ದಿನದ ಸುದ್ದಿ
ಈ ಹತ್ತು ಸಂಶೋಧನೆಗಳ ಇತಿಹಾಸ ತಿಳಿದರೆ ಅಚ್ಚರಿ ಪಡುತ್ತೀರಿ ?
ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವ ಈ 10 ಸಾಧನಗಳನ್ನು ಸಂಶೋಧಿಸಿದವರು ಮುಸ್ಲಿಮರು.
ಇಂದು ನಾವು ಜೀವಿಸುತ್ತಿರುವ ಪ್ರಪಂಚದಲ್ಲಿ ಅನೇಕ ಅನೇಕ ತಂತ್ರಜ್ಞಾನಗಳು ಬೆಳೆದು ನಿಂತಿದೆ. ತಂತ್ರಜ್ಞಾನ ಬೆಳೆದ ಹಾಗೆ ಮನುಷ್ಯನ ಜೀವನ ಕ್ರಮ ಬದಲಾಗ ತೊಡಗಿದೆ. ಈ ರೀತಿ ಬೆಳೆದು ನಿಂತ ತಂತ್ರಜ್ಞಾನದ ಹಿಂದೆ ಮುಸ್ಲಿಮರ ಕೊಡುಗೆ ಇದೆ ಎಂದ್ರೆ ನಂಬ್ತೀರಾ..? ಯಾಕೆ ನಂಬಲ್ವ…? ಹಾ… ನಂಬ್ಲೇ ಬೇಕು. ಯಾಕಂದ್ರೆ ಮುಸ್ಲಿಮರ ಸಂಶೋಧನೆ 1000 ವರ್ಷಗಳ ಇತಿಹಾಸವಿದೆ. ಮುಸ್ಲಿಮರು ಸಂಶೋಧಿಸಿದ ವಸ್ತುಗಳು ಇಂದು ಡೆವಲಪ್ ಆಗಿ ಕೆಲವೊಂದು ವಸ್ತುಗಳು ಇನ್ಯಾರೋ ಯುರೋಪಿಯನ್ ಸಂಶೋಧಕನ ಹೆಸರಿನೊಂದಿಗೆ ತಳಕು ಹಾಕಿಕೊಂಡಿದೆ. ಇವತ್ತು ನಾವು ನಿಮಗೆ ಮುಸ್ಲಿಮರು ಈ ಜಗತ್ತಿಗೆ ನೀಡಿದ ಇಂದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುವ 10 ವಸ್ತುಗಳನ್ನು ಪರಿಚಯ ಮಾಡಿಕೊಡಲಿದ್ದೇವೆ.
1.ಕಾಫಿ:
ಈ ಸಂಶೋಧನೆಗೆ 1200 ವರ್ಷಗಳ ಇತಿಹಾಸವಿದೆ. ಖಾಲಿದ್ ಎನ್ನುವ ಅರಬ್ ಹುಡುಗನೊಬ್ಬ ಇಥಿಯೋಪಿಯನ್ ಇಳಿಜಾರು ಪ್ರದೇಶಗಳಲ್ಲಿ ಆಡು ಮೇಯಿಸುತ್ತಿರುವಾಗ ಬೆಟ್ಟದ ತಪ್ಪಲಿನಲ್ಲಿ ಒಂದು ಬೀಜವು ದೊರೆಯಿತು. ಅದನ್ನು ಜಗಿದು ನೋಡಿದ ಆತನಿಗೆ ರುಚಿಸಿತು. ಬೀಜವನ್ನು ಮನೆಗೆ ಕೊಂಡು ಹೋಗಿ ನೀರಿನಲ್ಲಿ ಬೇಯಿಸಿ ಪ್ರಯೋಗ ನಡೆಸಿದಾಗ ಅದರ ಬೇಯಿಸಿದ ನೀರಿನ ರುಚಿ ಬಹಳ ಸ್ವಾದಿಷ್ಟವಾಗಿತ್ತು. ಕೊನೆಗೆ ಬೀಜವನ್ನು ಒಣಗಿಸಿ ಪುಡಿ ಮಾಡಿ ಪ್ರಯೋಗ ಮಾಡಿದ ಹೀಗೆ ಸಂಶೋಧಿಸಲ್ಪಟ್ಟ ಬೀಜವು “ಅಲ್-ಖವಾಹ್” ಎಂದು ಹೆಸರಾಯಿತು. ಇದುವೇ ಯುರೋಪ್ಗೆ ಕಾಲಿಟ್ಟಾಗ “ಕಾಫಿ” ಎಂದು ಪ್ರಸಿದ್ಧಿ ಪಡೆಯಿತು.
2. ಗಡಿಯಾರ
ನಮ್ಮ ಜೀವನವನ್ನು ಸ್ವಸ್ಥವಾಗಿ ಮುನ್ನಡೆಸಲು ನಮಗೆ ಇಂದು ಸಮಯ ಅತ್ಯಗತ್ಯವಾಗಿದೆ. ಇದನ್ನೂ ಕೂಡ ಎಂಟು ನೂರು ನೂರು ವರ್ಷಗಳ ಹಿಂದೆ ಮುಸ್ಲಿಮರು ಮಾಡಿದ್ದರು. ಆಗ್ನೇಯದ ಟರ್ಕಿಯ ಡಯಾರ್ಬಕೀರ್ ಎಂಬಲ್ಲಿ ಅಲ್-ಜಝಾರಿ ಎಂಬ ವ್ಯಕ್ತಿಯೊಬ್ಬರು ತುಂಬಾ ಧಾರ್ಮಿಕ ವ್ಯಕ್ತಿಯಾಗಿದ್ದರು. ಮತ್ತು ಅತ್ಯಂತ ಪರಿಣತ ಎಂಜಿನಿಯರ್ ಕೂಡ ಆಗಿದ್ದು, ಇವರು ಗಡಿಯಾರ ಎಂಬ ಸ್ವಯಂಚಾಲಿತ ಯಂತ್ರದ ಪರಿಕಲ್ಪನೆಗೆ ಜನ್ಮ ನೀಡಿದರು. 1206 ರ ಹೊತ್ತಿಗೆ ಅಲ್-ಜಝಾರಿ ಎಲ್ಲಾ ಆಕಾರಗಳ ಮತ್ತು ಗಾತ್ರಗಳ ಹಲವಾರು ಗಡಿಯಾರಗಳನ್ನು ಮಾಡಿದ್ದರು.
ಅಲ್ ಜಝಾರಿಯವರ ಗಡಿಯಾರ ಸಂಶೋಧನೆಗೆ ಪ್ರೇರಣೆಯಾದದ್ದು ಪ್ರತಿದಿನ ಮುಸ್ಲಿಮರು ಕಡ್ಡಾಯವಾಗಿ ನಿರ್ವಹಿಸುವ ಐದು ಹೊತ್ತಿನ ಪ್ರಾರ್ಥನೆಯ ಸಮಯವನ್ನು ಅರಿಯುವುದಾಗಿತ್ತು. ಸುದೀರ್ಘ ಸಂಶೋಧನೆಯ ನಂತರ ಒಂದು ಉತ್ತಮ ಗಡಿಯಾರವನ್ನು ನಿರ್ಮಿಸುವಲ್ಲಿ ಜಝಾರಿ ಯಶಸ್ವಿಯಾಗಿದ್ದರು.
3.ಕ್ಯಾಮರಾ
ಇಬ್ನ್ ಅಲ್-ಹೈಥಮ್ ದೃಗ್ವಿಜ್ಞಾನವನ್ನು ಸಂಶೋಧಿಸಿದರು. ಕಣ್ಣಿನಿಂದ ಹೊರಸೂಸುವ ಅದೃಶ್ಯವಾದ ಬೆಳಕು ದೃಷ್ಟಿಗೆ ಕಾರಣವಾಗಿದೆಯೆಂಬ ಗ್ರೀಕ್ ಕಲ್ಪನೆಯನ್ನು ಅವರು ತಿರಸ್ಕರಿಸಿದರು. ಇದರ ಬದಲಾಗಿ ಬೆಳಕಿನಿಂದ ದೃಷ್ಟಿಯು ಉಂಟಾಗುತ್ತದೆ. ಬೆಳಕು ಒಂದು ವಸ್ತುವನ್ನು ಪ್ರತಿಫಲಿಸುತ್ತದೆ ಮತ್ತು ಕಣ್ಣಿನ ಅಕ್ಷಿ ಪಟಲವನ್ನು ಪ್ರವೇಶಿಸುತ್ತದೆ. ಅಕ್ಷಿ ಪಟಲದ ತೆರೆಯಲ್ಲಿ ವಸ್ತುವಿನ ಆಕಾರವು ಮೂಡುತ್ತದೆ ಎಂದು ದೃಷ್ಟಿಯನ್ನು ಸರಿಯಾಗಿ ವಿಶ್ಲೇಷಿಸಿದರು.ಒಂದು ಬದಿಯಲ್ಲಿ ಡಾರ್ಕ್ ರೂಮ್ ನಿಂದ ಒಂದು ಪಿನ್ ಹೋಲ್(ರಂಧ್ರ) ನ ಮೂಲಕ ಬೆಳಕನ್ನು ಇನ್ನೊಂದು ಬದಿಯಲ್ಲಿ ಬಿಳಿ ಹಾಳೆಯ ಮೇಲೆ ಹಾಯಿಸಿ ಅವರು ತನ್ನ ಸಿದ್ಧಾಂತಕ್ಕೆ ಪುರಾವೆಯನ್ನು ನೀಡಿದರು.
ಈ ಪ್ರಯೋಗದಲ್ಲಿ ಬೆಳಕು ರಂಧ್ರದ ಮೂಲಕ ಬಂದಿತು ಮತ್ತು ಬಿಳಿ ಹಾಳೆಯಲ್ಲಿ ಕೋಣೆಯ ಹೊರಗಡೆ ಇರುವ ವಸ್ತುಗಳ ವಿಲೋಮ ಚಿತ್ರವೊಂದನ್ನು ಯೋಜಿಸಿತು. ಅವರು ಇದನ್ನು “ಕಮರಾ” ಎಂದು ಕರೆದರು. ಇದು ವಿಶ್ವದ ಮೊದಲ ಬಿಂಬಗ್ರಾಹಿ ಕ್ಯಾಮರಾ ಆಗಿತ್ತು.
4.ಶುಚಿತ್ವ ಸಾಧನಗಳು
ಶುಚಿತ್ವವು ಮುಸ್ಲಿಮರ ವಿಶ್ವಾಸದ ಭಾಗವಾಗಿದೆ. 10 ನೆಯ ಶತಮಾನದ ಇಸ್ಲಾಮಿಕ್ ಜಗತ್ತಿನಲ್ಲಿ ಟಾಯ್ಲೆಟ್ ಬಾತ್ರೂಮ್ ಮತ್ತು ನೈರ್ಮಲ್ಯ ಅಭ್ಯಾಸಗಳು ಕಂಡುಬರುವ ಉತ್ಪನ್ನಗಳ ಸಂಶೋಧನೆ ನಡೆಯಿತು. 13 ನೇ ಶತಮಾನದಲ್ಲಿ, ಗಡಿಯಾರ ಸಂಶೋಧಿಸಿದ ಅದೇ ಇಂಜಿನಿಯರ್ ಅಲ್-ಜಝಾರಿ, “ವುದು”(ಅಂಗಶುದ್ಧಿ) ಯಂತ್ರಗಳನ್ನು ಒಳಗೊಂಡಂತೆ ಯಾಂತ್ರಿಕ ಸಾಧನಗಳನ್ನು ವಿವರಿಸುವ ಒಂದು ಎಂಜಿನಿಯರಿಂಗ್ ಸಂಸೋಧನೆಯ ಪುಸ್ತಕವನ್ನು ಬರೆದರು.
ಈ ವುದೂ ಯಂತ್ರವು ಒಂದು ಮೊಬೈಲ್ ಡಿವೈಸ್(ಸ್ಥಳಾಂತರಿಸ ಬಹುದಾದ ವಸ್ತು) ಆಗಿತ್ತು. ಅದನ್ನು ಯಾರಾದರೂ ಅತಿಥಿ ಇದ್ದರೆ ಅವರಿಗಾಗಿ ತೆಗೆದು ಕೊಂಡು ಹೋಗಲಾಗುತ್ತಿತ್ತು. ಅತಿಥಿ ಯಂತ್ರದ ತಲೆಯನ್ನು ಸ್ಪರ್ಶಿಸಿದಾಗ ಎಂಟು ಸಣ್ಣ ರಂಧ್ರಗಳಲ್ಲಿ ನೀರು ಬರುತ್ತಿತ್ತು. ಶುದ್ಧೀಕರಣಕ್ಕಾಗಿ ಸಾಕಷ್ಟು ನೀರು ನೀಡುವುದು. ಮತ್ತು ನೀರನ್ನು ಮಿತ ಬಳಕೆ ಮಾಡಿ ಸಂರಕ್ಷಿಸುವುದು ಇದರ ಉದ್ದೇಶವಾಗಿತ್ತು. ಮುಸ್ಲಿಮರು ನಿಜವಾಗಿಯೂ ಸ್ವಚ್ಛವಾಗಿರಲು ಬಯಸುತ್ತಾರೆ ಮತ್ತು ನೀರಿನಿಂದ ಮಾತ್ರ ತೊಳೆದರೆ ಶುದ್ಧಿಯಾಗಲಾರದು ಎಂಬುದನ್ನು ಅರಿತು, ಅವರು ಸಾಬೂನು ಕಂಡು ಹಿಡಿದರು. ಇದಕ್ಕಾಗಿ ಆಲಿವ್ ಎಣ್ಣೆಯನ್ನು “ಅಲ್-ಖಲಿ” ಎಂಬ ಉಪ್ಪು-ತರಹದ ಪದಾರ್ಥದೊಂದಿಗೆ ಮಿಶ್ರ ಮಾಡಿದರು. ನಂತರ ಅದನ್ನು ಸರಿಯಾದ ಮಿಶ್ರಣವನ್ನು ಸಾಧಿಸಲು ಬೇಯಿಸಿದರು. ಅದು ಗಟ್ಟಿಯಾದ ನಂತರ ಸ್ನಾನಗೃಹಗಳಲ್ಲಿ ಬಳಸಿದರು.
5.ಸುಗಂಧ ದ್ರವ್ಯ
ಅಲ್-ಕಿಂಡಿ ಅವರು ಸುಗಂಧ ದ್ಯವ್ಯದ ಬಗ್ಗೆ ಒಂದು ಪುಸ್ತವಕವನ್ನು ಬರೆದರು. ಇದು ಇಂಗ್ಲೀಷ್ ನಲ್ಲಿ, “ಕೆಮಿಸ್ಟ್ರಿ ಆಫ್ ಪರ್ಫ್ಯೂಮ್ ಅಂಡ್ ಡಿಸ್ಟೈಲೇಶನ್ಸ್” ಎಂಬ ಹೆಸರಿನಲ್ಲಿ ಲಭ್ಯವಿದೆ. ಸುಗಂಧ ತಯಾರಿಕೆಯ ಶತಮಾನಗಳ-ಹಳೆಯ ಸಂಪ್ರದಾಯವು ಮುಸ್ಲಿಂ ವಿಜ್ಞಾನಿಗಳು ಮತ್ತು ಅವರ ಶುದ್ಧೀಕರಣದ ವಿಧಾನಗಳಿಂದ ಸಾಧ್ಯವಾಯಿ. ಕಿಂಡಿಯವರ ಪುಸ್ತಕದಲ್ಲಿ ಸಸ್ಯಗಳು ಮತ್ತು ಹೂವುಗಳನ್ನು ಬಟ್ಟಿ ಇಳಿಸಿ ಸುಗಂಧದ್ರವ್ಯ ಮತ್ತು ಔಷಧಿಗಳನ್ನು ತಯಾರಿಸುವ ವಿಧಾನಗಳನ್ನು ವಿವರಿಸಲಾಗಿತ್ತು.
6.ವಿಶ್ವ ವಿದ್ಯಾನಿಲಯಗಳು
ಜ್ಞಾನದ ಅನ್ವೇಷಣೆ ಮುಸ್ಲಿಮರ ಹೃದಯಕ್ಕೆ ಹತ್ತಿರದಲ್ಲಿದೆ. ಕುರ್ಆನ್ನ ಜ್ಞಾನವನ್ನು ಸಂಪಾದಿಸುವುದು ಅತೀ ಅವಶ್ಯಕವೆಂದು ಮುಸ್ಲಿಮರಿಗೆ ಆಜ್ಞಾಪಿಸಲಾಗಿದೆ. ಆದ್ದರಿಂದ ಫಾತಿಮಾ ಅಲ್ ಫಿಹ್ರಿ ಎಂಬ ಮಹಿಳೆಯು ಮೊರಕ್ಕೋದ ಫೆಜ್ ಎಂಬಲ್ಲಿ ಮದರಸಾ ರೂಪದ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸ್ಥಾಪನೆಯು ಅತೀ ಶೀಘ್ರದಲ್ಲೇ ಅತೀ ದೊಡ್ಡ ಧಾರ್ಮಿಕ ಶಿಕ್ಷಣ ಮತ್ತು ರಾಜಕೀಯ ಚರ್ಚೆಗಾಗಿ ಒಂದು ಸ್ಥಳವಾಗಿ ಅಭಿವೃದ್ಧಿ ಹೊಂದಿತು. ಕ್ರಮೇಣ ತನ್ನ ಶಿಕ್ಷಣವನ್ನು ಎಲ್ಲಾ ವಿಷಯಗಳಲ್ಲೂ, ವಿಶೇಷವಾಗಿ ನೈಸರ್ಗಿಕ ವಿಜ್ಞಾನಗಳಿಗೆ ವಿಸ್ತರಿಸಿತು. ಆದ್ದರಿಂದ ಇದು ಇತಿಹಾಸದಲ್ಲಿನ ಮೊದಲ ವಿಶ್ವವಿದ್ಯಾನಿಲಯ ಎಂದು ಪ್ರಸಿದ್ಧಿ ಪಡೆಯಿತು. ಫೆಜ್ನಲ್ಲಿನ “ಅಲ್-ಖರವಾಯಿನ್” ವಿಶ್ವ ವಿದ್ಯಾನಿಲಯ ಇವತ್ತಿಗೂ ಕಾರ್ಯಾಚರಿಸುತ್ತಿದೆ.
7.ಹಾರುವ ಯಂತ್ರ (ವಿಮಾನ)
ಸ್ಪೇನ್ ನ ಅಬ್ಬಾಸ್ ಇಬ್ನ್ ಫಿರ್ನಾಸ್ ಹಾರುವ ಯಂತ್ರವನ್ನು ನಿರ್ಮಿಸಲು ಮತ್ತು ವಾಸ್ತವವಾಗಿ ಹಾರಲು ನಿಜವಾದ ಪ್ರಯತ್ನವನ್ನು ಮಾಡಿದ ಮೊದಲ ವ್ಯಕ್ತಿ. 9 ನೆಯ ಶತಮಾನದಲ್ಲಿ ಅವರು ಪಕ್ಷಿ ವೇಷಭೂಷಣವನ್ನು ಹೋಲುವ ರೆಕ್ಕೆಯ ಉಪಕರಣವನ್ನು ವಿನ್ಯಾಸಗೊಳಿಸಿದರು. ಸ್ಪೇನ್ನ ಕಾರ್ಡೊಬ ಬಳಿ ತನ್ನ ಅತ್ಯಂತ ಪ್ರಸಿದ್ಧವಾದ ಪ್ರಯೋಗದಲ್ಲಿ, ಫಿರ್ನಾಸ್ ಕೆಲವು ಕ್ಷಣಗಳಿಗಾಗಿ ಮೇಲ್ಮುಖವಾಗಿ ಹಾರಿಹೋದರು. ಆದರೆ ಪಕ್ಷಿಗಳು ತಮ್ಮ ಕೊಕ್ಕಿನ ಸಹಾಯದಿಂದ ಇಳಿಯುತ್ತದೆ ಎಂಬುದನ್ನು ಅಬ್ಬಾಸ್ ಇಬ್ನ್ ಫಿರ್ನಾಸ್ ಗೆ ತಿಳಿದಿರಲಿಲ್ಲ. ಇದರಿಂದಾಗಿ ಅವರು ಅವೈಜ್ಞಾನಿಕವಾಗಿ ಕೆಳಗಿಳಿದು ಬೆನ್ನು ಮೂಳೆ ಮುರಿದು ಕೊಂಡರು.
8.ಶಸ್ತ್ರಚಿಕಿತ್ಸಾ ಉಪಕರಣಗಳು
ನಾವು 10 ನೆಯ ಶತಮಾನದಲ್ಲಿ ಪ್ರಯಾಣಿಸಿದರೆ, ಪಾಶ್ಚಾತ್ಯರಿಂದ “ಅಬುಲ್ಕಾಸಿಸ್” ಎಂದು ಕರೆಯಲ್ಪಡುವ ವ್ಯಕ್ತಿ ಶಸ್ತ್ರಚಿಕಿತ್ಸಾ ಉಪಕರಣಗಳ ಪಿತಾಮಹ. ಇವರ ಪೂರ್ಣ ಹೆಸರು “ಅಬುಲ್ ಖಾಸಿಮ್ ಖಲಾಫ್ ಇಬ್ನ್ ಅಲ್-ಅಬಾದ್ ಅಲ್-ಝಹ್ರಾವಿ”. ಇವರು ಬರೆದ “ಅಲ್-ತದ್ರಿಫ್” ಗ್ರಂಥವನ್ನು ಆ ಕಾಲದಲ್ಲಿ ಯುರೋಪಿಯನ್ನರು “ಮೆಡಿಕಲ್ ಎನ್ಸೈಕ್ಲೋಪೀಡಿಯ” ಎಂದು ಕರೆದರು. ಇದು ಸುಮಾರು ಇನ್ನೂರಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಪರಿಚಯಿಸಿದ ಒಂದು ದಿಗ್ಭ್ರಮೆಗೊಳಿಸುವ ಮಾಹಿತಿಗಳನ್ನು ಹೊಂದಿತ್ತು. ಆ ಕಾಲದಲ್ಲಿ ಶಸ್ತ್ರ ಚಿಕಿತ್ಸಾ ಪದ್ಧತಿ ಇತ್ತಾದರೂ ಅದಕ್ಕಾಗಿ ಉಪರಕರಣಗಳನ್ನು ಬಳಸುವ ಇವರ ಸಂಶೋಧನೆ ಪ್ರಸಿದ್ದಿಯಾಯಿತು.
9.ಭೂಪಟ ಮತ್ತು ದಿಕ್ಸೂಚಿ
ಇವತ್ತು ಗೂಗಲ್ ಮ್ಯಾಪ್ ಮುಂತಾದ ಟೆಕ್ನಾಲಜಿಗಳು ಅಭಿವೃದ್ಧಿ ಹೊಂದಿದೆಯಾದರೂ, ಹಿಂದಿನ ಕಾಲದಲ್ಲಿ ಮಣ್ಣಿನ ಫಲಕಗಳ ಮೇಲೆ ಭೂಪಟದ ಚಿತ್ರವನ್ನು ಬರೆದು ಅದನ್ನು ಮಾರ್ಗ ಸೂಚಿಯಾಗಿ ಬಳಸುತ್ತಿದ್ದರು. 3,500 ವರ್ಷಗಳ ಹಿಂದಿನಿಂದಲೂ ಇದನ್ನು ಬಳಸಲಾಗುತ್ತಿತ್ತು. ತದನಂತರ ಪೇಪರ್ ಟೆಕ್ನಾಲಜಿ ಅಭಿವೃದ್ಧಿಯಾದ ನಂತರ ಪೇಪರ್ ಹಾಳೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಆದರೆ ಎಲ್ಲಾ ಕಾಲದಲ್ಲೂ ಭೂಪಟ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದವರು ಮುಸ್ಲಿಮರು ಎಂಬುದು ಗಮನಾರ್ಹ.
ಮುಸ್ಲಿಮರು ವ್ಯಾಪಾರಕ್ಕಾಗಿ ಮತ್ತು ಅವರ ಧಾರ್ಮಿಕ ಕಾರಣಗಳಿಗಾಗಿ ತಮ್ಮ ಮನೆಗಳನ್ನು ಬಿಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಜಗತ್ತಿನ ವಿವಿಧ ಪ್ರದೇಶಗಳ ಮಾರ್ಗವನ್ನು ಕಂಡುಹಿಡಿಯಲು ಪ್ರಾರಂಭಿಸಿದರು. ಇದಕ್ಕಾಗಿ ಭೂಪಟಗಳ ಬಳಕೆ ಮಾಡಿದರು ನಂತರ ಜಲಮಾರ್ಗಗಳ ಅನ್ವೇಷಣೆಗೆ ದಿಕ್ಸೂಚಿಯನ್ನು ಅಭಿವೃದ್ಧಿ ಪಡಿಸಿದರು.
10.ಅಲ್ಜೀಬ್ರಾ (ಬೀಜ ಗಣಿತ)
“ಅಲ್ಜೀಬ್ರಾ” ಎಂಬ ಪದವು ಪರ್ಷಿಯನ್ ಗಣಿತ ಶಾಸ್ತ್ರಜ್ಞ 9 ನೇ ಶತಮಾನದ ಪ್ರಸಿದ್ಧವಾದ “ಕಿಟಾಬ್ ಅಲ್-ಜಬ್ ವಾ ಲಾ-ಮುಗಾಬಲಾ” ಎಂಬ ಶೀರ್ಷಿಕೆಯಿಂದ ಬಂದಿದೆ, ಇದು ಸ್ಥೂಲವಾಗಿ “ದಿ ಬುಕ್ ಆಫ್ ರೀಸನಿಂಗ್ ಅಂಡ್ ಬ್ಯಾಲೆನ್ಸಿಂಗ್” ಎಂದು ಭಾಷಾಂತರಿಸುತ್ತದೆ. ಆಲ್-ಖ್ವಾರಿಜ್ಮಿ ಬೀಜಗಣಿತದ ಪ್ರಾರಂಭವನ್ನು ಪರಿಚಯಿಸುತ್ತಾನೆ. ಈ ಹೊಸ ಕಲ್ಪನೆಯು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಾಸ್ತವವಾಗಿ, ಇದು ಗಣಿತಶಾಸ್ತ್ರದ ಗ್ರೀಕ್ ಪರಿಕಲ್ಪನೆಯಿಂದ ಒಂದು ಕ್ರಾಂತಿಕಾರಿ ಚಲನೆಯಾಗಿತ್ತು, ಇದು ಮೂಲಭೂತವಾಗಿ ಜ್ಯಾಮಿತಿಯನ್ನು ಆಧರಿಸಿದೆ. ಗಣಿತಜ್ಞ ಅಲ್-ಖ್ವಾರಿಜ್ಮಿಯು ಒಂದು ಸಂಖ್ಯೆಯನ್ನು ಅಧಿಕಾರಕ್ಕೆ ಏರಿಸುವ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ವ್ಯಕ್ತಿ.
ಸಂಗ್ರಹ

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ5 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ1 day ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ18 hours ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ