Connect with us

ದಿನದ ಸುದ್ದಿ

ಇವರ ವಿವೇಕವಿಲ್ಲದ ವಿದ್ಯೆಗೆ ಬೆಂಕಿ ಬಿತ್ತು….‌ಛೇ !

Published

on

  • ಹಿರಿಯೂರು ಪ್ರಕಾಶ್

ವಿದ್ಯೆಗೂ ವಿವೇಕಕ್ಕೂ ಸಂಬಂಧವಿಲ್ಲವೆನ್ನುವುದು ಆಗಾಗ್ಗೆ ಸಾಬೀತಾಗುತ್ತಲೇ ಬಂದಿದೆ. ಅತ್ಯುನ್ನತ ಶ್ರೇಣಿಯಲ್ಲಿ ಡಿಗ್ರಿಗಳನ್ನು ಪಡೆದು ವಿದ್ಯಾವಂತರಾದರಷ್ಟೇ ಸಾಲದು , ಅದಕ್ಕೆ ಪೂರಕವಾದ ಕಾಮನ್ ಸೆನ್ಸ್ ಹಾಗೂ ಸ್ವಲ್ಪಮಟ್ಟಿಗೆ ವಿವೇಕವನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಡಿಗ್ರಿ ಸರ್ಟಿಫಿಕೇಟ್ ಒಂಥರಾ ವೇಸ್ಟ್ ಪೇಪರ್ ಇದ್ದಂತೆ ಕಸದ ಬುಟ್ಟಿಗೂ ಅನ್ ಫ಼ಿಟ್ !

ಈ ವಿಷಯ ಈಗ್ಯಾಕೆ ಬಂತು ಅಂತೀರಾ..??

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಇಬ್ಬರು ಸುಶಿಕ್ಷಿತ ಭೋಧಕ ದಂಪತಿಗಳು ಪರಾಕಾಷ್ಠೆಯ ಮೂಢನಂಬಿಕೆಗೆ ಮರುಳಾಗಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನವೇ ವಯಸ್ಸಿಗೆ ಬಂದ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭೀಭತ್ಸ ಘಟನೆಯನ್ನು ನೋಡಿದಾಗ ನಾನು ಮೇಲೆ ಉಲ್ಲೇಖಿಸಿರುವ ಮಾತುಗಳ ಸತ್ಯಾಸತ್ಯತೆ ತಿಳಿಯುತ್ತದೆ.

ಎಂತಹಾ ಪರಮ ನೀಚರು ಈ ಜನ ! ತಂದೆಯಾದ ಪುರುಷೋತ್ತಮ್ ನಾಯ್ಡು ಮದನಪಲ್ಲಿಯ ಮಹಿಳಾ ಪದವಿ ಕಾಲೇಜಿನಲ್ಲಿ ಪ್ರೊಫೆಸರ್ ಹಾಗೆಯೇ ತಾಯಿಯಾದ ಪದ್ಮಜಾ ಸಹಾ ಗಣಿತದಲ್ಲಿ ಗೋಲ್ಡ್ ಮೆಡಲ್ ಪಡೆದ ಶಿಕ್ಷಕಿ ಹಾಗೂ ವೈಸ್ ಪ್ರಿನ್ಸಿಪಾಲ್ ಅಂತೆ. ಈ ನರಾಧಮರ ನೀಚ ಕೃತ್ಯಕ್ಕೆ ಕಾರಣವೆಂದರೆ, ಮೊನ್ನೆ‌ ಭಾನುವಾರದಂದು ಕಲಿಯುಗ ಅಂತ್ಯವಾಗಿ ಮಾರನೆಯ ದಿನವೇ ಸತ್ಯಯುಗ ಆರಂಭವಾಗಿ ಆ ದಿನವೇ ತಮ್ಮ ಮಕ್ಕಳು‌ ಮರುಹುಟ್ಟು ಪಡೆಯಲಿದ್ದಾರೆಂದು ಯಾವನೋ ನಫ಼್ತಟಾಲ್ ನಾಲಾಯಕ್ ನನ್ಮಗ ಹೇಳಿದ್ದ ಮೂಢನಂಬಿಕೆಯ ಭವಿಷ್ಯವನ್ನು ನಂಬಿದ ಈ ಅಯೋಗ್ಯ ಪೇರೆಂಟ್ಸ್ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮನೆಯ ದೇವರಕೋಣೆಯಲ್ಲಿ ವಿವಸ್ತ್ರಗೊಳಿಸಿ ತ್ರಿಶೂಲದಿಂದ ಹಾಗೂ ಡಂಬಲ್ಸ್‌ನಿಂದ ಕೊಚ್ಚಿ ಕೊಂದಿದ್ದಾರೆಂದು ಆನಂತರ ಶವಗಳ ಮುಂದೆ ಅವರ ತಾಯಿ ನರ್ತಿಸಿದ್ದಾರೆಂದೂ ವರದಿಯಾಗಿದೆ. ಇಷ್ಟಾದ ಮೇಲೂ ಕಿಂಚಿತ್ತೂ ಪಾಪ ಪ್ರಜ್ಞೆ ಯಿರದ ಈ ಪಾಪಿಗಳು ಪೋಲೀಸರ ಮುಂದೆಯೂ ತಮ್ಮ ಮಕ್ಕಳಿಬ್ಬರೂ ಮರುಹುಟ್ಟು ಪಡೆದು ಬರುತ್ತಾರೆಂದು ಹೇಳಬೇಕಾದರೆ ಹಾಗೂ ಪೋಲೀಸರು ಇನ್ನರ್ಧ ಘಂಟೆ ತಡವಾಗಿ ಬಂದಿದ್ದರೆ ಮಕ್ಕಳು ಬದುಕಿಬರುತ್ತಿದ್ದರೆಂದೂ ತಾನು ಶಿವನ ಅವತಾರವೆಂದೂ ಬಡಬಡಿಸಬೇಕಾದಲ್ಲಿ ಇವರು ಇನ್ನೆಂತಹಾ ಮೂಢನಂಬಿಕೆಯ ಜಗ ಭಂಡರಿರಬಹುದು ?? ಎಲ್ಲಕ್ಕಿಂತ ವಿಪರ್ಯಾಸವೆಂದರೆ ತಂದೆಯಾದವನು ವಿಜ್ಞಾನದ ವಿಷಯ ಭೋದಿಸುವವನಾದರೆ ತಾಯಿ ಗಣಿತದ ಶಿಕ್ಷಕಿ !ಈ ದಂಪತಿಗಳು ಅಲ್ಲಿನ ಆಧ್ಯಾತ್ಮಿಕ ಗುರು ಮೆಹರ್ ಬಾಬಾನ‌ ‘ಅನುನಾಯಿ”ಗಳಂತೆ !

ಈ ಘೋರ ಕೃತ್ಯಕ್ಕೆ ಬಲಿಯಾದ ಅಮಾಯಕ ಹೆಣ್ಣುಮಕ್ಕಳಾದ ಅಲೆಖ್ಯಾ ಹಾಗೂ ಸಾಯಿ ದಿವ್ಯಾ ಉದ್ಯೋಗ ನಿಮಿತ್ತ ಬೇರೆ ಊರುಗಳಲ್ಲಿದ್ದರೂ ಲಾಕ್ ಡೌನ್ ಕಾರಣದಿಂದ ತಂದೆ ತಾಯಿ ಜೊತೆಯಲ್ಲಿ ಇರಬೇಕಾಗಿದ್ದೇ ಮುಂದೆ ಅವರ ಹೀನಾಯ ಸಾವಿಗೆ ಕಾರಣವಾಗಬಹುದೆಂಬ ಅರಿವು ಅವರಿಗೆ ಇರಲಿಲ್ಲ ! ಈ ಜನ್ಮದಲ್ಲೇ ಅವರನ್ನು ಸುಖವಾಗಿರಿಸುವಂತಹಾ ಹೊಟ್ಟೆಗೆ ಅನ್ನ ತಿನ್ನುವವರು ಮಾಡುವ ಸಹಜ ಯೋಚನೆ‌ ಬಿಟ್ಟು, ಇಲ್ಲದ ಸತ್ಯಯುಗದ ಹಿಂದೆ ಬಿದ್ದು ಇಂತಹಾ ಬರ್ಬರ ಕೃತ್ಯವೆಸಗಿರುವ ಈ ನರರಕ್ಕಸರ ತಲೆಯೊಳಗೆ ಅವನ್ಯಾವನೋ ಬೇಕೂಫ಼ಾ ಇನ್ನೆಂತಹಾ ನಂಬಿಕೆಯ ವಿಷ ತುಂಬಿದ್ದಿರಬಹುದು..??

ಈಗ ಹೇಳಿ ! ಕಲಿಯುಗದಲ್ಲಿ ಇಂತಹಾ ಘನಕಾರ್ಯ ಮಾಡಿದ ವಿದ್ಯಾವಂತ ದಂಪತಿಗಳನ್ನು ಯಾವ ವರ್ಗಕ್ಕೆ ಸೇರಿಸುತ್ತೀರಿ ?? ಇವರಂತಹಾ ಅವಿವೇಕಿಗಳು, ಮೂಢರು, ದುಷ್ಟರು, ಅಯೋಗ್ಯರು, ಕ್ರೂರಿಗಳು, ನಿಷ್ಕರುಣಿಗಳು, ಪಾಪಿಗಳು, ಸ್ವಾರ್ಥಿಗಳು, ಎಜುಕೇಟೆಡ್ ಫ಼ೂಲ್ ಗಳು, ಪರಮ ಪಾಪಿಷ್ಠರು…. ಮತ್ತಾರಾದರೂ ಇದ್ದಾರೆಯೇ ?? ತಾವೇ ಜನ್ಮಕೊಟ್ಟು ಸಾಕಿ ಬೆಳೆಸಿದ ಮಕ್ಕಳನ್ನು, ಅದರಲ್ಲೂ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಈ ರೀತಿ ಮೂಢನಂಬಿಕೆಗೆ‌ ಬಲಿಯಾಗಿ ಅಮಾನವೀಯವಾಗಿ ಬಲಿ ತೆಗೆದುಕೊಂಡಿರುವ ಘಟನೆಯನ್ನು ಹಿಂದೆ ಎಂದಾದರೂ ಕೇಳಿದ್ದೀರಾ… ನೋಡಿದ್ದಿರಾ..! ಇದು ನನಗೆ ತಿಳಿದಂತೆ ‌ಇಡೀ ನಾಡಿನಲ್ಲೇ ಅಪರೂಪದಲ್ಲಿ ಅಪರೂಪದ್ದು !

ಇವರ ಮನೆ ಕಾಯ್ ಹೋಗ ! ಕಲಿಯುಗ ಮುಗಿದು‌ ಮತ್ತೇ ಸತ್ಯಯುಗದಲ್ಲಿ ಅದೇ ಮಕ್ಕಳು‌ ಹುಟ್ಟುತ್ತಾರೆಂಬ ಇವರ ಕ್ಷುದ್ರ ನಂಬಿಕೆಯೇ ಅತ್ಯಂತ ಡೆಂಜರಸ್ ! ಹೇಳುವ ಮುಂಡೆಗಂಡರಿಗಂತೂ ಮೂರುಕಾಸಿನ ಬುದ್ದಿ ಇಲ್ಲ. ಕಾಸಿಗಾಗಿ ಏನೆಲ್ಲಾ ಕಥೆ ಹೇಳುತ್ತಾರೆ. ಆದರೆ ಕಾಲೇಜಿನಲ್ಲಿ‌ ಪಾಠ ಮಾಡುವ, ಅದರಲ್ಲೂ ವಿಜ್ಞಾನ ಭೋಧಿಸುವ , ಅತ್ಯಂತ ಸುಶಿಕ್ಷಿತ ವರ್ಗಕ್ಕೆ ಸೇರಿದ ದಂಪತಿಗಳು ಇಂತಹವರ ಮಾತುಗಳನ್ನು ಕೇಳಿ ಈ ರೀತಿಯ ಭೀಭತ್ಸ ಕೃತ್ಯಕ್ಕೆ ಕೈ ಹಾಕುತ್ತಾರೆಂದರೆ ಅದಕ್ಕಿಂತ ದುರಂತ ಮತ್ತೊಂದಿದೆಯೇ ? ಅಲ್ಲಿಗೆ ಕಲಿತ ವಿದ್ಯೆಗೂ ತಲೆಯೊಳಗಿರಬೇಕಾದ ಕನಿಷ್ಠ ವಿವೇಕಕ್ಕೂ ಸಂಬಂಧವೇ ಇಲ್ಲದಂತಾಯಿತು !

ಮರೆಯುವ ಮುನ್ನ 

ಮನುಷ್ಯ ಏನೆಲ್ಲಾ ಓದಿರಬಹುದು, ಎಷ್ಟೆಷ್ಟು ಡಿಗ್ರಿಗಳನ್ನು ಮೈಗೆಲ್ಲಾ ಮೆತ್ತಿಕೊಂಡಿರಬಹುದು, ಆಕಾಶದಲ್ಲೇ ಸದಾ ಹಾರಾಡುತ್ತಿರಬಹುದು, ಕರಗದಷ್ಟು ಆಸ್ತಿಯನ್ನೇ ಸಂಪಾದಿಸಿರಬಹುದು ಆದರೆ ಮನುಷ್ಯ ಅಂದಮೇಲೆ ಇರಲೇಬೇಕಾದ ಕಾಮನ್ ಮಿನಿಮಮ್ ಕಾಮನ್ ಸೆನ್ಸ್ ಅವನಲ್ಲಿ ಇಲ್ಲವೆಂದಮೇಲೆ ಅವನ ಓದಿಗೆ ವಿದ್ಯೆಗೆ ಬೆಂಕಿ‌ಬಿತ್ತು ! ಹೆತ್ತಮಕ್ಕಳನ್ನೇ ಈ ಲೆವೆಲ್ ನಲ್ಲಿ ಭಯಂಕರವಾಗಿ ಕೊಲೆ ಮಾಡುವ ಮನಸ್ಥಿತಿಯಿರುವವರು ತಮ್ಮ ವಿಧ್ಯಾರ್ಥಿಗಳಿಗೆ ಯಾವ ನೈತಿಕತೆಯ ಪಾಠವನ್ನು ಹೇಳಿಕೊಡಬಲ್ಲರು.? ಓದಿದ ಓದಿಗೂ, ಕಲಿತ ವಿದ್ಯೆಗೂ, ಮಾಡುವ ವೃತ್ತಿಗೂ ಈಗ ಅವರು ಎಸಗಿರುವ ಹೀನ ಕೃತ್ಯಕ್ಕೂ ಏನಾದರೂ ತಾಳೆ ಇದೆಯೇ ? ಇಂತಹಾ ಘಟನೆಗಳನ್ನೆಲ್ಲಾ ನೋಡಿದಾಗ ಮನುಷ್ಯನಷ್ಟು ವಿಷಕಾರಿ ಅಪಾಯಕಾರಿ ಜಂತು ಈ ಭೂಮಿಯಲ್ಲೇ ಇಲ್ಲವೇನೋ ಅನಿಸುತ್ತದೆ.

ಇಂತಹಾ ವಿಕ್ಷಿಪ್ತ ಮನಸ್ಥಿತಿಗೆ ಏನು ಕಾರಣವೋ ಗೊತ್ತಿಲ್ಲ. ಆದರೆ ಯಾವ್ಯಾವುದೋ ಹೆಸರಿನಲ್ಲಿ ಹುದುಗಿರುವ ಅತಿಯಾದ ಮೂಢನಂಬಿಕೆ , ಭ್ರಮಾತ್ಮಕ ಲೋಕ, ಮಾನವೀಯ ಮೌಲ್ಯಗಳ ಬೆಲೆಯರಿಯದ ಬದುಕು,
ಸ್ವಯಂಘೋಷಿತ ದೇವಮಾನವರು, ಬಾಬಾಗಳು , ಮಾಟ ಮಂತ್ರ ಮಾಡುವವರ ಮೇಲಿನ ಕುರುಡು ನಂಬಿಕೆ ಹಾಗೂ ಅಂತಹವರು ಹೇಳಿದ್ದೇ ವೇದವಾಕ್ಯವೆಂದು ನಂಬುವ ಅಜ್ಞಾನ…. ಈ ಎಲ್ಲವೂ ಕೆಲಮಟ್ಟಿಗೆ ಕಾರಣವಿರಲೂಬಹುದು..!

ಏನಾದರೂ ಇರಲಿ ! ಹೆತ್ತವರಿಂದಲೇ ಬರ್ಬರವಾಗಿ ಹತ್ಯೆಗೊಳಗಾಗಿ ನೆತ್ತರ ಮಡುವಲ್ಲಿ ಕೊನೆಯುಸಿರೆಳೆದ ಆ ಅಮಾಯಕ ಹೆಣ್ಣುಮಕ್ಕಳ ಆತ್ಮಕ್ಕೆ ಶಾಂತಿ ಕೋರುವುದು ಹಾಗೂ ಇಂತಹಾ ದುರ್ಘಟನೆಗಳು ಮತ್ತೇ ನೆಡೆಯದಿರಲಿ ಎಂದು ಪ್ರಾರ್ಥಿಸುವುದೊಂದೇ ಉಳಿದಿರುವ ದಾರಿ..!

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!

Published

on

ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.

ನಡೆದಿದ್ದೇನು?

ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.

ಡೆತ್ ನೋಟ್‌ನಲ್ಲಿತ್ತು ಕೊನೆಯ ಆಸೆ

ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.

ತಮಿಳುನಾಡಿನಲ್ಲಿ ಅಂತ್ಯಕ್ರಿಯೆ

ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.

ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್‌; ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್‌ಗೆ ನೇರ ಪ್ರವೇಶಕ್ಕೆ https://khtigadag.ac.in/AdmissionForm.pdf ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) https://khtigadag.ac.in/Lateralentryadmissionform.pdf ಈ ಲಿಂಕ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಮೇ 30 ರೊಳಗೆ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಗದಗ-ಬೆಟಗೇರಿ-582102 ಇವರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

Published

on

ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.

ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್​ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.

ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ.‌ ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending