ದಿನದ ಸುದ್ದಿ
ಹೊಸಕೆರೆಹಳ್ಳಿ ಕೆರೆಗೆ ವಿಷಪಾಷಾಣ : ಕೆರೆ ಉಳಿಸಲು ಬಂದರು ಹಸಿರು ಪಡ್ಡೆಗಳು
ನಮ್ಮಹೊಸಕೆರೆಹಳ್ಳಿ ಕೆರೆ ಉಳಿಸಿ ಅಭಿಯಾನ
ಸುದ್ದಿದಿನ ವಿಶೇಷ : ಕೆಂಪೇಗೌಡರ ಆಳ್ವಿಕೆಯಲ್ಲಿ ನಿರ್ಮಾಣವಾದ ಬೆಂಗಳೂರಿನ ಹೊಸಕೆರೆಹಳ್ಳಿ ಗ್ರಾಮದ ಮೂಕಾಂಬಿಕಾ ನಗರದಲ್ಲಿರುವ ಕೆರೆ ಹೊಸಕೆರೆಹಳ್ಳಿ ಕೆರೆ ಎಂದೇ ಹೆಸರು ವಾಸಿ. ಆದರೀಗ ಈ ಕೆರೆ ಒಡಲಿಗೆ ಕೊಳಚೆ, ಕಸದ ವಿಷವಸ್ತುಗಳು ಸೇರುತ್ತಿವೆ.
ಸ್ವಚ್ಛ, ಸುಂದರ ಪರಿಸರದಲ್ಲಿರುವ ಈ ಕೆರೆ ಈಗ ಅಂದಾಜು 44 ಎಕರೆ ಪ್ರದೇಶವಿದೆ. ಪಶ್ಚಿಮದಲ್ಲಿ ನೈಸ್ ರಸ್ತೆ, ಪೂರ್ವದಲ್ಲಿ ವಸತಿ ಪ್ರದೇಶ ಹಾಗೂ ಉತ್ತರದಲ್ಲಿ ಕೆರೆಕೋಡಿ ಮುಖ್ಯರಸ್ತೆ ಮತ್ತು ದಕ್ಷಿಣ ದಿಕ್ಕಿನಲ್ಲಿ ಅರಣ್ಯ ಪ್ರದೇಶ ಜತೆಗೆ ಹನುಮಗಿರಿ ಗುಡ್ಡವಿದೆ. ಆದರೀಗ, ಈ ಸುಂದರ ಪ್ರವಾಸಿ ತಾಣದಂತಿರುವ ಕೆರೆಯ ಮೂಲಸ್ವರೂಪಕ್ಕೆ ಧಕ್ಕೆ ಉಂಟಾಗುತ್ತಿದೆ.
ಕೆರೆ ಅತಿಕ್ರಮಣ
ಹೊಸಕೆರೆಹಳ್ಳಿ ಕೆರೆ ಮೊದಲಿಗೆ 59.26 ಎಕರೆ ಪ್ರದೇಶ ಹೊಂದಿದ್ದ ಕೆರೆಯಾಗಿತ್ತೆಂದು ಇಂಡಿಯನ್ ಎಕ್ಸ್ಪ್ರೆಸ್ ಮೇ 1, 2017ರಂದು ವರದಿ ಪ್ರಕಟಿಸಿತ್ತು. ಆದರೀಗ ಇದು ಹಲವಾರು ಕಾರಣಗಳಿಗಾಗಿ ಅತಿಜ್ರಮಣಗೊಂಡು 44 ಎಕರೆ ಪ್ರದೇಶ ಮಾತ್ರ ಉಳಿದಿದೆ.
ಈ ಕೆರೆಗೆ ಹೊಂದಿಕೊಂಡು ಕಿರುಅರಣ್ಯ ಪ್ರದೇಶ, ಇದರ ಅಂಗಳದಲ್ಲಿ ಹನುಮಗಿರಿ ಮತ್ತು ಯೇಸುಬೆಟ್ಟ ಎಂಬ ಎರಡು ಗುಡ್ಡಗಳಿದ್ದವು. ಪಕ್ಕದಲ್ಲಿದ್ದ ವಸತಿ ಪ್ರದೇಶದ ಕೊಳಚೆ ನೀರು ಹಾಗೂ ಹೊಸಕೆರೆಹಳ್ಳಿ ಮತ್ತಿತರ ಗ್ರಾಮಗಳ ಜನರು ಕಸದ ತಂದು ಸುರಿಯುತ್ತಿದ್ದಾರೆ. ಪಶ್ಚಿಮ ದಿಕ್ಕಿನಲ್ಲಿ ನೈಸ್ ರಸ್ತೆ ಕೆರೆಯನ್ನು ಇಬ್ಭಾಗಿಸಿದರೆ, ಇದರ ಹತ್ತಿರ ವಸತಿ ಪ್ರದೇಶ ಅಭಿವೃದ್ಧಿಗೊಳ್ಳುತ್ತಿದೆ. ಕೆರೆಯ ಸೌಂದರ್ಯ ಹೆಚ್ಚಿರುವ, ಕಣ್ಣುಗಳಿಗೆ ತಂಪು ನೀಡುವ ಹನುಮಗಿರಿ ಪ್ರದೇಶಕ್ಕೆ ಟಾಟಾ ಕಂಪನಿ ಟಾಟಾ ಹೇಳಿಸಿಬಿಟ್ಟಿದೆ. “ಹಿಲ್ ರೆಸಿಡೆಂಟ್ಸ್” ಎಂದು ಹೆಮ್ಮೆಯಿಂದ ಹೊಗಳಿಕೊಂಡಿದೆ.
ಕೆರೆ ಪರಿಸರ
ಸಾಮಾನ್ಯವಾಗಿ ಬೆಂಗಳೂರಿನ ಕೆರೆಗಳು ಪಾದಚಾರಿ ಪಥ (ವಾಕ್ ವೇ), ಸುತ್ತಲು ತಂತಿಬೇಲಿ ಹಾಗೂ ರಸ್ತೆ ಇರುತ್ತದೆ. ಆದರೆ, ಹೊಸಕೆರೆಹಳ್ಳಿ ಕಿರು ಪರಿಸರ ವ್ಯವಸ್ಥೆಯೇ ಇದೆ. ಇಲ್ಲಿ ಮ್ಯಾಂಗ್ರೋವ್ ಮರಗಳು, ಕಾಡು ನಾಯಿ, ಹಾವು, ಗ್ರೇಟ್ ಕಾರ್ಮೊರೆಂಟ್, ಹೆರನ್, ಶಿಕ್ರಾ, ವಿವಿಧ ಜಾತಿಯ ಚಿಟ್ಟೆಗಳು ಸೇರಿದಂತೆ ವೈವಿಧ್ಯಮಯ ಪ್ರಾಣಿ, ಪಕ್ಷಿ, ಸಸ್ಯ ಪ್ರಭೇದಗಳನ್ನು ಹೊಂದಿದೆ. ಕೆರೆಯ ಪಾತ್ರದಲ್ಲಿ ಔಷಧಿಯ ಸಸ್ಯಗಳು ಬೆಳೆದಿವೆ.
ಇಪ್ಪತ್ತು ವರ್ಷಗಳ ಹಿಂದೆ ಅನೇಕ ಗ್ರಾಮಗಳ ಜನರಿಗೆ ಈ ಕೆರೆಯ ನೀರೇ ಜೀವಜಲವಾಗಿತ್ತು. ಆದರೆ, ಇದೀಗ ಈ ನೀರನ್ನು ನೋಡುತ್ತಿದ್ದಂತೆ ದೂರ ಓಡುವ ದುಃಸ್ಥಿತಿ ಎದುರಾಗಿದೆ. ಶೀಘ್ರ ಕೆರೆ ಮಾಲಿನ್ಯ ಮುಕ್ತವಾದರೆ ಜನರಿಗೆ ಅನುಕೂಲವಾಗುತ್ತದೆ ಎಂಬುದು ಪರಿಸರ ಪ್ರೇಮಿಗಳ ಆಶಯ.
ಕೆರೆ ಉಳಿಸಲು ಬಂದರು ಹಸಿರು ಪಡ್ಡೆಗಳು
ಬೆಂಗಳೂರಿನ ಕೆರೆಗಳನ್ನು ಹೇಳ ಹೆಸರಿಲ್ಲದಂತೆ ಮಾಡಿದ ಸರಕಾರಗಳು ಈಗ ತಪ್ಪನ್ನು ಒಬ್ಬರ ಮೇಲೊಬ್ಬರು ಹಾಕುತ್ತಿವೆ. ಕೆರೆ ಏಕೆ ಹಾಳಾಗುತ್ತಿದೆ ಎಂದು ಜನರಿಗೆ ಜಾಗೃತಿ ಬರುವಷ್ಟರಲ್ಲಿ ಆ ಕೆರೆ ಒತ್ತುವರೆ ಮಾಡಿ ಅಪಾರ್ಟ್ಮೆಂಟ್ ಕಟ್ಟಿರುವ ಉದಾಹರಣೆಗಳೂ ಇವೆ.
ಪರಿಸ್ಥಿತಿ ಕೈ ಮೀರುವ ಮುನ್ನವೇ ಕೆರೆ ಉಳಿಸಿಕೊಳ್ಳುವ ಸಲುವಾಗಿ ಬೆಂಗಳೂರು ಗ್ರೀನ್ ರೋಡೀಸ್ ಎಂಬ ಸಂಘಟನೆ ಹುಟ್ಟಿಕೊಂಡಿದೆ. ವಿಷಯದಲ್ಲಿ ತಪ್ಪು ನಿರ್ಧಾರಗಳ್ಳುವ ಅಧಿಕಾರಿಗಳಿಗೆ, ಕೆರೆಯೊಳಗೆ ಕಸ ಎಸೆಯುವ ಜನರನ್ನು ಧೈರ್ಯವಾಗಿ ಪ್ರಶ್ನಿಸುವವರು ಇವರು.
ಹಸಿರು ಕೈಗಾರಿಕಾ ಒಕ್ಕೂಟಗಳ (ಗ್ರೀನ್ ಇಂಡಸ್ಟ್ರೀಸ್) ನಿರ್ದೇಶಕ ಸುನೀಲ್ ಸೂದ್ ಅವರು ಕಳೆದ ಏಪ್ರಿಲ್ 28ಕ್ಕೆ ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಗ್ರೀನ್ ರೌಡೀಸ್ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು.
ಕೆರೆ ಸಂರಕ್ಷಣೆ, ಪರಿಸರ ಮಾಲಿನ್ಯ ನಿಯಂತ್ರ ಕುರಿತು ಜಾಗೃತಿ, ಸಸಿ ನೆಡುವುದು, ಕೆರೆಗಳಲ್ಲಿರುವ ಹೂಳು ತೆಗೆಯುವುದು, ಪ್ಲಾಸ್ಟಿಕ್ ಬಳಕೆಯಿಂದಾಗುವ ಪ್ರತಿಕೂಲ ಪರಿಣಾಮಗಳ ಕುರಿತು ಅಭಿಯಾನ ಹಮ್ಮಿಕೊಳ್ಳುವುದು ಮೊದಲಾದವು ಗ್ರೀನ್ ರೋಡೀಸ್ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಪ್ರಾರಂಭವಾದ ಒಂದೇ ತಿಂಗಳಲ್ಲಿ 200ಕ್ಕೂ ಹೆಚ್ಚು ಸ್ವಯಂ ಸೇವಕರು ಸಂಘಟನೆಯನ್ನು ಸೇರಿದ್ದಾರೆ. ವಿಶೇಷವೆಂದರೆ ಏಳರಿಂದ 70ರ ವಯಸ್ಸಿನ ಸ್ವಯಂ ಸೇವಕರು ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಲ್ಲ ವರ್ಗಗಳ ಸ್ವಯಂ ಸೇವಕರು
ಗ್ರೀನ್ ರೋಡೀಸ್ ಸಂಘಟನೆಯಲ್ಲಿ ಎಲ್ಲ ವರ್ಗದವರಿಗೂ ಅವಕಾಶ ನೀಡುವ ಉದ್ದೇಶದಿಂದ ಐಟಿ, ಬಿಟಿ, ಸರಕಾರಿ ಅಧಿಕಾರಿಗಳು, ಪುಟ್ಟ ಮಕ್ಕಳು, ಹಿರಿಯರು, ಗಣ್ಯರು, ರಾಜಕಾರಣಿಗಳು ಮೊದಲಾದವರನ್ನು ಸಂಘಟನೆಯ ಸದಸ್ಯರನ್ನಾಗಿ ಮಾಡಲಾಗಿದೆ.
ಕಾರ್ಯಾಗಾರಗಳು
ಗ್ರೀನ್ ರೋಡೀಸ್ ಸಂಘಟನೆಯು ಪರಿಸರಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತಂತೆ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತದೆ. ಈ ಮೂಲಕ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಜನರಿಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ.
ಪ್ರತಿ ಭಾನುವಾರ ಸಭೆ
ಬೆಂಗಳೂರು ಗ್ರೀನ್ ರೋಡೀಸ್ ಅಥವಾ ಬಿಜಿಆರ್ ಸಂಘಟನೆಯು ಪ್ರತಿ ಭಾನುವಾರ ಒಂದು ಸಭೆಯನ್ನು ಹಮ್ಮಿಕೊಳ್ಳುತ್ತದೆ. ಭವಿಷ್ಯದಲ್ಲಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳು, ನಿರ್ಧಾರಗಳ ಕುರಿತು ಚರ್ಚಿಸಲಾಗುತ್ತದೆ. ಮೇ. 2ರಂದು ಲಾಲ್ಬಾಗ್ನಲ್ಲಿ ಬಿಜಿಆರ್ನ ಮೊದಲ ಸಭೆ ನಡೆಯಿತು. ಸಂಘದ ಸದಸ್ಯರು ಲಾಲ್ಬಾಗ್ಅನ್ನು ಸಂಪೂರ್ಣ ಸ್ವಚ್ಛಗೊಳಿಸಿದರು.
ಹೊಸಕೆರೆ ಹಳ್ಳಿ ಕೆರೆಗೆ ಭೇಟಿ
ಬೆಂಗಳೂರು ಗ್ರೀನ್ ರೋಡೀಸ್ ಸಂಘಟನೆಯು 2018 ಮೇ 2ರಂದು ಮೊದಲಬಾರಿಗೆ ಹೊಸಕೆರೆ ಹಳ್ಳಿ ಕೆರೆಗೆ ಭೇಟಿ ನೀಡಿತು. ಸಂಘದ ಸದಸ್ಯ ಪ್ರಶಾಂತ್ ಸೇಠ್ ಅವರು ಕೆರೆ ಮೇಲ್ಭಾಗದಿಂದ ಆರ್ಆರ್ ನಗರ ಸಂಪರ್ಕಿಸುವ ರಸ್ತೆಯ ಮೇಲೆ ಹಾದು ಬಂದಾಗ ಹೊಸಕೆರೆ ಹಳ್ಳಿ ಕೆರೆಯು ಯಾವ ಪರಿಸ್ಥಿತಿಯಲ್ಲಿದೆ ಎಂದು ಒಂದು ಅಂದಾಜು ಸಿಕ್ಕಿತು.
‘‘ಕೆರೆಯನ್ನು ಮೇಲ್ನೋಟದಿಂದಲೇ ಅಧ್ಯಯನ ಮಾಡಿದಾಗ ಕೆರೆ ಸ್ವಚ್ಛತಾ ಕಾರ್ಯವು ಅರ್ಧಕ್ಕೆ ನಿಂತಿರುವುದು ಗೊತ್ತಾಯಿತು. ಇಡೀ ಕೆರೆಯಲ್ಲಿ ನೀರಿರುವ ಪ್ರದೇಶ ಹೆಚ್ಚಾಗಿರುವುದೂ ಕೂಡ ಕಂಡುಬಂತು. ಹೊಸಕೆರೆ ಹಳ್ಳಿ ಕೆರೆಯನ್ನು ಉಳಿಸುವುದು ಬೆಂಗಳೂರನ್ನು ಉಳಿಸಲು ಇರುವ ಏಕೈಕ ಮಾರ್ಗ ಎಂದೂ ಅನ್ನಿಸಿತು. ಬೆಂಗಳೂರಿಗರು ಕುಡಿಯುವ ನೀರಿನ ತೊಂದರೆ ಎದುರಿಸಬೇಕಾಗುತ್ತದೆ ಎಂಬ ಭವಿಷ್ಯವಾಣಿ ನಿಜವಾಗುತ್ತದೆಯೇನೋ ಎಂಬ ಭಯವಿದೆ. ಈಗಾಗಲೇ ಕೆರೆಯ ಏರಿ ಜಾಗವನ್ನು ಹಲವು ಲೇಔಟ್ಗಳು ಒತ್ತರಿಸಿಕೊಂಡು ಬಂದಿವೆ. ಟಾಟಾ ಪ್ರೊಮೋಂಟ್ ಕಂಪನಿಯೂ ಸಹ ಕೆರೆ ಒತ್ತುವರಿ ಪ್ರದೇಶದಲ್ಲೇ ನೆಲೆ ನಿಂತಿದೆ. ಆದರೆ, ಈಗಾಗಲೇ ಒತ್ತುವರಿಯಾಗಿರುವ ಜಾಗವನ್ನು ಈಗ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಸದ್ಯ ಕೆರೆ ಎಂದು ಕಾಣುವ ಜಾಗವನ್ನಾದರೂ ಉಳಿಸಿಕೊಳ್ಳಬೇಕಿದೆ. ಇತ್ತೀಚೆಗೆ ಮತ್ತೊಮ್ಮೆ ಕೆರೆಗೆ ಭೇಟಿ ನೀಡಿದ್ದೆ. ಎಲ್ಲರೂ ಒಟ್ಟಾದರೆ ಕೆರೆಯನ್ನು ಸ್ವಚ್ಛಮಾಡಿ ಅದನ್ನು ಉಳಿಸಿಕೊಳ್ಳಬಹುದು,’’ ಎಂಬುದು ಪ್ರಶಾಂತ್ ಸೇಠ್ ಅವರ ಅಭಿಮತ.
ಕೆರೆ ಭೇಟಿಯ ಉದ್ದೇಶಗಳು ಏನೆಂದರೆ
1. ಕೆರೆ ಪರಿಸರದ ಮೇಲ್ನೋಟ ಅಧ್ಯಯನ
2. ಕೆರೆ ಶುಚಿಗೊಳಿಸುವುದು
3. ನಮಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವುದು
ಈ ಎಲ್ಲ ಉದ್ದೇಶಗಳನ್ನಿಟ್ಟುಕೊಂಡು ಹೊಸಕೆರೆ ಹಳ್ಳಿ ಕೆರೆ ಅಧ್ಯಯನ ಮಾಡಿದಾಗ ನಮಗೆ ಅಚ್ಚರಿ ಎನಿಸುವ ಹಲವಾರು ವಿಷಯಗಳು ತಿಳಿದುಬಂದವು. ಅಷ್ಟಕ್ಕೂ ಕೆರೆಯು ಅದಾಗಲೇ ಅದೋಗತಿ ತಲುಪಿತ್ತು. ಫೇಸ್ಬುಕ್ನಲ್ಲಿ #benglalurugreenrodies ಎಂಬ ಪುಟ ನೋಡಿದ ಪ್ರಶಾಂತ್ ಸೇಠ್ ಅವರು ಬೆಂಗಳೂರು ಗ್ರೀನ್ ರೋಡೀಸ್ ಸಂಸ್ಥೆಗೆ ಹಲವಾರು ವಿಷಯಗಳನ್ನು ತಿಳಿಸಿದರು. ಕೆಲವು ಸ್ಥಳೀಯರಿಂದ ಬಿಜಿಆರ್ ಸಂಘಟನೆಯು ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿತು.
ಬಿಜಿಆರ್ ಸಂಗ್ರಹಿಸಿದ ಮಾಹಿತಿಗಳು
1. ಹೊಸಕೆರೆ ಹಳ್ಳಿ ಕೆರೆಯು ಸಂಪೂರ್ಣ ಬತ್ತಿಹೋಗಿರುವುದು ಮೇಲ್ನೋಟದ ಅಧ್ಯಯನದಲ್ಲಿ ಕಂಡುಬಂತು. ಈ ಕೆರೆಯುನ್ನು ಸೀಳಿಕೊಂಡು ಹೋಗುವ ರಸ್ತೆಯ ಬಲ ಭಾಗವು ಸಂಪೂರ್ಣ ಬತ್ತಿಹೋಗಿದ್ದು, ಅಲ್ಲಿ ಪೊದೆಗಳು, ಮುಳ್ಳುಗಂಟಿಗಳು ಬೆಳೆದುಕೊಂಡಿದೆ. ಮತ್ತೊಂದು ಭಾಗದಲ್ಲಿ ಸ್ವಲ್ಪವೇ ನೀರಿದ್ದು, ಅದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು, ಬಾಟೆಲ್ಗಳು ಮೊದಲಾದ ತ್ಯಾಜ್ಯಗಳನ್ನು ಎಸೆಯಲಾಗಿದೆ.
2. ಕೆರೆಯಲ್ಲಿ ಅಪಾರ ಪ್ರಮಾಣದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಅದು ಸುತ್ತಮುತ್ತಲಿನವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಟಾಟಾ ಪ್ರೊಮೊಂಟ್ ಸಂಸ್ಥೆಯು ಕೆರೆ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಂಡು, ಕೆರೆ ಕೋಡಿ ಹಳ್ಳಿಗೆ ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಿದೆ. ಹೂಳೆತ್ತುವ ಕಾರ್ಯಕ್ಕೆ ಸರಕಾರದಿಂದ ಸಂಸ್ಥೆಯು ಅನುಮತಿ ಪಡೆದಿತ್ತಾದರೂ, ಮಳೆ ಪರಿಣಾಮವಾಗಿ ಅದು ನಿಂತುಹೋಗಿದೆ.
3. ಕೆರೆ ದಡದಿಂದ ಸ್ವಲ್ಪವೇ ದೂರದಲ್ಲಿ ಅರಣ್ಯ ಪ್ರದೇಶವೊಂದಿದೆ. ಅಲ್ಲಿ ಸಾಕಷ್ಟು ಪಕ್ಷಿಗಳು ವಾಸವಿವೆ. ಬಿಜಿಆರ್ ಸಂಘಟನೆಯ ಸದಸ್ಯ ರಾಮ್ ಕುಮಾರ್ ಅವರು ಇತ್ತೀಚೆಗೆ ಯಶುಬೆಟ್ಟಕ್ಕೆ ಭೇಟಿ ನೀಡಿದ್ದರು. ಇದು ವಾಯುವಿಹಾರಕ್ಕೆ ಹೇಳಿಮಾಡಿಸಿದ ಸ್ಥಳವಾಗಿದ್ದು, ಇದನ್ನು ಉಳಿಸಿಕೊಳ್ಳುವುದು ಅತಿ ಮುಖ್ಯ.
4. ಹೊಸಕೆರೆ ಹಳ್ಳಿ ಕೆರೆಯನ್ನು ಯೇಸು ಬೆಟ್ಟ ಹಾಗೂ ಹನುಮಗಿರಿ ಎಂಬ ಎರಡು ಬೆಟ್ಟಗಳು ಹೊಂದಿಕೊಂಡಿವೆ. ಟಾಟಾ ಪ್ರೊಮೊಂಟ್ ಸಂಸ್ಥೆಯು ಹನುಮಗಿರಿ ಬೆಟ್ಟದ ಮೇಲೆ ಹೆಲಿಪ್ಯಾಡ್ ಇರುವ ನಾಲ್ಕು ಗಗನ ಚುಂಬಿ ಕಟ್ಟಡಗಳನ್ನು ಕಟ್ಟಿದ್ದು, ಇದಕ್ಕೆ ಹಿಲ್ ರೆಸಿಡೆನ್ಸ್ ಎಂದು ಹೆಸರಿಟ್ಟಿದೆ.
ಬೆಳವಣಿಗೆಗಳು
1. ಹೊಸಕೆರೆಹಳ್ಳಿ ಕುರಿತು ಬಿಜಿಆರ್ ಹಮ್ಮಿಕೊಂಡ ಆಂದೋಲನವು ರಾಜ್ಯವ್ಯಾಪಿ ಹಬ್ಬಿತು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಸಂಘಟನೆಯ ಶ್ರಮವನ್ನು ಹಾಡಿ ಹೊಗಳಿತು.
2. ಡಿಜಿಪಿ ಭಾಸ್ಕರ್ ರಾವ್ ಅವರು ಸುನೀಲ್ ಸೂದ್ ಅವರನ್ನು ಭೇಟಿಯಾಗಿ, ಭಾನುವಾರ ನಡೆಯಲಿರುವ ಕೆರೆ ಸ್ವಚ್ಛತಾ ಕಾರ್ಯಕ್ಕೆ 60 ಪೊಲೀಸ್ ಸಿಬ್ಬಂದಿ ನಿಯೋಜಿಸುವುದಾಗಿ ಭರವಸೆ ನೀಡಿದರು.
3. ಬಿಜಿಆರ್ ಸಂಘಟನೆಯ ಹಲವು ಸದಸ್ಯರು ಹೊಸಕೆರೆ ಹಳ್ಳಿ ಕೆರೆಯನ್ನು ಪ್ರತಿದಿನ ಭೇಟಿ ಮಾಡಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
4. ಹೊಸಕೆರೆ ಹಳ್ಳಿಯ ಈ ದುರ್ಗತಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರದ ರುದ್ರಯ್ಯ ಎಂಬುವರೇ ಕಾರಣ ಎಂಬುದು ಗೊತ್ತಾಗಿದೆ. ಸಂಘದ ಸದಸ್ಯ ರಾಮ್ ಕುಮಾರ್ ಅವರು ಕೆರೆ ಅಭಿವೃದ್ಧಿ ಮಂಡಳಿಗೆ ಭೇಟಿ ನೀಡಿದ ನಂತರ ತಿಳಿದ ವಿಷಯವಿದು.
ಕಾರ್ಯಕ್ರಮಗಳೇನು?
ಭಾನುವಾರ ನಡೆಯಲಿರುವ ಹೊಸಕೆರೆ ಹಳ್ಳಿ ಕೆರೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮೂರು ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
1. ಕೆರೆ ಸ್ವಚ್ಛತೆ
2. ಸಸಿ ನೆಡುವುದು
3. ಜ್ಞಾನ ಹಂಚಿಕೊಳ್ಳುವುದು
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.
ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು.”
- ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
- ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ
ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.
ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ4 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ4 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ13 hours agoಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ
-
ದಿನದ ಸುದ್ದಿ14 hours agoದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

