ದಿನದ ಸುದ್ದಿ
ಕೋವಿಡ್ 19 : ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು
- ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು.
–ಕೆ.ಕೆ.ಶೈಲಜ (ಕೇರಳ ಆರೋಗ್ಯ ಮಂತ್ರಿ)
ಅನು: ಎಂ.ಜಿ.ವೆಂಕಟೇಶ
ಪ್ರತಿವರ್ಷ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದಾಗ ಪತ್ರಿಕೆಗಳು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿಡುವ ಅತ್ಯಲ್ಪ ಹಣದ ಕುರಿತು ಟೀಕೆ ಮಾಡುವ ಲೇಖನಗಳನ್ನು ಪ್ರಕಟ್ರಿಸುತ್ತವೆ. ಕೋವಿಡ್ – 19 ರ ಬೆದರಿಕೆ ವ್ಯಾಪಕವಾಗಿ ಆವರಿಸುತ್ತಿರುವಾಗ, ವೈದ್ಯರು, ಆರೋಗ್ಯ ಕ್ಷೇತ್ರದ ಕಾರ್ಯಕರ್ತರು, ರಾಜ್ಯ ಸರ್ಕಾರದ ಸಂಸ್ಥೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ಕೊಡಲಾರಂಭಿಸಿದ್ದರು. ಆದರೆ ನಾವು ಎಲ್ಲ ಕಡೆಗಳಲ್ಲೂ ಈ ಪಿಡುಗನ್ನು ಎದುರಿಸಲಾರಂಭಿಸಿದಾಗ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ನ್ಯೂನತೆಗಳು ಢಾಳಾಗಿ ಗೋಚರಿಸಲಾರಂಭಿಸಿದವು.
ಪಿ.ಸಾಯಿನಾಥ್ ತಮ್ಮ `ಎಲ್ಲರಿಗೂ ಬರ ಅಂದರೆ ಇಷ್ಟ’ ಪುಸ್ತಕದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಂಬಿರುವ ಬಡವರ ಸ್ಥಿತಿಯನ್ನು ಮನಮುಟ್ಟುವ ವಿವರಗಳೊಂದಿಗೆ ಹೇಳುತ್ತಾರೆ. ಅವರು 1994 ರಲ್ಲಿ ಕಾಣಿಸಿಕೊಂಡಿದ್ದ ಪ್ಲೇಗ್ ಪಿಡುಗಿಗೆ ಹಿಂದೆಂದು ಕಾಣದ ರೀತಿಯಲ್ಲಿ ಮಾಧ್ಯಮದ ಗಮನ ಸೆಳೆದಿದ್ದಕ್ಕೆ ಕಾರಣವನ್ನು ವಿವರಿಸುತ್ತಾರೆ. ಏಕೆಂದರೆ ಬೇರೆ ಕೆಲವು ರೋಗಗಳಂತೆ ಅದು ಗ್ರಾಮೀಣ ಪ್ರದೇಶ ಅಥವ ನಗರದ ಕೊಳಚೆ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಪ್ಲೇಗಿನ ಬ್ಯಾಕ್ಟಿರೀಯಾ ನಗರದ ಪ್ರತಿಷ್ಠಿತರ ಜಾಗಗಳಿಗೂ ನುಗ್ಗುವ ಗಾಂಚಾಲಿತನ ತೋರಿತ್ತು. ಸಾಯಿನಾಥ್ರ ಮಾತುಗಳಲ್ಲಿ ಹೇಳುವುದಾದರೆ “ಅವು (ಬ್ಯಾಕ್ಟೀರಿಯಾ) ಕ್ಲಬ್ ಕ್ಲಾಸ್ನಲ್ಲಿ ಸಂಚರಿಸಿ ನ್ಯೂಯಾರ್ಕ್ ತಲುಪಬಹುದಿತ್ತು. ಆದ್ದರಿಂದ ಬಹಳಷ್ಟು ಸುಂದರ ವ್ಯಕ್ತಿಗಳು ಆತಂಕಕ್ಕೆ ಒಳಗಾಗಿದ್ದರು.” ಕೋವಿಡ್-19 ಪ್ಲೇಗ್ಗಿಂತ ಕಡಿಮೆ ಅಪಾಯಕಾರಿಯಾದರೂ, ಅದು ಭಾರತಕ್ಕೆ ಬಂದಿದ್ದು ಸೋಂಕು ಪೀಡಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಂದಾಗಿತ್ತು.
ಈ ವಾದ ಒಡ್ಡುತ್ತಿರುವುದು ಈ ಎರಡೂ ಪಿಡುಗುಗಳನ್ನು ಹಗುರವಾಗಿ ತೆಗೆದುಕೊಳ್ಳುವ ಉದ್ದೇಶದಿಂದಲ್ಲ. ಬದಲಿಗೆ, ಆರೋಗ್ಯದ ವಿಷಯದಲ್ಲಿ ಭಾರತದ ಪ್ರತಿಸ್ಪಂದನೆ, ಅದರಿಂದ ಪೀಡಿತರಾದವರ ಸಾಮಾಜಿಕ ಮತ್ತು ವರ್ಗ ವಾಸಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲುವುದು ಮಾತ್ರ ಇದರ ಉದ್ದೇಶ.
ಕೋವಿಡ್-19ರ ಆಗಮನದಿಂದ ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದ್ದ ವರ್ಗಗಳು ಸರ್ಕಾರಿ ಆರೋಗ್ಯ ವ್ಯವಸ್ಥೆಗಳ ಮೇಲೆ ತಪಾಸಣೆ ಮತ್ತು ಪ್ರತ್ಯೇಕೀಕರಣಕ್ಕಾಗಿ (ಕ್ವಾರಂಟೈನ್ಗಾಗಿ) ಅವಲಂಬಿತರಾಗುತ್ತಿರುವ ವಿಚಿತ್ರ ಪರಿಸ್ಥಿತಿ ಉಂಟಾಗಿದೆ. ದಶಕಗಳಿಂದ ಭಾರತದ ಬಹುಸಂಖ್ಯಾತರು ಇಂತಹ ಸರಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಅವಲಂಬಿಸಿದ್ದರು ಎಂದು ಕೆಲವು ಅನುಕೂಲಸ್ತರಿಗೆ ಗೋಚರವಾಗುವುದಕ್ಕೆ ಕೋವಿಡ್-19 ರಂತಹ ಪಿಡುಗೇ ಬರಬೇಕಾಯಿತು. ಆಗ್ರಾ ಮಹಿಳೆಯೊಬ್ಬರು ಕ್ವಾರಂಟೈನ್ನಿಂದ ತಪ್ಪಿಸಿಕೊಂಡ ವಿಷಯ ತಪ್ಪಾಗಿ ವರದಿಯಾಗಿದೆ.
ವಾಸ್ತವವಾಗಿ “ಅನಾರೋಗ್ಯಕರ ಶೌಚಾಲಯ ವ್ಯವಸ್ಥೆ ಆಕೆಗೆ ವಾಕರಿಕೆ” ತರುವಂತೆ ಇದ್ದಿದ್ದರಿಂದ ಆಕೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಗೆ ಪ್ರತಿರೋಧ ತೋರಿದ್ದಳು. ಇದು ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಮತ್ತು ಮೂಲ ಸೌಕರ್ಯಗಳಿಗಾಗಿ ಮೀಸಲಿಡುವ ಅತ್ಯಲ್ಪ ಅನುದಾನದ ಫಲ. ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯಕರ ಶೌಚಾಲಯಗಳನ್ನು ನಿರ್ವಹಿಸಲಾಗದ ಸಾರ್ವಜನಿಕ ಆರೋಗ್ಯ ಆಡಳಿತಕ್ಕೆ, ಕೋವಿಡ್-19 ನಿಜವಾಗಿಯೂ ಎದುರಿಸಲಾಗದ ಸವಾಲಾಗಿದೆ.
ಸಾಂಕ್ರಾಮಿಕ ಎದುರಿಸಲು ತಯಾರಿ
ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲಭೂತ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು. ಜನವರಿ ಮಧ್ಯ ಭಾಗದಿಂದಲೇ ಇದನ್ನು ಎದುರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿತ್ತು. ನಮ್ಮ ರಾಜ್ಯ ಕೊವಿದ್-19 ಪಿಡುಗು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿ ತಯಾರಿಸಿದ ಮೊದಲ ರಾಜ್ಯವಾಗಿತ್ತು.
ಜನವರಿ 30 ರಂದು ಕೊವಿದ್-19 ಪಾಸಿಟಿವ್ ಆದ ಮೊದಲ ಪ್ರಕರಣ ಗಮನಕ್ಕೆ ಬಂದ ನಂತರ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಿ ಪಾಲಿಸಲಾಯಿತು. ಆ ನಂತರ ಸರಕಾರ ಇನ್ನಷ್ಟು ನಿಗಾ ವಹಿಸಿ ಸೋಂಕು ಖಚಿತವಾದವರ ಜತೆ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕ ಇರುವ ಎಲ್ಲರನ್ನು ಗುರುತಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಇಟಲಿಯಿಂದ ಹಿಂತಿರುಗಿದ ಒಂದು ಕುಟುಂಬ ತಪಾಸಣೆಗೆ ಒಳಗಾದಾಗ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಗಂಭೀರ ಸ್ಥಿತಿ ನಿರ್ಮಾಣವಾಯಿತು. ತೀವ್ರವಾದ ಹುಡುಕುವಿಕೆಯ ನಂತರ ಈ ಕುಟುಂಬದ ಸಂಪರ್ಕಕ್ಕೆ 719 ಜನ ಒಳಗಾಗಿದ್ದರು ಎಂಬುದು ಪತ್ತೆಯಾಯಿತು.
ಆ ನಂತರ ವಿದೇಶಗಳಿಂದ ಹಿಂತಿರುಗುವ ಪ್ರಯಾಣಿಕರ ಬಗ್ಗೆ ಕ್ರಮಗಳನ್ನು ಸರ್ಕಾರ ತೀವ್ರಗೊಳಿಸಿತು. ಈ ಪ್ರಯಾಣಿಕರು ತಮ್ಮ ಪ್ರಯಾಣದ ಪೂರ್ಣ ವಿವರಗಳನ್ನು ನೀಡದಿದ್ದರೆ ತೀವ್ರ ಕ್ರಮಗಳಿಗೆ ಒಳಗಾಗಬೇಕಾಯಿತು. ಅವರ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಲಾಯಿತು ಅಥವಾ ಗೃಹದಲ್ಲಿ ಒಂಟಿಯಾಗಿ ಇರಿಸಲಾಯಿತು.
ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಯಿತು. ನಿಗಾ ವಹಿಸಲಾದವರ ಪಟ್ಟಿಯನ್ನು ಸರ್ಕಾರ ನೀಡಿತು. ಇತ್ತೀಚಿಗೆ ರಾಜ್ಯವನ್ನು ವಿವಿಧ ಕಡೆಯಿಂದ ವಿವಿಧ ರೀತಿಯಲ್ಲಿ ಪ್ರವೇಶಿಸುವ ಕಡೆಯಲ್ಲಿ ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. ಆರೋಗ್ಯ ರಕ್ಷಣಾ ಕಾರ್ಯಕರ್ತರು ನಗರ ಪ್ರವೇಶದ ಚೆಕ್ ಪೋಸ್ಟ್ಗಳಲ್ಲಿ ನಿಂತು ತಪಾಸಣೆ ನಡೆಸಿದರು. ಹಾಗೆ ರೈಲ್ವೆ ನಿಲ್ದಾಣಗಳಲ್ಲಿ ಈ ಕ್ರಮ ಕೈಗೊಳ್ಳಲಾಯಿತು.
ಈ ಪರಿಸ್ಥಿತಿಯನ್ನು ಅತ್ಯಂತ ಸೂಕ್ತವಾಗಿ ನಿಭಾಯಿಸುವುದರ ಕುರಿತು ನಾವು ಚೀನಾ ಮತ್ತು ದಕ್ಷಿಣ ಕೊರಿಯಾದಿಂದ ಕಲಿಯಬೇಕಿರುವುದು ಎಂದರೆ, ವ್ಯಾಪಕವಾಗಿ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದು ಮತ್ತು ತಪಾಸಣೆ ಮಾಡುವುದು. ದ. ಕೋರಿಯಾದಲ್ಲಿ ವ್ಯಾಪಕ ತಪಾಸಣೆಯಿಂದಾಗಿ ಮಾತ್ರ ಲಾಕ್ಡೌನ್ ಮಾಡದೇ ಬಿಕ್ಕಟ್ಟನ್ನು ನಿಭಾಯಿಸುವುದು ಸಾಧ್ಯವಾಯಿತು. ಆದರೆ ಕೇರಳದಲ್ಲಿ ಆರೋಗ್ಯಸೇವೆಯ ಉತ್ತಮ ಸೌಲಭ್ಯಗಳಿದ್ದರೂ ಇಂತಹ ಉತ್ತಮ ಆದರ್ಶ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ ಸೀಮಿತ ಸಂಪನ್ಮೂಲ ಮತ್ತು ತಪಾಸಣಾ ಪ್ರಯೋಗಶಾಲೆಗಳು.
ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ನಾವು ಬಹಳ ಜಾಣತನದಿಂದ ನಮ್ಮ ಸೌಲಭ್ಯವನ್ನು ಉಪಯೋಗಿಸಬೇಕಾಗಿದೆ ಮತ್ತು ಸ್ಥಳೀಯ ಪ್ಯಯತ್ನಗಳನ್ನು ಹೆಚ್ಚಿಸಬೇಕಾಗಿದೆ. ಇದನ್ನು ಸಾಧಿಸಬೇಕಾದರೆ ಬಲವಾದ ರಾಜಕೀಯ ಬದ್ಧತೆ, ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಜನರ ಬದ್ಧತೆ ಬೇಕಾಗಿರುತ್ತದೆ. ಸರ್ಕಾರ ಸೂಚಿಸುವ ಕ್ರಮಗಳನ್ನು ಪ್ರಜೆಗಳು ಅನುಸರಿಸುವುದು ಮುಖ್ಯ. ಇದರಲ್ಲಿ ಮುಖ್ಯವಾದ ವಿಷಯವೆಂದರೆ ಸಾರ್ವಜನಿಕರು ಕಾರಣವಿಲ್ಲದೇ ತಪಾಸಣಾ ಕೇಂದ್ರಗಳಿಗೆ ಹೊಗದಿರುವುದು, ಹೀಗೆ ಹೋಗುವುದರಿಂದ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಸ್ವಯಂ-ಪ್ರತ್ಯೇಕತೆ ಅನುಸರಿಸುವಾಗ ಕೈಗೊಳ್ಳುವ ಕ್ರಮಗಳ ಬಗ್ಗೆ, ರೋಗಲಕ್ಷಣಗಳನ್ನು ಗುರುತಿಸಲು ಮತ್ತು ವರದಿ ಮಾಡುವುದಕ್ಕೆ ಕೇರಳ ಸರ್ಕಾರ ‘ಜಿಓಕೆ ಡೈರೆಕ್ಟ್’ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. `ದಿಶಾ’ ಹೆಲ್ಪಲೈನ್ ಜನಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರ ಮುಖಾಂತರ ಕೊವಿದ್ 19 ಪಿಡುಗಿನ ಹರಡುವಿಕೆಯ `ಸರಣಿ ಕತ್ತರಿಸುವ’ (ಬ್ರೇಕ್ ದಿ ಚೈನ್) ಪ್ರಚಾರದಲ್ಲಿ ಶುಚಿ ಮತ್ತು ನೈರ್ಮಲ್ಯದ ಬಗ್ಗೆ ತಿಳಿಸಲಾಗುತ್ತಿದೆ. ಈ ಕ್ರಮಗಳಿಂದ ಸ್ವಭಾವದ ಬದಲಾವಣೆ ತರುತ್ತಿರುವುದು ರಾಜ್ಯದ ಮತ್ತು ರಾಷ್ಟ್ರದ ಮಾಧ್ಯಮದಲ್ಲೂ ಪ್ರಕಟವಾಗುತ್ತಿದೆ.
ಈ ರೀತಿಯ ಮುಂಜಾಗರೂಕತಾ ಕ್ರಮ ಮತ್ತು ಸಾಮಾಜಿಕ ಅಂತರ ಕಾಪಿಟ್ಟುಕೊಂಡರೆ ಸಾರ್ವಜನಿಕ ಮತ್ತು ಸರಕಾರದ ಸಂಪನ್ಮೂಲಗಳ ಮೇಲೆ ಉಂಟಾಗುವ ಒತ್ತಡವನ್ನು ಮುಂದೂಡಬಹುದು. ಹೀಗೆ ಗಳಿಸಿದ ಅವಧಿಯಲ್ಲಿ ಮುಂದೆ ಸೋಂಕು ಹರಡಿ ಅಗತ್ಯ ಬಿದ್ದರೆ ಹೆಚ್ಚು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುವಂತೆ ತಪಾಸಣಾ ಸೌಲಭ್ಯಗಳನ್ನು ನಿರ್ಮಿಸಬಹುದು. ಸರ್ಕಾರದ ವಿನಂತಿಯ ಮೇರೆಗೆ ಐ.ಸಿ.ಎಂ.ಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್) ಕೇರಳಕ್ಕೆ 10 ಪರೀಕ್ಷಾ ಕೇಂದ್ರಗಳನ್ನು ಮಂಜೂರು ಮಾಡಿದೆ. ಸರ್ಕಾರಕ್ಕೆ ಖಾಸಗಿ ಭಾಗಿತ್ವದೊಡನೆ ಇನ್ನು ಹೆಚ್ಚಿನ ಪ್ರಯೋಗಾಲಯಗಳನ್ನು ಸ್ಥಾಪಿಸುವ ಯೋಜನೆಯಿದೆ.
ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು
ಕೇರಳದಲ್ಲಿ ಚಾರಿತ್ರಿಕವಾಗಿ ಸಶಕ್ತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸರ್ಕಾರ ನೀಡಿರುವ ಧೃಡವಾದ ಬೆಂಬಲದಿಂದಾಗಿ, ಕೊವಿಡ್ 19 ಹರಡುವ ಮೊದಲು ಕ್ರಮಗಳ ಬಗ್ಗೆ ನಿರ್ಣಯಿಸುವುದಕ್ಕೆ ಸಾಧ್ಯವಾಯಿತು. ಆಡಳಿತ ಒಳ್ಳೆಯ ಆರೋಗ್ಯ ವ್ಯವಸ್ಥೆ ಕಾಪಾಡಿ ಬೆಳೆಸಲು ವೇಗವರ್ಧಕವಾಗಿ ಕೆಲಸ ಮಾಡಿದೆ. ಇದು ಆರೋಗ್ಯ ಮೂಲ ಸೌಲಭ್ಯದ ವಿಸ್ತರಣೆಯಲ್ಲಿ ಕಂಡು ಬರುತ್ತದೆ. ಉದಾಹರಣೆಗೆ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ವೈರೋಲಜಿ ಘಟಕವನ್ನು ಅಲೆಪ್ಟಿಯಲ್ಲಿ ನಿಫಾ ವೈರಸ್ ಕಂಡು ಬಂದ ನಂತರ ಸ್ಥಾಪಿಸಿರುವುದು.
ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ಮತ್ತು ಅಸಾಂಕ್ರಮಿಕ ರೋಗಗಳಿಂದ ಉಂಟಾದ ಒತ್ತಡವನ್ನು ನಿರ್ವಹಿಸಿರುವ ರೀತಿಯಿಂದ ರಾಜ್ಯದ ಸೋಂಕಿನ ಪರಿಸ್ಥಿತಿಯನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾ ಇಡಲು ಸರಕಾರ ಸ್ಥಾಪಿಸಿರುವ ಉಸ್ತುವಾರಿ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ. ಇದರಿಂದ ಆರೋಗ್ಯ ಅಧಿಕಾರಿಗಳು ವೇಗವಾಗಿ ರೋಗ ಗುರುತಿಸುವುದಕ್ಕೂ ತಡೆಯುವುದಕ್ಕೂ ಸಾಧ್ಯವಾಗಿದೆ. ಸೇವೆಯನ್ನು ಕ್ಷಿಪ್ರವಾಗಿ ಮತ್ತು ವ್ಯಾಪಕವಾಗಿ ಹೆಚ್ಚಿನ ಜನರನ್ನು ತಲುಪುವ ಗುರಿ ಸಾಧಿಸಲು ಆರೋಗ್ಯಸೇವಾ ವ್ಯವಸ್ಥೆಯನ್ನು ವಿಕೇಂದ್ರಿಕರಿಸಲಾಗಿದೆ. ಇದರ ಫಲಿತವಾಗಿಯೇ ಕೋವಿಡ್-19 ರ ಸಂದರ್ಭದಲ್ಲಿ ವೈಯುಕ್ತಿಕ ಪ್ರಕರಣಗಳನ್ನು ಪತ್ತೆ ಹಚ್ಚಿ ಅದರ ಜಾಡು ಹಿಡಿಯುವುದರಲ್ಲಿ ಮತ್ತು ‘ಸರಣಿ ತುಂಡರಿಸುವ’ ಪ್ರಚಾರ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿವೆ.
ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಮೂಲಭೂತ ಸೌಕರ್ಯ ಹೆಚ್ಚಿಸಲು ‘ಆರ್ದ್ರ ಮಿಶನ್’ ಮುಖಾಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತೆ ಇನ್ನಷ್ಟು ಉತ್ತಮ ಹಾದಿಯಲ್ಲಿ ಒಯ್ಯಲು ಯಶಸ್ವಿಯಾಗಿದೆ.
- ಮೂಲ ಲೇಖನ ಕೃಪೆ : ದಿ ಹಿಂದು ಪತ್ರಿಕೆ, ಮಾ.23, 2020
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ5 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ5 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ5 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ1 day agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ3 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

