Connect with us

ಬಹಿರಂಗ

ಸಿಕ್ಕುಗಳಲ್ಲಿ ಶಾಲಾ ಉಡುಪು

Published

on

ಸಾಂದರ್ಭಿಕ ಚಿತ್ರ

ಶಿಕ್ಷಣ ತಜ್ಞರ ಸ್ವಾಯತ್ತತೆಯನ್ನು ಕಸಿಯುವ ಸಾಧನವಾಗಿ ರಾಜಕೀಯ ಅಸ್ತ್ರವಾಗಿ ಶಾಲಾಸಮವಸ್ತ್ರ

  • ಮೂಲ : ಪ್ರೊ.ಕೃಷ್ಣ ಕುಮಾರ್‌, ಅನುವಾದ : ನಾ ದಿವಾಕರ

ಶಾಲಾ ಸಮವಸ್ತ್ರವೂ ಕಲಿಕೆಯ ಪ್ರಕ್ರಿಯೆಯಲ್ಲಿ ಒಂದು ಭಾಗವಾಗುತ್ತದೆ ಎಂದು ಇತಿಹಾಸದಲ್ಲಿ ಎಲ್ಲಿಯೂ ಕೇಳಿರಲಿಕ್ಕೆ ಸಾಧ್ಯವಿಲ್ಲ. ಆದರೂ ಇಂದಿನ ದಿನಗಳಲ್ಲಿಲ ಸಮವಸ್ತ್ರ ಇಲ್ಲದ ಶಾಲೆಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಜನರು ಶಾಲೆಯ ಬಗ್ಗೆ ಯೋಚಿಸುವಾಗ, ತಮ್ಮದೇ ಶಾಲೆಯಾಗಿದ್ದರೂ ಸಹ, ತಮ್ಮ ಮಕ್ಕಳನ್ನು ಇತರ ಶಾಲಾ ಮಕ್ಕಳಿಂದ ಭಿನ್ನವಾಗಿ ನೋಡುವಾಗ ಸಮವಸ್ತ್ರದ ಮೂಲಕವೇ ನೋಡುತ್ತಾರೆ.

ವಿಶೇಷವಾಗಿ ಹಬ್ಬದ ದಿನಗಳಲ್ಲಿ ಉತ್ಸವಗಳು ನಗರದ ಎಲ್ಲ ಶಾಲೆಯ ಮಕ್ಕಳನ್ನೂ ಒಟ್ಟಿಗೆ ಸೇರಿಸುವಾಗ ಪೋಷಕರು ತಮ್ಮ ಮಕ್ಕಳು ವಿಶಿಷ್ಟವಾದ ಸಮವಸ್ತ್ರದ ಪೋಷಾಕಿನಲ್ಲಿ ಮೆರೆಯುವುದನ್ನು ನೋಡಲು ಇಷ್ಟಪಡುತ್ತಾರೆ. ಈ ರೀತಿಯ ಸಾರ್ವಜನಿಕ ಪ್ರದರ್ಶನಗಳ ಬಗ್ಗೆ ಸಾರ್ವಜನಿಕರಲ್ಲಿ ಕಾಣಬಹುದಾದ ಒಂದು ವ್ಯಾಮೋಹ ಮತ್ತು ಶಾಲಾ ಸಮವಸ್ತ್ರದ ಇತಿಹಾಸ ಇವೆರಡೂ ಸಹ ಶಾಲಾ ಸಮವಸ್ತ್ರವು ವಹಿಸುವ ಮುಖ್ಯ ಪಾತ್ರವನ್ನು ಸೂಚಿಸುತ್ತದೆ.

ಇದು ಯುವಪೀಳಿಗೆಯನ್ನು ಶಿಸ್ತಿಗೊಳಪಡಿಸುವ ಒಂದು ವಿಧಾನವಾಗಿ ಕಾಣುತ್ತದೆ. ಒಂದೇ ರೀತಿಯ ವಸ್ತ್ರ ಧರಿಸುವ ಶಾಲಾ ಮಕ್ಕಳು ಶಾಲಾ ಶಿಕ್ಷಣದ ಎರಡು ಆದ್ಯರೂಪದ ರೂಪಕಗಳ ಪ್ರತೀಕವಾಗಿ ಕಾಣುತ್ತಾರೆ. ವಿಭಿನ್ನ ಹೂಗಳನ್ನರಳಿಸುವ ಹೂದೋಟ ಒಂದಾದರೆ ಮತ್ತೊಂದು ಒಟ್ಟಿಗೆ ಚಲಿಸುತ್ತಿರುವ ಸೈನಿಕರ ಪಡೆ.

ಇತಿಹಾಸ ಮತ್ತು ಸಾಮಾಜಿಕ ಪರಿಣಾಮ

ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಕಡ್ಡಾಯ ಮಾಡಲಾಗಿರುವ ದೇಶಗಳು ಮತ್ತು ಕಡ್ಡಾಯ ಇಲ್ಲದ ದೇಶಗಳನ್ನು ಪ್ರತ್ಯೇಕಿಸಿ ನೋಡಿದಾಗ, ಇತಿಹಾಸ ತಂತಾನೇ ತೆರೆದುಕೊಳ್ಳುತ್ತದೆ. ವಿವಿಧ ರೀತಿಯ ವಸಾಹತು ಆಳ್ವಿಕೆಗೊಳಪಟ್ಟ ದೇಶಗಳಲ್ಲಿ ಉಗಮಿಸಿದ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಸಮವಸ್ತ್ರ ಕಡ್ಡಾಯವಾಗಿ ಜಾರಿಗೊಳಿಸಿರುವುದರ ಬಗ್ಗೆ ಒಲವು ತೋರುವುದನ್ನು ಗಮನಿಸಬಹುದು. ಅದರಲ್ಲಿ ಭಾರತವೂ ಒಂದು.

ನಮ್ಮ ಹಳೆಯ ನೆನಪುಗಳನ್ನು ಕೆದಕಿ, ಹಳೆಯ ಕಾಲದ ಫೋಟೋಗಳನ್ನು ಒಮ್ಮೆ ಅವಲೋಕಿಸಿದರೆ, ಶಾಲಾ ಸಮವಸ್ತ್ರದ ಆಲೋಚನೆಯು ನಗರೀಕರಣ, ಶ್ರೀಮಂತಿಕೆ ಮತ್ತು ಖಾಸಗೀಕರಣದ ಒಂದು ಭಾಗವಾಗಿಯೇ ಕಾಣುತ್ತದೆ. ಸ್ವಾತಂತ್ರ್ಯಾನಂತರದ ಭಾರತದಲ್ಲೂ ಸಹ ಗ್ರಾಮೀಣ ಮತ್ತು ಸಣ್ಣ ಪುಟ್ಟ ಊರುಗಳಲ್ಲಿನ ಶಾಲೆಗಳಲ್ಲಿ ಪ್ರತಿನಿತ್ಯ ಸಮವಸ್ತ್ರವನ್ನು ವಿಧಿಸಿರುವುದನ್ನು ಕಾಣಲಾಗುವುದಿಲ್ಲ. ವಾರದ ಕೆಲವು ದಿನಗಳು ಅಥವಾ ವಿಶೇಷ ದಿನಗಳಂದು ಮಾತ್ರವೇ ಸಮವಸ್ತ್ರ ಧರಿಸಲಾಗುತ್ತಿತ್ತು.

ಕ್ರಮೇಣ ವಿವಿಧ ರೀತಿಯ ಖಾಸಗಿ ಶಾಲೆಗಳು ಆರಂಭವಾದಂತೆಲ್ಲಾ ನಿಗದಿತ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾರಂಭಿಸಿದವು. ವಿವಿಧ ಶಾಲೆಗಳ ಮಕ್ಕಳಿಗೆ ಸಮವಸ್ತ್ರಗಳನ್ನು ಪೂರೈಸುವುದು ಸ್ಥಳೀಯ ಜವಳಿ ವರ್ತಕರಿಗೆ, ದರ್ಜಿಗಳಿಗೆ ಮತ್ತು ಶೂ ಮಾರಾಟ ಮಳಿಗೆಗಳಿಗೆ ಉತ್ತಮ ವ್ಯಾಪಾರದ ಅವಕಾಶಗಳನ್ನೂ ಕಲ್ಪಿಸಿತ್ತು. ಸ್ಪರ್ಧಾತ್ಮಕ ಬೆಲೆಗಳನ್ನು ವಿಧಿಸುವ ಬದಲಾಗಿ ಸಮವಸ್ತ್ರದ ವ್ಯಾಪಾರವು ಸ್ಥಳೀಯ ಏಕಸ್ವಾಮ್ಯಕ್ಕೆ ದಾರಿಮಾಡಿಕೊಟ್ಟಿತ್ತು. ಅನೇಕ ಸಂದರ್ಭಗಳಲ್ಲಿ ಶಾಲೆಗಳೂ ಇದರಲ್ಲಿ ಭಾಗಿಯಾಗಲು ಒಪ್ಪಿ, ನಿರ್ದಿಷ್ಟ ವರ್ತಕರ ಬಳಿಯೇ ವ್ಯವಹರಿಸುವಂತೆ ಪೋಷಕರ ಮೇಲೆ ಒತ್ತಡ ಹೇರತೊಡಗಿದವು.

ಆದೇಶ ಆಧಾರಿತ ವ್ಯವಸ್ಥೆ

ಈ ಸಂಕ್ಷಿಪ್ತವಾದ, ಸಾಮಾನ್ಯೀಕರಿಸಲ್ಪಟ್ಟ ಸಾಮಾಜಿಕ ಚರಿತ್ರೆ ಇಂದು ಕರ್ನಾಟಕದಲ್ಲಿರುವ ಪರಿಸ್ಥಿತಿಗೆ ಅಷ್ಟೇನೂ ಪ್ರಸ್ತುತ ಎನಿಸಲಾರದು. ನಿರ್ದೇಶನಾಲಯದ ಆದೇಶ ಮತ್ತು ನ್ಯಾಯಾಲಯದ ತೀರ್ಪು ಇವೆರಡರ ನಡುವೆ ಸಿಲುಕಿ ಕೆಲವೇ ವಾರಗಳ ಅವಧಿಯಲ್ಲಿ ಸಂಪೂರ್ಣ ಸಮವಸ್ತ್ರ ನೀತಿಯನ್ನೇ ಜಾರಿಗೊಳಿಸಲಾಗಿದೆ.

ಈಗ ಸರ್ಕಾರದ ಈ ನಿಯಮವು ಶಾಲಾ ಕೊಠಡಿಯಷ್ಟೇ ಅಲ್ಲದೆ ಪರೀಕ್ಷಾ ಕೊಠಡಿಯನ್ನೂ ತನ್ನ ವ್ಯಾಪ್ತಿಗೊಳಪಡಿಸಿದೆ. ಕೇಂದ್ರೀಯ ವಿದ್ಯಾಲಯಗಳು ಯಾವುದೇ ರಾಜ್ಯ ಸರ್ಕಾರಗಳ ಆದೇಶಗಳಿಗೆ ಒಳಪಡುವುದಿಲ್ಲವಾದರೂ ಕರ್ನಾಟಕದಲ್ಲಿರುವ ಈ ಶಾಲೆಗಳೂ ಸಹ ಸರ್ಕಾರದ ನಿಯಮವನ್ನು ಪಾಲಿಸಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಶಾಲೆಗಳ ನಿಲುವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ.

ಹೀಗೆ, ಭಾರತದ ಅತಿ ಹೆಚ್ಚು ಸಾಕ್ಷರತೆ ಹೊಂದಿದ, ಸಂಪದ್ಭರಿತ ರಾಜ್ಯ, ಜ್ಞಾನ ಆರ್ಥಿಕತೆಯಲ್ಲಿನ ತನ್ನ ಪ್ರಗತಿಗೆ ವಿಶ್ವ ಖ್ಯಾತಿಯನ್ನು ಗಳಿಸಿರುವ ಒಂದು ರಾಜ್ಯ ಇಂದು ಶೈಕ್ಷಣಿಕ ಸಾಂಪ್ರದಾಯಿಕತೆ ಮತ್ತು ನಿಯಂತ್ರಣದ ಅಗ್ನಿಪರೀಕ್ಷೆಗೆ ಒಳಗಾಗಿದೆ. ಶಾಲಾ ಸಮವಸ್ತ್ರ ಒಂದು ಹೊಸ ರಾಜಕೀಯ ಅಸ್ತ್ರವಾಗಿ ರೂಪಾಂತರ ಹೊಂದಿದೆ.

ತನ್ಮೂಲಕ ಪ್ರಾಂಶುಪಾಲರು ಮತ್ತು ಶಿಕ್ಷಕರು ಈಗ ಹೊಂದಿರುವಂತಹ ಸೀಮಿತವಾದ ಸ್ವಾಯತ್ತತೆಯನ್ನು ಮತ್ತಷ್ಟು ಕಡಿತಗೊಳಿಸಿದೆ. ಶಾಲಾ ಸಮವಸ್ತ್ರದ ವಿಚಾರದಲ್ಲಿನ ರಾಜಕಾರಣವು ಎಷ್ಟರ ಮಟ್ಟಿಗೆ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಸಮಾಜ ವಿಜ್ಞಾನದ ಅಧ್ಯಯನಕ್ಕೆ ಸೂಕ್ತವಾದ ವಿಷಯವಾಗಿದೆ. ಶಾಲಾ ಸಮವಸ್ತ್ರ ಅದರ ಇತಿಹಾಸ ಮತ್ತು ಅದರ ಬಗ್ಗೆ ಇರುವ ವ್ಯಾಮೋಹ ಇವುಗಳ ವ್ಯವಸ್ಥಿತ ಅಧ್ಯಯನ ಅತ್ಯವಶ್ಯವಾಗಿದೆ.

ಆಸಕ್ತಿದಾಯಕ ಸಂಗತಿ ಎಂದರೆ 1960ರ ಪ್ರಮುಖ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕಡೆಗಣಿಸಿ ಮುಂದುವರೆದ ಒಂದು ರಾಜ್ಯದಲ್ಲಿ ಮಾಧ್ಯಮಿಕ ಶಿಕ್ಷಣ ವಲಯದಲ್ಲಿ ಸಮವಸ್ತ್ರ ವಿವಾದದ ವಿಚಾರವಾಗಿದೆ. ಇಂದು ಪಿಯುಸಿ ಅಥವಾ ಜೂನಿಯರ್‌ ಕಾಲೇಜುಗಳು ಕೆಲವೇ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿವೆ. ದೇಶದ ಇತರ ರಾಜ್ಯಗಳಲ್ಲಿ ಕೊಥಾರಿ ಆಯೋಗದ ಶಿಫಾರಸಿನ ಅನುಸಾರ 10+2 ಶಿಕ್ಷಣ ವ್ಯವಸ್ಥೆಯೇ ಜಾರಿಯಲ್ಲಿದೆ. ಇದರಿಂದ ಶೈಕ್ಷಣಿಕ ವಲಯದ ಆಡಳಿತ ನಿರ್ವಹಣೆಯ ಪುನರ್‌ ಸಂಘಟನೆಯೂ ಸಾಧ್ಯವಾಗಿದೆ. ಈ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ನೀಡಿ ಸಂಸ್ಥೆಗಳ ನಿರ್ವಹಣಾ ನಿಯಮಗಳನ್ನು ರೂಪಿಸಲು ಅವಕಾಶ ನೀಡಿದ್ದಲ್ಲಿ ಈ ಪದ್ಧತಿಯ ಸಂಪೂರ್ಣ ಉಪಯುಕ್ತತತೆಯನ್ನು ಸಾಕಾರಗೊಳಿಸಬಹುದಿತ್ತು.

ಮತ್ತೊಂದೆಡೆ ಶಾಲೆಗಳ ದೈನಂದಿನ ಚಟುವಟಿಕೆಗಳಲ್ಲಿ ಸಮುದಾಯಕ್ಕೆ ಭಾಗವಹಿಸುವ ಅವಕಾಶವನ್ನು ನೀಡಲೂ ಸಾಧ್ಯವಾಗುತ್ತಿತ್ತು. ಕೊಥಾರಿ ಆಯೋಗದ ಸದಸ್ಯ ಕಾರ್ಯದರ್ಶಿ ಜೆ ಪಿ ನಾಯಕ್ ಅವರ ಸಲಹೆಯ ಮೇರೆಗೆ ರೂಪಿಸಲಾಗಿದ್ದ ಆಯೋಗದ ಮುನ್ನೋಟವನ್ನು ಪರಿಪೂರ್ಣವಾಗಿ ಸಾಕಾರಗೊಳಿಸಿದ್ದಲ್ಲಿ ಅಧಿಕಾರಶಾಹಿಯ ನಿಯಂತ್ರಣ ಕಡಿಮೆಯಾಗುತ್ತಿತ್ತು ಹಾಗೂ ಇದರಿಂದ ಶಾಲೆಗಳ ಸ್ವಾಯತ್ತತೆಯೂ ಹೆಚ್ಚಾಗುತ್ತಿತ್ತು.

ಇದರಿಂದ ಶಾಲೆಗಳೇ ಬೌದ್ಧಿಕ ಸಂಪನ್ಮೂಲವಾಗುವಂತಹ ಒಂದು ಭಿನ್ನ ರೀತಿಯ ರಾಜಕಾರಣ ಸೃಷ್ಟಿಯಾಗುವ ಸಾಧ್ಯತೆಗಳಿದ್ದವು. ಇಂತಹ ಒಂದು ಪರ್ಯಾಯ ಪ್ರಜಾಸತ್ತಾತ್ಮಕ ರಾಜಕಾರಣಕ್ಕೆ ಕರ್ನಾಟಕ ಸಾಮಾಜಿಕ ನೆಲೆಯಲ್ಲಿ ಒಂದು ಪ್ರಶಸ್ತ ಭೂಮಿಕೆಯಾಗಬಹುದಿತ್ತು. ಏಕೆಂದರೆ ವಿಕೇಂದ್ರೀಕರಣನ ಆಡಳಿತ ವ್ಯವಸ್ಥೆಯಲ್ಲಿ ಕರ್ನಾಟಕ ತನ್ನದೇ ಆದ ಪರಂಪರೆಯನ್ನೂ ಹೊಂದಿದೆ.

ಆದರೆ ಇತಿಹಾಸ ಬೇರೆ ರೀತಿಯ ತಿರುವು ಪಡೆದುಕೊಂಡಿತು. ಕರ್ನಾಟಕದಲ್ಲಿ ಒಬ್ಬ ಶಿಕ್ಷಕ ಅಥವಾ ಜೂನಿಯರ್‌ ಕಾಲೇಜಿನ ಪ್ರಾಂಶುಪಾಲರು ಒಂದು ಸಮವಸ್ತ್ರದ ಕಾರಣಕ್ಕಾಗಿ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಗೆ ಪ್ರವೇಶಿಸದಂತೆ ತಡೆಹಿಡಿಯುವ ದೃಶ್ಯ ಒಂದು ನಿರ್ದಯಿ ಕ್ರಿಯೆಯ ಸಂಕೇತವಾಗಿ ಬಹಳ ವರ್ಷಗಳ ಕಾಲ ಕಾಡಲಿದೆ. ಬಹುಶಃ ವಿದ್ಯಾರ್ಥಿಯ ಅವಸ್ಥೆ ಬೋಧಕರ ಶಿಕ್ಷಣ ಕಾಲೇಜುಗಳಲ್ಲಿ ಚರ್ಚೆಗೊಳಪಡಬೇಕಾದ ವಿಚಾರವೂ ಆಗಬೇಕಿದೆ.

ಇಲ್ಲಿ ಉದ್ಭವಿಸಬಹುದಾದ ಪ್ರಶ್ನೆ ಎಂದರೆ : “ ಆ ಶಿಕ್ಷಕಿ ಅಥವಾ ಪ್ರಾಂಶುಪಾಲೆ ಆದೇಶವನ್ನು ಪಾಲಿಸುವ ದೃಷ್ಟಿಯಿಂದ ಸ್ವ ಪ್ರೇರಣೆಯಿಂದ ಆ ವಿದ್ಯಾರ್ಥಿಯ ಬಗ್ಗೆ ಅಷ್ಟು ನಿಷ್ಕಾರುಣ್ಯವಾಗಿ ವರ್ತಿಸಿದರೇ ?” ಈ ನಿಟ್ಟಿನಲ್ಲಿ ಒಂದು ಆಡಳಿತಾತ್ಮಕ ಪ್ರಶ್ನೆಯೂ ಉದ್ಭವಿಸುತ್ತದೆ. ʼ ನಿಗದಿತ ಸಮವಸ್ತ್ರ ಧಾರಣೆಯ ಬಗ್ಗೆ ಶಿಕ್ಷಣ ನಿರ್ದೇಶನಾಲಯದ ಆದೇಶವು ಪರೀಕ್ಷಾ ಕೊಠಡಿಗೆ ಅನ್ವಯಿಸುವುದೇ ? ʼ. ತಾತ್ವಿಕವಾಗಿ ಅನ್ವಯಿಸುತ್ತದೆ.

ಅದರೆ ಇದು ಶಾಲಾ ಸಮವಸ್ತ್ರದ ಪಾತ್ರವನ್ನು ಮತ್ತಷ್ಟು ವಿಸ್ತರಿಸಿ ಸಾಮೂಹಿಕ ಸಾಂಸ್ಥಿಕ ಅಸ್ಮಿತೆಯನ್ನು ಕಲ್ಪಿಸುವತ್ತ ಸಾಗುತ್ತದೆ. ಈ ಅಸ್ಮಿತೆಯ ವ್ಯಾಪ್ತಿಯಲ್ಲಿ ಪರೀಕ್ಷಾ ಕೊಠಡಿಯನ್ನೂ ಒಳಗೊಳ್ಳುವುದೇ ಆದರೆ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ಅಥವಾ ಪ್ರವೇಶಾನುಮತಿ ಪತ್ರ ಏಕೆ ಬೇಕು ? ಅವರ ವೈಯಕ್ತಿಕ ಅಸ್ಮಿತೆಯನ್ನು ಗುರುತಿಸಲೆಂದೇ ? ಈ ವಿಚಾರದಲ್ಲಿ ಕಾನೂನು ವಲಯದಲ್ಲಿ ನಡೆಯುವ ವಾದಗಳು ಕಲಿಕಾರ್ಥಿಗಳ ಮತ್ತು ಪರೀಕ್ಷಾರ್ಥಿಗಳ ಬದುಕಿನ ಈ ಅಂಶದ ಬಗ್ಗೆಯೂ ಇರುತ್ತದೆ ಎಂದು ಅಪೇಕ್ಷಿಸೋಣ.

ಪ್ರಮುಖ ವ್ಯತ್ಯಾಸ

ಈ ಸಂದರ್ಭದಲ್ಲೂ ಸಹ ಒಂದು ಪ್ರಮುಖವಾದ ವ್ಯತ್ಯಾಸವನ್ನು ಗುರುತಿಸುವುದು ಉಚಿತ. ಸಮವಸ್ತ್ರಕ್ಕೂ ವಸ್ತ್ರ ಸಂಹಿತೆಗೂ ವ್ಯತ್ಯಾಸವಿದೆ. ವಸ್ತ್ರ ಸಂಹಿತೆಗಿಂತಲೂ ಸಮವಸ್ತ್ರಧಾರಣೆ ಹೆಚ್ಚು ಆದೇಶಾತ್ಮಕವಾಗಿರುತ್ತದೆ. ವಸ್ತ್ರ ಸಂಹಿತೆಯನ್ನು ವಿಧಿಸುವಾಗ ಮಕ್ಕಳು ಮತ್ತು ಪೋಷಕರು ಅವರ ಅಂತಸ್ತು ಮತ್ತು ಶ್ರೀಮಂತಿಕೆಗೆ ಅನುಗುಣವಾಗಿ ಉಡುಪು ಧರಿಸಲು ಸಾಧ್ಯವಾಗದಿರಬಹುದು. ಆದರೆ ಸಮವಸ್ತ್ರ ವಿಧಿಸಿದಾಗ, ಕೇವಲ ಉಡುಪಿನ ಬಣ್ಣ ಮಾತ್ರವೇ ಅಲ್ಲದೆ ಅದರ ವಿನ್ಯಾಸ ಮತ್ತು ಮಾದರಿಯೂ ಸಹ ನಿರ್ದಿಷ್ಟ ಶೈಲಿಯಲ್ಲೇ ಇರಬೇಕಾಗುತ್ತದೆ.

ಹಿಂದಿನ ಕಾಲದಲ್ಲಿ ಕೇವಲ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿವುದು ಸಾಕೆನಿಸುತ್ತಿತ್ತು ಆದರೆ ಇಂದು ಸಮವಸ್ತ್ರ ಹೀಗೇ ಇರಬೇಕೆಂಬ ಷರತ್ತು ವಿಧಿಸುವ ಸನ್ನಿವೇಶವನ್ನು ಕಾಣುತ್ತಿದ್ದೇವೆ. ವಿಶಿಷ್ಟ ಸಾಮಾಜಿಕ ಲಕ್ಷಣಗಳು ಕಣ್ಣಿಗೆ ಕಾಣುವಂತಹ ಬಳಕೆಯ ಹವ್ಯಾಸವನ್ನು ಪ್ರಚೋದಿಸುತ್ತದೆ. ಭೋಜನ ಕೂಟಗಳು ಶಾಲೆಗಳಷ್ಟೇ ಪರಿಣಾಮಕಾರಿಯಾಗಿ ಈ ಉದ್ದೇಶವನ್ನು ಈಡೇರಿಸುತ್ತವೆ. ಅಸಮಾನತೆಯು ಸರ್ವವ್ಯಾಪಿಯಾಗಿರುವ ಒಂದು ಸಮಾಜದಲ್ಲಿ ಸಮಾನತೆಯನ್ನು ಬಿಂಬಿಸುವ ಒಂದು ಸೂಚನೆಯಾಗಿ ಸಮವಸ್ತ್ರ ಕಾಣುತ್ತದೆ.

ಆದರೆ ಶಿಕ್ಷಣ ಎನ್ನುವುದು ಸಮಾಜದ ಎಲ್ಲ ವರ್ಗಗಳ ಮತ್ತು ಎಲ್ಲ ಸ್ತರಗಳ ಜನರಿಗೆ ಸಮಾನ ಅವಕಾಶಗಳನ್ನು ಪ್ರೋತ್ಸಾಹಿಸುವ ಒಂದು ಕ್ಷೇತ್ರವಾಗಿರಬೇಕೆಂದು ಅಪೇಕ್ಷಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣವು ನೀಡಬಹುದಾದ ಬಹುಮುಖ್ಯವಾದ ಕೊಡುಗೆ ಎಂದರೆ ಸಾರ್ವಜನಿಕ ಚರ್ಚೆಯ ವ್ಯಾಪ್ತಿಯನ್ನು ಹೆಚ್ಚಿಸುವುದು , ತನ್ಮೂಲಕ ವಿಶೇಷವಾಗಿ ಶಿಕ್ಷಕರನ್ನು ಒಳಗೊಂಡಂತೆ ಎಲ್ಲ ಭಾಗಿದಾರರಿಗೂ ಭಾಗವಹಿಸಲು ಅವಕಾಶ ಮಾಡಿಕೊಡುವುದು. ವಿಭಿನ್ನ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳೊಡನೆ ಶಿಕ್ಷಕರು ನಿಕಟ ಸಂಪರ್ಕ ಹೊಂದಿರುತ್ತಾರೆ. ಆದುದರಿಂದ ಎಲ್ಲ ಮಕ್ಕಳಿಗೂ ಶಾಲಾ ಕೊಠಡಿಯು ಹೆಚ್ಚು ಹಿತಕರವಾಗಿರುವಂತೆ ಮಾಡುವುದರ ಬಗ್ಗೆ ಸೂಕ್ಷ್ಮ ಗ್ರಹಿಕೆ ಹೊಂದಿರುತ್ತಾರೆ.

ಈ ಸಾಮೂಹಿಕ ಇರುವಿಕೆಯ ಸ್ಥಿತಿಯ ಹಿಂದಿರುವ ಸಮಸ್ಯೆಗಳನ್ನು ಶ್ರೀ ಅರಬಿಂದೋ ವಿಶ್ಲೇಷಿಸಿರುವಂತೆ ಬಹುಶಃ ಯಾವುದೇ ಆಧುನಿಕ ತತ್ವಶಾಸ್ತ್ರಜ್ಞರು ವಿಶ್ಲೇಷಿಸಿಲ್ಲ. ತಮ್ಮ” ದ ಐಡಿಯಲ್‌ ಆಫ್‌ ಹ್ಯೂಮನ್‌ ಯೂನಿಟಿ ” ಪ್ರಬಂಧದಲ್ಲಿ ಅವರು ಪ್ರಕೃತಿಯ ವೈವಿಧ್ಯತೆಯ ನೆಲೆಯಲ್ಲೇ ಹೇಗೆ ಏಕರೂಪತೆ ಎನ್ನುವುದು ನಮ್ಮನ್ನು ಉತ್ತೇಜಿಸಿದರೂ, ಪರಸ್ಪರ ಸಂಬಂಧಗಳ ಅಥವಾ ಏಕತೆಯ ಪ್ರಜ್ಞೆಯನ್ನು ಮೂಡಿಸುವುದಿಲ್ಲ ಎನ್ನುವುದನ್ನು ವಿವರಿಸುತ್ತಾರೆ.

ಅವರು ತಮ್ಮ ವಿಶ್ಲೇಷಣೆಯನ್ನು ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಿಚಾರಗಳಿಗೂ ವಿಶ್ಲೇಷಿಸುತ್ತಾ ಅಂತರರಾಷ್ಟ್ರೀಯ ಸಂಬಂಧಗಳಿಗೂ ಅನ್ವಯಿಸುತ್ತಾರೆ. ನಮ್ಮ ವರ್ತಮಾನದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಉಂಟಾಗಿರುವ ಕ್ಷೋಭೆಯನ್ನು ಶಿಕ್ಷಣದ ಪಾತ್ರ ಮತ್ತು ಶಿಕ್ಷಣವು ಒಂದು ವ್ಯವಸ್ಥೆಯಾಗಿ ನಿರ್ವಹಿಸಬಹುದಾದ ಪಾತ್ರದ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಿದೆ. ಸಮವಸ್ತ್ರ ಎಂಬ ಪದವೇ ಸೂಚಿಸುವಂತೆ, ಸಮಾನ ಉಡುಪು ಎಲ್ಲ ತಾರತಮ್ಯ, ವ್ಯತ್ಯಯಗಳನ್ನೂ ದಾಟಲಾಗಿದೆ ಎಂಬ ಸಂದೇಶವನ್ನು ರವಾನಿಸುತ್ತದೆ.

ಕರ್ನಾಟಕದಲ್ಲಿ ಇದು ಸಾಧ್ಯವಾಗಿದ್ದ ಪಕ್ಷದಲ್ಲಿ, ಇದನ್ನು ಪರಿಪಾಲಿಸಲು ನಿರ್ದೇಶನಾಲಯವು ಆದೇಶ ಹೊರಡಿಸುವ ಅವಶ್ಯಕತೆ ಇರಲಿಲ್ಲ. ವಸಾಹತು ಅವಧಿಯಲ್ಲಿ ರಚಿಸಲ್ಪಟ್ಟ ಈ ಸಂಸ್ಥೆಯು ತನ್ನ ಅಧಿಕಾರಶಾಹಿ ಧೋರಣೆಯನ್ನು ಅರ್ಥಮಾಡಿಕೊಳ್ಳಲು, ಜೆ ಪಿ ನಾಯಕ್‌ ಅವರು ನನಗೆ ಹೇಳಿದ ಒಂದು ಪ್ರಸಂಗ ನೆರವಾಗಬಹುದು.

ಶಾಲಾ ಕೊಠಡಿಯ ಬೋಧನೆಯನ್ನು ರೂಢಮಾದರಿಯನ್ನಾಗಿ ಮಾಡದಿರುವಂತೆ ಮತ್ತು ಹೆಚ್ಚು ಜೀವಂತಿಕೆಯಿಂದ ಕೂಡಿದ ಮಕ್ಕಳ ಕೇಂದ್ರಿತವಾಗಿ ಮಾಡುವಂತೆ, ಕೊಥಾರಿ ಆಯೋಗವು ಹಲವು ಸಲಹೆಗಳನ್ನು ನೀಡಿತ್ತು. ಕೊಥಾರಿ ಆಯೋಗದ ವರದಿಯು ಅಧಿಕೃತವಾಗಿ ಅನುಮೋದನೆ ಪಡೆದ ಕೂಡಲೇ ಮಹಾರಾಷ್ಟ್ರದ ಶಿಕ್ಷಣ ನಿರ್ದೇಶನಾಲಯವು ಒಂದು ಅರೆ ಸರ್ಕಾರಿ ಆದೇಶ ಹೊರಡಿಸಿ , ಮೇಲಧಿಕಾರಿಗಳ ಆದೇಶದ ಮೇರೆಗೆ ಎಲ್ಲ ಶಾಲೆಗಳಲ್ಲೂ ಬೋಧನೆಯು ಮಕ್ಕಳ ಕೇಂದ್ರಿತವಾಗಿರತಕ್ಕದ್ದು ಎಂದು ಆಜ್ಞೆ ಹೊರಡಿಸಿತ್ತು !

(The School dress in cross hairs : ದ ಹಿಂದೂ 6-ಮೇ-2022) ( ಪ್ರೊ ಕೃಷ್ಣಕುಮಾರ್‌, ಎನ್‌ಸಿಇಆರ್‌ಟಿ ಮಾಜಿ ನಿರ್ದೇಶಕರು ಮತ್ತು ಸ್ಮಾಲರ್‌ ಸಿಟಿಜನ್ಸ್‌ ಕೃತಿಯ ಲೇಖಕರು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending