Connect with us

ದಿನದ ಸುದ್ದಿ

‘ಸರಕಾರ’ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಯಾಗಬಾರದು

Published

on

  • ಬಿ.ಪೀರ್ ಬಾಷ

ಮುಖ್ಯಮಂತ್ರಿ, ಸಾರಿಗೆ ಮಂತ್ರಿಗಳೇ;
ಹಣಗಳಿಸಲು ಸರಕಾರದಿಂದ ಬೇರೆ ವ್ಯಾಪಾರ ನಡೆಸಿ, ಬಡವರ ಒಡಲಿಗೆ ಬೆಂಕಿ ಇಡಬೇಡಿ.

ಕರೊನಾ ಎಂಬ ಸಿರಿವಂತರು ಹುಟ್ಡಿಸಿದ ಮಾರಿಬೇನೆಗೆ ಬಡವರು ಒಡಲು ಬೆಂದು ಹೋಗುತ್ತಿದೆ. ಹಾಗೆ ದುಡುತ್ತಿರುವ ಒಡಲಿಗೆ ಕೊಳ್ಳಿ ತಿವಿಯುವ ಕೆಲಸ ಬಹುಶಃ ಕಳ್ಳನೂ, ಕಟುಕನೂ, ಕಡುಪಾಪಿಯೂ ಮಾಡಲಾರ. ಆದರೆ ನಮ್ಮ ಸರಕಾರ ಏನು ಮಾಡುತ್ತಿದೆ?

ಎರಡು ಹೊತ್ತಿನ ತುತ್ತನ್ನು ಗಳಿಸಿಕೊಳ್ಳಲು ಬೆಂಗಳೂರಿಗೆ ಬಂದು, ಕಂಡಲ್ಲಿ ಜೋಪಡಿ ಕಟ್ಟಿಕೊಂಡು, ಕಲ್ಲು ಹೂಡಿ ಒಲೆಮಾಡಿ ಅನ್ನದಕಾಳು ಕುಚ್ಚಿಕೊಂಡು ಉಂಡು ಮಲಗುತ್ತಿದ್ದ ಕೂಲಿ ಸಾವಿರಾರು ಕಾರ್ಮಿಕರು ಲಾಕ್‌ಡೌನ್ ಆದ ಕ್ಷಣದಿಂದ ತತ್ತರಿಸಿಹೋಗಿದ್ದಾರೆ. ಅವರವರ ಹಳ್ಳಿಗಳಲ್ಲಿದ್ದಿದ್ದರೆ ಗಂಜಿ ಕುಡಿದು ಅಂಗಳದಲ್ಲಾದರೂ ಮಲಗುವ ಸಮಾಧಾನವಾದರೂ ಇರುತ್ತಿತ್ತು. ಇಲ್ಲಿ ಈ ಶಹರದಲ್ಲಿ, ಹಗಲು ಕೂಲಿಯಿಲ್ಲವೆಂದರೆ ರಾತ್ರಿ ಊಟವಿಲ್ಲ, ಇಂತಹ ಸ್ಥಿತಿಯಿರುವಾಗ ಕಳೆದ ಸು. ಒಂದೂವರೆ ತಿಂಗಳಿನಿಂದ ಅದು ಹೇಗೆ ಬದುಕಿರಬಹುದು? ಅವರ ಕಣ್ಣುಗಳಿಂದ ಅದೆಷ್ಟು ನೀರು ಹರಿದಿರಬಹುದು? ಹಸಿದು ಅಳುವ ಮಕ್ಕಳನ್ನು ಹೇಗೆ ಸುಮ್ಮನಿರಿಸಿರಬಹುದು?

ಹೇಗಾದರೂ ಮಾಡಿ ಊರು ಮುಟ್ಟಿದರೆ ಸಾಕೆಂದು, ಲೆಕ್ಕಹಾಕಿ ಸರಿಯಾಗಿ ಬಸ್ ಚಾರ್ಜ್ ಗೆ ಆಗುವಷ್ಟು ಹಣವನ್ನು ಸೀರೆ ಸೆರಗಿನಲ್ಲಿ, ಸೊಂಟದ ಮಡಿಕೆಯಲ್ಲಿ ಗಂಟು ಗಂಟಿಕೊಂಡು ಊರಿಗೆ ಹೋಗಬಹುದು ಎಂಬ ಸುದ್ದಿ ಕೇಳುತ್ತಲೇ ಬಸ್ಟ್ಯಾಂಡಿಗೆ ಬಂದರೆ ಇಲ್ಲಿ ದುಪ್ಪಟ್ಟು, ಮೂರುಪಟ್ಟು ಬಸ್ ಚಾರ್ಜ್ ಎಂದು ಹೇಳಿದರೆ ಅವರಿಗೆ ಎಷ್ಟು ಸಂಕಟವಾಗಿರಲಿಕ್ಕಿಲ್ಲ. ಬೆಳಗಾವಿಗೆ 800ಬಾಗಲಕೋಟೆಗೆ 700 ರೂ ಇದ್ದ ಬಸ್ ಚಾರ್ಜು, ಏಕಾಏಕಿ ಬೆಳಗಾವಿಗೆ1478 ಬಾಗಲಕೋಟೆಗೆ 1311ಎಂದರೆ ಇದು, ಹಸಿದ ಬಡವನ ಬುತ್ತಿಯಿಂದ ರೊಟ್ಟಿಕಸಿಯುವ ನಾಯಿಗಿಂತಲೂ ಕೀಳಾದ ಕೆಲಸವಲ್ಲವೇ?

ಆನಂದ್ ಸಿಂಗ್ ರಂತಹ ಧಣಿಗಳು ವಿಮಾನವನ್ನೇ ಬಾಡಿಗೆಗೆ ಪಡೆದು ವಿದೇಶದಲ್ಲಿದ್ದ ಮಕ್ಕಳನ್ನು ಕರೆದುಕೊಂಡು ಬಂದರು. ದೇಶದ ಸರಕಾರವೂ ಲಕ್ಷಾಂತರ ಸಂಬಳ ಪಡೆಯುವವರನ್ನು, ಕೋಟ್ಯಾಂತರ ತೆರಿಗೆ ಕಟ್ಟುವವರನ್ನು ವಿಶೇಷ ವಿಮಾನಗಳಿಂದ ಕರೆತರುವ ಪ್ರಯತ್ನವನ್ನೂ ಮಾಡೀತು? ಆದರೆ ಈ ಬಡಜೀವಿಗಳ ಇವರಿಗ್ಯಾವ ಲೆಕ್ಕ? ಸತ್ತರೆ ಮರ್ಯಾದೆ ಹೋದೀತೆಂಬ ಕಾರಣಕ್ಕೆ ಅಗ್ಗದ ರೇಷನನ್ನು ಕೊಡುವಂತೆ ಮಾಡಿ ಫೋಟೋ ತೆಗೆದಿಕೊಂಡರೆ ಸಾಕು ಜನೋಪಕಾರಿಯೆಂದು ಹೇಳಿಕೊಳ್ಳಲು. ಇನ್ನು ಬೆಂಗಳೂರೆಂಬ ಮಾಯಾನಗರದಲ್ಲಿ ಬದುಕೆಂಬ ಬದುಕೇ ಮೂರಾಬಟ್ಟೆಯಾಗಿ ಬಿಸಿಲಲ್ಲಿ ಬಾಡಿ ಗಾಳಿಪಾಲಾಗಿ ಕಸದಗುಂಟ ಹರಿದು ಹಂಚಿಹೋಗಿರುವ ಹೊತ್ತು ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಿಗೆ ಇಂಥವರ ಬಗ್ಗೆ ಖಬರು ಇಲ್ಲವೆಂದರೆ ಏನು ಮಾಡಬೇಕು?

ಇಂಥ ಕೂಲಿ ಕಾರ್ಮಿಕರ ಸಂಖ್ಯೆ ಈಗ ದೇಶದಲ್ಲಿ ಹದಿನೈದಿಪ್ಪತ್ತು ಕೋಟಿಗೂ ಹೆಚ್ಚು. ಇವರು ಈಗ ಟಿ.ವಿ.ಚಾನೆಲುಗಳಿಗೆ ಸುದ್ದಿಯ ವಸ್ತುವಲ್ಲ. ಅವರಿಗಿರುವ ಉಮೇದಿಯೇ ಬೇರೆ. ಇನ್ನು ಸರಕಾರಗಳಿಗೆ ಕಾಪಾಡಬೇಕಿರುವುದು ಯಾರ ಹಿತಾಸಕ್ತಿಯನ್ನು? ಅದೂ ಆಗಿಯೇ ಹೋಯಿತು! ಸಾವಿರಾರು ಕೋಟಿ ಲೂಟಿಯೂ ಮಾಫ್ ಆಯಿತು!!

ಆದರೆ ಇಂಥ ವಿಶ್ವಜಗದ್ಗುರು ಮಹಾನುಭಾವರು ಅವರ ಪಟಾಲಂಗಳ ಸರಕಾರಗಳಿಗೆ ಕೂಲಿಕಾರ್ಮಿಕರನ್ನು ಉಚಿತವಾಗಿ ಅವರವರ ಮನೆಗಳಿಗೆ ಸರಕಾರಿ ಬಸ್ಸಿನಲ್ಲಿ ಮನೆ ಸೇರಿಸುವ ಯೋಗ್ಯತೆಯೂ ಇಲ್ಲದಾಯಿತೇ? ನಾಚಿಕೆಗೇಡು! ಅದು ಹೋಗಲಿ, ಇಂತಹ ಹೊತ್ತಿನಲ್ಲಿ ಬಸ್ ಚಾರ್ಜ್ ಪಡೆದು ಬಸ್ ಹತ್ತಿಸಿಕೊಂಡರೂ ನಾಚಿಕೆಗೇಡೇ ಆದರೂ ಇನ್ನು ಡಬಲ್ ತ್ರಿಪಲ್ ಚಾರ್ಜು ಪೀಕುತ್ತಾರೆ ಎಂದರೆ ಇದೊಂದು ಸರಕಾರವಾ ಅಥವಾ ? ಮನುಷ್ಯತ್ವ ಇರುವ ಯಾರಿಗಾದರೂ ಸಿಟ್ಟು ಬರದೇ ಇದ್ದೀತೇ?

ಹಸಿದು ಅಳುವ ಕೂಸಿಗೆ ನಾಲ್ಕು ರೂಪಾಯಿಯ ಬಿಸ್ಕೀಟು ಕೊಡಿಸಲು ಕಣ್ಣೀರು ತಂದುಕೊಳ್ಳುತ್ತಿರುವ ತಂದೆತಾಯಿಗಳು ಅಂತಹ ಆರೇಳು ವರ್ಷದ ಮಕ್ಕಳಿಗೂ ಸಾವಿರಾರು ರೂಪಾಯಿ ಬಸ್ ಚಾರ್ಜು ಕೊಡಬೇಕು ಎಂದರೆ…ಎದೆಯೊಡೆಯದಿದ್ದೀತೇ? ಹಣವೇ ಇಲ್ಲದವರು ಏನು ಮಾಡಬೇಕು? ಅವರವರ ಊರ ಮುಖ ನೋಡದೇ ಬೀದಿ ಹೆಣವಾಗಬೇಕೇ? ಏನಾಗಿದೆ ಈ ಸರ್ಕಾರಕ್ಕೆ? ಏನು ತುಂಬಿದೆ ಈ ಅಧಿಕಾರಿಗಳ ತಲೆಯಲ್ಲಿ? ಸಾವಿರಾರು ಕೋಟಿ ಆಗಬೇಕಾದಲ್ಲಿ ಆಗಿದೆ. ಆದರೆ ಈ ನಷ್ಟವನ್ನು ಬಡವರ ಬುತ್ತಿಗಂಟು ಕಸಿದು ಭರ್ತಿ ಮಾಡಿಕೊಳ್ಳಬೇಕೇ?

ಕೊಲ್ಲುವುದಷ್ಟೇ ಅಲ್ಲ, ಸಾವೇ ಸುಖ ಎಂಬಷ್ಟು ಕಷ್ಟ ಕೊಡುವುದು ಕೊಲೆಗಿಂತಲೂ ಕ್ರೂರ ನಡವಳಿಕೆ. ಇಂತಹ ಸ್ಥಾನದಲ್ಲಿ ಈಗ ಸರಕಾರಗಳೇ ಇವೆ ಎಂಬುದು ನಿಜಕ್ಕೂ ಮಾರಿಬೇನೆಗಿಂತಲೂ ಭೀಕರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

Published

on

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕ ಕಡಿತದಿಂದ ತೊಂದರೆಗೆ ಒಳಗಾಗಬಾರದು ಹಾಗೂ ಆನ್‌ಲೈನ್ ಪೇಮೆಂಟ್ ಬಳಸದವರ ಅನಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಯಾಗಿದೆ ಎಂದು ಹೇಳಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿ ಗಳಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ. ಗೃಹ ಜ್ಯೋತಿಯೋಜನೆ ಅಡಿ ಶೂನ್ಯ ಬಿಲ್ ಪಡೆಯುತ್ತಿರುವ ಗ್ರಾಹಕರ ಹಿಂಬಾಕಿ ಶೂನ್ಯವಿದ್ದಲ್ಲಿ ಈ ಬಗ್ಗೆ ಚಿಂತಿಸಬೇಕಿಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

Published

on

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಈ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ ಅದರಂತೆ ಬೆಂಗಳೂರು ಜನತೆ ಮನೆ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನ ಮೂರ್ತಿಗಳನ್ನು ಜಲ ಮೂಲಗಳಲ್ಲಿ ವಿಸರ್ಜಿಸಲು ಬೆಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಇನ್ನೂ ಗಣೇಶ ಚತುರ್ಥಿ ವಿಶೇಷವಾಗಿ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತ್ತೆ ಅನೇಕ ಸಚಿವರು ಹಾಗೂ ಗಣ್ಯರು ಶುಭ ಹಾರೈಸಿದ್ದಾರೆ.

ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮದ್ಯಪಾನಾಸಕ್ತರು ಗಲಭೆಮಾಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ ನಿಯಮಗಳಡಿ ಇಂದಿನಿಂದ ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು ಸೆಪ್ಟೆಂಬರ್ 11 ರಂದು ಮಧ್ಯಾಹ್ನ 2 ರಿಂದ ಮದ್ಯರಾತ್ರಿ 12.00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ನೈಸರ್ಗಿಕವಾಗಿ ತಯಾರಿಸಿದ ಮಣ್ಣಿನ ಗಣೇಶನ ವಿಗ್ರಹಗಳನ್ನು ಮಾತ್ರ ಬಳಸುವ ಮೂಲಕ ಕೆರೆ, ನದಿ ಮೂಲಗಳು ಕಲುಷಿತಗೊಳಿಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending