ದಿನದ ಸುದ್ದಿ
ಶ್ರಾವಣ ಸಂಜೆಯ ಕಾಣಿಕೆ ಕೊಡಗು – ಕೇರಳ ಸಂತ್ರಸ್ತರ ಪುನರ್ವಸತಿಗೆ ಬಳಕೆ | ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಘೋಷಣೆ
ಸುದ್ದಿದಿನ, ಅಲಬೂರು : ಶ್ರಾವಣ ಸಂಜೆಯ ಮೂವತ್ತು ದಿನಗಳ ಕಾರ್ಯಕ್ರಮದಲ್ಲಿ ಸಂಗ್ರಹವಾದ ಕಾಣಿಕೆಯನ್ನು ಕೊಡಗೂ,ಚಿಕ್ಕಮಗಳೂರು ಹಾಗೂ ಕೇರಳ ರಾಜ್ಯದಲ್ಲಿ ಉಂಟಾಗಿರುವ ಜಲ ಪ್ರಳಯದ ಸಂತ್ರಸ್ತರ ಪುನರ್ವಸತಿಗೆ ಬಳಕೆ ಮಾಡಲಾಗುವುದು ಎಂದು ತರಳಬಾಳು ಜಗದ್ಗುರು ಶಾಖಾ ಶ್ರೀ ಮಠದ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪ್ರಕೃತಿಯ ಅವಘಡದ ಅನೇಕ ಸಂಧರ್ಭಗಳಲ್ಲಿ ಮಾನವೀಯ ನೆಲೆಯಲ್ಲಿ ಅಂತಃಕರಣದಿಂದ ತರಳಬಾಳು ಜಗದ್ಗುರು ಬೃಹನ್ಮಠ ನಾಡಿನ ಕಷ್ಟ ಪರಿಸ್ಥಿತಿಗಳಲ್ಲಿ ಮಿಡಿದಿದೆ.ಅಪಾಯಗಳಲ್ಲಿ ಸಿಲುಕಿ ನರಳಾಡುತ್ತಿರುವವ ಬಾಂಧವರು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ವಂಚಿತರಾದ ಅವರ ಅಸಹಾಯಕತೆಯ ಆಕ್ರಂದನ ನಮ್ಮ ಮನಸ್ಸನ್ನು ಜರ್ಜರಿತಗೊಳಿಸಿದ್ದು.ಶ್ರಾವಣ ಸಂಜೆಯ ಮೂವತ್ತು ದಿನಗಳ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದ ಜೊತೆ ಇನ್ನೊಷ್ಟು ಸಂಗ್ರಹಿಸಿ ನಿರಾಶ್ರಿತರ ಕಷ್ಟದಲ್ಲಿಭಾಗಿಯಾಗುವುದಾಗಿ ತಿಳಿಸಿದರು .
ಕೊಟ್ಟೂರು ತಾಲ್ಲೂಕಿನ ಅಲಬೂರು ಗ್ರಾಮದಲ್ಲಿ ಶ್ರಾವಣ ಸಂಜೆಯ ಎಂಟನೇ ದಿನದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಆಶೀರ್ವಚನ ನೀಡಿದ ಶ್ರೀಗಳು ಬಸವಣ್ಣ ಹನ್ನೆರಡನೆಯ ಶತಮಾನದ ಅಗ್ರಮಾನ್ಯರಾದ ವಿಶ್ವಖ್ಯಾತಿಯ ವಿಭೂತಿ ಪುರುಷ .ತಲತಲಾಂತರದಿಂದ ಆಚರಣೆಯಲ್ಲಿದ್ದ ಅವಿವೇಕತನದ ಸಂಪ್ರದಾಯಗಳನ್ನು ದಿಕ್ಕರಿಸಿ ಸಮ ಸಮಾಜದ ನಿರ್ಮಾತೃ ಧಾರ್ಮಿಕ ವಿಮರ್ಶೆಯ ಜೊತೆ ಸಾಮಾಜಿಕ ವಿಮರ್ಶೆ,ರಾಜಕೀಯ ವಿಮರ್ಶೆ, ಸಾಹಿತ್ಯ ವಿಮರ್ಶೆಯ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿ ಯಶಸ್ಸು ಗಳಿಸಿದ ಮಹಾಮಾನವತಾವಾದಿಯ ಹಾದಿಯಲ್ಲಿ ಹೆಜ್ಜೆ ಹಾಕಲು ಕರೆ ನೀಡಿದರು.
‘ಬಸವಣ್ಣನವರ ಲೋಕ ವಿಮರ್ಶೆ’ ಕುರಿತು ಉಪನ್ಯಾಸ ನೀಡಿದ ಚಿಂತಕ ಡಾ.ಎಸ್ ಆರ್ ಪುರುಷೋತ್ತಮ ವಾಟಿಗಾರ್ ಮಾತನಾಡಿ ಸಾಮಾನ್ಯ ಜನರಿಂದ ಹಿಡಿದು ಅಸಮಾನ್ಯ ಜನರ ವರೆಗೆ ನಡೆ-ನುಡಿಯ ಅಸಮನಾತೆಯ ಸಾಮರಸ್ಯ ಎದ್ದು ಕಾಣುತ್ತಿದೆ.ಆದರೆ 12 ನೆಯ ಶತಮಾನದ ವಚನಕಾರರ ನುಡಿ-ನಡೆಯಲ್ಲಿ ಯಾವುದೇ ವ್ಯತ್ಯಾಸ ಕಾಣಸಿಗುವುದಿಲ್ಲ,ಆಡುವ ಮಾತುಗಳಲ್ಲಿ ಅನುಷ್ಠಾನ ಇಲ್ಲದೇ ಹೋದರೆ ಆ ಮಾತಿನ ಮೌಲ್ಯ ಕಳೆದು ಹೋಗುತ್ತದೆ, ಹೃದಯ ವೈಶ್ಯಾಲ್ಯತೆ ಇಲ್ಲದೇ ಹೋದರೆ ಮನುಷ್ಯತ್ವ ತೆರೆಯ ಮರೆಗೆ ಸರಿಯುತ್ತದೆ.ಸುಧಾರಣೆ ತನ್ನಿಂದಲೇ ಆಗಬೇಕೆಂದು ಬಸವಣ್ಣ ತನ್ನ ಹುಟ್ಟಿನ ಶ್ರೇಷ್ಠತೆಯನ್ನು ಅಲ್ಲಗಳೆದು ; ನಾನು ಹಾರವನೆಂದರೆ ನಮ್ಮ ಶರಣರು ನಗುವರಯ್ಯ ಎಂದು ತನ್ನನ್ನು ತಾನೇ ತುಚ್ಚೀಕರಿಸಿಕೊಳ್ಳುವರು ಬಸವಣ್ಣನವರ ಸಂದೇಶಗಳು ವಿಶ್ವ ವ್ಯಾಪ್ತಿಯಲ್ಲಿ ಅಸ್ತಿತ್ವದಲ್ಲಿವೆ.ದ್ವೇಷದಿಂದ ದ್ವೇಷವನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅಣ್ಣನವರು ಹೇಳಿದ್ದು ‘ ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ ಎಂದು,ಬಡತನ ಮತ್ತು ಸಿರಿತನ ಮನುಷ್ಯನ ಎರಡು ಆಯಾಮಗಳನ್ನು ಸೂಚಿಸುತ್ತದೆ.ಹಾಗಾಗಿ ಬಡತನ ಬಂದರೆ ಕುಗ್ಗಿದೆ ಸಿರಿತನ ಬಂದರೆ ಹಿಗ್ಗದೇ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮಗೆ ದಾರಿದೀಪವಾಗುವುದು ಬಸವಣ್ಣನವರ ವಚನಗಳು ಎಂದು ಅಭಿಪ್ರಾಯ ಪಟ್ಟರು.
ಶಿವಮೊಗ್ಗೆಯ ವಿಧಾನಪರಿಷತ್ ಸದಸ್ಯರು, ಉದ್ಯಮಿಗಳಾದ ಶ್ರೀ ಎಸ್.ರುದ್ರೇಗೌಡ್ರು ಮಾತನಾಡಿ, ತರಳಬಾಳು ಜಗದ್ಗುರು ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಗ್ರಾಮೀಣರ ಶಿಕ್ಷಣಕ್ಕೆ ಆಸರೆಯಾಗಿ ನಿಂತ ಮಹಾನ್ ಚೇತನರಾಗಿ ಹಳ್ಳಿ ಹಳ್ಳಿ ಗಳಲ್ಲಿ ನೂರಾರು ಶಾಲಾ ಕಾಲೇಜುಗಳನ್ನು ತೆರೆದು ಶಿಕ್ಷಣ ದಾಸೋಹಿಯಾಗಿ ಲಕ್ಷಾಂತರ ಜನರ ವಿಧ್ಯಾಭ್ಯಾಸಕ್ಕೆ ಕಾರಣರಾದರು. ಈಗಿನ ಜಗದ್ಗುರುವರ್ಯರಾದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಈ ದೇಶದ ಅಪ್ರತಿಮ ವಿದ್ವತ್ ಪಂಡಿತೋತ್ತಮರಾಗಿದ್ದರೂ ಸಹ ರೈತರ ಬಾಳಿಗೆ ಬೆಳಕಾಗುವ ಯಶಸ್ವಿ ಯೋಜನೆಗಳ ಸಾಕಾರ ಮೂರ್ತಿಯಾಗಿದ್ದು ರೈತ ಮೆಚ್ಚಿದ ,ದೇಶ ಒಪ್ಪಿದ ಗುರುವರ್ಯರಾಗಿದ್ದಾರೆ. ಅಂತೆಯೇ ಪ್ರಗತಿ ಪರ ಚಿಂತನೆಯ ಶರಣತತ್ವ ದಾಸೋಹಿಗಳಾದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಈ ನಾಡಿನ ಸಾಂಸ್ಕೃತಿಕ ಜಂಗಮರಾಗಿ ಶರಣರ ಆಶಯಗಳನ್ನು ಜನರ ಮನದಲ್ಲಿ ಬಿತ್ತುವ ಮೂಲಕ ಬದುಕಿನ ಅರ್ಥಪೂರ್ಣ ಹಸನತೆಗೆ ಕಾರಣೀಕೃತರಾಗಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ನೆರೆ ಸಂತ್ರಸ್ತರ ಪರಿಹಾರನಿಧಿಗೆ 10 ಸಾವಿರ ರೂಗಳ ದೇಣಿಗೆಯನ್ನು ಶ್ರೀಗಳಿಗೆ ಸಲ್ಲಿಸಿದರು.
ಸಂಜೆ ನಾಲ್ಕು ಗಂಟೆಯಿಂದಲೂ ಶ್ರೀ ಗಳ ಪಾದಯಾತ್ರೆ ಗ್ರಾಮದಲ್ಲಿ ಜರುಗಿತು.ಗ್ರಾಮವೂ ತಳಿರ ತೋರಣ ರಂಗೋಲಿಯಿಂದ ಅಲಂಕೃತಗೊಂಡು ಹಬ್ಬದ ವಾತಾವರಣವೇ ಮೈದಾಳಿತ್ತು. ವಚನ ಕಂಠಪಾಠ ಸ್ಪರ್ಧೆಯ ವಿಜೇತ ಮಕ್ಕಳಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ
ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕರಿಸಲಾಯಿತು.
ವೇದಿಕೆಯ ಮೇಲೆ ಕರ್ನಾಟಕ ಬೀಜ ನಿಗಮದ ನಿರ್ದೇಶಕರಾದ ಎಸ್.ರಾಜೇಂದ್ರ ಪ್ರಸಾದ್, ಡಾ.ಮೂಗಪ್ಪ,ವಸಂತ ಕೊಟ್ರೇಶ್,ಸಿದ್ದಲಿಂಗಪ್ಪ,ಸುಶೀಲಮ್ಮ ,ಬಿ.ಕೊಟ್ರೇಶ್ ಹಾಜರಿದ್ದರು.
ಶಿಕ್ಷಕ ಹೆಚ್ ನಾಗರಾಜ್ ಸ್ವಾಗತಿಸಿದರು,ಸಾಣೇಹಳ್ಳಿಯ ಶಿವ ಸಂಚಾರದ ತಂಡದ ಜ್ಯೋತಿ. ಕೆ,ದ್ರಾಕ್ಷಾಯಿಣಿ ಕೆ ಹಾಗೂ ನಾಗರಾಜ್ ಹೆಚ್.ಎಸ್ ಶರಣ್ ತಂಡದವರಿಂದ ವಚನ ಗಾಯನ ನಡೆಯಿತು. ಮಕ್ಕಳು ವಚನ ನೃತ್ಯ ರೂಪಕಗಳನ್ನು ಪ್ರಸ್ತುತಿ ಪಡಿಸಿದರು. ಅಧ್ಯಾಪಕ ಹೆಚ್.ಎಸ್ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.

ದಿನದ ಸುದ್ದಿ
ಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಬುಧುವಾರದಿಂದ ರೈತರಿಂದ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೆಕ್ಕೆಜೋಳ ಖರೀದಿ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ರೈತರಿಂದ ಎಕರೆಗೆ 12 ಕ್ವಿಂಟಾಲ್ ಹಾಗೂ ಗರಿಷ್ಠ 50 ಕ್ವಿಂಟಾಲ್ನಂತೆ ಮೆಕ್ಕೆಜೋಳ ಉತ್ಪನ್ನವನ್ನು ಬೆಂಬಲ ಬೆಲೆ ದರ ಪ್ರತಿ ಕ್ವಿಂಟಾಲ್ಗೆ ರೂ.2400.00 ರಂತೆ ಖರೀದಿಸಲಾಗುವುದು. ಮೆಕ್ಕೆಜೋಳ ಖರೀದಿದಾರರು ಡಿಸ್ಟಿಲರಿ ಮಾಲೀಕರಿಂದ ಮಾರಾಟದ ಮೊತ್ತ ಪಡೆದ ದಿನಾಂಕದಿಂದ ಮೂರು ದಿನಗಳಲ್ಲಿ ಸಂಬಂಧಪಟ್ಟ ರೈತರಿಗೆ ಡಿಬಿಟಿ ಮೂಲಕ ಪಾವತಿಸಲಾಗುವುದು. ಖರೀದಿ ಪ್ರಕ್ರಿಯೆಗೆ ಎನ್ಇಎಂಎಲ್ (NEML) ಸಂಸ್ಥೆಯ ತಂತ್ರಾಂಶ ಅಳವಡಿಸಿಕೊಂಡು ಸರ್ಕಾರದ ಪ್ರೂಟ್ಸ್ ಪೊರ್ಟಲ್(FRUITS Portal) ಮತ್ತು ಡಿಬಿಟಿ ಸಂಯೋಜನೆಯೊಂದಿಗೆ ರೈತರ ನೊಂದಣಿ ಕಾರ್ಯ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 730 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿಯನ್ನು ಹೊಂದಲಾಗಿದೆ. ರೈತರು ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಇದರ ಪ್ರಯೋಜನೆ ಪಡೆದುಕೊಳ್ಳುವಂತೆ ತಿಳಿಸಿದರು. ಸಹಕಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಮೆಕ್ಕೆಜೋಳ ಖರೀದಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನೀಡಬೇಕು. ಮೆಕ್ಕೆಜೋಳ ಖರೀದಿಯಲ್ಲಿ ಯಾವುದೇ ಗೊಂದಲ ಆಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಸಹಕಾರ ಇಲಾಖೆ ಉಪನಿಬಂಧಕ ಮಧು ಶ್ರೀನಿವಾಸ್, ಅಬಕಾರಿ ಇಲಾಖೆಯ ಉಪ ಆಯುಕ್ತ ಜುನೈದ್ , ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
~ಅನಿರೀಕ್ಷಿತ್ ನಾರಾಯಣ
ಕೆಲ ಮುನ್ನೆಚ್ಚರಿಕೆಯ ಅಂಶಗಳನ್ನು ಪಾಲಿಸುವುದರಿಂದ ಗ್ಯಾಸ್ ಗೀಸರ್ ನಿಂದ ಆಗುವ ಅಪಾಯವನ್ನು ತಡೆಗಟ್ಟಬಹುದು.
1. ಮೊದಲಿಗೆ ಇದು ಎಲ್ಲರಿಗೂ ಗೊತ್ತಿರುವ ವಿಷಯ. ಗ್ಯಾಸ್ ಗೀಸರ್ ಅನ್ನು ಬಳಸದಿದ್ದಾಗ ರೆಗ್ಯುಲೇಟರಿನಲ್ಲೇ ಆಫ್ ಮಾಡಿ ಗ್ಯಾಸ್ ಸರಬರಾಜನ್ನು ನಿಲ್ಲಿಸಬೇಕು. ಬೇಕೆಂದಾಗ ಮಾತ್ರ ಆನ್ ಮಾಡಿಕೊಳ್ಳಬೇಕು.
2. ನಿಮ್ಮ ಸ್ನಾನದ ಮನೆಯಲ್ಲಿ ಗ್ಯಾಸ್ ಗೀಸರ್ ಅನ್ನು ಅಳವಡಿಸಬೇಕೆಂದಿದ್ದರೆ ಅಲ್ಲಿ ಚೆನ್ನಾಗಿ ಗಾಳಿಯಾಡಲು ಅಗತ್ಯವಿದ್ದಷ್ಟು ಕಿಟಕಿ ಇರಲೇಬೇಕು. ಕೆಲ ಸ್ನಾನದ ಮನೆಗಳಲ್ಲಿ ಬರೀ ಬೆಳಕು ಬರಲಷ್ಟೇ ಗಾಜಿರುವ ಕಿಟಕಿ ಮಾಡಿರುತ್ತಾರೆ. ಅಂತಹ ಕಡೆಗಳಲ್ಲಿ ಗ್ಯಾಸ್ ಗೀಸರ್ ಅನ್ನು ಅಳವಡಿಸದಿರುವುದೇ ಉತ್ತಮ. ಸ್ನಾನದ ಮನೆ ಬಿಟ್ಟು ಹೊರಗೆ ಎಲ್ಲಾದರೂ ಗಾಳಿಯಾಡುವ ಕಡೆ ಗ್ಯಾಸ್ ಗೀಸರ್ ಅನ್ನು ಅಳವಡಿಸಿ ಅಲ್ಲಿಂದ ಬಿಸಿ ನೀರನ್ನು ಒಳಗೆ ತೆಗೆದುಕೊಳ್ಳುತ್ತೇನೆ ಎಂದರೆ ಕೊಂಚ inconvenience ಅನ್ನಿಸಿದರೂ ಹೆಚ್ಚು ಸುರಕ್ಷಿತ.
3. ಗ್ಯಾಸ್ ಗೀಜರ್ ಅನ್ನು ಸ್ನಾನದ ಮನೆಯೊಳಗೆ ಅಳವಡಿಸಿದರೆ, ಮೊದಲು ಬಾಗಿಲು ತೆರೆದಿಟ್ಟುಕೊಂಡೇ, ಬಿಸಿ ನೀರನ್ನು ಬಕೆಟ್ಟಿಗೆ ಬಿಟ್ಟುಕೊಂಡು ನಂತರ ಸ್ಥಾನಕ್ಕೆ ಹೋಗುವುದು ಒಳ್ಳೆಯದು. ಆಗ ಈ ಆತಂಕ ಇರುವುದಿಲ್ಲ.
4. ಈಗ ಮನೆ ಬಳಕೆಯ ಉಪಕರಣಗಳನ್ನು ಮಾರುವ ಅಂಗಡಿಗಳಲ್ಲಿ exhaust fan (ಗಾಳಿಯನ್ನು ಹೊರಹಾಕುವ fan) ದೊರಕುತ್ತದೆ. ಅದರ ಬೆಲೆ ಹೆಚ್ಚೆಂದರೆ ಒಂದು ಸಾವಿರ ರೂಪಾಯಿ ಅಷ್ಟೇ. ಬರೀ ಎರಡು ರೂಪಾಯಿಯ ಟ್ಯಾಗ್ ಬಳಸಿ ಅದನ್ನು ಎಲ್ಲಿ ಬೇಕೆಂದರಲ್ಲಿ (ಕಿಟಕಿಯ ಸರಳುಗಳಿಗೇ) ಎರಡೇ ನಿಮಿಷದಲ್ಲಿ ನಾವೇ install ಮಾಡಿಕೊಳ್ಳಬಹುದು. ಗ್ಯಾಸ್ ಗೀಸರ್ ON ಮಾಡಿದಾಗೆಲ್ಲ, Exhaust Fanಅನ್ನೂ ಆನ್ ಮಾಡಿಕೊಂಡರೆ ಗ್ಯಾಸ್ ಗೀಸರ್ ಹೊರ ಸೂಸಬಹುದಾದ ಕಾರ್ಬನ್ ಮಾನಾಕ್ಸೈಡ್ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಏಕೆಂದರೆ exhaust fan ಸ್ನಾನದ ಕೊಠಡಿ ಒಳಗಿನ ಗಾಳಿಯನ್ನೆಲ್ಲ ಹೊರಹಾಕುತ್ತಲೇ ಇರುತ್ತದೆ. ಅದರ ಮೂಲಕ ಕಾರ್ಬನ್ ಮಾನಾಕ್ಸೈಡ್ ಕೂಡ ಹೊರಹೋಗುತ್ತದೆ. ಜೊತೆಗೆ ಕೊಠಡಿಯ ವಾಯುಭಾರ ಕುಸಿತವಾದಂತೆಲ್ಲ ಸ್ವಚ್ಛ ಗಾಳಿ ತನ್ನಂತಾನೇ ಒಳಬರುತ್ತದೆ.
5. Carbon monoxide detector: ಮೇಲೆ ಹೇಳಿದಂತೆ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗುತ್ತಿದೆ ಅಂತ ಮನುಷ್ಯನ ಇಂದ್ರಿಯಗಳಿಗೆ ಗ್ರಹಿಸಲು ಸಾಧ್ಯವಿಲ್ಲ. ಆದರೆ ಇವುಗಳನ್ನು ಪತ್ತೆಹಚ್ಚಲೆಂದೆ ಕಾರ್ಬನ್ ಮಾನಾಕ್ಸೈಡ್ ಡಿಟೆಕ್ಟರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಾಧ್ಯವಾದಲ್ಲಿ ಇವುಗಳನ್ನು ಅಳವಡಿಸಿಕೊಂಡರೆ ಗಾಳಿಯಲ್ಲಿ ಕಾರ್ಬನ್ ಮಾನಾಕ್ಸೈಡ್ ಪತ್ತೆಯಾದ ತಕ್ಷಣ ಇವುಗಳು alarm ಕೂಗಿ ಎಚ್ಚರಿಸುತ್ತವೆ. ಆಗ ತಕ್ಷಣ ನಾವು ಕ್ರಮ ಕೈಗೊಳ್ಳಬಹುದು.
6. ಈ ವಿಷಯಗಳನ್ನು ಮುಖ್ಯವಾಗಿ ಮನೆಯ ದೊಡ್ಡವರು ತಿಳಿದುಕೊಂಡಿರಬೇಕು. ಚಿಕ್ಕ ಮಕ್ಕಳು ಸ್ನಾನಕ್ಕೆ ಹೋಗುವಾಗ ಅವರ ಪಾಡಿಗೆ ಅವರನ್ನು ಬಿಡುವ ಬದಲಿಗೆ, ತಾವೇ ನೀರು ಬಿಟ್ಟುಕೊಟ್ಟು ನಂತರ ಅವರನ್ನು ಸ್ನಾನಕ್ಕೆ ಕಳಿಸಬೇಕು.
7. ಒಂದು ಮನೆಯಿಂದ ಇನ್ನೊಂದು ಮನೆಗೆ ಶಿಫ್ಟ್ ಆಗುವಾಗ ನೀವಾಗಿಯೇ ಗ್ಯಾಸ್ ಗೀಜರ್ ಅನ್ನು ಅಳವಡಿಸುವುದರ ಬದಲಾಗಿ ಯಾರಾದರೂ professional ವ್ಯಕ್ತಿಗಳನ್ನೇ ನೆಚ್ಚಿಕೊಂಡರೆ ಒಳ್ಳೆಯದು. ಆಗ ಅವರು ಗೀಸರನ್ನು ಅಳವಡಿಸಬಹುದಾದ ಜಾಗದ ವೆಂಟಿಲೇಶನ್ ಅನ್ನು ಗಮನಿಸಿ ಅವರೇ ಸೂಕ್ತ ಸಲಹೆ ನೀಡುತ್ತಾರೆ.
8. Regular maintenance: ಗ್ಯಾಸ್ ಸಿಲೆಂಡರ್, ರೆಗ್ಯುಲೇಟರ್, ಗ್ಯಾಸ್ ಪೈಪ್ ಮತ್ತು ಗೀಸರನ್ನು ಆಗಾಗ ಗಮನಿಸುತ್ತ ಅಗತ್ಯ ಬಂದಲ್ಲಿ ಅವುಗಳನ್ನು ಬದಲಾಯಿಸಬೇಕು.
9. ಗ್ಯಾಸ್ ಗೀಸರ್ ಬಳಸುವಾಗ ಯಾವುದೇ ಅನುಮಾನ ಬಂದರೂ ಕೂಡಲೆ ಅದನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಆಗಲು ನಾವೇ ಏನಾದರೂ ಒಂದು ಮಾಡುವ ಬದಲು, ಅದನ್ನು ರಿಪೇರಿ ಮಾಡುವರಿಂದಲೇ ಸರಿಮಾಡಿಸುವುದು ಒಳ್ಳೆಯದು.
ಬರಹ ಕೃಪೆ : ಫೇಸ್ ಬುಕ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ6 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
-
ದಿನದ ಸುದ್ದಿ1 day agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 hours agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ

