Connect with us

ಲೈಫ್ ಸ್ಟೈಲ್

ನಾಡಿಗೆ ಬಂದ ಕಾಡುಕೋಣ..!

Published

on

ಸಾಂದರ್ಭಿಕ ಚಿತ್ರ
  • ಪಶುವೈದ್ಯರುಗಳ ಪೇಷಂಟುಗಳು ಬರೀ ದನ, ಎಮ್ಮೆ, ಕೋಳಿ,ಕುರಿ, ಆಡು, ನಾಯಿ, ಬೆಕ್ಕು, ಕೋಳಿ, ಹಂದಿ ಇತ್ಯಾದಿಗಳಿಗೆ ಸೀಮಿತವಾಗಿರದೆ ಮೊಲ, ಇಲಿ, ಕೋತಿ, ಆಮೆ, ಹುಲಿ, ಸಿಂಹ, ಒಂಟೆ, ಆನೆ, ಚಿರತೆ, ಹಾವು , ನರಿ, ಜಿಂಕೆ, ಕಡಿವೆ ಇತ್ಯಾದಿ ತರಹೇವಾರಿ ವನ್ಯಜೀವಿಗಳ ಚಿಕಿತ್ಸೆ ಮತ್ತು ಜೀವನ ಕ್ರಮದ ಬಗ್ಗೆಯೂ ತಿಳಿದುಕೋಂಡಿರಬೇಕಾಗುತ್ತದೆ. ಕೆಲವೊಮ್ಮೆ ಈ ಪ್ರಾಣಿಗಳನ್ನು ಚಿಕಿತ್ಸೆ ಮಾಡುವಾಗ ಸಾಕಷ್ಟು ಅಪಾಯವೂ ಕಾದಿರುತ್ತದೆ. ಗಾಯಗೊಂಡ ಕಾಡುಕೋಣವೊಂದರ ಚಿಕಿತ್ಸೆಯ ರೋಚಕ ಅನುಭವ.

ಡಾ. ಎನ್.ಬಿ.ಶ್ರೀಧರ

ನಿವಾರವೊಂದರ ಮಧ್ಯಾಹ್ನ 11 ಘಂಟೆಯಿರಬಹುದು. ಆ ದಿನ ತಾಳಗುಪ್ಪದಲ್ಲಿ ಸಂತೆ. ಆಸ್ಪತ್ರೆಯಲ್ಲಿ ಗಿಜಿಗುಟ್ಟುವಷ್ಟು ಜನ ಮತ್ತು ತರಹೆವಾರಿ ಕೇಸುಗಳು. ಹುಳವಾಗಿ ಗಬ್ಬು ನಾರುವ ಗಾಯದಿಂದ ಹಿಡಿದು ಸಂತಾನಹರಣ ಚಿಕಿತ್ಸೆಗೆಂದು ಕಾಯುತ್ತಿರುವ ಪಕ್ಕದ ತಾಲೂಕು ಸೊರಬದ ಶ್ವಾನಗಳ ಸವಾರಿ ಕ್ಯೂನಲ್ಲಿತ್ತು. ಒಳರೋಗಿಗಳಾಗಿ ಮಾಡಿಕೊಂಡ ಕೆಲವು “ಪೇಷಂಟು”ಗಳ ಚಿಕಿತ್ಸೆಯೂ ಕಾದಿತ್ತು. ನಾನೇ ಪ್ರಯೋಗಕ್ಕೆಂದು ತಂದು ಸಂಶಯಿತ ವಿಷಗಿಡಗಳನ್ನು ತಿನ್ನಿಸುಸುತ್ತಿರುವ ಕರುಗಳ ಗುಂಪಿತ್ತು. ಮನೆಗೆ ಚಿಕಿತ್ಸೆಗೆ ಕರೆದಿರುವ “ಟೂರಿಂಗ್ ಪೇಷಂಟು”ಗಳ ಪಟ್ಟಿಯೂ ಸಹ ಬೆಳೆಯುತ್ತಿತ್ತು.

ಅಷ್ಟರಲ್ಲೇ ನನ್ನ ಶಿಷ್ಯ “ಸಾರ್..ಡಿ ಎಪ್ ಓ ಅವರು ಲೈನಿನಲ್ಲಿದ್ದಾರೆ. ಗರಂ ಆಗಿದಾರೆ.. ನಿಮ್ಮ ಜೊತೆ ಮಾತಾಡಬೇಕಂತೆ “ ಎಂದ. ಯಾವುದೋ ಕಾಡು ಕೋಣವೋ ಅಥವಾ ಹುಲಿ ಸಿಂಹ, ಜಿಂಕೆ ಇತ್ಯಾದಿ ವನ್ಯೃಗಗಳು ಕಾಡಿನಲ್ಲಿ ಸತ್ತಿರಬೇಕು. ಮರಣೋತ್ತರ ಪರೀಕ್ಷೆ ಮಾಡಲು ಕರೆಯುತ್ತಿದ್ದಾರೆ. ಈ ದಿನ ಹಳ್ಳ ಹಿಡಿಯಿತು. ದೇಶದ ಆರ್ಥಿಕತೆಗೆ ನಮ್ಮ ಹಸು ಎಮ್ಮೆಗಳಂತೆ ಒಂದಿನಿತೂ ಕೊಡುಗೆ ನೀಡದ, ಕರದಾತರು ಕಷ್ಟಪಟ್ಟು ನೀಡಿದ ಹಣವನ್ನು ಜೀವವೈವಿಧ್ಯದ ಸಂರಕ್ಷಣೆಯ ಹೆಸರಿನಲ್ಲಿ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ಗುಂಪೊಂದರ ಪುನರ್ವಸತಿಯಾಗಿ ಕೇಂದ್ರವಾಗಿ ಮಾರ್ಪಟ್ಟ ಇಲಾಖೆಯೆಂದು ನನ್ನ ಮಿತ್ರ ಹೇಳುವ ಅರಣ್ಯ ಇಲಾಖೆಯ ಯಾವುದೋ ಕಾಡು ಪ್ರಾಣಿ ಸತ್ತರೆ ಎಲ್ಲ ಕೆಲಸ ಬದಿಗೊತ್ತಿ ಅದರ ಕೊಳೆತು ಹೋದ ಶವಪರೀಕ್ಷೆಗೆ ಇಲ್ಲಿಂದ ಹೋಗಬೇಕಾದ ಅನಿವಾರ್ಯತೆಯನ್ನು ಶಪಿಸುತ್ತಾ ಫೋನು ಎತ್ತಿದೆ. ಆಕಡೆಯಿಂದ “ ಡಾಕ್ಟ್ರೇನ್ರಿ.. ಎಷ್ಟೊತ್ರಿ ಬರೋದು? ನಾನು ಸಾಗರ ಡಿಎಪ್ಪೋ ಕಣ್ರೀ… ತುಮರಿ ಹತ್ರ ಕಾಡುಕೋಣ ಅಡಿಕೆ ತೋಟದಲ್ಲಿ ಮನೆ ಮಾಡಿ ಬಿಟ್ಟಿದೆ.. ಅದ್ಕೆ ಒಂದಿಷ್ಟು ಚಿಕಿತ್ಸೆ ಆಗ್ಬೇಕಿತ್ತು.. ತುಮರಿಗೆ ಬೇಗ ಬಂದ್ಬಿಡಿ.. ಈ ಪೇಪರ್ರಿನವರು ತಲೆ ತಿಂತಾ ಇದ್ದಾರೆ” ಎಂದು ಅವರ ಅಧಿಕಾರಿ ಗತ್ತಿನಲ್ಲೇ ಗಾರ್ಡು ಫಾರೆಸ್ಟರುಗಳಿಗೆ ನೀಡುವಂತೆ ಆದೇಶ ನೀಡಿದರು.

ಇದೊಳ್ಳೆ ಕಥೆಯಾಯ್ತಲ್ಲ !! ದನದ ಚಿಕಿತ್ಸೆ ಬಿಟ್ಟು ಈ ಕಾಡುಕೋಣದ ಚಿಕಿತ್ಸೆಗೆ ಹೋಗ್ಬೇಕಲ್ಲ ? ಎಲ್ಲೋದ್ರು ಈ ಕಾಡುಪ್ರಾಣಿ ಡಾಕ್ಟರುಗಳು? ಎಂದು ಪರಿಚಿತರಾದ ಅರಣ್ಯ ಇಲಾಖೆಯ ಸ್ನೇಹಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಫೋನಾಯಿಸಿದೆ. ಅದರ ಪ್ರವರ ತಿಳಿಯಿತು.

“ಅಡಿಕೆ ತೋಟದಲ್ಲಿ ಮನೆ ಮಾಡಿದ ಕಾಡುಕೋಣ” “ಕಾಡಿನಿಂದ ನಾಡು ಸೇರಿದ ಕಾಡುಕೋಣ” ಇತ್ಯಾದಿ ಶಿರ್ಷಿಕೆಯ ಸುದ್ಧಿಗಳು ದಿನಪತ್ರಿಕೆಗಳಲ್ಲಿ ಬರತೊಡಗಿದ ಮೇಲೆಯೇ ನಮಗೆ ಗೊತ್ತಾಗಿದ್ದು ಕಾಡುಕೋಣವೊಂದು ತುಮರಿ ಭಾಗದ ಹೆಗಡೆಯೊಬ್ಬರ ತೋಟ ಸೇರಿ ಅಲ್ಲಿಯೇ ಠಿಕಾಣಿ ಹೂಡಿದೆ ಎಂದು. ಸಾಮಾನ್ಯವಾಗಿ ನಮ್ಮ ಜಾನುವಾರುಗಳ ಜಂಜಾಟದಲ್ಲಿಯೇ ಮುಳುಗಿಹೋಗುವ ನಾವು ಆಗೆಲ್ಲ ಕಾಡುಪ್ರಾಣಿಗಳ ಚಿಕಿತ್ಸೆಗೆ ಹೋಗುವುದು ಕಡಿಮೆಯಾಗಿತ್ತು. ಅದಕ್ಕೆಂದೇ ಶಿವಮೊಗ್ಗದಲ್ಲಿ ಅರಣ್ಯ ಇಲಾಖೆಯಲ್ಲಿರುವ ಇರುವ “ಆನೆ ಡಾಕ್ಟರು” ಹುಲಿ ಸಿಂಹ” ಡಾಕ್ಟರುಗಳಾದ ವನ್ಯಜೀವಿ ಪಶುವೈದ್ಯರು ಬಂದು ಏನೇನು ಬೇಕೋ ಅದೆಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದರು.

ಅದರೆ ಆಗ ವನ್ಯಜೀವಿ ತಜ್ಞ ಪಶುವೈದ್ಯರು ದೂರದೂರಿನಲ್ಲಿ ಪುಂಡ ಕಾಡಾನೆಗಳು ಊರು ನುಗ್ಗಿ ದಾಂಧಲೆ ಎಬ್ಬಿಸಿದ್ದರಿಂದ ಅವುಗಳ ತರಲೆ ನಿಲ್ಲಿಸಿ ಖೆಡ್ಡಾಕ್ಕೆ ಕೆಡವಲು ನಾಡಾನೆಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಹತ್ತಿರ ಯಾವುದೇ ಹಳ್ಳಿಯಲ್ಲಿ ಕಳೆದು ೧೫ ದಿನಗಳಿಂದ ಬೀಡು ಬಿಟ್ಟಿದ್ದು ಅವರು ಬಂದು ಈ ಕಾಡು ಪ್ರಾಣಿಯ ಚಿಕಿತ್ಸೆ ಮಾಡುವವರೆಗೆ ದಿನನಿತ್ಯ ಕಾಟಕೊಡುವ ದಿನಪತ್ರಿಕೆಗಳಿಂದ ಬಚಾವಾಗಲು ಡಿಎಪ್ಪೋ ನನಗೆ ಫೋನಾಯಿಸಿದ್ದಾರೆಂದೂ, ಸಾಗರ ಪಶುವೈದ್ಯ ಆಸ್ಪತ್ರೆಯ ಪಶುವೈದ್ಯರೆಲ್ಲ ತುಮರಿ ಏರಿಯಾವು ನನ್ನ ವ್ಯಾಪ್ತಿಯಲ್ಲಿ ಬರುವುದರಿಂದ ನನಗೆ ತಿಳಿಸಲು ಸೂಚಿಸಿದ್ದಾರೆಂದೂ ತಿಳಿಯಿತು.

ಸರಿ ನಮ್ಮಾಸ್ಪತ್ರೆಯಿಂದ ಯಾವ ರೂಟಿನಲ್ಲೇ ಹೋದರು 60-70 ಕಿಲೋಮೀಟರು ಇರುವ ತುಮರಿಗೆ ಹೋಗಲು ಎಲ್ಲಾ ಚಿಕಿತ್ಸಾ ಪರಿಕರಗಳನ್ನು ಸಿದ್ಧ ಮಾಡಿಕೊಳ್ಳಲು ನನ್ನ ಶಿಷ್ಯನಿಗೆ ತಿಳಿಸಿದೆ. ಕಾಡು ಪ್ರಾಣಿಗಳಿಗೆ ಅರಿವಳಿಕೆ ನೀಡುವ ಡಾರ್ಟ್ ಗನ್ನು ಇಲ್ಲವೆಂದೂ, ಕಾಡೆಮ್ಮೆ (ಕಾಡು ಕೋಣ?), ಮೈಮೇಲೆ ಬಂದರೆ ಕಷ್ಟವಿದೆಯೆಂದೂ ಯಾವುದಕ್ಕೂ ಮನೆಗೆ ಹೋಗಿ ತಿಳಿಸಿ ಬರುವೆನೆಂದೂ ನನ್ನ ಶಿಷ್ಯ ಮನೆಗೆ ಹೊರಟ.

ತುಮರಿ, ಬ್ಯಾಕೋಡು, ಕಾರ್ಗಲ್ಲು, ಶಿರವಂತೆ, ಅರಳಗೋಡು, ಕೊಂಜವಳ್ಳಿ, ಸೈದೂರು ಇತ್ಯಾದಿ ಈಗ ಆಸ್ಪತ್ರೆಯಾಗಿರುವ ಸುಮಾರು 90ಕಿಲೋಮೀಟರ್ ವ್ಯಾಪ್ತಿಯ ವಿಸ್ತಾರ ಪ್ರದೇಶಗಳಿಗೆ ಏಕೈಕ ತಜ್ಞ ಪಶುವೈದ್ಯನಾದ ನಾನು ಈ ಭಾಗದಲ್ಲಿ ಯಾವುದೇ ನಾಡು ಅಥವಾ ಕಾಡು ಪ್ರಾಣಿಗಳಿಗೆ ತೊಂದರೆಯಾದರೂ ಮರಣೋತ್ತರ ಪರೀಕ್ಷೆ ಅಥವಾ ಚಿಕಿತ್ಸೆ ನೀಡುವ ಮಹತ್ತರ ಜವಾಬ್ದಾರಿ ಹೊತ್ತು ಕೊಂಡಿದ್ದೆ.

ಎಂದಿನಂತೆ ನನ್ನ ಸುಜ಼ುಕಿ ಸವಾರಿ ನನ್ನ ಶಿಷ್ಯನ ಜೊತೆ ತುಮರಿ ಕಡೆ ಹೊರಟಿತು. ಸಾಗರ ಸೇರಿ ಸಾಗರದಿಂದ ಹೊಳೆಬಾಗಿಲಿನ ಬಾರ್ಜು ದಾಟಿ ಇನ್ನೂ 25 ಕಿಮಿ ಅಂಕು ಡೊಂಕಾದ ರಸ್ತೆಗಳಲ್ಲಿ ಸಾಗಿ ಕಾಡುಕೋಣದ ವಿಷಯ ಕೇಳುತ್ತಾ ಸಾಗಿದೆವು. ಗಮನದ ಹಳ್ಳಿ ತಲುಪಿ ಅಲ್ಲಿ ಹೆಗ್ಡೇರ ತೋಟದಲ್ಲಿ ಗಮಯದ ಜಾಡು ಹಿಡಿದು ಸಾಗಿದೆವು. ಬೈಕಿನಲ್ಲಿ ಸಾಗಿ ಸಾಗಿ ಬೇಸರ ಎಷ್ಟೊತ್ತಿಗಪ್ಪಾ ಈ ಊರು ಬರುತ್ತೆ ಎನ್ನುವಷ್ಟರಲ್ಲಿ ಗಮಯದ ಉಗಮ ಸ್ಥಾನ ಬಂತು.

ಗಮಯದ ಸುತ್ತ ಜನವೋ ಜನ. ಕೆಲವು ಅರಣ್ಯ ಇಲಾಖೆ ಸಿಬ್ಬಂದಿ ಜಮೆಯಾಗಿ ಅವರ ಅಮೂಲ್ಯ ವಸ್ತುವಿನ ರಕ್ಷಣೆ ಮಾಡುತ್ತಿದ್ದರು. ಒಂದೆರಡು ಪೋಲೀಸ್ ಸಿಬ್ಬಂದಿಯೂ ಸಹ ಜನರ ಬೀಡು ಕಡಿಮೆ ಮಾಡಲು ಹರ ಸಾಹಸ ಪಡುತ್ತಿದ್ದರು. ಹೋಯ್.. ಹೋಯ್… ಡಾಕ್ಟ್ರು ಬಂದ್ರು .. ದಾರಿ ಬಿಡಿ” ಎನ್ನುವ ಆಜ್ಞೆ ಪೋಲೀಸರಿಂದ ಬಂದು ಎಲ್ಲಾ ಜನರಿಂದ ನಾನೇ ಫ಼ೋಕಸ್ಸಾದೆ. ಕಾಡು ಕೋಣವನ್ನು ಸುಮಾರು ೧೫ ಅಡಿ ದೂರದಿಂದ ನೋಡಿದೆ. ಬಿಳಿಯ ಪಟ್ಟಿಯ ಕುತ್ತಿಗೆ, ಕಟ್ಟು ಮಸ್ತಾದ ದೇಹ, ರಾಜಗಾಂಭೀರ್ಯದಲ್ಲಿ ಇರಬೇಕಾದ ಕಾಡುಕೋಣ ಲಾಚಾರ್ ಎದ್ದು ಬಡ್ಕಾಟೆ ಹೆಣದಂತೆ ಹಿಂಡಿ ನೀಡದೇ ಇರುವ ಏಳಲು ಸಾಧ್ಯವಾಗದ ಮುದಿ ಎಮ್ಮೆಯಾಗಿ ಹೋಗಿತ್ತು. ಆದರೂ ಅದರ ಸ್ಥಿತಿ ಗಮನಿಸಲು ಸ್ವಲ್ಪ ಹತ್ತಿರ ಹೋದರೆ ಬುಸ್ ಎಂದು ಶಬ್ಧ ಮಾಡುತ್ತಾ ಏರಿ ಬಂತು.

ಸರಿಯಾಗಿ ಗಮನಿಸಿದಾಗ ಮುಂದಿನ ಬಲಗಾಲಿನ ಮೇಲ್ಬಾಗ ಉಬ್ಬಿದಂತೆ ಕಂಡು ಬಂತು. ಇದರ ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಹೋಗುವುದು ಗ್ಯಾರಂಟಿ ಅನ್ನಿಸಿತು. ಅರಣ್ಯ ಇಲಾಖೆಯವರಿಗೆ “ ಈ ಕೋಣನ್ನ ಹೇಗಾದ್ರೂ ಹಿಡಿದು ಕೊಟ್ರೆ, ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ ಏನಾದರೂ ಮಾಡಬಹುದು. ನಮ್ಮ ಹತ್ತಿರ ಅರಿವಳಿಕೆಯನ್ನು ದೂರದಿಂದಲೇ ನೀಡುವ “ಡಾರ್ಟ್ ಗನ್” ಇರದೇ ಇರುವುದರಿಂದ ಯಾವುದೇ ಕ್ಷಣದಲ್ಲಿ ಕಾಡು ಕೋಣ ನುಗ್ಗಿದರೆನಾಮಾವಶೇಷವಾಗುವ ಸಾಧ್ಯತೆ ಇತ್ತು. ಅದು ಕೃಷವಾಗಿರುವುದನ್ನು ಗಮನಿಸಿದರೆ ಅದಕ್ಕೆ ಗಂಭೀರವಾದ ಕಾಯಿಲೆ ಇರುವುದು ಗ್ಯಾರಂಟಿಯಾಗಿತ್ತು. ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಯಮಪುರಿ ಸೇರಿ ಖಾಯಂ ಆಗಿ ಯಮನ ವಾಹನ ಆಗುವ ಸಾಧ್ಯತೆ ಇತ್ತು.

ನನ್ನ ಶಿಷ್ಯ ಖಾಯಂ ಎಮ್ಮೆಗಳನ್ನು ಕೆಡಗಿ ಅಭ್ಯಾಸ ಇದ್ದಾತ. ಆತ “ ಸಾರ್.. ಒಂದು ಕೈ ನೋಡಿಯೇ ಬಿಡ್ಲಾ ಸಾರ್.. ಕಾಡುಕೋಣ ಹ್ಯಾಂಗಿದ್ರೂ ಬಡಕಲಾಗಿದೆ. ನಮ್ಮ ಎಮ್ಮೆಗಳಷ್ಟೇ ತಾಕತ್ತು ಇರ್ಬಹುದು, ಹಗ್ಗ ಹಾಕಿ ಕೆಡವಿ ಬಿಡ್ತೀನಿ “ ಎಂದು ಹುಂಬ ಧೈರ್ಯ ತೋರಿದ. ನಾನು ಮಾತ್ರ ಈ ರಿಸ್ಕ್ ತೆಗೆದುಕೊಳ್ಳಲು ಸುತರಾಂ ಸಿದ್ದವಿರಲಿಲ್ಲ. ಎಲ್ಲಾದರೂ ನಮ್ಮ ಅಂದಾಜು ತಪ್ಪಿ ಈ ಕಾಡುಕೋಣ ನುಗ್ಗಿ ಯಾರನ್ನಾದರೂ ಕೆಡಗಿ ಕೊಂದರೆ ಯಾರು ಜವಾಬ್ದಾರರರು? ಎಂದು “ ಈ ಕಾಡು ಪ್ರಾಣಿ ಸಹವಾಸ ಸಾಕಪ್ಪಾ.. ಅದರ ಡಾಕ್ಟರುಗಳು ಬಂದು ಏನಾದರೂ ಮಾಡ್ಲಿ. ನಮ್ಮಿಂದ ದನ ಆರಾಮವಾದ್ರೆ ಸಾಕು” ಎಂದು ರಾಗ ಎಳೆದೆ. ಆದರೂ ವೃತ್ತಿಯ ತುಡಿತ ಇದೆಯಲ್ಲ.. ಏನಾದರೂ ಮಾಡಲೇ ಬೇಕು. ಸುತ್ತ ಮುತ್ತ ಸೇರಿದ ಜನ ಎಲ್ಲಾ ತರಹೇವಾರಿ ಕಾಮೆಂಟು ಪಾಸು ಮಾಡಲಿಕ್ಕೆ ಪ್ರಾರಂಭಿಸಿದರು.

ಅವರೊಲ್ಲಬ್ಬ “ಇವರು ದನಕ್ಕೆ ಮಾತ್ರ ಡಾಕ್ಟರು. ಎಮ್ಮೆ ಮುಕಳಿ ಒಳಗೆ ಕೈ ಹಾಕಿ ಇನ್ಸೆಮಿನೇಷನ್ ಮಾಡೋದು ಮಾತ್ರ ಇವರಿಗೆ ಕಲ್ಸಿರ್ತಾರೆ. ಈ ಕಾಡುಕೋಣದ ಟ್ರೀಟ್ಮೆಂಟಿಗೆಲ್ಲಾ ಮೈಸೂರಿನಿಂದ ಎಕ್ಸ್ಪರ್ಟ್ಸ್ ಬರ್ಬೇಕು. ಸುಮ್ನೇ ಟೈಮ್ ಪಾಸಿಗೆ ಬಂದಿದ್ದಾರೆ. ಅದ್ರ ಜೊತೆ ಈ ಫ಼ಾರೆಸ್ಟ್ ಖಾತೆ ಜನಾ ಬೇರೆ ದಂಡ” ಎಂದು ನನ್ನ ವೃತ್ತಿಯ ಘನತೆಯನ್ನು ಮೂರುಕಾಸಿಗಿಳಿಸಿ ನಿವಾಳಿಸಿ ಬಿಸಾಡಿದ ಹಾಗೂ ಫ಼ಾರೆಸ್ಟು ಇಲಾಖೆಯವರು ಕಳ್ಳ ನಾಟಾ ಮಾಡುತ್ತಿದ್ದ ಕೆಲ ಹಳ್ಳಿಯ ಜನರನ್ನು ಕುಂಡೆಯ ಮೇಲೆ ಹಾಕಿ ಕಟಕಟೆ ಒಳಗೆ ಹಾಕಿದ ಹಳೆ ಸೇಡು ತೀರಿಸಿಕೊಂಡ. ಹಳ್ಳಿಯಲ್ಲಿ ರಾತ್ರಿ ,10 ಘಂಟೆಗೆ ಕರು ಅಡ್ಡ ಸಿಕ್ಕಿಹಾಕಿಕೊಂಡಾಗ ಎಣ್ಣೆಯ ಮತ್ತನ್ನು ಏರಿಸಿಕೊಂಡವರಿಂದ ಈ ತರಹದ ಮಾತು ಕೇಳಿ ಅಭ್ಯಾಸವಾಗಿ ಹೋದ ನಾನು ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಆದರೆ ನನ್ನ ಶಿಷ್ಯನಿಗೆ ಮಾತ್ರ ನಖಶಿಖಾಂತ ಕೋಪ ಬಂದಿತ್ತು.

ಆತ “ಸಾರ್. ಏನೂ ತೊಂದರೆ ಇಲ್ಲದಂತೆ ಅದನ್ನು ಕೆಡಗಿ ಕೊಡ್ತೀನಿ ಸಾರ್. ಇಂಜೆಕ್ಷನ್ ಹಾಕಿ ಅನೇಸ್ಠೇಸಿಯಾ ಕೊಟ್ಟು ಕೆಲಸ ಮಾಡಿ.. ಫ಼ಾರೆಸ್ಟ್ ಡಿಪಾರ್ಟ್ಮೇಂಟಿನವರೂ ಸಹಾಯ ಮಾಡ್ತಾರೆ” ಅಂದ. ಅಷ್ಟು ಹೊತ್ತು ನಮ್ಮ ಪರಿಪಾಟಲು ನೋಡಿ ಮಜಾ ತಗಳ್ತಿದ್ದ ಅರಣ್ಯ ಇಲಾಖೆಯ ಗಾರ್ಡು ಫ಼ಾರೆಸ್ಟರುಗಳೂ ಜನರ ಮಾತಿನಿಂದ ರೇಗಿ ಏನಾದರೂ ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಾಗಿತ್ತು, ಅವರು ನಾಟಾ ಸಾಗಿಸಲು ಕಳ್ಳ ಸಾಗಣೆಗೆ ಉಪಯೋಗಿಸುತ್ತಿದ್ದ ಸೀಜ಼್ ಮಾಡಿದ ದಪ್ಪನೇ ಹಗ್ಗ ತಂದರು.

ಅದನ್ನು ಎಂಟತ್ತು ಅಡಿಕೆ ಮರದ ಸುತ್ತ ಕಟ್ಟಿ ಕಾಡು ಕೋಣ ಹಗ್ಗದ ಕೋಟೆ ಒಳಗೆ ಭದ್ರವಾಗುವಂತೆ ದಿಗ್ಭಂಧನ ಹಾಕಿದರು. ಕಾಡುಕೋಣ ಇರುವ ಜಾಗದ ಸುತ್ತ ಗೂಟದ ಬೇಲಿ ರೆಡಿಯಾಗಿ ಅಕ್ಷರಷ: ಕೊರೋನಾ ಪೀಡಿತರನ್ನು ಕ್ವಾರಂಟೈನಿನೊಳಗೆ ಹಾಕಿದ ಹಾಗೇ ಲಾಕ್ ಮಾಡಿದರು. ಆದರೆ ಕೋಣಕ್ಕೆ ಅನೇಶ್ಥೆಸಿಯಾ ಇಂಜೆಕ್ಷನ್ ಚುಚ್ಚಬೇಕಲ್ಲ. “ಯಾರಾದ್ರೂ ಬಂದು ಇದನ್ನು ಮಾಂಸದಲ್ಲಿ ತೂರಿಸ್ರೋ” ಎಂದು ಸಿರಿಂಜಿನಲ್ಲಿ ತಕ್ಕ ಪ್ರಮಾಣದ ಅನೇಸ್ಥೆಸಿಯಾ ಚುಚ್ಚುಮದ್ದು ಲೋಡ್ ಮಾಡಿ ನೀಡಲು ಹೋದೆ. ಯಾರೂ ಮುಂದೆ ಬರಲಿಲ್ಲ.

ಒಂದು ಉಪಾಯ ಹೊಳೆಯಿತು. ನಾವು ನಿರ್ಮಿಸಿದ ಕೋಟೆಯೊಳಗೆ ಒಂದಿಷ್ಟು ಮುರುಗಲು ಮತ್ತು ಕೋಕೋ ಗಿಡಗಳಿದ್ದವು. ಅವುಗಳ ಮೇಲೆ ಹತ್ತಿ ಕುಳಿತರೆ ಮತ್ತು ಕಾಡುಕೋಣವನ್ನು ಅಲ್ಲಿಗೆ ನಿಧಾನವಾಗಿ ಚಲನೆಯಾಗುವಂತೆ ನೋಡಿಕೊಂಡರೆ ಅದಕ್ಕೆ ಕಚಕ್ ಎಂದು ಇಂಜೆಕ್ಷನ್ ಚುಚ್ಚಿಬಿಡುವ ಎಂದುಕೊಂಡೆ. ಆದರೆ ಇಲ್ಲಿ ತುಂಬಾ ರಿಸ್ಕ್ ಇತ್ತು. ಆದರೆ ಮೊದಲೇ ಗಾಯಾಳು ಕೋಣ, ಖಂಡಿತಾ ರೋಷ ಭರಿತವಾಗಿರುತ್ತದೆ. ಏನಾದರೂ ಹೆಚ್ಚುಕಮ್ಮಿ ಆಗಿ ಆಯ ತಪ್ಪಿದರೆ ಅದರ ಮೇಲೆಯೇ ಬೀಳುವ ಸಾಧ್ಯತೆ ಇತ್ತು. ಬಿದ್ದರೆ ತುಳಿದು ಖಂಡಿತಾ ತುಳಿದು ಯಮಪುರಿಗೆ ಕಳಿಸುತ್ತಿತ್ತು.

ಯಾರಿಗಾದರೂ ಮರ ಹತ್ತಿ ಅದು ಕೆಳಗೆ ಬಂದೊಡೆ ಇಂಜೆಕ್ಷನ್ ಚುಚ್ಚಿ ಎಮ್ದರೆ ಎಲ್ಲರೂ ಹೆದರು ಪುಕ್ಕಲರೆ. ಮತ್ತೆ ಕೆಲವರು ಹೊಟ್ಟೆ ಹೊತ್ತ ದಡೂತಿಗಳು. ಅಲ್ಲಿ ಇರುವವರಲ್ಲಿ ನಾನೇ ತೆಳ್ಳಗಿರುವವ. ಏನಾದರಾಗಲಿ ಎಂದು ಅನಸ್ಥೆಸಿಯಾವನ್ನು ತುಂಬಿಸಿದ ಸಿರಿಂಜ್ ಕೈಲಿ ಹಿಡಿದು ಅದು ನೇರವಾಗಿ ಕೆಳಗೆ ಬರಬಹುದಾದ ಕೋಕೋ ಗಿಡದ ಮೇಲೆ ಏರಿದೆ. ಕಾಡುಕೋಣವನ್ನು ಮರದ ಕೆಳಗೆ ಬಂದು ನಿಲ್ಲುವಂತೆ ಬೆದರಿಸಲು ಸೂಚಿಸಿದೆ.

ಹಲವು ರೌಂಡ್ ಕಾರ್ಯಾಚರಣೆಯ ನಂತರ ಯಾವುದೋ ಗಳಿಗೆಯಲ್ಲಿ ಕಾಡು ಕೋಣ ನಾನು ಮೇಲೆ ಇದ್ದ ಕೊಂಬೆಯ ಕೆಳಗೆ ಬಂದು ನಿಂತಿತು. ಇದೇ ಅವಕಾಶವೆಂದು ಅದರ ಹಿಂಬಾಗದ ಪ್ರಷ್ಠದ ಮೇಲೆ ಸೂಜಿಯ ಸಮೇತ ಸಿರಿಂಜ್ ಚುಚ್ಚಿ ಸರಕ್ಕನೇ ಔಷಧಿ ಸೇರಿಸಿದೆ. ಆಯ ತಪ್ಪಿ ಕೆಳಗೆ ಬಿದ್ದ ಹೊಡೆತಕ್ಕೆ ಕಾಡುಕೋಣದ ಎದುರು ಅಂಗಾತ ಬಿದ್ದೆ. ಇನ್ನೇನು ಕಾಡುಕೋಣ ನನ್ನನ್ನು ತಿವಿಯಬೇಕು.. ನೋಡ್ತೀನಿ .. ಏನೂ ಶಬ್ಧ ಇಲ್ಲ.

ನಾನು ಕೊಟ್ಟ ಅರಿವಳಿಕೆಯ ಪ್ರಭಾವದಿಂದ ಕಾಡುಕೋಣ ಧರಾಶಾಯಿಯಾಗಿತ್ತು.
ಕೂಡಲೇ ನನ್ನ ಶಿಷ್ಯ ಮತ್ತು ಅರಣ್ಯ ಇಲಾಖೆಯವರು ಕಾಡುಕೋಣವನ್ನು ನಾಡುಕೋಣ ಕಟ್ಟಿದಂತೆ ಹಗ್ಗದಿಂದ ಏಳದಂತೆ ಕ್ಷಣಮಾತ್ರದಲ್ಲಿ ಬಂಧಿಸಿದರು. ಕಾಡುಕೋಣದ ಮುಂಗಾಲಿನ ಮೇಲ್ಬಾಗದಲ್ಲಿ ಕೀವಿನಿಂದ ಕೂಡಿದ ಗಡ್ಡೆಯಿತ್ತು. ಸಾವಧಾನವಾಗಿ ಅದನ್ನು ಓಪನ್ ಮಾಡಿದಾಗ ಟಕ್ ಎಂದು ಅದರೊಳಗಿದ್ದ ಬುಲೆಟ್ ಹೊರಬಂತು. ಯಾರೋ ದುರುಳರು ಮಾಂಸದಾಸೆಗೆ ಕಾಡುಕೋಣಕ್ಕೆ ಗುಂಡು ಹೊಡೆದಾಗ ಅದು ಮಾಂಸದಲ್ಲಿ ಕಚ್ಚಿಕೊಂಡು ಅಲ್ಲಿ ಕೀವುಂಟುಮಾಡಿದೆ ಎಂದು ತಿಳಿಯಿತು.

ಕೀವು ಬಸಿದು ಹೋಗುವ ಹಾಗೇ ಮಾಡಿ ಅದರೊಳಗೆ ಟಿಂಚರ್ ಆಯೋಡಿನ್ ಯುಕ್ತ ಭಟ್ಟೆಯನ್ನಿರಿಸಿ ಸುತ್ತಲೂ ಮುಲಾಮು ಹಚ್ಚಿದೆ. ಅವಶ್ಯಕ ನಂಜುನಿವಾರಕಗಳು, ನೋವು ನಿವಾರಕಗಳು ಹಾಗೂ ಜೀವನಿರೋಧಕದ ಚುಚ್ಚುಮದ್ದು ನೀಡಿದೆ. ಕಾಡುಕೋಣ ಬಹಳ ಬಡಕಲುಗೊಂಡಿತ್ತು. ಬಹುಶ: ಕೀವಿನ ನೋವಿನ ಬಾಧೆಯಿಂದ ಇರಬಹುದೇನೋ? ಕಾಡು ಕೋಣ ನಾಡಿಗೆ ಆಶ್ರಯಕ್ಕೆ ಬಂದಿದೆ.ತೋಟದಲ್ಲಿ ಸುಲಭವಾಗಿ ಸಿಗುವ ಹಲಸಿನ ಹಣ್ಣು ಇತ್ಯಾದಿ ತಿಂದು ಸೆಟ್ಲ್ ಆಗಿದೆ ಎಂದು ಗೊತ್ತಾಯ್ತು. ಎಲ್ಲ ಕೆಲಸ ಮುಗಿಸಿ, ಅದರ ತಿಲಕಾಷ್ಠ ಮಹಿಷ ಬಂಧನ ಬಿಡಿಸಿ ದೂರ ಬಂದೆವು. ಕೋಟೆಯಂತೆ ಮಾಡಿದ ಹಗ್ಗದ ಬಿಗಿತವನ್ನೂ ಸಡಿಲ ಗೊಳಿಸಿದೆವು. ಸುಮಾರು ಮುಕ್ಕಾಲು ಘಂಟೆಗೆ ಕಾಡುಕೋಣಕ್ಕೆ ಪ್ರಜ್ಞೆ ಬಂತು. ಓಲಾಡುತ್ತಾ ಏಳಲು ಪ್ರಯತ್ನಿಸಿತು. ಸ್ವಲ್ಪ ಹೊತ್ತಿಗೆ ಎದ್ದು ನಿಂಟು ಮೈಕೊಡವಿಕೊಂಡಿತು. ದುಡುಕ್ಕನೆ ಪಕ್ಕಳದ ಹಳ್ಳದ ಮೇಲೆ ಏರಿ ನಿಂತಿತು. ನಮ್ಮೆಡೆ ಒಂತರಾ ಕೃತಜ್ಞತೆಯ ನೋಟ ಬೀರಿ ಕಾಡಿನಲ್ಲಿ ಜಿಗಿದು ಮಾಯವಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹಿರಿಯ ನಾಗರಿಕರಿಗಿರುವ ಸರ್ಕಾರಿ ಸೌಲಭ್ಯಗಳೇನು..? ; ಮಾಹಿತಿಗೆ ಸಂಪರ್ಕಿಸಿ

Published

on

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ಹಾಗೂ ಇತರೆ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಅರಿವು ಮೂಡಿಸುವ ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ತಾಲ್ಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಹಿರಿಯ ನಾಗರಿಕರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬಹುದು.

ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರ ವಿವರ:ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶೈಲಜಾ ಕೆ.ಎಂ. ಮೊ.ಸಂ: 9482158005, ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಕೆ ಸುಬ್ರಮಣ್ಯಂ ಮೊ.ಸಂ: 9945738141, ಜಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಎಂ ಕೆ ಶಿವನಗೌಡ ಮೊ.ಸಂ: 9902105734 ಹರಿಹರ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಶಶಿಕಲಾ ಟಿ. ಮೊ.ಸಂ: 9945458058, ದಾವಣಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಚನ್ನಪ್ಪ. ಬಿ ಮೊ.ಸಂ: 9590829024 ಸಂಪರ್ಕಿಸಬೇಕೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ ಜಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ...

ದಿನದ ಸುದ್ದಿ4 hours ago

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ....

ದಿನದ ಸುದ್ದಿ6 hours ago

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು....

ದಿನದ ಸುದ್ದಿ18 hours ago

ವಿದ್ಯಾರ್ಥಿನಿಲಯಗಳಿಗೆ ಬಾಡಿಗೆ ಕಟ್ಟಡಗಳು ಬೇಕಾಗಿದೆ ; ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ:ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಮಂಜೂರಾಗಿರುವ 8 ಮೆಟ್ರಿಕ್ ನಂತರ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ನಗರದಲ್ಲಿ ವಿದ್ಯಾರ್ಥಿನಿಲಯಗಳನ್ನು ನಡೆಸಲು ಕನಿಷ್ಠ 900 ಚದರ ಮೀಟರ್ ವಿಸ್ತಿರ್ಣವುಳ್ಳ ಸುಸಜ್ಜಿತವಾದ...

ದಿನದ ಸುದ್ದಿ18 hours ago

ನೀಟ್ ಅಕ್ರಮ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕಳಂಕ : ಸಾಬೀರ್ ಜಯಸಿಂಹ

ಸುದ್ದಿದಿನ,ದಾವಣಗೆರೆ:ದೇಶದ ಅತ್ಯಂತ ಕಠಿಣಾತಿ ಕಠಿಣ ಪರೀಕ್ಷೆ ನೀಟ್​​​ನಲ್ಲೂ ಗೋಲ್​​ಮಾಲ್ ನಡೆದಿದೆ. ಬಳಿಕ ನೆಟ್​​​ಪರೀಕ್ಷೆಗೂ ಅಕ್ರಮದ ವಾಸನೆ ಬಡಿದಿದ್ದರಿಂದ ಪರೀಕ್ಷೆ ರದ್ದಾಗಿದೆ. ಪರೀಕ್ಷೆಗಳ ಅಕ್ರಮದ ವಿರುದ್ಧ ದೇಶಾದ್ಯಂತ ಆಕ್ರೋಶ...

ದಿನದ ಸುದ್ದಿ19 hours ago

ಹಿರಿಯ ನಾಗರಿಕರಿಗಿರುವ ಸರ್ಕಾರಿ ಸೌಲಭ್ಯಗಳೇನು..? ; ಮಾಹಿತಿಗೆ ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ:ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಇಲಾಖೆಯ ವತಿಯಿಂದ ಹಾಗೂ ಇತರೆ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ದೊರೆಯುತ್ತಿರುವ ಸೌಲಭ್ಯಗಳ ಅರಿವು ಮೂಡಿಸುವ ಮತ್ತು ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುವ...

ದಿನದ ಸುದ್ದಿ1 day ago

ಇನ್ನು ಜನನ-ಮರಣ ಪ್ರಮಾಣ ಪತ್ರ ಕೊಡುವ ಅಧಿಕಾರ ಗ್ರಾಮ ಪಂಚಾಯತಿಗೆ

ಸುದ್ದಿದಿನಡೆಸ್ಕ್:ರಾಜ್ಯದಲ್ಲಿ ಜನನ ಅಥವಾ ಮರಣ ನೋಂದಣಿ ಮಾಡಿ 30 ದಿನಗಳ ಒಳಗೆ ಪ್ರಮಾಣಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಮುಖ್ಯ ನೋಂದಣಾಧಿಕಾರಿ ಸುತ್ತೊಲೆ ಹೊರಡಿಸಿದ್ದಾರೆ. ಇದು...

ದಿನದ ಸುದ್ದಿ1 day ago

ಅಂಗನವಾಡಿ ; ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭ : ಸಿಎಂ ಸೂಚನೆ

ಸುದ್ದಿದಿನಡೆಸ್ಕ್:ರಾಜ್ಯದ ಅಂಗನವಾಡಿಗಳಲ್ಲಿ, ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವ ಕುರಿತು ಅಧ್ಯಯನಕ್ಕೆ, ತ್ವರಿತವಾಗಿ ತಜ್ಞರ ಸಮಿತಿ ರಚಿಸಿ, ಎರಡು ತಿಂಗಳೊಳಗೆ ವರದಿ ಪಡೆಯುವಂತೆ, ಶಾಲಾ ಶಿಕ್ಷಣ ಖಾತೆ ಸಚಿವರಿಗೆ,...

ದಿನದ ಸುದ್ದಿ1 day ago

ಆರೋಗ್ಯ ಇಲಾಖೆ ನೇಮಕಾತಿ ; ಸಚಿವ ದಿನೇಶ್ ಗುಂಡೂರಾವ್ ರಿಂದ ಸಿಹಿ ಸುದ್ದಿ

ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಗಳ ಕೊರತೆ ಇದ್ದು, ಹಂತ ಹಂತವಾಗಿ ವೈದ್ಯರ ನೇಮಕ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಡಿಕೇರಿಯಲ್ಲಿ ನಿನ್ನೆ ತಿಳಿಸಿದ್ದಾರೆ....

ದಿನದ ಸುದ್ದಿ1 day ago

ಜಿಎಸ್‌ಟಿ ಭಾರತೀಯರ ಜೀವನ ಸುಧಾರಿಸುವ ಸಾಧನ : ಪ್ರಧಾನಿ ಮೋದಿ

ಸುದ್ದಿದಿನಡೆಸ್ಕ್:ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿಗೆ ಏಳು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಿಎಸ್‌ಟಿ, 140 ಕೋಟಿ ಭಾರತೀಯರ ಜೀವನವನ್ನು ಸುಧಾರಿಸುವ...

Trending