Connect with us

ದಿನದ ಸುದ್ದಿ

ಹತ್ತಿ ಬೆಳೆಗಾರರಿಗೆ ಮಹತ್ವದ ಸಲಹೆಗಳು : ಮಿಸ್ ಮಾಡ್ದೆ ಓದಿ

Published

on

ಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿಯು ಒಂದಾಗಿದ್ದು, 2020ನೇ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 10,427 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿದೆ.

ಸುಧಾರಿತ ಕ್ರಮಗಳಾದ ಸುಧಾರಿತ ತಳಿಗಳು, ಬೇಸಾಯ ಪದ್ಧತಿಗಳು, ಕೀಟ ಹಾಗೂ ರೋಗಗಳ ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ನಿರೀಕ್ಷಿತ ಗುಣಮಟ್ಟದ ಇಳುವರಿಯ ಜೊತೆಗೆ ಉತ್ತಮ ಆದಾಯ ಗಳಿಸಬಹುದಾಗಿದೆ.

ಬಿತ್ತನೆ ಕಾಲ

ವಿಜಾತಿ ಶಕ್ತಿಮಾನ್ ತಳಿಗಳನ್ನು ಮೇ ತಿಂಗಳಿನಿಂದ ಜೂನ್ ತಿಂಗಳ ವರೆಗೆ (ಡಿ.ಹೆಚ್.ಬಿ-105, ಡಿ.ಸಿ.ಹೆಚ್ 32 ಮತ್ತು ವರಲಕ್ಷ್ಮಿ ತಳಿಗಳು) ಹಾಗೂ ಸ್ವಜಾತಿ ಶಕ್ತಿಮಾನ್ ತಳಿಗಳನ್ನು ಮೇ ತಿಂಗಳಿನಿಂದ ಜುಲೈ (ಎನ್.ಹೆಚ್.ಹೆಚ್44 ಮತ್ತು ಡಿ.ಹೆಚ್.ಹೆಚ್11 ತಳಿಗಳು) ತಿಂಗಳವರೆಗೆ ಬೆಳೆಯಬಹುದಾಗಿದೆ.

ಬೀಜ ಪ್ರಮಾಣ ಮತ್ತು ಅಂತರ

ಪ್ರತಿ ಎಕರೆಗೆ 0.5 ಕಿ.ಗ್ರಾಂ. ಗುಂಜು ರಹಿತ ಹತ್ತಿಯ ಬೀಜಗಳನ್ನು ಸಾಲಿನಿಂದ ಸಾಲಿಗೆ 3 ಅಡಿ ಅಂತರದಲಿ ಹಾಗೂ ಗಿಡದಿಂದ ಗಿಡಕ್ಕೆ 2 ಅಡಿ ಅಂತರ ನೀಡಿ ಬಿತ್ತನೆ ಮಾಡುವುದು. ಪ್ರಮಾಣಿತ ಬಿಟಿ ಹತ್ತಿ ಬೀಜಗಳನ್ನು ಅಧಿಕೃತ ಮಾರಾಟಗಾರರಿಂದ ಖರೀದಿಸಿ ಬೆಳೆಯಬಹುದಾಗಿದೆ.

  • ಬಿಟಿ ಹತ್ತಿಯ ಜೊತೆಗೆ ಬಿಟಿ ಹತ್ತಿರಹಿತ ಹತ್ತಿಯನ್ನುಅಥವಾ ಬಿಟಿ ಹತ್ತಿ ಪ್ಯಾಕ್‍ನೊಂದಿಗೆ ನೀಡುವ ರೆಫ್ಯೂಜಿ ಬೀಜಗಳನ್ನು ರೈತರು ತಪ್ಪದೆ ಆಶ್ರಯ ಬೆಳೆಗಳಾಗಿ ಬೆಳೆಯುವುದು.
  • ಹೆಚ್ಚು ಗುಲಾಬಿ ಕಾಯಿ ಕೊರಕದ ಭಾಧೆಯಿದ್ಧಲ್ಲಿ ಅಲ್ಪ ಕಾಲಾವಧಿ ಬಿಟಿ ಹತ್ತಿ ಹೈಬ್ರಿಡನ್ನು ಬೆಳೆಯುವುದು.

ಬೀಜೋಪಚಾರ

ಪ್ರಾರಂಭದಲ್ಲಿ ಬರುವ ಹತ್ತಿ ರಸ ಹೀರುವ ಕೀಟಗಳನ್ನು ಹತೋಟಿಯಲ್ಲಿಡಲು ಪ್ರತಿ ಕಿ.ಗ್ರಾಂ. ಹತ್ತಿ ಬೀಜವನ್ನು 10 ಗ್ರಾಂ ಇಮಿಡಾಕ್ಲೋಪ್ರಿಡ್-70 ಡಬ್ಲ್ಯೂ.ಎಸ್. ನಿಂದ ಉಪಚಾರ ಮಾಡಿ ಬಿತ್ತನೆ ಮಾಡುವುದು.

ಪೋಷಕಾಂಶಗಳ ನಿರ್ವಹಣೆ

ಬಿತ್ತನೆಗೆ 2-3 ವಾರಗಳ ಮೊದಲು 5 ಟನ್ ಕೊಟ್ಟಿಗೆ ಗೊಬ್ಬರ / ಸಾವಯವ ಗೊಬ್ಬರವನ್ನು ಪ್ರತಿ ಎಕರೆಗೆ ಬಳಸಬೇಕು. ಹಾಗೂ ಪ್ರತಿ ಎಕರೆಗೆ 60ಕಿ.ಗ್ರಾಂ. ಸಾರಜನಕ, 30 ಕಿ.ಗ್ರಾಂ. ರಂಜಕ, 30 ಕಿ.ಗ್ರಾಂ. ಪೊಟ್ಯಾಷ್ ರಾಸಾಯನಿಕ ಗೊಬ್ಬರಗಳ ಶಿಪಾರಸಿದ್ದು, ಬಿತ್ತನೆ ಸಮಯದಲ್ಲಿ ಅರ್ಧದಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ & ಪೊಟ್ಯಾಶ್ ಗೊಬ್ಬರಗಳನ್ನು ಹಾಕಬೇಕು.

ಉಳಿದ ಶೇ.50ರ ಸಾರಜನಕವನ್ನು ಬಿತ್ತನೆಯಾದ 60 ದಿನಗಳ ನಂತರ ಮೇಲುಗೊಬ್ಬರವಾಗಿ ನೀಡುವುದು. ಬಿತ್ತನೆ ಸಮಯದಲ್ಲಿ 10ಕಿ.ಗ್ರಾಂ. ಮೆಗ್ನಿಷಿಯಂ ಸಲ್ಫೇಟ್ ಪ್ರತಿ ಎಕರೆಗೆ ಬಳಸುವುದು.
ಹತ್ತಿಯಲ್ಲಿ ಸಮತೋಲನ ಗೊಬ್ಬರಗಳ ಬಳಕೆ ಅತೀ ಅಗತ್ಯವಾಗಿದ್ದು, ಕೆಲವೊಂದು ರೈತರು ಪೊಟ್ಯಾಷ್ ಗೊಬ್ಬರಗಳನ್ನು ಬಳಸುತ್ತಿರುವುದಿಲ್ಲ.

ಇದರಿಂದಾಗಿ ಕಾಯಿಯ ಗಾತ್ರ ಕಡಿಮೆಯಾಗುವುದಲ್ಲದೆ ಇಳುವರಿಯು ಕಡಿಮೆಯಾಗುವುದು. ಪೊಟ್ಯಾಷ್ ಗೊಬ್ಬರದ ಬಳಕೆಯಿಂದಾಗಿ ಕಾಂಡ ಮತ್ತು ಕಾಯಿಯ ತೊಗಟೆ ದಪ್ಪನಾಗಿ ರೋಗ ಹಾಗೂ ಕೀಟದ ಹಾವಳಿ ಕಡಿಮೆಯಾಗುವುದು.

ಕಳೆ ನಿರ್ವಹಣೆ

ಬಿತ್ತನೆಯಾದ ದಿವಸ/ಮಾರನೆ ದಿವಸ ಎಕರೆಗೆ 400 ಗ್ರಾಂಡೈಯುರಾನ್ ಶೇ.80 ಅಥವಾ 800 ಮಿ.ಲೀ. ಫ್ಲೋಕ್ಲೋರಾಲಿನ್ 45ಇ.ಸಿ. ಅಥವಾ 1.3ಲೀ. ಪೆಂಡಿಮೆಥಾಲಿನ್ ಶೇ.30ಇ.ಸಿ. ಅಥವಾ 800ಮಿ.ಲೀ. ಬ್ಯೂಟಾಕ್ಲೋರ್ 50 ಇ.ಸಿ.ನ್ನು 300 ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದು. ಸಿಂಪರಣೆ ಸಮಯದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು. ಬಿತ್ತಿದ 30 ದಿವಸಗಳ ನಂತರ 3 ರಿಂದ 4 ಬಾರಿ ಅಳವಾಗಿ ಎಡೆಕುಂಟೆ ಹೊಡೆಯುವುದು.

ಅಂತರ ಬೆಳೆ

ಹತ್ತಿಯಜೊತೆಗೆ ಮೆಣಸಿನಕಾಯಿ, ಸೊಯಾ ಆವರೆ, ಬೀನ್ಸ್, ಅಲಸಂದೆ, ಉದ್ದು ಬೆಳೆಗಳನ್ನು 1:1 ಅನುಪಾತದಲ್ಲಿ ಬೆಳೆಯಬಹುದಾಗಿದೆ.

ಜೋಡಿ ಸಾಲು ಪದ್ಧತಿ

ಹತ್ತಿಯನ್ನು 120 ಸೆಂ.ಮೀ-60 ಸೆಂ.ಮೀ-120 ಸೆಂ.ಮೀ ಅಂತರz ಜೋಡಿ ಸಾಲುಗಳಲ್ಲಿ, ಗಿಡದಿಂದ ಗಿಡಕ್ಕೆ 60 ಸೆಂ.ಮೀ ಅಂತರ ನೀಡಿ ಬೆಳೆಯುವುದರಿಂದ ವಿವಿಧ ಅಂತರ ಬೆಳೆಗಳನ್ನು ಬೆಳೆಯಬಹುದಾಗಿದೆ.

ಪ್ರಮುಖ ಸಲಹೆಗಳು

  1. ಪ್ರತಿ ವರ್ಷ ಒಂದೇ ಜಮೀನಿನಲ್ಲಿ ಹತ್ತಿಯು ನಂತರ ಹತ್ತಿ ಬೆಳೆಯದೆ ಬೆಳೆ ಪರಿವರ್ತನೆ ಮಾಡುವುದು.
  2. ಪ್ರಮಾಣಿತ ಹಾಗೂ ಶಿಫಾರಸ್ಸು ಮಾಡಿದ ಬಿತ್ತನೆ ಬೀಜಗಳನ್ನು ಬಳಸುವುದು.
  3. ಬಿ.ಟಿ. ಹತ್ತಿಯ ಜೊತೆಗೆ ಬಿ.ಟಿ. ಹತ್ತಿ ರಹಿತ ಹತ್ತಿಯನ್ನು ಅಥವಾ ಬಿ.ಟಿ. ಹತ್ತಿ ಪ್ಯಾಕ್‍ನೊಂದಿಗೆ ನೀಡುವ ರೆಫ್ಯೂಜಿ ಬೀಜಗಳನ್ನು ರೈತರು ತಪ್ಪದೆ ಆಶ್ರಯ ಬೆಳೆಗಳಾಗಿ ಬೆಳೆಯುವುದು.
  4. ಹೊಲದ ಸುತ್ತಲೂ ಪ್ರತಿ 20 ಸಾಲು ಹತ್ತಿಗೆ 1 ಸಾಲಿನಲ್ಲಿ ಬೆಂಡೆ ಬೀಜ ಹಾಕುವುದರಿಂದ ಕೀಟಗಳ ಹಾವಳಿ ಕಡಿಮೆಯಾಗುವುದು.
  5. ಶಿಫಾರಸ್ಸಿನ ರಸಾಯನಿಕ ಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಅಧಿಕ ಇಳುವರಿಯೊಂದಿಗೆ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸಾಧ್ಯ.
  • ಹೆಸರು ಬೆಳೆಯ ಬೇಸಾಯ ಕ್ರಮಗಳು: ತಳಿಗಳು: ಪಿ.ಎಸ್.16

ಬೀಜ ಪ್ರಮಾಣ ಮತ್ತು ಅಂತರ

ಎಕರೆಗೆ 6-8 ಕಿ.ಗ್ರಾಂ ಬಿತ್ತನೆ ಬೀಜ ಬಳಸುವುದು. ಸಾಲಿನಿಂದ ಸಾಲಿಗೆ 12 ಅಂಗುಲ ಹಾಗೂ ಗಿಡದಿಂದಗಿಡಕ್ಕೆ 4 ಅಂಗುಲ ಅಂತರ ನೀಡಿ ಬಿತ್ತನೆ ಮಾಡುವುದು.

ಬೀಜೋಪಚಾರ

ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ. ರೈಜೋಬಿಯಂ ಹಾಗೂ 200 ಗ್ರಾಂ ಪಿ.ಎಸ್.ಬಿ.ಯನ್ನು ಅಂಟುದ್ರಾವಣ ಬಳಸಿ ಉಪಚರಿಸುವುದು.

ಪೋಷಕಾಂಶ ನಿರ್ವಹಣೆ

  • ಎಕರೆಗೆ 3 ಟನ್ ಸಾವಯವ ಗೊಬ್ಬರವನ್ನು ಬಿತ್ತನೆ 2-3 ವಾರಗಳ ಮುನ್ನ ಬಳಸುವುದು.
  • ಎಕರೆಗೆ 5 ಕೆ.ಜಿ. ಸಾರಜನಕ, 10 ಕೆ.ಜಿ. ರಂಜಕ ಹಾಗೂ 10 ಕೆ.ಜಿ. ಪೊಟ್ಯಾಷ್‍ನ್ನು ಬಿತ್ತನೆ ಸಮಯದಲ್ಲಿ ನೀಡುವುದು.

ಕಳೆ ನಿರ್ವಹಣೆ

ಬಿತ್ತಿದ ದಿವಸ/ ಮಾರನೆಯ ದಿವಸ ಪ್ರತಿ ಎಕರೆಗೆ 1.3 ಲೀ ಪೆಂಡಿಮಿಥಲಿನ್ 30ಇ.ಸಿ ಕಳೆನಾಶಕವನ್ನು 300 ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಸಸ್ಯ ಸಂರಕ್ಷಣೆ

  • ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೀಟ ಮತ್ತು ರೋಗಬಾಧೆ ಕಂಡಾಗ ಮಾತ್ರ ತೆಗೆದುಕೊಳ್ಳಬೇಕು.
  • ಎಲೆ ಜಿಗಿ ಹುಳು, ಸಸ್ಯ ಹೇನು ಹತೋಟಿಗಾಗಿ 1.7ಮಿ.ಲೀ. ಡೈಮಿಥೋಯೇಟ್-30 ಇ.ಸಿ.ನ್ನು 250 ಲೀ. ಸಿಂಪರಣಾ ದ್ರಾವಣದೊಂದಿಗೆ ಸಿಂಪಡಿಸುವುದು.
  • ಬೂದಿ ರೋಗದ ಹತೋಟಿಗೆ ಕಾರ್ಬೆನ್‍ಡೈಜಿಂ. 50 ಡಬ್ಲ್ಯೂಪಿನ್ನು ಒಂದು ಗ್ರಾಂ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು.

ಉದ್ದು ಬೆಳೆಯ ಬೇಸಾಯ ಕ್ರಮಗಳು

  • ತಳಿ:- ಕರಂಗಾವ್-3, ಟಿ-9, ರಶ್ಮಿ (ಎಲ್.ಬಿ.ಜಿ.625) ಬೀಜಗಳ ಪ್ರಮಾಣ 8-10 ಕೆ.ಜಿ. ಪ್ರತಿ ಎಕರೆಗೆ.
  • ಬೀಜ ಪ್ರಮಾಣ ಮತ್ತು ಅಂತರ
  • ಎಕರೆಗೆ 6-8 ಕಿ.ಗ್ರಾಂ ಬಿತ್ತನೆ ಬೀಜ ಬಳಸುವುದು. ಸಾಲಿನಿಂದ ಸಾಲಿಗೆ 12 ಅಂಗುಲ ಹಾಗೂ ಗಿಡದಿಂದ ಗಿಡಕ್ಕೆ 4 ಅಂಗುಲ ಅಂತರ ನೀಡಿ ಬಿತ್ತನೆ ಮಾಡುವುದು.

ಬೀಜೋಪಚಾರ

ಬಿತ್ತನೆಗೆ ಮುಂಚಿತವಾಗಿ ಬರ ನಿರೋಧಕ ಗುಣ ಹೆಚ್ಚಿಸಲು ಶೇ.2 ರಕ್ಯಾಲ್ಸಿಯಂಕ್ಲೋರೈಡ್ ದ್ರಾವಣದಲ್ಲಿ ಅರ್ಧತಾಸು ನೆನೆಸಿ, ನಂತರ ನೆರಳಿನಲ್ಲಿ ಕನಿಷ್ಠ 7 ತಾಸು ಒಣಗಿಸಬೇಕು ನಂತರ ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ. ರೈಜೋಬಿಯಂ ಹಾಗೂ 200 ಗ್ರಾಂ ಪಿ.ಎಸ್.ಬಿ.ಯನ್ನು ಅಂಟು ದ್ರಾವಣ ಬಳಸಿ ಉಪಚರಿಸುವುದು.

ಪೋಷಕಾಂಶ ನಿರ್ವಹಣೆ

  • ಎಕರೆಗೆ 3 ಟನ್ ಸಾವಯವಗೊಬ್ಬರವನ್ನು ಬಿತ್ತನೆ 2-3 ವಾರಗಳ ಮುನ್ನ ಬಳಸುವುದು.
  • ಎಕರೆಗೆ 5 ಕೆ.ಜಿ. ಸಾರಜಕನ, 10 ಕೆ.ಜಿ.ರಂಜಕ ಹಾಗೂ 10 ಕೆ.ಜಿ. ಪೊಟ್ಯಾಷ್‍ನ್ನು ಬಿತ್ತನೆ ಸಮಯದಲ್ಲಿ ನೀಡುವುದು.

ಕಳೆ ನಿರ್ವಹಣೆ

ಬಿತ್ತಿದ 2 ದಿನಗಳೊಳಗಾಗಿ ಪ್ರತಿ ಎಕರೆಗೆ 0.8 ಲೀ ಫ್ಲುಕ್ಲೋರಾಲಿನ್ 45ಇ.ಸಿ ಅಥವಾ 1.2 ಲೀ. ಅಲಾಕ್ಲೋರ್ 50 ಇ.ಸಿ ಕಳೆನಾಶಕಗಳನ್ನು 300 ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸುವುದು.

ಸಸ್ಯ ಸಂರಕ್ಷಣೆ

  • ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೀಟ ಮತ್ತು ರೋಗ ಬಾಧೆ ಕಂಡಾಗ ಮಾತ್ರ ತೆಗೆದುಕೊಳ್ಳಬೇಕು.
  • ಎಲೆ ಜಿಗಿ ಹುಳು, ಸಸ್ಯ ಹೇನು ಹತೋಟಿಗಾಗಿ 1.7 ಮಿ.ಲೀ. ಡೈಮಿಥೋಯೇಟ್-30 ಇ.ಸಿ.ನ್ನು 250 ಲೀ. ಸಿಂಪರಣಾ ದ್ರಾವಣದೊಂದಿಗೆ ಸಿಂಪಡಿಸುವುದು.
  • ಬೂದಿ ರೋಗದ ಹತೋಟಿಗೆ ಕಾರ್ಬನ್‍ಡೈಜಿಂ. 50 ಡಬ್ಲ್ಯೂಪಿ ನ್ನು ಒಂದು ಗ್ರಾಂ.ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಹಿಳೆಯರ ಉಚಿತ ಪ್ರಯಾಣದ ನಡುವೆ ನಿಗಮಗಳಿಗೆ ಹಣಕಾಸಿನ ಸಂಕಷ್ಟ; ವೇತನ, ಡೀಸೆಲ್‌ ಖರೀದಿಗೂ ಎದುರಾಗುತ್ತಿದೆ ಒತ್ತಡ

Published

on

ಶಕ್ತಿ ಯೋಜನೆಗೆ ಸರ್ಕಾರದ ಬೆಂಬಲ, ಸಾರಿಗೆ ನಿಗಮಗಳಿಗೆ ಬಾಕಿ ಹೊರೆ; ₹5,651 ಕೋಟಿ ಟಿಕೆಟ್‌ ಹಣ ಯಾವಾಗ?

ಸುದ್ದಿದಿನ,ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾದ ಶಕ್ತಿ ಯೋಜನೆಯ ಮತ್ತೊಂದು ಮುಖ ಇದೀಗ ಚರ್ಚೆಗೆ ಬಂದಿದೆ. ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ನೀಡಿರುವ ಉಚಿತ ಟಿಕೆಟ್‌ಗಳ ಮೊತ್ತದಲ್ಲಿ ಸರ್ಕಾರವು ನಾಲ್ಕು ಸಾರಿಗೆ ನಿಗಮಗಳಿಗೆ ₹5,651.24 ಕೋಟಿ ಬಾಕಿ ಉಳಿಸಿಕೊಂಡಿರುವುದು ನಿಗಮಗಳ ಆರ್ಥಿಕ ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ. ಬಾಕಿ ಮೊತ್ತದ ಮರುಪಾವತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವೇತನ, ಡೀಸೆಲ್‌, ಬಿಡಿಭಾಗಗಳ ಖರೀದಿ ಸೇರಿದಂತೆ ದೈನಂದಿನ ವೆಚ್ಚಗಳನ್ನು ನಿರ್ವಹಿಸುವ ಒತ್ತಡ ಹೆಚ್ಚಾಗಿದೆ.

ಶಕ್ತಿ ಯೋಜನೆಗೆ ಮೂರು ವರ್ಷಗಳ ಪಯಣ

ಕಾಂಗ್ರೆಸ್‌ ಸರ್ಕಾರ 2023ರ ಜೂನ್‌ 11ರಂದು ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಸಾರಿಗೆ ನಿಗಮಗಳ ಮೇಲೆ ಸೇವಾ ಹೊರೆ ಕೂಡ ವಿಸ್ತರಿಸಿದೆ.

2023-24ರಿಂದ 2026ರ ಜುಲೈ ಅಂತ್ಯದವರೆಗೆ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರು 797.16 ಕೋಟಿ ಪ್ರಯಾಣ ಕೈಗೊಂಡಿದ್ದಾರೆ. ಈ ಪ್ರಯಾಣಗಳಿಗೆ ನೀಡಲಾದ ಉಚಿತ ಟಿಕೆಟ್‌ಗಳ ಒಟ್ಟು ಮೌಲ್ಯ ₹20,955.99 ಕೋಟಿ ಎಂದು ಅಂಕಿ-ಅಂಶಗಳು ತಿಳಿಸುತ್ತವೆ.

₹15,304 ಕೋಟಿ ಪಾವತಿ, ಇನ್ನೂ ₹5,651 ಕೋಟಿ ಬಾಕಿ

ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್‌ ಮೊತ್ತವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಮರುಪಾವತಿ ಮಾಡಬೇಕಿದೆ. ಇದುವರೆಗೆ ₹15,304.76 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಇನ್ನೂ ₹5,651.24 ಕೋಟಿ ಪಾವತಿಯಾಗಬೇಕಿದೆ.

ಈ ಬಾಕಿ ಮೊತ್ತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಪಾಲುದಾರರಾಗಿವೆ.

ನಿಗಮಗಳಿಗೆ ಆರ್ಥಿಕ ಒತ್ತಡ ಏಕೆ?

ಈಗಾಗಲೇ ಹಲವು ವರ್ಷಗಳಿಂದ ಸಾರಿಗೆ ನಿಗಮಗಳು ನಷ್ಟದ ಒತ್ತಡದಲ್ಲಿವೆ. ಶಕ್ತಿ ಯೋಜನೆಯ ಟಿಕೆಟ್‌ ಮೊತ್ತ ಸಕಾಲದಲ್ಲಿ ಪಾವತಿಯಾಗದಿರುವುದು ನಗದು ಹರಿವಿನ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿಯ ವೇತನ, ಡೀಸೆಲ್‌ ಖರೀದಿ, ಬಸ್‌ಗಳ ನಿರ್ವಹಣೆ, ಬಿಡಿಭಾಗಗಳ ಪೂರೈಕೆ ಹಾಗೂ ನಿವೃತ್ತ ನೌಕರರ ಬಾಕಿ ಪಾವತಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಗಮಗಳು ನಿರ್ವಹಿಸಬೇಕಿದೆ.

₹18,459 ಕೋಟಿ ನೆರವು ನೀಡಿದರೂ ನಷ್ಟದ ಹೊರೆ

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರವು ವಿವಿಧ ಕಾರಣಗಳಿಗಾಗಿ ಸಾರಿಗೆ ನಿಗಮಗಳಿಗೆ ₹18,459.37 ಕೋಟಿ ನೆರವು ನೀಡಿದೆ. ಶಕ್ತಿ ಯೋಜನೆ, ವಿದ್ಯಾರ್ಥಿ ಪಾಸ್‌ಗಳ ಸಹಾಯಧನ, ಸಾಲ ಮತ್ತು ಬಡ್ಡಿ ಮರುಪಾವತಿ, ಬಸ್‌ ಖರೀದಿ, ವೇತನ, ಡೀಸೆಲ್‌, ಪಿಎಫ್‌ ಹಾಗೂ ರಜೆ ನಗದೀಕರಣ ಸೇರಿದಂತೆ ಹಲವು ವೆಚ್ಚಗಳಿಗೆ ಈ ನೆರವು ಬಳಕೆಯಾಗಿದೆ.

ಆದರೂ ನಿಗಮಗಳ ಆರ್ಥಿಕ ಸಂಕಷ್ಟ ಸಂಪೂರ್ಣವಾಗಿ ದೂರವಾಗಿಲ್ಲ. ಡೀಸೆಲ್‌ ಬಸ್‌ಗಳ ಜತೆಗೆ ಎಲೆಕ್ಟ್ರಿಕ್‌ ಬಸ್‌ಗಳ ಕಾರ್ಯಾಚರಣೆಯಿಂದಲೂ ನಿರೀಕ್ಷಿತ ಮಟ್ಟದ ಆದಾಯ ಬರುತ್ತಿಲ್ಲ ಎಂಬುದು ಮತ್ತೊಂದು ಸವಾಲಾಗಿದೆ.

ಸಕಾಲಿಕ ಪಾವತಿಯೇ ಪರಿಹಾರವೇ?

ಶಕ್ತಿ ಯೋಜನೆಯ ಸಾಮಾಜಿಕ ಮಹತ್ವವನ್ನು ಪ್ರಶ್ನಿಸುವುದಕ್ಕಿಂತ, ಅದರ ಆರ್ಥಿಕ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಮುಖ್ಯವಾಗಿದೆ. ಸರ್ಕಾರದಿಂದ ಬಾಕಿ ಮೊತ್ತ ಸಕಾಲದಲ್ಲಿ ಬಿಡುಗಡೆಯಾದರೆ ನಿಗಮಗಳ ನಗದು ಹರಿವು ಸುಧಾರಿಸಿ, ವೇತನ, ಇಂಧನ ಮತ್ತು ನಿರ್ವಹಣಾ ವೆಚ್ಚಗಳನ್ನು ನಿರ್ವಹಿಸಲು ಹೆಚ್ಚಿನ ಬಲ ದೊರೆಯಬಹುದು.

Continue Reading

ದಿನದ ಸುದ್ದಿ

ಭದ್ರಾ ಜಲಾಶಯ: ಮಲೆನಾಡಿನ ಮಳೆಯಿಂದ ಬಯಲುಸೀಮೆಯ ಹಸಿರಿನವರೆಗೆ… ಲಕ್ಷಾಂತರ ಜನರ ಬದುಕಿನ ಜಲನಾಡಿ!

Published

on

ನೀರು ತುಂಬಿದರೆ ಹಬ್ಬ, ಬರಿದಾದರೆ ಆತಂಕ; ಕೃಷಿ, ಕುಡಿಯುವ ನೀರು, ವಿದ್ಯುತ್‌ ಹಾಗೂ ಪರಿಸರಕ್ಕೆ ಭದ್ರೆಯೇ ಆಧಾರ

ಸುದ್ದಿದಿನ,ಶಿವಮೊಗ್ಗ: ಭದ್ರಾ ಜಲಾಶಯ ಎಂದರೆ ಕೇವಲ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಣೆಕಟ್ಟಲ್ಲ. ಪಶ್ಚಿಮಘಟ್ಟದ ಮಳೆಯನ್ನು ಮಧ್ಯ ಕರ್ನಾಟಕದ ಬರಡು ಭೂಮಿಗೆ ಕೊಂಡೊಯ್ಯುವ ಜೀವನಾಡಿ. ಮಲೆನಾಡಿನ ನದಿಯಿಂದ ಆರಂಭವಾಗುವ ಭದ್ರೆಯ ಪಯಣವು ರೈತರ ಕೃಷಿ, ಜನರ ಕುಡಿಯುವ ನೀರು, ಸ್ಥಳೀಯ ಆರ್ಥಿಕತೆ, ವಿದ್ಯುತ್‌ ಉತ್ಪಾದನೆ ಹಾಗೂ ಪರಿಸರದೊಂದಿಗೆ ನೇರ ಸಂಬಂಧ ಹೊಂದಿದೆ. ಜಲಾಶಯ ತುಂಬಿದರೆ ಹಲವು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿದರೆ, ನೀರಿನ ಕೊರತೆ ಎದುರಾದಾಗ ಇದೇ ಪ್ರದೇಶಗಳಲ್ಲಿ ಆತಂಕ ಹೆಚ್ಚುತ್ತದೆ.

http://Visit : www.suddidina.com

ಪಶ್ಚಿಮಘಟ್ಟದಿಂದ ಬಯಲುಸೀಮೆಯವರೆಗೆ ಭದ್ರೆಯ ಪಯಣ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ–ವರಾಹ ಪರ್ವತ ಶ್ರೇಣಿಗಳ ಗಂಗಾಮೂಲದಲ್ಲಿ ಹುಟ್ಟುವ ಭದ್ರಾ ನದಿ ಕಳಸ, ಕೊಪ್ಪ, ನರಸಿಂಹರಾಜಪುರ, ತರೀಕೆರೆ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ಹರಿದು ಕೂಡಲಿ ಬಳಿ ತುಂಗಾ ನದಿಯನ್ನು ಸೇರುತ್ತದೆ. ಬಳಿಕ ತುಂಗಾಭದ್ರೆಯಾಗಿ ಮುಂದುವರಿದು ಕೃಷ್ಣಾ ನದಿಯನ್ನು ಸೇರುತ್ತದೆ.

ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿರುವ ಭದ್ರಾ ಜಲಾಶಯ 1,708 ಮೀಟರ್‌ ಉದ್ದ ಹಾಗೂ 59.14 ಮೀಟರ್‌ ಎತ್ತರ ಹೊಂದಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 71.50 ಟಿಎಂಸಿ. 1,968.40 ಚದರ ಕಿಲೋಮೀಟರ್‌ ಜಲಾನಯನ ಪ್ರದೇಶ ಹೊಂದಿರುವ ಈ ಯೋಜನೆಗೆ ಸ್ವಾತಂತ್ರ್ಯಾನಂತರ 1947ರಲ್ಲಿ ಚಾಲನೆ ದೊರೆತಿದ್ದು, ಅಣೆಕಟ್ಟು ಕಾಮಗಾರಿ 1959ರಲ್ಲಿ ಹಾಗೂ ನಾಲೆಗಳ ಕಾಮಗಾರಿ 1966ರಲ್ಲಿ ಪೂರ್ಣಗೊಂಡಿತು.

ಒಣಭೂಮಿಗೆ ಹಸಿರು ಹೊದಿಸಿದ ನೀರು

ಭದ್ರಾ ನೀರಾವರಿ ಯೋಜನೆಯು ಮಧ್ಯ ಕರ್ನಾಟಕದ ಕೃಷಿಯ ಚಿತ್ರಣವನ್ನೇ ಬದಲಿಸಿದೆ. ಎಡದಂಡೆ ನಾಲೆ 77.24 ಕಿ.ಮೀ. ಹರಿದು ಸುಮಾರು 8,300 ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸಿದರೆ, ಬಲದಂಡೆ ನಾಲೆ 366.90 ಕಿ.ಮೀ. ಉದ್ದಕ್ಕೆ ಹರಿದು ಸುಮಾರು ಒಂದು ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುತ್ತದೆ.

ಒಂದು ಕಾಲದಲ್ಲಿ ಭತ್ತ ಮತ್ತು ಕಬ್ಬು ಪ್ರಧಾನವಾಗಿದ್ದ ಪ್ರದೇಶಗಳಲ್ಲಿ ಇದೀಗ ಅಡಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳ ವಿಸ್ತರಣೆ ಕಂಡುಬಂದಿದೆ. ಹೀಗಾಗಿ ಭದ್ರಾ ನೀರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ.

ಕುಡಿಯುವ ನೀರಿಗೂ ಭದ್ರೆಯೇ ಆಸರೆ

ಮಧ್ಯ ಕರ್ನಾಟಕದ ಹಲವು ನಗರಗಳು, ಪಟ್ಟಣಗಳು ಹಾಗೂ ಸಾವಿರಾರು ಹಳ್ಳಿಗಳ ಕುಡಿಯುವ ನೀರಿನ ವ್ಯವಸ್ಥೆಯಲ್ಲೂ ಭದ್ರಾ ಜಲಾಶಯ ಪ್ರಮುಖ ಪಾತ್ರ ವಹಿಸುತ್ತದೆ. ಜಲಾಶಯದಲ್ಲಿ ಕುಡಿಯುವ ನೀರಿಗಾಗಿ 8.50 ಟಿಎಂಸಿ ನೀರನ್ನು ಮೀಸಲಿಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ವಿಜಯನಗರ, ಬಳ್ಳಾರಿ ಸೇರಿದಂತೆ ಹಲವು ಪ್ರದೇಶಗಳ ಜನಜೀವನಕ್ಕೆ ಈ ನೀರು ಆಸರೆಯಾಗಿದೆ.

ಹೂಳು, ಮೇಲ್ದಂಡೆ ಯೋಜನೆ: ಭವಿಷ್ಯದ ಸವಾಲು

ಜಲಾಶಯದ ಸಂಗ್ರಹ ಸಾಮರ್ಥ್ಯದ ಮೇಲೆ ಹೂಳು ಕೂಡ ಪರಿಣಾಮ ಬೀರುತ್ತಿದೆ. ಮೂಲ ಸಂಗ್ರಹಕ್ಕೆ ಹೋಲಿಸಿದರೆ ಸುಮಾರು 95.74 ಮಿಲಿಯನ್‌ ಘನ ಮೀಟರ್‌ ಹೂಳು ಸೇರಿಕೊಂಡಿದೆ ಎನ್ನಲಾಗುತ್ತದೆ. ಸದ್ಯ ಡೆಡ್‌ ಸ್ಟೋರೇಜ್‌ ಇರುವುದರಿಂದ ತಕ್ಷಣದ ಬಳಕೆಗೆ ದೊಡ್ಡ ತೊಂದರೆ ಇಲ್ಲವಾದರೂ, ಭವಿಷ್ಯದ ಜಲಭದ್ರತೆ ದೃಷ್ಟಿಯಿಂದ ಹೂಳು ನಿರ್ವಹಣೆ ಮಹತ್ವದ್ದಾಗಿದೆ.

ಇದರ ನಡುವೆ ಭದ್ರಾ ಮೇಲ್ದಂಡೆ ಯೋಜನೆ ಬರಪೀಡಿತ ಪ್ರದೇಶಗಳಿಗೆ ನೀರೊದಗಿಸುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಸೂಕ್ಷ್ಮ ನೀರಾವರಿ ಹಾಗೂ ಕೆರೆಗಳ ಭರ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ನಾಲೆಗಳ ಮೂಲಕ 37.2 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯೂ ನಡೆಯುತ್ತಿದೆ. ಮೀನು ಮರಿ ಸಾಕಣೆ ಕೇಂದ್ರವೂ ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಿದೆ.

ಭದ್ರೆಯ ಅಂಕಿ-ಅಂಶಗಳು

  • ಜಲಾನಯನ ಪ್ರದೇಶ: 1,968.40 ಚ.ಕಿ.ಮೀ.
  • ಅಣೆಕಟ್ಟು ಎತ್ತರ: 59.14 ಮೀಟರ್‌
  • ಅಣೆಕಟ್ಟು ಉದ್ದ: 1,708 ಮೀಟರ್‌
  • ನೀರು ಸಂಗ್ರಹ ಸಾಮರ್ಥ್ಯ: 71.50 ಟಿಎಂಸಿ
  • ಅಚ್ಚುಕಟ್ಟು ಪ್ರದೇಶ: 1,05,570 ಹೆಕ್ಟೇರ್‌
  • ನಾಲೆಗಳ ಒಟ್ಟು ಉದ್ದ: 444.14 ಕಿ.ಮೀ.
Continue Reading

ದಿನದ ಸುದ್ದಿ

ಸಾಮಾಜಿಕ ಬದಲಾವಣೆಗೆ ಮಾದರಿಯಾಗಬೇಕಿದ್ದ ಯೋಜನೆಗೆ ದಾಖಲೆ, ಅನುದಾನ ಕೊರತೆ ಅಡ್ಡಿ; ಸಾವಿರಾರು ಅರ್ಜಿಗಳು ಬಾಕಿ

Published

on

ಜಾತಿಯ ಗೋಡೆ ಒಡೆದು ಮದುವೆಯಾದ ಜೋಡಿಗೆ ಹೊಸ ಸಂಕಷ್ಟ: ಪ್ರೋತ್ಸಾಹಧನಕ್ಕೆ ಅರ್ಜಿ ಹಾಕಿದರೂ ಹಣ ಮಾತ್ರ ಮರೀಚಿಕೆ!

ಸುದ್ದಿದಿನ,ಶಿವಮೊಗ್ಗ: ಜಾತಿ-ಧರ್ಮದ ಕಟ್ಟುಪಾಡುಗಳನ್ನು ಮೀರಿ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವ ದಂಪತಿಗಳಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆಯೇ ಇದೀಗ ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಸಮಾಜದ ವಿರೋಧವನ್ನು ಎದುರಿಸಿ ಹೊಸ ಬದುಕು ಕಟ್ಟಿಕೊಳ್ಳುವ ದಂಪತಿಗಳಿಗೆ ನೆರವಾಗಬೇಕಿದ್ದ ಯೋಜನೆಯಲ್ಲಿ ಹಣ ಬಿಡುಗಡೆ ವಿಳಂಬವಾಗುತ್ತಿದ್ದು, ಅರ್ಹ ಫಲಾನುಭವಿಗಳು ಸರ್ಕಾರದ ನೆರವಿಗಾಗಿ ಕಾಯುವಂತಾಗಿದೆ.

ಹೈಲೈಟ್ಸ್: 
  • SC/ST ಪುರುಷ–ಬೇರೆ ಜಾತಿಯ ಮಹಿಳೆ ವಿವಾಹಕ್ಕೆ ₹2.50 ಲಕ್ಷ ನೆರವು
  • SC/ST ಮಹಿಳೆ–ಬೇರೆ ಜಾತಿಯ ಪುರುಷ ವಿವಾಹಕ್ಕೆ ₹3 ಲಕ್ಷ ಪ್ರೋತ್ಸಾಹಧನ
  • 2025-26ರಲ್ಲಿ 5,612 ಅರ್ಜಿಗಳ ಪೈಕಿ 3,997 ಅರ್ಜಿಗಳು ಬಾಕಿ
  • 2026-27ರಲ್ಲಿ 2,194 ಅರ್ಜಿಗಳು; 61ಕ್ಕೆ ಅನುಮೋದನೆ, ಆದರೆ ಹಣ ಪಾವತಿ ಶೂನ್ಯ
  • ಅನುದಾನ ಕೊರತೆ ಮತ್ತು ಅಪೂರ್ಣ ದಾಖಲೆಗಳಿಂದ ಯೋಜನೆ ಅನುಷ್ಠಾನಕ್ಕೆ ವಿಳಂಬ

http://Visit : www.suddidina.com

ಅಂತರ್ಜಾತಿ ವಿವಾಹಕ್ಕೆ ಎಷ್ಟು ಪ್ರೋತ್ಸಾಹಧನ?

ಅಸ್ಪೃಶ್ಯತೆ ನಿವಾರಣೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪುರುಷ ಬೇರೆ ಜಾತಿಯ ಮಹಿಳೆಯನ್ನು ವಿವಾಹವಾದರೆ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳೆ ಬೇರೆ ಜಾತಿಯ ಪುರುಷನನ್ನು ವಿವಾಹವಾದರೆ ₹3 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.

ಆದರೆ, ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಹಣ ಪಾವತಿ ಮಾತ್ರ ಅದೇ ವೇಗದಲ್ಲಿ ನಡೆಯುತ್ತಿಲ್ಲ. 2025-26ನೇ ಸಾಲಿನಲ್ಲಿ 5,612 ಅರ್ಜಿಗಳು ಸಲ್ಲಿಕೆಯಾಗಿದ್ದು, 1,615 ಅರ್ಜಿಗಳಿಗೆ ಮೊದಲ ಹಂತದ ಪ್ರೋತ್ಸಾಹಧನಕ್ಕೆ ಅನುಮೋದನೆ ದೊರೆತಿದೆ. ಆದರೆ ಕೇವಲ 39 ಫಲಾನುಭವಿಗಳಿಗೆ ಮಾತ್ರ ಹಣ ಪಾವತಿಯಾಗಿದ್ದು, 3,997 ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. 909 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿಯಾಗಿವೆ.

ಹೊಸ ಸಾಲಿನಲ್ಲೂ ಅದೇ ಕಥೆ

2026-27ನೇ ಸಾಲಿನಲ್ಲಿ ಇದುವರೆಗೆ 2,194 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 61 ಅರ್ಜಿಗಳಿಗೆ ಅನುಮೋದನೆ ದೊರೆತಿದ್ದರೂ, ಮೊದಲ ಕಂತಿನ ಹಣ ಯಾರಿಗೂ ಪಾವತಿಯಾಗಿಲ್ಲ. 392 ಅರ್ಜಿಗಳು ಅಪೂರ್ಣ ದಾಖಲೆಗಳ ಕಾರಣದಿಂದ ಬಾಕಿ ಉಳಿದಿವೆ.

ಅನುದಾನ ಹೆಚ್ಚಳವಾಗದಿರುವುದು ದೊಡ್ಡ ಸಮಸ್ಯೆ

ಅಂತರ್ಜಾತಿ ವಿವಾಹಗಳ ಸಾಮಾಜಿಕ ಸ್ವೀಕಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಏರಿಕೆಯಾಗಿದೆ. ಆದರೆ, ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನ ಹೆಚ್ಚಳವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಹಿಂದಿನ ವರ್ಷದ ಅರ್ಜಿಗಳೇ ಬಾಕಿ ಉಳಿಯುತ್ತಿರುವಾಗ ಹೊಸ ಅರ್ಜಿಗಳ ವಿಲೇವಾರಿಯೂ ವಿಳಂಬವಾಗುತ್ತಿದೆ.

2018-19ರಲ್ಲಿ ₹64.27 ಕೋಟಿ, 2019-20ರಲ್ಲಿ ₹90.42 ಕೋಟಿ, 2020-21ರಲ್ಲಿ ₹99.9 ಕೋಟಿ, 2021-22ರಲ್ಲಿ ₹171.84 ಕೋಟಿ ಹಾಗೂ 2022-23ರಲ್ಲಿ ₹94.62 ಕೋಟಿ ಅನುದಾನ ಮೀಸಲಿಡಲಾಗಿತ್ತು. ಆದರೆ ವಾರ್ಷಿಕವಾಗಿ ಬರುತ್ತಿರುವ ಅರ್ಜಿಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಈ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

2026-27ನೇ ಸಾಲಿನ ಈವರೆಗಿನ ಅಂತರ್ಜಾತಿ ಪ್ರೋತ್ಸಾಹಧನ ಯೋಜನೆಯ ವಿವರ

  • 2026-27ನೇ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳು: 2,194
  • ಮೊದಲ ಕಂತಿಗೆ ಅನುಮೋದನೆ: 61
  • ಪ್ರೋತ್ಸಾಹ ಧನ ಪಾವತಿ: 00
  • ಅಪೂರ್ಣ ಅರ್ಜಿಗಳು: 392
  • ತಿರಸ್ಕಾರಗೊಂಡ ಅರ್ಜಿಗಳು: 02

ಸಾಮಾಜಿಕ ಧೈರ್ಯಕ್ಕೆ ಆರ್ಥಿಕ ಬೆಂಬಲ ಬೇಕಿದೆ

ಅಂತರ್ಜಾತಿ ವಿವಾಹದ ನಿರ್ಧಾರ ಕೈಗೊಳ್ಳುವ ಜೋಡಿಗಳು ಕೆಲವೊಮ್ಮೆ ಕುಟುಂಬದ ವಿರೋಧ, ಸಾಮಾಜಿಕ ಒತ್ತಡ, ಬಹಿಷ್ಕಾರ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಪ್ರೋತ್ಸಾಹಧನ ಕೇವಲ ಹಣಕಾಸಿನ ನೆರವಲ್ಲ; ಅದು ಹೊಸ ದಂಪತಿಗಳ ನಿರ್ಧಾರಕ್ಕೆ ಸಾಮಾಜಿಕ ಬೆಂಬಲದ ಸಂಕೇತವೂ ಹೌದು.

ಆದರೆ ಅರ್ಜಿ ಸಲ್ಲಿಸಿ ಅನುಮೋದನೆಗಾಗಿ, ನಂತರ ಹಣಕ್ಕಾಗಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾದರೆ ಯೋಜನೆಯ ಮೂಲ ಉದ್ದೇಶವೇ ದುರ್ಬಲವಾಗುತ್ತದೆ. ಹೀಗಾಗಿ ಬಾಕಿ ಅರ್ಜಿಗಳ ತ್ವರಿತ ವಿಲೇವಾರಿ, ದಾಖಲೆ ಪ್ರಕ್ರಿಯೆ ಸರಳೀಕರಣ ಹಾಗೂ ಅಗತ್ಯ ಅನುದಾನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕಿದೆ.

Continue Reading

Trending