Connect with us

ದಿನದ ಸುದ್ದಿ

ಬಹುಜನರು ನಂಬಿರುವ ‘ಕತ್ತೆ ಕಥೆ’..!

Published

on

  • ಪರಶುರಾಮ್. ಎ

ಕತ್ತೆ ಕಥೆ ಇದೇನು ಪಂಚತಂತ್ರ ಕತೆಯೊ ಅಥವಾ ನೀತಿಕತೆಯೋ ಅಲ್ಲ. ನಿಮ್ಮಗಳ ನಿಜ ಜೀವನದಲ್ಲಿ ನೀವುಗಳೇ ನಂಬಿರುವ ಕಥೆಯಿದು. ನಿಮ್ಮ ಇಡೀ ಜೀವನದಲ್ಲಿ ಹಾಸು ಹೊಕ್ಕಾಗಿರುವ ದಿನನಿತ್ಯ ಕೈಮುಗಿದು ಮೂರ್ಖರಾಗಿರುವ ಮೂರ್ಖರನ್ನಾಗಿಸಿರುವ ಕತೆ. ಬಹುಶಃ ಈ ಕಥೆಯಲ್ಲಿ ನೀವುಗಳೇ ನಿಮ್ಮ ನಂಬಕೆಗಳೇ ಪ್ರಧಾನ ಆಗಿವೆ.

ನಂಬಿಕೆ, ಭಕ್ತಿ, ಮೌಲ್ಯಗಳನ್ನು ಬಂಡವಾಳವಾಗಿಸಿಕೊಂಡಿರುವವರೇ ಈ ಕಥೆಯ ಸೃಷ್ಟಿಕರ್ತರು. ಯಾವುದೋ ಒಂದು ಕಾಲದಲ್ಲಿ ಹುಟ್ಟಿರಬಹುದಾದ ಈ ಕಥೆ ಇನ್ನೂ ನಿಮ್ಮನ್ನು ಬಂಧನದಲ್ಲಿ ಇಟ್ಟಿದೆ ಎಂದರೆ ಅದಿನ್ನೆಂತಹ ಕ್ರೂರ ಲಾಭಕೋರ ವ್ಯವಸ್ಥೆ ಇರಬಹುದು ನೀವೇ ಊಹಿಸಿ ಯೋಚಿಸಿ! ಈ ಕಥೆ ಬಗ್ಗೆ ಈಗಾಗಲೇ ಕನ್ನಡದ ಲೇಖಕರು ಭಾಷಣಕಾರರು ಬಹುಜನರಿಗೆ ತಿಳಿಸಿ ಎಚ್ಚರಿಸುತಿದ್ದರು ಬಹುಜನರು ಇನ್ನೂ ಅದೇ ಕುತಂತ್ರ ಷಡ್ಯಂತ್ರಗಳಿಗೆ ಬಲಿಯಾಗಿರುವುದು ಸಮಾಜದ ಅಧೋಗತಿಗೆ ಒಂದು ಕಾರಣವು ಹೌದು. ತಮ್ಮನ್ನು ತಾವು ಶೋಷಿಸಿಕೊಳ್ಳುವುದು ಮತಿಹೀನ ಕೃತ್ಯ ಅಜ್ಞಾನ ಮೌಢ್ಯ ಪ್ರದರ್ಶನವಾಗಿದೆ.

ಡಾ.ಸಿದ್ದಲಿಂಗಯ್ಯ ನವರ “ಕತ್ತೆ ಮತ್ತು ಧರ್ಮ” ಕವನದಲ್ಲಿದೆ ನಾನು ಹೇಳಲು ಹೊರಟ ಸಾರಾಂಶ. (ಬಹುಜನರು ಕತ್ತೆ ಮತ್ತು ಧರ್ಮ ಕವನ ಓದಿ) ನಾನು ಇಲ್ಲಿ ಅದರ ಸಣ್ಣ ಸಾರಾಂಶ ಮಾತ್ರ ಉದಾಹರಿಸುವೆ. ಸಿದ್ದಯ್ಯನೆಂಬ ಅಗಸನಿಗೆ ಕತ್ತೆ ಎಂಬುದು ಜೊತೆಗಾರ, ಅದರೊಂದಿಗೆ ಅಪಾರ ಸ್ನೇಹ ಮಮತೆ ಹೊಂದಿದವನು ಈತ. ಎಷ್ಟರಮಟ್ಟಿಗೆ ಎಂದರೆ ಜನಗಳು ಕತ್ತೆಯನ್ನು ಸಿದ್ದಯ್ಯನ ಸಾಕುಮಗಳು ಅನ್ನುವಷ್ಟು ಪ್ರೀತಿ ಒಬ್ಬರಿಗೊಬ್ಬರಿಗೆ.

ಇಂಥ ತನ್ನ ನೆಚ್ಚಿನ ಕತ್ತೆ ಒಂದು ದಿನ ಇದ್ದಕ್ಕಿದ್ದಂತೆ ಕೊನೆಯುಸಿರೆಳೆದು ಮಲಗಿತು. ದಾರಿಯ ಮೂಲೆಯಲ್ಲಿ ಒಂದು ಕಡೆ ಮಣ್ಣು ಮಾಡಿ ಸಮಾಧಿಗೆ ನಮಿಸಿ ಪೂಜಿಸಿ ನೊಂದ ಸಿದ್ದಯ್ಯ ದೇಶಾಂತರ ಹೊರಟು ಹೋದ. ವ್ಯಾಪಾರಕ್ಕೆ ಅದೇ ದಾರಿಯಲ್ಲಿ ಹೊರಟಿದ್ದ ಜಯಶೆಟ್ಟಿ ಎಂಬುವನು ಅಗಸನ ಪೂಜೆ ನೋಡಿ ಯಾವುದೊ ಮಹಾತ್ಮರ ಸನ್ನಿಧಿಯೆಂದುಕೊಂಡು ಕೈ ಮುಗಿದು ತನ್ನ ವ್ಯಾಪಾರಕ್ಕೆ ಮರಳಿದ.

ಶೆಟ್ಟಿಗೆ ಅವತ್ತು ಲಾಭದ ಮೇಲೆ ಲಾಭ ವ್ಯಾಪಾರ ‘ದಿಲ್ಕುಷ್’ ಆಗಿ ಸಮಾಧಿಗೆ ದೇವರಕಂಬ ಎಣ್ಣೆ ತಂದುಕೊಟ್ಟ. ಈ ಸುದ್ದಿ ಇಡೀ ಊರಿಗೆ ಹರಡಿ ಕೆಲವೇ ದಿನಗಳಲ್ಲಿ ಭಕ್ತರು ಹೆಚ್ಚಾಗಿ ಅಲ್ಲೊಂದು ದೇವಾಲಯ ನಿರ್ಮಾಣವಾಗಿ ಪರಿಷೆ ನಡೆಯೊ ಮಟ್ಟಿಗೆ ಬೆಳೆದಿರುತ್ತೆ. ಆ ದೇವಾಲಯದ ಮುಂದೆ ಭಿಕ್ಷುಕರು ಸಣ್ಣ ಸಣ್ಣ ಅಂಗಡಿಗಳು ಜನಗಳು ವೈದಿಕರು, ದಾನ ನೀಡಲು ಸಾಹುಕಾರರು ಎಲ್ಲರೂ ಸೇರಿರುತ್ತಾರೆ.

ಈ ಸುದ್ದಿ ಅರಮನೆಯ ತಲುಪಿ ರಾಜ ರಾಣಿ ಈ ದೇವಾಲಯ(ಅಲ್ಲಲ್ಲ ಕತ್ತೆ ಸಮಾಧಿ) ನೋಡಲು ಬಯಸಿ ಹೊರಟು ಬರುತ್ತಾರೆ. ವರ್ಷ ಕಳೆದ ನಂತರ ಅಗಸ ಸಿದ್ದಯ್ಯ ತಾನು ಮಾಡಿದ ಕತ್ತೆ ಸಮಾಧಿ ಹುಡುಕಿ ಕಾಣಲು ಬರುತ್ತಾನೆ ಆದರೆ ತಳವಾರರು ಅವನನ್ನು ಕತ್ತು ಹಿಡಿದು ಆಚೆ ತಳ್ಳುತ್ತಾರೆ ಇದಿಷ್ಟು ಕವನದ ಸಾರಾಂಶ.

ಈ ಕವನದಲ್ಲಿ ಬಹುಜನರು ನಂಬಿರಬಹುದಾದ ಅನೇಕ ಮೌಢ್ಯಗಳನ್ನು ಹೊತ್ತಿವೆ. ಜ್ಞಾನದ ಮಾರ್ಗವು ಸಹ ಇದೆ. ನಮಗೆಲ್ಲರಿಗೂ ಗೊತ್ತು ಸಿಂಧೂ ಬಯಲಿನ ನಾಗರೀಕತೆಯಿಂದಲೂ ಇಲ್ಲಿನ ಮೂಲನಿವಾಸಿ ತಳಸಮುದಾಯದ “ಬಹುಜನರು” ಪ್ರಾಣಿ- ಪಕ್ಷಿ. ನಾಯಿ. ಪಶುಸಂಗೋಪನೆ, ಕಾಡು ಪ್ರಾಣಿಗಳ ಬೇಟೆಯಲ್ಲಿ ಬಹು ಪ್ರಸಿದ್ಧರು ನಿಷ್ಣತೆಯುಳ್ಳವರು ಕೂಡಾ.

ಅವು ತಮ್ಮ ಜೀವನದ ಅವಿಭಾಜ್ಯ ಅಂಗವೇನೊ ಎಂಬ ಮಟ್ಟಿಗೆ ಸಹ ಪಳಗಿಸಿ ಸಾಕುತ್ತಿದ್ದರು. ಹೀಗೆಯೇ ಸಿದ್ದಯ್ಯನೆಂಬ ಅಗಸ ತನ್ನ ಕತ್ತೆ ಸಾಕಿದ್ದು ಅದು ಸತ್ತ ನಂತರ ಅದರ ಗುರುತಿಗೆ ಮಣ್ಣು ಮಾಡಿ ಧನ್ಯವಾದಕ್ಕಾಗಿ ಪೂಜೆ ಸಲ್ಲಿಸುವುದು ಸಹ ಈ ನೆಲದ ನೈಜ ಸಂಸ್ಕೃತಿಗಳ ಬಿಂಬವೇ ಅಗಿದೆ.

ಈಗಲೂ ಕೂಡ ನಾವುಗಳು ಸತ್ತವರ ಸಮಾಧಿ ಮೇಲೆ ತುಳಸಿ ಗಿಡ ವಿವಿಧ ಸಸಿ ನೆಟ್ಟು ಪೋಷಿಸುವುದು ಕಾಣಬಹುದು.(ಬೆಂಕಿಯಲ್ಲಿ ದೇಹ ಸುಟ್ಟು ಅದರ ಅಸ್ಥಿಯನ್ನು ನೀರಿನಲ್ಲಿ ಬಿಟ್ಟು ಗುರುತೇ ಇಲ್ಲದಂತೆ ಸಂಬಂಧ ಕಡಿದು ಕೊಳ್ಳುವುದು ಕುತಂತ್ರಿ ಆರ್ಯರ ಸಂಸ್ಕೃತಿಯಾಗಿದೆ ನೆನಪಿರಲಿ).

ಮಹಾನವಮಿ ಅಥವಾ ಮಾರ್ನಾಮಿ ಹಬ್ಬದ ಸಂದರ್ಭದಲ್ಲಿ ತೀರಿ ಹೋದ ಹಿರಿಯರಿಗೆ – ವ್ಯಕ್ತಿಗಳಿಗೆ ಎಡೆ ಇಡುವುದು ಈ ನೆಲ ಮೂಲದ ಸಂಸ್ಕೃತಿ, ಪಿಂಡ ಪ್ರದಾನವಲ್ಲ. ಆದರೆ ಈ ಕುತಂತ್ರಕ್ಕೂ ಬಹುಜನರು ಬಲಿಯಾಗಿದ್ದಾರೆ. ಕತ್ತೆ ಸಮಾಧಿಗೆ ಪೂಜೆ ಸಲ್ಲಿಸುವಾಗ ಜಯಶೆಟ್ಟಿ ಎಂಬುವ ವ್ಯಾಪಾರಸ್ಥ ನೋಡಿ ಕೈಮುಗಿದು ಹೋದ ನಂತರ ಲಾಭವಾಯಿತು ಎಂಬುದು ಇಲ್ಲಿ ಬೇರೆಯವರು ಯಾರು ಏನು ಮಾಡುತ್ತಿದ್ದಾರೆ ತಾನು ಅವರಂತೆ ಅನುಕರಿಸುವುದು ಸಾಬೀತಾಗುತ್ತದೆ.

ಆಗಲೇ ಹೇಳಿದಂತೆ ನಮ್ಮದಲ್ಲದ ಪಿಂಡ ಪ್ರದಾನವೂ ಸಹ. ನಿಮಗೆ ಗೊತ್ತಿರಲಿ ಧ್ಯಾನ ಯೋಗ ಪ್ರಾರ್ಥನೆ ವಿವಿಧ ಚಟುವಟಿಕೆ ಯಿಂದ ಮನಸ್ಸು ಉಲ್ಲಾಸಿತಗೊಂಡು ಪಾಸಿಟಿವ್ ನಿಂದ ಆ ದಿನದ ಚಟುವಟಿಕೆಯ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ. ಶೆಟ್ಟಿಗೆ ಇಲ್ಲಾಗಿದ್ದು ಅದೇ. ನಂತರ ತನ್ನ ಸ್ವಪ್ರಯತ್ನ ಸ್ವಂತ ಶಕ್ತಿ ಮರೆತವನೊಬ್ಬ ಸಮಾಧಿಯ ಬಗ್ಗೆ ದೊಡ್ಡ ಪುಕಾರು ಮಾಡಿ ಮೌಢ್ಯ ಪ್ರಸಾರದಲ್ಲಿ ತೊಡಗಿದ.

ಅಲ್ಲೊಂದು ಜಾತ್ರೆ ಪೂಜೆ ನಡೆಯುತ್ತದೆ. ದಾನ ವ್ಯವಹಾರ ಆಗುವಂತೆ ಮಾಡುವಲ್ಲಿ ತಾನು ತೊಡಗಿಸಿಕೊಂಡ. ಇಂತದ್ದೇ ಪರಿಸ್ಥಿತಿ ಈಗಲೂ ಕಾಣಬಹುದು. ವರ್ಷ ಕಳೆದ ನಂತರ ಕತ್ತೆ ಸಮಾಧಿಯ ಜಾಗ ಹುಡುಕಿ ಸತ್ಯ ಅರಿತಿದ್ದ ಸಿದ್ದಯ್ಯ ಅಲ್ಲಿಗೆ ಬಂದ. ತಳವಾರ್ರು ಅವನನ್ನು ಕತ್ತು ಹಿಡಿದು ಆಚೆ ತಳ್ಳಿ ದೇವಾಲಯದ ಹತ್ತಿರವು ಬಿಟ್ಟು ಕೊಳ್ಳಲಿಲ್ಲ.

ಇದು ಈಗಲೂ ಸತ್ಯ ಬೇಕಾದರೆ ನೋಡಿ ದೇವಸ್ಥಾನದಲ್ಲಿ ಇರುವ ಸತ್ಯವನ್ನು ವಿವಿಧ ಸಂಶೋಧಕರು, ಲೇಖಕರು ಮೌಢ್ಯಭಂಜಕರು ಅದನ್ನು ಬಯಲಿಗೆಳೆಯುವರು ಎಂಬ ಭಯ ಆ ವರ್ಗಕ್ಕಿದೆ. ಅದಕ್ಕೆ ಆಳುವ ಜನರ ಸಹಕಾರವು ಸಿಗುತ್ತದೆ. ಕತ್ತೆ ಸಮಾಧಿ ಎಲ್ಲಿಯಾದರೂ ಪವಾಡ ಸೃಷ್ಟಿಸಲು ಸಾಧ್ಯವ? ಇಂತಹ ಅದೆಷ್ಟೋ ನಿರ್ವೀರ್ಯ ಕತ್ತೆಯ ಸಮಾಧಿಗಳು ಓಣಿ ಓಣಿಗಳಲ್ಲಿ ರಸ್ತೆ ರಸ್ತೆಯಲ್ಲಿ ಸಿಗುತ್ತವೆ.

ಅದೆಲ್ಲವೂ ದೇವಾಲಯವೆಂಬ ಮೌಢ್ಯದ ಆಸ್ಥಾನಗಳೆಂದು ತಿಳಿದಿರಲಿ. ಇನ್ನೂ ಕರ್ನಾಟಕದ ವಾಗ್ಮಿಗಳಾದ ಗುರುರಾಜ ಕರ್ಜಗಿಯವರು ಕರುಣಾಳು ಬಾ ಬೆಳಕೆ 2ನೇ ಸಂಪುಟದಲ್ಲಿ ಉಲ್ಲೇಖಿಸಿರುವಂತೆ ‘ಸಮಾಧಿಯ ಮಹಿಮೆ’ ಎಂಬ ಲೇಖನ ಸಹ ಇದೇ ಕತೆಯ ತಿರುಳು ಹೊಂದಿದೆ. ಗುರುಕುಲದಲ್ಲಿ ಲೋಕ ಜ್ಞಾನ ವ್ಯವಹಾರ ಜ್ಞಾನವಿಲ್ಲದ ದಡ್ಡ ವಿದ್ಯಾರ್ಥಿಯೊಬ್ಬನಿಗೆ ಬರಗಾಲ ಬಂದಾಗ ಗುರುಗಳು ಆತನಿಗೆ ಒಂದು ಕತ್ತೆಯನ್ನು ನೀಡಿ ನಿನ್ನ ಜೀವನ ನೀನು ನೋಡಿಕೊ ಎಂದು ಕಳುಹಿಸಿ ಕೊಡುವರು.

ಮುಂದೊಂದು ದಿನ ಆ ಕತ್ತೆ ಸತ್ತಾಗ ಅದನ್ನು ಮಣ್ಣು ಮಾಡಿ ಸಮಾಧಿಗೆ ತನಗೆ ತಿಳಿದಂತೆ ದಿನನಿತ್ಯ ಪೂಜೆ ಸಲ್ಲಿಸುತ್ತಿರುತ್ತಾನೆ. ಈ ದಡ್ಡ ವಿದ್ಯಾರ್ಥಿಯ ಕತ್ತೆ ಸಮಾಧಿ ಮುಂದೆ ಅದೊಂದು ಜಾಗೃತ ಸ್ಥಾನವೆಂಬಂತೆ ಪ್ರಚಲಿತಗೊಂಡು ಹರಕೆ ಹೊತ್ತು ಜನ ಬಂದರು. ಈತನ ಆದಾಯ ಹೆಚ್ಚಿತು. ಸಮಾಧಿಗೊಂದು ದೇವಾಲಯ ಶಿಷ್ಯನಿಗೆ ಒಂದು ಕೊಠಡಿ ಆಯಿತು.

ಶಿಷ್ಯನ ಗುರುಗಳು ಭೇಟಿಯಾಗಿ ಅದು ಯಾವ ಮಹಾತ್ಮನ ಕಂಡು ನಿನ್ನ ಜೀವನ ಉದ್ದರಿಸಿಕೊಂಡೆ ಎಂದು ಪ್ರಶ್ನಿಸಿದಾಗ ಶಿಷ್ಯ ನೀವು ಕೊಟ್ಟ ಕತ್ತೆಯೇ ನನ್ನ ಪಾಲಿನ ಮಹಾತ್ಮ: ಅದರ ಸಮಾಧಿಯೇ ಈ ದೇವಾಲಯ. ಅದ ನಂಬಿದ ಮೂರ್ಖ ಮಂದಿಗಳ ಭಕ್ತಿಯೇ ಇಂದಿನ ನನ್ನ ಆದಾಯ ಎಂದು ಹೇಳಿ ಬೆರಗಾಗಿಸಿದ್ದ. ಒಟ್ಟಾರೆ ಈ ಮೇಲಿನ ಎರಡೂ ಕತೆಗಳು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡ ವರ್ಗವೊಂದು ಅದರ ಹೆಸರಿನಲ್ಲಿ ವ್ಯವಹಾರಕ್ಕಿಳಿದು ಪೂಜೆ ಪುರಸ್ಕಾರ ಜಾತ್ರೆ ಹೋಮ ಹವನ ಅರ್ಚನೆ ದಕ್ಷಿಣೆ ಅಂಗಡಿ ಇತರೆ ಎಲ್ಲರಿಂದಲೂ ಲಾಭಗಳನ್ನು ಪಡೆಯುತ್ತ ಬಂದರು.

ತಮ್ಮ ಬುದ್ದಿ ಸಾಮರ್ಥ್ಯ ಮರೆತು ಸತ್ಯವನ್ನರಿಯದ ಗೋಜಿಗೆ, ಸತ್ಯ ಮಾರ್ಗಕ್ಕೆ ಹೋಗದೇ ತಮ್ಮನ್ನು ತಾವೇ ಶೋಷಣೆಗೆ ಒಡ್ಡಿ ಬಹುಜನರು ಪ್ರಜ್ಞಾಹೀನ ಸ್ಥಿತಿಯ ತಲುಪಿದರು. ಮೌಢ್ಯಕ್ಕೆ ಬಲಿಯಾದರು. ಇಂತಹ ವರ್ಣ ರಂಜಿತ ಕತೆಗಳನ್ನು ಈಗಲೂ ಹಲವಾರು ದೇವರು ನಂಬಿ ನಿಮಗೆ ಒಳ್ಳೆಯದಾಗುತ್ತೆ, ನಾನು ಹೇಳೊದು ಕೇಳಿ: ಹೇಳಿದಂತೆ ಮಾಡಿ ನಿಮ್ಮ ಭವಿಷ್ಯ ಸರಿ ಹೋಗುತ್ತೆ ಎಂದು ಬೊಬ್ಬೆ ಇಡುವವರೇ ಹೆಚ್ಚು. ಇಂತಹವರ ಮದ್ಯದಲ್ಲಿ ಸತ್ಯ ನುಡಿಯುವ ಬಹುಜನರಿಗೆ ವೈಚಾರಿಕತೆ ಬಿತ್ತುವ ಸತ್ಯ ಮಾರ್ಗಕ್ಕೆ ಮಾರ್ಗದರ್ಶನ ನೀಡುವ ಶ್ರೀನಿಜಗುಣಾನಂದ ಸ್ವಾಮಿಗಳೇ ನಮ್ಮೆಲ್ಲರಿಗೂ ಆದರ್ಶ.

ನಿಜಗುಣ ಸ್ವಾಮಿಗಳು ವಿವಿಧ ವೇದಿಕೆಯಲ್ಲಿ ಈ ಮೇಲಿನ ಕತೆಯನ್ನು ಉದಾಹರಿಸಿ ಜನರನ್ನು ಮೌಢ್ಯದಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ್ದಾರೆ. ಜನರಿಗೆ ತಿಳಿ ಹೇಳಿ ಜ್ಞಾನ ಹಂಚುತ್ತಿದ್ದಾರೆ. ನಮಗೆ ಆದರ್ಶವಾಗಬೇಕಾದವರು ನಿಜಗುಣ ಸ್ವಾಮೀಜಿಗಳೆ ಹೊರತು ಬ್ರಹ್ಮಾಂಡ ಅಂಡ ಪಿಂಡ ದಿನ ವಾರ ವರ್ಷ ಭವಿಷ್ಯ ನುಡಿವ, ಸ್ತ್ರೀವಶ, ಧನಪ್ರಾಪ್ತಿ ಅತ್ತೆ ಸೊಸೆ ಕಿತ್ತಾಟ ಕೋರ್ಟ್ ಕೇಸ್ ಈಡೇರಿಸಿ ಕೊಡುವೆನೆಂಬ ಸಾಧು ಗುರೂಜಿಗಳಲ್ಲ. ನಿಮ್ಮನ್ನು ಮೌಢ್ಯದಿಂದ ಬಿಡುಗಡೆಗೊಳಿಸಿ ಸನ್ಮಾರ್ಗದಲ್ಲಿ ಕೊಂಡೊಯ್ಯುವವರ ಬಳಿ ಸಾಗಿ. ಮೌಢ್ಯದ ಬಾವಿಗೆ ಹಾಕುವವರೆಡೆಯಲ್ಲ. ಈ ಕತ್ತೆ ಕಥೆ ನಿಮಗೆ ಸತ್ಯವನ್ನು ತಿಳಿಯಲು ಸಾಧ್ಯವಾಯಿತು ಎಂದು ಭಾವಿಸಿ ಕುವೆಂಪುರವರ ಈ ಸಾಲು

ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನ್ನು ಗುರುವನು ಮಾಡಿ
ಬಡವರ ಹಣವನು ಕಾಣಿಕೆ ನೀಡಿ
ಧರ್ಮವ ಮೆರೆದರು ನೋಡಯ್ಯ

ಪವಾಡ – ಮೂಢನಂಬಿಕೆಗಳು, ದುರ್ಬಲತೆ ಮತ್ತು ಮೃತ್ಯುವಿನ ಸಂಕೇತಗಳು ಅವುಗಳ ಬಗ್ಗೆ ಎಚ್ಚರಿಕೆಯಿಂದಿರಿ”

ಸ್ವಾಮಿ ವಿವೇಕಾನಂದರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

Published

on

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ :08182-255293/ 9108235132/8151093747/ 9482023412 ಗಳ ಮೂಲಕ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿಇಟಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಇಟಿ ಪರೀಕ್ಷೆಯನ್ನು ಯಾವುದೇ ಲೋಪ ದೋಷಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಪಾವಿತ್ರ್ಯತೆ ಗೆ ಯಾವುದೇ ಧಕ್ಕೆಯಾಗದಂತೆ ನಡೆಸಲು ಕೇಂದ್ರದ ಅಧೀಕ್ಷಕರು ಗಳಿಗೆ ಸೂಚನೆ ನೀಡಿ ಕೇಂದ್ರದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಿಳಿಸಿದರು.

ಜೂನ್ 30 ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ 11 ಕೇಂದ್ರಗಳಲ್ಲಿ 3805 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30 ವರೆಗೆ 19 ಕೇಂದ್ರಗಳಲ್ಲಿ 6150 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು.

144 ಸೆಕ್ಷನ್ ಜಾರಿ. ಪರೀಕ್ಷಾ ಅವ್ಯವಹಾರ ಹಾಗೂ ಸುಗಮ ಪರೀಕ್ಷೆಗಾಗಿ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇರುತ್ತದೆ. ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಸೆಂಟರ್ ಮುಚ್ಚಲು ಆದೇಶಿಸಲಾಗುತ್ತದೆ. ಮತ್ತು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ. ಕೇಂದ್ರದ ಪ್ರವೇಶಕ್ಕೂ ಮೊದಲು ತಪಾಸಣೆ ಮಾಡಿ ಪ್ರವೇಶ ನೀಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending