ಲೈಫ್ ಸ್ಟೈಲ್
ನಾಡಿಗೆ ಬಂದ ಕಾಡುಕೋಣ..!
- ಪಶುವೈದ್ಯರುಗಳ ಪೇಷಂಟುಗಳು ಬರೀ ದನ, ಎಮ್ಮೆ, ಕೋಳಿ,ಕುರಿ, ಆಡು, ನಾಯಿ, ಬೆಕ್ಕು, ಕೋಳಿ, ಹಂದಿ ಇತ್ಯಾದಿಗಳಿಗೆ ಸೀಮಿತವಾಗಿರದೆ ಮೊಲ, ಇಲಿ, ಕೋತಿ, ಆಮೆ, ಹುಲಿ, ಸಿಂಹ, ಒಂಟೆ, ಆನೆ, ಚಿರತೆ, ಹಾವು , ನರಿ, ಜಿಂಕೆ, ಕಡಿವೆ ಇತ್ಯಾದಿ ತರಹೇವಾರಿ ವನ್ಯಜೀವಿಗಳ ಚಿಕಿತ್ಸೆ ಮತ್ತು ಜೀವನ ಕ್ರಮದ ಬಗ್ಗೆಯೂ ತಿಳಿದುಕೋಂಡಿರಬೇಕಾಗುತ್ತದೆ. ಕೆಲವೊಮ್ಮೆ ಈ ಪ್ರಾಣಿಗಳನ್ನು ಚಿಕಿತ್ಸೆ ಮಾಡುವಾಗ ಸಾಕಷ್ಟು ಅಪಾಯವೂ ಕಾದಿರುತ್ತದೆ. ಗಾಯಗೊಂಡ ಕಾಡುಕೋಣವೊಂದರ ಚಿಕಿತ್ಸೆಯ ರೋಚಕ ಅನುಭವ.
–ಡಾ. ಎನ್.ಬಿ.ಶ್ರೀಧರ
ಶನಿವಾರವೊಂದರ ಮಧ್ಯಾಹ್ನ 11 ಘಂಟೆಯಿರಬಹುದು. ಆ ದಿನ ತಾಳಗುಪ್ಪದಲ್ಲಿ ಸಂತೆ. ಆಸ್ಪತ್ರೆಯಲ್ಲಿ ಗಿಜಿಗುಟ್ಟುವಷ್ಟು ಜನ ಮತ್ತು ತರಹೆವಾರಿ ಕೇಸುಗಳು. ಹುಳವಾಗಿ ಗಬ್ಬು ನಾರುವ ಗಾಯದಿಂದ ಹಿಡಿದು ಸಂತಾನಹರಣ ಚಿಕಿತ್ಸೆಗೆಂದು ಕಾಯುತ್ತಿರುವ ಪಕ್ಕದ ತಾಲೂಕು ಸೊರಬದ ಶ್ವಾನಗಳ ಸವಾರಿ ಕ್ಯೂನಲ್ಲಿತ್ತು. ಒಳರೋಗಿಗಳಾಗಿ ಮಾಡಿಕೊಂಡ ಕೆಲವು “ಪೇಷಂಟು”ಗಳ ಚಿಕಿತ್ಸೆಯೂ ಕಾದಿತ್ತು. ನಾನೇ ಪ್ರಯೋಗಕ್ಕೆಂದು ತಂದು ಸಂಶಯಿತ ವಿಷಗಿಡಗಳನ್ನು ತಿನ್ನಿಸುಸುತ್ತಿರುವ ಕರುಗಳ ಗುಂಪಿತ್ತು. ಮನೆಗೆ ಚಿಕಿತ್ಸೆಗೆ ಕರೆದಿರುವ “ಟೂರಿಂಗ್ ಪೇಷಂಟು”ಗಳ ಪಟ್ಟಿಯೂ ಸಹ ಬೆಳೆಯುತ್ತಿತ್ತು.
ಅಷ್ಟರಲ್ಲೇ ನನ್ನ ಶಿಷ್ಯ “ಸಾರ್..ಡಿ ಎಪ್ ಓ ಅವರು ಲೈನಿನಲ್ಲಿದ್ದಾರೆ. ಗರಂ ಆಗಿದಾರೆ.. ನಿಮ್ಮ ಜೊತೆ ಮಾತಾಡಬೇಕಂತೆ “ ಎಂದ. ಯಾವುದೋ ಕಾಡು ಕೋಣವೋ ಅಥವಾ ಹುಲಿ ಸಿಂಹ, ಜಿಂಕೆ ಇತ್ಯಾದಿ ವನ್ಯೃಗಗಳು ಕಾಡಿನಲ್ಲಿ ಸತ್ತಿರಬೇಕು. ಮರಣೋತ್ತರ ಪರೀಕ್ಷೆ ಮಾಡಲು ಕರೆಯುತ್ತಿದ್ದಾರೆ. ಈ ದಿನ ಹಳ್ಳ ಹಿಡಿಯಿತು. ದೇಶದ ಆರ್ಥಿಕತೆಗೆ ನಮ್ಮ ಹಸು ಎಮ್ಮೆಗಳಂತೆ ಒಂದಿನಿತೂ ಕೊಡುಗೆ ನೀಡದ, ಕರದಾತರು ಕಷ್ಟಪಟ್ಟು ನೀಡಿದ ಹಣವನ್ನು ಜೀವವೈವಿಧ್ಯದ ಸಂರಕ್ಷಣೆಯ ಹೆಸರಿನಲ್ಲಿ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ಗುಂಪೊಂದರ ಪುನರ್ವಸತಿಯಾಗಿ ಕೇಂದ್ರವಾಗಿ ಮಾರ್ಪಟ್ಟ ಇಲಾಖೆಯೆಂದು ನನ್ನ ಮಿತ್ರ ಹೇಳುವ ಅರಣ್ಯ ಇಲಾಖೆಯ ಯಾವುದೋ ಕಾಡು ಪ್ರಾಣಿ ಸತ್ತರೆ ಎಲ್ಲ ಕೆಲಸ ಬದಿಗೊತ್ತಿ ಅದರ ಕೊಳೆತು ಹೋದ ಶವಪರೀಕ್ಷೆಗೆ ಇಲ್ಲಿಂದ ಹೋಗಬೇಕಾದ ಅನಿವಾರ್ಯತೆಯನ್ನು ಶಪಿಸುತ್ತಾ ಫೋನು ಎತ್ತಿದೆ. ಆಕಡೆಯಿಂದ “ ಡಾಕ್ಟ್ರೇನ್ರಿ.. ಎಷ್ಟೊತ್ರಿ ಬರೋದು? ನಾನು ಸಾಗರ ಡಿಎಪ್ಪೋ ಕಣ್ರೀ… ತುಮರಿ ಹತ್ರ ಕಾಡುಕೋಣ ಅಡಿಕೆ ತೋಟದಲ್ಲಿ ಮನೆ ಮಾಡಿ ಬಿಟ್ಟಿದೆ.. ಅದ್ಕೆ ಒಂದಿಷ್ಟು ಚಿಕಿತ್ಸೆ ಆಗ್ಬೇಕಿತ್ತು.. ತುಮರಿಗೆ ಬೇಗ ಬಂದ್ಬಿಡಿ.. ಈ ಪೇಪರ್ರಿನವರು ತಲೆ ತಿಂತಾ ಇದ್ದಾರೆ” ಎಂದು ಅವರ ಅಧಿಕಾರಿ ಗತ್ತಿನಲ್ಲೇ ಗಾರ್ಡು ಫಾರೆಸ್ಟರುಗಳಿಗೆ ನೀಡುವಂತೆ ಆದೇಶ ನೀಡಿದರು.
ಇದೊಳ್ಳೆ ಕಥೆಯಾಯ್ತಲ್ಲ !! ದನದ ಚಿಕಿತ್ಸೆ ಬಿಟ್ಟು ಈ ಕಾಡುಕೋಣದ ಚಿಕಿತ್ಸೆಗೆ ಹೋಗ್ಬೇಕಲ್ಲ ? ಎಲ್ಲೋದ್ರು ಈ ಕಾಡುಪ್ರಾಣಿ ಡಾಕ್ಟರುಗಳು? ಎಂದು ಪರಿಚಿತರಾದ ಅರಣ್ಯ ಇಲಾಖೆಯ ಸ್ನೇಹಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಫೋನಾಯಿಸಿದೆ. ಅದರ ಪ್ರವರ ತಿಳಿಯಿತು.
“ಅಡಿಕೆ ತೋಟದಲ್ಲಿ ಮನೆ ಮಾಡಿದ ಕಾಡುಕೋಣ” “ಕಾಡಿನಿಂದ ನಾಡು ಸೇರಿದ ಕಾಡುಕೋಣ” ಇತ್ಯಾದಿ ಶಿರ್ಷಿಕೆಯ ಸುದ್ಧಿಗಳು ದಿನಪತ್ರಿಕೆಗಳಲ್ಲಿ ಬರತೊಡಗಿದ ಮೇಲೆಯೇ ನಮಗೆ ಗೊತ್ತಾಗಿದ್ದು ಕಾಡುಕೋಣವೊಂದು ತುಮರಿ ಭಾಗದ ಹೆಗಡೆಯೊಬ್ಬರ ತೋಟ ಸೇರಿ ಅಲ್ಲಿಯೇ ಠಿಕಾಣಿ ಹೂಡಿದೆ ಎಂದು. ಸಾಮಾನ್ಯವಾಗಿ ನಮ್ಮ ಜಾನುವಾರುಗಳ ಜಂಜಾಟದಲ್ಲಿಯೇ ಮುಳುಗಿಹೋಗುವ ನಾವು ಆಗೆಲ್ಲ ಕಾಡುಪ್ರಾಣಿಗಳ ಚಿಕಿತ್ಸೆಗೆ ಹೋಗುವುದು ಕಡಿಮೆಯಾಗಿತ್ತು. ಅದಕ್ಕೆಂದೇ ಶಿವಮೊಗ್ಗದಲ್ಲಿ ಅರಣ್ಯ ಇಲಾಖೆಯಲ್ಲಿರುವ ಇರುವ “ಆನೆ ಡಾಕ್ಟರು” ಹುಲಿ ಸಿಂಹ” ಡಾಕ್ಟರುಗಳಾದ ವನ್ಯಜೀವಿ ಪಶುವೈದ್ಯರು ಬಂದು ಏನೇನು ಬೇಕೋ ಅದೆಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದರು.
ಅದರೆ ಆಗ ವನ್ಯಜೀವಿ ತಜ್ಞ ಪಶುವೈದ್ಯರು ದೂರದೂರಿನಲ್ಲಿ ಪುಂಡ ಕಾಡಾನೆಗಳು ಊರು ನುಗ್ಗಿ ದಾಂಧಲೆ ಎಬ್ಬಿಸಿದ್ದರಿಂದ ಅವುಗಳ ತರಲೆ ನಿಲ್ಲಿಸಿ ಖೆಡ್ಡಾಕ್ಕೆ ಕೆಡವಲು ನಾಡಾನೆಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಹತ್ತಿರ ಯಾವುದೇ ಹಳ್ಳಿಯಲ್ಲಿ ಕಳೆದು ೧೫ ದಿನಗಳಿಂದ ಬೀಡು ಬಿಟ್ಟಿದ್ದು ಅವರು ಬಂದು ಈ ಕಾಡು ಪ್ರಾಣಿಯ ಚಿಕಿತ್ಸೆ ಮಾಡುವವರೆಗೆ ದಿನನಿತ್ಯ ಕಾಟಕೊಡುವ ದಿನಪತ್ರಿಕೆಗಳಿಂದ ಬಚಾವಾಗಲು ಡಿಎಪ್ಪೋ ನನಗೆ ಫೋನಾಯಿಸಿದ್ದಾರೆಂದೂ, ಸಾಗರ ಪಶುವೈದ್ಯ ಆಸ್ಪತ್ರೆಯ ಪಶುವೈದ್ಯರೆಲ್ಲ ತುಮರಿ ಏರಿಯಾವು ನನ್ನ ವ್ಯಾಪ್ತಿಯಲ್ಲಿ ಬರುವುದರಿಂದ ನನಗೆ ತಿಳಿಸಲು ಸೂಚಿಸಿದ್ದಾರೆಂದೂ ತಿಳಿಯಿತು.
ಸರಿ ನಮ್ಮಾಸ್ಪತ್ರೆಯಿಂದ ಯಾವ ರೂಟಿನಲ್ಲೇ ಹೋದರು 60-70 ಕಿಲೋಮೀಟರು ಇರುವ ತುಮರಿಗೆ ಹೋಗಲು ಎಲ್ಲಾ ಚಿಕಿತ್ಸಾ ಪರಿಕರಗಳನ್ನು ಸಿದ್ಧ ಮಾಡಿಕೊಳ್ಳಲು ನನ್ನ ಶಿಷ್ಯನಿಗೆ ತಿಳಿಸಿದೆ. ಕಾಡು ಪ್ರಾಣಿಗಳಿಗೆ ಅರಿವಳಿಕೆ ನೀಡುವ ಡಾರ್ಟ್ ಗನ್ನು ಇಲ್ಲವೆಂದೂ, ಕಾಡೆಮ್ಮೆ (ಕಾಡು ಕೋಣ?), ಮೈಮೇಲೆ ಬಂದರೆ ಕಷ್ಟವಿದೆಯೆಂದೂ ಯಾವುದಕ್ಕೂ ಮನೆಗೆ ಹೋಗಿ ತಿಳಿಸಿ ಬರುವೆನೆಂದೂ ನನ್ನ ಶಿಷ್ಯ ಮನೆಗೆ ಹೊರಟ.
ತುಮರಿ, ಬ್ಯಾಕೋಡು, ಕಾರ್ಗಲ್ಲು, ಶಿರವಂತೆ, ಅರಳಗೋಡು, ಕೊಂಜವಳ್ಳಿ, ಸೈದೂರು ಇತ್ಯಾದಿ ಈಗ ಆಸ್ಪತ್ರೆಯಾಗಿರುವ ಸುಮಾರು 90ಕಿಲೋಮೀಟರ್ ವ್ಯಾಪ್ತಿಯ ವಿಸ್ತಾರ ಪ್ರದೇಶಗಳಿಗೆ ಏಕೈಕ ತಜ್ಞ ಪಶುವೈದ್ಯನಾದ ನಾನು ಈ ಭಾಗದಲ್ಲಿ ಯಾವುದೇ ನಾಡು ಅಥವಾ ಕಾಡು ಪ್ರಾಣಿಗಳಿಗೆ ತೊಂದರೆಯಾದರೂ ಮರಣೋತ್ತರ ಪರೀಕ್ಷೆ ಅಥವಾ ಚಿಕಿತ್ಸೆ ನೀಡುವ ಮಹತ್ತರ ಜವಾಬ್ದಾರಿ ಹೊತ್ತು ಕೊಂಡಿದ್ದೆ.
ಎಂದಿನಂತೆ ನನ್ನ ಸುಜ಼ುಕಿ ಸವಾರಿ ನನ್ನ ಶಿಷ್ಯನ ಜೊತೆ ತುಮರಿ ಕಡೆ ಹೊರಟಿತು. ಸಾಗರ ಸೇರಿ ಸಾಗರದಿಂದ ಹೊಳೆಬಾಗಿಲಿನ ಬಾರ್ಜು ದಾಟಿ ಇನ್ನೂ 25 ಕಿಮಿ ಅಂಕು ಡೊಂಕಾದ ರಸ್ತೆಗಳಲ್ಲಿ ಸಾಗಿ ಕಾಡುಕೋಣದ ವಿಷಯ ಕೇಳುತ್ತಾ ಸಾಗಿದೆವು. ಗಮನದ ಹಳ್ಳಿ ತಲುಪಿ ಅಲ್ಲಿ ಹೆಗ್ಡೇರ ತೋಟದಲ್ಲಿ ಗಮಯದ ಜಾಡು ಹಿಡಿದು ಸಾಗಿದೆವು. ಬೈಕಿನಲ್ಲಿ ಸಾಗಿ ಸಾಗಿ ಬೇಸರ ಎಷ್ಟೊತ್ತಿಗಪ್ಪಾ ಈ ಊರು ಬರುತ್ತೆ ಎನ್ನುವಷ್ಟರಲ್ಲಿ ಗಮಯದ ಉಗಮ ಸ್ಥಾನ ಬಂತು.
ಗಮಯದ ಸುತ್ತ ಜನವೋ ಜನ. ಕೆಲವು ಅರಣ್ಯ ಇಲಾಖೆ ಸಿಬ್ಬಂದಿ ಜಮೆಯಾಗಿ ಅವರ ಅಮೂಲ್ಯ ವಸ್ತುವಿನ ರಕ್ಷಣೆ ಮಾಡುತ್ತಿದ್ದರು. ಒಂದೆರಡು ಪೋಲೀಸ್ ಸಿಬ್ಬಂದಿಯೂ ಸಹ ಜನರ ಬೀಡು ಕಡಿಮೆ ಮಾಡಲು ಹರ ಸಾಹಸ ಪಡುತ್ತಿದ್ದರು. ಹೋಯ್.. ಹೋಯ್… ಡಾಕ್ಟ್ರು ಬಂದ್ರು .. ದಾರಿ ಬಿಡಿ” ಎನ್ನುವ ಆಜ್ಞೆ ಪೋಲೀಸರಿಂದ ಬಂದು ಎಲ್ಲಾ ಜನರಿಂದ ನಾನೇ ಫ಼ೋಕಸ್ಸಾದೆ. ಕಾಡು ಕೋಣವನ್ನು ಸುಮಾರು ೧೫ ಅಡಿ ದೂರದಿಂದ ನೋಡಿದೆ. ಬಿಳಿಯ ಪಟ್ಟಿಯ ಕುತ್ತಿಗೆ, ಕಟ್ಟು ಮಸ್ತಾದ ದೇಹ, ರಾಜಗಾಂಭೀರ್ಯದಲ್ಲಿ ಇರಬೇಕಾದ ಕಾಡುಕೋಣ ಲಾಚಾರ್ ಎದ್ದು ಬಡ್ಕಾಟೆ ಹೆಣದಂತೆ ಹಿಂಡಿ ನೀಡದೇ ಇರುವ ಏಳಲು ಸಾಧ್ಯವಾಗದ ಮುದಿ ಎಮ್ಮೆಯಾಗಿ ಹೋಗಿತ್ತು. ಆದರೂ ಅದರ ಸ್ಥಿತಿ ಗಮನಿಸಲು ಸ್ವಲ್ಪ ಹತ್ತಿರ ಹೋದರೆ ಬುಸ್ ಎಂದು ಶಬ್ಧ ಮಾಡುತ್ತಾ ಏರಿ ಬಂತು.
ಸರಿಯಾಗಿ ಗಮನಿಸಿದಾಗ ಮುಂದಿನ ಬಲಗಾಲಿನ ಮೇಲ್ಬಾಗ ಉಬ್ಬಿದಂತೆ ಕಂಡು ಬಂತು. ಇದರ ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಹೋಗುವುದು ಗ್ಯಾರಂಟಿ ಅನ್ನಿಸಿತು. ಅರಣ್ಯ ಇಲಾಖೆಯವರಿಗೆ “ ಈ ಕೋಣನ್ನ ಹೇಗಾದ್ರೂ ಹಿಡಿದು ಕೊಟ್ರೆ, ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ ಏನಾದರೂ ಮಾಡಬಹುದು. ನಮ್ಮ ಹತ್ತಿರ ಅರಿವಳಿಕೆಯನ್ನು ದೂರದಿಂದಲೇ ನೀಡುವ “ಡಾರ್ಟ್ ಗನ್” ಇರದೇ ಇರುವುದರಿಂದ ಯಾವುದೇ ಕ್ಷಣದಲ್ಲಿ ಕಾಡು ಕೋಣ ನುಗ್ಗಿದರೆನಾಮಾವಶೇಷವಾಗುವ ಸಾಧ್ಯತೆ ಇತ್ತು. ಅದು ಕೃಷವಾಗಿರುವುದನ್ನು ಗಮನಿಸಿದರೆ ಅದಕ್ಕೆ ಗಂಭೀರವಾದ ಕಾಯಿಲೆ ಇರುವುದು ಗ್ಯಾರಂಟಿಯಾಗಿತ್ತು. ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಯಮಪುರಿ ಸೇರಿ ಖಾಯಂ ಆಗಿ ಯಮನ ವಾಹನ ಆಗುವ ಸಾಧ್ಯತೆ ಇತ್ತು.
ನನ್ನ ಶಿಷ್ಯ ಖಾಯಂ ಎಮ್ಮೆಗಳನ್ನು ಕೆಡಗಿ ಅಭ್ಯಾಸ ಇದ್ದಾತ. ಆತ “ ಸಾರ್.. ಒಂದು ಕೈ ನೋಡಿಯೇ ಬಿಡ್ಲಾ ಸಾರ್.. ಕಾಡುಕೋಣ ಹ್ಯಾಂಗಿದ್ರೂ ಬಡಕಲಾಗಿದೆ. ನಮ್ಮ ಎಮ್ಮೆಗಳಷ್ಟೇ ತಾಕತ್ತು ಇರ್ಬಹುದು, ಹಗ್ಗ ಹಾಕಿ ಕೆಡವಿ ಬಿಡ್ತೀನಿ “ ಎಂದು ಹುಂಬ ಧೈರ್ಯ ತೋರಿದ. ನಾನು ಮಾತ್ರ ಈ ರಿಸ್ಕ್ ತೆಗೆದುಕೊಳ್ಳಲು ಸುತರಾಂ ಸಿದ್ದವಿರಲಿಲ್ಲ. ಎಲ್ಲಾದರೂ ನಮ್ಮ ಅಂದಾಜು ತಪ್ಪಿ ಈ ಕಾಡುಕೋಣ ನುಗ್ಗಿ ಯಾರನ್ನಾದರೂ ಕೆಡಗಿ ಕೊಂದರೆ ಯಾರು ಜವಾಬ್ದಾರರರು? ಎಂದು “ ಈ ಕಾಡು ಪ್ರಾಣಿ ಸಹವಾಸ ಸಾಕಪ್ಪಾ.. ಅದರ ಡಾಕ್ಟರುಗಳು ಬಂದು ಏನಾದರೂ ಮಾಡ್ಲಿ. ನಮ್ಮಿಂದ ದನ ಆರಾಮವಾದ್ರೆ ಸಾಕು” ಎಂದು ರಾಗ ಎಳೆದೆ. ಆದರೂ ವೃತ್ತಿಯ ತುಡಿತ ಇದೆಯಲ್ಲ.. ಏನಾದರೂ ಮಾಡಲೇ ಬೇಕು. ಸುತ್ತ ಮುತ್ತ ಸೇರಿದ ಜನ ಎಲ್ಲಾ ತರಹೇವಾರಿ ಕಾಮೆಂಟು ಪಾಸು ಮಾಡಲಿಕ್ಕೆ ಪ್ರಾರಂಭಿಸಿದರು.
ಅವರೊಲ್ಲಬ್ಬ “ಇವರು ದನಕ್ಕೆ ಮಾತ್ರ ಡಾಕ್ಟರು. ಎಮ್ಮೆ ಮುಕಳಿ ಒಳಗೆ ಕೈ ಹಾಕಿ ಇನ್ಸೆಮಿನೇಷನ್ ಮಾಡೋದು ಮಾತ್ರ ಇವರಿಗೆ ಕಲ್ಸಿರ್ತಾರೆ. ಈ ಕಾಡುಕೋಣದ ಟ್ರೀಟ್ಮೆಂಟಿಗೆಲ್ಲಾ ಮೈಸೂರಿನಿಂದ ಎಕ್ಸ್ಪರ್ಟ್ಸ್ ಬರ್ಬೇಕು. ಸುಮ್ನೇ ಟೈಮ್ ಪಾಸಿಗೆ ಬಂದಿದ್ದಾರೆ. ಅದ್ರ ಜೊತೆ ಈ ಫ಼ಾರೆಸ್ಟ್ ಖಾತೆ ಜನಾ ಬೇರೆ ದಂಡ” ಎಂದು ನನ್ನ ವೃತ್ತಿಯ ಘನತೆಯನ್ನು ಮೂರುಕಾಸಿಗಿಳಿಸಿ ನಿವಾಳಿಸಿ ಬಿಸಾಡಿದ ಹಾಗೂ ಫ಼ಾರೆಸ್ಟು ಇಲಾಖೆಯವರು ಕಳ್ಳ ನಾಟಾ ಮಾಡುತ್ತಿದ್ದ ಕೆಲ ಹಳ್ಳಿಯ ಜನರನ್ನು ಕುಂಡೆಯ ಮೇಲೆ ಹಾಕಿ ಕಟಕಟೆ ಒಳಗೆ ಹಾಕಿದ ಹಳೆ ಸೇಡು ತೀರಿಸಿಕೊಂಡ. ಹಳ್ಳಿಯಲ್ಲಿ ರಾತ್ರಿ ,10 ಘಂಟೆಗೆ ಕರು ಅಡ್ಡ ಸಿಕ್ಕಿಹಾಕಿಕೊಂಡಾಗ ಎಣ್ಣೆಯ ಮತ್ತನ್ನು ಏರಿಸಿಕೊಂಡವರಿಂದ ಈ ತರಹದ ಮಾತು ಕೇಳಿ ಅಭ್ಯಾಸವಾಗಿ ಹೋದ ನಾನು ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಆದರೆ ನನ್ನ ಶಿಷ್ಯನಿಗೆ ಮಾತ್ರ ನಖಶಿಖಾಂತ ಕೋಪ ಬಂದಿತ್ತು.
ಆತ “ಸಾರ್. ಏನೂ ತೊಂದರೆ ಇಲ್ಲದಂತೆ ಅದನ್ನು ಕೆಡಗಿ ಕೊಡ್ತೀನಿ ಸಾರ್. ಇಂಜೆಕ್ಷನ್ ಹಾಕಿ ಅನೇಸ್ಠೇಸಿಯಾ ಕೊಟ್ಟು ಕೆಲಸ ಮಾಡಿ.. ಫ಼ಾರೆಸ್ಟ್ ಡಿಪಾರ್ಟ್ಮೇಂಟಿನವರೂ ಸಹಾಯ ಮಾಡ್ತಾರೆ” ಅಂದ. ಅಷ್ಟು ಹೊತ್ತು ನಮ್ಮ ಪರಿಪಾಟಲು ನೋಡಿ ಮಜಾ ತಗಳ್ತಿದ್ದ ಅರಣ್ಯ ಇಲಾಖೆಯ ಗಾರ್ಡು ಫ಼ಾರೆಸ್ಟರುಗಳೂ ಜನರ ಮಾತಿನಿಂದ ರೇಗಿ ಏನಾದರೂ ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಾಗಿತ್ತು, ಅವರು ನಾಟಾ ಸಾಗಿಸಲು ಕಳ್ಳ ಸಾಗಣೆಗೆ ಉಪಯೋಗಿಸುತ್ತಿದ್ದ ಸೀಜ಼್ ಮಾಡಿದ ದಪ್ಪನೇ ಹಗ್ಗ ತಂದರು.
ಅದನ್ನು ಎಂಟತ್ತು ಅಡಿಕೆ ಮರದ ಸುತ್ತ ಕಟ್ಟಿ ಕಾಡು ಕೋಣ ಹಗ್ಗದ ಕೋಟೆ ಒಳಗೆ ಭದ್ರವಾಗುವಂತೆ ದಿಗ್ಭಂಧನ ಹಾಕಿದರು. ಕಾಡುಕೋಣ ಇರುವ ಜಾಗದ ಸುತ್ತ ಗೂಟದ ಬೇಲಿ ರೆಡಿಯಾಗಿ ಅಕ್ಷರಷ: ಕೊರೋನಾ ಪೀಡಿತರನ್ನು ಕ್ವಾರಂಟೈನಿನೊಳಗೆ ಹಾಕಿದ ಹಾಗೇ ಲಾಕ್ ಮಾಡಿದರು. ಆದರೆ ಕೋಣಕ್ಕೆ ಅನೇಶ್ಥೆಸಿಯಾ ಇಂಜೆಕ್ಷನ್ ಚುಚ್ಚಬೇಕಲ್ಲ. “ಯಾರಾದ್ರೂ ಬಂದು ಇದನ್ನು ಮಾಂಸದಲ್ಲಿ ತೂರಿಸ್ರೋ” ಎಂದು ಸಿರಿಂಜಿನಲ್ಲಿ ತಕ್ಕ ಪ್ರಮಾಣದ ಅನೇಸ್ಥೆಸಿಯಾ ಚುಚ್ಚುಮದ್ದು ಲೋಡ್ ಮಾಡಿ ನೀಡಲು ಹೋದೆ. ಯಾರೂ ಮುಂದೆ ಬರಲಿಲ್ಲ.
ಒಂದು ಉಪಾಯ ಹೊಳೆಯಿತು. ನಾವು ನಿರ್ಮಿಸಿದ ಕೋಟೆಯೊಳಗೆ ಒಂದಿಷ್ಟು ಮುರುಗಲು ಮತ್ತು ಕೋಕೋ ಗಿಡಗಳಿದ್ದವು. ಅವುಗಳ ಮೇಲೆ ಹತ್ತಿ ಕುಳಿತರೆ ಮತ್ತು ಕಾಡುಕೋಣವನ್ನು ಅಲ್ಲಿಗೆ ನಿಧಾನವಾಗಿ ಚಲನೆಯಾಗುವಂತೆ ನೋಡಿಕೊಂಡರೆ ಅದಕ್ಕೆ ಕಚಕ್ ಎಂದು ಇಂಜೆಕ್ಷನ್ ಚುಚ್ಚಿಬಿಡುವ ಎಂದುಕೊಂಡೆ. ಆದರೆ ಇಲ್ಲಿ ತುಂಬಾ ರಿಸ್ಕ್ ಇತ್ತು. ಆದರೆ ಮೊದಲೇ ಗಾಯಾಳು ಕೋಣ, ಖಂಡಿತಾ ರೋಷ ಭರಿತವಾಗಿರುತ್ತದೆ. ಏನಾದರೂ ಹೆಚ್ಚುಕಮ್ಮಿ ಆಗಿ ಆಯ ತಪ್ಪಿದರೆ ಅದರ ಮೇಲೆಯೇ ಬೀಳುವ ಸಾಧ್ಯತೆ ಇತ್ತು. ಬಿದ್ದರೆ ತುಳಿದು ಖಂಡಿತಾ ತುಳಿದು ಯಮಪುರಿಗೆ ಕಳಿಸುತ್ತಿತ್ತು.
ಯಾರಿಗಾದರೂ ಮರ ಹತ್ತಿ ಅದು ಕೆಳಗೆ ಬಂದೊಡೆ ಇಂಜೆಕ್ಷನ್ ಚುಚ್ಚಿ ಎಮ್ದರೆ ಎಲ್ಲರೂ ಹೆದರು ಪುಕ್ಕಲರೆ. ಮತ್ತೆ ಕೆಲವರು ಹೊಟ್ಟೆ ಹೊತ್ತ ದಡೂತಿಗಳು. ಅಲ್ಲಿ ಇರುವವರಲ್ಲಿ ನಾನೇ ತೆಳ್ಳಗಿರುವವ. ಏನಾದರಾಗಲಿ ಎಂದು ಅನಸ್ಥೆಸಿಯಾವನ್ನು ತುಂಬಿಸಿದ ಸಿರಿಂಜ್ ಕೈಲಿ ಹಿಡಿದು ಅದು ನೇರವಾಗಿ ಕೆಳಗೆ ಬರಬಹುದಾದ ಕೋಕೋ ಗಿಡದ ಮೇಲೆ ಏರಿದೆ. ಕಾಡುಕೋಣವನ್ನು ಮರದ ಕೆಳಗೆ ಬಂದು ನಿಲ್ಲುವಂತೆ ಬೆದರಿಸಲು ಸೂಚಿಸಿದೆ.
ಹಲವು ರೌಂಡ್ ಕಾರ್ಯಾಚರಣೆಯ ನಂತರ ಯಾವುದೋ ಗಳಿಗೆಯಲ್ಲಿ ಕಾಡು ಕೋಣ ನಾನು ಮೇಲೆ ಇದ್ದ ಕೊಂಬೆಯ ಕೆಳಗೆ ಬಂದು ನಿಂತಿತು. ಇದೇ ಅವಕಾಶವೆಂದು ಅದರ ಹಿಂಬಾಗದ ಪ್ರಷ್ಠದ ಮೇಲೆ ಸೂಜಿಯ ಸಮೇತ ಸಿರಿಂಜ್ ಚುಚ್ಚಿ ಸರಕ್ಕನೇ ಔಷಧಿ ಸೇರಿಸಿದೆ. ಆಯ ತಪ್ಪಿ ಕೆಳಗೆ ಬಿದ್ದ ಹೊಡೆತಕ್ಕೆ ಕಾಡುಕೋಣದ ಎದುರು ಅಂಗಾತ ಬಿದ್ದೆ. ಇನ್ನೇನು ಕಾಡುಕೋಣ ನನ್ನನ್ನು ತಿವಿಯಬೇಕು.. ನೋಡ್ತೀನಿ .. ಏನೂ ಶಬ್ಧ ಇಲ್ಲ.
ನಾನು ಕೊಟ್ಟ ಅರಿವಳಿಕೆಯ ಪ್ರಭಾವದಿಂದ ಕಾಡುಕೋಣ ಧರಾಶಾಯಿಯಾಗಿತ್ತು.
ಕೂಡಲೇ ನನ್ನ ಶಿಷ್ಯ ಮತ್ತು ಅರಣ್ಯ ಇಲಾಖೆಯವರು ಕಾಡುಕೋಣವನ್ನು ನಾಡುಕೋಣ ಕಟ್ಟಿದಂತೆ ಹಗ್ಗದಿಂದ ಏಳದಂತೆ ಕ್ಷಣಮಾತ್ರದಲ್ಲಿ ಬಂಧಿಸಿದರು. ಕಾಡುಕೋಣದ ಮುಂಗಾಲಿನ ಮೇಲ್ಬಾಗದಲ್ಲಿ ಕೀವಿನಿಂದ ಕೂಡಿದ ಗಡ್ಡೆಯಿತ್ತು. ಸಾವಧಾನವಾಗಿ ಅದನ್ನು ಓಪನ್ ಮಾಡಿದಾಗ ಟಕ್ ಎಂದು ಅದರೊಳಗಿದ್ದ ಬುಲೆಟ್ ಹೊರಬಂತು. ಯಾರೋ ದುರುಳರು ಮಾಂಸದಾಸೆಗೆ ಕಾಡುಕೋಣಕ್ಕೆ ಗುಂಡು ಹೊಡೆದಾಗ ಅದು ಮಾಂಸದಲ್ಲಿ ಕಚ್ಚಿಕೊಂಡು ಅಲ್ಲಿ ಕೀವುಂಟುಮಾಡಿದೆ ಎಂದು ತಿಳಿಯಿತು.
ಕೀವು ಬಸಿದು ಹೋಗುವ ಹಾಗೇ ಮಾಡಿ ಅದರೊಳಗೆ ಟಿಂಚರ್ ಆಯೋಡಿನ್ ಯುಕ್ತ ಭಟ್ಟೆಯನ್ನಿರಿಸಿ ಸುತ್ತಲೂ ಮುಲಾಮು ಹಚ್ಚಿದೆ. ಅವಶ್ಯಕ ನಂಜುನಿವಾರಕಗಳು, ನೋವು ನಿವಾರಕಗಳು ಹಾಗೂ ಜೀವನಿರೋಧಕದ ಚುಚ್ಚುಮದ್ದು ನೀಡಿದೆ. ಕಾಡುಕೋಣ ಬಹಳ ಬಡಕಲುಗೊಂಡಿತ್ತು. ಬಹುಶ: ಕೀವಿನ ನೋವಿನ ಬಾಧೆಯಿಂದ ಇರಬಹುದೇನೋ? ಕಾಡು ಕೋಣ ನಾಡಿಗೆ ಆಶ್ರಯಕ್ಕೆ ಬಂದಿದೆ.ತೋಟದಲ್ಲಿ ಸುಲಭವಾಗಿ ಸಿಗುವ ಹಲಸಿನ ಹಣ್ಣು ಇತ್ಯಾದಿ ತಿಂದು ಸೆಟ್ಲ್ ಆಗಿದೆ ಎಂದು ಗೊತ್ತಾಯ್ತು. ಎಲ್ಲ ಕೆಲಸ ಮುಗಿಸಿ, ಅದರ ತಿಲಕಾಷ್ಠ ಮಹಿಷ ಬಂಧನ ಬಿಡಿಸಿ ದೂರ ಬಂದೆವು. ಕೋಟೆಯಂತೆ ಮಾಡಿದ ಹಗ್ಗದ ಬಿಗಿತವನ್ನೂ ಸಡಿಲ ಗೊಳಿಸಿದೆವು. ಸುಮಾರು ಮುಕ್ಕಾಲು ಘಂಟೆಗೆ ಕಾಡುಕೋಣಕ್ಕೆ ಪ್ರಜ್ಞೆ ಬಂತು. ಓಲಾಡುತ್ತಾ ಏಳಲು ಪ್ರಯತ್ನಿಸಿತು. ಸ್ವಲ್ಪ ಹೊತ್ತಿಗೆ ಎದ್ದು ನಿಂಟು ಮೈಕೊಡವಿಕೊಂಡಿತು. ದುಡುಕ್ಕನೆ ಪಕ್ಕಳದ ಹಳ್ಳದ ಮೇಲೆ ಏರಿ ನಿಂತಿತು. ನಮ್ಮೆಡೆ ಒಂತರಾ ಕೃತಜ್ಞತೆಯ ನೋಟ ಬೀರಿ ಕಾಡಿನಲ್ಲಿ ಜಿಗಿದು ಮಾಯವಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂಕಣ
Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?
‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.
ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:
ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.
ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?
ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.
‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?
ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.
ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.
ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ದಿನದ ಸುದ್ದಿ
ಗೃಹಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಬದಲಾವಣೆ ಇಲ್ಲ
ಸುದ್ದಿದಿನಡೆಸ್ಕ್:ಗೃಹಬಳಕೆಯ ಎಲ್ಪಿಜಿ ಸಿಲೆಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟಪಡಿಸಿದೆ.
ಗೃಹ ಬಳಕೆ ಎಲ್ಪಿಜಿ ಸಿಲೆಂಡರ್ ಬೆಲೆಯನ್ನು 111 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಸಚಿವಾಲಯ, ವಾಣಿಜ್ಯ ಸಿಲೆಂಡರ್ ಬೆಲೆಯು ಅಂತಾರಾಷ್ಟ್ರೀಯ ಕಚ್ಚಾ ಅನಿಲ ಮತ್ತು ಸಂಬAಧಿತ ದರಗಳ ಮೇಲೆ ಅವಲಂಬಿತವಾಗಿದ್ದು, ಆಗಾಗ್ಗೆ ಮಾರುಕಟ್ಟೆಯ ದರಗಳು ಬದಲಾಗುತ್ತವೆ. ಆದರೆ, ಗೃಹ ಬಳಕೆಯ ಸಿಲೆಂಡರ್ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತಿಳಿಸಿದೆ.
ದೆಹಲಿಯಲ್ಲಿ 14.2 ಕೆಜಿ ಗೃಹ ಬಳಕೆ ಅಡುಗೆ ಅನಿಲ ಸಿಲೆಂಡರ್ ಬೆಲೆ 950 ರೂಪಾಯಿಯಾಗಿದ್ದು, ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದು 553 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಇದು ಆಗಸ್ಟ್ 2023 ರಿಂದ ನವೆಂಬರ್ 2025ರವರೆಗೆ ಹೋಲಿಸಿದರೆ, ಶೇಕಡಾ 39 ರಷ್ಟು ದರ ಕಡಿತವನ್ನು ಸೂಚಿಸುತ್ತದೆ. ಜನರಿಗೆ ಸುಸ್ಥಿರ ಇಂಧನ ಪೂರೈಕೆಗೆ ಒತ್ತು ನೀಡಲಾಗಿದ್ದು, ದರ ಬದಲಾವಣೆ ಇಲ್ಲ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಫೆ.14 ರಂದು ಸಂತ ಸೇವಾಲಾಲ್ರವರ 287ನೇ ಜಯಂತಿ ಕಾರ್ಯಕ್ರಮ
-
ದಿನದ ಸುದ್ದಿ4 days agoಕನ್ನಡಭಾಷೆಯಲ್ಲಿ ನಾಮಫಲಕ ಕಡ್ಡಾಯ : ಆಯುಕ್ತೆ ರೇಣುಕಾ ಆದೇಶ
-
ದಿನದ ಸುದ್ದಿ1 day agoಎಸ್.ಎಸ್.ಎಲ್.ಸಿ ಫಲಿತಾಂಶ ಹೆಚ್ಚಿಸಲು ಕ್ರಮವಹಿಸಿ : ಶಿಕ್ಷಕರಿಗೆ ಡಿಸಿ ಗಂಗಾಧರಸ್ವಾಮಿ ಸೂಚನೆ
-
ದಿನದ ಸುದ್ದಿ1 day agoಉದ್ಯೋಗಿಗಳಿಗೆ ಗೂಗಲ್ ಶಾಕ್..! AI ಕಲಿಯದಿದ್ದರೆ ಉದ್ಯೋಗ ತೊರೆಯಿರಿ



