ಲೈಫ್ ಸ್ಟೈಲ್
ಪ್ರಾಣಿಗಳಲ್ಲಿ ಕೊರೋನಾ ವೈರಾಣು ಸತ್ಯ ಮತ್ತು ಮಿಥ್ಯ : ಮಿಸ್ ಮಾಡ್ದೆ ಓದಿ
- ಅನೇಕ ದಿನಗಳಿಂದ ವೈರಸ್ ಕೊರೋನಾ “ವೈರಲ್” ಆಗಿದೆ. ಸಾಮಾಜಿಕ ಜಾಲತಾಣಗಳು, ವ್ರತ್ತ ಪತ್ರಿಕೆಗಳು, ಬಾಯಿ ಸುದ್ದಿ, ಗಾಳಿ ಸುದ್ದಿ, ಫೋನ್ ಸುದ್ದಿ ಎಲ್ಲವೂ ಕರೋನಾಮಯ. ಇನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಬಗ್ಗೆಯಂತೂ ಹೇಳುವುದೇ ಬೇಡ. ಇಡೀ ದಿನ ಕರೋನಾ ಬಿಟ್ಟರೆ ಬೇರೊಂದಿಲ್ಲ. ಎಲ್ಲರಿಗೂ ಸಿಕ್ಕಾಪಟ್ಟೆ ಬಿಡುವು ಇರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದಾರೆ. ಈ ಕರೋನಾ ಬಗ್ಗೆ ಬರೆಯೋದೇನಿದೆ ಎಂದು ಬೇರೆ ಕೆಲಸಗಳಲ್ಲಿ ಮಗ್ನನಾಗಿದ್ದೆ. ಈ ಮಧ್ಯೆ ಪ್ರಾಣಿಗಳಲ್ಲೂ ಕರೋನಾ ಎಂಬ ಸುದ್ಧಿ ಕೇಳಿ ಪ್ರತಿಕ್ರಿಯೆ ನೀಡಲಾರಂಭಿಸಿದೆ. ಆಗ ಅನಿಸಿದ್ದು ಪ್ರಾಣಿಗಳಲ್ಲೂ ಕರೋನಾದ ಬಗ್ಗೆ ಬರೆಯಬೇಕು ಎಂದು. ಕೆಲವು ಆಸಕ್ತಿದಾಯಕ ವಿಷಯಗಳಿವೆ. ಹಂಚಿಕೊಳ್ಳುವೆ. ಎಂದಿನಂತೆ ಓದಿ. ಪ್ರೋತ್ಸಾಹಿಸಿ.
-ಡಾ.ಎನ್.ಬಿ.ಶ್ರೀಧರ
ಇತ್ತೀಚೆಗಷ್ಟೇ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್, ಇದೀಗ ವಿಶ್ವವನ್ನೇ ಗಡಗಡ ನಡುಗಿಸುತ್ತಿದೆ. ಕೊರೊನಾ ವೈರಸ್ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಜನಸಾಮಾನ್ಯರಲ್ಲಿ ತಲ್ಲಣ ಉಂಟುಮಾಡಿದೆ. ಕೊರೊನಾ ವೈರಸ್ನಿಂದಾಗಿ ವಿಶ್ವದಾದ್ಯಂತ ಈ ಕ್ಷಣದವರೆಗೆ ( 27-03-2020, 1.41 ಮಧ್ಯಾಹ್ನ) ಅಧೀಕೃತವಾಗಿ ಬಾಧಿತರ ಸಂಖ್ಯೆ 532,263 ಇದ್ದರೆ ಸಾವಿನ ಸಂಖ್ಯೆ 24,090. ಭಾರತದಲ್ಲಿ ಕೊರೋನಾ ಪೀಡಿತರ ಈ ಸಂಖ್ಯೆ 733ಕ್ಷಣದ ವರೆಗೆ ಇದ್ದರೆ ಮತ್ತು ಸಾವಿನ ಸಂಖ್ಯೆ 13 ಕ್ಕೆ ಏರಿದೆ. ಕರ್ನಾಟಕದಲ್ಲಿ ಭಾದೆಗೊಳಗಾದವರು 74 ಮೃತಪಟ್ಟವರ ಸಂಖ್ಯೆ6. ಇದು ಈ ಕ್ಷಣದ ವರೆಗಿನ ಸುದ್ಧಿ. ಇದು ಕ್ಷಣ ಕ್ಷಣಕ್ಕೂ ಜಾಸ್ತಿಯಾಗುತ್ತಲೇ ಇದೆ.
ಕೊರೊನಾ ಎಂಬುದು ಪ್ರಾಣಿಗಳಲ್ಲಿ ಅನಾರಾಗ್ಯವನ್ನು ಉಂಟುಮಾಡಬಲ್ಲ ವೈರಸ್ಗಳ ಬೃಹತ್ ಗುಂಪಾಗಿದೆ. ಈ ವೈರಸ್ಗಳು ಹೆಚ್ಚಾಗಿ ಉಸಿರಾಟದ ತೊಂದರೆ ಉಂಟುಮಾಡುತ್ತವೆ. ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್ನಿಂದ ಹಿಡಿದು, ಅತ್ಯಂತ ಅಪಾಯಕಾರಿಯಾದ ಮೆರ್ಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಂ), ಸಾರ್ಸ್ (ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಂ), ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಡಿಸೀಸ್ (COVID-19), ಈ ಎಲ್ಲ ವೈರಸ್ಗಳೂ ಒಂದೇ ಗುಂಪಿಗೆ ಸೇರುತ್ತವೆ.
COVID-19 ಎಂದರೆ, ಇದೂ ಕೂಡ ಸೋಂಕನ್ನು ಉಂಟುಮಾಡಬಲ್ಲ ವೈರಸ್. ಇದು ಕೊರೊನಾ ವೈರಸ್ಗಳ ಪೈಕಿ ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿ, ವಿಶ್ವಾದ್ಯಂತ ಹರಡುತ್ತಿರುವ ವೈರಸ್ ಆಗಿದೆ. ಚೀನಾದ ವುಹಾನ್ನಲ್ಲಿ 2019ರ ಡಿಸೆಂಬರ್ನಲ್ಲಿ ಪತ್ತೆಯಾಗುವ ಮೊದಲು ಈ ವೈರಸ್ ಕುರಿತು ವಿಶ್ವಕ್ಕೆ ಪರಿಚಯ ಇರಲಿಲ್ಲ.
ಕೊರೊನಾ ಸೋಂಕಿನ ಲಕ್ಷಗಳು ಹಂತಹಂತವಾಗಿ ಕಾಣಿಸಿಕೊಳ್ಳುತ್ತೆ. ಇದರಲ್ಲಿ ರೋಗಲಕ್ಷಣ ರಹಿತ, ಸೌಮ್ಯ, ತೀವ್ರ ಮತ್ತು ಮಾರಣಾಂತಿಕ ಎಂಬ ಹಂತಗಳಿವೆ. ಸಾಮಾನ್ಯ ರೋಗಲಕ್ಷಣಗಳು ಜ್ವರ, ಕೆಮ್ಮು, ಏದುಸಿರು ಮತ್ತು ಉಸಿರಾಟ ಕಷ್ಟವಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತೀವ್ರವಾದ ಪ್ರಕರಣಗಳಲ್ಲಿ ನ್ಯುಮೋನಿಯಾ, ಮೂತ್ರಪಿಂಡ ವೈಫಲ್ಯ ಮತ್ತು ಬಹು ಅಂಗಾಂಗ ವೈಫಲ್ಯಕ್ಕೂ ಕಾರಣವಾಗಬಹುದು.
ವೈರಸ್ಸಿಗೆ ನೋವೆಲ್ ಕೊರೊನಾ ವೈರಸ್ ಎಂದು ಕರೆಯುವುದೇಕೆ?
ಈ ಹಿಂದೆ, ಪ್ರಾಣಿಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಕಾಣಿಸಿಕೊಳ್ಳದೇ ಇದ್ದು, ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಕೊರೊನಾ ವೈರಸ್ಗೆ ನೋವೆಲ್ ಕೊರೊನಾ ವೈರಸ್ ಎಂದು ಕರೆಯುತ್ತಾರೆ.
ವೈರಸ್ನ ನೈಸರ್ಗಿಕ ಮೂಲ ಯಾವುದು?
ಕೊರೊನಾ ವೈರಸ್ಗಳ ನೈಸರ್ಗಿಕ ಮೂಲಗಳೆಂದರೆ ಪ್ರಾಣಿಗಳು. ಅದರಲ್ಲೂ ಸಸ್ತನಿಗಳು ಈ ವೈರಸ್ಸುಗಳಿಗೆ ಆವಾಸಸ್ಥಾನ ಎನ್ನಬಹುದು. ಬಾವಲಿಗಳು ಈ ವೈರಸ್ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳು. ಪುನುಗು ಬೆಕ್ಕು ಅಥವಾ ಸಿವೆಟ್ ಕ್ಯಾಟ್ ಇದು SARS-CoV ಈ ಕಾಯಿಲೆ ಹಬ್ಬಿಸಿದರೆ, ಒಂಟೆ ಮತ್ತು ಬಾವಲಿಗಳು MERS-CoV ಅಥವಾ COVID 19 ನ್ನು ಹರಡುತ್ತವೆ. ಸಾಕು ಪ್ರಾಣಿಗಳೂ ಸೇರಿದಂತೆ ಹಲವು ಪ್ರಾಣಿಗಳಲ್ಲಿಯೂ ಕೊರೋನಾ ವರ್ಗದ ವೈರಸ್ಗಳು ಇರುತ್ತವೆ.
ಪುನುಗು ಬೆಕ್ಕು, ಒಂಟೆ ಮತ್ತು ಬಾವಲಿ ಇವು ಈ ವೈರಸ್ಸಿನ ಸಂಗ್ರಾಹಕಗಳಾಗಿರುತ್ತವೆ. ಆಕಳುಗಳು, ಹಂದಿ, ನಾಯಿ, ಬೆಕ್ಕು, ಕೋಳಿ ಇತ್ಯಾದಿ ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ ತಂದರೂ ಸಹ ಅವುಗಳಿಂದ ಮನುಷ್ಯರಿಗೆ ಬರುವ ಬಗ್ಗೆ ದಾಖಲೆಗಳಿಲ್ಲ.
ಪ್ರಾಣಿಗಳಲ್ಲಿ ಕರೋನಾ ವೈರಾಣು ರೋಗ
ಸಾಕು ಪ್ರಾಣಿಗಳಿಂದ ಕೊರೊನಾ ವೈರಸ್ ಹರಡಬಹುದು ಎನ್ನುವ ಭಯದಿಂದ ಕೆಲವರು ತಮ್ಮ ಮನೆಯಲ್ಲಿ ಇರುವ ನಾಯಿ, ಬೆಕ್ಕುಗಳನ್ನು ದೂರ ಮಾಡುತ್ತಿದ್ದಾರೆ. ಆದರೆ ಈ ಪ್ರಾಣಿಗಳಿಂದ ಕರೋನಾ ಕಾಯಿಲೆ ಬರುವ ಯಾವುದೇ ದಾಖಲೆ ಇಲ್ಲ. ಬಾಲಿವುಡ್ ನಟಿ ರಾಖಿ ಸಾವಂತ್ ಚೀನಾದ ಪಾಪಿ ಜನರು ಕಾಡು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ ಎಂದು ಹೇಳುವ ಮೂಲಕ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರೂ ಸಹ ಪ್ರಾಣಿಗಳ ಮಾಂಸ ತಿನ್ನುವುದರಿಂದ ಕರೋನಾ ಬರುತ್ತದೆ ಎಂಬುದರ ಬಗ್ಗೆ ಯಾವುದೇ ದಾಖಲೆ ಇಲ್ಲ.
ಕೋಳಿಗಳಿಂದ ಕರೋನಾ ಬರುತ್ತದೆ ಎಂದು ಸಹಸ್ರ ಸಂಖ್ಯೆಯಲ್ಲಿ ಕೋಳಿಗಳನ್ನು ನಾಶ ಮಾಡಿದ್ದು ಇದ್ದಕ್ಕಿದ್ದಂತೆ ಜನ ಕೋಳಿ ತಿನ್ನುವುದನ್ನು ನಿಲ್ಲಿ ಸುಖಾ ಸುಮ್ಮನೇ ಆ ಉಧ್ಯಮ ನೆಲ ಕಚ್ಚುವಂತೆ ಮಾಡಿದ್ದು ಈಗ ಇತಿಹಾಸ. ಕೇವಲ ಊಹಾಪೋಹಗಳನ್ನು ನಂಬಿ ವಿಜ್ಞಾನವನ್ನು ಮೂಲೆಗೊತ್ತಿದ್ದರ ಪರಿಣಾಮವೇ ಇದು.
ಸಾಕು ಪ್ರಾಣಿಗಳು ಕರೋನಾ ವಾಹಕಗಳೇ?
ಅಲ್ಲ. ನಾಯಿ ಮತ್ತು ಬೆಕ್ಕುಗಳಲ್ಲಿ ಈ ಕೊರೊನಾ ವೈರಸ್ ಸಾಮಾನ್ಯ. ಆದರೆ ಈಗ ಬಂದ COVID 19 ಕ್ಕೂ ಪ್ರಾಣಿಗಳಲ್ಲಿ ಬರುವ ಕರೋನಾ ವೈರಸ್ ರೋಗಕ್ಕೂ ಯಾವುದೇ ಸಂಬಂಧವಿಲ್ಲ. ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿದೆ. ಇಲ್ಲಿ ಅನೇಕ ಕಾಡು ಪ್ರಾಣಿಗಳು ಮತ್ತು ಸಮುದ್ರ ಪ್ರಾಣಿಗಳನ್ನು ಜೀವಂತವಾಗಿ ಮಾರಾಟ ಮಾಡಲಾಗುತ್ತಿತ್ತು. ಪುನುಗು ಬೆಕ್ಕು ಮತ್ತು ಬಾವಲಿಗಳನ್ನು ಸೇರಿಸಿಕೊಂಡು ಇಲ್ಲಿನ ಜನ ಹುರಿದು ಮುಕ್ಕಿದ್ದಕ್ಕೆ ಶಿಕ್ಷೆಯಾಗಿ ಇಡಿ ಪ್ರಪಂಚವನ್ನು ಕೊರೋನಾ ಮಾರಿ ಹುರಿದು ಮುಕ್ಕುತ್ತಿದೆ ಎಂಬುದು ದಾರ್ಶನಿಕರ ಕೊಂಕು ನುಡಿ. ಆದರೂ ಇಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ನಿಖರ ಕಾರಣವೇನೆಂದು ಇನ್ನೂ ದೃಢಪಡಿಸಿಲ್ಲ. ಅಲ್ಲಿ ವೈರಸ್ ಪ್ರಥಮವಾಗಿ ಉಗಮವಾಗಿರಬಹುದೇ ಹೊರತು ಯಾವುದೇ ಪ್ರಾಣಿಗಳ ಮಾಂಸ ತಿಂದರೆ ಕರೋನಾ ಕಾಯಿಲೆ ಬರುವುದೆಂದು ದೃಢಪಟ್ಟಿಲ್ಲ.
ಬೆಕ್ಕು,ನಾಯಿ, ಹಂದಿ, ಜಾನುವಾರುಗಳು, ಕುದುರೆ, ಕೋಳಿ,ಇಲಿ ಮತ್ತು ಅಷ್ಟೇಕೆ ಮೀನಿನಲ್ಲಿಯೂ ಸಹ ಕರೋನಾ ವೈರಾಣು ಕಾಯಿಲೆ ಬರುತ್ತದೆ ಎಂಬ ಪ್ರತೀತಿ ಇದೆ. ಅನೇಕ ಪ್ರಾಣಿಗಳಲ್ಲಿ ಕರೋನಾ ವೈರಾಣುಗಳ ವಿವಿಧ ಪ್ರಬೇಧಗಳಿಂದ ಕಾಯಿಲೆ ಬರುತ್ತದೆ. ಸುಮಾರು ೧೬ ಕ್ಕಿಂತ ಜಾಸ್ತಿ ಕಾಯಿಲೆಗಳು ಈ ವೈರಾಣುವಿನಿಂದ ಬಂದರೂ ಸಹ ಪ್ರಾಣಿಗಳಿಗೆ ಬರುವ ಕರೋನಾ ವೈರಾಣು ಕಾಯಿಲೆ ಮನುಷ್ಯನಿಗೆ ಹರಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.
ಈ ಕೆಳಗಿನ ಕೋಷ್ಟಕ ಗಮನಿಸಿದರೆ ಪ್ರಾಣಿಗಳಲ್ಲಿ ಕರೋನಾ ವೈರಾಣುವಿನ ಉಪಪ್ರಬೇಧದದಿಂದ ಬರುವ ಅನೇಕ ಕಾಯಿಲೆಗಳ ವಿವರ ಸಿಗುತ್ತದೆ.
ಉಪ ಕುಟುಂಬ: ಕರೋನಾ ವೈರಿನೇ,ಜೀನಸ್ : ಅಲ್ಫಾ ಕರೋನಾ ವೈರಸ್
- ಫಿಲೈನ್ ಕರೋನಾ ವೈರಸ್ (ಫಿಲೈನ್ ಎಂಟರಿಕ್ ಕರೋನಾ ವೈರಸ್, ಫಿಲೈನ್ ಇನ್ಫೆಕ್ಷಿಯಸ್ ಪೆರಿಟೋನೈಟಿಸ್ ವೈರಸ್) ಬೆಕ್ಕು, ಹುಲಿ, ಸಿಂಹ, ಚಿರತೆ ಬೆಕ್ಕು, ಹುಲಿ ಮತ್ತು ಈ ಪ್ರಬೇಧಕ್ಕೆ ಸೇರಿದ ಪ್ರಾಣಿಗಳಲ್ಲಿ ಅಲ್ಪ ಪ್ರಮಾಣದ ಭೇಧಿ ಮತ್ತು ವಾಂತಿ ಭೇಧಿ ಉಂಟು ಮಾಡುವುದು. ನೇರ ಸಂಪರ್ಕ, ಸೋಂಕಿತ ಮಲದ ಮೂಲಕ, ಬೇಧಿ ಸಂಪರ್ಕ,ರಕ್ತ, ಮೂತ್ರ ಇತ್ಯಾದಿ ಉತ್ತಮ ಗುಣಮಟ್ಟದ ಪ್ರತ್ಯೇಕಿಸುವಿಕೆ, ಹರಡುವಿಕೆಯ ಚಕ್ರದ ನಿಯಂತ್ರಣ.
- ಕೆನೈನ್ ಕರೋನಾ ವೈರಸ್ ನಾಯಿ, ತೋಳ, ನರಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಸೋಂಕಿತ ಮಲದ ಮೂಲಕ ನಿಷ್ಕ್ರಿಯೆಗೊಳಿಸಿದ ಲಸಿಕೆ.
- ಟ್ರಾನ್ಸ್ಮಿಸಿಬಲ್ ಗ್ಯಾಸ್ಟ್ರೋಎಂಟರೈಟಿಸ್ ಹಂದಿ ಸ್ವಲ್ಪ ಪ್ರಮಾಣದ ಭೇಧಿ ಆದರೆ ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಬಾಯಿಯ ಮೂಲಕ ನೀಡುವ ನಿಷ್ಕ್ರಿಯೆಗೊಳಿಸಿದ ಲಸಿಕೆ.
- ಪೋರ್ಸೈನ್ ರೆಸ್ಪಿರೇಟರಿ ಕರೋನಾ ವೈರಸ್ ಹಂದಿ ಮಂದ ಸ್ವರೂಪದ ಕಾಯಿಲೆ ಗಾಳಿಯ ಮೂಲಕ ಲಸಿಕೆ ಇಲ್ಲ.
- ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಕರೋನಾ ವೈರಸ್ ಹಂದಿ ಭೇಧಿ, ನೀರು ಭೇಧಿ ,ವಾಂತಿ,ನಿರ್ಜಲೀಕರಣ ಸೋಂಕಿತ ಮಲದ ಮೂಲಕ ಗರ್ಭಿಣಿ ಹಂದಿಗಳಿಗೆ ನಿಷ್ಕ್ರಿಯಗೊಳಿಸಿದ ಲಸಿಕೆ ಮತ್ತು ನಿರ್ಜೀವ ವೈರಾಣು ಲಸಿವೈರಸ್, ಕುಟುಂಬ: ಕರೋನಾ ವೈರಿನೇ,ಜೀನಸ್ : ಬ್ಯಾಕ್ಟೊ ಕರೋನಾ ವೈರಸ್,ಗುಂಪು ಎ
- ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಹಂದಿ ಭೇಧಿ, ಅಹಾರ ಸೇವಿಸದಿರುವಿಕೆ,ಮೆದುಳಿನ ಉರಿಯೂತ, ನಡುಕ,ಬಡಕಲಾಗುವಿಕೆ ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.ಲಸಿಕೆ ಇಲ್ಲ.ಮೌಸ್ ಹೆಪಟೈಟಿಸ್ ವೈರಸ್.ರಾಟ್ ಕರೋನಾ ವೈರಸ್ ಚಿಕ್ಕಿಲಿ.
- ಇಲಿ ಭೇಧಿ, ಪಿತ್ತಜನಕಾಂಗದ ಉರಿಯೂತ, ಮೆದುಳಿನ ಉರಿಯೂತ, ಮೆದುಳಿನ ಉರಿಯೂತ, ನೇರಸಂಪರ್ಕ, ಮೂಗಿನ ಮೂಲಕ, ಸ್ರಾವಕಗಳು ಉತ್ತಮ ನಿರ್ವಹಣೆ.
ಲಸಿಕೆ ಇಲ್ಲ. - ಬೊವೈನ್ ಕರೋನಾ ವೈರಸ್ ಆಕಳು ಮತ್ತು ಜಾನುವಾರುಗಳು ತೀವ್ರ ರಕ್ತ ಬೇಧಿ, ನಿರ್ಜಲೀಕರಣ,ಹಾಲಿನ ತೀವ್ರ ಇಳಿಮುಖ, ಶ್ವಾಸದ ತೊಂದರೆ ಸಗಣಿ, ವಾಯುದ್ರವ ತಾಯಿಂದ ಬರುವ ರೋಗತಡೆಗಟ್ಟುವ ಶಕ್ತಿ
- ಇಕ್ವೈನ್ ಕರೋನಾ ವೈರಸ್
ಕುದುರೆ, ಕತ್ತೆವಾಂತಿ ಬೇಧಿ, ಶ್ವಾಸದ ತೊಂದರೆ ಮಲ, ವಾಯುದ್ರವ ತಾಯಿಂದ ಮರಿಗಳಿಗೆ ಬರುವ ರೋಗತಡೆಗಟ್ಟುವ ಶಕ್ತಿ.ಗುಂಪು ಬಿ. - ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಮನುಷ್ಯ ತೀವ್ರತರ ಶ್ವಾಸದ ತೊಂದರೆ
(ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ.ಸಿಂಬಳ ಲಸಿಕೆ ಇಲ್ಲ.ಕ್ವಾರಂಟೈನ್ ಮಾತ್ರ.ಗುಂಪು ಸಿ. - ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್
(ಮೆರ್ಸ್)ಇದು ಈಗ ಇಡೀ ಪ್ರಪಂಚಕ್ಕೆ ಹಬ್ಬಿರುವುದು ಮನುಷ್ಯ ತೀವ್ರತರ ಶ್ವಾಸದ ತೊಂದರೆ(ಒಂಟೆ ಮತ್ತು ಬಾವಲಿಗಳು ವೈರಾಣುಗಳ ಸಂಗ್ರಹಕಗಳು) ವಾಯುದ್ರವ,ಸಿಂಬಳ ಲಸಿಕೆ ಇಲ್ಲ,ಚಿಕಿತ್ಸೆ ಇಲ್ಲ,
ಕ್ವಾರಂಟೈನ್ ಮಾತ್ರ.ಉಪ ಕುಟುಂಬ: ಕರೋನಾ ವೈರಿನೇಜೀನಸ್ : ಗಾಮ್ಮಾ ಕರೋನಾ ವೈರಸ್ - ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಹಕ್ಕಿಗಳು ಶ್ವಾಸನಾಳದ ಉರಿಯೂತ, ಮೂತ್ರಜನಕಾಂಗದ ಉರಿಯೂತ ಶ್ವಾಸದ ತೊಂದರೆ ವಾಯುದ್ರವ.ಸಿಂಬಳ ಬಹು ವೈರಲ್ ಲಸಿಕೆ.
- ಟರ್ಕಿ ಕರೋನಾ ವೈರಸ್
- ಬ್ಲೂ ಕೋಂಬ್ ವೈರಸ್ ಟರ್ಕಿಗಳು ಬೇಧಿ, ಕಪ್ಪು ಚರ್ಮ, ಖಿನ್ನತೆ ಮಲ, ವಾಯುದ್ರವ ನಿಷ್ಕ್ರಿಯಗೊಳಿಸಿದ ಲಸಿಕೆ
ಉಪ ಕುಟುಂಬ: ಕರೋನಾ ವೈರಿನೇ
ಜೀನಸ್ : ಡೆಲ್ಟಾ ಕರೋನಾ ವೈರಸ್ - ಪೋರ್ಸೈನ್ ಡೆಲ್ಟಾ ಕರೋನಾ ವೈರಸ್ ಹಾಲು ನೀಡುತ್ತಿರುವ ಹಂದಿಗಳು ವಿಶೇಷ ಲಕ್ಷಣಗಳಿಲ್ಲ
ಕಡಿಮೆ ಸಾವು ಮಲ ಲಸಿಕೆ ಇಲ್ಲ. - ಉಪ ಕುಟುಂಬ: ಟೋರೋ ವೈರಿನೇ
ಜೀನಸ್ : ಟೋರೋ ವೈರಸ್ - ಬ್ರೇಡಾ ವೈರಸ್ ಜಾನುವಾರುಗಳು ಬೇಧಿ, ನಿರ್ಜಲೀಕರಣ ಮಲ ಲಸಿಕೆ ಇಲ್ಲ
ಉಪ ಕುಟುಂಬ: ಟೋರೋ ವೈರಿನೇ
ಜೀನಸ್ : ಟೋರೋ ವೈರಸ್ವೈಟ್ ಬ್ರೀಮ್ ವೈರಸ್. - ಫೆದರ್ಡ್ ಮಿನೋ ವೈರಸ್ ಮೀನು ಚರ್ಮ ಮತ್ತು ಕಣ್ಣುಗಳಲ್ಲಿ ರಕ್ತ ಸ್ರಾವ ಕಲುಷಿತ ನೀರು ಲಸಿಕೆ ಇಲ್ಲ
ಬಾವಲಿ ಮತ್ತು ಕರೋನಾ ವೈರಾಣು
ಬಾವಲಿಗಳು ಎಲ್ಲಾ ರೀತಿಯ ಕರೋನಾ ವೈರಾಣು ಹರಡುವಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸಿವೆ. ಸಿವಿಯರ್ ಅಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಎಂದು ಕರೆಯುವ ಮನುಷ್ಯನ ಸಾವನ್ನು ಅಪೇಕ್ಷಿಸುವ ಕರೋನಾ ವೈರಾಣು ಕಾಯಿಲೆ ಸಹ ಬಾವಲಿಗಳಿಂದಲೇ ಹರಡಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಂದಿಗಳಲ್ಲಿ ಕರೋನಾ ವೈರಾಣು ಕಾಯಿಲೆ ಹರಡಲು ಸಹ ಈ ಬಾವಲಿಗಳೇ ಕಾರಣ. ಆದರೆ ಈ ಬಾವಲಿಗಳಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಕಾರಣ ಬಾವಲಿಗಳನ್ನು “ ಅತಿಥೇಯ ಸಂಗ್ರಾಹಕ” ಎನ್ನಬಹುದು. ಈಗ ಬರುತ್ತಿರುವ COVID-
ಇದಕ್ಕೆ ಒಂಟೆಗಳ ಮೂಲಕ ಮನುಷ್ಯರಿಗೆ ವೈರಸ್ ಹರಡಲು ಮೂಲಕಾರಣ ಬಾವಲಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ಮಧ್ಯಪ್ರಾಚ್ಯ ದೇಶಗಳಲ್ಲಿಯೇ ಈ ಕೊರೊನಾ ಮಹಾಮಾರಿ ಜನನವಾಗಿರುವುದು. ಇದಕ್ಕೇ ಇರಬಹುದು COVID-19 ಇದಕ್ಕೆ “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಮೆರ್ಸ್)” ಎಂದು ಕರೆಯುವುದು. ಬಹುಶ: ಬಾವಲಿಗಳಿಂದ ಒಂಟೆಗಳಿಗೆ ಸಾಗಿದ ಕರೋನಾ ವೈರಸ್ ಮಧ್ಯಪ್ರಾಚ್ಯದ ಜನರಿಗೆ ಹಬ್ಬಿರಬಹುದು ಎಂಬ ಪ್ರತೀತಿ ಇದೆ. ಕರ್ನಾಟಕದಲ್ಲಿಯೂ ಸಹ ಮಧ್ಯಪ್ರಾಚ್ಯ ದೇಶಗಳಿಗೆ ಹೋಗಿ ಬಂದವರಿಂದ ಹರಡಿದ ಕರೋನಾ ಜಾಸ್ತಿ ಇರುವುದಕ್ಕೆ ಇದೇ ಕಾರಣವಿರಬಹುದೇನೋ?
ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್) ಮತ್ತು ಕರೋನಾ ವೈರಾಣು
ಪುನುಗು ಬೆಕ್ಕು (ಹಿಮಾಲಯನ್ ಪಾಮ್ ಸಿವೆಟ್ ಕ್ಯಾಟ್) ಇವು ಬೆಕ್ಕಿನ ಜಾತಿಗೆ ಸೇರಿಲ್ಲ. ಮುಂಗುಸಿ ಜಾತಿಗೆ ಸೇರಿದ ಇವು ಹಲ್ಲಿ, ಹಾವು, ಕಪ್ಪೆ, ಇಲಿ ಇತ್ಯಾದಿ ಹಿಡಿದು ತಿನ್ನುತ್ತವೆ. ಚೈನಾದ ಹುವಾನಿನಲ್ಲಿ ಇವುಗಳನ್ನು ಹಿಡಿದು ಹುರಿದು ಮುಕ್ಕಿದ್ದರಿಂದ ಕರೋನಾ ಕಾಯಿಲೆ ಬಂದಿರಬಹುದೆಂದು ಊಹಿಸಲಾಗಿದೆ. ಇವು ಮಹತ್ತರವಾದ ಕರೋನಾ ವಾಹಕಗಳು. ನಮ್ಮ ದೇಶದ ಈಶಾನ್ಯ ಪ್ರಾಂತ್ಯದಲ್ಲಿ ಇವು ಇದ್ದರೂ ಸಹ ಯಾರು ಇವನ್ನು ತಿನ್ನುವ ಗೊಡವೆಗೆ ಹೋಗುವುದಿಲ್ಲ. ಇವುಗಳಿಂದ ಹೊರಸೂಸುವ “ಪುನುಗು” ಎಂಬ ಸುಗಂಧ ದ್ರವ್ಯಕ್ಕೆ ಆಸೆ ಪಟ್ಟು ಬೇಟೆಯಾಡಿ ಇವು ವಿನಾಶದಂಚು ತಲುಪಿವೆ.
ಈ ಪ್ರಾಣಿಗಳು ಚೈನಾ, ಭಾರತ ಮತ್ತು ಮಲೇಶಿಯಾದಲ್ಲಿದ್ದರೂ ಚೀನಿಯರು ಹಾವು, ಹುಳ ಹುಪ್ಪಟೆ ಮತ್ತು ಈ ತರಹದ ಇಲ್ಲ ಸಲ್ಲದ ಪ್ರಾಣಿಗಳನ್ನು ಹಿಡಿದು ಮುಕ್ಕುವುದರಿಂದ ಕರೋನಾ ಕಾಯಿಲೆ ಬಂದಿದೆ ಎಂದು ಜಗತ್ತಿನ ಜನಕ್ಕೆ ಚೀನಿಯರ ಮೇಲೆ ಕೋಪ. ಗಲೀಜು ಚೀನಿಯರು ಗುವಾಂಗ್ ಎಂಬ ಸ್ಥಳದ ಹೊಟೇಲೊಂದರಲ್ಲಿ ಅತ್ಯಂತ ಕೊಳಕು ರೀತಿಯಲ್ಲಿ ಈ ಸಿವೆಟ್ ಬೆಕ್ಕುಗಳನ್ನು ಕಡಿದು ಗ್ರಾಹಕರಿಗೆ ಹುರಿದು ಉಣಬಡಿಸಿದ್ದಕ್ಕೆ ಸಾರ್ಸ್ ಮಹಾಮಾರಿಯೂ ಸಹ ನುಸುಳಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅದಕ್ಕೆ ಇಲ್ಲ ಸಲ್ಲದ ಪ್ರಾಣಿಗಳನ್ನೆಲ್ಲಾ ಕಡಿದು ತಿನ್ನಬಾರದು ಎನ್ನುವುದು.
ಒಂಟೆಗಳು ಮತ್ತು ಕರೋನಾ ವೈರಾಣು
ಒಂಟಿ ಡುಬ್ಬದ ಡ್ರೊಮೇಡರಿ ಒಂಟೆಗಳು ಕರೋನಾ ವೈರಾಣುಗಳ ವಾಹಕಗಳು ಎಂಬುದು ವಿವಾದಾತೀತವಾಗಿ ಸಬೂತಾಗಿದೆ. ಸಧ್ಯಕ್ಕೆ ವಿಶ್ವಕ್ಕೆ ಹೆಮ್ಮಾರಿಯಂತೆ ಅಂಟಿರುವ COVID-19 ಇದನ್ನು “ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್” (ಮೆರ್ಸ್) ಅಥವಾ “ಮಧ್ಯ ಪ್ರಾಚ್ಯ ಶ್ವಾಸಕೋಶದ ತೊಂದರೆ” ಎಂದೂ ಕರೆಯುತ್ತಾರೆ. ಇದು ಕರೋನಾ ವೈರಿನೇ ಉಪಕುಟುಂಬಕ್ಕೆ ಸೇರಿದ ಮತ್ತು ಜೀನಸ್ ಬ್ಯಾಕ್ಟೊ ಕರೋನಾ ವೈರಸ್ (ಗುಂಪು ಎ ) ಇದರಿಂದ ಬರುತ್ತದೆ. ಮಧ್ಯಪ್ರಾಚ್ಯ ದೇಶಗಳಾದ ಈಜಿಪ್ಟ್, ಓಮನ್, ಕ್ವತಾರ್ ಮತ್ತು ಸೌದಿ ಅರೇಬಿಯಾ ದೇಶಗಳಲ್ಲಿ ಇದು 2012 ನೇ ಸಾಲಿನಲ್ಲಿಯೇ ಕಾಣಿಸಿಕೊಂಡು ಮರಣ ಮ್ರದಂತಗ ಭಾರಿಸಿತ್ತು. ಅಲ್ಲಿ ಒಂಟೆಗಳ ಸಂಖ್ಯೆ ಜಾಸ್ತಿ ಇದ್ದು ಇವುಗಳಿಂದ ಮನುಷ್ಯರಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಹಾಗೆಂದು ಒಂಟೆಗಳಲ್ಲಿ ಯಾವುದೇ ರೋಗಲಕ್ಷಣ ಅಥವಾ ಕಂಡು ಬರದೇ ಇರುವುದರಿಂದ ಇವು ಈ ವೈರಾಣುಗಳ “ಸಂಗ್ರಾಹಕ” (Reservoir) ಗಳಾಗಿ ಕೆಲಸ ಮಾಡುತ್ತವೆ. ಈ ವೈರಾಣು ಒಂಟೆಗಳ ಹಾಲಿನಲ್ಲಿ ಹೇರಳವಾಗಿ ಸ್ರವಿಸಲ್ಪಡುತ್ತದೆ. ಈ ಮಧ್ಯಪ್ರಾಚ್ಯ ದೇಶಗಳಲ್ಲಿ ಒಂಟೆ ಹಾಲು ಔಷಧಿಯೆಂದು ಪರಿಗಣಿಸಲ್ಪಡುತ್ತದೆಯಂತೆ. ಕಾಯಿಸದೇ ಕುಡಿದ ಈ ಹಾಲಿನಿಂದ ಮನುಷ್ಯರಿಗೆ ಮೊದಲು ಬಂತು ಎಂಬುದು ಪ್ರತೀತಿ. ನಮ್ಮಲ್ಲಿಯೂ ಸಹ ಆಕಳಿಗೆ ಬೇಡದ ಶರೀರದ ತ್ಯಾಜ್ಯ ವಸ್ತುಗಳನ್ನು ಹೊರ ಚೆಲ್ಲಲು ಇರುವ ಗೋಮೂತ್ರವನ್ನು ಔಷಧಿಯೆಂದು ತಪ್ಪು ಗ್ರಹಿಕೆಯಿಂದ ಕುಡಿಯುವಂತೆ ಅಲ್ಲಿಯೂ ಸಹ ಒಂಟೆ ಮೂತ್ರವನ್ನು ಕುಡಿಯುತ್ತಾರಂತೆ.
ಇದೂ ಸಹ ವೈರಾಣು ಹರಡಲು ಕಾರಣ ಎನ್ನುತ್ತಾರೆ ವಿಜ್ಞಾನಿಗಳು. ಒಂಟೆಗಳಲ್ಲಿ ಹೇಗೆ ಈ ವೈರಾಣು ಬಂತು ಎನ್ನುವುದೂ ಸಹ ಕುತೂಹಲಕಾರಿ. 1950 ರಲ್ಲಿ ಕ್ವತಾರಿನ ಜನಸಂಖ್ಯೆ ಕೇವಲ 16,000 ಆದರೆ ತೈಲ ಸಂಪತ್ತು ಪತ್ತೆಯಾದ ನಂತರ ಅನೇಕ ದೇಶಗಳಿಂದ ವಲಸೆ ಬಂದು ಹೋದವರಿಂದ ಅದು ತುಂಬಿ ಹೋಗಿ 2016 ರ ಹೊತ್ತಿಗೆ ಇದು 2,617,634 ತಲುಪಿತು. ಅರಬ್ ದೇಶಗಳಲ್ಲಿ1983-2000 ರ ನಂತರ ತೈಲ ಕಂಪನಿಗಳು ಅಗಾದವಾದ ತೈಲ ಸಂಪತ್ತನ್ನು ಪತ್ತೆ ಹಚ್ಚಿದವು. ಇವುಗಳನ್ನು ಅವುಗಳ ಸ್ಥಾನದಿಂದ ಮಾರುಕಟ್ಟೆಗೆ ಒಯ್ಯಲು ಉತ್ತಮ ಕಡಿಮೆ ಖರ್ಚಿನ ಸಾಧನ ಬೇಕಿತ್ತು. ಆಗಿಂದ ಪ್ರಾರಂಭವಾಗಿದ್ದು ಈ ಒಂಟೆಗಳ ಸಾಕಣೆ ಮತ್ತು ಅವುಗಳ ಮೂಲಕ ತೈಲ ಸಾಗಣೆ.
ಸರ್ಕಾರವೂ ಸಹ ಒಂಟೆ ಸಾಕಣೆ ಪ್ರೋತ್ಸಾಹಿಸಿತು. ಪರಿಣಾಮವಾಗಿ ಒಂಟೆಗಳ ಸಂಖ್ಯೆಯಲ್ಲಿ ಅಗಾಧ ಏರಿಕೆಯಾಯಿತು. ಈ ಒಂಟೆಗಳನ್ನು ಸಾಕುವವರು ಒಂಟೆಗಳ ಸಂಖ್ಯೆಯೊಂದಿಗೇ ಜಾಸ್ತಿಯಾದರು. ಒಂಟೆಗಳ ಜೊತೆಯೇ ಇರುವ ಇವರಿಗೆ ಒಂಟೆಗಳನ್ನು ಭಾಧಿಸದ ಆದರೆ ಮನುಷ್ಯರನ್ನು ಕಾಡುವ ಕರೋನಾ ವೈರಾಣು ಭಾಧೆ ಜಾಸ್ತಿಯಾಯಿತು. ಇವರು ಪಟ್ಟಣಕ್ಕೆ ಬಂದು ಪಟ್ಟಣದ ಜನರಿಗೆ ಈ ವೈರಾಣು ಬಾಧೆ ತಗಲಿಸಿದರು. ಪೇಟೆಯ ಜನ ಇಡೀ ಪ್ರಪಂಚಕ್ಕೆ ಕರೋನಾ ವೈರಾಣುವನ್ನು ಬಳುವಳಿಯಾಗಿ ನೀಡಿದರು.
ಇದು ಸಾಕು ಪ್ರಾಣಿಗಳಿಗೆ ಬರುತ್ತದೆ ಎಂಬ ಬಗ್ಗೆ ದಾಖಲೆಗಳಿಲ್ಲ. ಉಳಿದಂತೆ ಕರೋನಾ ವೈರಾಣುವಿನ ವಿವಿಧ ಪ್ರಭೇಧಗಳು ಹಂದಿ, ನಾಯಿ, ಹಕ್ಕಿಗಳು, ಮೀನು ಇತ್ಯಾದಿಗಳನ್ನು ಬಾಧಿಸುತ್ತಿದ್ದರೂ ಸಹ ಇವು ಮನುಷ್ಯನನ್ನು ಬಾಧಿಸುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ.
ನಾಯಿಗಳಲ್ಲಿ ಕರೋನಾ ವೈರಾಣು ಬಾಧೆ
ಈ ವೈರಾಣು ಶ್ವಾನಗಳನ್ನು ಕಡಿಮೆ ಪ್ರಮಾಡದಲ್ಲಿ ಭಾಧಿಸುವುದು. ಇದು ನಾಯಿಗಳಲ್ಲಿ ವಾಂತಿಭೇಧಿ, ತೀವ್ರವಾದ ವಾಂತಿ, ಭೇಧಿ ಮತ್ತು ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ ಇತ್ಯಾದಿಗಳನ್ನು ಉಂಟು ಮಾಡುತ್ತದೆ. ಇದಕ್ಕೆ ಉತ್ತಮ ಚಿಕಿತ್ಸೆ ಇಲ್ಲ. ಆದರೆ ನಿಯಮಿತವಾಗಿ ಇದಕ್ಕೆಂದೇ ಇರುವ ಲಸಿಕೆಯನ್ನು ಬಳಸುವುದರಿಂದ ಈ ಕಾಯಿಲೆಯನ್ನು ತಡೆಯಬಹುದು. ಈ ವೈರಸ್ಸು ಮನುಷ್ಯನಿಗೆ ಯಾವುದೇ ರೋಗವನ್ನುಂಟು ಮಾಡುವುದಿಲ್ಲ.
ಬೆಕ್ಕುಗಳ ಕೊರೋನಾ ವೈರಾಣು ಪೀಡೆ
ಇದೂ ಸಹ ಕರೋನಾ ವೈರಾಣುಗಳ ಪೀಡೆಯಿಂದ ಬರಬಹುದಾದ ಕಾಯಿಲೆಯಾದರೂ ಸಹ ಇದು ಹೊಟ್ಟೆಯಯ ಪೆರಿಟೋನಿಯಂ ಪದರದ ಉರಿಯೂತವನ್ನುಂಟು ಮಾಡುತ್ತದೆ. ತೀವ್ರ ಸಾಂಕ್ರಾಮಿಕವಾದ ಈ ಕಾಯಿಲೆಗೆ ಅನೇಕ ಬೆಕ್ಕುಗಳು ಬಲಿಯಾಗುತ್ತವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಬೆಕ್ಕುಗಳನ್ನು ಬಹಳ ಬೇಗ ಕಾಡುವ ಈ ಕಾಯಿಲೆ ಮರಿ ಬೆಕ್ಕುಗಳನ್ನು ಜಾಸ್ತಿ ಭಾಧಿಸುತ್ತದೆ. ಈ ಕಾಯಿಲೆಯನ್ನು ಅಷ್ಟು ಸುಲಭವಾಗಿ ಪತ್ತೆ ಸಾಧ್ಯವಿಲ್ಲ. ಈಗ ಇದಕ್ಕೆ ಲಸಿಕೆ ತಯಾರಿಸಲಾಗಿದ್ದು ಇದನ್ನು ಮೂಗಿನ ಮೂಲಕ ನೀಡಲಾಗುತ್ತದೆ. ಒಮ್ಮೆ ಈ ಕಾಯಿಲೆ ಬೆಕ್ಕಿಗೆ ಬಂದರೆ ಬೆಕ್ಕನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಚಿಕ್ಕ ಬೆಕ್ಕಿನ ಮರಿಗಳಿಗೆ ಈ ಕಾಯಿಲೆ ಬಹಳ ಮಾರಕ.
ಹಂದಿಗಳಲ್ಲಿ ಕರೋನಾ ವೈರಾಣು ತೊಂದರೆ
ಸುಮಾರು ನಾಲ್ಕೈದು ವಿಧದ ಕೊರೋನಾ ವೈರಾಣುಗಳು ಹಂದಿಗಳನ್ನು ಭಾಧಿಸುತ್ತವೆ. ಇದರಲ್ಲಿ ಅನೇಕ ಕರೋನಾ ವೈರಾಣುಗಳ ಪಾತ್ರ ಇದೆ. ಇವುಗಳಲ್ಲಿ ಪೋರ್ಸೈನ್ ಎಪಿಡೆಮಿಕ್ ಡಯೇರಿಯಾ ಇದು ತೀವ್ರತರನಾಗಿದ್ದು ಒಂದು ಹಂದಿಯಿಂದ ಮತ್ತೊಂದು ಹಂದಿಗೆ ಅತಿ ಶೀಘ್ರದಲ್ಲಿ ಹಬ್ಬುತ್ತದೆ. ತೀವ್ರತರನಾದ ಬೇಧಿ, ವಾಂತಿ, ಶರೀರದ ತಾಪಮಾನ ಇಳಿಯುವುದು, ನಿರ್ಜಲೀಕರಣ ಇತ್ಯಾದಿ ಈ ರೋಗದ ಲಕ್ಷಣಗಳು. ಶೇ 80-100ರಷ್ಟು ಸಾವು ಈ ಕಾಯಿಲೆಯಲ್ಲಿ ಕಂಡು ಬರುತ್ತದೆ. ಲಸಿಕೆ ಹಾಕಿ ತಡೆಯುವುದೊಂದೇ ಇದಕ್ಕೆ ದಾರಿ.
ಪೋರ್ಸೈನ್ ಹೀಮ್ ಅಗ್ಲುಟಿನೇಟಿಂಗ್ ಕರೋನಾ ವೈರಸ್ ಸಹ ಹಂದಿಗಳಲ್ಲಿ ಅಷ್ಟೇ ತೀವ್ರವಾದ ಕಾಯಿಲೆ. ಇದರಲ್ಲಿಯೂ ಸಹ ಹಂದಿಮರಿಗಳು ಸಾವಿಗೀಡಾಗುತ್ತವೆ. ಮೆದುಳು ಜ್ವರದಲ್ಲಿನ ಲಕ್ಷಗಳು ಕಾಣಿಸಿಕೊಂಡು ತೀವ್ರವಾದ ವಾಂತಿ ಇರುತ್ತದೆ. ಇದಕ್ಕೂ ಸೂಕ್ತ ಚಿಕಿತ್ಸೆ ಇಲ್ಲ. ಲಸಿಕೆಯಿಂದ ಮಾತ್ರ ತಡಿಯಬಹುದು. ಒಮ್ಮೆ ಬಂದರೆ ಎಲ್ಲಾ ಭಾಧಿತ ಹಂದಿಗಳು ಸತ್ತು ತಾನೇ ನಿಯಂತ್ರಣಕ್ಕೆ ಬರಬೇಕು.
ಆಕಳು ಮತ್ತು ಜಾನುವಾರುಗಳಲ್ಲಿ ಕರೋನಾ ವೈರಾಣು ಬಾಧೆ
ಕರುಗಳಲ್ಲಿ ಬಹಳ ಸಾಮಾನ್ಯವಾದ ಈ ಕಾಯಿಲೆ ತೀವ್ರವಾದ ಬೇಧಿ, ನಿರ್ಜಲೀಕರಣಮತ್ತು ಹಸಿವಿಲ್ಲದಿರುವಿಕೆ ಇತ್ಯಾದಿ ಲಕ್ಷಣಗಳನ್ನು ಹೊಂದಿದೆ. ಶ್ವಾಸಕೋಶದ ಉರಿಯೂತವೂ ಸಹ ಇರುತ್ತದೆ. ಇದಕ್ಕೆ ಉತ್ತಮ ಲಸಿಕೆ ಇಲ್ಲ.
ಕುದುರೆಗಳ ಕರೋನಾ ವೈರಾಣು ಬಾಧೆ
ಕುದುರೆ, ಕತ್ತೆ ಮತ್ತು ಈ ಜಾತಿಯ ಪ್ರಾಣಿಗಳಲ್ಲಿ ಈ ಕಾಯಿಲೆ ಬಂದಾಗ ಬೇಧಿ ಮತ್ತು ಹೊಟ್ಟೆನೋವು ಅನುಕ್ರಮವಾಗಿ ಕಂಡು ಬರುತ್ತದೆ. ಚಿಕಿತ್ಸೆಯ ನಂತರ ಬಹುತೇಕ ಪ್ರಾಣಿಗಳು ಚೇತರಿಸಿಕೊಳ್ಳುತ್ತವೆ.
ಹಕ್ಕಿಗಳ ಕೊರೊನಾ ಬಾಧೆ
ಏವಿಯನ್ ಇನ್ಫೆಕ್ಷಿಯಸ್ ಬ್ರೋಂಕೈಟಿಸ್ ವೈರಸ್ ಎಂಬ ವೈರಾಣು ಈ ಕಾಯಿಲೆಯನ್ನುಂಟು ಮಾಡುತ್ತದೆ. ಹಕ್ಕಿಗಳಲ್ಲಿ ಗುರುತಿಸಲಾಗದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯನ್ನುಂಟು ಮಾಡುತ್ತದೆ. ಅನೇಕ ಹಕ್ಕಿಗಳು ಸಾಯುತ್ತವೆ. ಮರಣೋತ್ತರ ಪರೀಕ್ಷೆಯಲ್ಲಿ ಮೂತ್ರಜನಕಾಂಗ ಹಾಳಾಗಿರುವುದು ಕಂಡು ಬರುತ್ತದೆ. ಇಷ್ಟು ಕರೋನಾ ಪುರಾಣ ಸಾಕು.
ಆಕರ: ಕರೋನಾ ವೈರಾಣು ಬಾಧೆ Appeal et al., 1980 and Carmicheal and Binn, 1981: Animal Corona Virus.In Advances in Veterinary Medicine 1999.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



