Connect with us

ದಿನದ ಸುದ್ದಿ

ತೊಗೋಳಿ, ಇವನದೊಂದು ನೆನಪು ಬರೆಯುವ ಸರದಿ ಬಂದಿದೆ

Published

on

  • ಕೇಸರಿ ಹರವೂ

ಕೃಷ್ಣ ನಾಡಿಗ ನನಗಿಂತ ಎಂಟೊಭತ್ತು ವರ್ಷಕ್ಕೆ ದೊಡ್ಡವ. ಆದರೂ ‘ಹೋಗೋಲೋ, ಬಾರೋಲೋ’ ಗೆಳೆಯರಾಗಿದ್ವಿ. ನಾನು ಇವನನ್ನು ಮೊದಲು ಕಂಡಿದ್ದು 1983ರಲ್ಲಿ. ಆಗತಾನೇ ಕಾಲೇಜು ಮುಗಿಸಿ, ಕಲಾಕ್ಷೇತ್ರದಲ್ಲೂ ಒಂದಷ್ಟು ಮೊಳೆ ಹೊಡೆದು ಚಿತ್ರನಿರ್ದೇಶನವನ್ನು ಪ್ರಾತ್ಯಕ್ಷಿಕವಾಗಿ ಕಲಿಯುವ ದೆಸೆಯಿಂದ ಗಾಂಧೀನಗರ ಅಲೆಯುತ್ತಿದ್ದೆ. ಹಾಗೊಮ್ಮೆ ಆನಂದರಾವ್ ವೃತ್ತದ ಸಂಗೀತಾ ಹೋಟೆಲಿನ ರೂಮೊಂದರಲ್ಲಿ ನಿರ್ದೇಶಕ ಕೆ.ವಿ. ಜಯರಾಂ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದರು. ಅಲ್ಲಿ ನಾಡಿಗ ಪ್ರೊಡಕ್ಷನ್ ಮ್ಯಾನೇಜರ್.

ಜಯರಾಂ ‘ತಮ್ಮಲ್ಲಿ ಈಗಾಗಲೇ ನಾಲ್ಕು ಜನ ಸಹಾಯಕರಿದ್ದಾರೆ, ಮುಂದಿನ ಚಿತ್ರದಲ್ಲಿ ನೋಡೋಣ’ ಎಂದು ಹೇಳಿದ್ದರು. ಸರಿ, ಎಂದು ನಾನು ಹೊರಗೆ ಕಾರಿಡಾರಿನಲ್ಲಿ ನಡೆಯುತ್ತಿದ್ದಾಗ ಒಳಗೆ ಕುಳಿತಿದ್ದ ನಾಡಿಗ ಅದೇ ರೂಮಿಂದ ಹೊರಬಂದು ‘ಲೇ, ತಡಿಯೋ’ ಎನ್ನುತ್ತಾ ನನ್ನನ್ನು ಸೇರಿಕೊಂಡ.

‘ಈತ ಪರಿಚಯವೇ ಇಲ್ಲ, ಈಗಲೇ ಏಕವಚನವೇ? ಇದೆಂಥಾ ಚಿತ್ರರಂಗವಯ್ಯಾ!’ ಎಂದು ನನ್ನ ಈಗೋನೋ, ಸ್ವಾಭಿಮಾನವೋ ಕೆಣಕಿತ್ತು. ಹತ್ತಿರ ಬಂದವನೇ ಹಠಾತ್ತನೆ ನನ್ನ ಹೆಗಲ ಮೇಲೆ ಕೈಹಾಕಿ ‘ಬಾ, ಕೆಳಗಡೆ ಕಾಫಿ ಕುಡಿಯೋಣ’ ಎಂದು ನನ್ನನ್ನು ಎಳೆದುಕೊಂಡು ನಡೆಯತೊಡಗಿದ. ನನ್ನ ಮುಖಭಾವದಿಂದ ಅವನಿಗೆ ನನ್ನೊಳಗೆ ಏನೇನೆಲ್ಲಾ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿತ್ತೆಂದು ಕಾಣುತ್ತದೆ.

ಕಾಫಿ ಕುಡಿಯುವಾಗ ಹೇಳಿದ, ‘ಹಂಗೆ ಮಾತಾಡಿಸಿದ್ದು ನಿನಗೆ ಗುರ್ ಅಂದಿರಬೇಕು, ಅಲ್ವಾ? ನಾನು ನೀನೂ ಇದೇ ಚಿತ್ರರಂಗದಲ್ಲಿ ಕೆಲವು ದಶಕಗಳ ಕಾಲ ಒಳ್ಳೇ ಗೆಳೆಯರಾಗಿ ಜೊತೆಗಿರ್ತೀವಿ ಕಣೋ, ತುಂಬಾ ಜನರ ಜೊತೆ ಹಂಗನಿಸಲ್ಲ, ಅದಿಕ್ಕೆ ಹಂಗನ್ದೇ…” ಎಂದು ಅಜ್ಜಂಪುರದ ಜವಾರೀ ಬ್ರಾಹ್ಮಣ ಭಾಷೆಯಲ್ಲಿ, ದೊಡ್ಡ ಗಂಟಲಿನಲ್ಲಿ ಗಹಗಹಿಸಿದ್ದ. ಸಿಗರೇಟು ಸೇದುವಾಗ ನಾನೂ ಅವನನ್ನು ಆಗಿನಿಂದಲೇ ಏಕವಚನದಲ್ಲೇ ಕರೆಯುವಂತೆ ಮಾಡಿದ್ದ.
ಅನಂತರದ ಹತ್ತಾರು ವರ್ಷ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವಾದರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಲೇ ಇಲ್ಲ.

ಮಾತಿಗೆ ಸಿಕ್ಕಾಗಲೆಲ್ಲಾ ‘ನಿನ್ನ ಅಂತಃಶಕ್ತಿ ನಿನಗೇ ಗೊತ್ತಿಲ್ಲ ಕಣೋ’ ಎಂದು ಹೇಳುತ್ತಲೇ ಇರುತ್ತಿದ್ದ. ‘ಯಾರಿಗೂ ಗೊತ್ತಿರಲ್ಲ ಬಿಡೋ, ನಿನಗೆ ನಿನ್ನ ಶಕ್ತಿ ಗೊತ್ತಿದೆಯಾ?’ ಎನ್ನುತ್ತಿದ್ದೆ ನಾನು. ಇನ್ನೂ ಕೆಲವೊಮ್ಮೆ ‘ನನಗೆ ಚೆನ್ನಾಗಿ ಗೊತ್ತಿದೆ, ಬೇರೇಯವರಿಗೆ ಅದನ್ನು ಅರಗಿಸಿಕೊಳ್ಳೋ ವೈಶಾಲ್ಯ ಇಲ್ಲ’ ಎನ್ನುತ್ತಿದ್ದೆ. ‘ಬಡ್ಡೀಮಗನೇ, ಅದಿಕ್ಕೇ ನೀನು ನೀನೇ…’ ಎನ್ನುತ್ತಿದ್ದ. ಹೊಗಳಿಕೆ ಮಾತುಗಳು ಅವನಿಂದ ಹೊರಕ್ಕೆ ಸಹಜವಾಗಿ ಹರಿಯುತ್ತಿದ್ದವು. ನನಗೆ ಬಹಳ ಕಷ್ಟ.
ಕೆಲವು ಬಾರಿ ‘ಮನೇಲಿ ನನ್ನ ಹೆಂಡತಿ ಅಡಿಗೆಮನೆ ಡಬ್ಬೀನೆಲ್ಲಾ ನೀಟಾಗಿ ತೊಳೆದು ಹೊರಗೆ ಬಿಸಿಲಿಗೆ ಒಣ ಹಾಕಿದಾಳೆ’ ಎನ್ನುತ್ತಿದ್ದ. ಚಿತ್ರರಂಗದ ಕೆಲವರು ‘ಇದು ಇವನ ಮಾಮೂಲಿ ಡೈಲಾಗು’ ಎಂದು ಹಿಂದೆ ಆಡಿಕೊಳ್ಳುತ್ತಿದ್ದರು ಕೂಡಾ.

ಆದರೆ ಅವರ ಪರಿಸ್ಥಿತಿಯೂ ಇವನಿಗಿಂತ ಒಂದಿಂಚೂ ಉತ್ತಮವಾಗಿರಲಿಲ್ಲ. ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತೋ ಏನೋ!
ಕೆಲವು ವರ್ಷ್ಗಳ ನಂತರ ಅದ್ಯಾವಾಗಲೋ ಅವನು ಮ್ಯಾನೇಜರ್ ಕೆಲಸ ಬಿಟ್ಟು ಸ್ಕ್ರಿಪ್ಟ್ ರೈಟರ್ ಆಗಿದ್ದ. ಅವನು ಬರೆದ ಅನೇಕ ಸ್ಕ್ರಿಪ್ಟುಗಳು ಆ ಚಿತ್ರದ ನಿರ್ದೇಶಕನ ಹೆಸರಲ್ಲಿ ಟೈಟಲ್ ಕಾರ್ಡಿನಲ್ಲಿ ಇರುತ್ತಿದ್ದವು. ಅದೇ ಕಾಲದಲ್ಲಿ ಮಗಳ ಮದುವೆಯನ್ನು ಬಹಳ ಕಷ್ಟಪಟ್ಟು ಸರಳವಾಗಿ, ಆದರೆ ಸಾಂಪ್ರದಾಯಿಕವಾಗಿ ಮಾಡಿದ್ದ. ನನಗೂ ಆಹ್ವಾನಿಸಿದ್ದ. ನನಗೆ ಕೂಡಾ ಆಗ ಆರ್ಥಿಕವಾಗಿ ಅನನುಕೂಲ ಇದ್ದಿದ್ದು, ಬೇಕೆಂದೇ ಮದುವೆಗೆ ಹೋಗಿರಲಿಲ್ಲ.

ಫೇಸ್ಬುಕ್ಕಿನಲ್ಲಿ ನಾನು ಬಲಪಂಥೀಯತೆಯ ಬಗ್ಗೆ ಅಸಹನೆಯಿಂದ ಬರೆಯುತ್ತಿದ್ದಾಗಲೆಲ್ಲಾ ಅವನಿಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತೇನೋ! ಅಮೇಲಾಮೇಲೆ ಅವನು ಬಹುಶಃ ನನ್ನ ಪೋಸ್ಟುಗಳನ್ನು ನೋಡುವುದನ್ನೇ ಬಿಟ್ಟಿದ್ದನೇನೋ. ಆ ನಂತರ ನಾವು ಭೇಟಿ ಮಾಡಿದ್ದು ಬಹಳ ಕಡಿಮೆ. ಆಗಾಗ ಫೋನು ಮಾಡುತ್ತಿದ್ದವನು ಅದನ್ನೂ ಬಿಟ್ಟಿದ್ದ. ಬಿಡುವಿಲ್ಲವೆಂದೋ, ಅಥವಾ ಮೇಲಿನ ಕಾರಣಕ್ಕೋ ಗೊತ್ತಿಲ್ಲ.

ಆಮೇಲೆ ಮತ್ಯಾವಾಗಲೋ ಟಿವಿ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದ. ಬಹುಶಃ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ಅವರು ತೀರಿಕೊಂಡ ನಂತರ ಅವರ ಜಾಗವನ್ನು ಸೀರಿಯಲ್ಲಿನವರು ಇವನ ಮೂಲಕ ತುಂಬಿಕೊಂಡಿದ್ದರೆಂದು ಅನಿಸುತ್ತದೆ. ಒಟ್ಟಲ್ಲಿ ಅವನ ಕೊನೆಯ ವರ್ಷಗಳಲ್ಲಿ ಸ್ವಲ್ಪ ಆರ್ಥಿಕವಾಗಿ ನೆಮ್ಮದಿಯಿಂದ ಇದ್ದನೇನೋ!
ಚಿತ್ರರಂಗಕ್ಕೆ ಬರುವಾಗ ಯಾರು ಯಾರು ತಮ್ಮ ಇಡೀ ಓದು, ಅನುಭವ, ಕಾಣ್ಕೆ ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬರುತ್ತಾರೋ ಅಂಥವರನ್ನು ತನ್ನ ಜಿಗುಟಿಗೆ, ಜಿಡ್ಡಿಗೆ ಒಗ್ಗಿಸಿಕೊಂಡುಬಿಡುತ್ತೆ. ಬಂದಾದ ಮೇಲೆ ಅನಿವಾರ್ಯವಾಗಿ ಕೆಲವರು ಒಗ್ಗಿಯೂ ಬಿಡುತ್ತಾರೆ.

ಅಲ್ಲೋ ಅಥವಾ ಟಿವಿ ಮಾಧ್ಯಮದಲ್ಲೋ ಹಣ ಸಿಕ್ಕುವ ಕಸುಬನ್ನು ‘ಅವರಿಗೇನು ಬೇಕೋ ಅದನ್ನು ಕೊಡುತ್ತೇನೆ’ ಎಂದು ಬದುಕಿ ಹೀಗೆ ಕೊನೆಯಾಗುತ್ತಾರೆ. ಇಂತಹ ನೂರು ನಟನಟಿಯರು, ತಂತ್ರಜ್ಞರು, ಕಲಾವಿದರನ್ನು ನಾನು ತೋರಿಸುತ್ತೇನೆ ಬೇಕಾದರೆ. ನನ್ನಂತೆ ಕೆಲವೇ ಕೆಲವರು ಸೆಡ್ಡು ಹೊಡೆಯುತ್ತೇವೆ. ಹೊರಗೆ ಬರುತ್ತೇವೆ. ಪರ್ಯಾಯ ಕಟ್ಟುವ ಆಲೋಚನೆ ಮಾಡುತ್ತೇವೆ. ಸೋಲೋ ಗೆಲುವೋ ಮುಖ್ಯವಲ್ಲ, ಪ್ರಯತ್ನ ಮುಖ್ಯ ಎನ್ನುತ್ತೇವೆ. ನಾಡಿಗನಲ್ಲೂ ಆ ಶಕ್ತಿಯಿತ್ತು. ಆದರೆ ಅವನ ಬದುಕಿನ ಅನಿವಾರ್ಯಕ್ಕೋ, ಸಂಪ್ರದಾಯಸ್ಥ ಮನಸ್ಥಿತಿಗೋ ಅವನಲ್ಲಿ ಅದು ಸಾಧ್ಯವಾಗಲಿಲ್ಲ.
ಹೋಗೋ ಗೆಳೆಯಾ, ನಿನ್ನ ನೆನಪು ಸದಾ ಇರುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ

Published

on

ಸುದ್ದಿದಿನ,ದಾವಣಗೆರೆ:ತಾಲ್ಲೂಕಿನ ಕಾಡಜ್ಜಿ ಗ್ರಾಮದ ದೇಗುಲಗಳಲ್ಲಿ ನಿಧಿ ಶೋಧಿಸಲು ಯತ್ನಿಸಿದ ಆರು ಜನರ ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾಡಜ್ಜಿ ಗ್ರಾಮದ ಬಸವರಾಜ (42), ಮಲೇಬೆನ್ನೂರಿನ ಪ್ರಕಾಶ ಆಚಾರಿ (48), ಮಂಜುನಾಥ (51), ಪ್ರಕಾಶ (42), ಹೊನ್ನಾವರ ತಾಲ್ಲೂಕಿನ ಇಡಗುಂಜಿ ಗ್ರಾಮದ ರಾಮನಾಥ ಪೈ (52), ಸಾಗರ ತಾಲ್ಲೂಕಿನ ಬ್ಯಾಕೋಡು ಗ್ರಾಮದ ಶ್ರೀಕಾಂತ ಭಟ್ (51) ಬಂಧಿತರು.

ಆರೋಪಿಗಳು ಏ. 22ರಂದು ರಾತ್ರಿ ಕಾಡಜ್ಜಿ ಗ್ರಾಮದ ಚೌಡಮ್ಮ ದೇಗುಲದಲ್ಲಿ ನಿಧಿ ಶೋಧ ಮಾಡಿದ್ದರು. ಏ.29ರಂದು ರಾತ್ರಿ ಪೇಟೆ ದುರುಗಮ್ಮ ದೇಗುಲದ ಬಳಿ ಜೆಸಿಬಿ ಮೂಲಕ ಗುಂಡಿ ತೆಗೆದಿದ್ದರು. ದುಷ್ಟ ಶಕ್ತಿ ಪೂಜೆ, ಹೋಮ– ಹವನ ಮಾಡಿ ಗರ್ಭಗುಡಿಯಲ್ಲಿ ನಿಧಿ ತೆಗೆಯಲು ಮುಂದಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು 

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮ, ಪಾರದರ್ಶಕ ಮತ್ತು ಅತ್ಯಂತ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯದಿಂದ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ನಿರ್ದೇಶನ ನೀಡಿದರು.

ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ  ಮತ ಎಣಿಕೆ ಪ್ರಕ್ರಿಯೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ, ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ‘ವಾಹನ ಮುಕ್ತ ವಲಯ’  ಎಂದು ಘೋಷಿಸಲಾಗಿದೆ, ಎಣಿಕೆ ಕೇಂದ್ರದ ಗೇಟ್‌ನಿಂದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅಲ್ಲಿ ಸಿಆರ್‌ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕೇಂದ್ರದ ಸುತ್ತಲೂ  ಮೂರು ಹಂತದ ಸಮನ್ವಯ ಭದ್ರತಾ ವ್ಯವಸ್ಥೆಯನ್ನು (Three-tier coordinating security system) ಅಳವಡಿಸಲಾಗುವುದು.  ಮತ ಎಣಿಕೆ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಮತ್ತು ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಉಳಿದ ಯಾವುದೇ ಖಾಸಗಿ ವಾಹನಗಳ ಪ್ರವೇಶವನ್ನು ಈ ವಲಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಸೂಚನೆ ನೀಡಿದರು.

ಮತ ಎಣಿಕೆ ಕೇಂದ್ರದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ವತಿಯಿಂದ ಪರ್ಯಾಯ ಸಂಚಾರ ಮಾರ್ಗಗಳನ್ನು ಗುರುತಿಸಲಾಗಿದೆ. ವಾಹನ ಸವಾರರು ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ, ನಿಗದಿಪಡಿಸಿದ ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳಿಗೆ ಪ್ರತ್ಯೇಕ ವಾಹನ ಪಾಸ್‌ಗಳನ್ನು ವಿತರಿಸಲಾಗುವುದು. ಎಪಿಎಂಸಿ ಆವರಣ ಹಾಗೂ ಬಿಆರ್‌ಸಿ  ಕಾಲೇಜು ಮೈದಾನದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಿಬ್ಬಂದಿಗಳ ಮೊಬೈಲ್‌ಗಳನ್ನು ಸುರಕ್ಷಿತವಾಗಿ ಇರಿಸಲು ಪ್ರತ್ಯೇಕ ಕೌಂಟರ್ ತೆರೆದು, ಟೋಕನ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಮತ ಎಣಿಕೆ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಣಿಕೆ ಕೇಂದ್ರದ ಮೇಲ್ಛಾವಣಿ ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೂಡಲೇ ಮರುಪರಿಶೀಲಿಸುವಂತೆ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.

ಮಳೆಯಿಂದಾಗಿ ಎಣಿಕೆ ಕೇಂದ್ರದ ಒಳಗೆ ನೀರು ಸೋರದಂತೆ ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ವ್ಯವಸ್ಥೆ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮತ ಎಣಿಕೆಯು ಪಾರದರ್ಶಕತೆ ಮತ್ತು ಭದ್ರತೆಯ ದೃಷ್ಟಿಯಿಂದ ಕೇಂದ್ರದಾದ್ಯಂತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಹಾಗೂ ದೃಶ್ಯೀಕರಣ ವ್ಯಾಪ್ತಿಯನ್ನು ಅಧಿಕಾರಿಗಳು ಪರಿಶೀಲಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪ್ರತಿಯೊಂದು ಎಣಿಕೆ ಟೇಬಲ್ ಹಾಗೂ ಮತಯಂತ್ರಗಳನ್ನು ತರುವ ಹಾದಿಯಲ್ಲಿ ಯಾವುದೇ ‘ಬ್ಲೈಂಡ್ ಸ್ಪಾಟ್’ ಇಲ್ಲದಂತೆ ಕ್ಯಾಮೆರಾಗಳ ಕವರೇಜ್ ಇರಬೇಕು. ಸಿಸಿಟಿವಿ ದೃಶ್ಯಾವಳಿಗಳು ಅಡೆತಡೆಯಿಲ್ಲದೆ ಚಿತ್ರೀಕರಣಗೊಳ್ಳುತ್ತಿರುವುದನ್ನು ತಾಂತ್ರಿಕ ತಂಡವು ದೃಢಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯ ವತಿಯಿಂದ ಒಬ್ಬ ನುರಿತ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ತುರ್ತು ಸಂದರ್ಭ ಎದುರಾದಲ್ಲಿ ತಕ್ಷಣದ ಚಿಕಿತ್ಸೆಗಾಗಿ ಅಗತ್ಯ ಔಷಧೋಪಚಾರಗಳೊಂದಿಗೆ ಸುಸಜ್ಜಿತ ಅಂಬುಲೆನ್ಸ್ ಸೇವೆಯನ್ನು ಸ್ಥಳದಲ್ಲಿ ಸದಾ ಸಿದ್ಧವಾಗಿರಿಸಬೇಕು ಎಂದು ತಿಳಿಸಿದರು.

ಅಗ್ನಿಶಾಮಕ ಇಲಾಖೆಯು ಮತ ಎಣಿಕೆ ಕೇಂದ್ರದ ಒಳಾಂಗಣ ಮತ್ತು ಹೊರಾಂಗಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರದ ಆವರಣದಲ್ಲಿ ಅಗ್ನಿಶಾಮಕ ವಾಹನಗಳನ್ನು (Fire Engines) ನಿಯೋಜಿಸಬೇಕು ಹಾಗೂ ಅಗ್ನಿಶಾಮಕ ಉಪಕರಣಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ಅವರು ಮಾತನಾಡಿ, ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅನಧಿಕೃತ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಉಪವಿಭಾಗಾಧಿಕಾರಿ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣಾಧಿಕಾರಿ ಸಂತೋಷ್‌ ಕುಮಾರ್‌, ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ ಗೌಡರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯ್‌ , ಬೆಸ್ಕಾಂ , ಕೆ.ಎಸ್.ಆರ್.ಟಿ.ಸಿ , ಆಗ್ನಿಶಾಮಕ ದಳ , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

Published

on

ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು ಸಾಬೀತುಪಡಿಸಿದೆ. ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿ ಮದಿಹಾ ಸಾಧನೆಯ ಶಿಖರದಲ್ಲಿ

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಮದಿಹಾ ಅವರು ಒಟ್ಟು ಶೇ. 98 ಅಂಕಗಳನ್ನು ಗಳಿಸುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಾಧನೆಗೈದಿದ್ದಾರೆ. ಈಕೆಯ ಸಾಧನೆಯು ಸಹಪಾಠಿಗಳಿಗೆ ಮತ್ತು ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಕುಶಾಲ್‌ ಶೇ. 97 ದ್ವಿತೀಯ ಹಾಗೂ ಸಮರ್ಥ್‌ 95.5 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಗಮನ ಸೆಳೆದ ಫಲಿತಾಂಶ: ಈ ಬಾರಿಯ ಫಲಿತಾಂಶದಲ್ಲಿ ವಿದ್ಯಾರ್ಥಿಗಳ ಸಾಧನೆ ಮೆಚ್ಚುವಂತಿದೆ.

ಡಿಸ್ಟಿಂಕ್ಷನ್ ಸಾಧಕರು: 15 ವಿದ್ಯಾರ್ಥಿಗಳು ಶೇ. 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಥಮ ಶ್ರೇಣಿ: ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಉತ್ತಮ ಫಲಿತಾಂಶ: ಉಳಿದ ಎಲ್ಲಾ ವಿದ್ಯಾರ್ಥಿಗಳು ಸಹ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಶಾಲೆಯು ನೂರಕ್ಕೆ ನೂರರಷ್ಟು ಫಲಿತಾಂಶದತ್ತ ದಾಪುಗಾಲು ಹಾಕಿದೆ.

ಯಶಸ್ಸಿನ ಹಿಂದಿನ ಶಕ್ತಿ:

ವಿದ್ಯಾರ್ಥಿಗಳ ಈ ಭವ್ಯ ಸಾಧನೆಗೆ ಶಾಲೆಯ ವ್ಯವಸ್ಥಿತ ಮಾರ್ಗದರ್ಶನವೇ ಕಾರಣ ಎಂದು ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಕಾರ್ಯದರ್ಶಿ ಅಬ್ದುಲ್ ಸರ್ ಅವರ ನಿರಂತರ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ, ಮುಖ್ಯೋಪಾಧ್ಯಾಯರ ಸಮರ್ಥ ನಾಯಕತ್ವ ಹಾಗೂ ಶಿಕ್ಷಕ ವೃಂದದವರ ಅವಿರತ ಪರಿಶ್ರಮ ಈ ಯಶಸ್ಸಿಗೆ ಬುನಾದಿಯಾಗಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಶಾಲಾ ಕಾರ್ಯದರ್ಶಿ ಅಬ್ದುಲ್‌, “ವಿದ್ಯಾರ್ಥಿಗಳ ಏಕಾಗ್ರತೆ, ಪೋಷಕರ ಸಹಕಾರ ಮತ್ತು ಶಿಕ್ಷಕರ ಬೋಧನಾ ಶೈಲಿಯಿಂದ ಈ ಮೈಲಿಗಲ್ಲು ಸಾಧ್ಯವಾಗಿದೆ. ಈ ಯಶಸ್ಸು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ಉನ್ನತ ಗುರಿಗಳನ್ನು ತಲುಪಲು ಪ್ರೇರಣೆಯಾಗಲಿ,” ಎಂದು ಹಾರೈಸಿದ್ದಾರೆ.
ಶಾಲೆಯ ಈ ಸಾಧನೆಗೆ ಪೋಷಕರು ಮತ್ತು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭಕೋರಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending