Connect with us

ನೆಲದನಿ

ನುಡಿಯ ಒಡಲು-06 : ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ

Published

on

  • ಡಾ‌. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಭಾಗ-02

ಬರಹದ ಮೊದಲ ಭಾಗದಲ್ಲಿ ಮನುಷ್ಯ ಘನತೆ ಮತ್ತು ಭಾಷಿಕ ಕ್ರಿಯೆ ಎಂಬೀ ಎರಡೂ ಪರಿಕಲ್ಪನೆಗಳ ನಡುವಣ ನಂಟಸ್ತಿಕೆಯನ್ನು ಕುರಿತು ಕೆಲವು ತಾತ್ವಿಕ ಸಂಗತಿಗಳನ್ನು ಚರ್ಚಿಸಲಾಗಿದೆ. ಈ ಭಾಗದಲ್ಲಿ ಮನುಷ್ಯ ಘನತೆಯ ಪ್ರಾಥಮಿಕ ನೆಲೆಗಳನ್ನು ಭಾಷಿಕ ಆಯಾಮಗಳ ಮೂಲಕ ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ.

ಮನುಷ್ಯ ಘನತೆಯ ಪ್ರಶ್ನೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಚರ್ಚೆಯಾಗುವುದು, ಪ್ರಮುಖವಾಗಿ ಕಾನೂನು ದಾಖಲೆಗಳಲ್ಲಿ. ಅಂದರೆ ಕಾನೂನು ಪರಿಭಾಷೆ ಮತ್ತು ಪರಿಕಲ್ಪನೆಗಳಲ್ಲಿ ಪ್ರಕಟಗೊಳ್ಳುತ್ತದೆ. ಕೆಲವು ನಿರ್ದಿಷ್ಟ ಕಾನೂನಾತ್ಮಕ ವಿವರಗಳ ಮೂಲಕ ಈ ಮನುಷ್ಯ ಘನತೆ ಎನ್ನುವ ಪರಿಕಲ್ಪನೆಯನ್ನು ಯಾವುದೇ ಒಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಮರ್ಥನೆಗಳನ್ನು ಮಂಡಿಸಲು ಬಳಸಲಾಗುತ್ತದೆ.

ಸಹಜವಾಗಿಯೇ ಆಯಾ ಸಂದರ್ಭಕ್ಕೆ ಅನುಸಾರವಾಗಿ ಈ ಪರಿಕಲ್ಪನೆಯ ವಿನ್ಯಾಸಗಳು ಕಾನೂನಾತ್ಮಕ ದಾಖಲೆಗಳಲ್ಲಿ ವ್ಯತ್ಯಾಸವಾಗುತ್ತವೆ. ಆದರೆ ಈ ಎಲ್ಲ ನಿಬಂಧನೆಗಳಿಗೆ ಮನುಷ್ಯ ಘನತೆಯನ್ನು ಎತ್ತಿಹಿಡಿಯುವ ಉದ್ದೇಶವೇ ಮುಖ್ಯವಾಗುತ್ತದೆ. ಉದಾಹರಣೆಗಾಗಿ ರಾಷ್ಟ್ರ-ಅಂತರ್ರಾಷ್ಟ್ರ ಮಟ್ಟದ ಕಾನೂನು ಪರಿಕರ ಮತ್ತು ದಾಖಲೆಗಳ ಪರಿಭಾಷೆ ಹಾಗೂ ಭಾಷಿಕ ಕ್ರಿಯೆಯನ್ನು ಪರಿಶೀಲಿಸಿದರೆ, ಭಾಷಿಕ ಕ್ರಿಯೆಯ ವ್ಯಾಪಕತೆ ಎಂತಹದು ಅನ್ನುವುದು ನಮಗೆಲ್ಲ ಅರ್ಥವಾಗುತ್ತದೆ.

ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ‘ನಾವು ಭಾರತೀಯರು...’ ಎಂಬ ಉದ್ಗಾರದಿಂದ ಶುರುವಾಗುವ ಈ ಹೇಳಿಕೆಯ ಮೊದಲ ಉದ್ದೇಶವೇ ನಮ್ಮೆಲ್ಲರ ನಡುವಣ ಘನತೆ ಮತ್ತು ಸಂಬಂಧವನ್ನು ಸೂಚಿಸುವುದಾಗಿದೆ. ಹಾಗಾಗಿ ಜಾತ್ಯತೀತತೆ, ಧರ್ಮನಿರಪೇಕ್ಷತೆ ಎಂಬೆಲ್ಲ ಪದಗಳನ್ನು ನೆಲೆಗೊಳಿಸಲು ಕಾರಣವೇ ಮನುಷ್ಯ ಘನತೆಯನ್ನು ಮನಗಾಣಲು ನಮಗೆ ಬೇಕಾಗಿರುವುದು ಕೇವಲ ನಾವು ಮನುಷ್ಯರು ಮತ್ತು ಆ ಅಸ್ತಿತ್ವದಲ್ಲಿ ಯಾವುದೇ ಭೇದಭಾವ ಇರಕೂಡದು ಎಂಬ ತಿಳಿವಳಿಕೆ ಮಾತ್ರ ಸಾಕು ಅನ್ನುವುದಾಗಿದೆ.

ಹೊರತು ನಮ್ಮ ಅಸ್ತಿತ್ವ, ಅಸ್ಮಿತೆ, ಘನತೆಗಳನ್ನು ಅರಿಯಲು ಯಾವುದೇ ಜಾತಿ, ಧರ್ಮ, ಪ್ರದೇಶ, ಭಾಷೆ, ಲಿಂಗ ಇತ್ಯಾದಿ ಸಂಗತಿಗಳ ಮಹತ್ವದ ಮೇಲೆ ವ್ಯಕ್ತಿಗಳ ಘನತೆಯನ್ನು ಅಳಿಯುವುದಾಗಲೀ ಇಲ್ಲವೇ ಮೌಲ್ಯನಿರ್ಣಯ ಮಾಡುವುದಾಗಲೀ ಕೊನೆಯಪಕ್ಷ ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿ ಪರಿಭಾವಿಸಕೂಡದು ಅನ್ನುವ ತಾತ್ಪರ್ಯವನ್ನು ಇಲ್ಲಿ ಕಾಣುತ್ತೇವೆ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮನುಷ್ಯ ಘನತೆಯನ್ನು ಪ್ರತಿಪಾದಿಸುವ ದಾಖಲೆಗಾಗಿ, ದಿ ಚಾರ್ಟರ್ ಆಫ್ ಯುನೈಟೆಡ್ ನೇಶನ್ಸ್ (1945) ಪೀಠಿಕೆಯಲ್ಲಿ ನಿರೂಪಿಸಲಾದ ಹೇಳಿಕೆಗಳನ್ನು ಇಲ್ಲಿ ಗಮನಿಸಬಹುದು. ‘ಮುಂಬರುವ ಪೀಳಿಗೆಗಳನ್ನು ಯುದ್ಧದ ಭೀಕರತೆ ಮತ್ತು ದುಖದಿಂದ ರಕ್ಷಿಸಬೇಕು.
ಇಂತಹ ಯುದ್ಧಗಳಿಂದ ಈಗಾಗಲೇ ನಾವು ಕೇಳರಿಯದ ದುಖವನ್ನು ನಮ್ಮ ಬದುಕಿನವಧಿಯಲ್ಲಿ ಎರಡುಸಲ ಕಂಡಿದ್ದೇವೆ. ಮಾನವ ಹಕ್ಕು ಮತ್ತು ಮನುಷ್ಯ ಘನತೆಯಲ್ಲಿ ನಂಬಿಕೆಯನ್ನು ಮರುಪ್ರತಿಪಾದಿಸಬೇಕಿದೆ.ಯಾವುದರ ಮೂಲಕ ಮನುಷ್ಯ ಘನತೆ, ಗಂಡು-ಹೆಣ್ಣುಗಳ ನಡುವಣ ಸಮಾನ ಹಕ್ಕುಗಳು ಹಾಗೂ ದೊಡ್ಡ ಮತ್ತು ಚಿಕ್ಕ ದೇಶಗಳು ಎಂಬ ಭೇದವಿಲ್ಲದ ವಾತಾವರಣವನ್ನು ಸೃಷ್ಟಿಸಬೇಕೆಂದು ನಾವು ಯುನೈಟೆಡ್ ರಾಷ್ಟ್ರಗಳ ಜನತೆ ನಿರ್ಧರಿಸಿದ್ದೇವೆ’. ಈ ಘೋಷಣೆಯ ಹಿಂದಿನ ತಾತ್ವಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಇಲ್ಲಿ ಬಳಸಲಾದ ಪದಗಳ ಮೂಲಕ ಅರಿಯಲು ಸಾಧ್ಯ.

ಇಲ್ಲಿಯ ಯಾವುದೇ ಪದವು ನಿಶ್ಚಿತವೂ ಮತ್ತು ನಿರಂತರವೂ ಆಗಿರುವ ಅರ್ಥವನ್ನು ಹೊಂದಿರುವುದಿಲ್ಲ. ಆದರೆ ಆಯಾ ಸನ್ನಿವೇಶಗಳ ಮೂಲಕ ನಾವು ಘನವಾದ ಮತ್ತು ತೆಳುವಾದ ಅರ್ಥಗಳನ್ನು ಪರಿಭಾವಿಸುತ್ತೇವೆ. ಇದು ಕೇವಲ ಯಾದೃಚ್ಛಿಕವಾಗಿ (ದಿಟ, ಪ್ರಾಥಿಮಿಕ ಅರ್ಥಗಳು ಯಾದೃಚ್ಛಿಕವಾಗಿಯೇ ಇರುತ್ತವೆ) ನಡೆಯುವುದಲ್ಲ. ಸನ್ನವೇಶಗಳು ಅಗಾಧವಾದ ಪಾತ್ರವನ್ನು ವಹಿಸುತ್ತವೆ. ಇದಕ್ಕೆ ಪ್ರಮುಖ ಕಾರಣವೇ ಭಾಷಿಕ ಕ್ರಿಯೆಗಳು ಎಂಬುದು ಇಲ್ಲಿ ನಿರ್ವಿವಿವಾದ.

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ (1948) ಪೀಠಿಕೆಯಲ್ಲಿಯೂ ಈ ಬಗೆಯ ಸಂಗತಿಗಳನ್ನೇ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಂದರೆ ಈ ಜಗತ್ತಿನ ಮನುಷ್ಯರೆಲ್ಲರಲ್ಲಿ ಅಂತರ್ನಿಹಿತವಾದ ಘನತೆ ಮತ್ತು ಮನುಷ್ಯ ಸಮೂಹಗಳಿಗೆ ಸಮಾನ ಮತ್ತು ಆತ್ಯಂತಿಕವಾದ ಹಕ್ಕುಗಳನ್ನು ಮಾನ್ಯಗೊಳಿಸಬೇಕು.

ಈ ಜಗತ್ತಿನಲ್ಲಿ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿಯನ್ನು ನೆಲೆಗೊಳಿಸಲು ಇವುಗಳು ಅಡಿಪಾಯವಾಗಿವೆ. ಆದರೆ ಈ ಮಾನವ ಹಕ್ಕುಗಳ ಬಗೆಗೆ ನಿರ್ಲಕ್ಷ್ಯ ಹಾಗೂ ತಿರಸ್ಕಾರವು ಅನಾಗರಿಕ ಕೃತ್ಯಗಳಿಗೆ ಕಾರಣವಾಗಿವೆ. ಇದು ಮಾನವಕುಲದ ಆತ್ಮಸಾಕ್ಷಿಯನ್ನೇ ಕೆರಳಿಸಿದೆ. ಇಡೀ ಜಗತ್ತಿನ ಮನುಷ್ಯರಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ನಂಬಿಕೆ ಹಾಗೂ ಭಯದಿಂದ ಬಿಡುಗಡೆಯನ್ನು ನೆಲೆಗೊಳಿಸಲು ಇದು ಒತ್ತಾಸೆಯಾಗುತ್ತದೆ.

ಸಾಮಾನ್ಯ ಜನರ ಆಶೋತ್ತರಗಳನ್ನು ಎತ್ತಿಹಿಡಿಯುವ ಮಹತ್ತರವಾದ ಘೋಷಣೆ ಇದಾಗಿದೆ. ಮನುಷ್ಯ ಘನತೆ ಮತ್ತು ಮಾನವ ಹಕ್ಕುಗಳು ಎಂಬೀ ಎರಡೂ ಪರಿಕಲ್ಪನೆಗಳು ಪ್ರತ್ಯೇಕ ಮತ್ತು ಪರಸ್ಪರ ಅವಲಂಬಿತವೆಂದು ಯಾರಾದರೂ ಹೇಳಬಹುದು. ಆದರೆ ಇದುವರೆಗೂ ಯಾರು ಕೂಡ ಈ ಎರಡೂ ಪರಿಕಲ್ಪನೆಗಳ ನಡುವಣ ಪರಸ್ಪರ ಅವಲಂಬನೆಯನ್ನು ಯಾವುದೇ ವ್ಯವಸ್ಥಿತ ಮತ್ತು ಸ್ಪಷ್ಟ ಸೂತ್ರಗಳ ಮೂಲಕ ವ್ಯಾಖ್ಯಾನಿಸಿಲ್ಲ ಅನ್ನುವುದು ಗಮನಾರ್ಹ.

ವಿಶ್ವಸಂಸ್ಥೆಯ ಇನ್ನೆರಡು ನಡೆಗಳನ್ನು ಅವಲೋಕಿಸಿದರೆ, ಈ ಪರಿಕಲ್ಪನೆಗಳ ನಡುವಿನ ನಂಟಸ್ತಿಕೆಯನ್ನು ಇನ್ನಷ್ಟು ನಿಚ್ಚಳಗೊಳಿಸುತ್ತವೆ. ವಿಶ್ವಸಂಸ್ಥೆಯ ಚಾರ್ಟರ್ನಲ್ಲಿ ಘೋಷಿಸಲಾದ ತತ್ವಗಳಿಗೆ ಪೂರಕವಾಗಿ, ಮನುಷ್ಯನ ಅಂತರ್ಗತ ಘನತೆಯನ್ನು ಮತ್ತು ಇಡೀ ಜಗತ್ತಿನ ಮನುಷ್ಯರಲ್ಲಿ ಸಮಾನ ಹಾಗೂ ಆತ್ಯಂತಿಕ ಹಕ್ಕುಗಳನ್ನು ಮಾನ್ಯ ಮಾಡುವುದರಿಂದ ಈ ಲೋಕದ ಜನರ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಯನ್ನು ನಿರಂತರಗೊಳಿಸುವಲ್ಲಿ ಇವು ಅಡಿಪಾಯವಾಗುತ್ತವೆ.

ಮನುಷ್ಯನ ಅಂತರ್ಗತ ಘನತೆಯಿಂದಲೇ ರೂಪಿಸಲಾಗುವ ಈ ಹಕ್ಕುಗಳನ್ನು ಮಾನ್ಯಗೊಳಿಸುವುದು ಮುಖ್ಯ. ವಿಶ್ವಸಂಸ್ಥೆಯ ಈ ದಾಖಲೆಗಳು ಹೇಳುವಂತೆ, ಮನುಷ್ಯ ಘನತೆ ಎಂಬುದು ಅತ್ಯಂತ ಶ್ರೇಷ್ಠವಾದ ಮೌಲ್ಯವಾಗಿದೆ ಎಂದು ಪರಿಗಣಿಸುತ್ತವೆ. ಇದು ಮಾನವ ಹಕ್ಕುಗಳಿಂದ ಮಾತ್ರ ಪ್ರತ್ಯೇಕಗೊಳ್ಳುವುದಷ್ಟೆಯಲ್ಲ, ಆ ಪರಿಕಲ್ಪನೆಯನ್ನೇ ಪಲ್ಲಟಗೊಳಿಸಿದೆ. ಮನುಷ್ಯ ಘನತೆಯಿಂದಲೇ ಮೈದಾಳಿದ ಈ ಮಾನವ ಹಕ್ಕುಗಳ ಪರಿಕಲ್ಪನೆ ಆ ನಂತರದಲ್ಲಿ ತನ್ನದೆಯಾದ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿದೆ.

ಎಷ್ಟೋ ಸನ್ನಿವೇಶಗಳಲ್ಲಿ ಈ ಮನುಷ್ಯ ಘನತೆಯ ಗುಣಗಳು ಎಂತಹವು ಎನ್ನುವುದನ್ನು ಸ್ಪಷ್ಟಪಡಿಸದೇ ಕೇವಲ ಒಂದು ಕಾನೂನಿನ ಪದವನ್ನಾಗಿ ಬಳಸಲಾಗುತ್ತದೆ. ಮನುಷ್ಯ ಘನತೆಯ ಮೂಲತತ್ವಗಳಾವವು? ಅನ್ನುವುದನ್ನು ಈ ಕಾನೂನು ಪದಕೋಶವು ನಿಚ್ಚಳಗೊಳಿಸದು. ಹಾಗಾಗಿ ಭಾಷಿಕ ನಿರೂಪಣೆಗಳು ನಮ್ಮ ಸಾಮಾಜಿಕ ವಿವೇಕವನ್ನು ಹೇಗೆ ಪ್ರಕಟಿಸುತ್ತವೆ ಎಂಬ ಸಂವೇದನೆಯನ್ನು ಹೊಂದುವುದು ಅವಶ್ಯ.

ಸಾಮಾಜಿಕ ಅಂತಸ್ತಿಗೆ ಅನುಗುಣವಾಗಿ ಮನುಷ್ಯ ಘನತೆಯನ್ನು ಸೂಚಿಸುವ ಭಾಷಿಕ ಕ್ರಿಯೆಗಳೇ ನಮ್ಮನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಸಮರ್ಥಿಸುತ್ತವೆ. ಹೀಗೆ ಏರ್ಪಡುವ ಅಸಮಾನತೆ ಇಲ್ಲವೇ ತಾರತಮ್ಯವನ್ನು ಅಳಿಸಲು ಬೇಕಾಗುವ ಪರಿಕರವೇ, ಈ ಮನುಷ್ಯ ಘನತೆ.

ಆದ್ದರಿಂದ ಭಾರತೀಯ ಸಂವಿಧಾನವು ತನ್ನೆಲ ನಾಗರಿಕರಲ್ಲಿ ಸಹೋದರತ್ವ/ಭ್ರಾತೃತ್ವವನ್ನು ಉತ್ತೇಜಿಸುವ ಮೂಲಕ ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಐಕ್ಯತೆಯನ್ನು ಸಾಧಿಸಲು ಆಶಿಸುತ್ತದೆ. ಹಾಗಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವ್ಯಕ್ತಿ ಘನತೆಯ ಮಹತ್ವವನ್ನು ಆಳವಾಗಿ ಬಲ್ಲವರಾದ್ದರಿಂದ, ಸ್ವಾತಂತ್ರ್ಯ (ಲಿಬರ್ಟಿ), ಸಮಾನತೆ (ಇಕ್ವಿಟಿ) ಹಾಗೂ ಸಹೋದರತ್ವ (ಫ್ರೆಟರ್ನಿಟಿ) ಎಂಬೀ ತ್ರಿಕೂಟ (ಟ್ರಿನಿಟಿ) ಪರಿಕಲ್ಪನೆಗಳನ್ನು ರೂಪಿಸಿದರು ಹಾಗೂ ಅವುಗಳಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನೂ ಕೊಟ್ಟರು.

ಒಟ್ಟಿನಲ್ಲಿ ಈ ತ್ರಿಕೂಟ ಪರಿಕಲ್ಪನೆಗಳ ತಾತ್ಪರ್ಯವೇನೆಂದರೆ, ಮನುಷ್ಯ ಘನತೆಯನ್ನು ಉಲ್ಲಂಘಿಸಲಾಗದು ಅನ್ನುವುದಾಗಿದೆ. ಈ ಎಲ್ಲ ವಿಶ್ಲೇಷಣೆಗಳ ಮೂಲಕ ಸ್ವಾತಂತ್ರ್ಯ, ದೇಶದ ಐಕ್ಯತೆ, ನ್ಯಾಯಸಮ್ಮತ ಸಮಾಜ, ಒಗ್ಗಟ್ಟು ಮೊದಲಾದ ಶ್ರೇಷ್ಠ ಮೌಲ್ಯಗಳ ಜೊತೆಗೆ ಮನುಷ್ಯ ಘನತೆಯನ್ನು ಅತ್ಯಂತ ಶ್ರೇಷ್ಠ ಮೌಲ್ಯವೆಂದು ಮನಗಾಣಲಾಗಿದೆ. ನೈತಿಕತೆಯ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ. ಸಂವಿಧಾನದ ಆಶಯವೇ ಇದಾಗಿರುತ್ತದೆ.

ಆದರೆ ಈ ಎಲ್ಲ ಮೌಲ್ಯಗಳನ್ನು ಕೇವಲ ಕಾನೂನಾತ್ಮಕ ಪದಕೋಶದಂತೆ ಪರಿಗಣಿಸಿದಾಗ, ನೈತಿಕತೆಯೂ ಇರುವುದಿಲ್ಲ ಹಾಗೂ ಮನುಷ್ಯ ಘನತೆ ಎಂಬುದು ನೆಲೆಗೊಳ್ಳಲು ಸಾಧ್ಯವಾಗುವುದಿಲ್ಲ. ಆವಾಗ ನಮ್ಮ ಸಂವಿಧಾನದ ಆದರ್ಶ ಮತ್ತು ಆಚರಣೆಗಳ ನಡುವೆ ಅಗಾಧವಾದ ಕಂದಕ ಏರ್ಪಡುತ್ತದೆ.

ಇದುವರೆಗೂ ಗಮನಿಸಿದಂತೆ, ಮನುಷ್ಯ ಘನತೆಯ ಭಾಷಿಕ ರೂಪಗಳು ಕಾನೂನಾತ್ಮಕ ಪರಿಕರಗಳಲ್ಲಿ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಹೇಗೆ ಸಮರ್ಥಿಸುವ ಕ್ರಿಯೆಯಾಗಿದೆ ಅನ್ನುವುದನ್ನು ನೋಡಿದೆವು. ಅಂದರೆ ಮನುಷ್ಯ ಘನತೆ ಎನ್ನುವುದು ಕೇವಲ ಕಾನೂನಾತ್ಮಕ ಪರಿಕಲ್ಪನೆಯಲ್ಲ ಬದಲಾಗಿ ಬದುಕಿನ ಕೆಲವು ನಿರ್ದಿಷ್ಟ ತತ್ವಗಳನ್ನು ವ್ಯಕ್ತಪಡಿಸುತ್ತದೆ.

ವಾಸ್ತವದಲ್ಲಿ, ಈ ಮನುಷ್ಯ ಘನತೆ ಎಂಬುದು ನೈತಿಕ-ತಾತ್ವಿಕ ಪರಿಕಲ್ಪನೆಯೂ ಆಗಿರುತ್ತದೆ. ಇತರೆ ನೈತಿಕ ಪರಿಕಲ್ಪನೆಗಳಿಗೆ ಇರುವಂತೆ ಹಲವು ಬಗೆಯ ಅರ್ಥ ವಿನ್ಯಾಸ ಹಾಗೂ ಸಾಧ್ಯತೆಗಳು ಸಂದರ್ಭಕ್ಕೆ ಅನುಗುಣವಾಗಿ ಈ ಪರಿಕಲ್ಪನೆಯ ಸನ್ನಿವೇಶದಲ್ಲಿಯೂ ಹಲವು ಭಾಷಿಕ ಕ್ರಿಯೆಗಳ ಮೂಲಕ ಏರ್ಪಡುತ್ತವೆ. ಹಾಗಾಗಿ ಈ ಪರಿಭಾಷೆಯನ್ನು ಘನವಾದ ಮತ್ತು ತೆಳುವಾದ ಅರ್ಥಗಳಲ್ಲಿ ಬಳಸಲಾಗುತ್ತದೆ. ‘ನೈತಿಕ ಪದಗಳು ಸಂಕುಚಿತ ಮತ್ತು ವ್ಯಾಪಕವಾದ ಅರ್ಥಗಳನ್ನು ಹೊಂದಿರುತ್ತವೆ.ಆಯಾ ಸನ್ನಿವೇಶಗಳ ಪ್ರಮಾಣಕ್ಕೆ ಅನುಗುಣವಾಗಿ ಈ ಎರಡೂ ಸಾಂದರ್ಭಿಕ ಅರ್ಥಗಳನ್ನು ನಾವು ಬಳಸುತ್ತೇವೆ. ವಿಭಿನ್ನ ಸನ್ನಿವೇಶದಲ್ಲಿ ಇವುಗಳು ಅತ್ಯಂತ ಸೂಕ್ತವಾಗಿರುತ್ತವೆ ಮತ್ತು ವಿಭಿನ್ನ ಉದ್ದೇಶಗಳನ್ನು ಪೊರೈಸುತ್ತವೆ’ (1994,2) ಎಂದು ಮೈಕಲ್ ವಾಲ್ಜರ್ ಸ್ಪಷ್ಟವಾಗಿ ಹೇಳುತ್ತಾರೆ. ಇದನ್ನು ಇನ್ನಷ್ಟು ವಿಷದೀಕರಿಸಿ ನೋಡಿದರೆ, ಮನುಷ್ಯ ಘನತೆಯೊಂದಿಗೆ ಹೆಣೆದುಕೊಂಡಿರುವ ಭಾಷಿಕ ಕ್ರಿಯೆಗಳ ನಡುವಣ ಮುಖ್ಯವಾದ ವ್ಯತ್ಯಾಸಗಳನ್ನು ಈ ನೈತಿಕ ಅರ್ಥಗಳು ಪ್ರತಿಬಿಂಬಿಸುತ್ತವೆ.

ವ್ಯಾಪಕ ಅರ್ಥದಲ್ಲಿ ಇದನ್ನೊಂದು ನೈತಿಕ ಪರಿಕಲ್ಪನೆಯನ್ನಾಗಿ ಬಳಸಿದರೆ, ಮನುಷ್ಯ ಘನತೆಯು ‘ಮಾನವ’ ಮತ್ತು ‘ಘನತೆ’ ಎಂಬ ಎರಡೂ ಮೂಲಭೂತ ಹಾಗೂ ಪರಸ್ಪರ ಅಂತರ್ಸಂಬಂಧವನ್ನು ಹೊಂದಿರುವ ಆಯಾಮಗಳನ್ನು ಸೂಚಿಸುತ್ತದೆ. ವಾಸ್ತವದಲ್ಲಿ ಘನತೆಯ ಪ್ರಜ್ಞೆಯು ಈ ಲೋಕ ಮತ್ತು ಲೋಕದ ಜನರನ್ನು ನಾವು ಪರಿಭಾವಿಸುವ ವಿಧಾನದಲ್ಲಿಯೇ ಅಂತರ್ಗತವಾಗಿರುತ್ತದೆ.

ಡಾ.ಮೇಟಿ ಮಲ್ಲಿಕಾರ್ಜುನ್, ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಆದರೆ ಮಾನವ ಎಂಬ ಪದವು ನಮ್ಮ ಪ್ರಜ್ಞೆ ಇಲ್ಲವೇ ಸೂಪ್ತಪ್ರಜ್ಞೆಯ ಮೂಲಕ ಮನುಷ್ಯ ಸ್ವಭಾವದ ಗ್ರಹಿಕೆಗಳಿಗೆ ಸಂಬಂಧಿಸಿರುತ್ತದೆ. ಲೋಕದ ವರ್ತನೆ, ಮೌಲ್ಯ ಹಾಗೂ ಪ್ರಾಪಂಚಿಕ ಬದುಕಿನ ಗುಣಲಕ್ಷಣಗಳನ್ನು ಮೌಲ್ಯ ನಿರ್ಣಯವನ್ನು ಮಾಡುವಲ್ಲಿ ಈ ಪ್ರಜ್ಞೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಒಟ್ಟಂದದಲ್ಲಿ ಮನುಷ್ಯ ಘನತೆ ಎಂಬೀ ವ್ಯಾಪಕ ಅರ್ಥವು ನೈತಿಕ ದೃಷ್ಟಿಕೋನಗಳನ್ನು ರೂಪಿಸುತ್ತದೆ. ಅಂದರೆ ಮನುಷ್ಯ ಬದುಕಿನ ಅಸ್ತಿತ್ವವೇ ಪ್ರಧಾನ ವಿನ್ಯಾಸವಾಗಿ, ಜಾತಿ, ಮತ, ಧರ್ಮ, ಭಾಷೆ, ಲಿಂಗ, ಪ್ರದೇಶಗಳು ಕೇವಲ ಸಾಮಾಜಿಕ ಭಿನ್ನತೆಯ ವಿನ್ಯಾಸಗಳಾಗುತ್ತವೆ.

ಮನುಷ್ಯ ಸಮೂಹದ ಘನತೆಯನ್ನು ಎತ್ತಿಹಿಡಿಯುವ ಇಂತಹ ಹಲವು ಸನ್ನಿವೇಶಗಳನ್ನು ನಮ್ಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಗಳಲ್ಲಿಯೂ ಕಾಣುತ್ತೇವೆ. ಉದಾ.ಗೆ ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯನ್ನಾಗಿ ಬಳಸಿಕೊಂಡಿರುವ ಈ ಮಾತುಗಳ ತಾತ್ಪರ್ಯವೂ ಮನುಷ್ಯ ಘನತೆಯ ಮಹತ್ವವನ್ನು ಕಂಡರಿಯುವ ಬಗೆಯಾಗಿದೆ.

ಯಾರೂ ಮುಖ್ಯರಲ್ಲ ಅಮುಖ್ಯರೂ ಅಲ್ಲ,

ಯಾವುದೂ ಯಃಕಷ್ಚಿತವಲ್ಲ

ಯಾವುದಕ್ಕೂ ಮೊದಲಿಲ್ಲ

ಯಾವುದಕ್ಕೂ ತುದಿಯಿಲ್ಲ

ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ

ಕೊನೆ ಮುಟ್ಟುವುದೂ ಇಲ್ಲ,

ಕೊನೆ ಮುಟ್ಟುವುದೂ ಇಲ್ಲ,

ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲ ಊ ತೀರ್ಥ”.

ಕುವೆಂಪು

ಈ ಪೀಠಿಕೆಯ ಮೂಲಕ ಮೈದಾಳಬಹುದಾದ ಭಾಷಿಕ ಕ್ರಿಯೆಗಳು ಮತ್ತು ಅರ್ಥಗಳನ್ನು ಯಾವುದೇ ಸೀಮಿತ ಸನ್ನಿವೇಶಕ್ಕೆ ಮಾತ್ರ ಸಂಬಂಧಿಸಿ ಹೇಳಲು ಸಾಧ್ಯವಿಲ್ಲ. ಆದರೆ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ನಿರೂಪಿಸಿದ ಪಾತ್ರಗಳನ್ನು ಇಡೀಯಾಗಿ ಅವಲೋಕಿಸಿದರೆ, ಕುವೆಂಪು ಅವರ ಈ ಮಾತುಗಳಿಗೆ ನಿಶ್ಚಿತವಾಗಿಯೂ ಒಂದು ಮಹತ್ವ ದೊರೆಯುತ್ತದೆ.

ಅಂದರೆ ಇಡಿಯಾಗಿ ಮನುಷ್ಯ ಘನತೆಯ ಮಹತ್ವವನ್ನು ಸಾರುವ ನುಡಿಗಳಾಗಿ ಈ ಮಾತುಗಳು ಇಲ್ಲಿ ಸಾಕ್ಷಿಯಾಗುತ್ತವೆ. ಇದಕ್ಕೆ ಪೂರಕವಾಗಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಮಾಜವಾದಿ ತತ್ವವನ್ನು ಕುವೆಂಪು ಅವರು ಅತ್ಯಂತ ಬಲವಾಗಿ ನಂಬಿದ್ದರು.

ಇವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ನೈತಿಕ ಮತ್ತು ತಾತ್ವಿಕ ಸ್ಪಷ್ಟತೆಯನ್ನು ನೋಡುತ್ತೇವೆ ಹಾಗೂ ಮನುಷ್ಯ ಘನತೆಯನ್ನು ಪರಿಪೂರ್ಣವಾಗಿ ನಂಬಿದ್ದ, ಕುವೆಂಪು ಅವರ ಕಾದಂಬರಿಗಳ ಬಗೆಗೆ ಪ್ರೊ. ಬಿ ಕೃಷ್ಣಪ್ಪನವರು ‘ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನಕ್ರಮ’ ಎಂಬ ಮಹತ್ವದ ಲೇಖನವನ್ನು ಬರೆದಿರುವರು. ಈ ಲೇಖನದಲ್ಲಿ ಇವರು ಎತ್ತಿರುವ ಪ್ರಶ್ನೆಗಳು ತಾತ್ವಿಕವಾಗಿ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳಾಗಿ ಸರಿಯಾಗಿವೆ.

ಏಕೆಂದರೆ ಮನುಷ್ಯ ಘನತೆಯ ಪ್ರಶ್ನೆಯನ್ನೇ ವಿಶೇಷವಾಗಿ ದಲಿತ ಮತ್ತು ವಂಚಿತ ಸಮುದಾಯಗಳನ್ನು ಕೇಂದ್ರವಾಗಿಟ್ಟುಕೊಂಡ ಈ ಘನತೆಯ ಪ್ರಶ್ನೆಗಳು ಇಲ್ಲಿ ಮಹತ್ವವನ್ನು ಪಡೆಯುತ್ತವೆ. ಹಾಗಾದರೆ ಮನುಷ್ಯ ಘನತೆ ಕುರಿತ ಕುವೆಂಪು ಮತ್ತು ಕೃಷ್ಣಪ್ಪನವರ ನಡುವಣ ಗ್ರಹಿಕೆಗಳು ಪರಸ್ಪರ ಭಿನ್ನವಾಗಿವೆಯೇ? ಅಥವಾ ಸಾಹಿತ್ಯ ನಿರೂಪಣೆಗಳ ಬಗೆಗೆ ಈ ತರಹದ ಪ್ರಶ್ನೆಯನ್ನು ಕೇಳುವುದೇ ತಪ್ಪೇ? ಎನ್ನುವ ಅನುಮಾನಗಳೂ ಇಲ್ಲಿ ತಲೆಯೆತ್ತುತ್ತವೆ.

ಕನ್ನಡ ಸಾಹಿತ್ಯ ವಿಮರ್ಶೆಯ ಲೋಕ ಕೃಷ್ಣಪ್ಪವರ ಪ್ರಶ್ನೆಯೊಳಗೆ ಅಂತರ್ಗತವಾಗಿರುವ ಮನುಷ್ಯ ಘನತೆಯ ಪ್ರಶ್ನೆಯನ್ನೇ ನಗಣ್ಯಗೊಳಿಸಿವೆ. ಸಮಾಜ ವಿಜ್ಞಾನದ ಪ್ರಶ್ನೆಯನ್ನಾಗಿ ಪರಿಗಣಿಸಿ ಕೃಷ್ಣಪ್ಪನವರ ಪ್ರಶ್ನೆಯ ಘನತೆಯನ್ನು ಸಾಹಿತ್ಯ ವಿಮರ್ಶೆಯಲ್ಲಿ ತಳ್ಳಿಹಾಕಲಾಗಿದೆಯೇ? ಕುವೆಂಪು ಮತ್ತು ಕೃಷ್ಣಪ್ಪನವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗಳ ನಡುವೆ ಇಂತಹದೊಂದು ಕಂದಕವನ್ನು ಸಾಹಿತ್ಯ ವಿಮರ್ಶೆಯಲ್ಲಿ ಯಾಕೇ ಸೃಷ್ಟಿಸಲಾಗಿದೆ? ಅಂದರೆ ಕೃಷ್ಣಪ್ಪನವರ ಪ್ರಶ್ನೆಯನ್ನು ಕನ್ನಡ ವಿಮರ್ಶೆ ನಿಭಾಯಿಸಿದ ಬಗೆಯಲ್ಲಿಯೇ ಸಮಸ್ಯೆಗಳಿವೆ ಎನ್ನುವುದನ್ನು, ಈ ಕುರಿತ ವಾಗ್ವಾದಗಳಿಂದ ಗ್ರಹಿಸಬಹುದು. ಒಟ್ಟಿನಲ್ಲಿ ಮನುಷ್ಯ ಘನತೆಯನ್ನು ನಿರ್ವಹಿಸಿದ ಚರ್ಚೆಗಳೂ ಒಂದು ಸಾರ್ವತ್ರಿಕ ತಾತ್ವಿಕ ಚೌಕಟ್ಟನ್ನು ರೂಪಿಸಿ ಆ ಮೂಲಕ ಮನುಷ್ಯ ಘನತೆಯ ಸವಾಲುಗಳನ್ನು ನಾವು ಎದುರುಗೊಂಡಿಲ್ಲ ಅನ್ನುವುದು ಈಗಲಾದರೂ ನಮಗೆ ಮನವರಿಯಾಗುತ್ತದೆ ಅಂದುಕೊಂಡಿರುವೆ.

ಈ ಸಮಸ್ಯೆಗಳನ್ನು ಅತ್ಯಂತ ವ್ಯಾಪಕವಾಗಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೇ ನೋಡುತ್ತೇವೆ. ಉದಾ.ಗೆ ನಡೆ, ನುಡಿ, ಉಡಿಗೆ, ಆಹಾರ, ಜಾತಿ, ಧರ್ಮ, ಲಿಂಗ ಮೊದಲಾದ ವಿದ್ಯಮಾನಗಳನ್ನು ಕುರಿತ ವಚನಕಾರರ ನಿಲುವುಗಳ ಆಶಯವು ಮನುಷ್ಯ ಘನತೆಯನ್ನು ನೆಲೆಗೊಳಿಸುವುದೇ ಆಗಿರುತ್ತದೆ. ಇಲ್ಲಿಯೂ ಇಂತಹದೇ ಕಂದಕವನ್ನು ಹಲವು ವಚನಕಾರರಲ್ಲಿ ಕಾಣುತ್ತೇವೆ.

ಕಾರಣವೇನೆಂದರೆ, ವಚನಕಾರರ ಪೂರ್ವಾಶ್ರಮದ ವಾಸನೆ ಮತ್ತು ಕಳಂಕ, ಈ ಮನುಷ್ಯ ಘನತೆಯನ್ನು ಪಡೆದುಕೊಳ್ಳುವಲ್ಲಿ ಹೇಗೆ ಬಿಕ್ಕಟ್ಟುಗಳನ್ನು ರೂಪಿಸಿವೆ ಅನ್ನುವುದನ್ನು ವಚನ ವಾಂಜ್ಞಮಯದಲ್ಲಿ ಕಾಣುತ್ತೇವೆ. ಈ ಕುರಿತು ಸಾಕಷ್ಟು ಚರ್ಚೆಗಳನ್ನು ಬೆಳಸಬಹುದು ಆದರೆ ಈ ಬರಹದ ವ್ಯಾಪ್ತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ.

ಈ ಟಿಪ್ಪಣಿಯ ಚರ್ಚೆಗಳ ತಲೆಬರಹವು ‘ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ’ ಎಂದಾಗಿದೆ. ಆದರೆ ಪಗಗಳನ್ನೋ ಇಲ್ಲವೇ ವಾಕ್ಯಗಳನ್ನೋ ಉಲ್ಲೇಖಿಸಿ ಪ್ರತಿಯೊಂದಕ್ಕೂ ಇದು ಈ ಅರ್ಥ ಅದು ಆ ಅರ್ಥ ಎಂದು ವಿವರಣಾತ್ಮಕ ನಿದರ್ಶನಗಳನ್ನು ಕೊಡದೆ, ಇಡೀ ಭಾಷಿಕ ಸಂಕಥನದಲ್ಲಿ ಹಾಗೂ ನಾವು ನಮ್ಮ ಬದುಕಿನಲ್ಲಿ ರೂಪಿಸುವ ಸಂಕಥನಗಳ ಮೂಲಕ ಮನುಷ್ಯ ಘನತೆಯ ಪ್ರಶ್ನೆಯನ್ನು ಹೇಗೆ ನಿರ್ವಹಿಸುತ್ತೇವೆ? ಮತ್ತು ನಿಭಾಯಿಸಿದ್ದೇವೆ? ಪರಿಣಾಮವಾಗಿ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಇಂದಿನ ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿಯೂ ನಾವು ಹೇಗೆ ಅನುಭವಿಸುತ್ತೇವೆ.

ಹಾಗೂ ಮನುಷ್ಯ ಅಸ್ತಿತ್ವ ಮತ್ತು ಸ್ವಭಾವಗಳೊಡನೆ ತಳುಕು ಹಾಕಿಕೊಂಡಿರುವ ಈ “ಮನುಷ್ಯ ಘನತೆ”ಯೆಂಬ ಮೂಲಭೂತ ಪರಿಕಲ್ಪನೆಯನ್ನು ಅರಿಯದೇ, ಅದು ಹೇಗೆ ಪ್ರಜಾಸತ್ತಾತ್ಮಕ ಹಾಗೂ ನ್ಯಾಯಸಮ್ಮತ ಬದುಕನ್ನು ನಾವು ಬದುಕಲು ಸಾಧ್ಯ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

Published

on

  • ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ

ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು

ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.

ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.

ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.

ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ

ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.

ಮಹಿಳಾ ದಿನಾಚರಣೆಯ ಇತಿಹಾಸ

ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:

1. 1908 – ಮಹಿಳಾ ಹಕ್ಕುಗಳ ಹೋರಾಟ:

ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.

2. 1909 – ಮೊದಲ ಮಹಿಳಾ ದಿನಾಚರಣೆ:

ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.

3. 1910 – ಅಂತಾರಾಷ್ಟ್ರೀಯ ಹೋರಾಟ:

ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.

4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:

ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.

5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:

1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.

6. 1975 – ವಿಶ್ವ ಮಹಿಳಾ ವರ್ಷ:

UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು

7. 2011 – 100ನೇ ವಾರ್ಷಿಕೋತ್ಸವ:

2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.

ಮಹಿಳಾ ದಿನಾಚರಣೆಯ ಉದ್ದೇಶ

ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.

ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ

ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.

ಮಹಿಳೆಯರು ಬದುಕಿನ ಉತ್ಸಾಹ

ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಾಧನೆಗಳ ಬೆಳಕು

1. ಶಿಕ್ಷಣ ಮತ್ತು ಸಶಕ್ತೀಕರಣ:

ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

2. ಉದ್ಯೋಗ ಹಾಗೂ ಉದ್ಯಮಶೀಲತೆ:

ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

3. ಕ್ರೀಡೆ ಮತ್ತು ಸಾಹಸ:

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.

4. ಸಮಾಜಸೇವೆ ಮತ್ತು ಪ್ರಭಾವ:

ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.

ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ

ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.

ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್

ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.

“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಮ್ಮ‌ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

Published

on

  • ಹರ್ಷಕುಮಾರ್ ಕುಗ್ವೆ

ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.

ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ.‌ ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.

ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು..‌. ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.

‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು.‌.. ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತ‌ವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.

ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು.‌ ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು.‌ ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.

ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!

– ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅತ್ಮಕತೆ | ನೀರು ಸಾಬರೂ – ಎಸಿ ಮದನಗೋಪಾಲರೂ..

Published

on

  • ರುದ್ರಪ್ಪ ಹನಗವಾಡಿ

ಮಧ್ಯೆ ನಂಜನಗೂಡು ಪಕ್ಕದ ತಾಲ್ಲೂಕಾದ ಗುಂಡ್ಲುಪೇಟೆಯಿಂದ ರಾಜಕಾರಣಿಯಾಗಿದ್ದ ಅಬ್ದುಲ್ ನಜೀರ್ ಸಾಬ್ ಅವರು ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ಬೋರ್‌ವೆಲ್ ತೆಗೆಸಿ ಗ್ರಾಮೀಣ ಜನರಿಗೆ ಸ್ವಚ್ಛ ಕುಡಿಯುವ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರು. ಜನಪರ ಮಂತ್ರಿಗಳೂ ಆಗಿದ್ದರು.

ಗುಂಡ್ಲುಪೇಟೆಯಲ್ಲಿ ಭೂಸ್ವಾಧೀನ ಪ್ರಕರಣದಲ್ಲಿ ತಮ್ಮ ಸಂಬಂಧಿಕರೊಬ್ಬರ ಜಮೀನಿಗೆ ತಿರುಗಾಡಲು ದಾರಿಗಾಗಿ ಭೂಸ್ವಾಧೀನಪಡಿಸಲು ಹಿಂದಿನ ಎಸಿ ಅವರ ಅಳಿಯಂದಿರೇ ಆಗಿದ್ದ ಎಸ್.ಎ. ಸಾದಿಕ್ ಅವರು ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ರ‍್ಕಾರಕ್ಕೆ ಸಲ್ಲಿಸಿದ್ದರು. ಆದರೆ ಪುನಃ ಅದು ವಿಚಾರಣೆಗೆ ಬಂದಾಗ ಈ ಭೂಸ್ವಾಧೀನವು ಸಾರ‍್ವಜನಿಕರ ಹಿತ ಕಾಯುತ್ತಿಲ್ಲವೆಂದು ಮದನ್ ಗೋಪಾಲ್ ಅವರು ಆ ಪ್ರಸ್ತಾವನೆಯನ್ನು ರದ್ದುಗೊಳಿಸಲು ಸರ‍್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಭೂಸ್ವಾಧೀನ ಪ್ರಕರಣವನ್ನು ಮಂತ್ರಿಗಳ ಸಲಹೆ ಮೇರೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದು, ನಂತರ ಅದನ್ನು ಕೈಬಿಟ್ಟ ಬಗ್ಗೆ ನಜೀರ್ ಸಾಬ್ ಅವರು ಎಸಿ ಮದನ್ ಗೋಪಾಲ್ ಮೇಲೆ ಕೆಂಡಾಮಂಡಲವಾಗಿದ್ದರು. ಎಷ್ಟೇ ಅನುಭವೀ, ನಿಸ್ಪೃಹ ರಾಜಕಾರಣಿಯಾಗಿದ್ದರೂ ನಜೀರ್ ಸಾಬ್ ಅವರು ತಾವು ಹೇಳಿದ ಕೆಲಸ ಮಾಡದ ನೌಕರ ಎಸಿ ಮದನ್ ಗೋಪಾಲ್ ಮೇಲೆ ಕಂದಾಯ ಮಂತ್ರಿ ಮತ್ತು ಜಿಲ್ಲಾಧಿಕಾರಿಗಳ ಎದುರು ತಮ್ಮ ಅಸಮಾಧಾನವನ್ನು ಹೊರಹಾಕಿ ಕೂಗಾಡಿದ್ದರು.

ಇದೇ ಕಾರಣಕ್ಕಾಗಿ ಮದನ್ ಗೋಪಾಲ್ ಅವರನ್ನು ಕೆಲವೇ ದಿನಗಳಲ್ಲಿ ನಂಜನಗೂಡು ಉಪ ವಿಭಾಗದಿಂದ ಬೇರೆಡೆಗೆ ರ‍್ಗಾವಣೆ ಕೂಡ ಮಾಡಲಾಗಿತ್ತು. ಅವರ ವರ್ಗಾವಣೆಯನ್ನು ವಿರೋಧಿಸಿ ಸರ‍್ವಜನಿಕರು, ನಂಜಗೂಡು, ಗುಂಡ್ಲುಪೇಟೆಗಳಲ್ಲಿ ಯಶಸ್ವಿ ಬಂದ್ ಮಾಡಿ ಪ್ರತಿಭಟಿಸಿದ್ದರು. ಅವರ ವರ‍್ಗಾವಣೆ ಆಗಿ ನಂತರ ಮೂರು ತಿಂಗಳಲ್ಲಿ ಯೋಗೇಂದ್ರ ತ್ರಿಪಾಠಿ ಬಂದರು. ಈ ನಡುವೆ ನಾನು, ನಂತರ ಮಂಜುನಾಥ್ ನಾಯಕ್ ಹಾಗೂ ಶಿಕ್ಷಣರ‍್ಥಿ ಎಸಿಯಾಗಿದ್ದ ಕೆ. ಶಿವರಾಂ ಅವರು ಸುಮಾರು ಮೂರು ತಿಂಗಳ ಕಾಲ ಚಾರ್ಜ್ನಲ್ಲಿದ್ದೆವು. ಮದನ್ ಗೋಪಾಲ್ ಅವರು ವೈಯಕ್ತಿಕವಾಗಿ ಕಷ್ಟಪಟ್ಟು ದುಡಿಯುವ ವ್ಯಕ್ತಿಯಾಗಿದ್ದರು. ಆದರೆ ಚುನಾಯಿತ ಪ್ರತಿನಿಧಿಗಳ ಜೊತೆ ಅತಿರೇಕದ ನೇರ ನೇರ ಹಣಾಹಣಿ ಮಾಡಿಕೊಂಡು ಅವರು ಮಾಡುತ್ತಿದ್ದ ಒಳ್ಳೆಯ ಕೆಲಸಗಳು ಹಿನ್ನೆಲೆಗೆ ಸರಿಯುತ್ತಿದ್ದವು.

ಯೋಗೇಂದ್ರ ತ್ರಿಪಾಠಿಯವರು ಬರುವ ವೇಳೆಗಾಗಲೇ ನನ್ನ ನಂಜನಗೂಡು ತಾಲ್ಲೂಕ್ ಆಡಳಿತದಲ್ಲಿ ಒಂದು ವರ‍್ಷಕ್ಕೂ ಹೆಚ್ಚು ಸಮಯ ಕಳೆದಿದ್ದೆ. ಹಾಗಾಗಿ ತ್ರಿಪಾಠಿಯವರ ಜೊತೆ ಕೆಲಸ ಕಾರ‍್ಯಗಳು ಸಲೀಸಾಗಿ ಸಾಗುತ್ತಿದ್ದವು. ಈ ಮೊದಲು ಎಸಿ ಶಿಕ್ಷಣರ‍್ಥಿಯಾಗಿದ್ದ ಕೆ. ಶಿವರಾಂ ಅವರು ಅನೇಕ ಮೌಖಿಕ ಆದೇಶಗಳನ್ನು ಹೇಳಿ ಮಾಡುವಂತೆ ನನಗೆ ನಿರ‍್ದೇಶನ ನೀಡುತ್ತಿದ್ದರು. ನಾನು ಖುದ್ದು ಭೇಟಿ ಮಾಡಿ ಅವರು ಹೇಳಿದ ಕೆಲಸಗಳನ್ನು ಮಾಡಲಿಕ್ಕಾಗದ ಕಾರಣದ ವಿವರ ನೀಡಿದರೂ ಸಮಾಧಾನಗೊಳ್ಳದೆ, ಜನರೆದುರಿಗೆ ಎಸಿ ಮಾಡಲು ಹೇಳಿದರೂ ತಹಸೀಲ್ದಾರ್ ಮಾಡದೆ ತಮ್ಮ ವಿರುದ್ಧವಿದ್ದಾರೆಂಬ ಆಭಾವನೆ ಬರುವಂತೆ ನಡೆದುಕೊಳ್ಳುತಿದ್ದರು. ಅವರಿನ್ನೂ ಶಿಕ್ಷಣರ‍್ಥಿಗಳಾಗಿದ್ದರೂ ಆಗಲೇ ತನಗೆಲ್ಲ ಗೊತ್ತು ಎಂಬ ಅಹಂನಿಂದ ವರ‍್ತಿಸುತ್ತಿದ್ದ ಕಾರಣ ಬಹುಬೇಗ ನನ್ನ ಅವರ ನಡುವೆ ವಿಶ್ವಾಸದ ಕೊರತೆಯಾಗಿ, ಏನಾದರೂ ಮಾಡಬೇಕೆಂದರೆ ಲಿಖಿತ ಆದೇಶ ಕಳಿಸಲು ಅವರ ಮ್ಯಾನೇಜರ್ ಅವರಿಗೆ ನಾನು ದೂರವಾಣಿ ಮುಖಾಂತರ ಹೇಳುತ್ತಿದ್ದೆ. ಆ ನಂತರ ಮತ್ತೆ ಕೆಲವು ದಿನಗಳಲ್ಲಿ ಅವರನ್ನು ಬೇರೆ ತಾಲ್ಲೂಕಿಗೆ ತರಬೇತಿಗಾಗಿ ಕಳಿಸಿದ ಕಾರಣ ನನ್ನ ಮನಸ್ತಾಪ ಅಲ್ಲಿಗೆ ಮುಗಿದಿತ್ತು. ಆದರೆ ಮುಂದೆ ಅನೇಕ ಬಾರಿ ಅವರೊಡನೆ ಒಡನಾಡುವ ಸಂರ‍್ಭದಲ್ಲಿ ಇದ್ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸರಳವಾಗಿ ನಡೆಸಿಕೊಂಡ ಕಾರಣದಿಂದಾಗಿ ಅವರ ಬಗ್ಗೆ ನನ್ನಲ್ಲಿದ್ದ ಕಹಿ ಕರಗಿ ಸಹಜತೆ ಮೂಡಿದೆ.

ನನ್ನ ಕಛೇರಿ ಕೆಲಸಗಳ ಜೊತೆ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳ ಸಮಯದಲ್ಲಿ ಮುಖ್ಯ ಅತಿಥಿಗಳಾಗಿ ನಮ್ಮ ಮೈಸೂರಿನ ಸಮಾಜವಾದಿ ಗೆಳೆಯರ ಜೊತೆ ಚರ್ಚಿಸಿ ಡಾ. ಎಲ್. ಬಸವರಾಜ್, ಸುಜನಾ, ಕೆ.ಎಸ್. ಭಗವಾನ್, ಕೆ. ರಾಮದಾಸ್ ಅವರನ್ನು ಕರೆಸಿ ನಮ್ಮ ತಾಲ್ಲೂಕಿನಲ್ಲಿ ಭಾಷಣ ಮಾಡಿಸುತ್ತಿದ್ದೆ. ಡಿಎಸ್‌ಎಸ್, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳ ಅನೇಕ ಮಿತ್ರರು ನನ್ನ ಒಡನಾಟದಲ್ಲಿದ್ದರು.

ಈಗ ಹೆಸರಾಂತ ಸಾಹಿತಿ ಮತ್ತು ನನ್ನ ಮಿತ್ರನಾಗಿದ್ದ ಮಾದೇವನ ಊರಾದ ದೇವನೂರಿಗೂ ಹೋದಾಗ ಅವರ ಮನೆಗೂ ಹೋಗಿ ಬಂದಿದ್ದೆ. ಕೃಷ್ಣಪ್ಪ – ಇಂದಿರಾ ಅವರು ಮಕ್ಕಳಾದ ಶಾಲಿನಿ, ಸೀಮಾ ಅವರುಗಳ ಜೊತೆ ನಂಜನಗೂಡಿಗೆ ಬಂದು ಉಳಿದು ನಂಜುಂಡೇಶ್ವರ ದೇವಸ್ಥಾನದ ಹಬ್ಬದಲ್ಲಿ ಭಾಗವಹಿಸಿದ ನೆನಪು ಈಗಲೂ ಹಸಿರಾಗಿದೆ.

ಡಿಎಸ್‌ಎಸ್‌ನ ರಾಜ್ಯ ಮಟ್ಟದ ಕಲಿಕಾ ಸಮಾವೇಶವನ್ನು (study camp ) ನಂಜನಗೂಡು ತಾಲ್ಲೂಕಿನಲ್ಲಿನ ವಿದ್ಯಾಪೀಠದಲ್ಲಿ ಕೃಷ್ಣಪ್ಪನವರು ಸುಮಾರು ಒಂದು ವಾರದ ಕಾಲ ನಡೆಸಿದ್ದರು. ಆಗ ರಾಜ್ಯದ ಮೂಲೆಮೂಲೆಗಳಿಂದ ಬಂದು ಡಿಎಸ್‌ಎಸ್‌ನ ಹೋರಾಟದ ರೂಪುರೇಷೆಗಳನ್ನು ಚರ್ಚಿಸುತ್ತಿದ್ದುದನ್ನು ನಾನು ಭಾಗವಹಿಸದಿದ್ದರೂ ತಿಳಿದುಕೊಳ್ಳುತ್ತಿದ್ದೆ.

ಡಿಎಸ್‌ಎಸ್‌ನ ಅಂದಿನ ಬಹುತೇಕ ರ‍್ಚೆಗಳು ರ‍್ಕಾರದ ನಿಷ್ಕಿçಯತೆ, ದಲಿತ ಶಾಸಕರುಗಳ ಗುಲಾಮಿತನ, ದಲಿತರ ಮೇಲಿನ ದರ‍್ಜನ್ಯ, ದಲಿತರ ಕರ‍್ಯಕ್ರಮಗಳಲ್ಲಿನ ನಿಧಾನಗತಿ ಅನುಷ್ಠಾನ, ಇಂತಹವೇ ರ‍್ಚೆಯಾಗುತ್ತಿದ್ದವು. ಅಂತಹ ಸಂಘಟನೆಗೆ ತಹಸೀಲ್ದಾರನಾಗಿ ಭಾಗಿಯಾಗುವುದು, ಸಹಕಾರ ನೀಡುವುದು ಸರಿಯಲ್ಲವೆಂದು ನನಗೆ ನಮ್ಮ ಹಿರಿಯ ಸಿಬ್ಬಂದಿ ಹೇಳುತ್ತಿದ್ದರೂ ನಾನು ನನ್ನ ಇತರೆ ಸಾಮಾನ್ಯ ಕೆಲಸಗಳಲ್ಲಿ ಹಿಂದೆ ಬೀಳದೆ ಮತ್ತು ಇತರೆ ಸಾರ‍್ವಜನಿಕರಲ್ಲೂ ಯಾವುದೇ ತಗಾದೆ ಬಾರದಂತೆ ಕೆಲಸ ನಿರ‍್ವಹಿಸಿದ್ದರಿಂದ ಬೇರಾರೂ ಆಕ್ಷೇಪಿಸುತ್ತಿರಲಿಲ್ಲ. ಆದರೆ ಆಗ ನಂಜನಗೂಡಿನವರೇ ಆಗಿದ್ದ ಡಿಎಸ್‌ಎಸ್‌ನಲ್ಲಿ ಇದ್ದವನೊಬ್ಬ ಮಾದೇವ, ಕೃಷ್ಣಪ್ಪನವರನ್ನು ವೈಯಕ್ತಿಕವಾಗಿ ದ್ವೇಷಿಸುವ ಮನಸ್ಸಿನ ವ್ಯಕ್ತಿ. ನಮ್ಮ ಕಛೇರಿಯ ಸರ‍್ವೆಯರ್ ನೌಕರನನ್ನು ಸಹಾಯ ಪಡೆದು, ನಮ್ಮ ಕಛೇರಿಯ ಬಗ್ಗೆ ಕರಪತ್ರ ಹಾಕಿ `ಭ್ರಷ್ಟಾಚಾರದ ಕೂಪ ತಾಲ್ಲೂಕು ಕಛೇರಿ’ ಎಂದೆಲ್ಲ ದೂರಿದ್ದರು. ಆದರೆ ಅದಕ್ಕೆಲ್ಲ ಕುಮ್ಮಕ್ಕು ಕೊಟ್ಟವನು ನನ್ನ ಕಛೇರಿಯ ಸರ‍್ವೆಯರ್ ಸಂಬಂಧಿ ಡಿ.ಎಸ್.ಎಸ್.ನಲ್ಲಿಯೇ ಇದ್ದವನೊಬ್ಬ ಎಂದು ನನಗೆ ತಿಳಿದು ಬಂತು.

ಜೊತೆಗೆ ನಮ್ಮ ಕಚೇರಿಯ ರ‍್ವೇಯರ್ ದೈನಂದಿನ ಕೆಲಸದಲ್ಲಿ ನಿರ‍್ಲಕ್ಷ್ಯ ತೋರುತ್ತಿದ್ದ ಕಾರಣದಿಂದ ನಾನು ಮೊದಲೇ ಅವನನ್ನು ಅಮಾನತ್ತುಗೊಳಿಸಿದ್ದೆ. ಆ ಕಾರಣ ಅವನು ನನ್ನ ಬಗ್ಗೆ ಮೊದಲೇ ಅಸಮಾಧಾನಗೊಂಡಿದ್ದ. ನಂತರದ ದಿನಗಳಲ್ಲಿ ನಾನೇನೂ ಹೇಳದಿದ್ದರೂ ಕರಪತ್ರ ಹಾಕಿದ ಬಗ್ಗೆ ಬಂದು ತನ್ನ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ. ಇದಕ್ಕೆಲ್ಲ ತನ್ನ ಭಾವ ಡಿಎಸ್‌ಎಸ್‌ನಲ್ಲಿರುವವನು ಕಾರಣ ಎಂದು ಹೇಳಿ ನನಗೆ ದಂಗುಬಡಿಸಿದ್ದ. ಇಂತಹ ವಿಷಯಗಳನ್ನೆಲ್ಲ ನಿಭಾಯಿಸುವ ಅನುಭವ ನನಗೆ ಇದ್ದುದರಿಂದ ಮತ್ತೇನು ಅದು ಬೆಳೆಯಲಿಲ್ಲ.

ನಂಜನಗೂಡಿನಲ್ಲಿ ನಾನಿರುವಾಗ ಪೋಲೀಸ್ ಇಲಾಖೆಯಲ್ಲಿ ಡಿ.ವೈ.ಎಸ್.ಪಿಯಾಗಿ ಪಿ.ಹೆಚ್. ರಾಣೆ, ಇಬ್ಬರು ಇನ್ಸ್ಪೆಕ್ಟರ್ ಮತ್ತು ನಾಲ್ಕು-ಐದು ಜನ ಸಬ್ ಇನ್ಸ್ಪೆಕ್ಟರ್‌ಗಳು ಇದ್ದರು. ನಾವೆಲ್ಲ ಊರಿನಲ್ಲಿರುವ ಯಾವುದೇ ಪ್ರತಿಷ್ಠಿತ ಮನರಂಜನೆಯ ಕ್ಲಬ್‌ಗಳಿಗೆ ಹೋಗುತ್ತಿರಲಿಲ್ಲ. ಅದರ ಬದಲು, ಪೋಲೀಸ್ ಸ್ಟೇಷನ್ ಬಳಿ ಇದ್ದ ವಿಶಾಲವಾದ ಮೈದಾನದಲ್ಲಿ ಬೆಳಗಿನ ಜಾವದಲ್ಲಿ ಬ್ಯಾಟ್‌ಮಿಂಟನ್, ಷಟಲ್ ಕಾಕ್ ಆಟ ಪ್ರಾರಂಭಿಸಿದ್ದೆವು. ಅಲ್ಲಿಗೆ ಕಂದಾಯ ಇಲಾಖೆಯಲ್ಲಿನ ವಿಎ, RI & ಸಬ್ ಇನ್ಸ್ಸ್ಪೆಕ್ರ‍್ಸ್ ಮತ್ತು ನನ್ನ ಬಿ.ಎ. ತರಗತಿಯ ಕ್ಲಾಸ್ ಮೇಟ್ ಆಗಿದ್ದ ನರಸಿಂಹಸ್ವಾಮಿ ಸೇರಿ ಒಂದೆರಡು ಘಂಟೆಗಳ ಕಾಲ ಆಟದಲ್ಲಿ ಕಳೆಯುತ್ತಿದ್ದೆವು. ಆಗಲೇ ತಾಲ್ಲೂಕಿನಲ್ಲಿನ ಸಮಸ್ಯೆಗಳನ್ನು ಸಾಂಧರ‍್ಭಿಕವಾಗಿ ಚರ‍್ಚಿಸಿ, ಶಾಂತಿ ಕಾಪಾಡಲು ಬೇಕಾದ ಕ್ರಮವಾಗಿ ಕೆಲವರನ್ನು ಒಂದೆರಡು ವಾರಗಳ ಕಾಲ ಸಬ್ ಜೈಲಿಗೆ ಕಳಿಸಲು ಕೋರುತ್ತಿದ್ದರು. ಇಲ್ಲವೇ ಪ್ರತಿ ವಾರವೂ ಹಾಜರಿರಲು ನೋಟಿಸ್ ನೀಡಿ ಬಾರದಿದ್ದಾಗ ದಸ್ತಗಿರಿ ಮಾಡಿ ತರಲು ನನ್ನಿಂದ ಅದೇಶ ಪಡೆದು ಕರೆತರುತ್ತಿದ್ದರು. ನಂತರ ವಿಚಾರಣೆ ಮಾಡಿ, ಒಳ್ಳೆಯ ನಡೆವಳಿಕೆಯ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತಿದ್ದೆವು. ಇನ್ನು ಕೆಲವು ಭಾರಿ ಈ ಎಲ್ಲ ಅಖPಅ 107 ಪ್ರಕರಣದಲ್ಲಿದ್ದ ಆಪಾದಿತರನ್ನು, ಗ್ರಾಮ ಸಹಾಯಕರನ್ನು ಒಟ್ಟುಗೂಡಿಸಿ ನಮ್ಮ ಕಛೇರಿಯ ಆವರಣದಲ್ಲಿದ್ದ ಜಾಗದಲ್ಲಿ ಗಿಡ ನೆಡಲು ಬೇಕಾದ ಗುಂಡಿ ತೆಗೆಯಲು ತೊಡಗಿಸಿ ದಿನದ ಕೊನೆಯಲ್ಲಿ ಕೇಸು ಕರೆದು ಕೇಸನ್ನು ಮುಂದೂಡುತ್ತಿದ್ದೆನು. ಹೀಗಾಗಿ ತಾಲ್ಲೂಕಿನಲ್ಲಿ, ಜಾತಿ ಜಗಳಗಳಾಗಲೀ, ದೊಂಬಿಗಳಾಗಲೀ ಮಾಡಲು ಪುಂಡ ಪೋಕರಿಗಳಿಗೆ ಅವಕಾಶವಿರುತ್ತಿರಲಿಲ್ಲ.

ತಾಲ್ಲೂಕು ಮಟ್ಟದ ನಾಯಕರು

1986ರ ನಂತರ ಶಾಸಕರುಗಳ ಜೊತೆ ಜಿಲ್ಲಾ ಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ತಾಲ್ಲೂಕುಮಟ್ಟದಲ್ಲಿ ಹೆಜ್ಜಿಗೆ ರಾಮಯ್ಯ, ದೇವನೂರ ಸಿದ್ದಪ್ಪ, ಬಸವರಾಜ್, ಕಳಲೆ ಸಿದ್ದ ನಾಯಕ್, ಶಶಿಕಲಾ ನಾಗರಾಜ್ ಮತ್ತು ಶಶಿಕಲಾ ಬಾಲರಾಜ್ ಜೊತೆಗೆ ನಂಜನಗೂಡು ಟೌನ್‌ನಲ್ಲಿ ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರೂ ಇರುತ್ತಿದ್ದರು. ಇವರೆಲ್ಲ ಸಣ್ಣಪುಟ್ಟ ಕೆಲಸಗಳಿಗೆ ಶಿಫಾರಸ್ಸು ಮಾಡಲು ತಾಲ್ಲೂಕು ಕಛೇರಿಗೆ ಬರುತ್ತಿದ್ದರು. ಆಗುವ ಕೆಲಸ ಮಾಡುವುದರಲ್ಲಿ ವಿಳಂಬವಾಗದಂತೆ, ಆಗದಿರುವ ಕೆಲಸಗಳಿಗೂ ನನ್ನ ಮಟ್ಟದಲ್ಲೇ ಅವರಿಗೆ ವಿವರಿಸಿ ಹೇಳುತ್ತಿದ್ದೆ. ಅವರುಗಳು ಒಮ್ಮೊಮ್ಮೆ ಅದೇ ವಿಷಯಗಳನ್ನು ಶಾಸಕರುಗಳ ಹತ್ತಿರವೂ ಪ್ರಸ್ತಾಪಿಸಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ನನ್ನ ವಿವರಣೆ ಶಾಸಕರುಗಳಿಗೂ ಅದೇ ಆಗಿರುತ್ತಿತ್ತು. ಹಾಗಾಗಿ ಆಗುವ ಕೆಲಸಗಳಿಗೆ ಯಾವ ಶಿಫಾರಸ್ಸು ತಂದರೂ ಆಗುವುದಿಲ್ಲ ಎಂಬ ನಂಬಿಕೆ ಅವರಿಗೆಲ್ಲ ತಿಳಿದು ಬಂದಿತ್ತು.

ಗೃಹಮಂತ್ರಿಯಾಗಿದ್ದ ರಾಚಯ್ಯನವರು ಕರ‍್ನಾಟಕ ಕಂಡ ಹಿರಿಯ ಸಜ್ಜನ ರಾಜಕಾರಣಿ. ಅವರು ತಾಲ್ಲೂಕಿನಲ್ಲಿ ಪ್ರವಾಸ ಇರುವಾಗ, `ಇತರೆ ಇಬ್ಬರು ಶಾಸಕರುಗಳು ಯುವಕರಾಗಿದ್ದ ಕಾರಣ ಏನಾದರೂ ನಿನ್ನಿಂದ ತಪ್ಪು ಮಾಡಿಸಿ, ಮುಂದೆ ನೀನಿನ್ನು ಎಸಿ, ಡಿಸಿ ಆಗಬೇಕಾದವನು, ಎಚ್ಚರದಿಂದ ಕೆಲಸ ನರ‍್ವಹಿಸಬೇಕೆಂದು’ ಸಲಹೆ ನೀಡುತ್ತಿದ್ದರು. ನನಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಸುಮಾರು 20 ವರ‍್ಷಗಳ ಅಂತರವಿದ್ದ ಅವರ ಮಾತು ನನಗೆ ನಿಜವಾದ ಕಳಕಳಿಯಿಂದ ಕೂಡಿದ ಮಾತಾಗಿತ್ತು. ಅವರಿಗೆ ಜನರಿಗೆ ಒಳ್ಳೆಯ ಆಡಳಿತ ನೀಡಿದರೆ ಸಾಕಾಗಿತ್ತು. ಮತ್ತಾವ ಒಳ ಒಪ್ಪಂದಗಳ ಮಾತು ಅವರ ಆಡಳಿತದಲ್ಲಿ ಸುಳಿಯುತ್ತಿರಲಿಲ್ಲ.

ಕಂದಾಯ ನೌಕರರ ದಿನಾಚರಣೆ

ವಿಧಾನಸಭೆ ಚುನಾವಣೆ ಆಗಿ ಮೂರು ರ‍್ಷವಾಗಿತ್ತು. ಜಿಲ್ಲಾ ಪರಿಷತ್ ಆಗತಾನೆ ಚುನಾವಣೆಗಳಾಗಿ ಹೊಸ ಸದಸ್ಯರುಗಳು ಆಯ್ಕೆಯಾಗಿದ್ದರು. ಮಾಮೂಲಿ ಕಂದಾಯ ಮತ್ತು ತಾಲ್ಲೂಕು ದಂಡಾಧಿಕಾರಿಯ ಕೆಲಸಗಳನ್ನು ಬಿಟ್ಟರೆ ಮತ್ತಾವ ಒತ್ತಡದ ಕೆಲಸಗಳು ಇರಲಿಲ್ಲ. ಹೀಗಿರುವಾಗ ಕಂದಾಯ ಅಧಿಕಾರಿಗಳು ರ‍್ಷಪರ‍್ತಿ ದುಡಿತದಲ್ಲೇ ಇದ್ದು, ಕಲೆ ಸಂಸ್ಕೃತಿ, ಸಂಗೀತದ ಬಗ್ಗೆ ಮುಖ ಮಾಡುವುದೇ ಇಲ್ಲ. ಈ ಬಗ್ಗೆ ನಾವ್ಯಾಕೆ ಇಡೀ ಜಿಲ್ಲೆಯ ನೌಕರರನ್ನು ಒಳಗೊಂಡಂತೆ 1-2ದಿನ ನಮ್ಮ ಕಂದಾಯ ನೌಕರರ ದಿನಾಚರಣೆ ಆಚರಿಸಬಾರದು ಎಂದು ನಮ್ಮ ಎಸಿ ತ್ರಿಪಾಠಿಯವರ ಜೊತೆ ಚರ‍್ಚಿಸಿ, ನಂತರ ಡಿಸಿಗೂ ಹೇಳಿದೆ.

ಎಲ್ಲ ತಹಸೀಲ್ದಾರ್ ಮಿತ್ರರೊಡನೆ ಕೂಡ ಮೌಖಿಕವಾಗಿ ಚರ‍್ಚಿಸಿ ಅವರ ಸಹಕಾರವನ್ನು ಕೋರಿದೆ. ಅದರಂತೆ, ವಿವಿಧ ಆಟಗಳ ಸ್ಪರ್ಧೆ, ಹಾಡುಗಾರಿಕೆ, ಕೊನೆಯ ದಿನದಲ್ಲಿ ಮಹಾಭಾರತದ ಕುರುಕ್ಷೇತ್ರದ ನಾಟಕ ಎಂದೆಲ್ಲ ತಯಾರಿಗಳು ನಡೆದವು. ಹುಣಸೂರು, ಮೈಸೂರು ಮತ್ತು ನಂಜನಗೂಡು ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕು ತಹಸೀಲ್ದಾರರು, ವಿಎ, ಆರ್‌ಐ ಹಾಗೂ ಕಛೇರಿ ಸಿಬ್ಬಂದಿ ಎಲ್ಲರೂ ಎಲ್ಲ ಆಟ ಪಾಠಗಳಲ್ಲಿ ಭಾಗವಹಿಸಿದ್ದರು. ಆಟಗಳಲ್ಲಿ ಕಬಡ್ಡಿ, ಬ್ಯಾಟ್ ಮಿಂಟನ್, ಷಟಲ್ ಕಾಕ್, ವಾಲಿಬಾಲ್, ಚೆಸ್ ಹೀಗೆಲ್ಲ ಸ್ರ‍್ಧೆಗಳನ್ನು ನರ‍್ವಹಿಸಲು ಎಇಓ ಅವರನ್ನು ಸಂರ‍್ಕಿಸಿ ಒಬ್ಬ ಕ್ರೀಡಾ ಅಧಿಕಾರಿಯನ್ನು ಕೋರಿದ್ದೆ. ಅವರು ಎಲ್ಲಾ ಕ್ರೀಡೆಗಳನ್ನು ವ್ಯವಸ್ಥೆಗೊಳಿಸಿ, ಆಡಿಸಿ ಬಹುಮಾನಿತರ ಪಟ್ಟಿ ನೀಡಿದ್ದರು. ನಿಯಮಿತ ಅಭ್ಯಾಸಗಳು ಇಲ್ಲದ ಆಟಗಾರರೊಬ್ಬರು ಕಬ್ಬಡಿ ಆಟದಲ್ಲಿ ಬಿದ್ದು ಅವರ ಕೈ ಮುರಿದಿತ್ತು. ಸದ್ಯ ಅವರನ್ನು ನಂಜನಗೂಡಿನಲ್ಲಿಯೇ ಉಪಚರಿಸಿ ಸುಧಾರಿಸುವಂತಾಯಿತು.

ಈ ಸಮಾರಂಭಕ್ಕೆ ಮೊದಲ ದಿನ ಎಲ್ಲಾ ಸ್ಪರ್ಧೆಗಳನ್ನು ನಡೆಸಿ ಎರಡನೇ ದಿನ ಸಮಾರೋಪ ಸಮಾರಂಭ ಮತ್ತು ನಾಟಕವಿತ್ತು. ಆಗ ಮೈಸೂರು ವಿಭಾಗಕ್ಕೆ ವಿಭಾಗಾಧಿಕಾರಿಗಳಾಗಿದ್ದ ನೀಲಕಂಠರಾಜು, ಡಿಸಿ ವಿ.ಪಿ. ಬಳಿಗಾರ್, ಹುಣಸೂರು ಎಸಿಯಾಗಿದ್ದ ಶಿವಲಿಂಗಮರ‍್ತಿ, ಮೈಸೂರು ಎಸಿ ಈಶ್ವರ್ ನಮ್ಮ ಎಸಿ ಯೋಗೇಂದ್ರ ತ್ರಿಪಾಠಿ ಎಲ್ಲ ಸಂತೋಷದಿಂದ ಭಾಗವಹಿಸಿದ್ದರು. ನಮ್ಮಲ್ಲಿದ್ದ 80 ಜನ ಗ್ರಾಮ ಸಹಾಯಕರಿಗೆ ವಿಶೇಷವಾದ ಸಮವಸ್ತ್ರ ಹೊಲಿಸಿ ಹೊಸ ಬೂಟುಗಳನ್ನು ಕೊಡಿಸಿ, ಅವರಿಗೆ ಪೋಲೀಸ್ ಪೇದೆಗಳಂತೆ ತರಬೇತಿಯನ್ನು ನೀಡಲು ನಮಲ್ಲಿಯೇ ಇದ್ದ ಕಸಬಾ ವಿಎ – ರಾಧಾಕೃಷ್ಣನಿಗೆ ಜವಾಬ್ದಾರಿ ನೀಡಿದ್ದೆ. ರಾಧಾಕೃಷ್ಣ VA ಆಗಿದ್ದರೂ ಒಬ್ಬ DSPಯಂತೆ ಪೊಲೀಸ್ ನಡವಳಿಕೆಗಳನ್ನು ರೂಢಿಸಿಕೊಂಡಿದ್ದ. ಅವನ ಕೆಳಗೆ ತರಬೇತಿಗೊಂಡ ನಮ್ಮ ಗ್ರಾಮ ಸಹಾಯಕರು ಶಿಸ್ತಿನ ಪೊಲೀಸ್ ಪೇದೆಗಳಂತೆ ನಡೆದುಕೊಳ್ಳುತ್ತಿದ್ದರು.

ಸಮಾರಂಭ ಪ್ರಾರಂಭವಾಗುವ ಮುನ್ನ ನಮ್ಮ ಗ್ರಾಮ ಸಹಾಯಕರೆಲ್ಲ ಒಟ್ಟಿಗೆ ಸಮವಸ್ತ್ರದಲ್ಲಿದ್ದು, ಪೋಲೀಸ್ ಇಲಾಖೆ ನೀಡುವ ‘ಗಾರ್ಡ್ ಆಫ್ ಆನರ್’ನಂತೆ ಎಲ್ಲ ಅತಿಥಿಗಳಿಗೂ ಗೌರವ ವಂದನೆ ನೀಡಿದಾಗ ‘you have summoned police personnel also here’ ಎಂದು ಡಿವಿಸಿ ಉದ್ಘಾರ ತೆಗೆದರು. ‘ನೋ ಸರ್, ಇವರೆಲ್ಲ ನಮ್ಮ ತಾಲ್ಲೂಕಿನ ಗ್ರಾಮ ಸಹಾಯಕರು’ ಎಂದಾಗ ಅವರು ಅಚ್ಚರಿ ವ್ಯಕ್ತಪಡಿಸಿ, ಪ್ರಶಂಸೆ ಕೂಡ ಮಾಡಿದ್ದರು. ಇಂತಹ ಕಂದಾಯ ದಿನಾಚರಣೆಯನ್ನು ನಾನು ಆಯೋಜಿಸಲು ಮುಂದಾಗಿದ್ದಕ್ಕೆ, ನರ‍್ವಹಿಸಿದ್ದಕ್ಕೆ ಡಿವಿಸಿ ಮೊದಲ್ಗೊಂಡು ಎಲ್ಲರೂ ಆಗ ನನ್ನನ್ನು ಪ್ರಶಂಸಿದರು.

ಎಲ್ಲರಿಗಿಂತಲೂ ಹೆಚ್ಚಾಗಿ ನಮ್ಮ ಎಸಿ ಯಾಗಿದ್ದ ತ್ರಿಪಾಠಿ ಅವರು ತುಂಬಾ ಖುಷಿಯಲ್ಲಿದ್ದರು. ಜೊತೆಗೆ ನಮ್ಮ ತಾಲ್ಲೂಕಿನ ಎಲ್ಲಾ ಸಿಬ್ಬಂದಿ ನಾವೆಲ್ಲ ಒಂದು ಕುಟುಂಬ ಎಂಬ ಭಾವನೆ ಮತ್ತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಏನು ಬೇಕಾದರೂ ಸಾಧಿಸಬಹುದೆಂಬ ಸದ್ಭಾವನೆ ಮೂಡುವಂತಾಗಿತ್ತು. ಕೊನೆಯಲ್ಲಿ ಕಲಿತು ಪ್ರರ‍್ಶಿಸಿದ ನಾಟಕದ ಪ್ರಥಮ ದೃಶ್ಯದಲ್ಲಿ ನಾನು ಕೃಷ್ಣನ ಪಾತ್ರಧಾರಿಯಾಗಿ ಹಾಡೊಂದನ್ನು ಹಾಡಿ ಪ್ರಾರಂಭವಾಗುವಂತೆ ನಾಟಕದ ನರ‍್ದೇಶನ ಮಾಡಿದ್ದ ಮೇಷ್ಟರು ವ್ಯವಸ್ಥೆ ಮಾಡಿದ್ದರು. ನಾನು ಕೃಷ್ಣನ ಪಾತ್ರದ ಪೋಷಾಕಿನಲ್ಲಿ ಹಾಡಿ ಸಂತೋಷಪಟ್ಟಿದ್ದು ಈಗ 35 ವರ‍್ಷಗಳ ನಂತರವೂ ಹಸಿರಾಗಿದೆ.(ಬರಹ:ರುದ್ರಪ್ಪ ಹನಗವಾಡಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending