ದಿನದ ಸುದ್ದಿ
ಈ ಹತ್ತು ಸಂಶೋಧನೆಗಳ ಇತಿಹಾಸ ತಿಳಿದರೆ ಅಚ್ಚರಿ ಪಡುತ್ತೀರಿ ?
ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವ ಈ 10 ಸಾಧನಗಳನ್ನು ಸಂಶೋಧಿಸಿದವರು ಮುಸ್ಲಿಮರು.
ಇಂದು ನಾವು ಜೀವಿಸುತ್ತಿರುವ ಪ್ರಪಂಚದಲ್ಲಿ ಅನೇಕ ಅನೇಕ ತಂತ್ರಜ್ಞಾನಗಳು ಬೆಳೆದು ನಿಂತಿದೆ. ತಂತ್ರಜ್ಞಾನ ಬೆಳೆದ ಹಾಗೆ ಮನುಷ್ಯನ ಜೀವನ ಕ್ರಮ ಬದಲಾಗ ತೊಡಗಿದೆ. ಈ ರೀತಿ ಬೆಳೆದು ನಿಂತ ತಂತ್ರಜ್ಞಾನದ ಹಿಂದೆ ಮುಸ್ಲಿಮರ ಕೊಡುಗೆ ಇದೆ ಎಂದ್ರೆ ನಂಬ್ತೀರಾ..? ಯಾಕೆ ನಂಬಲ್ವ…? ಹಾ… ನಂಬ್ಲೇ ಬೇಕು. ಯಾಕಂದ್ರೆ ಮುಸ್ಲಿಮರ ಸಂಶೋಧನೆ 1000 ವರ್ಷಗಳ ಇತಿಹಾಸವಿದೆ. ಮುಸ್ಲಿಮರು ಸಂಶೋಧಿಸಿದ ವಸ್ತುಗಳು ಇಂದು ಡೆವಲಪ್ ಆಗಿ ಕೆಲವೊಂದು ವಸ್ತುಗಳು ಇನ್ಯಾರೋ ಯುರೋಪಿಯನ್ ಸಂಶೋಧಕನ ಹೆಸರಿನೊಂದಿಗೆ ತಳಕು ಹಾಕಿಕೊಂಡಿದೆ. ಇವತ್ತು ನಾವು ನಿಮಗೆ ಮುಸ್ಲಿಮರು ಈ ಜಗತ್ತಿಗೆ ನೀಡಿದ ಇಂದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುವ 10 ವಸ್ತುಗಳನ್ನು ಪರಿಚಯ ಮಾಡಿಕೊಡಲಿದ್ದೇವೆ.
1.ಕಾಫಿ:
ಈ ಸಂಶೋಧನೆಗೆ 1200 ವರ್ಷಗಳ ಇತಿಹಾಸವಿದೆ. ಖಾಲಿದ್ ಎನ್ನುವ ಅರಬ್ ಹುಡುಗನೊಬ್ಬ ಇಥಿಯೋಪಿಯನ್ ಇಳಿಜಾರು ಪ್ರದೇಶಗಳಲ್ಲಿ ಆಡು ಮೇಯಿಸುತ್ತಿರುವಾಗ ಬೆಟ್ಟದ ತಪ್ಪಲಿನಲ್ಲಿ ಒಂದು ಬೀಜವು ದೊರೆಯಿತು. ಅದನ್ನು ಜಗಿದು ನೋಡಿದ ಆತನಿಗೆ ರುಚಿಸಿತು. ಬೀಜವನ್ನು ಮನೆಗೆ ಕೊಂಡು ಹೋಗಿ ನೀರಿನಲ್ಲಿ ಬೇಯಿಸಿ ಪ್ರಯೋಗ ನಡೆಸಿದಾಗ ಅದರ ಬೇಯಿಸಿದ ನೀರಿನ ರುಚಿ ಬಹಳ ಸ್ವಾದಿಷ್ಟವಾಗಿತ್ತು. ಕೊನೆಗೆ ಬೀಜವನ್ನು ಒಣಗಿಸಿ ಪುಡಿ ಮಾಡಿ ಪ್ರಯೋಗ ಮಾಡಿದ ಹೀಗೆ ಸಂಶೋಧಿಸಲ್ಪಟ್ಟ ಬೀಜವು “ಅಲ್-ಖವಾಹ್” ಎಂದು ಹೆಸರಾಯಿತು. ಇದುವೇ ಯುರೋಪ್ಗೆ ಕಾಲಿಟ್ಟಾಗ “ಕಾಫಿ” ಎಂದು ಪ್ರಸಿದ್ಧಿ ಪಡೆಯಿತು.
2. ಗಡಿಯಾರ
ನಮ್ಮ ಜೀವನವನ್ನು ಸ್ವಸ್ಥವಾಗಿ ಮುನ್ನಡೆಸಲು ನಮಗೆ ಇಂದು ಸಮಯ ಅತ್ಯಗತ್ಯವಾಗಿದೆ. ಇದನ್ನೂ ಕೂಡ ಎಂಟು ನೂರು ನೂರು ವರ್ಷಗಳ ಹಿಂದೆ ಮುಸ್ಲಿಮರು ಮಾಡಿದ್ದರು. ಆಗ್ನೇಯದ ಟರ್ಕಿಯ ಡಯಾರ್ಬಕೀರ್ ಎಂಬಲ್ಲಿ ಅಲ್-ಜಝಾರಿ ಎಂಬ ವ್ಯಕ್ತಿಯೊಬ್ಬರು ತುಂಬಾ ಧಾರ್ಮಿಕ ವ್ಯಕ್ತಿಯಾಗಿದ್ದರು. ಮತ್ತು ಅತ್ಯಂತ ಪರಿಣತ ಎಂಜಿನಿಯರ್ ಕೂಡ ಆಗಿದ್ದು, ಇವರು ಗಡಿಯಾರ ಎಂಬ ಸ್ವಯಂಚಾಲಿತ ಯಂತ್ರದ ಪರಿಕಲ್ಪನೆಗೆ ಜನ್ಮ ನೀಡಿದರು. 1206 ರ ಹೊತ್ತಿಗೆ ಅಲ್-ಜಝಾರಿ ಎಲ್ಲಾ ಆಕಾರಗಳ ಮತ್ತು ಗಾತ್ರಗಳ ಹಲವಾರು ಗಡಿಯಾರಗಳನ್ನು ಮಾಡಿದ್ದರು.
ಅಲ್ ಜಝಾರಿಯವರ ಗಡಿಯಾರ ಸಂಶೋಧನೆಗೆ ಪ್ರೇರಣೆಯಾದದ್ದು ಪ್ರತಿದಿನ ಮುಸ್ಲಿಮರು ಕಡ್ಡಾಯವಾಗಿ ನಿರ್ವಹಿಸುವ ಐದು ಹೊತ್ತಿನ ಪ್ರಾರ್ಥನೆಯ ಸಮಯವನ್ನು ಅರಿಯುವುದಾಗಿತ್ತು. ಸುದೀರ್ಘ ಸಂಶೋಧನೆಯ ನಂತರ ಒಂದು ಉತ್ತಮ ಗಡಿಯಾರವನ್ನು ನಿರ್ಮಿಸುವಲ್ಲಿ ಜಝಾರಿ ಯಶಸ್ವಿಯಾಗಿದ್ದರು.
3.ಕ್ಯಾಮರಾ
ಇಬ್ನ್ ಅಲ್-ಹೈಥಮ್ ದೃಗ್ವಿಜ್ಞಾನವನ್ನು ಸಂಶೋಧಿಸಿದರು. ಕಣ್ಣಿನಿಂದ ಹೊರಸೂಸುವ ಅದೃಶ್ಯವಾದ ಬೆಳಕು ದೃಷ್ಟಿಗೆ ಕಾರಣವಾಗಿದೆಯೆಂಬ ಗ್ರೀಕ್ ಕಲ್ಪನೆಯನ್ನು ಅವರು ತಿರಸ್ಕರಿಸಿದರು. ಇದರ ಬದಲಾಗಿ ಬೆಳಕಿನಿಂದ ದೃಷ್ಟಿಯು ಉಂಟಾಗುತ್ತದೆ. ಬೆಳಕು ಒಂದು ವಸ್ತುವನ್ನು ಪ್ರತಿಫಲಿಸುತ್ತದೆ ಮತ್ತು ಕಣ್ಣಿನ ಅಕ್ಷಿ ಪಟಲವನ್ನು ಪ್ರವೇಶಿಸುತ್ತದೆ. ಅಕ್ಷಿ ಪಟಲದ ತೆರೆಯಲ್ಲಿ ವಸ್ತುವಿನ ಆಕಾರವು ಮೂಡುತ್ತದೆ ಎಂದು ದೃಷ್ಟಿಯನ್ನು ಸರಿಯಾಗಿ ವಿಶ್ಲೇಷಿಸಿದರು.ಒಂದು ಬದಿಯಲ್ಲಿ ಡಾರ್ಕ್ ರೂಮ್ ನಿಂದ ಒಂದು ಪಿನ್ ಹೋಲ್(ರಂಧ್ರ) ನ ಮೂಲಕ ಬೆಳಕನ್ನು ಇನ್ನೊಂದು ಬದಿಯಲ್ಲಿ ಬಿಳಿ ಹಾಳೆಯ ಮೇಲೆ ಹಾಯಿಸಿ ಅವರು ತನ್ನ ಸಿದ್ಧಾಂತಕ್ಕೆ ಪುರಾವೆಯನ್ನು ನೀಡಿದರು.
ಈ ಪ್ರಯೋಗದಲ್ಲಿ ಬೆಳಕು ರಂಧ್ರದ ಮೂಲಕ ಬಂದಿತು ಮತ್ತು ಬಿಳಿ ಹಾಳೆಯಲ್ಲಿ ಕೋಣೆಯ ಹೊರಗಡೆ ಇರುವ ವಸ್ತುಗಳ ವಿಲೋಮ ಚಿತ್ರವೊಂದನ್ನು ಯೋಜಿಸಿತು. ಅವರು ಇದನ್ನು “ಕಮರಾ” ಎಂದು ಕರೆದರು. ಇದು ವಿಶ್ವದ ಮೊದಲ ಬಿಂಬಗ್ರಾಹಿ ಕ್ಯಾಮರಾ ಆಗಿತ್ತು.
4.ಶುಚಿತ್ವ ಸಾಧನಗಳು
ಶುಚಿತ್ವವು ಮುಸ್ಲಿಮರ ವಿಶ್ವಾಸದ ಭಾಗವಾಗಿದೆ. 10 ನೆಯ ಶತಮಾನದ ಇಸ್ಲಾಮಿಕ್ ಜಗತ್ತಿನಲ್ಲಿ ಟಾಯ್ಲೆಟ್ ಬಾತ್ರೂಮ್ ಮತ್ತು ನೈರ್ಮಲ್ಯ ಅಭ್ಯಾಸಗಳು ಕಂಡುಬರುವ ಉತ್ಪನ್ನಗಳ ಸಂಶೋಧನೆ ನಡೆಯಿತು. 13 ನೇ ಶತಮಾನದಲ್ಲಿ, ಗಡಿಯಾರ ಸಂಶೋಧಿಸಿದ ಅದೇ ಇಂಜಿನಿಯರ್ ಅಲ್-ಜಝಾರಿ, “ವುದು”(ಅಂಗಶುದ್ಧಿ) ಯಂತ್ರಗಳನ್ನು ಒಳಗೊಂಡಂತೆ ಯಾಂತ್ರಿಕ ಸಾಧನಗಳನ್ನು ವಿವರಿಸುವ ಒಂದು ಎಂಜಿನಿಯರಿಂಗ್ ಸಂಸೋಧನೆಯ ಪುಸ್ತಕವನ್ನು ಬರೆದರು.
ಈ ವುದೂ ಯಂತ್ರವು ಒಂದು ಮೊಬೈಲ್ ಡಿವೈಸ್(ಸ್ಥಳಾಂತರಿಸ ಬಹುದಾದ ವಸ್ತು) ಆಗಿತ್ತು. ಅದನ್ನು ಯಾರಾದರೂ ಅತಿಥಿ ಇದ್ದರೆ ಅವರಿಗಾಗಿ ತೆಗೆದು ಕೊಂಡು ಹೋಗಲಾಗುತ್ತಿತ್ತು. ಅತಿಥಿ ಯಂತ್ರದ ತಲೆಯನ್ನು ಸ್ಪರ್ಶಿಸಿದಾಗ ಎಂಟು ಸಣ್ಣ ರಂಧ್ರಗಳಲ್ಲಿ ನೀರು ಬರುತ್ತಿತ್ತು. ಶುದ್ಧೀಕರಣಕ್ಕಾಗಿ ಸಾಕಷ್ಟು ನೀರು ನೀಡುವುದು. ಮತ್ತು ನೀರನ್ನು ಮಿತ ಬಳಕೆ ಮಾಡಿ ಸಂರಕ್ಷಿಸುವುದು ಇದರ ಉದ್ದೇಶವಾಗಿತ್ತು. ಮುಸ್ಲಿಮರು ನಿಜವಾಗಿಯೂ ಸ್ವಚ್ಛವಾಗಿರಲು ಬಯಸುತ್ತಾರೆ ಮತ್ತು ನೀರಿನಿಂದ ಮಾತ್ರ ತೊಳೆದರೆ ಶುದ್ಧಿಯಾಗಲಾರದು ಎಂಬುದನ್ನು ಅರಿತು, ಅವರು ಸಾಬೂನು ಕಂಡು ಹಿಡಿದರು. ಇದಕ್ಕಾಗಿ ಆಲಿವ್ ಎಣ್ಣೆಯನ್ನು “ಅಲ್-ಖಲಿ” ಎಂಬ ಉಪ್ಪು-ತರಹದ ಪದಾರ್ಥದೊಂದಿಗೆ ಮಿಶ್ರ ಮಾಡಿದರು. ನಂತರ ಅದನ್ನು ಸರಿಯಾದ ಮಿಶ್ರಣವನ್ನು ಸಾಧಿಸಲು ಬೇಯಿಸಿದರು. ಅದು ಗಟ್ಟಿಯಾದ ನಂತರ ಸ್ನಾನಗೃಹಗಳಲ್ಲಿ ಬಳಸಿದರು.
5.ಸುಗಂಧ ದ್ರವ್ಯ
ಅಲ್-ಕಿಂಡಿ ಅವರು ಸುಗಂಧ ದ್ಯವ್ಯದ ಬಗ್ಗೆ ಒಂದು ಪುಸ್ತವಕವನ್ನು ಬರೆದರು. ಇದು ಇಂಗ್ಲೀಷ್ ನಲ್ಲಿ, “ಕೆಮಿಸ್ಟ್ರಿ ಆಫ್ ಪರ್ಫ್ಯೂಮ್ ಅಂಡ್ ಡಿಸ್ಟೈಲೇಶನ್ಸ್” ಎಂಬ ಹೆಸರಿನಲ್ಲಿ ಲಭ್ಯವಿದೆ. ಸುಗಂಧ ತಯಾರಿಕೆಯ ಶತಮಾನಗಳ-ಹಳೆಯ ಸಂಪ್ರದಾಯವು ಮುಸ್ಲಿಂ ವಿಜ್ಞಾನಿಗಳು ಮತ್ತು ಅವರ ಶುದ್ಧೀಕರಣದ ವಿಧಾನಗಳಿಂದ ಸಾಧ್ಯವಾಯಿ. ಕಿಂಡಿಯವರ ಪುಸ್ತಕದಲ್ಲಿ ಸಸ್ಯಗಳು ಮತ್ತು ಹೂವುಗಳನ್ನು ಬಟ್ಟಿ ಇಳಿಸಿ ಸುಗಂಧದ್ರವ್ಯ ಮತ್ತು ಔಷಧಿಗಳನ್ನು ತಯಾರಿಸುವ ವಿಧಾನಗಳನ್ನು ವಿವರಿಸಲಾಗಿತ್ತು.
6.ವಿಶ್ವ ವಿದ್ಯಾನಿಲಯಗಳು
ಜ್ಞಾನದ ಅನ್ವೇಷಣೆ ಮುಸ್ಲಿಮರ ಹೃದಯಕ್ಕೆ ಹತ್ತಿರದಲ್ಲಿದೆ. ಕುರ್ಆನ್ನ ಜ್ಞಾನವನ್ನು ಸಂಪಾದಿಸುವುದು ಅತೀ ಅವಶ್ಯಕವೆಂದು ಮುಸ್ಲಿಮರಿಗೆ ಆಜ್ಞಾಪಿಸಲಾಗಿದೆ. ಆದ್ದರಿಂದ ಫಾತಿಮಾ ಅಲ್ ಫಿಹ್ರಿ ಎಂಬ ಮಹಿಳೆಯು ಮೊರಕ್ಕೋದ ಫೆಜ್ ಎಂಬಲ್ಲಿ ಮದರಸಾ ರೂಪದ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸ್ಥಾಪನೆಯು ಅತೀ ಶೀಘ್ರದಲ್ಲೇ ಅತೀ ದೊಡ್ಡ ಧಾರ್ಮಿಕ ಶಿಕ್ಷಣ ಮತ್ತು ರಾಜಕೀಯ ಚರ್ಚೆಗಾಗಿ ಒಂದು ಸ್ಥಳವಾಗಿ ಅಭಿವೃದ್ಧಿ ಹೊಂದಿತು. ಕ್ರಮೇಣ ತನ್ನ ಶಿಕ್ಷಣವನ್ನು ಎಲ್ಲಾ ವಿಷಯಗಳಲ್ಲೂ, ವಿಶೇಷವಾಗಿ ನೈಸರ್ಗಿಕ ವಿಜ್ಞಾನಗಳಿಗೆ ವಿಸ್ತರಿಸಿತು. ಆದ್ದರಿಂದ ಇದು ಇತಿಹಾಸದಲ್ಲಿನ ಮೊದಲ ವಿಶ್ವವಿದ್ಯಾನಿಲಯ ಎಂದು ಪ್ರಸಿದ್ಧಿ ಪಡೆಯಿತು. ಫೆಜ್ನಲ್ಲಿನ “ಅಲ್-ಖರವಾಯಿನ್” ವಿಶ್ವ ವಿದ್ಯಾನಿಲಯ ಇವತ್ತಿಗೂ ಕಾರ್ಯಾಚರಿಸುತ್ತಿದೆ.
7.ಹಾರುವ ಯಂತ್ರ (ವಿಮಾನ)
ಸ್ಪೇನ್ ನ ಅಬ್ಬಾಸ್ ಇಬ್ನ್ ಫಿರ್ನಾಸ್ ಹಾರುವ ಯಂತ್ರವನ್ನು ನಿರ್ಮಿಸಲು ಮತ್ತು ವಾಸ್ತವವಾಗಿ ಹಾರಲು ನಿಜವಾದ ಪ್ರಯತ್ನವನ್ನು ಮಾಡಿದ ಮೊದಲ ವ್ಯಕ್ತಿ. 9 ನೆಯ ಶತಮಾನದಲ್ಲಿ ಅವರು ಪಕ್ಷಿ ವೇಷಭೂಷಣವನ್ನು ಹೋಲುವ ರೆಕ್ಕೆಯ ಉಪಕರಣವನ್ನು ವಿನ್ಯಾಸಗೊಳಿಸಿದರು. ಸ್ಪೇನ್ನ ಕಾರ್ಡೊಬ ಬಳಿ ತನ್ನ ಅತ್ಯಂತ ಪ್ರಸಿದ್ಧವಾದ ಪ್ರಯೋಗದಲ್ಲಿ, ಫಿರ್ನಾಸ್ ಕೆಲವು ಕ್ಷಣಗಳಿಗಾಗಿ ಮೇಲ್ಮುಖವಾಗಿ ಹಾರಿಹೋದರು. ಆದರೆ ಪಕ್ಷಿಗಳು ತಮ್ಮ ಕೊಕ್ಕಿನ ಸಹಾಯದಿಂದ ಇಳಿಯುತ್ತದೆ ಎಂಬುದನ್ನು ಅಬ್ಬಾಸ್ ಇಬ್ನ್ ಫಿರ್ನಾಸ್ ಗೆ ತಿಳಿದಿರಲಿಲ್ಲ. ಇದರಿಂದಾಗಿ ಅವರು ಅವೈಜ್ಞಾನಿಕವಾಗಿ ಕೆಳಗಿಳಿದು ಬೆನ್ನು ಮೂಳೆ ಮುರಿದು ಕೊಂಡರು.
8.ಶಸ್ತ್ರಚಿಕಿತ್ಸಾ ಉಪಕರಣಗಳು
ನಾವು 10 ನೆಯ ಶತಮಾನದಲ್ಲಿ ಪ್ರಯಾಣಿಸಿದರೆ, ಪಾಶ್ಚಾತ್ಯರಿಂದ “ಅಬುಲ್ಕಾಸಿಸ್” ಎಂದು ಕರೆಯಲ್ಪಡುವ ವ್ಯಕ್ತಿ ಶಸ್ತ್ರಚಿಕಿತ್ಸಾ ಉಪಕರಣಗಳ ಪಿತಾಮಹ. ಇವರ ಪೂರ್ಣ ಹೆಸರು “ಅಬುಲ್ ಖಾಸಿಮ್ ಖಲಾಫ್ ಇಬ್ನ್ ಅಲ್-ಅಬಾದ್ ಅಲ್-ಝಹ್ರಾವಿ”. ಇವರು ಬರೆದ “ಅಲ್-ತದ್ರಿಫ್” ಗ್ರಂಥವನ್ನು ಆ ಕಾಲದಲ್ಲಿ ಯುರೋಪಿಯನ್ನರು “ಮೆಡಿಕಲ್ ಎನ್ಸೈಕ್ಲೋಪೀಡಿಯ” ಎಂದು ಕರೆದರು. ಇದು ಸುಮಾರು ಇನ್ನೂರಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಪರಿಚಯಿಸಿದ ಒಂದು ದಿಗ್ಭ್ರಮೆಗೊಳಿಸುವ ಮಾಹಿತಿಗಳನ್ನು ಹೊಂದಿತ್ತು. ಆ ಕಾಲದಲ್ಲಿ ಶಸ್ತ್ರ ಚಿಕಿತ್ಸಾ ಪದ್ಧತಿ ಇತ್ತಾದರೂ ಅದಕ್ಕಾಗಿ ಉಪರಕರಣಗಳನ್ನು ಬಳಸುವ ಇವರ ಸಂಶೋಧನೆ ಪ್ರಸಿದ್ದಿಯಾಯಿತು.
9.ಭೂಪಟ ಮತ್ತು ದಿಕ್ಸೂಚಿ
ಇವತ್ತು ಗೂಗಲ್ ಮ್ಯಾಪ್ ಮುಂತಾದ ಟೆಕ್ನಾಲಜಿಗಳು ಅಭಿವೃದ್ಧಿ ಹೊಂದಿದೆಯಾದರೂ, ಹಿಂದಿನ ಕಾಲದಲ್ಲಿ ಮಣ್ಣಿನ ಫಲಕಗಳ ಮೇಲೆ ಭೂಪಟದ ಚಿತ್ರವನ್ನು ಬರೆದು ಅದನ್ನು ಮಾರ್ಗ ಸೂಚಿಯಾಗಿ ಬಳಸುತ್ತಿದ್ದರು. 3,500 ವರ್ಷಗಳ ಹಿಂದಿನಿಂದಲೂ ಇದನ್ನು ಬಳಸಲಾಗುತ್ತಿತ್ತು. ತದನಂತರ ಪೇಪರ್ ಟೆಕ್ನಾಲಜಿ ಅಭಿವೃದ್ಧಿಯಾದ ನಂತರ ಪೇಪರ್ ಹಾಳೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಆದರೆ ಎಲ್ಲಾ ಕಾಲದಲ್ಲೂ ಭೂಪಟ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದವರು ಮುಸ್ಲಿಮರು ಎಂಬುದು ಗಮನಾರ್ಹ.
ಮುಸ್ಲಿಮರು ವ್ಯಾಪಾರಕ್ಕಾಗಿ ಮತ್ತು ಅವರ ಧಾರ್ಮಿಕ ಕಾರಣಗಳಿಗಾಗಿ ತಮ್ಮ ಮನೆಗಳನ್ನು ಬಿಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಜಗತ್ತಿನ ವಿವಿಧ ಪ್ರದೇಶಗಳ ಮಾರ್ಗವನ್ನು ಕಂಡುಹಿಡಿಯಲು ಪ್ರಾರಂಭಿಸಿದರು. ಇದಕ್ಕಾಗಿ ಭೂಪಟಗಳ ಬಳಕೆ ಮಾಡಿದರು ನಂತರ ಜಲಮಾರ್ಗಗಳ ಅನ್ವೇಷಣೆಗೆ ದಿಕ್ಸೂಚಿಯನ್ನು ಅಭಿವೃದ್ಧಿ ಪಡಿಸಿದರು.
10.ಅಲ್ಜೀಬ್ರಾ (ಬೀಜ ಗಣಿತ)
“ಅಲ್ಜೀಬ್ರಾ” ಎಂಬ ಪದವು ಪರ್ಷಿಯನ್ ಗಣಿತ ಶಾಸ್ತ್ರಜ್ಞ 9 ನೇ ಶತಮಾನದ ಪ್ರಸಿದ್ಧವಾದ “ಕಿಟಾಬ್ ಅಲ್-ಜಬ್ ವಾ ಲಾ-ಮುಗಾಬಲಾ” ಎಂಬ ಶೀರ್ಷಿಕೆಯಿಂದ ಬಂದಿದೆ, ಇದು ಸ್ಥೂಲವಾಗಿ “ದಿ ಬುಕ್ ಆಫ್ ರೀಸನಿಂಗ್ ಅಂಡ್ ಬ್ಯಾಲೆನ್ಸಿಂಗ್” ಎಂದು ಭಾಷಾಂತರಿಸುತ್ತದೆ. ಆಲ್-ಖ್ವಾರಿಜ್ಮಿ ಬೀಜಗಣಿತದ ಪ್ರಾರಂಭವನ್ನು ಪರಿಚಯಿಸುತ್ತಾನೆ. ಈ ಹೊಸ ಕಲ್ಪನೆಯು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಾಸ್ತವವಾಗಿ, ಇದು ಗಣಿತಶಾಸ್ತ್ರದ ಗ್ರೀಕ್ ಪರಿಕಲ್ಪನೆಯಿಂದ ಒಂದು ಕ್ರಾಂತಿಕಾರಿ ಚಲನೆಯಾಗಿತ್ತು, ಇದು ಮೂಲಭೂತವಾಗಿ ಜ್ಯಾಮಿತಿಯನ್ನು ಆಧರಿಸಿದೆ. ಗಣಿತಜ್ಞ ಅಲ್-ಖ್ವಾರಿಜ್ಮಿಯು ಒಂದು ಸಂಖ್ಯೆಯನ್ನು ಅಧಿಕಾರಕ್ಕೆ ಏರಿಸುವ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ವ್ಯಕ್ತಿ.
ಸಂಗ್ರಹ

ದಿನದ ಸುದ್ದಿ
‘ಮತದಾರ ದೇವರು’ ಎಂದ ಸಿದ್ದರಾಮಯ್ಯ
ಸುದ್ದಿದಿನಡೆಸ್ಕ್:ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಘನತೆವೆತ್ತ ರಾಜ್ಯಪಾಲರಿಗೆ ನೀಡಿ ಬಂದಿದ್ದೇನೆ. ಸಾಂವಿಧಾನಿಕ ವಿಧಿ-ವಿಧಾನಗಳ ಮೂಲಕ ರಾಜ್ಯಪಾಲರು ಕ್ರಮಕೈಗೊಳ್ಳುತ್ತಾರೆ. ಶೀಘ್ರದಲ್ಲಿಯೇ ನೂತನ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಕಾಣಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಇಂದಿನ ವರೆಗೂ ನನಗೆ ನಿರೀಕ್ಷೆಗೂ ಮೀರಿ ಪ್ರೀತಿ ನೀಡಿದ, ಅಭಿಮಾನಿಸಿದ, ಕೈಹಿಡಿದು ನಡೆಸಿದ ರಾಜ್ಯದ ಜನತೆಯನ್ನು ಉದ್ದೇಶಿಸಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೇರು ನಟ ಡಾ.ರಾಜ್ಕುಮಾರ್ ಅವರು ಅಭಿಮಾನಿಗಳನ್ನು ‘’ಅಭಿಮಾನಿ ದೇವರು’’ ಎಂದು ಕರೆಯುತ್ತಿದ್ದರು, ನಾನೊಬ್ಬ ಸಂವಿಧಾನವನ್ನೇ ಧರ್ಮ ಎಂದು ತಿಳಿದುಕೊಂಡಿರುವ ರಾಜಕಾರಣಿ. ನನ್ನ ಪಾಲಿಗೆ ಮತದಾರರು ‘’ಮತದಾರ ದೇವರು”. ಆ ದೇವರುಗಳ ಮುಂದೆ ನನ್ನ ಮನದಾಳದ ಕೆಲವು ಮಾತುಗಳನ್ನು ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ ಎಂದರು.
ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ನನ್ನ ಬಗ್ಗೆ ರಾಜ್ಯದ ಜನತೆಗೆ ತಿಳಿದಿದೆ. ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜಾಯಮಾನದವನಲ್ಲ. ಈ ರಾಜೀನಾಮೆ ಪತ್ರವನ್ನು ಕೂಡಾ ಅತ್ಯಂತ ಸಂತೋಷದಿಂದ ಮನಪೂರ್ವಕವಾಗಿ ನೀಡಿದ್ದೇನೆ.
ಹಳ್ಳಿಗಾಡಿನ ರೈತಾಪಿ ಕುಟುಂಬದಿಂದ ಬಂದ ನಾನು ರಾಜಕಾರಣಕ್ಕೆ ಪ್ರವೇಶ ಮಾಡುವಾಗ ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ನಾಡಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸನ್ನೂ ಕಂಡವನಲ್ಲ. ಇಂತಹದ್ದೊಂದು ದುಬಾರಿ ಕನಸನ್ನು ನನಸು ಮಾಡಿದ್ದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ. ಈ ಸಂವಿಧಾನದ ಬಲ ಇಲ್ಲದೆ ಹೋಗಿದ್ದರೆ ನಾನು ಎಲ್ಲೋ ಕುರಿ ಮೇಯಿಸಿಕೊಂಡೋ, ಇನ್ನೇನೋ ಆಗಿ ಇರುತ್ತಿದ್ದೆ. ಈ ಕಾರಣಕ್ಕಾಗಿ ಮೊದಲಿಗೆ ನಮ್ಮ ಸಂವಿಧಾನ ಮತ್ತು ಸಂವಿಧಾನದ ಶಿಲ್ಪಿಯಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಈ ಸಂದರ್ಭದಲ್ಲಿ ತಲೆಬಾಗಿ ನಮಿಸುತ್ತೇನೆ.
ಎರಡನೆಯದಾಗಿ ರಾಜ್ಯದ ಜನತೆ. ಹೆಚ್ಚುಕಡಿಮೆ ನಾಲ್ಕುವರೆ ದಶಕಗಳ ಸುದೀರ್ಘ ರಾಜಕಾರಣದ ಪಯಣದಲ್ಲಿ ಜನ ನನ್ನನ್ನು ಶಾಸಕ, ಸಚಿವ, ಕೊನೆಗೆ ಎರಡುಬಾರಿ ಮುಖ್ಯಮಂತ್ರಿ ಸ್ಥಾನದ ಕಿರೀಟವನ್ನು ನನ್ನ ತಲೆ ಮೇಲೆ ಇಟ್ಟು ಹರಸಿ ಅವರ ಸೇವೆ ಮಾಡುವ ಭಾಗ್ಯವನ್ನು ನನಗೆ ಕರುಣಿಸಿದ್ದಾರೆ. ಆ ಮತದಾರ ದೇವರುಗಳಿಗೆ ನಾನು ಆಭಾರಿಯಾಗಿದ್ದೇನೆ.
ಮೂರನೆಯದಾಗಿ, ನನ್ನ ಸೈದ್ಧಾಂತಿಕ ಬದ್ಧತೆ ಮತ್ತು ರಾಜಕೀಯ ಹೋರಾಟಕ್ಕೆ ಮನ್ನಣೆ ನೀಡಿದ ಕಾಂಗ್ರೆಸ್ ಪಕ್ಷವು ನನ್ನ ಮೇಲೆ ವಿಶ್ವಾಸ ಇರಿಸಿ ನನ್ನನ್ನು ಬರಮಾಡಿಕೊಂಡು ರಾಜಕೀಯ ಕ್ಷೇತ್ರದಲ್ಲಿ ಅವಕಾಶ ನೀಡಿದೆ. ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ, ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಅವಕಾಶ ನೀಡಿದೆ. ಆ ಮೂಲಕ ಈ ನಾಡಿನ ಜನತೆಗೆ ನಾನು ನಂಬಿರುವ ತತ್ವಾದರ್ಶಗಳ ಅನುಸಾರ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಈ ಕಾರಣಕ್ಕಾಗಿ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ಸದಾ ಆಭಾರಿಯಾಗಿರುತ್ತೇನೆ.
ನಾನೆಂದೂ ರಾಜಕಾರಣವನ್ನು ಅಧಿಕಾರದ ದಂಡ ಎಂದಾಗಲಿ, ವ್ಯಾಪಾರದ ಗಲ್ಲಾ ಪೆಟ್ಟಿಗೆ ಎಂದಾಗಲಿ ತಿಳಿದುಕೊಂಡವನಲ್ಲ, ಅದು ಬಡವರಿಗೆ, ಶೋಷಿತರಿಗೆ, ನೊಂದವರಿಗೆ ನೆರವಾಗುವ ಒಂದು ಅವಕಾಶ ಎಂದು ತಿಳಿದುಕೊಂಡವನು. ಈ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದಲೇ ವಕೀಲನಾಗಿ ಸೇವೆ ಮಾಡುತ್ತಿದ್ದ ನಾನು ರಾಜಕಾರಣವನ್ನು ಪ್ರವೇಶ ಮಾಡಿದವನು.
ನನ್ನ 77 ವರ್ಷಗಳ ಜೀವನ ಪಯಣದಲ್ಲಿ ಹಲವಾರು ವ್ಯಕ್ತಿಗಳು ಪ್ರೀತಿ-ವಿಶ್ವಾಸದಿಂದ ಕೈಹಿಡಿದು ಮುನ್ನಡೆಸಿದ್ದಾರೆ. ನನ್ನ ಬದುಕು ಒಂದು ತೆರೆದ ಪುಸ್ತಕ. ಈ ಪುಸ್ತಕದಲ್ಲಿ ಮೊದಲ ಬರವಣಿಗೆ ಮಾಡಿದ್ದು ವೀರ ಕುಣಿತವನ್ನು ಕಲಿಯುತ್ತಾ ಸಮಯ ಸಿಕ್ಕಾಗ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದು ವಿದ್ಯೆ ಕಲಿಯುವ ಅವಕಾಶ ನೀಡಿದವರು ರಾಜಪ್ಪ ಮಾಸ್ತರ್.
ವಕೀಲನಾಗಿದ್ದ ನನ್ನಲ್ಲಿನ ಸೇವಾಕಾಂಕ್ಷೆಯನ್ನು ಗುರುತಿಸಿ ಸಮಾಜವಾದದ ಪಾಠ ಮಾಡಿ, ರಾಜಕಾರಣಿಗಳಿಗೆ ಇರಬೇಕಾದ ಸೈದ್ಧಾಂತಿಕ ಬದ್ಧತೆ, ಜನಪರ ಕಾಳಜಿ ಮತ್ತು ಹೋರಾಟದ ಗುಣವನ್ನು ಕಲಿಸಿದವರು ರೈತನಾಯಕ ಎಂ.ಡಿ.ನಂಜುಂಡಸ್ವಾಮಿ
ಮೊದಲ ಬಾರಿ 1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ನನ್ನನ್ನು ಗುರುತಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿ ಮಾಡಿದ್ದಲ್ಲದೆ ಎರಡನೇ ಬಾರಿ ಶಾಸಕನಾದ ನನ್ನನ್ನು ಸಚಿವನನ್ನಾಗಿ ಮಾಡಿದವರು ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.
ಇವರೆಲ್ಲರ ನೆರವು, ಕಾಳಜಿ ಮತ್ತು ಮಾರ್ಗದರ್ಶನಗಳು ಇಲ್ಲದೆ ಹೋಗಿದ್ದರೆ ನಾನು ಇಷ್ಟು ದೂರ ಸಾಗಿ ಬರುತ್ತಿರಲಿಲ್ಲ ಮತ್ತು ಇಷ್ಟು ಎತ್ತರಕ್ಕೆ ಏರಲು ಕೂಡಾ ಆಗುತ್ತಿರಲಿಲ್ಲ ಎನ್ನುವುದನ್ನು ವಿನಮ್ರವಾಗಿ ನಿವೇದಿಸಬಯಸುತ್ತೇನೆ.
ನಾನು ದುಡ್ಡು, ಆಸ್ತಿಪಾಸ್ತಿ ಮಾಡಲು ರಾಜಕಾರಣಿ ಆದವನಲ್ಲ. ಮತದಾರ ದೇವರುಗಳು ಅಧಿಕಾರದ ಮೂಲಕ ಅವಕಾಶ ನೀಡಿದಾಗೆಲ್ಲ ಅವರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇನೆ. ಈ ಸಂದರ್ಭದಲ್ಲಿ ನನ್ನ ಸಾಧನೆಗಳ ದಾಖಲೆಗಳನ್ನು ನಾನು ನಿಮ್ಮ ಮುಂದೆ ಇಟ್ಟ ನನ್ನನ್ನು ಸಾಬೀತುಪಡಿಸುವ ವ್ಯರ್ಥಪ್ರಯತ್ನವನ್ನು ನಾನು ಮಾಡುವುದಿಲ್ಲ. ಅವೆಲ್ಲವೂ ತೆರೆದ ಪುಸ್ತಕದ ರೀತಿಯಲ್ಲಿ ರಾಜ್ಯದ ಜನತೆಯ ಕಣ್ಣಮುಂದಿದೆ.
ಜಾತಿ, ದುಡ್ಡು ಮತ್ತು ತೋಳ್ಬಲಗಳ ನೆರವಿಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಇಂದು ಜನಜನಿತವಾಗಿದೆ. ಇದು ಈ ಕಾಲದ ಸತ್ಯವೂ ಹೌದು. ಇಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಭಾತೃತ್ವದಂತಹ ಸಂವಿಧಾನದ ಆಶಯಗಳಿಗೆ ಬದ್ದರಾಗಿ ರಾಜಕಾರಣ ಮಾಡುವುದು ಎಷ್ಟೊಂದು ಕಷ್ಟದ ಕೆಲಸ ಎನ್ನುವ ಅನುಭವ ನಾಲ್ಕುವರೆ ದಶಕಗಳ ರಾಜಕೀಯ ಪಯಣದಲ್ಲಿ ನನಗಾಗಿದೆ.
ನನ್ನ ರಾಜಕೀಯ ವಿರೋಧಿಗಳು ರಾಜಕಾರಣಕ್ಕಿಂತ ಬಹುದೂರ ಇದ್ದುಕೊಂಡು ಕುಟುಂಬದ ಪಾಲನೆ-ಪೋಷಣೆಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಂಡ ನನ್ನ ಪತ್ನಿಯ ವಿರುದ್ದವೂ ಸುಳ್ಳು ಆರೋಪಗಳನ್ನು ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗ ಬೇಡ, ಜನಸೇವೆಯ ಪಥದಿಂದ ಹಿಂದಡಿ ಇಡಬೇಡ ಎಂದು ನನ್ನ ಅಂತಾರಾತ್ಮ ಎಚ್ಚರಿಸಿತು. ಅನ್ಯಾಯದ ವಿರುದ್ಧ ನ್ಯಾಯದ ಹೋರಾಟವನ್ನು ಮುಂದುವರಿಸಿ ಆರೋಪಿತ ಕಳಂಕವನ್ನು ನಿವಾರಿಸಿಕೊಂಡು ನಿರಾಳನಾದೆ.
ಈ ಸಂಘರ್ಷದ ಹಾದಿಯಲ್ಲಿ ನಾನೆಂದೂ ನಂಬಿದ ಮೌಲ್ಯಗಳ ಜೊತೆ ರಾಜಿಮಾಡಿಕೊಂಡಿಲ್ಲ. ನಂಬಿದ ಜನತೆಗೆ ದ್ರೋಹ ಬಗೆದಿಲ್ಲ, ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡಿಕೊಂಡಿಲ್ಲ. ಹೋರಾಟವನ್ನೇ ಬದುಕಾಗಿಸಿ ಸ್ವೀಕರಿಸಿ ಇಷ್ಟು ದೂರ ಬಂದಿದ್ದೇನೆ.
ಇಂದಿನ ವರ್ತಮಾನ ನನ್ನನ್ನು ಎಷ್ಟು ಅರ್ಥಮಾಡಿಕೊಂಡಿದೆಯೋ ಗೊತ್ತಿಲ್ಲ, ಸಾಮಾನ್ಯವಾಗಿ ಸಾಮಾಜಿಕ ಪರಿವರ್ತನೆಯ ಹರಿಕಾರರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ. ಆದರೆ ಇತಿಹಾಸ ಮಾತ್ರ ಅವರನ್ನು ನೆನಪಲ್ಲಿಟ್ಟುಕೊಂಡು ಸ್ಮರಿಸುತ್ತದೆ. ಹನ್ನೆರಡನೇ ಶತಮಾನದ ಬಸವಣ್ಣನವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ವರೆಗೆ ಎಲ್ಲರ ಪಾಲಿನ ಸತ್ಯ ಇದು. ಈ ಭರವಸೆಯ ಆಸರೆಯೊಂದಿಗೆ ನನ್ನ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಬಂದಿದ್ದೇನೆ, ಅಧಿಕಾರ ಇರಲಿ, ಇಲ್ಲದೆ ಇರಲಿ ಈ ಹೋರಾಟ ಮುಂದುವರಿಯಲಿದೆ.
ನಾನು ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ನುಡಿದಂತೆ ನಡೆಯಬೇಕು, ಜನತೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ಉಂಟು ಮಾಡಬಾರದೆಂಬ ಪ್ರಮಾಣವನ್ನು ಮನಸ್ಸಿನೊಳಗೆ ಮಾಡಿದ್ದೆ. ಜನರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಅದನ್ನು ತ್ರಿಕರಣಪೂರ್ವಕವಾಗಿ ಪಾಲಿಸಿದ್ದೇನೆ ಎಂಬ ವಿಶ್ವಾಸ ನನಗಿದೆ. ನುಡಿದಂತೆಯೇ ನಡೆದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಮೂಲಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು- ಇದು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಾಗ ನಾನು ಕಂಡ ಕನಸು.
ಆ ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಭರದಿಂದ ಮುನ್ನಡೆದಿದೆ. ಇಂದು ಕರ್ನಾಟಕವು ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಜನತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದ್ದೇವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿದೆ, ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ, ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಸಮರ್ಥವಾಗಿ ಎದುರಿಸಿದ್ದೇವೆ, ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದ ಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಅವರಿಗೆ ಸಮಾಧಾನ ತಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲದ ನಮ್ಮ ನಿಲುವು ಕನ್ನಡಿಗರ ಮನ ಗೆದ್ದಿದೆ.
ನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್ಗಳನ್ನು ಮಂಡಿಸುವ ಅವಕಾಶ ಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ ಹದಿನೇಳು ಬಜೆಟ್ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದ ಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ.
ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ.
ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ.
ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದ ಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ.. ಮತ್ತೊಮ್ಮೆ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹು ಗ್ರಾಮಗಳಲ್ಲಿ ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಗ್ರಾಮ ಆಡಳಿತಾಧಿಕಾರಿ ಕೋಸಗಿ ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹುಲಿಕಟ್ಟೆ ಸರ್ಕಲ್ ವ್ಯಾಪ್ತಿಯ ಹಾರಕನಾಳು, ಹುಲಿಕಟ್ಟೆ, ಚನ್ನಳ್ಳಿ ತಾಂಡ, ಈಶಾಪುರ, ಹಾರಕನಾಳು ಸಣ್ಣತಾಂಡ, ಹಾರಕನಾಳು ದೊಡ್ಡತಾಂಡ, ಕನ್ನಾಯಕನಹಳ್ಳಿ ಸೇರಿ ಒಟ್ಟು 07 ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೋಸಗಿ ಸುರೇಶ ಎಂಬುವವರು ರೈತರೊಂದಿಗೆ ಒಪ್ಪಂದ ಮಾಡಿಕೊಂಡು, ಪ್ರತಿ ವರ್ಷ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆಗಳಿಗೆ ತಾವೇ ಎಲ್ಲಾ ರೈತರ ಜಮೀನಿಗೆ ಬೆಳೆ ವಿಮೆ ಹಣ ಪಾವತಿಸುವ ಮೂಲಕ ನಿರಂತರವಾಗಿ 3 ವರ್ಷಗಳಿಂದ ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸುತ್ತ ಬಂದಿರುವ ಮಾಹಿತಿಯು ಸಾಕಷ್ಟು ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ. ಈ ಬಗ್ಗೆ ರೈತರು ಸಾಕಷ್ಟು ಪ್ರತಿಭಟನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳಿಗೂ ದೂರು ನೀಡಿರುತ್ತಾರೆ.
ಪ್ರಧಾನಮತ್ರಿ ಫಸಲ್ ಭೀಮಾ ಯೋಜನೆಯಲ್ಲಿನ ಭ್ರಷ್ಟಚಾರದ ಪ್ರಮುಖ ರೂವಾರಿಯಾದ ಕೋಸಗಿ ಸುರೇಶ ಎಂಬುವವರು ತಾವು ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಗುಂಡಗತ್ತಿ ಸರ್ಕಲ್ ವ್ಯಾಪ್ತಿಯ ಬಹು ಗ್ರಾಮಗಳಲ್ಲಿಯೂ ಫಸಲ್ ಭೀಮಾ ಯೋಜನೆಯಲ್ಲಿ (ಕರ್ನಾಟಕ ರೈತ ಸುರಕ್ಷಾ ಫಸಲ್ ಭೀಮಾ ಯೋಜನೆ) ಸಾಕಷ್ಟು ಅವ್ಯವಹಾರ ನಡೆಸುತ್ತ ಬಂದಿರುತ್ತಾರೆ ಎಂಬ ಅಧಿಕೃತ ಮಾಹಿತಿ ಇರುತ್ತದೆ. ಇವರು ತಾವು ಕೆಲಸ ಮಾಡಿದ ಎಲ್ಲಾ ಸ್ಥಳಗಳಲ್ಲಿಯೂ ಸಾಕಷ್ಟು ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಸಾಕಷ್ಟು ರೈತರಿಗೆ ಸರ್ಕಾರಿ ಯೋಜನೆಗಳನ್ನು ಮಾಡಿಸಿಕೊಡುವುದಾಗಿ ಕೋಟ್ಯಾಂತರ ರೂಪಾಯಿ ಲಂಚ ಪಡೆದಿರುತ್ತಾರೆ. ಹಾಗೆಯೇ ಬಡವರು, ಅಸಹಾಯಕರ ಜಮೀನುಗಳನ್ನು ಪ್ರಬಲರ ಹೆಸರಿಗೆ ವರ್ಗಾಹಿಸುವ ನೀಚ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.
ಬಡವರ ಜಮೀನುಗಳನ್ನು ಪ್ರಬಲರ ಹೆಸರಿಗೆ ಮಾಡಿದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದು ನಂತರ ಮೂಲ ಖಾತೆದಾರರಿಗೆ ವರ್ಗಾವಣೆಯಾಗಿರುವ ಸಾಕಷ್ಟು ನಿದರ್ಶನಗಳಿಗೆ. ಆದರೆ ಯಾವುದೇ ಒಂದು ಪ್ರಕರಣದಲ್ಲಿಯೂ ಈ ಅಧಿಕಾರಿಗೆ ಶಿಕ್ಷೆಯಾಗದಂತೆ ಹಿರಿಯ ಅಧಿಕಾರಿಗಳರಿವರನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಈ ಕಾರಣಕ್ಕಾಗಿಯೇ ಫಸಲ್ ಭೀಮಾ ಯೋಜನೆಯಂತಹ ದೊಡ್ಡ ಮಟ್ಟದ ಹಗರಣಕ್ಕೂ ಮುಂದಾಗಿರುತ್ತಾರೆ.
ಈ ಎಲ್ಲಾ ಪ್ರಕರಣಗಳನ್ನು ಆಧಾರವಾಗಿಟ್ಟುಕೊಂಡು ಫಸಲ್ ಭೀಮಾ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿರುವ ಹಾರಕನಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಎಂ.ಶಿವಣ್ಣ, ಕಂದಾಯ ನಿರೀಕ್ಷಕ ಶ್ರೀ ರಾಘವೇಂದ್ರ, ಹರಪನಹಳ್ಳಿ ತಾಲ್ಲೂಕು ಉಪ ತಹಶೀಲ್ದಾರರಾದ ಶ್ರೀಮತಿ ಕವಿತಾ, ತಹಶೀಲ್ದಾರರಾದ ಶ್ರೀ ಬಿ.ವಿ. ಗಿರೀಶ್ಬಾಬು, ಉಪವಿಭಾಗಾಧಿಕಾರಿಯಾದ ಶ್ರೀ ಸುರೇಶ್ಕುಮಾರ್ ಟಿ, ಹರಪನಹಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ವೈ.ಹೆಚ್. ಚಂದ್ರಶೇಖರ್, ವಿಜಯನಗರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕವಿತಾ ಮನ್ನಿಕೇರಿ ಇವರುಗಳ ವಿರುದ್ಧ ದೂರು ದಾಖಲಿಸಿ, ಈ ಎಲ್ಲಾ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂಬುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ
ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು ತನ್ನ 75 ವರ್ಷಗಳ ಅತ್ಯುತ್ತಮ ಶೈಕ್ಷಣಿಕ ಸೇವೆಯ ನೆನಪಿಗಾಗಿ (1951-2026) ಹಮ್ಮಿಕೊಂಡಿರುವ ಭವ್ಯ “ವಜ್ರ ಮಹೋತ್ಸವ ಕಾರ್ಯಕ್ರಮವು ಮೇ 29 ಮತ್ತು 30 ರಂದು ಕಾಲೇಜಿನ ಆವರಣದಲ್ಲಿ ಜರುಗಲಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (VTU) ಅಂಗಸಂಸ್ಥೆಯಾಗಿರುವ ಈ ಕಾಲೇಜಿನ ಉದ್ಘಾಟನಾ ಸಮಾರಂಭವು ಮೇ 29 ರ ಶುಕ್ರವಾರ ಮಧ್ಯಾಹ್ನ 12:00 ಗಂಟೆಗೆ ಆರಂಭವಾಗಲಿದ್ದು, ದೇಶ ಹಾಗೂ ರಾಜ್ಯದ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಸಿ. ಪಿ. ರಾಧಾಕೃಷ್ಣನ್, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಹಾಗೂ ವಿ.ಟಿ.ಯು. ಕುಲಾಧಿಪತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಗಣಿ ಮತ್ತು ಭೂ ವಿಜ್ಞಾನ , ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್, ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್, ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮೈಸೂರು-ಕೊಡಗು ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಮಂಡಳಿ (FTE&M) ಅಧ್ಯಕ್ಷರಾದ ಪ್ರೊ. ಟಿ. ಜಿ. ಸಿತಾರಾಮ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ವಿ.ಟಿ.ಯು ಕುಲಪತಿಗಳಾದ ಡಾ. ಎಸ್. ವಿದ್ಯಾಶಂಕರ್, ರಿಜಿಸ್ಟ್ರಾರ್ ಡಾ. ಪ್ರಸಾದ್ ಬಿ ರಾಂಪುರೆ , ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಉಜ್ವಲ್ ಯು.ಜೆ , ಹಣಕಾಸು ಅಧಿಕಾರಿ ಡಾ. ಪ್ರಶಾಂತ್ ನಾಯಕ್ , ಯು.ಬಿ.ಡಿ.ಟಿ.ಇ ಪ್ರಾಂಶುಪಾಲರಾದ ಡಾ. ಡಿ. ಪಿ. ನಾಗರಾಜಪ್ಪ ಮತ್ತು ವಿವಿ ಪದಾಧಿಕಾರಿಗಳು ಕಾರ್ಯಕ್ರಮದ ಆತಿಥ್ಯ ವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಶಾಸಕರುಗಳಾದ ಶಾಂತನಗೌಡ ಡಿ.ಜಿ., ಬಿ. ದೇವೇಂದ್ರಪ್ಪ, ಬಿ. ಪಿ. ಹರೀಶ್, ಶ್ರೀ ಬಸವರಾಜು ವಿ. ಶಿವಗಂಗಾ, ಕೆ. ಎಸ್. ಬಸವಂತಪ್ಪ, ಸಮರ್ಥ್ ಶಾಮನೂರು, ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್. ಭೋಜೆಗೌಡ, ಡಿ.ಎಸ್.ಅರುಣ್, ಡಾ. ಧನಂಜಯ್ ಸರ್ಜಿ, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್ ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಕಾಲೇಜಿನ ಹಳೆಯ ವಿದ್ಯಾರ್ಥಿ ಟಿ. ರಘುಮೂರ್ತಿ , ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಕಾಲೇಜಿನ ಹಳೆಯ ವಿದ್ಯಾರ್ಥಿ ಜನಾರ್ಧನ ಸ್ವಾ̧ಮಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮ | ಗ್ರಾಮ ಆಡಳಿತಾಧಿಕಾರಿ ಕೆ.ಸುರೇಶ ಸೇರಿ 8 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoವಂಚನೆ | ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಐ.ಟಿ.ಐ ಕಾಲೇಜು ಪ್ರಾಂಶುಪಾಲ ಅಮರಪ್ಪ ಗಾಣಿಗೇರ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಇಂದು ಕರೆಂಟ್ ಇರಲ್ಲ
-
ದಿನದ ಸುದ್ದಿ4 days agoಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜಿನ ಭವ್ಯ ‘ವಜ್ರ ಮಹೋತ್ಸವ’ ಆಚರಣೆ; ಉಪರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳ ಆಗಮನ
-
ದಿನದ ಸುದ್ದಿ2 days ago‘ಮತದಾರ ದೇವರು’ ಎಂದ ಸಿದ್ದರಾಮಯ್ಯ


