ದಿನದ ಸುದ್ದಿ
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಎತ್ತ ಸಾಗಿದೆ..? ಪೌರತ್ವ ನಿರ್ಧಾರದಲ್ಲಿ ಕೋಮುವಾದಿ ಹುನ್ನಾರ..!
- ಸವಿದೇಶಿಯರನ್ನು ಹೊರತುಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಅಸ್ಸಾಮ್ನ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿಯಾದುದು. ಅಲ್ಲದೆ ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಸ್ಸಾಮ್ನಲ್ಲಿ ನಾಗರಿಕ ಗಣತಿ ನಡೆಸುವ ರಾಷ್ಟ್ರೀಯ ಪೌರತ್ವ ದಾಖಲೆ (ಎನ್ಆರ್ಸಿ)ಯ ಪ್ರಕ್ರಿಯೆ ಸುಪ್ರೀಂ ಕೋರ್ಟ್ನ ಆದೇಶದ ಅನ್ವಯ ಜುಲೈ 31ರಂದು ಅಂತಿಮ ಪಟ್ಟಿಯ ಪ್ರಕಟಣೆಯೊಂದಿಗೆ ಪೂರ್ಣಗೊಳ್ಳುವ ಹಂತ ತಲುಪಬೇಕಾಗಿದೆ. ಈ ಪ್ರಕ್ರಿಯೆಯನ್ನು ನಡೆಸಿದ ರೀತಿ ಅನೇಕ ಅನುಮಾನಗಳಿಗೆ ಎಡೆಮಾಡಿದೆ; ದಾಖಲೆಯಲ್ಲಿ ನೈಜ ಭಾರತೀಯ ನಾಗರಿಕರನ್ನು ಸೇರಿಸುವ ವಿಚಾರದಲ್ಲಿ ಭಾರೀ ಪ್ರಮಾಣದ ಲೋಪದೊಷಗಳು ಕಂಡುಬಂದಿವೆ.
2018ರ ಜುಲೈ 30ರಂದು ಪ್ರಕಟವಾದ ಎನ್ಆರ್ಸಿ ಕರಡು ಪಟ್ಟಿಯಲ್ಲಿ 3.29 ಕೋಟಿ ಅರ್ಜಿದಾರರ ಪೈಕಿ 40.7 ಲಕ್ಷ ಜನರನ್ನು ಕೈಬಿಡಲಾಗಿತ್ತು. ನಿಯಮದ ಪ್ರಕಾರ, ಪಟ್ಟಿಯಿಂದ ಬಿಡಲಾದವರು ತಮ್ಮ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ ಸೇರ್ಪಡೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲೂ ಅವಕಾಶವಿದೆ.
ಈ ಪ್ರಕ್ರಿಯೆಯ ನಂತರ, ಪಟ್ಟಿಯನ್ನು ಅಂತಿಮಗೊಳಿಸಿ 2019ರ ಜುಲೈ 31ರಂದು ಪ್ರಕಟಿಸಲು ಕ್ರಮಕೈಗೊಳ್ಳಲಾಗಿತ್ತು. ಆದರೆ, ಈ ವರ್ಷ ಜೂನ್ ೨೬ರಂದು ಅನರ್ಹರು ಎಂದು ಹೇಳಿ ಅಧಿಕಾರಿಗಳು ಮತ್ತೆ 1,02,462 ಹೆಸರುಗಳನ್ನು ಕರಡು ಎನ್ಆರ್ಸಿ ಪಟ್ಟಿಯಿಂದ ಕೈಬಿಟ್ಟಿದ್ದರು. ಪ್ರಸ್ತುತ ಹೊರತುಪಡಿಸುವಿಕೆಯು ಡಿ, ಅಂದರೆ ಮತದಾರರ ಪಟ್ಟಿಯ ಅನುಮಾನಾಸ್ಪದ (ಡೌಟ್ಫುಲ್) ವಿಭಾಗದಲ್ಲಿ ಸೇರಿದವರನ್ನೂ ಒಳಗೊಂಡಿದೆ ಅಥವಾ ವಿದೇಶಿಯರೆಂದು ಅನುಮಾನಕ್ಕೊಳಗಾಗಿದ್ದು ವಿದೇಶಿಯರ ನ್ಯಾಯಮಂಡಳಿಯ ಮುಂದೆ ವಿಚಾರಣೆ ಎದುರಿಸುತ್ತಿರುವವರನ್ನೂ ಒಳಗೊಂಡಿದೆ ಎಂದು ತಿಳಿಸಲಾಗಿದೆ. ಈ ಹೆಚ್ಚುವರಿ ಹೊರತುಪಡಿಸುವಿಕೆಯೇ ಇನ್ನಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಯಾಕೆಂದರೆ ಡಿ ವಿಭಾಗದಲ್ಲಿರುವ ಎಲ್ಲ ವ್ಯಕ್ತಿಗಳನ್ನು ಹೊರತು ಪಡಿಸಲಾಗಿದೆ ಎಂದು ಕರಡು ಎನ್ಆರ್ಸಿ ವೇಳೆಯೇ ಘೋಷಿಸಲಾಗಿತ್ತು.
ಪ್ರಕ್ರಿಯೆಯು ದೋಷಪೂರಿತವಾಗಿದೆ ಹಾಗೂ ಅನೇಕ ತಪ್ಪುಗಳೂ ನಡೆದಿವೆ ಎಂಬುದನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಅನೇಕ ವರದಿಗಳು ಎತ್ತಿತೋರಿಸಿವೆ. ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಆನಂತರ ಗಡಿ ಪೊಲೀಸ್ ಪಡೆಯನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿದ ನಾನ್-ಕಮಿಷನ್ಡ್ ಆಫೀಸರ್ ಮಹಮದ್ ಸನಾವುಲ್ಲಾ ಪ್ರಕರಣ ಒಂದು ಉದಾಹರಣೆಯಾಗಿದೆ. ಅವರ ಹೆಸರು ಡಿ ಪಟ್ಟಿಯಲ್ಲಿತ್ತು ಹಾಗೂ ಅವರನ್ನು ವಿದೇಶೀಯ ಎಂದು ವಿದೇಶಿಗರ ನ್ಯಾಯಮಂಡಳಿ (ಫಾರಿನರ್ಸ್ ಟ್ರಿಬ್ಯುನಲ್) ಘೋಷಿಸಿತು. ಸನಾವುಲ್ಲಾ ಅಸ್ಸಾಮ್ನಲ್ಲಿ ಹುಟ್ಟಿದವರಾದರೂ ಮತ್ತು ಹುಟ್ಟಿದ ಊರಿನಲ್ಲಿ ಕುಟುಂಬದ ಬೇರುಗಳು ಆಳವಾಗಿದ್ದರೂ ಈ ರೀತಿ ಮಾಡಲಾಯಿತು. ಅವರನ್ನು ಪ್ರತಿಬಂಧನ ಶಿಬಿರಕ್ಕೆ ಕಳಿಸಲಾಯಿತು. ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ ನಂತರವಷ್ಟೇ ಹತ್ತು ದಿನಗಳ ನಂತರ ಅವರು ಹೊರಬರುವುದು ಸಾಧ್ಯವಾಯಿತು.
ಸುನಿರ್ಮಲ್ ಬಾಗ್ಚಿ ಅವರದ್ದು ಇನ್ನೊಂದು ಪ್ರಕರಣ. 2018ರ ಜುಲೈನಲ್ಲಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ ಈ ವರ್ಷ ಜೂನ್ನಲ್ಲಿ ಪ್ರಕಟಿಸಲಾದ ಹೆಚ್ಚುವರಿ ಹೊರತುಪಡಿಸುವಿಕೆ ಪಟ್ಟಿಯಲ್ಲಿ ಅವರ ಹೆಸರನ್ನು ಕರಡು ಪಟ್ಟಿಯಿಂದ ಹೊಡೆದುಹಾಕಲಾಗಿದೆ. ಆತ ಒಬ್ಬ ವಿದೇಶಿ ಎಂದು ಘೋಷಿಸಲಾಗಿದೆ ಎನ್ನುವುದು ಇದಕ್ಕೆ ನೀಡಲಾದ ಕಾರಣವಾಗಿದೆ. ಬಾಗ್ಚಿ ಅವರು ಸಿಲ್ಚಾರ್ ಪಟ್ಟಣದಲ್ಲಿ 1943 ಸೆಪ್ಟೆಂಬರ್ 23ರಂದು ಜನಿಸಿದವರು. ಹಾಗಿರುವಾಗ ಅವರು ಒಬ್ಬ ವಿದೇಶೀಯ ಆಗಲು ಹೇಗೆ ಸಾಧ್ಯ ಎನ್ನುವುದಕ್ಕೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಆದರೆ ಇದೊಂದು ಕ್ಲರಿಕಲ್ ದೋಷದ ಪರಿಣಾಮ ಎಂದು ಎನ್ಆರ್ಸಿ ಅಧಿಕಾರಿಗಳು ಈಗ ಹೇಳುತ್ತಿದ್ದಾರೆ.
ಚಿರಾಂಗ್ ಜಿಲ್ಲೆಯ ಒಬ್ಬ ಬಡ ವಿಧವೆ ಮಧುಬಾಲಾ ಅವರನ್ನು ಬಂಧಿಸಿರುವುದು ಒಂದು ಕಳವಳಕಾರಿ ಸಂಗತಿಯಾಗಿದೆ. ಫಾರಿನರ್ಸ್ ಟ್ರಿಬ್ಯುನಲ್ ಅವರನ್ನು ವಿದೇಶಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮಧುಬಾಲಾರನ್ನು ಮೂರು ವರ್ಷಗಳಿಂದ ಪ್ರತಿಬಂಧನದಲ್ಲಿಡಲಾಗಿತ್ತು. ಮಧುಬಾಲಾ ಎಂಬ ಹೆಸರಿನ ಮತ್ತೊಬ್ಬ ಮಹಿಳೆಯ ವಿಚಾರದಲ್ಲಿ ತಪ್ಪಾಗಿ ತಿಳಿದು ಈ ಮಧುಬಾಲಾರನ್ನು ಹಿಡಿದಿಡಲಾಗಿತ್ತು ಎನ್ನುವುದು ಇತ್ತೀಚೆಗೆ ತಿಳಿದು ಅವರ್ನು ಬಿಡುಗಡೆ ಮಾಡಲಾಯಿತು. ಆದರೆ, ಅಕ್ರಮವಾಗಿ ಅವರನ್ನು ಬಂಧಿಸಿಟ್ಟಿದ್ದಕ್ಕೆ ಪರಿಹಾರ ನೀಡಲಾಗುವುದೇ ಎಂಬ ಬಗ್ಗೆ ಎಂದು ಚಕಾರವನ್ನೇ ಎತ್ತಿಲ್ಲ.
ಮಗನನ್ನು ಪಟ್ಟಿಯಲ್ಲಿ ಸೇರಿಸಿ ತಂದೆಯನ್ನು ಕೈಬಿಟ್ಟ ಅಥವಾ ಒಡಹುಟ್ಟಿದವರಲ್ಲಿ ಒಬ್ಬರನ್ನು ಸೇರಿಸಿ ಇನ್ನೊಬ್ಬರನ್ನು ಬಿಟ್ಟ ಈ ರೀತಿಯ ಅನೇಕಾನೇಕ ಪ್ರಕರಣಗಳು ಇಲ್ಲಿವೆ.
ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಂದ ಮುಕ್ತಿ ಪಡೆಯಬೇಕು ಎಂದು ಕೇಂದ್ರದ ಬಿಜೆಪಿ ಸರಕಾರ ಸದಾ ಜಪಿಸುತ್ತಲೇ ಇದೆ. ಈಗ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ ಚುನಾವಣೆ ಪ್ರಚಾರದ ವೇಳೆ ಇವರನ್ನು ಗೆದ್ದಲು ಎಂದು ಕರೆದಿದ್ದರು. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗಡಿಗೆ ಹೊಂದಿರುವ ರಾಜ್ಯಗಳಿಗೆ ಎನ್ಆರ್ಸಿ ವಿಸ್ತರಿಸಲು ಮೋದಿ ಸರಕಾರ ಕಟಿಬದ್ಧವಾಗಿದೆ. ಮುಸ್ಲಿಂ ಮೂಲದ ನಾಗರಿಕರನ್ನು ಗುರಿಯಾಗಿಸಲಾಗುವುದು ಎಂಬ ಭೀತಿ ಕಾಡತೊಡಗಿದೆ.
ಇದೇ ಹೊತ್ತಿಗೆ ಬಾಂಗ್ಲಾದೇಶದಿಂದ ಬಂದ ಹಿಂದೂ ವಲಸಿಗರಿಗೆ ಪೌರತ್ವ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಪೌರತ್ವ ನೀಡಲಾಗುವುದು ಎಂದು ಬಿಜೆಪಿ ಆಶ್ವಾಸನೆ ನೀಡುತ್ತಿದೆ. ಎನ್ಆರ್ಸಿಯಿಂದ ಕೈಬಿಟ್ಟ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡಲಿಕ್ಕಾಗಿ ಸರಕಾರ ಒಂದು ಮಸೂದೆ ತರಲಿದೆ ಎಂದು ಗೃಹ ಸಚಿವ ಅಮಿತ್ ಷಾ ಜುಲೈ ಒಂದರಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ವಿದೇಶಿಯರನ್ನು ಹೊರತು ಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿ ಕೊಳ್ಳುವ ಉದ್ದೇಶ ಹೊಂದಿದ್ದ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ.
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದು ಅವುಗಳಿಗೆ ಪರಿಹಾರ ಸಿಗಬೇಕಾಗಿದೆ. ಎನ್ಆರ್ಸಿಯ ಅಂತಿಮ ಪಟ್ಟಿಯ ಪ್ರಕಟಣೆಯ ನಂತರ, ಅನ್ಯಾಯವಾಗಿ ಅಥವಾ ತಪ್ಪಾಗಿ ಕೈಬಿಡಲಾದವರಿಗೆ-ಅದು ಅಧಿಕಾರಿಗಳ ತಪ್ಪಿನಿಂದಲೇ ಆಗಿರಲಿ, ಕೋಮುವಾದಿ ಪಕ್ಷಪಾತದಿಂದಲೇ ಆಗಿರಲಿ- ನ್ಯಾಯ ಒದಗಿಸಲು ಒಂದು ಶೀಘ್ರ ಕಾನೂನು ಪ್ರಕ್ರಿಯೆ ಆರಂಭವಾಗಬೇಕು. ಪೌರತ್ವ ದಾಖಲೆಯಿಂದ ಕೈಬಿಡಲಾದ ಮಿಲಿಯಗಟ್ಟಲೆ ಜನರಿಗೆ ಏನು ಆಗಬಹುದು?. ಪೌರರಲ್ಲದ ಅವರ ಸ್ಥಾನಮಾನ ಹಾಗೂ ಹಕ್ಕುಗಳು ಏನು?. ವಿದೇಶಿಗರ ನ್ಯಾಯಮಂಡಳಿಯಿಂದ ವಿದೇಶಿಯರು ಎಂದು ಘೋಷಿತರಾದವರನ್ನು ಬಾಂಗ್ಲಾದೇಶಕ್ಕೆ ಕಳಿಸಲು ಸಾಧ್ಯವಿಲ್ಲ ಎನ್ನುವುದು ಆಗಲೇ ಸ್ಪಷ್ಟವಾಗಿರುವಾಗ- ಅವರನ್ನು ಸ್ವೀಕರಿಸಲು ಬಾಂಗ್ಲಾದೇಶ ನಿರಾಕರಿಸಿದೆ- ಅವರನ್ನು ಬಂಧನ ಕೇಂದ್ರಗಳಲ್ಲಿ ಅನಿರ್ದಿಷ್ಟ ಕಾಲ ಕೊಳೆ ಹಾಕಲಾಗುವುದೇ?.
ಎನ್ಆರ್ಸಿ ಪ್ರಕ್ರಿಯೆಯನ್ನು ಆರಂಭಿಸಿ ಅದರ ಮೇಲುಸ್ತುವಾರಿ ನೋಡಿಕೊಂಡ ಸುಪ್ರೀಂ ಕೋರ್ಟ್ ಈ ವಿಷಯಗಳಿಗೆ ಪ್ರತಿಕ್ರಿಯಿಸದೆ ನುಣುಚಿಕೊಳ್ಳಲಾಗದು. ಭಾರತೀಯ ನಾಗರಿಕತ್ವ ಮತ್ತು ನಾಗರಿಕರ ಹಕ್ಕುಗಳ ಮೂಲಭೂತ ವಿಚಾರಗಳು ಇಲ್ಲಿ ಅಡಕವಾಗಿವೆ. ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಂತಿಮ ಪಟ್ಟಿ ಪ್ರಕಟಣೆಯ ಜುಲೈ 31ರ ಗಡುವು ಸಮೀಪಿಸುತ್ತಿರುವಾಗ ಇಂಥ ಸನ್ನಿವೇಶ ಇರುವ ಹೊತ್ತಿನಲ್ಲೇ ಕೇಂದ್ರ ಸರಕಾರ ಮತ್ತು ಅಸ್ಸಾಂ ರಾಜ್ಯ ಸರಕಾರ ಹಠಾತ್ತನೆ ಒಂದು ಹೊಸ ಬೇಡಿಕೆಯೊಂದಿಗೆ ಸುಪ್ರೀಂ ಕೋರ್ಟ್ನ ಮೊರೆ ಹೋಗಿದೆ. ಅಂತಿಮ ಪಟ್ಟಿ ಪ್ರಕಟಣೆಯ ಗಡುವನ್ನು ಜುಲೈ 31ರಿಂದ ಬೇರೊಂದು ದಿನಾಂಕ್ಕೆ ಮುಂದೂಡಬೇಕೆನ್ನುವುದೇ ಆ ಬೇಡಿಕೆಯಾಗಿದೆ. ಈ ನಡುವೆ, 2018ರ ಜುಲೈ 30ರಂದು ಪ್ರಕಟಿಸಲಾದ ಎನ್ಆರ್ಸಿ ಕರಡಿನಲ್ಲಿರುವ ಹೆಸರುಗಳ ಸ್ಯಾಂಪಲ್ ಪುನರ್-ದೃಢೀಕರಣ ಆಗಬೇಕೆಂಬುದು ಅವುಗಳ ಬೇಡಿಕೆ. ಬಾಂಗ್ಲಾದೇಶದ ಗಡಿಗೆ ಹೊಂದಿರುವ ಜಿಲ್ಲೆಗಳ ಶೇಕಡಾ ೨೦ರಷ್ಟು ಹಸರುಗಳ ಮರು-ದೃಢೀಕರಣ ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇಕಡಾ ೧೦ ಮರು-ದೃಢೀಕರಣ ಆಗಬೇಕು ಎಂದು ಅವು ಹೇಳಿವೆ.
ದುರುದ್ದೇಶಪೂರಿತವಾದ ಈ ಮನವಿಯು ಈಗಾಗಲೇ ಪದೇ ಪದೇ ವಿಚಾರಣೆಗಳು ಮತ್ತು ದಾಖಲೆಪತ್ರಗಳ ಸಲ್ಲಿಕೆಗಳಿಂದ ಹೈರಾಣವಾಗಿರುವ ಲಕ್ಷಾಂತರ ನಾಗರಿಕರಿಗೆ ಮತ್ತಷ್ಟು ಕಿರುಕುಳ ಮುಂದುವರಿಸಲು ಕಾರಣವಾಗುತ್ತದೆ.
ಈ ಕ್ರಮವನ್ನು ದೃಢವಾಗಿ ವಿರೋಧಿಸಬೇಕು. ಪೌರತ್ವ ಕಾನೂನಿಗೆ ತಿದ್ದುಪಡಿ ತರು ವರೆಗೆ ಅಥವಾ ಬಾಂಗ್ಲಾದೇಶದ ಹಿಂದೂ ವಲಸಿಗರಿಗೆ ನಾಗರಿಕತ್ವ ನೀಡುವವರೆಗೆ ಎನ್ಆರ್ಸಿಯನ್ನು ಅಂತಿಮಗೊಳಿಸುವುದನ್ನು ವಿಳಂಬ ಮಾಡುವುದು ಮೋದಿ ಸರಕಾರ ಉದ್ದೇಶ ಎಂದು ನಂಬಲು ಬೇಕಷ್ಟು ಕಾರಣಗಳಿವೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿ ಯಾದುದು.
–ಪ್ರಕಾಶ್ ಕಾರಟ್
ಅನು: ವಿಶ್ವ
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ!! 1/2#ಜನರಿಗಿಲ್ಲ_ನೆಮ್ಮದಿಯ_ಗ್ಯಾರಂಟಿ pic.twitter.com/iu3tqqEYZ3
— Janata Dal Secular (@JanataDal_S) May 18, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್
ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ
ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.
ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ
-
ದಿನದ ಸುದ್ದಿ3 days ago
ವಿಧಾನಪರಿಷತ್ ಚುನಾವಣೆ ; ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
-
ದಿನದ ಸುದ್ದಿ3 days ago
ಪೌರತ್ವ ಪ್ರಮಾಣಪತ್ರ ಹಸ್ತಾಂತರ
-
ದಿನದ ಸುದ್ದಿ2 days ago
ಸಂಗೀತಗಾರರ ಹುದ್ದೆಗಳಿಗೆ ನೇಮಕಾತಿ
-
ದಿನದ ಸುದ್ದಿ3 days ago
ದಾವಣಗೆರೆ | ಶಿಕ್ಷಕರ ಹುದ್ದೆಗೆ ನೇರ ಸಂದರ್ಶನ
-
ದಿನದ ಸುದ್ದಿ4 days ago
ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿ ಪ್ರಾರಂಭ
-
ದಿನದ ಸುದ್ದಿ3 days ago
ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜು ; ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ | ಎಸ್ಐಟಿ ಸೂಕ್ತ ತನಿಖೆ ನಡೆಸುತ್ತಿಲ್ಲ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ