Connect with us

ದಿನದ ಸುದ್ದಿ

CAB ಬಗ್ಗೆ ಸಂಪೂರ್ಣ ವಿವರ : ಮಿಸ್ ಮಾಡ್ದೆ ಓದಿ ; ಶೇರ್ ಮಾಡಿ

Published

on

  • ಪೌರತ್ವ ಕಾಯಿದೆಯ ವಿರುದ್ಧ ಮೂವರು ಹಿರಿಯ ವಿಶ್ರಾಂತ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಾರಾಂಶವನ್ನು ಇಲ್ಲಿ ಭಾಷಾಂತರಿಸಿದ್ದೇನೆ. ಸರಳ ಮಾತುಗಳಲ್ಲಿ ಏಕೆ ಈ ಕಾಯಿದೆ ಸರಿ ಇಲ್ಲ ಎಂದು ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿದ್ದ ದೇವ್ ಮುಖರ್ಜಿ, ಸೋಮಸುಂದರ್ ಬುರ್ರಾ, ಅಮಿತಾಭಾ ಪಾಂಡೆ ಎಂಬ ಇಬ್ಬರು ನಿವ್ರತ್ತ ಹಿರಿಯ ಐ ಎ ಎಸ್ ಅಧಿಕಾರಿಗಳು ಸಲ್ಲಿಸಿರುವ ರಿಟ್ ಅರ್ಜಿ ಇದು.

ಅನುವಾದ: ರಾಜಾರಾಂ ತಲ್ಲೂರು

ಶತಮಾನಗಳಿಂದ ಮನುಷ್ಯ ಧರ್ಮ ಮತ್ತು ನಂಬಿಕೆಗಳ ಹೆಸರಿನಲ್ಲಿ ದೌರ್ಜನ್ಯ, ತಾರತಮ್ಯ ಮತ್ತು ಹಿಂಸೆಗಳಿಗೆ ಬಲಿಯಾಗುತ್ತಾ ಬಂದಿದ್ದಾನೆ. ಇದರಿಂದಾಗಿ ವ್ಯಕ್ತಿಗಳು, ಕುಟುಂಬಗಳು, ಜನಸಮುದಾಯಗಳು ತಮ್ಮ ತಾಯ್ನೆಲವನ್ನು ಬಿಟ್ಟು ಹೋಗಬೇಕಾದ ಮತ್ತು ಬೇರೆಲ್ಲೋ ಹೋಗಿ ಆಶ್ರಯ ಪಡೆಯುವ ದಾರುಣ ಪರಿಸ್ಥಿತಿ ಬಂದದ್ದಿದೆ. ಕೆಲವೊಮ್ಮೆ ಅವರಿಗೆ ಆಯ್ಕೆಗಳಿರುವುದಿಲ್ಲ. ಜಗತ್ತಿನ ಚರಿತ್ರೆ ಎಂದರೆ, ಗಂಡಸರು, ಹೆಂಗಸರು ಮತ್ತು ಮಕ್ಕಳು ತಮ್ಮದೇ ನೆಲದಲ್ಲಿ ಪರಕೀಯರಾಗುವುದರ ಮತ್ತು ಅವರ ಆ ಅಸಹಾಯಕ ಸ್ಥತಿಯಲ್ಲಿ ಸಮಾಜಗಳು, ದೇಶಗಳು ಅವರಿಗೆ ಆಶ್ರಯ ನೀಡಿದ್ದರ ಕಥೆಯೇ ಆಗಿದೆ.

ಪೌರತ್ವ (ತಿದ್ದುಪಡಿ) ಕಾಯಿದೆ, 2019 [ಪ್ರಶ್ನಾರ್ಹ ಕಾಯಿದೆ] ಮೇಲ್ನೋಟಕ್ಕೆ ದೌರ್ಜನ್ಯಕ್ಕೊಳಗಾದವರಿಗೆ ಅನುಕೂಲ ಮಾಡಿಕೊಡುವ ಕಾಯಿದೆಯಂತೆ ಕಾಣಿಸುತ್ತದೆ. ಆದರೆ ಈ ಪ್ರಶ್ನಾರ್ಹ ಕಾಯಿದೆಯು ದೌರ್ಜನ್ಯಕ್ಕೊಳಗಾದವರ ನಡುವೆ, ನಂಬಿಕೆ ಮತ್ತು ಮೂಲ ದೇಶದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ. ಸರಿಯಾದ ಧರ್ಮ (ಹಿಂದು, ಸಿಖ್, ಜೈನ್, ಕ್ರಿಷ್ಚಿಯನ್, ಪಾರ್ಸಿ, ಬೌಧ್ಧ) ಮತ್ತು ಸರಿಯಾದ ಮೂಲದೇಶ (ಪಾಕಿಸ್ಥಾನ, ಅಫ್ಗಾನಿಸ್ಥಾನ, ಬಾಂಗ್ಲಾದೇಶ)ದ ನಿರಾಶ್ರಿತರು ಮತ್ತು ವಲಸೆ ಬಂದವರಿಗೆ ಅಕ್ರಮ ವಲಸಿಗರೆಂಬ ಕಾರಣಕ್ಕೆ ಕಾನೂನು ಕ್ರಮದಿಂದ ಮುಕ್ತಿ ನೀಡಿ ಫಾಸ್ಟ್ ಟ್ರ್ಯಾಕ್ ಮೂಲಕ ಪೌರತ್ವ ನೀಡುವ ಮಾತನ್ನು ಪ್ರಶ್ನಾರ್ಹ ಕಾಯಿದೆ ಆಡುತ್ತದೆ. ಆದರೆ, ತಪ್ಪು ದೇಶಗಳ ತಪ್ಪು ಧರ್ಮದ ನಿರಾಶ್ರಿತರು ಮತ್ತು ವಲಸಿಗರಿಗೆ ಅವರು ಇಲ್ಲಿ ಒಳಗೊಳ್ಳಲು ತಾವು ಅರ್ಹರೆಂದು ವೈಯಕ್ತಿಕವಾಗಿ ಸಾಬೀತು ಮಾಡಬೇಕಾಗುತ್ತದೆ, ಅವರಿಗೆ ಕ್ಷಮಾದಾನವಾಗಲೀ, ಪೌರತ್ವವಾಗಲೀ ಇಲ್ಲ.

ಇದು ಅನ್ಯಾಯವಾದ ತಾರತಮ್ಯ ಮತ್ತು ಸಕಾರಣ ಇಲ್ಲದೆ ಸಮಾನ ಗೌರವ ಮತ್ತುಕಳಕಳಿಗಳನ್ನು ನಿರಾಕರಿಸಿದಂತಾಗುತ್ತದೆ ಎಂದು ಗೌರವಯುತವಾಗಿ ನಿವೇದಿಸಿಕೊಳ್ಳುತ್ತಿದ್ದೇವೆ. ಪ್ರಶ್ನಾರ್ಹ ಕಾಯಿದೆಯು ಸಮಾನತೆ ಮತ್ತು ಸಮಾನ ಪರಿಗಣನೆಯ ಎಲ್ಲ ತತ್ವಗಳನ್ನು ಉಲ್ಲಂಘಿಸುತ್ತದೆ, ಭಾರತದ ಸಂವಿಧಾನದ ಮೂಲ ಲಕ್ಷಣವಾದ ಜಾತ್ಯತೀತತೆಯ “ಹಾನಿ ಮತ್ತು ನಾಶಕ್ಕೆ” ಕಾರಣವಾಗುತ್ತದೆ, ಹಾಗಾಗಿ ಅದನ್ನು ಅಸಾಂವಿಧಾನಿಕ ಎಂದು ಕಿತ್ತುಹಾಕಬೇಕಾಗಿದೆ.

ಈ ಪ್ರಶ್ನಾರ್ಹ ಕಾಯಿದೆ ಅಸಾಂವಿಧಾನಿಕ ಮಾತ್ರವಲ್ಲ, ಭಾರತ ಗಣರಾಜ್ಯದ ತಳಹದಿಯಲ್ಲಿರುವ ತತ್ವಾದರ್ಶಗಳಿಗೂ ಇದು ತದ್ವಿರುದ್ಧವಾಗಿದೆ. 1947ರಲ್ಲಿ, ಕೆಲವು ಬದಲಾಯಿಸಲಾಗದ ಸತ್ಯಗಳ ತಳಹದಿಯ ಮೇಲೆ ಈ ದೇಶ ಸ್ಥಾಪನೆಯಾಗಿದೆ. ಅವುಗಳಲ್ಲಿ ಮುಖ್ಯವಾದುದು ಭಾರತ ಆವತ್ತಿಗೂ-ಈವತ್ತಿಗೂ-ಯಾವತ್ತಿಗೂ – ಎಲ್ಲ ಧಾರ್ಮಿಕ ನಂಬಿಕೆಗಳಿಗೂ ತವರಾಗಿತ್ತು, ವೈವಿದ್ಯತೆ ಮತ್ತು ಬಹುತ್ವಗಳನ್ನು ಸ್ವಾಗತಿಸುತ್ತಿತ್ತು ಮತ್ತು ಎಲ್ಲರನ್ನೂ ಒಳಗೊಳ್ಳುತ್ತಿತ್ತು.

ಭಾರತ ಸ್ಥಾಪನೆ ಆಗಿರುವುದು “ ನಾಗರಿಕ ರಾಷ್ಟ್ರೀಯತೆ” ಚಿಂತನೆಯ ಆಧಾರದಲ್ಲಿ. – “ಭಾರತೀಯತೆ” ಎಂಬುದು ಸಂವಿಧಾನ ಮತ್ತದರ ಮೌಲ್ಯಗಳನ್ನು ಒಪ್ಪಿಕೊಂಡು ಸಾಗುವುದರಲ್ಲಿದೆ- ಮತ್ತು ವಿಭಜನೆಯ ವೇಳೆ “ದ್ವಿ-ರಾಷ್ಟ್ರ” ಸಿದ್ಧಾಂತವನ್ನು ತಿರಸ್ಕರಿಸುವುದರಲ್ಲಿ. ಪ್ರಶ್ನಾರ್ಹ ಕಾಯಿದೆಯು ಈ ಮೂಲಭೂತ ತತ್ವಗಳನ್ನು ಚೂರುಚೂರು ಮಾಡಿ, ಕೆಲವು ನಂಬಿಕೆ ಮತ್ತು ಧರ್ಮಗಳನ್ನು ಉದ್ದೇಶಪೂರ್ವಕವಾಗಿ ಬೇರೆಯವರಿಗಿಂತ ಹೆಚ್ಚು ರಕ್ಷಣೆಗೆ ಅರ್ಹಗೊಳಿಸುತ್ತದೆ.

ಭಾರತ ಗಣರಾಜ್ಯದ ಸ್ಥಾಪಕ ತತ್ವಗಳು ಮತ್ತು ಭಾರತದ ಸಂವಿಧಾನದ ಆಶಯಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ಸಂವಿಧಾನದ ಮೂಲಭೂತ ಸಂರಚನೆಯನ್ನು ಹಾಗೂ ಸಂವಿಧಾನದ 14,21,25ನೇ ವಿಧಿಗಳನ್ನು ಪ್ರಶ್ನಾರ್ಹ ಕಾಯಿದೆ ಸಂಪೂರ್ಣವಾಗಿ ಉಲ್ಲಂಘಿಸುತ್ತದೆ. ಪ್ರಶ್ನಾರ್ಹ ಕಾಯಿದೆಯು ಭಾರತದ ಗಡಿಯೊಳಗೆ ನಿರಾಶ್ರಿತರು ಮತ್ತು ವಲಸೆಬಂದವರ ನಡುವೆ ಎರಡು ವಿಚಾರಗಳಲ್ಲಿ ತಾರತಮ್ಯ ಮಾಡುತ್ತದೆ: ಅವರ ಮೂಲ ರಾಷ್ಟ್ರೀಯತೆ ಮತ್ತು ಅವರ ಧರ್ಮದ ಹೆಸರಲ್ಲಿ. ಈ ವರ್ಗದಲ್ಲಿ ಬರುವವರು ಯಾರೆಂದರೆ (ಎ) ಅಕ್ರಮ ವಲಸಿಗರು ಎಂದು ಕಾನೂನು ಕ್ರಮದಿಂದ ರಿಯಾಯಿತಿ ಪಡೆಯುವವರು, ಮತ್ತು (ಬಿ) ಫಾಸ್ಟ್ ಟ್ರ್ಯಾಕ್ ಪೌರತ್ವ ಪಡೆಯುವವರು.

ಅದಿಲ್ಲದವರು, ಕೇಂದ್ರ ಗ್ರಹ ಇಲಾಖೆ 2011ರಲ್ಲಿ ಬಿಡುಗಡೆ ಮಾಡಿದ ಸ್ಟಾಂಡರ್ಡ್ ಕಾರ್ಯ ನಿರ್ವಹಣಾ ಮಾರ್ಗದರ್ಶಿಯ ಅಡಿ ವೈಯಕ್ತಿಕ ಕಾರ್ಯನಿರ್ವಾಹಕ ಪ್ರಕ್ರಿಯೆಯ ಅನ್ವಯ “ದೀರ್ಘಕಾಲಿಕ ವೀಸಾ” ಗಳಿಸುವುದಕ್ಕೆ ಪ್ರಯತ್ನಿಸಲು ಸೀಮಿತರಾಗುತ್ತಾರೆ. ಇದರ ಪರಿಣಾಮವಾಗಿ ಕೆಲವು ವ್ಯಕ್ತಿಗಳುಕೆಲವು ಧರ್ಮಕ್ಕೆ ಮತ್ತು ರಾಷ್ಟ್ರೀಯ ಗುಂಪುಗಳಿಗೆ ಸೇರಿರುವ ಕಾರಣಕ್ಕಾಗಿ ಶಾಸನಾತ್ಮಕ ರಕ್ಷಣೆ ಮತ್ತು ಪೌರತ್ವ ಪಡೆದರೆ, ಇತರರು ಅಂತಹ ಯಾವುದೇ ಲಾಭಗಳಿಲ್ಲದೆ ಕಾರ್ಯಾಂಗದ ಮರ್ಜಿ ಕಾಯಬೇಕಾಗುತ್ತದೆ.

ಭಾರತದ ಗಡಿಯೊಳಗಿರುವ ಎಲ್ಲರಿಗೂ ಅನ್ವಯವಾಗುವಂತೆ ಕಾನೂನಿನ ರಕ್ಷಣೆ ಸಮಾನವಾಗಿರಬೇಕೆಂಬ ಸಾಂವಿಧಾನಿಕ ಆಶಯವನ್ನಿದು ಉಲ್ಲಂಘಿಸುತ್ತದೆ. ಈ ಕಾನೂನು ತಾನೇ ಸ್ವತಃ ಶಾಸಕಾಂಗೀಯ ಉದ್ದೇಶವನ್ನು ವ್ಯಕ್ತಪಡಿಸದಿದ್ದರೂ, ಕೇಂದ್ರ ಗ್ರಹಖಾತೆಯ 2015 ಮತ್ತು 16ರ ಪ್ರಕಟಣಾಸ್ವರೂಪದ ಶಾಸಕಾಂಗೀಯ ದಾಖಲೆಗಳಿಂದ (ಈ ಪ್ರಶ್ನಾರ್ಹ ಕಾಯಿದೆಯ ತಯಾರಿಗೆ ಪೂರ್ವಭಾವಿಯಾಗಿ ರಚಿತವಾದ ಜಂಟಿ ಸಂಸದೀಯ ಆಯೋಗಕ್ಕೆ ಸಲ್ಲಿಸಲಾದವು) ಮತ್ತು ಕಾಯಿದೆಯ ಉದ್ದೇಶ ಮತ್ತು ಕಾರಣಗಳ ಹೇಳಿಕೆಯಲ್ಲಿ, ಈ ಕಾಯಿದೆಯ ಮೂಲ ಉದ್ದೇಶ ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಪರಿಹಾರ ಒದಗಿಸುವುದೆಂದು ಹೇಳಲಾಗಿದೆ.

ಈ ಉದ್ದೇಶ ಮತ್ತು ಗುರಿ ಮಹತ್ತರವಾದದ್ದೇ. ಆದರೆ, ಈ ಪ್ರಶ್ನಾರ್ಹ ಕಾಯಿದೆಯು ಈ ಗುರಿಯನ್ನು ತಾರತಮ್ಯಪೂರ್ವಕವಾಗಿ ಅನುಷ್ಠಾನಗೊಳಿಸಲು ಹೊರಟಿದೆ. ಕೇವಲ ಕೆಲವು ದೇಶಗಳ ಕೆಲವೇ ಧರ್ಮದ ಜನರಿಗೆ ರಕ್ಷಣೆಯನ್ನು ಸೀಮಿತಗೊಳಿಸಲಾಗಿದೆ.

ಹಾಗಾಗಿ, ಭಾರತದ ಆಸುಪಾಸಿನ ದೇಶಗಳಲ್ಲಿ ಕೂಡ ಈ ಕೆಳಗಿನ ಸ್ಥಿತಿಗಳಿರಬಹುದು ಎಂಬ ವಾಸ್ತವವನ್ನು ಈ ಕಾನೂನು ನಿರ್ಲಕ್ಷಿಸುತ್ತದೆ (ಎ) ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶ ಹೊರತುಪಡಿಸಿ ಬೇರೆ ಆಸುಪಾಸಿನ ದೇಶಗಳಲ್ಲೂ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರು ಇರಬಹುದು, (ಬಿ) ಮೇಲೆ ಹೇಳಲಾದ ಮೂರು ದೇಶಗಳಲ್ಲಿ ಹಿಂದೂಗಳು, ಸಿಖ್ ರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಷ್ಚಿಯನ್ನರ ಹೊರತಾಗಿಯೂ ಬೇರೆ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಜನಸಮುದಾಯಗಳಿರಬಹುದು ಮತ್ತು (ಸಿ) ಈ ಎಲ್ಲ ದೇಶಗಳು ಮತ್ತು ಎಲ್ಲ ಗುಂಪುಗಳಲ್ಲೂ ಧಾರ್ಮಿಕೇತರ ದೌರ್ಜನ್ಯಗಳಿಗೆ ಒಳಗಾದ ಜನರು ಇರಬಹುದು (2011ರ ಸ್ಟಾಂಡರ್ಡ್ ಕಾರ್ಯನಿರ್ವಹಣಾ ಮಾರ್ಗದರ್ಶಿ ಇದನ್ನು ಗುರುತಿಸಿದೆ)

ಇದರ ಫಲವಾಗಿ, ಕೆಳಗಿನ ಉದಾಹರಣೆಗಳು ತೋರಿಸುವಂತೆ, ಕಾಯಿದೆಯು ಇಂತಹ ಸನ್ನಿವೇಶಗಳಲ್ಲಿ ಜನರ ನಡುವೆ ಅನ್ಯಾಯ ಮತ್ತು ತಾರತಮ್ಯಗಳನ್ನು ಎಸಗುತ್ತದೆ :

  1. ಶ್ರೀಲಂಕಾದಿಂದ ಧಾರ್ಮಿಕ ದೌರ್ಜನ್ಯದ ಕಾರಣದಿಂದಾಗಿ ಪಲಾಯನ ಮಾಡಿರುವ ಒಬ್ಬ ಶ್ರೀಲಂಕಾದ ತಮಿಳ ವ್ಯಕ್ತಿ, ಅಥವಾ ಧಾರ್ಮಿಕ ಕಾರಣಗಳಿಗಾಗಿ ಮಾನವ ಹತ್ಯೆಯಿಂದ ತಪ್ಪಿಸಿಕೊಳ್ಳಲು ಮಯಮ್ನಾರ್ ನಿಂದ ಪಲಾಯನ ಮಾಡಿದ ಒಬ್ಬ ರೋಹಿಂಗ್ಯಾ ಮುಸ್ಲಿಂ, ಈ ಕಾಯಿದೆಯಡಿ ಆಶ್ರಯ ಪಡೆಯಲಾಗುವುದಿಲ್ಲ, ಆದರೆ ಇದೇ ಕಾರಣಗಳಿಗಾಗಿ ಪಾಕಿಸ್ಥಾನದಿಂದ ಪಲಾಯನ ಮಾಡಿರುವ ಒಬ್ಬ ಹಿಂದೂ ಆಶ್ರಯ ಪಡೆಯುತ್ತಾನೆ – ಈ ಮೂವರೂ “ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.
  2. ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಪಾಕಿಸ್ಥಾನದಿಂದ ಪಲಾಯನ ಮಾಡಿರುವ ಅಹ್ಮದೀಯ ವ್ಯಕ್ತಿಯೊಬ್ಬರಿಗೆ ಈ ಕಾಯಿದೆಯಡಿ ಇಲ್ಲಿ ಆಶ್ರಯ ದೊರಕುವುದಿಲ್ಲ, ಆದರೆ ಇದೇ ಕಾರಣಕ್ಕಾಗಿ ಪಾಕಿಸ್ಥಾನದಿಂದ ಪಲಾಯನ ಮಡಿದ ಒಬ್ಬ ಕ್ರಿಷ್ಚಿಯನ್ ಆಶ್ರಯ ಪಡೆಯುತ್ತಾನೆ – ಈ ಇಬ್ಬರೂ “ ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.
  3. ರಾಜಕೀಯ ದೌರ್ಜನ್ಯದ ಕಾರಣದಿಂದಾಗಿ ಚೀನಾದಿಂದ ಪಲಾಯನ ಮಾಡಿರುವ ಒಬ್ಬ ಟಿಬೇಟನ್ ರಾಜಕೀಯ ಚಳುವಳಿಗಾರ, ಅಥವಾ ಸಾಮಾಜಿಕ ದೌರ್ಜನ್ಯಕ್ಕಾಗಿ ಬಾಂಗ್ಲಾದೇಶದಿಂದ ಪಲಾಯನ ಮಾಡಿರುವ ಒಬ್ಬರು ಮಹಿಳಾ ಹಕ್ಕುಗಳ ಚಳುವಳಿಗಾರ ಈ ಕಾನೂನಿನ ಅಡಿ ಆಶ್ರಯ ಪಡೆಯುವುದಿಲ್ಲ, ಆದರೆ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಫ್ಘಾನಿಸ್ಥಾನಿ ಬೌದ್ಧ ಆಶ್ರಯ ಪಡೆಯುತ್ತಾರೆ – ಈ ಮೂವರೂ “ಭಾರತದ ಗಡಿಯ ಒಳಗೆ ಇರುವ ಹೊರತಾಗಿಯೂ” ಹೀಗಾಗುತ್ತದೆ.

ಹಾಗಾಗಿ ಈ ಪ್ರಶ್ನಾರ್ಹ ಕಾಯಿದೆ ಸಕಾರಣವನ್ನಾಗಲೀ, ಕರುಣೆಯನ್ನಾಗಲೀ, ಮಾನವೀಯತೆಯನ್ನಾಗಲೀ ಹೊಂದಿಲ್ಲ, ಸಾಂವಿಧಾನಿಕವಾಗಿಯೂ ಮಾನ್ಯತೆ ಗಳಿಸಿಕೊಳ್ಳುವಂತಿಲ್ಲ.ಇದಲ್ಲದೆ, ಧರ್ಮ ಮತ್ತು ಧರ್ಮಾಧರಿತ ದೌರ್ಜನ್ಯಗಳನ್ನು ದೇಶದ ಪೌರತ್ವಕ್ಕೆ ಸ್ಪಷ್ಟ ಕ್ಲೇಮುಗಳಾಗಿ ಪರಿವರ್ತಿಸುತ್ತಾ, ಅದೇ ವೇಳೆಗೆ ಬೇರೆ ಧಾರ್ಮಿಕೇತರ ದೌರ್ಜನ್ಯಗಳಿಗೆ ಅದೇ ಪಾವಿತ್ರ್ಯವನ್ನು ನಿರಾಕರಿಸುತ್ತಾ ಇರುವ ಈ ಪ್ರಶ್ನಾರ್ಹ ಕಾಯಿದೆ ಜಾತ್ಯತೀತತೆಯ ಮೂಲಭೂತ ತತ್ವವನ್ನೇ ಉಲ್ಲಂಘಿಸುತ್ತದೆ.

ಸಮಾಜದಲ್ಲಿ ವ್ಯಕ್ತಿಯ ನಾಗರಿಕ ಸ್ಥಿತಿಯನ್ನು ಧರ್ಮ ಅಥವಾ ನಂಬಿಕೆಯ ಆಧಾರದಲ್ಲಿ ಗುರುತಿಸುವುದನ್ನು ಭಾರತದ ಜಾತ್ಯತೀತತೆಯ ತತ್ವವು ಪ್ರತ್ಯಕ್ಷವಾಗಿಯಾಗಲೀ ಪರೋಕ್ಷವಾಗಿಯಾಗಲೀ ಮಾನ್ಯ ಮಾಡುವುದಿಲ್ಲ. ಜನರನ್ನು ಪ್ರತ್ಯೇಕಿಸಿ ಮೇಲುಕೀಳೆಂದು ಪರಿಗಣಿಸಿ ಹೀಗೆ ಮಾಡಲು ಇಲ್ಲಿ ಅವಕಾಶವೇ ಇಲ್ಲ.

ಅರ್ಜಿದಾರರು ವಿಶ್ರಾಂತ ಜನಸೇವಕರಾಗಿದ್ದು ತಮ್ಮ ಇಡಿಯ ವ್ರತ್ತಿಬದುಕನ್ನು ದೇಶದ ಸಂವಿಧಾನವನ್ನು ಎತ್ತಿಹಿಡಿಯುವ, ಅದರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕೆ ಮುಡಿಪಾಗಿಟ್ಟವರು. ಎಲ್ಲ ನಿರಾಶ್ರಿತರು ಮತ್ತು ವಲಸಿಗರಿಗೆ ನ್ಯಾಯಬದ್ಧ, ಸಮಾನ ಅವಕಾಶಗಳಿರುವ, ನೈಸರ್ಗೀಕರಣದ ಮೂಲಕ ಪೌರತ್ವ ನೀಡುವ ನೀತಿಗೆ ನಮ್ಮ ಆಕ್ಷೇಪ ಇಲ್ಲ.

ಇದೊಂದು ನೈತಿಕ ಆವಶ್ಯಕತೆ ಮಾತ್ರವಲ್ಲದೇ ಜಗತ್ತಿನಲ್ಲಿ ಭಾರತವು ಈ ತನಕ ಪಡೆದಿರುವ ತೆರೆದ, ಬಹುತ್ವದ, ವೈವಿದ್ಯತೆಗಳಿಂದೊಡಗೂಡಿದ ಸಮಾಜ ಎಂಬ ಚಾರಿತ್ರಿಕ ಸ್ಥಾನಮಾನಕ್ಕೆ ತಕ್ಕುದಾಗಿದೆ, ರಕ್ಷಣೆ ಬಯಸಿ ಬಂದವರಿಗೆ ಯಾವತ್ತೂ ರಕ್ಷಣೆ ನೀಡಿದೆ, ಎಲ್ಲ ಧರ್ಮ, ನಂಬಿಕೆ, ಜೀವನ ಶೈಲಿಗಳ ಜನರನ್ನೂ ಯಾವತ್ತಿಗೂ ಸ್ವಾಗತಿಸಿದೆ, ಸಹನೆ ಮತ್ತು ಸ್ವೀಕಾರದ ಮನೋಭಾವ ಭಾರತದ ನಾಗರೀಕತೆಯ ಲಕ್ಷಣವೇ ಆಗಿದೆ ಎಂಬ ಕಾರಣಗಳಿಗಾಗಿಯೂ ಇದು ಅಗತ್ಯವಿದೆ. ಆದರೆ ಪ್ರಶ್ನಾರ್ಹ ಕಾಯಿದೆಯು ಈ ಗುರಿಯನ್ನು ತಲುಪುವುದಿಲ್ಲ ಮಾತ್ರವಲ್ಲದೇ, ತಾರತಮ್ಯದ ಕಾನೂನುಗಳಿಗೆ ಕಾರಣ ಆಗಲಿದೆ. ಈ ಕಾರಣಗಳಿಗಾಗಿ, ಪ್ರಶ್ನಾರ್ಹ ಕಾಯಿದೆಯು ಅಸಂವಿಧಾನಿಕ ಮತ್ತು ನ್ಯಾಯಲಯವು ಅದನ್ನು ರದ್ಧುಪಡಿಸಬೇಕೆಂದು ಕೋರುತ್ತೇವೆ.

ದಿನಾಂಕ ಪಟ್ಟಿ

15-8-1947

ಅಹಿಂಸೆ, ಮಾನವೀಯತೆ, ಸಮಾನತೆ, ಜಾತ್ಯತೀತತೆಯ ತತ್ವಗಳ ಮೇಲೆ ಸುದೀರ್ಘವಾದ ಹೋರಾಟದ ಬಳಿಕ ಭಾರತ ಸ್ವತಂತ್ರ, ಸಾರ್ವಭೌಮ ದೇಶವಾಗಿದೆ. ಭಾರತದ ಸ್ವಾತಂತ್ರ್ಯವು ಮೊಹಮ್ಮದ್ ಅಲಿ ಜಿನ್ನಾ ಅವರ ಹಿಂದೂ ಗಳು ಮತ್ತು ಮುಸ್ಲಿಮರು ತಮ್ಮೊಳಗೇ ಎರಡು ರಾಷ್ಟ್ರಗಳು ಮತ್ತವರಿಗೆ ಸ್ವಂತ ತಾಯ್ನೆಲಗಳು ಬೇಕು ಎಂಬ “ ಎರಡು-ರಾಷ್ಟ್ರ ಸಿದ್ಧಾಂತ” ವನ್ನುತಿರಸ್ಕರಿಸಿದೆ. ಬದಲಾಗಿ ದೇಶ ಮತ್ತು ದೇಶದ ಸಂವಿಧಾನ ವೈವಿದ್ಯತೆ, ಬಹುತ್ವ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಆಧರಿಸಿದೆ.

1947-50

ಈ ತತ್ವಗಳ ಆಧಾರದಲ್ಲಿ ಮೂರುವರ್ಷಗಳ ದೀರ್ಘ ಪ್ರಕ್ರಿಯೆಯ ಬಳಿಕ ಭಾರತದ ಸಂವಿಧಾನವನ್ನು ರಚಿಸಲಾಯಿತು. ಪೌರತ್ವದ ಬಗ್ಗೆ ಹೇಳುವ ಸಂವಿಧಾನದ ಎರಡನೇ ಭಾಗದಲ್ಲಿ ಇದು ಸ್ಪಷ್ಟವಾಗಿ ಉಲ್ಲೇಖವಾಗಿದ್ದು, ಧಾರ್ಮಿಕ ಮತ್ತು ಜನಾಂಗೀಯ ತಳಹದಿಯ ಪೌರತ್ವ (jus sanguinis) ಮತ್ತು ಹುಟ್ಟು, ವಾಸ ಹಾಗೂ ಗಡಿ ಆಧರಿತ ಪೌರತ್ವ (jus soli) ಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.

30-12-1955

ಪೌರತ್ವ ಕಾಯಿದೆ ಶಾಸನವಾಯಿತು. ಅದು ಮೇಲೆ ಹೇಳಿದ ಸಾಂವಿಧಾನಿಕ ತತ್ವಗಳನ್ನೇ ಆಧರಿಸಿದೆ.

24-4-1973

ಮಾನ್ಯ ನಾಯಾಯಾಲಯವು ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಪ್ರಕರಣದ ತೀರ್ಪಿನಲ್ಲಿ, ಜಾತ್ಯತೀತತೆ ಭಾರತೀಯ ಸಂವಿಧಾನದ ಮೂಲ ಸಂರಚನೆಯ ಭಾಗ ಎಂದು ಹೇಳಿದೆ. ಮುಂದೆ ಎಸ್ ಆರ್ ಬೊಮ್ಮಾಯಿ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲೂ ಇದನ್ನು ಎತ್ತಿ ಹಿಡಿದಿದೆ.

7-12-1985

ಅಸ್ಸಾಂ ಒಪ್ಪಂದದ ಬಳಿಕ, ಪೌರತ್ವ ಕಾಯಿದೆಗೆ 6Aಸೆಕ್ಷನ್ “ಅಸ್ಸಾಂ ಒಪ್ಪಂದದನ್ವಯ ಬರುವ ವ್ಯಕ್ತಿಗಳಿಗೆ ಪೌರತ್ವದ ವಿಶೇಷ ಪ್ರಾವಧಾನಗಳು” ಸೇರ್ಪಡೆಯಾಯಿತು. ಈ ವಿಭಾಗವು “ನಿರ್ದಿಷ್ಟ” ಭೂಭಾಗದಿಂದ ಭಾರತಕ್ಕೆ ಬರುವ “ಭಾರತೀಯ ಮೂಲದ” ಜನರಿಗೆ ಹಾಗೆ ಮಾಡಲು ಕೊನೆಯ ದಿನಾಂಕಗಳನ್ನು ಸ್ಪಷ್ಟಪಡಿಸುತ್ತದೆ. ಈ ಸೆಕ್ಷನ್ 6A ಸಾಂವಿಧಾನಿಕವೇ ಎಂಬ ಬಗ್ಗೆ ತಕರಾರು ಈಗಲೂ ತಮ್ಮ ನ್ಯಾಯಲಯದ ಮುಂದೆ ವಿಚಾರಣೆಗೆ ಬಾಕಿ ಇದೆ.

3-12-2004

ಪೌರತ್ವ ಕಾಯಿದೆಯ 3ನೇ ವಿಧಿಯನ್ನು ಬದಲಾಯಿಸಲಾಯಿತು. ಇದು jus soli ತತ್ವವನ್ನು 1987ರ ಬಳಿಕ ಜನಿಸಿದವರಿಗಾಗಿ ಭಾಗಷಃ ಬದಲಾಯಿಸುತ್ತದೆ. ಇಲ್ಲಿ ಧಾರ್ಮಿಕ ನಂಬಿಕೆ ಪೌರತ್ವಕ್ಕೆ ತಳಹದಿಯಾಗಿಲ್ಲ.

29-12-2011

ನಿರಾಶ್ರಿತರೆಂದು ಭಾರತದಲ್ಲಿ ವಾಸವಿರುವ ವಿದೇಶಿ ನಾಗರಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಗ್ರಹಸಚಿವಾಲಯವು ಸ್ಟಾಂಡರ್ಡ್ ಕಾರ್ಯಾಚರಣೆ ಮಾರ್ಗದರ್ಶಿ ಪ್ರಕಟಿಸಿತು. ಅದರ ಪ್ರಕಾರ, ಈ ಕ್ಲೇಮುಗಳನ್ನು ಪರಿಶೀಲಿಸಿ, ಸರಿಯೆಂದು ಕಂಡುಬಂದರೆ “ದೀರ್ಘಕಾಲಿಕ ವೀಸಾ” ನೀಡಲಾಗುತ್ತದೆ. ಈ ವೀಸಾನೀಡಿಕೆಗೆ ಆಧಾರ, ಆ ವ್ಯಕ್ತಿಗೆ ಅವರ ತಾಯ್ನಾಡಿನಲ್ಲಿ ಜಾತಿ, ಧರ್ಮ, ರಾಷ್ಟ್ರೀಯತೆ ಹೆಸರಿನಲ್ಲಿ ದೌರ್ಜನ್ಯ ಆಗಿದೆಯೇ ಎಂಬುದು.

7-9-2015

ಗೃಹ ಖಾತೆಯು GSR 685 (E) ಎಂಬ ಪ್ರಶ್ನಾರ್ಹ ಪ್ರಕಟಣೆ ಹೊರಡಿಸುತ್ತದೆ ಮತ್ತು 1950ರ ಪಾಸ್ ಪೋರ್ಟ್ ನಿಯಮಗಳನ್ನು ತಿದ್ದುಪಡಿ ಮಾಡುತ್ತದೆ. ಈ ತಿದ್ದುಪಡಿಯಲ್ಲಿ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನದ ಅಲ್ಪಸಂಖ್ಯಾತ ಸಮುದಾಯಗಳು ಅಂದರೆ ಹಿಂದೂಗಳು, ಸಿಖ್, ಬೌದ್ಧ, ಪಾರ್ಸಿ, ಜೈನ ಮತ್ತು ಕ್ರಿಷ್ಚಿಯನ್ನರು ಧಾರ್ಮಿಕ ದೌರ್ಜನ್ಯ ಅಥವಾ ಅದರ ಭಯದಿಂದ ಭಾರತದಲ್ಲಿ ಆಶ್ರಯ ಪಡೆಯಬಯಸಿದರೆ, ಮತ್ತು ಅವರು 2014 ಡಿಸೆಂಬರ್ 31ರ ಮುನ್ನ ಭಾರತವನ್ನು ಪ್ರವೇಶಿಸಿದ್ದರೆ, ಅವರಿಗೆ ಸೂಕ್ತ ದಾಖಲೆಪತ್ರಗಳಿಲ್ಲದಿದ್ದರೂ ಭಾರತಕ್ಕೆ ಮುಕ್ತ ಪ್ರವೇಶ ಇರುತ್ತದೆ (ಪಾಸ್ ಪೋರ್ಟ್ ನಿಯಮಗಳ ನಿಯಮ 3). ಇದಲ್ಲದೇ ಈ ಪ್ರಕಟಣೆಯು 1948ರ ವಿದೇಶೀಯರ ಆದೇಶಕ್ಕೂ ತಿದ್ದುಪಡಿಗಳನ್ನು ಮಾಡುತ್ತದೆ.

18-7-2016

ಗ್ರಹಸಚಿವಾಲಯವು ಪ್ರಶ್ನಾರ್ಹವಾದ GSR 702 (E) and 703 (E) ಮೂಲಕ ರಕ್ಷಣೆಯನ್ನು ಅಫ್ಘಾನಿಸ್ಥಾನ ರಾಷ್ಟ್ರೀಯರಿಗೂ ವಿಸ್ತರಿಸುತ್ತದೆ.

ಜುಲೈ-ಆಗಸ್ಟ್2016

ಪೌರತ್ವ (ತಿದ್ದುಪಡಿ) ಕಾಯಿದೆ 2016, ಲೋಕಸಭೆಯಲ್ಲಿ ಮಂಡನೆಯಾಯಿತು (ಇದು ಬಹುತೇಕ ಈಗ ಜಾರಿಗೆ ಬಂದಿರುವ ಕಾಯಿದೆಯ ರೀತಿಯಲ್ಲೇ ಇದೆ) ಇದರಲ್ಲಿ ಮೂರು ದೇಶಗಳ ಆರು ಧಾರ್ಮಿಕ ಸಮುದಾಯಗಳಿಗೆ ಅಕ್ರಮ ವಲಸಿಗರನ್ನು ಪೌರರನ್ನಾಗಿಸುವ ಅವಕಾಶ ನೀಡಲಾಗಿದೆ. ಇದನ್ನು 2016ರಲ್ಲಿ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಯಿತು.

4-1-2019

ವಿಸ್ತ್ರತ ಚರ್ಚೆಯ ಬಳಿಕ ಜಂಟಿ ಸಂಸದೀಯ ಸಮಿತಿಯು (ಕೆಲವು ಆಕ್ಷೇಪಗಳೊಂದಿಗೆ) ಈ ಮಸೂದೆಯನ್ನು ಮಂಡಿಸಬಹುದೆಂದು ಶಿಫಾರಸು ಮಾಡಿತು. ಸಮಿತಿ ತನ್ನ ವರದಿಯಲ್ಲಿ ಈ ಮಸೂದೆಯ ಉದ್ದೇಶ 2015 ಮತ್ತು 2016ರ ಗ್ರಹ ಇಲಾಖೆಯ ಪ್ರಕಟಣೆಗಳಿಗೆ ಶಾಸನರೂಪ ನೀಡುವುದು ಈ ಮಸೂದೆಯ ಉದ್ದೇಶ ಎಂದು ಗ್ರಹ ಇಲಾಖೆಯ ನಿಲುವನ್ನು ದಾಖಲಿಸಿದೆ.

9.12.2019

ಪೌರತ್ವ (ತಿದ್ದುಪಡಿ) ಕಾಯಿದೆ 2019ಲೋಕಸಭೆಯಲ್ಲಿ ಅಂಗೀಕಾರಗೊಂಡಿತು. ಇದು 2016ರ ಮಸೂದೆಗಿಂತ ಭಿನ್ನವಾಗಿದ್ದು, ನೋಂದಣಿ ಪ್ರಮಾಣಪತ್ರ ಅಥವ ನೈಸರ್ಗೀಕರಣ ಗಳಿಸಲು ಭಾರತಕ್ಕೆ ಪ್ರವೇಶದ ಕೊನೆಯ ದಿನಾಂಕವನ್ನು 31-12-2014ಕ್ಕೆ ನಿಗದಿಪಡಿಸಿದೆ, ಮತ್ತು ಇದು ತಿದ್ದುಪಡಿಯ ಲಾಭವನ್ನು ಕೆಲವು ಭೂಭಾಗಗಳಿಗೆ ಮಾತ್ರ ಸೀಮಿತಗೊಳಿಸುತ್ತದೆ, ಹಾಗಾಗಿ ಸಂವಿಧಾನದ ಆರನೇ ಷೆಡ್ಯೂಲಿನ ವ್ಯಾಪ್ತಿಯಲ್ಲಿ ಬರುವ ಭೂಭಾಗಗಳಿಗೆ ಇದನ್ನು ಅನ್ವಯಿಸಲಾಗುವುದಿಲ್ಲ ಮಾತ್ರವಲ್ಲದೇ ಬೆಂಗಾಲ್ ಈಸ್ಟರ್ನ್ ಫ್ರಂಟಿಯರ್ ರೆಗ್ಯುಲೇಷನ್ 1873 ಅಡಿ ಬರುವ “ಒಳರೇಖೆ” ಯ ಒಳಗಿನ ಭೂಭಾಗಗಳಿಗೂ ಇದು ಅನ್ವಯ ಆಗುವುದಿಲ್ಲ.

11-12-2019

ಪೌರತ್ವ (ತಿದ್ದುಪಡಿ) ಕಾಯಿದೆ 2019ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತದೆ.

12-12-2019

ಪೌರತ್ವ (ತಿದ್ದುಪಡಿ) ಕಾಯಿದೆ 2019ಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳುತ್ತದೆ ಮತ್ತು ಅದು ಈಗ ಶಾಸನವಾಗಿದೆ.

13-12-2019

ಈ ರಿಟ್ ಅರ್ಜಿ ದಾಖಲಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.

ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.

ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ

Published

on

ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.

ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.

COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.

ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.

‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ‌.ಕೆ.ಎ.ಓಬಳಪ್ಪ ಲೋಕಾಗೆ ದೂರು

Published

on

ಸುದ್ದಿದಿನ, ಚಿತ್ರದುರ್ಗ: ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಗಳಲ್ಲಿ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗೆ ಬಿಡುಗಡೆಯಾಗಿರುವ ಅಂದಾಜು 7 ಕೋಟಿ ಅನುದಾನದಲ್ಲಿನ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಲೋಕಾಯುಕ್ತಾಗೆ ದೂರು ನೀಡಲಾಗಿದೆ ಎಂದು ವಕೀಲ ಕೆ.ಎ.ಓಬಳಪ್ಪ ಅವರು ತಿಳಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಒಟ್ಟು 4 ಹಂತದಲ್ಲಿ 7 ಕೋಟಿ ರೂಪಾಯಿಗಳನ್ನು ಚಿತ್ರದುರ್ಗ ಜಿಲ್ಲೆಯ 06 ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಮಾಹಿತಿ ತಿಳಿದಿದೆ ಎಂದರು.

ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 06 ತಾಲ್ಲೂಕುಗಳ ಉಪವಿಭಾಗಗಳಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ, ಯಾವುದೇ ಉಪವಿಭಾಗಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಕಾರಣ ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ ಅರ್ಜಿ ಸಲ್ಲಿಸಿ, ‘2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ’ ದೂರು ನೀಡಲಾಗಿತ್ತು ಎಂದರು.

ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ನಮ್ಮ ದೂರು ಅರ್ಜಿಯನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿ, ಸೂಕ್ತ ಕ್ರಮವಹಿಸಿ ಕಛೇರಿಗೆ ವರದಿ ಸಲ್ಲಿಸಲು ಸೂಚಿಸಿರುತ್ತಾರೆ. ಅದರಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರು ವಿಚಾರಣೆ ನಡೆಸಿ, ಅರ್ಜಿದಾರರಿಗೆ ಕಡತ ವೀಕ್ಷಣೆ ಮಾಡಲು ಅವಕಾಶ ನೀಡಿ, ದಾಖಲೆ ನೀಡುವಂತೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದರು.

ಕಾರ್ಯಪಾಲಕ ಅಭಿಯಂತರರ ಆದೇಶದಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಚಿತ್ರದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು ಇವರುಗಳು ವಿವಿಧ ದಿನಾಂಕಗಳAದು ಉಪವಿಭಾಗಗಳಿಗೆ ಆಹ್ವಾನಿಸಿ, ಕಡತ ಪರಿಶೀಲನೆ ಮಾಡಿಕೊಳ್ಳುವಂತೆ ತಿಳಿಸಿದ ಕಾರಣ ಉಪವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ನಿಗಧಿಪಡಿಸಿದ ದಿನಾಂಕದಂದು ಉಪವಿಭಾಗಗಳ ಕಛೇರಿಗೆ ಭೇಟಿ ನೀಡಿದಾಗ ಕಂಡುಬಂದ ಅಂಶಗಳೆಂದರೆ;

1. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಿತ್ರದುರ್ಗ ಇಲ್ಲಿ ಒಟ್ಟು 80 ಕಾಮಗಾರಿಗಳು ನಡೆದಿದ್ದು, ಇದರಲ್ಲಿ ಕೇವಲ 23 ಕಾಮಗಾರಿಗಳ (ಅಂದಾಜು ಮೊತ್ತ ರೂ. 37.88 ಲಕ್ಷ) ಕಡತಗಳನ್ನು ತೋರಿಸಿದ್ದು, ಉಳಿದ ಕಾಮಗಾರಿಯ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಕಡತ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.

2. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಚಳ್ಳಕೆರೆ ಇಲ್ಲಿ ಒಟ್ಟು 80 ಕಾಮಗಾರಿಗಳ ಕಡತಗಳಲ್ಲಿ 28 ಕಾಮಗಾರಿಗಳ ಕಡತಗಳನ್ನು ತೋರಿಸಿದ್ದು, ಉಳಿದ 52 ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ನಮ್ಮ ಪರಿಶೀಲನೆ ಪತ್ರಕ್ಕೆ ದೃಢೀಕರಣ ನೀಡಿರುತ್ತಾರೆ.

3. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಇಲ್ಲಿಗೆ ಭೇಟಿ ನೀಡಿದ ಸಮಯದಲ್ಲಿ ಈ ಕಛೇರಿಗಳಲ್ಲಿ ಯಾವುದೇ ಕಡತಗಳು ಲಭ್ಯವಿರುವುದಿಲ್ಲ. ಕಛೇರಿಯ ಸಿಬ್ಬಂದಿಗಳು ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಡತಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬುದಾಗಿ ದೃಢೀಕರಣ ನೀಡಿರುತ್ತಾರೆ ಎಂದು ತಿಳಿಸಿದರು.

ಕಡತ ಪರಿಶೀಲನೆಯ ತರುವಾಯ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ದೂರು ನೀಡಿ, ನಾವು ಕೋರಿದ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು ಇವರು ಮಾಹಿತಿ ಕೊಡಿಸುವಲ್ಲಿ ಮತ್ತು ತನಿಖಾ ವರದಿ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಹಾಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಅವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿರುತ್ತದೆ ಎಂದರು.

ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ 6 ಉಪವಿಭಾಗಗಳಲ್ಲಿ ಕಾರ್ಯನಿರ್ವಹಿಸಿರುವ 23 ಸಹಾಯಕ ಕಾರ್ಯಪಾಲಕ ಅಭಿಯಂತರರು, 13 ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಿರಿಯ ಅಭಿಯಂತರರು, ಅಂದಿನ ಕಾರ್ಯಪಾಲಕ ಅಭಿಯಂತರರಾದ ಬಸವನಗೌಡ ಪಾಟೀಲ್ ಹಾಗೂ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಹಿರಿಯ ವಕೀಲರಾದ ನಾಗರಾಜ ಪೂಜಾರ್, ಪತ್ರಕರ್ತ ಅಶೋಕ್, ಹನುಮಂತಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending