ಸಿನಿ ಸುದ್ದಿ
ಕನ್ನಡಿಗರ ಹೆಮ್ಮೆಯ ಸಿನಿಮಾ ‘ಆಕ್ಟ್ 1978’
- ಜಗದೀಶ್ ಕೊಪ್ಪ
ಕನ್ನಡ ಸಿನಿಮಾಗಳ ಕುರಿತಂತೆ ಒಂದು ಬಗೆಯ ನೆಗೆಟಿವ್ ಧೋರಣೆ ಬೆಳೆಸಿಕೊಂಡಿರುವ ನಾನು 1970 ದಶಕದಲ್ಲಿ ರಾಜಕುಮಾರ್ ಬದುಕಿರುವಾಗಲೇ ಅವರ ಸಿನಿಮಾ ಜೀವನದ ಕೊನೆಯ ಸಿನಿಮಾಗಳನ್ನು ನೋಡಲು ನಿರಾಕರಿಸಿದವನು. ಹಾಗಾಗಿ ಕಳೆದ 25 ವರ್ಷಗಳಿಂದ ನಾನು ನೋಡಿರುವ ಕನ್ನಡದ ಸಿನಿಮಾ ಕೇವಲ ಬೆರಳಣಿಕೆಯಷ್ಟು.
ಇನ್ನು ಮೈ ತುಂಬಾ ಸ್ಟಾರ್ ಗಿರಿ ಮತ್ತು ಸಿಕ್ಸ್ ಪ್ಯಾಕ್ ಹೊಂದಿರುವ ತೊಗಲು ಬೊಂಬೆಯಂತಿರುವ ನಾಯಕರ ಚಿತ್ರಗಳನ್ನು ಭಾಷೆಯ ಹಂಗಿಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡವನ್ನು ಒಳಗೊಂಡಂತೆ ಎಲ್ಲಾ ಭಾಷೆಯಲ್ಲಿ ತಿರಸ್ಕರಿಸಿದವನು.
ಇದಕ್ಕೆ ಮುಖ್ಯಕಾರಣ, ಎಪ್ಪತ್ತರ ದಶಕದಲ್ಲಿ ಹಿಂದಿಯಿಂದ ಸತ್ಯಜಿತ್ ರಾಯ್, ಹೃಷಿಕೇಶ್ ಮುಖರ್ಜಿ, ಶ್ಯಾಂಬೆನಗಲ್ ತಮಿಳಿನ ಕೆ.ಬಾಲಚಂದರ್, ಬಾರತಿರಾಜ, ಬಾಲುಮಹೇಂದ್ರ ಹಾಗೂ ತೆಲುಗು ಭಾಷೆಯ ಕೆ.ವಿಶ್ವನಾಥ್ ಮುಂತಾದ ಸಿನಿಮಾ ನಿರ್ದೇಶಕರ ಮೂಲಕ ನಾವು ನೋಡುವ ಸಿನಿಮಾ ಹೇಗಿರಬೇಕು ಎಂಬ ಸದಬಿರುಚಿಯನ್ನು ಬೆಳೆಸಿಕೊಂಡಿದ್ದು ಕಾರಣ ಎಂದು ಕೊಂಡಿದ್ದೇನೆ. ಹಾಗಾಗಿ ಕನ್ನಡ ಸಿನಿಮಾಗಳನ್ನು ನೋಡುವುದು ಕೂಡ ತೀರಾ ಅಪರೂಪ ಎಂದು ಹೇಳಬಹುದು.
ನಿನ್ನೆ ಸಂಜೆ ನನ್ನ ಕಿರಿಯ ಮಿತ್ರ ಮನ್ಸೋರೆ ನಿರ್ದೇಶನದ ಆಕ್ಟ್ 1978 ಎಂಬ ಕನ್ನಡ ಸಿನಿಮಾ ನೋಡಿದ ನಂತರ ಸಿನಿಮಾ ವ್ಯಾಖ್ಯಾನ ಕುರಿತಂತೆ ಬದ್ಧತೆ ಇರುವ ಪ್ರತಿಭಾವಂತ ಯುವಕರ ತಂಡ ವಿಶೇಷವಾಗಿ ಮನ್ಸೋರೆ, ಟಿಕೆ.ದಯಾನಂದ್ ಹಾಗೂ ಮಲ್ಲಣ್ಣರಂತಹ ಯುವಕರು ನಿಜಕ್ಕೂ ಕನ್ನಡದ ಚಿತ್ರರಂಗದತ್ತ ಭಾರತೀಯ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಬಲ್ಲರು ಎನಿಸಿತು.
ವರ್ತಮಾನದ ಒಂದು ಜ್ವಲಂತ ಸಮಸ್ಯೆಯನ್ನು ಸಮರ್ಥ ಚಿತ್ರಕಥೆಯಾಗಿ ರೂಪಿಸಿಕೊಂಡು, ಅದಕ್ಕೆ ಯಾವುದೇ ಕಮರ್ಷಿಯಲ್ ಬಣ್ಣ ನೀಡದೆ, ಅಥವಾ ಹೆಸರಾಂತ ನಾಯಕ ಅಥವಾ ನಟ,ನಟಿಯರ ಹಂಗಿಗೆ ಬೀಳದೆ ಚಿತ್ರದ ಕಥೆಯೇ ನಿಜವಾದ ನಾಯಕ ಎಂದು ಬಲವಾಗಿ ನಂಬಿಕೊಂಡು ಚಿತ್ರ ನಿರ್ಮಾಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.
ಕಿತ್ತುಹೋದ ಕನ್ನಡ ಭಾಷೆಯ ಹಾಡು, ಅದ್ದೂರಿ ದೃಶ್ಯ, ಹಾಗೂ ಕಿವಿಯಲ್ಲಿ ರಕ್ತ ಹರಿಸುವ ಸಂಗೀತ ಮತ್ತು ನಾಯಕನ ಇಮೇಜಿಗೆ ತಕ್ಕಂತೆ ಡೈಲಾಗ್ ಹೊಸೆಯುವ ಸಿನಿಮಾ ನಿರ್ದೇಶಕರೆಂಬ ತಗಡು ಗಿರಾಕಿಗಳು ಒಮ್ಮೆ ಈ ಸಿನಿಮಾವನ್ನು ನೋಡಿ, ದೃಶ್ಯ ಮಾಧ್ಯಮ ಕೂಡ ಒಂದು ಕಾವ್ಯ ಎಂಬುದನ್ನು ಕಲಿಯಬೇಕು. ನಾನು ಕಳೆದ ಎರಡು ವರ್ಷಗಳ ಅವಧಿಯಲ್ಲಿ ತಮಿಳು ಚಿತ್ರರಂಗದ ಮೂವರು ಹೊಸ ನಿರ್ದೇಶಕರ ಸಿನಿಮಾಗಳನ್ನು ನೋಡಿ ಆಶ್ಚರ್ಯಪಟ್ಟಿದ್ದೆ.
ಅವರುಗಳು ಕಟ್ಟಿಕೊಟ್ಟ ಕಥೆ ಅವರ ಬದುಕಿನ ನೈಜ ಘಟನೆಗಳಾಗಿದ್ದವು. ತಮಿಳಿನ 96 ಎಂಬ ನವಿರಾದ ಪ್ರೇಮ ಕಥೆ ಸಿನಿಮಾ ಛಾಯಾಗ್ರಾಗಕನಾಗಿದ್ದ ಸಿ.ಪ್ರೇಮಕುಮಾರ್ ಎಂಬಾತನ ಹೈಸ್ಕೂಲು ದಿನಗಳಲ್ಲಿ ತನ್ನ ಜೀವನದಲ್ಲಿ ಘಟಿಸಿದ ಕಥೆಯಾಗಿತ್ತು. ಅದನ್ನು ಓರ್ವ ನಿರ್ದೇಶಕನಾಗಿ ಪ್ರೇಮಕುಮಾರ್ ರೂಪಿಸಿರುವ ಪರಿ ಅಚ್ಚರಿ ಮೂಡಿಸುತ್ತದೆ.
ಅದೇ ರೀತಿ ಪಣ್ಣೆಯೋರಂ, ಪದ್ಮಿನಿಯುಂ ಎಂಬ ಸಿನಿಮಾ ಕೂಡ ಆನಂದ್ ಕುಮಾರ್ ಎಂಬ ಯುವ ನಿರ್ದೇಶಕನ ನೈಜ ಕಥೆಯಾಗಿದೆ.
ತನ್ನೂರಿನ ಜಮೀನ್ದಾರನ ಮನೆಯಲ್ಲಿದ್ದ ಪ್ರೀಮಿಯಂ ಪದ್ಮಿನಿ ಎಂಬ ಹಾಗೂ ಊರಿನ ಜನತೆಯ ಕಷ್ಟ ಸುಖಗಳಿಗೆ ಬಳಕೆಯಾಗುತ್ತಿದ್ದ ಹಳೆಯ ಕಾರಿನಲ್ಲಿ ಕೂರಬೇಕೆಂಬ ಕನಸು ಕಾಣುತ್ತಿದ್ದ ಬಡ ಬಾಲಕನೊಬ್ಬ ಎಂದಿಗೂ ಕೂರಲಾಗದೆ ನಿರಾಸೆಗೊಳ್ಳುತ್ತಾನೆ. ಮುಂದೆ ಆತ ಕಾರು ತೆಗೆದುಕೊಂಡಾಗ ತನ್ನ ಊರಿಗೆ ಹೋಗಿ ಊರಿನ ಯಜಮಾನನ ಮನೆಯ ಮುಂದೆ ನಿಂತು ತನ್ನ ಬಾಲ್ಯದ ಕಥನವನ್ನು ನೆನಪಿಸಿಕೊಳ್ಳುವ ಪರಿ ನಿಜಕ್ಕೂ ಅದ್ಭುತವಾದದ್ದು.
ಇದನ್ನೂ ಓದಿ | ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ
ಪರಿಯೂರಂ ಪೆರುಮಾಳ್ ಎಂಬ ಜಾತಿ ದೌರ್ಜನ್ಯದ ಕಥೆಯುಳ್ಳ ಸಿನಿಮಾ. ಜಾತಿಯತೆಯನ್ನು ಸದಾ ಉಸಿರಾಡುವ ದಕ್ಷಿಣ ತಮಿಳುನಾಡಿನ ಮೇರಿ ಸೆಲ್ವರಾಜ್ ಎಂಬ ನಿರ್ದೇಶಕನ ಮೊದಲ ಚಿತ್ರ ಹಾಗೂ ಆತನ ಕಾಲೇಜ್ ದಿನಗಳ ಅಪಮಾನದ ನೋವಿನ ಚಿತ್ರ. 2018 ರಿಂದ ಈಚೆಗೆ ಬಿಡುಗಡೆಯಾದ ಮೂರು ಚಿತ್ರಗಳು ತಮ್ಮ ವಿಭಿನ್ನ ಕಥಾ ಹಂದರದಿಂದಾಗಿ ಅತ್ಯಂತ ಜನಪ್ರಿಯ ಚಿತ್ರಗಳಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ಈ ಮೂರು ಸಿನಿಮಾಗಳಲ್ಲಿ ಎದ್ದು ಕಾಣುವ ಪ್ರಮುಖ ಅಂಶವೆಂದರೆ, ನೂರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ ಗೆಲ್ಲುವ ಸಿನಿಮಾ ನಿರ್ದೇಶಕ ಮತ್ತು ನಾಯಕರಿಗೆ ಮುಖಕ್ಕೆ ಹೊಡೆದಂತೆ ಹೊಸಬರ ತಂಡ ಸೀಮಿತ ಬಜೆಟ್ ನಲ್ಲಿ ಸಿನಿಮಾಗಳನ್ನು ಮಾಡಿ ತಮಿಳು ಸಿನಿಮಾ ಭಾಷೆಯೆಂದರೆ ರಜನಿಕಾಂತ್, ವಿಜಯ್,ಅಥವಾ ಶಂಕರ್ ಎಂಬ ನಿರ್ದೇಶಕನ ಭಾಷೆಯಲ್ಲ, ಇಂತಹದ್ದೊಂದು ಭಾಷೆ ಕೂಡ ಇದೆ ಎದು ತೋರಿಸಿದ್ದಾರೆ.
ಈ ಸಿನಿಮಾಗಳನ್ನು ನೋಡುವಾಗ ಕನ್ನಡದಲ್ಲಿ ಇದು ಏಕೆ ಸಾಧ್ಯವಾಗಿಲ್ಲ ಎಂದು ಪದೇ ಪದೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಈಗ ಕಿರಿಯ ಮಿತ್ರರಾದ ಮನ್ಸೊರೆ, ಕೆ.ಟಿ. ದಯಾನಂದ್ ಮೂಲಕ ಇದಕ್ಕೆ ಉತ್ತರ ಸಿಕ್ಕಿದೆ. ಗುಜರಾತಿ ಭಾಷೆಯಲ್ಲಿ ಇತ್ತೀಚೆಗೆ ತಯಾರಾದ ಹೆಲ್ಲೋರ ಎಂಬ ಸಿನಿಮಾ ಕೂಡ ಹೊಸ ಭಾಷ್ಯವನ್ನು ಬರೆದಿದೆ. ಅದು ಕೂಡ ಹೊಸ ಪ್ರತಿಭೆಗಳಿಂದ ನಿರ್ಮಾಣವಾದ ಚಿತ್ರ.ಜೊತೆಗೆ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ
ಆಕ್ಟ್ 1978 ಸಿನಿಮಾ ಮೊದಲ ನಾಲ್ಕೈದು ದೃಶ್ಯಗಳಾದ ನಂತರ ತಂದೆ ಮತ್ತು ಮಗಳು ಸರ್ಕಾರಿ ಕಚೇರಿಗೆ ಪ್ರವೇಶಿಸಿ, ಅಲ್ಲಿನ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವುದರೊಂದಿಗೆ ಚಿತ್ರಕತೆಯ ಹಂದರ ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅತ್ಯಂತ ಬಿಗಿಯಾದ ಚಿತ್ರಕಥೆ ಮತ್ತು ಅತಿರೇಕ ಅಥವಾ ಅಸಹ್ಯ ಎನಿಸದ ಸಂಭಾಷಣೆ ಈ ಸಿನಿಮಾದ ಹೈಲೈಟ್ ಎಂದರೆ ತಪ್ಪಾಗಲಾರದು.
ಸಿನಿಮಾದ ಪ್ರತಿ ದೃಶ್ಯವೂ ಪ್ರೇಕ್ಷಕರನ್ನುತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಸೀಮಿತವಾದ ಬಜೆಟ್ ನಲ್ಲಿ ವಿಧಾನಸಭೆಯ ದೃಶ್ಯಗಳನ್ನು ತೋರಿಸುವಾಗ ಮತ್ತು ವಿಧಾನಸಭಾಧ್ಯಕ್ಷರ ಕೊಠಡಿ ಮುಂತಾದವುಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನೈಜತೆಗೆ ಧಕ್ಕೆ ಭಾರದಂತೆ ಚಿತ್ರಕರಿಸಿರುವ ಮನ್ಸೋರೆಯ ಜಾಣ್ಮೆಯನ್ನು ನಾವು ಮೆಚ್ಚಲೇಬೇಕು.
ಅದೇ ರೀತಿ ಚಿತ್ರಕಥೆ ಬೇಡುವ ಸಂವಿಧಾನದ ವಿಧಿಗಳು, ಮಾನವ ಹಕ್ಕುಗಳ ಕಾನೂನು ಕುರಿತ ಅಂಶಗಳು, ಬಾಂಬ್ ನಿಷ್ಕ್ರಿಯಾ ದಳದ ಉಡುಪು, ವೈದ್ಯಕಿಯ ಚಿಕಿತ್ಸೆಯಲ್ಲಿ ಅನುಸರಿಸಬೇಕಾದ ಪ್ರಕ್ರಿಯೆ ಹೀಗೆ ಅದ್ದೂರಿತನದಲ್ಲಿ ಜಾರಿ ಹೋಗಬಹುದಾದ ಅನೇಕ ಅಂಶಗಳು ಈ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ.
ಚಿತ್ರದ ನಟರ ನೈಜ ಅಭಿನಯ ಕೂಡಾ ಮನಸ್ಸಿಗೆ ನಾಟುತ್ತದೆ. ನಾಯಕಿ ಯಜ್ಞಾಶೆಟ್ಟಿಯವರ ಹದವರಿತ ಅಭಿನಯ ಹಾಗೂ ನಾಟಕರಂಗದಲ್ಲಿ ಪಳಗಿದ ಹುಲಿಯಂತಿರುವ ಬಿ.ಸುರೇಶ್ ಒಂದೇ ಒಂದು ಮಾತು ಇರದ ಕೇವಲ ಕಣ್ಣು ಮತ್ತು ಮುಖಭಾವದಿಂದ ಅಭಿನಯಿಸಬೇಕಾದ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.
ಈ ಸಿನಿಮಾ ಈಗ ಕೇವಲ ಕನ್ನಡಿಗರು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಮಂದಿ ನೋಡಬೇಕಾದ ಸಿನಿಮಾ. ಮಲೆಯಾಳಂ ಭಾಷೆಯಲ್ಲಿ ಆರು ವರ್ಷಗಳ ಹಿಂದೆ ಬಂದಿದ್ದ ದೃಶ್ಯಂ ಎಂಬ ಸಿನಿಮಾ ಯಶಸ್ವಿಯಾಗಿತ್ತು. ಈಗ ಅದರ ಎರೆಡನೇ ಭಾಗ ಬಂದಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ. ಆ ಮಟ್ಟದಲ್ಲಿ ಆಕ್ಟ್ 1978 ಬೆಳೆದು ನಿಂತಿರುವದು ಹೆಮ್ಮೆಯ ಸಂಗತಿ.
ಮನ್ಸೋರೆಯಾಗಲಿ, ಟಿ.ಕೆ. ದಯಾನಂದ್ ರಾಗಲಿ ಆಕಸ್ಮಿಕ ಪ್ರತಿಭೆಯ ಕೂಸುಗಳಲ್ಲ. ಕಳೆದ ಏಳೆಂಟು ವರ್ಷಗಳಿಂದ ನನಗೆ ವೈಯಕ್ತಿಕವಾಗಿ ಪರಿಚಯ ಇರುವವರು. ಅವರ ಪ್ರತಿಭೆಯನ್ನು ಹತ್ತಿರದಿಂದ ಗಮನಿಸುತ್ತಾ ಬಂದಿದ್ದೀನಿ.
ಮನ್ಸೋರೆ ಈಗಾಗಲೇ ಹರಿವು ಮತ್ತು ನಾತಿಚರಾಮಿ ಸಿನಿಮಾಗಳ ಮೂಲಕ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ಮೂರನೇ ಸಿನಿಮಾವಾದ ಆಕ್ಟ್ 1878 ಅನ್ನು ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದ್ದು ಎಲ್ಲರೂ ವೀಕ್ಷಿಸಬಹುದಾಗಿದೆ.
ಇಂತಹ ಸಿನಿಮಾ ನೀಡಿದ ಚಿತ್ರತಂಡಕ್ಕೆ ಮತ್ತೊಮ್ಮೆ ಹೃದಯ ತುಂಬಿದ ಅಭಿನಂದನೆಗಳು.
ಕೃಪೆ : ಫೇಸ್ ಬುಕ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ
~ಡಾ. ಪುಷ್ಪಲತ ಸಿ ಭದ್ರಾವತಿ
ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು
ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.
ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.
ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.
ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.
ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮತ್ತೆ ತಾಯಿಯಾಗಬೇಕು : ನಟಿ ಸಮಂತಾ
ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.
ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ4 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ4 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

