ಲೈಫ್ ಸ್ಟೈಲ್
‘ಗುಲ್ಕನ್’ ಮಹಿಮೆ ಅಪಾರ..!

ಗುಲ್ಕನ್ ಇದು ಗುಲಾಬಿ ಹೂವಿನ ಎಸಳುಗಳಿಂದ ಮಾಡಿದ ಒಂದು ಆರೋಗ್ಯದಾಯಕ ಜಾಮ್. ಗುಲ್ಕನ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಉತ್ತಮ ಪ್ರಯೋಜನ ಪಡೆಯಬಹುದು.ಇದರಲ್ಲಿ ವಿವಿಧ ಬಗ್ಗೆಯ ಗುಲ್ಕನ್ ಇದೇ.
ಗುಲ್ಕನ್ ಅನ್ನು ಹಲವು ರೀತಿಯಲ್ಲಿ ಬಳಸಬಹುದು
- ಕೆಲವರು ಇದನ್ನು ಬಾಯಿಯ ಅಲ್ಸರ್ ನಿವಾರಿಸಲು ಬಳಸುತ್ತಾರೆ.
- ರಕ್ತ ಶುದ್ಧಿ ಮಾಡಿ, ಚರ್ಮದಲ್ಲಿ ಸುಕ್ಕು, ಮೊಡವೆ ಮತ್ತು ಕಪ್ಪು ಕಲೆಗಳು ಮೂಡದ ಹಾಗೆ ನೋಡಿಕೊಳ್ಳುತ್ತೆ.
- ಆರಿಸಿದ ತಾಜಾ ಗುಲಾಬಿ ಎಲೆಗಳನ್ನು ತೆಗೆದುಕೊಂಡು ಅದಕ್ಕೆ ಬೆಲ್ಲ ಇಲ್ಲವೇ ಸಕ್ಕರೆ ಸೇರಿಸುತ್ತಾರೆ. ಗುಲ್ಕನ್ ತಯಾರಿಕೆಯಲ್ಲಿ ಶುಂಠಿಯನ್ನು ಬಳಸುತ್ತಾರೆ.
- ಇಂತಹ ಗುಲ್ಕನ್ ಅನ್ನು ಪ್ರತಿನಿತ್ಯ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು. ಜೊತೆಗೆ ದೇಹವನ್ನು ತಂಪಾಗಿಸುತ್ತದೆ.
- ಇದೊಂದು ಒಳ್ಳೆ ಆಂಟಿಆಕ್ಸಿಡೆಂಟ್. ಹಾಗಾಗಿ ನಮ್ಮ ದೇಹದಲ್ಲಿ ಶಕ್ತಿ ಉತ್ಪತ್ತಿ ಮಾಡೋಕೆ ಸಹಾಯ ಮಾಡುತ್ತದೆ.
- ಗುಲ್ಕನ್ ಶೀತ ಪದಾರ್ಥ, ಆದುದರಿಂದ ಇದು ಕೈಕಾಲು ಉರಿ,ನಿಶ್ಯಕ್ತಿ, ಇತರೆ ನೋವನ್ನು ಕಮ್ಮಿ ಮಾಡುತ್ತೆ.
- ಮಹಿಳೆಯರಿಗೆ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆನೋವನ್ನು ಶಮನ ಮಾಡುತ್ತದೆ. ಗರ್ಭಿಣಿಯರು ಗುಲ್ಕನ್ ಸೇವಿಸಿದರೆ ಹೆಚ್ಚು ಉತ್ತಮ.
- ಗುಲ್ಕನ್ ದೇಹದ ರಕ್ತವನ್ನು ಶುದ್ದೀಕರಿಸುತ್ತದೆ. ನಿಶಕ್ತಿಯನ್ನು ದೂರ ಮಾಡುವ ಗುಣ ಹೊಂದಿರುವ ಗುಲ್ಕನ್ ದೇಹದಲ್ಲಿನ ಅನಗತ್ಯ ಅಂಶಗಳನ್ನು ಹೊರಹಾಕುತ್ತದೆ.
- ಬೇಸಿಗೆ ಕಾಲದಲ್ಲಿ ಗುಲ್ಕನ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಉಷ್ಣಾಘಾತ ಮತ್ತು ಮೂಗಿನಲ್ಲಿ ರಕ್ತ ಬರುವುದನ್ನು ತಡೆಗಟ್ಟುತ್ತದೆ.
- ಫೈಬರ್ ಅಂಶ ಹೆಚ್ಚು ಪ್ರಮಾಣದಲ್ಲಿ ಹೊಂದಿರುವ ಗುಲ್ಕನ್ ಅನ್ನು ಮಕ್ಕಳಿಗೆ ಪ್ರತಿನಿತ್ಯ ನೀಡುವುದರಿಂದ ಮಲಬದ್ಧತೆ ದೂರಾಗುತ್ತದೆ.
- ನರಮಂಡಲಾನ ಒಳ್ಳೆಯ ಸ್ಥಿತೀಲಿಟ್ಟು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ.
- ಮನೆಯಿಂದ ಹೊರಗೆ ಹೋಗುವ ಮುಂಚೆ 2 ಚಮಚ ಗುಲ್ಕನ್ ತಿಂದು ಹೊರಟರೆ ಸನ್ ಸ್ಟ್ರೋಕ್ ಆಗೋದನ್ನೂ ತಪ್ಪಿಸಬಹುದು.
ಒಟ್ಟಿನಲ್ಲಿ ದೇಹವನ್ನು ತಂಪಾಗಿಡುವ ಗುಲ್ಕನ್ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಯೋಗವಾಗಿದೆ.
ಬೇಕಾಗುವ ಸಾಮಾಗ್ರಿಗಳು: 500 ಗ್ರಾಂ ಒಣಗಿದ ಗುಲಾಬಿಯ ಪಕಳೆಗಳು 500 ಗ್ರಾಂ ನಟ್ಸ್, ಅಂಜೂರ (ಫಿಗ್), ಒಣಗಿದ ಕರ್ಜೂರ * 500 ಗ್ರಾಂ ಸಕ್ಕರೆ ಮತ್ತು 1/2 ಲೋಟ ನೀರು (100ml)
ತಯಾರಿಸುವ ವಿಧಾನ
- ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ಸಕ್ಕರೆ ನೀರು ಗಟ್ಟಿಯಾಗುವರೆಗೆ ಕುದಿಸಬೇಕು.
- ನಂತರ ಈ ಸಕ್ಕರೆ ಪಾನಕವನ್ನು ತಣ್ಣಗಾಗಲು ಬಿಡಬೇಕು. ನಂತರ ಉಳಿದ ಸಾಮಾಗ್ರಿಗಳನ್ನು ಅದರಲ್ಲಿ ಹಾಕಿ ಮಿಶ್ರ ಮಾಡಬೇಕು.
- ಈ ಗುಲ್ಕನ್ ತುಂಬಾ ಗಟ್ಟಿಯಾಗುವುದನ್ನು ತಡೆಯಲು ಫ್ರಿಜ್ನಲ್ಲಿ ಇಡಬಾರದು. ಇದನ್ನು ಡಬ್ಬಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು.
ಪ್ರತಿದಿನ ಹಾಗೇ ತಿನ್ನಬಹುದು, ದೋಸೆ ,ಚಪಾತಿ,ರೋಟಿ, ಮುಖ್ಯವಾಗಿ ಬ್ರೆಡ್, ಬನ್ ಗಳಿಗೆ ಬೆಣ್ಣೆ ಗುಲ್ಕನ್ ಸೇರಿಸಿ ಜೊತೆ ತಿನ್ನಬಹುದು ಅಥವಾ ಹಾಲಿನಲ್ಲಿ ಮಿಶ್ರ ಮಾಡಿ ಕುಡಿಯಬಹುದು.
ಸೌಮ್ಯ ಅಶೋಕ್
ಬೆಂಗಳೂರು

ಲೈಫ್ ಸ್ಟೈಲ್
ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

- ಡಾ. ಸಿದ್ದಯ್ಯ ರೆಡ್ಡಿಹಳ್ಳಿ
ಜಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.
ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.
ಮಣಿಪುರದ ರಾಜಧಾನಿ ಇಂಫಾಲ್ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.
ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.
ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.
ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.
ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.
ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.
ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.
ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.
ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.
ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.
ಮಣಿಪುರ ಮತ್ತು ನಾಗಾಲ್ಯಾಂಡ್ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.
ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.
ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.
ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.
(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮದ್ರಾಸ್ ಐ ವೈರಾಣುವಿಗೆ ಭಯ ಪಡಬೇಕಾಗಿಲ್ಲ : ಡಾ. ನಾಗರಾಜ

ಸುದ್ದಿದಿನ,ದಾವಣಗೆರೆ : ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ವೈರಾಣು ಅತೀ ವೇಗವಾಗಿ ಹರಡುತ್ತಿದ್ದು ಇದಕ್ಕೆ ಭಯ ಪಡಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ತಿಳಿಸಿದ್ದಾರೆ.
ಮದ್ರಾಸ್ ಐ ಈ ಬಾರಿ ಮಳೆಗಾಲದಲ್ಲಿ ಆರಂಭವಾಗಿದ್ದು ರಾಜ್ಯದ ಜನರಕಣ್ಣು ಕೆಂಪಾಗಿಸುತ್ತಿದೆ, ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳಲ್ಲಿ “ಮದ್ರಾಸ್ ಐ” ವೇಗಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿಕಣ್ಣಿ ಮೇಲೆ ಪರಿಣಾಮಉಂಟು ಮಾಡುತ್ತವೆ, ರಾಜ್ಯದಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಿಸಿಲು ಇಲ್ಲದಂತಾಗಿದೆ ಇದರ ಪರಿಣಾಮತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ದಾಂಗುಡಿ ಇರಿಸಿದೆ.
ರೋಗದ ಲಕ್ಷಣಗಳು
ಕಸ ಬಿದ್ದದಂತೆಆಗುವ ರೀತಿಯಾಗಿಕಣ್ಣುಚುಚ್ಚುವುದು, ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ, ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.
ಮುಂಜಾಗೃತಾ ಕ್ರಮಗಳು
ಸಮಸ್ಯೆ ಇರುವವರು ಕೆಲದಿನ ಪ್ರತ್ಯೇಕ ವಾಸ ಮಾಡಿ, ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಕಣ್ಣಿಗೆಔಷಧ ಹಾಕಿಸಿಕೊಳ್ಳಬೇಡಿ, ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ, ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು, ವೈದ್ಯರ ತಪಾಸಣೆ ಮಾಡಿಸದೇ, ಔಷಧಿ ಅಂಗಡಿಗಳಲ್ಲಿ ಸಿಗುವ ಡ್ರಾಪ್ಸ್ಗಳನ್ನು ಬಳಸಬಾರದು, ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಪರಿಹಾರ
ಸಮಸ್ಯೆ ಉಳ್ಳವರು ಇತರರಿಂದದೂರಇರಬೇಕು, ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು, ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ,ಮೊಬೈಲ್, ಕಂಪ್ಯೂಟರ್ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿಕೊಡಬೇಕು.
ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್
ಕಾಯಕಯೋಗಿ ನುಲಿಯ ಚಂದಯ್ಯನವರ ಸ್ಮರಣೋತ್ಸವ

- ಡಾ.ಗೀತಾಬಸವರಾಜು,ಉಪನ್ಯಾಸಕರು,ಎ.ವಿ.ಕೆ.ಕಾಲೇಜು, ದಾವಣಗೆರೆ
(ಕಾಯಕವನ್ನೇ ತನ್ನ ಉಸಿರಾಗಿಸಿಕೊಂಡು ಸಮಾಜಕ್ಕೆ ಕರ್ತವ್ಯ ಪ್ರಜ್ಞೆ ಸಾರಿ ಕಾಯಕ ದಾಸೋಹದ ಮೂಲಕ ಮನುಕುಲಕ್ಕೆ ಬೆಳಕು ನೀಡಿದ ಮಹಾ ಶಿವಶರಣ ನುಲಿಯ ಚಂದಯ್ಯನವರ ಸ್ಮರಣೋತ್ಸವ ಜೂನ್ 29 ರಂದು ನಡೆಯಲಿದೆ ತನ್ನಿಮಿತ್ತ ಈ ಲೇಖನ)
ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ತವರೂರು. ಇಲ್ಲಿ ವಿವಿಧ ಧರ್ಮ , ಜಾತಿಯವರು ನೆಲೆಸಿದ್ದು, ಅನೇಕತೆಯಲ್ಲಿ ಏಕತೆಯನ್ನು ರೂಢಿಸಿಕೊಂಡು ಪ್ರೀತಿ, ದಯೆ, ಕರುಣೆ, ಸಹನೆ, ನಂಬಿಕೆ, ಭಾವೈಕ್ಯತೆ ಮುಂತಾದ ಮಾನವೀಯ ಸಂಬಂಧಗಳೊಂದಿಗೆ ಬದುಕುತ್ತಿದ್ದಾರೆ.
ಬಲ್ಲವನೆ ಬಲ್ಲ ಬೆಲ್ಲದ ಸವಿಯ ಎಂಬ ನುಡಿಯಂತೆ 12 ನೇ ಶತಮಾನ ಸರ್ವರಿಗೂ ಸಿಹಿಯನ್ನು ಉಣಬಡಿಸಿದ ಕಾಲ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿದವರು ವಚನಕಾರರು. ವಿಶ್ವಗುರು ಬಸವೇಶ್ವರರ ಅನುಭವ ಮಂಟಪದ ಅನೇಕ ಕಾಯಕ ಮಣಿಗಳಲ್ಲಿ ಚಂದಯ್ಯನವರ ಹೆಸರು ಸ್ಮರಣೀಯ.
ಆರ್.ನುಲೇನೂರು ವಚನಕಾರ ನುಲಿಯ ಚಂದಯ್ಯ ಲಿಂಗೈಕ್ಯರಾದ ಪುಣ್ಯಭೂಮಿ. ಶಿವಶರಣ ಚಂದಯ್ಯನವರು ಇಲ್ಲಿ ನೆಲೆಸಿದ್ದರಿಂದ ಮತ್ತು ಹಗ್ಗ ನುಲಿಯುವ (ಹೊಸೆಯುವ) ಕಾಯಕ ಮಾಡುತ್ತಿದ್ದುದರಿಂದ ನುಲಿಯಯ್ಯನೂರು, ನುಲಿಯನೂರು, ನುಲೇನೂರು ಎಂಬ ಹೆಸರು ಬಂದಿದೆ. ರಾಮಗಿರಿ ಸಮೀಪವಿರುವುದರಿಂದ ಆರ್ ನುಲೇನೂರು ಎಂದು ಕರೆಯಲಾಗುತ್ತದೆ. ಕಾಯಕವನ್ನೇ ತನ್ನ ಉಸಿರಾಗಿಸಿಕೊಂಡು ಸಮಾಜಕ್ಕೆ ಕರ್ತವ್ಯ ಪ್ರಜ್ಞೆ ಸಾರಿದ ಚಂದಯ್ಯನವರು ಕಾಯಕ ದಾಸೋಹದ ಮೂಲಕ ಮನುಕುಲಕ್ಕೆ ಬೆಳಕು ನೀಡಿದ ಮಹಾ ಶಿವಶರಣ.
“ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುರುಹು ಹರಿವುದು
ಜಂಗಮವಾದರೂ ಕಾಯಕದಿಂದಲೇ ತನ್ನ ವೇಷದ ಪಾಶ ಹರಿವುದು
ಗುರುವಾದರೂ ಚರಸೇವೆಯ ಮಾಡಬೇಕು
ಲಿಂಗವಾದರೂ ಚರಸೇವೆಯ ಮಾಡಬೇಕು
ಜಂಗಮವಾದರೂ ಚರಸೇವೆಯ ಮಾಡಬೇಕು
ಇದು ಚಂದೇಶ್ವರ ಲಿಂಗದರಿವು ಕೇಳಾ ಪ್ರಭುವೇ”
ನುಲಿಯ ಚಂದಯ್ಯನವರ ಇದೊಂದು ವಚನ ಕಾಯಕದ ಮಹತ್ವವನ್ನು ತಿಳಿಸುತ್ತದೆ.
ವಿಜಯಪುರ ಜಿಲ್ಲೆಯ ಶಿವಣಗಿ ಎಂಬ ಗ್ರಾಮದಲ್ಲಿ ಜನಿಸಿದ ಚಂದಯ್ಯನವರು ಹೊಡಕೆ ಹುಲ್ಲನ್ನು ತಂದು ಹಗ್ಗ ಹೊಸೆಯುವ ಕಾಯಕವನ್ನು ನಡೆಸಿ ಅದರಿಂದ ಬಂದ ಹಣವನ್ನು ಗುರು – ಲಿಂಗ – ಜಂಗಮಕ್ಕೆ ಅರ್ಪಿಸುತ್ತಿದ್ದರು. ಕಾಯಕ ಭಾವ ಶುದ್ಧವಾಗಿರಬೇಕು. ಜಂಗಮ ದಾಸೋಹವು ನಿಜವಾದ ಶಿವಪೂಜೆ ಎನ್ನುವುದು ಅವರ ನಿಲುವಾಗಿತ್ತು.
ಕಲ್ಯಾಣದಲ್ಲಿ ಕ್ರಾಂತಿಯಾದಾಗ ನುಲಿಯ ಚಂದಯ್ಯನವರು ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ ಮೂಲಕ ದುಮ್ಮಿಗೆ ಬಂದು ನೆಲೆಸುತ್ತಾರೆ. ಅಲ್ಲಿನ ಪಾಳೆಗಾರ ದುಮ್ಮಣ್ಣನಾಯಕನ ಪರಿಚಯವಾಗುತ್ತದೆ. ನಾಯಕನ ರಾಣಿ ಪದ್ಮಾವತಿ ಚಂದಯ್ಯನ ವಿಚಾರಧಾರೆಗಳಿಗೆ ಮನ:ಪರಿವರ್ತಿತಳಾಗಿ ಲಿಂಗವಂತ ಧರ್ಮದ ದೀಕ್ಷೆಯನ್ನು ಪಡೆದು ಅರಮನೆಯಲ್ಲಿ ಆಶ್ರಯವನ್ನು ನೀಡುತ್ತಾಳೆ.
ಅರಮನೆಯ ವಾತಾವರಣ ಶರಣ ಸಂಸ್ಕೃತಿಗೆ ಹೊಂದಿಕೆಯಾಗದ ಕಾರಣ ಪದ್ಮಾವತಿಯು ತನ್ನ ತವರೂರಾದ ಆರ್.ನುಲೇನೂರಿಗೆ(ಪದ್ಮಾವತಿ ಪಟ್ಟಣ)ಆಹ್ವಾನಿಸುತ್ತಾಳೆ. ನಂತರ ಅಲ್ಲೊಂದು ಶಿಲಾಮಂಟಪ ನಿರ್ಮಿಸಿ ನಿತ್ಯಕಾಯಕ ದಾಸೋಹಕ್ಕೆ ಹಾಗೂ ಅನುಭಾವ ಗೋಷ್ಠಿ ನಡೆಸಲು ಅವಕಾಶ ಕಲ್ಪಿಸುತ್ತಾಳೆ. ಚಂದಯ್ಯನವರು ಬದುಕಿನ ಕೊನೆಯವರೆಗೆ ಇದೇ ಗ್ರಾಮದಲ್ಲಿ ನೆಲೆಸಿದ್ದು ತಮ್ಮ ಇಷ್ಟಲಿಂಗ ಚಂದೇಶ್ವರ ಲಿಂಗದಲ್ಲಿ ಒಂದಾದರು ಎಂದು ಪ್ರತೀತಿ ಇದೆ.
ಚಂದಯ್ಯನವರ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಮ್ಮೆ ಹೊಡಕೆ ಹುಲ್ಲು ಕೊಯ್ಯುವಾಗ ಚಂದಯ್ಯನವರ ಕೊರಳಲ್ಲಿದ್ದ ಇಷ್ಟಲಿಂಗವು ಜಾರಿ ನೀರಲ್ಲಿ ಬಿದ್ದಿತು. ಲಿಂಗವನ್ನು ಲೆಕ್ಕಿಸದೆ ಅವರು ಹಾಗೆ ಹೊರಟುಬಿಟ್ಟರು. ಲಿಂಗವು ತನ್ನನ್ನು ಸ್ವೀಕರಿಸಬೇಕೆಂದು ಅಂಗಲಾಚಿ ಕೇಳಿಕೊಂಡರೂ ಅದನ್ನು ಗಮನಿಸದೆ, ನನಗೆ ನಿನಗಿಂತ ಜಂಗಮಾರಾಧನೆ ಮುಖ್ಯ ಎಂದು ಹೇಳಿ ಕಾಯಕದಲ್ಲಿ ನಿರತರಾದರು. ಕೊನೆಗೆ ಮಡಿವಾಳ ಮಾಚಯ್ಯನವರ ಸಂಧಾನದಿಂದ ಲಿಂಗವನ್ನು ಸ್ವೀಕರಿಸಿದರು. ಇವರ ಕಾಯಕ ಪ್ರಜ್ಞೆ ಎಷ್ಟಿತ್ತು ಎಂಬುದಕ್ಕೆ ಈ ಘಟನೆ ನಿದರ್ಶನ.
ಒಮ್ಮೆ ಕೆರೆಯ ನೀರನ್ನು ಬಳಸುವ ವಿಷಯದಲ್ಲಿ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಚಂದಯ್ಯ ಕೆರೆಯ ದಡದ ಬಳಿ ಬೆತ್ತದಿಂದ ನೆಲ ಮುಟ್ಟಿದಾಗ ಬಾವಿ ಸೃಷ್ಠಿಯಾಗಿ ನೀರು ಉಕ್ಕಿತು. ಇದೇ ಬಾವಿಯ ನೀರನ್ನು ಪೂಜಾಕಾರ್ಯಗಳಿಗೆ ಬಳಸುತ್ತಿದ್ದರು. ಇಂದಿಗೂ ಕೆರೆಯ ಪಕ್ಕದಲ್ಲಿ ಈ ಬಾವಿಯಿದ್ದು ಚಂದಯ್ಯನ ಬಾವಿ ಎಂದೇ ಪ್ರಸಿದ್ದಿಯಾಗಿದೆ.
ಕಾಯಕವು ಅಂತರಂಗ ಬಹಿರಂಗ ಶುದ್ಧಿಗೆ ಸೋಪಾನ. ಕಾಯಕವು ನಮ್ಮ ನಿತ್ಯಬದುಕಿನಲ್ಲಿ ನಿತ್ಯ ಕಾಯದ ಮೂಲಕವಾಗಿ ನಡೆಯುವ ಧ್ಯಾನ. ಶರಣರ ಕಾಯಕದಲ್ಲಿ ಕೇವಲ ಧನಕ್ಕೆ ಪ್ರಾಶಸ್ತ್ಯವಿರದೆ ಅದರ ಸತ್ಪಾತ್ರತೆಗೆ ಪ್ರಾಶಸ್ತ್ಯವಿತ್ತು. ಕಾಯಕದ ಉದ್ದೇಶ ಗುರು-ಲಿಂಗ-ಜಂಗಮ ದಾಸೋಹಕ್ಕೆ ಆದರೆ ತ್ರಿವಿಧ ದಾಸೋಹಕ್ಕೆ ನೈವೇದ್ಯವಾಗಬಲ್ಲ ದ್ರವ್ಯ ಪದಾರ್ಥ ‘ಸತ್ಯ ಶುದ್ಧ ಕಾಯಕದ ‘ ಪ್ರತಿನಿತ್ಯದ ದ್ರವ್ಯವೇ ಆಗಿರಬೇಕು ಎಂಬ ನಿಲುವು ಚಂದಯ್ಯನವರದು. ಸತ್ಯ ಶುದ್ಧ ಕಾಯಕದಲ್ಲಿ ನಿರತರಾಗಿ ಸಾರ್ಥಕ ಬದುಕನ್ನು ನಡೆಸಿದ ಕಾಯಕಯೋಗಿ ಚಂದಯ್ಯನವರು ಲಿಂಗೈಕ್ಯರಾದ ಸ್ಥಳವನ್ನು 1956ರಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ವತಿಯಿಂದ 38 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗಿದೆ.
ಜೂನ್ 29 ರಂದು ಪೂಜ್ಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾಯಕಯೋಗಿ ಶರಣ ನುಲಿಯ ಚಂದಯ್ಯನವರ ಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಮಾಜದಲ್ಲಿದ್ದ ಅಂಧಕಾರ, ಮೂಢನಂಬಿಕೆ ಜಾತಿ ಬೇಧ ದೂರಮಾಡಿ ಸದ್ಬುದ್ಧಿ, ಸದಾಚಾರ, ಸಹಬಾಳ್ವೆ ಮುಂತಾದ ಮಾನವೀಯ ಗುಣಗಳನ್ನು ಬಿತ್ತಿ ಸಮಸಮಾಜ ನಿರ್ಮಿಸಿದ ಶರಣರ ದೃಷ್ಟಿಕೋನದಂತೆ ತಾಲೂಕು ಸಾಧು ವೀರಶೈವ ಸಂಘ(ರಿ) ಶ್ರೀ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಹೊಳಲ್ಕೆರೆ.
ಸಮಸ್ತ ಗ್ರಾಮಸ್ಥರು ಆರ್.ನುಲೇನೂರು ಇವರ ಸಂಯುಕ್ತಾಶ್ರಯದಲ್ಲಿ ವರ್ಗ, ಲಿಂಗಬೇಧವಿಲ್ಲದೆ ಚಂದಯ್ಯನವರ ಸ್ಮರಣೋತ್ಸವ ಮತ್ತು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಕಾಯಕ ಯೋಗಿಗೆ ಗೌರವ ಸಲ್ಲಿಸಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ6 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ5 days ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ