ದಿನದ ಸುದ್ದಿ
ತೊಗೋಳಿ, ಇವನದೊಂದು ನೆನಪು ಬರೆಯುವ ಸರದಿ ಬಂದಿದೆ
- –ಕೇಸರಿ ಹರವೂ
ಕೃಷ್ಣ ನಾಡಿಗ ನನಗಿಂತ ಎಂಟೊಭತ್ತು ವರ್ಷಕ್ಕೆ ದೊಡ್ಡವ. ಆದರೂ ‘ಹೋಗೋಲೋ, ಬಾರೋಲೋ’ ಗೆಳೆಯರಾಗಿದ್ವಿ. ನಾನು ಇವನನ್ನು ಮೊದಲು ಕಂಡಿದ್ದು 1983ರಲ್ಲಿ. ಆಗತಾನೇ ಕಾಲೇಜು ಮುಗಿಸಿ, ಕಲಾಕ್ಷೇತ್ರದಲ್ಲೂ ಒಂದಷ್ಟು ಮೊಳೆ ಹೊಡೆದು ಚಿತ್ರನಿರ್ದೇಶನವನ್ನು ಪ್ರಾತ್ಯಕ್ಷಿಕವಾಗಿ ಕಲಿಯುವ ದೆಸೆಯಿಂದ ಗಾಂಧೀನಗರ ಅಲೆಯುತ್ತಿದ್ದೆ. ಹಾಗೊಮ್ಮೆ ಆನಂದರಾವ್ ವೃತ್ತದ ಸಂಗೀತಾ ಹೋಟೆಲಿನ ರೂಮೊಂದರಲ್ಲಿ ನಿರ್ದೇಶಕ ಕೆ.ವಿ. ಜಯರಾಂ ತಮ್ಮ ಮುಂದಿನ ಚಿತ್ರಕ್ಕೆ ತಯಾರಿ ನಡೆಸಿದ್ದರು. ಅಲ್ಲಿ ನಾಡಿಗ ಪ್ರೊಡಕ್ಷನ್ ಮ್ಯಾನೇಜರ್.
ಜಯರಾಂ ‘ತಮ್ಮಲ್ಲಿ ಈಗಾಗಲೇ ನಾಲ್ಕು ಜನ ಸಹಾಯಕರಿದ್ದಾರೆ, ಮುಂದಿನ ಚಿತ್ರದಲ್ಲಿ ನೋಡೋಣ’ ಎಂದು ಹೇಳಿದ್ದರು. ಸರಿ, ಎಂದು ನಾನು ಹೊರಗೆ ಕಾರಿಡಾರಿನಲ್ಲಿ ನಡೆಯುತ್ತಿದ್ದಾಗ ಒಳಗೆ ಕುಳಿತಿದ್ದ ನಾಡಿಗ ಅದೇ ರೂಮಿಂದ ಹೊರಬಂದು ‘ಲೇ, ತಡಿಯೋ’ ಎನ್ನುತ್ತಾ ನನ್ನನ್ನು ಸೇರಿಕೊಂಡ.
‘ಈತ ಪರಿಚಯವೇ ಇಲ್ಲ, ಈಗಲೇ ಏಕವಚನವೇ? ಇದೆಂಥಾ ಚಿತ್ರರಂಗವಯ್ಯಾ!’ ಎಂದು ನನ್ನ ಈಗೋನೋ, ಸ್ವಾಭಿಮಾನವೋ ಕೆಣಕಿತ್ತು. ಹತ್ತಿರ ಬಂದವನೇ ಹಠಾತ್ತನೆ ನನ್ನ ಹೆಗಲ ಮೇಲೆ ಕೈಹಾಕಿ ‘ಬಾ, ಕೆಳಗಡೆ ಕಾಫಿ ಕುಡಿಯೋಣ’ ಎಂದು ನನ್ನನ್ನು ಎಳೆದುಕೊಂಡು ನಡೆಯತೊಡಗಿದ. ನನ್ನ ಮುಖಭಾವದಿಂದ ಅವನಿಗೆ ನನ್ನೊಳಗೆ ಏನೇನೆಲ್ಲಾ ನಡೆದಿದೆ ಎಂದು ಸ್ಪಷ್ಟವಾಗಿ ತಿಳಿದಿತ್ತೆಂದು ಕಾಣುತ್ತದೆ.
ಕಾಫಿ ಕುಡಿಯುವಾಗ ಹೇಳಿದ, ‘ಹಂಗೆ ಮಾತಾಡಿಸಿದ್ದು ನಿನಗೆ ಗುರ್ ಅಂದಿರಬೇಕು, ಅಲ್ವಾ? ನಾನು ನೀನೂ ಇದೇ ಚಿತ್ರರಂಗದಲ್ಲಿ ಕೆಲವು ದಶಕಗಳ ಕಾಲ ಒಳ್ಳೇ ಗೆಳೆಯರಾಗಿ ಜೊತೆಗಿರ್ತೀವಿ ಕಣೋ, ತುಂಬಾ ಜನರ ಜೊತೆ ಹಂಗನಿಸಲ್ಲ, ಅದಿಕ್ಕೆ ಹಂಗನ್ದೇ…” ಎಂದು ಅಜ್ಜಂಪುರದ ಜವಾರೀ ಬ್ರಾಹ್ಮಣ ಭಾಷೆಯಲ್ಲಿ, ದೊಡ್ಡ ಗಂಟಲಿನಲ್ಲಿ ಗಹಗಹಿಸಿದ್ದ. ಸಿಗರೇಟು ಸೇದುವಾಗ ನಾನೂ ಅವನನ್ನು ಆಗಿನಿಂದಲೇ ಏಕವಚನದಲ್ಲೇ ಕರೆಯುವಂತೆ ಮಾಡಿದ್ದ.
ಅನಂತರದ ಹತ್ತಾರು ವರ್ಷ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದೆವಾದರೂ ಒಂದೇ ಚಿತ್ರದಲ್ಲಿ ಕೆಲಸ ಮಾಡಲೇ ಇಲ್ಲ.
ಮಾತಿಗೆ ಸಿಕ್ಕಾಗಲೆಲ್ಲಾ ‘ನಿನ್ನ ಅಂತಃಶಕ್ತಿ ನಿನಗೇ ಗೊತ್ತಿಲ್ಲ ಕಣೋ’ ಎಂದು ಹೇಳುತ್ತಲೇ ಇರುತ್ತಿದ್ದ. ‘ಯಾರಿಗೂ ಗೊತ್ತಿರಲ್ಲ ಬಿಡೋ, ನಿನಗೆ ನಿನ್ನ ಶಕ್ತಿ ಗೊತ್ತಿದೆಯಾ?’ ಎನ್ನುತ್ತಿದ್ದೆ ನಾನು. ಇನ್ನೂ ಕೆಲವೊಮ್ಮೆ ‘ನನಗೆ ಚೆನ್ನಾಗಿ ಗೊತ್ತಿದೆ, ಬೇರೇಯವರಿಗೆ ಅದನ್ನು ಅರಗಿಸಿಕೊಳ್ಳೋ ವೈಶಾಲ್ಯ ಇಲ್ಲ’ ಎನ್ನುತ್ತಿದ್ದೆ. ‘ಬಡ್ಡೀಮಗನೇ, ಅದಿಕ್ಕೇ ನೀನು ನೀನೇ…’ ಎನ್ನುತ್ತಿದ್ದ. ಹೊಗಳಿಕೆ ಮಾತುಗಳು ಅವನಿಂದ ಹೊರಕ್ಕೆ ಸಹಜವಾಗಿ ಹರಿಯುತ್ತಿದ್ದವು. ನನಗೆ ಬಹಳ ಕಷ್ಟ.
ಕೆಲವು ಬಾರಿ ‘ಮನೇಲಿ ನನ್ನ ಹೆಂಡತಿ ಅಡಿಗೆಮನೆ ಡಬ್ಬೀನೆಲ್ಲಾ ನೀಟಾಗಿ ತೊಳೆದು ಹೊರಗೆ ಬಿಸಿಲಿಗೆ ಒಣ ಹಾಕಿದಾಳೆ’ ಎನ್ನುತ್ತಿದ್ದ. ಚಿತ್ರರಂಗದ ಕೆಲವರು ‘ಇದು ಇವನ ಮಾಮೂಲಿ ಡೈಲಾಗು’ ಎಂದು ಹಿಂದೆ ಆಡಿಕೊಳ್ಳುತ್ತಿದ್ದರು ಕೂಡಾ.
ಆದರೆ ಅವರ ಪರಿಸ್ಥಿತಿಯೂ ಇವನಿಗಿಂತ ಒಂದಿಂಚೂ ಉತ್ತಮವಾಗಿರಲಿಲ್ಲ. ಹೇಳಿಕೊಳ್ಳಲು ಅವರಿಗೆ ಸಂಕೋಚವಿತ್ತೋ ಏನೋ!
ಕೆಲವು ವರ್ಷ್ಗಳ ನಂತರ ಅದ್ಯಾವಾಗಲೋ ಅವನು ಮ್ಯಾನೇಜರ್ ಕೆಲಸ ಬಿಟ್ಟು ಸ್ಕ್ರಿಪ್ಟ್ ರೈಟರ್ ಆಗಿದ್ದ. ಅವನು ಬರೆದ ಅನೇಕ ಸ್ಕ್ರಿಪ್ಟುಗಳು ಆ ಚಿತ್ರದ ನಿರ್ದೇಶಕನ ಹೆಸರಲ್ಲಿ ಟೈಟಲ್ ಕಾರ್ಡಿನಲ್ಲಿ ಇರುತ್ತಿದ್ದವು. ಅದೇ ಕಾಲದಲ್ಲಿ ಮಗಳ ಮದುವೆಯನ್ನು ಬಹಳ ಕಷ್ಟಪಟ್ಟು ಸರಳವಾಗಿ, ಆದರೆ ಸಾಂಪ್ರದಾಯಿಕವಾಗಿ ಮಾಡಿದ್ದ. ನನಗೂ ಆಹ್ವಾನಿಸಿದ್ದ. ನನಗೆ ಕೂಡಾ ಆಗ ಆರ್ಥಿಕವಾಗಿ ಅನನುಕೂಲ ಇದ್ದಿದ್ದು, ಬೇಕೆಂದೇ ಮದುವೆಗೆ ಹೋಗಿರಲಿಲ್ಲ.
ಫೇಸ್ಬುಕ್ಕಿನಲ್ಲಿ ನಾನು ಬಲಪಂಥೀಯತೆಯ ಬಗ್ಗೆ ಅಸಹನೆಯಿಂದ ಬರೆಯುತ್ತಿದ್ದಾಗಲೆಲ್ಲಾ ಅವನಿಗೆ ನನ್ನ ಮೇಲೆ ಸಿಟ್ಟು ಬರುತ್ತಿತ್ತೇನೋ! ಅಮೇಲಾಮೇಲೆ ಅವನು ಬಹುಶಃ ನನ್ನ ಪೋಸ್ಟುಗಳನ್ನು ನೋಡುವುದನ್ನೇ ಬಿಟ್ಟಿದ್ದನೇನೋ. ಆ ನಂತರ ನಾವು ಭೇಟಿ ಮಾಡಿದ್ದು ಬಹಳ ಕಡಿಮೆ. ಆಗಾಗ ಫೋನು ಮಾಡುತ್ತಿದ್ದವನು ಅದನ್ನೂ ಬಿಟ್ಟಿದ್ದ. ಬಿಡುವಿಲ್ಲವೆಂದೋ, ಅಥವಾ ಮೇಲಿನ ಕಾರಣಕ್ಕೋ ಗೊತ್ತಿಲ್ಲ.
ಆಮೇಲೆ ಮತ್ಯಾವಾಗಲೋ ಟಿವಿ ಧಾರಾವಾಹಿಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದ. ಬಹುಶಃ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (ರವೀ) ಅವರು ತೀರಿಕೊಂಡ ನಂತರ ಅವರ ಜಾಗವನ್ನು ಸೀರಿಯಲ್ಲಿನವರು ಇವನ ಮೂಲಕ ತುಂಬಿಕೊಂಡಿದ್ದರೆಂದು ಅನಿಸುತ್ತದೆ. ಒಟ್ಟಲ್ಲಿ ಅವನ ಕೊನೆಯ ವರ್ಷಗಳಲ್ಲಿ ಸ್ವಲ್ಪ ಆರ್ಥಿಕವಾಗಿ ನೆಮ್ಮದಿಯಿಂದ ಇದ್ದನೇನೋ!
ಚಿತ್ರರಂಗಕ್ಕೆ ಬರುವಾಗ ಯಾರು ಯಾರು ತಮ್ಮ ಇಡೀ ಓದು, ಅನುಭವ, ಕಾಣ್ಕೆ ಮತ್ತು ಮಹತ್ವಾಕಾಂಕ್ಷೆ ಇಟ್ಟುಕೊಂಡು ಬರುತ್ತಾರೋ ಅಂಥವರನ್ನು ತನ್ನ ಜಿಗುಟಿಗೆ, ಜಿಡ್ಡಿಗೆ ಒಗ್ಗಿಸಿಕೊಂಡುಬಿಡುತ್ತೆ. ಬಂದಾದ ಮೇಲೆ ಅನಿವಾರ್ಯವಾಗಿ ಕೆಲವರು ಒಗ್ಗಿಯೂ ಬಿಡುತ್ತಾರೆ.
ಅಲ್ಲೋ ಅಥವಾ ಟಿವಿ ಮಾಧ್ಯಮದಲ್ಲೋ ಹಣ ಸಿಕ್ಕುವ ಕಸುಬನ್ನು ‘ಅವರಿಗೇನು ಬೇಕೋ ಅದನ್ನು ಕೊಡುತ್ತೇನೆ’ ಎಂದು ಬದುಕಿ ಹೀಗೆ ಕೊನೆಯಾಗುತ್ತಾರೆ. ಇಂತಹ ನೂರು ನಟನಟಿಯರು, ತಂತ್ರಜ್ಞರು, ಕಲಾವಿದರನ್ನು ನಾನು ತೋರಿಸುತ್ತೇನೆ ಬೇಕಾದರೆ. ನನ್ನಂತೆ ಕೆಲವೇ ಕೆಲವರು ಸೆಡ್ಡು ಹೊಡೆಯುತ್ತೇವೆ. ಹೊರಗೆ ಬರುತ್ತೇವೆ. ಪರ್ಯಾಯ ಕಟ್ಟುವ ಆಲೋಚನೆ ಮಾಡುತ್ತೇವೆ. ಸೋಲೋ ಗೆಲುವೋ ಮುಖ್ಯವಲ್ಲ, ಪ್ರಯತ್ನ ಮುಖ್ಯ ಎನ್ನುತ್ತೇವೆ. ನಾಡಿಗನಲ್ಲೂ ಆ ಶಕ್ತಿಯಿತ್ತು. ಆದರೆ ಅವನ ಬದುಕಿನ ಅನಿವಾರ್ಯಕ್ಕೋ, ಸಂಪ್ರದಾಯಸ್ಥ ಮನಸ್ಥಿತಿಗೋ ಅವನಲ್ಲಿ ಅದು ಸಾಧ್ಯವಾಗಲಿಲ್ಲ.
ಹೋಗೋ ಗೆಳೆಯಾ, ನಿನ್ನ ನೆನಪು ಸದಾ ಇರುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ
ಸುದ್ದಿದಿನ,ದಾವಣಗೆರೆ: ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು.
ಶುಕ್ರವಾರ ಜೂನ್(19) ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ ಖಜಾನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಭವಿಷ್ಯ ನಿಧಿ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಿಂಚಣಿದಾರರು ತಮ್ಮ ಎಲ್ಲಾ ಬ್ಯಾಂಕ್ಗೆ 2ನೇ ವಾರ ಭೇಟಿ ನೀಡಿದರೆ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಜೀವಂತ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯಲು ಸೈಬರ್ಕೆಫೆ ಇನ್ನಿತರ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿ ಮೊಬೈಲ್ನಲ್ಲಿ ಅಫ್ ಲೋಡ್ ಮಾಡಿ ಪಡೆಯಬಹುದು. ಮತ್ತು ನಿಮ್ಮ ಸಮಸ್ಯೆಗಳನ್ನು ತಿಳಿಸುವಾಗ ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್ನ್ನು ಕಡ್ಡಾಯವಾಗಿ ನಮೂದಿಸಿದರೆ, ಇದರಿಂದ ನಿಮಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.
ಪಿಂಚಣಿ ಅದಾಲತ್ ಎನ್ನುವುದು ನಿವೃತ್ತ ನೌಕರರು ಮತ್ತು ಪಿಂಚಣಿದಾರರ ದೀರ್ಘಕಾಲದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಅಥವಾ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷ ವೇದಿಕೆಯಾಗಿದೆ. ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ನಾಗಸೇನಾ.ಟಿ.ವಿ, ಮತ್ತು ಪದ್ಮವತಿ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಅರೆಮಲ್ಲಾಪುರ, ಸಹಾಯಕ ಲೆಕ್ಕಪರಿಶೋಧನಾ ಆಧಿಕಾರಿ ಚಂದನ್ ಮತ್ತು ಜಾಬ್ಲೀನೋ, ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


