Connect with us

ದಿನದ ಸುದ್ದಿ

ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ‘ಇಬ್ಬಡ್ಲ’ದ ಹುಚ್ಚು ಹಿಡಿಸಿಬಿಡಬಹುದು

Published

on

  • ಹರೀಶ್ ಬಿ ಎಸ್, ಸಹಾಯಕ ಪ್ರಾಧ್ಯಾಪಕರು,ತೋಟಗಾರಿಕೆ ಮಹಾವಿದ್ಯಾಲಯ,ಮೈಸೂರು

ಕ್ಯಾಕ್ರಿಕೆ, ಕೆಕ್ಕರಿಕೆ, ಇಬ್ಬಡ್ಲ, ಬನಸ್ಪತೆ…… ಕೇಳಿದ್ದೀರಾ ಈ ಹೆಸರುಗಳನ್ನು? ಕೇರಳಿಗರು ಇದಕ್ಕೆ ಕಕ್ಕರಿ ಅಥವಾ ಪೊಟ್ಟು ವಳ್ಳರಿ ಎನ್ನುವರು. ಸವಿದವರಿಗಷ್ಟೇ ಗೊತ್ತು ಇದರ ರುಚಿ, ಅದೂ ಬಿರುಬೇಸಿಗೆಯಲ್ಲಿ. ದಾಹ ತಣಿಸುವ ಯಾವುದೇ ಹಣ್ಣಿನ ರಸ ಅಥವಾ ತಂಪು ಪಾನೀಯಗಳಿಗೆ ಸಾಟಿಯಾಗಿ ನಿಲ್ಲಬಲ್ಲದು ಈ ದೇಸೀ ಹಣ್ಣು. ಉತ್ತರ ಕನ್ನಡ, ಶಿವಮೊಗ್ಗ, ತುಮಕೂರು, ಚಿತ್ರದುರ್ಗ ಹಾಗೂ ಹಾಸನ ಜಿಲ್ಲೆಯ ಕೆಲವೆಡೆ ಕಾಣಸಿಗುತ್ತದೆ. ಬಿರುಬೇಸಿಗೆಯಲ್ಲಿ ಬಿರಿದ ಈ ಹಣ್ಣಿನ ಮಂದರಸ ಅದೆಷ್ಟು ಸೊಗಸು.

ಈಗ ನೆನೆದರೂ ಮತ್ತೆ ಮತ್ತೆ ಬೇಕೆನಿಸುತ್ತದೆ. ಕರ್ನಾಟಕದಲ್ಲಿ ಇದರ ಪಾನಕ, ಪಾಯಸ ಹೆಚ್ಚೆಂದರೆ ಬಿರಿದ ಹಣ್ಣಿನ ತಿರುಳಿಗೆ ಬೆಲ್ಲ ತೆಂಗಿನ ಕಾಯಿ ತುರಿ ಸೇರಿಸಿ ಸವಿಯುವುದು ವಾಡಿಕೆ. ಬೆಳೆಯುವ ರೈತರು ವಿರಳವಾಗಿರುವುದರಿಂದ ಹಾಗೂ ಒಮ್ಮೆ ರುಚಿ ಹತ್ತಿದವರು ಮತ್ತೆ ಮತ್ತೆ ಕೊಳ್ಳಲು ಮನಸು ಮಾಡುವುದರಿಂದ ತಹಸೀಲು/ಜಿಲ್ಲಾ ಕೆಂದ್ರಗಳು ಹಾಗೂ ನಗರಗಳಲ್ಲಿ ಹಳ್ಳಿಗಾಡಿನ ಈ ಅಪ್ಪಟ ದೇಸೀ ಹಣ್ಣಿಗೆ ಬೇಡಿಕೆ ನಿರಂತರ ಹೆಚ್ಚುತ್ತಿದೆ. ಕೇರಳದ ಕೆಲ ಹೆದ್ದಾರಿಗಳ ಇಕ್ಕೆಲಗಳಲ್ಲೂ ಇದರ ಜ್ಯೂಸ್ ಮಾರುವ ಸಾಲು ಸಾಲು ಮಳಿಗೆಗಳು. ಇದರ ಕೀರ್ತಿ ಬೆಳೆದ ಅಲ್ಲಿನ ಕೆಲ ಕೃಷಿಕರಿಗೆ ಸಲ್ಲಬೇಕು.

ಬಿರಿದ ಹಣ್ಣಿನ ಪರಿಮಳಕ್ಕೆ ಮನಸೋತವರೇ ಹೆಚ್ಚು. ಇದರ ಕಾಯಿಯನ್ನು ಕೂಡ ತರಕಾರಿಯಾಗಿ, ಸಲಾಡಾಗಿ, ಉಪ್ಪಿನಕಾಯಿಯಾಗಿ ಬಳಸಬಹುದು ಜೊತೆಗೆ ಹಣ್ಣಿನ ತಿರುಳು ಬಳಸಿ ಹೆಚ್ಚು ದಿನ ಶೇಖರಿಸಿಡಬಹುದಾದ ಸಿದ್ಧ ಪೇಯ, ಸ್ಕ್ವಾಷ್, ಜಾಮ್, ಸಾಬೂನು ಮುಂತಾದ ಸಿದ್ಧ ಉತ್ಪನ್ನಗಳನ್ನು ತಯಾರಿಸಿ ಕಾಸು ಮಾಡಬಹುದೆಂಬುದು ಹೆಚ್ಚು ಜನರಿಗೆ ತಿಳಿದಿರುವುದು ಅನುಮಾನದ ವಿಚಾರ.

ನಮ್ಮ ಅರಸೀಕೆರೆಯ ಸುತ್ತ-ಮುತ್ತ ಸಾಮಾನ್ಯವಾಗಿ ಇದನ್ನು ಮಳೆಗಾಲದ ಆರಂಭದಲ್ಲಿ ಬಿತ್ತಿ ಗೌರಿಹಬ್ಬದ ಹೊತ್ತಿಗೆ ಕೊಯಿಲು ಮಾಡಿ ಮಾರುವುದು ಸಂಪ್ರದಾಯ. ಬೇಡಿಕೆ ಗಣನೀಯವಾಗಿರುವುದರಿಂದ ಬೆಳೆದವರು ತುಸು ಹೆಚ್ಚೇ ಲಾಭ ಮಾಡುತ್ತಿದ್ದಾರೆ. ಇನ್ನು ಕೆಲವೆಡೆ
ಡಿಸೆಂಬರ್ ನಲ್ಲಿ ಬಿತ್ತಿ ಬೇಸಿಗೆಗೆ ಹಣ್ಣು ಬರುವಂತೆ ಬೆಳೆದು ಮಾರುತ್ತಾರೆ.

ಇದರ ವ್ಯವಸ್ಥಿತ ಕೃಷಿ, ಸಂಸ್ಕರಣೆ ಹಾಗೂ ಮಾರಾಟಕ್ಕೆ ವಿಪುಲ ಅವಕಾಶವಿರುವುದರಿಂದ ವಾಣಿಜ್ಯ ಮಟ್ಟದಲ್ಲಿ ಬೆಳೆಯಲೂಬಹುದು; ಕಿಸೆ ತುಂಬ ಕಾಸೂ ಮಾಡಬಹುದು. ನಾವು ತಡ ಮಾಡಿದರೆ ಕೇರಳಿಗರೇ ನಮ್ಮಲ್ಲೂ ಮಳಿಗೆ ಹಾಕಿ ಮಾರಿಬಿಡುವ ಸಾಧ್ಯತೆಯಿದೆ. ಅವರಿಗೆ ಈ ಅವಕಾಶ ಕೊಡುವ ಬದಲು ನಮ್ಮ ಕೃಷಿಕರೇ ಬೆಳೆದು ಬಳಸಿ ತಮ್ಮ ಹಾಗೂ ಗ್ರಾಹಕರ ಉದರ ತಂಪು ಮಾಡುವುದರ ಜೊತೆಗೆ ಒಂದಷ್ಟು ಲಾಭಮಾಡಿಕೊಳ್ಳಬಹುದಾಗಿದೆ. ಕಲ್ಲಂಗಡಿ, ಕರಬೂಜ, ಸೌತೆ ಇತ್ಯಾದಿ ಬೆಳೆಗಳನ್ನು ನಿಖರ ಕೃಷಿ ಪದ್ಧತಿಯಲ್ಲಿ ದಶಕದಿಂದ ಬೆಳೆಯುತ್ತಿರುವ ನಮ್ಮ ಕೃಷಿಕರಿಗೆ ಇದರ ಕೃಷಿ ಖಂಡಿತ ಕಷ್ಟವಾಗಲಾರದು.

ಮಾಗಿದಾಗ ಬಿರುಕು ಬಿಟ್ಟು ಅದಿರುವ ಪರಿಸರದ ತುಂಬೆಲ್ಲ ಪರಿಮಳ ಪಸರಿಸುವುದು ಇದರ ವಿಶೇಷವಾದಾರೂ ದಿನಾರ್ಧದಲ್ಲಿ ಇದರ ಆಯಸ್ಸು ಮುಗಿಯುವುದೇ ಇದರ ಕೃಷಿಯ ವಿಸ್ತರಣೆ ಮತ್ತು ಮಾರಾಟಕ್ಕಿರುವ ದೊಡ್ಡ ತೊಡಕು. ಹಣ್ಣನ್ನು ರೆಫ್ರಿಜರೇಟಿರನಲ್ಲಿ ಇಟ್ಟರೂ ಇದರ ಮೂಲ ಗುಣಮಟ್ಟ ಕಾಯ್ದುಕೊಳ್ಳಲಾಗದು.

ಹೆಚ್ಚು ಬೆಳೆದು ಹೆಚ್ಚೆಚ್ಚು ಜನರಿಗೆ ಇದರ ಹುಚ್ಚು ಹಿಡಿಸಬಹುದು. ಬೆಳೆದ ಹಣ್ಣು ಇನ್ನೂ ಉಳಿದರೆ ನಮ್ಮ ಶಹರಗಳ ರಸ್ತೆ ಬದಿಗಳಲ್ಲಿ, ಹೋಟೆಲುಗಳಲ್ಲಿ, ಹಾಸ್ಟೆಲುಗಳಲ್ಲಿ…… ಎಲ್ಲೆಂದರಲ್ಲಿ ಮಂದರಸ ಮಾಡಿ ಮಾರಿಬಿಡಬಹುದು. ಬೆಳೆದ ಉತ್ಪನ್ನದ ಪ್ರಮಾಣ ಇನ್ನೂ ಹೆಚ್ಚಾದಲ್ಲಿ ಜಾಮು, ಸ್ಕ್ವಾಷು, ಸಾಬೂನು……ಇನ್ನೂ ಏನೇನನ್ನೋ ಮಾಡಲು ಅವಕಾಶ ಇದ್ದೇ ಇದೆ. ಇದರ ಕೃಷಿ ಹಾಗೂ ಬಳಕೆಯ ಬಗೆಗೆ ತಿಳುವಳಿಕೆ ಇರುವವರು ಹುಡುಕಿದರೆ ಖಂಡಿತ ನಮ್ಮಲ್ಲೇ ಸಿಗುವರು. ಅವರ ಜ್ಞಾನದ ದಾಖಲೆ ಮತ್ತು ಅದರ ಬಳಕೆ ಮಾಡುವ ಜಾಣ್ಮೆ ನಮ್ಮದಾಗಬೇಕಷ್ಟೆ. ಬೆಳೆಯುವುದರಲ್ಲಿ ಮುಂದಿರುವ ನಾವು ಮಾರುವುದರಲ್ಲಿ ಮುಂದಾಗಬೇಕಾದ ಅನಿವಾರ್ಯತೆಯಿದೆ. ಆಗಷ್ಟೇ ಇಬ್ಬಡ್ಲದ ಕೃಷಿಯಿಂದ ಹೆಚ್ಚಿನ ಲಾಭವಾದೀತು.

ಸದ್ಯಕ್ಕೆ ಬಹುತೇಕ ಬೆಳೆಯುವವರೆ ಮುಂದಿನ ಬೆಳೆಗೆ ಇದರ ಬೀಜ ಉಳಿಸಿಕೊಳ್ಳುತ್ತಿರುವುದು ವಾಡಿಕೆ. ಹೆಚ್ಚು ಜನ ಬೆಳೆಯಲು ಪ್ರಾರಂಭಿಸಿದರೆ ಉತ್ತಮ ಗುಣಮಟ್ಟದ ಬೀಜಕ್ಕೂ ಬೇಡಿಕೆ ಬಂದೀತು. ಆಗಲೇ ಬೆಳೆದ ಅನುಭವ ಉಳ್ಳವರು ಬೀಜೋತ್ಪಾದನೆಯನ್ನೇ ಮಾಡಲು ಅವಕಾಶವಿದೆ; ಜೊತೆಗೆ ಹೆಚ್ಚಿನ ಲಾಭವನ್ನೂ ಕೂಡ.

ನಮ್ಮ ವಿವಿಗಳು ಅದೇಕೋ ಇದರ ಬಗೆಗಿನ ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಹಿಂದೆ ಬಿದ್ದುಬಿಟ್ಟಿವೆ. ಇನ್ನಾದರೂ ಎಚ್ಚೆತ್ತುಕೊಂಡು ಇದರ ಹಿಂದೆ ಅವು ಬೀಳಲಿ ಎಂಬುದು ನಮ್ಮ ಕೃಷಿಕರ ಆಶಯ.

ಸ್ಥಳೀಯ ಬೇಡಿಕೆ, ರುಚಿ ತೋರಿಸಿದರೆ ನಗರಿಗರಿಗೂ ಇಷ್ಟವಾಗುವ ಇಬ್ಬಡ್ಲ, ಕೆಕ್ಕರಿಕೆ, ಬನಸ್ಪತ್ರೆಯ ತಾಜಾ ಹಣ್ಣು ಹಾಗೂ ಸಂಸ್ಕರಿಸಿದ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ರಾರಾಜಿಸಬಹುದು. ಏನಂತೀರಿ? ಮಾರುಕಟ್ಟೆಯಲ್ಲಿ ಸಿಕ್ಕರೆ ಮರೆಯದೆ ರುಚಿ ನೋಡಿ. ಇವುಗಳ ಕೃಷಿ ಮಾಡುವ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಲೇಖಕರನ್ನು 0821 2970411 /9480557634 ನಂಬರಿನಲ್ಲಿ ಸಂಪರ್ಕಿಸಬಹುದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ “ಕುಕಿಂಗ್ ವಿಥೌಟ್ ಫೈರ್” ಎಂಬ ಬೆಂಕಿ ರಹಿತ ಆಹಾರ ತಯಾರಿ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಲವಾರು ತಂಡಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಅಂಗವಾಗಿ ಆಹಾರ ಮೇಳವೂ ಏರ್ಪಡಿಸಲಾಯಿತು. ವಿದ್ಯಾರ್ಥಿನಿಯರು ಕಾರಟ್ ಹಲ್ವಾ, ಫ್ರೂಟ್ ಸಲಾಡ್, ಚುರಿ ಮುರಿ, ಮೊಸರು ಅವಲಕ್ಕಿ, ವಿವಿಧ ರುಚಿಯ ಜ್ಯೂಸ್‌ಗಳು, ಕೊಕೊನೆಟ್ ಬರ್ಫಿ, ಕುಕುಂಬರ್ ಬೋಟ್, ಟೊಮೇಟೊ ಚಾಟ್, ಆಪಲ್ ಪೇಡ ಮತ್ತು ಅವಲಕ್ಕಿ ಚಿತ್ರಾನ್ನ ಸೇರಿದಂತೆ ಹಲವಾರು ಪೌಷ್ಟಿಕ ಹಾಗೂ ರುಚಿಕರ ಆಹಾರಗಳನ್ನು ತಯಾರಿಸಿ ಪ್ರದರ್ಶನೆ ಮತ್ತು ಮಾರಾಟ ಮಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡು ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ

Published

on

ಸುದ್ದಿದಿನ,ದಾವಣಗೆರೆ: ಜಿಲ್ಲೆಯ 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದ ವಯೋಮಿತಿಯ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (Mandatory Biometric Update) ಮಾಡಿಸಲು ಜಿಲ್ಲಾಡಳಿತವು ವಿಶೇಷ ಅವಕಾಶ ಕಲ್ಪಿಸಿದೆ. ಜಿಲ್ಲೆಯ ಎಲ್ಲಾ ಆಧಾರ್ ಕೇಂದ್ರಗಳಲ್ಲಿ ಸೆಪ್ಟೆಂಬರ್ 30, 2026 ರವರೆಗೆ ಈ ಸೇವೆಯು ಸಂಪೂರ್ಣ ಉಚಿತವಾಗಿ ಲಭ್ಯವಿರಲಿದೆ.

ಆಧಾರ್ ನಿಯಮಗಳ ಪ್ರಕಾರ, ಮಕ್ಕಳಿಗೆ 5 ಮತ್ತು 15 ವರ್ಷ ತುಂಬಿದಾಗ ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸುವುದು ಕಡ್ಡಾಯವಾಗಿದೆ. ಈ ನವೀಕರಣದಿಂದ ಶಾಲಾ ದಾಖಲಾತಿ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು, ವಿದ್ಯಾರ್ಥಿ ವೇತನ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ.

ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್ ಮತ್ತು ಪೂರಕ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಜಿಲ್ಲೆಯ ಎಲ್ಲಾ ಪೋಷಕರು ಈ ಜವಾಬ್ದಾರಿಯನ್ನು ಅರಿತು, ನಿಗದಿತ ಅವಧಿಯೊಳಗೆ ತಮ್ಮ ಮಕ್ಕಳ ಆಧಾರ್ ನವೀಕರಿಸುವ ಮೂಲಕ ಸರ್ಕಾರದ ಯೋಜನೆಗಳು ತಲುಪಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಹಿರಿಯ ಕ್ರಿಕೆಟ್ ಪಟು ಎನ್ಆರ್‌ಎಚ್ ರಮೇಶ್ ನಿಧನ

Published

on

ಸುದ್ದಿದಿನ,ದಾವಣಗೆರೆ: ನಗರದ ಎನ್ಆರ್‌ಎಚ್‌ ಸೈಕಲ್ ಮಾರ್ಟ್ ಮಾಲೀಕ, ದಾವಣಗೆರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್‌ನ ನಾಯಕನಾಗಿದ್ದ ಎನ್.ಆರ್‌.ಎಚ್‌.ರಮೇಶ ಇಲ್ಲಿನ ಕೆಟಿಜೆ ನಗರದ 15ನೇ ಕ್ರಾಸ್‌, 2ನೇ ಮೇನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ಸಂಜನೆ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಓರ್ವ ಸಹೋದರ, ಮೂವರು ಸಹೋದರಿಯರು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ. ದಾವಣಗೆರೆ ಗಾಂಧಿ ನಗರ ಸಮೀಪದ ವೀರಶೈವ ರುದ್ರಭೂಮಿಯಲ್ಲಿ ಮೇ.7ರಂದು ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

90ರ ದಶಕದಲ್ಲಿ ದಾವಣಗೆರೆ ಸೇರಿದಂತೆ ನೆರೆ ಹೊರೆಯ ಜಿಲ್ಲೆಗಳಲ್ಲಿ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಪಂದ್ಯ, ಪಂದ್ಯಾವಳಿಗಳಲ್ಲಿ ಭರ್ಜರಿ ಸಿಕ್ಸರ್ ಭಾರಿಸುವ ಮೂಲಕ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಆಟಗಾರನಾಗಿ ರಮೇಶ ಸಾಧನೆ ಮಾಡಿದ್ದರು. ಎನ್ಆರ್‌ಎಚ್‌ ರಮೇಶ ನಿಧನಕ್ಕೆ ಎಫ್‌ಸಿಸಿ ತಂಡದ ಹಿರಿಯ ಆಟಗಾರರು, ದಾವಣಗೆರೆ ಕ್ರಿಕೆಟ್ ಕ್ಲಬ್‌ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್‌ಗಳ ಹಿರಿಯ ಆಟಗಾರರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending