Connect with us

ಬಹಿರಂಗ

ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಂಬೇಡ್ಕರರು ಹೇಳಿದ್ದ ಒಂದು ಕಥೆ..! : ಮಿಸ್ ಮಾಡ್ದೆ ಓದಿ

Published

on

  • ರಘೋತ್ತಮ ಹೊ.ಬ

1947 ರ ಏಪ್ರಿಲ್ 14 ಅಂಬೇಡ್ಕರರ 55ನೇ ಹುಟ್ಟುಹಬ್ಬದ ಸಂದರ್ಭವದು. ಆ ಸಂದರ್ಭದಲ್ಲಿ ಮದ್ರಾಸಿನ ‘ಜೈಭೀಮ್’ ಮಾಸಿಕಕ್ಕೆ ತಮ್ಮ ಜನ್ಮದಿನಾಚರಣೆಯ ಪ್ರಯುಕ್ತ ನೀಡಿದ ಸಂದೇಶದಲ್ಲಿ ಗ್ರೀಕ್ ನ ಹೋಮರನ ಕಾವ್ಯದಲ್ಲಿ ಕಂಡುಬರುವ ಗ್ರೀಕ್ ದೇವತೆ ಡಿಮಿಟ್ರಿಯನ್ನು ಉದ್ದೇಶಿಸಿ ಬರೆದಿರುವ ಒಂದು ಕಥೆಯನ್ನು ಅಂಬೇಡ್ಕರರು ಹೇಳುತ್ತಾರೆ.

ಅಂಬೇಡ್ಕರರು ಹೇಳಿದ ಆ ಕಥೆ ಹೀಗಿದೆ:-
“ಒಮ್ಮೆ ಗ್ರೀಕ್ ದೇವತೆ ಡಿಮಿಟ್ರಿ ತನ್ನ ಮಗಳಿಗಾಗಿ ಹುಡುಕುತ್ತಾ ರಾಜ ಕೇಲಿಯೋಸನ ಆಸ್ಥಾನಕ್ಕೆ ಬರುತ್ತಾಳೆ. ಕರುಣಾಭರಿತ ಓರ್ವ ದಾದಿಯ ರೂಪದಲ್ಲಿ ಆಕೆ ಬಂದಿದ್ದರಿಂದ ಯಾರಿಗೂ ಕೂಡ ಆಕೆಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಹಾಗೆಯೇ ರಾಣಿ ಮೆಟೊನೀರಾ ಆಗ ತಾನೆ ಹುಟ್ಟಿದ ತನ್ನ ಅಸುಕಂದ ಡೆಮೋಫೋನ್‌ನನ್ನು (ನಂತರ ಆತ ಟ್ರಿಪ್ಟೊಲೊಮೊಸ್ ಎಂದು ಕರೆಯಲ್ಪಡುತ್ತಾನೆ) ದಾದಿಯ ರೂಪದಲ್ಲಿದ್ದ ದೇವತೆ ಡಿಮಿಟ್ರಿಗೆ (ಆರೈಕೆಮಾಡಲು) ಒಪ್ಪಿಸುತ್ತಾಳೆ.

ಆಶ್ಚರ್ಯಕರವೆಂದರೆ ಪ್ರತಿಸಂಜೆ ಮುಚ್ಚಿದ ಬಾಗಿಲುಗಳ ಹಿಂದೆ ಮನೆಯವರೆಲ್ಲ ಮಲಗಿದ ನಂತರ ದೇವತೆ ಡಿಮಿಟ್ರಿ ಪುಟ್ಟ ಆ ಡೆಮೋಫೋನ್‌ನನ್ನು ತೊಟ್ಟಿಲಿನಿಂದ ಕ್ರೂರವಾಗಿ, ಹಾಗೆ ಅಷ್ಟೇ ಪ್ರೀತಿಯಿಂದ ತೆಗೆದುಕೊಂಡು ಹೋಗುತ್ತಾ ಆತನಲ್ಲಿ ದೈವತ್ವವನ್ನು ತರುವ ಆಸೆ ಹೊತ್ತು ಆ ಮಗುವನ್ನು ನಗ್ನವಾಗಿ ನಿಗಿನಿಗಿ ಕೆಂಡದ ಮೇಲೆ ಮಲಗಿಸುತ್ತಿರುತ್ತಾಳೆ. ಆ ಮಗು ಡೆಮೋಫೋನ್ ಕೂಡ ಅಷ್ಟೆ ಉರಿಯುತ್ತಿರುವ ಆ ಇದ್ದಿಲಿನ ಅಗಾಧವಾದ ಶಾಖವನ್ನು ಸಹಿಸಿಕೊಳ್ಳುತ್ತಿರುತ್ತದೆ, ಕಷ್ಟವನ್ನು ಸಹಿಸಿಕೊಳ್ಳುತ್ತಾ ಅಗಾಧವಾದ ಶಕ್ತಿಯನ್ನು ಅದು ಪಡೆದುಕೊಳ್ಳುತ್ತಿರುತ್ತದೆ. ಒಟ್ಟಾರೆ ಎಲ್ಲವನ್ನು ಮೀರಿದ ಅದ್ಭುತ ಚೈತನ್ಯವನ್ನು, ಅತ್ಯುತ್ತಮ ಆರೋಗ್ಯವನ್ನು, ಅತಿಮಾನುಷ ಶಕ್ತಿಯನ್ನು ಆ ಮಗುವಿಗೆ ಹೀಗೆ ದೇವತೆ ಡಿಮಿಟ್ರಿ ಪ್ರತಿದಿನ ತುಂಬುತ್ತಿರುತ್ತಾಳೆ”.

“ಆದರೆ ರಾಣಿ ಮೆಟೋನಿರಾ ಒಮ್ಮೆ ಕುತುಹಲಗೊಂಡು ಇದ್ದಕ್ಕಿದ್ದಂತೆ ಅಂತಹ ಪ್ರಯೋಗ ನಡೆಯುತ್ತಿದ್ದ ಆ ಕೊಠಡಿಗೆ ನುಗ್ಗುತ್ತಾಳೆ. ತನ್ನ ಮಗುವಿನ ಮೇಲೆ ಇಂತಹ ಪ್ರಯೋಗವಾಗುತ್ತಿರುವುದನ್ನು ನೋಡಿ ಭಯಗೊಂಡ ಆಕೆ ತನ್ನ ಮಗನ ಮೇಲೆ ಅತಿಮಾನುಷ ಶಕ್ತಿ ತುಂಬುವ ಕ್ರಿಯೆ ನಡೆಸುತ್ತಿದ್ದ ಆ ದೇವತೆಯನ್ನು ಪಕ್ಕಕ್ಕೆ ನೂಕಿ, ನಿಗಿನಿಗಿ ಕೆಂಡವನ್ನು ದೂರ ತಳ್ಳಿ ಮಗುವನ್ನು ತೆಗೆದುಕೊಂಡು ಹೋಗುತ್ತಾಳೆ. ಪರಿಣಾಮ? ಆಕೆ (ರಾಣಿ ಮೆಟೋನೀರಾ) ತನ್ನ ಮಗುವನ್ನು ರಕ್ಷಿಸಿಕೊಳ್ಳುತ್ತಾಳೆ. ಆದರೆ ಅದನ್ನು ದೈವತ್ವದ ಮಟ್ಟಕ್ಕೆ ಏರಿಸುವ, ಅತಿಮಾನುಷ ಶಕ್ತಿಯನ್ನು ಅದರಲ್ಲಿ ತುಂಬುವ ಅವಕಾಶದಿಂದ ಅದನ್ನು ಆಕೆ ವಂಚಿಸುತ್ತಾಳೆ”!
ಅಂಬೇಡ್ಕರರು ಕಥೆಯನ್ನು ನಿಲ್ಲಿಸುತ್ತಾರೆ.

ಹಾಗೆಯೇ ಅದರ ನೀತಿಯನ್ನು ಹೀಗೆ ವಿವರಿಸುತ್ತಾರೆ. “ಶೋಷಿತ ಸಮುದಾಯದ ಯಾರೇ ಆಗಲೀ ಹೋರಾಟ ಮಾಡದೆ, ಕಷ್ಟವನ್ನು ಅನುಭವಿಸದೆ ಉನ್ನತವಾದದ್ದನ್ನು ಸಾಧಿಸಲು ಸಾಧ್ಯವಿಲ್ಲ. ಬೆಂಕಿಯ ಪರೀಕ್ಷೆಯನ್ನು ಎದುರಿಸದೆ ಮನುಷ್ಯತ್ವವನ್ನಾಗಲೀ, ದೈವತ್ವವನ್ನಾಗಲೀ ಪಡೆಯುವುದು ಖಂಡಿತ ಸಾಧ್ಯವಿಲ್ಲ. ಉತ್ಕೃಷ್ಟವಾದುದ್ದನ್ನು ಹೋರಾಟ ಮತ್ತು ತ್ಯಾಗದಿಂದ ಮಾತ್ರ ಸಾಧಿಸಬಹುದು. ಹೋರಾಟ ಮತ್ತು ನೋವನ್ನು ಅನುಭವಿಸುವುದೆಂದರೆ ಹೀಗೆಯೇ. ಬೈಬಲ್‌ನ ಭಾಷೆಯನ್ನೇ ಬಳಸುವುದಾದರೆ ‘ಎಲ್ಲ ವರ್ಗಗಳ ಜನರನ್ನು ಕರೆಯಲಾಗುತ್ತದೆ. ಆದರೆ ಅವರಲ್ಲಿ ಕೆಲವರನ್ನು ಮಾತ್ರ ಆರಿಸಲಾಗುತ್ತದೆ’. ಯಾಕೆ? ಕಾರಣ ಸ್ಪಷ್ಟ. ಅದೆಂದರೆ ಆರಿಸಲಾದ ಆತ (ಶೋಷಿತ ಸಮುದಾಯದ ವ್ಯಕ್ತಿ) ತನ್ನ ಜನರ ಭವಿಷ್ಯವನ್ನು ಭವ್ಯವಾಗಿ ಕಟ್ಟಲು, ತನ್ನ ವೈಭೋಗಗಳನ್ನು ಪ್ರಸ್ತುತದ ಅಗತ್ಯತೆಗಳನ್ನು ತ್ಯಾಗಮಾಡಲು ಸಿದ್ಧನಿರಬೇಕು. ಈ ದಿಸೆಯಲ್ಲಿ ಭವಿಷ್ಯದ ಅವಶ್ಯಕತೆಗಳಿಗಾಗಿ ಪ್ರಸ್ತುತದ ಆಸೆಗಳನ್ನು ತ್ಯಾಗಮಾಡುವ ಧೈರ್ಯವಿಲ್ಲದ್ದರಿಂದಾಗಿ, ದೃಢ ನಿರ್ಧಾರವಿಲ್ಲದ್ದರಿಂದಾಗಿ, ಶೋಷಿತ ಸಮುದಾಯದ ಬಹುತೇಕ ಮಂದಿ ಉನ್ನತವಾದದ್ದನ್ನು ಸಾಧಿಸಲು ವಿಫಲರಾಗುತ್ತಿದ್ದಾರೆ”.
ಅಂಬೇಡ್ಕರ್ ಹೇಳುತ್ತಾ ಹೋಗುತ್ತಾರೆ…

ಅವರ ಪ್ರಕಾರ ಆ ಕಥೆಯಲ್ಲಿ ಮಗು ಡೆಮೊಫೋನ್ ಇನ್ನಷ್ಟು ಕಾಲ ಆ ನಿಗಿನಿಗಿ ಕೆಂಡದ ಕಷ್ಟ ಸಹಿಸಿಕೊಂಡಿದ್ದರೆ ಆತ ದೈವತ್ವ ಪಡೆಯುತ್ತಿದ್ದ, ಅತಿಮಾನುಷ ಶಕ್ತಿ ಪಡೆಯುತ್ತಿದ್ದ. ಆದರೆ ಆತನ ತಾಯಿ ಅದನ್ನು ಅರಿಯದೇ ಹೋದದ್ದರಿಂದ ಆತ ಅಂತಹ ಅವಕಾಶ ಕಳೆದುಕೊಂಡ. ಮುಂದುವರಿದು ಅಂಬೇಡ್ಕರರು ಹೇಳುವುದು “ಶೋಷಿತ ಸಮುದಾಯದ ಜನರು ಆ ಮಗುವಿನ ಹಾಗೆ ಬೆಂಕಿಯಂತಹ ಹೋರಾಟ ಮಾಡದೆ, ನಿಗಿನಿಗಿ ಕೆಂಡದ ಕಷ್ಟ ಅನುಭವಿಸದೆ ದೈವತ್ವದ ರೀತಿ ಉನ್ನತವಾದದ್ದನ್ನು ಸಾಧಿಸಲು ಸಾಧ್ಯವಿಲ್ಲ. ಹಾಗೆಯೇ ಇವರಿಗೆ ಈ ದಂತಕಥೆಗಿಂತ ಉತ್ತಮವಾದ, ಶ್ರೇಷ್ಠವಾದ ಸಂದೇಶ ಬೇಕೆ? ಖಂಡಿತ, ನನಗೆ ಬೇರಾವುದು ಹೊಳೆಯುತ್ತಿಲ್ಲ. ಯಾಕೆಂದರೆ ಅಸ್ಪೃಶ್ಯರಿಗೆ (ಈ ಕಥೆಯೇ) ಶ್ರೇಷ್ಠ ಮತ್ತು ಅತಿ ಸೂಕ್ತವಾದ ಸಂದೇಶ. ಅವರ ಹೋರಾಟ ಮತ್ತು ಕಷ್ಟ ನನಗೆ ತಿಳಿದಿದೆ.

ಅಲ್ಲದೆ (ಹಿಂದೂಗಳಿಂದ) ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಅವರು ನನಗಿಂತ ಹೆಚ್ಚಿನ ಕಷ್ಟ ಅನುಭವಿಸುತ್ತಿದ್ದಾರೆ. ಅದೂ ಸಹ ನನಗೆ ತಿಳಿದಿದೆ. ಹೀಗಿದ್ದರೂ ಇದೆಲ್ಲಕ್ಕೂ ಮೀರಿ ನಾನು ಅವರಿಗೆ ಮತ್ಯಾವ ಸಂದೇಶವನ್ನು ನೀಡಲಾರೆ. ಈ ದಿಸೆಯಲ್ಲೇ ನನ್ನ ಸಂದೇಶವೆಂದರೆ ಹೋರಾಡಿ, ಮತ್ತೂ ಹೋರಾಡಿ. ತ್ಯಾಗ ಮಾಡಿ, ಇನ್ನೂ ಹೆಚ್ಚಿನ ತ್ಯಾಗ ಮಾಡಿ. ಯಾಕೆಂದರೆ ತ್ಯಾಗ ಮತ್ತು ಸಂಕಷ್ಟವನ್ನು ಲೆಕ್ಕಕ್ಕಿಡದ ಅಂತಹ ಹೋರಾಟ, ಹಾಗೆಯೇ ಅಂತಹ ಹೋರಾಟ ಮಾತ್ರ ನಿಮಗೆ ವಿಮೋಚನೆ ತರಬಲ್ಲದು. ಅದು ಬಿಟ್ಟು ಬೇರಾವುದರಿಂದಲೂ (ವಿಮೋಚನೆ) ಸಾಧ್ಯವಿಲ್ಲ” ಅಂಬೇಡ್ಕರರು ಹೇಳುತ್ತಾ ಹೋಗುತ್ತಾರೆ.

ಈ ಸಂದರ್ಭದಲ್ಲಿ ಅವರು ಶೋಷಿತರಿಗೆ ಒಂದು ಪ್ರಾರ್ಥನೆಯನ್ನು ಬೋಧಿಸುತ್ತಾರೆ. ಅದೆಂದರೆ “ತನಗೆ ಜನುಮ ನೀಡಿದ ಜನಾಂಗದ ಏಳಿಗೆಗೆ ಬದ್ಧರಾದ ಕರ್ತವ್ಯಶೀಲರೇ ಧನ್ಯರು. ಗುಲಾಮಗಿರಿಯ ವಿರುದ್ಧ ಹೋರಾಟವನ್ನು ಮುಂದುವರೆಸಲು ತಮ್ಮ ದೈಹಿಕ ಶಕ್ತಿ, ಆಧ್ಯಾತ್ಮಿಕ ಶಕ್ತಿ, ತಮ್ಮ ಭವಿಷ್ಯ, ತಮ್ಮ ಬದುಕಿನ ಸುಂದರ ಘಳಿಗೆಗಳನ್ನು ನೀಡಲು ಬದ್ಧರಾದವರೇ ಧನ್ಯರು. ಅಸ್ಪೃಶ್ಯರು ತಮ್ಮ ಮಾನವ ಗೌರವವನ್ನು ಸಂಪೂರ್ಣ ಪಡೆಯುವ ತನಕ ಬಿಸಿಲೇ ಇರಲಿ, ಬಿರುಗಾಳಿಯೇ ಬರಲಿ, ಒಳ್ಳೆಯದೇ ಆಗಲಿ, ಕೆಟ್ಟದ್ದೇ ಆಗಲಿ, ಗೌರವವೇ ಬರಲಿ ಅಥವಾ ಅಗೌರವವೇ ಬರಲಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಈ ಹೋರಾಟವನ್ನು ಮುಂದುವರೆಸುವ ನಿರ್ಧಾರ ಕೈಗೊಳ್ಳುವವರೇ ಧನ್ಯರು”.

ಹೀಗೆ ಪ್ರಾರ್ಥನೆ ಬೋಧಿಸಿ ಅಂಬೇಡ್ಕರರು ಸಂತಸ ಸಂಭ್ರಮದ ನಡುವೆ ತಮ್ಮ 55ನೇ ಹುಟ್ಟುಹಬ್ಬವನ್ನು ದೆಹಲಿಯಲ್ಲಿ ಅಂದು ಆಚರಿಸಿಕೊಳ್ಳುತ್ತಾರೆ.1947 ಏಪ್ರಿಲ್ 14ರ ಆ ದಿನ ಬ್ರಿಟಿಷ್ ಆಳ್ವಿಕೆಯ ಆ ಕಾಲದಲ್ಲಿ ದೆಹಲಿಯಲ್ಲಿ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿಷೇಧವಿರುತ್ತದೆ. ಆ ಕಾರಣಕ್ಕಾಗಿ ಅಂಬೇಡ್ಕರರ ಅದ್ದೂರಿ ಹುಟ್ಟುಹಬ್ಬ ಆಚರಣೆಯನ್ನು ಆ ವರ್ಷ ಕೈಬಿಡಲಾಗಿರುತ್ತದೆ. ಹಾಗಿದ್ದರೂ “ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟ(ಎಐಎಸ್‌ಎಫ್)”(ಅಂಬೇಡ್ಕರರು ಸ್ಥಾಪಿಸಿದ್ದ ರಾಜಕೀಯ ಪಕ್ಷ)ದ ಪ್ರಧಾನ ಕಾರ್ಯದರ್ಶಿಗಳ ಆದೇಶದ ಮೇರೆಗೆ ದೆಹಲಿಯ ಮೂಲೆ ಮೂಲೆಯಲ್ಲೂ ಅಂದು ‘ಪರಿಶಿಷ್ಟ ಜಾತಿಗಳ ಒಕ್ಕೂಟ’ದ ನೀಲಿ ಬಾವುಟವನ್ನು ಹಾರಿಸಲಾಗುತ್ತದೆ. ಅಂಬೇಡ್ಕರರಿಗೆ ದೀರ್ಘಾಯುಷ್ಯ ದೊರಕಲಿ ಎಂದು ದೇಶದ ಉದ್ದಗಲಕ್ಕೂ ಅಂದು ಪ್ರಾರ್ಥಿಸಲಾಗುತ್ತದೆ. ಪರಿಶಿಷ್ಟರ ಮನೆಗಳು ಅಂದು ರಾತ್ರಿ ಪೂರಾ (ಏಪ್ರಿಲ್ 13) ವಿದ್ಯುದ್ದೀಪಗಳಿಂದ ಬೆಳಗುತ್ತವೆ. ಒಟ್ಟಾರೆ ಇಡೀ ದೇಶ ಅಂದು ಅಂಬೇಡ್ಕರರ 55ನೇ ಜನ್ಮದಿನದ ಸಂದರ್ಭವನ್ನು ಸಂತಸ ಸಂಭ್ರಮದಿಂದ ಆಚರಿಸುತ್ತದೆ.

ಅಂಬೇಡ್ಕರರು ಬದುಕಿದ್ದಾಗಲೇ ಆರಂಭಗೊಂಡ ಅವರ ಜನ್ಮದಿನದ ಅಂತಹ ಸಂತಸ, ಸಂಭ್ರಮ ಇನ್ನೂ ನಿಂತಿಲ್ಲ. ಅದು ನಿಲ್ಲುವುದೂ ಇಲ್ಲ. ಆದರೆ ಮರೆಯಬಾದ್ದೆಂದರೆ ಶೋಷಿತರಿಗೆ ಅವರು ನೀಡಿರುವ ‘ತ್ಯಾಗದ ಕಥೆ’ಯ ಆ ಅಮರ ಸಂದೇಶ. ಹಾಗೆಯೇ ಶೋಷಿತರಲ್ಲಿ ಹೋರಾಟದ ಕೆಚ್ಚನ್ನು ತುಂಬುವ ಅವರ ಆ ಧನ್ಯತೆಯ ಪ್ರಾರ್ಥನೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending