ಲೈಫ್ ಸ್ಟೈಲ್
ಹತ್ತೂರಲ್ಲೂ ಇಲ್ಲದ ‘ಕುಲಂಕಾರೇಶ್ವರ’ನ ಉತ್ಸವ
ನಮ್ಮ ದೇಶದ ಹಬ್ಬಗಳಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಜರಗುವ ಹಿಂದೂ ಹಬ್ಬಗಳಿಗೆ ವಿಶೇಷ ಮಾನ್ಯತೆ ಇದೆ. ವರ್ಷದುದ್ದಕ್ಕೂ ಪ್ರತಿ ತಿಂಗಳು ಸಾಮಾನ್ಯವಾಗಿ ಎರಡರಿಂದ ಮೂರು ಜಾತ್ರೆಗಳು ಬಂದೆ ಬರುತ್ತವೆ. ಹಬ್ಬ ಬಂದರೆ ಸಾಕು ಮನೆಗಳಲ್ಲಿ ಹೆಣ್ಣಮಕ್ಕಳಿಗೆ ಕೆಲಸಗಳ ಸರಮಾಲೆ ಶುರುವಾಗುತ್ತದೆ. ಪ್ರತಿ ತಿಂಗಳು ಬರುವ ಹಬ್ಬಗಳಿಗಿಂತಲೂ ವರ್ಷಕ್ಕೋಮ್ಮೆ ಬರುವ ಕೆಲವು ಹಬ್ಬಗಳು ವಿಶೇಷವಾಗಿವೆ. ಅವುಗಳಲ್ಲಿ ಯುಗಾದಿ, ನಾಗರಪಂಚಮಿ, ದಿಪಾವಳಿ, ಮಹಾನವಮಿ, ಗಣೇಶ ಚತುರ್ಥಿ, ಹೀಗೆ ಅನೇಕ ಹಬ್ಬಗಳು ಬರುತ್ತವೆ.
ಈ ಹಬ್ಬಗಳಿಗೂ ಒಂದೊಂದು ವಿಶೇಷಗಳು ಇವೆ. ಈಗ ನಾನು ಹಿಂದೂ ವಾರ್ಷಿಕ ಪಂಚಾಂಗದ ಪ್ರಕಾರ ಬರುವ ವರ್ಷದ ಎರಡನೇ ಹಬ್ಬವಾದ ಅಕ್ಷಯ ತೃತೀಯದ ಬಗ್ಗೆ ಮಾತಾಡುತ್ತಿದ್ದೆನೆ. ಅಕ್ಷಯ ತೃತೀಯ ಅಂದರೆ ಏನು? ಇದರ ಅರ್ಥ ವೇನು? ಅದರ ಮಹತ್ವವೇನು? ಅನ್ನೊದು ತಿಳಿದರೆ ಸೂಕ್ತವಾಗಿರುತ್ತದೆ. ಅಕ್ಷಯ ತೃತೀಯ ಹಬ್ಬವು ಹಿಂದೂಗಳು ಮತ್ತು ಜೈನರ ವಾರ್ಷಿಕ ವಸಂತಕಾಲದ ಉತ್ಸವವಾಗಿದೆ. ಇದು ವೈಶಾಖ ತಿಂಗಳಿನ ಶುಕ್ಲ ಪಕ್ಷದ ಮೂರನೇ ತಿಥಿಯ ಚಂದ್ರ ದಿನದಂದು ಬರುತ್ತದೆ. ಭಾರತ ಮತ್ತು ನೇಪಾಳದಲ್ಲಿರುವ ಹಿಂದೂ ಹಾಗೂ ಜೈನ ಜನಾಂಗದವರು ಒಟ್ಟಾಗಿ ಪ್ರಾದೇಶಿಕ ಹಬ್ಬವಾಗಿ ಆಚರಿಸುತ್ತಿದ್ದಾರೆ. ಹಬ್ಬದ ದಿನಾಂಕವು ಬದಲಾಗುತ್ತದೆ. ಹಾಗೂ ಲುನಿಜೊಲಾರ್ ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಂದಿಸಲಾಗಿದೆ ಮತ್ತು ಗ್ರಗೋರಿಯನ್ ಕ್ಯಾಲೆಂಡರ್ನಲ್ಲಿ ಪ್ರತಿವರ್ಷ ಏಪ್ರೀಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ.
“ಅಕ್ಷಯ ಅಂದರೆ ಅಕ್ತಿ ಅಥವಾ ಅಖಾ ತೇಜ್ ಎಂಬರ್ಥ ನೀಡುತ್ತದೆ.” ಇದು ಶಾಶ್ವತವಾದ ಮೂರನೇ ದಿನವಾಗಿದೆ ಎಂದು ಹೇಳಲಾಗುತ್ತದೆ. ಸಂಸ್ಕøತದಲ್ಲಿ ‘ಅಕ್ಷಯ’ ಪದಕ್ಕೆ ಸಮೃದ್ಧತೆ, ಭರವಸೆ, ಸಂತೋಷ, ಯಶಸ್ಸು ಎನ್ನುವ ಅರ್ಥಗಳಿವೆ. ಇವುಗಳ ಜೊತೆಗೆ ನಾಶವಾಗದ, ಶಾಶ್ವತವಾದ, ಎಂದಿಗೂ ಕಡಿಮೆಯಾಗದೆ ಇರುವ, ಎನ್ನುವ ಅರ್ಥವನ್ನು ಸಹ ನೀಡುತ್ತವೆ.
ತೃತೀಯಾ ಅಂದರೆ “ಮೂರುನೇಯದು” ಎಂದರ್ಥ ನೀಡುತ್ತದೆ. ಇದು ವಸಂತ ತಿಂಗಳ ‘ಮೂರನೇ ಚಂದ್ರನ ದಿನ’ ಎಂದು ಹೆಸರಿಸಲಾಗಿದೆ. ಈ ದಿನದಂದು ಜನರು ಯಾವುದೇ ಪಂಚಾಂಗನೋಡುವುದಿಲ್ಲ ಏಕೆಂದರೇ ಈ ದಿನ ಅತ್ಯಂತ ಶ್ರೇಷ್ಠವಾಗಿದೆ.
ಈ ದಿನದಂದು ಜನರು ಹೊಸ ಕೆಲಸಗಳಿಗೆ ಕೈಹಾಕುತ್ತಾರೆ. ವಿವಾಹ ಮಾಡುವುದು, ಚಿನ್ನ, ಆಸ್ತಿಗಳ ಖರೀದಿ, ಹಣ ಹೂಡಿಕೆ ಮಾಡುವುದು, ಹೀಗೆ ಅನೇಕ ಶುಭಕಾರ್ಯಗಳಿಗೆ ನಾಂದಿಹಾಡುತ್ತಾರೆ. ಹಿಂದೂ ಹಾಗೂ ಜೈನರುಗಳು ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ವಿವಾಹಿತ ಮಹಿಳೆಯರು ತಮ್ಮ ಪತಿಯ ಯೋಗಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಕ್ಷಯ ತೃತೀಯ ಹಬ್ಬವು ಸೋಮವಾರದಂದು ರೋಹಿಣಿ ನಕ್ಷತ್ರ ಬಂದರೆ ಇದು ಮತ್ತಷ್ಟು ಮಂಗಳಕರವಾದ ದಿನವೆಂದು ನಂಬಲಾಗಿದೆ. ಈ ದಿನದಂದು ಉಪವಾಸ, ದಾನ, ಹೋಮ ಹವನಗಳು, ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.
ಹಿಂದೂ ಧರ್ಮದಲ್ಲಿ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಹುಟ್ಟಿದ ದಿನವಾಗಿ ಅಕ್ಷಯ ತೃತೀಯವನ್ನು ಆಚರಿಸಲಾಗುತ್ತದೆ. ಇಷ್ಟೆಲ್ಲ ವಿಶೇಷತೆ ಇರುವ ಅಕ್ಷಯ ತೃತೀಯ ಹಬ್ಬದಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ ಗ್ರಾಮದಲ್ಲಿ ಆರಾಧ್ಯದೇವರಾದ ಕುಲಂಕಾರೇಶ್ವರ ಹಾಗೂ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಜರಗುತ್ತದೆ. ಅಕ್ಷಯ ತೃತೀಯದ ಹಿಂದಿನ ದಿನದಂದು ಜಾತ್ರಾ ಉತ್ಸವ ಪ್ರಾರಂಭವಾಗಿ ಸುಮಾರು ಐದು ದಿನಗಳವರೆಗೆ ಅಂದರೆ ಅಕ್ಷಯ ತೃತೀಯದ ಬಸವ ಜಯಂತಿಯ ದಿನದಂದು ಅತಿ ವಿಜ್ರಂಭಣೆಯಿಂದ ನಡೆಯುತ್ತದೆ.
ಈ ಗ್ರಾಮದ ಆರಾಧ್ಯ ದೇವರಾದ ಕುಲಂಕಾರೇಶ್ವರ ಇತಿಹಾಸ ಇಲ್ಲಿಯವರೆಗೂ ಯಾವುದೇ ರೀತಿಯಲ್ಲಿ ಐತಿಹಾಸಿಕ ಗ್ರಂಥಗಳಲ್ಲಿ ದಾಖಲೆಯಿಲ್ಲ. ದೇಶದಲ್ಲಿಯೇ ಮತ್ತೊಂದು ಬೇರೆ ಯಾವುದೇ ಅಥರ್ಗಾ ಎನ್ನುವ ಊರಿಲ್ಲ ಹಾಗೂ ಕುಲಂಕಾರೇಶ್ವರ ಎನ್ನುವ ದೇವರಿಲ್ಲ ಎಂದು ಹಿರಿಯರೂ ಕಿರಿಯರಿಗೆ ಶ್ರೀ ಕುಲಂಕಾರೇಶ್ವರ ದೇವರ ಪವಾಡ ಹಾಗೂ ಆಲಯದ ಸ್ಥಾಪನೆಯ ಕುರಿತಾದ ಇತಿಹಾಸವನ್ನು ತಿಳಿಸುತ್ತಾರೆ.
ಆದಿ ಕಾಲದಲ್ಲಿ ಬಂಗಾಲ ದೇಶದಿಂದ ಲೋಕಸಂಚಾರ ಮಾಡುತ್ತಾ ಬಂದ ಕುದುರೆ ಸವಾರನ ವೇಶದಲ್ಲಿದ್ದ ಶಿವನ ಸ್ವರೂಪಿ ಮಹಾನ ತಪಸ್ವಿಯೊಬ್ಬಾತ ದಟ್ಟವಾದ ಅರಣ್ಯ ಅದರ ಪಕ್ಕದಲ್ಲಿಯೇ ತುಂಬಿ ಸಮೃದ್ಧವಾಗಿ ಹರಿಯುತ್ತಿರುವ ಗಂಗೆ, ಈ ಗಂಗೆಯ ದಡದಲ್ಲಿ ಬೃಹತ್ ಆಕಾರವಾಗಿ ಬೆಳದು ನಿಂತ ರೇವಡಿಮರ, ಈ ಮರವನ್ನು ನೋಡಿದ ಮಹಾತಪಸ್ವೀಯಾದ ದೈವಿ ಪುರುಷ ಮರದ ಕೆಳಗೆ ದ್ಯಾನಕ್ಕೆ ಕುಳಿತರು. ಇವರು ಕುಳಿತ ಸ್ಥಳವೇ ಇಂದು ಪುಣ್ಯ ಸ್ಥಳವಾಗಿದೆ. ಅಂದಿನ ಕಾಲದಲ್ಲಿ ಆ ದಟ್ಟರಣ್ಯದಲ್ಲಿ ಸಮಾನ್ಯ ಜನರು ಹೋಗಲು ಹೆದರುತ್ತಿದ್ದರು. ಪರಿಸ್ಥಿತಿ ಹೀಗಿರುವಾಗ ಕಳ್ಳರ ಗುಂಪೊಂದು ಎಮ್ಮೆಗಳನ್ನು ಹೊಡೆದುಕೊಂಡು ದಟ್ಟಅರಣ್ಯದಲ್ಲಿ ಹೋಗುತ್ತಾರೆ. ಕಳ್ಳರ ಎದುರಿಗೆ ಶಿವನ ಸ್ಪರೂಪಿಯ ಜಟಾಧಾರಿ ದ್ಯಾನಕ್ಕೆ ಕುಳಿತ್ತಿದ್ದರು. ಕಳ್ಳರನ್ನು ಊರಿನ ಜನರು ಹಿಂಬಾಲಿಸುತ್ತಿರುವುದು ತಿಳಿಯಿತು. ಕಳ್ಳರು ಶಿವ ಸ್ವರೂಪಿಯಾದ ತಪಸ್ವಿಯ ಎದುರು ತಮ್ಮನ್ನು ಈ ಸಂಕಷ್ಟದಿಂದ ರಕ್ಷಿಸು ಎಂದು ಕೇಳುತ್ತಾರೆ ಕರುಣಾಮಯಿಯಾದ ಕುಲಂಕಾರೇಶ್ವರರು ಅವರನ್ನು ರಕ್ಷಿಸಿದರು.
ಜ್ಞಾನದ ಅರಿವು ನೀಡಿದರು. ಊರಿನ ಜನರು ಬರುವಷ್ಟರಲ್ಲಿಯೆ ತಮ್ಮ ದಿವ್ಯ ಶಕ್ತಿಯಿಂದ ಪಕ್ಕದಲ್ಲಿಯೇ ಇದ್ದ ಭಸ್ಮವನ್ನು ತೆಗೆದುಕೊಂಡು ಕಳ್ಳರು ತಂದಿದ್ದ ಎಮ್ಮೆಗಳ ಮೇಲೆ ಹಚ್ಚುತ್ತಾರೆ ಕರಿ ಎಮ್ಮೆಗಳನ್ನು ಬಿಳಿ ಎಮ್ಮೆಗಳನ್ನಾಗಿಸಿ ಬದಲಾಯಿಸುತ್ತಾರೆ ಇದನ್ನು ನೋಡಿದ ಕಳ್ಳರು ಆಶ್ಚರ್ಯದಿಂದ ಅಲ್ಲೇ ಅಡಗಿ ಕುಳಿತ್ತುಕೊಳ್ಳುತ್ತಾರೆ. ಅರಣ್ಯದಲ್ಲಿ ಬಂದ ಊರಿನ ಜನರು ಈ ಎಮ್ಮೆಗಳು ತಮ್ಮದಲ್ಲೆಂದು ಹೇಳಿ ಹೋಗುತ್ತಾರೆ. ನಂತರ ಅಡಗಿ ಕುಳಿತ ಕಳ್ಳರು ಹೊರಬಂದು ತಮ್ಮ ತಪ್ಪನ್ನು ಅರಿತು ಶಿವ ಸ್ವರೂಪಿಯಾದ ತಪಸ್ವಿಯ ಪಾದಗಳಿಗೆ ಶರಣಾಗಿ ನಮ್ಮ ತಪ್ಪುಗಳನ್ನು ಕ್ಷಮಿಸು ಎಂದು ಕೇಳುತ್ತಾರೆ. ಕುಲಂಕಾರೇಶ್ವರರು ಕ್ಷಮಿಸಿ ಜ್ಞಾನದ ಬೆಳಕನ್ನು ಬೆಳಗಿ ಆಶೀರ್ವಾದ ಮಾಡುತ್ತಾರೆ. ಈ ಸ್ಥಳದಲ್ಲಿ ಜ್ಞಾನದ ಬೆಳಕಿನಿಂದ ಕೆಡಿನ ಕತ್ತಲೆ ಇಲ್ಲ. ಮುಂದೆ ಕಾಲ ಕಳೆದಂತೆ ಈ ಸ್ಥಳದಲ್ಲಿ ಆಲಯವನ್ನು ನಿರ್ಮಿಸಿ ವರ್ಷಕ್ಕೊಮ್ಮೆ ಬರುವ ಅಕ್ಷಯ ತೃತೀಯದಂದು ಜಾತ್ರೆ ಮಾಡುತ್ತಾರೆ.
ನಂಬಿದವರನ್ನು ಎಂದಿಗೂ ಕೈ ಬಿಡಲಾರನು, ನಿಂದನೆ ಮಾಡಿದವರ ಬಿಟ್ಟಪ್ಪನಲ್ಲ ಎಂಬ ಮಾತು ಈಗಲೂ ಭಕ್ತರಲ್ಲಿ ಮನೆಮಾತಾಗಿದೆ. ಅಂದಿನ ಕಾಲದಲ್ಲಿ ರೋಗ ರುಜಿನಗಳ ಹಾವಳಿ ಹೆಚ್ಚಾಗಿತ್ತು. ಆಗ ಅಥರ್ಗಾ ಊರಿನ ಮಹಿಳೆಯೊಬ್ಬಳಿಗೆ ಮಾಹಾರೋಗ ಬಂದಿತ್ತು.
ರೋಗ ನಿವಾರಣೆಗೆ ತೋರಿಸದ ವೈದ್ಯರು ಉಳಿಯಲಿಲ್ಲ. ನಂತರ ಆ ಮಹಿಳೆ ಯಾರಿಗೂ ಕಾಣದ ರೀತಿಯಲ್ಲಿ ಕುಲಂಕಾರೇಶ್ವರ ದೇವಾಲಯಕ್ಕೆ ಬಂದು ಪ್ರತಿನಿತ್ಯವು ಆಲಯದ ಆವರಣವನ್ನು ತನ್ನ ಸೀರೆಯ ಸೆರಗಿನಿಂದ ಕಸವನ್ನು ಗುಡಿಸುತ್ತಿದ್ದಳು. ಆಗ ಭಕ್ತೆಯ ಭಕ್ತಿಗೆ ಮೆಚ್ಚಿದ ಕುಲಂಕಾರೇಶ್ವರ ಅವಳ ಮಹಾರೋಗವನ್ನು ನಿವಾರಿಸುತ್ತಾನೆ. ಈ ರೀತಿಯಲ್ಲಿ ಕುಲಂಕಾರೇಶ್ವರ ದೇವರ ಪವಾಡಗಳು ಅನಂತವಾಗಿ ನಡೆದಿವೆ ಆದರೂ ಸಹ ಈ ಆಲಯದ ಬಗ್ಗೆ ಯಾವುದೇ ಗ್ರಂಥಗಳಲ್ಲಿ ಉಲ್ಲೇಖಗಳಿಲ್ಲ.ಅಕ್ಷಯ ತೃತೀಯದ ಮೊದಲ ದಿನದಂದು ವೀರಭದ್ರೇಶ್ವರ ಆಲಯದಲ್ಲಿ ಕಾಶಿಕಟ್ಟಿಸುತ್ತಾರೆ. ಕಾಶಿ ಕಟ್ಟಿದ ದಿನದಿಂದ ಹಿಡಿದು ಅಕ್ಷಯ ತೃತೀಯದ ಬಸವಜಯಂತಿಯ ವರೆಗೆ ಊರಿನ ಜನರು ತಮ್ಮ ಮನೆಗಳಲ್ಲಿ ಜ್ಯೋತಿ ಬೆಳಗಿಸುವುದು, ಉಪವಾಸ ಮಾಡುವುದು. ಊರುಳುಸೇವೆ ಮಾಡುವುದು ಹೀಗೆ ಅನೇಕ ಸೇವೆಗಳನ್ನು ಮಾಡುತ್ತಾರೆ.
ಜಾತ್ರಾ ಉತ್ಸವ ಹಿಂದಿನ ದಿನ ದಾಸೋಹ ನಡೆಸುತ್ತಾರೆ. ಗ್ರಾಮದ ಜನರು ಹಾಗೂ ಪುರುವಂತರು ಸೇರಿ ಅಗ್ನಿ ಪುಟುವು ಮಾಡುತ್ತಾರೆ. ಜಾತ್ರೆಯ ದಿನದಂದು ಕುಲಂಕಾರೇಶ್ವರ ಪಲ್ಲಕ್ಕಿಯ ಎಡಬಲವಾಗಿ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಬೀರಲಿಂಗೇಶ್ವರರು ಜೊತೆಯಾಗಿ ಆಗಮಿಸುತ್ತಾರೆ. ಊರಿನ ಗೌಡರ ಮನೆಯಿಂದ ಮೆರವಣಿಗೆ ಜರುಗಿ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ದೇವಸ್ಥಾನ ತಲುಪುತ್ತದೆ. ಈ ಜಾತ್ರೆಯ ಉತ್ಸವದಲ್ಲಿ ಊರಿನ ಹಾಗೂ ಪರೂರಿನಿಂದ ಪುರುವಂತರು ಬಂದಿರುತ್ತಾರೆ. ಸುಡುವ ಬಿಸಿಲಲ್ಲಿ ದೇವರು ಅಗ್ನಿ ಪ್ರವೇಶ ಮಾಡಿದ ನಂತರ ಮಂಗಳಾರುತಿ ಆಗುತ್ತದೆ.
ದೇವರು ಅಗ್ನಿ ಪ್ರವೇಶ ಮಾಡಿದ ನಂತರ ಗ್ರಾಮದ ಭಕ್ತರು ಅಗ್ನಿಯನ್ನು ಪ್ರವೇಶ ಮಾಡುತ್ತಾರೆ. ನಂತರ ಕುಲಂಕಾರೇಶ್ವರ, ವೀರಭಧ್ರೇಶ್ವರ ಹಾಗೂ ಬೀರಲಿಂಗೇಶ್ವರ ಎಲ್ಲರೂ ತಮ್ಮ ಆಲಯಗಳಿಗೆ ಮರಳಿ ಮೂಲ ಸ್ಥಳದಲ್ಲಿ ಸ್ಥಾಪಿತರಾಗುತ್ತಾರೆ. ಅದೆ ದಿನ ಸಂಜೆ ಬಸವಜಯಂತಿ ಇರುವ ಕಾರಣದಿಂದಾಗಿ ಜಗಜ್ಯೋತಿ ಬಸವೇಶ್ವರ ಅವರು ಇರುವ ಭಾವಚಿತ್ರವನ್ನು ಗಾಡಿಯಲ್ಲಿ ಊರಿನ ಪ್ರಮುಖ ಭೀದಿಗಳಲ್ಲಿ ಮೆರವಣಿ ಮಾಡಲಾಗುತ್ತದೆ. ಸಂಜೆ 7 ರಿಂದ ಚಿತ್ರ-ವಿಚಿತ್ರವಾಗಿ ಮದ್ದು ಸುಡಲಾಗುತ್ತದೆ. ರಾತ್ರಿ ನಾಟಕಗಳನ್ನು ಏರ್ಪಡಿಸಲಾಗುತ್ತದೆ.
ಮಕ್ಕಳಿಗೆ ಇಷ್ಟವಾಗುವ ಆಟಿಕೆ ಸಾಮಾನುಗಳ ಅಂಗಡಿ, ಬಳೆ ಅಂಗಡಿಗಳು, ಬಂದಿರುತ್ತವೆ. ಈ ದಾಸೋಹ ಸತತವಾಗಿ ನಾಲ್ಕುದಿನಗಳ ಕಾಲ ನಡೆಸುತ್ತಾರೆ. ಈ ದಾಸೋಹದಲ್ಲಿ ಹಾಲುಗ್ಗಿ, ಸಜ್ಜಿರೋಟ್ಟಿ, ಅನ್ನ, ಸಾರು, ಶೇಂಗಾದ ಹೋಳಿಗೆ ಜೊಳದ ರೋಟ್ಟಿ, ಮೊಸರು, ತುಪ್ಪ, ಹೀಗೆ ಅನೇಕ ಖಾಧ್ಯಗಳನ್ನು ಮಾಡಿರುತ್ತಾರೆ. ಜಾತ್ರೆಯ ಮರುದಿನ ಮಧ್ಯಾಹ್ನದಿಂದ ಜಗಜಟ್ಟಿಗಳ ಜಂಗಿಕುಸ್ತಿ, ಬಾರ ಎತ್ತುವುದು ಶುರುವಾಗಿ ಸಂಜೆ 6ಗಂಟೆಗೆ ಮುಗಿಯುತ್ತದೆ. ರಾತ್ರಿ ವೇಳೆಯಲ್ಲಿ ನಾಟಕ ಇರುತ್ತವೆ.
ಈ ಜಾತ್ರಗೆ ಆಲಯದ ಟ್ರಸ್ಟನ ಸದಸ್ಯರುಗಳು ಒಂದು ತಿಂಗಳ ಮುಂಚಿತವಾಗಿಯೆ ಧೇಣಿಗೆಯನ್ನು ಸಂಗ್ರಹಿಸಲು ಪ್ರಾರಂಭಿಸುತ್ತಾರೆ. ಈ ಜಾತ್ರಾ ಉತ್ಸವದಲ್ಲಿ ಸುಮಾರು ಒಂದು ಲಕ್ಷ ಜನರು ಸೇರುತ್ತಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುವ ಜಾತ್ರೆಗೆ ಬರುವ ಜನರಿಗೆ ಉಳಿದುಕೊಳ್ಳಲ್ಲು ವ್ಯವಸ್ಥಿವಾದ ಸ್ಥಳ ಹಾಗೂ ಸೌಚಾಲಯದ ಕೊರತೆ ಇದೆ. ದೇವಸ್ಥಾನದ ಟ್ರಸ್ಟ್ ಸದಸ್ಯರು ಹಾಗೂ ಊರಿನ ಹಿರಿಯರು ಸೇರಿ ಮೂಲಭೂತ ಸೌಕರ್ಯಗಳನ್ನು ಪುರೈಸಬೇಕು ಎಂದು ಗ್ರಾಮಸ್ಥರು ಹಾಗೂ ಭಕ್ತರು ಬೇಡಿಕೆ ಇಡುತ್ತಿದ್ದಾರೆ.
- ನೆನೆದವರ ಹೃದಯದಲಿ ಹೂವಾಗಿ ಅರಳಿದವ ಶ್ರೀ ಕುಲಂಕಾರೇಶ್ವರ ದೇವರು ಬೂದಿ ಮುಚ್ಚಿದ ಕೆಂಡದಂತೆ. ಶರಣಾಗಿ ಬಂದವರಿಗೆ ಬೇಡಿದ ವರಗಳನ್ನು ಕೊಡುವ ಕರುಣಾಮಯಿ. ಈ ನನ್ನ ದೇವರ ಕುರಿತು ಎಷ್ಟು ಹೇಳಿದರು ಸಾಲದು. ಅಥರ್ಗಾ ಗ್ರಾಮದ ಪ್ರತಿಯೊಂದು ಮನೆಯಲ್ಲೂ ಒಬ್ಬರಂತು ಕುಲಂಕಾರ ಹೆಸರಿನವರು ಇದ್ದಾರೆ. ನಾನು ಹಾಗೂ ನಮ್ಮ ನಮ್ಮಯಲ್ಲಿರುವ ಎಲ್ಲ ಸದಸ್ಯರು ಪ್ರತಿ ರವಿವಾರದಂದು ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುತ್ತೆವೆ. ಹಾಗೂ ಅಂದು ಇಡೀ ದಿನ ಉಪವಾಸ ವ್ರತ ಮಾಡುತ್ತೆವೆ.
ದರೇಪ್ಪ ಸಿಂದಗಿ ಅಥರ್ಗಾದ ಗ್ರಾಮದ ಭಕ್ತರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ6 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ6 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ4 days agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್
-
ದಿನದ ಸುದ್ದಿ1 day agoಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ


