ದಿನದ ಸುದ್ದಿ
ಕಾರ್ಯಕ್ಷಮತೆಗೆ ಕಿವಿ ಹಿಂಡಲೇಬೇಕೇ…
- ಡಾ ಜಿ. ಎನ್. ಮಲ್ಲಿಕಾರ್ಜುನಪ್ಪ, ವಿಶ್ರಾಂತ ಪ್ರಾಂಶುಪಾಲರು, ದಾವಣಗೆರೆ
ಸ್ಮಾರ್ಟ್ ಸಿಟಿ, ವಿದ್ಯಾನಗರಿ, ಎಂದು ಹೆಸರಾಗಿರುವ ಮಧ್ಯಕರ್ನಾಟಕದ ಮಹಾನಗರ ದಾವಣಗೆರೆ. ಇಲ್ಲಿ ವೃತ್ತಿಪರ ಮತ್ತು ಸಾಮಾನ್ಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಖಾಸಗೀ ಸಂಸ್ಥೆಗಳೇ ಹೆಚ್ಚು.
ಅಂತಹುದರಲ್ಲಿ ಕೆಲವು ವರ್ಷಗಳ ಹಿಂದೆ ಚಿಕ್ಕದಾಗಿ ಪ್ರಾರಂಭವಾದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಕೂಡ ಒಂದು. ಒಂದು ನೂರು ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಇವತ್ತು ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಮ್., ಬಿ.ಸಿ.ಎ., ಮೊದಲಾದ ಸ್ನಾತಕ ಪದವಿ ತರಗತಿಗಳು ಮತ್ತು ಎಂ.ಎ., ಎಂ.ಕಾಂ., ಎಂ.ಬಿ.ಎಗಳಂಥ ಸ್ನಾತಕೋತ್ತರ ತರಗತಿಗಳು ನಡೆಯುತ್ತಿವೆ. ಯಾತಕ್ಕೂ ಸಾಲದ ಕನಿಷ್ಠ ಮೂಲ ಸೌಲಭ್ಯದಲ್ಲಿ ಗುಣಮಟ್ಟದ ಶಿಕ್ಷಣವನ್ನ ಈ ಸಂಸ್ಥೆ ನೀಡುತ್ತಾ ಬಂದಿದೆ.
ಶೇ.70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಶಿಷ್ಠ ಜಾತಿ, ಪಂಗಡ ಮತ್ತು ಹೊಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿದ್ದು ಅರ್ಧದಷ್ಟು ವಿದ್ಯಾರ್ಥಿನಿಯರೇ ಇದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಈ ಕಾಲೇಜಿನಲ್ಲಿ ಸಂಜೆ ಮಹಾವಿದ್ಯಾಲಯವಿದ್ದು ಬಿ.ಎ. ಮತ್ತು ಬಿ.ಕಾಂ ತರಗತಿಗಳಲ್ಲಿ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಹಾಸ್ಟೆಲ್ಗಳಲ್ಲಿ ನಿಯಮಾವಳಿ ಪ್ರಕಾರ ಇವರಿಗೆ ಸೌಲಭ್ಯಗಳಿವೆ.
ಮೊನ್ನೆ ಆ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾಯೋಜನೆ, ಎನ್.ಸಿ.ಸಿ, ಯುವ ರೆಡ್ ಕ್ರಾಸ್, ರೋವರ್ರ್ಸ್ ಮತ್ತು ರೇಂಜರ್ಸ್, ಮುಂತಾದ ಘಟಕಗಳ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ನಾನಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸಿದ್ದಕ್ಕೋ ಅಥವಾ ಆ ಎಲ್ಲ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಕಾರಣಕ್ಕೋ ನನ್ನನ್ನೂ ಅತಿಥಿಯಾಗಿ ಆಹ್ವಾನಿಸಿದ್ದರು.
ರಾಜ್ಯದ ಸಚಿವರೂ ಮತ್ತು ಆ ಕ್ಷೇತ್ರದ ಶಾಸಕರೂ ಆಗಿರುವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಬೇಕಿತ್ತು. ಕಾರ್ಯನಿಮಿತ್ತ ಅವರಿಗೆ ಭಾಗವಹಿಸಲು ಸಾಧ್ಯವಾಗದ ಕಾರಣ, ಅದೇ ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಂತರ ಅದೇ ಸಂಜೆ ಮಹಾವಿದ್ಯಾಲಯದ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮಗೆ ವಿದ್ಯಾರ್ಥಿಗಳಿಗಿರುವಂತೆ ಹಾಸ್ಟೆಲ್ ಸೌಲಭ್ಯ ಒದಗಿಸಲು ಶಿಫಾರಸು ಮಾಡುವಂತೆ ಕೋರಿ ಪ್ರಾಂಶುಪಾಲರ ಮೂಲಕ ಮನವಿ ಪತ್ರವೊಂದನ್ನು ಅವರಿಗೆ ಕೊಟ್ಟರು.
ಪ್ರಾಂಶುಪಾಲರನ್ನು ವಿಚಾರಿಸಲಾಗಿ, ಇಲಾಖೆಯ ಅಧಿಕಾರಿಗಳ ಪ್ರಕಾರ ವಿದ್ಯಾರ್ಥಿಗಳ ಹಾಸ್ಟೆಲ್ಗಳಲ್ಲಿ ರಾತ್ರಿ 09 ಗಂಟೆಯವರೆಗೆ ಒಳಗೆ ಬರುವ ಮತ್ತು ಊಟಮಾಡುವ ಅವಕಾಶವಿದ್ದು, ವಿದ್ಯಾರ್ಥಿನಿಯರ ಹಾಸ್ಟೆಲ್ಗಳಲ್ಲಿ ರಾತ್ರಿ 08ಕ್ಕೆ ಸಮಯ ಮುಗಿಯುತ್ತದೆ. ಕಾಲೇಜು ಮುಗಿಯುವ ಸಮಯ ರಾತ್ರಿ 08 ಗಂಟೆಗೆ. ಆ ಸಮಯದಲ್ಲಿ ವಿದ್ಯಾರ್ಥಿನಿಯರು ಕಾಲೇಜಿನಿಂದ ಹಾಸ್ಟೆಲ್ಗೆ ಬರಲು ಭದ್ರತಾ ಸಮಸ್ಯೆ ಇರುವ ಕಾರಣಕ್ಕೆ ಅವಕಾಶ ನೀಡಲಾಗಿಲ್ಲ ಎನ್ನುವುದು. ಕೇಳಿ ನಿಜಕ್ಕೂ ದಂಗು ಬಡಿದಂತಾಯಿತು.
ಮಹಿಳೆಯರು ರಾತ್ರಿ ನಿರ್ಭಯದಿಂದ ಓಡಾಡುವಂತಹ ಆಡಳಿತ ವ್ಯವಸ್ಥೆ ಇರಬೇಕು ಎಂದು ಕನಸಿದ ರಾಷ್ಟ್ರದಲ್ಲಿ, ಸಮಾನ ಅವಕಾಗಳು ಮೂಲಭೂತ ಹಕ್ಕಾಗಿರುವ ದೇಶದಲ್ಲಿ, ಪುಕ್ಕಟೆಯಾಗಿ ಮಹಿಳೆಯರು ರಸ್ತೆ ಸಾರಿಗೆ ಬಸ್ಸಿನಲ್ಲಿ ದಿನದ 24 ಗಂಟೆಗಳ ಕಾಲ ಓಡಾಡುವ ಸೌಲಭ್ಯವಿರುವ ರಾಜ್ಯದಲ್ಲಿ ಸಾಮಾನ್ಯ ಪದವಿಯೊಂದನ್ನು ಆರಸಿ ಹಗಲು ದುಡಿದು ಸಂಜೆ ಒಂದಷ್ಟು ತರಗತಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಸಲ್ಲದ ಕಾರಣದಿಂದ 3 ವರ್ಷಗಳಿಂದ ಹಾಸ್ಟೆಲ್ ಸೌಲಭ್ಯವನ್ನು ನಿರಾಕರಿಸಲಾಗಿದೆ ಎಂದರೆ ಏನೆನ್ನಬೇಕು?
ಪ್ರಾಥಮಿಕ ಶಿಕ್ಷಣದಿಂದ ಉನ್ನತಶಿಕ್ಷಣಕ್ಕೆ ಕಾಲಿರಿಸುವ ವಿದಾರ್ಥಿಗಳ ಅನಪಾತ(ಜಿಇಆರ್) ಇವತ್ತು ಶೇ. 26ರ ಆಸುಪಾಸು ಇದ್ದು ಅದನ್ನು ಮುಂದಿನ 2035ರ ಹೊತ್ತಿಗೆ ಶೇ.50ಕ್ಕೆ ತಲುಪಿಸಬೇಕೆಂಬುದು ರಾಷ್ಟ್ರೀಯ ಶಿಕ್ಷಣ ನೀತಿ-2020ರ ಉದ್ದೇಶ. ಇದರ ಒಂದು ಭಾಗವಾಗಿ ಹಿಂದಿನ ಸರ್ಕಾರ ರಾಜ್ಯದ ಎಲ್ಲ ಮಹಾ ನಗರಪಾಲಿಕೆಗಳಿರುವ ನಗರಗಳ ಸಾಮಾನ್ಯ ಪದವಿ ಕಾಲೇಜುಗಳಲ್ಲಿ ಸಂಜೆ ಮಹಾ ವಿದ್ಯಾಲಯಗಳನ್ನು ಆರಂಭಿಸಿತು.
ಆರ್ಥಿಕವಾಗಿ ಅನುಕೂಲವಿರದ ಪೋಷಕರ ಮಕ್ಕಳು ಹಗಲು ಅಂಗಡಿ ಮುಂಗಟ್ಟುಗಳಲ್ಲಿ ಕೆಲಸಮಾಡಿ ಸಂಜೆ ಪದವಿ ತರಗತಿಗಳಿಗೆ ಹಾಜರಾಗಿ ಪದವಿ ಪಡೆಯುವ ಮತ್ತು ಆ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ ಅವರದಾಯಿತು. ಲಭ್ಯ ಮಾಹಿತಿ ಪ್ರಕಾರ ಹಾಲಿ 09 ನಗರಗಳಲ್ಲಿ ಇಂಥ ವ್ಯವಸ್ಥೆ ಇದ್ದು ಸಾವಿರಾರು ಪದವಿ ಆಕಾಂಕ್ಷಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಶೇ. 50ರಷ್ಟು ವಿದ್ಯಾರ್ಥಿನಿಯರಿದ್ದು ಅಂಥವರಲ್ಲಿ ದಾವಣಗೆರೆಯ ಸಂಜೆ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿನಿಯರೂ ಕೂಡ ಒಬ್ಬರು.
ಹೊಸ ಶಿಕ್ಷಣ ನೀತಿಯ ಪೂರ್ಣಾನುಷ್ಠಾನಕ್ಕೆ ಮುಂದಾದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯದಲ್ಲಿ, ಕ್ಲಬ್ಬು ಪಬ್ಬು, ಬಾರು, ರೆಸ್ಟೋರೆಂಟ್ಗಳಲ್ಲಿ ಹೆಣ್ಣು-ಗಂಡೆನ್ನದೆ ರಾತ್ರಿ 12ರವರೆಗೆ ಮೋಜು ಮಸ್ತಿಗೆ ಅವಕಾಶವಿರುವ ನಗರಗಳಲ್ಲಿ, ಈ ವಿದ್ಯಾರ್ಥಿನಿಯರಿಗೇಕೆ ಈ ದುಃಸ್ಥಿತಿ? ಹಾಸ್ಟೆಲ್ಗಳಿಂದಾಗಿ ಕಾಲೇಜುಗಳಿವೆಯೋ ಕಾಲೇಜುಗಳಿಗಾಗಿ ಹಾಸ್ಟೆಲುಗಳಿವೆಯೋ ತಿಳಿಯಲಾಗದಾಗಿದೆ. ಇದೇ ಪರಿಸ್ಥಿತಿ ಉಳಿದ 08 ನಗರಗಳಲ್ಲಿಯೂ ಇರಬಹುದೇನೋ. ಇದಕ್ಕೆ ಕಾರಣರಾದ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಚಾಟಿ ಬೀಸುವವರಾರು.
ಚಾಟಿ ಬೀಸಿ ಕೆಲಸ ಮಾಡಿಸುವುದೇ ಕಾರ್ಯಕ್ಷಮತೆಯೇ? ಹೀಗಾದರೆ ಓದಿದ ವಿದ್ಯೆಗೆ, ಪಡೆದ ಸರ್ಕಾರಿ ಹುದ್ದೆಗೆ ಸಂದ ಬೆಲೆಯೇನು? ಕೊನೇ ಪಕ್ಷ ತಮ್ಮ ಮಕ್ಕಳೇ ಈ ದುಃಸ್ಥಿತಿಗೊಳಗಾಗಿದ್ದಿದ್ದರೆ ಇವರಿಗೇನೆನ್ನಿಸುತ್ತಿತ್ತು? ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಷ್ಕರಣೆಗೆ ಮುಂದಾಗಿರುವ ರಾಜ್ಯ ಸರ್ಕಾರ ಇಂಥ ವಿಪರ್ಯಾಸಗಳತ್ತ ಗಮನಕೊಡಬೇಕಿದೆ.
ಕಾಲೇಜಿನ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡಿಯೋ, ರಜಾದಿನಗಳಂದು ತರಗತಿ ನಡೆಸಿಯೋ, ಕೊನೆಯ ಪಾಳಿಯಾಗಿ ರಾತ್ರಿ 09 ಗಂಟೆಗೆ ಕಾಲೇಜಿನಿಂದ ಹಾಸ್ಟೆಲ್ಗಳ ಮಾರ್ಗದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ವ್ಯವಸ್ಥೆ ಮಾಡಿಯೋ ಈ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕಿದೆ. ಸಂವಿಧಾನದತ್ತ ಅವರ ಮೂಲಭೂತ ಹಕ್ಕುಗಳಿಗೆ ನ್ಯಾಯ ಒದಗಿಸಬೇಕಿದೆ.
–ಡಾ ಜಿ. ಎನ್. ಮಲ್ಲಿಕಾರ್ಜುನಪ್ಪ, ವಿಶ್ರಾಂತ ಗ್ರೇಡ್-1 ಪ್ರಾಂಶುಪಾಲರು, ಕಾಲೇಜು ಶಿಕ್ಷಣ ಇಲಾಖೆ.
ಮೊ: 9449077003
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ : ಸಿಎಂ ಸಿದ್ದರಾಮಯ್ಯ
ಸುದ್ದಿದಿನಡೆಸ್ಕ್:ರಾಜ್ಯದ ಎಲ್ಲ ಪರಿಶ್ಟಿಷ್ಟ ವರ್ಗದ ವಸತಿ ಶಾಲೆಗಳಿಗೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸೌಧ ಮುಂಭಾಗದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐವರು ಮಹನೀಯರಿಗೆ ವಾಲ್ಮೀಕಿ ಪ್ರಶಸ್ತಿ ವಿತರಿಸಿ, ಅವರು ಮಾತನಾಡಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅವರ ಕಲ್ಯಾಣಕ್ಕೆ ತಮ್ಮ ಸರ್ಕಾರ ಬಜೆಟ್ನಲ್ಲಿ ಮೊಟ್ಟ ಮೊದಲ ಬಾರಿಗೆ ಹಣ ನಿಗದಿಮಾಡಿತ್ತು ಎಂದರು.
ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆಯಾಗದ ಹೊರತು, ಸಮಾನತೆ ಬರುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ರಾಜಾನಹಳ್ಳಿ ವಾಲ್ಮೀಕಿ ಸಮುದಾಯ ಮಠದ ಜಗದ್ಗುರು ಪ್ರಸನ್ನಾನಂದಪುರಿ, ಸಚಿವರಾದ ಸತೀಶ್ ಜಾರಕಿಹೊಳ್ಳಿ, ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್ ಮೊದಲಾದವರು ಹಾಜರಿದ್ದರು.
ವಾಲ್ಮೀಕಿ ಪ್ರಶಸ್ತಿ
ಜಾನುವಾರು ರಕ್ಷಣೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಗ್ರಾಮೀಣ ಸೊಗಡನ್ನು ಉಳಿಸಿ, ಬೆಳೆಸುವಲ್ಲಿ ಮಹತ್ತರ ಪಾತ್ರವಹಿಸಿದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಿಲಾರಿ ಜೋಗಯ್ಯ ಬಿನ್ ಕಿಲಾರಿ ಬೋರಯ್ಯ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಹೋರಾಟ ಮಾಡಿದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಡಾ. ಎಸ್. ರತ್ನಮ್ಮ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರು ಮೂಲದ ಕೆ.ಎಸ್. ಮೃತ್ಯುಂಜಯ,ವಿಜಯನಗರ ಜಿಲ್ಲೆಯ ರತ್ಮಮ್ಮ ಬಿ. ಸೋಗಿ ಅವರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಪ್ರಶಸ್ತಿ, 20 ಗ್ರಾಂ ಬಂಗಾರದ ಪದಕ ಹಾಗೂ 5 ಲಕ್ಷ ರೂಪಾಯಿ ನಗದು ಒಳಗೊಂಡಿದೆ.
ರಾಜ್ಯದಲ್ಲಿ ವಾಲ್ಮೀಕಿ ಜಯಂತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆಗಳಲ್ಲಿ ಇಂದು ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ, ಬದುಕಿನ ಮೌಲ್ಯಗಳನ್ನು ಬಿಂಬಿಸುವ ರಾಮಾಯಣ ಕಾವ್ಯ ರಚಿಸಿದ ವಾಲ್ಮೀಕಿ ಮಹರ್ಷಿ ಸದಾ ಸ್ಮರಣೀಯರಾಗಿದ್ದಾರೆ ಎಂದರು.
ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಮಹರ್ಷಿಗಳ ಸಾಧನೆ ಮತ್ತು ಸಮಾಜಕ್ಕೆ ನೀಡಿದ ಸಂದೇಶವನ್ನು ಅರಿಯಬೇಕಿದೆ ಎಂದರು.
ಹಾಸನದಲ್ಲಿಂದು ಆಯೋಜಿಸಲಾಗಿದ್ದ ಆಕರ್ಷಕ ಮೆರವಣಿಗೆಗೆ ಶಾಸಕ ಸ್ವರೂಪ ಪ್ರಕಾಶ್ ಚಾಲನೆ ನೀಡಿದರು. ಬಳಿಕ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಿತು.
ಕೋಲಾರದಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ, ನಂತರ ಡೊಳ್ಳು ಹೊಡೆಯುವ ಮೂಲಕ ಬೃಹತ್ ಪಲ್ಲಕ್ಕಿಗಳ ಮೆರವಣಿಗೆಗೆ ಚಾಲನೆ ನೀಡಿದರು.
ಚಿತ್ರದುರ್ಗದಲ್ಲಿ ವಾಲ್ಮೀಕಿ ಭಾವಚಿತ್ರ ಹಾಗೂ ಪುತ್ಥಳಿ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ಸಮ್ಮುಖದಲ್ಲಿ ನಡೆಯಿತು. ಹಾವೇರಿಯಲ್ಲಿಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪು ನಮನ ಸಲ್ಲಿಸಿದರು.
ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೋಫೆಸರ್ ಸುರೇಶ್ ನಾಡಗೌಡ ಮಾತನಾಡಿ, ವಾಲ್ಮೀಕಿ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರವಾರದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಮಾತನಾಡಿ, ರಾಮಾಯಣದಲ್ಲಿ ಪರಿಸರಕ್ಕೆ ಮಹತ್ವ ನೀಡಿದ್ದು, ಅದರಂತೆಯೇ ಉತ್ತರಕನ್ನಡ ಜಿಲ್ಲೆಯಲ್ಲಿನ ವನ್ಯ ಸಂಪತನ್ನು ಕಾಪಾಡಲು ಜನತೆ ಕಾಳಜಿ ತೋರಬೇಕು ಎಂದು ಹೇಳಿದರು.
ಬೆಳಗಾವಿಯಲ್ಲೂ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಜಯಂತಿ ಆಚರಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕರ್ನಾಟಕದಲ್ಲಿ ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ
ಸುದ್ದಿದಿನಡೆಸ್ಕ್:ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಜಯಂತಿ ಇಂದು. ಈ ಹಿನ್ನೆಲೆಯಲ್ಲಿ ವಿವಿಧೆಡೆ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತಿದೆ.
ಮಹರ್ಷಿ ವಾಲ್ಮೀಕಿಯನ್ನು ’ಆದಿ ಕವಿ’ ಅಥವಾ ಸಂಸ್ಕೃತ ಭಾಷೆಯ ಮೊದಲ ಕವಿ ಎಂದು ಹೇಳಲಾಗುತ್ತದೆ. ಹಲವೆಡೆ ಜಯಂತಿಯ ಅಂಗವಾಗಿ ಶೋಭಾ ಯಾತ್ರೆ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮಹರ್ಷಿ ವಾಲ್ಮೀಕಿ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕರ್ನಾಟಕ ಸರ್ಕಾರ 2024 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಿಸಿದೆ.
ಜಾನುವಾರುಗಳ ಸಂತತಿಯ ಸಂರಕ್ಷಣೆಯಲ್ಲಿ ತೊಡಗಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಿಲಾರಿ ಜೋಗಯ್ಯ, ಬುಡಕಟ್ಟು ಮಕ್ಕಳ ಶಿಕ್ಷಣದ ಹೋರಾಟಗಾರ್ತಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಡಾ.ರತ್ನಮ್ಮ.ಎಸ್, ಗುಡ್ಡಗಾಡು ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯದ ಜನರಿಗೆ ಶಿಕ್ಷಣ, ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿರುವ ಬೆಳಗಾವಿಯ ಗಾಂಧಿನಗರದ ರಾಜಶೇಖರ ತಳವಾರ, ಪರಿಶಿಷ್ಟ ಪಂಗಡ ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಕುರಿತು ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ನಿವಾಸಿಯಾದ ಕೆ.ಎಸ್.ಮೃತ್ಯುಂಜಯ, ರಂಗಭೂಮಿ ಕಲಾವಿದೆಯಾದ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿಯವರಾದ ರತ್ನಮ್ಮ ಬಿ ಸೋಗಿ ಅವರಿಗೆ ಈ ಸಾಲಿನ ಪ್ರಶಸ್ತಿಗಳನ್ನು ಇಂದು ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಜಾತಿ ಪ್ರಮಾಣಪತ್ರ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಸುದ್ದಿದಿನಡೆಸ್ಕ್:ಜಾತಿ ಪ್ರಮಾಣ ಪತ್ರದ ಬಗೆಗಿನ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು ಗೊಂದಲವನ್ನು ನಿವಾರಿಸಿ, ಸೂಕ್ತ ಸುತ್ತೋಲೆ ಹೊರಡಿಸುವಂತೆ ಸಮಾಜ ಕಲ್ಯಾಣ ಕಾರ್ಯದರ್ಶಿಗಳು ಹಾಗೂ ಕಾನೂನು ಇಲಾಖಾ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಇಂದು ಪರಿಶಿಷ್ಟ ಪಂಗಡದ ಸಮುದಾಯಗಳ ಸಭೆ ನಡೆಸಲಾಗಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಅವ್ಯವಹಾರದ ಹಿನ್ನಲೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆಯಾಗಬಾರದೆಂದು ಸೂಚಿಸಿದ್ದಾರೆ.
ಈ ವರ್ಷದಲ್ಲಿ ನಿಗದಿಪಡಿಸಲಾಗಿರುವ ಅನುದಾನವನ್ನು ಸಂಪೂರ್ಣವಾಗಿ ಒದಗಿಸಲಾಗುವುದು. ನಿಗಮದಲ್ಲಿ ಸುಮಾರು 89 ಕೋಟಿ 63 ಲಕ್ಷ ರೂಪಾಯಿಗಳ ಮೊತ್ತ ಅವ್ಯವಹಾರವಾಗಿದ್ದು, ಇದರಲ್ಲಿ 5 ಕೋಟಿ ರೂಪಾಯಿಗಳನ್ನು ವಾಪಸ್ಸು ಪಡೆಯಲಾಗಿದೆ. ಉಳಿದ 84 ಕೋಟಿ 63 ಲಕ್ಷ ರೂಪಾಯಿಗಳಲ್ಲಿ 71 ಕೋಟಿ 54 ಲಕ್ಷ ರೂಪಾಯಿಗಳನ್ನು ವಸೂಲು ಮಾಡಲಾಗಿದೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ನಾಡಿನೆಲ್ಲೆಡೆ ಆಯುಧಪೂಜೆ ಸಡಗರ; ಮೈಸೂರು ಅರಮನೆಯಲ್ಲಿ ಪಟ್ಟದ ಹಸು, ಆನೆ, ಆಯುಧಗಳಿಗೆ ಯದುವೀರ್ ಒಡೆಯರ್ ಪೂಜೆ
-
ದಿನದ ಸುದ್ದಿ6 days ago
ಇಂದಿನಿಂದ ಒಂದು ವಾರ ರಾಜ್ಯದಲ್ಲಿ ಭಾರೀ ಮಳೆ
-
ದಿನದ ಸುದ್ದಿ6 days ago
ಮೈಸೂರು ದಸರಾ | ಅಂಬಾರಿ ಹೊತ್ತ ಅಭಿಮನ್ಯು ಜಂಬೂ ಸವಾರಿ
-
ದಿನದ ಸುದ್ದಿ5 days ago
ಯಲ್ಲಮ್ಮನ ಸವದತ್ತಿ ಕ್ಷೇತ್ರಾಭಿವೃದ್ಧಿಗೆ ಆದ್ಯತೆ : ಸಿಎಂ ಸಿದ್ದರಾಮಯ್ಯ ಭರವಸೆ
-
ದಿನದ ಸುದ್ದಿ6 days ago
ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ನೀತಿ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ : ಡಿಸಿಎಂ ಡಿ.ಕೆ.ಶಿವಕುಮಾರ್
-
ದಿನದ ಸುದ್ದಿ4 days ago
ಅಕ್ಟೋಬರ್ 20 ರಂದು ಬೃಹತ್ ಉದ್ಯೋಗ ಮೇಳ
-
ದಿನದ ಸುದ್ದಿ3 days ago
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ
-
ದಿನದ ಸುದ್ದಿ2 days ago
ಜಾತಿ ಪ್ರಮಾಣಪತ್ರ ಗೊಂದಲ ನಿವಾರಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ