Connect with us

ದಿನದ ಸುದ್ದಿ

ರೈತ ಹೋರಾಟವೆಂಬ ಸಾಗರ ; ಇದು ಬರೀ ಪಂಜಾಬಿನದ್ದಲ್ಲ, ಇಡೀ ದೇಶದ ಹೋರಾಟ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ಬೆಂಗಳೂರು: “ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ” ಎಂಬುದು ನಮ್ಮ ನಡುವಿನ ಖ್ಯಾತ ನಾಣ್ನುಡಿ. ಆದರೆ, ನಮ್ಮನ್ನು ಆಳುವ ಪ್ರಭುತ್ವ ಈ ನಾಣ್ನುಡಿಯನ್ನು ಮರೆತು ಇದೀಗ ರೈತರಿಗೆ ದ್ರೋಹವೆಸಗಲು ಮುಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ಗೊಳಿಸಲಾಗುತ್ತಿದೆ. ಪರಿಣಾಮ ವಿಶ್ವ ಪರಂಪರೆಯಲ್ಲಿ ರೈತರ ನಾಡು ಎಂದೇ ಖ್ಯಾತವಾಗಿರುವ ಭಾರತ ರೈತರ ಹಕ್ಕಿನ ಕಾರಣಕ್ಕೆ ಹಿಂದೆಂದೂ ಕಾರಣ ಐತಿಹಾಸಿಕ ಹೋರಾಟವೊಂದಕ್ಕೆ ಸಾಕ್ಷಿಯಾಗಿದೆ. ಹೊಸ ದಶಕವೊಂದು ರೈತ ಹೋರಾಟದೊಂದಿಗೆ ಉದಯಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ಅಕ್ಷರಶಃ ರೈತರ ಪಾಲಿನ ಮರಣ ಶಾಸನ ಎಂಬುದು ರೈತರ ಆರೋಪ. ಹೀಗಾಗಿ ಈ ಕಾನೂನನ್ನು ಹಿಂಪಡೆಯಬೇಕು ಎಂದು ರೈತ ಸಮುದಾಯ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರೆ, ಈ ರೈತ ಹೋರಾಟ ತೀವ್ರತೆಯನ್ನು ಕಂಡಿದ್ದು ಕಳೆದ ವರ್ಷದ ನವೆಂಬರ್ ಅಂತ್ಯದಲ್ಲೇ. ರಾಷ್ಟ್ರ ರಾಜಧಾನಿಗೆ ಹತ್ತಿರದಲ್ಲೇ ಇರುವ ಪಂಜಾಬ್-ಹರಿಯಾಣ ರೈತರು ರಾಜಧಾನಿಗೆ ಲಗ್ಗೆ ಹಾಕಿ, ಇದೀಗ ದೆಹಲಿಯ ಹೊರವಲಯದಲ್ಲಿ ಬೀಡು ಬಿಟ್ಟಿದ್ದಾರೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಹಾಗಾದರೆ ಇದು ಕೇವಲ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟವೇ? ಈ ಹೋರಾಟಕ್ಕೆ ಬೇರೆ ರಾಜ್ಯದ ರೈತರ ಬೆಂಬಲ ಇಲ್ಲವೇ? ಎಂಬುದು ಪ್ರಶ್ನೆ. ಅಸಲಿಗೆ ಕೊರೋನಾ ಕಾರಣಕ್ಕೆ ದೇಶದ ನಾನಾ ಮೂಲೆಗಳಿಂದ ದೆಹಲಿಗೆ ತೆರಳಲಾಗದ ರೈತರು ತಮ್ಮ ರಾಜ್ಯದಲ್ಲೇ ಹಲವೆಡೆ ಉಗ್ರ ಹೋರಾಟಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಇದು ಕೇವಲ ಪಂಜಾಬ್ ಹರಿಯಾಣ ರೈತರ ಹೋರಾಟವಷ್ಟೇ ಹೊರತು, ಇಡೀ ಭಾರತದ ಹೋರಾಟವಲ್ಲ ಎಂದು ಬಿಂಬಿಸುವಲ್ಲಿ ನಮ್ಮ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಸಾಕಷ್ಟು ಶ್ರಮವಹಿಸಿವೆ. ಇದು ಮಾಧ್ಯಮಗಳು ರೈತರಿಗೆ ಎಸಗಿದ ದ್ರೋಹ ಎನ್ನಲು ಅಡ್ಡಿಯಿಲ್ಲ.

ಆದರೆ, ಹರಿವ ನದಿಗೆ ನೂರಾರು ತೊರೆ ಎಂಬಂತೆ ದೆಹಲಿ ರೈತ ಹೋರಾಟಕ್ಕೆ ಇಡೀ ದೇಶದ ರೈತರು ಸ್ಪಂದಿಸಿದ್ದಾರೆ. ತಾವಿದ್ದಲ್ಲಿಂದಲೇ ತಮ್ಮ ದನಿಗೂಡಿಸಿದ್ದಾರೆ ಎಂಬುದೇ ಕಟುವಾಸ್ತವ. ಹಾಗಾದರೆ, ಕಳೆದ ಎರಡು ತಿಂಗಳಲ್ಲಿ ದೆಹಲಿ ರೈತರ ಹೋರಾಟವನ್ನು ಬೆಂಬಲಿಸಿ ಭಾರತದಲ್ಲಿ ಯಾವ ಯಾವ ರಾಜ್ಯದಲ್ಲಿ ರೈತರು ಹೋರಾಟ ನಡೆಸಿದ್ದಾರೆ? ಹೋರಾಟದ ತೀವ್ರತೆ ಏನು? ಈ ಹೋರಾಟವನ್ನು ತಡೆಯಲು ಅಲ್ಲಿನ ಸರ್ಕಾರಗಳು ಕೈಗೊಂಡ ಕ್ರಮ ಏನು? ಎಂಬ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ದ್ರಾವಿಡ ನಾಡಿನಲ್ಲಿ ಮೊಳಗಿತ್ತು ರೈತ ಕಹಳೆ

ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿ ಕಡೆ ಮುಖ ಮಾಡುತ್ತಿದ್ದಂತೆಯೇ ತಮಿಳುನಾಡಿನಲ್ಲೂ ರೈತರು ಹೋರಾಟದ ಕಣಕ್ಕೆ ಧುಮುಕಿದ್ದರು.

ನವೆಂಬರ್ ಅಂತ್ಯದಲ್ಲಿ ರೈತರು ದೆಹಲಿ ಕಡೆಗೆ ಹೊರಡುತ್ತಿದ್ದಂತೆ ತಮಿಳುನಾಡಿನ ಪ್ರಬಲ ವಿರೋಧ ಪಕ್ಷವಾದ ಡಿಎಂಕೆ ಕಳೆದ ವರ್ಷ ಡಿಸೆಂಬರ್ 05 ರಂದು ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ “ಅನ್ನದಾತನಿಗಾಗಿ ಒಂದು ದಿನದ ಉಪವಾಸ ಸತ್ಯಾಗ್ರಹ” ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ತಮಿಳುನಾಡಿನ ಎಲ್ಲಾ 36 ರೈತ ಸಂಘಟನೆಗಳೂ ಬೆಂಬಲಿಸಿದ್ದವು. ಅಲ್ಲದೆ, ಸಾವಿರಾರು ರೈತರು ಹಾಗೂ ಡಿಎಂಕೆ ಕಾರ್ಯಕರ್ತರು ಈ ಹೋರಾಟದಲ್ಲಿ ಪಾಲ್ಗೊಂಡು ಒಂದು ದಿನ ಉಪವಾಸ ಆಚರಿಸುವ ಮೂಲಕ ಗಾಂಧಿ ಮಾರ್ಗದಲ್ಲಿ ಹೋರಾಟದ ಕಿಚ್ಚು ಹಚ್ಚಿಸಿದ್ದರು.

ಅಲ್ಲಿಂದ ಈವರೆಗೆ ತಮಿಳುನಾಡಿನಲ್ಲಿ ಪ್ರತಿದಿನ ಒಂದಲ್ಲಾ ಒಂದು ಜಿಲ್ಲೆಯಲ್ಲಿ ರೈತರು ಕೇಂದ್ರ ಸರ್ಕಾರವನ್ನು ವಿರೋಧಿಸಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಲೇ ಇದ್ದಾರೆ. ಈ ಹೋರಾಟಗಳಲ್ಲೇ ಹೆಚ್ಚು ಗಮನ ಸೆಳೆದ ಹೋರಾಟವೆಂದರೆ ಡಿಸೆಂಬರ್ 11ರಂದು ರೈತರ ರಾಜಭವನ ಮುತ್ತಿಗೆ ಚಳುವಳಿ, ಡಿಸೆಂಬರ್ 15 ರಂದು ತಂಜಾವೂರು ಜಿಲ್ಲೆಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ ಮತ್ತು ರೈಲ್ ರೋಖೋ ಚಳುವಳಿ.

ತಮಿಳುನಾಡಿನ 22 ಜಿಲ್ಲೆಗಳ ರೈತರು ಒಟ್ಟಾಗಿ ಡಿಸೆಂಬರ್ 11 ರಂದು ಚೆನ್ನೈನಲ್ಲಿರುವ ರಾಜಭವನಕ್ಕೆ ಮುತ್ತಿಗೆ ಹಾಕಿದ್ದರೆ, ಡಿಸೆಂಬರ್ 15 ರಂದು ತಂಜಾವೂರಿನ ಕಾವೇರಿ ಡೆಲ್ಟಾ ಭಾಗದಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ್ದರು. ಈ ರ್ಯಾಲಿಗೆ ಪೊಲೀಸರಿಂದ ಅನುಮತಿಯನ್ನೂ ಪಡೆಯಲಾಗಿತ್ತು. ಆದರೆ, ದಿಢೀರೆಂದಯ ಮಾರ್ಗ ಮಧ್ಯೆ ರ್ಯಾಲಿಯನ್ನು ತಡೆಯಲಾಗಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಒಂದಿಡೀ ದಿನ ತಂಜಾವೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಯನ್ನೇ ತಡೆದು ಪ್ರತಿಭಟಿಸಿದ್ದರು. ಅಲ್ಲದೆ, ಕೃಷಿ ಕಾನೂನನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈಲ್ ರೋಖೋ ಚಳುವಳಿಯನ್ನೂ ನಡೆಸಿದ್ದರು.

ಇದೇ ವೇಳೆ ತಮಿಳುನಾಡಿನ ರೈತ ಸಂರಕ್ಷಣಾ ಸಂಘದ ರೈತರ ಒಂದು ತಂಡ ದೆಹಲಿಗೆ ತೆರಳಿ ರೈತ ಹೋರಾಟದಲ್ಲಿ ಭಾಗವಹಿಸಿದ್ದರೆ, ಮತ್ತೊಂದೆಡೆ ತಮಿಳುನಾಡಿನ ತಿರುನಲ್ವೇಲಿ, ನಾಗಪಟ್ಟಣಂ ಜಿಲ್ಲೆಗಳಲ್ಲಿ ರೈತರು ನೇಗಿಲು ಹಿಡಿದು ಕೇಂದ್ರದ ವಿರುದ್ಧ ಹೋರಾಟ ನಡೆಸಿದ್ದರು. ಈ ವೇಳೆ ರೈತರ ಮೇಲೆ ಲಾಠಿ ಚಾರ್ಚ್ ಮಾಡಲಾಗಿತ್ತು. ಅಲ್ಲದೆ, 62 ಜನರನ್ನು ಒತ್ತಾಯಪೂರ್ವಕವಾಗಿ ಬಂಧಿಸಿ ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು ಎಂಬುದು ಉಲ್ಲೇಖಾರ್ಹ.

ಮಹಾರಾಷ್ಟ್ರದ 21 ಜಿಲ್ಲೆಯಿಂದ ಮುಂಬೈಗೆ ಭೋರ್ಗರೆದ ರೈತರ ದಂಡು

ದೆಹಲಿ ರೈತ ಹೋರಾಟ ಮತ್ತು ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ಬೆಂಬಲಿಸಿ ಮಹಾರಾಷ್ಟ್ರದ ರೈತರು ಸಹ ಜನವರಿ 26 ರಂದು ಮುಂಬೈ ಮಹಾನಗರದಲ್ಲಿ ರ್ಯಾಲಿ ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಕೇಂದ್ರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಲು ವೇದಿಕೆ ಸಿದ್ದಪಡಿಸಿದ್ದಾರೆ.

ಇದರ ಭಾಗವಾಗಿ ಮಹಾರಾಷ್ಟ್ರದ 21 ಜಿಲ್ಲೆಗಳ ಲಕ್ಷಾಂತರ ರೈತರು ಕಳೆದ ಜನವರಿ 23 ರಂದು ನಾಸಿಕ್ನಿಂದ ಮುಂಬೈಗೆ ಪಾದಯಾತ್ರೆ ಹೊರಟಿದ್ದಾರೆ. ಈ ಯಾತ್ರೆ ಸೋಮವಾರ (ಜನವರಿ 25) ಮುಂಬೈ ಪ್ರವೇಶಿಸಲಿದೆ. ಅಲ್ಲದೆ, ಹೆಸರಾಂತ ಆಜಾದ್ ಮೈದಾನದಲ್ಲಿ ಮಹಾರಾಷ್ಟ್ರದ ಲಕ್ಷಾಂತರ ರೈತರು ಜಮಾಯಿಸಲಿದ್ದು, ದೆಹಲಿಯಲ್ಲಿ ಹೋರಾಟ ನಿರತ ರೈತರಿಗೆ ಬಲ ತುಂಬಲಿದ್ದಾರೆ. ಈ ಹೋರಾಟದಲ್ಲಿ ಎನ್ಸಿಪಿ ಹಿರಿಯ ನಾಯಕ ಶರದ್ ಪವಾರ್ ಸಹ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಕೃಷಿ ಕಾಯ್ದೆಯನ್ನು ವಿರೋಧಿಸಿ ಈ ಪ್ರಮಾಣ ಸಂಖ್ಯೆಯಲ್ಲಿ ರೈತರು ಮುಂಬೈಗೆ ಲಗ್ಗೆ ಇಡುತ್ತಿರುವ ಕುರಿತು ದೇಶದ ಯಾವ ಸುದ್ದಿ ಮಾಧ್ಯಮಗಳೂ ಸಹ ಒಂದೈದು ನಿಮಿಷವೂ ಸಹ ಸುದ್ದಿ ಮಾಡದೆ ಇರುವುದು ದುರಂತವೇ ಸರಿ!

ಮಧ್ಯಪ್ರದೇಶದಲ್ಲಿ ರೈತರ ರ್ಯಾಲಿ ವಿರುದ್ಧ ಜಲಫಿರಂಗಿ ಬಳಸಿದ್ದ ಸರ್ಕಾರ

ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ಮಧ್ಯಪ್ರದೇಶದ ಭೂಪಾಲ್ನಲ್ಲಿ ಕಾಂಗ್ರೆಸ್ ಪಕ್ಷ ಎರಡು ವಾರಗಳ ಪ್ರತಿಭಟನಾ ಕಾರ್ಯಕ್ರಮ ಆಯೋಜಿಸಿತ್ತು. ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಈ ಹೋರಾಟದ ನೇತೃತ್ವವಹಿಸಿದ್ದರು.

ಜನವರಿ 23 ರಂ ಮಧ್ಯಾಹ್ನ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರದ ಜವಾಹರ್ ಚೌಕ್ ಪ್ರದೇಶದಲ್ಲಿ ಒಟ್ಟುಗೂಡಿದ್ದರು. ಅಲ್ಲದೆ ರಾಜಭವನಕ್ಕೆ ಮುತ್ತಿಗೆ ಹಾಕಲು ಯೋಜಿಸಲಾಗಿತ್ತು. ಆದರೆ, ಪೊಲೀಸರು ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಪರಿಣಾಮ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜಭವನವನ್ನು ಸಮೀಪಿಸುತ್ತಿದ್ದಂತೆ, ಅವರನ್ನು ನಿಯಂತ್ರಿಸಲು ಸಾಧ್ಯವಾಗದ ಪೊಲೀಸರು ಹೋರಾಟಗಾರರ ಮೇಲೆ ಅಶ್ರವಾಯು ದಾಳಿ, ಜಲಫಿರಂಗಿ ದಾಳಿ ನಡೆಸಿದ್ದಾರೆ.

ಪೊಲೀಸರ ಬಲ ಪ್ರಯೋಗದ ಮೂಲಕ ಮಧ್ಯಪ್ರದೇಶದಲ್ಲಿ ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಲಾಗಿತ್ತು. ಆದರೂ, ಸಹ ಇಂದಿಗೂ ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಪ್ರತಿನಿತ್ಯ ರೈತರು ಹೋರಾಟವನ್ನು ಮುಂದುವರೆಸುತ್ತಲೇ ಇದ್ದಾರೆ.

ಕಲ್ಕತ್ತಾದ ರಾಜಭವನಕ್ಕೆ 40 ಸಾವಿರ ಜನ ಮೆರವಣಿಗೆ

ಕೇಂದ್ರ ಸರ್ಕಾರ ಕೃಷಿ ಕಾನೂನನ್ನು ಜಾರಿಗೆ ತರುತ್ತಿದ್ದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾನೂನನ್ನು ಬಹಿರಂಗವಾಗಿ ಟೀಕಿಸಿದ್ದರು. ಅಲ್ಲದೆ ಅಲ್ಲಿನ ವಿಧಾನಸಭೆಯಲ್ಲಿ ಈ ಕಾನೂನುಗಳ ವಿರುದ್ಧ ನಿರ್ಣಯವನ್ನು ಮಂಡಿಸಿದ್ದರು. ಆದರೆ, ದೆಹಲಿ ರೈತ ಹೋರಾಟಕ್ಕೆ ಬಲ ತುಂಬಲು ಮುಂದಾಗಿದ್ದ ಬಂಗಾಳದ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಡಿಸೆಂಬರ್ 17 ರಂದು ಸುಮಾರು 40,000 ರೈತ ಹೋರಾಟಗಾರರ ಜೊತೆಗೆ ಕಲ್ಕತ್ತಾದ ರಾಜಭವನಕ್ಕೆ ಮೆರವಣಿಗೆ ಆಯೋಜಿಸಿತ್ತು. ಅಲ್ಲದೆ, ಜಿಲ್ಲಾವಾರು ಹೋರಾಟಗಳು ಪ್ರತಿನಿತ್ಯ ನಡೆಯುತ್ತಲೇ ಇದೆ.

ಈ ಹೋರಾಟವನ್ನು ಬಂಗಾಳದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಹೋರಾಟ ಎಂದು ಬಣ್ಣಿಸಲಾಗುತ್ತಿದೆ. ಈ ಮೂಲಕ ರೈತರ ಪ್ರತಿಭಟನೆಯು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಂಘಟಕರು ತಿಳಿಸಿದ್ದರು.

ಕೇರಳದಲ್ಲೂ ರೈತ ಕಹಳೆ

ದೆಹಲಿಯ ಸಿಂಗು ಗಡಿಯಲ್ಲಿ ರೈತ ಹೋರಾಟ ಕಾವು ಪಡೆಯುತ್ತಿದ್ದಂತೆ ಕೇರಳದ ರೈತರು ಸಹ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದರು. ತಿರುವನಂತಪುರಂನಲ್ಲಿ ಜಂಟಿ ರೈತ ಪರಿಷತ್ ಆಯೋಜಿಸಿದ್ದ ಅನಿರ್ದಿಷ್ಟ ಪ್ರತಿಭಟನೆ ಇಂದಿಗೂ ಸಹ ಮುಂದುವರೆದಿದೆ. ಈ ಪ್ರತಿಭಟನೆಯಲ್ಲಿ 600 ರೈತ ಸಂಘಗಳು ಪಾಲ್ಗೊಂಡಿವೆ. ಅಲ್ಲದೆ ಸ್ವತಃ ಕೇರಳ ಸರ್ಕಾರ ಅಲ್ಲಿನ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳ ವಿರುದ್ಧ ನಿರ್ಣಯ ಜಾರಿಗೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಆಂಧ್ರ ತೆಲಂಗಾಣದಲ್ಲೂ ಹೋರಾಟಕ್ಕಿಳಿದ ರೈತರು

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳು ರೈತರನ್ನು ಮತ್ತಷ್ಟು ಶೋಷಿಸುತ್ತವೆ ಮತ್ತು ದೇಶದ ಆಹಾರ ಭದ್ರತೆಗೆ ಧಕ್ಕೆ ತರುವ ಕಪ್ಪು ಕಾನೂನುಗಳು ಎಂದು ವಿರೋಧಿಸಿರುವ ಆಂಧ್ರಪ್ರದೇಶದ “ಅಖಿಲಾ ರೈತ ಪೋರಾಟ ಸಮನ್ವಯ ಸಮಿತಿ” ಮುಂದಾಳತ್ವದಲ್ಲಿ ಆಂಧ್ರಪ್ರದೇಶದಲ್ಲೂ ರೈತ ಹೋರಾಟ ನಡೆಯುತ್ತಲೇ ಇದೆ.

ಕಳೆದ ವಾರ ಮಾಜಿ ಸಚಿವ ವಡ್ಡೆ ಶೋಭನದೀಶ್ವರ್ ರಾವ್ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಹೋರಾಟ ಆಯೋಜಿಸಲಾಗಿತ್ತು. ವೈ.ಕೇಶವ ರಾವ್, ಎಂ.ಸೂರ್ಯನಾರಾಯಣ, ವಿ.ಶ್ರೀನಿವಾಸ ರಾವ್, ಸಿ.ಎಚ್. ಬಾಬು ರಾವ್, ರವುಲಾ ವೆಂಕಯ್ಯ, ಯಲಮಂದ ರಾವ್, ಪಿ.ಜಮಲಯ, ವಿ.ವೆಂಕಟೇಶ್ವರಲು ಸೇರಿದಂತೆ ಆಂಧ್ರದ ಪ್ರಮುಖ ನಾಯಕರು ಈ ಹೋರಾಟದಲ್ಲಿ ಭಾಗಿಯಾಗಿದ್ದರು. ಆದರೆ, ಈ ಹೋರಾಟದಲ್ಲಿ ಉದ್ವಿಗ್ನತೆ ಉಂಟಾದ ಪರಿಣಾಮ ಈ ಎಲ್ಲಾ ಹೋರಾಟಗಾರರನ್ನು ಬಂಧಿಸಲಾಗಿತ್ತು.

ಇದೇ ವೇಳೆ ತೆಲಂಗಾಣದ ರೈತರೂ ಸಹ ಒಗ್ಗಟ್ಟನ್ನು ಪ್ರದರ್ಶಿಸಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಹೈದ್ರಾಬಾದ್ಗೆ ಆಗಮಿಸಿದ್ದ ರೈತರು ಹಾಗೂ ರೈತ ಮಹಿಳೆಯರು ದೊಡ್ಡ ಮಟ್ಟದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಅಲ್ಲದೆ, ಕಳೆದ ಎರಡು ತಿಂಗಳಲ್ಲಿ ಹಲವಾರು ಜಿಲ್ಲೆಗಳು ಹೋರಾಟಕ್ಕೆ ಸಾಕ್ಷಿಯಾಗಿವೆ.

ಬಿಜೆಪಿಗರಿಗೆ ನಿಷೇಧ ಹೇರಿದ ಉತ್ತರಪ್ರದೇಶ-ಹರಿಯಾಣ ಗ್ರಾಮಗಳು

ಕೇಂದ್ರದ ಕೃಷಿ ಕಾಯ್ದೆಯ ವಿರುದ್ದ ಪಂಜಾಬ್ ಮತ್ತು ಹರಿಯಾಣದಲ್ಲಿನ ಹೋರಾಟ ತಾರಕಕ್ಕೇರಿದೆ. ದೇಶದಾದ್ಯಂತ ವಿವಿಧೆಡೆ ಹೋರಾಟಗಳು ನಡೆಯುತ್ತಲೇ ಇದೆ. ಆದರೆ, ಇಡೀ ದೇಶದ ಹೋರಾಟ ಒಂದು ಬಗೆಯದ್ದಾದರೆ, ಹರಿಯಾಣದ 60 ಗ್ರಾಮಗಳು ಹಾಗೂ ಉತ್ತರ ಪ್ರದೇಶದ ಕೆಲ ಗ್ರಾಮಗಳ ಹೋರಾಟ ವಿಭಿನ್ನ ರೀತಿಯಲ್ಲಿ ಸಾಗಿದೆ.

ದೇಶದ ರೈತರು ದೆಹಲಿಯಲ್ಲಿ ತಮ್ಮ ಹೋರಾಟವನ್ನು ಆರಂಭಿಸುತ್ತಿದ್ದಂತೆ ಹರಿಯಾಣ ಹಾಗೂ ಉತ್ತರಪ್ರದೇಶದ ಅನೇಕ ಹಳ್ಳಿಗಳ ಜನ ತಮ್ಮ ಗ್ರಾಮಗಳಿಗೆ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ ಹಾಗೂ ಜೆಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಪ್ರವೇಶವನ್ನೇ ನಿಷೇಧಿಸಿದ್ದಾರೆ.

ರೈತ ವಿರೋಧಿ ಕಾನೂನನ್ನು ವಿರೋಧಿಸಿ ರಾಷ್ಟ್ರದಾದ್ಯಂತದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ರಾಜ್ಯದ ಅನೇಕ ಗ್ರಾಮಗಳ ನಿವಾಸಿಗಳು ಬಿಜೆಪಿ-ಜೆಜೆಪಿಯ ಸಚಿವರು ಮತ್ತು ಶಾಸಕರನ್ನು ಬಹಿಷ್ಕರಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದಾರೆ.

ಈ ಬಗ್ಗೆ ರೈತರು ಗ್ರಾಮದ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಹೋರ್ಡಿಂಗ್ಗಳನ್ನು ಹಾಕಿದ್ದು, ಬಿಜೆಪಿ ಮತ್ತು ಜೆಜೆಪಿ ನಾಯಕರು ಹಾಗೂ ಕಾರ್ಯಕರ್ತರು ಗ್ರಾಮಕ್ಕೆ ಪ್ರವೇಶಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಭಾಗಶಃ ಬಾರತ ಇತಿಹಾಸದಲ್ಲಿ ಗ್ರಾಮದ ಪ್ರವೇಶದ್ವಾರವೊಂದರಲ್ಲಿ ಹೀಗೊಂದು ಬೋರ್ಡಿಂಗ್ ಹಾಕಿದ್ದ ಇತಿಹಾಸ ಈ ಹಿಂದೆಯೂ ಇಲ್ಲ, ಮುಂದೆಯೂ ಇರಲಿಕ್ಕಿಲ್ಲವೇನೋ? ಆದರೆ, ಈ ಎಲ್ಲಾ ಸಂಗತಿಗಳು ನಮಗೆ ನೀಡುವ ಒಂದೇ ಒಂದು ಸಂದೇಶವಿಷ್ಟೆ. ಇದು ಕೇವಲ ಪಂಜಾಬ್-ಹರಿಯಾಣ ರೈತರ ಹೋರಾಟವಷ್ಟೇ ಅಲ್ಲ. ಬದಲಿಗೆ ಇದು ಇಡೀ ದೇಶದ ರೈತ ಸಮುದಾಯದ ಹೋರಾಟ ಎಂಬುದೇ ಆಗಿದೆ.

ಪಂಜಾಬ್ ಹೋರಾಟವಲ್ಲ…ಇಡೀ ಬಾರತದ ರೈತ ಹೋರಾಟವೆನ್ನಿ..!

“ತುತ್ತು ಅನ್ನವ ತಿನ್ನುವ ಮೊದಲು ರೈತನನ್ನು ನೆನೆ” ಎಂಬುದು ನಮ್ಮ ನಡುವಿನ ಖ್ಯಾತ ನಾಣ್ನುಡಿ. ಆದರೆ, ನಮ್ಮನ್ನು ಆಳುವ ಪ್ರಭುತ್ವ ಈ ನಾಣ್ನುಡಿಯನ್ನು ಮರೆತು ಇದೀಗ ರೈತರಿಗೆ ದ್ರೋಹವೆಸಗಲು ಮುಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ಗೊಳಿಸಲಾಗುತ್ತಿದೆ. ಪರಿಣಾಮ ವಿಶ್ವ ಪರಂಪರೆಯಲ್ಲಿ ರೈತರ ನಾಡು ಎಂದೇ ಖ್ಯಾತವಾಗಿರುವ ಭಾರತ ರೈತರ ಹಕ್ಕಿನ ಕಾರಣಕ್ಕೆ ಹಿಂದೆಂದೂ ಕಾರಣ ಐತಿಹಾಸಿಕ ಹೋರಾಟವೊಂದಕ್ಕೆ ಸಾಕ್ಷಿಯಾಗಿದೆ. ಹೊಸ ದಶಕವೊಂದು ರೈತ ಹೋರಾಟದೊಂದಿಗೆ ಉದಯಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ಅಕ್ಷರಶಃ ರೈತರ ಪಾಲಿನ ಮರಣ ಶಾಸನ ಎಂಬುದು ರೈತರ ಆರೋಪ. ಹೀಗಾಗಿ ಈ ಕಾನೂನನ್ನು ಹಿಂಪಡೆಯಬೇಕು ಎಂದು ರೈತ ಸಮುದಾಯ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದೆ. ಆದರೆ, ಈ ರೈತ ಹೋರಾಟ ತೀವ್ರತೆಯನ್ನು ಕಂಡಿದ್ದು ಕಳೆದ ವರ್ಷದ ನವೆಂಬರ್ ಅಂತ್ಯದಲ್ಲೇ. ರಾಷ್ಟ್ರ ರಾಜಧಾನಿಗೆ ಹತ್ತಿರದಲ್ಲೇ ಇರುವ ಪಂಜಾಬ್-ಹರಿಯಾಣ ರೈತರು ರಾಜಧಾನಿಗೆ ಲಗ್ಗೆ ಹಾಕಿ, ಇದೀಗ ದೆಹಲಿಯ ಹೊರವಲಯದಲ್ಲಿ ಬೀಡು ಬಿಟ್ಟಿದ್ದಾರೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ.

ಹಾಗಾದರೆ ಇದು ಕೇವಲ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟವೇ? ಈ ಹೋರಾಟಕ್ಕೆ ಬೇರೆ ರಾಜ್ಯದ ರೈತರ ಬೆಂಬಲ ಇಲ್ಲವೇ? ಎಂಬುದು ಪ್ರಶ್ನೆ. ಅಸಲಿಗೆ ಕೊರೋನಾ ಕಾರಣಕ್ಕೆ ದೇಶದ ನಾನಾ ಮೂಲೆಗಳಿಂದ ದೆಹಲಿಗೆ ತೆರಳಲಾಗದ ರೈತರು ತಮ್ಮ ರಾಜ್ಯದಲ್ಲೇ ಹಲವೆಡೆ ಉಗ್ರ ಹೋರಾಟಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ, ಇದು ಕೇವಲ ಪಂಜಾಬ್ ಹರಿಯಾಣ ರೈತರ ಹೋರಾಟವಷ್ಟೇ ಹೊರತು, ಇಡೀ ಭಾರತದ ಹೋರಾಟವಲ್ಲ ಎಂದು ಬಿಂಬಿಸುವಲ್ಲಿ ನಮ್ಮ ದೇಶದ ಮುಖ್ಯವಾಹಿನಿ ಮಾಧ್ಯಮಗಳು ಸಾಕಷ್ಟು ಶ್ರಮವಹಿಸಿವೆ. ಇದು ಮಾಧ್ಯಮಗಳು ರೈತರಿಗೆ ಎಸಗಿದ ದ್ರೋಹ ಎನ್ನಲು ಅಡ್ಡಿಯಿಲ್ಲ.

ಕೃಪೆ : mass media foundation, Delhi

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

Published

on

ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ . ಸಿ. ಹೆಚ್ ಅವರು ಉದ್ಘಾಟಿಸಿದರು.

ಸನಾವುಲ್ಲಾ ನವಿಲೇಹಾಳು ಅವರು ಉಪನ್ಯಾಸ ಮಾಡಿ ಹೊಸ ತಲೆಮಾರಿನವರು ಸಮಾಜಿಕ ಜಾಲತಾಣಗಳಲ್ಲಿ ಗೇಮ್ , ರೀಲ್ಸ್ ಇತರೆ ವಿಷಯಗಳಲ್ಲಿ ಮುಳುಗಿ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಉಪಸ್ಥಿತರಿದ್ದ ಕಾಲೇಜಿನ ಕುಲಸಚಿವರಾದ ಶ್ರೀ ಜಗದೀಶ್ ಹೆಚ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತು ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರು. ಸಿಸಿಟೆಕ್ ಮ್ಯಾನೇಜರ್ ಆದ ಶ್ರೀ ಶಿವಕುಮಾರ ಸ್ವಾಮಿ ಎಸ್.ಹೆಚ್. ಸಂಯೋಜಕರಾದ ಶ್ರೀ ಮತಿ ಆಸೀಯಾ ಬಾನು ಬಿ. ಪ್ರಾಸ್ಥಾವಿಕವಾಗಿ ಮಾತನಾಡಿದರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಬೃಂದ ಕಾರ್ಯಕ್ರಮ ನಿರೂಪಿಸಿದರು,
ವೈಷ್ಣವಿ, ಲಾವಣ್ಯ, ಭಾವನ ಪ್ರಾರ್ಥಿಸಿದರು, ಉಪನ್ಯಾಸಕಿ ಪ್ರಿಯಾಂಕ ಟಿ ಎಸ್ ವಂದಿಸಿದರು‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending