ಬಹಿರಂಗ
ಆರೆಸ್ಸೆಸ್ ಗೆ ಅಂಬೇಡ್ಕರ್ ಕೃತಿಗಳನ್ನು ಓದಿಸುವ ಧೈರ್ಯವಿದೆಯಾ?
- ಹರ್ಷಕುಮಾರ್ ಕುಗ್ವೆ
ಈ ದೇಶದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಮಾಜದ ಜಾತಿ- ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಬುದ್ಧ, ಬಸವ, ಫುಲೆ, ಶಾಹು, ಅಂಬೇಡ್ಕರ್ ಪೆರಿಯಾರ್ ಹೀಗೆ ಅದೆಷ್ಟೋ ದಾರ್ಶನಿಕರು ತಮ್ಮ ಬದುಕುಗಳನ್ನೇ ಸಮರ್ಪಿಸಿದ್ದಾರೆ. ಆದರೂ ಈ ದೇಶದ ವೈದಿಕಶಾಹಿಯನ್ನು ಸೋಲಿಸಲು ಸಾಧ್ಯವಾಗದೇ ಅದು ಮತ್ತಷ್ಟು ಬಲಗೊಳ್ಳುತ್ತಲೇ ಹೋಗಿದೆ, ಅದು ತನ್ನ ಕಬಂಧ ಬಾಹುಗಳನ್ನು ಮೈಲುದ್ದಕ್ಕೆ ಬೆಳೆಸಿಕೊಂಡು ಚಾಚಿಕೊಳ್ಳುತ್ತಾ ಎಲ್ಲವನ್ನೂ ತೆಕ್ಕೆಗೆ ತೆಗೆದುಕೊಳ್ಳುತ್ತಲೇ ಇದೆ. ಇದಕ್ಕೆ ವೈದಿಕಶಾಹಿ ಎಲ್ಲಾ ಕಾಲದಲ್ಲಿ ದಮನದ ತಂತ್ರವನ್ನು ಬಳಸಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಬದಲಿಗೆ ಅದು ವಂಚನೆ-ನಯವಂಚನೆಯ ತಂತ್ರಗಳನ್ನು ಬಳಸಿರುವುದು ಪ್ರಮುಖ ಕಾರಣ ಎನಿಸುತ್ತದೆ. ಕೌಟಿಲ್ಲ ಹೇಳಿದ್ದ ರಾಜನೀತಿಯ ಚತುರೋಪಾಯಗಳಾದ ಸಾಮ, ದಾನ, ಭೇದ ಮತ್ತು ದಂಡ ಇವುಗಳನ್ನು ಪ್ರತಿ ಹಂತದಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿ ವೈದಿಕಶಾಹಿ ಬಳಸಿಕೊಂಡಿರುವುದರಲ್ಲೇ ಅದರ ಯಶಸ್ಸನ್ನು ಕಾಣಬಹುದು.
ಮೊನ್ನೆ ನವೆಂಬರ್ 24ರಂದು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಬಿಜೆಪಿ ಆಚರಿಸಿದ ಸಂವಿಧಾನ ದಿನಾಚರಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಡಿರುವ ಮಾತುಗಳನ್ನು ಮತ್ತು ಕೆಲ ದಲಿತ ಬಂಧುಗಳು ಆ ಮಾತುಗಳನ್ನು ಸೆಲೆಬ್ರೇಟ್ ಮಾಡಿರುವುದನ್ನು ನೋಡಿದಾಗ ವೈದಿಕಶಾಹಿ ನಡೆಸುವ ಈ ಕುಟಿಲ ಚಾಣಾಕ್ಷತನದ ಬಗ್ಗೆ ಯೋಚಿಸುವಂತಾಯಿತು.
ಬಿ ಎಲ್ ಸಂತೋ಼ಷ್ ಆಡಿರುವ ಮಾತುಗಳನ್ನು ಕೇಳಿದರೆ ಸಹಜವಾಗಿ ಈ ದೇಶದ ಸಂವಿಧಾನದ ಬಗ್ಗೆ ಮತ್ತು ಅಂಬೇಡ್ಕರ್ ಬಗ್ಗೆ ಅಭಿಮಾನ ಇರುವ ಯಾರೇ ಆದರೂ ಕ್ಲೀನ್ ಬೋಲ್ಡ್ ಆಗಿಬಿಡುತ್ತಾರೆ. ವಾಹ್ ಎಂತಾ realization! ಅದೂ ಆರೆಸ್ಸೆಸ್ಸಿಗನ ಬಾಯಿಯಲ್ಲಿ ಅಂಬೇಡ್ಕರ್ ಕೊಂಡಾಟದ ಮಾತುಗಳು! ಎನಿಸಿಬಿಡುತ್ತವೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು, ಅವರ ಆಶಯ ಕನಸುಗಳನ್ನು ಅರ್ಥ ಮಾಡಿಕೊಂಡ ಯಾರಿಗೇ ಈ ವೈದಿಕಶಾಹಿ ಸಂತೋ಼ಷನ ಮಾತುಗಳು ಖುಷಿಗೊಳಿಸುವುದಿಲ್ಲ, ಆಕ್ರೋಶ ತರಿಸುತ್ತವೆ. ಕಾರಣವೇನೆಂದರೆ, ಯಾವ ವೈದಿಕಶಾಹಿಯನ್ನು ಹಿಮ್ಮೆಟ್ಟಿಸಲು ಬಾಬಾಸಾಹೇಬರು ತಮ್ಮ ಬದುಕಿನುದ್ದಕ್ಕೂ ಶ್ರಮಪಟ್ಟರೋ; ಯಾವ ವೈದಿಕಶಾಹಿಯ ಹುನ್ನಾರಗಳನ್ನು ತಮ್ಮ ಬರೆಹಗಳಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರೋ; ಯಾವ ವೈದಿಕಶಾಹಿಯ ಹತಾರಗಳನ್ನು ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿಯಲ್ಲೂ ಕಂಡು ಅಂಬೇಡ್ಕರ್ ಕೆಂಡಾಮಂಡಲವಾಗಿದ್ದರೋ; ಯಾವ ವೈದಿಕಶಾಹಿಯ ಹಿಡಿತದಿಂದ ತನ್ನ ಸಮುದಾಯವನ್ನು ಮಾತ್ರವಲ್ಲ ಇಡೀ ಭರತಖಂಡವನ್ನು ಬಿಡುಗಡೆಗೊಳಿಸಲು ಇಚ್ಚಿಸಿದ್ದರೋ: ಯಾವ ವೈದಿಕಶಾಹಿಯ ಹಿಡಿತದಿಂದ ಜನರನ್ನು ತಪ್ಪಿಸಲು ವೈದಿಕ ಹಿಂದೂ ಧರ್ಮವನ್ನು ತ್ಯಜಿಸಿ ಸಮತೆಯ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೋ; ಯಾವ ವೈದಿಕಶಾಹಿಯನ್ನು ಎದುರಿಸಲು ತನ್ನ ಅನುಯಾಯಿಗಳಿಗೆ “ಹಿಂದೂ ದೇವರುಗಳಾದ ರಾಮ, ವಿಷ್ಣು, ಮೊದಲಾದ ದೇವರುಗಳನ್ನು ನಾನು ಪೂಜಿಸುವುದಿಲ್ಲ” ಎಂಬ ಪ್ರತಿಜ್ಞೆಯನ್ನು ಬೋಧಿಸಿದ್ದರೋ; ಯಾವ ವೈದಿಕಶಾಹಿಯ ಸಂಪೂರ್ಣ ನಾಶವನ್ನು ಅಂಬೇಡ್ಕರ್ ಬಯಸಿದ್ದರೋ ಅದೇ ವೈದಿಕಶಾಹಿಯು ಅಂಬೇಡ್ಕರ್ ಅವರನ್ನು ದಿಢೀರನೆ ಇನ್ನಿಲ್ಲದಂತೆ ಹೊಗಳಲು, ಕೊಂಡಾಡಲು ಶುರುಮಾಡಿದೆ! ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತು ಅವರು ರಚಿಸಿದ ಸಂವಿಧಾನವನ್ನು ನರನಾಡಿಗಳಲ್ಲಿ ವೈದಿಕಶಾಹಿ ಚಿಂತನೆ ಮತ್ತು ಹುನ್ನಾರಗಳನ್ನೇ ಹೊಂದಿರುವ ಬಿ ಎಲ್ ಸಂತೋ಼ಷ್ ಕೊಂಡಾಡಿದ್ದನ್ನು ಕಂಡು “ಓ ವೈದಿಕಶಾಹಿಯ ಮನಪರಿವರ್ತನೆ ಆಗುತ್ತಿದೆ” ಎಂದುಕೊಳ್ಳೋಣವೇ? “ಅಂಬೇಡ್ಕರ್ ಕುರಿತು ಆರೆಸ್ಸೆಸ್ ತನ್ನ ಅಭಿಪ್ರಾಯ ಬದಲಿಸಿಕೊಳ್ಳುತ್ತಿದೆ” ಎಂದು ಭ್ರಮಿಸಿ ಸಂಭ್ರಮ ಪಡೋಣವೇ?
ಹಲವರುಷಗಳ ಹಿಂದೆ ಇದೇ ಆರೆಸ್ಸೆಸ್ ಪಾಳಯದಲ್ಲಿ ಬೆಳೆದ ಅರುಣ್ ಶೌರಿ ಎಂಬಾತ ತನ್ನ “Worshipping false gods” ಕೃತಿಯಲ್ಲಿ ಅಂಬೇಡ್ಕರ್ ಒಬ್ಬ ಪೊಳ್ಳು ದೇವರು ಎಂದು ಜರಿದು ಅಪಮಾನಿಸಿದ್ದ. ಒಂದೆರಡು ವರ್ಷಗಳ ಹಿಂದೆ ಜರ್ಮನಿಯ ಯೂನಿವರ್ಸಿಟಿಯೊಂದರಲ್ಲಿರುವ ಬಾಲಗಂಗಾಧರ ಎಂಬ ಅವಿವೇಕಿಯಂತೂ ಅಂಬೇಡ್ಕರ್ ಒಬ್ಬ ಈಡಿಯಟ್ ಎಂದು ಹೇಳಿ ಬೆತ್ತಲಾಗಿದ್ದ, ಎರಡೇ ವರ್ಷದ ಹಿಂದೆ ಉತ್ತರ ಕನ್ನಡವನ್ನು ಪ್ರತಿನಿಧಿಸುವ ಆರೆಸ್ಸೆಸ್ ಚಿಂತನೆಯ ಮುಠ್ಠಾಳ ಸಂಸದನೊಬ್ಬ ಸಂವಿಧಾನವನ್ನೇ ಬದಲಿಸುತ್ತೇನೆ ಎಂದು ಹೇಳಿ ಕೊನೆಗೆ ಸಂಸತ್ತಿನಲ್ಲೇ ಕ್ಷಮಾಪಣೆ ಕೇಳಿದ್ದ. ಅರೆ, ಇವರೆಲ್ಲರೂ ಈ ಕ್ಷಣದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆರೆಸ್ಸೆಸ್ಸಿನ ನಿಕಟವರ್ತಿಗಳೇ. ಈಗ ಅದೇ ಆರೆಸ್ಸೆಸ್ಸಿನ ಬಿ ಎಲ್ ಸಂತೋ಼ಷ ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡರೇನೇ ಸಂವಿಧಾನ ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುತ್ತಾನೆ! ಮಾತ್ರವಲ್ಲ “ಸಂವಿಧಾನ ಕೊಟ್ಟಿರುವ ಮೀಸಲಾತಿ ಇದೆಯಲ್ಲಾ ಅದು ನಾವು ಕೊಟ್ಟಿರುವ ಕೊಡುಗೆಯಲ್ಲ ಬದಲಿಗೆ ದಲಿತರನ್ನು ವಂಚಿಸಿದ ದೊಡ್ಡ ವರ್ಗವೊಂದು ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತ ಎನ್ನುತ್ತಾನೆ! ಎಂತಹಾ ದಾರ್ಶನಿಕ ಮಾತು!! ಇದರಲ್ಲಿನ ತರ್ಕವೇನೋ ಸರಿಯಾಗಿದೆ. ಆದರೆ ಆತ ಮುಂದುವರಿದು ‘ದಲಿತರನ್ನು ಶೂದ್ರರನ್ನು ಈ ದೇಶದಲ್ಲಿ ವಂಚಿಸಿರುವುದು ಬಹುದೊಡ್ಡ ವರ್ಗ ಎಂಬ ಹಸಿಹಸಿ ಸುಳ್ಳು ಹೇಳುತ್ತಾನೆ. ವಾಸ್ತವದಲ್ಲಿ ಇಡೀ ದೇಶದ ಬಹುದೊಡ್ಡ ವರ್ಗವನ್ನು ಅವಕಾಶಗಳನ್ನು ಚಾರಿತ್ರಿಕವಾಗಿ ವಂಚಿಸಿಕೊಂಡು ಬಂದಿದ್ದು ಈ ದೇಶ ಜನಸಂಖ್ಯೆ ಕೇವಲ 3-4 % ಇರುವ ಜನವರ್ಗ ಎಂಬ ಕಟು ಸತ್ಯವನ್ನು ಬೇಕೆಂದೇ ಮರೆಮಾಚುತ್ತಾನೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಮಿಲ್ಲರ್ ಆಯೋಗದ ಅನುಸಾರವಾಗಿ ದಲಿತ-ಹಿಂದುಳಿತ ವರ್ಗಗಳ ಬಹುಸಂಖ್ಯಾತರಿಗೆ ಮೀಸಲಾತಿ ನೀಡಿದಾಗ ಅಂಡುಸುಟ್ಟ ಬೆಕ್ಕಿನಂತೆ ಆಡಿದ ಜನವರ್ಗ ಯಾವುದಾಗಿತ್ತು? ಅದು ಬಹದೊಡ್ಡ ವರ್ಗವೋ ಕೇವಲ ಬ್ರಾಹ್ಮಣ ಜಾತಿಯೋ? ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ತಲೆಯಲ್ಲಿದ್ದ ಜಾತಿಭೂತ ಯಾವುದಾಗಿತ್ತು? ಆದರೆ ಅತ್ಯಾಶ್ಚರ್ಯ ಎಂಬಂತೆ ಈಗ ಈ ಆರೆಸ್ಸೆಸ್ಸಿಗ ಮೀಸಲಾತಿಯ ಸಮರ್ಥನೆಗೆ ನಿಂತಿದ್ದಾನೆ ಎಂದರೆ ಅದು ಮನಪರಿವರ್ತನೆ? ಈಗ ನೋಡಿ. ಮೀಸಲಾತಿ ವಿರುದ್ಧವಾಗಿ ಇಡೀ ದೇಶವನ್ನು ಎತ್ತಿ ಕಟ್ಟುತ್ತಿದ ಶೇಕಡಾ ಮೂರ್ನಾಲ್ಕು ಶೇಕಡಾ ಇರುವ ಜನರಿಗೆ ಕಳೆದ ವರ್ಷದಿಂದ 10% ಮೀಸಲಾತಿ ಸಿಗತೊಡಗಿದೆ. ಇಷ್ಟೂ ವರ್ಷಗಳ ಕಾಲ ಮೀಸಲಾತಿ ಎಂದರೇ ಉರಿದು ಬೀಳುತ್ತಿದ್ದವರು ಈಗ ತಮ್ಮ ಜನಸಂಖ್ಯೆಗಿಂತಲೂ ಎರಡು ಮೂರು ಪಟ್ಟು ಮೀಸಲಾತಿ ಪಡೆದುಕೊಳ್ಳುತ್ತಿದ್ದಂತೆ ಮೀಸಲಾತಿಯನ್ನು ಕೊಂಡಾಡತೊಡಗಿದ್ದಾರೆ! ತಿಳಿಯಿತಲ್ಲ ಈ ಮನಪರಿವರ್ತನೆಯ ಹಿಂದಿನ ಹಕೀಕತ್ತು? ದೇಶದಲ್ಲಿ ನಡೆಯುವ ಮನಪರಿವರ್ತನೆಗಳ ಹಿಂದೆ ಅಡಗಿರುವ ಸ್ವಾರ್ಥವೇನು ಎಂದು ಅರಿಯದೇ ಹೋದರೆ ವೈದಿಕಶಾಹಿ ತೋಡುವ ಖೆಡ್ಡಾದಲ್ಲಿ ಬಿದ್ದು ಹೊರಳಾಡಬೇಕಾಗುತ್ತದೆ ಅಷ್ಟೇ.
ಈಗ ಮೀಸಲಾತಿಯನ್ನೂ, ಅಂಬೇಡ್ಕರ್ ಅವರನ್ನೂ ಹಾಡಿ ಹೊಗಳುತ್ತಿರುವ ಬಿ ಎಲ್ ಸಂತೋ಼ಷ್ ಮತ್ತು ಅವನ ಚೇಲಾ ಬಾಲಾಗಳಿಗೆ ನಾವು ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳೋಣ. ಉತ್ತರಿಸುವ ಪ್ರಾಮಾಣಿಕತೆ ತೋರುತ್ತಾರೋ ನೋಡೋಣ.
- ನವೆಂಬರ್ 24ರಂದು ನೀವು ಹಮ್ಮಿಕೊಂಡ ಸಂವಿಧಾನ ದಿನಾಚರಣೆಯ ವಾರದ ಮೊದಲು ನೀವು ಪ್ರಚುರಪಡಿಸಿದ ಭಿತ್ತಿಪತ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿತ್ರ ಇರಲಿಲ್ಲ. ಬದಲಾಗಿ ಸಂವಿಧಾನಕ್ಕೆ ಸಂಬಂಧವೇ ಇಲ್ಲದ ಶ್ಯಾಮ್ ಪ್ರಸಾದ್ ಮುಖರ್ಜಿಯ ಫೋಟೋ ಇತ್ತು. ಅಂಬೇಡ್ಕರ್ ವಾದಿಗಳು ನೀವು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನದ ಬಗ್ಗೆ ಆಕ್ಷೇಪ ಎತ್ತಿದ ಕೂಡಲೇ ಬದಲಿಸಿದಿರಿ. ಈ ಮೊದಲು ಬಾಬಾಸಾಹೇಬರಿಗೆ ನೀವು ಮಾಡಿದ ಅಪಮಾನಕ್ಕೆ ನಿಜವಾದ ಕಾರಣ ಏನು?
- 1991ರಲ್ಲಿ ಮಂಡಲ್ ಆಯೋಗದ ವರದಿಯನ್ನು ವಿ ಪಿ ಸಿಂಗ್ ಜಾರಿಗೊಳಿಸಲು ಯತ್ನಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದ ನಂತರ ವಿ ಪಿ ಸಿಂಗ್ ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಂಡಿತ್ತು. ನಂತರ ಇಡೀ ದೇಶದಾದ್ಯಂತ ಎಬಿವಿಪಿ ಮೂಲಕ ಮಂಡಲ್-ಕಮಂಡಲ್ ಎಂದು ಘೋಷಿಸಿ ವ್ಯಾಪಕ ಹಿಂಸೆಯನ್ನು ಬಿಜೆಪಿ ನಡೆಸಿತ್ತು. ಮೀಸಲಾತಿ ಎಂದರೆ ಮೇಲ್ಜಾತಿಗಳ ಪ್ರಾಯಶ್ಚಿತ್ತ ಎನ್ನುತ್ತಿರುವ ನೀವು ಈ ಹಿಂದೆ ನಡೆಸಿರುವ ಮೀಸಲಾತಿ ವಿರೋಧಿ ಹಿಂಸೆಗೂ ಪ್ರಾಯಶ್ಚಿತ್ತ ಪಟ್ಟುಕೊಳ್ಳುವಿರಾ?
- ಮೋಹನ್ ಭಾಗ್ವತ್ ಮೊನ್ನೆ ಮೊನ್ನೆಯಷ್ಟೇ ಮೀಸಲಾತಿ ಬಗ್ಗೆ ಚರ್ಚೆಯಾಗಬೇಕು ಎಂದ. ಎಲ್ಲಿಯವರೆಗೆ ಈ ದೇಶದಲ್ಲಿ ಅಸಮಾನತೆ, ವಂಚನೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿಯ ಬೇಕೇ ಬೇಡವೇ ಎಂಬ ಚರ್ಚೆ ಅನಗತ್ಯ. ಆದರೆ ಚರ್ಚೆ ಬೇಕು ಎನ್ನುವು ಆರೆಸ್ಸೆಸ್ ಮುಖಂಡರಿಗೆ ಯಾವ ಪ್ರಾಯಶ್ಚಿತ್ತ ಮಾಡುತ್ತೀರಿ?
- ಮೀಸಲಾತಿ ಎಂಬುದು ಅಂಬೇಡ್ಕರ್ ತಮಗಾದ ಅಪಮಾನದ ಕಾರಣಕ್ಕೆ ಸಂವಿಧಾನದಲ್ಲಿ ಸೇರಿಸಿದ್ದು ಎಂದಿದ್ದೀರಿ. ಇದಕ್ಕಿಂತ ಅಸಂಬದ್ಧವಾದ ಬೇರಿಲ್ಲ. ಈ ದೇಶದ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ದೇಶದ ನಾನಾ ಜಾತಿ ವರ್ಗಗಳ ವಿಕಾಸವನ್ನು, ಅವು ತುಳಿತಕ್ಕೊಳಗಾದ ಬಗೆಯನ್ನು ದಾಖಲಿಸಿದ ಬೆರಳೆಣಿಕೆಯಷ್ಟು ವಿದ್ವಾಂಸರಲ್ಲಿ ಅಂಬೇಡ್ಕರ್ ಕೂಡಾ ಒಬ್ಬರು. ಸಂವಿಧಾನದಲ್ಲಿ ಮೀಸಲಾತಿ ಸೇರಿಸಲು ಸಮಾಜದ ಬಗ್ಗೆ ಅಂಬೇಡ್ಕರ್ ಅವರಿಗೆ ಇದ್ದ ಸಮಾಜದ ಮತ್ತು ಚರಿತ್ರೆಯ ಅವಗಾಹನೆ ಹಾಗೂ ಈ ದೇಶವನ್ನು ಸಮಾಜವಾದಿ ಹಾದಿಯಲ್ಲಿ ಕಟ್ಟಬೇಕು ಈ ಮೂಲಕ ಎಲ್ಲಾ ವಂಚಿತ ಸಮುದಾಯಗಳು ನ್ಯಾಯ ಪಡೆಯಬೇಕು ಎಂಬ ಅದಮ್ಯ ಆಶೆಯೇ ಪ್ರಮುಖ ಕಾರಣ. ಇದನ್ನು ಬೇಕೆಂದೇ ಮರೆಮಾಚುವ ಪ್ರಯತ್ನ ಮಾಡುತ್ತಿದ್ದೀರಲ್ಲವೇ?
- ಮೇಲ್ಜಾತಿಗಳಿಗೆ 10% ಮೀಸಲಾತಿ ಸಿಕ್ಕಿದ ಮೇಲೆ ಮೀಸಲಾತಿಯ ಬಗ್ಗೆ ವರಸೆಯನ್ನೇ ಬದಲಿಸಿಕೊಳ್ಳುತ್ತಿರುವ ನೀವು ದೇಶದ ಪ್ರಮುಖ ಉದ್ಯೋಗ ಕ್ಷೇತ್ರವಾದ ಖಾಸಗಿ ಕ್ಷೇತ್ರಕ್ಕೆ ಮೀಸಲಾತಿ ವಿಸ್ತರಣೆ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳಿ. ಖಾಸಗಿ ಕ್ಷೇತ್ರ ಹೇಗೂ ಪ್ರಮುಖವಾಗಿ ಮೇಲ್ಜಾತಿ “ಪ್ರತಿಭೆಗಳ” ಹಿಡಿತದಲ್ಲೇ ಇರೋದರಿಂದ ಅಲ್ಲಿ ಮೀಸಲಾತಿ ಬೇಡ ಎಂದು ನಿಮ್ಮ ಅಭಿಪ್ರಾಯವಾಗಿದ್ದರೆ ಸ್ಪಷ್ಟಪಡಿಸಿ. ಹೀಗಲ್ಲಾ ಖಾಸಗಿ ಕ್ಷೇತ್ರದಲ್ಲಿಯೂ ಮೇಲ್ಜಾತಿ ಜನರಿಗೆ ಪ್ರಾಯಶ್ಚಿತ್ತ ಬೇಕು ಎಂದು ನೀವು ಪ್ರಾಮಾಣಿಕವಾಗಿ ಒಪ್ಪುವುದೇ ಆದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಗೆ ತಿರುವ ಒತ್ತಾಯವನ್ನು ಯಾವಾಗ ಹಾಕುತ್ತೀರಿ ತಿಳಿಸಿ.
- ಅಂಬೇಡ್ಕರ್ ಅವರನ್ನು ನೀವು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದು ತೀರಾ ಇತ್ತೀಚೆಗೆ ಎಂದು ಹೇಳಿದ್ದೀರಿ. ಸಂತೋಷ. ಅಂಬೇಡ್ಕರ್ ಅವರು ಹಿಂದೂ ಧರ್ಮದ ಕುರಿತು ಖಚಿತ ನಿರ್ಧಾರಗಳಿಗೆ ಬಂದಿದ್ದರು. ಉದಾಹರಣೆಗೆ ಹಿಂದೂ ಧರ್ಮದಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲ. ಹಿಂದೂ ಧರ್ಮ ಜಾತಿಗಳಿಂದ ನಿರ್ಮಿಲ್ಪಟ್ಟ ಮೆಟ್ಟಿಲುಗಳಿಲ್ಲ ಉಪ್ಪರಿಗೆ ಮನೆ ಎಂದು ಹೇಳಿದ್ದರು. ಇಲ್ಲಿ ಜಾತಿಜಾತಿಗಳ ನಡುವೆ ಸಹೋದರತೆಗೆ ಅವಕಾಶವಿಲ್ಲ, ಸ್ವಾತಂತ್ರ್ಯ, ಸಮಾನತೆಗಳೂ ಇಲ್ಲ. ಹೀಗಾಗಿ ಹಿಂದೂ ಧರ್ಮದ ಈ ಚೌಕಟ್ಟಿನಿಂದ ಹೊರಬರದೇ ತಳಸಮುದಾಯಗಳಿಗೆ ಬಿಡುಗಡೆ ಇಲ್ಲ ಎಂದು ಖಚಿತವಾಗಿ ಹೇಳಿದ್ದರು. ಫಿಲಾಸಫಿ ಆಫ್ ಹಿಂದೂಯಿಸಂ ನಲ್ಲಿ ಹಿಂದೂ ಧರ್ಮ ಯಾವುದರ ತಳಹದಿಯ ಮೇಲೆ ನಿಂತಿದೆ ಎಂದು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ ಅಂಬೇಡ್ಕರ್. ಹಿಂದೂ ಧರ್ಮದ ಕುರಿತ ಅಂಬೇಡ್ಕರ್ ಅವರ ಈ ಖಚಿತ ಮತ್ತು ದಿಟ್ಟ ಅಭಿಪ್ರಾಯಗಳ ಕುರಿತು ನಿಮ್ಮ ಖಚಿತ ಅಭಿಪ್ರಾಯವೇನು?
- ಹಿಂದೂ ರಾಷ್ಟ್ರದ ಸ್ಥಾಪನೆ ಈ ದೇಶದ ದಲಿತರಿಗೆ-ಶೂದ್ರರಿಗೆ, ಬಹುಜನರ ಪಾಲಿಗೆ ಕಟ್ಟುವ ಸಮಾಧಿ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ನೀವಿದನ್ನು ಒಪ್ಪುತ್ತೀರಾ?
- ಕಾಶ್ಮೀರದ ಕುರಿತಂತೆ ಅಂಬೇಡ್ಕರ್ 1951ರಲ್ಲಿ ಸ್ಪಷ್ಟವಾಗಿ ತಿಳಿಸುತ್ತಾ, ಕಾಶ್ಮೀರಿಗಳ ಜನಾಭಿಪ್ರಾಯ ಸಂಗ್ರಹಿಸುವುದೇ ಏಕೈಕ ಪರಿಹಾರ ಮಾರ್ಗ ಎಂದು ಹೇಳಿದ್ದರು. ಅಂಬೇಡ್ಕರ್ ಅವರು ಎಲ್ಲಿಯೂ ಆರ್ಟಿಕಲ್ 370 ರದ್ದಾಗಬೇಕು ಎಂದು ಹೇಳಿದ ದಾಖಲೆ ಇಲ್ಲ ಕಾಶ್ಮೀರ ಸಮಸ್ಯೆಗೆ ಅಂಬೇಡ್ಕರ್ ತಿಳಿಸಿದ್ದ ಪರಿಹಾರ ಮಾರ್ಗವನ್ನು ನೀವು ಒಪ್ಪಿಕೊಳ್ಳುತ್ತೀರಾ? ಸಾಧ್ಯವಿಲ್ಲ ಅಲ್ಲವೇ?
- ನಿಮ್ಮ ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತರಿಗೆ ಅಂಬೇಡ್ಕರ್ ಅವರ “ಫಿಲಾಸಫಿ ಆಫ್ ಹಿಂದೂಯಿಸಂ” “ಆನ್ಹಿಲೇಶನ್ ಆಫ್ ಕ್ಯಾಸ್ಟ್” “ಬುದ್ಧ ಅಂಡ್ ಹಿಸ್ ದಮ್ಮ” ಇವುಗಳನ್ನು ಓದಿಸುವ ಧೈರ್ಯ ನಿಮಗಿದೆಯೇ? ಅಥವಾ ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಅಸಮಾಧನವನ್ನು ಮಾತ್ರ ಸೆಲೆಕ್ಟಿವ್ ಆಗಿ ಉಣಬಡಿಸುತ್ತಾ ನಿಮ್ಮ ಅಜೆಂಡಾವನ್ನಷ್ಟೇ ಈಡೇರಿಸಿಕೊಳ್ಳುತ್ತೀರೋ?
ಈ ಪ್ರಶ್ನೆಗಳಿಗೆ ಬಿ ಎಲ್ ಸಂತೋ಼ಷ್ ಆಗಲೀ, ಕಾರ್ಪೊರೇಟ್ ಚೆಡ್ಡಿ ಮೋಹನ್ ದಾಸ್ ಪೈ ಆಗಲೀ ಇನ್ನಾರೇ ಆರೆಸ್ಸೆಸ್ ಪಂಡಿತರಾಗಲೀ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ ಎಂಬ ಭ್ರಮೆ ಇಲ್ಲ. ಆದರೆ ಇವರ ಬಂಡವಾಳ ಬಯಲು ಮಾಡಲು ಈ ಪ್ರಶ್ನೆಗಳ ಜೊತೆಗೆ ಇನ್ನಷ್ಟು ಇಂತದೇ ಪ್ರಶ್ನೆಗಳು ಇವರ ಮುಖಕ್ಕೆ ಹಿಡಿಯಬೇಕು.
ಒಂದು ಕಡೆಯಲ್ಲಿ ಮುಂದೊಮ್ಮೆ ಬಾಬಾಸಾಹೇಬರಂತೆಯೇ ನೊಂದು ಬೆಂದು ಛಲದಿಂದ ಓದುತ್ತಿದ್ದ, ಬದುಕಿದ್ದರೆ ಮುಂದೆ ಪ್ರಕಾಶಮಾನವಾಗಿದ್ದ ಬೆಳಗಲಿದ್ದ ರೋಹಿತ್ ವೇಮುಲನಂಹವರನ್ನು ಆತ್ಮಹ್ಯತ್ಯೆಗೆ ತಳ್ಳುವುದು, ನಂತರ ಅವನು ಭಯೋತ್ಪಾದಕ ಎಂಬಂತೆ ಬಿಂಬಿಸುವುದು ಹಾಗೆಯೇ ಡಾ. ಆನಂದ್ ತೇಲ್ತುಂಬ್ಡೆ, ಡಾ. ಸತ್ಯನಾರಾಯಣ ಅವರಂತಹ ಅಂಬೇಡ್ಕರ್ ವಾದಿ ವಿದ್ವಾಂಸರನ್ನು ಸುಳ್ಳು ಕೇಸುಗಳಲ್ಲಿ ಫಿಟ್ ಮಾಡುವುದು, ಅವರನ್ನು ಅರ್ಬನ್ ನಕ್ಸಲ್ ಎಂದು ಹಣೆಪಟ್ಟಿ ಹಚ್ಚುವುದು, ಈ ಮೂಲಕ ಇಂತಹ ಅಂಬೇಡ್ಕರ್ ವಾದಿ ಮೇಧಾವಿಗಳು ದೇಶದ ತಳಸಮುದಾಯಗಳಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಬಿತ್ತುತ್ತಿರುವುದನ್ನು ತಡೆಯುವ, ಧ್ವನಿಗಳನ್ನು ಹತ್ತಿಕ್ಕುವ ದಂಡೋಪಾಯವನ್ನು ಬಳಸುತ್ತಲೇ ಮತ್ತೊಂದು ಕಡೆಯಲ್ಲಿ ಉಪಾಯದಿಂದ, ನಯವಂಚಕತನದಿಂದ, ದುಡ್ಡು ಮತ್ತು ಹುದ್ದೆಗಳ ಆಮಿಷದ ಮೂಲಕ ದಲಿತ ಮುಖಂಡರನ್ನು ಆಪೋಶನ ತೆಗೆದುಕೊಳ್ಳುವ “ಸಾಮ-ದಾನ” ಇಲ್ಲವೇ ತಳಸಮುದಾಯಗಳನ್ನು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ ನಡೆಡಸುವ “ಭೇದ” ನೀತಿಯನ್ನು ಪ್ರಯೋಗಿಸಿ ವೈದಿಕ ಹಿತಾಸಕ್ತಿ ಕಾಪಾಡುವುದು… ಇದೇ ಈ ದೇಶ ಸಾವಿರಾರು ವರ್ಷಗಳಿಂದ ಮತ್ತೆ ಮತ್ತೆ ಮೋಸಹೋಗಲು ಕಾರಣವಾಗಿರುವುದು.
ಹೀಗಾಗಿಯೇ ಅಂಬೇಡ್ಕರ್ ಅವರನ್ನೇ ಆಪೋಶನ ತೆಗೆದುಕೊಳ್ಳುತ್ತಿರುವಾಗ ಅಂಬೇಡ್ಕರ್ ಅವರ ಮೇಲಿನ ಅಭಿಮಾನ ಪ್ರೀತಿ ಮಾತ್ರ ಸಾಲುವುದಿಲ್ಲ. ವಂಚಕ ಜಾಲಗಳು ಹೊಂಚು ಹಾಕುತ್ತಿರುವಾಗ ಅಂಬೇಡ್ಕರ್ ರಥವನ್ನು ಮುಂದಕ್ಕೆ ಒಯ್ಯುವುದು ಮತ್ತೂ ಕಠಿಣವಾಗಿದೆ ಎಂಬ ಅರಿವಿನಲ್ಲಿ ಅಂಬೇಡ್ಕರ್ ಅವರು ಕನಸಿದ್ದ ಭಾರತವನ್ನು ನಾವೂ ಕನಸಬೇಕಿದೆ, ಅಂಬೇಡ್ಕರ್ ಆಶಿಸಿದ್ದ ಸಮತೆ-ಕರುಣೆ-ಪ್ರಜ್ಞೆಗಳು ನಮ್ಮೊಳಗೆ ಇಳಿಯಬೇಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಪಾಕ್ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ
ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.
ಹೈಲೈಟ್ಸ್ |
|
http://Visit : www.suddidina.com
ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್
ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.
3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ
ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.
ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ
ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಡಿಯಲ್ಲಿ ಹೆಚ್ಚಿದ ಕಣ್ಗಾವಲು
ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.
ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

-
ದಿನದ ಸುದ್ದಿ3 days agoಬರ ನಿರ್ವಹಣೆಗೆ ಸಚಿವ ಸಂಪುಟ ಉಪಸಮಿತಿ ಸಭೆ – ದಾವಣಗೆರೆಯಲ್ಲಿ ಕುಡಿಯುವ ನೀರು, ಮೇವು ಕೊರತೆ ಬಗ್ಗೆ ಸಚಿವ ಮಲ್ಲಿಕಾರ್ಜುನ್ ಪ್ರಸ್ತಾಪ
-
ದಿನದ ಸುದ್ದಿ2 days agoಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು
-
ದಿನದ ಸುದ್ದಿ2 days agoರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!
-
ದಿನದ ಸುದ್ದಿ3 days agoಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಇನ್ಮುಂದೆ ಓಲಾ, ಉಬರ್ ಆ್ಯಪ್ನಲ್ಲೇ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಮತ್ತು ಟಿಕೆಟ್ ಬುಕಿಂಗ್!
-
ದಿನದ ಸುದ್ದಿ3 days ago5 ವರ್ಷದಿಂದ PFಗೆ ಹಣ ಜಮಾ ಮಾಡಿಲ್ಲ, ಬಡ್ಡಿ ಸಿಗುತ್ತಾ? ಇಲ್ಲಿದೆ EPFO ನಿಯಮದ ಸ್ಪಷ್ಟ ಮಾಹಿತಿ!
-
ದಿನದ ಸುದ್ದಿ2 days agoಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!
-
ದಿನದ ಸುದ್ದಿ3 days agoಭದ್ರೆ ಆಗಮನದಿಂದ ರೈತರಲ್ಲಿ ಹೊಸ ಭರವಸೆ – ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ
-
ದಿನದ ಸುದ್ದಿ3 days agoವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್


