Connect with us

ದಿನದ ಸುದ್ದಿ

ತೊಗೋಳಿ, ಇವನದೊಂದು ನೆನಪು ಬರೆಯುವ ಸರದಿ ಬಂದಿದೆ

Published

on

  • ಕೇಸರಿ ಹರವೂ

ಕೃಷ್ಣ ನಾಡಿಗ ನನಗಿಂತ ಎಂಟೊಭತ್ತು ವರ್ಷಕ್ಕೆ ದೊಡ್ಡವ. ಆದರೂ ‘ಹೋಗೋಲೋ, ಬಾರೋಲೋ’ ಗೆಳೆಯರಾಗಿದ್ವಿ. ನಾನು ಇವನನ್ನು ಮೊದಲು ಕಂಡಿದ್ದು 1983ರಲ್ಲಿ. ಆಗತಾನೇ ಕಾಲೇಜು ಮುಗಿಸಿ, ಕಲಾಕ್ಷೇತ್ರದಲ್ಲೂ ಒಂದಷ್ಟು ಮೊಳೆ ಹೊಡೆದು ಚಿತ್ರನಿರ್ದೇಶನವನ್ನು ಪ್ರಾತ್ಯಕ್ಷಿಕವಾಗಿ ಕಲಿಯುವ ದೆಸೆಯಿಂದ ಗಾಂಧೀನಗರ ಅಲೆಯುತ್ತಿದ್ದೆ. ಹಾಗೊಮ್ಮೆ ಆನಂದರಾವ್ ವೃತ್ತದ ಸಂಗೀತಾ ಹೋಟೆಲಿನ ರೂಮೊಂದರಲ್ಲಿ ನಿರ್ದೇಶಕ ಕೆ.ವಿ. ಜಯರಾಂ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದರು. ಅಲ್ಲಿ ನಾಡಿಗ ಪ್ರೊಡಕ್ಷನ್ ಮ್ಯಾನೇಜರ್.

ಜಯರಾಂ ‘ತಮ್ಮಲ್ಲಿ ಈಗಾಗಲೇ ನಾಲ್ಕು ಜನ ಸಹಾಯಕರಿದ್ದಾರೆ, ಮುಂದಿನ ಚಿತ್ರದಲ್ಲಿ ನೋಡೋಣ’ ಎಂದು ಹೇಳಿದ್ದರು. ಸರಿ, ಎಂದು ನಾನು ಹೊರಗೆ ಕಾರಿಡಾರಿನಲ್ಲಿ ನಡೆಯುತ್ತಿದ್ದಾಗ ಒಳಗೆ ಕುಳಿತಿದ್ದ ನಾಡಿಗ ಅದೇ ರೂಮಿಂದ ಹೊರಬಂದು ‘ಲೇ, ತಡಿಯೋ’ ಎನ್ನುತ್ತಾ ನನ್ನನ್ನು ಸೇರಿಕೊಂಡ.

‘ಈತ ಪರಿಚಯವೇ ಇಲ್ಲ, ಈಗಲೇ ಏಕವಚನವೇ? ಇದೆಂಥಾ ಚಿತ್ರರಂಗವಯ್ಯಾ!’ ಎಂದು ನನ್ನ ಈಗೋನೋ, ಸ್ವಾಭಿಮಾನವೋ ಕೆಣಕಿತ್ತು. ಹತ್ತಿರ ಬಂದವನೇ ಹಠಾತ್ತನೆ ನನ್ನ ಹೆಗಲ ಮೇಲೆ ಕೈಹಾಕಿ ‘ಬಾ, ಕೆಳಗಡೆ ಕಾಫಿ ಕುಡಿಯೋಣ’ ಎಂದು ನನ್ನನ್ನು ಎಳೆದುಕೊಂಡು ನಡೆಯತೊಡಗಿದ. ನನ್ನ ಮುಖಭಾವದಿಂದ ಅವನಿಗೆ ನನ್ನೊಳಗೆ ಏನೇನೆಲ್ಲಾ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿತ್ತೆಂದು ಕಾಣುತ್ತದೆ.

ಕಾಫಿ ಕುಡಿಯುವಾಗ ಹೇಳಿದ, ‘ಹಂಗೆ ಮಾತಾಡಿಸಿದ್ದು ನಿನಗೆ ಗುರ್ ಅಂದಿರಬೇಕು, ಅಲ್ವಾ? ನಾನು ನೀನೂ ಇದೇ ಚಿತ್ರರಂಗದಲ್ಲಿ ಕೆಲವು ದಶಕಗಳ ಕಾಲ ಒಳ್ಳೇ ಗೆಳೆಯರಾಗಿ ಜೊತೆಗಿರ್ತೀವಿ ಕಣೋ, ತುಂಬಾ ಜನರ ಜೊತೆ ಹಂಗನಿಸಲ್ಲ, ಅದಿಕ್ಕೆ ಹಂಗನ್ದೇ…” ಎಂದು ಅಜ್ಜಂಪುರದ ಜವಾರೀ ಬ್ರಾಹ್ಮಣ ಭಾಷೆಯಲ್ಲಿ, ದೊಡ್ಡ ಗಂಟಲಿನಲ್ಲಿ ಗಹಗಹಿಸಿದ್ದ. ಸಿಗರೇಟು ಸೇದುವಾಗ ನಾನೂ ಅವನನ್ನು ಆಗಿನಿಂದಲೇ ಏಕವಚನದಲ್ಲೇ ಕರೆಯುವಂತೆ ಮಾಡಿದ್ದ.
ಅನಂತರದ ಹತ್ತಾರು ವರ್ಷ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವಾದರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಲೇ ಇಲ್ಲ.

ಮಾತಿಗೆ ಸಿಕ್ಕಾಗಲೆಲ್ಲಾ ‘ನಿನ್ನ ಅಂತಃಶಕ್ತಿ ನಿನಗೇ ಗೊತ್ತಿಲ್ಲ ಕಣೋ’ ಎಂದು ಹೇಳುತ್ತಲೇ ಇರುತ್ತಿದ್ದ. ‘ಯಾರಿಗೂ ಗೊತ್ತಿರಲ್ಲ ಬಿಡೋ, ನಿನಗೆ ನಿನ್ನ ಶಕ್ತಿ ಗೊತ್ತಿದೆಯಾ?’ ಎನ್ನುತ್ತಿದ್ದೆ ನಾನು. ಇನ್ನೂ ಕೆಲವೊಮ್ಮೆ ‘ನನಗೆ ಚೆನ್ನಾಗಿ ಗೊತ್ತಿದೆ, ಬೇರೇಯವರಿಗೆ ಅದನ್ನು ಅರಗಿಸಿಕೊಳ್ಳೋ ವೈಶಾಲ್ಯ ಇಲ್ಲ’ ಎನ್ನುತ್ತಿದ್ದೆ. ‘ಬಡ್ಡೀಮಗನೇ, ಅದಿಕ್ಕೇ ನೀನು ನೀನೇ…’ ಎನ್ನುತ್ತಿದ್ದ. ಹೊಗಳಿಕೆ ಮಾತುಗಳು ಅವನಿಂದ ಹೊರಕ್ಕೆ ಸಹಜವಾಗಿ ಹರಿಯುತ್ತಿದ್ದವು. ನನಗೆ ಬಹಳ ಕಷ್ಟ.
ಕೆಲವು ಬಾರಿ ‘ಮನೇಲಿ ನನ್ನ ಹೆಂಡತಿ ಅಡಿಗೆಮನೆ ಡಬ್ಬೀನೆಲ್ಲಾ ನೀಟಾಗಿ ತೊಳೆದು ಹೊರಗೆ ಬಿಸಿಲಿಗೆ ಒಣ ಹಾಕಿದಾಳೆ’ ಎನ್ನುತ್ತಿದ್ದ. ಚಿತ್ರರಂಗದ ಕೆಲವರು ‘ಇದು ಇವನ ಮಾಮೂಲಿ ಡೈಲಾಗು’ ಎಂದು ಹಿಂದೆ ಆಡಿಕೊಳ್ಳುತ್ತಿದ್ದರು ಕೂಡಾ.

ಆದರೆ ಅವರ ಪರಿಸ್ಥಿತಿಯೂ ಇವನಿಗಿಂತ ಒಂದಿಂಚೂ ಉತ್ತಮವಾಗಿರಲಿಲ್ಲ. ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತೋ ಏನೋ!
ಕೆಲವು ವರ್ಷ್ಗಳ ನಂತರ ಅದ್ಯಾವಾಗಲೋ ಅವನು ಮ್ಯಾನೇಜರ್ ಕೆಲಸ ಬಿಟ್ಟು ಸ್ಕ್ರಿಪ್ಟ್ ರೈಟರ್ ಆಗಿದ್ದ. ಅವನು ಬರೆದ ಅನೇಕ ಸ್ಕ್ರಿಪ್ಟುಗಳು ಆ ಚಿತ್ರದ ನಿರ್ದೇಶಕನ ಹೆಸರಲ್ಲಿ ಟೈಟಲ್ ಕಾರ್ಡಿನಲ್ಲಿ ಇರುತ್ತಿದ್ದವು. ಅದೇ ಕಾಲದಲ್ಲಿ ಮಗಳ ಮದುವೆಯನ್ನು ಬಹಳ ಕಷ್ಟಪಟ್ಟು ಸರಳವಾಗಿ, ಆದರೆ ಸಾಂಪ್ರದಾಯಿಕವಾಗಿ ಮಾಡಿದ್ದ. ನನಗೂ ಆಹ್ವಾನಿಸಿದ್ದ. ನನಗೆ ಕೂಡಾ ಆಗ ಆರ್ಥಿಕವಾಗಿ ಅನನುಕೂಲ ಇದ್ದಿದ್ದು, ಬೇಕೆಂದೇ ಮದುವೆಗೆ ಹೋಗಿರಲಿಲ್ಲ.

ಫೇಸ್ಬುಕ್ಕಿನಲ್ಲಿ ನಾನು ಬಲಪಂಥೀಯತೆಯ ಬಗ್ಗೆ ಅಸಹನೆಯಿಂದ ಬರೆಯುತ್ತಿದ್ದಾಗಲೆಲ್ಲಾ ಅವನಿಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತೇನೋ! ಅಮೇಲಾಮೇಲೆ ಅವನು ಬಹುಶಃ ನನ್ನ ಪೋಸ್ಟುಗಳನ್ನು ನೋಡುವುದನ್ನೇ ಬಿಟ್ಟಿದ್ದನೇನೋ. ಆ ನಂತರ ನಾವು ಭೇಟಿ ಮಾಡಿದ್ದು ಬಹಳ ಕಡಿಮೆ. ಆಗಾಗ ಫೋನು ಮಾಡುತ್ತಿದ್ದವನು ಅದನ್ನೂ ಬಿಟ್ಟಿದ್ದ. ಬಿಡುವಿಲ್ಲವೆಂದೋ, ಅಥವಾ ಮೇಲಿನ ಕಾರಣಕ್ಕೋ ಗೊತ್ತಿಲ್ಲ.

ಆಮೇಲೆ ಮತ್ಯಾವಾಗಲೋ ಟಿವಿ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದ. ಬಹುಶಃ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ಅವರು ತೀರಿಕೊಂಡ ನಂತರ ಅವರ ಜಾಗವನ್ನು ಸೀರಿಯಲ್ಲಿನವರು ಇವನ ಮೂಲಕ ತುಂಬಿಕೊಂಡಿದ್ದರೆಂದು ಅನಿಸುತ್ತದೆ. ಒಟ್ಟಲ್ಲಿ ಅವನ ಕೊನೆಯ ವರ್ಷಗಳಲ್ಲಿ ಸ್ವಲ್ಪ ಆರ್ಥಿಕವಾಗಿ ನೆಮ್ಮದಿಯಿಂದ ಇದ್ದನೇನೋ!
ಚಿತ್ರರಂಗಕ್ಕೆ ಬರುವಾಗ ಯಾರು ಯಾರು ತಮ್ಮ ಇಡೀ ಓದು, ಅನುಭವ, ಕಾಣ್ಕೆ ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬರುತ್ತಾರೋ ಅಂಥವರನ್ನು ತನ್ನ ಜಿಗುಟಿಗೆ, ಜಿಡ್ಡಿಗೆ ಒಗ್ಗಿಸಿಕೊಂಡುಬಿಡುತ್ತೆ. ಬಂದಾದ ಮೇಲೆ ಅನಿವಾರ್ಯವಾಗಿ ಕೆಲವರು ಒಗ್ಗಿಯೂ ಬಿಡುತ್ತಾರೆ.

ಅಲ್ಲೋ ಅಥವಾ ಟಿವಿ ಮಾಧ್ಯಮದಲ್ಲೋ ಹಣ ಸಿಕ್ಕುವ ಕಸುಬನ್ನು ‘ಅವರಿಗೇನು ಬೇಕೋ ಅದನ್ನು ಕೊಡುತ್ತೇನೆ’ ಎಂದು ಬದುಕಿ ಹೀಗೆ ಕೊನೆಯಾಗುತ್ತಾರೆ. ಇಂತಹ ನೂರು ನಟನಟಿಯರು, ತಂತ್ರಜ್ಞರು, ಕಲಾವಿದರನ್ನು ನಾನು ತೋರಿಸುತ್ತೇನೆ ಬೇಕಾದರೆ. ನನ್ನಂತೆ ಕೆಲವೇ ಕೆಲವರು ಸೆಡ್ಡು ಹೊಡೆಯುತ್ತೇವೆ. ಹೊರಗೆ ಬರುತ್ತೇವೆ. ಪರ್ಯಾಯ ಕಟ್ಟುವ ಆಲೋಚನೆ ಮಾಡುತ್ತೇವೆ. ಸೋಲೋ ಗೆಲುವೋ ಮುಖ್ಯವಲ್ಲ, ಪ್ರಯತ್ನ ಮುಖ್ಯ ಎನ್ನುತ್ತೇವೆ. ನಾಡಿಗನಲ್ಲೂ ಆ ಶಕ್ತಿಯಿತ್ತು. ಆದರೆ ಅವನ ಬದುಕಿನ ಅನಿವಾರ್ಯಕ್ಕೋ, ಸಂಪ್ರದಾಯಸ್ಥ ಮನಸ್ಥಿತಿಗೋ ಅವನಲ್ಲಿ ಅದು ಸಾಧ್ಯವಾಗಲಿಲ್ಲ.
ಹೋಗೋ ಗೆಳೆಯಾ, ನಿನ್ನ ನೆನಪು ಸದಾ ಇರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

Published

on

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ :08182-255293/ 9108235132/8151093747/ 9482023412 ಗಳ ಮೂಲಕ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿಇಟಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಇಟಿ ಪರೀಕ್ಷೆಯನ್ನು ಯಾವುದೇ ಲೋಪ ದೋಷಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಪಾವಿತ್ರ್ಯತೆ ಗೆ ಯಾವುದೇ ಧಕ್ಕೆಯಾಗದಂತೆ ನಡೆಸಲು ಕೇಂದ್ರದ ಅಧೀಕ್ಷಕರು ಗಳಿಗೆ ಸೂಚನೆ ನೀಡಿ ಕೇಂದ್ರದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಿಳಿಸಿದರು.

ಜೂನ್ 30 ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ 11 ಕೇಂದ್ರಗಳಲ್ಲಿ 3805 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30 ವರೆಗೆ 19 ಕೇಂದ್ರಗಳಲ್ಲಿ 6150 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು.

144 ಸೆಕ್ಷನ್ ಜಾರಿ. ಪರೀಕ್ಷಾ ಅವ್ಯವಹಾರ ಹಾಗೂ ಸುಗಮ ಪರೀಕ್ಷೆಗಾಗಿ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇರುತ್ತದೆ. ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಸೆಂಟರ್ ಮುಚ್ಚಲು ಆದೇಶಿಸಲಾಗುತ್ತದೆ. ಮತ್ತು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ. ಕೇಂದ್ರದ ಪ್ರವೇಶಕ್ಕೂ ಮೊದಲು ತಪಾಸಣೆ ಮಾಡಿ ಪ್ರವೇಶ ನೀಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending