ದಿನದ ಸುದ್ದಿ
ಕೊರೋನಾ ನೋಡುವುದು ಜಾತಿ – ಧರ್ಮವನ್ನಲ್ಲ, ಬದಲಿಗೆ..!?
ಎರಡನೇ ಮಹಾ ಯುದ್ಧದ ಬಗ್ಗೆ ನಾವೆಲ್ಲಾ ಸಾಕಷ್ಟು ವಿಚಾರಗಳನ್ನು ತಿಳಿದಿದ್ದೇವೆ. ವಿಶ್ವ ಕಂಡ ಘನಘೋರವಾದ ಆ ಯುದ್ಧದ ಸನ್ನಿವೇಶದಲ್ಲಿ ಇಡೀ ಜಗತ್ತು ತಲ್ಲಣಗೊಂಡಿತ್ತು. ಜಗತ್ತಿನ ಸಾರ್ವಭೌಮತ್ವಕ್ಕಾಗಿ ಒಂದೆಡೆ ಅಮೆರಿಕಾ ಮತ್ತೊಂದೆಡೆ ರಷ್ಯಾ ಪರಸ್ಪರ ಬಣಗಳನ್ನು ರಚಿಸಿಕೊಂಡ ಬಳಿಕ ಬಿಗಡಾಯಿಸಿದ ಯುದ್ಧದ ಪರಿಸ್ಥಿತಿ, ಬಲಿ ತೆಗೆದುಕೊಂಡ ಜೀವಗಳ ಸಂಖ್ಯೆ ಅಸಂಖ್ಯಾತ. ದೃಷ್ಟಿ ಹಾಯಿಸಿದಷ್ಟೂ ಹೆಣಗಳ ರಾಶಿ, ಗಾಯಾಳುಗಳ ಚೀರಾಟ, ಆರ್ತನಾದ. ಎಲ್ಲೆಲ್ಲೂ ಸ್ಮಶಾನ ಸದೃಶ ವಾತಾವರಣ. ಪ್ರಸ್ತುತ ಜಗತ್ತಿನಲ್ಲೂ ಯುದ್ಧವೊಂದು ನಡೆಯುತ್ತಿದೆ.
ಹಾಲಿ ಬಂದು ವಕ್ಕರಿಸಿರುವ ಕೊರೋನಾ ಎಂಬ ಪೀಡೆ ಅಘೋಷಿತ ಹಾಗೂ ಶಸ್ತ್ರರಹಿತ ಮೂರನೇ ಮಹಾ ಯುದ್ಧದ ವಾತಾವರಣವನ್ನು ನಿರ್ಮಿಸಿದೆ. ಗಡಿಗಳಿಗಾಗಿ, ಶಸ್ತ್ರಾಸ್ತ್ರಗಳಿಗಾಗಿ, ದೊಡ್ಡ ದೊಡ್ಡ ಭೂಪಟಗಳಿಗಾಗಿ ಹೋರಾಡಿದ ರಾಷ್ಟ್ರಗಳಾದಿಯಾಗಿ ಇಂದು ಇಡೀ ಜಗತ್ತೇ ಒಂದು ಬಣ, ಇದರ ವಿರೋಧಿ ಬಣವೇ ಕೊರೋನಾ ಎಂಬ ಮಹಾಮಾರಿ ಮತ್ತು ಸಂಹಾರಿ ವೈರಸ್. ಹೀಗೆ ತನ್ನ ಶಕ್ತಿ, ಪರಾಕ್ರಮಗಳನ್ನು ತೋರಿಸಲು ಹೊರಟಿದ್ದ ರಾಷ್ಟ್ರಗಳೆಲ್ಲ ಇಂದು ಸಂಪೂರ್ಣ ಸ್ತಬ್ಧವಾಗಿವೆ.
ಇಡೀ ವಿಶ್ವವನ್ನೇ ಕ್ಷಣ ಮಾತ್ರದಲ್ಲಿ ಬಲಿ ತೆಗೆದುಕೊಳ್ಳುವ ಶಸ್ತ್ರಗಳು, ಪರಮಾಣು ಬಾಂಬ್ಗಳು ಬದಿಗಿರಲಿ, ಪ್ರಾಣ ಉಳಿಸಿಕೊಳ್ಳಲು ಅಗತ್ಯವಾದ ಕನಿಷ್ಠ ಆಕ್ಸಿಜನ್ ಮಾಸ್ಕ್ಗಳನ್ನೂ ಸಹ ಸಜ್ಜುಗೊಳಿಸಲಾಗದೆ ಕೆಲವು ರಾಷ್ಟ್ರಗಳು ಇಂದು ನಲುಗುತ್ತಿವೆ. ಹೀಗೆ ಅತ್ಯಂತ ವೇಗವಾಗಿ ರಣಕೇಕೆ ಹಾಕುತ್ತಾ ದಾಂಗುಡಿ ಇಡುತ್ತಿರುವ ಕೊರೋನಾದ ಭೀಕರತೆಯನ್ನ ನೋಡಿದಾಗ ಮನುಷ್ಯನ ಜೀವನ ನೀರಿನ ಮೇಲೆ ಗುಳ್ಳೆಯಂತೆ ಎಂಬ ಮಾತು ಸತ್ಯವೆನಿಸುತ್ತಿದೆ.
ಇಂದೂ – ಅಂದೂ ಅಲಿಪ್ತ ನೀತಿ
ಮಹಾ ಯುದ್ಧದ ನಂತರ ಜರುಗಿದ ಶೀತಲ ಯುದ್ಧದ ಸಂದರ್ಭದಲ್ಲಿ ಜಗತ್ತಿನಲ್ಲಿ ಮತ್ತದೇ ಬಣಗಳ ಗೋಳು. ಆಗ ತಾನೇ ಸ್ವತಂತ್ರ್ಯ ಪಡೆದುಕೊಂಡಿದ್ದ ನಮ್ಮ ದೇಶ ಅಂತಹ ಸಂದರ್ಭದಲ್ಲಿ ಜಗತ್ತಿನೊಂದಿಗೆ ವ್ಯವಹರಿಸಲು ಬಳಸಿದ ದಾಳವೇ ಈ ಅಲಿಪ್ತ ನೀತಿ. ಶಾಂತಿಪ್ರಿಯರಾದ ಭಾರತೀಯರು, ಅಂದು ಯಾವುದೇ ಯುದ್ಧೋತ್ಸಾಹಿಗಳ ಗುಂಪು ಸೇರದೇ, ಬದಲಾದ ಸನ್ನಿವೇಶದಲ್ಲಿ ಅವರಿಂದ ಅನೇಕ ಪ್ರಯೋಜನಗಳನ್ನು ಪಡೆದಿದ್ದು ನಿಜ. ಕೊರೋನಾ ಸಮರದ ಸನ್ನಿವೇಶದಲ್ಲಿ ಭಾರತದ ಹೆಜ್ಜೆ ಇಂದು ಅದೇ ಆಗಿದೆ.
ವಿಪರ್ಯಾಸವೆಂಬಂತೆ ನಮ್ಮ ಸಂಶೋಧನೆಯಿಂದಾದ ಅನೇಕ ಜೀವ ರಕ್ಷಕ ಔಷಧಿಗಳಿಗಾಗಿ ಇಂದು ಆರ್ಥಿಕವಾಗಿ ಅತ್ಯಂತ ಬಲಿಷ್ಠವಾಗಿರುವ ರಾಷ್ಟ್ರಗಳೆಲ್ಲಾ ದುಂಬಾಲು ಬಿದ್ದಿವೆ. ಭಾರತ ಮಾತ್ರ ಇಂದಿಗೂ ಏಕಾಂಗಿಯಾಗಿಯೇ ಕೊರೋನಾ ವಿರುದ್ಧ ತೊಡೆ ತಟ್ಟಿದೆ. ಅಲ್ಲದೇ ಅನೇಕ ರಾಷ್ಟ್ರಗಳ ಕೈಯನ್ನೂ ಹಿಡಿಯುತ್ತಿದೆ. ಬದುಕು, ಬದುಕಲು ಬಿಡು ಎಂಬಂತೆ ಈ ಔದಾರ್ಯವಂತ ರಾಷ್ಟ್ರದ ಗುಣ ಇದೀಗ ಮತ್ತೊಮ್ಮೆ ಸಾಬೀತಾಗಿದೆ.
ರೇಸ್ನಲ್ಲಿ ಗೆಲುವು ಯಾರಿಗೆ?
ಕೆಲವು ದಿನಗಳ ಹಿಂದೆ ಇಡೀ ಮನುಕುಲವೇ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕಾಲದ ಪರಿವೇ ಇಲ್ಲದೆ ಅದೆಲ್ಲಿಗೆ ರೇಸ್ ಓಡುತ್ತಿತ್ತೋ ತಿಳಿಯದು. ಇದೀಗ ಕೊರೋನಾ ಆ ಚಕ್ರಕ್ಕೊಂದು ಬ್ರೇಕ್ ಹಾಕಿದೆ. ಬೆಳ್ಳಂಬೆಳಗ್ಗೆಯೇ ಕಿವಿಗಡಚಿಕ್ಕುವ ಕಾರ್ಖಾನೆಗಳ ಸದ್ದು, ಇನ್ನೊಂದೆಡೆ ಜೀವನ ಕಟ್ಟಿಕೊಳ್ಳಲು ಹೊರಟ ಕೋಟ್ಯಾಂತರ ಮಂದಿಯ ವಾಹನಗಳ ದಂಡು, ಅಲ್ಲಲ್ಲಿ ಸಾತ್ವಿಕರು, ಆಸ್ತಿಕರು, ಒಂದಷ್ಟು ಸಮಾಜಮುಖೀ ಚಿಂತನೆಯುಳ್ಳವರ ಸಮೂಹ, ಮಗದೊಮ್ಮೆ ಸಂಪತ್ತಿನ ಶೇಖರಣೆಯ ಹಪಹಪಿಗೆ ಬಿದ್ದ ಸ್ವಾರ್ಥಿಗಳ ಹಿಂಡು, ಮಗ್ಗುಲಿಗೆ ಹೊರಳಿದರೆ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ದಗಲ್ಬಾಜಿ, ಭೂಗತ ಲೋಕ, ಪಾಪಿಗಳ ಕೂಪ.
ಅಬ್ಬಬ್ಬಾ ! ಇದಾಗಿತ್ತಾ ಜಗತ್ತಿನ ಓಟ? ಆದರೀಗ ಇದನ್ನೆಲ್ಲಾ ಹಿಂದಿಕ್ಕಿ ಆರ್ಭಟಿಸುತ್ತಾ, ಕೇಕೇ ಹಾಕುತ್ತಾ ನಾಗಾಲೋಟದಿಂದ ಓಡುತ್ತಿರುವುದು ಕೊರೋನಾ ಮಾತ್ರ ! ಈ ರನ್ನಿಂಗ್ ರೇಸ್ ನಿಜಕ್ಕೂ ಭೀಕರ ಹಾಗೂ ಆಘಾತಕಾರಿ. ಸ್ನೇಹ, ಸಂಬಂಧಗಳ ಮೌಲ್ಯವನ್ನು ಮರೆತು ಸಾಗುತ್ತಿದ್ದ ಯಂತ್ರ ‘ಮಾನವ’ರಂತಹ ಜೀವಿಗಳ ಜೀವ ಹಿಂಡಲು ಬಂದಿರುವ ಈ ಸಾವಿನ ಓಟದಲ್ಲಿ ಸದ್ಯಕ್ಕಂತೂ ಗೆಲುವು ಸಾಧಿಸುತ್ತಿರುವುದು ಕೊರೋನಾ ಮಾತ್ರ ಎಂಬುದು ಕಟು ಸತ್ಯ. ಹೀಗೂ ಪಂದ್ಯ ಗೆಲ್ಲಬಹುದೆಂದು ತಿಳಿಸುತ್ತಿದೆ ಈ ನಂಜು. “ಮಾನವ ಜನ್ಮ ಬಹು ದೊಡ್ಡದು, ಅದನ್ನು ಹಾಳು ಮಾಡಿಕೊಳ್ಳದಿರಿ ಹುಚ್ಚಪ್ಪಗಳಿರಾ” ಎಂದು ಇದಕ್ಕೇ ಹೇಳಿರುವುದು ದಾಸ ಶ್ರೇಷ್ಠರು.
ಶಸ್ತ್ರಾಸ್ತ್ರಗಳಿಗಿಂತ ಔಷಧಿಯೇ ಮುಖ್ಯವಾಗಿದೆ
ಅಮೆರಿಕಾದ ಮಾಜಿ ಅಧ್ಯಕ್ಷರಾದ ಐಸನ್ ಹೋವರ್ ಶಸ್ತ್ರಾಸ್ತ್ರ ಪೈಪೋಟಿಯನ್ನು ಕುರಿತು ಹೀಗೆ ವ್ಯಾಖ್ಯಾನಿಸುತ್ತಾರೆ “ಈ ಜಗತ್ತು ಶಸ್ತ್ರಾಸ್ತ್ರಗಳ ತಯಾರಿಕೆಗೆ ಸುರಿಯುತ್ತಿರುವ ಭಾರೀ ಪ್ರಮಾಣದ ಹಣ ಮೇಧಾವಿ ವಿಜ್ಞಾನಿಗಳ ಜ್ಞಾನವನ್ನು, ಮಕ್ಕಳ ಸುಂದರ ಭವಿಷ್ಯದ ಕನಸನ್ನು, ಕಾರ್ಮಿಕರ ಶ್ರಮವನ್ನು ಪೋಲು ಮಾಡುತ್ತಿದೆ”. ಪ್ರಸ್ತುತ ಜಗತ್ತಿನ ಪರಿಸ್ಥಿತಿ ನೋಡಿದರೆ ಇದು ನಿಜವೆನಿಸುತ್ತದೆ. ಇದೀಗ ಜಗತ್ತಿನೆಲ್ಲೆಡೆ ಜೀವ ರಕ್ಷಕ ಔಷಧಿಗಳ ತೀವ್ರ ಕೊರತೆ ಎದುರಾಗಿದೆ. ದೇಶಗಳು ತಮ್ಮ ರಕ್ಷಣೆಯ ವಿಚಾರ ಬಂದಾಗ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ನಿಜ.
ಆದರೆ ಅವು ಗುಣಾತ್ಮಕ ಮತ್ತು ಪ್ರಮಾಣಾತ್ಮಕವಾಗಿರಬೇಕಷ್ಟೆ. ಹೀಗಾಗಿ ಇಂದು ಜಗತ್ತಿನೆಲ್ಲೆಡೆ ಶಸ್ತ್ರಾಸ್ತ್ರಗಳಿಗಿಂತ ತುರ್ತಾಗಿ ಅಗತ್ಯವಿರುವ ಔಷಧಿಗಳನ್ನ ಅಭಿವೃದ್ಧಿಪಡಿಸುವ ಹೊಣೆ ಕೇಳಿಬರುತ್ತಿದೆ. ಹಾಲಿ ಜಗತ್ತಿನಲ್ಲಿ ಕೊರೋನಾ ವೈರಸ್ಗಿಂತ ದೊಡ್ಡ ಅಸ್ತ್ರ ಯಾವುದೂ ಇಲ್ಲವೆನ್ನುವಂತಾಗಿದೆ. ಸಮಸ್ತ ವಿಶ್ವದಲ್ಲಿಂದು ಕೊರೋನಾ ಯುದ್ಧ ಮಾಡುತ್ತಿದೆ. ಈ ಯುದ್ಧ ಗೆಲ್ಲಲು ಬೇಕಿರುವುದು ಭಾರೀ ಅನಾಹುತ ಸೃಷ್ಟಿಸಬಲ್ಲ ಪರಮಾಣು ಬಾಂಬ್ ಅಥವಾ ಕಿಲೋಮೀಟರ್ಗಟ್ಟಲೆ ಚಿಮ್ಮುವ ಕ್ಷಿಪಣಿಗಳಲ್ಲ. ಬದಲಿಗೆ ಜೀವ ರಕ್ಷಕ ಔಷಧಗಳು, ಶಸ್ತ್ರ ಹಿಡಿದು ಹೋರಾಡುವ ಸೈನಿಕರಲ್ಲ; ಪ್ರಾಣ ಉಳಿಸಬಲ್ಲ ವೈದ್ಯ ಸಮೂಹ.
ಇತಿಹಾಸ ಮರುಕಳಿಸುತ್ತಿದೆ
ನಮ್ಮ ಹಿಂದೂಸ್ಥಾನದ ಅವಿಭಾಜ್ಯದ ಅಂಗಗಳಾದ ವೇದೋಪನಿಷತ್ತುಗಳ ಬಗ್ಗೆ ನಮಗೆಲ್ಲಾ ತಿಳಿದೇ ಇದೆ. ವೇದಗಳ ಕಾಲದ ಜನರು ಅತ್ಯಂತ ಸಾತ್ವಿಕರು, ದೈವ ಭಕ್ತಿಯುಳ್ಳವರು, ಪರಸ್ಪರ ಸಹಕಾರ ಮನೋಭಾವ ಉಳ್ಳವರೂ ಆಗಿದ್ದರು. ಅಂದಿನ ಅವರ ಜೀವನ ಪದ್ಧತಿ, ವಿದ್ಯಾಭ್ಯಾಸ, ಧಾರ್ಮಿಕ ಆಚರಣೆಗಳು, ಸ್ನಾನ, ಮಡಿ, ಮೈಲಿಗೆ, ಸಂಪ್ರದಾಯಗಳು, ಪುಷ್ಟಿ ಕೊಡುತ್ತಿದ್ದ ಆಹಾರ ಪದ್ಧತಿ, ವಿಹಾರ ಎಲ್ಲವೂ ವಿಶಿಷ್ಟ ಹಾಗೂ ವಿಭಿನ್ನ. ನಮಗೆ ಅರಿವಿದ್ದಂತೆ ಅವರೆಲ್ಲಾ ನಿಸರ್ಗದ ಆರಾಧಕರಾಗಿದ್ದರು.
ಜೀವ ಜಗತ್ತು ತತ್ತರಿಸುವ ಹೋಗಿರುವ ಸದರಿ ಕೊರೊನಾ ಕಾಲದಲ್ಲಿ ಜನತೆಗೆ ಇಂದು ಎಲ್ಲಿಲ್ಲದ ದೈವ ಭಕ್ತಿ, ಶುಚಿತ್ವದ ಅರಿವು, ದೇಸೀ ಆಹಾರದತ್ತ ಆಸಕ್ತಿ, ಹೀಗೆ ನಾನ ಬಗೆಯ ಪರಿಕಲ್ಪನೆಗಳತ್ತ ಮನಸ್ಸು ಹಾಯುತ್ತಿದೆ. ದುರದೃಷ್ಟವಶಾತ್ ಇಂತಹ ಯೋಚನೆ ಹಾಗೂ ಯೋಜನೆಗಳು ಎಂದೋ ಬರಬೇಕಿತ್ತಷ್ಟೇ. ಇತಿಹಾಸ ಮರುಕಳಿಸುತ್ತದೆ ಎಂಬ ಪ್ರಸಿದ್ಧ ಹೇಳಿಕೆಗೆ ಇಂದು ಜೀವ ಬಂದಂತಾಗಿದೆ. ಜೀವನ ಶೈಲಿಯ ಬಗ್ಗೆ ಇರಬೇಕಾದ ಕಿಂಚಿತ್ ಪ್ರಜ್ಞೆಯನ್ನೂ ಮರೆತಿದ್ದ ಮನುಷ್ಯರಿಗಿಂದು ಕೊರೋನಾ ಒಂದು ಪಾಠ ಕಲಿಸುತ್ತಿರುವುದಂತೂ ಸತ್ಯ.
ಕೊರೋನಾ ಒಂದೆಡೆ ತನ್ನ ಸಾವಿನ ಗಂಟೆಯನ್ನು ಬಾರಿಸುತ್ತಲೇ ಸಾಗುತ್ತಿದೆ ಮತ್ತೊಂದೆಡೆ ಜಂಕ್ ಫುಡ್ಗಳ ಮೊರೆ ಹೋಗಿ ಸಣ್ಣ ವಯಸ್ಸಿನಲ್ಲೇ ಇಹಲೋಕ ಯಾತ್ರೆ ಮಾಡುತ್ತಿದ್ದ ಅನೇಕ ಜನರ ಪ್ರಾಣವನ್ನೂ ಉಳಿಸುತ್ತಿದೆ. ಒಂದರ್ಥದಲ್ಲಿ ಕೊರೋನಾ ಅತ್ಯಂತ ಕ್ರೂರಿಯೂ ಹೌದು, ಅದರ ವಿರುದ್ಧ ಹೋಗದವರಿಗೆ ಪರೋಕ್ಷವಾಗಿ ರಕ್ಷಕನೂ ಹೌದು !
ಸಮರ ಸೇನಾನಿಗಳಿಗೊಂದು ಸೆಲ್ಯೂಟ್
ಜಗತ್ತನ್ನು ಕಿತ್ತು ತಿನ್ನುತ್ತಿರುವ ಕೊರೋನಾ ವೈರಸ್ಸನ್ನು ಬಡಿದೋಡಿಸುವಲ್ಲಿ ಶ್ರಮಿಸುತ್ತಿರುವ ವೈದ್ಯರು, ರಕ್ಷಣೆಗೆ ನಿಂತಿರುವ ಪೊಲೀಸರು ಮತ್ತು ಇಡೀ ಜಗತ್ತಿಗೆ ಅನ್ನವನಿಕ್ಕುತ್ತಿರುವ ನಮ್ಮ ಅನ್ನದಾತರ ಪಾತ್ರ ಅತ್ಯಂತ ಶ್ಲಾಘನೀಯ. ಒಂದಡೆ ತಮ್ಮ ಜೀವ ಹಾಗೂ ಜೀವನವನ್ನೇ ಪಣಕ್ಕಿಟ್ಟು ಕೋಟ್ಯಾಂತರ ಸೋಂಕಿತರನ್ನು ಶುಶ್ರೂಷೆ ಮಾಡುತ್ತಿರುವ ವೈದ್ಯ ಸಮೂಹ, ಇನ್ನೊಂದೆಡೆ ಹಗಲಿರುಳೆನ್ನದೆ ಸೋಂಕು ತಗಲುದಂತೆ ಇಡೀ ಜಗತ್ತನ್ನೇ ನಿಯಂತ್ರಿಸುತ್ತಿರುವ ಪೊಲೀಸ್ ಸಮೂಹ, ಮಗದೊಂದೆಡೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನಿಸ್ವಾರ್ಥವಾಗಿ ಇಡೀ ಜಗಕ್ಕೇ ಅನ್ನವನಿಕ್ಕುತ್ತಿರುವ ರೈತ ಬಾಂಧವರನ್ನು ಈ ಭೂ ಖಂಡ ಎಂದಿಗೂ ಮರೆಯುವಂತಿಲ್ಲ.
ತಲ್ಲಣಗೊಂಡಿರುವ ಜಗತ್ತಿಗೆ ನಿಜಕ್ಕೂ
ಮಾತೃವಿನಂತೆ ಸಾಂತ್ವನ ಹೇಳುತ್ತಿದೆ ಈ ಸಮುದಾಯ. ವೈದ್ಯ ತಂದೆ ತಾಯಿಯನ್ನೂ ಮುಟ್ಟದೆ ರೋಧಿಸುತ್ತಿರುವ ಪುಟಾಣಿಗಳ ಕರುಳು ಹಿಂಡುವ ದೃಶ್ಯ, ಮನೆ ಮಠ ಎಲ್ಲವನ್ನೂ ಮರೆತು, ಕೊನೆಗೆ ತಮ್ಮ ರಕ್ಷಣೆಯ ಬಗ್ಗೆಯೂ ಚಿಂತಿಸದೆ ಎಡಬಿಡದೆ ದುಡಿಯುತ್ತಿರುವ ಪೊಲೀಸರ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಒಂದು ವೇಳೆ ವೈದ್ಯರೇನಾದರೂ ಸುಮ್ಮನಾದರೆ ಮಣ್ಣು ಸೇರಬೇಕಾಗುತ್ತದೆ, ಹಾಗೆಯೇ ನಮ್ಮೆಲ್ಲರ ಅನ್ನದಾತ ಕೈ ಚೆಲ್ಲಿ ಕುಳಿತರೆ ಮಣ್ಣು ತಿನ್ನಬೇಕಾಗುತ್ತದೆ.
ಇವರೊಟ್ಟಿಗೆ ಕೊರೋನಾ ನಿರ್ಮೂಲನಕ್ಕಾಗಿ ಸೆಣಸಾಡುತ್ತಿರುವ ಅನೇಕ ದಾದಿಯರು, ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿಗಳು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಜ ಸೇವೆಗೈಯುತ್ತಿರುವ ಸಮಾಜ ಸೇವಕರು, ಚಾಲಕರು ಇನ್ನಿತರರಿಗೂ ಈ ಮೂಲಕ ಗೌರವವನ್ನು ಸಲ್ಲಿಸೋಣ.ಸಂಪೂರ್ಣ ಜಗತ್ತಿಗೇ ಕೊರೊನಾ ಬೀಗ ಹಾಕಿರುವ ಈ ಸಂದರ್ಭದಲ್ಲಿ ನಾವು ಇಂದು ನಿಜಕ್ಕೂ ಇವರನ್ನೆಲ್ಲಾ ದೇವರಿಗಿಂತಲೂ ಮಿಗಿಲಾಗಿ ಆರಾಧಿಸಬೇಕಿದೆ ಮತ್ತು ಅವರ ವೃತ್ತಿಗಳನ್ನು ಮರ್ಯಾದಿಸಬೇಕಿದೆ.
ಇನ್ನೂ ಕಲಿಯಬೇಕಿದೆ ಜಾತ್ಯಾತೀತ ಹಾಗೂ ಧರ್ಮಾತೀತ ಪಾಠ
ಶತಮಾನಗಳ ಹಿಂದೆಯೇ ನಮ್ಮ ಈ ಜಗತ್ತು ಕಂಡ ಮಹಾನ್ ದಾರ್ಶನಿಕರಾದ ಆಚಾರ್ಯ ಸಮುದಾಯ, ಬುದ್ಧ, ಬಸವಣ್ಣ, ಮಹಾವೀರ, ಅಂಬೇಡ್ಕರ್ ಹಾಗೂ ಅನೇಕ ದಾಸವರೇಣ್ಯರು ವಿವಿಧ ಬಗೆಯ ಸಮಾನತೆಯ ಬಗ್ಗೆ ಮಾತನಾಡಿದ್ದರು. ಇವರಲ್ಲದೆ ಅನೇಕ ಕವಿಗಳು, ಬುದ್ಧಿಜೀವಿಗಳು, ಸಮಾಜ ಸುಧಾರಕರು, ಸಂವಿಧಾನಗಳು, ಸರ್ಕಾರಗಳು ಇದನ್ನೇ ಸಾರಿ ಹೇಳಿರುವುದು ಅತಿಶಯೋಕ್ತಿಯೇನಲ್ಲ. ಆದರೆ ಮನುಷ್ಯ ಜೀವಿ ಇದನ್ನೆಲ್ಲಾ ಮರೆತು ತನ್ನದೇ ಆದ ಹಮ್ಮು-ಬಿಮ್ಮುಗಳೊಂದಿಗೆ ಸಾಗುತ್ತಿದ್ದ.
ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲಯನೇನಾದರು ಬಲ್ಲಿರಾ? ಎಂಬ ದಾಸ ವಾಣಿಯನ್ನು ಮರೆತು ಸಾಗುತ್ತಿದ್ದ. ಆದರೆ ಈಗ ಆರ್ಭಟಿಸುತ್ತಿರುವ ಕೊರೋನಾ ಪೀಡೆಗೆ ಜಾತಿ, ಮತ, ಧರ್ಮ ಯಾವುದೂ ಲೆಕ್ಕಕ್ಕಿಲ್ಲ. ಅದರ ಉದ್ದೇಶ ಅತ್ಯಂತ ಕ್ರೂರವಾದ ಬಲಿಯಷ್ಟೇ. ಅಂತಹ ಅನಪೇಕ್ಷಿತ ಮತ್ತು ದುರಂತಕಾರಿ ತತ್ವಗಳನ್ನು ಬದಿಗಿಟ್ಟು ಇಂದು ಎಲ್ಲರೂ ಸೇರಿ ಕೊರೋನಾ ವಿರುದ್ಧದ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಬೇಕಿದೆ. ನೆನಪಿರಲಿ, ಕೊರೋನಾ ನೋಡುವುದು ಜಾತಿ ಅಥವಾ ಧರ್ಮವನ್ನಲ್ಲ, ಬದಲಿಗೆ ಮನುಷ್ಯನ ಚರ್ಮ !! ಸೋಂಕಿತರ ಸ್ಪರ್ಶವಾಯಿತೆಂದರೆ ಸಾಕು, ಆಯಸ್ಸು ಅಡ್ಡಗೋಡೆಯ ಮೇಲೆ ದೀಪವಿಟ್ಟಂತಾಗುತ್ತದೆ.
ಈಗಲಾದರೂ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಕುವೆಂಪುರವರ ಗೀತೆಯ ಸಾರವನ್ನು ತಿಳಿಯಬೇಕಿದೆ ಹಾಗೂ ಅದೇ ಹಾದಿಯಲ್ಲಿ ಅರಿತು ನಡೆಯಬೇಕಿದೆ. ಎಲ್ಲೆಡೆ ಇಂದು ಇದೇ ದನಿ ಮಾರ್ದನಿಗೊಳ್ಳಬೇಕಿದೆ. ಜೀವ ಉಳಿಸಲು ಹೊರಟಿರುವ ವೈದ್ಯರು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯಗಳು ನಿಲ್ಲಬೇಕಿದೆ. ಅಂತಹ ವಿಚ್ಛಿದ್ರಕಾರಿ ಗುಂಪುಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಲೂ ಬೇಕಿದೆ. ಇಲ್ಲವಾದಲ್ಲಿ ಇಷ್ಟು ವರ್ಷಗಳ ಕಾಲವಿದ್ದ ನಾಗರೀಕ ಸಮಾಜ ಇದೇನಾ? ಎಂಬ ಪ್ರಶ್ನೆ ಉದ್ಭವಿಸದೆ ಇರಲಾರದು.
ನಿಲ್ಲಬೇಕಿದೆ ಪ್ರತಿಭಾ ಪಲಾಯನ
ಬದುಕುವುದಕ್ಕಾಗಿ ಹಣ ಬೇಕೇ ಹೊರತು, ಹಣಕ್ಕಾಗಿಯೇ ಬದುಕಬಾರದೆಂಬುದು ಅತ್ಯಂತ ಜನಪ್ರಿಯವಾದ ಮಾತು. ಮನುಷ್ಯನ ಆಯಸ್ಸು ಕ್ಷೀಣಿಸುತ್ತಿರುವ ಈ ಜಾಯಮಾನದ ಮನುಷ್ಯರು ಈ ಮಾತನ್ನು ಮರೆತು ಸಾಗುತ್ತಿದ್ದಾರೆ. ಹೆತ್ತ ತಾಯಿ, ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬಂತೆ ಮಾತೃ ಭೂಮಿಯ ಋಣ ತೀರಿಸಲು ಇರುವ ಏಕೈಕ ಅವಕಾಶವೇ ಪ್ರತಿಭಾ ಪಲಾಯನವನ್ನು ಮಾಡದಿರುವುದು.
ಅಖಂಡ ಹಿಂದೂಸ್ಥಾನಕ್ಕೆ ಸೇರಿದ ಸಾವಿರಾರು ಮಂದಿ ವೈದ್ಯರು, ವಿಜ್ಞಾನಿಗಳು, ಶಿಕ್ಷಕರು, ಕೌಶಲ್ಯಗಾರರು ಇನ್ನಿತರರು ದೇಶ ತೊರೆದು ಹೋಗಿ, ಪರದೇಶಗಳಲ್ಲಿ ಜೀವನ ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ಆದರೆ ಭಾರತದ ಉಪಖಂಡಕ್ಕೆ ಇಂತವರ ಅಗತ್ಯತೆ ತುಂಬಾ ಇದೆ. ಅವರೆಲ್ಲಾ ಇಲ್ಲೇ ಇದ್ದುಕೊಂಡು ಮಾತೃ ಭೂಮಿಗೆ ಸೇವೆ ಸಲ್ಲಿಸುವ ಕೈಂಕರ್ಯ ಮಾಡಿದ್ದರೆ ಈ ವೇಳೆಗೆ ನಮ್ಮ ದೇಶದ ಕೀರ್ತಿ ಇನ್ನಷ್ಟು ವಿಸ್ತರಿಸಿ, ವ್ಯಾಪಿಸುತ್ತಿತ್ತು. ಹಿರಿಯೊಬ್ಬರು ಹೇಳಿದ್ದು ನೆನಪು, “ಇಂದಿನ ಶಿಕ್ಷಣ ಪದ್ಧತಿ, ಭವಿಷ್ಯದಲ್ಲಿ ಹೇಗೆ ಕೂಲಿ ಮಾಡಿ ಜೀವನ ಸಾಗಿಸಬೇಕೆಂಬುದನ್ನಷ್ಟೇ ತಿಳಿಸುತ್ತಿದೆ” ಇಂತಹ ಅಪವಾದಗಳನ್ನು ದೂರ ಮಾಡಿ ಹೆಚ್ಚಿನ ಪ್ರಮಾಣದ ಆರ್ಥಿಕ ಚಟುವಟಿಕೆ ಮಾಡುವ ಮಂದಿಯ ಜೊತೆಜೊತೆಗೇ ಈ ಹೆಮ್ಮೆಯ ರಾಷ್ಟವನ್ನು ಬೌದ್ಧಿಕವಾಗಿಯೂ ಕಟ್ಟಿ ಬೆಳೆಸುವ ಪಟುಗಳ ಅಗತ್ಯ ನಮಗಿಂದು ಇದೆ.
ವಿಪರ್ಯಾಸವೆಂಬಂತೆ ನಮ್ಮ ದೇಶವನ್ನು
ಧಿಕ್ಕರಿಸಿ ಹೋದ ಲಕ್ಷಾಂತರ ಜನರು ಇಂದು ಪ್ರಾಣ ಉಳಿಸಿಕೊಳ್ಳಲು ಪರದೇಶಗಳಿಂದ ಪುನಃ ತಾಯ್ನಾಡಿಗೆ ಮರಳುವಂತಾಗಿದೆ. ಅವಕಾಶಗಳು ಬೇಕೆಂದರೆ ಅವುಗಳನ್ನು ನಾವುಗಳೇ ಸೃಷ್ಟಿಸಿಕೊಳ್ಳಬೇಕೇ ಹೊರತು, ಪಲಾಯನ ಮಾಡುವುದು ಸರಿಯಾದ ಧೋರಣೆಯಲ್ಲ. ಈ ಹಿನ್ನೆಲೆಯಲ್ಲಿ ಇನ್ನಾದರೂ ಪ್ರತಿಭಾ ಪಲಾಯನ ನಿಂತು ಜಗತ್ತಿನ ಮುಂಚೂಣಿ ರಾಷ್ಟ್ರಗಳು ನಮ್ಮತ್ತ ತಿರುಗಿ ನೋಡುವಂತೆ ಮಾಡುವ ಕಾಲ ಸನ್ನಿಹಿತವಾಗಬೇಕಿದೆ.
ಆಗಿಂದಾಗ್ಗೆ ಬೇಕಿದೆ ಸ್ವಯಂಪ್ರೇರಿತ ಲಾಕ್ಡೌನ್
ವಿಶ್ವಸಂಸ್ಥೆ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳು ಇಂದು ನಮ್ಮ ಲಾಕ್ಡೌನ್ ನಿಲುವನ್ನು ಅಂಗೀಕರಿಸಿ ನಮ್ಮದೇ ಹಾದಿಯನ್ನು ತುಳಿಯುತ್ತಿವೆ. ಇಂದಿನ ಸ್ಮಶಾನ ಸದೃಶ ವಾತಾವರಣದಲ್ಲಿ ಕೊರೋನಾಕ್ಕೆ ‘ಛೀಮಾರಿ’ ಹಾಕಲು ಲಾಕ್ಡೌನ್ ಒಂದೇ ನಿಜವಾದ ಔಷಧಿಯಾಗಿದೆ. ಇದರಿಂದ ನಮಗೆ ಅನಾನುಕೂಲಗಳು ಹೆಚ್ಚು ಆಗಿದ್ದರೂ, ನಮ್ಮ ಹೆಮ್ಮೆಯ ಪ್ರಧಾನಿಯವರಾದ ಮೋದಿಯವರು ಹೇಳಿದಂತೆ ಇಂದು ನಾವು ಜೀವ ಉಳಿಸಿಕೊಂಡರೆ ಮುಂದೆ ಜೀವನ ಎನ್ನುವಂತಾಗಿದೆ. ಒಂದೆಡೆ ಕೊರೋನಾದಿಂದ ಸಾವು ಹೆಚ್ಚುತ್ತಲೂ ಇದೆ, ಮತ್ತೊಂದೆಡೆ ವಿಶ್ವವೇ ಹೊಸ ಚಿಗುರೊಡೆದಂತೆ ಭಾಸವಾಗುತ್ತಿದೆ.ಪ್ರಕೃತಿ ಮಾತೆ ನಳನಳಿಸುತ್ತಿದ್ದಾಳೆ.
ಪ್ರತಿನಿತ್ಯ ನಡೆಯುತ್ತಿದ್ದ ದರೋಡೆ, ಕೊಲೆ. ಅತ್ಯಾಚಾರಗಳು, ಭೀಕರ ಅಪಘಾತಗಳು, ಅಗಣಿತ ಪ್ರಮಾಣದ ವಾಯು ಮಾಲಿನ್ಯ, ಜಲಮಾಲಿನ್ಯ, ಶಬ್ಧಮಾಲಿನ್ಯಗಳು ನಿಂತು ಜಗತ್ತಿನ ನಯನಗಳು ತೆರೆದುಕೊಂಡಿವೆ. ನಮಗೂ ಬದುಕಲು ಬಿಡಿ ಎಂದು ಕೂಗುತ್ತಿದ್ದ ಕೋಟ್ಯಂತರ ಜೀವಿಗಳು ಇಂದು ಸಮಾಧಾನಿಸುತ್ತಿವೆ. ಆದ್ದರಿಂದ ಇಂತಹ ಲಾಕ್ಡೌನ್ನ್ನು ಆಗಿಂದಾಗ್ಗೆ ನಾವೇ ಮಾಡಿಕೊಂಡಲ್ಲಿ ಈ ಭೂ ಗ್ರಹ ಇನ್ನೊಂದಷ್ಟು ದಿನ ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ಸಕಲ ಚರಾಚರಗಳ ನಾಶವೂ ತಪ್ಪುತ್ತದೆ. ಅಂತೆಯೇ ಮುಂದಿನ ಪೀಳಿಗೆಯವರಿಗೂ ಈ ಭೂ ಗ್ರಹವನ್ನು ಹಸ್ತಾಂತರಿಸಲು ಕಾರಣವಾಗುತ್ತದೆ.
–ಕುಮಾರಸ್ವಾಮಿ.ವಿ.ಕೆ
ಹವ್ಯಾಸಿ ಬರಹಗಾರರು, ವಿರುಪಾಪುರ,
ಸುಗ್ಗನಹಳ್ಳಿ ಅಂಚೆ, ತಿಪ್ಪಸಂದ್ರ ಹೋಬಳಿ,
ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.
ಮೊಬೈಲ್ : 9113906120, 9740840678
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ
ಸುದ್ದಿದಿನ,ಚನ್ನಗಿರಿ: ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯು ಸೋಮೌಅರ ನವಿಲೇಹಾಳು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿಯಾಗಿ ಗ್ರಾಮಸಭೆಯನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಗ್ರಾಮಸಭೆ ಎಂಬುದು ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಚರ್ಚಿಸಿ, ಗ್ರಾಮದ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರೂಪಿಸುವ ಪ್ರಮುಖ ವೇದಿಕೆಯಾಗಿರುವುದರಿಂದ, ಗ್ರಾಮಸಭೆಯ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು PDO ಅವರಿಗೆ ಮನವಿ ಮಾಡಲಾಯಿತು.
ಅದರಂತೆ ಗ್ರಾಮಸಭೆಯ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಟಾಂಟಾಂ/ಧ್ವನಿವರ್ಧಕದ ಮೂಲಕ ಗ್ರಾಮದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುವುದರ ಜೊತೆಗೆ, ಸಾರ್ವಜನಿಕರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸಭೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸುವಂತೆ ತಿಳಿಸಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ಸೃಷ್ಟಿಗೆ ಒತ್ತು
ಇದೇ ಸಂದರ್ಭದಲ್ಲಿ ಮನರೇಗಾ (MGNREGA) ಯೋಜನೆಯಡಿ ಗ್ರಾಮದ ಅರ್ಹ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಯಿತು.
ಗ್ರಾಮಸ್ಥರು ಉದ್ಯೋಗಕ್ಕಾಗಿ ಅನಿವಾರ್ಯವಾಗಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗದಂತೆ, ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ಲಭ್ಯವಿರುವ ಕೆಲಸಗಳನ್ನು ಸಮರ್ಪಕವಾಗಿ ಗುರುತಿಸಿ, ಅರ್ಹರಿಗೆ ನಿಯಮಾನುಸಾರ ಉದ್ಯೋಗ ಒದಗಿಸಬೇಕು ಎಂದು ತಿಳಿಸಲಾಯಿತು.
ಪ್ರಸ್ತುತ ಬತ್ತದ ನಾಟಿ ಕಾರ್ಯಕ್ಕೆ ಅಗತ್ಯವಿರುವ ನೀರಿನ ಸಮಸ್ಯೆಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಗಳು ಲಭ್ಯವಿಲ್ಲದ ಅವಧಿಯಲ್ಲಿ ಗ್ರಾಮಸ್ಥರಿಗೆ ಮನರೇಗಾ ಸೇರಿದಂತೆ ಇತರೆ ಸರ್ಕಾರಿ ಯೋಜನೆಗಳ ಮೂಲಕ ಉದ್ಯೋಗ ಒದಗಿಸಿ, ಗ್ರಾಮದಲ್ಲಿಯೇ ಆದಾಯದ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಲಾಯಿತು.
ಗ್ರಾಮದಲ್ಲಿಯೇ ಉದ್ಯೋಗ ದೊರೆತರೆ ಗ್ರಾಮಸ್ಥರ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ, ಗುಳೆ ಹೋಗುವುದನ್ನು ತಡೆಯಲು ಹಾಗೂ ಗ್ರಾಮದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು PDO ಅವರ ಗಮನಕ್ಕೆ ತರಲಾಯಿತು.
ಇತರೆ ಗ್ರಾಮಾಭಿವೃದ್ಧಿ ವಿಚಾರಗಳ ಚರ್ಚೆ
ಇದರ ಜೊತೆಗೆ ನವಿಲೇಹಾಳ ಗ್ರಾಮದ ವಿವಿಧ ಅಭಿವೃದ್ಧಿ ಸಮಸ್ಯೆಗಳು, ಸಾರ್ವಜನಿಕರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ಉದ್ಯೋಗಾವಕಾಶಗಳು, ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು PDO ಅವರೊಂದಿಗೆ ಚರ್ಚಿಸಲಾಯಿತು.
ಗ್ರಾಮಸ್ಥರಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಸಮರ್ಪಕವಾಗಿ ತಲುಪುವಂತೆ ಪಾರದರ್ಶಕವಾಗಿ ಹಾಗೂ ನಿಯಮಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಗ್ರಾಮಸಭೆಯಲ್ಲಿ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆ, ಸ್ಥಳೀಯ ಉದ್ಯೋಗ ಸೃಷ್ಟಿ ಹಾಗೂ ಗ್ರಾಮಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ನವಿಲೇಹಾಳ ಗ್ರಾಮವನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
“ಗ್ರಾಮದ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಒಗ್ಗೂಡಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಗ್ರ ಗ್ರಾಮಾಭಿವೃದ್ಧಿ ಸಾಧ್ಯ.”
ಗ್ರಾಮದ ಜನರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ನವಿಲೇಹಾಳ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ (ರಿ.) ನಿರಂತರವಾಗಿ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ದಾವಣಗೆರೆ ಜಿಲ್ಲಾಧ್ಯಕ್ಷರಾದ ಜಾಫರ್ ರವರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
~ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ
ಆಗಸ್ಟ್ ದಿನಾಂಕ 8 ಮತ್ತು 9ನೇ ತಾರೀಕು,ಸಾಹಿತ್ಯದ ಬೃಹತ್ ಹಡಗೊಂದು ಶ್ರೀಮಂತನಗರಿ ದಾವಣಗೆರೆ. ಜ್ಞಾನದ ಗೂಡು ಸಾಹಿತ್ಯ ಕಲಾರಸಿಕರ ಬೀಡು. ವಿವಿಧ ಖಾದ್ಯಗಳ ರಸದೌತಣದ ನಾಡು,ಸರಸ್ವತಿ ನೆಲೆಸಿದ ನಾಡು ದಾವಣಗೆರೆ.
ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಬಹು ತಾಳ್ಮೆಯ ಕುಟುಂಬವನ್ನು ನಿರ್ವಹಿಸಿಕೊಂಡು ಸಂಸಾರದ ನೌಕೆಯನ್ನು ಸಾಗಿಸುತ್ತಾ ಅದರ ಜೊತೆಗೆ ತಮ್ಮ ಮನೋರಂಜನೆ ಸಾಹಿತ್ಯ ಸಮಾಜ ಜ್ಞಾನ ವಿಜ್ಞಾನಗಳ ಸಕಲ ಕಲಾವಿದ್ಯೆಗಳಲ್ಲಿ ತೊಡಗಿಸಿಕೊಂಡಿರುವ ನಮ್ಮೆಲ್ಲರ ಮಹಿಳೆಯರ ಪರವಾಗಿ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ಒಂದು ಅತ್ಯದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ ಶ್ರೀ ಬಿ ವಾಮದೇವಪ್ಪ ತೊಗಲೇರಿ ಅಧ್ಯಕ್ಷರ ಸಮ್ಮುಖದಲ್ಲಿ ಈ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು . ಸಮ್ಮೇಳನದ ಅಧ್ಯಕ್ಷರು ಮಹಾಪೋಷಕರು ಡಾಕ್ಟರ್ ಪ್ರಭಾ ಮಲ್ಲಿಕಾರ್ಜುನ್, ಹಾಗೆಯೇ ಉದ್ಘಾಟಕರಾಗಿ ಮಹಿಳಾ ಆಯೋಗದ ಡಾಕ್ಟರ್ ನಾಗಲಕ್ಷ್ಮಿ ಚೌದರಿ, ಪ್ರಧಾನ ಸಂಚಾಲಕರು ರಾಜ ಯೋಗಿನಿ ಬ್ರಹ್ಮಕುಮಾರಿ ನೀಲಾಜಿ ಅವರೆಲ್ಲರಿಗೂ ಸ್ವಾಗತವನ್ನು ಬಯಸುತ್ತಾ ,
ಸ್ವಾಗತ ಸಮಿತಿ, ಹಣಕಾಸು ಸಮಿತಿ ,ಸಾಹಿತ್ಯ ಸಮಿತಿ, ಆಹಾರ ಸಮಿತಿ ,ಸಾಂಸ್ಕೃತಿಕ ಸಮಿತಿ ,ವೇದಿಕೆ ಸಮಿತಿ, ಸ್ಮರಣ ಸಂಚಿಕೆ ಸಮಿತಿ, ಪ್ರಚಾರ ಸಮಿತಿ, ಶಿಸ್ತು ಸಮಿತಿ ಮೆರವಣಿಗೆ ಸಮಿತಿ,ಪುಸ್ತಕ ಮಳಿಗೆ ಸಮಿತಿ ,ಅತಿಥಿ ಸತ್ಕಾರ ಸಮಿತಿ, ಸ್ಪರ್ಧಾ ಸಮಿತಿ, ಎಲ್ಲದಕ್ಕೂ ಸಹಕಾರ ಕೊಟ್ಟಂತಹ ಶ್ರೀ ಸಮರ್ಥ್ ಶಾಮನೂರ್ ಮಲ್ಲಿಕಾರ್ಜುನ್ ಶಾಸಕರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ, ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳು.
ಎಲ್ಲ ಕಾರ್ಯಕ್ರಮಗಳನ್ನು ಸುಸಜ್ಜಿತವಾಗಿ ನಡೆಸಿ ಕೊಡುತ್ತಿರುವ ಶ್ರೀಮತಿ ಸುಮತಿ ಜಯಪ್ಪ, ಶ್ರೀಮತಿ ಯಶಾ ದಿನೇಶ್ ,ಶ್ರೀಮತಿ ವೀಣಾ ಕೃಷ್ಣಮೂರ್ತಿ , ಶ್ರೀಮತಿ ಸತ್ಯಭಾಮ ಮಂಜುನಾಥ್, ಶ್ರೀಮತಿ ಮಲ್ಲಮ್ಮ ಎಂ ಎಸ್ ,ಶ್ರೀಮತಿ ನೀಲಗುಂದ ಜಯಮ್ಮ, ಶ್ರೀಮತಿ ಜಯಲಕ್ಷ್ಮಿ ಮಹೇಶ್, ಶ್ರೀಮತಿ ಪ್ರೇಮ ಸೋಮಶೇಖರ್ ಹೇಮ ಗಣೇಶ್ ಶೇಟ್, ಸುನಿತಾ ಪ್ರಕಾಶ್, ವರದಿಗಾರರಾದ ಭಾರತಿ ಎಚ್ ,ಹಾಗೆ ಎ ಬಿ ರುದ್ರಮ್ಮ, ಆಮಂತ್ರಣ ಪತ್ರಿಕೆ ಎಲ್ಲಾ ಗೆಳತಿಯರು ಇವರೊೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುತ್ತಿರುವ ಎಲ್ಲ ಪ್ರತಿಭೆಗಳಿಗೂ ಹಾಗೂ ಕವಿಗೋಷ್ಠಿ ಕವಿತೆಗಳನ್ನು ವಾಚಿಸುವವರೆಗೂ ಹಾಗೆಯೇ ಸಾಹಿತ್ಯ ರತ್ನ ಪ್ರಶಸ್ತಿ ಪ್ರಧಾನ, ಪಡೆಯುತ್ತಿರುವ ಎಲ್ಲ ಸಹೋದರಿಯರಿಗೂ ಅಭಿನಂದನೆಗಳು ಹಾಗೆ ಎಲ್ಲ ಮಹಿಳಾ ಮಣಿಗಳ ಆಗಮನಕ್ಕೆ ಶುಭವನ್ನು ಕೋರುತ್ತಿರುವ ಶ್ರೀಮತಿ ವೀಣಾ ಮಹಂತೇಶ್ ಬಿ ಎಮ್ ದಾವಣಗೆರೆ.
ಶ್ರೀಮತಿ ವೀಣಾ ಮಹಾಂತೇಶ್ ಬಿ ಎಂ ಲೇಖಕಿ ಆಪ್ತ ಸಮಾಲೋಚಕಿ. ದಾವಣಗೆರೆ.

ದಿನದ ಸುದ್ದಿ
ನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
ಸುದ್ದಿದಿನ,ದಾವಣಗೆರೆ: “ತಮ್ಮ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾವು ಮುಖ್ಯಮಂತ್ರಿಯಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು, ನಾನು ಡಿ.ಕೆ ಶಿವಕುಮಾರ್ ಅವರ ಮನೆಮಗ, ಶಿವನ ಮುಂದೆ ಇರುವ ಬಸವ ನಾನು. ನಾನೇ ಮುಖ್ಯಮಂತ್ರಿ ಇದ್ದಂತೆ, ಮನೆ ಮಗನಿಗೆ ಯಾವಾಗಲೂ ಅವರ ಆಶೀರ್ವಾದ ಇದ್ದೇ ಇರುತ್ತದೆ ಎಂದಿದ್ದಾರೆ.
ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಮುಖ್ಯಮಂತ್ರಿ ಅಲ್ಲ. ಆದರೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರ ಬಂದಾಗ ಮುಖ್ಯಮಂತ್ರಿಯಂತೆ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದೇನೆ. ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ,” ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ ಅವರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತಿದೆ ಎಂದರು.
“ಜನಪ್ರತಿನಿಧಿಯಾಗಿ ಚುನಾಯಿತರಾದ ಬಳಿಕ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ಗ್ರಾಮಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಗತ್ಯ ಅನುದಾನ ತರುವ ಪ್ರಯತ್ನ ಮಾಡಲಾಗಿದೆ. ಕುಡಿಯುವ ನೀರಿನ ಯೋಜನೆಗಳು, ರಸ್ತೆ ಅಭಿವೃದ್ಧಿ, ಶಾಲೆಗಳ ಮೂಲಸೌಕರ್ಯ ಸುಧಾರಣೆ ಸೇರಿದಂತೆ ಹಲವು ಕಾಮಗಾರಿಗಳಿಗೆ ವೇಗ ನೀಡಲಾಗಿದೆ,” ಎಂದು ಹೇಳಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ನೀರಾವರಿ ಹಾಗೂ ರೈತರಿಗೆ ಅನುಕೂಲಕರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಸರ್ಕಾರದ ಅಭಿವೃದ್ಧಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗಬಾರದು ಎಂಬುದು ತಮ್ಮ ಉದ್ದೇಶವಾಗಿದೆ ಎಂದು ಶಾಸಕರು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, “ಟೀಕೆಗಳು ಪ್ರಜಾಪ್ರಭುತ್ವದ ಭಾಗ. ಆದರೆ ಅಭಿವೃದ್ಧಿಯೇ ನಮ್ಮ ಉತ್ತರ. ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಹಾಗೂ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನಮ್ಮ ಗುರಿಯಾಗಿದೆ,” ಎಂದರು.
ಕ್ಷೇತ್ರದ ಜನರು ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರು ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಸಂಪರ್ಕಿಸಬಹುದು. ಜನಸೇವೆಗಾಗಿ ತಮ್ಮ ಕಚೇರಿ ಸದಾ ತೆರೆದಿರುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ5 days agoಪ್ರಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ : ಸರ್ವ ಕ್ಷೇತ್ರದಲ್ಲಿಯೂ ರಾರಾಜಿಸುವ ಶಿಖರ ಶಿರೋಮಣಿಗಳು
-
ದಿನದ ಸುದ್ದಿ5 days agoನಾನೇ ಮುಖ್ಯಮಂತ್ರಿ ಇದ್ದಂತೆ : ಶಾಸಕ ಶಿವಗಂಗಾ ಬಸವರಾಜ್
-
ದಿನದ ಸುದ್ದಿ6 days agoದಾವಣಗೆರೆ ವಿಶ್ವವಿದ್ಯಾಲಯ | ಗುಣಮಟ್ಟದ ಸಂಶೋಧನೆ ಶೈಕ್ಷಣಿಕ ಪ್ರಗತಿ – ಜಾಗತಿಕ ಮಾನ್ಯತೆಯ ಮೂಲಾಧಾರ : ಕುಲಪತಿ ಪ್ರೊ. ಬಿ. ಇ. ರಂಗಸ್ವಾಮಿ
-
ದಿನದ ಸುದ್ದಿ14 hours agoಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯಿಂದ ನವಿಲೇಹಾಳು ಗ್ರಾಮ ಪಂಚಾಯಿತಿಗೆ ಭೇಟಿ ; ಗ್ರಾಮಸಭೆ – ಗ್ರಾಮಾಭಿವೃದ್ಧಿಗೆ ಮನವಿ

