ದಿನದ ಸುದ್ದಿ
ಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
–ಗೋವರ್ಧನ ನವಿಲೇಹಾಳು
ಕರ್ನಾಟಕದ ರಾಜಕೀಯ ಆಖಾಡದಲ್ಲಿ ಏಪ್ರಿಲ್ 9, 2026ರಂದು ನಡೆಯುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗಳು ಕೇವಲ ಎರಡು ಸೀಟುಗಳ ಚುನಾವಣೆಯಲ್ಲ. ಇದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಪರೀಕ್ಷೆ, ವಿರೋಧ ಪಕ್ಷ ಬಿಜೆಪಿಯ ಪುನರುತ್ಥಾನದ ಪ್ರಯತ್ನ ಮತ್ತು ಜನರ ಮನಸ್ಸಿನಲ್ಲಿ ರಾಜಕೀಯ ನೈತಿಕತೆಯ ಬಗ್ಗೆ ಉದ್ಭವಿಸುತ್ತಿರುವ ಅಸಮಾಧಾನದ ಪ್ರತಿಫಲನ.
ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಅವರ ನಿಧನದಿಂದ ಖಾಲಿಯಾದ ಈ ಎರಡು ಕ್ಷೇತ್ರಗಳಲ್ಲಿ ಒಟ್ಟು 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಈ ಚುನಾವಣೆಯ ನಿಜವಾದ ಕಥೆಯು ಅಭ್ಯರ್ಥಿ ಆಯ್ಕೆಯಲ್ಲಿ ಕಾಣಿಸುವ ದೈನ್ಯತೆ, ಅಂತರಿಕ ಕಲಹಗಳು, ಹಣದ ಹರಿವು ಮತ್ತು ಜನಪ್ರಿಯತೆಯ ಬದಲು ಅನುಕಂಪದ ಅಲೆಯ ಮೇಲೆ ನಿಂತಿರುವ ರಾಜಕೀಯ ತಂತ್ರಗಳಲ್ಲಿ ಅಡಗಿದೆ. ಈ ಉಪಚುನಾವಣೆಗಳನ್ನು ಪರಿಶೀಲಿಸುವಾಗ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ, ಕರ್ನಾಟಕದ ರಾಜಕೀಯವು ಇನ್ನೂ ಕುಟುಂಬೀಕರಣ, ಜಾತಿ ಲೆಕ್ಕಾಚಾರ ಮತ್ತು ಹಣದ ಬಲದಿಂದ ಹೊರಬರಲು ಸಿದ್ಧವಾಗಿಲ್ಲ.
ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಅವರು ನಾಲ್ಕು ಬಾರಿ ಶಾಸಕರಾಗಿ, ಕ್ಷೇತ್ರದಲ್ಲಿ ಗುರುತಿಸುವಂತಹ ಕೆಲಸ ಮಾಡಿದ್ದರು. ಬಾಗಲಕೋಟೆಯಲ್ಲಿ ಎಚ್.ವೈ. ಮೇಟಿ ಅವರು ಕಾಂಗ್ರೆಸ್ನ ಹಿರಿಯ ನಾಯಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನದ ನಂತರ ಉಪಚುನಾವಣೆ ಅನಿವಾರ್ಯವಾಯಿತು. ಆದರೆ ಕಾಂಗ್ರೆಸ್ ಪಕ್ಷದ ಪ್ರತಿಕ್ರಿಯೆಯು ರಾಜಕೀಯ ದೈನ್ಯತೆಯನ್ನು ಬಯಲು ಮಾಡುತ್ತದೆ. ದಾವಣಗೆರೆ ದಕ್ಷಿಣಕ್ಕೆ ಶಾಮನೂರು ಅವರ ಮೊಮ್ಮಗ ಸಮರ್ಥ್ ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಬಾಗಲಕೋಟೆಗೆ ಮೇತಿ ಅವರ ಎರಡನೇ ಮಗ ಉಮೇಶ್ ಮೇತಿ ಅವರನ್ನು ಕಣಕ್ಕಿಳಿಸಿದೆ. ಇದು ಕುಟುಂಬೀಕರಣದ ಶ್ರೇಷ್ಠ ಉದಾಹರಣೆ.
ಅನುಕಂಪದ ಅಲೆಯನ್ನು ಬಳಸಿಕೊಳ್ಳುವ ತಂತ್ರವು ಜನರ ಭಾವನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದಲ್ಲವೇ? ಶಾಮನೂರು ಮತ್ತು ಮೇಟಿ ಅವರಂತಹ ಹಿರಿಯ ನಾಯಕರು ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಅವರ ವಂಶಜರಿಗೆ ಉತ್ತರಾಧಿಕಾರವಾಗಿ ಪರಿವರ್ತಿಸುವುದು ಜನಪ್ರತಿನಿಧಿತ್ವದ ಮೂಲ ತತ್ವಕ್ಕೆ ವಿರುದ್ಧ. ಕಾಂಗ್ರೆಸ್ನಲ್ಲಿ ಅಂತರಿಕ ಕಲಹಗಳು ತೀವ್ರವಾಗಿದ್ದವು. ದಾವಣಗೆರೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಟಿಕೆಟ್ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿ ಪ್ರಚಾರದಿಂದ ದೂರವುಳಿದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಬಾಗಲಕೋಟೆಯಲ್ಲೂ ರಾಜಕಾರಣ ತೀವ್ರವಾಗಿದೆ. ಇದು ಕಾಂಗ್ರೆಸ್ನ ಒಳಬಣ್ಣಯನ್ನು ಬಯಲು ಮಾಡುತ್ತದೆ. ಪಕ್ಷವು ಏಕತೆಯನ್ನು ಬಯಸುವುದಿಲ್ಲ, ಅಧಿಕಾರದ ಹಂಚಿಕೆಯಲ್ಲಿ ಮಾತ್ರ ಆಸಕ್ತಿ. ಬಿಜೆಪಿ ಕಡೆಯಿಂದಲೂ ತಂತ್ರಗಳು ಜಾತಿ ಲೆಕ್ಕಾಚಾರದ ಮೇಲೆ ನಿಂತಿವೆ.
ದಾವಣಗೆರೆ ದಕ್ಷಿಣಕ್ಕೆ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಶ್ರೀನಿವಾಸ್ ಟಿ. ದಾಸಕಾರಿಯಪ್ಪ ಅವರನ್ನು ಕಣಕ್ಕಿಳಿಸಿದೆ. ಹೊಸ ಮುಖ. ಬಾಗಲಕೋಟೆಗೆ ವೀರಭದ್ರಯ್ಯ ಚರಂತಿಮಠ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿ ಇಲ್ಲಿ ಲಿಂಗಾಯತ-ಎಸ್ಟಿ ಸಮೀಕರಣವನ್ನು ಬಳಸುತ್ತಿದೆ. ಆದರೆ ಇದೂ ಕೂಡ ಜಾತಿ ರಾಜಕಾರಣದ ದೈನ್ಯತೆಯೇ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಸೀಟುಗಳು. ಈಗ ಅನುಕಂಪದ ಅಲೆಯನ್ನು ಬಳಸಿ ಕಾಂಗ್ರೆಸ್ ಉಳಿಸಿಕೊಳ್ಳಲು ಹೊರಟಿದೆ. ಬಿಜೆಪಿ ಇದನ್ನು ರಾಜ್ಯ ಸರ್ಕಾರದ ವಿರುದ್ಧ ವಾಗಿ ತಿರುಗಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಎರಡೂ ಪಕ್ಷಗಳು ಜನರ ನಿಜವಾದ ಸಮಸ್ಯೆಗಳ . ನೀರಾವರಿ, ಬೆಳೆ ಬೆಲೆ, ಉದ್ಯೋಗ, ಆರೋಗ್ಯ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ “ಗ್ಯಾರಂಟಿ ಯೋಜನೆಗಳು” ಮತ್ತು “ಮೋದಿ ಗ್ಯಾರಂಟಿ” ಎಂಬ ಘೋಷಣೆಗಳಲ್ಲಿ ಸಿಲುಕಿವೆ.
ಚುನಾವಣಾ ಆಯೋಗದ ವರದಿಗಳು ಇನ್ನೊಂದು ದುರಂತವನ್ನು ಬಯಲು ಮಾಡುತ್ತವೆ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ 80 ಲಕ್ಷ ರೂಪಾಯಿ ನಗದು ಮತ್ತು 1.74 ಲಕ್ಷ ರೂಪಾಯಿ ಮೌಲ್ಯದ ಮದ್ಯ ವಶಪಡಿಸಲಾಗಿದೆ. 53 ಎಫ್ಐಆರ್ಗಳು ದಾಖಲಾಗಿವೆ. ಇದು ಚುನಾವಣೆಯಲ್ಲಿ ಹಣದ ಬಲವು ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ಸರ್ಕಾರ “ಭ್ರಷ್ಟಾಚಾರ ವಿರೋಧಿ” ಎಂದು ಹೇಳಿಕೊಳ್ಳುತ್ತಿದ್ದರೂ, ತನ್ನ ಉಪಚುನಾವಣೆಯಲ್ಲಿ ಹಣದ ಹರಿವು ನಡೆಯುತ್ತಿದೆ. ಬಿಜೆಪಿಯೂ ಇದಕ್ಕೆ ಹೊರತಲ್ಲ. ಜನಪ್ರತಿನಿಧಿಗಳ ಕಾಯ್ದೆ 1951ರ ಕಲಂ 77(1) ಪ್ರಕಾರ ಖರ್ಚು ತಪಾಸಣೆ ನಡೆಯುತ್ತಿದೆಯಾದರೂ, ನಗದು ಮತ್ತು ಮದ್ಯದ ವಶಪಡಿಕೆಗಳು ತೋರಿಸುವಂತೆ, ನಿಯಮಗಳು ಕಾಗದದ ಮೇಲೆ ಮಾತ್ರ. ಇದು ಜನತೆಯನ್ನು ಅವಮಾನಿಸುವುದಲ್ಲವೇ? ಮತದಾರರು ಹಣಕ್ಕೆ ಮಾರುವುದನ್ನು ನಿರೀಕ್ಷಿಸುವ ರಾಜಕಾರಣಿಗಳು ಜನಪ್ರತಿನಿಧಿತ್ವದ ಮೌಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ಉಪಚುನಾವಣೆಗಳು ರಾಜ್ಯ ರಾಜಕೀಯಕ್ಕೆ ದೊಡ್ಡ ಪರಿಣಾಮ ಬೀರಲಿವೆ. ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಾಯಕತ್ವಕ್ಕೆ ಬಲ ಬರುತ್ತದೆ. ಸೋತರೆ 2028ರ ಚುನಾವಣೆಗೆ ಮುನ್ನೆಚ್ಚರಿಕೆಯ ಸಂದೇಶ. ಬಿಜೆಪಿಗೆ ಇದು ಕರ್ನಾಟಕದಲ್ಲಿ ಪುನರುಜ್ಜೀವನದ ಅವಕಾಶ. ಆದರೆ ಎರಡೂ ಪಕ್ಷಗಳೂ ಜನರ ಸಮಸ್ಯೆಗಳನ್ನು ಬದಿಗಿಟ್ಟು, ಅಧಿಕಾರದ ಆಟವಾಡುತ್ತಿವೆ. ದಾವಣಗೆರೆ ದಕ್ಷಿಣದಲ್ಲಿ ಲಿಂಗಾಯತ-ಕುರುಬ-ಎಸ್ಟಿ ಸಮೀಕರಣಗಳು, ಬಾಗಲಕೋಟೆಯಲ್ಲಿ ಲಿಂಗಾಯತ-ಮುಸ್ಲಿಂ ಧ್ರುವೀಕರಣ – ಇವುಗಳು ರಾಜಕೀಯವನ್ನು ವಿಷಯುಕ್ತಗೊಳಿಸುತ್ತಿವೆ. ಮತದಾರರು ಅನುಕಂಪಕ್ಕೆ ಮರುಳಾಗುವುದರ ಬದಲು, ಅಭ್ಯರ್ಥಿಗಳ ಕೆಲಸ, ಪಕ್ಷದ ನೀತಿ ಮತ್ತು ಜನಸೇವೆಯನ್ನು ಪರಿಶೀಲಿಸಬೇಕು.
ಈ ಉಪಚುನಾವಣೆಯಲ್ಲಿ ಒಂದು ಸಕಾರಾತ್ಮಕ ಅಂಶವಿದೆ, ಏನೆಂದರೆ ಅದು ಜನತೆಯ ಜಾಗೃತಿ. ಹಣದ ಪ್ರಭಾವ, ಕುಟುಂಬೀಕರಣ ಮತ್ತು ಜಾತಿ ರಾಜಕಾರಣದ ವಿರುದ್ಧ ಧ್ವನಿ ಎತ್ತುವ ಮತದಾರರು ಹೆಚ್ಚಾಗುತ್ತಿದ್ದಾರೆ. ಆದರೆ ಇದು ಸಾಕಾಗುವುದಿಲ್ಲ. ರಾಜಕೀಯ ಪಕ್ಷಗಳು ತಮ್ಮ ದೈನ್ಯತೆಯನ್ನು ತೊರೆಯಬೇಕು. ಅಭ್ಯರ್ಥಿ ಆಯ್ಕೆಯಲ್ಲಿ ಮೆರಿಟ್, ಸೇವಾ ಮನೋಭಾವ ಮತ್ತು ನೈತಿಕತೆಗೆ ಮುಖ್ಯತ್ವ ನೀಡಬೇಕು. ಚುನಾವಣಾ ಆಯೋಗವು ಹಣದ ಹರಿವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಮಾಧ್ಯಮಗಳು ನಿಷ್ಪಕ್ಷಪಾತ ವರದಿ ಮಾಡಬೇಕು.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯ ಜನರು ಈ ಚುನಾವಣೆಯಲ್ಲಿ ತಮ್ಮ ಭವಿಷ್ಯವನ್ನು ನಿರ್ಧರಿಸುತ್ತಾರೆ. ಅನುಕಂಪದ ಅಲೆಯಲ್ಲಿ ಮುಳುಗುವುದೋ ಅಥವಾ ಅಭಿವೃದ್ಧಿ ಮತ್ತು ನೈತಿಕತೆಯ ಹಾದಿಯನ್ನು ಆರಿಸುವುದೋ ಅವರ ಕೈಯಲ್ಲಿದೆ. ರಾಜಕೀಯ ನಾಯಕರು ಇದನ್ನು ಅರ್ಥಮಾಡಿಕೊಳ್ಳಬೇಕು. ಜನರು ಇನ್ನು ಮುಂದೆ ಮರುಳು ಮಾಡಲು ಸಾಧ್ಯವಿಲ್ಲ. ಈ ಉಪಚುನಾವಣೆ ಕೇವಲ ಫಲಿತಾಂಶದಲ್ಲಲ್ಲ, ರಾಜಕೀಯ ಸುಧಾರಣೆಯಲ್ಲಿ ಗೆಲುವು ಸಾಧಿಸಲಿ. ಜನತೆ ಜಾಗೃತರಾಗಿ, ರಾಜಕಾರಣಿಗಳು ದೈನ್ಯತೆಯಿಂದ ಹೊರಬರಲಿ. ಅದೇ ನಿಜವಾದ ಜಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್ಒಗಳ ಭೇಟಿ ಪ್ರಾರಂಭ
ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್ 30 ರಿಂದಲೇ ಬೂತ್ ಮಟ್ಟದ ಅಧಿಕಾರಿಗಳು ಎನುಮೆರೇಷನ್ ನಮೂನೆಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಜೂನ್ 16ರ ವರೆಗಿನ ಅಂಕಿ-ಅಂಶಗಳಂತೆ ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರಿದ್ದಾರೆ. ಮತದಾರರ ನಿಖರ ಮಾಹಿತಿ ಪಡೆಯಲು ಈಗಾಗಲೇ 8,99,435 ಎನುಮೆರೇಷನ್ ನಮೂನೆಗಳನ್ನು ಬಿಎಲ್ಒಗಳ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಈ ಪೈಕಿ 38,003 ನಮೂನೆಗಳ ಗಣಕೀಕರಣ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
ಕ್ಷೇತ್ರವಾರು ಮಾಹಿತಿ ಮತ್ತು ಪ್ರಗತಿ ವಿವರ
ಜಗಳೂರು: 2,00,836 ಒಟ್ಟು ಮತದಾರರಿದ್ದು, 1,27,608 ನಮೂನೆಗಳನ್ನು ವಿತರಿಸಲಾಗಿದೆ. ಹರಿಹರ: 2,11,023 ಮತದಾರರಿದ್ದು, 1,55,143 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ. ದಾವಣಗೆರೆ ಉತ್ತರ: 2,58,718 ಮತದಾರರ ಪೈಕಿ 69,881 ನಮೂನೆಗಳನ್ನು ವಿತರಿಸಲಾಗಿದೆ. ದಾವಣಗೆರೆ ದಕ್ಷಿಣ: 2,27,996 ಮತದಾರರಿದ್ದು, 79,365 ನಮೂನೆಗಳನ್ನು ಹಂಚಲಾಗಿದೆ. ಮಾಯಕೊಂಡ: 1,97,048 ಮತದಾರರಿದ್ದು, 1,66,618 ನಮೂನೆ ವಿತರಣೆಯಾಗಿದೆ. ಚನ್ನಗಿರಿ: 2,03,628 ಮತದಾರರ ಪೈಕಿ 1,64,380 ನಮೂನೆಗಳನ್ನು ತಲುಪಿಸಲಾಗಿದೆ. ಹೊನ್ನಾಳಿ: 2,00,033 ಒಟ್ಟು ಮತದಾರರಿದ್ದು, 1,36,440 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ.
ಸ್ಥಳಾಂತರ, ವಲಸೆ ಹಾಗೂ ಮರಣ ಪ್ರಕರಣಗಳ ಪತ್ತೆ: ಮನೆ ಮನೆ ಭೇಟಿಯ ಸಂದರ್ಭದಲ್ಲಿ ಬಿಎಲ್ಒಗಳು ಮತದಾರರ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಜುಲೈ 1ರ ವರೆಗಿನ ವರದಿಯ ಪ್ರಕಾರ, ಜಿಲ್ಲಾದ್ಯಂತ ಒಟ್ಟು 421 ವಿಶೇಷ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 188 ಮರಣ ಹೊಂದಿದ ಪ್ರಕರಣಗಳು, 153 ಶಾಶ್ವತವಾಗಿ ವಲಸೆ ಹೋದವರು, 71 ದ್ವಿಪ್ರತಿ ಮತದಾರರು ಹಾಗೂ 5 ಅಪೂರ್ಣ ಮಾಹಿತಿ ಇರುವ ಪ್ರಕರಣಗಳು ಸೇರಿವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗರಿಷ್ಠ 110 ಹಾಗೂ ಮಾಯಕೊಂಡದಲ್ಲಿ 93 ಇಂತಹ ಪ್ರಕರಣಗಳು ಪತ್ತೆಯಾಗಿವೆ. ಈ ಮನೆ ಮನೆ ಭೇಟಿ ಹಾಗೂ ನಮೂನೆಗಳ ಸಂಗ್ರಹಣೆ ಮತ್ತು ಗಣಕೀಕರಣ ಪ್ರಕ್ರಿಯೆಯು ಜುಲೈ 29, 2026 ರವರೆಗೆ ಮುಂದುವರಿಯಲಿದ್ದು, ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಜಿಲ್ಲಾಡಳಿತ ಕೋರಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯನವರಿಗೆ ಹಾಗೂ ದೂಡಾ ಆಯುಕ್ತೆ ರೇಣುಕ ಇವರಿಗೆ ಮನವಿ ಸಲ್ಲಿಸಿದರು.
ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಮನವಿ ಸಲ್ಲಿಸಿದ ಹಳೇ ಕುಂದುವಾಡ ರೈತರು, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ರಿ. ಸರ್ವೆ ನಂಬರ್ 125ರಿಂದ 142ರಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿತ್ತು, ಆದರೆ ರೈತರು ಪ್ರಾಧಿಕಾರದ ಮಧ್ಯೆ ಒಡಂಬಡಿಕೆ ಆಗದ ಕಾರಣ ಪ್ರಕ್ರಿಯೆ ಕೈ ಬಿಟ್ಟಿತ್ತು. ಪ್ರಾಧಿಕಾರವು ಸಹ ಈ ಜಮೀನುಗಳ ದರ ಹೆಚ್ಚಿದ್ದು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಹ ಹೇಳಿತ್ತು, ಅದರಂತೆ 19-02-2024 ರಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಸದರಿ ವಸತಿ ಯೋಜನೆ ಕೈ ಬಿಡಲು ಸಭೆ ತೀರ್ಮಾನಿಸಿ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿತ್ತು, ಆದರೆ ಇದುವರೆಗೂ ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಕ್ರಮ ವಹಿಸಿಲ್ಲ, ಆರೇಳು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಇದರಿಂದ ರೈತರು ತುಂಬಾ ತೊಂದರೆಯಲ್ಲಿ ಸಿಲುಕಿದ್ದಾರೆ, ಕುರುಬ, ಮಡಿವಾಳ, ಉಪ್ಪಾರ ಜನಾಂಗ ಸೇರಿದಂತೆ ಬಹುತೇಕರು ಹಿಂದುಳಿದ ವರ್ಗದ ಸಣ್ಣ ಹಿಡುವಳಿದಾರರು ಇಲ್ಲಿದ್ದಾರೆ, ಸಾಲದ ಹೊರೆ ಜಾಸ್ತಿ ಆದ ಹಿನ್ನಲೆ ಹಲವರಿಗೆ ತೊಂದರೆ ಆಗಿದೆ, ಈ ವಸತಿ ಯೋಜನೆಯಲ್ಲಿ ಯಾವುದೇ ರೀತಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿರುವುದಿಲ್ಲ, ಯಾವುದೇ ಅಧಿಸೂಚನೆ (NOTIFICATION) ಆಗಿರುವುದಿಲ್ಲ. ಈ ಹಿಂದೆ ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಮಿ ದರ ಹೆಚ್ಚಾಗಿದ್ದು, ಈ ಹಿನ್ನಲೆ ಸದರಿ ಯೋಜನೆ ಕೈ ಬಿಡುವಂತೆ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿದೆ, ಹೀಗಿದ್ದರು ನಮ್ಮಗಳ ಜಮೀನಿನ ಮೇಲೆ ದೂಡಾ ಹಕ್ಕು ಚಲಾಯಿಸಲು ಮುಂದಾಗಿ ಅಗ್ರಿಮೆಂಟ್, ರಿಜಿಸ್ಟ್ಟೇಷನ್, ಪೋಡು ಪ್ರಕ್ರಿಯೆ ಸೇರಿದಂತೆ ಇನ್ನಿತರೆ ಹಕ್ಕುಗಳನ್ನ ಚಲಾಯಿಸದಂತೆ ದಾವಣಗೆರೆ ಸಬ್ ರಿಜಿಸ್ಟ್ರಾರ್ ಗೆ ಪತ್ರ ಬರೆದು ಅಡ್ಡಿಪಡಿಸಿದೆ, ಈ ಹಿನ್ನಲೆ ನಗರಾಭಿವೃದ್ಧಿ ಇಲಾಖೆಯಿಂದ ದಯಮಾಡಿ ಈ ವಸತಿ ಯೋಜನೆ ಕೈ ಬಿಡಲು ಅನುಮತಿ ನೀಡುವಂತೆ ಹಾಗೂ ದಾವಣಗೆರೆ ಪ್ರಾಧೀಕಾರದ ಇಂದಿನ ಸಭೆಯಲ್ಲಿಯಲ್ಲಿಯೇ ಈ ಯೋಜನೆ ಕೈ ಬಿಡುವಂತೆ ಆದೇಶ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದ ಯತೀಂದ್ರ ಅವರು, ಯಾವುದೇ ನೋಟಿಫಿಕೇಶನ್ ಆಗಿಲ್ಲ ಅನ್ನುವುದಾದರೇ ಬಲವಂತದಿಂದ ರೈತರ ಭೂಮಿ ಕಿತ್ತುಕೊಳ್ಳುವುದು ಸರಿಯಲ್ಲ, ಈ ಬಗ್ಗೆ ಮಾಹಿತಿಯೊಂದಿಗೆ ಇಲಾಖೆಗೆ ಪತ್ರ ಬರೆಯಿರಿ, ಇಲಾಖೆಯಿಂದ ಯೋಜನೆ ಕೈ ಬಿಡುವ ಬಗ್ಗೆ ತೀರ್ಮಾನಿಸುತ್ತೇವೆ, ಬೇರೆ ಕಡೆಗಳಲ್ಲಿ ಜಾಗ ಗುರುತಿಸಿದ್ದು, ಅಲ್ಲಿ ವಸತಿ ಯೋಜನೆ ಮುಂದುವರೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ನರಸಪ್ಪರ ಶಿವಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ರೇವಣಪ್ಪ, ದೇವರಾಜ್, ಸಣ್ಣಿಂಗಪ್ಪ, ಮಧುನಾಗರಾಜ್, ಗೋಣೆಪ್ಪ, ರಾಮಣ್ಣ, ಹನುಮಂತಪ್ಪ, ಈಶಪ್ಪ, ಆನಂದಪ್ಪ, ಗುಡ್ಡಪ್ಪ, ರಮೇಶ್, ನಾಗರಾಜ್, ಹನುಮಂತ್ ಸೇರಿದಂತೆ ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
-
ದಿನದ ಸುದ್ದಿ7 days agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ7 days agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ2 days agoಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ
-
ದಿನದ ಸುದ್ದಿ2 days agoದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್ಒಗಳ ಭೇಟಿ ಪ್ರಾರಂಭ
-
ಅಂಕಣ2 days agoದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ



