Connect with us

ಲೈಫ್ ಸ್ಟೈಲ್

ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಸುರಕ್ಷಿತ ಕ್ರಮಗಳು

Published

on

ಸಾಂದರ್ಭಿಕ ಚಿತ್ರ
  • ತುಕಾರಾಂರಾವ್ ಬಿ.ವಿ. ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ದಾವಣಗೆರೆ

ಬೇಸಿಗೆಯ ಕಾಲ ಆರಂಭವಾಗಿದೆ, ಸೂರ್ಯ ತನ್ನ ಪ್ರಖರಣ ಕಿರಣಗಳಿಂದ ನೆತ್ತಿ ಸುಡಲು ಆರಂಭಿಸಿದ್ದಾನೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುವ ಪರಿಣಾಮದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಇದರಿಂದ ವಯಸ್ಕರು ಮತ್ತು ಮಕ್ಕಳಲ್ಲಿ ಜೀರ್ಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ಸಾರ್ವಜನಿಕರು ಬೇಸಿಗೆಯಲ್ಲಿ ಆರೋಗ್ಯವಂತರಾಗಿರಲು ದೇಹಕ್ಕೆ ಶಕ್ತಿ ನೀಡುವಂತಹ ಆಹಾರ ಪಾನೀಯಗಳ ಸೇವನೆ ಬಗ್ಗೆ ಅರಿವು ಹೊಂದುವುದು ಅಗತ್ಯ.

ಶರೀರಕ್ಕೆ ತೇವಾಂಶ ಭರಿತ ಹಣ್ಣು ಮತ್ತು ತರಕಾರಿ

ಬೇಸಿಗೆಯಲ್ಲಿ ನೀರಿನಾಂಶವು ಅಧಿಕವಾಗಿ ದೇಹಕ್ಕೆ ಬೇಕಾಗುತ್ತದೆ. ನೀರು ದೇಹವನ್ನು ತಾಜಾವಾಗಿಡಲು ಸಹಾಯಕಾರಿಯಾಗಿದೆ. ಇದರ ಜೊತೆಯಲ್ಲಿ ನೀರಿನಾಂಶ ಹೆಚ್ಚು ಹೊಂದಿರುವಂತಹ ತರಕಾರಿ ಮತ್ತು ಹಣ್ಣುಗಳ ಸೇವನೆಯೂ ಅಷ್ಟೇ ಮುಖ್ಯ. ಸೌತೆಕಾಯಿ ಶೇ.97ರಷ್ಟು ನೀರನ್ನು ಹೊಂದಿದ್ದು, ದೇಹದ ತೇವಾಂಶ ಕಾಯ್ದಿರಿಸಿ, ತಂಪಾಗಿಡುತ್ತದೆ. ಟೊಮೆಟೋ ಎಲ್ಲಾ ಸಮಯದಲ್ಲೂ ದೊರೆಯುವಂತ ತರಕಾರಿಯಾಗಿದ್ದು, ಇದರಲ್ಲಿರುವ ಪೌಷ್ಠಿಕಾಂಶ ಮತ್ತು ಲಿಕೊಪೇನ್ ಎಂಬ ಉತ್ಕರ್ಷಣ ಅಂಶವು ಮುಖವನ್ನು ಹೊಳೆಯುವಂತೆ ಮಾಡುತ್ತದೆ.

ಕ್ಯಾಪ್ಸಿಕಂ ಹೇರಳ ನೀರಿನಾಂಶ ಹೊಂದಿರುವ ತರಕಾರಿಯಾಗಿದೆ. ಕೆಂಪು ಮತ್ತು ಹಳದಿ ಕ್ಯಾಪ್ಸಿಕಂಗಿಂತ ಹಸಿರು ಕ್ಯಾಪ್ಸಿಕಂನಲ್ಲಿ ಹೆಚ್ಚು ನೀರಿನಾಂಶವಿರುತ್ತದೆ. ಇದನ್ನು ಗ್ರೇವಿ, ಸಲಾಡ್ ರೀತಿಯಲ್ಲಿ ಸೇವಿಸಬಹುದು. ಹಣ್ಣಿನಲ್ಲಿ ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಪ್ಪದೆ ಸೇವಿಸಬೇಕಾದಂತಹ ಹಣ್ಣು ಆಗಿದ್ದು, ಇದರಲ್ಲಿ ನೀರಿನ ಅಂಶವೇ ಹೆಚ್ಚು ಇರುವುದರಿಂದ ದೇಹಕ್ಕೆ ತಂಪು ನೀಡುತ್ತದೆ. ಸ್ವಲ್ಪವೇ ಕರಬೂಜ ಹಣ್ಣನ್ನು ತಿಂದರೂ ದಿನಕ್ಕೆ ಬೇಕಾಗುವಷ್ಟು ವಿಟಮಿನ್ ಸಿ, ಎ ಮತ್ತು 50 ರಷ್ಟು ಕ್ಯಾಲೋರಿ ದೊರಕುತ್ತದೆ.

ಪಾನೀಯ ಸೇವನೆ

ಬಿಸಿಲಿನ ತಾಪದಿಂದ ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಇರುವಂತೆ ನೋಡಿಕೊಳ್ಳಲು ಹೆಚ್ಚು, ಹೆಚ್ಚು ನೀರು ಕುಡಿಯುವುದರೊಂದಿಗೆ ಬೇಸಿಗೆಯ ಧಗೆಯನ್ನು ನೀಗಲು ಎಳನೀರು ಅಮೃತ ಸಮಾನವಾದ ಪಾನೀಯ. ಇದರಲ್ಲಿ ವಿವಿಧ ಖನಿಜ, ಲವಣ ಮತ್ತು ಸೈಟೋಕೈನ್, ಲಾರಿಕ್ ಆಮ್ಲ ಎಂಬ ಎರಡು ಪೋಷಕಾಂಶಗಳಿವೆ. ಇವು ಜೀವಕೋಶದ ಸಮರ್ಪಕ ಬೆಳವಣಿಗೆಗೆ ಸಹಕಾರಿ. ಅಲ್ಲದೆ ಇದು ದಣಿವು ನಿಯಂತ್ರಿಸಿ ದೈಹಿಕ ಶ್ರಮವುಳ್ಳ ಕೆಲಸವನ್ನು ಮಾಡುವುದಕ್ಕೆ ಶಕ್ತಿ ನೀಡುತ್ತದೆ. ಪ್ರತಿದಿನ ಬೆಳಿಗ್ಗೆ ಎಳನೀರು ಕುಡಿಯುವುದರಿಂದ ಆರೋಗ್ಯವಾಗಿ ಇರಬಹುದು.

ದ್ರಾಕ್ಷಿ ಹಣ್ಣಿನ ಸೇವನೆಯಿಂದ ವಿಟಮಿನ್ ಸಿ, ಬಿ, ಕಬ್ಬಿಣದ ಸತ್ವವಿದ್ದು, ಋತುಮಾನಕ್ಕೆ ಅನುಗುಣವಾಗಿ ಸಿಗುವ ಹಸಿರು, ಕಪ್ಪು, ಕೆಂಪು ಜೊತೆಗೆ ಒಣದ್ರಾಕ್ಷಿ ನಿತ್ಯ ಸೇವಿಸಿದರೆ ಹೊಟ್ಟೆ ಉರಿ, ಕಣ್ಣು ಉರಿ ಕಡಿಮೆ ಆಗುತ್ತದೆ. ಹುಳಿ ದ್ರಾಕ್ಷಿ ಹಣ್ಣು ಮಿತವಾಗಿ ಸೇವಿಸುವುದರಿಂದ ಅಜೀರ್ಣ ಗುಣವಾಗುತ್ತದೆ. ಬೇಸಿಗೆ ಬಂದರೆ ಮಾವಿನ ಹಣ್ಣುಗಳದ್ದೇ ಕಾರುಬಾರು. ಆದರೆ ಈ ವರ್ಷ ಮಾವಿನಹಣ್ಣಿನ ಸವಿ ಸವಿಯಲು ಜನರು ಇನ್ನಷ್ಟು ದಿನಗಳು ಕಾಯಬೇಕು.

ಹವಾಮಾನ ವೈಪರಿತ್ಯದಿಂದಾಗಿ ಈ ವರ್ಷ ಮಾವು ದೊರೆಯುವುದು ವಿಳಂಬ ಎನ್ನಲಾಗುತ್ತಿದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಬಿ, ಸಿ ಹಾಗೂ ವಿಟಮಿನ್ ಎ ಹೆಚ್ಚಾಗಿದೆ. ಇದು ಜೀರ್ಣ ಪ್ರಕ್ರಿಯೆಗೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ. ಕಣ್ಣಿನ ಸಮಸ್ಯೆ ಎಂದಾಕ್ಷಣ ಡಾಕ್ಟರ್ ಸಲಹೆ ನೀಡುವುದು ‘ಹೆಚ್ಚು ಕ್ಯಾರೇಟ್ ತಿನ್ನಿ, ಕ್ಯಾರೇಟ್ ಜ್ಯೂಸ್ ಕುಡಿಯಿರಿ’ ಎಂದು.

ಕ್ಯಾರೆಟ್ ತಿನ್ನುವುದರಿಂದ ನಮ್ಮ ದೃಷ್ಠಿಯ ಶಕ್ತಿಯನ್ನು ವೃದ್ಧಿಸಲು ಸಹಕಾರಿ ಮತ್ತು ಕಣ್ಣಿನ ಪೊರೆ ಬರದಂತೆ ರಕ್ಷಿಸುವ ಕಾರ್ಯವನ್ನು ಕ್ಯಾರೆಟ್ ಮಾಡುತ್ತದೆ. ಇನ್ನಿತರೆ ಪಾನೀಯವಾದ ನಿಂಬೆಪಾನಕ, ಮಜ್ಜಿಗೆ, ಲಸ್ಸಿ ಮುಂತಾದ ಪಾನೀಯ ಪದಾರ್ಥಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ತಂಪು ಹಾಗೂ ಶಕ್ತಿಯನ್ನು ನೀಡುತ್ತದೆ.

ಸೇವಿಸಬೇಕಾದ ಆಹಾರ

ಬೇಸಿಗೆಯಲ್ಲಿ ಬೇಗ ಜೀರ್ಣವಾಗುವ ಬೆಚ್ಚಗಿನ, ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಬೇಕು. ಅಂದರೆ ಅತಿಯಾದ ಖಾರ, ಹುಳಿರಸಗಳ ಸೇವನೆ, ಜಿಡ್ಡಿನ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಕಾಫಿ, ಟೀ, ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಅತಿಯಾಗಿ ಸೇವಿಸಬಾರದು. ಸೋಡ, ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಉಪಯೋಗಿಸುವುದರಿಂದ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು.

ಉಡುಪು ಹೀಗಿರಲಿ

ಮನೆಯಿಂದ ಹೊರಗಡೆ ಹೋಗುವಾಗ ಬಿಗಿಯಾದ ಬಟ್ಟೆಯನ್ನು ಧರಿಸಬಾರದು, ಗಾಢವಿರುವ ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ಸೂರ್ಯನ ತಾಪ ಹೆಚ್ಚು ಹೀರಿಕೆಯಾಗಿ ದೇಹದ ಚರ್ಮಕ್ಕೆ ತೊಂದರೆ, ಬೆವರುಸಾಲೆ ಹಾಗೂ ಅಲರ್ಜಿ ಆಗುತ್ತದೆ. ಹಾಗಾಗಿ ಸಡಿಲವಾದ ತೆಳು ತಿಳಿ ಬಿಳಿ ಬಣ್ಣದ ಹತ್ತಿಯ ಬಟ್ಟೆ ಧರಿಸುವುದು ಸೂಕ್ತ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚರ್ಮಕ್ಕೆ ಉತ್ತಮವಾದ ದ್ರವ್ಯಲೇಪನ, ಕರವಸ್ತ್ರ, ತಂಪು ಕನ್ನಡಕ, ಕೊಡೆ ಉಪಯೋಗಿಸಿ ವಿಹರಿಸುವುದು ಉತ್ತಮ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!

Published

on

ಮಳೆಗಾಲದ ನೀರು ನಿರ್ವಹಣೆಗೆ ಮಹತ್ವದ ಯೋಜನೆ; ರೈಲು ಸಂಚಾರಕ್ಕೂ ಹೊಸ ಸುರಕ್ಷತಾ ಕ್ರಮ

ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ನೀರಿನ ಹರಿವನ್ನು ನಿಯಂತ್ರಿಸುವ ವಿಶೇಷ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸುಮಾರು 65 ಕಿ.ಮೀ. ಉದ್ದದ ನೀರಿನ ಮಾರ್ಗ ನಿರ್ಮಿಸುವ ಚಿಂತನೆ ನಡೆದಿದೆ.

ನಗರದಲ್ಲಿ ಮಳೆ ಸುರಿದಾಗ ರಸ್ತೆಗಳು ಜಲಾವೃತವಾಗುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಹರಿವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ.

http://Visit : www.suddidina.com

ಮೆಟ್ರೋ ಮಾರ್ಗದ ಸಮೀಪ ವಿಶೇಷ ವ್ಯವಸ್ಥೆ

ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ಮಧ್ಯದಲ್ಲಿರುವ ಓಲ್ಡ್‌ ಮದ್ರಾಸ್‌ ಗರ್ದನ್‌ಸೇತುವೆಯಲ್ಲಿ ಪ್ರಸಕ್ತ ನೀರು ಹರಿವಿಗೆ ಸಂಬಂಧಿಸಿದ ನಿಯಂತ್ರಣ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಂಡದ ಪರಿಶೀಲನೆ ಬಳಿಕ ಗರ್ದನ್‌ಸೇತುವೆ ಸುರಕ್ಷತಾ ತಪಾಸಣೆ ನಡೆಸಲಾಗಿದ್ದು, ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸುವುದರಿಂದ ಜಲಾವೃತ ಸಮಸ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಉಂಟಾಗುವ ಸಮಸ್ಯೆಗಳಿಗೆ ಇದು ಪ್ರಮುಖ ಪರಿಹಾರ ಕ್ರಮವಾಗಬಹುದು.

ರೈಲು ಸಂಚಾರಕ್ಕೂ ಸುರಕ್ಷತೆ

ರೈಲು ಸುರಕ್ಷತಾ ನಿಯಮಗಳ ಪ್ರಕಾರ ತಾಂತ್ರಿಕ ಮೇಲ್ವಿಚಾರಣೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿರಂತರ ಮಳೆ ಸುರಿದ ಸಂದರ್ಭದಲ್ಲೂ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಗಿದೆ.

ರೈಲು ಸಂಪರ್ಕ ಇರುವ ಪ್ರದೇಶಗಳಲ್ಲಿ ನೀರು ಸಂಗ್ರಹವಾಗುವುದರಿಂದ ಹಳಿಗಳ ಸುರಕ್ಷತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀರು ಹರಿವಿನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರೈಲು ಮೂಲಸೌಕರ್ಯದ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಲಾಗುತ್ತಿದೆ.

ಮುಂದಿನ ಹಂತದಲ್ಲಿ ದೊಡ್ಡ ಯೋಜನೆ

ಈ ನೀರಿನ ನಿರ್ವಹಣಾ ಕಾಮಗಾರಿಯ ಆಚ್ಚೋಬಲದಂದೇ ವಾರದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ಬಳಿಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಮುಂದಿನ ಹಂತದಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ನೀರಿನ ಹರಿವಿನ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ನಗರದ ವೇಗದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ವಿಸ್ತರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆ ನೀರು ನಿರ್ವಹಣೆ ಬೆಂಗಳೂರಿಗೆ ಅತ್ಯಂತ ಅಗತ್ಯವಾಗಿದೆ. 65 ಕಿ.ಮೀ. ನೀರು ಮಾರ್ಗದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ, ಮಳೆಗಾಲದ ಜಲಾವೃತ ಸಮಸ್ಯೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.

Continue Reading

ದಿನದ ಸುದ್ದಿ

ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

Published

on

ravichandran-political-entry-dk-shivakumar-mlc-nomination
ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ

ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ಕುರಿತು ಇದೀಗ ಚರ್ಚೆ ಜೋರಾಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ರವಿಚಂದ್ರನ್ ಭೇಟಿಯಾಗಿದ್ದು, ಈ ಭೇಟಿಯ ಹಿಂದೆ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಕುತೂಹಲ ರಾಜಕೀಯ ಹಾಗೂ ಚಿತ್ರರಂಗದ ವಲಯದಲ್ಲಿ ಮೂಡಿದೆ.

ರವಿಚಂದ್ರನ್ ಮತ್ತು ಡಿಕೆ ಶಿವಕುಮಾರ್ ಬಾಲ್ಯದ ಸ್ನೇಹಿತರು ಹಾಗೂ ಕ್ಲಾಸ್‌ಮೇಟ್‌ಗಳು ಎಂಬುದು ವಿಶೇಷ. ಹೀಗಾಗಿ ಇಬ್ಬರ ಭೇಟಿಯನ್ನು ಕೇವಲ ಸ್ನೇಹಪೂರ್ವಕ ಭೇಟಿ ಎಂದೇ ನೋಡಬೇಕೇ ಅಥವಾ ಇದರ ಹಿಂದೆ ಮತ್ತೇನಾದರೂ ರಾಜಕೀಯ ಬೆಳವಣಿಗೆ ಇದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

http://Visit : www.suddidina.com

ನಾಲ್ಕು ದಶಕಗಳ ಸಿನಿಮಾ ಪಯಣ

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಸಕ್ರಿಯರಾಗಿದ್ದಾರೆ. ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡ ಸಿನಿಮಾರಂಗಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ, ಇದೀಗ ಅವರಿಗೆ ರಾಜಕೀಯ ಕ್ಷೇತ್ರದಲ್ಲೂ ಅವಕಾಶ ನೀಡುವ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಶೇಷವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ಸಾಧ್ಯತೆ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರದಿಂದ ರವಿಚಂದ್ರನ್ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡುವ ವಿಚಾರ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಡಿಕೆಶಿ ಭೇಟಿಗೆ ಹೊಸ ಅರ್ಥ?

ರವಿಚಂದ್ರನ್ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ. ಬಾಲ್ಯದ ಗೆಳೆಯನನ್ನು ಭೇಟಿಯಾದ ಸಂತಸವನ್ನು ಡಿಕೆ ಶಿವಕುಮಾರ್ ಹಂಚಿಕೊಂಡಿದ್ದರೂ, ಭೇಟಿಯ ರಾಜಕೀಯ ಆಯಾಮದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಹೊರಬಿದ್ದಿಲ್ಲ.

ಆದರೆ ರವಿಚಂದ್ರನ್ ಅವರನ್ನು ಸಾಂಸ್ಕೃತಿಕ ಕ್ಷೇತ್ರದ ಪ್ರತಿನಿಧಿಯಾಗಿ ವಿಧಾನ ಪರಿಷತ್‌ಗೆ ಕರೆತರುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ಅಧಿಕೃತಗೊಂಡರೆ, ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಪ್ರವೇಶಿಸುವ ಮತ್ತೊಬ್ಬ ಪ್ರಮುಖ ವ್ಯಕ್ತಿಯಾಗಿ ರವಿಚಂದ್ರನ್ ಗುರುತಿಸಿಕೊಳ್ಳಲಿದ್ದಾರೆ.

ಅಧಿಕೃತ ಘೋಷಣೆಗಾಗಿ ಕಾಯುವಿಕೆ

ರವಿಚಂದ್ರನ್ ಅವರ ರಾಜಕೀಯ ಪ್ರವೇಶದ ವಿಚಾರ ಸದ್ಯಕ್ಕೆ ಚರ್ಚೆ ಹಾಗೂ ನಿರೀಕ್ಷೆಯ ಹಂತದಲ್ಲಿದೆ. ವಿಧಾನ ಪರಿಷತ್ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಕೃತ ಘೋಷಣೆ ಹೊರಬಂದ ಬಳಿಕವಷ್ಟೇ ಈ ಬೆಳವಣಿಗೆಗೆ ಸ್ಪಷ್ಟತೆ ಸಿಗಲಿದೆ.

ಚಿತ್ರರಂಗದಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ರವಿಚಂದ್ರನ್ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರೆ, ಅದು ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ರಾಜಕೀಯ ಎರಡರಲ್ಲೂ ಗಮನಾರ್ಹ ಬೆಳವಣಿಗೆಯಾಗಲಿದೆ. ಹೀಗಾಗಿ ಡಿಕೆ ಶಿವಕುಮಾರ್-ರವಿಚಂದ್ರನ್ ಭೇಟಿ ಇದೀಗ ಕುತೂಹಲದ ಕೇಂದ್ರಬಿಂದುವಾಗಿದೆ.

Continue Reading

ದಿನದ ಸುದ್ದಿ

ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!

Published

on

ಅಪಘಾತ ತಡೆಗೆ ಪೊಲೀಸರ ಕಠಿಣ ಕ್ರಮ; ಅರಿವು ಕಾರ್ಯಕ್ರಮ, ಸಾಮಾಜಿಕ ಜಾಲತಾಣಗಳ ಮೂಲಕವೂ ಜಾಗೃತಿ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ ಕಡಿವಾಣ ಬೀಳುತ್ತಿಲ್ಲ. ಇದರ ಪರಿಣಾಮವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಹಾಗೂ ದಂಡ ವಿಧಿಸುವಿಕೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದ್ದಾರೆ.

http://Visit : www.suddidina.com

ಕಳೆದ ನಾಲ್ಕು ವರ್ಷಗಳ ಅಂಕಿ-ಅಂಶ ಗಮನಿಸಿದರೆ ರಾಜ್ಯದಲ್ಲಿ ಒಟ್ಟು 5.67 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ ಬರೋಬ್ಬರಿ ₹2,361.75 ಕೋಟಿ ದಂಡ ಸಂಗ್ರಹಿಸಲಾಗಿದೆ. ಈ ಅಂಕಿ-ಅಂಶಗಳು ರಾಜ್ಯದ ರಸ್ತೆಗಳಲ್ಲಿ ನಿಯಮ ಪಾಲನೆಯ ಸವಾಲು ಎಷ್ಟು ದೊಡ್ಡದಾಗಿದೆ ಎಂಬುದನ್ನು ತೋರಿಸುತ್ತವೆ.

2024ರಲ್ಲಿ ಗರಿಷ್ಠ ಪ್ರಕರಣಗಳ ದಾಖಲು

ವರ್ಷವಾರು ಪ್ರಕರಣಗಳನ್ನು ಗಮನಿಸಿದರೆ, 2023ರಲ್ಲಿ 1.27 ಕೋಟಿ ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1.61 ಕೋಟಿಗೆ ಏರಿಕೆಯಾಗಿದೆ. 2025ರಲ್ಲಿ 1.60 ಕೋಟಿ ಪ್ರಕರಣಗಳು ದಾಖಲಾಗಿವೆ. 2026ರಲ್ಲಿ ಇದುವರೆಗೆ 1.17 ಕೋಟಿ ಪ್ರಕರಣಗಳು ದಾಖಲಾಗಿವೆ.

ದಂಡ ಸಂಗ್ರಹದಲ್ಲೂ ವರ್ಷದಿಂದ ವರ್ಷಕ್ಕೆ ದೊಡ್ಡ ಮೊತ್ತ ದಾಖಲಾಗಿದೆ. 2023ರಲ್ಲಿ ₹684.76 ಕೋಟಿ, 2024ರಲ್ಲಿ ₹915.95 ಕೋಟಿ ದಂಡ ಸಂಗ್ರಹವಾಗಿದೆ. 2025 ಮತ್ತು 2026ರ ಅಂಕಿ-ಅಂಶಗಳಲ್ಲೂ ಗಮನಾರ್ಹ ಮೊತ್ತ ದಾಖಲಾಗಿದೆ.

ನಿಯಮ ಉಲ್ಲಂಘನೆಗೆ ಕಠಿಣ ಕಾನೂನು ಕ್ರಮ

ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಅಧಿನಿಯಮದ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುತ್ತಿದೆ. ನಿಯಮ ಉಲ್ಲಂಘನೆ ಪುನರಾವರ್ತನೆಯಾಗದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇದರ ಜತೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು, ಕೆಎಸ್‌ಆರ್‌ಟಿಸಿ, ಖಾಸಗಿ ಹಾಗೂ ಶಾಲಾ ಬಸ್ ಚಾಲಕರು ಸೇರಿದಂತೆ ವಿವಿಧ ವರ್ಗದ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣವೂ ಜಾಗೃತಿಯ ವೇದಿಕೆ

ಫೇಸ್‌ಬುಕ್, ಎಕ್ಸ್, ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಮೂಲಕವೂ ಸಂಚಾರ ನಿಯಮ ಪಾಲನೆಯ ಮಹತ್ವವನ್ನು ಜನರಿಗೆ ತಲುಪಿಸಲಾಗುತ್ತಿದೆ. ನಿಯಮ ಉಲ್ಲಂಘನೆಯಿಂದ ಉಂಟಾಗುವ ಅಪಾಯಗಳ ಕುರಿತು ಪೋಸ್ಟರ್‌ಗಳು ಹಾಗೂ ಜಾಗೃತಿ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ದಂಡದ ಹಣ ಎಲ್ಲಿ ಹೋಗುತ್ತದೆ?

ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ದಂಡದ ಮೊತ್ತ ಸರ್ಕಾರದ ಸಂಬಂಧಿತ ಲೆಕ್ಕ ಶೀರ್ಷಿಕೆಗೆ ಜಮೆಯಾಗುತ್ತದೆ. ಸಂಚಾರ ಪೊಲೀಸ್ ವಿಭಾಗಕ್ಕೆ ಈ ಹಣವನ್ನು ಸ್ವತಂತ್ರವಾಗಿ ಬಳಸುವ ಅಧಿಕಾರವಿಲ್ಲ. ಸರ್ಕಾರದ ಆದೇಶದಂತೆ ಸಂಗ್ರಹವಾಗುವ ದಂಡದ ಶೇ.50ರಷ್ಟು ಅನುದಾನವನ್ನು ರಸ್ತೆ ಸುರಕ್ಷತಾ ಕಾರ್ಯಗಳಿಗೆ ಬಳಸಲಾಗುತ್ತಿದೆ.

Continue Reading

Trending