ದಿನದ ಸುದ್ದಿ
ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: ಮನೆ ಮನೆಗೆ ಬಿಎಲ್ಒಗಳ ಭೇಟಿ ಪ್ರಾರಂಭ
ಸುದ್ದಿದಿನ,ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಾದ್ಯಂತ ‘ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಎಸ್.ಐ.ಆರ್. ಪ್ರಕ್ರಿಯೆ ಅತ್ಯಂತ ಚುರುಕಿನಿಂದ ಸಾಗುತ್ತಿದೆ. ಜಿಲ್ಲೆಯ ಒಟ್ಟು 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್ 30 ರಿಂದಲೇ ಬೂತ್ ಮಟ್ಟದ ಅಧಿಕಾರಿಗಳು ಎನುಮೆರೇಷನ್ ನಮೂನೆಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಜೂನ್ 16ರ ವರೆಗಿನ ಅಂಕಿ-ಅಂಶಗಳಂತೆ ಜಿಲ್ಲೆಯಲ್ಲಿ ಒಟ್ಟು 14,99,282 ಮತದಾರರಿದ್ದಾರೆ. ಮತದಾರರ ನಿಖರ ಮಾಹಿತಿ ಪಡೆಯಲು ಈಗಾಗಲೇ 8,99,435 ಎನುಮೆರೇಷನ್ ನಮೂನೆಗಳನ್ನು ಬಿಎಲ್ಒಗಳ ಮೂಲಕ ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಈ ಪೈಕಿ 38,003 ನಮೂನೆಗಳ ಗಣಕೀಕರಣ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
ಕ್ಷೇತ್ರವಾರು ಮಾಹಿತಿ ಮತ್ತು ಪ್ರಗತಿ ವಿವರ
ಜಗಳೂರು: 2,00,836 ಒಟ್ಟು ಮತದಾರರಿದ್ದು, 1,27,608 ನಮೂನೆಗಳನ್ನು ವಿತರಿಸಲಾಗಿದೆ. ಹರಿಹರ: 2,11,023 ಮತದಾರರಿದ್ದು, 1,55,143 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ. ದಾವಣಗೆರೆ ಉತ್ತರ: 2,58,718 ಮತದಾರರ ಪೈಕಿ 69,881 ನಮೂನೆಗಳನ್ನು ವಿತರಿಸಲಾಗಿದೆ. ದಾವಣಗೆರೆ ದಕ್ಷಿಣ: 2,27,996 ಮತದಾರರಿದ್ದು, 79,365 ನಮೂನೆಗಳನ್ನು ಹಂಚಲಾಗಿದೆ. ಮಾಯಕೊಂಡ: 1,97,048 ಮತದಾರರಿದ್ದು, 1,66,618 ನಮೂನೆ ವಿತರಣೆಯಾಗಿದೆ. ಚನ್ನಗಿರಿ: 2,03,628 ಮತದಾರರ ಪೈಕಿ 1,64,380 ನಮೂನೆಗಳನ್ನು ತಲುಪಿಸಲಾಗಿದೆ. ಹೊನ್ನಾಳಿ: 2,00,033 ಒಟ್ಟು ಮತದಾರರಿದ್ದು, 1,36,440 ನಮೂನೆಗಳನ್ನು ಹಂಚಿಕೆ ಮಾಡಲಾಗಿದೆ.
ಸ್ಥಳಾಂತರ, ವಲಸೆ ಹಾಗೂ ಮರಣ ಪ್ರಕರಣಗಳ ಪತ್ತೆ: ಮನೆ ಮನೆ ಭೇಟಿಯ ಸಂದರ್ಭದಲ್ಲಿ ಬಿಎಲ್ಒಗಳು ಮತದಾರರ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಜುಲೈ 1ರ ವರೆಗಿನ ವರದಿಯ ಪ್ರಕಾರ, ಜಿಲ್ಲಾದ್ಯಂತ ಒಟ್ಟು 421 ವಿಶೇಷ ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 188 ಮರಣ ಹೊಂದಿದ ಪ್ರಕರಣಗಳು, 153 ಶಾಶ್ವತವಾಗಿ ವಲಸೆ ಹೋದವರು, 71 ದ್ವಿಪ್ರತಿ ಮತದಾರರು ಹಾಗೂ 5 ಅಪೂರ್ಣ ಮಾಹಿತಿ ಇರುವ ಪ್ರಕರಣಗಳು ಸೇರಿವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗರಿಷ್ಠ 110 ಹಾಗೂ ಮಾಯಕೊಂಡದಲ್ಲಿ 93 ಇಂತಹ ಪ್ರಕರಣಗಳು ಪತ್ತೆಯಾಗಿವೆ. ಈ ಮನೆ ಮನೆ ಭೇಟಿ ಹಾಗೂ ನಮೂನೆಗಳ ಸಂಗ್ರಹಣೆ ಮತ್ತು ಗಣಕೀಕರಣ ಪ್ರಕ್ರಿಯೆಯು ಜುಲೈ 29, 2026 ರವರೆಗೆ ಮುಂದುವರಿಯಲಿದ್ದು, ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಜಿಲ್ಲಾಡಳಿತ ಕೋರಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ : ನಗರದ ಹಳೇ ಕುಂದುವಾಡದಲ್ಲಿ ದೂಡಾದಿಂದ ನಿರ್ಮಾಣ ಮಾಡಲು ಹೊರಟಿರುವ ವಸತಿ(ಹೊಸ ಲೇ ಔಟ್) ಯೋಜನೆಯನ್ನ ಈ ಕೂಡಲೇ ಕೈ ಬಿಡಬೇಕು ಎಂದು ರೈತರು ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯನವರಿಗೆ ಹಾಗೂ ದೂಡಾ ಆಯುಕ್ತೆ ರೇಣುಕ ಇವರಿಗೆ ಮನವಿ ಸಲ್ಲಿಸಿದರು.
ನಗರದ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಮನವಿ ಸಲ್ಲಿಸಿದ ಹಳೇ ಕುಂದುವಾಡ ರೈತರು, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ರಿ. ಸರ್ವೆ ನಂಬರ್ 125ರಿಂದ 142ರಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲು ಮುಂದಾಗಿತ್ತು, ಆದರೆ ರೈತರು ಪ್ರಾಧಿಕಾರದ ಮಧ್ಯೆ ಒಡಂಬಡಿಕೆ ಆಗದ ಕಾರಣ ಪ್ರಕ್ರಿಯೆ ಕೈ ಬಿಟ್ಟಿತ್ತು. ಪ್ರಾಧಿಕಾರವು ಸಹ ಈ ಜಮೀನುಗಳ ದರ ಹೆಚ್ಚಿದ್ದು ಖರೀದಿ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಹ ಹೇಳಿತ್ತು, ಅದರಂತೆ 19-02-2024 ರಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ಸದರಿ ವಸತಿ ಯೋಜನೆ ಕೈ ಬಿಡಲು ಸಭೆ ತೀರ್ಮಾನಿಸಿ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿತ್ತು, ಆದರೆ ಇದುವರೆಗೂ ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಕ್ರಮ ವಹಿಸಿಲ್ಲ, ಆರೇಳು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ಇದರಿಂದ ರೈತರು ತುಂಬಾ ತೊಂದರೆಯಲ್ಲಿ ಸಿಲುಕಿದ್ದಾರೆ, ಕುರುಬ, ಮಡಿವಾಳ, ಉಪ್ಪಾರ ಜನಾಂಗ ಸೇರಿದಂತೆ ಬಹುತೇಕರು ಹಿಂದುಳಿದ ವರ್ಗದ ಸಣ್ಣ ಹಿಡುವಳಿದಾರರು ಇಲ್ಲಿದ್ದಾರೆ, ಸಾಲದ ಹೊರೆ ಜಾಸ್ತಿ ಆದ ಹಿನ್ನಲೆ ಹಲವರಿಗೆ ತೊಂದರೆ ಆಗಿದೆ, ಈ ವಸತಿ ಯೋಜನೆಯಲ್ಲಿ ಯಾವುದೇ ರೀತಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿರುವುದಿಲ್ಲ, ಯಾವುದೇ ಅಧಿಸೂಚನೆ (NOTIFICATION) ಆಗಿರುವುದಿಲ್ಲ. ಈ ಹಿಂದೆ ಸಚಿವರಾಗಿದ್ದ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭೂಮಿ ದರ ಹೆಚ್ಚಾಗಿದ್ದು, ಈ ಹಿನ್ನಲೆ ಸದರಿ ಯೋಜನೆ ಕೈ ಬಿಡುವಂತೆ ನಗರಾಭಿವೃದ್ದಿ ಇಲಾಖೆಗೆ ಪತ್ರ ಬರೆದಿದೆ, ಹೀಗಿದ್ದರು ನಮ್ಮಗಳ ಜಮೀನಿನ ಮೇಲೆ ದೂಡಾ ಹಕ್ಕು ಚಲಾಯಿಸಲು ಮುಂದಾಗಿ ಅಗ್ರಿಮೆಂಟ್, ರಿಜಿಸ್ಟ್ಟೇಷನ್, ಪೋಡು ಪ್ರಕ್ರಿಯೆ ಸೇರಿದಂತೆ ಇನ್ನಿತರೆ ಹಕ್ಕುಗಳನ್ನ ಚಲಾಯಿಸದಂತೆ ದಾವಣಗೆರೆ ಸಬ್ ರಿಜಿಸ್ಟ್ರಾರ್ ಗೆ ಪತ್ರ ಬರೆದು ಅಡ್ಡಿಪಡಿಸಿದೆ, ಈ ಹಿನ್ನಲೆ ನಗರಾಭಿವೃದ್ಧಿ ಇಲಾಖೆಯಿಂದ ದಯಮಾಡಿ ಈ ವಸತಿ ಯೋಜನೆ ಕೈ ಬಿಡಲು ಅನುಮತಿ ನೀಡುವಂತೆ ಹಾಗೂ ದಾವಣಗೆರೆ ಪ್ರಾಧೀಕಾರದ ಇಂದಿನ ಸಭೆಯಲ್ಲಿಯಲ್ಲಿಯೇ ಈ ಯೋಜನೆ ಕೈ ಬಿಡುವಂತೆ ಆದೇಶ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ಭರವಸೆ ನೀಡಿದ ಯತೀಂದ್ರ ಅವರು, ಯಾವುದೇ ನೋಟಿಫಿಕೇಶನ್ ಆಗಿಲ್ಲ ಅನ್ನುವುದಾದರೇ ಬಲವಂತದಿಂದ ರೈತರ ಭೂಮಿ ಕಿತ್ತುಕೊಳ್ಳುವುದು ಸರಿಯಲ್ಲ, ಈ ಬಗ್ಗೆ ಮಾಹಿತಿಯೊಂದಿಗೆ ಇಲಾಖೆಗೆ ಪತ್ರ ಬರೆಯಿರಿ, ಇಲಾಖೆಯಿಂದ ಯೋಜನೆ ಕೈ ಬಿಡುವ ಬಗ್ಗೆ ತೀರ್ಮಾನಿಸುತ್ತೇವೆ, ಬೇರೆ ಕಡೆಗಳಲ್ಲಿ ಜಾಗ ಗುರುತಿಸಿದ್ದು, ಅಲ್ಲಿ ವಸತಿ ಯೋಜನೆ ಮುಂದುವರೆಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ನರಸಪ್ಪರ ಶಿವಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ರೇವಣಪ್ಪ, ದೇವರಾಜ್, ಸಣ್ಣಿಂಗಪ್ಪ, ಮಧುನಾಗರಾಜ್, ಗೋಣೆಪ್ಪ, ರಾಮಣ್ಣ, ಹನುಮಂತಪ್ಪ, ಈಶಪ್ಪ, ಆನಂದಪ್ಪ, ಗುಡ್ಡಪ್ಪ, ರಮೇಶ್, ನಾಗರಾಜ್, ಹನುಮಂತ್ ಸೇರಿದಂತೆ ಮತ್ತಿತರರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ . ಸಿ. ಹೆಚ್ ಅವರು ಉದ್ಘಾಟಿಸಿದರು.
ಸನಾವುಲ್ಲಾ ನವಿಲೇಹಾಳು ಅವರು ಉಪನ್ಯಾಸ ಮಾಡಿ ಹೊಸ ತಲೆಮಾರಿನವರು ಸಮಾಜಿಕ ಜಾಲತಾಣಗಳಲ್ಲಿ ಗೇಮ್ , ರೀಲ್ಸ್ ಇತರೆ ವಿಷಯಗಳಲ್ಲಿ ಮುಳುಗಿ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಉಪಸ್ಥಿತರಿದ್ದ ಕಾಲೇಜಿನ ಕುಲಸಚಿವರಾದ ಶ್ರೀ ಜಗದೀಶ್ ಹೆಚ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತು ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರು. ಸಿಸಿಟೆಕ್ ಮ್ಯಾನೇಜರ್ ಆದ ಶ್ರೀ ಶಿವಕುಮಾರ ಸ್ವಾಮಿ ಎಸ್.ಹೆಚ್. ಸಂಯೋಜಕರಾದ ಶ್ರೀ ಮತಿ ಆಸೀಯಾ ಬಾನು ಬಿ. ಪ್ರಾಸ್ಥಾವಿಕವಾಗಿ ಮಾತನಾಡಿದರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬೃಂದ ಕಾರ್ಯಕ್ರಮ ನಿರೂಪಿಸಿದರು,
ವೈಷ್ಣವಿ, ಲಾವಣ್ಯ, ಭಾವನ ಪ್ರಾರ್ಥಿಸಿದರು, ಉಪನ್ಯಾಸಕಿ ಪ್ರಿಯಾಂಕ ಟಿ ಎಸ್ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ3 days agoಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
-
ದಿನದ ಸುದ್ದಿ5 days agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ5 days agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ5 days agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ8 hours agoಕುಂದುವಾಡದಲ್ಲಿ ದೂಡಾ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈ ಬಿಡಲು ರೈತರ ಆಗ್ರಹ | ವಸತಿ ಯೋಜನೆ ಕೈ ಬಿಡಿ ಎಂದು ದೂಡಾಗೆ ಸೂಚಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ


