Connect with us

ದಿನದ ಸುದ್ದಿ

ತ್ಯಾವಣಿಗೆಯ ಪ್ರಸಿದ್ಧ ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರ ; ಸೃಜನಶೀಲ ಚಟುವಟಿಕೆಯೊಂದಿಗೆ ಕಂಪ್ಯೂಟರ್ ಕಲಿಸ್ತಾರೆ ಈ ಚೇತನ್

Published

on

ಸುದ್ದಿದಿನ ವಿಶೇಷ – ವಿದ್ಯಾನಾಯ್ಕ್ ಅರೇಹಳ್ಳಿ

ಸುದ್ದಿದಿನ,ದಾವಣಗೆರೆ : ಕಂಪ್ಯೂಟರ್ ತರಬೇತುದಾರರೊಬ್ಬರು ತನ್ನ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಬರುವ ಶಿಭಿರಾರ್ಥಿ ಗಳಿಗೆ ಕೇವಲ ಕಂಪ್ಯೂಟರ್ ತರಬೇತಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಿಶಿಷ್ಟ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಮನೆಮಾತಾಗಿದ್ದಾರೆ.

ಹೌದು ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆ ಗ್ರಾಮದಲ್ಲಿರುವ ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರದ ಚೇತನ್ ಕುಮಾರ್ ವಿಶಿಷ್ಟ ರೀತಿಯಲ್ಲಿ ತಮ್ಮ ಕಾಯಕ ವೃತ್ತಿಯನ್ನು ನಿರ್ವಹಿಸುವ ಜೊತೆಗೆ ಸಾಂಸ್ಕೃತಿಕ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿರುವುದು ಮನುಷ್ಯತ್ವದ ಅಚಲ ನಂಬಿಕೆಯನ್ನ ಪ್ರತಿಬಿಂಬಿಸುತ್ತದೆ.

ಇಲ್ಲಿನ ವೈವಿಧ್ಯಮಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಕಲಿಕೆಯ ಜೊತೆಗೆ ಸಂಭ್ರಮ ಮತ್ತು ಸಂಸ್ಕಾರವನ್ನು ಬೆಳೆಸುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಜೂನ್ 27,2022ರಲ್ಲಿ ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರ ಶುರು ಮಾಡಿದ ಇವರು ಕೇವಲ ಕಂಪ್ಯೂಟರ್ ಕಲಿಕೆ ಮಾತ್ರವಲ್ಲದೆ ಮಕ್ಕಳಿಗೆ ಬೇರೆ ಬೇರೆಯ ವಿಷಯಗಳ ಬಗ್ಗೆ ಅರಿವು ನೀಡಬೇಕು ಎಂದು ತೀರ್ಮಾನ ಮಾಡಿ ತಮ್ಮದೇ ಶೈಲಿಯಲ್ಲಿ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ.

ಜೀವನದ ಜಂಜಾಟದಲ್ಲಿ ಮನೆಯ ಕಷ್ಟ ಜೀವನವನ್ನ ಅರಿತ ಮಕ್ಕಳು ಗೊಂದಲಕ್ಕೆ ಈಡಾಗುತ್ತಾರೆ ಎಂಬುದನ್ನು ಮನಗಂಡ ಇವರು ಮಕ್ಕಳ ಒತ್ತಡವನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳಲ್ಲಿ ಹಾಸ್ಯ ಪ್ರಜ್ಞೆ ಹಾಗೂ ಅಭಿವ್ಯಕ್ತಿ ಕಲೆ ಬೆಳೆಸಲು ಈ ವಿಶಿಷ್ಟ ಕಾರ್ಯಕ್ರಮವನ್ನ ಪ್ರತಿ ಶುಕ್ರವಾರ ಹಮ್ಮಿಕೊಂಡು ಮಕ್ಕಳನ್ನ ನಕ್ಕು ನಗಿಸುವ ಮೂಲಕ ಕಲಿಕೆಗೆ ಸ್ಫೂರ್ತಿ ನೀಡುತ್ತಿದ್ದಾರೆ.

ಐವಿನ್ ಕಂಪ್ಯೂಟರ್ ತರಬೇತಿ ಕೇಂದ್ರದೊಳಗೆ

ಆಟೋಟಗಳು

ಬೆಳೆವ ಮಕ್ಕಳು ದೇಶದ ಆಸ್ತಿ.. ಆ ಮಕ್ಕಳು ದೈಹಿಕ ಮತ್ತು ಮಾನಸಿಕ ಸದೃಢರಾಗಿರಬೇಕು ಆಗಲೇ ಕಲಿಕೆಗೆ ಸ್ಫೂರ್ತಿ ಸಿಗುತ್ತೆ ಎನ್ನುವ ಕಾರಣಕ್ಕೆ ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ ಕೆಲವು ಆಟಗಳನ್ನ ಆಡಿಸುವ ಪರಿಪಾಠವನ್ನು ಮುಂದುವರಿಸುತ್ತ ಬಂದಿದ್ದಾರೆ.

ಒಂದು ದಿನದ ಪಿಕ್ನಿಕ್

ಸದರಿ ತರಬೇತಿ ಕೇಂದ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ವರ್ಷಕ್ಕೊಮ್ಮೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ನಕ್ಕು ನಲಿಸಿ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಂಡು ಬರುವ ವಾಡಿಕೆ ಮುಂದುವರೆಯುತ್ತಲೇ ಇದೆ. ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಸ್ನೇಹಭಾವ ಮತ್ತು ಹೊರಜಗತ್ತಿನ ಅರಿವು ಮೂಡಿಸಲು ಸಹಕಾರಿಯಾಗಿದ್ದಾರೆ.

​​ಸಾಮೂಹಿಕ ಭೋಜನ

ಇತ್ತೀಚಿಗೆ ರಾಜಕೀಯ ವ್ಯವಸ್ಥೆಯಲ್ಲಿ ಬಡಜನರ ಮನೆಯಲ್ಲಿ ಊಟ ಮಾಡುವುದೇ ದೊಡ್ಡ ಸುದ್ದಿಯನ್ನಾಗಿ ಬಿಂಬಿಸುವ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಬಡತನ ಸಿರಿತನ ಹಾಗೂ ಜಾತಿ-ಭೇದದ ಅರಿವು ಇರದೇ ಎಲ್ಲರು ಎಲ್ಲರನ್ನು ಪ್ರೀತಿಸಬೇಕು, ಎಲ್ಲರೊಟ್ಟಿಗೆ ಸಾಮೂಹಿಕವಾಗಿ ಒಬ್ಬರ ಮನೆಯಲ್ಲಿನ ಊಟ ಮತ್ತೊಬ್ಬರು ಮಾಡುವ ಮೂಲಕ ಬೇಧ ಭಾವ ಅಳಿಸುವ ಕಾರ್ಯಕ್ಕೆ ಮುನ್ನಡಿ ಬರೆದಿದ್ದಾರೆ.

​ಜನ್ಮ ದಿನಾಚರಣೆ

ಈ ತರಬೇತಿ ಕೇಂದ್ರಕ್ಕೆ ಬರುವ ಮಕ್ಕಳ ಜನ್ಮ ದಿನಾಚರಣೆ ಮಾಡಿ ಶುಭ ಹಾರೈಸಿ ಸಿಹಿ ಹಂಚಿ ಸಂಭ್ರಮ ಪಡುತ್ತಾರೆ.

ಪೂಜೆ ಪುನಸ್ಕಾರ

ಇನ್ನು ಮಕ್ಕಳಲ್ಲಿ ಸಂಪ್ರದಾಯ, ದೇಶದ ಮೇಲೆ ಅಭಿಮಾನ, ದೇವರ ಮೇಲೆ ನಂಬಿಕೆ, ಉತ್ತಮ ಕೆಲಸದ ಬಗ್ಗೆ ಸಾರ್ಥಕತೆ ಭಾವ ಬರಬೇಕು ಎಂಬ ಕಾರಣಕ್ಕೆ ಪೂಜೆ ಪುನಸ್ಕಾರ, ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವುದು ಸ್ವಾಗತರ್ಹ.

ಆರೋಗ್ಯ ಶಿಬಿರ ಆಯೋಜನೆ

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ತರಬೇತಿ ಕೇಂದ್ರದಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದು ಅತ್ಯಂತ ಮೆಚ್ಚುವಂತಹ ಕೆಲಸವಾಗಿದೆ.

ಕೌಶಲ್ಯ ಸ್ಪರ್ಧೆ

ಇನ್ನು ಪ್ರತಿವರ್ಷ ತಮ್ಮ ತರಬೇತಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಅರಿವು ಮೂಡಿಸುವ ಸಲುವಾಗಿ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ನಡೆಸಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲಾಗುತ್ತದೆ. ಇದರ ಜೊತೆಗೆ ಅತ್ಯುತ್ತಮ ವಿದ್ಯಾರ್ಥಿಗಳಿಗೆ

​ಬಹುಮಾನ ವಿತರಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಐವಿನ್ ತರಬೇತಿ ಕೇಂದ್ರ ಸಾಮಾಜಿಕವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.

 

ಬೀಳ್ಕೊಡುಗೆ ಸಮಾರಂಭ

ಇನ್ನೂ ಕೋರ್ಸ್ ಮುಗಿಸಿ ಹೋಗುವ ವಿದ್ಯಾರ್ಥಿಗಳಿಗೆ ಗೌರವಪೂರ್ವಕವಾಗಿ ವಿದಾಯ ಹೇಳುವ ಮೂಲಕ ಗುರುವಿನ ಮತ್ತು ಸಂಸ್ಥೆಯ ಬಾಂಧವ್ಯವನ್ನು ಗಟ್ಟಿಗೊಳಿಸಲಾಗುತ್ತದೆ.

300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ

ಜೂನ್ 27, 2022ರಲ್ಲಿ ಆರಂಭವಾದ ಈ ತರಬೇತಿ ಕೇಂದ್ರದಲ್ಲಿ ಇಲ್ಲಿಯವರೆಗೆ 300ಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿ ಪಡೆದಿದ್ದಾರೆ. ಒಂದು ಬ್ಯಾಚ್ ಗೆ 8 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ.

ನಮಗೆ ಕಂಪ್ಯೂಟರ್ ಕಲಿಕೆಯೊಂದಿಗೆ ಉತ್ತಮ ವಿಚಾರಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಪ್ರತಿ ವಾರವು ಒಂದೊಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಚೇತನ್ ಸರ್ ಹೊಸ ವಿಚಾರಗಳನ್ನು ಕಲಿಸುತ್ತಾರೆ. ನಮ್ಮಲ್ಲಿರುವ ಭಯ ಹೊರಗಡೆ ತಗೆಯೋಕೆ ತುಂಬಾ ಪ್ರಯತ್ನ ಪಡ್ತಾರೆ.. ಅವರ ಆದರ್ಶ ಗುಣಗಳೇ ನಮಗೆ ನಮ್ಮ ಸಾಧನೆಯ ಮೆಟ್ಟಿಲುಗಳಾಗಬೇಕು ಅದಕ್ಕಾಗಿ ನಮ್ಮ ಪ್ರಯತ್ನ ಇದ್ದೇ ಇದೆ.

~ಶಿಬಿರಾರ್ಥಿಗಳು

ಗ್ರಾಮೀಣ ಭಾಗದ ಒಂದು ಕಂಪ್ಯೂಟರ್ ಸೆಂಟರ್ ಇಷ್ಟೊಂದು ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ. ಇದು ಮಕ್ಕಳಲ್ಲಿ ಕೇವಲ ಡಿಜಿಟಲ್ ಕೌಶಲ್ಯವನ್ನಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿಯನ್ನು ಕೂಡ ಬೆಳೆಸುತ್ತದೆ.

​ತ್ಯಾವಣಿಗೆಯ ಐವಿನ್ ಕಂಪ್ಯೂಟರ್ ಸೆಂಟರ್‌ನ ಈ ಮಾದರಿ ಕಾರ್ಯಕ್ರಮಗಳು ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ತ್ಯಾವಣಿಗೆ, ಅರೇಹಳ್ಳಿ -ಕದರನಹಳ್ಳಿ, ಕಬ್ಬಳ, ಕರೆಕಟ್ಟೆ, ಮತ್ತಿ, ಬೆಳಲಗೆರೆ, ಮಿಯಾಪುರ ಸೇರಿದಂತೆ ಅಕ್ಕಪಕ್ಕ ಗ್ರಾಮದ ಹಲವಾರು ಮಕ್ಕಳು ಈ ತರಬೇತಿ ಕೇಂದ್ರಕ್ಕೆ ಬಂದು ತರಬೇತಿ ಪಡೆದಿದ್ದಾರೆ.

ಸಮಾಜದಲ್ಲಿ ಆದಷ್ಟು ಒಳ್ಳೆಯ ಕೆಲಸಗಳನ್ನ ಮಾಡಿ ಮಕ್ಕಳಿಗೆ ಮಾದರಿ ಯಾಗಿರಬೇಕು. ಈ ತರಬೇತಿ ಕೇಂದ್ರ ಆರಂಭಕ್ಕೆ ತುಂಬಾ ಕಷ್ಟಪಟ್ಟಿದ್ದೇನೆ. ನಾವು ಪಟ್ಟ ಕಷ್ಟ ಮುಂದಿನ ಪೀಳಿಗೆ ಪಡಬಾರದು. ಕಲಿಕೆಗೂ ಕಷ್ಟಪಡಬೇಕಾದ ಪರಿಸ್ಥಿತಿ ಇದೆ. ಎಷ್ಟೋ ಮಕ್ಕಳಿಗೆ ನಾವು ಹೇಳಿದಷ್ಟು ಹಣ ಕೊಡೋಕೆ ಆಗಲ್ಲ ಹಾಗಂತ ಅವರನ್ನು ಕಲಿಸದೇ ಕಳಿಸಲ್ಲ.. ಹಣದಲ್ಲಿ ರಿಯಾಯ್ತಿ ನೀಡಿ ಅವರನ್ನು ಕಲಿಸೋಕೆ ಹುರಿದುಂಬಿಸುತ್ತೇವೆ ಎನ್ನುತ್ತಾರೆ ಚೇತನ್ ಕುಮಾರ್.

ಇನ್ನು ಟ್ರೈನರ್ ಗಾಯತ್ರಿ ಅವರು ಕೂಡ ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿ ಕಂಪ್ಯೂಟರ್ ಕಲಿಸುತ್ತಾರೆ. ಹಾಗೆಯೇ ಈ ಹಿಂದೆ ಇದ್ದ ವಿನುತಾ ಎಂಬ ಟ್ರೈನರ್ ಅವರ ಶ್ರಮ ತುಂಬಾ ಇದೆ ಎನ್ನುತ್ತಾರೆ ಚೇತನ್ ಕುಮಾರ್. ಒಟ್ಟಾರೆ ವಿಭಿನ್ನ ರೀತಿಯಲ್ಲಿ ಕಂಪ್ಯೂಟರ್ ಕಲಿಕೆ ಜೊತೆಗೆ ಬೇರೆ ಬೇರೆ ವಿಷಯಗಳ ಬಗ್ಗೆ ಅರಿವು ಮೂಡಿಸುವ ಇವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ.

ಸುದ್ದಿದಿನ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್‍ಒಗಳ ಭೇಟಿ ಪ್ರಾರಂಭ

Published

on

ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್ 30 ರಿಂದಲೇ ಬೂತ್ ಮಟ್ಟದ ಅಧಿಕಾರಿಗಳು ಎನುಮೆರೇಷನ್ ನಮೂನೆಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಜೂನ್ 16ರ ವರೆಗಿನ ಅಂಕಿ-ಅಂಶಗಳಂತೆ ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರಿದ್ದಾರೆ. ಮತದಾರರ ನಿಖರ ಮಾಹಿತಿ ಪಡೆಯಲು ಈಗಾಗಲೇ 8,99,435 ಎನುಮೆರೇಷನ್ ನಮೂನೆಗಳನ್ನು ಬಿಎಲ್‍ಒಗಳ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಈ ಪೈಕಿ 38,003 ನಮೂನೆಗಳ ಗಣಕೀಕರಣ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ಕ್ಷೇತ್ರವಾರು ಮಾಹಿತಿ ಮತ್ತು ಪ್ರಗತಿ ವಿವರ

ಜಗಳೂರು: 2,00,836 ಒಟ್ಟು ಮತದಾರರಿದ್ದು, 1,27,608 ನಮೂನೆಗಳನ್ನು ವಿತರಿಸಲಾಗಿದೆ. ಹರಿಹರ: 2,11,023 ಮತದಾರರಿದ್ದು, 1,55,143 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ. ದಾವಣಗೆರೆ ಉತ್ತರ: 2,58,718 ಮತದಾರರ ಪೈಕಿ 69,881 ನಮೂನೆಗಳನ್ನು ವಿತರಿಸಲಾಗಿದೆ. ದಾವಣಗೆರೆ ದಕ್ಷಿಣ: 2,27,996 ಮತದಾರರಿದ್ದು, 79,365 ನಮೂನೆಗಳನ್ನು ಹಂಚಲಾಗಿದೆ. ಮಾಯಕೊಂಡ: 1,97,048 ಮತದಾರರಿದ್ದು, 1,66,618 ನಮೂನೆ ವಿತರಣೆಯಾಗಿದೆ. ಚನ್ನಗಿರಿ: 2,03,628 ಮತದಾರರ ಪೈಕಿ 1,64,380 ನಮೂನೆಗಳನ್ನು ತಲುಪಿಸಲಾಗಿದೆ. ಹೊನ್ನಾಳಿ: 2,00,033 ಒಟ್ಟು ಮತದಾರರಿದ್ದು, 1,36,440 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ.

ಸ್ಥಳಾಂತರ, ವಲಸೆ ಹಾಗೂ ಮರಣ ಪ್ರಕರಣಗಳ ಪತ್ತೆ: ಮನೆ ಮನೆ ಭೇಟಿಯ ಸಂದರ್ಭದಲ್ಲಿ ಬಿಎಲ್‍ಒಗಳು ಮತದಾರರ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಜುಲೈ 1ರ ವರೆಗಿನ ವರದಿಯ ಪ್ರಕಾರ, ಜಿಲ್ಲಾದ್ಯಂತ ಒಟ್ಟು 421 ವಿಶೇಷ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 188 ಮರಣ ಹೊಂದಿದ ಪ್ರಕರಣಗಳು, 153 ಶಾಶ್ವತವಾಗಿ ವಲಸೆ ಹೋದವರು, 71 ದ್ವಿಪ್ರತಿ ಮತದಾರರು ಹಾಗೂ 5 ಅಪೂರ್ಣ ಮಾಹಿತಿ ಇರುವ ಪ್ರಕರಣಗಳು ಸೇರಿವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗರಿಷ್ಠ 110 ಹಾಗೂ ಮಾಯಕೊಂಡದಲ್ಲಿ 93 ಇಂತಹ ಪ್ರಕರಣಗಳು ಪತ್ತೆಯಾಗಿವೆ. ಈ ಮನೆ ಮನೆ ಭೇಟಿ ಹಾಗೂ ನಮೂನೆಗಳ ಸಂಗ್ರಹಣೆ ಮತ್ತು ಗಣಕೀಕರಣ ಪ್ರಕ್ರಿಯೆಯು ಜುಲೈ 29, 2026 ರವರೆಗೆ ಮುಂದುವರಿಯಲಿದ್ದು, ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಜಿಲ್ಲಾಡಳಿತ ಕೋರಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ

Published

on

ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯನವರಿಗೆ ಹಾಗೂ ದೂಡಾ ಆಯುಕ್ತೆ ರೇಣುಕ ಇವರಿಗೆ ಮನವಿ ಸಲ್ಲಿಸಿದರು.

ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಮನವಿ ಸಲ್ಲಿಸಿದ ಹಳೇ ಕುಂದುವಾಡ ರೈತರು, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ರಿ. ಸರ್ವೆ ನಂಬರ್ 125ರಿಂದ 142ರಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿತ್ತು, ಆದರೆ ರೈತರು ಪ್ರಾಧಿಕಾರದ ಮಧ್ಯೆ ಒಡಂಬಡಿಕೆ ಆಗದ ಕಾರಣ ಪ್ರಕ್ರಿಯೆ ಕೈ ಬಿಟ್ಟಿತ್ತು. ಪ್ರಾಧಿಕಾರವು ಸಹ ಈ ಜಮೀನುಗಳ ದರ ಹೆಚ್ಚಿದ್ದು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಹ ಹೇಳಿತ್ತು, ಅದರಂತೆ 19-02-2024 ರಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಸದರಿ ವಸತಿ ಯೋಜನೆ ಕೈ ಬಿಡಲು ಸಭೆ ತೀರ್ಮಾನಿಸಿ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿತ್ತು, ಆದರೆ ಇದುವರೆಗೂ ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಕ್ರಮ ವಹಿಸಿಲ್ಲ, ಆರೇಳು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.

ಇದರಿಂದ ರೈತರು ತುಂಬಾ ತೊಂದರೆಯಲ್ಲಿ ಸಿಲುಕಿದ್ದಾರೆ, ಕುರುಬ, ಮಡಿವಾಳ, ಉಪ್ಪಾರ ಜನಾಂಗ ಸೇರಿದಂತೆ ಬಹುತೇಕರು ಹಿಂದುಳಿದ ವರ್ಗದ ಸಣ್ಣ ಹಿಡುವಳಿದಾರರು ಇಲ್ಲಿದ್ದಾರೆ, ಸಾಲದ ಹೊರೆ ಜಾಸ್ತಿ ಆದ ಹಿನ್ನಲೆ ಹಲವರಿಗೆ ತೊಂದರೆ ಆಗಿದೆ, ಈ ವಸತಿ ಯೋಜನೆಯಲ್ಲಿ ಯಾವುದೇ ರೀತಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿರುವುದಿಲ್ಲ, ಯಾವುದೇ ಅಧಿಸೂಚನೆ (NOTIFICATION) ಆಗಿರುವುದಿಲ್ಲ. ಈ ಹಿಂದೆ ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಮಿ ದರ ಹೆಚ್ಚಾಗಿದ್ದು, ಈ ಹಿನ್ನಲೆ ಸದರಿ ಯೋಜನೆ ಕೈ ಬಿಡುವಂತೆ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿದೆ, ಹೀಗಿದ್ದರು ನಮ್ಮಗಳ ಜಮೀನಿನ ಮೇಲೆ ದೂಡಾ ಹಕ್ಕು ಚಲಾಯಿಸಲು ಮುಂದಾಗಿ ಅಗ್ರಿಮೆಂಟ್, ರಿಜಿಸ್ಟ್ಟೇಷನ್, ಪೋಡು ಪ್ರಕ್ರಿಯೆ ಸೇರಿದಂತೆ ಇನ್ನಿತರೆ ಹಕ್ಕುಗಳನ್ನ ಚಲಾಯಿಸದಂತೆ ದಾವಣಗೆರೆ ಸಬ್ ರಿಜಿಸ್ಟ್ರಾರ್ ಗೆ ಪತ್ರ ಬರೆದು ಅಡ್ಡಿಪಡಿಸಿದೆ, ಈ ಹಿನ್ನಲೆ ನಗರಾಭಿವೃದ್ಧಿ ಇಲಾಖೆಯಿಂದ ದಯಮಾಡಿ ಈ ವಸತಿ ಯೋಜನೆ ಕೈ ಬಿಡಲು ಅನುಮತಿ ನೀಡುವಂತೆ ಹಾಗೂ ದಾವಣಗೆರೆ ಪ್ರಾಧೀಕಾರದ ಇಂದಿನ ಸಭೆಯಲ್ಲಿಯಲ್ಲಿಯೇ ಈ ಯೋಜನೆ ಕೈ ಬಿಡುವಂತೆ ಆದೇಶ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದ ಯತೀಂದ್ರ ಅವರು, ಯಾವುದೇ ನೋಟಿಫಿಕೇಶನ್ ಆಗಿಲ್ಲ ಅನ್ನುವುದಾದರೇ ಬಲವಂತದಿಂದ ರೈತರ ಭೂಮಿ‌ ಕಿತ್ತುಕೊಳ್ಳುವುದು ಸರಿಯಲ್ಲ, ಈ ಬಗ್ಗೆ ಮಾಹಿತಿಯೊಂದಿಗೆ ಇಲಾಖೆಗೆ ಪತ್ರ ಬರೆಯಿರಿ, ಇಲಾಖೆಯಿಂದ ಯೋಜನೆ ಕೈ ಬಿಡುವ ಬಗ್ಗೆ ತೀರ್ಮಾನಿಸುತ್ತೇವೆ, ಬೇರೆ ಕಡೆಗಳಲ್ಲಿ ಜಾಗ ಗುರುತಿಸಿದ್ದು, ಅಲ್ಲಿ ವಸತಿ ಯೋಜನೆ ಮುಂದುವರೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ನರಸಪ್ಪರ ಶಿವಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ರೇವಣಪ್ಪ, ದೇವರಾಜ್, ಸಣ್ಣಿಂಗಪ್ಪ, ಮಧುನಾಗರಾಜ್, ಗೋಣೆಪ್ಪ, ರಾಮಣ್ಣ, ಹನುಮಂತಪ್ಪ, ಈಶಪ್ಪ, ಆನಂದಪ್ಪ, ಗುಡ್ಡಪ್ಪ, ರಮೇಶ್, ನಾಗರಾಜ್, ಹನುಮಂತ್ ಸೇರಿದಂತೆ ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

Published

on

ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ . ಸಿ. ಹೆಚ್ ಅವರು ಉದ್ಘಾಟಿಸಿದರು.

ಸನಾವುಲ್ಲಾ ನವಿಲೇಹಾಳು ಅವರು ಉಪನ್ಯಾಸ ಮಾಡಿ ಹೊಸ ತಲೆಮಾರಿನವರು ಸಮಾಜಿಕ ಜಾಲತಾಣಗಳಲ್ಲಿ ಗೇಮ್ , ರೀಲ್ಸ್ ಇತರೆ ವಿಷಯಗಳಲ್ಲಿ ಮುಳುಗಿ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.

ಉಪಸ್ಥಿತರಿದ್ದ ಕಾಲೇಜಿನ ಕುಲಸಚಿವರಾದ ಶ್ರೀ ಜಗದೀಶ್ ಹೆಚ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತು ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರು. ಸಿಸಿಟೆಕ್ ಮ್ಯಾನೇಜರ್ ಆದ ಶ್ರೀ ಶಿವಕುಮಾರ ಸ್ವಾಮಿ ಎಸ್.ಹೆಚ್. ಸಂಯೋಜಕರಾದ ಶ್ರೀ ಮತಿ ಆಸೀಯಾ ಬಾನು ಬಿ. ಪ್ರಾಸ್ಥಾವಿಕವಾಗಿ ಮಾತನಾಡಿದರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಬೃಂದ ಕಾರ್ಯಕ್ರಮ ನಿರೂಪಿಸಿದರು,
ವೈಷ್ಣವಿ, ಲಾವಣ್ಯ, ಭಾವನ ಪ್ರಾರ್ಥಿಸಿದರು, ಉಪನ್ಯಾಸಕಿ ಪ್ರಿಯಾಂಕ ಟಿ ಎಸ್ ವಂದಿಸಿದರು‌.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending