ದಿನದ ಸುದ್ದಿ
ಭೀಮೋದ್ಯಮಿಗಳ ಯಶೋಗಾಥೆ : ಚಿನ್ನ-ಬೆಳ್ಳಿ ಪ್ರಮೋದ್ ಎಂಬ ದಲಿತ ಯುವಕನ ಸಕ್ಸೆಸ್ ಸ್ಟೋರಿ
- ನಾಗರಾಜ್ ಹೆತ್ತೂರ್
ಬದುಕಿಗಾಗಿ ಚಿನ್ನ ಗಿರವಿ ಇಟ್ಟವ ಮುಂದೊಂದು ದಿನ ಚಿನ್ನದಂಗಡಿಯ ಮಾಲೀಕನಾದ. ಕೇವಲ 95 ಸಾವಿರದಿಂದ 70 ಕೋಟಿ ವ್ಯವಹಾರ ನಡೆಸುವ ಪ್ರಮೋದ್ ಅವರು,
- ಅಂಬೇಡ್ಕರ್ ಇಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ
- ಕೇವಲ 95 ಸಾವಿರದ ಮೂಲ ಬಂಡವಾಳ ಈಗ ವಾರ್ಷಿಕ 70 ಕೋಟಿ ವ್ಯವಹಾರ
- ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು
ಅದು 1995 ರ ಇಸವಿ. ಡಿಗ್ರಿ ಓದುತ್ತಿದ್ದ ಆ ಯುವಕನ ತಲೆಯಲ್ಲಿ ಏನಾದರೂ ಬ್ಯುಸಿನೆಸ್ ಮಾಡಬೇಕೆಂಬ ಹಂಬಲ. ಮದ್ಯಾಹ್ನ ಕಾಲೇಜು ಮುಗಿಯುತ್ತಿತ್ತು. ಆ ಸಮಯದಲ್ಲಿ ಏನು ಮಾಡು ವುದು? ತಲೆಯಲ್ಲಿ ನೂರೆಂಟು ಯೋಚನೆ. ಕಾಲೇಜು ನಡುವೆ ಪಾರ್ಟ್ ಟೈಂ ಗೆ ಸೇರಿಕೊಂಡಿದ್ದು ಜ್ಯೂಯಲರಿ ಶಾಪ್ ಒಂದಕ್ಕೆ ಕೆಲಸಗಾರನಾಗಿ. ಕಣ್ಣೆದುರಿಗೆ ಇದ್ದ ಚಿನ್ನವನ್ನು ನೋಡಿದಾಗ ಇದು ನಮ್ಮಂತಹವರಿಗಲ್ಲ ಅಂದುಕೊಂಡಿದ್ದೆ ಹೆಚ್ಚು. ಇಷ್ಟಕ್ಕೂ ದಲಿತರು ಚಿನ್ನ ಬೆಳ್ಳಿ ಕ್ಷೇತ್ರದಲ್ಲಿ ಕಾಲಿರಿಸಿ ಉಳಿದುಕೊಳ್ಳುವುದುಂಟೆ? ಚಿನ್ನ, ಬೆಳ್ಳಿ ಉದ್ಯಮ ಎಂದರೆ ಅದು ಮಾರ್ವಾಡಿ, ಸೇಠುಗಳ ಉದ್ಯಮ. ಆ ಉದ್ಯಮದಲ್ಲಿ ದಲಿತರು ಕಾಲುಡಲು ಸಾಧ್ಯವೇ ..? ಹಾಗೆ ಸುಮ್ಮನೆ ನೆನಪಿಸಿಕೊಳ್ಳಲೂ ಅಸಾಧ್ಯದ ಮಾತು.
ವಾಸ್ತವದಲ್ಲಿ ಯಾವ ದಲಿತ ಕುಟುಂಬದಿಂದ ಬಂದವನೂ ಕಲ್ಪಿಸಿಕೊಂಡಿರುವುದೂ ಇಲ್ಲ. ಆದರೆ ಆ ಯುವಕ ಯಾರೂ ತುಳಿಯದ ಹಾದಿಯಲ್ಲಿ ಹೋಗಲು ಬಯಸಿದ್ದ. ಅಲ್ಲಿ 2 ವರ್ಷ ಕೆಲಸ ಮಾಡಿದ್ದಾಯಿತು. ಅನುಭವ ಪಡೆದಿದ್ದೂ ಆಯಿತು. ಅಷ್ಟರಲ್ಲಿ ಡಿಗ್ರಿ ಮುಗಿದಿತ್ತು. ನಾನೇಕೆ ಚಿನ್ನಬೆಳ್ಳಿ ಕ್ಷೇತ್ರಕ್ಕೆ ಕಾಲಿಡಬಾರದು…,? ನಾನೂ ಒಂದು ಜ್ಯೂಯಲರಿ ಅಂಗಡಿ ತೆರಯಬಾರದೇಕೆ? ಅದೊಂದು ದಿನ ಈ ಯೋಚನೆ ತಲೆಗೆ ಹೊಳೆದಿತ್ತು. ಅದೊಂದು ದಿನ ಆ ಕೆಲಸಕ್ಕೆ ಕೈ ಹಾಕಿದ ಆ ಹುಡುಗ ಮತ್ತೆ ಹಿಂದೆ ನೋಡಲೇ ಇಲ್ಲ.
ಸ್ನೇಹಿತರೊಬ್ಬರು ಗಿರವಿ ಇಟ್ಟು ಕೊಟ್ಟ ಐವತ್ತು ಸಾವಿರ ರೂಪಾಯಿ ಮತ್ತು ಬ್ಯಾಂಕ್ನಿಂದ ಕೊಟ್ಟ ತೊಂಬತ್ತೈದು ಸಾವಿರ ರೂಪಾಯಿಯಲ್ಲಿ ಆರಂಭಿಸಿದ ಚಿನ್ನ ಬೆಳ್ಳಿ ವಹಿವಾಟು ಇಂದು ವರ್ಷಕ್ಕೆ ಐವತ್ತು ಕೋಟಿ ವಹಿವಾಟು ನಡೆಸುತ್ತಿದೆ. ಜಾತಿ- ಧರ್ಮಗಳನ್ನು ಮೀರಿ ಆ ಯುವಕ ಒಬ್ಬ ಯಶಸ್ವಿ ಉದ್ಯಮಿಯಾಗಿ ಹೊರ ಹೊಮ್ಮಿದ್ದಾರೆ. ನಂಬಿಕೆ ಮತ್ತು ಕೆಲಸದ ಮೇಲೆ ಶ್ರದ್ಧೆ ಇದ್ದರೆ ದಲಿತರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದು ತೋರಿಸಿದ್ದಾರೆ ಹಾಸನದ ಆಕಾಶ್ ಜ್ಯೂಯಲರ್ಸ್ ಮಾಲೀಕ ಬಿ.ಎನ್ ಪ್ರಮೋದ್. ಅವರು ಬೆಳೆದ ಪರಿಯನ್ನು ಅವರ ಬಾಯಿಂದಲೇ ಕೇಳೋಣ:
ಕೈಯ್ಯಲ್ಲಿ ಬಿಡಿಗಾಸಿಲ್ಲದೇ ಆರಂಭಿಸಿದ ಆಕಾಶ್ ಜ್ಯೂಯಲರ್ಸ್
ಪಾರ್ಟ್ ಟೈಂ ನಲ್ಲಿ ನಾನು ಕೆಲಸ ಮಾಡ ಬೇಕೆಂದು ಓಡಾಡುತ್ತಿದ್ದಾಗ ಇಲ್ಲೊಬ್ಬರು ರಾಜಾಸ್ತಾನದವರಿದ್ದರು. ಅಂಗಡಿ ಹೆಸರು ಮನೋಜ ಬ್ಯಾಂಕರ್ಸ್ನ ಮಾಲೀಕ ಶಾಂತಿ ಲಾಲ್ ಗುಲ್ ಗುಲಿಯಾ ಅವರ ಹತ್ತಿರ ಸೇರಿಕೊಂಡೆ. ಡಿಗ್ರಿಗೆ ಹೋಗುತ್ತಲೇ ಫ್ರೀ ಟೈಂ ನಲ್ಲಿ ಅಂಗಡಿಯಲ್ಲಿ ಪಾರ್ಟ್ ಟೈಂ ಕೆಲಸವನ್ನು 2 ವರ್ಷ ಮಾಡಿದೆ. ಒಳ್ಳೆ ಅನುಭವ ಸಿಕ್ಕಿತು. ನಾವೇ ಏಕೆ ಮಾಡಬಾರದು ಎಂದು ಮನಸ್ಸಾಯಿತು. ಪಾರ್ಟ್ನರ್ ಯಾರೂ ಇರಲಿಲ್ಲ, ಮನೆಯಲ್ಲಿ ಬಡತನ. ಕೈಯ್ಯಲ್ಲಿ ಹಣವಿಲ್ಲ. ಆದರೂ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡೆ. ಆಗ ನನ್ನೊಂದಿಗೆ ಇದ್ದದ್ದು ಆತ್ಮವಿಶ್ವಾಸ ಮಾತ್ರ.
ದುಡ್ಡಿಗೆ ಏನು ಮಾಡುವುದು ಎಂದು ಯೋಚಿಸಿದಾಗ ನನ್ನ ಕೈ ಹಿಡಿದವರು ದೂಪ ಪೇಪರ್ ಏಜೆನ್ಸಿ ನಡೆಸುತ್ತಿದ್ದ ದೊರೆಸ್ವಾಮಿ. ಜೀವನದಲ್ಲಿ ಅವರನ್ನು ಮರೆಯುವಂತೆಯೇ ಇಲ್ಲ. `ಸಾರ್ ಅಂಗಡಿ ಮಾಡುತ್ತಿದ್ದೇನೆ’ ಅವರು ಮರು ಮಾತ ನಾಡಲಿಲ್ಲ. ಯಾಕೆಂದರೆ ನನ್ನ ಮೇಲೆ ಅವರಿಗೆ ನಂಬಿಕೆ ಇತ್ತು. ಅವರ ಮನೆಯಲ್ಲಿದ್ದ ಚಿನ್ನ ಅಡವಿಟ್ಟು 50 ಸಾವಿರ ತಂದುಕೊಟ್ಟರು.
ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಅದನ್ನು ತೆಗೆದುಕೊಂಡು ಹೋಗಿ ಅಡ್ವಾನ್ಸ್ ಕೊಟ್ಟೆ. ಇನ್ನೊಬ್ಬರಿಗೆ ಗಿರವಿ ಇಟ್ಟು ತಂದ ಹಣದಲ್ಲಿ ಒಂದು ಸಣ್ಣ ಟೇಬಲ್- ಕುರ್ಚಿ ಹಾಕಿಕೊಂಡು ಕಳಿತೆವು. ಆಗ ಶುರುವಾಗಿದ್ದು ಆಕಾಶ್ ಜ್ಯೂಯಲರ್ಸ್. ನನ್ನ ಈ ಉದ್ಯಮದ ಹಿಂದೆ ಬೆನ್ನೆಲುಬಾಗಿ ನಿಂತವರು ಶಾಂತಿ ಲಾಲ್ ಗುಲ್ ಗುಲಿಯಾ. ಅವರನ್ನೂ ಎಂದೂ ಮರೆಯುವಂತಿಲ್ಲ.
ದಲಿತರು ಜ್ಯೂಯಲರಿ ಶಾಪ್ ಮಾಡುತ್ತಾರಾ ಎಂದು ನಕ್ಕು ಅವಮಾನಿಸಿದ್ದರು
ಅಂಗಡಿ ತೆರೆದಿದ್ದಾಯಿತು, ಮೂಲ ಬಂಡವಾಳ ಬೇಕಲ್ಲವೇ..? ನಂತರ ಪಿಎಂಆರ್ ವೈ ಪ್ರಧಾನಮಂತ್ರಿ ಜವಹಾರ್ಲಾಲ್ ಯೋಜನೆಗೆ ಅರ್ಜಿ ಹಾಕಿದೆ. ಆಗಲೂ ಒಂದು ಕತೆ. ನಮ್ಮವರು (ದಲಿತರು) ಡಿಫಾಲ್ಟರ್ ಆಗಿದ್ದರು, ನೀವು ಸರಿಯಾಗಿ ಹಣ ಕಟ್ಟುವುದಿಲ್ಲ ನಿಮಗೆ ಕೊಡುವುದಿಲ್ಲ ಎಂದರು.
ಮೊದಲನೆಯದಾಗಿ ನಾನು ಸೆಲೆಕ್ಟೆ ಆಗಲಿಲ್ಲ. ಕಾರಣ, ಜ್ಯುಯಲರಿ ಶಾಪ್ ಮಾಡುವುದು ಅದು ದಲಿತರು…? ನನ್ನ ಮಾತು ಕೇಳಿ ಅಲ್ಲಿನ ಆಯ್ಕೆ ಸಮಿತಿ ಅಧಿಕಾರಿಗಳು ನಕ್ಕು ಅವಮಾನ ಮಾಡಿ ಕಳುಹಿದ್ದರು. ಅದೊಂದು ಅಪರಾಧ` ಎಂಬಂತೆ ನನ್ನ ನೋಡಿದ್ದರು. `ಅದು ನಿಮ್ಮಂತಹವರಿಗಲ್ಲ ಹೋಗಯ್ಯ’ ಎಂದು ಕುಹಕವಾಡಿದ್ದರು. ಇನ್ನೂ ಹೇಳುವುದಾದರೆ ಸರಕಾರದಿಂದ ಇಂತಹ ಸ್ಕೀಂ ಗೆ ಸಾಲವೇ ಇರಲಿಲ್ಲ.
ದಿ.ಚಂದ್ರ ಪ್ರಸಾದ್ ತ್ಯಾಗಿ ಹೇಳಿ ಸಾಲ ಕೊಡಿಸಿದರು
ಆಗ ನನಗೆ ನೆನಪಾಗಿದ್ದು ದಿ. ಚಂದ್ರಪ್ರಸಾದ್ ತ್ಯಾಗಿ. ಅಗವರು ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿದ್ದರು. ಅವರ ಮನೆಗೆ ಹೋಗಿ ವಿಚಾರ ಹೇಳಿದೆ. ಆಗವರು ಡಿಐಸಿ ಅಧಿಕಾರಿಗಳಿಗೆ ಕರೆ ಮಾಡಿ ಚಿನ್ನ ಬೆಳ್ಳಿ ಅಂಗಡಿ ತೆರೆಯಲು ಯಾರಾದರೂ ದಲಿತರು ಅರ್ಜಿ ಹಾಕಿದ್ದಾರೆನ್ರಿ ಎಂದು ವಿಚಾರಿಸಿದರು.
ಅವರ ಮಾತಿಗೆ ಒಪ್ಪಿದ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ಸೆಲೆಕ್ಷನ್ ಮಾಡಿಸಿದರು. ಅಲ್ಲಿ ಸೆಲೆಕ್ಟ್ ಆದೆ. ಆದರೆ ಬ್ಯಾಂಕಿನಲ್ಲಿ ಮತ್ತೆ ರಿಜೆಕ್ಟ್ . ವಿಜಯ ಬ್ಯಾಂಕಿನ ಮೆನೆಜರ್ `ನಿಮ್ಮವರು ಕಟ್ಟುವುದಿಲ್ಲ ಹೋಗ್ರಿ ‘ಎಂದುಬಿಟ್ಟರು. ನಾನು ಅವರೆದುರು ನಿಂತು ನೇರವಾಗಿಯೇ ಹೇಳಿದೆ ಸಾರ್ ಕೊಡಿ, ನನಗೆ ಬೇರೆಯವರ ಕತೆ ಗೊತ್ತಿಲ್ಲ. ನಾನು ಕಟ್ಟುತ್ತೇನೆ ಎಂದೆ.
ಕೇವಲ 95 ಸಾವಿರದ ಮೂಲ ಬಂಡವಾಳ
ಅದೇನೋ ನನ್ನ ಅದೃಷ್ಟ. ಏಳೂವರೆ ಸಾವಿರ ಸಬ್ಸಿಡಿ ಸೇರಿ 95 ಸಾವಿರದ ಚೆಕ್ ಕೊಟ್ಟರು ಅದೇ ನನ್ನ ಮೂಲ ಬಂಡವಾಳ. ಇದನ್ನು ತೀರಿಸಲು 7 ವರ್ಷ ಬೇಕು. ಆದರೆ ಶೃದ್ಧೆಯಿಂದ ಕೆಲಸ ಮಾಡಿದೆ. ಯಶಸ್ಸು ಸಿಕ್ಕಿತು. 3 ವರ್ಷಕ್ಕೆ ಸಾಲ ತೀರಿಸಿದೆ. ನನಗೆ ಸಾಲ ಕೊಟ್ಟ ಮ್ಯಾನೇಜರ್ ಬೆಂಗಳೂರಿನಲ್ಲಿ ಚೀಪ್ ಮ್ಯಾನೆಜರ್ ಆಗಿದ್ದರು.
ಹೋಗಿ ಅವರಿಗೆ ಕೊಟ್ಟೆ. ಅವರು ಅಚ್ಚರಿಯಿಂದ ಕೂರಿಸಿಕೊಂಡು ಮಾತನಾಡಿಸಿದರು. ಅವರಿಗೆ ಹೇಳಿದೆ `ನಮ್ಮಂತಹವರು ಬಂದರೆ ಕೊಡಿ’ ಕೆಲವರು ಹಾನೆಸ್ಟ್ ಆಗಿರುತ್ತಾರೆ ಎಂದೆ. ಆ ಮೆನೆಜರ್ ಈಗ ನಿವೃತ್ತಿ ಆಗಿದ್ದಾರೆ. ಆದರೆ ಇವತ್ತಿಗೂ ನಮ್ಮ ಕಸ್ಟಮರ್. ಈಗಲೂ ಬರುತ್ತಾರೆ ಈಗವರು ಮಂಗಳೂರಿನಲಿದ್ದಾರೆ. ಅತಿ ಕಡಿಮೆ ಹಣ ಹಾಕಿ ಈ ಎತ್ತರಕ್ಕೆ ಬೆಳೆದೆ. ಇದು ಬೆಳೆದು ಬಂದ ಹಾದಿ ಇದು ಎನ್ನುತ್ತಾರೆ ಪ್ರಮೋದ್.
ಪೆಟ್ರೋಲ್ ಬಂಕ್ ಮಾಲೀಕರಾಗಿಯೂ ಯಶಸ್ವಿ
ಒಂದು ಚಿಕ್ಕ ಅಂಗಡಿ ಮಾಡಿದ್ದು. 13 ವರ್ಷ ಕೆಲಸ ಮಾಡಿದೆ. ಇಂದು ದೊಡ್ಡ ಶೋರೂಂ ಮಾಡಿದ್ದೇನೆ. ಮಂಗಳೂರಿನಲ್ಲಿ ಪೆಟ್ರೋಲ್ ಬಂಕ್ ಮಾಡಿದ್ದೇನೆ. ಅದರಲ್ಲೂ ಯಶಸ್ವಿಯಾದೆ. 25 ರಿಂದ 30 ಮಂದಿಗೆ ಕೆಲಸ ಕೊಟ್ಟಿದ್ದೇನೆ. ತಿಂಗಳಿಗೆ ಲಕ್ಷಾಂತರ ರುಪಾಯಿ ಸಂಬಳ ನೀಡುತ್ತೇನೆ. ವಾರ್ಷಿಕವಾಗಿ ಏನಿಲ್ಲವೆಂದರೂ 80 ಕೋಟಿ ವಹಿವಾಟು ನಡೆಯುತ್ತಿದೆ ಎನ್ನುತ್ತಾರೆ.
ಚಿನ್ನ ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯಾಗಿ
ಚಿನ್ನ -ಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯೂ ಆಗಿರುವ ಅವರು, ಅಸೋಸಿಯೇಷನ್ ಆರಂಭದಿಂದಲೇ ಇದ್ದವರು. ವರ್ತಕರೊಂದಿಗೆ ತಮ್ಮ ಒಡನಾಟದ ಬಗ್ಗೆ ಹೇಳುವುದಿಷ್ಟು `ನಾವು ಎಲ್ಲರೊಂದಿಗೆ ಚೆನ್ನಾಗಿರಬೇಕು, ಮೇಲಾಗಿ ಇತರೆ ವರ್ಗದವರೊಂದಿಗೆ ಬೆಳೆಯಬೇಕು. ಇದಕ್ಕಾಗಿ ಬ್ರಾಡ್ ಮೈಂಡ್ ಬೆಳೆಸಿಕೊಳ್ಳಬೇಕು. ಇತರೆ ವರ್ಗದವರ ಜೊತೆ ಬಿದ್ದಾಗ ಹೆಚ್ಚು ಕಲಿತುಕೊಳ್ಳಬಹುದು.
ಇಲ್ಲಿ ನಂಬಿಕೆಯೇ ಮುಖ್ಯ. ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರರಾಗ ಬೇಕು.ಸತ್ಯ ಹೇಳಬೇಕೆಂದರೆ ದಲಿತರೊಂದಿಗೆ ಇದ್ದು ಬೆಳೆಯಲು ಕಷ್ಟ. ಆದರೆ ಇತರೆ ಜನಾಂಗದವರೊಂದಿಗೆ ಬೆಳೆಯಬೇಕು. ಇಲ್ಲದಿದ್ದರೆ ಎಲ್ಲಿರುತ್ತೇವೆಯೋ ಅಲ್ಲೇ. ನಾವು ಅವರಿಂದ ಕಲಿತುಕೊಳ್ಳಬೇಕು. ಯಾಕೆ ಅವರು ಬೇಗ ಮುಂದುವರೆಯುತ್ತಾರೆ ಅವೆಲ್ಲವನ್ನೂ ನೋಡ ಬೇಕು.
ಜನ ಈಗ ನನ್ನನ್ನು ಉದ್ಯಮಿಯಾಗಿ ನೋಡುತ್ತಾರೆ
ಈಗ ನನ್ನ ಕಸ್ಟಮರ್ಸ್ ಮತ್ತು ಹೊರಜಗತ್ತು ನನ್ನನ್ನು ದಲಿತ ಎನ್ನುವುದಕ್ಕಿಂತಲೂ ಒಳ್ಳೆಯ ಉದ್ದಿಮೆದಾರನಾಗಿ ನನ್ನನ್ನು ನೋಡುತ್ತಾರೆ. ಇತ್ತೀಚೆಗಷ್ಟೆ ರಾಜ್ಯ ಜ್ಯೂಯಲರಿ ಅಸೋಸಿಯಷನ್. ಇಡೀ ರಾಜ್ಯದಲ್ಲಿ ಈ ಉದ್ಯಮದಲ್ಲಿರುವ ದಲಿತರ ಪೈಕಿ ನಾನು ಮತ್ತು ಬೆಂಗಳೂರಿನಲ್ಲಿರುವ ಒಬ್ಬರು.
ಯಾವುದನ್ನು ನಾವು ಜೀವನದ ಪ್ರಮುಖ ವಸ್ತು, ಕೈಗೆಟಗದ ವಸ್ತು ಎಂದು ಕೊಂಡಿದ್ದೇವೋ ಅದೇ ಚಿನ್ನವನ್ನು ಇಂದು ಮಾರಾಟ ಮಾಡುತ್ತೇವೆ, ಇಂಪೋರ್ಟ್ ಮಾಡಿಕೊಳ್ಳುತ್ತೇವೆ. ನಮ್ಮದು ಚಿನ್ನದೊಂದಿಗೆ ಬದುಕು ಎನ್ನುವಂತಾಗಿದೆ. ಇದೇ ಚಿನ್ನವನ್ನು ಅಡ ಇಟ್ಟು ಅಂಗಡಿ ಕಟ್ಟಿದ್ದು ಎಂದರೆ ಒಂದು ಕ್ಷಣ ನಂಬಲು ಆಗುವುದಿಲ್ಲ.
ಬಡ ಕುಟುಂಬದಲ್ಲಿ ಹುಟ್ಟಿ ಕೋಟಿಗಟ್ಟಲೆ ವ್ಯವಹಾರ
ನಾನು ಹುಟ್ಟಿದ್ದು ಹಾಸನ ತಾಲ್ಲೂಕು ದೊಡ್ಡಬಾಗನಹಳ್ಳಿಯಲ್ಲಿ. ತಂದೆ ನಿಂಗಯ್ಯ, ತಾಯಿ ಜಯಮ್ಮ, ಡಿಗ್ರಿ ಮುಗಿದ ಸಂದರ್ಭ ನನ್ನ ತಂದೆ ತೀರಿಕೊಂಡರು. ಶಿಕ್ಷಣ ಇಲಾಖೆಯಲ್ಲಿ 4 ನೇ ದರ್ಜೆ ನೌಕರರಾಗಿದ್ದರು. ತೀರಿಕೊಂಡ ನಂತರ ತಂದೆಯ ಕೆಲಸ ನನಗೆ ಬಂತು, ತಿರಸ್ಕರಿಸಿದೆ. ನನಗೆ ಬಿಸಿನೆಸ್ ಮಾಡುವ ಹಂಬಲ. ಅಂದು ಮನೆಯವರೆಲ್ಲ ತುಂಬಾ ಒತ್ತಾಯ ಮಾಡಿದ್ದರು ಅವತ್ತು ಸರಕಾರಿ ಕೆಲಸಕ್ಕೆ ಹೋಗಿದ್ದರೆ ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ.
ನಾವು 4 ಜನ ಇಬ್ಬರು ಗಂಡು ಇಬ್ಬರು ಹೆಣ್ಣು. ನಾನೇ ಕೊನೆ ಯವನು ಸಹೋದರ ಜಯರಾಂ ಶಿಕ್ಷಣ ಇಲಾಖೆ ಯಲ್ಲಿ ಪ್ರಥಮ ದರ್ಜೆ ನೌಕರಾಗಿದ್ದಾರೆ. ನನ್ನ ಈ ಯಶಸ್ಸಿನ ಹಿಂದೆ ಸಹೋದರ ಜಯರಾಂ ಅವರ ಪಾತ್ರ ಬಹುಮುಖ್ಯವಾಗಿದೆ. ಹಾಗೇ ಅತ್ನಿ ಎಂಸಿಇ ಕಾಲೇಜಿನ ಪ್ರೊಫೆಸರ್ ಅತ್ನಿ ಕೃಷ್ಣ, ಹಾಗೂ ಅತ್ನಿ ಮಹದೇವ್ ಹಾಗೂ ಸ್ನೇಹಿತರ ಮಾರ್ಗದರ್ಶನ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುತ್ತಾರೆ ಪ್ರಮೋದ್.
ಬದುಕುವ ಛಲ ಇದ್ದರೆ ನಾವೂ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು
ಈ ಕ್ಷೇತ್ರದಲ್ಲಿ ಬರಲು ಐಡಿಯಾಸ್ಬೇಕು ಕೋಟ್ಯಾಂತರ ಹಣ ಬೇಡ . ಸ್ವಲ್ಪವೇ ಇದ್ದರೂ ಸಾಕು. ಈ ಕ್ಷೇತ್ರದಲ್ಲೂ ಜಯಿಸಬಹುದು ಹಾಗೆ ಆಸಕ್ತಿ ಇರುವ ಯುವಕರು ಬಂದರೆ ನಾನು ದಾರಿ ಹೇಳುತ್ತೇನೆ. ಅಂದ ಹಾಗೆ ಜ್ಯೂಯಲಿರಿ ಶಾಪ್ ಮಾಡಲೆಂದು ಸರಕಾರದಿಂದ ಯಾವ ಸ್ಕೀಮ್ ಕೂಡ ಇಲ್ಲ. ನಾನು ಇಲ್ಲಿಗೆ ಬರಲು ಸಹಾಯ ಮಾಡಿ ದವರೆಲ್ಲ ಇತರೆ ವರ್ಗದವರು, ಶೆಟ್ಟರು, ಗೌಡರು ಅವರೇ ಈ ಫೀಲ್ಡಿಗೆ ಕರೆತಂದವರು .
ಬಹುಶಃ ನಾನೇ ನಾದರೂ ನಮ್ಮ ಜಾತಿಯವರ ಜೊತೆ ಹೋಗಿದ್ದರೆ ಅವರನ್ನು ಎದುರಿಸುವುದು ಕಷ್ಟವಾಗುತ್ತಿತ್ತು ಎಂದು ಪ್ರಾಮಾಣಿಕವಾಗಿ ಹೇಳುತ್ತಾರೆ. ಚಿನ್ನ ಬೆಳ್ಳಿ ವರ್ತಕರೆಂದರೆ ಅದು ಸೇಟು, ಮಾರ್ವಾಡಿಗಳದ್ದು ಎಂಬಂತಿರುವ ಕ್ಷೇತ್ರದಲ್ಲಿ ದಲಿತ ಯುವಕನೊಬ್ಬ ಈ ಪರಿ ಬೆಳೆದು ನಿಂತಿದ್ದು ಯಶೋ ಗಾಥೆಯೇ ಸರಿ. ಉದ್ಯಮ ವಲಯಕ್ಕೆ ಹೊರಡುವರಿಗೆ ಪ್ರಮೋದ್ ಮತ್ತು ಅವರು ಕಟ್ಟಿ ಬೆಳೆಸಿದ ಆಕಾಶ ಜ್ಯೂಯಲರ್ಸ್ ಮಾದರಿಯಾಗಿದೆ ಎಂದರೆ ತಪ್ಪಿಲ್ಲ.
ಪ್ರಾಮಾಣಿಕತೆ ಮತ್ತು ತಾಳ್ಮೆ ಇದ್ದರೆ ಸಕ್ಸಸ್
ನಮ್ಮ ದಲಿತ ಯುವಕರು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ ಅದರೂ ಭಯ. ಇಲ್ಲಿ ಉಳಿದುಕೊಳ್ಳಬೇಕು ಎಂದರೆಪ್ರಾಮಾಣಿಕತೆ, ನಂಬಿಕೆ, ಆತ್ಮವಿಶ್ವಾಸ ಮತ್ತು ಶ್ರಮ ಹಾಗಿದ್ದರೆ ಮಾತ್ರ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಬಹುದು. ಅದರಲ್ಲೂ ಕಾಯುವ ತಾಳ್ಮೆ ಬೇಕು. ಇನ್ನೂ ಕೆಲವರು ಭಯದಿಂದ ಬರುತ್ತಿಲ್ಲ. ಬಜೆಟ್ ಗೆ ತಕ್ಕಂತೆ ವ್ಯವಹಾರ ಮಾಡಿ ಇತಿಮಿತಿ ಸಮಸ್ಯೆಗಳು ಬರುತ್ತವೆ. ವ್ಯಾಪಾರ ಒಂದು ಕಲೆ, ಹಾಗೆಯೇ ತಾಳ್ಮೆ ಬೇಕು ನನ್ನ ಈ ಸಕ್ಸೆಸ್ ಪ್ರಯಣದಲ್ಲಿ ಈಗ ನನ್ನ ಪತ್ನಿ ನ್ಯಾ ಕೈ ಜೋಡಿಸಿದ್ದಾರೆ.
ಬಿಇ ಕಂಪ್ಯೂಟರ್ ಸೈನ್ಸ್ ಮಾಡಿರುವ ಇವರು ನನ್ನ ಜ್ಯೂವೆಲರಿ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ವಿನೀಸ್ ಎನ್ ಪ್ರಮೋದ್ ಎಂಬ ಮಗಳಿದ್ದಾಳೆ.ಜ್ಯೂವೆಲ್ಲರಿಯನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಹಾಗೆ ನೊಂದವರಿಗೆ, ನಿರ್ಗತಿಕರಿಗೆ ಕೈಲಾದ ಸಹಾಯ ಮಾಡುತ್ತೇವೆ.
ಬಹುಮುಖ್ಯವಾಗಿ ಉದ್ಯಮ ಕ್ಷೇತ್ರಕ್ಕೆ ಬರುವರಿಗೆ ಸದಾ ಪ್ರೋತ್ಸಾಹಿಸಲು, ಯಾವುದೇ ಸಲಹೆ ಸಹಕಾರ ಕೊಡಲು ನಾನು ಸಿದ್ದನಿದ್ದೇನೆ. ಯಾರೂ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು. ಆದರೆ ಹಣವನ್ನೇ ಮಾಡಬೇಕೆಂದು ಬರಬೇಡಿ ಎನ್ನುತ್ತಾರೆ ಪ್ರಮೋದ್.
ರಾಷ್ಟ್ರಪತಿ ಕೆ.ಆರ್. ನಾರಾಯಣ್ ನನ್ನ ಬಗ್ಗೆ ಕೇಳಿ ಬೆನ್ನುತಟ್ಟಿದ್ದರು
ಅಬ್ದುಲ್ ಕಲಾಂ ಹೇಳಿದಂತೆ, ಯಾವಾಗಲೂ ನಾವು ದೊಡ್ಡ ದೊಡ್ಡ ಕನಸುಗಳನ್ನೇ ಕಾಣಬೇಕು. ನಾನು ರಾಷ್ಟ್ರಪತಿಯನ್ನು ನೋಡುತ್ತೇನೆಂದು ಅಂದುಕೊಂಡವನೂ ಅಲ್ಲ. ಆದರೆ ಕೆ.ಆರ್. ನಾರಾಯಣ್ ಅವರನ್ನು ನೋಡಿ ಕೈ ಕುಲುಕು ಮಾತನಾಡಿದ್ದರು. ಅದು ನನ್ನ ಸ್ಮರಣೀಯವಾದ ಘಟನೆ. ಹಾಗೆ ಮಂತ್ರಿಗಳಾದ ಜಾರ್ಜ್ ಫರ್ನಾಂಡಿಸ್, ಬಂಗಾರು ಲಕ್ಮಣ್ ಹಾಗೂ ದೇಶದ ನಮ್ಮ ಸಮುದಾಯದ ಎಲ್ಲಾ ಎಂಪಿಗಳನ್ನು ಒಮ್ಮೆ ಭೇಟಿ ಮಾಡಿದ್ದು ಜೀವನದ ಬಹುಮುಖ್ಯ ಘಟನೆಗಳು ಒಬ್ಬ ಉದ್ಯಮಿಯಾಗಿ ಇದೆಲ್ಲ ಸಾಧ್ಯವಾಯಿತು. ರಾಷ್ಟ್ರಪತಿ ಭವನದಲ್ಲಿ ಅವರನ್ನು ಮುಟ್ಟಿ ಮಾತನಾಡಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಹಾಗೂ ಅದ್ಭುತ ಕ್ಷಣಗಳು .
ಬಾಬಾಸಾಹೇಬರಿಲ್ಲದಿದ್ದರೆ ನಾನಿಲ್ಲ….! ಈ ಯಶಸ್ಸಿಗೆ ಅವರೇ ಕಾರಣ.
ಹೌದು…! ನನ್ನ ಎಲ್ಲಾ ಬೆಳವಣಿಗೆ, ಸಾಧನೆಯ ಯಶಸ್ಸಿನ ಹಿಂದಿನ ಆದರ್ಶ ಬಾಬಾಸಾಹೇಬ್ ಅಂಬೇಡ್ಕರ್. ಅವರೇ ನನ್ನ ದೇವರು. ಅವರು ಕೊಟ್ಟ ಭಿಕ್ಷೆಯಿಂದ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಅವರಿಲ್ಲದಿದ್ದರೆ ನಾನು ಈ ಕ್ಷೇತ್ರಕ್ಕೆ ಬರಲು ಸಾಧ್ಯವೇ ಇರುತ್ತಿರಲಿಲ್ಲ. ನನ್ನ ಮೊದಲ ಸ್ಪೂರ್ತಿ. ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ನಾನೊಬ್ಬ ಅಂಬೇಡ್ಕರ್ ಅನುಯಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
(ಪ್ರಮೋದ್ , ಆಕಾಶ್ ಜ್ಯೂಯಲರ್ಸ್ ಮಾಲೀಕರು, ಹಾಸನ ಮೊ- 9448330416)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್ ಪಠ್ಯಕ್ರಮ” ಕುರಿತ ಒಂದು ದಿನದ ಕಾರ್ಯಗಾರವನ್ನು ದಿನಾಂಕ 02-03-2026 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಲೋಕೇಶ್ ಎಂ.ಯು. ಭಾಗವಹಿಸಿ, ಎಸ್.ಇ.ಪಿ ಪಠ್ಯಕ್ರಮದ ಉದ್ದೇಶ, ವಿನ್ಯಾಸ ಮತ್ತು ಪರಿಣಾಮಕಾರಿತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್ ವಿಭಾಗದ ಸಂಯೋಜಕರಾದ ಡಾ. ಫಕ್ಕೀರೇಶ ಹಳ್ಳಳ್ಳಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಈ ಕಾರ್ಯಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯ ಬೋಧಿಸುವ ಪ್ರಾಧ್ಯಾಪಕರು ಭಾಗವಹಿಸಿ, ಪಠ್ಯಕ್ರಮದ ಅನುಷ್ಠಾನ, ಬೋಧನಾ ವಿಧಾನಗಳು ಹಾಗೂ ಮೌಲ್ಯಮಾಪನ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಸಿದರು.ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಪಠ್ಯಕ್ರಮ ಕುರಿತ ಮಹತ್ವದ ಕಾರ್ಯಗಾರ ಯಶಸ್ವಿ.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಜಯಪ್ಪ, ಡಾ. ಭೀಮಪ್ಪ, ಡಾ. ಮಹೇಶ್ ನಾಯ್ಕ್, ಡಾ.ಮಧುಸೂದನ್, ಡಾ. ವಿಜಯಕುಮಾರ್, ಡಾ. ನಾಗನಗೌಡ ಹಾಗೂ ಡಾ. ಶಿವರಾಜ್, ಡಾ. ತ್ರಿವೇಣಿ, ಡಾ. ಶಶಿಕಲಾ ಉಪಸ್ಥಿತರಿದ್ದರು.
ಐ ಕ್ಯೂ ಏ ಸಿ ಸಂಯೋಜಕರು ಮತ್ತು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಭೀಮಪ್ಪ ಎಂ ಪಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿ ಮತ್ತು ಸ್ವಾಗತಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರು ವಂದಿಸಿದರು ಮತ್ತು ಪ್ರೂ. ಮಂಜುನಾಥ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇಂಗ್ಲೀಷ್ ಮೇಜರ್ ನಲ್ಲಿ ರ್ಯಾಂಕ್ ಪಡೆದವಿದ್ಯಾರ್ಥಿನಿಯರನ್ನು ಇಂಗ್ಲಿಷ್ ವಿಭಾಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ, 4 ಸದಸ್ಯರಿರುವ ಪ್ರತಿ ಕಾರ್ಡಿಗೆ 40 ಕೆ.ಜಿ ಅಕ್ಕಿ, 5 ಸದಸ್ಯರಿರುವ ಪ್ರತಿ ಕಾರ್ಡಿಗೆ 50 ಕೆ.ಜಿ ಅಕ್ಕಿ, 6 ಸದಸ್ಯರಿರುವ ಪ್ರತಿ ಕಾರ್ಡಿಗೆ 60 ಕೆ.ಜಿ ಅಕ್ಕಿ, 7 ಸದಸ್ಯರಿರುವ ಪ್ರತಿ ಕಾರ್ಡಿಗೆ 70 ಕೆ.ಜಿ ಅಕ್ಕಿ, 8 ಸದಸ್ಯರಿರುವ ಪ್ರತಿ ಕಾರ್ಡಿಗೆ 80 ಕೆ.ಜಿ ಅಕ್ಕಿ, 9 ಸದಸ್ಯರಿರುವ ಪ್ರತಿ ಕಾರ್ಡಿಗೆ 90 ಕೆ.ಜಿ, 10 ಸದಸ್ಯರಿರುವ ಪ್ರತಿ ಕಾರ್ಡಿಗೆ 100 ಕೆ.ಜಿ ಅಕ್ಕಿಯನ್ನು ನೀಡಲಾಗುವುದು.
ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಅಂತರ್ ರಾಜ್ಯ ಅಥವಾ ಜಿಲ್ಲೆಯ ಪಡಿತರ ಚೀಟಿಗಳಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


