ದಿನದ ಸುದ್ದಿ
ಕುರಿ ಸಾಕಾಣಿಕೆಯಲ್ಲಿ ರೈತರ ಕಷ್ಟಗಳು
- ಆಶಾ ಸಿದ್ದಲಿಂಗಯ್ಯ
ಕುರಿಗಾರರು ತಮ್ಮ ಕುರಿ ಹಿಂಡನ್ನು ಮೇಯಿಸಲು ಸಾಮಾನ್ಯವಾಗಿ ಬೆಟ್ಟ ಗುಡ್ಡ ಪ್ರದೇಶಗಳು, ಕಾಡುಗಳು, ಕೆರೆ ಮೈದಾನಗಳನ್ನು ಅವಲಂಬಿಸಿರುತ್ತಾರೆ. ಬೆಳೆ ಕಟಾವು ಮಾಡಿದ ನಂತರ ಖುಷ್ಕಿ ಜಮೀನುಗಳಲ್ಲಿ ಮೇಯಿಸುವುದು ಬಹಳ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ.
ಏಕೆಂದರೆ ಇವುಗಳನ್ನು ಕಟ್ಟಿ ಮೇಯಿಸುವುದಾಗಲಿ ಹಟ್ಟಿಗಳಲ್ಲಿ ಕೂಡಿ ಮೇಯಿಸುವುದಾಗಲಿ ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಅಂದರೆ ಜೂನ್ ತಿಂಗಳಿಂದ ಸೆಪ್ಟೆಂಬರ್ವರೆಗೆ ಬೆಟ್ಟ ಗುಡ್ಡಗಳಲ್ಲಿ ಹಸಿರು ಹುಲ್ಲು ದೊರೆಯುವುದರಿಂದ ನಂತರ ಖುಷ್ಕಿ ಜಮೀನುಗಳಲ್ಲಿ ಪೈರುಗಳ ಉಳಿಕೆಗಳನ್ನು ಹಾಗೂ ಹೀಗೂ ಡಿಸೆಂಬರ್ ತಿಂಗಳವರೆಗೂ ಮೇಯಿಸಲು ಸಾಧ್ಯವಾಗಬಹುದು.
ಕುರಿಗಾರನ ನಿಜವಾದ ಕಷ್ಟದ ದಿನಗಳು ಜನವರಿಯಿಂದ ಪ್ರಾರಂಭವಾಗಿ ಮೇ ತಿಂಗಳವರೆಗೆ ಮುಂದುವರೆದು ಕುರಿಗಳ ಹೊಟ್ಟೆ ತುಂಬಿಸುವುದಕ್ಕಾಗಿ ಪಡಬಾರದ ಕಷ್ಟ ಪಡಬೇಕಾಗುತ್ತದೆ. ಇಂತಹ ದಿನಗಳಲ್ಲೇ ಕುರಿಗಾರರು ತಮ್ಮ ಹಿಂಡಿನೊಂದಿಗೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಹೋಗುತ್ತಾರೆ.
ಮಾರ್ಗಗಳ ಬದಿಯ ಮೇವಿನ ಮರಗಳ ಟೊಂಗೆಗಳನ್ನು ಕಡಿದು ಹಾಕಿ ಅವುಗಳನ್ನು ಬರಡುಗೊಳೆಸುತ್ತಾರೆ. ಮಲೆನಾಡಿನ ಕಾಡುಗಳಿಗೆ ಲಗ್ಗೆ ಇಡುತ್ತಾರೆ ಇಂತಹ ಸಂದರ್ಭಗಳಲ್ಲೇ ಕುರಿಗಳು ಕುಡಿಯಲು ಸಾಕಷ್ಟು ಮತ್ತು ಯೋಗ್ಯವಾದ ನೀರಿನ ಕೊರತೆಯಿಂದಾಗಿ ಜಂತು ಹುಳುವಿನ ಬಾಧೆ ಮತ್ತು ರೋಗ ರುಜಿನಗಳಿಗೆ ತುತ್ತಾಗುತ್ತವೆ.
ನೂರಾರು ವರ್ಷಗಳಿಂದ ಕುರಿಗಳು ಗೋಮಾಳಗಳಲ್ಲಿ, ಗುಡ್ಡ, ಬೆಟ್ಟ ಮತ್ತು ಅರಣ್ಯ ಪ್ರದೇಶಗಳಲ್ಲಿ ನಿರಂತರವಾಗಿ ಮೇದು ಅವುಗಳಲ್ಲಿ ಉಪಯುಕ್ತವಾದ ಮೇವಿನ ಮರಗಳು, ಹಸಿರು ಹುಲ್ಲಿನ ತಳಿಗಳು ಉಳಿಯದೆ ಭೂಮಿಯು ಬರಡಾಗಿ ಬರೀ ಮುಳ್ಳು ಕಂಟಿಗಳಿಂದಲೂ ಜಾನುವಾರುಗಳಿಗೆ ಉಪಯುಕ್ತವಲ್ಲದ ಸಸ್ಯಗಳಿಂದಲೂ ತುಂಬಿರುವುದಲ್ಲದೆ ಮಣ್ಣಿನ ಕೊರತಕ್ಕೆ ಎಡೆಕೊಟ್ಟು ಭೂಮಿಯ ಸಾರವು ನಿಸ್ಸಾರವಾಗುತ್ತಿದೆ.
ಇದರ ಜೊತೆಗೆ ಮಳೆಯು ಕಡಿಮೆ ಆಗುತ್ತಿದ್ದು, ಹಸಿರು ಹುಲ್ಲಿನ ಮತ್ತು ಗಿಡಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಇಂತಹ ಪ್ರದೇಶಗಳನ್ನು ಗುರುತಿಸಿ ಅಭಿವೃದ್ಧಿ ಪಡೆಸುವುದು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ.
ಇತ್ತೀಚೆಗೆ ಸರ್ಕಾರ ಹಮ್ಮಿಕೊಂಡಿರುವ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಕೆಲವು ಪ್ರದೇಶಗಳು ಅಭಿವೃದ್ಧಿಗೊಂಡಿದ್ದರೂ ಈ ದಿಸೆಯಲ್ಲಿ ಇನ್ನೂ ಬಹಳಷ್ಟು ಕೆಲಸವಾಗಬೇಕಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳು ಸಾಮಾಜಿಕ ಅರಣ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸ್ಥಳಗಳಲ್ಲಿ ಜಾನುವಾರು, ಕುರಿ, ಮೇಕೆಗಳನ್ನು ಮೇಯಿಸುಲು ಬಿಡುವುದಿಲ್ಲ. ಜಾನುವಾರುಗಳನ್ನು ಕಟ್ಟಿ ಮೇಯಿಸಬಹುದಾದರು ಕುರಿಗಳನ್ನು ಅರಣ್ಯಗಳ ಅಂಚು ಪ್ರದೇಶಗಳಲ್ಲಾದರೂ ಮೇಯಿಸಲು ಅವಕಾಶವಿರಬೇಕು.
ತ್ವರಿತವಾಗಿ ಬೆಳೆಯುವ ಮೇವಿನ ಮರಗಳಾದ ಸುಬಾಬುಲ್, ಬ್ರಿಜ ಬಾಬುಲ್, ಬೋರೆ ಮರ, ಗೊಬ್ಬರದ ಗಿಡ, ಗಾಳಿ ಮರ, ಹಾಲವಾಣ, ಕ್ಯಾಲಿಯೊಂಡ್ರ, ಅಗಸೆ, ಸೇವರಿ, ಸರ್ವೆ, ಹೂವರಸೆ, ನುಗ್ಗೆ, ಹೆಬ್ಬೇವು, ಬಳ್ಳಾರಿ ಜಾಲಿ, ಬೆಂಗಾಲ ಜಾಲಿ ಹಾಗೂ ಲಂಟಾನಾ ಮತ್ತು ಹಿಪ್ಪುನೇರಳೆ ಇತ್ಯಾದಿ ಮರಗಳನ್ನು ಹೊಲಗಳ ಬದುಗಳು, ಕೆರೆಕುಂಟೆಗಳ ಅಕ್ಕಪಕ್ಕ ಪಾಳು ಭೂಮಿಯಲ್ಲಿ ಬೆಳೆಯಬೇಕು, ಈ ಮರಗಳಿಂದ ಎಲೆ ಚಿಗುರನ್ನು ತಂದು ಬಾಡಿಸಿ ಕುರಿಗಳಿಗೆ ಕೊಡಬಹುದು.
ಸರ್ಕಾರದವರು ರೈತರ ಜಮೀನುಗಳಲ್ಲಿ ಒಡ್ಡುಗಳನ್ನು ನಿರ್ಮಿಸುತ್ತಿದ್ದು, ಈ ಒಡ್ಡುಗಳ ಮೇಲೆ ಹಾಗೂ ಬದಿಯಲ್ಲಿ ಹುಲ್ಲು ಹಾಗೂ ಮೇವಿನ ಮರಗಳನ್ನು ನೆಡುವುದರಿಂದ ಭೂಮಿಯ ಕೊರೆತ ತಪ್ಪುವುದಲ್ಲದೆ ಭೂಮಿಯ ಸಾರಜನಕದ ಅಂಶ ಸಹ ಹೆಚ್ಚುವುದು. ಆಹಾರ ಧಾನ್ಯಗಳ ಬೆಳೆಗಳನ್ನು ಕಟಾವು ಮಾಡಿದ ನಂತರ ಪರ್ಯಾಯ ಬೆಳೆಯಾಗಿ ಮೇವಿನ ಬೆಳೆಗಳನ್ನು ಬೆಳೆಯಬಹುದು.
ಸರ್ಕಾರವು ಈಗಾಗಲೇ ಹಮ್ಮಿಕೊಂಡಿರುವಂತೆ ಜಲಾನಯನ ಪ್ರದೇಶ ಅಭಿವೃದ್ಧಿ ಅಡಿಯಲ್ಲಿ ಸುಧಾರಿಸಿದ ಹುಲ್ಲು ಹಾಗೂ ಮೇವಿನ ಮರಗಿಡಗಳನ್ನು ಬೆಳೆಸುವುದು; ಈ ಮರಗಿಡಗಳಿಂದ ಹಸಿರೆಲೆಗಳನ್ನು ತಂದು ಒಣಗಿಸಿ ಹದ ಮಾಡಿ ಕೂಡಿಟ್ಟು ಕೊಂಡು ಮೇವಾಗಿ ಕೊಡುವುದು; ಹುಲ್ಲುಗಾವಲು ಪುನಶ್ಚೇತನ ಹಾಗೂ ವಿಕಾಸಗೊಳಿಸುವ ಯೋಜನೆ, ವೀವು ತಳಿಗಳ ಬೀಜೋತ್ಪತ್ತಿ ಸಂಸ್ಕರಣೆ ಹಾಗೂ ಬೀಜಾಭಿವೃದ್ಧಿ ಯೋಜನೆ, ಮೇವು ನಿಧಿ, ಪೌಂಡರ್ ಮಿನಿಕಿಟ್ ವಿತರಣೆ ಯೋಜನೆ; ಮೇವು ಮರಗಳ ಸಸಿ ಬೆಳೆಸುವಿಕೆ ಸಂರಕ್ಷಣೆ ಹಾಗೂ ವಿತರಣೆ ಯೋಜನೆಗಳನ್ನು ಕ್ರಿಯಾತ್ಮಕಗೊಳಿಸುವುದು.
ಪ್ರಚಲಿತ ವ್ಯವಸ್ಥೆಯಲ್ಲಿ ಹೆಚ್ಚುವರಿ ಕುರಿಗಳನ್ನು ರೈತರು ಸ್ಥಳಕ್ಕೆ ಬಂದು ಕೊಂಡುಕೊಳ್ಳುವ ಕಟುಕ ವ್ಯಾಪಾರಸ್ಥರಿಗೆ ಮಾರುತ್ತಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ ಕೊಂಡ ಕಟುಕರು ಗ್ರಾಮಸ್ಥರ ಮಾಂಸದ ಬೇಡಿಕೆಯನುಸಾರ ಅಲ್ಲಿಯೇ ಕಟಾವು ಮಾಡಬಹುದು. ಹತ್ತಿರದ ಪಟ್ಟಣಗಳಿಗೆ ಸಾಗಿಸಬಹುದು ಅಥವಾ ಗುತ್ತಿಗೆದಾರರು ದಲ್ಲಾಳಿಗಳಿಗೆ ಮಾರಲೂಬಹುದು.
ಗ್ರಾಹಕರ ಮಧ್ಯೆ 3-4 ದಲ್ಲಾಳಿಗಳಿರುತ್ತಾರೆ. ಕುರಿಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸಹ ಕುರಿ ಮತ್ತು ಆಡುಗಳ ಸಂಘಟಿತ, ಸುವ್ಯವಸ್ಥಿತ ಮಾರುಕಟ್ಟೆ ಇಲ್ಲ. ಈ ಪದ್ಧತಿಯಲ್ಲಿ ಉತ್ಪತ್ತಿದಾರರಿಗೂ ಲಾಭವಿಲ್ಲ ಮತ್ತು ಉಪಯೋಗಿಸುವ ಗ್ರಾಹಕರಿಗೆ ಉತ್ತಮ ಮಾಂಸ ಸರಿಯಾದ ಬೆಲೆಗೆ ದೊರಕುತ್ತಿಲ್ಲ. ಹೆಚ್ಚು ಲಾಭಾಂಶ ಮಧ್ಯವರ್ತಿ ದಲ್ಲಾಳಿಗಳಿಗೆ ದಕ್ಕುತ್ತದೆ.
ಕುರಿಗಳನ್ನು ವೈಜ್ಞಾನಿಕವಾಗಿ ತೂಕದ ಮಾಂಸದ ಇಳುವರಿ ಆಧಾರಿತವಲ್ಲದ ಬರೀ ಮೇಲ್ನೋಟದ ಶರೀರ ಪ್ರಮಾಣದ ಕಣ್ಣಳತೆಯ ಮೇಲೆ ಕೊಳ್ಳಲಾಗುತ್ತದೆ. ಮಧ್ಯವರ್ತಿಗಳ ಹಿಡಿತದಿಂದ ಕುರಿ ಮತ್ತು ಆಡುಗಳ ಉತ್ಪಾದಕನನ್ನು ಮುಕ್ತಗೊಳಿಸಿ ಅವರಿಗೆ ನ್ಯಾಯವಾದ ಬೆಲೆ ದಕ್ಕುವಂತೆ ಮಾಡಬೇಕಾದರೆ ಸುವ್ಯವಸ್ಥಿತ ಮಾರುಕಟ್ಟೆಯನ್ನು ಕುರಿ ಉತ್ಪಾದಕರ ಸಂಘಗಳ ಮೂಲಕ ಏರ್ಪಾಡು ಮಾಡಬೇಕಾದ ಅಗತ್ಯವಿದೆ.
ಕುರಿ ಸಾಕಾಣಿಕೆ ಗ್ರಾಮೀಣ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಸಹಕಾರಿ
ಕುರಿ ಮತ್ತು ಕುರಿ ಉತ್ಪನ್ನಗಳು ರಾಜ್ಯದ ಆರ್ಥಿಕ ವಹಿವಾಟಿನಲ್ಲಿ ಬಹುಮುಖ್ಯ ಸ್ಥಾನವನ್ನು ಪಡೆದಿದ್ದು, ರಾಜ್ಯದ ವರಮಾನಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಕುರಿಗಳ ಮಾಂಸವು ಉತ್ತಮ ಗುಣಮಟ್ಟದಾಗಿದ್ದು, ದೇಶದ ಬಹು ದೊಡ್ಡ ಮಾಂಸಹಾರಿ ವರ್ಗದ ಆಹಾರದ ಮುಖ್ಯ ಅಂಶವಾಗಿದ್ದು, ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಈ ಉಣ್ಣೆಯನ್ನು ಕಂಬಳಿ, ರತ್ನಗಂಬಳಿ, ಉಣ್ಣೆ ಶಾಲು, ಡ್ರಗೇಟ್ ಟೋಪಿ ಮುಂತಾದ ಉಣ್ಣೆ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತದೆ.
ಕುರಿಗಳನ್ನು ಚಲಿಸುವ ಬ್ಯಾಂಕುಗಳೆಂದು ಅಥವಾ ನಿಧಿಯೆಂದು ಕರೆಯಲಾಗುತ್ತದೆ. ಏಕೆಂದರೆ, ರೈತ ಬೇಕೆಂದಾಗ ಕುರಿಗಳನ್ನು ಮಾರಿ ತಕ್ಷಣ ಹಣ ಪಡೆಯಬಹುದು. ಆದರೆ ವ್ಯವಸಾಯದಿಂದಾಗಲಿ ಅಥವಾ ತೋಟಗಾರಿಕೆಯಿಂದಾಗಲಿ ಈ ರೇತಿ ದಿಢೀರನೆ ಹಣ ಗಳಿಸಲಾಗುವುದಿಲ್ಲ.
ನಿರುದ್ಯೋಗ ನಿವಾರಣೆ ಹಾಗೂ ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಲು ಕೈಗೊಂಡ ಕಾರ್ಯಕ್ರಮಗಳಲ್ಲಿ ಕುರಿ ಘಟಕ ಸ್ಥಾಪನೆಯೂ ಸಹ ಒಂದು ಇದಕ್ಕೆ ಮುಖ್ಯ ಕಾರಣವೆಂದರೆ ಕಡಿಮೆ ಬಂಡವಾಳವನ್ನು ಬಳಸಿಕೊಂಡು ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮತ್ತು ಲಾಭವನ್ನು ಪಡೆಯಲು ಸಹಾಯವಾಗುವುದು.
ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನಾಂಗಗಳಲ್ಲೂ ಲಾಭದಾಯಕ ಕುರಿ ಸಾಕಾಣಿಕೆಯ ಮುಖಾಂತರ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು 20 ಕುರಿ ಮತ್ತು ಒಂದು ಟಗರಿನ ಘಟಕ ಹಮ್ಮಿಕೊಳ್ಳಲು ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳ ಮುಖಾಂತರ ಸಾಲದ ವ್ಯವಸ್ಥೆಯನ್ನು ಸಹ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಮತ್ತು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಮೂಲಕ ಮಾಡಲಾಗಿದೆ.
ರಾಜ್ಯ ಸರ್ಕಾರವು ಕುರಿ ಅಭಿವೃದ್ಧಿಗಾಗಿ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿ ಹಮ್ಮಿಕೊಂಡಿರುವ ಆರು ಅಂಶಗಳ ಕಾರ್ಯಕ್ರಮಗಳಲ್ಲಿ ಒಂದಾದ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳ ಸ್ಥಾಪನೆ ಯೋಜನೆಗೆ ಮಂಜೂರಾತಿ ನೀಡಿದೆ ಅದರಂತೆ ಸದರಿ ಕುರಿ ಸಾಕಾಣಿಕೆದಾರರ ಸಹಕಾರ ಸಂಘಗಳನ್ನು ಸ್ಥಾಪಿಸಲು ಸೂಕ್ತ ಕ್ರಮಗಳನ್ನು ಕೈಗೊಳಲು ಆಯಾ ಜಿಲ್ಲೆಗಳ ಸಹಕಾರ ಸಂಘಗಳ ಇಲಾಖೆಯ ಉಪ ನಿಬಂಧಕರಿಗೆ ಹಾಗೂ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರುಗಳನ್ನು ಕೋರಲಾಗಿದೆ.
ಈ ಸಂಘಗಳ ಮುಖ್ಯ ಉದ್ದೇಶ ಕುರಿ ಉಣ್ಣೆಯ ಮಾರುಕಟ್ಟೆಯನ್ನು ವ್ಯವಸ್ಥಿತಗೊಳಿಸುವುದು, ಕುರಿಗಾರರಿಗೆ ತಾಂತ್ರಿಕತೆ ಹಾಗೂ ಆರ್ಥಿಕ ಸವಲತ್ತುಗಳನ್ನು ಒದಗಿಸುವುದು, ಯಾಂತ್ರೀಕೃತ ಉಣ್ಣೆ ಕಟಾವು ಸೌಲಭ್ಯಗಳನ್ನು ಕಲ್ಪಿಸುವುದು.
ರೈತ ನಷ್ಟ ಅನುಭವಿಸಿದಾಗ ಕೈ ಹಿಡಿಯುವುದು ಕುರಿ ಸಾಕಾಣಿಕೆ ಆದರಿಂದ ಸರಕಾರ ಕುರಿ ಸಾಕಾಣಿಕೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.
ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ17 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ1 day agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ14 hours agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ1 day agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

