ ಮತ್ತು ಹುಟ್ಟಿದ ಊರಿನಲ್ಲಿ ಕುಟುಂಬದ ಬೇರುಗಳು ಆಳವಾಗಿದ್ದರೂ ಈ ರೀತಿ ಮಾಡಲಾಯಿತು. ಅವರನ್ನು ಪ್ರತಿಬಂಧನ ಶಿಬಿರಕ್ಕೆ ಕಳಿಸಲಾಯಿತು. ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ ನಂತರವಷ್ಟೇ ಹತ್ತು ದಿನಗಳ ನಂತರ ಅವರು ಹೊರಬರುವುದು ಸಾಧ್ಯವಾಯಿತು.
ಸುನಿರ್ಮಲ್ ಬಾಗ್ಚಿ ಅವರದ್ದು ಇನ್ನೊಂದು ಪ್ರಕರಣ. 2018ರ ಜುಲೈನಲ್ಲಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ ಈ ವರ್ಷ ಜೂನ್ನಲ್ಲಿ ಪ್ರಕಟಿಸಲಾದ ಹೆಚ್ಚುವರಿ ಹೊರತುಪಡಿಸುವಿಕೆ ಪಟ್ಟಿಯಲ್ಲಿ ಅವರ ಹೆಸರನ್ನು ಕರಡು ಪಟ್ಟಿಯಿಂದ ಹೊಡೆದುಹಾಕಲಾಗಿದೆ. ಆತ ಒಬ್ಬ ವಿದೇಶಿ ಎಂದು ಘೋಷಿಸಲಾಗಿದೆ ಎನ್ನುವುದು ಇದಕ್ಕೆ ನೀಡಲಾದ ಕಾರಣವಾಗಿದೆ. ಬಾಗ್ಚಿ ಅವರು ಸಿಲ್ಚಾರ್ ಪಟ್ಟಣದಲ್ಲಿ 1943 ಸೆಪ್ಟೆಂಬರ್ 23ರಂದು ಜನಿಸಿದವರು. ಹಾಗಿರುವಾಗ ಅವರು ಒಬ್ಬ ವಿದೇಶೀಯ ಆಗಲು ಹೇಗೆ ಸಾಧ್ಯ ಎನ್ನುವುದಕ್ಕೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಆದರೆ ಇದೊಂದು ಕ್ಲರಿಕಲ್ ದೋಷದ ಪರಿಣಾಮ ಎಂದು ಎನ್ಆರ್ಸಿ ಅಧಿಕಾರಿಗಳು ಈಗ ಹೇಳುತ್ತಿದ್ದಾರೆ.
ಚಿರಾಂಗ್ ಜಿಲ್ಲೆಯ ಒಬ್ಬ ಬಡ ವಿಧವೆ ಮಧುಬಾಲಾ ಅವರನ್ನು ಬಂಧಿಸಿರುವುದು ಒಂದು ಕಳವಳಕಾರಿ ಸಂಗತಿಯಾಗಿದೆ. ಫಾರಿನರ್ಸ್ ಟ್ರಿಬ್ಯುನಲ್ ಅವರನ್ನು ವಿದೇಶಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮಧುಬಾಲಾರನ್ನು ಮೂರು ವರ್ಷಗಳಿಂದ ಪ್ರತಿಬಂಧನದಲ್ಲಿಡಲಾಗಿತ್ತು. ಮಧುಬಾಲಾ ಎಂಬ ಹೆಸರಿನ ಮತ್ತೊಬ್ಬ ಮಹಿಳೆಯ ವಿಚಾರದಲ್ಲಿ ತಪ್ಪಾಗಿ ತಿಳಿದು ಈ ಮಧುಬಾಲಾರನ್ನು ಹಿಡಿದಿಡಲಾಗಿತ್ತು ಎನ್ನುವುದು ಇತ್ತೀಚೆಗೆ ತಿಳಿದು ಅವರ್ನು ಬಿಡುಗಡೆ ಮಾಡಲಾಯಿತು. ಆದರೆ, ಅಕ್ರಮವಾಗಿ ಅವರನ್ನು ಬಂಧಿಸಿಟ್ಟಿದ್ದಕ್ಕೆ ಪರಿಹಾರ ನೀಡಲಾಗುವುದೇ ಎಂಬ ಬಗ್ಗೆ ಎಂದು ಚಕಾರವನ್ನೇ ಎತ್ತಿಲ್ಲ.
ಮಗನನ್ನು ಪಟ್ಟಿಯಲ್ಲಿ ಸೇರಿಸಿ ತಂದೆಯನ್ನು ಕೈಬಿಟ್ಟ ಅಥವಾ ಒಡಹುಟ್ಟಿದವರಲ್ಲಿ ಒಬ್ಬರನ್ನು ಸೇರಿಸಿ ಇನ್ನೊಬ್ಬರನ್ನು ಬಿಟ್ಟ ಈ ರೀತಿಯ ಅನೇಕಾನೇಕ ಪ್ರಕರಣಗಳು ಇಲ್ಲಿವೆ.
ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಂದ ಮುಕ್ತಿ ಪಡೆಯಬೇಕು ಎಂದು ಕೇಂದ್ರದ ಬಿಜೆಪಿ ಸರಕಾರ ಸದಾ ಜಪಿಸುತ್ತಲೇ ಇದೆ. ಈಗ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ ಚುನಾವಣೆ ಪ್ರಚಾರದ ವೇಳೆ ಇವರನ್ನು ಗೆದ್ದಲು ಎಂದು ಕರೆದಿದ್ದರು. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗಡಿಗೆ ಹೊಂದಿರುವ ರಾಜ್ಯಗಳಿಗೆ ಎನ್ಆರ್ಸಿ ವಿಸ್ತರಿಸಲು ಮೋದಿ ಸರಕಾರ ಕಟಿಬದ್ಧವಾಗಿದೆ. ಮುಸ್ಲಿಂ ಮೂಲದ ನಾಗರಿಕರನ್ನು ಗುರಿಯಾಗಿಸಲಾಗುವುದು ಎಂಬ ಭೀತಿ ಕಾಡತೊಡಗಿದೆ.
ಇದೇ ಹೊತ್ತಿಗೆ ಬಾಂಗ್ಲಾದೇಶದಿಂದ ಬಂದ ಹಿಂದೂ ವಲಸಿಗರಿಗೆ ಪೌರತ್ವ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಪೌರತ್ವ ನೀಡಲಾಗುವುದು ಎಂದು ಬಿಜೆಪಿ ಆಶ್ವಾಸನೆ ನೀಡುತ್ತಿದೆ. ಎನ್ಆರ್ಸಿಯಿಂದ ಕೈಬಿಟ್ಟ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡಲಿಕ್ಕಾಗಿ ಸರಕಾರ ಒಂದು ಮಸೂದೆ ತರಲಿದೆ ಎಂದು ಗೃಹ ಸಚಿವ ಅಮಿತ್ ಷಾ ಜುಲೈ ಒಂದರಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ವಿದೇಶಿಯರನ್ನು ಹೊರತು ಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿ ಕೊಳ್ಳುವ ಉದ್ದೇಶ ಹೊಂದಿದ್ದ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ.
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದು ಅವುಗಳಿಗೆ ಪರಿಹಾರ ಸಿಗಬೇಕಾಗಿದೆ. ಎನ್ಆರ್ಸಿಯ ಅಂತಿಮ ಪಟ್ಟಿಯ ಪ್ರಕಟಣೆಯ ನಂತರ, ಅನ್ಯಾಯವಾಗಿ ಅಥವಾ ತಪ್ಪಾಗಿ ಕೈಬಿಡಲಾದವರಿಗೆ-ಅದು ಅಧಿಕಾರಿಗಳ ತಪ್ಪಿನಿಂದಲೇ ಆಗಿರಲಿ, ಕೋಮುವಾದಿ ಪಕ್ಷಪಾತದಿಂದಲೇ ಆಗಿರಲಿ- ನ್ಯಾಯ ಒದಗಿಸಲು ಒಂದು ಶೀಘ್ರ ಕಾನೂನು ಪ್ರಕ್ರಿಯೆ ಆರಂಭವಾಗಬೇಕು. ಪೌರತ್ವ ದಾಖಲೆಯಿಂದ ಕೈಬಿಡಲಾದ ಮಿಲಿಯಗಟ್ಟಲೆ ಜನರಿಗೆ ಏನು ಆಗಬಹುದು?. ಪೌರರಲ್ಲದ ಅವರ ಸ್ಥಾನಮಾನ ಹಾಗೂ ಹಕ್ಕುಗಳು ಏನು?. ವಿದೇಶಿಗರ ನ್ಯಾಯಮಂಡಳಿಯಿಂದ ವಿದೇಶಿಯರು ಎಂದು ಘೋಷಿತರಾದವರನ್ನು ಬಾಂಗ್ಲಾದೇಶಕ್ಕೆ ಕಳಿಸಲು ಸಾಧ್ಯವಿಲ್ಲ ಎನ್ನುವುದು ಆಗಲೇ ಸ್ಪಷ್ಟವಾಗಿರುವಾಗ- ಅವರನ್ನು ಸ್ವೀಕರಿಸಲು ಬಾಂಗ್ಲಾದೇಶ ನಿರಾಕರಿಸಿದೆ- ಅವರನ್ನು ಬಂಧನ ಕೇಂದ್ರಗಳಲ್ಲಿ ಅನಿರ್ದಿಷ್ಟ ಕಾಲ ಕೊಳೆ ಹಾಕಲಾಗುವುದೇ?.
ಎನ್ಆರ್ಸಿ ಪ್ರಕ್ರಿಯೆಯನ್ನು ಆರಂಭಿಸಿ ಅದರ ಮೇಲುಸ್ತುವಾರಿ ನೋಡಿಕೊಂಡ ಸುಪ್ರೀಂ ಕೋರ್ಟ್ ಈ ವಿಷಯಗಳಿಗೆ ಪ್ರತಿಕ್ರಿಯಿಸದೆ ನುಣುಚಿಕೊಳ್ಳಲಾಗದು. ಭಾರತೀಯ ನಾಗರಿಕತ್ವ ಮತ್ತು ನಾಗರಿಕರ ಹಕ್ಕುಗಳ ಮೂಲಭೂತ ವಿಚಾರಗಳು ಇಲ್ಲಿ ಅಡಕವಾಗಿವೆ. ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಂತಿಮ ಪಟ್ಟಿ ಪ್ರಕಟಣೆಯ ಜುಲೈ 31ರ ಗಡುವು ಸಮೀಪಿಸುತ್ತಿರುವಾಗ ಇಂಥ ಸನ್ನಿವೇಶ ಇರುವ ಹೊತ್ತಿನಲ್ಲೇ ಕೇಂದ್ರ ಸರಕಾರ ಮತ್ತು ಅಸ್ಸಾಂ ರಾಜ್ಯ ಸರಕಾರ ಹಠಾತ್ತನೆ ಒಂದು ಹೊಸ ಬೇಡಿಕೆಯೊಂದಿಗೆ ಸುಪ್ರೀಂ ಕೋರ್ಟ್ನ ಮೊರೆ ಹೋಗಿದೆ. ಅಂತಿಮ ಪಟ್ಟಿ ಪ್ರಕಟಣೆಯ ಗಡುವನ್ನು ಜುಲೈ 31ರಿಂದ ಬೇರೊಂದು ದಿನಾಂಕ್ಕೆ ಮುಂದೂಡಬೇಕೆನ್ನುವುದೇ ಆ ಬೇಡಿಕೆಯಾಗಿದೆ. ಈ ನಡುವೆ, 2018ರ ಜುಲೈ 30ರಂದು ಪ್ರಕಟಿಸಲಾದ ಎನ್ಆರ್ಸಿ ಕರಡಿನಲ್ಲಿರುವ ಹೆಸರುಗಳ ಸ್ಯಾಂಪಲ್ ಪುನರ್-ದೃಢೀಕರಣ ಆಗಬೇಕೆಂಬುದು ಅವುಗಳ ಬೇಡಿಕೆ. ಬಾಂಗ್ಲಾದೇಶದ ಗಡಿಗೆ ಹೊಂದಿರುವ ಜಿಲ್ಲೆಗಳ ಶೇಕಡಾ ೨೦ರಷ್ಟು ಹಸರುಗಳ ಮರು-ದೃಢೀಕರಣ ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇಕಡಾ ೧೦ ಮರು-ದೃಢೀಕರಣ ಆಗಬೇಕು ಎಂದು ಅವು ಹೇಳಿವೆ.
ದುರುದ್ದೇಶಪೂರಿತವಾದ ಈ ಮನವಿಯು ಈಗಾಗಲೇ ಪದೇ ಪದೇ ವಿಚಾರಣೆಗಳು ಮತ್ತು ದಾಖಲೆಪತ್ರಗಳ ಸಲ್ಲಿಕೆಗಳಿಂದ ಹೈರಾಣವಾಗಿರುವ ಲಕ್ಷಾಂತರ ನಾಗರಿಕರಿಗೆ ಮತ್ತಷ್ಟು ಕಿರುಕುಳ ಮುಂದುವರಿಸಲು ಕಾರಣವಾಗುತ್ತದೆ.
ಈ ಕ್ರಮವನ್ನು ದೃಢವಾಗಿ ವಿರೋಧಿಸಬೇಕು. ಪೌರತ್ವ ಕಾನೂನಿಗೆ ತಿದ್ದುಪಡಿ ತರು ವರೆಗೆ ಅಥವಾ ಬಾಂಗ್ಲಾದೇಶದ ಹಿಂದೂ ವಲಸಿಗರಿಗೆ ನಾಗರಿಕತ್ವ ನೀಡುವವರೆಗೆ ಎನ್ಆರ್ಸಿಯನ್ನು ಅಂತಿಮಗೊಳಿಸುವುದನ್ನು ವಿಳಂಬ ಮಾಡುವುದು ಮೋದಿ ಸರಕಾರ ಉದ್ದೇಶ ಎಂದು ನಂಬಲು ಬೇಕಷ್ಟು ಕಾರಣಗಳಿವೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿ ಯಾದುದು.
–ಪ್ರಕಾಶ್ ಕಾರಟ್
ಅನು: ವಿಶ್ವ
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ6 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ2 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ2 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ